Dhiraj Seth ಭಾರತದ ನೂತನ ಸೇನಾ ಮುಖ್ಯಸ್ಥರಾಗಿ ಜನರಲ್ ಧೀರಜ್ ಸೇಠ್ ಅಧಿಕಾರ ಸ್ವೀಕಾರ – Kannada News | General Dhiraj Seth takes charge as Indias New Army Chief replaced General Upendra Dwivedi

ನವದೆಹಲಿ, ಜೂನ್ 30: ಭಾರತೀಯ ಭೂಸೇನೆಯಲ್ಲಿ (Indian Army) 4 ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಜನರಲ್ ಉಪೇಂದ್ರ ದ್ವಿವೇದಿ ಅವರ ಉತ್ತರಾಧಿಕಾರಿಯಾಗಿ ಜನರಲ್ ಧೀರಜ್ ಸೇಠ್ ಇಂದು (ಮಂಗಳವಾರ) ಭಾರತದ 31ನೇ ಭೂಸೇನಾ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡರು. ಸೇನಾ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳುವ ಮುನ್ನ ಜನರಲ್ ಧೀರಜ್ ಸೇಠ್ (Dhiraj Seth) ಭೂಸೇನೆಯ ಉಪಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದರು. ಆರ್ಮರ್ಡ್ ಕಾರ್ಪ್ಸ್ (ಟ್ಯಾಂಕ್ ರೆಜಿಮೆಂಟ್) ವಿಭಾಗದ ಅಧಿಕಾರಿಯಾಗಿರುವ ಇವರು, 1997ರಲ್ಲಿ ನಿವೃತ್ತರಾದ ಜನರಲ್ ಶಂಕರ್ ರಾಯ್ ಚೌಧರಿ ಅವರ ನಂತರ ಕಳೆದ ಮೂರು ದಶಕಗಳಲ್ಲಿ ಈ ಅತ್ಯುನ್ನತ ಹುದ್ದೆಗೇರಿದ ಮೊದಲ ಆರ್ಮರ್ಡ್ ಕಾರ್ಪ್ಸ್ ಅಧಿಕಾರಿಯಾಗಿದ್ದಾರೆ.

ರಾಷ್ಟ್ರೀಯ ರಕ್ಷಣಾ ಅಕಾಡೆಮಿ (NDA) ಇಂದ ಪದವಿ ಪಡೆದು ಡಿಸೆಂಬರ್ 1986ರಲ್ಲಿ ಸೇನೆಗೆ ಸೇರಿದ ಜನರಲ್ ಧೀರಜ್ ಸೇಠ್ ಅವರಿಗೆ ಸುಮಾರು 40 ವರ್ಷಗಳ ಮಿಲಿಟರಿ ಅನುಭವವಿದೆ. ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಅವರು ದೇಶಾದ್ಯಂತ ಹಲವು ಪ್ರಮುಖ ಕಾರ್ಯಾಚರಣೆ, ಕಮಾಂಡ್ ಮತ್ತು ಸ್ಟಾಫ್ ಹುದ್ದೆಗಳನ್ನು ನಿಭಾಯಿಸಿದ್ದಾರೆ. ಅವರು ಆರ್ಮರ್ಡ್ ರೆಜಿಮೆಂಟ್, ಆರ್ಮರ್ಡ್ ಬ್ರಿಗೇಡ್, ಸ್ಟ್ರೈಕ್ ಕಾರ್ಪ್ಸ್ ಮತ್ತು ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಲ್ಲಿ ನಿಯೋಜಿಸಲಾದ ಪಡೆಗಳ ನೇತೃತ್ವ ವಹಿಸಿದ್ದರು. ಅಲ್ಲದೆ, ಭಾರತದ ಪಶ್ಚಿಮ ಗಡಿಯ ರಕ್ಷಣೆಯ ಜವಾಬ್ದಾರಿ ಹೊಂದಿರುವ ಕಾರ್ಯತಂತ್ರದ ಪ್ರಮುಖ ಕಮಾಂಡ್‌ಗಳಾದ ಸದರ್ನ್ ಕಮಾಂಡ್ ಮತ್ತು ಸೌತ್ ವೆಸ್ಟರ್ನ್ ಕಮಾಂಡ್ ಎರಡನ್ನೂ ಮುನ್ನಡೆಸಿದ್ದಾರೆ.

ಇದನ್ನೂ ಓದಿ: ಪೆರೇಡ್‌ ವೇಳೆ ಅಧಿಕಾರಿಗಳ ಜೊತೆ ಭಾರತೀಯ ಸೇನಾ ಮುಖ್ಯಸ್ಥ ಉಪೇಂದ್ರ ದ್ವಿವೇದಿ ಪುಷ್ಅಪ್‌; ವಿಡಿಯೋ ವೈರಲ್

4 ದಶಕಗಳ ಕಾಲ ಸೇವೆ ಸಲ್ಲಿಸಿರುವ ಇವರು, ಪಾಕಿಸ್ತಾನ ಗಡಿಗೆ ಹೊಂದಿಕೊಂಡಿರುವ ಜೈಪುರ ಮೂಲದ ಸೌತ್ ವೆಸ್ಟರ್ನ್ ಕಮಾಂಡ್ ಮತ್ತು ಪುಣೆ ಮೂಲದ ಸದರ್ನ್ ಕಮಾಂಡ್ ಹೀಗೆ ಎರಡು ಪ್ರಮುಖ ಕಾರ್ಯಾಚರಣೆಯ ಕಮಾಂಡ್‌ಗಳ ನೇತೃತ್ವ ವಹಿಸಿದ ಅಪರೂಪದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರ ವಿಶಿಷ್ಟ ಸೇವೆಗಾಗಿ ಪರಮ ವಿಶಿಷ್ಟ ಸೇವಾ ಪದಕ (PVSM), ಉತ್ತಮ ಯುದ್ಧ ಸೇವಾ ಪದಕ (UYSM) ಮತ್ತು ಅತಿ ವಿಶಿಷ್ಟ ಸೇವಾ ಪದಕಗಳನ್ನು (AVSM) ನೀಡಿ ಗೌರವಿಸಲಾಗಿದೆ.

ಧೀರಜ್ ಸೇಠ್ ಅವರ ತಂದೆ ಕೃಷ್ಣ ಮೋಹನ್ ಸೇಠ್ ಕೂಡ ಭಾರತೀಯ ಸೇನೆಯಲ್ಲಿ ಅಡ್ಜುಟೆಂಟ್ ಜನರಲ್ ಆಗಿ ಸೇವೆ ಸಲ್ಲಿಸಿದ್ದರು. ನಂತರ ಅವರು ಛತ್ತೀಸ್‌ಗಢ ಮತ್ತು ಮಧ್ಯಪ್ರದೇಶದ ರಾಜ್ಯಪಾಲರಾಗಿದ್ದರು. ಇವರ ಕಿರಿಯ ಸಹೋದರ ರವನೀಶ್ ಸೇಠ್ ಭಾರತೀಯ ನೌಕಾಸೇನೆಯಲ್ಲಿ ರಿಯರ್ ಅಡ್ಮಿರಲ್ ಆಗಿದ್ದಾರೆ.

ಇದನ್ನೂ ಓದಿ: ಭಾರತೀಯ ಸೇನಾ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಧೀರಜ್ ಸೇಠ್ ನೇಮಕ

ಸಾಮರ್ಥ್ಯ ವೃದ್ಧಿ ಮತ್ತು ಮಿಲಿಟರಿ ಸುಧಾರಣೆಗಳಲ್ಲಿ ಜನರಲ್ ಸೇಠ್ ಪ್ರಮುಖ ಪಾತ್ರ ವಹಿಸಿದ್ದಾರೆ. ಭಾರತೀಯ ಸೇನೆಯು ಆಧುನೀಕರಣ, ತಂತ್ರಜ್ಞಾನದ ಮೇಲ್ದರ್ಜೀಕರಣ ಮತ್ತು ಭಾರತದ ಗಡಿಗಳಲ್ಲಿ ಕಾರ್ಯಾಚರಣೆಯ ಸನ್ನದ್ಧತೆಯನ್ನು ಕಾಯ್ದುಕೊಳ್ಳುವತ್ತ ಗಮನಹರಿಸುತ್ತಿರುವ ಸಮಯದಲ್ಲಿ ಈ ನಾಯಕತ್ವದ ಬದಲಾವಣೆ ನಡೆದಿದೆ.

ಪ್ರಸ್ತುತ ನಡೆಯುತ್ತಿರುವ ಹಲವು ಸುಧಾರಣೆಗಳನ್ನು ಅವರ ಪೂರ್ವಾಧಿಕಾರಿ ಜನರಲ್ ಉಪೇಂದ್ರ ದ್ವಿವೇದಿ ಅವರ ಅವಧಿಯಲ್ಲಿ ಪ್ರಾರಂಭಿಸಲಾಗಿತ್ತು. ಆದರೆ, ಈ ಯೋಜನೆಗಳನ್ನು ವಾಸ್ತವ ರೂಪಕ್ಕೆ ತರುವ ಜವಾಬ್ದಾರಿ ಜನರಲ್ ಸೇಠ್ ಅವರ ಮೇಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:11 pm, Tue, 30 June 26

Source link

Leave a Reply

Your email address will not be published. Required fields are marked *