ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಮೊದಲ ಪಂದ್ಯ ಧರ್ಮಶಾಲಾದಲ್ಲಿ ನಡೆಯುತ್ತಿದೆ. ಮಳೆಯಿಂದ ತಡವಾಗಿ ಆರಂಭವಾದ ಪಂದ್ಯವನ್ನು ತಲಾ 25 ಓವರ್ಗಳಿಗೆ ನಿಗದಿಪಡಿಸಲಾಗಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ತಂಡದ ಪರ ಅನುಭವಿ ಆರಂಭಿಕ ರಹಮಾನುಲ್ಲಾ ಗುರ್ಬಾಜ್ ಸ್ಫೋಟಕ ಬ್ಯಾಟಿಂಗ್ ಮೂಲಕ ಶತಕ ಸಿಡಿಸಿ ಮಿಂಚಿದ್ದಾರೆ. ಕೇವಲ 48 ಎಸೆತಗಳಲ್ಲಿ ಶತಕ ಬಾರಿಸಿದ ಗುರ್ಬಾಜ್ ತಮ್ಮ ಶತಕದ ಇನ್ನಿಂಗ್ಸ್ನಲ್ಲಿ 8 ಬೌಂಡರಿ ಹಾಗೂ 8 ಭರ್ಜರಿ ಸಿಕ್ಸರ್ಗಳನ್ನು ಬಾರಿಸಿದರು. ಆದಾಗ್ಯೂ ರಹಮಾನುಲ್ಲಾ ಗುರ್ಬಾಜ್ ಅವರ ಈ ಶತಕದ ಇನ್ನಿಂಗ್ಸ್ನಲ್ಲಿ ಟೀಂ ಇಂಡಿಯಾ ನಾಯಕ ಶುಭ್ಮನ್ ಗಿಲ್ ಮಾಡಿದ ಎಡವಟ್ಟು ಕೂಡ ಪ್ರಮುಖ ಪಾತ್ರವಹಿಸಿತು.
ವಾಸ್ತವವಾಗಿ ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಅಫ್ಘಾನಿಸ್ತಾನ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ತಂಡ ಕೇವಲ 16 ರನ್ಗಳಿಗೆ 2 ವಿಕೆಟ್ಗಳನ್ನು ಕಳೆದುಕೊಂಡಿತು. ಟೀಂ ಇಂಡಿಯಾ ಪರ ಪಾದಾರ್ಪಣೆಯ ಪಂದ್ಯವನ್ನಾಡಿದ ಗುರ್ನೂರ್ ಬ್ರಾರ್ ತಾವು ಬೌಲ್ ಮಾಡಿದ ಮೊದಲ ಓವರ್ನಲ್ಲೇ ಇಬ್ರಾಹಿಂ ಜದ್ರಾನ್ ಅವರ ವಿಕೆಟ್ ಉರುಳಿಸಿದರು. ಆ ನಂತರ ಮೂರನೇ ಓವರ್ನಲ್ಲಿ ದಾಳಿಗಿಳಿದ ಅರ್ಷದೀಪ್ ಸಿಂಗ್ ಓವರ್ನ ಮೂರನೇ ಎಸೆತದಲ್ಲಿ ಸೆದಿಕುಲ್ಲಾ ಅಟಲ್ ಅವರ ವಿಕೆಟ್ ಉರುಳಿಸಿದರು. ಅದೇ ಓವರ್ನಲ್ಲಿ ಮತ್ತೊಂದು ವಿಕೆಟ್ ಪಡೆಯುವ ಅವಕಾಶ ಟೀಂ ಇಂಡಿಯಾಕ್ಕಿತ್ತು. ಆದರೆ ನಾಯಕ ಶುಭ್ಮನ್ ಗಿಲ್ ಮಾಡಿದ ಎಡವಟ್ಟು ತಂಡಕ್ಕೆ ತುಂಬಾ ದುಬಾರಿಯಾಯಿತು.
ಅರ್ಷದೀಪ್ ಸಿಂಗ್ ಎಸೆದ ಮೂರನೇ ಓವರ್ನ 5ನೇ ಎಸೆತದಲ್ಲಿ ರಹಮಾನುಲ್ಲಾ ಗುರ್ಬಾಜ್ ಅವರ ವಿಕೆಟ್ ಪಡೆಯುವ ಅವಕಾಶವಿತ್ತು. ಅರ್ಷದೀಪ್ ಎಸೆದ 5ನೇ ಎಸೆತ ಗುರ್ಬಾಜ್ ಅವರ ಪ್ಯಾಡ್ಗೆ ತಗುಲಿತು. ಕೂಡಲೇ ಅರ್ಷದೀಪ್ ವಿಕೆಟ್ಗಾಗಿ ಅಂಪೈರ್ ಬಳಿ ಮನವಿ ಮಾಡಿದರು. ಆದರೆ ಅಂಪೈರ್ ಔಟ್ ನೀಡಲಿಲ್ಲ. ಇತ್ತ ಅರ್ಷದೀಪ್ ಡಿಆರ್ಎಸ್ ತೆಗೆದುಕೊಳ್ಳುವಂತೆ ನಾಯಕ ಗಿಲ್ ಬಳಿ ಮನವಿ ಮಾಡಿದರು. ಆದರೆ ಶುಭ್ಮನ್ ಗಿಲ್ ಅರ್ಷದೀಪ್ ಸಿಂಗ್ ಮಾತು ಕೇಳದೆ ವಿಕೆಟ್ ಕೀಪರ್ ಇಶಾನ್ ಕಿಶನ್ ಹಾಗೂ ಅನುಭವಿ ರೋಹಿತ್ ಶರ್ಮಾ ಅವರ ಮಾತು ಕೇಳಿ ಡಿಆರ್ಎಸ್ ತೆಗೆದುಕೊಳ್ಳಲಿಲ್ಲ. ಕಿಶನ್ ಹಾಗೂ ರೋಹಿತ್, ಚೆಂಡು ಬ್ಯಾಟ್ಗೆ ತಾಗಿದೆ ಎಂದು ಸನ್ನೆ ಮಾಡಿದರು. ಇದರಿಂದ ಗಿಲ್ ಡಿಆರ್ಎಸ್ ತೆಗೆದುಕೊಳ್ಳಲಿಲ್ಲ.
ಆದರೆ ಆ ನಂತರ ತೋರಿಸಿದ ರಿಪ್ಲೆಯಲ್ಲಿ ಚೆಂಡು ಪ್ಯಾಡ್ಗೆ ತಾಗಿರುವುದು ಸ್ಪಷ್ಟವಾಗಿ ಗೋಚರಿಸಿತು. ಇದನ್ನು ನೋಡಿದ ಅರ್ಷದೀಪ್ ಅಸಮಾಧಾನ ಹೊರಹಾಕಿದರು. ಆ ಸಮಯದಲ್ಲಿ ಗುರ್ಬಾಜ್ ಕೇವಲ 14 ರನ್ ಬಾರಿಸ ಆಡುತ್ತಿದ್ದರು. ಟೀಂ ಇಂಡಿಯಾ ಮಾಡಿದ ಎಡವಟ್ಟಿನಿಂದ ಜೀವದಾನ ಪಡೆದ ಗುರ್ಬಾಜ್ ಕೇವಲ 48 ಎಸೆತಗಳಲ್ಲಿ ಸ್ಫೋಟಕ ಶತಕ ಬಾರಿಸಿದರು. ಅಂದರೆ ಭಾರತ ತಂಡದ ಒಂದು ತಪ್ಪು ನಿರ್ಧಾರದಿಂದ 88 ರನ್ಗಳ ದಂಡ ತೆರಬೇಕಾಯಿತು.