Daily Devotional: ಸಾಮಾನ್ಯ ಜನರು ದೇವಸ್ಥಾನದ ಗರ್ಭಗುಡಿ ಪ್ರವೇಶ ಮಾಡಬಾರದು ಯಾಕೆ? – Kannada News | Temple Sanctum Sanctorum Entry: Rules and Spiritual Significance

ದೇವಾಲಯವು ವಿದ್ಯುತ್ ಶಕ್ತಿಯ ಕೇಂದ್ರವಿದ್ದಂತೆ, ಭಗವಂತನ ಶಕ್ತಿಯ ಮೂಲವಾಗಿದೆ. ಪಂಚಭೂತಗಳಿಂದ ಉಂಟಾಗುವ ದೋಷಗಳು, ಶುಭಫಲಗಳು, ಕರ್ಮಫಲಗಳನ್ನು ನಿವೇದಿಸಿಕೊಳ್ಳುವ ಕೇಂದ್ರವೇ ದೇವಾಲಯ. ಗರ್ಭಗುಡಿ ಪ್ರವೇಶವನ್ನು ಎಲ್ಲರೂ ಮಾಡಬಹುದೇ? ಅದು ಶುಭವೇ ಅಥವಾ ಅಶುಭವೇ? ಎಂಬ ಪ್ರಶ್ನೆಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಉತ್ತರ ನೀಡಿದ್ದಾರೆ.

ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರಲ್ಲಿ ಸಾಮಾನ್ಯವಾಗಿ ಅರ್ಥ, ಅರ್ಥಾರ್ಥಿ, ಜ್ಞಾನಿ, ಜಿಜ್ಞಾಸು ಎಂಬ ನಾಲ್ಕು ವಿಧಗಳಿರುತ್ತವೆ. ಆದರೆ, ಗರ್ಭಗುಡಿಗೆ ಪ್ರವೇಶವು ಸಾಮಾನ್ಯವಾಗಿ ಕೆಲವೇ ವರ್ಗದ ಜನರಿಗೆ ಮೀಸಲಾಗಿದೆ. ಅತಿಯಾದ ಶ್ರೀಮಂತಿಕೆ ಇರುವವರಿಗೆ, ಅಧಿಕಾರ ಸ್ಥಾನದಲ್ಲಿರುವವರಿಗೆ – ರಾಜಕಾರಣಿಗಳು, ಸರಕಾರಿ ಅಧಿಕಾರಿಗಳು, ಸಚಿವರು – ಹಾಗೂ ಅತಿಯಾದ ವಿದ್ಯಾವಂತರು ಮತ್ತು ಪಂಡಿತರಿಗೆ ಗರ್ಭಗುಡಿ ಪ್ರವೇಶಕ್ಕೆ ಅನುಕೂಲ ಮಾಡಿಕೊಡಲಾಗುತ್ತದೆ.

ಆದರೆ, ಯಾವುದೇ ದೇವಸ್ಥಾನದಲ್ಲಿ ದೇವರನ್ನು ನೇರವಾಗಿ ಮುಟ್ಟುವ ಹಕ್ಕು ಅಥವಾ ಶಕ್ತಿ ಸಾಮಾನ್ಯ ಭಕ್ತರಿಗೆ ಇರುವುದಿಲ್ಲ. ಜ್ಯೋತಿರ್ಲಿಂಗಗಳು ಮಾತ್ರ ಇದಕ್ಕೆ ಹೊರತಾಗಿವೆ. ಜ್ಯೋತಿರ್ಲಿಂಗಗಳಲ್ಲಿ ಪ್ರಾಚೀನ ಕಾಲದಿಂದಲೂ ಭಕ್ತರಿಗೆ ತಮ್ಮ ಕೈಯಾರೆ ದೇವರಿಗೆ ಅಭಿಷೇಕ ಮಾಡಲು ಅವಕಾಶವಿದೆ. ಇದಕ್ಕೆ ಯಾವುದೇ ಪ್ರಾಕಾರ, ಕಿರುದಾದ ಗುಡಿ ಅಥವಾ ಗರ್ಭಗುಡಿಯ ಕಟ್ಟುನಿಟ್ಟಾದ ನಿಯಮಗಳು ಅನ್ವಯಿಸುವುದಿಲ್ಲ.

ಆದರೆ, ಸಾಮಾನ್ಯ ದೇವಾಲಯಗಳಲ್ಲಿ ಗರ್ಭಗುಡಿಯು ತನ್ನದೇ ಆದ ಪ್ರಾಕಾರ, ಆಲಯ ದೇವತೆಗಳು ಮತ್ತು ಪರಿವಾರ ದೇವತೆಗಳನ್ನು ಹೊಂದಿರುತ್ತದೆ. ಶ್ರೀಮಂತಿಕೆ, ಅಧಿಕಾರ ಅಥವಾ ವಿವಿಐಪಿ ಸ್ಥಾನಮಾನ ಇದ್ದರೂ ಸಹ, ಅರ್ಚಕರು ಕರೆದರೆ ಗರ್ಭಗುಡಿಯ ಹೊಸ್ತಿಲಿನವರೆಗೂ ಹೋಗುವುದು ಶುಭಕರ. ಇದರಿಂದ ಇಷ್ಟಾರ್ಥಗಳು ಈಡೇರಬಹುದು. ಆದರೆ, ಗರ್ಭಗುಡಿಯ ಒಳಗಡೆ ಪ್ರವೇಶಿಸುವುದು ಅರ್ಚಕರಿಗೆ ಮಾತ್ರ ಸೀಮಿತವಾಗಿದೆ. ಇದಕ್ಕೆ ಕಾರಣವೆಂದರೆ, ಅರ್ಚಕರು ಅಥವಾ ಪುರೋಹಿತರು ಪ್ರತಿದಿನ ಶುಚಿತ್ವದಿಂದ, ಸಂಕಲ್ಪಗಳನ್ನು ಮಾಡಿ, ಮಂತ್ರಗಳ ಮೂಲಕ ಭಗವಂತನನ್ನು ಅಲ್ಲಿ ಆವಾಹಿಸಿರುತ್ತಾರೆ. ಅಲ್ಲಿ ದೈವಿಕ ಶಕ್ತಿ ಮತ್ತು ಲಹರಿಗಳು ಇರುತ್ತವೆ.

ಇದನ್ನೂ ಓದಿ: ವೈಕುಂಠ ಏಕಾದಶಿಯನ್ನು ಮುಕ್ಕೋಟಿ ಏಕಾದಶಿ ಎಂದು ಕರೆಯುವುದೇಕೆ? ಮಾಹಿತಿ ಇಲ್ಲಿದೆ

ಅಲ್ಲದೆ, ಉಗ್ರ ದೇವತೆಗಳು, ಶಿವಲಿಂಗಗಳು, ನಾಗ ಕಲ್ಲುಗಳು, ನಾಗ ಬನಗಳು, ಶ್ರೀ ಚಕ್ರಗಳು, ಭೂಗರ್ಭ ಚಕ್ರಗಳು ಮುಂತಾದವನ್ನು ಸಾಮಾನ್ಯರು ಸ್ಪರ್ಶಿಸಬಾರದು. ಮಾನವ ದೇಹವು ಪಂಚಭೂತಗಳಿಂದ ಕೂಡಿದೆ ಮತ್ತು ಮಲಮೂತ್ರಗಳ ದೇಹವಾಗಿದೆ. ಶುದ್ಧ ಮನಸ್ಸಿನಿಂದ ಮನೆಯ ದೇವರ ಮನೆಯಲ್ಲಿ ದೇವರನ್ನು ಮುಟ್ಟಬಹುದೇ ಹೊರತು, ದೇವಾಲಯದ ಗರ್ಭಗುಡಿ ಪ್ರವೇಶಿಸುವುದು ಅಷ್ಟು ಶುಭಕರವಲ್ಲ. ಮೂರ್ತಿ ಸೃಷ್ಟಿ, ಪ್ರತಿಷ್ಠಾಪನೆ, ಮತ್ತು ಪ್ರಭಾವಳಿಗೆ ತನ್ನದೇ ಆದ ನಿಯಮ ಮತ್ತು ವಿಧಿ ವಿಧಾನಗಳಿರುತ್ತವೆ.

ಇದಕ್ಕೆ ಉದಾಹರಣೆಯಾಗಿ, ಶಸ್ತ್ರಚಿಕಿತ್ಸೆಯ ಸಮಯದಲ್ಲಿ ವೈದ್ಯರು ಮತ್ತು ರೋಗಿ ಮಾತ್ರ ಇರುತ್ತಾರೆ, ಮೂರನೆಯವರಿಗೆ ಪ್ರವೇಶವಿರುವುದಿಲ್ಲ. ಅದೇ ರೀತಿ, ಗರ್ಭಗುಡಿಯೊಳಗೆ ಅರ್ಚಕರು ಮತ್ತು ದೇವರು ಮಾತ್ರ ಇರಬೇಕು. ಭಕ್ತರು ದೂರದಿಂದಲೇ ದೇವರನ್ನು ನೋಡಿ ಪ್ರಾರ್ಥಿಸುವುದು ಹೆಚ್ಚು ಒಳ್ಳೆಯದು. ಭಗವಂತನು ಸರ್ವಾಂತರ್ಯಾಮಿ, ಸರ್ವವ್ಯಾಪಿ, ಸರ್ವಶಕ್ತನಾಗಿರುವುದರಿಂದ, ಅಧಿಕಾರದ ಅಥವಾ ಹಣದ ಬಲದಿಂದ ಗರ್ಭಗುಡಿ ಪ್ರವೇಶಿಸುವುದು ಅಷ್ಟು ಶುಭಕರವಲ್ಲ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *