ನವದೆಹಲಿ, ಜುಲೈ 30: 2016ಕ್ಕಿಂತ ಮೊದಲು ತಯಾರಾದ ಹಳೆಯ ಬಿಎಸ್-III ವಾಹನಗಳಲ್ಲಿನ ಕೆಲವು ರಬ್ಬರ್ ಭಾಗಗಳು ಮತ್ತು ಗ್ಯಾಸ್ಕೆಟ್ಗಳನ್ನು ಇ20 ಪೆಟ್ರೋಲ್(E20 Petrol)ನಲ್ಲಿ ಚಲಾಯಿಸುವಾಗ ಬದಲಾಯಿಸಬೇಕಾಗಬಹುದು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಏಪ್ರಿಲ್ 1, 2005 ರಿಂದ ಜಾರಿಗೆ ಬಂದು, 2016 ಕ್ಕಿಂತ ಮೊದಲು ತಯಾರಾದ BS-III (ಭಾರತ್ ಸ್ಟೇಜ್-3) ವಾಹನಗಳಲ್ಲಿ ಇ20 ಇಂಧನ ಬಳಸುವಾಗ, ಅವುಗಳ ಕೆಲವು ರಬ್ಬರ್ ಭಾಗಗಳು ಮತ್ತು ಗ್ಯಾಸ್ಕೆಟ್ಗಳನ್ನು ಬದಲಾಯಿಸಬೇಕಾಗಬಹುದು ಎಂದು ಅವರು ಒಪ್ಪಿಕೊಂಡಿದ್ದಾರೆ.
ಜಂಟಿ ಸಂಶೋಧನೆ ಮತ್ತು ಸರ್ಕಾರದ ಸಮರ್ಥನೆ
IOCL, IIP ಡೆಹ್ರಾಡೂನ್, SIAM ಮತ್ತು ARAI ಸಂಸ್ಥೆಗಳು ಜಂಟಿಯಾಗಿ ನಡೆಸಿದ ಪರೀಕ್ಷೆಗಳಲ್ಲಿ ದ್ವಿಚಕ್ರ ಹಾಗೂ ನಾಲ್ಕು ಚಕ್ರಗಳ ವಾಹನಗಳ ಎಂಜಿನ್ ಬದಲಾಯಿಸುವ ಅಗತ್ಯ ಕಂಡುಬಂದಿಲ್ಲ. ಮೈಲೇಜ್ ಕೇವಲ ಇಂಧನವನ್ನು ಮಾತ್ರವೇ ಆಧರಿಸಿಲ್ಲ, ಬದಲಿಗೆ ವಾಹನದ ನಿರ್ವಹಣೆ, ರಸ್ತೆಯ ಸ್ಥಿತಿ ಮತ್ತು ಚಾಲನಾ ಶೈಲಿಯನ್ನು ಅವಲಂಬಿಸಿರುತ್ತದೆ ಎಂದು ಆಟೋಮೊಬೈಲ್ ಸಂಸ್ಥೆಗಳು ಸ್ಪಷ್ಟಪಡಿಸಿವೆ ಎಂದು ಗಡ್ಕರಿ ತಿಳಿಸಿದ್ದಾರೆ. BS-III ವಾಹನಗಳ ರಬ್ಬರ್ ಗ್ಯಾಸ್ಕೆಟ್ಗಳನ್ನು ಸಾಮಾನ್ಯ ವಾಹನ ಸರ್ವೀಸ್ ವೇಳೆ ಸುಲಭವಾಗಿ ಬದಲಾಯಿಸಬಹುದು ಎಂದು ಸಚಿವರು ವಿವರಿಸಿದ್ದಾರೆ.
ಅರವಿಂದ್ ಕೇಜ್ರಿವಾಲ್ ಭಾರಿ ಆರೋಪ
ಇ20 ಪೆಟ್ರೋಲ್ ಜಾರಿಯನ್ನು ತೀವ್ರವಾಗಿ ವಿರೋಧಿಸಿರುವ ಆಮ್ ಆದ್ಮಿ ಪಾರ್ಟಿ (AAP) ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್, ಕೇಂದ್ರ ಸರ್ಕಾರ ಮತ್ತು ವಾಹನ ತಯಾರಕರ ವಿರುದ್ಧ ಸಮರ ಸಾರಿದ್ದಾರೆ. 2023 ಕ್ಕಿಂತ ಮೊದಲು ತಯಾರಾದ ವಾಹನಗಳಲ್ಲಿ E20 ಬಳಸುವುದು ಸುರಕ್ಷಿತವೇ ಎಂದು ಸ್ಪಷ್ಟಪಡಿಸುವಂತೆ 29 ವಾಹನ ತಯಾರಕ ಕಂಪನಿಗಳಿಗೆ ಪತ್ರ ಬರೆದಿರುವುದಾಗಿ ತಿಳಿಸಿದ ಕೇಜ್ರಿವಾಲ್, ಕೇಂದ್ರದ ಒತ್ತಡದಿಂದಾಗಿ ಯಾವುದೇ ಕಂಪನಿ ಲಿಖಿತ ಉತ್ತರ ನೀಡುತ್ತಿಲ್ಲ ಎಂದು ಆರೋಪಿಸಿದರು.
2023ಕ್ಕಿಂತ ಮುಂಚಿನ ಸುಮಾರು 22 ಕೋಟಿ ಬೈಕ್ಗಳು ಹಾಗೂ ೮ ಕೋಟಿ ಕಾರುಗಳು ಸೇರಿದಂತೆ ಒಟ್ಟು 30 ಕೋಟಿ ವಾಹನಗಳ ಎಂಜಿನ್ ಹಾಗೂ ಮೈಲೇಜ್ ಮೇಲೆ E20 ಪರಿಣಾಮ ಬೀರಲಿದೆ ಎಂದು 9 ಕಂಪನಿಗಳ ಅಧಿಕಾರಿಗಳು ಫೋನ್ ಮೂಲಕ ತಮಗೆ ಒಪ್ಪಿಕೊಂಡಿದ್ದಾರೆ ಎಂದು ಕೇಜ್ರಿವಾಲ್ ಪ್ರತಿಪಾದಿಸಿದ್ದಾರೆ.
ಎಥೆನಾಲ್ ಮಿಶ್ರಣದಿಂದ ಮೈಲೇಜ್ ಕಡಿಮೆಯಾಗುತ್ತಿದ್ದು, ವಾಹನ ಹಾಳಾದರೆ ಗ್ರಾಹಕರಿಗೆ ಪರಿಹಾರ ನೀಡಲು ಕಂಪನಿಗಳು ನಿರಾಕರಿಸುತ್ತಿವೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ. ಕಚ್ಚಾ ತೈಲ ಆಮದು ವೆಚ್ಚ ತಗ್ಗಿಸಲು ಹಾಗೂ ಮಾಲಿನ್ಯ ನಿಯಂತ್ರಿಸಲು ಕೇಂದ್ರ ಸರ್ಕಾರವು ಎಥೆನಾಲ್ ಮಿಶ್ರಣವನ್ನು ಉತ್ತೇಜಿಸುತ್ತಿದೆ.
ಮತ್ತಷ್ಟು ಓದಿ: ಎಥನಾಲ್ ಮಿಶ್ರಿತ ಪೆಟ್ರೋಲ್ ಯೋಜನೆಯನ್ನು ವೈಜ್ಞಾನಿಕವಾಗಿ, ಹಂತ ಹಂತವಾಗಿ ಜಾರಿಗೊಳಿಸಲಾಗಿದೆ: ಸಚಿವ ಸುರೇಶ್ ಗೋಪಿ
ಆದರೆ, ಹಳೆಯ ವಾಹನ ಮಾಲೀಕರಿಗೆ ಜಾಗೃತಿ ಮತ್ತು ಸೂಕ್ತ ತಾಂತ್ರಿಕ ಬೆಂಬಲ ನೀಡಬೇಕೆಂಬ ಆಗ್ರಹ ವ್ಯಕ್ತವಾಗುತ್ತಿದೆ. ಏಪ್ರಿಲ್ 1, 2005 ರಿಂದ ಪರಿಚಯಿಸಲ್ಪಟ್ಟ ಮತ್ತು 2016 ಕ್ಕಿಂತ ಮೊದಲು ತಯಾರಿಸಲಾದ BS-III ವಾಹನಗಳಲ್ಲಿ ಪರೀಕ್ಷೆಯನ್ನು ನಡೆಸಿದಾಗ ಮಾತ್ರ, ಕೆಲವು ರಬ್ಬರ್ ಭಾಗಗಳು ಮತ್ತು ಗ್ಯಾಸ್ಕೆಟ್ಗಳನ್ನು ಬದಲಾಯಿಸುವ ಅಗತ್ಯವಿರಬಹುದು, ಇದನ್ನು ವಾಹನದ ನಿಯಮಿತ ಸೇವಾ ಆಡಳಿತದ ಸಮಯದಲ್ಲಿ ಸುಲಭವಾಗಿ ನಿರ್ವಹಿಸಬಹುದು ಎಂದು ಗಡ್ಕರಿ ಹೇಳಿದ್ದಾರೆ.
ಭಾರತದ ಇ20 ಎಥೆನಾಲ್ ಮಿಶ್ರಣ ಕಾರ್ಯಕ್ರಮದ ಸುತ್ತಲಿನ ತಪ್ಪು ಮಾಹಿತಿ ಎಂದು ಕರೆದಿದ್ದಕ್ಕೆ ಸರ್ಕಾರವು ತಿರುಗೇಟು ನೀಡಿದ್ದು, ಎಂಜಿನ್ ಹಾನಿ, ನೀರಿನ ಬಳಕೆ, ವಾಹನ ಖಾತರಿಗಳು, ಇಂಧನ ದಕ್ಷತೆ ಮತ್ತು ಪರಿಸರದ ಮೇಲಿನ ಪರಿಣಾಮದ ಬಗ್ಗೆ ವಿವರವಾದ 10 ಅಂಶಗಳ ಸ್ಪಷ್ಟೀಕರಣವನ್ನು ನೀಡಿದೆ.
ವಾಣಿಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
