ಐರ್ಲೆಂಡ್ ನಂತರ ಇದೀಗ ಇಂಗ್ಲೆಂಡ್ ವಿರುದ್ಧವೂ ಟೀಂ ಇಂಡಿಯಾ (India vs England) ಟಿ20 ಸರಣಿಯನ್ನು ಕಳೆದುಕೊಂಡಿದೆ. ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯ ನಾಲ್ಕನೇ ಪಂದ್ಯದಲ್ಲಿ ಇಂಗ್ಲೆಂಡ್ 9 ವಿಕೆಟ್ಗಳ ಜಯ ಸಾಧಿಸುವ ಮೂಲಕ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಸರಣಿ ವಶಪಡಿಸಿಕೊಂಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ, ಇಂಗ್ಲೆಂಡ್ ಗೆಲುವಿಗೆ 159 ರನ್ಗಳ ಗುರಿ ನೀಡಿತ್ತು. ಈ ಗುರಿ ಬೆನ್ನಟ್ಟಿದ ಇಂಗ್ಲೆಂಡ್ 13.5 ಓವರ್ಗಳಲ್ಲಿ 1 ವಿಕೆಟ್ ಕಳೆದುಕೊಳ್ಳುವ ಮೂಲಕ ಜಯ ಸಾಧಿಸಿತು. ಈ ಪಂದ್ಯದಲ್ಲಿ ನಾಯಕ ಶ್ರೇಯಸ್ ಅಯ್ಯರ್ (Shreyas Iyer) ಹೊರತುಪಡಿಸಿ ಉಳಿದ ಯಾವ ಆಟಗಾರನಿಗೂ ಒಂದೊಳ್ಳೆ ಇನ್ನಿಂಗ್ಸ್ ಆಡಲು ಸಾಧ್ಯವಾಗಲಿಲ್ಲ. ಹೀಗಾಗಿ ಈ ಹೀನಾಯ ಸೋಲಿನ ನಂತರ ಮಾತನಾಡಿದ ಶ್ರೇಯಸ್ ಅಯ್ಯರ್ ಪಂದ್ಯ ಪ್ರಸ್ತುತಿಯಲ್ಲಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದು ಹೀಗೆ.
ಪ್ರಶ್ನೆ: ಇಂದಿನ ಪ್ರದರ್ಶನವನ್ನು ನೀವು ಹೇಗೆ ನಿರ್ಣಯಿಸುತ್ತೀರಿ?
ಉತ್ತರ: ನಿರಾಶಾದಾಯಕವಾಗಿತ್ತು. ಇದು 158 ರನ್ಗಳ ಪಿಚ್ ಆಗಿರಲಿಲ್ಲ. ಈ ಗುರಿಯನ್ನು ಇಂಗ್ಲೆಂಡ್ ಆರಾಮವಾಗಿ ಬೆನ್ನಟ್ಟಿತು.
ಪ್ರಶ್ನೆ: ಹಿಂದಿನ ಸೋಲಿನ ನಂತರ ನೀವು ಬೌಲರ್ಗಳಿಗೆ ನೀಡಿದ್ದ ಸಂದೇಶವೇನು?
ಉತ್ತರ: ನಾವು ಸರಿಯಾದ ಲೈನ್ ಅಂಡ್ ಲೆಂಗ್ತ್ನಲ್ಲಿ ಬೌಲಿಂಗ್ ಮಾಡುವುದನ್ನು ಮುಂದುವರಿಸಲು ಬಯಸಿದ್ದೆವು. ಈ ಪಿಚ್ನಲ್ಲಿ, ಸ್ಟಂಪ್ ಮೇಲೆ ಬೌಲಿಂಗ್ ಮಾಡುವುದರಿಂದ ಬೌಂಡರಿ ಹೊಡೆಯುವುದು ಕಷ್ಟಕರವಾಗಿತ್ತು. ಆದರೆ ನಾವು ಸ್ಥಿರವಾಗಿ ಕಾರ್ಯನಿರ್ವಹಿಸಲಿಲ್ಲ ಮತ್ತು ಕಳಪೆ ಚೆಂಡುಗಳನ್ನು ಅವರು ಸುಲಭವಾಗಿ ದಂಡಿಸಿದರು.
ಪ್ರಶ್ನೆ: ವೈಯಕ್ತಿಕವಾಗಿ, ನೀವು ಚೆನ್ನಾಗಿ ಆಡಿದ್ದೀರಿ, ಇದರಿಂದ ನಿಮಗೆ ಸಂತೋಷವಾಗಿದೆಯೇ?
ಉತ್ತರ: ನನ್ನ ಪ್ರದರ್ಶನದಿಂದ ನಾನು ಸಂತೋಷವಾಗಿದ್ದೇನೆ, ಆದರೆ ಅದು ತಂಡದ ಗೆಲುವಿಗೆ ಸಹಾಯ ಮಾಡದಿದ್ದರೆ, ಅದಕ್ಕೆ ಅರ್ಥವಿಲ್ಲ. ನನ್ನ ಪ್ರದರ್ಶನ ತಂಡದ ಗೆಲುವಿಗೆ ಕಾರಣವಾಗಬೇಕೆಂದು ನಾನು ಯಾವಾಗಲೂ ಬಯಸುತ್ತೇನೆ.
ಪ್ರಶ್ನೆ: ಸರಣಿ ಸೋತಿದ್ದೀರಿ, ಕೊನೆಯದಾಗಿ ಏನನ್ನಾದರೂ ಮಾಡಲು ಇನ್ನೊಂದು ಪಂದ್ಯ ಬಾಕಿ ಉಳಿದಿದೆ?
ಉತ್ತರ: ಖಂಡಿತ. ಇದು ಪರಿವರ್ತನೆಯ ಹಂತ. ಅನೇಕ ಯುವ ಆಟಗಾರರು ಮೊದಲ ಬಾರಿಗೆ ವಿದೇಶಿ ಪರಿಸ್ಥಿತಿಗಳಲ್ಲಿ ಆಡುತ್ತಿದ್ದಾರೆ, ಆದ್ದರಿಂದ ತಪ್ಪುಗಳು ನಡೆಯುವುದು ಸಹಜ. ಆ ತಪ್ಪುಗಳಿಂದ ಬೇಗನೆ ಕಲಿಯುವುದು ಮುಖ್ಯ. ತಂಡವು ಬೇಗನೆ ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳುವವರನ್ನು ಹೊಂದಿದೆ ಎಂದು ನನಗೆ ವಿಶ್ವಾಸವಿದೆ ಮತ್ತು ಮುಂದಿನ ಪಂದ್ಯದಲ್ಲಿ ನಾವು ಬಲವಾಗಿ ಮರಳುತ್ತೇವೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 8:28 am, Fri, 10 July 26
