ದೇವರ ಕೋಣೆಯಲ್ಲಿ ವಿದ್ಯುತ್ ದೀಪImage Credit source: Pinterest
ಸಾಮಾನ್ಯವಾಗಿ, ದೇವರ ಕೋಣೆಯಲ್ಲಿ ಎಣ್ಣೆ ದೀಪಗಳನ್ನು ಹಚ್ಚುತ್ತೇವೆ. ಆದರೆ, ಎಣ್ಣೆ ದೀಪಗಳು ಅಥವಾ ತುಪ್ಪದ ದೀಪಗಳು ನಿರಂತರವಾಗಿ ಉರಿಯುವುದಿಲ್ಲ. ಬೆಳಗ್ಗೆ ಹಚ್ಚಿದ ದೀಪ ಮಧ್ಯಾಹ್ನಕ್ಕೇ ಆರಿಹೋಗಬಹುದು, ಹಾಗೆಯೇ ಸಂಜೆ ಹಚ್ಚಿದ ದೀಪ ಮಧ್ಯರಾತ್ರಿಯ ವೇಳೆಗೆ ಆರಿಹೋಗುತ್ತದೆ. ಈ ಸಮಸ್ಯೆಗೆ ಪರಿಹಾರವಾಗಿ, ಸಾಕಷ್ಟು ಜನರು ವಿದ್ಯುತ್ ದೀಪವನ್ನು ಬಳಕೆ ಮಾಡುತ್ತಾರೆ. ಆದರೆ ದೇವರಿಗೆ ವಿದ್ಯುತ್ ದೀಪ ಬಳಸುವುದು ಶುಭವೇ ಅಥವಾ ಅಶುಭವೇ ಎಂಬುದರ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.
ಗುರೂಜಿಯವರು ಹೇಳುವಂತೆ, ದೇವರ ಮನೆಯಲ್ಲಿ ಎಣ್ಣೆ ದೀಪದ ಜೊತೆಗೆ, ಮಂದವಾದ ಜೀರೋ ಕ್ಯಾಂಡಲ್ ಬಲ್ಬ್ ಅನ್ನು ನಿರಂತರವಾಗಿ ಉರಿಸಬೇಕು. ಇದರಿಂದ ಎಣ್ಣೆ ದೀಪ ಆರಿಹೋದರೂ, ವಿದ್ಯುತ್ ದೀಪದಿಂದ ನಿರಂತರವಾದ ಬೆಳಕು ಇರುತ್ತದೆ. ಇದು ಕೇವಲ ಧಾರ್ಮಿಕ ನಂಬಿಕೆಯಷ್ಟೇ ಅಲ್ಲ, ಇದರ ಹಿಂದೆ ವೈಜ್ಞಾನಿಕ ತತ್ವಗಳೂ ಇವೆ. ರಾತ್ರಿಯ ಸಮಯದಲ್ಲಿ ಮನೆಯು ಸಂಪೂರ್ಣ ಕತ್ತಲೆಯಲ್ಲಿ ಇರುವುದು ಸೂಕ್ತವಲ್ಲ. ಬಾಡಿಗೆ ಮನೆಯೇ ಆಗಿರಲಿ, ಸ್ವಂತ ಮನೆಯೇ ಆಗಿರಲಿ, ರಾತ್ರಿ ಹೊತ್ತು ಸಂಪೂರ್ಣ ಕತ್ತಲಾಗಿ ಇಡಬಾರದು. ಹಾಲ್ನಲ್ಲಿ ಅಥವಾ ದೇವರ ಗುಡಿಯಲ್ಲಿ ಕನಿಷ್ಠ ಒಂದು ಮಂದವಾದ ದೀಪ ಇರಬೇಕು.
ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ
ವೈಜ್ಞಾನಿಕವಾಗಿ ನೋಡಿದರೆ, ರಾತ್ರಿ ಎದ್ದು ನೀರು ಕುಡಿಯಲು ಹೋಗುವಾಗ ಕತ್ತಲಿನಲ್ಲಿ ನಡೆದು ಏನಾದರೂ ತಲೆ ಅಥವಾ ಕೈ-ಕಾಲುಗಳಿಗೆ ಪೆಟ್ಟು ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ವೃದ್ಧರಿಗೆ, ಮಕ್ಕಳಿಗೂ ಇದು ಅನ್ವಯಿಸುತ್ತದೆ. ಒಂದು ಮಂದವಾದ ದೀಪ ಇದ್ದರೆ, ಅನಿರೀಕ್ಷಿತ ಅಪಾಯಗಳನ್ನು ತಪ್ಪಿಸಬಹುದು ಮತ್ತು ರಾತ್ರಿ ಎದ್ದಾಗ ಮನಸ್ಸಿಗೆ ಒಂದು ಪ್ರಜ್ಞೆ ಮತ್ತು ಶಾಂತಿ ಇರುತ್ತದೆ. ಕತ್ತಲಿನಲ್ಲಿ ಏನೋ ತಾಗಿ ದುರಂತವಾಗುವುದನ್ನು ತಪ್ಪಿಸಬಹುದು. ಹೀಗಾಗಿ, ದೇವರ ಮನೆಯಲ್ಲಿ ಎಣ್ಣೆ ದೀಪದ ಜೊತೆಗೆ ನಿರಂತರವಾಗಿ ಒಂದು ಜೀರೋ ಕ್ಯಾಂಡಲ್ ಬಲ್ಬ್ ಅನ್ನು ಇರಿಸುವುದರಿಂದ ಧನಾತ್ಮಕ ಶಕ್ತಿಗಳು ಹರಿಯುವುದಲ್ಲದೆ, ಪ್ರಾಯೋಗಿಕವಾಗಿಯೂ ಹಲವಾರು ಅನುಕೂಲಗಳಿವೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
