ಬೆಂಗಳೂರು, ಆಗಸ್ಟ್ 08: ವಿಜಯಪುರ ಜಿಲ್ಲೆಯಲ್ಲಿ ಭೀಕರ ಬರಗಾಲ ಆವರಿಸಿದ್ದು, ಜನ-ಜಾನುವಾರುಗಳು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲೂ ಆಲಮಟ್ಟಿ ಅಣೆಕಟ್ಟು (dam water level) ಸಂಪೂರ್ಣ ಭರ್ತಿಯಾಗುವ ಹಂತಕ್ಕೆ ತಲುಪಿದೆ. ಬರ ಪರಿಹಾರವಾಗಿ ಜಿಲ್ಲೆಯ 165 ಕೆರೆಗಳನ್ನು ತುಂಬಿಸಲು ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ (KBJNL) ಅಧಿಕಾರಿಗಳು ಕಾಲುವೆಗಳ ಮೂಲಕ ನೀರು ಬಿಡುಗಡೆ ಮಾಡಿದ್ದಾರೆ. ಆದರೆ, ಇಂಗಳಗಿ, ಅಂಕಲಗಿ ಸೇರಿದಂತೆ ವಿವಿಧ ಗ್ರಾಮಗಳ ಸಾರ್ವಜನಿಕ ಕೆರೆಗಳಿಗೆ ತಲುಪಬೇಕಿದ್ದ ನೀರು ಪ್ರಭಾವಿಗಳ ಪಾಲಾಗುತ್ತಿರುವುದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
ಉಪ ಕಾಲುವೆ ಒಡೆದು ಅಕ್ರಮ ನೀರು ಕಳ್ಳತನ!
ದೇವರಹಿಪ್ಪರಗಿ ಭಾಗದಲ್ಲಿ ಮುಳವಾಡ ಏತ ನೀರಾವರಿ ಯೋಜನೆಯ ಉಪ ಕಾಲುವೆಯನ್ನು ಕೆಲವು ದುಷ್ಕರ್ಮಿಗಳು ಕಾನೂನು ಬಾಹಿರವಾಗಿ ಒಡೆದಿದ್ದಾರೆ. ಕೃಷಿ ಮತ್ತು ಸಾರ್ವಜನಿಕ ಕೆರೆಗಳಿಗೆ ಹೋಗಬೇಕಿದ್ದ ಈ ನೀರನ್ನು ಪ್ರಭಾವಿ ವ್ಯಕ್ತಿಗಳು ಹಾಗೂ ಜಲ್ಲಿ ಕಲ್ಲು ಕ್ರಷರ್ ಘಟಕಗಳ ಮಾಲೀಕರು ಅಕ್ರಮವಾಗಿ ಜಪ್ತಿ ಮಾಡುತ್ತಿದ್ದಾರೆ. ಕಾಲುವೆಯ ನೀರನ್ನು ಬೃಹದಾಕಾರದ ಕಲ್ಲಿನ ಕ್ವಾರಿಗಳಿಗೆ (ಗಣಿ ಹೊಂಡ) ಹರಿಸುವ ಮೂಲಕ ಲಕ್ಷಾಂತರ ಲೀಟರ್ ನೀರನ್ನು ಕಳ್ಳತನ ಮಾಡಲಾಗುತ್ತಿದೆ.
ಕಾಲುವೆ ಒಡೆದು ಬಹಿರಂಗವಾಗಿ ನೀರು ಲೂಟಿಯಾಗುತ್ತಿದ್ದರೂ ಕೆಬಿಜೆಎನ್ಎಲ್ ಅಧಿಕಾರಿಗಳು ತಲೆಕೆಡಿಸಿಕೊಳ್ಳದೆ ಮೂಕಪ್ರೇಕ್ಷಕರಾಗಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ. ಪ್ರತಿಭಟನೆ ಹಾಗೂ ಜನರ ಒತ್ತಾಯ ಹೆಚ್ಚಾದ ಬೆನ್ನಲ್ಲೇ, ನೀರು ಕಳ್ಳತನದ ಕುರಿತು ಮೇಲಾಧಿಕಾರಿಗಳಿಗೆ ವರದಿ ನೀಡುವುದಾಗಿ ಸ್ಥಳೀಯ ಅಧಿಕಾರಿಗಳು ಹಾರಿಕೆ ಉತ್ತರ ನೀಡಿದ್ದಾರೆ. ಈ ಅಕ್ರಮದ ವಿರುದ್ಧ ಜಿಲ್ಲಾಡಳಿತ ತಕ್ಷಣ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಕರ್ನಾಟಕದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ
1. ಆಲಮಟ್ಟಿ ಜಲಾಶಯ (ವಿಜಯಪುರ ಜಿಲ್ಲೆ, ನಿಡಗುಂದಿ ತಾಲೂಕು)
- ಗರಿಷ್ಠ ಮಟ್ಟ: 519.60 ಮೀಟರ್
- ಇಂದಿನ ಮಟ್ಟ: 518.84 ಮೀಟರ್
- ಒಳಹರಿವು: 1,15,874 ಕ್ಯೂಸೆಕ್
- ಹೊರಹರಿವು: 70,655 ಕ್ಯೂಸೆಕ್
2. ಬಸವಸಾಗರ ಜಲಾಶಯ (ಯಾದಗಿರಿ)
- ಗರಿಷ್ಠ ಮಟ್ಟ: 492.25 ಮೀಟರ್
- ಇಂದಿನ ಮಟ್ಟ: 491.70 ಮೀಟರ್
- ಒಳಹರಿವು: 76,000 ಕ್ಯೂಸೆಕ್
- ಹೊರಹರಿವು: 50,000 ಕ್ಯೂಸೆಕ್
3. ಕೆ.ಆರ್.ಎಸ್ ಜಲಾಶಯ (ಮಂಡ್ಯ ಜಿಲ್ಲೆ)
- ಗರಿಷ್ಠ ಮಟ್ಟ: 124.80 ಅಡಿ
- ಇಂದಿನ ಮಟ್ಟ: 106.92 ಅಡಿ
- ಗರಿಷ್ಠ ಸಾಮರ್ಥ್ಯ: 49.452 TMC
- ಇಂದಿನ ಸಂಗ್ರಹ: 28.736 TMC
- ಒಳಹರಿವು: 8,064 ಕ್ಯೂಸೆಕ್
- ಹೊರಹರಿವು: 2,049 ಕ್ಯೂಸೆಕ್
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
