2026 ರ ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರದರ್ಶನ ಅಷ್ಟೇನೂ ಹೇಳಿಕೊಳ್ಳುವಂತಿಲ್ಲ. ಇದುವರೆಗೆ ಆಡಿರುವ ಪಂದ್ಯಗಳಲ್ಲಿ ಸಿಎಸ್ಕೆ ಗೆದ್ದಿರುವುದಕ್ಕಿಂತ ಸೋತಿರುವುದೇ ಹೆಚ್ಚು. ತಂಡವು ಇಲ್ಲಿಯವರೆಗೆ ಆಡಿರುವ ಎಂಟು ಪಂದ್ಯಗಳಲ್ಲಿ ಐದು ಪಂದ್ಯಗಳನ್ನು ಸೋತಿದ್ದು, ಪ್ಲೇಆಫ್ ತಲುಪುವ ಸಾಧ್ಯತೆಗಳು ಮಸುಕಾಗುತ್ತಿವೆ. ಇದರ ನಡುವೆ ತಂಡದ ಆಟಗಾರರ ಗಾಯದ ಸಮಸ್ಯೆ ಸಿಎಸ್ಕೆ ನುಂಗಲಾರದ ತುತ್ತಾಗಿದೆ. ಕೆಲವು ಸ್ಟಾರ್ ಆಟಗಾರರು ಗಾಯದಿಂದಾಗಿ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಇನ್ನು ಕೆಲವು ಆಟಗಾರರು ಗಾಯದಿಂದ ಚೇತರಿಸಿಕೊಳ್ಳುವ ಹಂತದಲ್ಲಿದ್ದಾರೆ. ಇದರಲ್ಲಿ ಎಂಎಸ್ ಧೋನಿ ಕೂಡ ಒಬ್ಬರು. ಇದೆಲ್ಲ ಸಂಕಷ್ಟಗಳ ನಡುವೆ ಸಿಎಸ್ಕೆ ಬದಲಿ ಆಟಗಾರನಿಗಾಗಿ ಹುಡುಕಾಟ ಶುರು ಮಾಡಿದೆ.
ಸಂಕಷ್ಟದಲ್ಲಿ ಸಿಎಸ್ಕೆ ತಂಡ
ಮೇಲೆ ಹೇಳಿದಂತೆ ಸ್ಟಾರ್ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ಎಂಎಸ್ ಧೋನಿ ಗಾಯದ ಕಾರಣದಿಂದಾಗಿ ಒಂದೇ ಒಂದು ಪಂದ್ಯವನ್ನು ಆಡಿಲ್ಲ. ಡೆವಾಲ್ಡ್ ಬ್ರೆವಿಸ್ ಸೈಡ್ ಸ್ಟ್ರೈನ್ನಿಂದ ಚೇತರಿಸಿಕೊಂಡಿದ್ದಾರೆಯಾದರೂ, ನಾಥನ್ ಎಲಿಸ್ ಮಂಡಿರಜ್ಜು ಗಾಯದಿಂದ ಇಡೀ ಐಪಿಎಲ್ನಿಂದಲೇ ಹೊರಗುಳಿದಿದ್ದಾರೆ. ಸ್ಪೆನ್ಸರ್ ಜಾನ್ಸನ್ ಕೂಡ ಬೆನ್ನುನೋವಿನಿಂದ ಬಳಲುತ್ತಿದ್ದಾರೆ. ಏತನ್ಮಧ್ಯೆ, ಆಯುಷ್ ಮ್ಹಾತ್ರೆ ಮತ್ತು ಖಲೀಲ್ ಅಹ್ಮದ್ ಕೂಡ ಗಾಯದಿಂದಾಗಿ ಇಡೀ ಸೀಸನ್ನಿಂದ ಹೊರಬಿದ್ದಿದ್ದಾರೆ. ಹೀಗಾಗಿ ಆಯುಷ್ ಮ್ಹಾತ್ರೆ ಬದಲಿಗೆ ಆಕಾಶ್ ಮಧ್ವಾಲ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ. ಇದೀಗ ಖಲೀಲ್ ಅಹ್ಮದ್ ಬದಲಿಗೆ ಬೇರೊಬ್ಬ ಆಟಗಾರನ ಹುಡುಕಾಟ ಶುರುವಾಗಿದೆ.
ಹೊಸ ಆಟಗಾರನ ಹುಡುಕಾಟ ಆರಂಭ
ಖಲೀಲ್ ಅಹ್ಮದ್ ಬದಲಿಗೆ ಸಿಎಸ್ಕೆ ಫ್ರಾಂಚೈಸಿ, 21 ವರ್ಷದ ಮುಂಬೈ ಆಲ್ರೌಂಡರ್ ಆಯುಷ್ ವರ್ತಕ್ ಅವರನ್ನು ಐಪಿಎಲ್ ಮಧ್ಯದಲ್ಲಿ ಟ್ರಯಲ್ಗೆ ಆಹ್ವಾನಿಸಿದೆ. ವರದಿಗಳ ಪ್ರಕಾರ, ವರ್ತಕ್ ಶೀಘ್ರದಲ್ಲೇ ಚೆನ್ನೈಗೆ ಆಗಮಿಸಲಿದ್ದು, ಟ್ರಯಲ್ನಲ್ಲಿ ಭಾಗವಹಿಸಲಿದ್ದಾರೆ. ಆಡಳಿತ ಮಂಡಳಿ ಹಾಗೂ ಕೋಚಿಂಗ್ ವಿಭಾಗಕ್ಕೆ ಆಯುಷ್ ವರ್ತಕ್ ಅವರ ಆಟ ಇಷ್ಟವಾದರೆ ಅವರನ್ನು ಕೂಡಲೇ ತಂಡಕ್ಕೆ ಸೇರಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಿವೆ.
ಆಯುಷ್ ವರ್ತಕ್ ಯಾರು?
ವಾಸ್ತವವಾಗಿ ಆಯುಷ್ ವರ್ತಕ್ ದೇಶಿ ಪಂದ್ಯಾವಳಿಯಲ್ಲಿ ಮುಂಬೈ ಮತ್ತು ಪಾರ್ಸಿ ಜಿಮ್ಖಾನಾ ಪರ ಆಡುತ್ತಾರೆ. ಬಲಗೈ ಮಧ್ಯಮ ವೇಗದ ಬೌಲರ್ ಆಗಿರುವ ಆಯುಷ್ ವರ್ತಕ್ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಆಯುಷ್ ವರ್ತಕ್ ದೊಡ್ಡ ಹೊಡೆತಗಳನ್ನು ಹೊಡೆಯುವುದಕ್ಕೆ ಹೆಸರು ವಾಸಿಯಾಗಿದ್ದಾರೆ. ನವಿ ಮುಂಬೈ ಟಿ20 ಲೀಗ್ನಲ್ಲಿ ವರ್ತಕ್ ಅದ್ಭುತ ಪ್ರದರ್ಶನ ನೀಡಿದ್ದು, 191 ಸ್ಟ್ರೈಕ್ ರೇಟ್ನಲ್ಲಿ 264 ರನ್ ಗಳಿಸಿ ಮೂರು ವಿಕೆಟ್ಗಳನ್ನು ಪಡೆದಿದ್ದಾರೆ. ಅವರು ನಾರ್ತ್ ಮುಂಬೈ ಪ್ಯಾಂಥರ್ಸ್ ಮತ್ತು ಮುಂಬೈ ಅಂಡರ್-19 ತಂಡಕ್ಕೂ ಆಡಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
