ಬೆಂಗಳೂರು, ಜು.9 : ರಾಜ್ಯದ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಮುಂಗಾರು ಮಳೆಯ ಅಬ್ಬರ ಮುಂದುವರಿದಿದ್ದು, ಪ್ರಮುಖ ಜಲಾಶಯಗಳಿಗೆ ನೀರಿನ ಒಳಹರಿವು ಗಣನೀಯವಾಗಿ ಹೆಚ್ಚಾಗಿದೆ. ಒಂದೆಡೆ ಶಿವಮೊಗ್ಗದ ಗಾಜನೂರು ಡ್ಯಾಂ ಭರ್ತಿಯಾಗಿದ್ದರೆ, ಮತ್ತೊಂದೆಡೆ ಬೆಳಗಾವಿ ಜಿಲ್ಲೆಯಲ್ಲಿ ದೂದಗಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ನೂರಾರು ಎಕರೆ ಬೆಳೆ ಹಾನಿಯಾಗಿದೆ. ಇಂದು ಅಂದರೆ ಜುಲೆ 9ರಂದು ಯಾವೆಲ್ಲ ನದಿಗಳ ನೀರಿನ ಒಳಹರಿವು ಎಷ್ಟಿದೆ ಎಂಬುದನ್ನು ಇಲ್ಲಿ ಹೇಳಲಾಗಿದೆ.
1.ಆಲಮಟ್ಟಿ ಜಲಾಶಯ (ವಿಜಯಪುರ)
ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಕೃಷ್ಣಾ ನದಿಗೆ ನಿರ್ಮಿಸಲಾದ ಲಾಲ್ ಬಹಾದ್ದೂರ್ ಶಾಸ್ತ್ರೀ ಸಾಗರಕ್ಕೆ (ಆಲಮಟ್ಟಿ ಡ್ಯಾಂ) ಭಾರಿ ಪ್ರಮಾಣದ ನೀರು ಹರಿದುಬರುತ್ತಿದೆ.
ಗರಿಷ್ಠ ಮಟ್ಟ: 519.60 ಮೀಟರ್
ಇಂದಿನ ನೀರಿನ ಮಟ್ಟ: 512.59 ಮೀಟರ್
ಒಳಹರಿವು: 1,31,940 ಕ್ಯೂಸೆಕ್
ಹೊರಹರಿವು: 483 ಕ್ಯೂಸೆಕ್
2. ಹೇಮಾವತಿ ಜಲಾಶಯ (ಗೊರೂರು, ಹಾಸನ)
ಗರಿಷ್ಠ ಮಟ್ಟ: 2922 ಅಡಿ (37 TMC)
ಇಂದಿನ ನೀರಿನ ಮಟ್ಟ: 2900.63 ಅಡಿ (20.102 TMC)
ಒಳಹರಿವು: 15,647 ಕ್ಯೂಸೆಕ್
ಹೊರಹರಿವು: 300 ಕ್ಯೂಸೆಕ್
(
ಕಳೆದ ವರ್ಷ ಇದೇ ದಿನ 2919.82 ಅಡಿ ಅಂದರೆ 35.003 TMC ನೀರಿತ್ತು).
3. ಲಿಂಗನಮಕ್ಕಿ ಜಲಾಶಯ (ಸಾಗರ, ಶಿವಮೊಗ್ಗ)
ಗರಿಷ್ಠ ಮಟ್ಟ: 1819 ಅಡಿ (151.64 TMC)
ಇಂದಿನ ನೀರಿನ ಮಟ್ಟ: 1760.85 ಅಡಿ (28.58 TMC)
ಒಳಹರಿವು: 36,867 ಕ್ಯೂಸೆಕ್
ಹೊರಹರಿವು: ಸದ್ಯಕ್ಕೆ ಯಾವುದೇ ಹೊರಹರಿವು ಇಲ್ಲ.
4. ಭದ್ರಾ ಜಲಾಶಯ (ಭದ್ರಾವತಿ, ಶಿವಮೊಗ್ಗ)
ಗರಿಷ್ಠ ಮಟ್ಟ: 186 ಅಡಿ (71.535 TMC)
ಇಂದಿನ ನೀರಿನ ಮಟ್ಟ: 144.7 ಅಡಿ (30.142 TMC)
ಒಳಹರಿವು: 16,304 ಕ್ಯೂಸೆಕ್
ಹೊರಹರಿವು: 216 ಕ್ಯೂಸೆಕ್
ಇದನ್ನೂ ಒದಿ: ಯಾದಗಿರಿ: ಮಳೆ ಬಂದರೆ ಕುರಿಗಳಂತೆ ಒಂದೇ ರೂಮಲ್ಲಿ 5 ತರಗತಿಯ ವಿದ್ಯಾರ್ಥಿಗಳು; ಶಿಕ್ಷಣ ಇಲಾಖೆಯ ವಿರುದ್ಧ ಪೋಷಕರ ಆಕ್ರೋಶ
ಗಾಜನೂರಿನ ತುಂಗಾ ಡ್ಯಾಂ ಭರ್ತಿ
ಮಲೆನಾಡಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಶಿವಮೊಗ್ಗ ತಾಲೂಕಿನ ಗಾಜನೂರಿನ ತುಂಗಾ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ನಿನ್ನೆಗೆ ಹೋಲಿಸಿದರೆ ಇಂದು ಮಳೆಯ ಪ್ರಮಾಣ ಕೊಂಚ ಕಡಿಮೆಯಾಗಿದ್ದರೂ, ನದಿಗೆ ಅಪಾರ ಪ್ರಮಾಣದ ನೀರು ಹರಿಸಲಾಗುತ್ತಿದೆ. ಡ್ಯಾಂನ 22 ಗೇಟ್ಗಳ ಮೂಲಕ ಸದ್ಯ 30,000 ಕ್ಯೂಸೆಕ್ಸ್ ನೀರನ್ನು ತುಂಗಾ ನದಿಗೆ ಬಿಡಲಾಗುತ್ತಿದ್ದು, ನದಿ ತುಂಬಿ ಹರಿಯುತ್ತಿದೆ. ನಿನ್ನೆ ನದಿಗೆ 48,000 ಕ್ಯೂಸೆಕ್ಸ್ ನೀರು ಹರಿಸಲಾಗಿತ್ತು.
ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹದ ಅವಾಂತರ: ಜಲಾವೃತಗೊಂಡ ನೂರಾರು ಎಕರೆ ಬೆಳೆ
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನಲ್ಲಿ ದೂದಗಂಗಾ ನದಿಯ ಅಬ್ಬರ ಮುಗಿಲು ಮುಟ್ಟಿದೆ. ಮಹಾರಾಷ್ಟ್ರ ಹಾಗೂ ಪಶ್ಚಿಮ ಘಟ್ಟಗಳಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ದೂದಗಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ನದಿ ತಟದ ಗ್ರಾಮಗಳು ಜಲಾವೃತಗೊಳ್ಳುತ್ತಿವೆ. ನದಿ ದಡದಿಂದ ಅರ್ಧ ಕಿಲೋಮೀಟರ್ ಹೊರಗೂ ಪ್ರವಾಹದ ನೀರು ನುಗ್ಗಿದ್ದು, ಬೇಡಕಿಹಾಳ ಗ್ರಾಮ ಸಂಪೂರ್ಣವಾಗಿ ಊರು ಸುತ್ತುವರೆದಿದೆ. ಗ್ರಾಮದ ನೂರಾರು ಎಕರೆಯಲ್ಲಿ ಬೆಳೆದಿದ್ದ ಕಬ್ಬು, ಮೆಕ್ಕೆಜೋಳ, ಶೇಂಗಾ ಹಾಗೂ ಸೋಯಾಬೀನ್ ಬೆಳೆಗಳು ಸಂಪೂರ್ಣ ಜಲಾವೃತಗೊಂಡಿವೆ. ಕಳೆದ ಐದು ದಿನಗಳಿಂದ ಬೆಳೆಗಳು ನೀರಲ್ಲೇ ನಿಂತಿರುವುದರಿಂದ ಸಂಪೂರ್ಣ ಕೊಳೆತು ಹೋಗುವ ಆತಂಕ ಎದುರಾಗಿದ್ದು, ರೈತರು ಕಣ್ಣೀರು ಹಾಕುತ್ತಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
