ಟಿ20 ಚಾಂಪಿಯನ್ ಎಂಬ ಪಟ್ಟದೊಂದಿಗೆ ಐರ್ಲೆಂಡ್ ಪ್ರವಾಸ ಮಾಡಿದ್ದ ಟೀಂ ಇಂಡಿಯಾ (India-Ireland) ತನ್ನ ಮೊದಲ ಪಂದ್ಯದಲ್ಲಿಯೇ ಹೀನಾಯ ಸೋಲನ್ನು ಎದುರಿಸಿತು. ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡೂ ವಿಭಾಗದಲ್ಲೂ ಕಳಪೆ ಪ್ರದರ್ಶನ ನೀಡಿದ್ದ ಟೀಂ ಇಂಡಿಯಾ, ಐರ್ಲೆಂಡ್ ವಿರುದ್ಧ 34 ರನ್ಗಳ ಅಂತರದಿಂದ ಐತಿಹಾಸಿಕ ಸೋಲನ್ನು ಅನುಭವಿಸಿತ್ತು. ಇದೀಗ ಉಭಯ ತಂಡಗಳ ಎರಡನೇ ಪಂದ್ಯ ಜೂನ್ 28 ರಂದು ನಡೆಯಲಿದೆ. ಈ ಪಂದ್ಯವನ್ನು ಐರ್ಲೆಂಡ್ ಗೆದ್ದರೆ, ಸರಣಿ ಅದರ ಪಾಲಾಗಲಿದೆ. ಇತ್ತ ಭಾರತ ಗೆದ್ದರೆ ಸರಣಿ 1-1 ರ ಸಮಬಲದೊಂದಿಗೆ ಅಂತ್ಯವಾಗಲಿದೆ. ಹೀಗಾಗಿ ಎರಡು ತಂಡಗಳು ಗೆಲ್ಲಲೇಬೇಕಾದ ಒತ್ತಡದಲ್ಲಿವೆ. ಆದಾಗ್ಯೂ ನಾಳೆಯ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಇದ್ದು, ಟೀಂ ಇಂಡಿಯಾವನ್ನು ಚಿಂತಿಗೀಡು ಮಾಡಿದೆ.
ಹವಾಮಾನ ವರದಿ
ಹವಾಮಾನ ವರದಿಯ ಪ್ರಕಾರ, ಪಂದ್ಯ ದಿನದಂದು ಬೆಲ್ಫಾಸ್ಟ್ನಲ್ಲಿ ಭಾರಿ ಮಳೆಯಾಗಲಿದೆ ಎಂದು ವರದಿಯಾಗಿದೆ. ಈ ಪಂದ್ಯ ಸಂಜೆ 6 ಗಂಟೆಗೆ ಆರಂಭವಾಗಿದೆ. ಆದರೆ ಟಾಸ್ ನಡೆಯುವುದಕ್ಕೂ ಮುನ್ನವೇ ಮಳೆ ಬೀಳಲಿದೆ ಎಂದು ವರದಿಯಾಗಿದೆ. ಅಲ್ಲದೆ ಮುಂದಿನ ಎರಡು ಗಂಟೆಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಯುಕೆ ಹವಾಮಾನ ಇಲಾಖೆಯ ಪ್ರಕಾರ, ಭಾರತೀಯ ಕಾಲಮಾನ ಸಂಜೆ 5.30 ಕ್ಕೆ ಟಾಸ್ ಸಮಯದಲ್ಲಿ ಮಳೆಯಾಗುವ ಸಾಧ್ಯತೆ ಶೇ. 70 ರಷ್ಟು ಇದೆ. ಅದಕ್ಕೂ ಒಂದು ಗಂಟೆ ಮೊದಲು ಮಳೆಯಾಗುವ ಸಾಧ್ಯತೆ ಶೇ. 50 ರಷ್ಟು ಇದೆ. ಟಾಸ್ ನಂತರ ಒಂದು ಗಂಟೆಯಲ್ಲಿ ಮಳೆಯಾಗುವ ಸಾಧ್ಯತೆ ಶೇ. 60 ರಷ್ಟು ಇದೆ.
ರಾತ್ರಿ 8:30 ರ ನಂತರ ಮಳೆ ಬರುವ ಸಾಧ್ಯತೆ ಕಡಿಮೆ ಇರುವುದರಿಂದ ಪಂದ್ಯವನ್ನು ಕಡಿಮೆ ಓವರ್ಗಳಿಗೆ ಸೀಮಿತಗೊಳಿಸುವ ಸಾಧ್ಯತೆ ಇದೆ. ಆದಾಗ್ಯೂ ಪಂದ್ಯವು ಮಳೆಯಿಂದ ರದ್ದಾದರೆ, ಐರ್ಲೆಂಡ್ ಮೊದಲ ಬಾರಿಗೆ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಭಾರತದ ವಿರುದ್ಧ ಸರಣಿಯನ್ನು ಗೆದ್ದ ಇತಿಹಾಸ ನಿರ್ಮಿಸಲಿದೆ.
ಪಿಚ್ ವರದಿ
ಐರ್ಲೆಂಡ್ನ ಬೆಲ್ಫಾಸ್ಟ್ನಲ್ಲಿರುವ ಸಿವಿಲ್ ಸರ್ವಿಸ್ ಕ್ರಿಕೆಟ್ ಕ್ಲಬ್ನಲ್ಲಿರುವ ಪಿಚ್ ಸಾಮಾನ್ಯವಾಗಿ ವೇಗದ ಬೌಲರ್ಗಳಿಗೆ ಅನುಕೂಲಕರವಾಗಿರುತ್ತದೆ. ಆದಾಗ್ಯೂ, ಆರಂಭಿಕ ಓವರ್ಗಳ ನಂತರ, ಬ್ಯಾಟ್ಸ್ಮನ್ಗಳು ಬೌಲರ್ಗಳ ಮೇಲೆ ಪ್ರಾಬಲ್ಯ ಸಾಧಿಸುತ್ತಾರೆ. ಬ್ಯಾಟ್ಸ್ಮನ್ಗಳು ತಾಳ್ಮೆಯಿಂದ ಬ್ಯಾಟಿಂಗ್ ಮಾಡಿ ಕ್ರೀಸ್ನಲ್ಲಿ ಸಮಯ ಕಳೆದರೆ, ರನ್ ಗಳಿಸುವುದು ಸುಲಭವಾಗುತ್ತದೆ.
IND vs IRE: ಇಬ್ಬರು ಇನ್, ಇಬ್ಬರು ಔಟ್; ವೈಭವ್ಗೆ ಸಿಗುತ್ತಾ ಅವಕಾಶ? ಹೀಗಿದೆ ಪ್ಲೇಯಿಂಗ್ 11
ಉಭಯ ತಂಡಗಳು
ಐರ್ಲೆಂಡ್ ತಂಡ: ಲೋರ್ಕನ್ ಟಕರ್ (ನಾಯಕ), ರಾಸ್ ಅಡೈರ್, ಬೆನ್ ಕೌಲ್ಟಿಡ್ಜ್, ಗ್ಯಾರೆತ್ ಡೆಲಾನಿ, ಜಾರ್ಜ್ ಡಾಕ್ರೆಲ್, ಸ್ಟೀಫನ್ ಡೊಹೆನಿ, ಮ್ಯಾಥ್ಯೂ ಹಂಫ್ರೈಸ್, ಗ್ಯಾವಿನ್ ಹೋಯ್, ಮ್ಯಾಥ್ಯೂ ಹೊಲ್ಲಾರ್ಡ್, ಲಿಯಾಮ್ ಮೆಕಾರ್ಥಿ, ಜೇ ಮುಂದ್ರಾ, ಹ್ಯಾರಿ ಟೆಕ್ಟರ್, ಟಿಮ್ ಟೆಕ್ಟರ್, ರೂಬೆನ್ ವಿಲ್ಸನ್.
ಭಾರತ ತಂಡ: ಶ್ರೇಯಸ್ ಅಯ್ಯರ್ (ನಾಯಕ), ಇಶಾನ್ ಕಿಶನ್, ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ಶಿವಂ ದುಬೆ, ತಿಲಕ್ ವರ್ಮಾ (ಉಪನಾಯಕ), ನಿತೀಶ್ ರೆಡ್ಡಿ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಪ್ರಿನ್ಸ್ ಯಾದವ್ ಮತ್ತು ವೈಭವ್ ಸೂರ್ಯವಂಶಿ.
