ಮದುವೆಯಲ್ಲಿ ತಾಳಿ ಕಟ್ಟುವಾಗ ‘ಮೂರು ಗಂಟು’Image Credit source: Getty Images
ಹಿಂದೂ ಧರ್ಮದಲ್ಲಿ ವಿವಾಹಕ್ಕೆ ಅತ್ಯಂತ ಪವಿತ್ರವಾದ ಸ್ಥಾನವಿದೆ. ಮದುವೆ ಎನ್ನುವುದು ಕೇವಲ ಗಂಡು-ಹೆಣ್ಣಿನ ಎರಡು ಹೃದಯಗಳ ಸಂಬಂಧವಲ್ಲ, ಬದಲಿಗೆ ಎರಡು ಭಿನ್ನ ವಂಶಗಳು ಹಾಗೂ ಕುಟುಂಬಗಳು ಒಂದಾಗುವ ಮಹೋತ್ಸವ. ಮದುವೆಯ ಶಾಸ್ತ್ರಗಳಲ್ಲಿ ಅತ್ಯಂತ ಪ್ರಮುಖವಾದದ್ದು ಮಾಂಗಲ್ಯ ಧಾರಣೆ ಅಥವಾ ತಾಳಿ ಕಟ್ಟುವ ಶುಭ ಮುಹೂರ್ತ. ತಾಳಿ ಕಟ್ಟುವಾಗ ಮೂರು ಮುಡಿ ಅಥವಾ ಮೂರು ಗಂಟುಗಳನ್ನು ಹಾಕಲಾಗುತ್ತದೆ. “ಯಾಕೆ ಮೂರು ಗಂಟುಗಳನ್ನೇ ಹಾಕಬೇಕು?” ಎಂಬ ಪ್ರಶ್ನೆಗೆ ಜ್ಯೋತಿಷ್ಯ ಶಾಸ್ತ್ರ ಮತ್ತು ಆಧ್ಯಾತ್ಮಿಕ ಹಿನ್ನೆಲೆಯಲ್ಲಿ ಅದ್ಭುತವಾದ ಕಾರಣಗಳಿವೆ.
ಸಂಖ್ಯೆ 3 ಮತ್ತು ಗುರು ಗ್ರಹದ ಕೃಪೆ:
ಹಿಂದೂ ಸಂಪ್ರದಾಯ ಮತ್ತು ಜ್ಯೋತಿಷ್ಯದಲ್ಲಿ ‘ಮೂರು’ (3) ಎಂಬ ಸಂಖ್ಯೆಗೆ ವಿಶೇಷ ಪ್ರಾಮುಖ್ಯತೆ ಇದೆ. ಸಂಖ್ಯಾಶಾಸ್ತ್ರದ ಪ್ರಕಾರ 1 ಸೂರ್ಯನನ್ನು, 2 ಚಂದ್ರನನ್ನು ಪ್ರತಿನಿಧಿಸಿದರೆ, 3 ಎಂಬುದು ‘ಗುರು ಗ್ರಹದ’ (ಬೃಹಸ್ಪತಿ) ಸಂಖ್ಯೆಯಾಗಿದೆ. ಗುರುವನ್ನು ಜ್ಞಾನ, ಧರ್ಮ ಮತ್ತು ವೈವಾಹಿಕ ಬದುಕಿನ ಕಾರಕ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಮೂರು ಗಂಟುಗಳನ್ನು ಹಾಕುವುದರಿಂದ ದಾಂಪತ್ಯದಲ್ಲಿ ಗುರುವಿನ ಅನುಗ್ರಹ ಸದಾ ಇರುತ್ತದೆ ಎಂಬ ನಂಬಿಕೆ ಇದೆ.
ತ್ರಿವಳಿಗಳ ಪವಿತ್ರ ಸಂಕೇತ:
ನಮ್ಮ ಸಂಸ್ಕೃತಿಯಲ್ಲಿ ‘ಮೂರು’ ಎಂಬುದು ಪ್ರಕೃತಿಯ ನಿಯಮಗಳನ್ನು ಬಿಂಬಿಸುತ್ತದೆ. ಈ ಮೂರು ಗಂಟುಗಳು ಪ್ರಮುಖವಾಗಿ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರನ್ನು ಪ್ರತಿನಿಧಿಸುತ್ತವೆ. ಮನುಷ್ಯನಲ್ಲಿರುವ ಸತ್ವಗುಣ, ರಜೋಗುಣ ಮತ್ತು ತಮೋಗುಣಗಳನ್ನು ಸಮತೋಲನದಲ್ಲಿಡಲು ಇದು ಸಂಕೇತವಾಗಿದೆ. ಇದಲ್ಲದೇ ತ್ರಿಕಾಲ ಮತ್ತು ತ್ರಿಲೋಕ ಅಂದರೆ ಭೂತ, ಭವಿಷ್ಯತ್ ಹಾಗೂ ವರ್ತಮಾನ ಕಾಲಗಳಲ್ಲೂ ದಂಪತಿಗಳು ಒಂದಾಗಿರಲಿ ಎಂಬ ಆಶಯ ಇದರ ಹಿಂದೆ ಇರುತ್ತದೆ.
ಇದನ್ನೂ ಓದಿ: ಫ್ಯಾಶನ್ಗಾಗಿ ವಜ್ರ ಧರಿಸುವ ಮುನ್ನ ಎಚ್ಚರ! ಈ ರಾಶಿಯವರು ವಜ್ರ ಧರಿಸಿದರೆ ಕಷ್ಟ ತಪ್ಪಿದ್ದಲ್ಲ!
ಮೂರು ಶರೀರಗಳ ಬೆಸೆಯುವ ಬಂಧನ:
ಆಧ್ಯಾತ್ಮಿಕ ಲೆಕ್ಕಾಚಾರದ ಪ್ರಕಾರ, ಮನುಷ್ಯನಿಗೆ ಕೇವಲ ಹೊರಗಣ್ಣಿಗೆ ಕಾಣುವ ದೇಹ ಮಾತ್ರವಲ್ಲದೆ ಮೂರು ರೀತಿಯ ಶರೀರಗಳಿರುತ್ತವೆ. ತಾಳಿ ಕಟ್ಟುವಾಗ ಹಾಕುವ ಮೂರು ಗಂಟುಗಳು ಈ ಮೂರು ಶರೀರಗಳನ್ನು ಒಂದಕ್ಕೊಂದು ಬೆಸೆಯುವ ಪ್ರಕ್ರಿಯೆಯಾಗಿದೆ:
- ಸ್ಥೂಲ ಶರೀರ (ಭೌತಿಕ ದೇಹ): ಮೊದಲನೇ ಗಂಟು ಹೊರಗೆ ಕಾಣುವ ಭೌತಿಕ ಶರೀರಕ್ಕೆ ಸಂಬಂಧಿಸಿದ್ದಾಗಿದೆ.
- ಸೂಕ್ಷ್ಮ ಶರೀರ: ಎರಡನೇ ಗಂಟು ಮನುಷ್ಯನ ಒಳಗಿರುವ ಆಲೋಚನೆ, ಮನಸ್ಸು ಮತ್ತು ಸೂಕ್ಷ್ಮ ಶರೀರವನ್ನು ಪ್ರತಿನಿಧಿಸುತ್ತದೆ.
- ಕಾರಣ ಶರೀರ: ಮೂರನೇ ಗಂಟು ಆತ್ಮ ಮತ್ತು ಕಾರಣ ಶರೀರಕ್ಕೆ ಸಂಬಂಧಿಸಿದ್ದಾಗಿದೆ.
ಒಂದು ಪವಿತ್ರ ಜವಾಬ್ದಾರಿ:
ಗಂಡು ಹೆಣ್ಣಿಗೆ ಈ ಮೂರು ಗಂಟುಗಳನ್ನು ಹಾಕುವ ಮೂಲಕ, “ನಿನ್ನ ಸ್ಥೂಲ, ಸೂಕ್ಷ್ಮ ಮತ್ತು ಕಾರಣ ಶರೀರ ಎಂಬ ಮೂರನ್ನೂ ನಾನು ಗೌರವಿಸುತ್ತೇನೆ, ನಿಭಾಯಿಸುತ್ತೇನೆ ಮತ್ತು ಅದಕ್ಕೆ ಬೇಕಾದ ಶಕ್ತಿ ನನ್ನಲ್ಲಿದೆ” ಎಂಬ ಮೂರು ಪಟ್ಟು ಬಲವಾದ ಜವಾಬ್ದಾರಿಯನ್ನು ಪಂಚಭೂತಗಳ ಸಾಕ್ಷಿಯಾಗಿ ವಹಿಸಿಕೊಳ್ಳುತ್ತಾನೆ.
ಇತ್ತೀಚಿನ ದಿನಗಳಲ್ಲಿ ಮದುವೆಯ ಶಾಸ್ತ್ರಗಳನ್ನು ಕೇವಲ ಸಾಂಕೇತಿಕವಾಗಿ ಮಾಡಲಾಗುತ್ತಿದೆ. ಆದರೆ ನಮ್ಮ ಹಿರಿಯರು ಹಾಕಿಕೊಟ್ಟ ಪ್ರತಿಯೊಂದು ಸಂಪ್ರದಾಯದ ಹಿಂದೆ ಆಳವಾದ ಆಧ್ಯಾತ್ಮಿಕ ಮತ್ತು ಮಾನಸಿಕ ಅರ್ಥ ಅಡಗಿದೆ. ಈ ಮೂರು ಗಂಟುಗಳು ಕೇವಲ ಹಳದಿ ದಾರದ ಬಂಧನವಲ್ಲ, ಅದು ಎರಡು ಜೀವಗಳನ್ನು ಒಂದಾಗಿಸುವ ಜನ್ಮ ಜನ್ಮಾಂತರದ ಬಂಧ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
