ಬ್ಯಾಂಕಾಕ್: ಸೌಂದರ್ಯ ಸ್ಪರ್ಧೆ ಎಂದರೆ ಅಲ್ಲಿ ಕೇವಲ ರೂಪವಷ್ಟೇ ಅಲ್ಲ, ಸಮಯಪ್ರಜ್ಞೆ ಮತ್ತು ಆತ್ಮವಿಶ್ವಾಸವೂ ಅತಿ ಮುಖ್ಯ. ಆದರೆ ಥೈಲ್ಯಾಂಡ್ನಲ್ಲಿ ಇತ್ತೀಚೆಗೆ ನಡೆದ ‘ಮಿಸ್ ಗ್ರ್ಯಾಂಡ್ ಥೈಲ್ಯಾಂಡ್’ ಸೌಂದರ್ಯ ಸ್ಪರ್ಧೆಯ ನೇರ ಪ್ರಸಾರ (Live Round) ನಡೆಯುತ್ತಿದ್ದಾಗಲೇ ಸುಂದರಿಯೊಬ್ಬಳ ಹಲ್ಲುಗಳು ಕಳಚಿ ಬಿದ್ದ ಅಪರೂಪದ ಮತ್ತು ಮುಜುಗರದ ಪ್ರಸಂಗವೊಂದು ಜರುಗಿದೆ.
ಘಟನೆಯ ವಿವರ ಹೀಗಿದೆ, ಕಮಲವಾನ್ ಚನಾಗೋ ಎಂಬ ಸುಂದರಿ ತೀರ್ಪುಗಾರರ ಮುಂದೆ ನಿಂತು, ಆತ್ಮವಿಶ್ವಾಸದಿಂದ ಮಾತನಾಡಲು ಬಾಯಿ ತೆರೆದಿದ್ದಾರೆ. ಆದರೆ ಮಾತನಾಡಲು ಶುರುಮಾಡುತ್ತಿದ್ದಂತೆಯೇ ಆಕೆಯ ಬಾಯಲ್ಲಿದ್ದ ಹಲ್ಲುಗಳು ವೇದಿಕೆಯ ಮೇಲೆ ಉದುರಿ ಬಿದ್ದಿವೆ. ಈ ದೃಶ್ಯವನ್ನು ಕಂಡ ಪ್ರೇಕ್ಷಕರು ಮತ್ತು ತೀರ್ಪುಗಾರರು ಒಂದು ಕ್ಷಣ ಸ್ತಬ್ಧರಾಗಿದ್ದಾರೆ. ಇಪ್ಪತ್ತರ ಹರೆಯದ ಈ ಸುಂದರಿ ಆಗಲೇ ಹಲ್ಲುಸೆಟ್ಟು (Dentures) ಹಾಕಿಸಿಕೊಂಡಿದ್ದಾಳೆಯೇ ಎಂದು ಎಲ್ಲರೂ ಆಶ್ಚರ್ಯಚಕಿತರಾಗಿದ್ದಾರೆ. ಆದರೆ ಅಸಲಿ ವಿಷಯವೇನೆಂದರೆ, ಸೌಂದರ್ಯ ಹೆಚ್ಚಿಸಿಕೊಳ್ಳಲು ಅವರು ತಮ್ಮ ಹಲ್ಲುಗಳಿಗೆ ‘ವೆನಿಯರ್ಸ್’ (Veneers) ಎಂಬ ಕೃತಕ ಹಲ್ಲಿನ ಕವಚವನ್ನು ಅಳವಡಿಸಿಕೊಂಡಿದ್ದರು. ಸರಿಯಾಗಿ ಫಿಕ್ಸ್ ಆಗದ ಕಾರಣ, ಆಕೆ ಮಾತನಾಡಲು ಹೋದಾಗ ಆ ಕವಚಗಳು ಕೆಳಗೆ ಬಿದ್ದಿದೆ.
ಪ್ರತಿ ಐಪಿಎಲ್ನಂತೆ ಈ ಐಪಿಎಲ್ನಲ್ಲೂ ಆಟಗಾರರ ಇಂಜುರಿ ಸಮಸ್ಯೆ ಎಲ್ಲಾ ತಂಡಗಳನ್ನು ಕಾಡಲಾರಂಭಿಸಿದೆ. ಇದಕ್ಕೆ ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಕೂಡ ಹೊರತಾಗಿಲ್ಲ. ಅದರಲ್ಲೂ ತಂಡದ ಜೀವಾಳ ಎನಿಸಿಕೊಂಡಿರುವ ಮಹೇಂದ್ರ ಸಿಂಗ್ ಧೋನಿ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಎರಡು ವಾರ ಕ್ರಿಕೆಟ್ನಿಂದ ದೂರ ಉಳಿಯಲಿದ್ದಾರೆ.
ಇದು ಸಿಎಸ್ಕೆ ತಂಡಕ್ಕೆ ದೊಡ್ಡ ಆಘಾತ ಎಂದರೆ ತಪ್ಪಾಗಲಾರದು. ಏಕೆಂದರೆ ತಂಡದಲ್ಲಿ ಯುವ ಆಟಗಾರರೇ ಹೆಚ್ಚಿದ್ದು, ಅವರಿಗೆ ಧೋನಿಯ ಉಪಸ್ಥಿತಿ ಅಗತ್ಯವಾಗಿತ್ತು. ಆದರೆ ಧೋನಿ ಗಾಯಕ್ಕೆ ತುತ್ತಾಗಿದ್ದು, ಎರಡು ವಾರ ಆಟದಿಂದ ದೂರ ಉಳಿಯಲಿದ್ದಾರೆ. ಧೋನಿಯ ಅಲಭ್ಯತೆಯೊಂದಿಗೆ ಸಿಎಸ್ಕೆ ಕೂಡ ಕಳೆದ 16 ವರ್ಷಗಳ ಐಪಿಎಲ್ ಪಯಣದಲ್ಲಿ ಈ ಇಬ್ಬರು ದಿಗ್ಗಜರಿಲ್ಲದೆ ತಂಡವನ್ನು ಕಣಕ್ಕಿಳಿಸಬೇಕಾಗಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮೊದಲ ಪಂದ್ಯ ಮಾರ್ಚ್ 30 ರಂದು ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆಯಲಿದೆ. ಆದಾಗ್ಯೂ, ಮಾಜಿ ಚೆನ್ನೈ ನಾಯಕ ಮತ್ತು ಅಭಿಮಾನಿಗಳ ನೆಚ್ಚಿನ ಧೋನಿ ಈ ಪಂದ್ಯದಲ್ಲಿ ಆಡಲು ಸಾಧ್ಯವಾಗುವುದಿಲ್ಲ. ಈ ಪಂದ್ಯ ಮಾತ್ರವಲ್ಲದೆ, ಧೋನಿ ತಂಡದ ಮೊದಲ ಮೂರು ಪಂದ್ಯಗಳಲ್ಲಿ ಆಡಲು ಸಾಧ್ಯವಾಗುವುದಿಲ್ಲ.
ಧೋನಿಯ ಈ ಗಾಯ ಅಭಿಮಾನಿಗಳನ್ನು ನಿರಾಶೆಗೊಳಿಸಿದರೆ, ಇತ್ತ ಐಪಿಎಲ್ನಲ್ಲಿ ಇದುವರೆಗೆ ಸಂಭವಿಸದ ಘಟನೆಯೊಂದು ಸಂಭವಿಸಲಿದೆ. ವಾಸ್ತವವಾಗಿ, ಚೆನ್ನೈ ಸೂಪರ್ ಕಿಂಗ್ಸ್ ಗುವಾಹಟಿಯಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಮೈದಾನಕ್ಕಿಳಿದಾಗ, ಫ್ರಾಂಚೈಸಿಯ ಇತಿಹಾಸದಲ್ಲಿ ಧೋನಿ ಅಥವಾ ಸುರೇಶ್ ರೈನಾ ಇಬ್ಬರೂ ಸಿಎಸ್ಕೆ ಪ್ಲೇಯಿಂಗ್ XI ನಲ್ಲಿ ಇರುವುದಿಲ್ಲ. ಕಳೆದ 16 ಸೀಸನ್ಗಳಲ್ಲಿ ಇದು ಹಿಂದೆಂದೂ ಸಂಭವಿಸಿರಲಿಲ್ಲ.
ರೈನಾ 2021 ರವರೆಗೆ ಸಿಎಸ್ಕೆ ತಂಡದ ಭಾಗವಾಗಿದ್ದರು, ಮತ್ತು ಈ ಅವಧಿಯಲ್ಲಿ, ಧೋನಿ ಆಡದ ಕೆಲವೇ ಪಂದ್ಯಗಳಲ್ಲಿ ಅವರು ತಂಡದ ನಾಯಕತ್ವ ವಹಿಸಿದ್ದರು. ರೈನಾ ನಿರ್ಗಮನದ ನಂತರ, ಕಳೆದ ನಾಲ್ಕು ಆವೃತ್ತಿಗಳಲ್ಲಿ ಧೋನಿ ತಂಡದ ಪರ ಪ್ರತಿಯೊಂದು ಪಂದ್ಯವನ್ನು ಆಡಿದ್ದರು.
ಒಟ್ಟಾರೆಯಾಗಿ ಸಿಎಸ್ಕೆ ಕಳೆದ 16 ಆವೃತ್ತಿಗಳಲ್ಲಿ 253 ಪಂದ್ಯಗಳನ್ನು ಆಡಿದೆ. ಈ ಪ್ರತಿಯೊಂದು ಪಂದ್ಯಗಳಲ್ಲಿ, ಧೋನಿ ಅಥವಾ ರೈನಾ ತಂಡದ ಭಾಗವಾಗಿದ್ದರು. ಆದರೀಗ ಈ ಇಬ್ಬರು ಇಲ್ಲದ ತಂಡವನ್ನು ಸಿಎಸ್ಕೆ ಕಣಕ್ಕಿಳಿಸಬೇಕಾಗಿದೆ. ಹೀಗಾಗಿ, ಇದು ಐದು ಬಾರಿ ಚಾಂಪಿಯನ್ ಆಗಿರುವ ತಂಡಕ್ಕೆ ಮುಂಬರುವ ಬದಲಾವಣೆಯ ಸಂಕೇತವಾಗಿದೆ.
ಬೆಂಗಳೂರಿನ, ಮಾ.28: ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ಸಿಬಿ ಮತ್ತು ಸನ್ರೈಸರ್ಸ್ ಹೈದರಾಬಾದ್ ನಡುವಿನ ಐಪಿಎಲ್ ಪಂದ್ಯಕ್ಕೆ ಭರಪೂರ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಕ್ರಿಕೆಟ್ ಪ್ರೇಕ್ಷಕರು ಮತ್ತು ಆರ್ಸಿಬಿ ಅಭಿಮಾನಿಗಳಲ್ಲಿ ಹೆಚ್ಚಿನ ಉತ್ಸಾಹ ಕಂಡುಬರುತ್ತಿದ್ದು, ಪಂದ್ಯ ಆರಂಭಕ್ಕೂ ಗಂಟೆಗಳ ಮುಂಚೆಯೇ ಕ್ರೀಡಾಂಗಣದತ್ತ ಆಗಮಿಸಿದ್ದಾರೆ. ಈ ಸಂದರ್ಭದಲ್ಲಿ ಭದ್ರತಾ ದೃಷ್ಟಿಯಿಂದ ಹಲವಾರು ಹೊಸ ವ್ಯವಸ್ಥೆಗಳನ್ನು ಜಾರಿಗೆ ತರಲಾಗಿದೆ. ಪಂದ್ಯಕ್ಕೆ ಒಟ್ಟು 2000ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಕ್ರೀಡಾಂಗಣದ ಒಳಗೆ ಹಾಗೂ ಹೊರಗೆ ನಿಯೋಜಿಸಲಾಗಿದೆ. ಐದು ಡಿಸಿಪಿಗಳು ಮತ್ತು ಜಂಟಿ ಸಿಪಿ ನೇತೃತ್ವದಲ್ಲಿ ಇಡೀ ಬಂದೋಬಸ್ತ್ಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಇದು ಕ್ರೀಡಾಂಗಣದಲ್ಲಿ ಸುವ್ಯವಸ್ಥೆ ಮತ್ತು ಜನಸಂದಣಿಯನ್ನು ನಿಯಂತ್ರಿಸಲು ಸಹಕಾರಿಯಾಗಿದೆ. ಪ್ರವೇಶ ದ್ವಾರಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. ಈ ಬಾರಿ ಕಬ್ಬನ್ ರೋಡ್ ಕಡೆಯಿಂದ ಗರಿಷ್ಠ ಗೇಟ್ಗಳನ್ನು ತೆರೆಯಲಾಗಿದ್ದು, ಕ್ವೀನ್ಸ್ ರೋಡ್ ಕಡೆಯಿಂದ ಸಾರ್ವಜನಿಕರ ಪ್ರವೇಶವನ್ನು ಬಹುತೇಕ ನಿಲ್ಲಿಸಲಾಗಿದೆ. ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಕಬ್ಬನ್ ರೋಡ್ ಮತ್ತು ಲಿಂಕ್ ರೋಡ್ ಬಳಸಿಕೊಂಡು ಕ್ರೀಡಾಂಗಣವನ್ನು ಪ್ರವೇಶಿಸುವಂತೆ ವ್ಯವಸ್ಥೆ ಮಾಡಲಾಗಿದೆ. ಜನದಟ್ಟಣೆ ತಪ್ಪಿಸಲು, ಹಿಂದಿನ ವರ್ಷಗಳಿಗಿಂತ ನಾಲ್ಕು ಗಂಟೆಗಳ ಮೊದಲೇ ಗೇಟ್ಗಳನ್ನು ತೆರೆಯಲಾಗುತ್ತಿದೆ. ಪ್ರತಿ ಗೇಟ್ನಲ್ಲಿ ಒಂದೇ ಸಮಯದಲ್ಲಿ ಐದರಿಂದ ಆರು ಜನರನ್ನು ಒಳಗೆ ಪ್ರವೇಶಿಸಲು ಅವಕಾಶ ಕಲ್ಪಿಸಲಾಗಿದೆ.
ಇದು ಫುಟ್ಪಾತ್ಗಳಲ್ಲಿ ಜನಸಂದಣಿಯಾಗುವುದನ್ನು ತಡೆಯಲು ಸಹಾಯ ಮಾಡುತ್ತದೆ. ಭದ್ರತಾ ಕ್ರಮಗಳ ಭಾಗವಾಗಿ, ಎಲ್ಲಾ ಗೇಟ್ಗಳಲ್ಲಿ ಪಿಎ (ಪಬ್ಲಿಕ್ ಅಡ್ರೆಸ್) ಸಿಸ್ಟಮ್ಗಳನ್ನು ಅಳವಡಿಸಲಾಗಿದೆ. ಇದರ ಮೂಲಕ ಜನರಿಗೆ ನಿರಂತರವಾಗಿ ಅಗತ್ಯ ಮಾಹಿತಿಯನ್ನು ನೀಡಲಾಗುತ್ತಿದೆ. ಅಲ್ಲದೆ, ಕಳೆದ ಒಂದು ವಾರದಿಂದ ಪೊಲೀಸ್ ಇಲಾಖೆ, ತಂಡದ ಆಡಳಿತ ಮಂಡಳಿ ಮತ್ತು ಕ್ರೀಡಾಂಗಣದ ವತಿಯಿಂದ ಸಾಮಾಜಿಕ ಮಾಧ್ಯಮಗಳ ಮೂಲಕವೂ ಮಹತ್ವದ ಮಾಹಿತಿಗಳನ್ನು ಹಂಚಿಕೊಳ್ಳಲಾಗುತ್ತಿದೆ. ಟಿಕೆಟ್ ಕುರಿತು ಪ್ರಮುಖ ಎಚ್ಚರಿಕೆಗಳನ್ನು ನೀಡಲಾಗಿದೆ. ಈ ವರ್ಷ ಯಾವುದೇ ರೀತಿಯ ಭೌತಿಕ ಟಿಕೆಟ್ಗಳ ಮಾರಾಟವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಕ್ರೀಡಾಂಗಣದ ಸುತ್ತಮುತ್ತ ಅಥವಾ ಅಧಿಕೃತವಲ್ಲದ ಮೂಲಗಳಿಂದ ಟಿಕೆಟ್ಗಳು ಲಭ್ಯವಿವೆ ಎಂಬ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುವ ಯಾವುದೇ ವದಂತಿಗಳನ್ನು ನಂಬದಂತೆ ಅಭಿಮಾನಿಗಳಿಗೆ ಸೂಚಿಸಲಾಗಿದೆ. ಟಿಕೆಟ್ಗಳು ಮುಗಿದು ಮೂರು ದಿನಗಳಾಗಿವೆ. ಅಧಿಕೃತ ಟಿಕೆಟಿಂಗ್ ಪ್ಲಾಟ್ಫಾರ್ಮ್ಗಳ ಮೂಲಕ ಮಾತ್ರ ಟಿಕೆಟ್ಗಳನ್ನು ಪಡೆಯಬೇಕು ಎಂದು ತಿಳಿಸಲಾಗಿದೆ. ಟಿಕೆಟ್ ಇಲ್ಲದ ಕ್ರಿಕೆಟ್ ಪ್ರೇಮಿಗಳು ಕ್ರೀಡಾಂಗಣದ ಬಳಿಗೆ ಬರದಂತೆ, ತಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಮನೆಯಲ್ಲೇ ಪಂದ್ಯವನ್ನು ವೀಕ್ಷಿಸುವಂತೆ ಮನವಿ ಮಾಡಲಾಗಿದೆ. ಇದರಿಂದ ವಂಚನೆಗೆ ಒಳಗಾಗುವುದು ತಪ್ಪುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೇಸಿಗೆಯಲ್ಲಿನ (summer) ಉರಿ ಬಿಸಲು, ಸೆಕೆಯ ಅಬ್ಬರಕ್ಕೆ ಜನ ಹೈರಾಣಾಗುತ್ತಿದ್ದಾರೆ. ಅನೇಕ ಜನರು ಬಿಸಿಲ ಬೇಗೆ ಹಾಗೂ ಸೆಕೆಯಿಂದ ತಪ್ಪಿಸಿಕೊಳ್ಳಲು ಮನೆಯೊಳಗೆ ಹಗಲು ರಾತ್ರಿ ಎಸಿ, ಕೂಲರ್ ಆನ್ ಮಾಡಿಯೇ ಇಟ್ಟು ಬಿಡುತ್ತಾರೆ. ಇದರಿಂದ ಭಾರೀ ವಿದ್ಯುತ್ ಖರ್ಚು ಆಗುತ್ತೆ ಜೊತೆಗೆ ಕರೆಂಟ್ ಬಿಲ್ ಕೂಡ ಜಾಸ್ತಿ ಬರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಕೆಲವೊಂದು ಸ್ಮಾರ್ಟ್ ಟಿಪ್ಸ್ಗಳನ್ನು ಪಾಲಿಸುವ ಮೂಲಕ ಎಸಿ, ಕೂಲರ್ ಇಲ್ಲದೆಯೂ ಈ ಸುಡು ಬೇಸಿಗೆಯಲ್ಲಿ ಮನೆಯನ್ನು ಕೂಲ್ ಆಗಿ ಇಟ್ಟುಕೊಳ್ಳಬಹುದು. ಎಸಿ ಇಲ್ಲದೆಯೂ ಮನೆಯನ್ನು ನೈಸರ್ಗಿಕವಾಗಿ ತಂಪಾಗಿರಿಸಿಕೊಳ್ಳುವುದು ಹೇಗೆ ಎಂಬ ಸರಳ ಸಲಹೆ ಇಲ್ಲಿದೆ.
ಎಸಿ, ಕೂಲರ್ ಇಲ್ಲದೆಯೂ ಮನೆಯನ್ನು ಕೂಲ್ ಆಗಿ ಇಡುವುದೇಗೆ?
ಸರಿಯಾದ ಸಮಯದಲ್ಲಿ ಕಿಟಕಿ ತೆರೆದಿಡಿ: ಹೊರಗಿನಿಂದ ಚೆನ್ನಾಗಿ ಗಾಳಿ ಬರುತ್ತದೆ ಎಂಬ ಕಾರಣಕ್ಕೆ ಹೆಚ್ಚಿನವರು ದಿನದ ಎಲ್ಲಾ ಸಮಯದಲ್ಲಿಯೂ ಕಿಟಕಿ ಬಾಗಿಲುಗಳನ್ನು ತೆರೆದೇ ಇಡುತ್ತಾರೆ. ಈ ರೀತಿ ಮಾಡುವುದರಿಂದ ಹೊರಗಿನ ಬಿಸಿ ಗಾಳಿ ಒಳಗೆ ಬರಲು ಅನುವು ಮಾಡಿಕೊಡುತ್ತದೆ. ಆದ್ದರಿಂದ ಮನೆಯನ್ನು ತಂಪಾಗಿಡಲು, ಬೆಳಿಗ್ಗೆ 8 ಗಂಟೆಯ ಮೊದಲು ಮತ್ತು ಸಂಜೆ ಸೂರ್ಯಾಸ್ತದ ನಂತರ ಮಾತ್ರ ಕಿಟಕಿಗಳನ್ನು ತೆರೆಯಿರಿ. ಮಧ್ಯಾಹ್ನದ ಸಮಯದಲ್ಲಿ ಕಿಟಕಿಗಳನ್ನು ಮುಚ್ಚಿಡುವುದು ಮತ್ತು ದಪ್ಪ ಪರದೆಗಳನ್ನು ಹಾಕುವುದರಿಂದ ನೇರ ಸೂರ್ಯನ ಬೆಳಕು ಒಳಗೆ ಬರುವುದನ್ನು ತಡೆಯಬಹುದು.
ಒಳಾಂಗಣ ಸಸ್ಯಗಳು ನೈಸರ್ಗಿಕ ಗಾಳಿಯನ್ನು ಒದಗಿಸುತ್ತವೆ: ಮನೆಯಲ್ಲಿ ಸ್ನೇಕ್ ಪ್ಲಾಂಟ್, ಅಲೋವೆರಾ, ಮನಿ ಪ್ಲಾಂಟ್ ಅಥವಾ ಅರೇಕಾ ಪಾಮ್ ನಂತಹ ಒಳಾಂಗಣ ಸಸ್ಯಗಳನ್ನು ಇಡುವುದರಿಂದ ಮನೆಯಲ್ಲಿ ಆಮ್ಲಜನಕದ ಅಂಶ ಹೆಚ್ಚಾಗುತ್ತದೆ ಮತ್ತು ವಾತಾವರಣವು ತಂಪಾಗಿರುತ್ತದೆ. ಈ ಸಸ್ಯಗಳು ನೈಸರ್ಗಿಕವಾಗಿ ಗಾಳಿಯನ್ನು ಶುದ್ಧೀಕರಿಸುತ್ತವೆ ಮತ್ತು ಶಾಖವನ್ನು ಹೀರಿಕೊಳ್ಳಲು ಕೆಲಸ ಮಾಡುತ್ತವೆ. ಆದ್ದರಿಂದ, ಮನೆಯ ಸುತ್ತಲೂ ಅಥವಾ ಮನೆಯ ಒಳ ಭಾಗದಲ್ಲಿ ಈ ಗಿಡಗಳನ್ನು ನೆಡುವ ಮೂಲಕ ನೀವು ಶಾಖದಿಂದ ರಕ್ಷಣೆ ಪಡೆಯಬಹುದು.
ವಿದ್ಯುತ್ ಉಪಕರಣಗಳ ಕಡಿಮೆ ಬಳಕೆ: ಮನೆಯಲ್ಲಿ ಚಾಲನೆಯಲ್ಲಿರುವ ಎಲೆಕ್ಟ್ರಾನಿಕ್ ಉಪಕರಣಗಳು ಸಹ ಶಾಖವನ್ನು ಉತ್ಪಾದಿಸುತ್ತವೆ. ಹಾಗಾಗಿ ಮಧ್ಯಾಹ್ನದ ಸಮಯದಲ್ಲಿ ಲೈಟ್, ಟಿವಿ ಅಥವಾ ಕಂಪ್ಯೂಟರ್ ಅನ್ನು ಆಫ್ ಮಾಡಿ. ವಿಶೇಷವಾಗಿ ಹಳೆಯ ಬಲ್ಬ್ಗಳ ಬದಲಿಗೆ ಎಲ್ಇಡಿ ಬಲ್ಬ್ಗಳನ್ನು ಬಳಸಿ, ಏಕೆಂದರೆ ಅವು ಕಡಿಮೆ ಶಾಖವನ್ನು ಉತ್ಪಾದಿಸುತ್ತವೆ. ಅಡುಗೆಮನೆಯಲ್ಲಿ ಎಕ್ಸಾಸ್ಟ್ ಫ್ಯಾನ್ ಅನ್ನು ಚಾಲನೆಯಲ್ಲಿ ಇರಿಸಿ ಇದರಿಂದ ಅಡುಗೆಯಿಂದ ಬರುವ ಶಾಖ ಹೊರಗೆ ಹೋಗುತ್ತವೆ.
ಮೇಲ್ಛಾವಣಿಯ ಮೇಲೆ ಬಿಳಿ ಸುಣ್ಣ ಅಥವಾ ಶಾಖ ಪ್ರತಿಫಲಿತ ಬಣ್ಣ ಹಚ್ಚಿ: ಮೇಲ್ಛಾವಣಿಯ ಮೇಲೆ ಬಿಳಿ ಸುಣ್ಣ ಅಥವಾ ವಿಶೇಷ ಶಾಖ ಪ್ರತಿಫಲಿತ ಬಣ್ಣವನ್ನು ಹಚ್ಚುವುದರಿಂದ ಸೂರ್ಯನ ಕಿರಣಗಳು ಪ್ರತಿಫಲಿಸುತ್ತದೆ, ಇದರಿಂದಾಗಿ ಮನೆಯೊಳಗಿನ ತಾಪಮಾನವು ಕಡಿಮೆಯಾಗುತ್ತದೆ. ಪರಿಣಾಮವಾಗಿ, ಕೊಠಡಿಗಳು ತುಲನಾತ್ಮಕವಾಗಿ ತಂಪಾಗಿರುತ್ತವೆ, ಫ್ಯಾನ್ಗಳು ಅಥವಾ ಏರ್ ಕೂಲರ್ಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ.
ತಿಳಿ ಬಣ್ಣದ ಪರದೆಗಳನ್ನು ಬಳಸಿ: ಗಾಢ ಬಣ್ಣದ ಕಿಟಕಿ ಪರದೆಗಳು ಶಾಖವನ್ನು ಬೇಗನೆ ಹೀರಿಕೊಳ್ಳುತ್ತವೆ, ಇದರಿಂದಾಗಿ ಕೋಣೆ ಬೇಗನೆ ಬಿಸಿಯಾಗುತ್ತದೆ. ಆದ್ದರಿಂದ, ಕಿಟಕಿಗಳು ಮತ್ತು ಬಾಗಿಲುಗಳಿಗೆ ತಿಳಿ ಬಣ್ಣದ ಹಾಗೂ ಪರದೆಗಳನ್ನು ಅಳವಡಿಸಬೇಕು. ಏಕೆಂದರೆ ತಿಳಿ ಬಣ್ಣಗಳು ಸೂರ್ಯನ ಬೆಳಕನ್ನು ಪ್ರತಿಫಲಿಸುತ್ತವೆ, ಹೀಗಾಗಿ ಕೋಣೆಯ ಉಷ್ಣತೆಯನ್ನು ಕಡಿಮೆಯಾಗುತ್ತದೆ.
ಈ ಸಣ್ಣ ವಿಷಯಗಳನ್ನು ಪಾಲಿಸುವ ಮೂಲಕ ಮನೆಯನ್ನು ತಂಪಾಗಿಟ್ಟುಕೊಳ್ಳುವುದು ಮಾತ್ರವಲ್ಲ ವಿದ್ಯುತ್ ಕೂಡ ಉಳಿಸಬಹುದು.
ದಾವಣಗೆರೆ, ಮಾರ್ಚ್ 28: ಸಚಿವ ಜಮೀರ್ ಅಹ್ಮದ್ರನ್ನು ಪ್ರಚಾರಕ್ಕೆ ಬರುವಂತೆ ಆಹ್ವಾನಿಸಿದ್ದೇನೆ. ಇದೀಗ ಅವರು ಕೇರಳ ಚುನಾವಣಾ ಪ್ರಚಾರಕ್ಕೆ ಹೋಗಿದ್ದಾರೆ. ಚುನಾವಣಾ ಪ್ರಚಾರಕ್ಕೆ ಬರದಿದ್ದರೂ ಒಳ್ಳೆಯದೇ ಎಂದು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಮಲ್ಲಿಕಾರ್ಜುನ ಹೇಳಿದ್ದಾರೆ. ದಾವಣಗೆರೆ ದಕ್ಷಿಣ ಉಪಚುನಾವಣೆ ಹಿನ್ನೆಲೆ ಇಂದು ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ನಗರದ ವೆಂಕಾಭೋವಿ ಕಾಲೋನಿಯಲ್ಲಿರುವ ಸಾದಿಕ್ ಪೈಲ್ವಾನ್ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಲ್ಲವೂ ಸರಿ ಹೋಗಿದೆ, ನಾವು ಸಾದಿಕ್ ಪೈಲ್ವಾನ್ ಎಲ್ಲಾ ಒಂದೇ. ಎಲ್ಲಾ ಒಂದಾಗಿ ಚುನಾವಣೆ ಮಾಡುತ್ತೇವೆ. ಯಾರು ಕೂಡ ಇಲ್ಲ ಸಲ್ಲದ ಹೇಳಿಕೆಯನ್ನು ಕೊಡುವುದು ಬೇಡ. ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸ ಕರಿಯಪ್ಪ ಸಹ ಪರಿಚಯಸ್ಥರೇ ಎಂದಿದ್ದಾರೆ.
ಬೆಂಗಳೂರು , ಮಾ.28 : ರಾಜಧಾನಿಯ ಹೊರವಲಯದ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಮನುಷ್ಯಕುಲವೇ ತಲೆತಗ್ಗಿಸುವಂತಹ ಘಟನೆಯೊಂದು ನಡೆದಿದೆ. ಗುರುವಾರ ಸಂಜೆ ಕಾಣೆಯಾಗಿದ್ದ ಅಸ್ಸಾಂ ಮೂಲದ ಅಪ್ರಾಪ್ತ ಬಾಲಕಿಯ ಶವ ಶನಿವಾರ (ಮಾ.28) ಬೋಳುಗುಟ್ಟದ ನೀಲಗಿರಿ ತೋಪಿನಲ್ಲಿ ನಗ್ನ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಅಸ್ಸಾಂ ಮೂಲದ ಈ ಬಾಲಕಿ ವಿಟ್ಟಸಂದ್ರ ಸಮೀಪದ ಶೆಡ್ ಒಂದರಲ್ಲಿ ತನ್ನ ಪೋಷಕರ ಜೊತೆ ವಾಸವಿದ್ದಳು. ಗುರುವಾರ ಸಂಜೆ ಮನೆ ಬಳಿ ಆಟವಾಡುತ್ತಿದ್ದ ಬಾಲಕಿ ದಿಢೀರ್ ಕಾಣೆಯಾಗಿದ್ದಳು. ಪೋಷಕರು ಸುತ್ತಮುತ್ತ ಎಲ್ಲಾ ಕಡೆ ಹುಡುಕಾಡಿದರೂ ಮಗು ಪತ್ತೆಯಾಗಿರಲಿಲ್ಲ. ಈ ಸಂಬಂಧ ಶುಕ್ರವಾರ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ದೂರು ದಾಖಲಿಸಲಾಗಿತ್ತು.
ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾಗ, ಇಂದು ಸಂಜೆ ಬೋಳುಗುಟ್ಟದ ನಿರ್ಜನ ಪ್ರದೇಶದ ನೀಲಗಿರಿ ತೋಪಿನಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿದೆ. ಶವವು ಸಂಪೂರ್ಣ ನಗ್ನ ಸ್ಥಿತಿಯಲ್ಲಿದ್ದು, ಕಿರಾತಕರು ಮಗುವಿನ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ನಂತರ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಅಷ್ಟೇ ಅಲ್ಲದೆ, ಮಗುವಿನ ಗುರುತು ಪತ್ತೆಯಾಗಬಾರದೆಂಬ ಉದ್ದೇಶದಿಂದ ಮುಖವನ್ನು ಕಲ್ಲಿನಿಂದ ಜಜ್ಜಿ ವಿಕೃತವಾಗಿ ಹತ್ಯೆ ಮಾಡಲಾಗಿದೆ.
ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಪೋಕ್ಸೋ (POCSO) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಿ ಬಲೆ ಬೀಸಿದ್ದಾರೆ.
ನಯಾಗಢ, ಮಾರ್ಚ್ 28: ಒಡಿಶಾದಲ್ಲಿ ಪ್ರವಾಸಿ ಬಸ್ ರಸ್ತೆಬದಿಯ ಬಂಡೆಗೆ ಡಿಕ್ಕಿ ಹೊಡೆದ ಪರಿಣಾಮದಿಂದ 5 ಜನ ಸಾವನ್ನಪ್ಪಿದ್ದಾರೆ, 40ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಒಡಿಶಾದ (Odisha News) ನಯಾಗಢ ಜಿಲ್ಲೆಯಲ್ಲಿ ಶುಕ್ರವಾರ ತಡರಾತ್ರಿ ಪ್ರವಾಸಿ ಬಸ್ ರಸ್ತೆಬದಿಯ ದೊಡ್ಡ ಬಂಡೆಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಮಹಿಳೆಯರು ಸೇರಿದಂತೆ 5 ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ದೃಢಪಡಿಸಿದ್ದಾರೆ.
ಮೃತರೆಲ್ಲರೂ ಬೆರ್ಹಾಂಪುರ್ ನಿವಾಸಿಗಳಾಗಿದ್ದು, ಚಾಲಕ ಕೂಡ ಸಾವನ್ನಪ್ಪಿದ್ದಾರೆ. ವರದಿಗಳ ಪ್ರಕಾರ, ಬೆರ್ಹಾಂಪುರ್ನಿಂದ ಹರಿಶಂಕರ್ಗೆ ಪ್ರಯಾಣಿಸುತ್ತಿದ್ದ ಖಾಸಗಿ ಬಸ್ 60ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿತ್ತು. ಹನುಮಾನ್ ಘಾಟಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್ ರಸ್ತೆಬದಿಯಲ್ಲಿದ್ದ ದೈತ್ಯ ಬಂಡೆಗೆ ಡಿಕ್ಕಿ ಹೊಡೆದು ಬಸ್ ಪಲ್ಟಿಯಾದಾಗ ಈ ಅಪಘಾತ ಸಂಭವಿಸಿದೆ.
ಅಪಘಾತದ ಪರಿಣಾಮದಿಂದ ಹಲವಾರು ಪ್ರಯಾಣಿಕರು ಬಸ್ನಿಂದ ಹೊರಗೆ ಬಿದ್ದಿದ್ದಾರೆ. 10ಕ್ಕೂ ಹೆಚ್ಚು ಜನರು ಬಸ್ನ ಕೆಳಗೆ ಸಿಲುಕಿಕೊಂಡಿದ್ದಾರೆ. ಇದರಿಂದ ಅವರಲ್ಲಿ ಅನೇಕರು ಹೊರಬರಲಾಗದೆ ಒದ್ದಾಡಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಅಗ್ನಿಶಾಮಕ ದಳ ಮತ್ತು ಆಂಬ್ಯುಲೆನ್ಸ್ ಸ್ಥಳಕ್ಕೆ ಆಗಮಿಸಿದವು. ಬಸ್ಸಿನೊಳಗೆ ಸಿಲುಕಿದ್ದ ಪ್ರಯಾಣಿಕರನ್ನು ಗ್ಯಾಸ್ ಕಟ್ಟರ್ ಬಳಸಿ ರಕ್ಷಿಸಲಾಯಿತು.
ಗಾಯಗೊಂಡ ಪ್ರಯಾಣಿಕರನ್ನು ದಸ್ಪಲ್ಲಾ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಾಗಿಸಲಾಯಿತು. ಕೆಲವರನ್ನು ಜಿಲ್ಲಾ ಕೇಂದ್ರದ ಆಸ್ಪತ್ರೆಗಳಿಗೆ ಕಳುಹಿಸಲಾಯಿತು. “ಚಾಲಕ ಬಸ್ ಅನ್ನು ಅತಿ ವೇಗದಲ್ಲಿ ಓಡಿಸುತ್ತಿದ್ದ. ಅತಿ ವೇಗವೇ ಅಪಘಾತಕ್ಕೆ ಕಾರಣ” ಎಂದು ಪ್ರಯಾಣಿಕ ಆರಿಯಾ ಪಾತ್ರ ಹೇಳಿದ್ದಾರೆ.
ಅಪಘಾತದ ಕಾರಣವನ್ನು ಕಂಡುಹಿಡಿಯಲು ಅಧಿಕಾರಿಗಳು ತನಿಖೆಯನ್ನು ಪ್ರಾರಂಭಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಮಾರ್ಚ್ 28: ವ್ಯಕ್ತಿ ಓರ್ವ ತನ್ನ ಪಾಡಿಗೆ ತಾನು ಚಹಾ ಕುಡಿಯುತ್ತಾ ಅಂಗಡಿಯೊಂದರ ಬಳಿ ನಿಂತಿದ್ದ. ಇದೇ ವೇಳೆ ಆಗಮಿಸಿದ ಮೂವರು ಕಿಡಿಗೇಡಿಗಳು ಆತನ ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡಿದ್ದಾರೆ. ನೋಡ ನೋಡುತ್ತಿದ್ದಂತೆ ವ್ಯಕ್ತಿಯನ್ನ ಆಟೋದಲ್ಲಿ ಹತ್ತಿಸಿಕೊಂಡಿದ್ದಾರೆ (Kidnape). ಸ್ವಲ್ಪ ಹೊತ್ತಲ್ಲೇ ಆಟೋದಿಂದ ಇಳಿಸಿ ಬೆದರಿಕೆ ಹಾಕಿ ಬಿಟ್ಟುಕಳುಹಿಸಿದ್ದಾರೆ. ಅಷ್ಟಕ್ಕೂ ಈ ವಿಚಿತ್ರ ಘಟನೆ ಬ್ಯಾಡರಹಳ್ಳಿಯ ನಾಗರಹೊಳೆ ಸರ್ಕಲ್ನಲ್ಲಿ ಎರಡು ದಿನದ ಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ನಡೆದಿದ್ದೇನು?
ಶರತ್ ಕಿಡ್ನ್ಯಾಪ್ ಆಗಿದ್ದ ವ್ಯಕ್ತಿ. ಬೆಂಗಳೂರಿನ ಹೆಗ್ಗನಹಳ್ಳಿ ನಿವಾಸಿ. ಮೂರು ದಿನದ ಹಿಂದೆ ಬ್ಯಾಡರಹಳ್ಳಿಯ ನಾಗರಹೊಳೆ ಸರ್ಕಲ್ ಬಳಿ ತನ್ನ ಸ್ನೇಹಿತನ ಜೊತೆಗೆ ಚಹಾ ಕುಡಿಯುತ್ತಾ ನಿಂತಿದ್ದರು. ಈ ವೇಳೆ ಆಟೋದಲ್ಲಿ ಬಂದ ಮೂವರ ಗ್ಯಾಂಗ್ ನೀನು ಹೀರೋನಾ ಎಂದು ವಿಚಾರಿಸಿದ್ದಾರೆ. ನಾನು ಅವನಲ್ಲ ಅಂತ ಶರತ್ ಹೇಳಿದ್ದರು, ಸುಳ್ಳು ಹೇಳುತ್ತೀಯಾ ಎಂದು ಅವಾಚ್ಯವಾಗಿ ನಿಂದಿಸಿ ಹಲ್ಲೆ ಮಾಡಿದ್ದಾರೆ.
ನಟನಲ್ಲ ಎಂದಾಗ ಬಿಟ್ಟುಕಳುಹಿಸಿದ ಖದೀಮರು
ಒಬ್ಬಾತ ತನ್ನ ಕೈನಲ್ಲಿದ್ದ ಡ್ಯಾಗರ್ನಿಂದ ಶರತ್ ಮುಖಕ್ಕೆ ಹೊಡೆದಿದ್ದಾನೆ. ನೋಡನೋಡುತ್ತಿದ್ದಂತೆ ಶರತ್ ನನ್ನ ಆಟೋದಲ್ಲಿ ನೂಕಿ ಸ್ವಲ್ಪ ದೂರ ಕರ್ಕೊಂಡು ಹೋಗಿದ್ದರು. ದಾರಿಯಲ್ಲಿ ಶರತ್ ಅಕ್ಕನಿಗೆ ಕರೆ ಮಾಡಿ ಅವಾಚ್ಯವಾಗಿ ನಿಂದಿಸಿದ್ದಾರೆ. ಸ್ವಲ್ಪ ಹೊತ್ತಿನ ನಂತರ ಶರತ್ ಫೋನ್ ಪರಿಶೀಲಿಸಿ ಇವನು ನಟ ಅಲ್ಲ ಅಂತ ಬಿಟ್ಟು ಕಳಿಸಿದ್ದಾರೆ.
ಯಾರು, ಯಾಕೆ, ಏನಾಗುತ್ತಿದೆ ಅಂತ ಗೊತ್ತಾಗದೇ ಶರತ್ ದಿಗ್ಬಾಂತರಾಗಿದ್ದಾರೆ. ಕೆಲ ಹೊತ್ತು ಸುಧಾರಿಸಿಕೊಂಡು ಬ್ಯಾಡರಹಳ್ಳಿ ಠಾಣೆಗೆ ಬಂದು ದೂರು ನೀಡಿದ್ದಾರೆ. ಸದ್ಯ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ಪುಂಡರ್ ಗ್ಯಾಂಗ್ ಪತ್ತೆಗೆ ಬಲೆಬೀಸಿದ್ದಾರೆ.
ಪ್ರೀತಿಸಿದವಳನ್ನ ಕಿಡ್ನ್ಯಾಪ್ ಮಾಡಿ ಅತ್ತೆಗೆ ಚಾಕು ಹಾಕಿದ್ದ ವ್ಯಕ್ತಿ ಸೇರಿ ನಾಲ್ವರ ಬಂಧನ
ಕೌಟುಂಬಿಕ ವಿಚಾರಕ್ಕೆ ಅತ್ತೆಗೆ ಚಾಕು ಹಾಕಿದ್ಧ ವ್ಯಕ್ತಿ ಸೇರಿದಂತೆ ನಾಲ್ವರನ್ನು ಆಡುಗೋಡಿ ಪೊಲೀಸರು ಬಂಧಿಸಿದ್ದಾರೆ. ಮನಿಕಿರಣ್, ಅಭಿಷೇಕ್, ಮನಿರಾಜ್ ಮತ್ತು ಮನಿವಣ್ಣನ್ ಬಂಧಿತರು. ಮಾ.25ರಂದು ಮಾಗೇಶ್ವರಿ ಎಂಬುವರ ಮನೆಯಲ್ಲಿ ಘಟನೆ ನಡೆದಿತ್ತು.
ಕಿರಣ್ಗೆ ಮದುವೆಯಾಗಿದ್ದರೂ ಮಾಗೇಶ್ವರಿ ಮೊಮ್ಮಗಳಾದ ಚಾರುಲತಾಳನ್ನ ಕರೆದುಕೊಂಡು ಹೋಗಿದ್ದ. ಕೆಲ ದಿನಗಳ ಹಿಂದೆ ಕಿರಣ್ ಬಿಟ್ಟು ಬಂದಿದ್ದ ಚಾರುಲತಾ ಅಜ್ಜಿ ಜೊತೆ ಇದ್ದಳು. ಮಾ.25ರಂದು ಚಾರುಲತಾ ಹುಡುಕಿ ಬಂದಿದ್ದ ಕಿರಣ್ ಮತ್ತು ಫ್ಯಾಮಿಲಿ ಬಲವಂತವಾಗಿ ಆಕೆಯನ್ನ ಕಿಡ್ನ್ಯಾಪ್ ಮಾಡಿ ಕರೆದುಕೊಂಡು ಹೋಗಿದ್ದರು. ತಡೆಯಲು ಬಂದ ವೃದ್ಧೆ ಮಾಗೇಶ್ವರಿಗೆ ಚಾಕುವಿನಿಂದ ಹಲ್ಲೆ ಮಾಡಿದ್ದರು. ಸದ್ಯ ನಾಲ್ವರನ್ನು ಬಂಧಿಸಲಾಗಿದೆ.
ವಾಷಿಂಗ್ಟನ್, ಮಾರ್ಚ್ 28: ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಜಂಟಿ ದಾಳಿಯ ನಂತರ ಇರಾನ್ನ ಹೊಸ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಅವರ ಸ್ಥಳ ಮತ್ತು ಆರೋಗ್ಯದ ಬಗ್ಗೆ ಊಹಾಪೋಹಗಳು ಹರಿದಾಡುತ್ತಿವೆ. ಇದರ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಶಾಕಿಂಗ್ ಹೇಳಿಕೆ ನೀಡಿದ್ದು, ಮೊಜ್ತಬಾ ಖಮೇನಿ ಸತ್ತಿರಬಹುದು ಅಥವಾ ತುಂಬ ಕೆಟ್ಟ ಸ್ಥಿತಿಯಲ್ಲಿರಬಹುದು ಎಂದು ಹೇಳಿದ್ದಾರೆ.
“ಅಮೆರಿಕದ ಮಿಲಿಟರಿ ಕಾರ್ಯಾಚರಣೆಯು ಇರಾನ್ನ ನಾಯಕತ್ವ ಮತ್ತು ಮಿಲಿಟರಿ ಶಕ್ತಿಯನ್ನು ನಾಶಪಡಿಸಿದೆ. ಇರಾನ್ನ ನೂತನ ನಾಯಕ ಸತ್ತಿದ್ದಾರೆ ಎಂದು ನನಗೆ ಅನಿಸುತ್ತದೆ. ಅಥವಾ ಅವರು ಅತ್ಯಂತ ಕೆಟ್ಟ ಸ್ಥಿತಿಯಲ್ಲಿಯೂ ಇರಬಹುದು. ಏಕೆಂದರೆ ಅವರ ಬಗ್ಗೆ ಯಾರಿಗೂ ಮಾಹಿತಿ ಇಲ್ಲ” ಎಂದು ಟ್ರಂಪ್ ಹೇಳಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಭಾರತೀಯ ಯುವಜನತೆಯಲ್ಲಿ ವಿಮಾನ ನಿಲ್ದಾಣದ ಉದ್ಯೋಗಗಳ ಬಗ್ಗೆ ಯಾವಾಗಲೂ ಒಂದು ರೀತಿಯ ಕ್ರೇಜ್ ಇರುತ್ತದೆ. ಅತ್ಯಾಧುನಿಕ ಕೆಲಸದ ವಾತಾವರಣ, ವೃತ್ತಿಪರ ಗೌರವ ಮತ್ತು ಆಕರ್ಷಕ ವೇತನ ಶ್ರೇಣಿಯು ಈ ಕ್ಷೇತ್ರವನ್ನು ಯುವಕರ ನೆಚ್ಚಿನ ಆಯ್ಕೆಯನ್ನಾಗಿ ಮಾಡಿದೆ. ನೀವು ವಿಮಾನ ನಿಲ್ದಾಣದಲ್ಲಿ ವೃತ್ತಿಜೀವನವನ್ನು ಆರಂಭಿಸಲು ಬಯಸಿದ್ದರೆ, ಅಲ್ಲಿ ಲಭ್ಯವಿರುವ ವಿವಿಧ ಹುದ್ದೆಗಳು ಮತ್ತು ಅವುಗಳನ್ನು ಪಡೆಯುವ ಹಾದಿಯ ಬಗ್ಗೆ ಸವಿಸ್ತಾರವಾದ ಮಾಹಿತಿ ಇಲ್ಲಿದೆ
ವಿಮಾನ ನಿಲ್ದಾಣದಲ್ಲಿ ಲಭ್ಯವಿರುವ ಪ್ರಮುಖ ಹುದ್ದೆಗಳು:
ವಿಮಾನ ನಿಲ್ದಾಣದ ಕಾರ್ಯನಿರ್ವಹಣೆಯು ಕೇವಲ ವಿಮಾನ ಹಾರಾಟಕ್ಕೆ ಸೀಮಿತವಾಗಿಲ್ಲ; ಇದರ ಹಿಂದೆ ಸಾವಿರಾರು ಜನರ ಶ್ರಮವಿರುತ್ತದೆ. ಮುಖ್ಯವಾಗಿ ನೆಲದ ಸಿಬ್ಬಂದಿ (Ground Staff) ವಿಭಾಗದಲ್ಲಿ ಚೆಕ್-ಇನ್, ಬೋರ್ಡಿಂಗ್ ಮತ್ತು ಸಹಾಯ ಕೇಂದ್ರದ ಕೆಲಸಗಳಿರುತ್ತವೆ. ಇನ್ನು ಆಕಾಶದಲ್ಲಿ ಹಾರಾಡುವ ಕನಸುಳ್ಳವರಿಗೆ ಕ್ಯಾಬಿನ್ ಸಿಬ್ಬಂದಿ (ಗಗನಸಖಿ/ವಿಮಾನ ಪರಿಚಾರಕಿ) ಹುದ್ದೆಗಳಿವೆ. ಇವುಗಳ ಜೊತೆಗೆ ಭದ್ರತಾ ವಿಭಾಗದಲ್ಲಿ CISF ಸಿಬ್ಬಂದಿ, ಸರಕು ಮತ್ತು ಲಾಜಿಸ್ಟಿಕ್ಸ್ ವಿಭಾಗ, ಹಾಗೂ ತಾಂತ್ರಿಕ ವಿಭಾಗದಲ್ಲಿ ಎಂಜಿನಿಯರ್ಗಳು ಮತ್ತು ಏರ್ ಟ್ರಾಫಿಕ್ ಕಂಟ್ರೋಲ್ (ATC) ಸಿಬ್ಬಂದಿ ಕೆಲಸ ಮಾಡುತ್ತಾರೆ.
ಉದ್ಯೋಗ ಪಡೆಯುವುದು ಹೇಗೆ? ಆಯ್ಕೆ ಪ್ರಕ್ರಿಯೆ ಏನು?
ವಿಮಾನ ನಿಲ್ದಾಣದಲ್ಲಿ ಕೆಲಸ ಪಡೆಯಲು ಪ್ರಮುಖವಾಗಿ ಮೂರು ಮಾರ್ಗಗಳಿವೆ. ಮೊದಲನೆಯದಾಗಿ, ಇಂಡಿಗೋ, ಏರ್ ಇಂಡಿಯಾದಂತಹ ಖಾಸಗಿ ವಿಮಾನಯಾನ ಸಂಸ್ಥೆಗಳು ತಮ್ಮ ಅಧಿಕೃತ ವೆಬ್ಸೈಟ್ಗಳ ಮೂಲಕ ನೇರ ನೇಮಕಾತಿ ನಡೆಸುತ್ತವೆ. ಎರಡನೆಯದಾಗಿ, ಸರ್ಕಾರಿ ಸ್ವಾಮ್ಯದ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (AAI) ಕಾಲಕಾಲಕ್ಕೆ ಆನ್ಲೈನ್ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳುತ್ತದೆ. ಮೂರನೆಯದಾಗಿ, ಭದ್ರತಾ ಹುದ್ದೆಗಳಿಗೆ SSC ಅಥವಾ ಇತರ ಸರ್ಕಾರಿ ಪರೀಕ್ಷೆಗಳ ಮೂಲಕ CISF ಸಿಬ್ಬಂದಿಯನ್ನು ಆಯ್ಕೆ ಮಾಡಲಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಮೂರನೇ ವ್ಯಕ್ತಿಯ ಕಂಪನಿಗಳು ಕೂಡ ನೆಲದ ಸಿಬ್ಬಂದಿಯನ್ನು ನೇಮಿಸಿಕೊಳ್ಳುತ್ತವೆ.