ಬೆಂಗಳೂರು, (ಆಗಸ್ಟ್ 16): ಹಿಂದೂ(Hindu) ಸಂಸ್ಕೃತಿಯಲ್ಲಿ ಸಾಲು ಸಾಲು ಹಬ್ಬಗಳ ಆಗಮನಕ್ಕೆ ಮಂಗಲಮಯ ಮುನ್ನುಡಿ ಬರೆಯುವ ಮೊದಲ ಪವಿತ್ರ ಪರ್ವವೇ ನಾಗರ ಪಂಚಮಿ. ಪ್ರತಿವರ್ಷ ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿಯಂದು(Nagara Panchami) ಆಚರಿಸಲಾಗುವ ಈ ದಿನ, ನಾಗ ದೇವತೆಯನ್ನು ಅತ್ಯಂತ ಶ್ರದ್ಧೆ, ಭಕ್ತಿ ಮತ್ತು ಕೃತಜ್ಞತೆಯಿಂದ ಪೂಜಿಸುವುದು ಅನಾದಿ ಕಾಲದಿಂದಲೂ ಬಂದ ಶ್ರೇಷ್ಠ ಸಂಪ್ರದಾಯ. ಈ ಹಬ್ಬವನ್ನು ಉತ್ತರ ಕರ್ನಾಟಕದಲ್ಲಿ ಭಾಗದಲ್ಲಿ ಅದ್ಧೂರಿಯಾಗಿ ಆಚರಣೆ ಮಾಡುತ್ತಾರೆ. ಬಗೆ ಬಗೆ ಖಾದ್ಯಗಳನ್ನ ಮಾಡಿ ಕುಟುಂಬಸ್ಥರೊಂದಿಗೆ ನಾಗಪ್ಪನಿಗೆ ಹಾಲು ಎರೆದು ಸಂಭ್ರಮಿಸುತ್ತಾರೆ. ಈ ಸಂಭ್ರಮ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮನೆ ಮಾಡಿದೆ. ಹೌದು…ಇಂದು (ಆಗಸ್ಟ್ 16) ಬೆಳಿಗ್ಗೆಯಿಂದ ಅರಮನೆ ಮೈದಾನದ ಗಾಯತ್ರಿ ವಿಹಾರದ ‘ವೃಕ್ಷ ಸಾಂಪ್ರದಾಯಿಕ ಕಲಾಮಂಟಪ’ದಲ್ಲಿ ‘ನಮ್ಮೂರ ನಾಗರ ಪಂಚಮಿ 2026’ ಅದ್ದೂರಿಯಾಗಿ ಆಚರಿಸಲಾಯ್ತು. ನಟಿ ಉಮಾಶ್ರೀ ಸೇರಿದಂತೆ ಅನೇಕ ಮಹಿಳೆಯವರು ಭಾಗಿ ಆಗಿದ್ದರು. ನಗರೀಕರಣದಲ್ಲಿ ಮರೆಯಾಗುತ್ತಿರುವ ಹಳ್ಳಿ ಸಂಸ್ಕೃತಿಯನ್ನು ಮರುಸೃಷ್ಟಿಸುವುದೇ ಈ ಕಾರ್ಯಕ್ರಮದ ಉದ್ದೇಶ. ನಾಗಪೂಜೆ ಮತ್ತು ಗೋಪೂಜೆಯೊಂದಿಗೆ ಆರಂಭವಾಗುವ ಈ ಹಬ್ಬದಲ್ಲಿ ಇಳಕಲ್ ಸೀರೆ, ಕೋಲಾಟ, ಪಗಡಿ, ರಂಗೋಲಿ, ಸೇವಿಗೆ ಹೊಸೆಯುವುದು, ರೊಟ್ಟಿ ಬಡಿಯುವುದು, ಬುಟ್ಟಿ ಬ್ಯಾಲೆನ್ಸ್, ಬೀಸಣಿಕೆ ಸ್ಪರ್ಧೆ ಏರ್ಪಡಿಸಲಾಗಿತ್ತು.
