ಗಂಭೀರ ಆರೋಪ ಹೊರಿಸಿ ತಂಡ ತೊರೆದ ಶಶಾಂಕ್ ಸಿಂಗ್ – Kannada News | IPL Star Shashank Singh Quits Chhattisgarh for Puducherry: Cites Lack of Support

ಈ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿರುವ ಶಶಾಂಕ್, ‘ಹೌದು, ನಾನು ಛತ್ತೀಸ್‌ಗಢ ತೊರೆಯುತ್ತಿದ್ದೇನೆ. ನಾನು ಛತ್ತೀಸ್‌ಗಢ ರಾಜ್ಯ ಕ್ರಿಕೆಟ್ ಸಂಘದಿಂದ ಎನ್‌ಒಸಿ ಪಡೆದಿದ್ದೇನೆ ಮತ್ತು 2026-27ರ ಆವೃತ್ತಿಯಿಂದ ಪುದುಚೇರಿ ಪರ ಆಡುತ್ತೇನೆ. ಕಳೆದ ಆವೃತ್ತಿಯಲ್ಲಿ, ನಾನು ಗಂಭೀರ ಭುಜ ಮತ್ತು ಬೆರಳಿನ ಗಾಯಗಳಿಂದ ಬಳಲುತ್ತಿದ್ದೆ, ಆದರೆ ಛತ್ತೀಸ್‌ಗಢ ರಾಜ್ಯ ಕ್ರಿಕೆಟ್ ಸಂಘವು ಆ ಕಷ್ಟದ ಸಮಯದಲ್ಲಿ ನನಗೆ ಯಾವುದೇ ಬೆಂಬಲ ನೀಡಲಿಲ್ಲ(PC-PTI).

Source link

“ತಾಳ್ಮೆಯೇ ನಮ್ಮನ್ನು ಇಲ್ಲಿಯವರೆಗೆ ಕರೆತಂದಿದೆ, ಅಸಮಾಧಾನದ ಪ್ರಶ್ನೆಯೇ ಇಲ್ಲ”: ನೂತನ ಸಂಪುಟ ಸಭೆ ಬಳಿಕ ಸಿಎಂ ಡಿ.ಕೆ.ಶಿವಕುಮಾರ್ ಸುದ್ದಿಗೋಷ್ಠಿ – Kannada News | Karnataka Cabinet: CM Orders Ministers to Districts, Dismisses Rift Rumors with Siddaramaiah

ಬೆಂಗಳೂರು, ಆ.3: ನೂತನವಾಗಿ ಸೇರ್ಪಡೆಯಾದ 19 ಸಚಿವರೊಂದಿಗೆ ವಿಧಾನಸೌಧದಲ್ಲಿ ಸುಮಾರು ಎರಡು ಗಂಟೆಗಳಿಗೂ ಹೆಚ್ಚು ಕಾಲ ಸುದೀರ್ಘ ಸಂಪುಟ ಸಭೆ ನಡೆಸಿದ ನಂತರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಹತ್ವದ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಸಚಿವರಿಗೆ ನೀಡಿರುವ ಗಡುವು, ರಾಜ್ಯದ ಮಳೆ ಹಾಗೂ ಬರ ಪರಿಸ್ಥಿತಿ ಮತ್ತು ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿರುವ ಶಾಸಕರಿಗೆ ಈ ಮೂಲಕ ಸಂದೇಶಗಳನ್ನು ನೀಡಿದ್ದಾರೆ.

ನೂತನ ಸಚಿವರಿಗೆ ಬೆಂಗಳೂರಿನಲ್ಲಿ ಇರಲು ನಾಳೆ (ಆಗಸ್ಟ್ 4) ಒಂದು ದಿನ ಮಾತ್ರ ಅವಕಾಶ ನೀಡಲಾಗಿದೆ. ನಾಡಿದ್ದಿನಿಂದ (ಆಗಸ್ಟ್ 5) ಎಲ್ಲ ಸಚಿವರೂ ತಮ್ಮ ತಮ್ಮ ಉಸ್ತುವಾರಿ ಜಿಲ್ಲೆಗಳಿಗೆ ತೆರಳಿ ಪ್ರವಾಸ ಮಾಡುವಂತೆ ಸಿಎಂ ಸೂಚಿಸಿದ್ದಾರೆ. ರಾಜ್ಯದ ಎಲ್ಲೆಲ್ಲಿ ಮಳೆಯಿಂದ ಅನಾಹುತಗಳಾಗಿವೆಯೋ ಹಾಗೂ ಬರದ ಸ್ಥಿತಿಗತಿ ಹೇಗಿದೆ ಎಂಬುದರ ಕುರಿತು ಪ್ರತ್ಯಕ್ಷ ಪರಿಶೀಲನೆ ನಡೆಸಿ, ಕಂದಾಯ ಇಲಾಖೆಗೆ ವರದಿ ಸಲ್ಲಿಸುವಂತೆ ಸಚಿವರಿಗೆ ಮಾರ್ಗದರ್ಶನ ನೀಡಲಾಗಿದೆ. ವರದಿ ಬಂದ ನಂತರ ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳಲಿದೆ. ಈಗಲೇ ಬರ ಘೋಷಣೆ ಮಾಡಿ ಎಂದು ಒತ್ತಾಯಿಸುತ್ತಿರುವ ವಿಪಕ್ಷಗಳಿಗೆ ಸೂಕ್ತ ಸಮಯ ಬಂದಾಗ ಉತ್ತರ ನೀಡಲಾಗುವುದು ಎಂದು ಸಿಎಂ ಹೇಳಿದರು.

ಇಲ್ಲಿದೆ ನೋಡಿ ವಿಡಿಯೋ:

“ಕಾಂಗ್ರೆಸ್‌ನ ಎಲ್ಲಾ ಶಾಸಕರೂ ಅರ್ಹರು, ತಾಳ್ಮೆಯಿಂದಿರಿ”: ಸಚಿವ ಆಕಾಂಕ್ಷಿಗಳಿಗೆ ಅಭಯ

ಸಚಿವ ಸ್ಥಾನ ಸಿಗದೆ ಬಂಡಾಯ ಎದ್ದಿರುವ ಹಾಗೂ ಅಸಮಾಧಾನಗೊಂಡಿರುವ ಶಾಸಕರನ್ನು ಉದ್ದೇಶಿಸಿ ಮಾತನಾಡಿ, ತಮ್ಮದೇ ಉದಾಹರಣೆ ನೀಡಿದರು. “ನಮ್ಮ ಪಕ್ಷದಲ್ಲಿ ಶಾಸಕರಷ್ಟೇ ಅಲ್ಲ, ವಿಧಾನ ಪರಿಷತ್ ಸದಸ್ಯರೂ ಸಚಿವರಾಗಲು ಅರ್ಹರಿದ್ದಾರೆ. ಧರಂ ಸಿಂಗ್ ಹಾಗೂ ಸಿದ್ದರಾಮಯ್ಯ ಅವರ ಅವಧಿಯಲ್ಲಿ ನನ್ನನ್ನು ಹಾಗೂ ಜಿ. ಪರಮೇಶ್ವರ್ ಅವರನ್ನು ಸಂಪುಟದಿಂದ ಹೊರಗಿಡಲಾಗಿತ್ತು. ಆದರೆ ನಾವು ತಾಳ್ಮೆಯಿಂದ ಇದ್ದೆವು. ಆ ತಾಳ್ಮೆಯೇ ಇಂದು ಪರಮೇಶ್ವರ್ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಹಾಗೂ ನನ್ನನ್ನು ಇಲ್ಲಿಯವರೆಗೆ ಕರೆತಂದಿದೆ. ಶಾಸಕಾಂಗದಲ್ಲಿ ಶೇ. 15 ರಷ್ಟು ಜನರನ್ನು ಮಾತ್ರ ಸಚಿವರನ್ನಾಗಿ ಮಾಡಲು ಸಾಧ್ಯ. ನನ್ನ ನಾಯಕರು ಹಾಗೂ ಸ್ನೇಹಿತರಿಗೆ ಹೇಳುವುದು ಒಂದೇ—ತಾಳ್ಮೆಯಿಂದಿರಿ, ಮುಂದಿನ ದಿನಗಳಲ್ಲಿ ಖಂಡಿತ ಅವಕಾಶ ಮಾಡಿಕೊಡಲಾಗುವುದು.” ಎಂದು ಹೇಳಿದರು.

ಇದನ್ನೂ ಓದಿ: ಧಾರವಾಡ ಶಾಸಕ ವಿನಯ್ ಕುಲಕರ್ಣಿಗೆ ಬಿಗ್ ರಿಲೀಫ್: ಶಾಸಕ ಸ್ಥಾನದ ಅನರ್ಹತೆ ಆದೇಶ ರದ್ದುಗೊಳಿಸಿದ ವಿಧಾನಸಭೆ ಸಚಿವಾಲಯ

“ಸಿದ್ದರಾಮಯ್ಯ ಅಸಮಾಧಾನ ಎಂಬುದು ಮಾಧ್ಯಮಗಳ ಸೃಷ್ಟಿ”: ಒಗ್ಗಟ್ಟಿನ ಮಂತ್ರ

ಸಂಪುಟ ವಿಸ್ತರಣೆಯಿಂದ ಸಿದ್ದರಾಮಯ್ಯ ಅವರಿಗೆ ಅಸಮಾಧಾನವಾಗಿದೆ ಎಂಬ ವರದಿಗಳನ್ನು ತಳ್ಳಾಕಿದ ಸಿಎಂ, “ಯಾಕೆ ಸಿದ್ದರಾಮಯ್ಯ ಅವರಿಗೆ ಅಸಮಾಧಾನ? ನಾವೆಲ್ಲಾ ಒಂದು ಟೀಮ್, ನಾವೆಲ್ಲಾ ಒಗ್ಗಟ್ಟಾಗಿದ್ದೇವೆ. ನಾನೂ ಕೂಡ ಸಿದ್ದರಾಮಯ್ಯ ಅವರ ಅಭ್ಯರ್ಥಿಯೇ ಅಲ್ವಾ? ಸಿದ್ದರಾಮಯ್ಯ ಅವರಲ್ಲಿ ಯಾವುದೇ ಅಸಮಾಧಾನವಿಲ್ಲ, ಇದು ನಿಮ್ಮಿಂದಲೇ (ಮಾಧ್ಯಮಗಳಿಂದ) ಕೇಳ್ತಾ ಇರೋ ಹೊಸ ಸುದ್ದಿ” ಎಂದರು. ಹೈಕಮಾಂಡ್ ನೀಡಿದ ಮಾರ್ಗದರ್ಶನದಂತೆಯೇ ಸಂಪುಟ ರಚನೆ ಮಾಡಲಾಗಿದೆ. ಯಾವುದೇ ಗೊಂದಲಗಳಾಗಿಲ್ಲ. ನಾನು ಸಹಿ ಹಾಕಿ ರಾಜಭವನಕ್ಕೆ ಕಳುಹಿಸಿಕೊಟ್ಟ ಪಟ್ಟಿಯೇ ಅಧಿಕೃತ. ಊಹಾಪೋಹಗಳ ಹೆಸರುಗಳಿಗೆ ಬೆಲೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಅಲ್ಲದೆ, ಸಂಪುಟದಲ್ಲಿ ಮಹಿಳೆಯರಿಗೂ ಸಚಿವ ಸ್ಥಾನ ನೀಡಲಾಗುವುದು ಎಂದು ಅವರು ಪುನರುಚ್ಚರಿಸಿದರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ  ಕ್ಲಿಕ್ ಮಾಡಿ

Source link

ಖರ್ಗೆ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್​ ಕೋಲಾರಕ್ಕೆ ದೊಡ್ಡ ಮೋಸ ಮಾಡಿದ್ದಾರೆ: ಶಾಸಕ ನಾರಾಯಣಸ್ವಾಮಿ ಆಕ್ರೋಶ – Kannada News | Kharge, Siddaramaiah and D.K. Shivakumar Have Cheated Kolar: MLA K Narayanaswamy Alleges

ಕೋಲಾರ, ಆಗಸ್ಟ್​​ 03: ‘ಜಿಲ್ಲೆಗೆ ಸಚಿವ ಸ್ಥಾನ ಸಿಗುತ್ತೆಂಬ ನಂಬಿಕೆ ಇತ್ತು. ಆದರೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಸಿಎಂ ಡಿಕೆ ಶಿವಕುಮಾರ್​ ಅವರು ಕೋಲಾರಕ್ಕೆ ದೊಡ್ಡ ಮೋಸ ಮಾಡಿದ್ದಾರೆ’ ಎಂದು ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಪ್ರತಿ ಬಾರಿ ಎಡಗೈ ಸಮುದಾಯದ ಮುನಿಯಪ್ಪ ಗೆಲ್ಲಬೇಕು, ಮುನಿಯಪ್ಪರ ಮಗಳು KGF ಶಾಸಕಿ ರೂಪಾ ಗೆಲ್ಲಬೇಕು. ಇಲ್ಲಿ ಬಲಗೈ ಸಮುದಾಯದ ಸಹಾಯ ಪಡೆದು ಗೆಲುತ್ತಾರೆ. ಎಡಗೈ-ಬಲಗೈ ಸಮುದಾಯ ಅಂತ ಹುಟ್ಟು ಹಾಕಿದ್ದಾರೆ ಎಂದು ಕೆ.ಹೆಚ್.ಮುನಿಯಪ್ಪ ವಿರುದ್ಧ ಗರಂ ಆದರು. ‘ಇದರ ಪ್ರತಿಫಲವನ್ನು ಅವರೇ ಮುಂದೆ ಅನುಭವಿಸುತ್ತಾರೆ. ಕಾಣದ ಕೈಗಳು ನನಗೆ ಸಚಿವ ಸ್ಥಾನವನ್ನ ತಪ್ಪಿಸಿದ್ದಾರೆ. ನಾಳೆ ನಾವು ಸಭೆ ನಡೆಸಿ ಒಂದು ನಿರ್ಧಾರಕ್ಕೆ ಬರುತ್ತೇವೆ. ಒಮ್ಮತ ಮೂಡಿದರೆ ರಾಜೀನಾಮೆ ನೀಡಲು ನಾವು ಸಿದ್ಧ. ರಾಜೀನಾಮೆ ನೀಡಿ ಹೈಕಮಾಂಡ್​ಗೆ ಸಂದೇಶ ರವಾನಿಸುತ್ತೇವೆ’ ಎಂದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಹೃದಯಾಘಾತದ ಅಪಾಯ ಕಡಿಮೆ ಮಾಡಲು ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ – Kannada News | Best Daily Habits for a Strong and Healthy Heart

ಹೃದಯವು ನಮ್ಮ ದೇಹದ ಅತ್ಯಂತ ಪ್ರಮುಖ ಅಂಗಗಳಲ್ಲಿ ಒಂದಾಗಿದೆ. ದೇಹದ ಪ್ರತಿಯೊಂದು ಭಾಗಕ್ಕೂ ಆಮ್ಲಜನಕ ಮತ್ತು ಪೋಷಕಾಂಶಯುಕ್ತ ರಕ್ತವನ್ನು ತಲುಪಿಸುವ ಜವಾಬ್ದಾರಿ ಹೃದಯದ್ದಾಗಿದೆ. ಇತ್ತೀಚಿನ ವರ್ಷಗಳಲ್ಲಿ ಹೃದಯ ಸಂಬಂಧಿತ ಕಾಯಿಲೆಗಳು ಯುವಜನರಲ್ಲಿಯೂ ಹೆಚ್ಚಾಗುತ್ತಿವೆ. ಅನಾರೋಗ್ಯದ ಲಕ್ಷಣಗಳು ಕಾಣಿಸಿಕೊಂಡ ನಂತರ ಚಿಕಿತ್ಸೆ ಪಡೆಯುವುದಕ್ಕಿಂತ, ಮೊದಲಿನಿಂದಲೇ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ಹೃದಯದ ಆರೋಗ್ಯವನ್ನು ಕಾಪಾಡುವ ಅತ್ಯುತ್ತಮ ಮಾರ್ಗವಾಗಿದೆ. ಸಮತೋಲನ ಆಹಾರ, ನಿಯಮಿತ ವ್ಯಾಯಾಮ, ಸಾಕಷ್ಟು ನಿದ್ರೆ ಮತ್ತು ಒತ್ತಡ ನಿಯಂತ್ರಣದಂತಹ ಸಣ್ಣ-ಸಣ್ಣ ಅಭ್ಯಾಸಗಳು ಹೃದಯಾಘಾತ, ಪಾರ್ಶ್ವವಾಯು (ಸ್ಟ್ರೋಕ್), ಕೊರೊನರಿ ಆರ್ಟರಿ ರೋಗ ಮತ್ತು ಹೃದಯ ವೈಫಲ್ಯದಂತಹ ಗಂಭೀರ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಹಾಗಾದರೆ ಹೃದಯವನ್ನು ಆರೋಗ್ಯವಾಗಿಡಲು ಯಾವ ಅಭ್ಯಾಸಗಳನ್ನು ಪಾಲಿಸಬೇಕು, ಯಾವುದನ್ನು ತಪ್ಪಿಸಬೇಕು ಮತ್ತು ಯಾವ ಲಕ್ಷಣಗಳನ್ನು ನಿರ್ಲಕ್ಷಿಸಬಾರದು ಎಂಬುದನ್ನು ತಿಳಿದುಕೊಳ್ಳಿ.

ಹೃದಯದ ಆರೋಗ್ಯಕ್ಕಾಗಿ ಪಾಲಿಸಬೇಕಾದ ಅಭ್ಯಾಸಗಳು

  • ಪ್ರತಿದಿನ ಹಸಿರು ಸೊಪ್ಪು, ತಾಜಾ ಹಣ್ಣುಗಳು, ಸಂಪೂರ್ಣ ಧಾನ್ಯಗಳು, ಬೇಳೆಕಾಳುಗಳು, ಬೀನ್ಸ್, ಒಣಹಣ್ಣುಗಳು ಹಾಗೂ ಬೀಜಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಿ.
  • ಕಡಿಮೆ ಕೊಬ್ಬಿನ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಸೇವಿಸಿ.
  • ವಾರಕ್ಕೆ ಕನಿಷ್ಠ ಎರಡು ಬಾರಿ ಒಮೆಗಾ-3 ಕೊಬ್ಬು ಅಮ್ಲವಿರುವ ಮೀನುಗಳನ್ನು ಸೇವಿಸುವುದು ಹೃದಯಕ್ಕೆ ಒಳ್ಳೆಯದು.
  • ಪ್ರತಿದಿನ ಕನಿಷ್ಠ 30 ನಿಮಿಷಗಳ ಕಾಲ ವೇಗವಾಗಿ ನಡೆಯುವುದು, ಸೈಕ್ಲಿಂಗ್ ಅಥವಾ ಯೋಗದಂತಹ ವ್ಯಾಯಾಮ ಮಾಡಿ.
  • ದಿನಕ್ಕೆ 7–8 ಗಂಟೆಗಳ ಗುಣಮಟ್ಟದ ನಿದ್ರೆ ಪಡೆಯಿರಿ.
  • ದೇಹದ ತೂಕವನ್ನು ಆರೋಗ್ಯಕರ ಮಟ್ಟದಲ್ಲಿ ಕಾಪಾಡಿಕೊಳ್ಳಿ.
  • ರಕ್ತದೊತ್ತಡ, ಮಧುಮೇಹ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಮಿತವಾಗಿ ಪರೀಕ್ಷಿಸಿ ನಿಯಂತ್ರಣದಲ್ಲಿಡಿ.
  • ವರ್ಷಕ್ಕೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ.

ಹೃದಯಕ್ಕೆ ಹಾನಿ ಮಾಡುವ ಅಭ್ಯಾಸಗಳು

  • ಧೂಮಪಾನ ಹಾಗೂ ತಂಬಾಕು ಸೇವನೆ
  • ಅತಿಯಾದ ಉಪ್ಪು ಮತ್ತು ಸಕ್ಕರೆ ಸೇವನೆ
  • ಕರಿದ, ಸಂಸ್ಕರಿತ (Processed) ಮತ್ತು ಫಾಸ್ಟ್ ಫುಡ್‌ಗಳ ಅತಿಯಾದ ಸೇವನೆ
  • ದಿನವಿಡೀ ಒಂದೇ ಸ್ಥಳದಲ್ಲಿ ಕುಳಿತುಕೊಳ್ಳುವುದು
  • ಅಧಿಕ ಮದ್ಯಪಾನ
  • ನಿರಂತರ ಮಾನಸಿಕ ಒತ್ತಡ
  • ನಿದ್ರೆಯ ಕೊರತೆ
  • ನಿಯಮಿತ ವ್ಯಾಯಾಮ ಮಾಡದಿರುವುದು

ಈ ಅಭ್ಯಾಸಗಳು ದೀರ್ಘಾವಧಿಯಲ್ಲಿ ಹೃದಯದ ಕಾಯಿಲೆಗಳ ಅಪಾಯವನ್ನು ಹೆಚ್ಚಿಸಬಹುದು.

ಈ ಲಕ್ಷಣಗಳನ್ನು ಎಂದಿಗೂ ನಿರ್ಲಕ್ಷಿಸಬೇಡಿ

  • ಎದೆನೋವು ಅಥವಾ ಎದೆಯಲ್ಲಿ ಒತ್ತಡ
  • ಉಸಿರಾಟದ ತೊಂದರೆ
  • ಅಲ್ಪ ಕೆಲಸಕ್ಕೂ ಆಯಾಸವಾಗುವುದು
  • ತಲೆ ಸುತ್ತುವುದು
  • ಹೃದಯ ಬಡಿತ ಅಸಹಜವಾಗಿ ವೇಗವಾಗುವುದು ಅಥವಾ ನಿಧಾನವಾಗುವುದು
  • ಕಾಲುಗಳಲ್ಲಿ ಊತ
  • ಕುತ್ತಿಗೆ, ದವಡೆ, ಭುಜ ಅಥವಾ ಎಡಗೈಗೆ ಹರಡುವ ನೋವು
  • ತಣ್ಣನೆಯ ಬೆವರು ಮತ್ತು ವಾಕರಿಕೆ

ಇವು ಹೃದಯಾಘಾತ ಅಥವಾ ಇತರ ಗಂಭೀರ ಹೃದಯ ಸಮಸ್ಯೆಗಳ ಸೂಚನೆಯಾಗಿರಬಹುದು.

ಹೃದಯವನ್ನು ಇನ್ನಷ್ಟು ಆರೋಗ್ಯವಾಗಿಡಲು ಸಲಹೆಗಳು:

  • ದಿನಕ್ಕೆ ಕನಿಷ್ಠ 2–3 ಲೀಟರ್ ನೀರು ಕುಡಿಯಿರಿ.
  • ಟ್ರಾನ್ಸ್ ಫ್ಯಾಟ್ ಮತ್ತು ಹೆಚ್ಚು ಉಪ್ಪು ಇರುವ ಪ್ಯಾಕೆಟ್ ಆಹಾರಗಳನ್ನು ಕಡಿಮೆ ಮಾಡಿ.
  • ಧ್ಯಾನ (Meditation) ಮತ್ತು ಪ್ರಾಣಾಯಾಮ ಒತ್ತಡವನ್ನು ಕಡಿಮೆ ಮಾಡಿ ಹೃದಯದ ಆರೋಗ್ಯಕ್ಕೆ ನೆರವಾಗುತ್ತವೆ.
  • ದಿನಕ್ಕೆ ಸುಮಾರು 8,000–10,000 ಹೆಜ್ಜೆ ನಡೆಯುವ ಗುರಿ ಇಟ್ಟುಕೊಳ್ಳಿ.
  • ಮಧುಮೇಹ ಅಥವಾ ರಕ್ತದೊತ್ತಡ ಇರುವವರು ವೈದ್ಯರ ಸಲಹೆಯಂತೆ ಔಷಧಿಗಳನ್ನು ನಿಯಮಿತವಾಗಿ ತೆಗೆದುಕೊಳ್ಳಬೇಕು.
  • ಕುಟುಂಬದಲ್ಲಿ ಹೃದಯ ಕಾಯಿಲೆಯ ಇತಿಹಾಸ ಇದ್ದರೆ 40 ವರ್ಷಗಳ ನಂತರ ನಿಯಮಿತ ಹೃದಯ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ.

ಸೂಚನೆ: ಈ ಲೇಖನವು ಆರೋಗ್ಯ ಜಾಗೃತಿಗಾಗಿ ಮಾತ್ರ. ಯಾವುದೇ ಆರೋಗ್ಯ ಸಮಸ್ಯೆ ಕಂಡುಬಂದರೆ ವೈದ್ಯರ ಸಲಹೆಯಂತೆ ಪರೀಕ್ಷೆ ಹಾಗೂ ಚಿಕಿತ್ಸೆ ಪಡೆಯಿರಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಂಕಿಪುರ, ಡಾಟಿಯಾ ಚುನಾವಣೆಯಲ್ಲಿ ಬಿಜೆಪಿ ಸೋತಿದ್ದು ಏಕೆ?; ಪ್ರಶಾಂತ್ ಕಿಶೋರ್ ಗೆಲುವಿಗೆ ಕಾರಣವೇನು? – Kannada News | Why did BJP lose in Bankipur and Datia Bypolls What is the reason behind Prashant Kishors historical victory

ನವದೆಹಲಿ, ಆಗಸ್ಟ್ 3: ಇಂದು 3 ರಾಜ್ಯಗಳ 3 ವಿಧಾನಸಭಾ ಸ್ಥಾನಗಳಿಗೆ ಉಪಚುನಾವಣೆ ನಡೆದಿದ್ದು, ಬಿಜೆಪಿ ಕೇವಲ ಒಂದು ಸ್ಥಾನವನ್ನು ಮಾತ್ರ ಗೆದ್ದಿದೆ. ಬಿಹಾರದ ಬಂಕಿಪುರದಲ್ಲಿ ಬಿಜೆಪಿಯ ನೀರಜ್ ಸಿನ್ಹಾ ಸೋತರು, ಜನ ಸುರಾಜ್‌ನ ಪ್ರಶಾಂತ್ ಕಿಶೋರ್ (Prashant Kishor) ಗೆದ್ದರು. ಮಧ್ಯಪ್ರದೇಶದ ಡಾಟಿಯಾದಲ್ಲಿ ಕಾಂಗ್ರೆಸ್‌ನ ಘನಶ್ಯಾಮ್ ಸಿಂಗ್ ಬಿಜೆಪಿಯ ಅಶುತೋಷ್ ತಿವಾರಿ ಅವರನ್ನು ಸೋಲಿಸಿದರು. ಬಿಜೆಪಿ ಗುಜರಾತ್‌ನ ಮಂಜಲ್​ಪುರದಲ್ಲಿ ಮಾತ್ರ ಗೆಲುವು ಕಂಡಿದೆ. ಅಲ್ಲಿ ಬಿಜೆಪಿಯ ಸತೇಂದ್ರಭಾಯಿ ಪಟೇಲ್ ಮಂಜಲ್‌ಪುರದಲ್ಲಿ ಕಾಂಗ್ರೆಸ್‌ನ ಭಿಖಾಭಾಯ್ ರಬಾರಿ ಅವರನ್ನು ಭಾರೀ ಅಂತರದಿಂದ ಸೋಲಿಸಿದರು. ಈ ಉಪಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಜನಸುರಾಜ್ ತಲಾ ಒಂದು ಸ್ಥಾನವನ್ನು ಗೆದ್ದಿವೆ.

ಡಾಟಿಯಾ ಚುನಾವಣಾ ಫಲಿತಾಂಶ:

ಮಧ್ಯಪ್ರದೇಶದ ಡಾಟಿಯಾ ವಿಧಾನಸಭಾ ಉಪಚುನಾವಣೆಯ ಫಲಿತಾಂಶಗಳು ಮಧ್ಯಪ್ರದೇಶ ರಾಜಕೀಯಕ್ಕೆ ಮಹತ್ವದ ಸಂದೇಶವನ್ನು ರವಾನಿಸಿವೆ. ಈ ಚುನಾವಣೆಯು ಕೇವಲ ಒಂದು ಸ್ಥಾನಕ್ಕಾಗಿ ನಡೆದ ಸ್ಪರ್ಧೆಯಾಗಿರಲಿಲ್ಲ. ಇದು ಸ್ಥಳೀಯ ನಾಯಕತ್ವ, ಸಂಘಟನೆ, ಅಭ್ಯರ್ಥಿ ಆಯ್ಕೆಯ ಪರೀಕ್ಷೆಯೂ ಆಗಿತ್ತು. ಬಿಜೆಪಿ ಅನಿರೀಕ್ಷಿತ ಸೋಲನ್ನು ಅನುಭವಿಸಿದರೆ, ಒಗ್ಗಟ್ಟಿನ ತಂತ್ರ ಮತ್ತು ಬಲಿಷ್ಠ ಸ್ಥಳೀಯ ನಾಯಕನ ಕಾರಣದಿಂದಾಗಿ ಕಾಂಗ್ರೆಸ್ ಬಹುನಿರೀಕ್ಷಿತ ಗೆಲುವು ಸಾಧಿಸಿತು.

ಇದನ್ನೂ ಓದಿ: 30 ವರ್ಷದ ಕೋಟೆ 30 ದಿನಗಳಲ್ಲಿ ಕುಸಿಯಿತು’; ಬಿಜೆಪಿಯ ಭದ್ರಕೋಟೆ ಬಂಕಿಪುರದಲ್ಲಿ ಜಯ ಸಾಧಿಸಿದ ಪ್ರಶಾಂತ್ ಕಿಶೋರ್ ಲೇವಡಿ

ಮಾಜಿ ಗೃಹ ಸಚಿವ ಮತ್ತು ಈ ಪ್ರದೇಶದ ಪ್ರಭಾವಿ ನಾಯಕ ಡಾ. ನರೋತ್ತಮ್ ಮಿಶ್ರಾ ಅವರಿಗೆ ಬಿಜೆಪಿ ಟಿಕೆಟ್ ನೀಡಲು ನಿರಾಕರಿಸಿದ್ದು ಇಲ್ಲಿ ಬಿಜೆಪಿ ಸೋಲಲು ದೊಡ್ಡ ಕಾರಣ ಎನ್ನಲಾಗಿದೆ. ನರೋತ್ತಮ್ ಮಿಶ್ರಾ ಹಲವು ವರ್ಷಗಳಿಂದ ಡಾಟಿಯಾ ರಾಜಕೀಯದಲ್ಲಿ ಪ್ರಮುಖ ವ್ಯಕ್ತಿಯಾಗಿದ್ದಾರೆ.

ಬಂಕಿಪುರ ಕ್ಷೇತ್ರದ ಚುನಾವಣಾ ಫಲಿತಾಂಶ:

ಬಂಕಿಪುರ ಕ್ಷೇತ್ರದಲ್ಲಿ ಬಿಜೆಪಿಯ ಸೋಲಿನ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ, ಏಕೆಂದರೆ ಇಂದು ಬಿಜೆಪಿ ಬಂಕಿಪುರ ಸ್ಥಾನವನ್ನು ಕಳೆದುಕೊಂಡಿದೆ. ಆ ಸ್ಥಾನವನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಕೆಲವೇ ತಿಂಗಳುಗಳ ಹಿಂದೆ 50 ಸಾವಿರಕ್ಕೂ ಹೆಚ್ಚು ಮತಗಳಿಂದ ಗೆದ್ದಿದ್ದರು. ಬಿಹಾರದ ಬಂಕಿಪುರ ವಿಧಾನಸಭಾ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಜನ ಸೂರಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಇಂದು ಭಾರೀ ಗೆಲುವು ಸಾಧಿಸಿದ್ದಾರೆ. ಇದು ಬಿಜೆಪಿಯ ಭದ್ರಕೋಟೆಯಾಗಿದ್ದು, 1995ರಿಂದ ಬಿಜೆಪಿ ಈ ಸ್ಥಾನವನ್ನು ಕಳೆದುಕೊಂಡಿಲ್ಲ. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಈ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಉಪಚುನಾವಣೆ ನಡೆಯಿತು.

ಪ್ರಶಾಂತ್ ಕಿಶೋರ್ ತಮ್ಮ ಹತ್ತಿರದ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ನೀರಜ್ ಕುಮಾರ್ ಸಿನ್ಹಾ ಅವರನ್ನು 19,324 ಮತಗಳಿಂದ ಸೋಲಿಸಿದರು. ಕಿಶೋರ್ 64,151 ಮತಗಳನ್ನು ಪಡೆದರೆ, ನೀರಜ್ ಕುಮಾರ್ ಸಿನ್ಹಾ 44,827 ಮತಗಳನ್ನು ಪಡೆದರು. ಆರ್‌ಜೆಡಿ ಕೂಡ ಕಳಪೆ ಪ್ರದರ್ಶನ ನೀಡಿತು. ಆರ್‌ಜೆಡಿ ಅಭ್ಯರ್ಥಿ ರೇಖಾ ಕುಮಾರಿ ಕೇವಲ 14,273 ಮತಗಳನ್ನು ಪಡೆದು, ಪ್ರಶಾಂತ್ ಕಿಶೋರ್ ವಿರುದ್ಧ 49,878 ಮತಗಳ ಅಂತರದಿಂದ ಸೋತರು. ಈ ಗೆಲುವಿನೊಂದಿಗೆ, ಖ್ಯಾತ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಇತಿಹಾಸ ನಿರ್ಮಿಸಿದರು. ಬಿಜೆಪಿಯ ಅಭ್ಯರ್ಥಿ ಅಭಿಷೇಕ್ ಬಂಟಿ ಅವರು ಕೌಟುಂಬಿಕ ಕಾರಣಗಳನ್ನು ನೀಡಿ ಕೊನೆಯ ಕ್ಷಣದಲ್ಲಿ ಕಣದಿಂದ ಹಿಂದೆ ಸರಿದ ನಂತರ ನೀರಜ್ ಕುಮಾರ್ ಸಿನ್ಹಾ ಅವರನ್ನು ಬಿಜೆಪಿ ತರಾತುರಿಯಲ್ಲಿ ಕಣಕ್ಕಿಳಿಸಿತ್ತು.

ಇದನ್ನೂ ಓದಿ: ಬಿಹಾರ ಉಪಚುನಾವಣೆ: ಪ್ರಶಾಂತ್ ಕಿಶೋರ್ ಅವರ ಜನ್ ಸುರಾಜ್ ಪಕ್ಷಕ್ಕೆ ಪರೀಕ್ಷೆ: ಬಂಕಿಪುರದಲ್ಲಿ ತ್ರಿಕೋನ ಸ್ಪರ್ಧೆ

ಬಂಕಿಪುರದಲ್ಲಿ ಬಿಜೆಪಿ ಸೋಲಿಗೆ ಕಾರಣಗಳೇನು?:

ಅತಿಯಾದ ಆತ್ಮವಿಶ್ವಾಸವೇ ಸೋಲಿಗೆ ದೊಡ್ಡ ಕಾರಣ ಎಂದು ಪರಿಗಣಿಸಲಾಗುತ್ತಿದೆ. ನೀಟ್ ವಿದ್ಯಾರ್ಥಿ ಚಳವಳಿಯ ಪ್ರಭಾವ ಚುನಾವಣೆಯಲ್ಲಿ ಕಂಡುಬಂದಿತು. ಯುಜಿಸಿ ವಿಷಯದಲ್ಲಿ ಮೇಲ್ಜಾತಿಯವರ ಕೋಪದಿಂದಾಗಿ ಬಿಜೆಪಿ ಸೋಲು ಅನುಭವಿಸಿತು. ಭಾರತ್ ತಿವಾರಿ ಘಟನೆಯಿಂದ ಪ್ರಮುಖ ಮತದಾರರು ಕೋಪಗೊಂಡಿದ್ದರು. ಸಾಮ್ರಾಟ್ ಚೌಧರಿ ವಿರುದ್ಧ ಸೃಷ್ಟಿಯಾದ ವಾತಾವರಣದ ಪರಿಣಾಮ ಚುನಾವಣೆಯಲ್ಲಿ ಗೋಚರಿಸಿತು. ಪ್ರಶಾಂತ್ ಕಿಶೋರ್ ಅವರ ವರ್ಚಸ್ಸು ಮತ್ತು ಅವರು ಎತ್ತಿದ್ದ ವಿಷಯಗಳು ಸಾರ್ವಜನಿಕ ಬೆಂಬಲವನ್ನು ಗಳಿಸಿದವು. ಕಾಂಗ್ರೆಸ್ ಮತ್ತು ಆರ್‌ಜೆಡಿಯ ಮತಗಳು ಪ್ರಶಾಂತ್ ಕಿಶೋರ್ ಪರವಾಗಿ ಬಿದ್ದವು. ಚುನಾವಣೆಗಳಲ್ಲಿ ಜಾತಿ ಸಮೀಕರಣಗಳ ಬದಲು ವಿಷಯಗಳು ಮತ್ತು ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಯಿತು. ಬಿಜೆಪಿಯ ಅಭ್ಯರ್ಥಿ ಆಯ್ಕೆ ದುರ್ಬಲವಾಗಿತ್ತು, ಇದು ಸೋಲಿಗೆ ಕಾರಣವಾಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

CWG 2026: ಈ ಕ್ರೀಡೆಗಳಲ್ಲಿ ಭಾರತ ಒಂದೇ ಒಂದು ಪದಕ ಗೆಲ್ಲಲಿಲ್ಲ..! – Kannada News | 2026 Commonwealth Games: India’s Medal Haul, Strengths and Sports Needing Improvement

2026 ರ ಕಾಮನ್‌ವೆಲ್ತ್ ಕ್ರೀಡಾಕೂಟ ಅಂತ್ಯವಾಗಿದ್ದು, ಈ ಸ್ಪರ್ಧೆಯಲ್ಲಿ ಭಾರತ 39 ಪದಕಗಳನ್ನು ಗೆಲ್ಲುವ ಮೂಲಕ ತನ್ನ ಅಭಿಯಾನವನ್ನು ಮುಗಿಸಿತು. ಇದರಲ್ಲಿ 13 ಚಿನ್ನ, 17 ಬೆಳ್ಳಿ ಮತ್ತು 9 ಕಂಚಿನ ಪದಕಗಳು ಸೇರಿವೆ. ಇದರೊಂದಿಗೆ, ಭಾರತ ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಬಾಕ್ಸಿಂಗ್, ಜೂಡೋ, ಅಥ್ಲೆಟಿಕ್ಸ್‌ನಲ್ಲಿ ಭಾರತ ಹೆಚ್ಚು ಪದಕಗಳನ್ನು ಗೆದ್ದುಕೊಂಡಿತು. ಆದರೆ ಕೆಲವು ಕ್ರೀಡೆಗಳಲ್ಲಿ ಭಾರತಕ್ಕೆ ತನ್ನ ಛಾಪು ಮೂಡಿಸಲು ಸಾಧ್ಯವಾಗಲಿಲ್ಲ(PC-PTI).

Source link

ಪಾಕ್ ಮುಖವಾಡ ಮತ್ತೊಮ್ಮೆ ಬಯಲು; ಪಾಕಿಸ್ತಾನದಲ್ಲಿ 30ಕ್ಕೂ ಹೆಚ್ಚು ಲಷ್ಕರ್ ಉಗ್ರರ ಹತ್ಯೆಯನ್ನು ಒಪ್ಪಿಕೊಂಡ ಭಯೋತ್ಪಾದಕ – Kannada News | LeT Terrorist Rizwan Hanif Admits over 30 Outfit Members Killed In Pakistan Alleges India’s Hand

ಇಸ್ಲಾಮಾಬಾದ್, ಆಗಸ್ಟ್ 3: ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಜಮ್ಮು-ಕಾಶ್ಮೀರದ (PoK) ಪ್ರಮುಖ ನಗರಗಳಲ್ಲಿ ಕಳೆದ ಮೂರರಿಂದ 4 ವರ್ಷಗಳಲ್ಲಿ ತಮ್ಮ ಸಂಘಟನೆಯ 30ಕ್ಕೂ ಹೆಚ್ಚು ಉಗ್ರರನ್ನು ಕೊಲ್ಲಲಾಗಿದೆ ಎಂದು ಲಷ್ಕರ್-ಎ-ತೊಯ್ಬಾ (LeT) ಪ್ರಮುಖ ಉಗ್ರನೊಬ್ಬ ಇದೇ ಮೊದಲ ಬಾರಿಗೆ ಬಹಿರಂಗವಾಗಿ ಒಪ್ಪಿಕೊಂಡಿದ್ದಾನೆ. ಅಲ್ಲದೆ, ಈ ದಾಳಿಗಳ ಹಿಂದೆ ಭಾರತದ ಜೊತೆ ಸಂಪರ್ಕ ಹೊಂದಿರುವ ಅಪರಿಚಿತ ಬಂದೂಕುಧಾರಿಗಳ ಕೈವಾಡವಿದೆ ಎಂದು ಆತ ಆರೋಪಿಸಿದ್ದಾನೆ. ಈ ಮೂಲಕ ಪಾಕಿಸ್ತಾನದಲ್ಲಿ (Pakistan) ಈಗಲೂ ಲಷ್ಕರ್ ಸಂಘಟನೆ ಬಹಳ ಸಕ್ರಿಯವಾಗಿದೆ ಎಂಬುದು ಬಯಲಾದಂತಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ಲಷ್ಕರ್ ಸಂಘಟನೆಯ ಉಗ್ರ ರಿಜ್ವಾನ್ ಹನೀಫ್ ಈ ಹೇಳಿಕೆ ನೀಡಿದ್ದಾನೆ. ರಿಜ್ವಾನ್ ಹನೀಫ್ ಲಷ್ಕರ್-ಎ-ತೊಯ್ಬಾದ ಪಾಕ್ ಆಕ್ರಮಿತ ಕಾಶ್ಮೀರ (PoK) ಭಾಗದ ಹಿರಿಯ ಕಮಾಂಡರ್ ಮತ್ತು ಉಪ ಮುಖ್ಯಸ್ಥನಾಗಿದ್ದು, ಗಡಿಪಾರು ನುಸುಳುವಿಕೆ, ನೇಮಕಾತಿ ಮತ್ತು PAFFನಂತಹ ಉಗ್ರ ಸಂಘಟನೆಗಳೊಂದಿಗೆ ಸಮನ್ವಯ ಸಾಧಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾನೆ. ಈತ ಭಾರತಕ್ಕೂ ಬೇಕಾದ ಉಗ್ರನಾಗಿದ್ದಾನೆ.

ವಿಡಿಯೋದಲ್ಲೇನಿದೆ?:

ತನ್ನ ಭಾಷಣದಲ್ಲಿ ಹನೀಫ್, ಕಳೆದ 3ರಿಂದ 4 ವರ್ಷಗಳಲ್ಲಿ ಪಾಕಿಸ್ತಾನದ ಪೇಶಾವರ, ಕರಾಚಿ, ರಾವಲ್ಪಿಂಡಿ, ರಾವಲಾಕೋಟ್ ಮತ್ತು ಮುಜಫರಾಬಾದ್‌ಗಳಲ್ಲಿ 30ಕ್ಕೂ ಹೆಚ್ಚು ಲಷ್ಕರ್-ಎ-ತೊಯ್ಬಾ ಸದಸ್ಯರನ್ನು ಹತ್ಯೆ ಮಾಡಲಾಗಿದೆ ಎಂದು ಹೇಳಿಕೊಂಡಿದ್ದಾನೆ. ಈ ಹತ್ಯೆಗಳನ್ನು ಭಾರತೀಯ ಏಜೆಂಟ್‌ಗಳು ಮಾಡಿದ್ದಾರೆ ಎಂದು ಕೂಡ ಆತ ಆರೋಪಿಸಿದ್ದಾನೆ. ಭಾರತದ ಬೆಂಬಲಿತ ‘ಅಪರಿಚಿತ ಬಂದೂಕುಧಾರಿಗಳು’ ಈ ದಾಳಿ ನಡೆಸಿದ್ದಾರೆ ಎಂದು ಆತ ಆರೋಪಿಸಿದ್ದಾನೆ. ಆದರೆ, ತನ್ನ ಈ ಆರೋಪಕ್ಕೆ ಆತ ಯಾವುದೇ ಸಾಕ್ಷ್ಯಾಧಾರಗಳನ್ನು ಒದಗಿಸಿಲ್ಲ.

ಇದನ್ನೂ ಓದಿ: ಪಾಕಿಸ್ತಾನದಲ್ಲಿ ಆತ್ಮಾಹುತಿ ಬಾಂಬ್ ದಾಳಿ: ಐವರು ಪೊಲೀಸರು ಸೇರಿ 14 ಮಂದಿ ದಾರುಣ ಸಾವು

ಕಳೆದ 3 ರಿಂದ 4 ವರ್ಷಗಳಲ್ಲಿ 2008ರ ಮುಂಬೈ ಭಯೋತ್ಪಾದಕ ದಾಳಿಯ ಹಿಂದಿದ್ದ ತಮ್ಮ ಸಂಘಟನೆಯ ಅನೇಕ ಸದಸ್ಯರನ್ನು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದ (PoK) ವಿವಿಧ ಭಾಗಗಳಲ್ಲಿ ಕೊಲ್ಲಲಾಗಿದೆ ಎಂದು ಕೂಡ ಆತ ಹೇಳಿಕೊಂಡಿದ್ದಾನೆ. ಅಲ್-ಖೈದಾ ಮತ್ತು ತಾಲಿಬಾನ್ ನಂಟು ಹೊಂದಿರುವ ಕಾರಣಕ್ಕೆ 2005ರಲ್ಲಿ ವಿಶ್ವಸಂಸ್ಥೆಯಿಂದ ನಿಷೇಧಕ್ಕೊಳಗಾದ ಲಷ್ಕರ್-ಎ-ತೊಯ್ಬಾಗೆ ಸೇರಿದ ಉಗ್ರನೊಬ್ಬ ಇಂತಹ ಹತ್ಯೆಗಳನ್ನು ಸಾರ್ವಜನಿಕವಾಗಿ ಒಪ್ಪಿಕೊಂಡಿರುವುದು ಇದೇ ಮೊದಲ ಬಾರಿಯಾಗಿದೆ.

ಇದನ್ನೂ ಓದಿ: ಭಾರತದ ಗಡಿಯಲ್ಲಿ ಪಾಕಿಸ್ತಾನದಿಂದ ಚೀನಾದ 250 ಫಿರಂಗಿಗಳ ನಿಯೋಜನೆ

ಹಿಂದೂ ಧರ್ಮಕ್ಕೆ ಅವಮಾನ:

ಪಾಕಿಸ್ತಾನದಲ್ಲಿ ತೀವ್ರ ಪ್ರತಿಭಟನೆಗಳು, ಬಲೂಚಿಸ್ತಾನ್ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಅಶಾಂತಿ ಹಾಗೂ ಅಫ್ಘಾನಿಸ್ತಾನ ಗಡಿಯಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಬೆನ್ನಲ್ಲೇ ಈ ಭಾಷಣ ಹೊರಬಿದ್ದಿದೆ. ತನ್ನ ಭಾಷಣದ ಸಮಯದಲ್ಲಿ, ಹನೀಫ್ ಹಿಂದೂ ಧರ್ಮದ ವಿರುದ್ಧ ಅತ್ಯಂತ ಆಕ್ಷೇಪಾರ್ಹ ಮತ್ತು ದ್ವೇಷಪೂರಿತ ಭಾಷೆಯನ್ನು ಬಳಸಿದ್ದು, ಹಿಂದೂ ಧರ್ಮದ ಅನುಯಾಯಿಗಳನ್ನು ನಿಂದಿಸಿದ್ದಾನೆ.

ಭಾರತದಿಂದ ದೃಢ:

ಭಾರತೀಯ ಭದ್ರತಾ ಸಂಸ್ಥೆಗಳು ಈ ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸಿದ್ದು, ವಿಡಿಯೋದಲ್ಲಿರುವ ವ್ಯಕ್ತಿಯು ಭಾರತಕ್ಕೆ ಬೇಕಾಗಿರುವ ಲಷ್ಕರ್‌ನ ಹಿರಿಯ ಉಗ್ರ ರಿಜ್ವಾನ್ ಹನೀಫ್ ಎಂಬುದನ್ನು ದೃಢಪಡಿಸಿವೆ. ಪಾಕಿಸ್ತಾನದಲ್ಲಿನ ಸರಣಿ ಹತ್ಯೆಗಳ ಹಿಂದೆ ಭಾರತೀಯ ಗುಪ್ತಚರ ಸಂಸ್ಥೆಗಳ ಕೈವಾಡವಿದೆ ಎಂಬ ಆತನ ಆರೋಪಗಳನ್ನು ಕೂಡ ಭಾರತ ಸಂಪೂರ್ಣವಾಗಿ ತಳ್ಳಿಹಾಕಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ರಶ್ಮಿಕಾ ಮಂದಣ್ಣ ಸೊಂಟಕ್ಕೆ ಪೆಟ್ಟಾಗಿದ್ದು ಹೇಗೆ? ಎಲ್ಲವನ್ನೂ ವಿವರಿಸಿದ ನಟಿ – Kannada News | Rashmika Mandanna reveals the reason for Hip Injury during Mysaa Movie Shooting

ಖ್ಯಾತ ನಟಿ ರಶ್ಮಿಕಾ ಮಂದಣ್ಣ ಅವರು ಮುಂಬರುವ ‘ಮೈಸಾ’ (Mysaa) ಚಿತ್ರದ ಶೂಟಿಂಗ್ ವೇಳೆ ತೀವ್ರವಾಗಿ ಗಾಯಗೊಂಡಿದ್ದು, ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ದೀರ್ಘ ಪೋಸ್ಟ್ ಹಂಚಿಕೊಳ್ಳುವ ಮೂಲಕ ಮೌನ ಮುರಿದಿದ್ದಾರೆ. ಸತತವಾಗಿ ಗಾಯಗೊಳ್ಳುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಅವರು, ತಮ್ಮ ಚೇತರಿಕೆಯ ಹಂತದ ಫೋಟೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ರಶ್ಮಿಕಾ ಮಂದಣ್ಣ (Rashmika Mandanna) ಅವರ ಸೊಂಟಕ್ಕೆ ಪೆಟ್ಟಾಗಿತ್ತು. ಆ ಸುದ್ದಿ ತಿಳಿದು ಅಭಿಮಾನಿಗಳಿಗೆ ಬೇಸರ ಆಗಿತ್ತು. ಆದರೆ ಈಗ ಅವರು ಚೇತರಿಸಿಕೊಳ್ಳುತ್ತಿದ್ದಾರೆ.

ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ರಶ್ಮಿಕಾ ಹೇಳಿದ್ದೇನು?

ತಮ್ಮ ಆರೋಗ್ಯದ ಸ್ಥಿತಿಯ ಬಗ್ಗೆ ವಿವರಿಸಿದ ರಶ್ಮಿಕಾ, ‘ಗಾಯಗಳಾಗುವುದು ನಿಜಕ್ಕೂ ಕಿರಿಕಿರಿ ಉಂಟುಮಾಡುತ್ತದೆ. ಈ ವಿಷಯ ಯಾರಿಗೂ ತಿಳಿಯಬಾರದು ಎಂದುಕೊಂಡಿದ್ದೆ. ಸತತವಾಗಿ ನನಗೆ ಆಗುತ್ತಿರುವ ಮೂರನೇ ಗಾಯವಿದು. ನನ್ನ ದೇಹವನ್ನು ಯಂತ್ರದಂತೆ ನೋಡದೆ, ಮನುಷ್ಯನ ದೇಹದಂತೆ ನೋಡಿಕೊಳ್ಳುವುದನ್ನು ನಾನು ಕಲಿಯಬೇಕು’ ಎಂದು ಬರೆದುಕೊಂಡಿದ್ದಾರೆ.

ರಶ್ಮಿಕಾ ಮಂದಣ್ಣ ಗಾಯದ ತೀವ್ರತೆ:

‘ನಮ್ಮ ಸೊಂಟವನ್ನು ಕಾಲಿಗೆ ಜೋಡಿಸುವ ನಾಲ್ಕು ಸ್ನಾಯುಗಳಲ್ಲಿ ಒಂದಾದ ಬಲ ಸೊಂಟದ ಸ್ನಾಯು ತುಂಡಾಗಿದೆ. ನಾನು ಕಾಲನ್ನು ಎತ್ತಲು ಅದು ಮತ್ತೆ ಸರಿಯಾಗಿ ಜೋಡಣೆಯಾಗಬೇಕಿದೆ. ಮೈಸಾ ಸಿನಿಮಾದ ಡ್ಯಾನ್ಸ್ ಶೂಟಿಂಗ್ ವೇಳೆ ಈ ಘಟನೆ ನಡೆಯಿತು. ಇದು ನಾನು ಮಾಡುತ್ತಿರುವ ಅತ್ಯಂತ ಸವಾಲಿನ ಸಿನಿಮಾವಾಗಿದೆ’ ಎಂದು ರಶ್ಮಿಕಾ ಮಂದಣ್ಣ ಅವರು ಹೇಳಿದ್ದಾರೆ.

‘ದೇವರೇ ನೀಡಿದ ಬಲವಂತದ ರಜೆ’

‘ಈ ಗಾಯದಿಂದ ನೋವಾಗುತ್ತಿದೆಯಾದರೂ ಅದು ತಡೆಯಲಾರದಷ್ಟು ತೀವ್ರವಾಗಿಲ್ಲ. ನಾನು ವಿಶ್ರಾಂತಿಯನ್ನೇ ತೆಗೆದುಕೊಳ್ಳುವುದಿಲ್ಲ ಎಂದು ಭಾವಿಸಿ ದೇವರೇ ನನಗಾಗಿ ಈ ಬಲವಂತದ ರಜೆ ನೀಡಿದ್ದಾನೆ ಅನಿಸುತ್ತಿದೆ’ ಎಂದು ರಶ್ಮಿಕಾ ಸಮಾಧಾನಪಟ್ಟುಕೊಂಡಿದ್ದಾರೆ. ಈ ಸಂದರ್ಭದಲ್ಲಿ ವರ್ಕೌಟ್ ಹಾಗೂ ರನ್ನಿಂಗ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅವರು ಚಿಂತೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ‘ಮೈಸಾ’ ಚಿತ್ರಕ್ಕಾಗಿ ನೀರಿನಾಳದೊಳಗೆ ಇಳಿದು ಫೈಟ್ ಮಾಡಿದ ರಶ್ಮಿಕಾ ಮಂದಣ್ಣ

‘ನನಗೆ ಯಾವುದೇ ವರ್ಕೌಟ್ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ತೂಕ ಹೆಚ್ಚಾಗದಂತೆ ನೋಡಿಕೊಳ್ಳಬೇಕಿದೆ. ಸದ್ಯಕ್ಕೆ ಗಿಫ್ಟ್ ಸ್ವೀಕರಿಸುತ್ತಾ, ಪಜಲ್ಸ್ ಬಿಡಿಸುತ್ತಾ ಸಮಯ ಕಳೆಯುತ್ತಿದ್ದೇನೆ. ನೀವು ಚಿಂತಿಸಬೇಡಿ, ಶೀಘ್ರದಲ್ಲೇ ಚೇತರಿಸಿಕೊಳ್ಳುತ್ತೇನೆ’ ಎಂದು ಅಭಿಮಾನಿಗಳಿಗೆ ರಶ್ಮಿಕಾ ಮಂದಣ್ಣ ಅವರು ಭರವಸೆ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೆಳಗ್ಗೆ ಎದ್ದಾಕ್ಷಣ ಇವುಗಳನ್ನು ನೋಡುವುದರಿಂದ ಶುಭವಾಗುತ್ತಂತೆ – Kannada News | These things help you start positive day

ಬೆಳಗಿನ ಸಮಯವನ್ನು (morning time) ದಿನದ ಪ್ರಮುಖ ಸಮಯವೆಂದು ಪರಿಗಣಿಸಲಾಗುತ್ತದೆ. ನಾವು ನಮ್ಮ ದಿನವನ್ನು ಪ್ರಾರಂಭಿಸುವ ವಿಧಾನವು ನಮ್ಮ ಇಡೀ ದಿನವನ್ನು ನಿರ್ಧರಿಸುತ್ತದೆ ನಾವು ಎದ್ದ ತಕ್ಷಣ ಸಕಾರಾತ್ಮಕಮನಸ್ಥಿತಿಯಲ್ಲಿದ್ದರೆ ಮತ್ತು ಸಕಾರಾತ್ಮಕ ಅಂಶಗಳನ್ನು ನೋಡಿದರೆ, ನಮ್ಮ ಮನಸ್ಥಿತಿ ತಾಜಾ ಮತ್ತು ಸಕಾರಾತ್ಮಕವಾಗಿರುತ್ತದೆ.  ಅದೇ ಮೊಬೈಲ್‌ ಇತ್ಯಾದಿ ನಕಾರಾತ್ಮಕ ವಿಷಯಗಳನ್ನು ನೋಡಿದರೆ, ದಿನವಿಡೀ ಉದ್ವೇಗ, ಕೋಪ ಮತ್ತು ಕಿರಿಕಿರಿಯುಂಟಾಗುತ್ತದೆ. ಅದಕ್ಕಾಗಿಯೇ ಬೆಳಗ್ಗೆ ಎದ್ದ ತಕ್ಷಣ ಧನಾತ್ಮಕ ಮನಸ್ಥಿತಿಯೊಂದಿಗೆ ದಿನವನ್ನು ಆರಂಭಿಸಬೇಕು ಅನ್ನೋದು. ಇದರ ಜೊತೆಗೆ ಬೆಳಗ್ಗೆ ಎದ್ದ ತಕ್ಷಣ ಈ ಶುಭ ವಿಷಯಗಳನ್ನು ನೋಡುವುದರಿಂದಲೂ ಆ ಸಂಪೂರ್ಣ ದಿನವೇ ಉತ್ತಮವಾಗಿರುತ್ತದೆ. ಹಾಗಿದ್ರೆ ಬೆಳಗ್ಗೆ ಎದ್ದ ತಕ್ಷಣ ಏನು ನೋಡಿದರೆ ಒಳ್ಳೆಯದು ಎಂಬುದನ್ನು ನೋಡೋಣ ಬನ್ನಿ.

ಬೆಳಗ್ಗೆ ಎದ್ದಾಕ್ಷಣ ನೀವು ನೋಡಬೇಕಾದ ಸಂಗತಿಗಳು:

ಬೆಳಿಗ್ಗೆ ಎದ್ದು ನಿಮ್ಮ ಅಂಗೈಗಳನ್ನು ನೋಡಬೇಕು: ಬೆಳಗ್ಗೆ ಎದ್ದ ತಕ್ಷಣ ಮೊದಲು ನಿಮ್ಮ ಕೈಗಳನ್ನು ಒಟ್ಟಿಗೆ ಸೇರಿಸಿ ಮತ್ತು ನಿಮ್ಮ ಅಂಗೈಗಳನ್ನು ನೋಡಿ. ಪ್ರಾಚೀನ ನಂಬಿಕೆಗಳ ಪ್ರಕಾರ, ಲಕ್ಷ್ಮಿ ದೇವಿಯು ನಮ್ಮ ಕೈಗಳ ಮುಂಭಾಗದಲ್ಲಿ, ಸರಸ್ವತಿ ದೇವಿಯು ಮಧ್ಯದಲ್ಲಿ ಮತ್ತು ವಿಷ್ಣುವು ಕೆಳಭಾಗದಲ್ಲಿ ವಾಸಿಸುತ್ತಾರೆ. ಬೆಳಿಗ್ಗೆ ಅಂಗೈಯನ್ನು ನೋಡಿ ನಂತರ ಕೈಯನ್ನು ನಿಮ್ಮ ಮುಖದ ಮೇಲೆ ಸವರುವುದರಿಂದ ದೇವರ ಆಶೀರ್ವಾದ ಸಿಗುತ್ತದೆ. ಇದು ಸಕಾರಾತ್ಮಕ ಶಕ್ತಿಯನ್ನು ತರುತ್ತದೆ.

ನಗುತ್ತಿರುವ ಫೋಟೋ ಅಥವಾ ದೇವರ ವಿಗ್ರಹ: ಬೆಳಗ್ಗೆ ಎದ್ದಾಗ, ನೀವು ಮೊದಲು ದೇವರ ಫೋಟೋವನ್ನು ನೋಡುವುದು ಕೂಡ ಶುಭದ ಸಂಕೇತ. ಬೆಳಿಗ್ಗೆ ದೇವರ ಮುಖವನ್ನು ನೋಡುವುದರಿಂದ ನಿಮ್ಮ ಮನಸ್ಸಿಗೆ ಶಾಂತಿ ಸಿಗುತ್ತದೆ ಮತ್ತು ನಕಾರಾತ್ಮಕ ಆಲೋಚನೆಗಳು ದೂರವಾಗುತ್ತವೆ. ಹಾಗಾಗಿ ಶಾಂತ ಹಾಗೂ ನಗು ಮುಖದ ದೇವರ ಫೋಟೋವನ್ನು ಮಲಗುವ ಕೋಣೆಯಲ್ಲಿ ಇರಿಸಿ.

ತಂದೆತಾಯಿ, ಹಿರಿಯರ ಮುಖ ನೋಡಿ ಅವರ ಪಾದಗಳನ್ನು ಮುಟ್ಟುವುದು: ಬೆಳಿಗ್ಗೆ ಎದ್ದು ನಿಮ್ಮ ಹೆತ್ತವರ ಅಥವಾ ಮನೆಯ ಹಿರಿಯೆ ಮುಖವನ್ನು ನೋಡಿ, ಅವರ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆದರೆ, ತುಂಬಾನೇ ಒಳ್ಳೆಯದಾಗುತ್ತದಂತೆ. ಇದರಿಂದ ಮನೆಯಲ್ಲಿ ಸಂತೋಷ ಮತ್ತು ಶಾಂತಿಯ ವಾತಾವರಣವು ಸೃಷ್ಟಿಯಾಗುತ್ತದೆ, ಕುಟುಂಬದಲ್ಲಿ ಪ್ರೀತಿ ಬೆಳೆಯುತ್ತದೆ ಮತ್ತು ಇದರೊಂದಿಗೆ, ನಿಮ್ಮ ಇಡೀ ದಿನವು ತುಂಬಾ ಉತ್ತಮವಾಗಿರುತ್ತದೆ.

ಇದನ್ನೂ ಓದಿ: ತಪ್ಪುಗಳನ್ನು ಮಾಡಿದರೆ ಎಂದಿಗೂ ಮನೆಯಲ್ಲಿ ಶಾಂತಿ, ಸಮೃದ್ಧಿ ನೆಲೆಸುವುದಿಲ್ಲ

ಹಚ್ಚ ಹಸಿರಿನ ಗಿಡ, ಮರಗಳನ್ನು ನೋಡುವುದು: ಬೆಳಿಗ್ಗೆ ಎದ್ದು ನಿಮ್ಮ ಬಾಲ್ಕನಿ, ಟೆರೇಸ್ ಅಥವಾ ಕಿಟಕಿಯಿಂದ ಹಚ್ಚ ಹಸಿರಿನ ಸಸ್ಯಗಳು, ಮರಗಳು ಅಥವಾ ಅರಳಿರುವವ ಹೂವುಗಳನ್ನು ನೋಡುವುದು ಕೂಡ ತುಂಬಾನೇ ಒಳ್ಳೆಯದು.  ಹಸಿರು ಶಾಂತಿ ಮತ್ತು ಪ್ರಗತಿಯನ್ನು ಸಂಕೇತವಾಗಿದ್ದು, ಹಚ್ಚ ಹಸಿರಿನ ವಾತಾವರಣವನ್ನು ನೋಡುವುದರಿಂದ ಒತ್ತಡ ನಿವಾರಣೆಯಾಗುತ್ತದೆ, ಸಂಪೂರ್ಣ ದಿನವೇ ಆಹ್ಲಾದಕರವಾಗಿರುತ್ತದೆ.

ಪಕ್ಷಿಗಳ ಶಬ್ದ ಕೇಳುವುದು ಮತ್ತು ನೀರಿನಿಂದ ತುಂಬಿದ ಪಾತ್ರೆಯನ್ನು ನೋಡುವುದು: ಬೆಳಿಗ್ಗೆ ಪಕ್ಷಿಗಳ ಚಿಲಿಪಿಲಿಯನ್ನು ಕೇಳುವುದು, ಬೆಳಿಗ್ಗೆ ಎದ್ದ ತಕ್ಷಣ ನೀರಿನಿಂದ ತುಂಬಿದ ಪಾತ್ರೆಯನ್ನು ನೋಡುವುದು ತುಂಬಾನೇ ಒಳ್ಳೆಯದು. ಅಲ್ಲದೆ ನೀರು ಮತ್ತು ಜಲಪಾತಗಳ ಚಿತ್ರಗಳನ್ನು ನೋಡುವುದು ಕೂಡ ಒಳ್ಳೆಯದು. ಇದರಿಂದ ಮಾನಸಿಕ ಶಾಂತಿ ದೊರೆಯುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪದಕ ವಿಜೇತರಿಗೆ ಕೇಂದ್ರ ಮತ್ತು ರಾಜ್ಯದಿಂದ ಸಿಗುವ ನಗದು ಬಹುಮಾನವೆಷ್ಟು? – Kannada News | Indian Athletes’ Cash Awards: Olympics, CWG, Asian Games Medal Prize Money Guide

11 ದಿನಗಳ ಕಾಲ ನಡೆದ 2026 ರ ಕಾಮನ್‌ವೆಲ್ತ್ ಕ್ರೀಡಾಕೂಟ (Commonwealth Games) ಅಂತ್ಯಗೊಂಡಿದೆ. ಈ ಕ್ರೀಡಾಕೂಟದಲ್ಲಿ ಭಾರತ ಒಟ್ಟು 39 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಗಳಿಸಿತು. ದೇಶದ ಕ್ರೀಡಾಪಟುಗಳು ಒಟ್ಟು 13 ಚಿನ್ನ, 17 ಬೆಳ್ಳಿ ಮತ್ತು 9 ಕಂಚಿನ ಪದಕಗಳನ್ನು ಗೆದ್ದಿದ್ದಾರೆ. ಈ ಪದಕ ವಿಜೇತರಿಗೆ ಪದಕಗಳ ಜೊತೆಗೆ ಬಹುಮಾನದ ರೂಪದಲ್ಲಿ ಎಷ್ಟು ಹಣ ಸಿಕ್ಕಿತು ಎಂಬುದು ಹಲವರ ಪ್ರಶ್ನೆಯಾಗಿದೆ. ಅದಕ್ಕೆ ಉತ್ತರವೆಂದರೆ ಕಾಮನ್‌ವೆಲ್ತ್ ಕ್ರೀಡಾಕೂಟದ ಆಯೋಜಕರಿಂದ ಪದಕ ವಿಜೇತರಿಗೆ ನಗದು ರೂಪದಲ್ಲಿ ಯಾವುದೇ ಬಹುಮಾನ ಸಿಗುವುದಿಲ್ಲ. ಆದಾಗ್ಯೂ ಕೇಂದ್ರ ಸರ್ಕಾರ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದವರಿಗೆ ನಗದು ರೂಪದಲ್ಲಿ ಬಹುಮಾನವನ್ನು ನೀಡುತ್ತದೆ. ಅದರ ಪಟ್ಟಿ ಇಲ್ಲಿದೆ.

ಒಲಿಂಪಿಕ್ಸ್ ಪದಕ ವಿಜೇತರಿಗೆ ಸಿಗುವ ನಗದು ಬಹುಮಾನ

  • ಚಿನ್ನ ಗೆದ್ದವರಿಗೆ 75 ಲಕ್ಷ ರೂ.
  • ಬೆಳ್ಳಿ ಗೆದ್ದವರಿಗೆ 50 ಲಕ್ಷ ರೂ.
  • ಕಂಚು ಗೆದ್ದವರಿಗೆ 30 ಲಕ್ಷ ರೂ.

ಕಾಮನ್ವೆಲ್ತ್ ಗೇಮ್ಸ್ ಪದಕ ವಿಜೇತರಿಗೆ ಸಿಗುವ ನಗದು ಬಹುಮಾನ

  • ಚಿನ್ನ ಗೆದ್ದವರಿಗೆ 30 ಲಕ್ಷ ರೂ.
  • ಬೆಳ್ಳಿ ಗೆದ್ದವರಿಗೆ 20 ಲಕ್ಷ ರೂ.
  • ಕಂಚು ಗೆದ್ದವರಿಗೆ 10 ಲಕ್ಷ ರೂ.

ಏಷ್ಯನ್ ಗೇಮ್ಸ್ ಪದಕ ವಿಜೇತರಿಗೆ ಸಿಗುವ ನಗದು ಬಹುಮಾನ

  • ಚಿನ್ನ ಗೆದ್ದವರಿಗೆ 30 ಲಕ್ಷ ರೂ.
  • ಬೆಳ್ಳಿ ಗೆದ್ದವರಿಗೆ 20 ಲಕ್ಷ ರೂ.
  • ಕಂಚು ಗೆದ್ದವರಿಗೆ 10 ಲಕ್ಷ ರೂ.

ಕೇಂದ್ರ ಸರ್ಕಾರವನ್ನು ಹೊರತುಪಡಿಸಿ ರಾಜ್ಯ ಸರ್ಕಾರಗಳು ಕೂಡ ತಮ್ಮ ರಾಜ್ಯವನ್ನು ಪ್ರತಿನಿಧಿಸಿ ಪದಕಗಳನ್ನು ಗೆದ್ದವರಿಗೆ ಭಾರಿ ಮೊತ್ತದ ಹಣವನ್ನು ಬಹುಮಾನವನ್ನಾಗಿ ನೀಡುತ್ತವೆ. ಅದರಂತೆಯೇ ನಮ್ಮ ಕರ್ನಾಟಕ ಸರ್ಕಾರ ಕೂಡ ಒಲಿಂಪಿಕ್ಸ್​ನಲ್ಲಿ ಪದಕ ಗೆದ್ದವರಿಗೆ ನಿಗದಿತ ಹಣವನ್ನು ಬಹುಮಾನವನ್ನಾಗಿ ನೀಡುತ್ತಿದೆ.

ಒಲಿಂಪಿಕ್ಸ್ ಪದಕ ವಿಜೇತರಿಗೆ ಸಿಗುವ ನಗದು ಬಹುಮಾನ

  • ಚಿನ್ನ ಗೆದ್ದವರಿಗೆ 6 ಕೋಟಿ ರೂ. ಜೊತೆಗೆ ಸರ್ಕಾರಿ ನೌಕರಿ
  • ಬೆಳ್ಳಿ ಗೆದ್ದವರಿಗೆ 4 ಕೋಟಿ ರೂ.
  • ಕಂಚು ಗೆದ್ದವರಿಗೆ 3 ಕೋಟಿ ರೂ.

ಏಷ್ಯನ್ ಗೇಮ್ಸ್ ಮತ್ತು ಕಾಮನ್ವೆಲ್ತ್ ಗೇಮ್ಸ್ ಪದಕ ವಿಜೇತರಿಗೆ ಪದಕಗಳ ಆಧಾರದ ಮೇಲೆ (ಚಿನ್ನ, ಬೆಳ್ಳಿ, ಕಂಚು) 15 ಲಕ್ಷದಿಂದ 35 ಲಕ್ಷದವರೆಗೆ ಬಹುಮಾನವನ್ನು ನೀಡಲಾಗುತ್ತದೆ.

ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪದಕ ಗೆದ್ದವರಿಗೆ

  • ಚಿನ್ನದ ಪದಕ: 7 ಲಕ್ಷ ರೂ.
  • ಬೆಳ್ಳಿ ಪದಕ: 5 ಲಕ್ಷ ರೂ.
  • ಕಂಚಿನ ಪದಕ: 3 ಲಕ್ಷ ರೂ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:05 pm, Mon, 3 August 26

Source link

Exit mobile version