ಕೆಆರ್ಎಸ್ ನೀರು ಬಿಡುಗಡೆಗೆ ಆಗ್ರಹಿಸಿ ಪ್ರತಿಭಟನೆ
ಮಂಡ್ಯ, ಜುಲೈ 13: ಕೆಆರ್ಎಸ್ ಡ್ಯಾಂನಿಂದ ನಾಲೆಗಳಿಗೆ ನೀರು ಹರಿಯದ ಕಾರಣ ಮೈಸೂರು-ಬೆಂಗಳೂರು ಹಳೆಯ ಹೆದ್ದಾರಿಯನ್ನು ತಡೆದು ರೈತರು ಪ್ರತಿಭಟಿಸಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. ಸಂಜಯ್ ವೃತ್ತದಲ್ಲಿ ರೈತಸಂಘ ಪ್ರತಿಭಟಿಸಿದ್ದು, ಅರೆಬೆತ್ತಲೆಯಾಗಿ ಕೆಲ ರೈತರು ಪ್ರೊಟೆಸ್ಟ್ನಲ್ಲಿ ಭಾಗಿಯಾಗಿರೋದು ಕಂಡುಬಂದಿದೆ. ಡ್ಯಾಂನಲ್ಲಿ 90 ಅಡಿ ನೀರಿದ್ರು ನಾಲೆಗೆ ನೀರು ಬಿಡುತ್ತಿಲ್ಲ. ಇದರಿಂದಾಗಿ ಕಬ್ಬು ಸೇರಿದಂತೆ ಹಲವು ಬೆಳೆಗಳು ಒಣಗುತ್ತಿವೆ. ಹೀಗಾಗಿ ಕೂಡಲೇ ನೀರು ಬಿಡಬೇಕು ಎಂದು ಆಗ್ರಹಿಸಿ ಹೆದ್ದಾರಿ ಮಧ್ಯವೇ ಕುಳಿತು ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಹೋರಾಟ ನಡೆಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆಗೂ ಯತ್ನ
ನೀರಿಗಾಗಿ ಆಗ್ರಹಿಸಿ ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಯತ್ನವೂ ರೈತ ಹಿತರಕ್ಷಣಾ ಸಮಿತಿಯಿಂದ ನಡೆದಿದೆ. ಕಬ್ಬು ಒಣಗುತ್ತಿದೆ, ಇವರು ಕಣ್ಮುಚ್ಚಿ ಕುಳಿತಿದ್ದಾರೆ. ತಕ್ಷಣವೇ ನಾಲೆಗೆ ನೀರು ಬಿಟ್ಟು ರೈತರ ರಕ್ಷಣೆ ಮಾಡಬೇಕು. ರೈತರಿಗೇ ನೀರಿಲ್ಲದಿರುವಾಗ 6ನೇ ಹಂತದ ಕುಡಿಯುವ ನೀರಿನ ಯೋಜನೆ ಸರಿಯಲ್ಲ, ಹೀಗಾಗಿ ಅದನ್ನು ಕೈಬಿಡಬೇಕು. ಇಲ್ಲದಿದ್ದರೆ ಈ ಸಂಬಂಧ ಉಗ್ರ ಹೋರಾಟ ನಡೆಸುವ ಎಚ್ಚರಿಕೆಯನ್ನೂ ಇದೇ ವೇಳೆ ಸಮಿತಿ ನೀಡಿದೆ.
ಇದನ್ನೂ ಓದಿ: ಇನ್ನೂ 100 ಅಡಿ ತಲುಪಿಲ್ಲ ಕೆಆರ್ಎಸ್, ಕರ್ನಾಟಕದ ಡ್ಯಾಂಗಳ ಇಂದಿನ ನೀರಿನ ಮಟ್ಟದ ವಿವರ
ಸಭೆ ಬಳಿಕ ತೀರ್ಮಾನ ಎಂದ ಸಿಎಂ
ಇನ್ನು ನೀರಿಗಾಗಿ ಮಂಡ್ಯದಲ್ಲಿ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಡಿಕೆ ಶಿವಕುಮಾರ್, ಈ ಸಂಬಂಧ ಮಂಡ್ಯ, ಶ್ರೀರಂಗಪಟ್ಟಣ ಶಾಸಕರು ಸೇರಿ ಜಿಲ್ಲಾ ಸಚಿವರೂ ತಮ್ಮನ್ನು ಭೇಟಿ ಮಾಡಿದ್ದಾರೆ. ಮಂಡ್ಯದ ರೈತರನ್ನ ಬದುಕಿಸುವ ಜೊತೆಗೆ ಕೋರ್ಟ್ ಆದೇಶವನ್ನೂ ಪಾಲಿಸಬೇಕಿದೆ. ಹೀಗಾಗಿ ಜುಲೈ 15ನೇ ತಾರೀಕು ನಡೆಯಲಿರುವ ಸಭೆಯಲ್ಲಿ ನಮ್ಮ ರಾಜ್ಯದ ವಾದ ಮಂಡಿಸಿ ಆ ಬಗ್ಗೆ ತೀರ್ಮಾನಿಸುತ್ತೇವೆ ಎಂದು ತಿಳಿಸಿದ್ದಾರೆ.
‘ನದಿಗಳ ಜೋಡಣೆಗೆ ಸಿಎಂ ಚಿಂತನೆ’
KRSನಿಂದ ನಾಲೆಗಳಿಗೆ ಕಾವೇರಿ ನೀರು ಬಿಡುವಂತೆ ಸಿಎಂ ಡಿಕೆಶಿಗೆ ಮನವಿ ಮಾಡಿದ್ದೇನೆ. ಜುಲೈ 15ರಂದು ಕಾವೇರಿ ನೀರು ಕುರಿತ ಕೇಸ್ನ ವಿಚಾರಣೆ ಇದ್ದು, ಜು.16ರಂದು ನೀರು ಬಿಡುವುದಾಗಿ ಅವರು ತಿಳಿಸಿದ್ದಾರೆ ಎಂದು ಶಾಸಕ ರವಿ ಗಣಿಗ ಹೇಳಿದ್ದಾರೆ. ಜನರು, ಜಾನುವಾರುಗಳಿಗೆ ಕುಡಿಯಲು ನೀರು ಬಿಡುವಂತೆ ಕೇಳಿದ್ದು, ರೈತರು ಧೃತಿಗೆಡುವುದು ಬೇಡ ಅಂತಾ ಸಿಎಂ ತಿಳಿಸಿದ್ದಾರೆ. ಈಗ ಬೆಳೆದಿರುವ ಬೆಳೆಗಳಿಗೆ ನೀರು ಬಿಡಲು ಅವರು ಒಪ್ಪಿದ್ದು, ಕಾವೇರಿ, ಕೃಷ್ಣಾ, ಗೋದಾವರಿ ನದಿಗಳ ಜೋಡಣೆಗೂ ಅವರು ಚಿಂತನೆ ನಡೆಸಿದ್ದಾರೆ ಎಂದು ಶಾಸಕರು ಮಾಹಿತಿ ನೀಡಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On – 3:19 pm, Mon, 13 July 26