2026 ರ ಐಪಿಎಲ್ ಅನ್ನು ಅಬ್ಬರದಿಂದ ಆರಂಭಿಸಿದ್ದ ಆರ್ಸಿಬಿ ಮೊದಲಾರ್ಧ ಮುಗಿದ ಬಳಿಕ ಅದ್ಯಾಕೋ ಅಳಿತಪ್ಪಿದಂತೆ ಕಾಣುತ್ತಿದ. ಪ್ರಸ್ತುತ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಆರ್ಸಿಬಿ ಇದೀಗ ಆ ಸ್ಥಾನವನ್ನು ಕಳೆದುಕೊಳ್ಳುವ ಆತಂಕದಲ್ಲಿದೆ. ಇದಕ್ಕೆ ಕಾರಣ ತಂಡದಲ್ಲಿ ಕೆಲವರ ಪ್ರದರ್ಶನ. ನಿರ್ಣಾಯಕ ಹಂತದಲ್ಲಿ ಕೆಲವರಿಂದ ನಿರೀಕ್ಷಿತ ಪ್ರದರ್ಶನ ಬರದಿರುವುದು ತಂಡವನ್ನು ಸಂಕಷ್ಟಕ್ಕೆ ದೂಡಿದೆ. ಅದರಲ್ಲೂ ಬ್ಯಾಟಿಂಗ್ ವಿಭಾಗದಲ್ಲಿ ಆರ್ಸಿಬಿ ಯಾರ ಮೇಲೆ ಹೆಚ್ಚಿನ ಭರವಸೆ ಇಟ್ಟಿತ್ತೋ, ಆ ಆಟಗಾರರೇ ಆರ್ಸಿಬಿ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದಾರೆ. ಅಂತಹ ಆಟಗಾರರಲ್ಲಿ ಆರ್ಸಿಬಿಯ ಪ್ರಸ್ತುತ ಆರಂಭಿಕ ಆಟಗಾರ ಜೆಕೋಬ್ ಬೆಥೆಲ್ ಹಾಗೂ ತಂಡದ ಉಪನಾಯಕ ಜಿತೇಶ್ ಶರ್ಮಾ.
ವಾಸ್ತವವಾಗಿ ಲಕ್ನೋ ಸೂಪರ್ಜೈಂಟ್ಸ್ ನೀಡಿದ್ದ 213 ರನ್ಗಳ ಬೃಹತ್ ಗುರಿ ಬೆನ್ನಟ್ಟಿದ ಆರ್ಸಿಬಿ 9 ರನ್ಗಳಿಂದ ಸೋತಿತು. ಇದು ಆರ್ಸಿಬಿಗೆ ನಾಲ್ಕನೇ ಸೋಲಾದರೆ ಸತತ ಎರಡನೇ ಸೋಲಾಗಿತ್ತು. ಈ ಆವೃತ್ತಿಯಲ್ಲಿ ಆರ್ಸಿಬಿ ತಂಡವು ಗುರಿ ಬೆನ್ನಟ್ಟುವಾಗ ಸೋತ ಮೊದಲ ಪಂದ್ಯ ಇದಾಗಿದೆ. ಇದಕ್ಕೆ ಕಾರಣ ತಂಡದ ಟಾಪ್ ಆರ್ಡರ್ ಕೈಕೊಟ್ಟಿದ್ದು. ಈ ಪಂದ್ಯದಲ್ಲಿ ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಶೂನ್ಯಕ್ಕೆ ಔಟಾದರೆ, ಆರಂಭಿಕ ಜೆಕೋಬ್ ಬೆಥೆಲ್ ಮತ್ತೊಮ್ಮೆ ಉತ್ತಮ ಪ್ರದರ್ಶನ ನೀಡುವಲ್ಲಿ ಎಡವಿದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಬಂದ ಜಿತೇಶ್ ಶರ್ಮಾ ಎಂದಿನಂತೆ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು. ಇವರಿಬ್ಬರ ಈ ಕಳಪೆ ಪ್ರದರ್ಶನ ತಂಡಕ್ಕೆ ಹೊರಯಾಯಿತು.
ಸಾಲ್ಟ್ ಸ್ಥಾನ ತುಂಬಲು ಬೆಥೆಲ್ ವಿಫಲ
ಮೇಲೆ ಹೇಳಿದಂತೆ ಈ ಆವೃತ್ತಿಯಲ್ಲಿ ಬೆಥೆಲ್ ಹಾಗೂ ಜಿತೇಶ್ ಇಲ್ಲಿಯವರೆಗೆ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಮೊದಲು ಬೆಥೆಲ್ ಬಗ್ಗೆ ನೋಡುವುದಾದರೆ.. ಕಳೆದ ಆವೃತ್ತಿಯಿಂದ ಆರ್ಸಿಬಿ ತಂಡದಲ್ಲಿರುವ ಬೆಥೆಲ್ಗೆ, ಫಿಲ್ ಸಾಲ್ಟ್, ಟಿಮ್ ಡೇವಿಡ್ ಮತ್ತು ರೊಮಾರಿಯೊ ಶೆಫರ್ಡ್ರಂತಹ ವಿದೇಶಿ ಆಟಗಾರರ ಉಪಸ್ಥಿತಿಯಿಂದಾಗಿ ಹೆಚ್ಚಿನ ಅವಕಾಶಗಳು ಸಿಗಲಿಲ್ಲ. ಈಗ, ಸಾಲ್ಟ್ ಗಾಯಗೊಂಡಿರುವುದರಿಂದ, ಬೆಥೆಲ್ಗೆ ಅವಕಾಶಗಳ ಮೇಲೆ ಅವಕಾಶ ಸಿಗುತ್ತಿದೆ. ಆದರೆ ಭೆಥೆಲ್ ಮಾತ್ರ ಪ್ರಭಾವ ಬೀರಲು ವಿಫಲವಾಗಿದೆ. ಆಡಿರುವ ನಾಲ್ಕು ಪಂದ್ಯಗಳಲ್ಲಿ ಕೇವಲ 43 ರನ್ಗಳನ್ನು ಗಳಿಸಿದ್ದಾರೆ, ಕೇವಲ 10.75 ಸರಾಸರಿಯೊಂದಿಗೆ.
ಜಿತೇಶ್ ಆಟ ಸಪ್ಪೆ
ಮತ್ತೊಂದೆಡೆ, ಜಿತೇಶ್ ಶರ್ಮಾ ಒಬ್ಬ ಅದ್ಭುತ ವಿಕೆಟ್ ಕೀಪರ್ ಎಂದು ಸಾಬೀತಾಗಿದ್ದರೂ, ಈ ಆವೃತ್ತಿಯಲ್ಲಿ ಬ್ಯಾಟಿಂಗ್ನಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಕಳೆದ ಆವೃತ್ತಿಯಲ್ಲಿ ಕೆಲವು ಪ್ರಬಲ ಇನ್ನಿಂಗ್ಸ್ಗಳನ್ನು ಆಡುವ ಮೂಲಕ ಜಿತೇಶ್ ಆರ್ಸಿಬಿಯ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಆದಾಗ್ಯೂ, ಈ ಸೀಸನ್ನಲ್ಲಿ, ಜಿತೇಶ್ ಅವರ ಬ್ಯಾಟಿಂಗ್ ದುರಂತವಾಗಿದೆ. ಆಡಿರುವ ಎಂಟು ಇನ್ನಿಂಗ್ಸ್ಗಳಲ್ಲಿ 8.00 ಸರಾಸರಿಯಲ್ಲಿ ಕೇವಲ 64 ರನ್ಗಳಿಸಿದ್ದಾರೆ. ಈ ಐಪಿಎಲ್ನಲ್ಲಿ ಆಡುವ ಎಲ್ಲಾ ವಿಕೆಟ್ ಕೀಪರ್-ಬ್ಯಾಟ್ಸ್ಮನ್ಗಳಲ್ಲಿ ಇದು ಅತ್ಯಂತ ಕೆಟ್ಟ ಸರಾಸರಿಯಾಗಿದೆ. ಈ ಇಬ್ಬರೂ ಬ್ಯಾಟ್ಸ್ಮನ್ಗಳು ಆರ್ಸಿಬಿಗೆ ಗಮನಾರ್ಹ ಕೊಡುಗೆ ನೀಡುವಲ್ಲಿ ವಿಫಲರಾಗಿದ್ದು ತಂಡವನ್ನು ಸೋಲಿನ ದವಡೆಗೆ ತಳ್ಳಿದೆ. ಇವರಿಬ್ಬರು ಫಾರ್ಮ್ ಕಂಡುಕೊಳ್ಳದಿದ್ದರೆ, ಸತತ 2ನೇ ಬಾರಿಗೆ ಟ್ರೋಫಿ ಗೆಲ್ಲಬೇಕೆನ್ನುವ ಆರ್ಸಿಬಿ ಕನಸು ಕನಸಾಗೇ ಉಳಿಯಲಿದೆ.
Published On – 4:58 pm, Fri, 8 May 26
