ಭಾರತ ಹಾಗೂ ಶ್ರೀಲಂಕಾ ಕ್ರಿಕೆಟ್ ಇಲೆವೆನ್ ನಡುವಿನ ಮೂರು ಪಂದ್ಯಗಳ ಅಭ್ಯಾಸ ಪಂದ್ಯ ಇಂದಿನಿಂದ ಕೊಲಂಬೊದ ಎನ್ಸಿಸಿ ಮೈದಾನದಲ್ಲಿ ಆರಂಭವಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ಇಲೆವೆನ್ ತಂಡ ಮೊದಲು ಬ್ಯಾಟಿಂಗ್ ಮಾಡತ್ತಿದೆ. ಇತ್ತ ಭಾರತ ತಂಡದಲ್ಲಿ ನಾಯಕನ ಬದಲಾವಣೆಯಾಗಿದ್ದು, ಈ ಅಭ್ಯಾಸ ಪಂದ್ಯದಲ್ಲಿ ಕನ್ನಡಿಗ ಕೆಎಲ್ ರಾಹುಲ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ನಿಯಮಿತ ನಾಯಕ ಶುಭ್ಮನ್ ಗಿಲ್ ಅಭ್ಯಾಸದ ಸಮಯದಲ್ಲಿ ಬೆರಳಿಗೆ ಗಾಯ ಮಾಡಿಕೊಂಡ ಕಾರಣದಿಂದಾಗಿ ಅವರು ಮೊದಲ ಕಣಕ್ಕಿಳಿದಿಲ್ಲ. ಹೀಗಾಗಿ ಅವರ ಬದಲಿಗೆ ರಾಹುಲ್ ತಂಡದ ನಾಯಕತ್ವವಹಿಸಿದ್ದಾರೆ.
ಅಭ್ಯಾಸದ ವೇಳೆ ಗಾಯ
ಅಭ್ಯಾಸ ಪಂದ್ಯ ಆರಂಭಕ್ಕೆ ಒಂದು ದಿನ ಮುಂಚಿತವಾಗಿ ಅಂದರೆ ಆಗಸ್ಟ್ 6 ರಂದು ತಂಡದೊಂದಿಗೆ ಬ್ಯಾಟಿಂಗ್ ಅಭ್ಯಾಸ ಮಾಡುವ ಸಮಯದಲ್ಲಿ ಶುಭ್ಮನ್ ಗಿಲ್ ತಮ್ಮ ಬೆರಳಿಗೆ ಗಾಯ ಮಾಡಿಕೊಂಡಿದ್ದರು. ಕೂಡಲೇ ಮೈದಾನಕ್ಕೆ ಬಂದಿದ್ದ ಫಿಸಿಯೋ, ಅವರನ್ನು ಪರೀಕ್ಷಿಸಿ ಗಿಲ್ ಅವರ ಕೈಗೆ ಬ್ಯಾಂಡೆಜ್ ಸುತ್ತಿದ್ದರು. ಇದಾದ ಬಳಿಕ ಗಿಲ್ ತಮ್ಮ ಬ್ಯಾಟಿಂಗ್ ಅಭ್ಯಾಸವನ್ನು ಮುಂದುವರೆಸಿದ್ದರು. ಆದರೆ ಫಿಲ್ಡಿಂಗ್ ಅಭ್ಯಾಸದ ವೇಳೆ ಗಿಲ್ ಗಾಯಗೊಂಡಿರುವ ಕೈಗೆ ಚೆಂಡು ಮತ್ತೆ ಬಡಿದಿತ್ತು. ಇದರಿಂದ ತೀವ್ರ ನೋವಿಗೆ ಒಳಗಾಗಿದ್ದ ಗಿಲ್ ತಮ್ಮ ಅಭ್ಯಾಸವನ್ನು ಮೊಟಕುಗೊಳಿಸಿದ್ದರು. ಆ ಸಮಯದಲ್ಲಿ ಗಿಲ್ ಅವರ ಗಾಯದ ತೀವ್ರತೆಯ ಬಗ್ಗೆ ಬಿಸಿಸಿಐ ಏನನ್ನೂ ಹೇಳಿರಲಿಲ್ಲ. ಆದರೀಗ ಅವರು ಅಭ್ಯಾಸ ಪಂದ್ಯದ ಮೊದಲ ದಿನದಂದು ತಂಡದೊಂದಿಗೆ ಕಣಕ್ಕಿಳಿದಿಲ್ಲ
ಮಾಹಿತಿ ನೀಡಿದ ಬಿಸಿಸಿಐ
ಶುಭ್ಮನ್ ಗಿಲ್ ಅವರ ಗಾಯದ ಬಗ್ಗೆ ಬಿಸಿಸಿಐ ಮಾಹಿತಿ ಹಂಚಿಕೊಂಡಿದ್ದು, ಗುರುವಾರ ಅಭ್ಯಾಸದ ಸಮಯದಲ್ಲಿ ನಾಯಕ ಶುಭಮನ್ ಗಿಲ್ ಅವರ ಬಲಗೈ ಉಂಗುರದ ಬೆರಳಿಗೆ ಗಾಯವಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ, ಮೂರು ದಿನಗಳ ಅಭ್ಯಾಸ ಪಂದ್ಯದ ಮೊದಲ ದಿನದಂದು ಮೈದಾನಕ್ಕೆ ಇಳಿಯದಂತೆ ಅವರಿಗೆ ಸೂಚಿಸಲಾಗಿದೆ. ಬಿಸಿಸಿಐ ವೈದ್ಯಕೀಯ ತಂಡವು ಅವರ ಗಾಯ ಮತ್ತು ಚೇತರಿಕೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಮಂಡಳಿ ಸ್ಪಷ್ಟಪಡಿಸಿದೆ.
ಮಾಹಿತಿ ಪ್ರಕಾರ, ಶುಭ್ಮನ್ ಗಿಲ್ ಅವರ ಗಾಯ ತುಂಬಾ ಗಂಭೀರವಾಗಿಲ್ಲ. ಹೀಗಾಗಿ ಆಗಸ್ಟ್ 15 ರಂದು ಗಾಲೆಯಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯಕ್ಕೂ ಮೊದಲು ಅವರು ಸಂಪೂರ್ಣವಾಗಿ ಫಿಟ್ ಆಗುವ ಸಾಧ್ಯತೆಗಳಿವೆ. ಆದಾಗ್ಯೂ, ಅಭ್ಯಾಸ ಅವಧಿಗೆ ಆಡುವ ಹನ್ನೊಂದರ ಬಳಗವನ್ನು ಘೋಷಿಸದ ಕಾರಣ, ಗಿಲ್ ಟೀಂ ಇಂಡಿಯಾದ ಬ್ಯಾಟಿಂಗ್ ಸಮಯದಲ್ಲಿ ಮೈದಾನಕ್ಕೆ ಇಳಿಯಬಹುದು. ಆದಾಗ್ಯೂ, ಈ ನಿರ್ಧಾರವು ತಂಡದ ಆಡಳಿತ ಮಂಡಳಿಯ ಮೇಲೆ ಅವಲಂಬಿತವಾಗಿರುತ್ತದೆ.
