ಬಾಗಲಕೋಟೆ, ಜೂನ್ 13: ಜಿಲ್ಲೆಯ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರಥಮ ದರ್ಜೆ ಸಹಾಯಕ (ಎಫ್ಡಿಸಿ) ನೀಲಕಂಠ ಅಂಗಡಿ ಅವರ ಮೇಲೆ ರೈತ ಬಸಪ್ಪ ದೊಡ್ಡಮನಿ ಚಪ್ಪಲಿಯಿಂದ ಹಲ್ಲೆ ನಡೆಸಿದ ಘಟನೆ ಆತಂಕ ಮೂಡಿಸಿದೆ. ಪರಿಹಾರ ಹಣದ ವಿಳಂಬ ಹಾಗೂ ತಾರತಮ್ಯ ಆರೋಪದ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿದೆ.
ಘಟನೆ ಕುರಿತು ಟಿವಿ9ಗೆ ಮಾಹಿತಿ ನೀಡಿದ ನೀಲಕಂಠ ಅಂಗಡಿ, ಘಟನೆ ಸುಮಾರು 12 ಗಂಟೆಗೆ ನಡೆದಿದೆ. ಹಕ್ಕುಪತ್ರ ಮತ್ತು ಇ-ಖಾತೆ ವಿತರಣಾ ಕಾರ್ಯಕ್ರಮ ನಡೆಯುತ್ತಿತ್ತು. ಬಸಪ್ಪ ದೊಡ್ಡಮನಿ ತಮ್ಮ ಫೈಲ್ ಬಗ್ಗೆ ವಿಚಾರಿಸಲು ಬಂದರು. ತನ್ನ ಕಡತ ತನ್ನ ಬಳಿ ಇಲ್ಲ, ಆರ್ಒ ಕಚೇರಿಯಲ್ಲಿದೆ ಎಂದು ಹೇಳಿದಾಗ ಆವಾಚ್ಯ ಶಬ್ದಗಳಿಂದ ನಿಂದಿಸಿ, ಕುತ್ತಿಗೆ ಹಿಡಿದು ಚಪ್ಪಲಿಯಿಂದ ಹೊಡೆದರು ಎಂದು ವಿವರಿಸಿದ್ದಾರೆ. ಅಧ್ಯಕ್ಷರ ಚೇಂಬರ್ಗೆ ಹೋಗಿ ವಿಷಯ ತಿಳಿಸಿದಾಗ, ಅಲ್ಲಿಯೂ ಬಸಪ್ಪ ಬಂದು ಅಧ್ಯಕ್ಷರ ಮುಂದೆಯೇ ಮತ್ತೆ ಹಲ್ಲೆ ನಡೆಸಿದ್ದಾರೆ ಎಂದು ನೀಲಕಂಠ ಅಂಗಡಿ ತಿಳಿಸಿದ್ದಾರೆ.
ಈ ಘಟನೆಯಿಂದ ಅಧಿಕಾರಿಗಳ ವಲಯದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದ್ದು, ತಮ್ಮ ಭದ್ರತೆ ಬಗ್ಗೆ ಸಿಬ್ಬಂದಿ ಕಳವಳ ವ್ಯಕ್ತಪಡಿಸಿದ್ದಾರೆ. ಹಲ್ಲೆಕೋರನ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಮತ್ತು ಕರ್ತವ್ಯನಿರತ ಸಿಬ್ಬಂದಿಗೆ ನ್ಯಾಯ ಒದಗಿಸಬೇಕು ಎಂದು ನೀಲಕಂಠ ಅಂಗಡಿ ಮತ್ತು ಇತರೆ ಸಿಬ್ಬಂದಿ ಆಗ್ರಹಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ