IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ವಿವಾದಗಳಿಂದಲೇ ಮತ್ತೆ ಸುದ್ದಿಯಲ್ಲಿದೆ. ಈ ಬಾರಿ ವಿವಾದ ಸೃಷ್ಟಿಯಾಗಿರುವುದು ಅಂಪೈರ್ ತೀರ್ಪಿನಿಂದ. ಅದು ಕೂಡ ಡೆಡ್ ಬಾಲ್ ಘೋಷಿಸದೇ ಔಟ್ ನೀಡಿರುವುದರಿಂದ. ಮೇ 24, 2026 ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ 69ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಿದ್ದವು.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ಪರ 8ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಎಡಗೈ ದಾಂಡಿಗ ಶುಭಂ ದುಬೆ (5) ಶಾರ್ದೂಲ್ ಠಾಕೂರ್ ಎಸೆತದಲ್ಲಿ ಕ್ಯಾಚ್ ನೀಡಿ ಔಟಾಗಿದ್ದರು. ಆದರೆ ಅದು ನಾಟೌಟ್ ಆಗಬೇಕಿತ್ತು. ಏಕೆಂದರೆ ಚೆಂಡೆಸೆಯುವ ವೇಳೆ ಶಾರ್ದೂಲ್ ಠಾಕೂರ್ ಅವರ ಟವೆಲ್ ಕೆಳಗೆ ಬಿದ್ದಿತ್ತು. ಇದನ್ನು ಗಮನಿಸದೇ ಅಂಪೈರ್ ಔಟ್ ಎಂದು ತೀರ್ಪು ನೀಡಿದ್ದರು.
- ಬೌಲಿಂಗ್ ವೇಳೆ ಬಿದ್ದ ಟವೆಲ್: ರಾಜಸ್ಥಾನ್ ರಾಯಲ್ಸ್ ಇನ್ನಿಂಗ್ಸ್ನ 18ನೇ ಓವರ್ನಲ್ಲಿ ಶಾರ್ದೂಲ್ ಠಾಕೂರ್ ಅವರು ಸ್ಲೋವರ್ ಎಸೆತವನ್ನು ಎಸೆಯಲು ಮುಂದಾದರು. ಈ ವೇಳೆ ಅವರ ಸೊಂಟದಲ್ಲಿದ್ದ ಬಿಳಿ ಟವೆಲ್ ಕಳಚಿ ಪಿಚ್ ಮೇಲೆ ಬಿದ್ದಿತು.
- ಶುಭಂ ದುಬೆ ವಿಕೆಟ್ ಪತನ: ಬೌಲರ್ ಕೈಯಿಂದ ಚೆಂಡು ಹೊರಬೀಳುವ ಮೊದಲೇ ಈ ಘಟನೆ ನಡೆದಿದ್ದರಿಂದ ಅದು ಡೆಡ್ ಬಾಲ್ ಆಗಬೇಕಿತ್ತು. ಇತ್ತ ಚೆಂಡನ್ನು ಎದುರಿಸಿದ ಶುಭಂ ದುಬೆ ಡೀಪ್ ಮಿಡ್ ವಿಕೆಟ್ನಲ್ಲಿದ್ದ ನಮನ್ಧೀರ್ಗೆ ಕ್ಯಾಚ್ ನೀಡಿದರು.
- ಡೆಡ್ ಬಾಲ್ ನಿಯಮದ ಅಪೀಲ್: ಬೌಲಿಂಗ್ ಮಾಡುವಾಗ ಬೌಲರ್ನ ಯಾವುದೇ ವಸ್ತ್ರ ಅಥವಾ ವಸ್ತು ಕೆಳಗೆ ಬಿದ್ದರೆ ಅದು ಬ್ಯಾಟರ್ನ ಗಮನವನ್ನು ಬೇರೆಡೆಗೆ ಸೆಳೆಯುತ್ತದೆ. ಕ್ರಿಕೆಟ್ ನಿಯಮಗಳ ಪ್ರಕಾರ, ಇಂತಹ ಸಂದರ್ಭಗಳಲ್ಲಿ ಅಂಪೈರ್ “ಡೆಡ್ ಬಾಲ್” ಎಂದು ಘೋಷಿಸಬೇಕು.
- ಅಂಪೈರ್ ಮೌನ: ಅತ್ತ ಶಾರ್ದೂಲ್ ಠಾಕೂರ್ ತಮ್ಮ ಟವೆಲ್ ಅನ್ನು ಎಕ್ಕುತ್ತಿರುವುದು ಕಂಡು ಬಂದರೂ ಫೀಲ್ಡ್ ಅಂಪೈರ್ಗಳು ರಿಪ್ಲೇ ಪರಿಶೀಲಿಸಲು ಮುಂದಾಗಲಿಲ್ಲ.
ಕುಮಾರ್ ಸಂಗಕ್ಕಾರ ಆಕ್ರೋಶ:
ಈ ಔಟ್ ತೀರ್ಪನ್ನು ಕಂಡ ತಕ್ಷಣ ರಾಜಸ್ಥಾನ್ ರಾಯಲ್ಸ್ ಮುಖ್ಯ ಕೋಚ್ ಕುಮಾರ್ ಸಂಗಕ್ಕಾರ ತೀವ್ರ ಅಸಮಾಧಾನಗೊಂಡರು. ಅವರು ತಕ್ಷಣವೇ ಬೌಂಡರಿ ಲೈನ್ ಬಳಿ ಇದ್ದ ನಾಲ್ಕನೇ ಅಂಪೈರ್ ಬಳಿ ತೆರಳಿ ತೀವ್ರವಾಗಿ ವಾದಿಸಿದರು. ಬೌಲರ್ನ ಟವೆಲ್ ಬಿದ್ದಿರುವುದರಿಂದ ಬ್ಯಾಟರ್ಗೆ ತೊಂದರೆಯಾಗಿದೆ, ಇದು ನಿಯಮಬಾಹಿರ ಎಂದು ವಾದಿಸಿದರು.
ಇದನ್ನೂ ಓದಿ: RCB ಅಲ್ಲ, ಬಲಿಷ್ಠ ತಂಡವನ್ನು ಹೆಸರಿಸಿದ ಅಕ್ಷರ್ ಪಟೇಲ್
ಇದಾಗ್ಯೂ ಫೀಲ್ಡ್ ಅಂಪೈರ್ಗಳು ತೀರ್ಪನ್ನು ಬದಲಿಸಲು ಮುಂದಾಗಲೇ ಇಲ್ಲ. ಇದೀಗ ಈ ಈ ವಿವಾದಾತ್ಮಕ ತೀರ್ಪಿನ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗಳು ಮುಂದುವರೆದಿದೆ.