Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 23ರ ದಿನಭವಿಷ್ಯ – Kannada News | Birth Number Horoscope Dec 23, Tuesday: What Awaits You Today?

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 23ರ ಮಂಗಳವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ಮನೆಯಲ್ಲಿ ಖುಷಿಯ ವಾತಾವರಣ ಇರುತ್ತದೆ. ಅಲಂಕಾರದ ದೃಷ್ಟಿಯಿಂದ ಏನೇನು ಬದಲಾವಣೆ ಮಾಡಬೇಕು ಅಂದುಕೊಂಡಿರುತ್ತೀರೋ ಆ ಎಲ್ಲವನ್ನು ಮಾಡಲು ಸಾಧ್ಯ ಆಗಲಿದೆ. ನಿಮಗೆ ಇರುವಂಥ ಬದ್ಧತೆಯನ್ನು ಸಾಬೀತು ಮಾಡಿಸಿಕೊಳ್ಳಲು ಅವಕಾಶಗಳು ಉದ್ಭವ ಆಗಲಿವೆ. ಕೆಲವು ಹಣಕಾಸಿನ ವಿಚಾರದ ನಿರ್ಧಾರಗಳು ಮುಂದಕ್ಕೆ ಹಾಕಿಕೊಳ್ಳಬೇಕಾಗುತ್ತದೆ. ಮೆಡಿಕಲ್ ಶಾಪ್ ನಡೆಸುತ್ತಾ ಇರುವವರು ಇದಕ್ಕೆ ಪೂರಕವಾಗಿ ಕೆಲವು ಹೊಸ ವ್ಯವಹಾರ ನಡೆಸುವ ಚಿಂತನೆ ನಡೆಸುತ್ತೀರಿ. ಉದ್ಯೋಗ ಸ್ಥಳದಲ್ಲಿ ನೀವು ಯಾವುದನ್ನು ಕೊನೆ ಆಯ್ಕೆ ಎಂದು ಭಾವಿಸಿರುತ್ತೀರೋ ಅದನ್ನೇ ಆರಿಸಿಕೊಳ್ಳುವಂತೆ ಆಗಲಿದೆ. ನಾಲಗೆ ಹುಣ್ಣು, ಗಂಟಲು ನೋವಿನ ಸಮಸ್ಯೆ ಈ ದಿನ ವಿಪರೀತ ಬಾಧಿಸಬಹುದು. ಆಹಾರ ಪಥ್ಯವನ್ನು ಯಾವುದೇ ಕಾರಣಕ್ಕೂ ತಪ್ಪಿಸಬೇಡಿ. ಆಕಸ್ಮಿಕವಾಗಿ ನಿಮಗೆ ಸಿಗುವಂಥ ಅವಕಾಶಗಳನ್ನು ಹೇಗೆ ಬಳಸಿಕೊಳ್ಳಬೇಕು ಎಂಬ ಕಡೆಗೆ ಗಮನ ನೀಡಿ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ನಿಮ್ಮ ಪಾಲಿನ ಜವಾಬ್ದಾರಿಯನ್ನು ಶ್ರದ್ಧೆಯಿಂದ ಮಾಡಿದ್ದರ ಉತ್ತಮ ಫಲಿತವನ್ನು ಪಡೆದುಕೊಳ್ಳಲಿದ್ದೀರಿ. ನಿಮ್ಮಲ್ಲಿ ಕೆಲವರು ಹೆಚ್ಚಿನ ಬಡ್ಡಿದರಕ್ಕೆ ತಂದಿದ್ದ ಸಾಲವನ್ನು ಹಿಂತಿರುಗಿಸುವುದಕ್ಕೆ ಪ್ರಯತ್ನ ಮಾಡಲಿದ್ದೀರಿ. ಮಿನರಲ್ ವಾಟರ್ ವಿತರಣೆಯ ವ್ಯವಹಾರ ಮಾಡುತ್ತಾ ಇರುವವರಿಗೆ ಆದಾಯದಲ್ಲಿ ಹೆಚ್ಚಳ ಆಗಲಿದೆ. ಉದ್ಯೋಗ ಸ್ಥಳದಲ್ಲಿ ಸವಾಲು ಎನಿಸಿದಂ ಕೆಲವು ಕೆಲಸಗಳನ್ನು ನೀವಾಗಿಯೇ ಮುಂದೆ ಹೋಗಿ ವಹಿಸಿಕೊಳ್ಳಲಿದ್ದೀರಿ. ಇದರಿಂದ ಯಶಸ್ಸು ಹಾಗೂ ಭವಿಷ್ಯದಲ್ಲಿ ಬಡ್ತಿ ಇತ್ಯಾದಿ ವಿಷಯಗಳಿಗೆ ಅನುಕೂಲ ಒದಗಿ ಬರುತ್ತದೆ. ಸಾದ್ಯಂತವಾಗಿ ಪರೀಕ್ಷೆ ಮಾಡದ ಹೊರತು ಯಾವುದೇ ಮುಖ್ಯ ಕಾಗದ- ಪತ್ರಗಳಿಗೆ ಸಹಿ ಮಾಡುವುದಕ್ಕೆ ಹೋಗಬೇಡಿ. ಅಣ್ಣ- ತಮ್ಮ, ಅಕ್ಕ- ತಂಗಿಯರ ಮಕ್ಕಳ ಮದುವೆಗಾಗಿ ಹಣಕಾಸಿನ ನೆರವು ಕೇಳಿಕೊಂಡು ಬರಲಿದ್ದಾರೆ. ನಿಮ್ಮ ಒಳಮನಸ್ಸಿಗೆ ಹೇಗೆ ನಡೆದುಕೊಳ್ಳಬೇಕು ಅನ್ನಿಸುತ್ತದೆಯೋ ಅದರಂತೆಯೇ ನಡೆದುಕೊಳ್ಳಿ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ಇತರರ ವೈಯಕ್ತಿಕ ಅಭಿಪ್ರಾಯಗಳನ್ನು ತೆಗೆದುಹಾಕಲು ಹೋಗಬೇಡಿ. ಉದ್ಯೋಗ, ವೃತ್ತಿ- ವ್ಯವಹಾರಗಳಲ್ಲಿ ನೀಡುವಂಥ ಎಚ್ಚರಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳಿ. ದೂರ ಪ್ರಯಾಣಕ್ಕೆ ಅಚಾನಕ್ ಆಗಿ ತೆರಳಲೇ ಬೇಕಾದ ಸನ್ನಿವೇಶ ಸೃಷ್ಟಿ ಆಗಲಿದೆ. ಹಳೇ ಒಪ್ಪಂದಗಳನ್ನು ಮುಂದುವರಿಸುವುದು ಬೇಡ ಎಂದುಕೊಳ್ಳಲಿದ್ದೀರಿ. ತರಕಾರಿ- ಹಣ್ಣುಗಳ ಸರಬರಾಜು ವಾಹನವನ್ನು ಚಾಲನೆ ಮಾಡುವವರು ಇದ್ದಲ್ಲಿ ಅದರದೇ ವ್ಯಾಪಾರವನ್ನು ಶುರು ಮಾಡುವ ಆಲೋಚನೆ ಮೂಡಲಿದೆ. ದುಡಿಮೆಯು ನಿರೀಕ್ಷೆ ಮಟ್ಟದಲ್ಲಿ ಇಲ್ಲ ಎಂಬುದು ಬಹಳವಾಗಿ ಕೊರೆಯಲು ಆರಂಭವಾಗುತ್ತದೆ. ಸ್ನೇಹಿತರ ಪೈಕಿ ಕೆಲವರು ನಿಮ್ಮ ಉದ್ದೇಶಕ್ಕೆ ಕೈ ಜೋಡಿಸಲು ಮುಂದೆ ಬರಲಿದ್ದಾರೆ. ಒಂದು ಕೆಲಸವನ್ನು ಮುಗಿಸುವುದಕ್ಕೆ ಇತರರಿಗೆ ಒಪ್ಪಿಸುವುದರಿಂದ ಅವರಿಗೆ ಸಲಹೆ- ಸೂಚನೆ, ಮಾರ್ಗದರ್ಶನ ನೀಡುವುದಕ್ಕೆ ಹೆಚ್ಚಿನ ಸಮಯವನ್ನು ಮೀಸಲಿಡುವಂತೆ ಆಗಲಿದೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ಈ ದಿನ ಚಂಚಲತೆ ವಿಪರೀತ ಕಾಡುತ್ತದೆ. ಆತುರದಲ್ಲಿ ನಿಮ್ಮ ಯಾವುದೇ ತೀರ್ಮಾನ ಹೇಳುವುದಕ್ಕೆ ಹೋಗಬೇಡಿ. ಇನ್ನು ನಿಮ್ಮ ಬಳಿ ಇರುವ ಹಣಕ್ಕೆ ಎಷ್ಟು ಅಷ್ಟಕ್ಕೆ ಮಾತ್ರ ಯೋಜನೆ ಹಾಕಿಕೊಳ್ಳಿ. ಏನನ್ನಾದರೂ ದಕ್ಕಿಸಿಕೊಳ್ಳ ಬಲ್ಲೆ ಎಂಬ ಆಲೋಚನೆ ಅಪಾಯಕಾರಿ ಆಗಲಿದೆ. ಸರ್ಕಾರಿ ಮಟ್ಟದಲ್ಲಿ ಆಗಬೇಕಾದ ಕೆಲಸಗಳನ್ನು ಮುಗಿಸಿಕೊಳ್ಳುವುದಕ್ಕೆ ಎಲ್ಲ ಪ್ರಯತ್ನ ಮಾಡಿದ ನಂತರವೂ ಕೊನೆ ಹಂತದಲ್ಲಿ ಅದು ನಿಂತು ಬಿಡಲಿದೆ. ಬೆನ್ನು ನೋವು ವಿಪರೀತವಾಗಿ ಕಾಡಬಹುದು. ಅದರಲ್ಲಿಯೂ ದ್ವಿಚಕ್ರ ವಾಹನವನ್ನು ಹೆಚ್ಚಾಗಿ ಬಳಸುತ್ತೀರಿ ಅಂತಾದಲ್ಲಿ ವೈದ್ಯರ ಬಳಿ ತೆರಳಿ, ಸಲಹೆ ತೆಗೆದುಕೊಳ್ಳುವುದು ಕ್ಷೇಮ. ಯಾವುದಕ್ಕೂ ಇರಲಿ ಎಂದುಕೊಂಡು, ಬಹಳ ಹಿಂದೆ ಸಣ್ಣ ಪ್ರಮಾಣದಲ್ಲಿ ಮಾಡಿದ್ದ ಹೂಡಿಕೆಯೊಂದು ಈಗ ಭಾರೀ ದೊಡ್ಡ ಲಾಭ ತಂದುಕೊಡಲಿದೆ ಎಂಬುದು ನಿಮ್ಮ ಗಮನಕ್ಕೆ ಬರಲಿದೆ. ಆದರೆ ಈ ಬಗ್ಗೆ ಎಲ್ಲ ಕಡೆ ಹೇಳಿಕೊಂಡು ಬರಬೇಡಿ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ಕೃಷಿಯಲ್ಲಿ ತೊಡಗಿಕೊಂಡವರು ಜಮೀನಿನಲ್ಲಿ ಕೆಲವು ದೀರ್ಘಾವಧಿ ಕೆಲಸಗಳನ್ನು ಕೈಗೆತ್ತಿಕೊಳ್ಳಲು ಯೋಜನೆ ರೂಪಿಸಲಿದ್ದೀರಿ. ಕೊಟ್ಟಿಗೆ, ಗೋದಾಮು, ಇತರೆ ನಿಮ್ಮ ಚಟುವಟಿಕೆಗೆ ಅನುಕೂಲ ಆಗುವ ರೀತಿ ಯೋಜನೆ ಮಾಡಿಕೊಳ್ಳಲಿದ್ದೀರಿ. ಕುಟುಂಬ ಸದಸ್ಯರು ನಿಮ್ಮ ಆಲೋಚನೆಗಳಿಗೆ ಆರ್ಥಿಕವಾಗಿ ನೆರವು ನೀಡಲಿದ್ದಾರೆ. ತಕ್ಷಣಕ್ಕೆ ಬೇಡ ಅಂದುಕೊಂಡಂಥ ಕೆಲವು ಕೆಲಸಗಳನ್ನು ನಿರ್ಧಾರ ಬದಲಿಸಿ, ಆರಂಭ ಮಾಡಿಬಿಡುತ್ತೀರಿ. ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿದಂಥವರು ಅದನ್ನು ಹಿಂತೆಗೆದುಕೊಳ್ಳವ ಆಲೋಚನೆ ಬಂದರೆ ಅದರಂತೆಯೇ ನಡೆದುಕೊಳ್ಳುವುದು ಉತ್ತಮ. ನಿಮಗೆ ಉದ್ಯೋಗ ಸ್ಥಳದಲ್ಲಿ ನೀಡಿದ್ದ ಭರವಸೆಗಳನ್ನು ಮೇಲಧಿಕಾರಿಗಳು ಈಡೇರಿಸುವ ಸೂಚನೆ ದೊರೆಯಲಿದೆ. ಇಂಥ ಸಮಯದಲ್ಲಿ ಮನಸ್ಸಿಗೆ ಬೇಸರ ಆಗುವಂಥ ಹಳೇ ಘಟನೆಗಳನ್ನು ನೆನಪಿಸಿಕೊಂಡು, ಸಿಟ್ಟು ಮಾಡಿಕೊಳ್ಳುವುದಕ್ಕೆ ಹೋಗಬೇಡಿ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ತುಂಬ ಉತ್ಸಾಹದಿಂದ ಕೆಲಸ- ಕಾರ್ಯಗಳಲ್ಲಿ ತೊಡಗಿಕೊಳ್ಳುವುದಕ್ಕೆ ಆಗಲ್ಲ. ಮುಖ್ಯವಾಗಿ ಮೈ- ಕೈ ನೋವು, ಜ್ವರ, ತಲೆನೋವು ಇಂಥವು ನಿಮ್ಮನ್ನು ಈ ದಿನ ಬಹುವಾಗಿ ಕಾಡಲಿವೆ. ಯಾಕೆ- ಏನು ಎಂಬುದನ್ನು ವಿಚಾರಿಸದೆ ಸ್ನೇಹಿತರು ಹೇಳುವಂತಹ ಕೆಲಸಗಳನ್ನು ಮಾಡುವುದಕ್ಕೆ ಒಪ್ಪಿಕೊಳ್ಳಬೇಡಿ. ಸಂಘ- ಸಂಸ್ಥೆಗಳನ್ನು ಮುನ್ನಡೆಸುತ್ತಾ ಇರುವವರಿಗೆ ದೊಡ್ಡ ಜವಾಬ್ದಾರಿಯೊಂದು ಹೆಗಲು ಏರಲಿದೆ. ಇನ್ನು ಬಿಡಿ ಬಿಡಿಯಾಗಿ ಕೆಲಸ ಮುಗಿಸುವ ಬದಲಿಗೆ ಒಂದೇ ಸಲಕ್ಕೆ ಎಲ್ಲವನ್ನೂ ಮಾಡಿಬಿಡೋಣ ಎಂದುಕೊಂಡು ಮುಂದಕ್ಕೆ ಹಾಕಿಕೊಂಡು ಹೋಗಬೇಡಿ. ಕಾಂಡಿಮೆಂಟ್ಸ್, ಚಾಟ್ಸ್ ಮಾರಾಟದ ವ್ಯವಹಾರ ಮಾಡುತ್ತಾ ಇರುವವರಿಗೆ ಹೊಸ ಅವಕಾಶಗಳು ಕಾಣಿಸಿಕೊಳ್ಳಲು ಶುರು ಆಗುತ್ತವೆ. ಮಳಿಗೆ ರಿನೊವೇಷನ್ ಮಾಡಿಸಬೇಕು ಎಂದುಕೊಳ್ಳುತ್ತಾ ಇದ್ದಲ್ಲಿ ಅದಕ್ಕೆ ಬೇಕಾದ ಆರ್ಥಿಕ ವ್ಯವಸ್ಥೆ ಆಗಲಿದ್ದು, ಇದರಿಂದ ಆತ್ಮವಿಶ್ವಾಸ ಹೆಚ್ಚಾಗುತ್ತದೆ.

ಇದನ್ನೂ ಓದಿ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 21ರಿಂದ 27ರ ತನಕ ವಾರಭವಿಷ್ಯ

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ಬಂದದ್ದು ಬರಲಿ ಎಂದು ಧೈರ್ಯವಾಗಿ ನೀವು ತೆಗೆದುಕೊಂಡ ತೀರ್ಮಾನಗಳು ಲಾಭದಾಯಕ ಆಗಲಿದೆ. ನಿಮ್ಮನ್ನು ಮಾನಸಿಕವಾಗಿ ಕುಗ್ಗಿಸುವುದಕ್ಕಾಗಿ ವಿರೋಧಿಗಳು ಮಾಡುವ ಪ್ರಯತ್ನಗಳು ಅವರಿಗೇ ಉಲ್ಟಾ ಹೊಡೆಯಲಿದೆ. ನಿಧಾನವಾಗಿ ಬದಲಾವಣೆಗೆ ಹೊಂದಾಣಿಕೆ ಮಾಡಿಕೊಳ್ಳಲಿದ್ದೀರಿ. ಉದ್ಯೋಗ ಸ್ಥಳದಲ್ಲಿ ಕೆಲವು ತಾಂತ್ರಿಕ ತರಬೇತಿಗಳನ್ನು ಅನಿವಾರ್ಯವಾಗಿ ಕಲಿಯಬೇಕು ಎಂಬ ಸ್ಥಿತಿ ನಿರ್ಮಾಣ ಆಗಲಿದೆ. ಆದರೆ ಇದರಿಂದ ಭವಿಷ್ಯದಲ್ಲಿ ನಿಮಗೆ ಅನುಕೂಲ ಆಗಲಿದೆ. ಕ್ರೀಡಾಪಟುಗಳಿಗೆ ಪ್ರಾಯೋಜಕರು ದೊರೆಯುವಂಥ ಯೋಗ ಇದೆ. ಪ್ರತಿಷ್ಠಿತ ಸಂಸ್ಥೆ ಅಥವಾ ವ್ಯಕ್ತಿಗಳು ಅವರಾಗಿಯೇ ಭೇಟಿ ಆಗುವಂತೆ ತಿಳಿಸಿದಲ್ಲಿ ನಿಧಾನ ಮಾಡಬೇಡಿ. ಇನ್ನು ಯುಪಿಐ ಮೂಲಕ ದೊಡ್ಡ ಮೊತ್ತದ ಪಾವತಿ ಮಾಡುವಂಥ ಸನ್ನಿವೇಶದಲ್ಲಿ ಸರಿಯಾದ ಸಂಖ್ಯೆಯನ್ನು ಬಳಸಿದ್ದೀರಾ ಎಂಬುದನ್ನು ಸಾವಕಾಶವಾಗಿ ಪರೀಕ್ಷಿಸಿಕೊಳ್ಳುವುದು ಕ್ಷೇಮ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ನೀವು ನಂಬಿದ ವ್ಯವಹಾರ ಬೆಳವಣಿಗೆಗೆ ಸಹಕಾರಿ ಆಗುವ ಸುಳಿವು ನೀಡಲಿದೆ. ಸಂಗಾತಿ ಕುಟುಂಬದ ಕಡೆಯಿಂದ ದೊಡ್ಡ ಮಟ್ಟದಲ್ಲಿ ಬೆಂಬಲ ದೊರೆಯಲಿದೆ. ನಿಮ್ಮ ಜೊತೆಗೆ ಓದಿದಂಥ ಸ್ನೇಹಿತರ ಸಲಹೆಯಿಂದ ಆಲೋಚನಾ ವಿಧಾನವನ್ನು ಬದಲಾವಣೆ ಮಾಡಿಕೊಳ್ಳಲಿದ್ದೀರಿ. ನಿಮಗೆ ಗೊತ್ತಿರುವ ಕೌಶಲಕ್ಕೆ ಬೇಡಿಕೆ ಹೆಚ್ಚಾಗಲಿದ್ದು, ಕೆಲವು ಪ್ರಾಜೆಕ್ಟ್ ಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣ ಮಾಡಿಕೊಟ್ಟಲ್ಲಿ ಮಾರುಕಟ್ಟೆಯಲ್ಲಿ ಇರುವುದಕ್ಕಿಂತ ಹೆಚ್ಚಿನ ಮೊತ್ತವನ್ನು ನೀಡುವುದಾಗಿ ಕೆಲವರು ಪ್ರಸ್ತಾವ ಇಡಲಿದ್ದಾರೆ. ನೀವು ಹಾಕಿದ್ದ ಪ್ಲಾನ್ ಗೆ ಸಂಬಂಧಿಸಿದಂತೆ ಇರುವ ಅನಿಶ್ಚಿತತೆ ದೂರ ಆಗಲಿದ್ದು, ಕುಟುಂಬದ ಎಲ್ಲ ಸದಸ್ಯರು ಬೆಂಬಲವನ್ನು ನೀಡಲಿದ್ದಾರೆ. ಸೆಕೆಂಡ್ ಹ್ಯಾಂಡ್ ವಸ್ತುಗಳು ಬಹಳ ಕಡಿಮೆಗೆ ಸಿಗುತ್ತಿದೆ, ಅದು ನಿಮಗೆ ಬಹಳ ಅಗತ್ಯವಾದ ವಸ್ತುಗಳು ಎಂದಾದಲ್ಲಿ ಖರೀದಿ ಮಾಡುವುದಕ್ಕೆ ಯಾವುದೇ ರೀತಿಯ ಹಿಂಜರಿಕೆ ಮಾಡಬೇಡಿ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ನಿಮ್ಮ ಬುದ್ಧಿವಂತಿಕೆ ಹಾಗೂ ಚೌಕಾಶಿ ಮಾಡುವ ಸಾಮರ್ಥ್ಯ ಅತ್ಯುತ್ತಮವಾದ ಫಲ ನೀಡುವ ದಿನ ಇದಾಗಿರುತ್ತದೆ. ನಿಮ್ಮ ಜಮೀನು, ಸೈಟು ಅಥವಾ ಯಾವುದೇ ಅಸ್ತಿಗೆ ಸಂಬಂಧಿಸಿದ ಕಾಗದ ಪತ್ರದ ವ್ಯವಹಾರಕ್ಕೆ ಬಹಳ ಸಮಯದಿಂದ ಓಡಾಡುತ್ತಾ ಇದ್ದೀರಿ ಅಂತಾದರೆ ಅದು ಪೂರ್ಣಗೊಳ್ಳುವ ಯೋಗ ಇದೆ. ನಿಮ್ಮಿಂದ ಸಾಲ ಪಡೆದು ಬಹಳ ಸಮಯದಿಂದ ಅದನ್ನು ಹಿಂತಿರುಗಿಸಲ್ಲ ಅಂತಾದಲ್ಲಿ ಅದನ್ನು ವಸೂಲಿ ಮಾಡುವಂಥ ಯೋಗ ಈ ದಿನ ಇದೆ. ಬೇಕರಿ ಪದಾರ್ಥಗಳಿಂದ ದೂರ ಇರುವುದು ಒಳ್ಳೆಯದು. ಅದರಲ್ಲೂ ಇತ್ತೀಚೆಗೆ ನಿಮಗೆ ಹೊಟ್ಟೆನೋವಿನ ಸಮಸ್ಯೆ ತೀವ್ರ ಆಗಿದೆ ಅಂತಾದಲ್ಲಿ ಈ ಸಲಹೆಯನ್ನು ಕಡ್ಡಾಯವಾಗಿ ಪಾಲಿಸಿ. ಸಂಗಾತಿ ಜತೆಗೆ ಮುಖ್ಯವಾದ ಸಂಗತಿಯನ್ನು ಚರ್ಚೆ ಮಾಡಲಿದ್ದೀರಿ. ಮಕ್ಕಳ ಶಿಕ್ಷಣ ಕ್ಷೇತ್ರದಲ್ಲಿನ ಸಾಧನೆ ತೃಪ್ತಿ, ಸಮಾಧಾನ ಹಾಗೂ ನೆಮ್ಮದಿಯನ್ನು ನೀಡಲಿದೆ.

ಲೇಖನ- ಎನ್‌.ಕೆ.ಸ್ವಾತಿ

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೊವಿಡ್​​ನಂತೆ ಆತಂಕ ಸೃಷ್ಟಿಸಿದ ILI-ಸಾರಿ ಕೇಸ್ ಏರಿಕೆ: ಆರೋಗ್ಯ ಇಲಾಖೆಯಿಂದ ಮಹತ್ವದ ಸೂಚನೆ – Kannada News | Bengaluru Cold Wave: ILI and SARI Cases Rise Amid Flu Fears

ಬೆಂಗಳೂರು, ಡಿಸೆಂಬರ್​ 22: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳೆದ ಎರಡು ವಾರದಿಂದ ಚಳಿ ಪ್ರಮಾಣ ಹೆಚ್ಚಾಗಿದೆ. ಅತಿಯಾದ ಚಳಿ ಸಿಲಿಕಾನ್ ಸಿಟಿ ಜನರಲ್ಲಿ ಸಾಂಕ್ರಾಮಿಕ ರೋಗಗಳ ಜೊತೆ ಶೀತಜ್ವರ ಮಾದರಿಯ ಅನಾರೋಗ್ಯ ಸಮಸ್ಯೆ ಪ್ರಕರಣಗಳು (ILI) ಹಾಗೂ ತೀವ್ರ ಉಸಿರಾಟ ಸಮಸ್ಯೆ ಪ್ರಕರಣ (SARI) ವೈರಲ್ ಫ್ಲೂ ಹರಡುವ ಭೀತಿ ಆರೋಗ್ಯ ಇಲಾಖೆಗೆ ಟೆನ್ಷನ್ ಹೆಚ್ಚಿಸಿದೆ.

ಸಾರಿ, ಐಎಲ್ಐ ಕೇಸ್​​ ಏರಿಕೆ

ರಾಜ್ಯದಲ್ಲಿ ಕಳೆದೊಂದು ವಾರದಿಂದ ನಿರಂತರ ಏರಿಕೆಯಾಗುತ್ತಿರುವ ಸಾರಿ, ಐಎಲ್ಐ ಕೇಸ್​​ ಹಾಗೂ ವೈರಲ್ ಫ್ಲೂ ಆತಂಕಕ್ಕೆ ಕಾರಣವಾಗಿವೆ. ರಾಜ್ಯದಲ್ಲಿ ಕಳೆದ ಒಂದು ವಾರದಲ್ಲಿ 133 ಸಾರಿ, 21 ಐಎಲ್ಐ ಹಾಗೂ 3052 ಅಕ್ಯೂಟ್ ಡೈರಿಯಲ್ ಡಿಸೀಸ್​​ ಪಾಸಿಟಿವ್ ಕಂಡುಬಂದಿವೆ. ಹೀಗಾಗಿ ಐಎಲ್ಐ ಹಾಗೂ ಸಾರಿ ಕೇಸ್ ಮೇಲೆ ಆರೋಗ್ಯ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ಸೋಂಕಿತ ಪ್ರಕರಣಗಳ ಟೆಸ್ಟ್ ಮಾಡುವಂತೆ ಮಾರ್ಗಸೂಚಿ ಕೂಡ ನೀಡಲಾಗಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಸೀಸನಲ್ ಫ್ಲೂ ಭೀತಿ: ಮಕ್ಕಳು, ಗರ್ಭಿಣಿಯರಿಗೆ ಅಪಾಯ; ಆರೋಗ್ಯ ಇಲಾಖೆ ಮಾರ್ಗಸೂಚಿ ಬಿಡುಗಡೆ

ಚಳಿಗಾಲ ಹಿನ್ನಲೆ ಉಸಿರಾಟದ ಸಮಸ್ಯೆ ಹೆಚ್ಚಾಗಿದೆ. ಸೆಲ್ಫ್ ಮೆಡಿಕೇಷನಲ್ಲಿರುವವರ ಮೇಲೆ ನಿಗಾವಹಿಸಲು  ಆರೋಗ್ಯ ಇಲಾಖೆ ಮುಂದಾಗಿದೆ. ಐಎಲ್ಐ, ಸಾರಿ ಪ್ರಕರಣಗಳ ಬಗ್ಗೆ ಗಮನ ಹರಿಸಲು ಆರೋಗ್ಯ ಇಲಾಖೆ ಸೂಚನೆ ನೀಡಿದ್ದು, ಪ್ರತಿ ದಿನ ಕನಿಷ್ಟ 5ರಷ್ಟು ಐಎಲ್ಐ ಕೇಸ್, 100ರಷ್ಟು ಸಾರಿ ಕೇಸ್​​ಗಳ ಪರೀಕ್ಷೆಗೆ ಸೂಚನೆ ನೀಡಿದೆ.

ರಾಜ್ಯದ ಎಲ್ಲಾ ಪ್ರಯೋಗಾಲಯಗಳಲ್ಲಿ ಸೂಕ್ತ ಟೆಸ್ಟಿಂಗ್ ಕಿಟ್ಗಳನ್ನು ಇರಿಸಿಕೊಳ್ಳಲು ಸೂಚಿಸಲಾಗಿದೆ. ಮಕ್ಕಳು, ಹಿರಿಯರು, ಗರ್ಭಿಣಿಯರು, ಮೆಡಿಕೇಷನ್​​ ಮೇಲೆ ಅವಲಂಬಿತರಾದವರಿಗೆ ಹೆಚ್ಚಿನ ಅಪಾಯ ಇದೆ. ಹೀಗಾಗಿ ಸೆಲ್ಫ್ ಮೆಡಿಕೇಷನ್​​ ಮಾಡುವಂತೆ ಸೂಚಿಸಿದೆ. ಐಎಲ್ಐ, ಸಾರಿ ಕೇಸ್ ಮಾನಿಟರ್ ಮಾಡಲು ಆರೋಗ್ಯ ಸಿಬ್ಬಂದಿಗಳಿಗೆ ತಿಳಿಸಲಾಗಿದೆ. ಸಮಸ್ಯೆ ಇರುವವರನ್ನು ಮಾನಿಟರ್ ಮಾಡಿ ವರದಿ ನೀಡುವಂತೆ, ತುರ್ತು ಚಿಕಿತ್ಸೆಗೆ ಸ್ಪಂದಿಸುವ ಅವಶ್ಯ ಚಿಕಿತ್ಸೆಗಳ ಸಿದ್ಧತೆ ಬಗ್ಗೆ ನಿಗಾ ವಹಿಸುವಂತೆ ಸೂಚಿಸಲಾಗಿದೆ.

ಸೀಸನಲ್ ಫ್ಲೂ ಭೀತಿ

ಚಳಿಗಾಲ ಹಿನ್ನಲೆ ರಾಜ್ಯದಲ್ಲಿ ಸೀಸನಲ್ ಫ್ಲೂ ಭೀತಿ ಇದ್ದು ಜ್ವರ, ಕೆಮ್ಮು, ಕೆಂಪು ಗುಳ್ಳೆ, ಹಸಿವು ಆಗದಿರುವುದು, ಮೈಕೈ ನೋವು, ಶೀತ, ಒಣ ಕೆಮ್ಮು ಇದರ ಪ್ರಮುಖ ಗುಣಲಕ್ಷಣಗಳು ಕಂಡುಬಂದರೆ ಆಸ್ಪತ್ರೆಗೆ ಭೇಟಿ ನೀಡುವುದು ಉತ್ತಮ. ಗರ್ಭಿಣಿಯರು, ಹೈ ರಿಸ್ಕ್ ರೋಗಿಗಳು ಸೂಕ್ತ ಲಸಿಕೆ ಪಡೆಯುವಂತೆ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಕರ್ನಾಟಕದಾದ್ಯಂತ ಇಂದಿನಿಂದ ಡಿ 24ರವರೆಗೆ ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನ

ಬೆಂಗಳೂರಿನಲ್ಲಿ ಚಳಿಯ ಜೊತೆಗೆ ಬದಲಾಗುತ್ತಿರುವ ಹವಾಮಾನ ಹಿನ್ನಲೆ ವೈದ್ಯರು ಆರೋಗ್ಯದ ಬಗ್ಗೆ ಗಮನ ಹರಿಸುವಂತೆ ಸಲಹೆ ನೀಡಿದ್ದಾರೆ. ಹೊರಗಡೆಯ ಆಹಾರ, ಎಣ್ಣೆಯುಕ್ತ ತಿಂಡಿ ಹಾಗೂ ಅತಿಯಾದ ಸಿಹಿ ಪದಾರ್ಥ ತ್ಯಜಿಸುವುದರೊಂದಿಗೆ ಮನೆ ಊಟಕ್ಕೆ ಹೆಚ್ಚು ಒತ್ತು ನೀಡುವಂತೆ ತಿಳಿಸಿದ್ದಾರೆ. ಒಟ್ಟಿನಲ್ಲಿ ಜನರು ಚಳಿಗಾಲ ಮುಗಿಯುವವರೆಗೂ ಜನರು ಸ್ವಚ್ಛತೆ ಕಾಪಾಡುವುದು, ಬಿಸಿ ನೀರು ಕುಡಿಯುವುದು, ಆರೋಗ್ಯಕರ ಆಹಾರ ಸೇವನೆ ಅಗತ್ಯ ಎಂಬುವುದು ವೈದ್ಯರ ಸಲಹೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ನಿಧಿ ಅಗರ್​​ವಾಲ್ ಬಳಿಕ ಸಮಂತಾಗೂ ಫ್ಯಾನ್ಸ್ ಕಾಟ: ವಿಡಿಯೋ ವೈರಲ್ – Kannada News | Samantha Ruth Prabhu gets mobbed during Hyderabad event Video Goes Viral

ನಟಿ ನಿಧಿ ಅಗರ್​ವಾಲ್ (Nidhi Agarwal) ಅವರಿಗೆ ಅಭಿಮಾನಿಗಳಿಂದ ಇತ್ತೀಚೆಗೆ ಕಿರಿಕಿರಿ ಉಂಟಾಗಿತ್ತು. ‘ದಿ ರಾಜಾ ಸಾಬ್’ ಸಿನಿಮಾದ ಹಾಡಿನ ಬಿಡುಗಡೆ ಕಾರ್ಯಕ್ರಮಕ್ಕೆ ಬಂದಿದ್ದ ಅವರನ್ನು ಅಭಿಮಾನಿಗಳು ಮುತ್ತಿಕೊಂಡಿದ್ದರು. ಜನಸಂದಣಿಯಲ್ಲಿ ಅವರ ಜೊತೆ ಕೆಲವರು ಅನುಚಿತವಾಗಿ ವರ್ತಿಸಿದರು. ಆ ಘಟನೆಯ ವಿಡಿಯೋ ವೈರಲ್ ಆಗಿತ್ತು. ಈಗ ಅದೇ ರೀತಿ ಸಮಂತಾ ರುತ್ ಪ್ರಭು (Samantha Ruth Prabhu) ಅವರಿಗೂ ಆಗಿದೆ. ಖಾಸಗಿ ಕಾರ್ಯಕ್ರಮಕ್ಕೆ ಬಂದಿದ್ದ ಸಮಂತಾ ಅವರನ್ನು ಅಭಿಮಾನಿಗಳು ಸುತ್ತುವರಿದಿದ್ದಾರೆ. ಈ ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಸಮಂತಾ ಅವರಿಗೆ ಸಖತ್ ಜನಪ್ರಿಯತೆ ಇದೆ. ಅವರು ಎಲ್ಲೇ ಹೋದರೂ ಜನರು ಸೇರುತ್ತಾರೆ. ಹೈದರಾಬಾದ್​​ನಲ್ಲಿ ಅವರು ಕಾರ್ಯಕ್ರಮವೊಂದಕ್ಕೆ ಬಂದಿದ್ದರು. ಅಂಗಡಿ ಉದ್ಘಾಟನೆಗೆ ಬಂದಿದ್ದ ಅವರ ಜೊತೆ ಫೋಟೋ ತೆಗೆದುಕೊಳ್ಳಲು ಅಭಿಮಾನಿಗಳು ಮುಗಿಬಿದ್ದರು. ಆ ಸಂದರ್ಭದಲ್ಲಿ ಪರಿಸ್ಥಿತಿ ಕೈ ಮೀರುವಂತಾಯಿತು. ಆದರೆ ಅದೃಷ್ಟವಾಶಾತ್ ಏನೂ ಅಚಾತುರ್ಯ ಸಂಭವಿಸಿಲ್ಲ.

ಕಾರ್ಯಕ್ರಮ ಮುಗಿಸಿ ತಮ್ಮ ಕಾರಿನ ಕಡೆಗೆ ಸಮಂತಾ ರುತ್ ಪ್ರಭು ಹೋಗುತ್ತಿದ್ದರು. ಸೀರೆ ಧರಿಸಿದ್ದ ಅವರು ಪಟಪಟನೆ ನಡೆದು ಹೋಗುವುದು ಕೂಡ ಕಷ್ಟ ಆಗುತ್ತಿತ್ತು. ಆ ವೇಳೆ ಫೋಟೋಗಾಗಿ ಫ್ಯಾನ್ಸ್ ಮೇಲೆ ಬೀಳಲು ಆರಂಭಿಸಿದರು. ಅಕ್ಕ-ಪಕ್ಕ ಬಾಡಿ ಗಾರ್ಡ್ ಇದ್ದರೂ ಕೂಡ ಸಮಂತಾ ಅವರನ್ನು ಸೇಫ್ ಆಗಿ ಕಾರಿನ ತನಕ ಕರೆದುಕೊಂಡು ಹೋಗುವುದು ಕಷ್ಟ ಆಯಿತು.

ಪರಿಸ್ಥಿತಿ ಹೀಗೆ ಇದ್ದರೂ ಕೂಡ ಸಮಂತಾ ಅವರು ಗಲಿಬಿಲಿ ಆಗಲಿಲ್ಲ. ನಗುನಗುತ್ತಲೇ, ತಾಳ್ಮೆಯಿಂದ ಅವರು ಎಲ್ಲವನ್ನೂ ನಿಭಾಯಿಸಿದರು. ವೈರಲ್ ಆಗಿರುವ ವಿಡಿಯೋ ನೋಡಿ ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ನಟಿಯರು ಈ ರೀತಿ ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಹೇಗೆ ನಡೆದುಕೊಳ್ಳಬೇಕು ಎಂಬ ಪರಿಜ್ಞಾನ ಜನರಿಗೆ ಇಲ್ಲದೇ ಇರುವುದನ್ನು ನೆಟ್ಟಿಗರು ಖಂಡಿಸುತ್ತಿದ್ದಾರೆ.

ಇದನ್ನೂ ಓದಿ: ನಿಧಿ ಅಗರ್​​ವಾಲ್ ಜೊತೆ ಅನುಚಿತ ವರ್ತನೆ: ಮಾಲ್ ವಿರುದ್ಧ ಕೇಸ್ ದಾಖಲು

2025ರಲ್ಲಿ ಕಾಲ್ತುಳಿತದ ಪ್ರಕರಣಗಳು ಆಗಾಗ ವರದಿ ಆಗಿವೆ. ಹಾಗಿದ್ದರೂ ಕೂಡ ಜನರು ಬುದ್ಧಿ ಕಲಿಯುತ್ತಿಲ್ಲ. ಅಲ್ಲದೇ ಕಾರ್ಯಕ್ರಮಗಳ ಆಯೋಜಕರು ಕೂಡ ಎಚ್ಚರಿಕೆ ವಹಿಸಬೇಕಾಗುತ್ತದೆ. ಪ್ರತಿ ಬಾರಿ ಕಾರ್ಯಕ್ರಮಗಳು ನಡೆದಾದ ಜನರು ಈ ರೀತಿ ಮುಗಿಬೀಳುವುದನ್ನು ತಪ್ಪಿಸಬೇಕಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

IND-W vs SL-W: ಭಾರತ- ಲಂಕಾ ನಡುವೆ 2ನೇ ಟಿ20 ಪಂದ್ಯ ಎಲ್ಲಿ, ಎಷ್ಟು ಗಂಟೆಗೆ ಆರಂಭ? – Kannada News | India Women vs Sri Lanka Women 2nd T20: Squads, Live Stream & Match Details

ವಿಶಾಖಪಟ್ಟಣಂನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಏಕಪಕ್ಷೀಯವಾಗಿ ಮಣಿಸಿದ್ದ ಭಾರತ ವನಿತಾ ಪಡೆ (India Women vs Sri Lanka Women), ಇದೀಗ ಎರಡನೇ ಟಿ20 ಪಂದ್ಯವನ್ನಾಡಲು ಸಜ್ಜಾಗಿದೆ. ಉಭಯ ತಂಡಗಳ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯ ಡಿಸೆಂಬರ್ 23 ರಂದು ನಡೆಯಲಿದೆ. ಮೊದಲ ಪಂದ್ಯದಲ್ಲಿ ಭಾರತದ ದಾಳಿಗೆ ತತ್ತರಿಸಿದ್ದ ಶ್ರೀಲಂಕಾ ಕೇವಲ 126 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಭಾರತದ ಪರ ಜೆಮಿಮಾ 44 ಎಸೆತಗಳಲ್ಲಿ 69 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಇದೀಗ ಎರಡನೇ ಪಂದ್ಯದಲ್ಲೂ ಟೀಂ ಇಂಡಿಯಾ ಇದೇ ಪ್ರದರ್ಶನವನ್ನು ನೀಡುವ ಇರಾದೆಯಲಿದ್ದರೆ, ಇತ್ತ ಶ್ರೀಲಂಕಾ ಮಹಿಳಾ ಕ್ರಿಕೆಟ್ ತಂಡವು ಬಲವಾದ ಪುನರಾಗಮನವನ್ನು ಎದುರು ನೋಡುತ್ತಿದೆ.

ಭಾರತ ಮತ್ತು ಶ್ರೀಲಂಕಾ ಮಹಿಳಾ ತಂಡದ ನಡುವಿನ ಎರಡನೇ ಟಿ20 ಪಂದ್ಯ ಯಾವಾಗ ನಡೆಯಲಿದೆ?

ಭಾರತ ಮತ್ತು ಶ್ರೀಲಂಕಾ ಮಹಿಳಾ ತಂಡದ ನಡುವಿನ ಎರಡನೇ ಟಿ20 ಪಂದ್ಯ ಡಿಸೆಂಬರ್ 23 ರಂದು ನಡೆಯಲಿದೆ.

ಭಾರತ ಮತ್ತು ಶ್ರೀಲಂಕಾ ಮಹಿಳಾ ತಂಡದ ನಡುವಿನ ಎರಡನೇ ಟಿ20 ಪಂದ್ಯ ಎಲ್ಲಿ ನಡೆಯಲಿದೆ?

ವಿಶಾಖಪಟ್ಟಣಂನ ACA-VDCA ಕ್ರಿಕೆಟ್ ಕ್ರೀಡಾಂಗಣದಲ್ಲಿ ಎರಡನೇ ಟಿ20 ಪಂದ್ಯ ನಡೆಯಲಿದೆ.

ಭಾರತ ಮತ್ತು ಶ್ರೀಲಂಕಾ ಮಹಿಳಾ ತಂಡದ ನಡುವಿನ ಎರಡನೇ ಟಿ20 ಪಂದ್ಯ ಎಷ್ಟು ಗಂಟೆಗೆ ಆರಂಭ?

ಪಂದ್ಯವು ಭಾರತೀಯ ಕಾಲಮಾನ ಸಂಜೆ 7:00 ಗಂಟೆಗೆ ಪ್ರಾರಂಭವಾಗಲಿದ್ದು, ಟಾಸ್ ಭಾರತೀಯ ಕಾಲಮಾನ ಸಂಜೆ 6:30 ಕ್ಕೆ ನಡೆಯಲಿದೆ.

ಭಾರತ ಮತ್ತು ಶ್ರೀಲಂಕಾ ಮಹಿಳಾ ತಂಡದ ನಡುವಿನ ಎರಡನೇ ಟಿ20 ಪಂದ್ಯವನ್ನು ಎಲ್ಲಿ ವೀಕ್ಷಿಸಬಹುದು?

ಭಾರತ ಮತ್ತು ಶ್ರೀಲಂಕಾ ಮಹಿಳಾ ತಂಡದ ಎರಡನೇ ಟಿ20 ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಟಿವಿಯಲ್ಲಿ ವೀಕ್ಷಿಸಬಹುದು.ಹಾಗೆಯೇ ಜಿಯೋ ಹಾಟ್‌ಸ್ಟಾರ್ ಅಪ್ಲಿಕೇಶನ್‌ನಲ್ಲಿಯೂ ವೀಕ್ಷಿಸಬಹುದು.

IND vs SA: ಸತತ 19ನೇ ಟಿ20 ಸರಣಿ ಗೆದ್ದು 2025 ಕ್ಕೆ ವಿದಾಯ ಹೇಳಿದ ಟೀಂ ಇಂಡಿಯಾ

ಉಭಯ ತಂಡಗಳು

ಭಾರತ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ದೀಪ್ತಿ ಶರ್ಮಾ, ಸ್ನೇಹ ರಾಣಾ, ಜೆಮಿಮಾ ರಾಡ್ರಿಗಸ್, ಶೆಫಾಲಿ ವರ್ಮಾ, ಹರ್ಲೀನ್ ಡಿಯೋಲ್, ಅಮನ್‌ಜೋತ್ ಕೌರ್, ಅರುಂಧತಿ ರೆಡ್ಡಿ, ಕ್ರಾಂತಿ ಗೌಡ್, ರೇಣುಕಾ ಸಿಂಗ್ ಠಾಕೂರ್, ರಿಚಾ ಘೋಷ್ (ವಿಕೆಟ್ ಕೀಪರ್), ಜಿ ಕಮಲಿನಿ (ವಿಕೆಟ್ ಕೀಪರ್), ಶ್ರೀ ಚರಣಿ, ವೈಷ್ಣವಿ ಶರ್ಮಾ.

ಶ್ರೀಲಂಕಾ ತಂಡ: ಚಾಮರಿ ಅಟಪಟ್ಟು (ನಾಯಕಿ), ಹಾಸಿನಿ ಪೆರೇರಾ, ವಿಶ್ಮಿ ಗುಣರತ್ನೆ, ಹರ್ಷಿತಾ ಸಮರವಿಕ್ರಮ, ನೀಲಾಕ್ಷಿಕಾ ಡಿ ಸಿಲ್ವಾ, ಕವಿಶಾ ದಿಲ್ಹಾರಿ, ಇಮೇಶಾ ದುಲಾನಿ, ಕೌಶಿನಿ ನುತ್ಯಾಂಗನಾ, ಮಲ್ಶಾ ಶೆಹಾನಿ, ಇನೋಕಾ ರಣವೀರ, ಶಶಿನಿ ಗಿಮ್ಹಾನಿ, ನಿಮೇಶ್ ಮದುಶಾನಿ, ಕಾವ್ಯಾ ಕವಿಂದಿ, ರಶ್ಮಿಕಾ ಸೆವ್ವಂದಿ, ಮಾಲ್ಕಿ ಮಾದರ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಾವ್ಯಾ ವಿಚಾರದಲ್ಲಿ ಅತಿ ಆಯ್ತು ಗಿಲ್ಲಿ ವರ್ತನೆ: ಸುದೀಪ್ ಹೇಳಿದರೂ ಬುದ್ಧಿ ಕಲಿತಿಲ್ಲ – Kannada News | Gilli Nata again irritates Kavya Shaiva in Bigg Boss Kannada Season 12

‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ಶೋನಲ್ಲಿ ಗಿಲ್ಲಿ ನಟ ಮತ್ತು ಕಾವ್ಯಾ ಶೈವ ಅವರು ಆತ್ಮೀಯರಾಗಿದ್ದಾರೆ. ಶೋ ಆರಂಭದಿಂದಲೂ ಕೂಡ ಅವರು ಒಟ್ಟಿಗೆ ಇದ್ದಾರೆ. ಇದರಿಂದಾಗಿ ಕಾವ್ಯ ಅವರ ಆಟದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಇದನ್ನು ಕಿಚ್ಚ ಸುದೀಪ್ ಅವರು ಈಗಾಗಲೇ ಹೇಳಿದ್ದಾರೆ. ಆದರೂ ಕೂಡ ಗಿಲ್ಲಿ ನಟ ಅವರು ಬುದ್ಧಿ ಕಲಿತಂತೆ ಕಾಣುತ್ತಿಲ್ಲ. ಡಿಸೆಂಬರ್ 22ರ ಸಂಚಿಕೆಯಲ್ಲಿ ಗಿಲ್ಲಿ ನಟ (Gilli Nata) ಅವರು ಹಳೇ ಚಾಳಿಯನ್ನೇ ಮುಂದುವರಿಸಿದ್ದಾರೆ. ಕಾವ್ಯಾ (Kavya Shaiva) ಬೇಡ ಎಂದರೂ ಕೂಡ ಗಿಲ್ಲಿ ನಟ ಅವರು ಮುಗಿಬಿದ್ದು ಮಾತನಾಡಲು ಬಂದಿದ್ದಾರೆ.

ಗಿಲ್ಲಿ ನಟ ಅವರ ವರ್ತನೆಯಿಂದ ಈಗಾಗಲೇ ಹಲವು ಬಾರಿ ಕಾವ್ಯಾ ಅವರಿಗೆ ಕಿರಿಕಿರಿ ಆಗಿದೆ. ಅದನ್ನು ಅವರು ನೇರವಾಗಿಯೇ ಹೇಳಿದ್ದಾರೆ. ‘ನಿನಗೆ ನಾಚಿಕೆ, ಮಾನ, ಮರ್ಯಾದೆ ಇಲ್ಲ’ ಎಂದು ಕಾವ್ಯಾ ಅವರು ಮುಲಾಜಿಲ್ಲದೇ ಹೇಳಿದರೂ ಕೂಡ ಗಿಲ್ಲಿ ನಟ ಅರ್ಥ ಮಾಡಿಕೊಂಡಿಲ್ಲ. ಕಾವ್ಯಾಗೆ ಕಿರಿಕಿರಿ ಆಗುವ ರೀತಿಯಲ್ಲಿ ಗಿಲ್ಲಿ ನಡೆದುಕೊಂಡಿದ್ದಾರೆ.

86ನೇ ಸಂಚಿಕೆಯಲ್ಲಿ ಕಾವ್ಯ ಅವರು ಅಡುಗೆ ಮನೆಯಲ್ಲಿ ದಾಳಿಂಬೆ ಹಣ್ಣು ಬಿಡಿಸುತ್ತಿದ್ದರು. ಆಗ ಗಿಲ್ಲಿ ಬಂದು ತಮಾಷೆ ಮಾಡಲು ಆರಂಭಿಸಿದರು. ಕತ್ತರಿ ಹಿಡಿದುಕೊಂಡು ಕಾವ್ಯಾ ಅವರ ಕೂದಲು ಕತ್ತರಿಸುವ ರೀತಿಯಲ್ಲಿ ನಟಿಸಿದರು. ಇದರಿಂದ ಕಾವ್ಯ ಅವರಿಗೆ ತುಂಬಾ ಕೋಪ ಬಂತು. ಕೋಪ ವ್ಯಕ್ತಪಡಿಸಿದರೂ ಸಹ ಗಿಲ್ಲಿ ಅರ್ಥ ಮಾಡಿಕೊಳ್ಳಲಿಲ್ಲ.

ಕಾವ್ಯಾ ಬಿಡಿಸುತ್ತಿದ್ದ ದಾಳಿಂಬೆ ಹಣ್ಣನ್ನು ಬಲವಂತಾವಾಗಿ ತೆಗೆದುಕೊಂಡು ತಿನ್ನಲು ಗಿಲ್ಲಿ ಮುಂದಾದರು. ಅದು ಕೂಡ ಕಾವ್ಯಾ ಅವರಿಗೆ ಹಿಡಿಸಲಿಲ್ಲ. ದಾಳಿಂಬೆ ಹಣ್ಣನ್ನು ಅಲ್ಲಿಯೇ ಬಿಟ್ಟು ಕ್ಯಾಪ್ಟನ್ ರೂಮ್​​ಗೆ ತೆರಳಿದರು. ಅವರು ತುಂಬಾ ಬೇಸರ ಮಾಡಿಕೊಂಡಿದ್ದು ಕಾಣಿಸಿತು. ಅಷ್ಟರನಂತರ ಅವರನ್ನು ಸಮಾಧಾನ ಮಾಡಲು ಗಿಲ್ಲಿ ಪ್ರಯತ್ನಿಸಿದರು.

ಇದನ್ನೂ ಓದಿ: ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್

ಈ ವಾರ ಕಾವ್ಯ ಶೈವ ಅವರು ಕ್ಯಾಪ್ಟನ್ ಆಗಿದ್ದಾರೆ. ಹಾಗಾಗಿ ಅವರು ನಾಮಿನೇಷನ್​​ನಿಂದ ಬಚಾವ್ ಆಗಿದ್ದಾರೆ. ಆದರೆ ಗಿಲ್ಲಿ ನಟ ಅವರು ನಾಮಿನೇಟ್ ಆಗಿದ್ದಾರೆ. ಕ್ಯಾಪ್ಟನ್ ಆಗಿರುವ ಕಾವ್ಯ ಅವರು ಅಶ್ವಿನಿ ಗೌಡ ಮತ್ತು ರಕ್ಷಿತಾ ಶೆಟ್ಟಿಯನ್ನು ನೇರವಾಗಿ ನಾಮಿನೇಟ್ ಮಾಡಿದ್ದಾರೆ. ದಿನದಿಂದ ದಿನಕ್ಕೆ ಬಿಗ್ ಬಾಸ್ ಆಟದ ಪೈಪೋಟಿ ಜೋರಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ರೀಲ್ಸ್ ತಂದ ಆಪತ್ತು: ಇನ್ಸ್ಟಾಗ್ರಾಮ್​​​ ಬಳಸುವವರು ಈ ವಿಡಿಯೋನ ಒಮ್ಮೆ ನೋಡಿ

ರಾಯಚೂರು, ಡಿಸೆಂಬರ್​ 22: ಸ್ಮಾರ್ಟ್ ಫೋನ್, ಅದರಲ್ಲೂ ಇನ್ಸ್ಟಾಗ್ರಾಮ್​ ಬಳಸುವ ಪ್ರತಿಯೊಬ್ಬರು ಈ ವಿಡಿಯೋವನ್ನು ನೋಡಲೇಬೇಕು. ಜಿಲ್ಲೆಯಲ್ಲಿ ಆನ್‌ಲೈನ್ ಗೇಮಿಂಗ್ ವಂಚನೆಯೊಂದು ಬೆಳಕಿಗೆ ಬಂದಿದ್ದು, ಖಾಸಗಿ ಕಂಪನಿಯ ಉದ್ಯೋಗಿ ಬರೋಬ್ಬರಿ 30 ಲಕ್ಷ ರೂ ಕಳೆದುಕೊಂಡಿದ್ದಾರೆ. ಇನ್ಸ್ಟಾಗ್ರಾಮ್​​​ ​ರೀಲ್ಸ್‌ ವೀಕ್ಷಿಸುತ್ತಿರುವಾಗ ಬಂದ ಯಾವುದೋ ಲಿಂಕ್ ಅನ್ನು ಕ್ಲಿಕ್ ಮಾಡಿದ್ದಾರೆ. ಆ ಲಿಂಕ್ ಅವರನ್ನು ಆನ್‌ಲೈನ್ ಗೇಮಿಂಗ್ ಪ್ಲಾಟ್‌ಫಾರ್ಮ್‌ಗೆ ಕರೆದೊಯ್ದಿದ್ದು, ಹಣ ಹೂಡಿಕೆ ಮಾಡುವಂತೆ ಪ್ರೇರೇಪಿಸಿದೆ. ಪ್ರಾರಂಭದಲ್ಲಿ ಕಡಿಮೆ ಮೊತ್ತ ಹೂಡಿಕೆ ಮಾಡಿದವರು, ಕ್ರಮೇಣ 30 ಲಕ್ಷ ರೂ ಹೂಡಿಕೆ ಮಾಡಿ ಕಳೆದುಕೊಂಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

 

Source link

ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಭಾರೀ ಆಕ್ರೋಶ

ಮುಂಬೈ, ಡಿಸೆಂಬರ್ 22: ಮಹಾರಾಷ್ಟ್ರದ ಬಿಜೆಪಿ (BJP) ಶಾಸಕರೊಬ್ಬರು ಆಟೋ ಚಾಲಕನಿಗೆ ಕಪಾಳಮೋಕ್ಷ ಮಾಡಿದ್ದಾರೆ. ಟ್ರಾಫಿಕ್ ನಿಯಮ ಉಲ್ಲಂಘಿಸಿ, ಒನ್​​ವೇಯಲ್ಲಿ ಬರುತ್ತಿದ್ದ ಆಟೋ ಚಾಲಕನನ್ನು ಹಿಡಿದು ನಿಲ್ಲಿಸಿದ ಶಾಸಕ ಆತನ ಕೆನ್ನೆಗೆ ಹೊಡೆದಿದ್ದಾರೆ. ಈ ವಿಡಿಯೋ ತುಣುಕು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಇದರೊಂದಿಗೆ, ಶಾಸಕರ ವರ್ತನೆಯ ಬಗ್ಗೆ ಟೀಕೆಗಳು ವ್ಯಕ್ತವಾಗುತ್ತಿವೆ.

ಮಹಾರಾಷ್ಟ್ರದ ಮುಂಬೈನ ಘಾಟ್ಕೋಪರ್ ಪ್ರದೇಶದಲ್ಲಿ ಉಂಟಾಗಿರುವ ಟ್ರಾಫಿಕ್ ಸಮಸ್ಯೆ ವಿರೋಧಿಸಿ ಬಿಜೆಪಿ ಶಾಸಕ ಪರಾಗ್ ಶಾ ಭಾನುವಾರ ಸ್ಥಳೀಯರೊಂದಿಗೆ ಪ್ರತಿಭಟನೆ ನಡೆಸಿದರು. ಈ ವೇಳೆ ಶಾಸಕ ಪರಾಗ್ ಶಾ ಒಬ್ಬ ಆಟೋ ಚಾಲಕ ಸಂಚಾರ ನಿಯಮ ಉಲ್ಲಂಘಿಸುತ್ತಿರುವುದನ್ನು ಗಮನಿಸಿದರು. ಇದು ಅವರನ್ನು ಕೆರಳಿಸಿತು. ಆತನ ಬಳಿ ಹೋದ ಅವರು ಎಲ್ಲರೂ ನೋಡುತ್ತಿರುವಾಗಲೇ ಆಟೋ ಚಾಲಕನ ಕೆನ್ನೆಗೆ ಬಾರಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಯೋಧ್ಯೆಗೆ ಹೊರಟ ಮೈಸೂರಿನ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ, ಕೋಚ್ ಹೇಗಿದೆ ನೋಡಿ – Kannada News | Railway Department arrangements Special compartment to Mysuru Ganapathi Sachidananda swamiji for Traveling To ayodhya

ಮೈಸೂರು, (ಡಿಸೆಂಬರ್ 22): ಇದೇ ಡಿಸೆಂಬರ್ 24 ರಿಂದ 28ರವರೆಗೆ ಅಯೋಧ್ಯೆಯಲ್ಲಿ ನೂತನ ಗಣಪತಿ ಸಚ್ಚಿದಾನಂದ ಆಶ್ರಮ ಲೋಕಾರ್ಪಣೆಯಾಗಲಿದೆ. ಹೀಗಾಗಿ ಗಣಪತಿ ಸಚ್ಚಿದಾನಂದ ಶ್ರೀ‌ಗಳು, ಮೈಸೂರಿನಿಂದ 1 ಸಾವಿರ ಜನರನ್ನು ಉಚಿತವಾಗಿ ಅಯೋಧ್ಯೆಗೆ ಕರೆದುಕೊಂಡು ಹೋಗುತ್ತಿದ್ದಾರೆ. ಒಂದು ಸಾವಿರ ಜನರ ಜತೆಗೆ ಶ್ರೀಗಳು ಸಹ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಇದೇ ಮೊದಲ ಬಾರಿಗೆ ಶ್ರೀಗಳು ಮೂರು ದಿನ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಹೀಗಾಗಿ ರೈಲ್ವೆ ಇಲಾಖೆಯು ಶ್ರೀಗಳ ಬೋಗಿಯನ್ನು ವಿಶೇಷವಾಗಿ ಸಿದ್ದಗೊಳಸಿದೆ. ಕೂರಲು ಸೋಫಾ, ಮಲಗಲು ಬೆಡ್, ಎಸಿ ಸೇರಿ ಸ್ನಾನಗೃಹ ವ್ಯವಸ್ಥೆ ಕಲ್ಪಿಸಿದೆ. ಹಾಗಾದ್ರೆ, ಶ್ರೀಗಳು ಇರುವ ಬೋಗಿಯಲ್ಲಿ ಏನೆಲ್ಲಾ ಸೌಲಭ್ಯ ಒದಗಿಸಲಾಗಿದೆ ಎನ್ನುವುದನ್ನು ನೋಡಿ.

Source link

ಅಜ್ಜಿಯ ಕೊಲೆ ರಹಸ್ಯ; ನಾಯಿಗಳಿಂದ ಪತ್ತೆಯಾಯ್ತು ಮೊಮ್ಮಗನ ಕ್ರೌರ್ಯ – Kannada News | Andhra Pradesh Man Kills his Grandmother for Gold Dog Squad solved the Murder Case

ವಿಜಯನಗರ, ಡಿಸೆಂಬರ್ 22: ಆಂಧ್ರದ ವಿಜಯನಗರ ಜಿಲ್ಲೆಯಲ್ಲಿ ಚಿನ್ನಕ್ಕಾಗಿ ಅಜ್ಜಿಯನ್ನೇ ಕೊಂದ ಮೊಮ್ಮಗನ ಕ್ರೌರ್ಯ ಬೆಳಕಿಗೆ ಬಂದಿದೆ. ಭೋಗಾಪುರಂ ಮಂಡಲದ ಮುಡಸಲಪೇಟೆಯಲ್ಲಿ ವೃದ್ಧ ಮಹಿಳೆಯ ಕೊಲೆ (Murder) ಪ್ರಕರಣವನ್ನು ಭೇದಿಸಿರುವ ಪೊಲೀಸರು, ಆರೋಪಿಯಾದ ಆಕೆಯ ಮೊಮ್ಮಗನನ್ನು ಬಂಧಿಸಿದ್ದಾರೆ. ಶ್ವಾನ ದಳದ ಸಾಕ್ಷ್ಯಾಧಾರಗಳಿಂದ ಅನುಮಾನ ಬಲಗೊಂಡಿದ್ದು, ತನಿಖೆಯ ಸಮಯದಲ್ಲಿ ಕೊಲೆಯ ಬಗ್ಗೆ ಸತ್ಯ ಬಯಲಾಗಿದೆ. ಅಜ್ಜಿಯಿಂದ ಕದ್ದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಆ ಯುವಕನಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಡಿಸೆಂಬರ್ 12ರಂದು ವಿಜಯನಗರ ಜಿಲ್ಲೆಯ ಭೋಗಪುರಂ ಮಂಡಲದ ಮುಡಸಲಪೇಟೆ ವಿಮಾನ ನಿಲ್ದಾಣ ಕಾಲೋನಿಯಲ್ಲಿ ನಡೆದ ವೃದ್ಧ ಮಹಿಳೆಯ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಚಿನ್ನಕ್ಕಾಗಿ ಅಜ್ಜಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದ ಮೊಮ್ಮಗನನ್ನು ಬಂಧಿಸಲಾಗಿದ್ದು, ಕದ್ದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಡಿಸೆಂಬರ್ 12ರಂದು ಮುಡಸಲಪೇಟೆ ಗ್ರಾಮದ ಮುಡಸಲ ಅಪ್ಪಯ್ಯಮ್ಮ (70) ಎಂಬ ವೃದ್ಧ ಮಹಿಳೆಯನ್ನು ಕೊಲೆ ಮಾಡಲಾಗಿತ್ತು. ಮೃತ ಮಹಿಳೆಯ ಸೊಸೆ ಮುಡಸಲ ಲಕ್ಷ್ಮಿ ಡಿಸೆಂಬರ್ 13ರಂದು ಭೋಗಪುರಂ ಪೊಲೀಸ್ ಠಾಣೆಯಲ್ಲಿ ಅಪರಿಚಿತ ವ್ಯಕ್ತಿಗಳು ತಮ್ಮ ಮನೆಗೆ ನುಗ್ಗಿ ಕೊಲೆ ಮಾಡಿ ಚಿನ್ನದ ಕಿವಿಯೋಲೆಗಳು, ಕಿವಿಯೋಲೆಗಳು, ಉಂಗುರಗಳು, ಮೂಗುತಿ ಮತ್ತು ಬೆಳ್ಳಿ ಬಳೆಗಳನ್ನು ಕದ್ದಿದ್ದಾರೆ ಎಂದು ದೂರು ದಾಖಲಿಸಿದ್ದರು.

ಇದನ್ನೂ ಓದಿ: ವಿವಾಹಿತ ಮಹಿಳೆಯ ಜೊತೆ ಅಕ್ರಮ ಸಂಬಂಧ: ಬೆಂಗಳೂರಿನಲ್ಲಿ ಯುವಕನ ಭೀಕರ ಕೊಲೆ

ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಪ್ರಕರಣದ ತನಿಖೆಯ ಭಾಗವಾಗಿ ಶ್ವಾನ ದಳ ತಂಡ ಆ ಘಟನೆಯ ಸ್ಥಳವನ್ನು ಪರಿಶೀಲಿಸಿದವು. ಅಪರಾಧ ಸ್ಥಳ ತನಿಖೆಯ ಸಮಯದಲ್ಲಿ, ಶ್ವಾನ ದಳವು ಮೃತರ ಮೊಮ್ಮಗ ಸುತ್ತ ಪದೇ ಪದೇ ಸುತ್ತುವರೆದಿದ್ದು, ಇದರಿಂದ ಪೊಲೀಸರಿಗೆ ಅವನ ಮೇಲೆ ಅನುಮಾನ ಹೆಚ್ಚಾಗಿತ್ತು.

ಕೊಲೆ ನಡೆದು ಕೆಲವು ದಿನಗಳು ಕಳೆದ ನಂತರ ಯಾರಿಗೂ ಅನುಮಾನ ಬರದಂತೆ ಕದ್ದ ಚಿನ್ನವನ್ನು ಮಾರಾಟ ಮಾಡುವ ಉದ್ದೇಶದಿಂದ ಅದನ್ನು ತೆಗೆದುಕೊಂಡು ಹೋಗುತ್ತಿದ್ದಾಗ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಅವನಿಂದ 18.250 ಗ್ರಾಂ ಚಿನ್ನದ ಆಭರಣಗಳು ಮತ್ತು 106 ಗ್ರಾಂ ಬೆಳ್ಳಿಯ ಗಟ್ಟಿಗಳನ್ನು ವಶಪಡಿಸಿಕೊಂಡಿದ್ದಾರೆ. ತನಿಖೆಯ ಸಮಯದಲ್ಲಿ ಆರೋಪಿಯು ತಪ್ಪೊಪ್ಪಿಕೊಂಡು, ನಡೆದ ಸಂಗತಿಗಳನ್ನು ಬಹಿರಂಗಪಡಿಸಿದ್ದಾನೆ.

ಇದನ್ನೂ ಓದಿ: ಮಗುವನ್ನು ಕಸದ ಬುಟ್ಟಿಗೆ ಹಾಕಿ, ನಾನು ಹಾಲು ಕುಡಿಸೋದಿಲ್ಲ; ಒಂದೇಸಮನೆ ಹಠ ಹಿಡಿದ ಬಾಣಂತಿ

ಆ ವೃದ್ಧೆ ತನ್ನ ಮಗಳು ಮತ್ತು ಕಿರಿಯ ಮಗನಿಗೆ ಆರ್ಥಿಕವಾಗಿ ಸಹಾಯ ಮಾಡುತ್ತಿದ್ದಳು. ಆದರೆ ಹಿರಿಯ ಮಗನ ಕುಟುಂಬಕ್ಕೆ ಯಾವುದೇ ಹಣವನ್ನು ನೀಡಿರಲಿಲ್ಲ. ಇದರಿಂದ ಆ ಹಿರಿಯ ಮಗನ ಮಗ ಅಂದರೆ ಆಕೆಯ ಮೊಮ್ಮಗ ತನ್ನ ಅಜ್ಜಿಯೊಂದಿಗೆ ಜಗಳವಾಡುತ್ತಿದ್ದ. ಡಿಸೆಂಬರ್ 12ರಂದು, ಕುಡಿದ ಅಮಲಿನಲ್ಲಿದ್ದ ಆತ ಬೈಕ್ ಫೈನಾನ್ಸ್‌ಗೆ ಹಣ ಕೇಳಿದಾಗ, ಅವನ ಅಜ್ಜಿ ಕೊಡಲಿಲ್ಲ. ಇದರಿಂದ ಕೋಪಗೊಂಡ ಆತ ಆಕೆಯ ಮುಖಕ್ಕೆ ಹೊಡೆದು ಕೊಲೆ ಮಾಡಿದ್ದ.

ಕೊಲೆಯ ನಂತರ, ಅದು ದರೋಡೆಯೆಂದು ಎಲ್ಲರನ್ನೂ ನಂಬಿಸುವ ಸಲುವಾಗಿ ಆಕೆಯ ದೇಹದ ಮೇಲಿದ್ದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ತೆಗೆದುಕೊಂಡು, ಅಪರಿಚಿತ ವ್ಯಕ್ತಿಗಳಿಂದ ಕೊಲೆಯಾಗಿರುವಂತೆ ಕಾಣುವಂತೆ ಮಾಡಲು ಆ ಶವವನ್ನು ಮನೆಯಿಂದ ಹೊರಗೆ ತೆಗೆದುಕೊಂಡು ಕಾಲುವೆ ಬಳಿ ಎಸೆದಿದ್ದ. ನಂತರ, ಏನೂ ತಿಳಿಯದವನಂತೆ ನಟಿಸಿ, ಎಲ್ಲರಿಗೂ ವಿಷಯ ಗೊತ್ತಾದ ನಂತರ ಶವದ ಬಳಿ ಸ್ವಲ್ಪ ಸಮಯದವರೆಗೆ ಎಲ್ಲರೊಂದಿಗೆ ಅಳುತ್ತಾ ಕುಳಿತಿದ್ದ. ಆದರೆ, ಶ್ವಾನ ದಳದ ಪರೀಕ್ಷೆಯ ನಂತರ ನಾಯಿಗಳು ಆತನ ಸುತ್ತಲೇ ಸುತ್ತುತ್ತಿದ್ದವು. ಅನುಮಾನ ಬಂದ ನಂತರ, ಪೊಲೀಸರು ಆತನನ್ನು ಬಂಧಿಸಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅದೇನ್ ಧೈರ್ಯ ಗುರು! ಜಡ್ಜ್​​​ ಸಹಿ ನಕಲು ಮಾಡಿ ಕೋಟ್ಯಂತರ ರೂ ಜಮೀನು ಗುಳುಂ – Kannada News | Anekal Land Fraud: Judge Signature Forged to Grab Property

ಆನೇಕಲ್​, ಡಿಸೆಂಬರ್​ 22: ನಕಲಿ ದಾಖಲೆ ಸೃಷ್ಟಿಸಿ ಜಮೀನು (land) ಕಬಳಿಕೆ ಮಾಡುವವರನ್ನು ನೋಡಿದ್ದೇವೆ. ಆದರೆ ಇಲ್ಲಿ ಒಂದು ಹೆಜ್ಜೆ ಮುಂದೆ ಹೋದ ಆಸಾಮಿಗಳು ನ್ಯಾಯಾಧೀಶರ ಸಹಿಯನ್ನೇ ನಕಲು (Forged) ಮಾಡಿ ವಂಚನೆ ಮಾಡಿದ್ದಾರೆ. ಪತಿಯನ್ನ ಕಳೆದುಕೊಂಡಿದ್ದ ಮಹಿಳೆಯ ಅಮಾಯಕತನವನ್ನೇ ದುರಪಯೋಗ ಪಡಿಸಿಕೊಂಡ ಭೂಗಳ್ಳರು ಕೋಟ್ಯಂತರ ರೂ ಬೆಲೆಬಾಳುವ ಜಾಗವನ್ನ ಗುಳುಂ ಮಾಡಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ.

ನಕಲಿ ಸಹಿ ಸೃಷ್ಟಿಸಿ ಜಾಗ ಕಬಳಿಕೆ 

ಸಿಲಿಕಾನ್ ಸಿಟಿ ಬೆಂಗಳೂರು ನಗರ ಬೆಳೆಯುತ್ತ ಹೋದಂತೆ ಒಂದೊಂದು ಅಡಿಗೂ ಕೂಡ ಚಿನ್ನದ ಬೆಲೆ ಬಂದಿದೆ‌. ಇದನ್ನೇ ಬಂಡವಾಳ ಮಾಡಿಕೊಂಡ ಭೂಗಳ್ಳರು ಜಮೀನು ಕಬಳಿಸುವುದಕ್ಕೆ ಮುಂದಾಗ್ತಾರೆ. ಅದೇ ರೀತಿ ಆನೇಕಲ್ ತಾಲ್ಲೂಕಿನ ಚಿಂತಲಮಡಿವಾಳ ಗ್ರಾಮದ ಸರ್ವೆ ನಂಬರ್ 43/2 ರ 28.8 ಗುಂಟೆ ಜಮೀನಿನ ಪೈಕಿ 14 ಗುಂಟೆ ಜಾಗವನ್ನ ನಕಲಿ ಸಹಿ ಮತ್ತು ನಕಲಿ ದಾಖಲೆಗಳನ್ನ ಸೃಷ್ಟಿಸಿ ಕಬಳಿಕೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: 150 ಕೋಟಿ ರೂ ಮೌಲ್ಯದ ಸರ್ಕಾರಿ ಭೂಮಿ ದಾಖಲೆ ಫೋರ್ಜರಿ: ಅಧಿಕಾರಿಗಳ ವಿರುದ್ಧ FIR ದಾಖಲಾದ್ರೂ ಕ್ರಮವಿಲ್ಲ

ಮೃತ ವೆಂಕಟಸ್ವಾಮಿ ಎಂಬುವವವರ ಹೆಸರಿನಲ್ಲಿದ್ದ ಜಮೀನನ್ನ ಪತ್ನಿ ಜ್ಯೋತಮ್ಮರ ಹೆಸರಿಗೆ ಮಾಡಿಸಿ ಕೊಡುತ್ತೇವೆಂದು ನಂಬಿಸಿದ ಸಂಬಂಧಿ ಮುನಿರಾಜರಾಘವ ಅಲಿಯಾಸ್​ ಮುರಾರಿ ಮುನೇಶ್ವರ್ ರಾವ್ ಅ್ಯಂಡ್​ ಗ್ಯಾಂಗ್ ವಂಚಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ನ್ಯಾಯಾಧೀಶರ 3 ಸೈನ್, ಜೊತೆಗೆ ಜಮೀನು ಮಾಲೀಕ ಜ್ಯೋತಮ್ಮ, ಆಕೆಯ ಮಕ್ಕಳ ಒಟ್ಟು 16 ಸೈನ್​ಗಳನ್ನ ನಕಲು ಮಾಡಿ ಕೋರ್ಟ್ ಡಿಕ್ರಿ ಬಳಸಿ ಅತ್ತಿಬೆಲೆಯಲ್ಲಿ ರಿಜಿಸ್ಟರ್ ಮಾಡಿ ತದನಂತರ ಜಮೀಮಿನಿನ ಖಾತೆ ಮಾಡಿಸಿಕೊಂಡಿದ್ದಾರೆ. ಬಳಿಕ ಪಡುಗೋಲಸ ಶಿವಪ್ರಸಾದ್ ಎಂಬಾತನಿಕೆ ಜಮೀನು ಮಾರಾಟ ಮಾಡಲಾಗಿದೆ. ಈ ವಿಚಾರ ಜ್ಯೋತಮ್ಮ ಕುಟುಂಬಕ್ಕೆ ತಿಳಿದ ಕೂಡಲೇ ಆನೇಕಲ್ ಪೊಲೀಸ್ ಠಾಣೆಯಲ್ಲಿ ಮುನಿರಾಜ್ ರಾಘವ, ಆಂಜಿನಪ್ಪ, ಅರುಣಾಕ್ಷಿ, ಪವಿತ್ರ, ಪೂಜಶ್ರೀ, ಸುಶ್ಮಿತ ಈ ಆರು ಜನರ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.

ಇನ್ನು ಜ್ಯೋತಮ್ಮ ಸಂಬಂಧಿಯೇ ಆದ ಮುನಿರಾಜರಾಘವ ತಾನು ಮಂಗಳೂರಿನ ಇಸ್ಕಾನ್ ಟೆಂಪಲ್​ನಲ್ಲಿ ದೀಕ್ಷೆ ಪಡೆದಿದ್ದೇನೆ. ನಾನೊಬ್ಬ ದೇವ ಮಾನವ ಎಂದೆಲ್ಲಾ ಹೇಳಿ ನಿಮ್ಮ ಪತಿಯ ಹೆಸರಿನಲ್ಲಿರುವ  ಜಮೀನನ್ನ ನಿಮ್ಮ ಹೆಸರಿಗೆ ಮಾಡಿಕೊಡುತ್ತೇನೆಂದು ವಂಚಿಸಿದ್ದಾರೆ.

ಕಣ್ಣೀರು ಹಾಕಿ ಗೋಳಾಡಿದ ಮಹಿಳೆ

ಜಮೀನಿನಲ್ಲಿದ್ದ ಜ್ಯೋತಮ್ಮ ಪತಿ ವೆಂಕಟಸ್ವಾಮಿ ಸೇರಿದಂತೆ ಪೂರ್ವಿಕರ ಸಮಾಧಿಗಳನ್ನ ಜೆಸಿಬಿಗಳ ಮೂಲಕ ಧ್ವಂಸ ಮಾಡಲಾಗಿದೆ. ಜಮೀನು ಕಬಳಿಸಲು ನ್ಯಾಯಾಧೀಶರ ಸಹಿಯನ್ನೇ ನಕಲು ಮಾಡಿ ನ್ಯಾಯಾಂಗ ವಂಚನೆ ಎಸಗಲಾಗಿದೆ. ನಮ್ಮ ಜಮೀನು ನಮಗೆ ಕೊಡಿಸಿ, ಆ ಜಮೀನಿನಲ್ಲಿ ನನ್ನ ಪತಿಯ ಸಮಾಧಿ ಇದೆ ಎಂದು ಜ್ಯೋತಮ್ಮ ಕಣ್ಣೀರು ಹಾಕಿ ಗೋಳಾಡಿದ್ದಾರೆ. ವಂಚನೆ ಎಸಗಿದ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಅನ್ನಭಾಗ್ಯ ಅಕ್ಕಿ ಕಾಳಸಂತೆಯಲ್ಲಿ ಮಾರಾಟ: ಕಾಂಗ್ರೆಸ್ ಮುಖಂಡನ ವಿರುದ್ಧ ಪ್ರಕರಣ ದಾಖಲು

ಇನ್ನು ನಕಲಿ ದಾಖಲೆ ಸೃಷ್ಟಿಸಿ ಬೆಲೆ ಬಾಳುವ ಜಮೀನನ್ನ ಲಪಟಾಯಿಸುವ ಭೂಗಳ್ಳರು ಹೆಚ್ಚಾಗುತ್ತಿದ್ದಾರೆ. ಅದೇ ರೀತಿ ಆನೇಕಲ್ ತಾಲೂಕಿನಲ್ಲಿ ನ್ಯಾಯಾಧೀಶರ ಸಹಿಯನ್ನೇ ನಕಲು ಮಾಡಿ ವಂಚನೆ ಮಾಡಿರುವ ಗಂಭೀರ ಆರೋಪ ಕೇಳಿಬಂದಿದೆ‌. ಜಮೀನು ಕಳೆದುಕೊಂಡ ಕುಟುಂಬ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದ್ದು, ವಂಚನೆ ಎಸಗಿದ ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version