ಐಪಿಎಲ್ 2026ರ ಸೀಸನ್ನಲ್ಲಿ ಅದ್ಭುತ ಲಯದಲ್ಲಿದ್ದ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಯುವ ದಾಂಡಿಗ ಆಯುಷ್ ಮ್ಹಾತ್ರೆ ಸ್ನಾಯು ಸೆಳೆತದ (Hamstring Tear) ಸಮಸ್ಯೆಗೀಡಾಗಿದ್ದಾರೆ. ಈ ವಿಷಯವನ್ನು ತಂಡದ ಬ್ಯಾಟಿಂಗ್ ಕೋಚ್ ಮೈಕಲ್ ಹಸ್ಸಿ ಖಚಿತಪಡಿಸಿದ್ದು, ಇದು ತಂಡಕ್ಕೆ ತುಂಬಲಾರದ ನಷ್ಟ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಏಪ್ರಿಲ್ 18ರಂದು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದ ಐದನೇ ಓವರ್ನಲ್ಲಿ ಎರಡನೇ ರನ್ ಓಡಲು ಪ್ರಯತ್ನಿಸಿದ ಮ್ಹಾತ್ರೆ ಎಡಗಾಲಿನ ಸ್ನಾಯು ಸೆಳೆತಕ್ಕೆ ಒಳಗಾದರು. ನೋವಿನ ನಡುವೆಯೂ ಬ್ಯಾಟಿಂಗ್ ಮುಂದುವರಿಸಿದ ಅವರು 13 ಎಸೆತಗಳಲ್ಲಿ 30 ರನ್ ಗಳಿಸಿ ಔಟಾದರು. ಪಂದ್ಯದ ನಂತರ ಅವರು ನಡೆಯಲು ಕಷ್ಟಪಡುತ್ತಿದ್ದುದರಿಂದ ಸಿಬ್ಬಂದಿಯ ನೆರವಿನೊಂದಿಗೆ ಮೈದಾನದಿಂದ ಹೊರನಡೆದರು.
ಗಾಯದ ತೀವ್ರತೆ ಎಷ್ಟು?
ಆಯುಷ್ ಮ್ಹಾತ್ರೆ ಅವರ ಗಾಯ ನೋಡಲು ಗಂಭೀರವಾಗಿ ಕಂಡುಬರುತ್ತಿದೆ. ತಂಡದ ವೈದ್ಯಕೀಯ ತಂಡವು ಸ್ಕ್ಯಾನಿಂಗ್ ವರದಿಗಾಗಿ ಕಾಯುತ್ತಿದೆ. ಆದರೆ ಪ್ರಾಥಮಿಕ ವರದಿಯ ಪ್ರಕಾರ ಇದು ಹ್ಯಾಮ್ಸ್ಟ್ರಿಂಗ್ ಟಿಯರ್ ಆಗಿದ್ದು, ಚೇತರಿಸಿಕೊಳ್ಳಲು ಸಮಯ ಬೇಕಾಗಬಹುದು ಎಂದು ಮೈಕಲ್ ಹಸ್ಸಿ ತಿಳಿಸಿದ್ದಾರೆ.
ಸಿಎಸ್ಕೆಗೆ ಹಿನ್ನಡೆ:
ಆಯುಷ್ ಮ್ಹಾತ್ರೆ ಅಲಭ್ಯರಾದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಹಿನ್ನಡೆಯಾಗುವುದರಲ್ಲಿ ಅನುಮಾನವೇ ಇಲ್ಲ. ಏಕೆಂದರೆ ಈ ಬಾರಿಯ ಟೂರ್ನಿಯಲ್ಲಿ ಸಿಎಸ್ಕೆ ಪರ ಸ್ಥಿರ ಪ್ರದರ್ಶನ ನೀಡಿದ್ದು ಆಯುಷ್ ಮಾತ್ರ. ಆಡಿದ 6 ಪಂದ್ಯಗಳಲ್ಲಿ 177ರ ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿರುವ ಮ್ಹಾತ್ರೆ ಒಟ್ಟು 201 ರನ್ ಕಲೆಹಾಕಿದ್ದಾರೆ. ಇದರ ನಡುವೆ 2 ಅರ್ಧಶತಕಗಳನ್ನು ಕೂಡ ಬಾರಿಸಿದ್ದಾರೆ. ಒಂದು ವೇಳೆ ಆಯುಷ್ ಮ್ಹಾತ್ರೆ ಅಲಭ್ಯರಾದರೆ ತಂಡದ ಬ್ಯಾಟಿಂಗ್ ಬಲವನ್ನು ಕುಗ್ಗಿಸಲಿದೆ.
ಗಾಯದ ಸಮಸ್ಯೆಯಲ್ಲಿ ಸಿಎಸ್ಕೆ:
ಈಗಾಗಲೇ ಖಲೀಲ್ ಅಹ್ಮದ್, ನಾಥನ್ ಎಲ್ಲಿಸ್ ಮತ್ತು ಸ್ಪೆನ್ಸರ್ ಜಾನ್ಸನ್ ಅವರಂತಹ ಪ್ರಮುಖ ಆಟಗಾರರು ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದಾರೆ. ಮತ್ತೊಂದೆಡೆ ಮಹೇಂದ್ರ ಸಿಂಗ್ ಧೋನಿ ಕೂಡ ಫಿಟ್ನೆಸ್ ಸಮಸ್ಯೆಗೀಡಾಗಿದ್ದಾರೆ.
ಇದನ್ನೂ ಓದಿ: ಸೂರ್ಯನಿಗೆ ಗೇಟ್ ಪಾಸ್ ಖಚಿತ: ಇವರಂತೆ ಟೀಮ್ ಇಂಡಿಯಾದ ಮುಂದಿನ ನಾಯಕ..!
ಇದೀಗ ಆಯುಷ್ ಮ್ಹಾಮ್ಹಾತ್ರೆ ಅವರ ಗಾಯವು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮ್ಯಾನೇಜ್ಮೆಂಟ್ಗೆ ಮತ್ತೊಂದು ತಲೆನೋವಾಗಿ ಪರಿಣಮಿಸಿದೆ. ಸದ್ಯ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿರುವ ಸಿಎಸ್ಕೆ, ಏಪ್ರಿಲ್ 23ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಹೈವೋಲ್ಟೇಜ್ ಪಂದ್ಯವನ್ನು ಎದುರಿಸಲಿದೆ.
