ಐಪಿಎಲ್ 2026 ಕ್ಕೂ ಮುನ್ನ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ವೈಯಕ್ತಿಕ ಬದುಕಿನಲ್ಲಿ ಕಾನೂನಿನ ಕುಣಿಕೆಯಲ್ಲಿ ಸಿಲುಕಿಕೊಂಡಿರುವ ತಂಡದ ವೇಗದ ಬೌಲರ್ ಯಶ್ ದಯಾಳ್ ಅವರನ್ನು ಈ ಆವೃತ್ತಿಯಿಂದ ಹೊರಗಿಡುವ ನಿರ್ಧಾರ ಮಾಡಿದೆ. ಇದು ತಂಡದ ಬೌಲಿಂಗ್ ವಿಭಾಗವನ್ನು ಕೊಂಚ ದುರ್ಬಲಗೊಳಿಸಿದೆ. ಹಾಗಿದ್ದರೆ, ಯಶ್ ದಯಾಳ್ ಸ್ಥಾನವನ್ನು ತಂಡದಲ್ಲಿ ಯಾರು ತುಂಬಬಹುದು ಎಂಬುದನ್ನು ನೋಡುವುದಾದರೆ..
ಮಂಗೇಶ್ ಯಾದವ್: ಯಶ್ ದಯಾಳ್ ಬದಲಿಗೆ ತಂಡದಲ್ಲಿ ಸ್ಥಾನ ಪಡೆಯಬಹುದಾದ ವೇಗಿಗಳಲ್ಲಿ ಮಂಗೇಶ್ ಯಾದವ್ ಅವರ ಹೆಸರು ಜಾಸ್ತಿ ಚಾಲ್ತಿಯಲ್ಲಿದೆ. ದಯಾಳ್ ಅವರಂತೆ ಮಂಗೇಶ್ ಯಾದವ್ ಕೂಡ ಎಡಗೈ ವೇಗದ ಬೌಲರ್ ಆಗಿರುವುದರಿಂದ ಆರ್ಸಿಬಿಗೆ ಇದಯ ಸೂಕ್ತ ಆಯ್ಕೆಯಾಗಬಹುದು. ಇದಕ್ಕೆ ಪೂರಕವಾಗಿ ತಂಡದ ಅಭ್ಯಾಸದ ವೇಳೆ ಮಂಗೇಶ್ ಯಾದವ್ ಅವರ ಬೌಲಿಂಗ್ ಆಡಳಿತ ಮಂಡಳಿಯ ಮೆಚ್ಚುಗೆಗೆ ಪಾತ್ರವಾಗಿರುವುದು. ಇವರ ಆಯ್ಕೆಯನ್ನು ಖಚಿತಪಡಿಸಿದೆ.
ರಸಿಕ್ ಸಲಾಂ: ಇನ್ನೊಂದು ಆಯ್ಕೆಯೆಂದರೆ ಅದು ಆಯ್ಕೆ ರಸಿಕ್ ಸಲಾಂ. ಬಲಗೈ ಮಧ್ಯಮ ವೇಗಿ ಮತ್ತು ನಿಧಾನಗತಿಯ ಎಸೆತಕ್ಕೆ ಹೆಸರುವಾಸಿಯಾಗಿರುವ ರಸಿಕ್ ಸಲಾಂ ಕಳೆದ ಆವೃತ್ತಿಯಲ್ಲಿ ಕೆಲವು ಪಂದ್ಯಗಳಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡಿದ್ದರು. ಟಿ20 ಕ್ರಿಕೆಟ್ನಲ್ಲಿ ಹೆಚ್ಚಿನ ಅನುಭವ ಹೊಂದಿರುವ ರಸಿಕ್ 42 ಪಂದ್ಯಗಳಲ್ಲಿ 50 ವಿಕೆಟ್ಗಳನ್ನು ಪಡೆದಿದ್ದಾರೆ. ವಿಶೇಷವಾಗಿ ಅವರು ಮಧ್ಯಮ ಮತ್ತು ಡೆತ್ ಓವರ್ಗಳಲ್ಲಿ ಪರಿಣಾಮಕಾರಿಯಾಗಿದ್ದಾರೆ.
ಅಭಿನಂದನ್ ಸಿಂಗ್: ಮೂರನೇ ಆಯ್ಕೆಯಾಗಿ ಅಭಿನಂದನ್ ಸಿಂಗ್ ಕೂಡ ಚರ್ಚೆಯಲ್ಲಿದ್ದಾರೆ. ಕಳೆದ ಆವೃತ್ತಿಯಲ್ಲಿಯೂ ಅವರು ಆರ್ಸಿಬಿ ತಂಡದಲ್ಲಿದ್ದರು. ಯುಪಿ ಟಿ20 ಲೀಗ್ನಲ್ಲಿ ಅವರ ಪ್ರದರ್ಶನ ಗಮನಾರ್ಹವಾಗಿದ್ದು ಆಡಿದ 11 ಪಂದ್ಯಗಳಲ್ಲಿ 15 ವಿಕೆಟ್ಗಳನ್ನು ಪಡೆದಿದ್ದಾರೆ.
ಯಶ್ ದಯಾಳ್ ಕಳೆದ ಆವೃತ್ತಿಯಲ್ಲಿ ಆರ್ಸಿಬಿ ಪರ ಪ್ರಮುಖ ಆಟಗಾರರಾಗಿದ್ದರು. ಅವರ ಅನುಪಸ್ಥಿತಿಯಲ್ಲಿ, ತಂಡವು ತನ್ನ ಬೌಲಿಂಗ್ ಸಂಯೋಜನೆಯಲ್ಲಿ ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ಈಗ ತಂಡದ ಆಡಳಿತವು ಅನುಭವಕ್ಕೆ ಆದ್ಯತೆ ನೀಡುತ್ತದೆಯೇ ಅಥವಾ ಯುವಕರಿಗೆ ಅವಕಾಶ ನೀಡುತ್ತದೆಯೇ ಎಂದು ನೋಡಲು ಆಸಕ್ತಿದಾಯಕವಾಗಿದೆ.
