ಮೂರು ಅಥವಾ ನಾಲ್ಕು ರಸ್ತೆಗಳು ಸೇರುವ ಜಾಗಗಳಲ್ಲಿ, ನಿಂಬೆಹಣ್ಣು, ರಂಗೋಲಿ, ಅರಿಶಿನ-ಕುಂಕುಮ, ಕುಂಬಳಕಾಯಿ, ತೆಂಗಿನಕಾಯಿ, ದೀಪಗಳು ಅಥವಾ ಸಣ್ಣ ಮಡಕೆಗಳನ್ನು ಇಟ್ಟು ವಿಶೇಷ ಪೂಜೆಗಳನ್ನು ಮಾಡಿರುವುದನ್ನು ಸಾಮಾನ್ಯವಾಗಿ ಗಮನಿಸಿರುತ್ತೀರಿ. ಇಂತಹ ಸನ್ನಿವೇಶಗಳನ್ನು ನೋಡಿದಾಗ, ಇದು ಶುಭವೇ ಅಥವಾ ಅಶುಭವೇ, ಇದನ್ನು ನೋಡುವುದು ಒಳ್ಳೆಯದೇ ಎಂಬ ಪ್ರಶ್ನೆಗಳು ಮೂಡುವುದು ಸಹಜ. ಈ ಆಚರಣೆಗಳ ಹಿಂದಿನ ಉದ್ದೇಶ ಮತ್ತು ಪ್ರಾಮುಖ್ಯತೆಯ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ್ದಾರೆ.
ದೃಷ್ಟಿ ತೆಗೆಯುವುದು:
ಈ ರೀತಿಯ ಪೂಜೆಗಳನ್ನು ಮಾಡುವ ಪ್ರಮುಖ ಕಾರಣಗಳಲ್ಲಿ ದೃಷ್ಟಿ ತೆಗೆಯುವುದು ಒಂದು. ಮೂರು ಅಥವಾ ನಾಲ್ಕು ರಸ್ತೆಗಳು ಸೇರುವ ಜಾಗಗಳಲ್ಲಿ ದೃಷ್ಟಿ ತೆಗೆಯುವುದು ಸಾಮಾನ್ಯ. ಕೆಲವರು ಸುತ್ತಲೂ ಸಗಣಿ ಹಾಕಿ ಸಗಣಿ ದೀಪಗಳನ್ನು ಸಹ ಇಟ್ಟಿರುತ್ತಾರೆ. ಇದು ಒಂದು ರೀತಿಯ ದೃಷ್ಟಿ ನಿವಾರಣೆಯ ವಿಧಾನ.
ವಾಹನ ಅಪಘಾತ:
ಎರಡನೆಯದಾಗಿ, ವಾಹನ ಅಪಘಾತಗಳು ನಡೆದ ಸ್ಥಳಗಳಲ್ಲಿಯೂ ಇಂತಹ ಪೂಜೆಗಳನ್ನು ಮಾಡಲಾಗುತ್ತದೆ. ಅಪಘಾತದಿಂದ ತಪ್ಪಿಸಿಕೊಂಡು ಬಂದಾಗ ಅಥವಾ ಸಣ್ಣಪುಟ್ಟ ಗಾಯಗಳಾದಾಗ, ಹಿರಿಯರು ಅಪಘಾತ ಸಂಭವಿಸಿದ ಜಾಗದಲ್ಲಿ ಪೂಜೆ ಮಾಡಿಸಲು ಸಲಹೆ ನೀಡುತ್ತಾರೆ. ವಾಹನಕ್ಕೆ ಸಂಬಂಧಿಸಿದ ಸಮಸ್ಯೆಗಳ ನಿವಾರಣೆಗೂ ಈ ಪೂಜೆಗಳನ್ನು ಮಾಡುವುದುಂಟು.
ಇದನ್ನೂ ಓದಿ: ಮಾ.03 ಕೇತುಗ್ರಸ್ತ ಚಂದ್ರಗ್ರಹಣ; ಈ ರಾಶಿಗೆ ಡಬಲ್ ಧಮಾಕ!
ರೋಗರುಜಿನಗಳ ನಿವಾರಣೆ:
ಮೂರನೆಯ ಪ್ರಮುಖ ಕಾರಣವೆಂದರೆ ರೋಗರುಜಿನೆಗಳ ನಿವಾರಣೆ. ಪದೇ ಪದೇ ಅನಾರೋಗ್ಯ ಕಾಡುತ್ತಿದ್ದರೆ, ವೈದ್ಯರ ಚಿಕಿತ್ಸೆ ಫಲಕಾರಿಯಾಗದಿದ್ದಾಗ, ಅಥವಾ ನಿರಾಸಕ್ತಿ, ಜವಾಬ್ದಾರಿರಹಿತ ವರ್ತನೆ, ಸರಿಯಾಗಿ ಸ್ಪಂದಿಸದಿರುವುದು, ನೆನಪಿನ ಶಕ್ತಿ ಕಳೆದುಕೊಳ್ಳುವುದು ಮುಂತಾದ ಸಮಸ್ಯೆಗಳಿರುವಾಗ ದೇಹದಲ್ಲಿನ ಋಣಾತ್ಮಕ ಶಕ್ತಿಗಳನ್ನು ಅಥವಾ ದುಷ್ಟ ಶಕ್ತಿಗಳನ್ನು ಹೊರಹಾಕಲು ಈ ರೀತಿಯ ಪೂಜೆಗಳನ್ನು ಮಾಡಲಾಗುತ್ತದೆ.
ಈ ಸಂದರ್ಭದಲ್ಲಿ ಒಂದು ಪ್ರಶ್ನೆ ಮೂಡುವುದು ಸಹಜ, ಆ ದಾರಿಯಲ್ಲಿ ನಾವು ಸಾಗಿದಾಗ, ಆ ವಸ್ತುಗಳನ್ನು ತುಳಿದಾಗ ಅಥವಾ ಸ್ಪರ್ಶಿಸಿದಾಗ ನಮಗೆ ಏನಾದರೂ ತೊಂದರೆಯಾಗುತ್ತದೆಯೇ? ಆದರೆ, ಈ ಆಚರಣೆಗಳಿಂದ ಇನ್ನೊಬ್ಬ ವ್ಯಕ್ತಿಗಳಿಗೆ ಯಾವುದೇ ನಕಾರಾತ್ಮಕ ಶಕ್ತಿಗಳು ವರ್ಗಾವಣೆಯಾಗುವುದಿಲ್ಲ. ಹಾಗಾಗಿ, ಇದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವ ತೆಗೆದುಕೊಳ್ಳುವ ಅಗತ್ಯವಿಲ್ಲ. ನಮ್ಮ ಕರ್ಮಗಳನ್ನು ಕಳೆದುಕೊಳ್ಳಲು ರಸ್ತೆಗಳಲ್ಲಿ ಮಾಡಿದ ಪೂಜೆಯ ನಕಾರಾತ್ಮಕ ಶಕ್ತಿಗಳು ಸ್ವಲ್ಪ ಸಮಯದಲ್ಲೇ ಭೂಮಿಗೆ ಲೀನವಾಗಿ, ಪಂಚಭೂತಗಳಲ್ಲಿ ಸೇರಿಹೋಗುತ್ತವೆ. ಇದರಿಂದ ಬೇರೆಯವರಿಗೆ ಯಾವುದೇ ರೀತಿಯ ಸಮಸ್ಯೆಯಿಲ್ಲ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 11:22 am, Thu, 26 February 26
