ಮೆಟಾ, ಮೈಕ್ರೋಸಾಫ್ಟ್​ನಲ್ಲಿ ಎಐ ಸಂಚಲನ; 23,000 ಉದ್ಯೋಗಗಳಿಗೆ ಕುತ್ತು – Kannada News | AI effect, Meta and Microsoft take steps that can affect 23,000 jobs

ನವದೆಹಲಿ, ಏಪ್ರಿಲ್ 24: ಟೆಕ್ ದೈತ್ಯ ಸಂಸ್ಥೆಗಳಾದ ಮೆಟಾ (ಫೇಸ್‌ಬುಕ್‌ನ ಮಾತೃಸಂಸ್ಥೆ) ಮತ್ತು ಮೈಕ್ರೋಸಾಫ್ಟ್ ಜಾಗತಿಕವಾಗಿ ಸುಮಾರು 23,000 ಉದ್ಯೋಗಗಳ ಮೇಲೆ ಪರಿಣಾಮ ಬೀರಬಲ್ಲ ಬೃಹತ್ ಉದ್ಯೋಗ ಕಡಿತ ಮತ್ತು ಬೈಔಟ್ (Buyout) ಯೋಜನೆಗಳನ್ನು ಪ್ರಕಟಿಸಿವೆ. ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನಕ್ಕೆ ಹೆಚ್ಚಿನ ಒತ್ತು ನೀಡಲು ಮತ್ತು ವೆಚ್ಚ ಕಡಿತಗೊಳಿಸಲು ಈ ಕ್ರಮ ಕೈಗೊಳ್ಳಲಾಗಿದೆ.

ಮೆಟಾ ತನ್ನ ಒಟ್ಟು ಉದ್ಯೋಗಿಬಳಗದ ಶೇಕಡಾ 10 ರಷ್ಟು, ಅಂದರೆ ಸುಮಾರು 8,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದೆ. ಮೇ 20 ರಿಂದ ಈ ಪ್ರಕ್ರಿಯೆ ನಡೆಯಲಿದೆ. ಈಗಾಗಲೇ ಉದ್ಯೋಗಿಗಳೆಲ್ಲರಿಗೂ ಮೆಮೋ ಮೂಲಕ ಈ ಅಲರ್ಟ್ ಮೆಸೇಜ್ ರವಾನಿಸಲಾಗಿದೆ.

ಎಂಟು ಸಾವಿರ ಉದ್ಯೋಗಗಳಿಗೆ ಕತ್ತರಿ ಹಾಕುವುದರ ಜೊತೆಗೆ ಈಗಾಗಲೇ ಖಾಲಿ ಇರುವ ಸುಮಾರು 6,000 ಹುದ್ದೆಗಳನ್ನು ಭರ್ತಿ ಮಾಡದಿರಲು ಕಂಪನಿ ನಿರ್ಧರಿಸಿದೆ.

ಮೆಟಾದ ಈ ನಡೆಗೆ ಕಾರಣವೇನು?

ಫೇಸ್​ಬುಕ್, ವಾಟ್ಸಾಪ್, ಇನ್ಸ್​ಟಾಗ್ರಾಮ್ ಆ್ಯಪ್​ಗಳ ಮಾಲೀಕಸಂಸ್ಥೆ ಮೆಟಾ ತನ್ನ ಎಐ (AI) ಇನ್​ಫ್ರಾಸ್ಟ್ರಕ್ಚರ್​ಗಾಗಿ ಸುಮಾರು 135 ಬಿಲಿಯನ್ ಡಾಲರ್ ಹೂಡಿಕೆ ಮಾಡುತ್ತಿದ್ದು, ಈ ಭಾರಿ ವೆಚ್ಚವನ್ನು ಸರಿದೂಗಿಸಲು ಮತ್ತು ಕಂಪನಿಯನ್ನು ಹೆಚ್ಚು ದಕ್ಷತೆಯಿಂದ ನಡೆಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಇದನ್ನೂ ಓದಿ: ಇನ್ಫೋಸಿಸ್ ಉದ್ಯೋಗಿಗಳ ಸ್ಯಾಲರಿ ಹೈಕ್​ಗೆ ತಡೆ; ಸಿಇಒಗೆ 52 ಕೋಟಿ ರೂ ಮೌಲ್ಯದ ಸ್ಟಾಕ್ ಭತ್ಯೆ

ಮೈಕ್ರೋಸಾಫ್ಟ್ ಸ್ವಯಂ ನಿವೃತ್ತಿ ಸ್ಕೀಮ್

ಮತ್ತೊಂದು ಟೆಕ್ನಾಲಜಿ ದೈತ್ಯ ಕಂಪನಿಯಾದ ಮೈಕ್ರೋಸಾಫ್ಟ್ ತನ್ನ ಅಮೆರಿಕದ ಉದ್ಯೋಗಿಗಳಿಗೆ ‘ಸ್ವಯಂಪ್ರೇರಿತ ನಿರ್ಗಮನ’ (Voluntary Buyouts) ಆಫರ್ ನೀಡಿದೆ. ಅಂದರೆ, ಉದ್ಯೋಗಿಗಳು ತಾವಾಗಿಯೇ ಕೆಲಸ ಬಿಟ್ಟರೆ ಅವರಿಗೆ ಕಂಪನಿಯಿಂದ ಆಕರ್ಷಕ ಪರಿಹಾರ ಧನ ಸಿಗಲಿದೆ.

ಸುಮಾರು 8,750 ಉದ್ಯೋಗಿಗಳು (ಅಮೆರಿಕದ ಕಾರ್ಯಪಡೆಯ ಶೇ. 7 ರಷ್ಟು) ಈ ಯೋಜನೆಗೆ ಅರ್ಹರಾಗಿದ್ದಾರೆ. ವಯಸ್ಸು ಮತ್ತು ಸೇವಾವಧಿಯ ಮೊತ್ತ 70 ಅಥವಾ ಅದಕ್ಕಿಂತ ಹೆಚ್ಚಿರುವ ಉದ್ಯೋಗಿಗಳಿಗೆ ಈ ಆಫರ್ ನೀಡಲಾಗಿದೆ. ಉದಾಹರಣೆಗೆ, ವಯಸ್ಸು 50 ವರ್ಷ, ಸೇವಾವಧಿ 20 ವರ್ಷ ಸೇರಿ ಒಟ್ಟು 70 ಇದ್ದವರು ಈ ವಾಲಂಟರಿ ಬಯೌಟ್​ನ ಆಫರ್ ಪಡೆಯುತ್ತಾರೆ.

AI ಹೂಡಿಕೆಯ ಪ್ರಭಾವ

ಎರಡೂ ಕಂಪನಿಗಳು ಎಐ ತಂತ್ರಜ್ಞಾನದ ಓಟದಲ್ಲಿ ಮುಂಚೂಣಿಯಲ್ಲಿರಲು ಶತಕೋಟಿ ಡಾಲರ್‌ಗಳನ್ನು ಹೂಡಿಕೆ ಮಾಡುತ್ತಿವೆ. ಮನುಷ್ಯರು ಮಾಡುವ ಕೆಲಸಗಳನ್ನು ಎಐ ಮೂಲಕ ಮಾಡಿಸುವ ಅಥವಾ ಕೆಲಸದ ಪ್ರಕ್ರಿಯೆಯನ್ನು ಆಟೋಮೇಷನ್ ಮಾಡುವ ಗುರಿಯನ್ನು ಈ ಕಂಪನಿಗಳು ಹೊಂದಿವೆ.

ವಿಶೇಷವಾಗಿ ಮ್ಯಾನೇಜ್‌ಮೆಂಟ್, ಸೇಲ್ಸ್ ಮತ್ತು ನೇಮಕಾತಿ ವಿಭಾಗದ ಉದ್ಯೋಗಿಗಳ ಮೇಲೆ ಈ ಜಾಬ್ ಕಟ್ ಪರಿಣಾಮ ಹೆಚ್ಚಾಗಿರಲಿದೆ ಎಂದು ವರದಿಗಳು ತಿಳಿಸಿವೆ.

ಇದನ್ನೂ ಓದಿ: ಭಾರತದ ಆರ್ಥಿಕ ಪ್ರಗತಿಗೆ ತೊಡಕಾಗಿರುವ ಅಂಶಗಳೇನು? ಬರ್ನ್​ಸ್ಟೈನ್ ಸಲಹೆ ನೀಡಿರುವ ಪರಿಹಾರಗಳೇನು?

ಒಟ್ಟಾರೆಯಾಗಿ, ಎಐ ತಂತ್ರಜ್ಞಾನದ ಅಬ್ಬರದಿಂದಾಗಿ ಐಟಿ ಕ್ಷೇತ್ರದಲ್ಲಿ ಹಳೆಯ ಮಾದರಿಯ ಉದ್ಯೋಗಗಳು ಕಣ್ಮರೆಯಾಗುತ್ತಿದ್ದು, ಕಂಪನಿಗಳು ಹೆಚ್ಚು ‘ಲೀನ್’ (Lean) ಆಗಲು ಪ್ರಯತ್ನಿಸುತ್ತಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ವಿಶೇಷ ಸಂಪುಟ ಸಭೆ ಅಂತ್ಯ: ಒಳ ಮೀಸಲಾತಿ ಹಂಚಿಕೆಗೆ ಕ್ರಾಂತಿಕಾರಿ ನಿರ್ಣಯ, ಯಾರಿಗೆ ಎಷ್ಟು? – Kannada News | Karnataka Cabinet Finalized SC Internal Reservation, here Is Details

ಬೆಂಗಳೂರು, (ಏಪ್ರಿಲ್ 24): ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ (SC Internal Reservation)  ಕುರಿತು ಸಿದ್ದರಾಮಯ್ಯ ಸರ್ಕಾರ ನಿರ್ಣಾಯಕ ತೀರ್ಮಾನ ಕೈಗೊಂಡಿದೆ. ಪರಿಶಿಷ್ಟ ಜಾತಿಗಳಿಗೆ ಲಭ್ಯವಿರುವ ಶೇ.15 ರಷ್ಟು ಮೀಸಲಾತಿಯಲ್ಲಿ ಸಮಾನವಾಗಿ ಹಂಚಿಕೆಗೆ ತೀರ್ಮಾನಿಸಿದೆ. ಅಂದರೆ ದಲಿತ ಎಡಗೈ 5, ಬಲಗೈ 5, ಇತರರಿಗೆ 5ರಷ್ಟು ಹಂಚಿಕೆಗೆ ನಿರ್ಧರಿಸಲಾಗಿದೆ. ಇದರೊಂದಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಒಳ ಮೀಸಲಾತಿ ಜಾರಿಗೊಳಿಸುವ ಕ್ರಾಂತಿಕಾರಿ ನಿರ್ಣಯ ಕೈಗೊಂಡಿದೆ.

Source link

ಡೆಲಿವರಿ ನಂತರ ಮಹಿಳೆಯರಲ್ಲಿ ಕಾಣಿಸಿಕೊಳ್ಳಬಹುದಾದ 5 ಆರೋಗ್ಯ ಸಮಸ್ಯೆಗಳು ಯಾವುದು ಗೊತ್ತಾ? – Kannada News | After Delivery Care: 5 Common Health Issues in New Mothers

ಗರ್ಭಧಾರಣೆ ಎನ್ನುವಂತದ್ದು ಒಂದು ಹೆಣ್ಣಿನ ಜೀವನದಲ್ಲಿ ಮುಖ್ಯವಾದ ಘಟ್ಟ. ಈ ಅವಧಿಯಲ್ಲಿ ಮಹಿಳೆಯರು ಆರೋಗ್ಯದ ಕಡೆ ಹೆಚ್ಚಿನ ಗಮನ ವಹಿಸುವುದು ಅತ್ಯಂತ ಮುಖ್ಯ. ಜೊತೆಗೆ ಅದಕ್ಕೂ ಹೆಚ್ಚಿನ ಕಾಳಜಿ ಡೆಲಿವರಿ (Delivery) ನಂತರ ಮಾಡಬೇಕಾಗುತ್ತದೆ. ಎಲ್ಲರಿಗೂ ತಿಳಿದಿರುವಂತೆ ಡೆಲಿವರಿ ನಂತರ ಮಹಿಳೆಯ ದೇಹದಲ್ಲಿ ಹಾರ್ಮೋನ್ ಬದಲಾವಣೆಗಳು ಮುಂದುವರಿಯುವುದರಿಂದ ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಹಾಗಾಗಿ ಆದಷ್ಟು ಎಚ್ಚರಿಕೆ ವಹಿಸುವುದು ಬಹಳ ಅನಿವಾರ್ಯ. ಅದರ ಜೊತೆಗೆ ಯಾವ ರೀತಿಯ ಸಮಸ್ಯೆಗಳು ಕಂಡುಬರುತ್ತದೆ ಅದನ್ನು ತಡೆಯಲು ಏನು ಮಾಡಬಹುದು ಎಂಬುದರ ಬಗ್ಗೆಯೂ ತಿಳಿದುಕೊಂಡಿರಬೇಕಾಗುತ್ತದೆ. ಈ ಕುರಿತು ಹೆಚ್ಚಿನ ಮಾಹಿತಿ ಸ್ಟೋರಿಯಲ್ಲಿದೆ.

1. ಪೋಸ್ಟ್‌ಪಾರ್ಟಮ್ ಥೈರಾಯ್ಡ್ ಸಮಸ್ಯೆ

ಡೆಲಿವರಿ ನಂತರ ಕೆಲವು ಮಹಿಳೆಯರಲ್ಲಿ ಥೈರಾಯ್ಡ್ ಅಸಮತೋಲನ ಕಾಣಬಹುದು. ಇದನ್ನು “ಪೋಸ್ಟ್‌ಪಾರ್ಟಮ್ ಥೈರಾಯಿಡಿಟಿಸ್” ಎಂದು ಕರೆಯಲಾಗುತ್ತದೆ. ಈ ಸಮಯದಲ್ಲಿ ದಣಿವು, ಮೂಡ್ ಸ್ವಿಂಗ್, ತೂಕ ಏರಿಕೆ ಅಥವಾ ಕಡಿಮೆಯಾಗುವಂತಹ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಹಾಗಾಗಿ ಡೆಲಿವರಿ ಬಳಿಕ ನಿಯಮಿತವಾಗಿ ಥೈರಾಯ್ಡ್ ಪರೀಕ್ಷೆ ಮಾಡಿಸಿಕೊಳ್ಳುವುದು ಅಗತ್ಯ.

2. ಬೆನ್ನು ಮತ್ತು ಸಂಧಿ ನೋವು

ಗರ್ಭಾವಸ್ಥೆಯಲ್ಲಿ ತೂಕ ಹೆಚ್ಚಾಗುವುದು ಮತ್ತು ದೇಹದ ಸ್ಥಿತಿ ಬದಲಾಗುವುದರಿಂದ ಡೆಲಿವರಿಯ ನಂತರವೂ ಬೆನ್ನು ಮತ್ತು ಸಂಧಿಗಳ ನೋವು ಕಂಡುಬರಬಹುದು. ಜೊತೆಗೆ ಮಗುವನ್ನು ರಾತ್ರಿ ಪೂರ್ತಿ ಎತ್ತಿಕೊಳ್ಳುವುದು, ಸರಿಯಾದ ನಿದ್ರೆ ಇಲ್ಲದಿರುವುದು ಈ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಇದನ್ನೂ ಓದಿ: 35 ವರ್ಷದ ನಂತರ ಪ್ರೆಗ್ನನ್ಸಿಗೆ ಪ್ಲಾನ್ ಮಾಡುವವರು ಕಡ್ಡಾಯವಾಗಿ ಈ 3 ಪರೀಕ್ಷೆಗಳನ್ನು ಮಾಡಿಸಬೇಕು!

3. ಪೋಸ್ಟ್‌ಪಾರ್ಟಮ್ ಡಿಪ್ರೆಷನ್

ಇತ್ತೀಚಿನ ದಿನಗಳಲ್ಲಿ ಡಿಲಿವರಿ ನಂತರ ಮಹಿಳೆಯರಲ್ಲಿ ಮಾನಸಿಕ ಒತ್ತಡ ಹೆಚ್ಚುತ್ತಿದೆ. ಆತಂಕ, ಚಡಪಡಿಕೆ, ದುಃಖಭಾವ ಇವು ಇದರ ಲಕ್ಷಣಗಳಾಗಿವೆ. ಸಮರ್ಪಕ ಆರೈಕೆ ಮತ್ತು ಕುಟುಂಬದ ಬೆಂಬಲ ಇಲ್ಲದಿದ್ದರೆ ಈ ಸಮಸ್ಯೆ ಮತ್ತಷ್ಟು ಗಂಭೀರವಾಗಬಹುದು.

4. ಮಧುಮೇಹದ ಅಪಾಯ

ಗರ್ಭಾವಸ್ಥೆಯಲ್ಲಿದ್ದ ಗರ್ಭಧಾರಣಾ ಮಧುಮೇಹ (Gestational Diabetes) ನಂತರವೂ ಮುಂದುವರೆಯಬಹುದು. ಕೆಲವು ಮಹಿಳೆಯರಲ್ಲಿ ಟೈಪ್- 2 ಮಧುಮೇಹದ ಅಪಾಯ ಹೆಚ್ಚಾಗಿರುತ್ತದೆ. ಆಹಾರ ಪದ್ಧತಿ ಸರಿಯಾಗಿ ಇಲ್ಲದಿರುವುದು ಮತ್ತು ತೂಕ ಹೆಚ್ಚಾಗುವುದರಿಂದ ಈ ರೀತಿಯ ಸಮಸ್ಯೆ ಉಂಟಾಗಬಹುದು.

5. ಮೂತ್ರ ನಿಯಂತ್ರಣ ಸಮಸ್ಯೆ

ಪೆಲ್ವಿಕ್ ಸ್ನಾಯುಗಳು ದುರ್ಬಲವಾಗುವುದರಿಂದ ಕೆಲವು ಮಹಿಳೆಯರಲ್ಲಿ ಮೂತ್ರ ನಿಯಂತ್ರಣ ಸಮಸ್ಯೆ ಕಾಣಬಹುದು. ಇದು ಸಾಮಾನ್ಯವಾಗಿದ್ದರೂ ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ಹಾಗಾಗಿ ಈ ಬಗ್ಗೆ ಹೆಚ್ಚಿನ ಗಮನ ನೀಡುವುದು ಅಗತ್ಯ.

ಡಿಲಿವರಿ ನಂತರ ಸರಿಯಾದ ಆಹಾರ, ವಿಶ್ರಾಂತಿ, ವ್ಯಾಯಾಮ ಮತ್ತು ವೈದ್ಯಕೀಯ ತಪಾಸಣೆ ಮೂಲಕ ಈ ಸಮಸ್ಯೆಗಳನ್ನು ನಿಯಂತ್ರಿಸಬಹುದು. ಮಹಿಳೆಯರ ಆರೋಗ್ಯವೇ ಕುಟುಂಬದ ಆರೋಗ್ಯಕ್ಕೆ ಆಧಾರವಾಗಿರುವುದರಿಂದ ಇದನ್ನು ನಿರ್ಲಕ್ಷ್ಯ ಮಾಡಬಾರದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಗ್ಯಾಂಗ್ ಬಂಧನ: ಅಂತಾರಾಜ್ಯ ಕಳ್ಳರಿಗೆ ಬಿಗ್​​ ಶಾಕ್​​ ಕೊಟ್ಟ ಖಾಕಿ – Kannada News | Bengaluru Police Arrest Three for BSNL Copper Wire and Module Theft

ಬೆಂಗಳೂರು, ಏಪ್ರಿಲ್​​ 24: ಯಶವಂತಪುರ ಪೊಲೀಸರು ಬಿಎಸ್‌ಎನ್‌ಎಲ್ ಮಾಡ್ಯೂಲ್‌ಗಳು ಮತ್ತು ಕಾಪರ್ ವೈರ್‌ಗಳನ್ನು ಕದಿಯುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಉತ್ತರಪ್ರದೇಶ ಮೂಲದವರಾದ ರವಿ ಚೌಹಾಣ್, ಸಂದೀಪ್ ಮತ್ತು ಸೈಯದ್ ಜಾಹೇದ್ ಎಂಬುವವರನ್ನು ಪೊಲೀಸರು ಕಾರ್ಯಾಚರಣೆ ನಡೆಸಿ ಸೆರೆಹಿಡಿದಿದ್ದಾರೆ. ಈ ಖದೀಮರು ಬಿಎಸ್‌ಎನ್‌ಎಲ್ ಸಿಬ್ಬಂದಿಯ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದರು. ಕಳ್ಳತನಕ್ಕಾಗಿ ನೀಲಿ ಸಮವಸ್ತ್ರವನ್ನು ಧರಿಸಿ ರಿಪೇರಿ ಕೆಲಸದ ನೆಪದಲ್ಲಿ ಬರುತ್ತಿದ್ದರು. ಫುಟ್‌ಪಾತ್‌ಗಳಲ್ಲಿ ಅಳವಡಿಸಿದ್ದ ಬಿಎಸ್‌ಎನ್‌ಎಲ್ ಟೆಲಿಫೋನ್ ಮತ್ತು ಇಂಟರ್ನೆಟ್ LAN ಕೇಬಲ್‌ಗಳನ್ನು ಹೊಂದಿದ್ದ ಕಬ್ಬಿಣದ ಪಿಲ್ಲರ್‌ಗಳನ್ನು ಪಿಕಾಸಿ, ಸುತ್ತಿಗೆ, ಸ್ಕ್ರೂಡ್ರೈವರ್ ಮತ್ತು ಕಟ್ಟರ್ ಬಳಸಿ ಒಡೆದು ತಂತಿಗಳನ್ನು ಕದಿಯುತ್ತಿದ್ದರು. ಆರೋಪಿಗಳು ಕಳ್ಳತನಕ್ಕಾಗಿ ವಿಮಾನದಲ್ಲಿ ಬೆಂಗಳೂರಿಗೆ ಬಂದು, ಕೃತ್ಯದ ನಂತರ ಕದ್ದ ಮಾಲುಗಳೊಂದಿಗೆ ರೈಲಿನಲ್ಲಿ ಪರಾರಿಯಾಗುತ್ತಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ. ದಿನಕ್ಕೊಂದು ರಾಜ್ಯದಲ್ಲಿ ಕಳ್ಳತನ ಮಾಡಿ ತಪ್ಪಿಸಿಕೊಳ್ಳುವುದು ಇವರ ಕೃತ್ಯವಾಗಿತ್ತು. ಆದರೆ ಯಶವಂತಪುರ ಪೊಲೀಸರು ಈ ಅಂತರರಾಜ್ಯ ಕಳ್ಳರ ತಂಡವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

 

Source link

ದಕ್ಷಿಣ ಕನ್ನಡಕ್ಕೆ ಹಾರ್ಟ್ ಅಟ್ಯಾಕ್ ಶಾಕ್: ಒಂದೇ ವರ್ಷದಲ್ಲಿ ಶೇ.120ರಷ್ಟು ಭಾರಿ ಏರಿಕೆ! – Kannada News | Mangaluru Heart Attack Cases Skyrocket: 7,212 Incidents, Urgent Health Alert

ಮಂಗಳೂರು, ಏ.24 : ಕರಾವಳಿ ಜಿಲ್ಲೆ ದಕ್ಷಿಣ ಕನ್ನಡದಲ್ಲಿ ಹೃದಯಾಘಾತ ಪ್ರಕರಣಗಳ ಸಂಖ್ಯೆ ಸುನಾಮಿಯಂತೆ ಅಪ್ಪಳಿಸುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಜಿಲ್ಲೆಯಲ್ಲಿ ಹೃದಯಾಘಾತ ಪ್ರಕರಣಗಳ ಪ್ರಮಾಣದಲ್ಲಿ ಬರೋಬ್ಬರಿ ಶೇ. 120ರಷ್ಟು ಭಾರಿ ಏರಿಕೆಯಾಗಿರುವುದು ಇತ್ತೀಚಿನ ಆರೋಗ್ಯ ಅಂಕಿಅಂಶಗಳಿಂದ ಬಹಿರಂಗವಾಗಿದೆ. ಈ ಬಗ್ಗೆ ದಾಯ್ಜಿವರ್ಲ್ಡ್ ವರದಿಯನ್ನು ಮಾಡಿದೆ. ಇದಿಗ ಇದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆತಂಕ ಸೃಷ್ಟಿಸಿದೆ. ಆರೋಗ್ಯ ಇಲಾಖೆಯು ಎರಡು ಅವಧಿಗಳ (ಏಪ್ರಿಲ್ 2024 – ಮಾರ್ಚ್ 2025 ಮತ್ತು ಏಪ್ರಿಲ್ 2025 – ಫೆಬ್ರವರಿ 2026) ನಡುವೆ ನಡೆಸಿದ ತುಲನಾತ್ಮಕ ವರದಿಯಲ್ಲಿ ಈ ಆಘಾತಕಾರಿ ಸತ್ಯ ಹೊರಬಂದಿದೆ. ಜಿಲ್ಲೆಯಲ್ಲಿ ಒಟ್ಟು ಹೃದಯಾಘಾತ ಪ್ರಕರಣಗಳ ಸಂಖ್ಯೆ 3,278 ರಿಂದ 7,212 ಕ್ಕೆ ಜಿಗಿದಿದೆ ಎಂದು ವರದಿ ಹೇಳಿದೆ.

ಮಂಗಳೂರಿನ ಸರ್ಕಾರಿ ವೆನ್ಲಾಕ್ ಆಸ್ಪತ್ರೆಯಲ್ಲೇ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ.

ಒಟ್ಟು ಪ್ರಕರಣಗಳು: 1,752 ರಿಂದ 3,320 ಕ್ಕೆ ಏರಿಕೆ.

STEMI (ತೀವ್ರ ಹೃದಯಾಘಾತ): 400 ರಿಂದ 908 ಕ್ಕೆ ಹೆಚ್ಚಳ.

ಇತರ ಹೃದಯಾಘಾತಗಳು: 1,352 ರಿಂದ 2,412 ಕ್ಕೆ ಏರಿಕೆ.

ಕೇವಲ ಮಂಗಳೂರು ಮಾತ್ರವಲ್ಲದೆ ಜಿಲ್ಲೆಯ ಇತರ ತಾಲೂಕುಗಳಲ್ಲೂ ಪ್ರಕರಣಗಳು ಹೆಚ್ಚುತ್ತಿವೆ:

ಬಂಟ್ವಾಳ ತಾಲೂಕು ಆಸ್ಪತ್ರೆ: 552 ರಿಂದ 850 ಪ್ರಕರಣಗಳು.

ಸುಳ್ಯ ತಾಲೂಕು ಆಸ್ಪತ್ರೆ: 664 ರಿಂದ 720 ಪ್ರಕರಣಗಳು.

ಬೆಳ್ತಂಗಡಿ ತಾಲೂಕು ಆಸ್ಪತ್ರೆ: 310 ರಿಂದ 350 ಪ್ರಕರಣಗಳು.

ಇದನ್ನೂ ಓದಿ: “ನೀನು ತುಂಬಾ ಸಣ್ಣಗಿದ್ದೀಯ, ಜಿಮ್‌ಗೆ ಹೋದ್ರೆ ಸೆಕ್ಸಿಯಾಗಿ ಕಾಣ್ತೀಯ”: ಟಿಸಿಎಸ್ ಸಹೋದ್ಯೋಗಿ ಬಗ್ಗೆ ಯುವತಿ ಸ್ಫೋಟಕ ಹೇಳಿಕೆ

ಖಾಸಗಿ ಆಸ್ಪತ್ರೆಗಳ ಅಂಕಿಅಂಶಗಳನ್ನು ಗಮನಿಸಿದರೆ, ಅಲ್ಲಿಯೂ 1,972 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 1,056 ತೀವ್ರ ಸ್ವರೂಪದ ಹೃದಯಾಘಾತಗಳಾಗಿವೆ. ಕೇವಲ 11 ತಿಂಗಳ ಅವಧಿಯಲ್ಲಿ ಪ್ರಕರಣಗಳು ಇಷ್ಟೊಂದು ಪ್ರಮಾಣದಲ್ಲಿ ದ್ವಿಗುಣಗೊಂಡಿರುವುದು ಆರೋಗ್ಯ ಇಲಾಖೆಯನ್ನು ಚಿಂತೆಗೀಡುಮಾಡಿದೆ. ಜೀವನಶೈಲಿ ಬದಲಾವಣೆ, ಆಹಾರ ಪದ್ಧತಿ ಅಥವಾ ಒತ್ತಡ ಇವುಗಳಿಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಸಾರ್ವಜನಿಕರು ಎದೆಯ ನೋವು ಅಥವಾ ಉಸಿರಾಟದ ತೊಂದರೆ ಕಂಡುಬಂದ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೇಜ್ರಿವಾಲ್​ಗೆ ಭಾರೀ ಹೊಡೆತ; 6 ಸಂಸದರೊಂದಿಗೆ ಆಮ್ ಆದ್ಮಿಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ ರಾಘವ್ ಚಡ್ಡಾ – Kannada News | Raghav Chadha and 6 other Rajya Sabha MPs quit AAP and Announce To Merge With BJP

ನವದೆಹಲಿ, ಏಪ್ರಿಲ್ 24: ರಾಘವ್ ಚಡ್ಡಾ ಅವರನ್ನು ರಾಜ್ಯಸಭಾ ಉಪನಾಯಕನ ಸ್ಥಾನದಿಂದ ವಜಾಗೊಳಿಸಿ ಪಕ್ಷದಲ್ಲಿ ಮೂಲೆಗುಂಪು ಮಾಡಿದ್ದ ಆಮ್ ಆದ್ಮಿ ಪಕ್ಷದ (AAm Aadmi Party) ವಿರುದ್ಧ ಪಕ್ಷದೊಳಗೇ ಅಸಮಾಧಾನ ಉಂಟಾಗಿತ್ತು. ಈ ಬಗ್ಗೆ ರಾಘವ್ ಚಡ್ಡಾ ಅವರೂ ವಿಡಿಯೋ ಸಂದೇಶದ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದರು. ಇದೀಗ ತಾವು ತೆಗೆದುಕೊಂಡ ನಿರ್ಧಾರಕ್ಕೆ ಅರವಿಂದ್ ಕೇಜ್ರಿವಾಲ್ ಭಾರೀ ಬೆಲೆ ತೆರುವಂತಾಗಿದೆ. ಏಕೆಂದರೆ, ರಾಘವ್ ಚಡ್ಡಾ (Raghav Chadha) ಸೇರಿದಂತೆ ಒಟ್ಟು 7 ಸಂಸದರು ಆಮ್ ಆದ್ಮಿ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಜೊತೆ ಸೇರುವುದಾಗಿ ಘೋಷಿಸಿದ್ದಾರೆ. ಇದರಿಂದ ಕೇಜ್ರಿವಾಲ್​ಗೆ ಭಾರೀ ಹೊಡೆತ ಬಿದ್ದಿದೆ.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಪ್ ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸಂಸದರಲ್ಲಿ 2/3ರಷ್ಟು ಜನರು ಬಿಜೆಪಿಯೊಂದಿಗೆ ವಿಲೀನವಾಗುತ್ತಿದ್ದಾರೆ ಎಂದು ಹೇಳಿದ್ದಾರೆ. ರಾಜ್ಯಸಭಾ ಸಂಸದರಾದ ರಾಘವ್ ಚಡ್ಡಾ, ಅಶೋಕ್ ಮಿತ್ತಲ್ ಮತ್ತು ಸಂದೀಪ್ ಪಾಠಕ್ ಅವರು ಇಂದು ಕೇಜ್ರಿವಾಲ್ ಅವರನ್ನು ತೀವ್ರವಾಗಿ ಕೆಣಕುವ ರೀತಿಯಲ್ಲಿ ಎಎಪಿ ತೊರೆದು ಬಿಜೆಪಿಗೆ ಸೇರಿದ್ದಾರೆ.

ಸಂದೀಪ್ ಪಾಠಕ್ ಮತ್ತು ಅಶೋಕ್ ಮಿತ್ತಲ್ ಅವರೊಂದಿಗೆ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾಘವ್ ಚಡ್ಡಾ, “ರಾಜ್ಯಸಭೆಯಲ್ಲಿ ಎಎಪಿಗೆ ಸೇರಿದ 2/3ನೇ ಸದಸ್ಯರಾದ ನಾವು ಭಾರತದ ಸಂವಿಧಾನದ ನಿಬಂಧನೆಗಳನ್ನು ಚಲಾಯಿಸಲು ಮತ್ತು ಬಿಜೆಪಿಯೊಂದಿಗೆ ನಮ್ಮನ್ನು ವಿಲೀನಗೊಳಿಸಲು ನಿರ್ಧರಿಸಿದ್ದೇವೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಎಎಪಿಯ ರಾಜ್ಯಸಭಾ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾ ವಜಾ

ರಾಘವ್ ಚಡ್ಡಾ, ಅಶೋಕ್ ಕುಮಾರ್ ಮಿತ್ತಲ್ ಮತ್ತು ಸಂದೀಪ್ ಪಾಠಕ್ ಅವರು 2022ರಿಂದ ಆಮ್ ಆದ್ಮಿ ಪಕ್ಷದಿಂದ (AAP) ರಾಜ್ಯಸಭಾ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ರಾಘವ್ ಚಡ್ಡಾ ಅವರು, “ನಾನು ನನ್ನ ರಕ್ತ ಮತ್ತು ಬೆವರಿನಿಂದ ಆಮ್ ಆದ್ಮಿ ಪಕ್ಷವನ್ನು ಪೋಷಿಸಿ ನನ್ನ ಯೌವನದ 15 ವರ್ಷಗಳನ್ನು ಆ ಪಕ್ಷಕ್ಕಾಗಿ ನೀಡಿದ್ದೆ. ಆದರೆ, ಆ ಆಮ್ ಆದ್ಮಿ ಪಕ್ಷವು ಈಗ ಅದರ ತತ್ವಗಳು, ಮೌಲ್ಯಗಳು ಮತ್ತು ಮೂಲ ನೈತಿಕತೆಗಳಿಂದ ಸಂಪೂರ್ಣವಾಗಿ ವಿಮುಖವಾಗಿದೆ. ಪಕ್ಷವು ಈಗ ದೇಶಕ್ಕಾಗಿ ಅಥವಾ ರಾಷ್ಟ್ರೀಯ ಹಿತಾಸಕ್ತಿಗಾಗಿ ಕೆಲಸ ಮಾಡುತ್ತಿಲ್ಲ. ಕೇವಲ ವೈಯಕ್ತಿಕ ಲಾಭಕ್ಕಾಗಿ ಕೆಲಸ ಮಾಡುತ್ತಿದೆ. ನಿಮ್ಮಲ್ಲಿ ಹಲವರು ಕಳೆದ ಕೆಲವು ವರ್ಷಗಳಿಂದ ಇದನ್ನು ನನಗೆ ಹೇಳುತ್ತಲೇ ಇದ್ದೀರಿ. ನಾನು ತಪ್ಪಾದ ಪಕ್ಷದಲ್ಲಿರುವ ಸರಿಯಾದ ವ್ಯಕ್ತಿ ಎಂದು ನಿಮ್ಮಂತೆ ನಾನು ಕೂಡ ಭಾವಿಸಿದ್ದೇನೆ. ಆದ್ದರಿಂದ, ಇಂದು ನಾನು ಆಮ್ ಆದ್ಮಿ ಪಕ್ಷದಿಂದ ದೂರವಿದ್ದು ಜನರ ಬಳಿಗೆ ಹೋಗುತ್ತಿದ್ದೇನೆ ಎಂದು ಘೋಷಿಸುತ್ತೇನೆ” ಎಂದಿದ್ದಾರೆ.

ಇದನ್ನೂ ಓದಿ: ರಾಜ್ಯಸಭೆಯಲ್ಲಿ ರಾಘವ್ ಚಡ್ಡಾರನ್ನು ಪಕ್ಷದ ಹಂಗಾಮಿ ನಾಯಕರನ್ನಾಗಿ ನೇಮಿಸುವಂತೆ ಎಎಪಿ ಮನವಿ ತಿರಸ್ಕೃತ

“ರಾಜ್ಯಸಭೆಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಸೇರಿದ ಸಂಸತ್ತಿನ ಮೂರನೇ ಎರಡರಷ್ಟು ಸದಸ್ಯರಾದ ನಾವು ಭಾರತೀಯ ಜನತಾ ಪಕ್ಷದೊಂದಿಗೆ (BJP) ವಿಲೀನಗೊಳ್ಳುತ್ತೇವೆ.” ಎಂದು ರಾಘವ್ ಚಡ್ಡಾ ಹೇಳಿದ್ದಾರೆ. ಸ್ವಾತಿ ಮಲಿವಾಲ್, ಹರ್ಭಜನ್ ಸಿಂಗ್, ರಾಜಿಂದರ್ ಗುಪ್ತಾ ಮತ್ತು ವಿಕ್ರಮ್‌ಜಿತ್ ಸಿಂಗ್ ಸಾಹ್ನಿ ಕೂಡ ಎಎಪಿ ತೊರೆದು ಬಿಜೆಪಿ ಸೇರಿದ್ದಾರೆ ಎಂದು ರಾಘವ್ ಚಡ್ಡಾ ಹೇಳಿದ್ದಾರೆ.

“ರಾಜ್ಯಸಭೆಯಲ್ಲಿ 10 ಎಎಪಿ ಸಂಸದರಿದ್ದಾರೆ, ಅವರಲ್ಲಿ 2/3ಕ್ಕಿಂತ ಹೆಚ್ಚು ಜನರು ನಮ್ಮೊಂದಿಗಿದ್ದಾರೆ. ಅವರು ಸಹಿ ಮಾಡಿದ್ದಾರೆ. ಇಂದು ಬೆಳಿಗ್ಗೆ ನಾವು ಸಹಿ ಮಾಡಿದ ಪತ್ರ ಮತ್ತು ದಾಖಲೆಗಳನ್ನು ರಾಜ್ಯಸಭಾ ಅಧ್ಯಕ್ಷರಿಗೆ ಸಲ್ಲಿಸಿದ್ದೇವೆ. ಅವರಲ್ಲಿ ಮೂವರು ನಿಮ್ಮ ಮುಂದೆ ಇದ್ದಾರೆ. ನಮ್ಮ ಜೊತೆಗೆ, ಹರ್ಭಜನ್ ಸಿಂಗ್, ರಾಜಿಂದರ್ ಗುಪ್ತಾ, ವಿಕ್ರಮ್ ಸಾಹ್ನಿ ಮತ್ತು ಸ್ವಾತಿ ಮಲಿವಾಲ್ ಇದ್ದಾರೆ.” ಎಂದು ರಾಘವ್ ಚಡ್ಡಾ ಘೋಷಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Anant Ambani’s Shiva watch: ಅನಂತ್ ಅಂಬಾನಿ ಕೈಯಲ್ಲಿದೆ 12 ಕೋಟಿಯ ‘ಶಿವ’ ವಾಚ್; ಈ ವಜ್ರಖಚಿತ ಗಡಿಯಾರದ ವಿಶೇಷತೆ ತಿಳಿದರೆ ಅಚ್ಚರಿ ಪಡುತ್ತೀರಿ! – Kannada News | Anant Ambani’s Rs 12 Cr ‘Shiva’ Watch: Jacob and Co Luxury and Tech Marvel

ಭಾರತದ ಪ್ರಭಾವಿ ಉದ್ಯಮಿ ಮುಖೇಶ್ ಅಂಬಾನಿ ಅವರ ಕುಟುಂಬವು ತನ್ನ ಐಷಾರಾಮಿ ಜೀವನಶೈಲಿಯಿಂದಲೇ ಸದಾ ಸುದ್ದಿಯಲ್ಲಿರುತ್ತದೆ. ಇತ್ತೀಚೆಗೆ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಧರಿಸಿದ್ದ ‘ಒಪೇರಾ ಗಾಡ್‌ಫಾದರ್ ಬ್ಯಾಗೆಟ್ ಶಿವ’ (Opera Godfather Baguette Shiva) ಎಂಬ ವಾಚ್​ ಜಾಗತಿಕ ಮಟ್ಟದಲ್ಲಿ ಎಲ್ಲರ ಗಮನ ಸೆಳೆದಿದೆ. ವಿಶ್ವಪ್ರಸಿದ್ಧ ಜಾಕೋಬ್ ಆ್ಯಂಡ್ ಕಂಪನಿ (Jacob & Co) ತಯಾರಿಸಿದ ಈ ಕಸ್ಟಮ್ ವಾಚ್, ಅತ್ಯಾಧುನಿಕ ತಂತ್ರಜ್ಞಾನದ ಜೊತೆಗೆ ಭಾರತೀಯ ಆಧ್ಯಾತ್ಮಿಕ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕಲಾಕೃತಿಯಂತೆ ವಿನ್ಯಾಸಗೊಳಿಸಲಾಗಿದೆ.

ವಿನ್ಯಾಸ ಮತ್ತು ಬೆಲೆಯ ಬೆರಗು:

ವರದಿಗಳ ಪ್ರಕಾರ, ಈ ಒಂದು ವಾಚ್​ ಅಂದಾಜು ಮೌಲ್ಯ ಸರಿಸುಮಾರು 12 ಕೋಟಿ ರೂಪಾಯಿಗಳು ಎಂದು ಹೇಳಲಾಗುತ್ತಿದೆ. ಇದರ ವಿನ್ಯಾಸವು ಅತ್ಯಂತ ಶ್ರೀಮಂತವಾಗಿದ್ದು, ವಾಚ್‌ನ ಹೊರಕವಚವನ್ನು 18 ಕ್ಯಾರೆಟ್ ರೋಸ್ ಗೋಲ್ಡ್‌ನಿಂದ ತಯಾರಿಸಲಾಗಿದೆ. ಗಡಿಯಾರದ ಅಂದವನ್ನು ಹೆಚ್ಚಿಸಲು ಇದರ ಮೇಲೆ 300ಕ್ಕೂ ಹೆಚ್ಚು ಬ್ಯಾಗೆಟ್ ಕಟ್ ವಜ್ರಗಳನ್ನು ಅಳವಡಿಸಲಾಗಿದ್ದು, ಒಟ್ಟಾರೆಯಾಗಿ ಸಾವಿರಕ್ಕೂ ಅಧಿಕ ವಜ್ರಗಳನ್ನು ಈ ಒಂದು ವಾಚ್ ಒಳಗೊಂಡಿದೆ. ಇದು ಕೇವಲ ಒಂದು ವಸ್ತು ಮಾತ್ರವಲ್ಲದೆ, ಕೌಶಲಭರಿತ ಕುಸುರಿ ಕೆಲಸದ ಪ್ರತಿರೂಪವಾಗಿದೆ.

ಶಿವನ ವಿಗ್ರಹ ಮತ್ತು ತಾಂತ್ರಿಕ ವಿಶೇಷತೆ:

ಈ ವಾಚ್‌ನ ಪ್ರಮುಖ ಆಕರ್ಷಣೆಯೆಂದರೆ ಅದರ ಮಧ್ಯಭಾಗದಲ್ಲಿ ಕೆತ್ತಲಾದ ಧ್ಯಾನಸ್ಥ ಸ್ಥಿತಿಯಲ್ಲಿರುವ ಶಿವನ ಪುಟ್ಟ ವಿಗ್ರಹ. ಈ ವಿಗ್ರಹದ ಪಕ್ಕದಲ್ಲಿ ಪವಿತ್ರ ‘ಓಂ’ ಚಿಹ್ನೆಯನ್ನೂ ಕೆತ್ತಲಾಗಿದ್ದು, ಇದು ಧಾರ್ಮಿಕ ನಂಬಿಕೆಯನ್ನು ಐಷಾರಾಮಿ ಜೀವನಕ್ಕೆ ಬೆಸೆದಿದೆ. ತಾಂತ್ರಿಕವಾಗಿ ಅತ್ಯಂತ ಸಂಕೀರ್ಣವಾಗಿರುವ ಈ ವಾಚ್ 658 ಸಣ್ಣ ಬಿಡಿಭಾಗಗಳನ್ನು ಹೊಂದಿದ್ದು, ‘ಟ್ರಿಪಲ್-ಆಕ್ಸಿಸ್ ಟೂರ್‌ಬಿಲ್ಲನ್’ ತಂತ್ರಜ್ಞಾನವನ್ನು ಒಳಗೊಂಡಿದೆ. ಇದು ಸಮಯದ ನಿಖರತೆಯನ್ನು ಕಾಪಾಡುವಲ್ಲಿ ಜಗತ್ತಿನಲ್ಲೇ ಶ್ರೇಷ್ಠ ಎನಿಸಿಕೊಂಡಿದೆ.

ಸಂಗೀತ ಮತ್ತು ಇತರ ಆಕರ್ಷಣೆಗಳು:

ಇದು ಮ್ಯೂಸಿಕಲ್ ವಾಚ್ ಆಗಿರುವುದು ಇದರ ಮತ್ತೊಂದು ವಿಶೇಷ. ಇದರಲ್ಲಿರುವ 120-ನೋಟ್ ಮ್ಯೂಸಿಕ್ ಬಾಕ್ಸ್ ಸಿಸ್ಟಮ್ ಮೂಲಕ ಒಂದು ಬಟನ್ ಒತ್ತಿದರೆ ‘ದಿ ಗಾಡ್‌ಫಾದರ್’ ಸಿನಿಮಾದ ಪ್ರಸಿದ್ಧ ಟ್ಯೂನ್ ಅನ್ನು ಪ್ಲೇ ಮಾಡಬಹುದು. ಸಂಗೀತ ನುಡಿಯುತ್ತಿರುವಾಗ ವಾಚ್‌ನ ಒಳಗಿನ ಭಾಗಗಳು ಚಲಿಸುವ ರೀತಿ ನೋಡುಗರಿಗೆ ಆಶ್ಚರ್ಯವನ್ನುಂಟು ಮಾಡುತ್ತದೆ.

ಅಪಾರ ಮೌಲ್ಯದ ವಾಚ್ ಸಂಗ್ರಹ:

ಅನಂತ್ ಅಂಬಾನಿ ಅವರ ಬಳಿ ಇಂತಹ ಹತ್ತಾರು ಅಪರೂಪದ ವಾಚ್‌ಗಳ ದೊಡ್ಡ ಸಂಗ್ರಹವೇ ಇದೆ. ವರದಿಗಳ ಪ್ರಕಾರ ಇವರ ವಾಚ್ ಸಂಗ್ರಹದ ಒಟ್ಟು ಮೌಲ್ಯ 200 ಕೋಟಿ ರೂಪಾಯಿಗಳಿಗೂ ಅಧಿಕವಾಗಿದೆ. ಇವರ ಸಂಗ್ರಹದಲ್ಲಿ ಪಟೆಕ್ ಫಿಲಿಪ್ ಮತ್ತು ರಿಚರ್ಡ್ ಮಿಲ್ಲೆಯಂತಹ ಜಗತ್ತಿನ ಅತಿ ದುಬಾರಿ ಬ್ರ್ಯಾಂಡ್‌ಗಳಿದ್ದು, ಅವುಗಳು ಕೇವಲ ವಿಶ್ವದ ಕೆಲವೇ ಜನ ಶ್ರೀಮಂತರಿಗೆ ಮಾತ್ರ ಲಭ್ಯವಿರುತ್ತವೆ. ಈ ಹಿಂದೆ ಮಾರ್ಕ್ ಜುಕರ್‌ಬರ್ಗ್ ಅವರು ಕೂಡ ಅನಂತ್ ಅವರ ವಾಚ್ ಸಂಗ್ರಹ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇನ್ಫೋಸಿಸ್ ಉದ್ಯೋಗಿಗಳ ಸ್ಯಾಲರಿ ಹೈಕ್​ಗೆ ತಡೆ; ಸಿಇಒಗೆ 52 ಕೋಟಿ ರೂ ಮೌಲ್ಯದ ಸ್ಟಾಕ್ ಭತ್ಯೆ – Kannada News | Infosys approves stock incentives of worth Rs 52 crore for CEO, even as salary hike for employees put on hold

ಬೆಂಗಳೂರು, ಏಪ್ರಿಲ್ 24: ಇನ್ಫೋಸಿಸ್ (Infosys) ಸಂಸ್ಥೆಯು ತನ್ನ ಸಿಇಒ ಸಲೀಲ್ ಪರೇಖ್ (Salil Parekh) ಅವರಿಗೆ ಭಾರಿ ಮೊತ್ತದ ಸ್ಟಾಕ್ ಆಪ್ಷನ್ಸ್ (ESOPs) ನೀಡಿದ್ದು, ಅದೇ ಸಮಯದಲ್ಲಿ ಉದ್ಯೋಗಿಗಳ ವೇತನ ಹೆಚ್ಚಳವನ್ನು ತಡೆಹಿಡಿದಿರುವ ಬಗ್ಗೆ ವರದಿಯಾಗಿದೆ. ಸಿಇಒ ಮತ್ತು ಎಂಡಿಯಾಗಿರುವ ಸಲೀಲ್ ಪರೇಖ್ ಅವರಿಗೆ ಸುಮಾರು 52 ಕೋಟಿ ರೂಪಾಯಿ (51.75 ಕೋಟಿ ರೂ) ಮೌಲ್ಯದ ಎಂಪ್ಲಾಯಿ ಸ್ಟಾಕ್ ಓನರ್‌ಶಿಪ್ ಪ್ಲಾನ್ (ESOPs) ಅಥವಾ ರೆಸ್ಟ್ರಿಕ್ಟೆಡ್ ಸ್ಟಾಕ್ ಯೂನಿಟ್‌ಗಳನ್ನು (RSUs) ಮಂಜೂರು ಮಾಡಿದೆ.

ಇದು ಕಂಪನಿಯ 2015 ರ ಸ್ಟಾಕ್ ಇನ್ಸೆಂಟಿವ್ ಯೋಜನೆ ಮತ್ತು ವಿಸ್ತರಿತ ಸ್ಟಾಕ್ ಮಾಲೀಕತ್ವದ ಕಾರ್ಯಕ್ರಮದ ಭಾಗವಾಗಿದೆ. ಅವರ ಉತ್ತಮ ಕಾರ್ಯಕ್ಷಮತೆ ಮತ್ತು ಕಂಪನಿಯ ಬೆಳವಣಿಗೆಯ ಆಧಾರದ ಮೇಲೆ ಈ ಷೇರುಗಳನ್ನು ನೀಡಲಾಗಿದೆ. ಇನ್ಫೋಸಿಸ್ ಅನ್ನು ಲಾಭದಾಯಕ ಸ್ಥಿತಿಯಲ್ಲಿ ಸ್ಥಿರವಾಗಿ ಮುನ್ನಡೆಸಿದ್ದಕ್ಕೆ ಸಿಇಒಗೆ ಸಿಕ್ಕಿರುವ ಗಿಫ್ಟ್ ಇದು. ಮಾರ್ಚ್ ಕ್ವಾರ್ಟರ್​ನಲ್ಲಿ ಇನ್ಫೋಸಿಸ್​ನ ನಿವ್ವಳ ಲಾಭ 8,501 ಕೋಟಿ ರೂ ದಾಖಲಾಗಿದೆ. ಹಿಂದಿನ ಕ್ವಾರ್ಟರ್​ಗಿಂತ ಶೇ. 27.8ರಷ್ಟು ಲಾಭದಲ್ಲಿ ಏರಿಕೆ ಆಗಿದೆ. ಅದರ ಆದಾಯ 46,402 ಕೋಟಿ ರೂ ಇದೆ.

ಇದನ್ನೂ ಓದಿ: ಭಾರತದ ಆರ್ಥಿಕ ಪ್ರಗತಿಗೆ ತೊಡಕಾಗಿರುವ ಅಂಶಗಳೇನು? ಬರ್ನ್​ಸ್ಟೈನ್ ಸಲಹೆ ನೀಡಿರುವ ಪರಿಹಾರಗಳೇನು?

ಉದ್ಯೋಗಿಗಳ ವೇತನ ಹೆಚ್ಚಳ ವಿಳಂಬ

ಒಂದು ಕಡೆ ಸಿಇಒಗೆ ಭಾರಿ ಮೊತ್ತದ ಷೇರುಗಳನ್ನು ನೀಡಲಾಗಿದ್ದರೆ, ಮತ್ತೊಂದು ಕಡೆ ಕಂಪನಿಯು ತನ್ನ ಸಾಮಾನ್ಯ ಉದ್ಯೋಗಿಗಳ ವೇತನ ಹೆಚ್ಚಳವನ್ನು (Salary Hike) ಸದ್ಯಕ್ಕೆ ತಡೆಹಿಡಿದಿದೆ ಅಥವಾ ವಿಳಂಬಗೊಳಿಸಿದೆ.

ಐಟಿ ಕ್ಷೇತ್ರದಲ್ಲಿನ ಪ್ರಸ್ತುತ ಆರ್ಥಿಕ ಅನಿಶ್ಚಿತತೆ ಮತ್ತು ಬೇಡಿಕೆಯಲ್ಲಿನ ಕುಸಿತದಿಂದಾಗಿ ವೆಚ್ಚ ಕಡಿತದ ಭಾಗವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.

ಪ್ರತೀ ಷೇರಿಗೆ 22 ರೂ ಡಿವಿಡೆಂಡ್

ಇನ್ಫೋಸಿಸ್ ತನ್ನ ನಾಲ್ಕನೇ ತ್ರೈಮಾಸಿಕದ ಫಲಿತಾಂಶದ ವೇಳೆ ಪ್ರತಿ ಷೇರಿಗೆ ₹22 ಅಂತಿಮ ಲಾಭಾಂಶವನ್ನು (Dividend) ಘೋಷಿಸಿದೆ. ಆದರೂ, ಕಂಪನಿಯ ಆದಾಯದ ಬೆಳವಣಿಗೆಯ ಮುನ್ಸೂಚನೆಯು ನಿರೀಕ್ಷೆಗಿಂತ ಕಡಿಮೆಯಿರುವುದು ಹೂಡಿಕೆದಾರರಲ್ಲಿ ಮತ್ತು ಉದ್ಯೋಗಿಗಳಲ್ಲಿ ಆತಂಕ ಮೂಡಿಸಿದೆ.

ಇದನ್ನೂ ಓದಿ: ಏಪ್ರಿಲ್‌ನಲ್ಲಿ ಭಾರತದ ಖಾಸಗಿ ವಲಯ ಭರ್ಜರಿ ಏರಿಕೆ: ಉತ್ಪಾದನಾ, ಸೇವಾ ವಲಯಗಳ PMI ವರದಿಯಲ್ಲಿ ಗಮನಾರ್ಹ ಸಂಗತಿಗಳು

ಸಿಇಒಗೆ ಮಾತ್ರವೇ ಕೊಡುಗೆ: ಉದ್ಯೋಗಿಗಳ ಅಸಮಾಧಾನ

ಸಿಇಒ ಅವರ ಸಂಭಾವನೆ ಮತ್ತು ಸಾಮಾನ್ಯ ಉದ್ಯೋಗಿಗಳ ವೇತನದ ನಡುವಿನ ಈ ಭಾರಿ ವ್ಯತ್ಯಾಸವು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಐಟಿ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಕಂಪನಿಯ ಲಾಭದಲ್ಲಿ ಉದ್ಯೋಗಿಗಳ ಪಾತ್ರವೂ ದೊಡ್ಡದಿದೆ, ಆದರೆ ಅವರಿಗೆ ಸಿಗಬೇಕಾದ ವೇತನ ಹೆಚ್ಚಳ ವಿಳಂಬವಾಗುತ್ತಿರುವುದು ಟೀಕೆಗೆ ಗುರಿಯಾಗಿದೆ.

ಒಟ್ಟಾರೆಯಾಗಿ, ಇನ್ಫೋಸಿಸ್ ತನ್ನ ಉನ್ನತ ಮಟ್ಟದ ನಾಯಕತ್ವವನ್ನು ಉಳಿಸಿಕೊಳ್ಳಲು ದೊಡ್ಡ ಮೊತ್ತದ ಹೂಡಿಕೆ ಮಾಡುತ್ತಿದ್ದರೂ, ಕೆಳಹಂತದ ಉದ್ಯೋಗಿಗಳ ಆರ್ಥಿಕ ಹಿತಾಸಕ್ತಿಯನ್ನು ಸದ್ಯಕ್ಕೆ ಕಡೆಗಣಿಸಿದೆ ಎಂಬುದು ಚರ್ಚೆಯ ವಿಚಾರ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ನಿನ್ನೆ ಫೇಲ್​​, ಇಂದು ಶಾಲೆಗೆ ಟಾಪರ್​​? ಅಂಧ ವಿದ್ಯಾರ್ಥಿನಿಯ SSLC ರಿಸಲ್ಟ್ ಗೊಂದಲ – Kannada News | Karwar: Failed yesterday, topper for school today? Blind student’s SSLC result confused

ವಿದ್ಯಾರ್ಥಿನಿ ಲೀಸಾ ಖಾನಮ್Image Credit source: tv9 kannada

ಕಾರವಾರ, ಏಪ್ರಿಲ್​ 24: ಪರೀಕ್ಷಾ ಪ್ರಾಧಿಕಾರದ ಎಡವಟ್ಟಿನಿಂದ ಎಸ್​​ಎಸ್​ಎಲ್​ಸಿಯಲ್ಲಿ (SSLC Result) ಫೇಲ್​​ ಆಗಿದ್ದ ಅಂಧ ವಿದ್ಯಾರ್ಥಿನಿ ಲೀಸಾ ಖಾನಮ್​​ ಇದೀಗ ಶಾಲೆಗೆ ಟಾಪರ್​ ಆಗಿದ್ದಾರೆ. ಗುರುವಾರ ಬಂದಿದ್ದ ಅಧಿಕೃತ ರಿಸಲ್ಟ್​ನಲ್ಲಿ ಸಮಾಜ-ವಿಜ್ಞಾನ ವಿಷಯದಲ್ಲಿ ಗೈರು ಅಂತ ಬಂದಿತ್ತು. ಇಂದು ಪರೀಕ್ಷಾ ಪ್ರಾಧಿಕಾರದಿಂದ ಬಂದ ರಿಸಲ್ಟ್​​ನಲ್ಲಿ ವಿದ್ಯಾರ್ಥಿನಿ ಲೀಸಾ ಖಾನಮ್​​ ಶಾಲೆಗೆ ಟಾಪರ್​ ಆಗಿದ್ದಾರೆ. ಆದರೆ ಶಿರಸಿ ಡಿಡಿಪಿಐ ಇದು ಅಧಿಕೃತ ಪ್ರತಿ ಅಲ್ಲ ಎನ್ನುತ್ತಿದ್ದು, ವಿದ್ಯಾರ್ಥಿನಿಯ ಫಲಿತಾಂಶದ ಬಗ್ಗೆ ಸ್ಪಷ್ಟತೆ ಸಿಗುತ್ತಿಲ್ಲ. ಹೀಗಾಗಿ ಇದು ಸದ್ಯ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಶಿರಸಿಯ ಇಂದಿರಾ ನಗರದಲ್ಲಿರುವ ಯೂನಿಯನ್ ಉರ್ದು ಪ್ರೌಢಶಾಲೆಯ ವಿದ್ಯಾರ್ಥಿ ಲೀಸಾ ಖಾನಮ್,​ ಎಸ್​​ಎಸ್​ಎಲ್​ಸಿಯಲ್ಲಿ ಎಲ್ಲಾ ಪರೀಕ್ಷೆ ಬರೆದಿದ್ದರು. ಆದರೆ ಎಸ್​​ಎಸ್​ಎಲ್​ಸಿ ಪರೀಕ್ಷಾ ಪ್ರಾಧಿಕಾರ ಅದೊಂದು ಎಡವಟ್ಟಿನಿಂದ ಸಮಾಜ-ವಿಜ್ಞಾನ ಪರೀಕ್ಷೆಗೆ ಗೈರು ಅಂತ ನಮೂದು ಮಾಡಲಾಗಿತ್ತು. ಹೀಗಾಗಿ 84.16 % ಫಲಿತಾಂಶ ಬಂದಿದ್ದರು ಕೂಡ ರಿಸಲ್ಟ್‌ ಮಾತ್ರ ಫೇಲ್ ಅಂತ ಬಂದಿತ್ತು.

ಇದನ್ನೂ ಓದಿ: SSLC ಬೋರ್ಡ್ ಎಡವಟ್ಟಿಗೆ ಪ್ರತಿಭಾವಂತ ಅಂಧ ವಿದ್ಯಾರ್ಥಿನಿ ಫೇಲ್

ಈ ಬಗ್ಗೆ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಮರುಪರಿಶೀಲನೆ ನಡೆಸಿದಾಗ, ಇಂದು ಬಂದಿರುವ ಪ್ರಾಧಿಕಾರದ ಮಾಹಿತಿಯ ಪ್ರಕಾರ ಅದೇ ವಿಷಯದಲ್ಲಿ ಆಕೆಗೆ 97 ಅಂಕಗಳು ಲಭಿಸಿದ್ದು, ಆಕೆ ಶಾಲೆಯ ಟಾಪರ್ ಆಗಿ ಹೊರಹೊಮ್ಮಿದ್ದಾಳೆ ಎನ್ನಲಾಗುತ್ತಿದೆ.

ಇದು ಅಧಿಕೃತ ಪ್ರತಿ ಅಲ್ಲ ಎಂದ ಶಿರಸಿ ಡಿಡಿಪಿಐ

ಇನ್ನು ಈ ಬಗ್ಗೆ ಶಿರಸಿ ಡಿಡಿಪಿಐ ಮಾತನಾಡಿದ್ದು, ಈವರೆಗೆ ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ. ಈಗ ಹರಿದಾಡುತ್ತಿರುವ ರಿಸಲ್ಟ್ ಅಧಿಕೃತ ಪ್ರತಿಯಲ್ಲ. ವಿದ್ಯಾರ್ಥಿನಿಯ ಪೇಪರ್ ಮಿಸ್ ಆಗಿದ್ದು ನಿಜ, ಅದರ ಪರಿಶೀಲನೆ ನಡೆಯುತ್ತಿದೆ. ಅಧಿಕೃತ ರಿಸಲ್ಟ್ ಬರಲು ಇನ್ನೂ ಎರಡು ದಿನಗಳ ಕಾಲಾವಕಾಶ ಬೇಕು. ಅಷ್ಟು ಬೇಗ ಫಲಿತಾಂಶ ಹೊರಬರಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ತಂದೆ ಸಾವಿನ ನಡುವೆಯೂ SSLC ಪರೀಕ್ಷೆ ಬರೆದು ಉತ್ತೀರ್ಣನಾದ ಶಿವಮೊಗ್ಗದ ವಿದ್ಯಾರ್ಥಿ

ಸದ್ಯ ಪರೀಕ್ಷಾ ಪ್ರಾಧಿಕಾರದ ಎಡವಟ್ಟಿನಿಂದಾಗಿ ಪ್ರತಿಭಾವಂತ ಅಂಧ ವಿದ್ಯಾರ್ಥಿನಿಯ ಎಸ್​​ಎಸ್​ಎಲ್​ಸಿ ಫಲಿತಾಂಶ ಸದ್ಯ ಅತಂತ್ರ ಸ್ಥಿತಿಗೆ ತಲುಪಿದೆ. ಭಾರಿ ಚರ್ಚೆಗೂ ಗ್ರಾಸವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಸಿಇಟಿ ಕೇಂದ್ರದಲ್ಲಿ ವಿದ್ಯಾರ್ಥಿ ಜನಿವಾರ ತೆಗೆಸಿದ ಆರೋಪ: ಕೃಪಾನಿಧಿ ಕಾಲೇಜಿನ ಮೂವರು ಸಿಬ್ಬಂದಿ ಅಮಾನತು – Kannada News | CET Janivara Row: 3 Krupanidhi College Staff Suspended

ಬೆಂಗಳೂರು, ಏಪ್ರಿಲ್​​ 24: ಸಿಇಟಿ ಕೇಂದ್ರದಲ್ಲಿ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ವಿಚಾರ ಭಾರಿ ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಬೆಂಗಳೂರಿನ ಮಡಿವಾಳದಲ್ಲಿರುವ ಕೃಪಾನಿಧಿ ಕಾಲೇಜಿನ ಮೂವರು ಸಿಬ್ಬಂದಿ ಅಮಾನತು ಮಾಡಲಾಗಿದೆ. ಸಿಬ್ಬಂದಿಯಾದ ಸುಧಾಕರ್, ಗಿರಿಜಮ್ಮ, ಆರ್​.ಸರಿತಾ ಸಸ್ಪೆಂಡ್​ ಆಗಿದ್ದಾರೆ. ಜನಿವಾರ ತೆಗೆಸಿದ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಬೆಂಗಳೂರು ನಗರ ಡಿಸಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ (KEA) ಪತ್ರ ಬರೆಯಲಾಗಿತ್ತು. ವಸ್ತ್ರಸಂಹಿತೆ ಅಧಿಕಾರಿಗಳ ನೇಮಕ ಮಾಡಿದ್ರೂ ಈ ಘಟನೆ ನಡೆದಿದೆ. ವಿದ್ಯಾರ್ಥಿಗಳ ಜನಿವಾರ ತೆಗೆಸದಂತೆ ಸೂಚನೆ ನೀಡಲಾಗಿತ್ತು. ಆದ್ರೂ ಜನಿವಾರ ತೆಗೆಸಿದ್ದು ಉದ್ದೇಶಪೂರ್ವಕ ಘಟನೆಯಂತೆ ಕಂಡಿದೆ. ಹೀಗಾಗಿ ಈ ಬಗ್ಗೆ ತನಿಖೆ ನಡೆಸಿ ಕ್ರಮವಹಿಸಿದ ವಿವರ ನೀಡುವಂತೆ ಪತ್ರ ಮುಖೇನೆ KEA ಆಗ್ರಹಿಸಿತ್ತು.

2026ನೇ ಸಾಲಿನ ಸಿಇಟಿ ಪರೀಕ್ಷೆ ವೇಳೆ ಬೆಂಗಳೂರು ಕೇಂದ್ರದಲ್ಲಿ ಏಪ್ರಿಲ್​​ 23ರ ಭೌತಶಾಸ್ತ್ರ ವಿಷಯದ ಪರೀಕ್ಷೆಗೆ ಹಾಜರಾಗಲು ಬಂದಿದ್ದ ಕೆಲವು ಅಭ್ಯರ್ಥಿಗಳ ಜನಿವಾರವನ್ನು ತೆಗೆಸಲು ಅಲ್ಲಿಯ ಸಿಬ್ಬಂದಿಗಳು ಸೂಚಿಸಿರುತ್ತಾರೆಂದು, ನಂತರ ಪರೀಕ್ಷೆಗೆ ಹಾಜರಾಗಲು ಅನುಮತಿ ನೀಡಿರುತ್ತಾರೆ ಎಂದು ಮಾಧ್ಯಮಗಳ ಮೂಲಕ ತಿಳಿದುಬಂದಿದೆ. ಇದೊಂದು ಸೂಕ್ಷ್ಮ ವಿಚಾರವಾಗಿದ್ದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬಹಳ ಸ್ಪಷ್ಟವಾಗಿ ವಸ್ತ್ರ ಸಂಹಿತೆಯ ಬಗ್ಗೆ ವಿವರಿಸಿದೆ. ಕಳೆದ ವರ್ಷದಲ್ಲಿ ನಡೆದ ಇದೇ ತರಹದ ಘಟನೆ ಉಲ್ಲೇಖಿಸಿ ಜನಿವಾರ, ಲಿಂಗ ಇತ್ಯಾದಿ ಧಾರ್ಮಿಕ ದಿರಿಸುಗಳನ್ನು ತೆಗೆಯಬಾರದೆಂದು ಸ್ಪಷ್ಟವಾಗಿ ತರಬೇತಿಯಲ್ಲಿ ತಿಳಿಸಲಾಗಿದೆ. ಆದರೂ ಇಂತಹ ಘಟನೆ ನಡೆದಿದ್ದರೆ ಯಾರೋ ಉದ್ದೇಶ ಪೂರ್ವಕವಾಗಿ ಮಾಡಿದಂತೆ ಮೇಲ್ನೋಟಕ್ಕೆ ಕಂಡುಬರುತ್ತಿದೆ. ಹೀಗಾಗಿ ಈ ಬಗ್ಗೆ ಹಿರಿಯ ಅಧಿಕಾರಿಗಳಿಂದ ವಿಚಾರಣೆ ನಡೆಸಿ ನಿಯಮಾನುಸಾರ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಪೂರ್ಣ ವರದಿ ಸಲ್ಲಿಸುವಂತೆ ಬೆಂಗಳೂರು ನಗರ ಡಿಸಿಗೆ ಬರೆದ ಪತ್ರದಲ್ಲಿ KEA ಆಗ್ರಹಿಸಿತ್ತು.

ಇದನ್ನೂ ಓದಿ: ಬೆಂಗಳೂರಿನ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಸಿಬ್ಬಂದಿ; ಸಿಇಟಿ ಪರೀಕ್ಷೆಯೊಂದಿಗೇ ಮತ್ತೆ ಶುರುವಾಯ್ತು ವಿವಾದ

ಜನಿವಾರ ತೆಗೆಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದ ಅಶೋಕ್​​

ಸಿಇಟಿ ಬರೆಯಲು ಬಂದಿದ್ದ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಆರೋಪ ಸಂಬಂಧ ಎಕ್ಸ್ ಮೂಲಕ ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ಸರ್ಕಾರದಿಂದ ಮಾಂಗಲ್ಯ, ಜನಿವಾರ ತೆಗೆಸುವ ಹಿಂದೂ ವಿರೋಧಿ ಕೃತ್ಯಗಳು ನಡೆಯುತ್ತಿವೆ. ಕಾಂಗ್ರೆಸ್‌ ಸರ್ಕಾರ ಈ ವರ್ಷವೂ ತನ್ನ ಹಳೆಯ ಚಾಳಿ ಮುಂದುವರಿಸಿದೆ. ಬೆಂಗಳೂರಿನ ಕೋರಮಂಗಲದ ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಯೊಬ್ಬನ ಜನಿವಾರ ತೆಗೆಸಿ ಪರೀಕ್ಷೆ ಬರೆಯುವಂತೆ ಒತ್ತಾಯಿಸುವ ಮೂಲಕ ಮತ್ತೊಮ್ಮೆ ಹಿಂದೂ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತಂದಿದೆ. ಹಿಂದೆ KPSC ಪರೀಕ್ಷೆ ವೇಳೆ ಮಹಿಳೆಯೊಬ್ಬರ ಮಾಂಗಲ್ಯ ಸರ ತೆಗೆಸಿದ್ದರು ಎಂದು ಕಿಡಿ ಕಾರಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 3:48 pm, Fri, 24 April 26

Source link

Exit mobile version