2026 ರ ಟಿ20 ವಿಶ್ವಕಪ್ನಲ್ಲಿ ಟೀಂ ಇಂಡಿಯಾದ ಅಜೇಯ ಓಟಕ್ಕೆ ಬ್ರೇಕ್ ಬಿದ್ದಿದೆ. ಹಾಲಿ ಚಾಂಪಿಯನ್ಸ್ ಭಾರತ ತಂಡವು ಟೂರ್ನಮೆಂಟ್ನ ಸೂಪರ್ 8 ಸುತ್ತಿನ ತನ್ನ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 76 ರನ್ಗಳ ಹೀನಾಯ ಸೋಲು ಅನುಭವಿಸಿದೆ. ಫೆಬ್ರವರಿ 22 ರ ಭಾನುವಾರ ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ 187 ರನ್ಗಳನ್ನು ಗಳಿಸಿತು. ಇದಕ್ಕೆ ಪ್ರತಿಕ್ರಿಯೆಯಾಗಿ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಆಫ್ರಿಕಾದ ಬೌಲಿಂಗ್ ದಾಳಿಯ ವಿರುದ್ಧ ತತ್ತರಿಸಿ ಕೇವಲ 111 ರನ್ಗಳಿಗೆ ಆಲೌಟ್ ಆಯಿತು.
ಮಿಲ್ಲರ್- ಬ್ರೆವಿಸ್ ಜೊತೆಯಾಟ
2024 ರ ಟಿ20 ವಿಶ್ವಕಪ್ ಫೈನಲ್ನ ಮರುಕಳಿಕೆಯಂತೆ ಕಾಣುತ್ತಿದ್ದ ಈ ಪಂದ್ಯದಲ್ಲಿ, ಟೀಂ ಇಂಡಿಯಾ ಪ್ರಾಬಲ್ಯ ಸಾಧಿಸುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಟಾಸ್ ಸೋತು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ನಂತರ, ಒಂದು ಕ್ಷಣ ಹಾಗೆಯೇ ಅನಿಸಿತು. ಇದಕ್ಕೆ ಪೂರಕವಾಗಿ ದಕ್ಷಿಣ ಆಫ್ರಿಕಾದ ಅಗ್ರ ಮೂವರು ಬ್ಯಾಟ್ಸ್ಮನ್ಗಳು ನಾಲ್ಕನೇ ಓವರ್ನಲ್ಲಿ ಕೇವಲ 20 ರನ್ಗಳಿಗೆ ಔಟಾದರು. ಆದರೆ ಆ ನಂತರ ಡೇವಿಡ್ ಮಿಲ್ಲರ್ ಮತ್ತು ಡೆವಾಲ್ಡ್ ಬ್ರೆವಿಸ್ ಜೊತೆಯಾಟವು ಟೀಂ ಇಂಡಿಯಾವನ್ನು ಹಿನ್ನಡೆಯಲ್ಲಿ ಸಿಲುಕಿಸಿತು. ಈ ಇಬ್ಬರು ನಾಲ್ಕನೇ ವಿಕೆಟ್ಗೆ 97 ರನ್ಗಳ ಜೊತೆಯಾಟ ನಡೆಸಿದರು.
ಇದೇ ವೇಳೆ ಮಿಲ್ಲರ್ ಕೇವಲ 26 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಆದಾಗ್ಯೂ, 13 ನೇ ಓವರ್ನಲ್ಲಿ ಬ್ರೆವಿಸ್ ಔಟಾದ ನಂತರ, ಟೀಂ ಇಂಡಿಯಾ ಮತ್ತೆ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಮಧ್ಯಂತರವಾಗಿ ವಿಕೆಟ್ಗಳನ್ನು ಪಡೆದು ದಕ್ಷಿಣ ಆಫ್ರಿಕಾವನ್ನು 200 ರನ್ಗಳ ಒಳಗೆ ಸೀಮಿತಗೊಳಿಸಿತು. ಆದಾಗ್ಯೂ, ಟ್ರಿಸ್ಟಾನ್ ಸ್ಟಬ್ಸ್ ಅದ್ಭುತ ಇನ್ನಿಂಗ್ಸ್ ಆಡಿ ತಂಡವನ್ನು 187 ರನ್ಗಳಿಗೆಕೆ ಕೊಂಡೊಯ್ದರು. ಟೀಂ ಇಂಡಿಯಾ ಪರ, ಬುಮ್ರಾ ಮೂರು ವಿಕೆಟ್ ಪಡೆದರೆ, ಅರ್ಷದೀಪ್ ಸಿಂಗ್ ಎರಡು ವಿಕೆಟ್ಗಳನ್ನು ಪಡೆದರು.
ಭಾರತಕ್ಕೆ ಕಳಪೆ ಆರಂಭ
ಈ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಮತ್ತೊಮ್ಮೆ ಕಳಪೆ ಆರಂಭ ಪಡೆದುಕೊಂಡಿತು. ಮೊದಲ ಓವರ್ನಲ್ಲಿಯೇ ಇಶಾನ್ ಕಿಶನ್ 0 ರನ್ ಗಳಿಸಿ ಔಟಾದರು. ಆ ಬಳಿಕ ಬಂದ ತಿಲಕ್ ವರ್ಮಾ ಕೂಡ ಎರಡನೇ ಓವರ್ನ ಮೊದಲ ಎಸೆತದಲ್ಲಿ ಔಟಾದರು. ಅಭಿಷೇಕ್ ತಮ್ಮ ಖಾತೆಯನ್ನು ಬೌಂಡರಿ ಮೂಲಕ ತೆರೆದು, ಆ ನಂತರ ಎರಡು ಬೌಂಡರಿಗಳನ್ನು ಬಾರಿಸಿದರು. ಆದರೆ ದೊಡ್ಡ ಹೊಡೆತಗಳನ್ನು ಹೊಡೆಯಲು ಯತ್ನಿಸಿ ನಾಲ್ಕನೇ ಓವರ್ನಲ್ಲಿ ಔಟಾದರು. ದಕ್ಷಿಣ ಆಫ್ರಿಕಾದಂತೆ, ಟೀಂ ಇಂಡಿಯಾ ಕೂಡ 26 ರನ್ಗಳಿಗೆ ಮೂರು ವಿಕೆಟ್ಗಳನ್ನು ಕಳೆದುಕೊಂಡಿತು. ಆದಾಗ್ಯೂ, ಮಿಲ್ಲರ್ ಮತ್ತು ಬ್ರೆವಿಸ್ಗಿಂತ ಭಿನ್ನವಾಗಿ, ಟೀಂ ಇಂಡಿಯಾ ಜೊತೆಯಾಟವನ್ನು ರೂಪಿಸಲು ಸಾಧ್ಯವಾಗಲಿಲ್ಲ.
111 ರನ್ಗಳಿಗೆ ಆಲೌಟ್
ನಾಯಕ ಸೂರ್ಯಕುಮಾರ್ ಯಾದವ್ ಮತ್ತು ವಾಷಿಂಗ್ಟನ್ ಸುಂದರ್ ವೇಗವಾಗಿ ರನ್ ಗಳಿಸಲು ಅಥವಾ ದೊಡ್ಡ ಪಾಲುದಾರಿಕೆಯನ್ನು ರಚಿಸಲು ಸಾಧ್ಯವಾಗಲಿಲ್ಲ. 10 ನೇ ಓವರ್ನಲ್ಲಿ ಕೇವಲ 51 ರನ್ಗಳಿಗೆ ಐದು ವಿಕೆಟ್ಗಳು ಬಿದ್ದವು. ಕಾರ್ಬಿನ್ ಬಾಷ್ ಸತತ ಓವರ್ಗಳಲ್ಲಿ ಇಬ್ಬರನ್ನೂ ಔಟ್ ಮಾಡಿದರು. ಇದರ ನಂತರ, ಜವಾಬ್ದಾರಿ ಹಾರ್ದಿಕ್ ಪಾಂಡ್ಯ ಮತ್ತು ಶಿವಂ ದುಬೆ ಅವರ ಮೇಲಿತ್ತು, ಅವರು ಸ್ವಲ್ಪ ಸಮಯದವರೆಗೆ ಹಿಡಿತ ಸಾಧಿಸಿದರು. ಆದಾಗ್ಯೂ, 15 ನೇ ಓವರ್ನಲ್ಲಿ, ಸ್ಪಿನ್ನರ್ ಕೇಶವ್ ಮಹಾರಾಜ್ ಹಾರ್ದಿಕ್, ರಿಂಕು ಸಿಂಗ್ ಮತ್ತು ಅರ್ಶ್ದೀಪ್ ಸಿಂಗ್ ಅವರ ವಿಕೆಟ್ಗಳನ್ನು ಕಬಳಿಸಿ ಪಂದ್ಯವನ್ನು ಕೊನೆಗೊಳಿಸಿದರು. ನಂತರ ಶಿವಂ ದುಬೆ ಕೆಲವು ಬೌಂಡರಿಗಳನ್ನು ಬಾರಿಸಿ ತಂಡವನ್ನು 100 ರನ್ಗಳ ಗಡಿ ದಾಟಿಸಿದರು, ಆದರೆ ಅದು ತುಂಬಾ ತಡವಾಗಿತ್ತು. 19 ನೇ ಓವರ್ನಲ್ಲಿ, ಯಾನ್ಸನ್, ದುಬೆ ಸೇರಿದಂತೆ ಕೊನೆಯ ಎರಡು ವಿಕೆಟ್ಗಳನ್ನು ಪಡೆದು ಭಾರತದ ಇನ್ನಿಂಗ್ಸ್ ಅನ್ನು ಕೇವಲ 111 ರನ್ಗಳಿಗೆ ಮುಗಿಸಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
