ಅರಣ್ಯ ಇಲಾಖೆ ಸಾಕ್ಷ್ಯಗಳ ಮೇಲೆ ಅನುಮಾನ!
ಚಾಮರಾಜನಗರ, ಆಗಸ್ಟ್ 18: ಹನೂರು ತಾಲೂಕಿನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಗುಂಡೇಟಿಗೆ ಮೂವರು ಬಲಿಯಾದ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಕುಟುಂಬಸ್ಥರ ಪ್ರತಿಭಟನೆ ಬಳಿಕ ಇದೀಗ ಮೃತ ಪೀಟರ್, ಆಂಥೋನಿ ಹಾಗೂ ಕುಮಾರ್ ಅವರ ಅಂತ್ಯಕ್ರಿಯೆ ಕುಟುಂಬಸ್ಥರ ಕಣ್ಣೀರು ಮತ್ತು ಆಕ್ರಂದನದ ನಡುವೆ ನೆರವೇರಿದೆ. ಸರ್ಕಾರ ಮತ್ತು ಶಾಸಕರು ನೀಡಿದ ತಲಾ 15 ಲಕ್ಷ ರೂ. ಪರಿಹಾರದ ಭರವಸೆಯಿಂದಾಗಿ ಪ್ರತಿಭಟನೆ ಶಮನಗೊಂಡಿತ್ತಾದರೂ, ಈ ಎನ್ಕೌಂಟರ್ ಪ್ರಕರಣಕ್ಕೀಗ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ಅರಣ್ಯ ಇಲಾಖೆ ಸಾಕ್ಷ್ಯಗಳ ಮೇಲೆ ಅನುಮಾನ ಹುಟ್ಟಿಸಿದೆ.
ಸದನದಲ್ಲೂ ಗದ್ದಲಕ್ಕೆ ಕಾರಣವಾಗಿದ್ದ ಕೇಸ್
ಈ ಪ್ರಕರಣ ವಿಧಾನಸಭೆ ಹಾಗೂ ವಿಧಾನಪರಿಷತ್ ಎರಡರಲ್ಲೂ ತೀವ್ರ ಗದ್ದಲಕ್ಕೆ ಕಾರಣವಾಗಿತ್ತು. ವಿಪಕ್ಷ ನಾಯಕ ಆರ್. ಅಶೋಕ್ ಮತ್ತು ತಮಿಳುನಾಡು ಸಿಎಂ ವಿಜಯ್ ಇದು ನಕಲಿ ಎನ್ಕೌಂಟರ್ ಎಂದು ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಅರಣ್ಯ ಸಚಿವ ರಾಮಲಿಂಗಾರೆಡ್ಡಿ, ಸಿಬ್ಬಂದಿ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ ಎಂದು ಸಮರ್ಥಿಸಿಕೊಂಡು, ಘಟನಾ ಸ್ಥಳದಲ್ಲಿ ಸಿಕ್ಕಿದ್ದ 34 ಕೆ.ಜಿ ಜಿಂಕೆ ಮಾಂಸ ಹಾಗೂ ಬಂದೂಕುಗಳ ಫೋಟೋಗಳನ್ನು ಸಾಕ್ಷಿಯಾಗಿ ಪ್ರದರ್ಶಿಸಿದ್ದರು.
ಫೋಟೋಗಳ ಬಗ್ಗೆ ತೀವ್ರ ಅನುಮಾನ, ಲ್ಯಾಬ್ಗೆ ಸಾಕ್ಷ್ಯ ರವಾನೆ!
ಆದರೆ, ಅರಣ್ಯಾಧಿಕಾರಿಗಳು ಬಿಡುಗಡೆ ಮಾಡಿದ ಫೋಟೋಗಳೇ ಇದೀಗ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್ ನೀಡಿವೆ. ಜಿಂಕೆ ಮಾಂಸ, ಬಂದೂಕು, ಚಾಕು ಹಾಗೂ ಅಡುಗೆ ಸಾಮಾನಿನ ಜೊತೆಗಿದ್ದ ಹೊಸ ಚಪ್ಪಲಿಯ ಮೇಲಿನ ಸ್ಟಿಕ್ಕರ್ ಕೂಡ ತೆಗೆಯದಿರುವುದು ಸಾರ್ವಜನಿಕರಲ್ಲಿ ಮತ್ತು ತನಿಖಾಧಿಕಾರಿಗಳಲ್ಲಿ ತೀವ್ರ ಅನುಮಾನ ಮೂಡಿಸಿದೆ. ಅಧಿಕಾರಿಗಳು ನಕಲಿ ಸಾಕ್ಷಿ ಸೃಷ್ಟಿಸಲು ಹೊಸ ಚಪ್ಪಲಿ ತಂದಿಟ್ಟಿದ್ದಾರೆಯೇ ಎಂಬ ಆಕ್ಷೇಪ ವ್ಯಕ್ತವಾಗಿದೆ.
ಇದನ್ನೂ ಓದಿ ಚಾಮರಾಜನಗರ ಶೂಟೌಟ್ ಪ್ರಕರಣ: ಕರ್ನಾಟಕ ಸರ್ಕಾರದ ವಿರುದ್ಧ ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಕಿಡಿ
ಈ ಅನುಮಾನಗಳ ಬೆನ್ನಲ್ಲೇ ತನಿಖೆ ಚುರುಕುಗೊಂಡಿದ್ದು, ಕೊಳ್ಳೇಗಾಲ ಡಿವೈಎಸ್ಪಿ ಮೋಹನ್ ಅವರ ನೇತೃತ್ವದಲ್ಲಿ ಎಫ್ಎಸ್ಎಲ್ ಹಾಗೂ ಬ್ಯಾಲೆಸ್ಟಿಕ್ ತಜ್ಞರನ್ನೊಳಗೊಂಡ 15 ಮಂದಿಯ ವಿಶೇಷ ತಂಡ ಕಾವೇರಿ ವನ್ಯಜೀವಿಧಾಮದ ಶಾಗ್ಯ ಬೀಟ್ ಅರಣ್ಯಕ್ಕೆ ಭೇಟಿ ನೀಡಿದೆ. ಘಟನಾ ಸ್ಥಳದಲ್ಲಿ ಬಿದ್ದಿದ್ದ ಗುಂಡಿನ ಚೂರುಗಳು, ಪೆಲೆಟ್ಸ್ ಮತ್ತು ರಕ್ತದ ಕಲೆಯ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ರವಾನಿಸಲಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಡಿ
