ಅರ್ಜುನ್ ಕಪೂರ್ ಟ್ರೋಲ್ ಮಾಡಿದವರಿಗೆ ತಂಗಿ ಜಾನ್ವಿಯ ಎಚ್ಚರಿಕೆ – Kannada News | Janhvi kapoor Supports His Step Brother Arjun Kapoor Over Troll

ಇತ್ತೀಚಿನ ದಿನಗಳಲ್ಲಿ, ಸಾಮಾಜಿಕ ಮಾಧ್ಯಮದಲ್ಲಿ ಯಾರನ್ನು ಯಾವ ಕಾರಣಕ್ಕಾಗಿ ಟ್ರೋಲ್ ಮಾಡಲಾಗುತ್ತದೆ ಎಂದು ಹೇಳಲಾಗುವುದಿಲ್ಲ. ಅದರಲ್ಲೂ ಸೆಲೆಬ್ರಿಟಿಗಳನ್ನು ಹೆಚ್ಚಾಗಿ ಗುರಿಯಾಗಿಸಿಕೊಳ್ಳಲಾಗುತ್ತದೆ. ಕಲಾ ಜಗತ್ತಿನಲ್ಲಿ ಕೆಲವು ಸೆಲೆಬ್ರಿಟಿಗಳು ಇದ್ದಾರೆ, ಅವರು ಏನು ಮಾಡಿದರೂ ಅಥವಾ ಹೇಳಿದರೂ, ಯಾವಾಗಲೂ ಟ್ರೋಲ್​​ಗೆ ಗುರಿಯಾಗಿರುತ್ತಾರೆ. ಅಂತಹ ಒಂದು ಹೆಸರು ಅರ್ಜುನ್ ಕಪೂರ್ (Arjun Kapoor).

ಅರ್ಜುನ್ ಕಪೂರ್ ಅವರ ವೃತ್ತಿಜೀವನ ಮತ್ತು ವೈಯಕ್ತಿಕ ಜೀವನದ ವೈಫಲ್ಯದಿಂದಾಗಿ ಆಗಾಗ್ಗೆ ಟ್ರೋಲ್ ಆಗುತ್ತಾರೆ. ಸಾಮಾಜಿಕ ಮಾಧ್ಯಮದಲ್ಲಿ ಅವರ ಹೆಸರಿನಲ್ಲಿ ಹಲವಾರು ಮೀಮ್ಸ್ ಮತ್ತು ಮೀಮ್ಸ್ ಪುಟಗಳು ಕಂಡುಬರುತ್ತವೆ. ಈಗ ಅರ್ಜುನ್ ಕಪೂರ್ ಅವರ ಮಲಸಹೋದರಿ ಮತ್ತು ನಟಿ ಜಾನ್ವಿ ಕಪೂರ್ ಇಂತಹ ಟ್ರೋಲಿಂಗ್‌ಗೆ ಪ್ರತಿಕ್ರಿಯಿಸಿದ್ದಾರೆ. ಯಾವುದೇ ಕಾರಣವಿಲ್ಲದೆ ನಿಮ್ಮನ್ನು ಬಲಿಪಶುವನ್ನಾಗಿ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮ ಸಂಸ್ಕೃತಿ (ಸಂಸ್ಕೃತಿ ಅಥವಾ ಪ್ರವೃತ್ತಿ) ನನಗೆ ಹೆಚ್ಚು ಅರ್ಥವಾಗುತ್ತಿದೆ. ಪ್ರತಿಯೊಬ್ಬರೂ ವೀವ್ಸ್ ಬಯಸುತ್ತಾರೆ. ವೈರಲ್ ಆಗಲು ಬಯಸುತ್ತಾರೆ, ತಮ್ಮದೇ ಆದ ಅಸ್ತಿತ್ವವನ್ನು ಕಾಪಾಡಿಕೊಳ್ಳಲು ಬಯಸುತ್ತಾರೆ ಎಂದು ನನಗೆ ಅನಿಸುತ್ತದೆ. ಆದ್ದರಿಂದ ಅವರು ನಿಮ್ಮ ಬಗ್ಗೆ ಹಲವು ವಿಷಯಗಳನ್ನು ಹುಟ್ಟುಹಾಕುತ್ತಾರೆ. ಅವರು ನಿಮ್ಮ ಹೆಸರನ್ನು ಕ್ಲಿಕ್‌ಬೈಟ್ ಮತ್ತು ಅಂತಹ ವಿಷಯಗಳಿಗೆ ಬಳಸುತ್ತಿದ್ದಾರೆ. ಅದು ಅವರಿಗೆ ಎಂಗೇಜ್​​ಮೆಂಟ್ ಮಾತ್ರ ನೀಡುತ್ತದೆ. ಆದರೆ ನಿಮ್ಮನ್ನು ತಪ್ಪಾಗಿ ಬಿಂಬಿಸಿದಾಗ ನೋವುಂಟು ಮಾಡುತ್ತದೆ. ನನ್ನ ಸಹೋದರನೊಂದಿಗೆ ಇದೆಲ್ಲವೂ ನಡೆಯುತ್ತಿರುವುದನ್ನು ನಾನು ನೋಡಿದ್ದೇನೆ. ಈ ರೀತಿಯ ನಡವಳಿಕೆಗೆ ಯಾವುದೇ ಕ್ಷಮೆ ಇಲ್ಲ’ ಎಂದಿದ್ದಾರೆ ಅವರು.

ಇದನ್ನೂ ಓದಿ: ಬ್ರೇಕಪ್ ಬಳಿಕ ಮೊದಲ ಬಾರಿ ಮುಖಾಮುಖಿ; ಮಲೈಕಾನ ತಬ್ಬಿ ಆಲಂಗಿಸಿದ ಅರ್ಜುನ್ ಕಪೂರ್

ಅರ್ಜುನ್ ಕಪೂರ್ ಅವರ ಸಾಮಾಜಿಕ ಮಾಧ್ಯಮದಲ್ಲಿ ನಿರಂತರವಾಗಿ ನಕಾರಾತ್ಮಕ ಕಾಮೆಂಟ್‌ಗಳು ಬರುತ್ತಿವೆ. ಅವರನ್ನು ಬಹಳಷ್ಟು ಟ್ರೋಲ್ ಮಾಡಲಾಗುತ್ತಿತ್ತು. ಕಳೆದ ತಿಂಗಳು, ಅರ್ಜುನ್ ತಮ್ಮ ತಾಯಿಯ ಹುಟ್ಟುಹಬ್ಬದ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಭಾವನಾತ್ಮಕ ಪೋಸ್ಟ್ ಬರೆದಿದ್ದರು. ಇದನ್ನು ಕೂಡ ಟ್ರೋಲ್ ಮಾಡಲಾಯಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ಹೆತ್ತವರನ್ನು ತಾನು ಕೆಲಸ ಮಾಡುವ ಮೈಕ್ರೋಸಾಫ್ಟ್‌ ಆಫೀಸ್‌ ತೋರಿಸಲು ಕರೆತಂದ ಮಗಳು – Kannada News | Hyderabad: Daughter takes parents to show them around Microsoft Office in Hyderabad

ತಂದೆ ತಾಯಿಗೆ ತಮ್ಮ ಮಕ್ಕಳು ಚೆನ್ನಾಗಿ ಓದಿ ಒಳ್ಳೆಯ ಉದ್ಯೋಗ (job) ಪಡೆದು ಜೀವನದಲ್ಲಿ ಸೆಟಲ್ ಆಗಬೇಕೆನ್ನುವ ಆಸೆಯಿರುತ್ತದೆ. ಅದರಂತೆ ಮಕ್ಕಳು ಬದುಕು ಕಟ್ಟಿಕೊಂಡರೆ ಹೆತ್ತವರಿಗೆ ಅದಕ್ಕಿಂತ ಖುಷಿ ಮತ್ತೊಂದಿಲ್ಲ. ಭಾವನಾತ್ಮಕ ಕ್ಷಣಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ಮೈಕ್ರೋಸಾಫ್ಟ್ ಉದ್ಯೋಗಿಯೊಬ್ಬರು ಪೋಷಕರನ್ನು ಹೈದರಾಬಾದ್‌ನ (Hyderabad) ತಮ್ಮ ಆಫೀಸಿಗೆ ಕರೆದುಕೊಂಡು ಹೋಗಿದ್ದಾರೆ. ಹೆತ್ತವರು ಹೆಮ್ಮೆ ಪಡುವಂತೆ ಮಾಡಿದ ಮಗಳ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ತನೇಯಾ ಸೋನಿ (taneyasoni_vlogs) ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋಗೆ ಕನಸು ನನಸಾದ ಕ್ಷಣ ಎಂದು ಶೀರ್ಷಿಕೆ ನೀಡಲಾಗಿದೆ. ಈ ವಿಡಿಯೋದಲ್ಲಿ ತಮ್ಮ ಪೋಷಕರು ತಾನು ಕೆಲಸ ಮಾಡುವ ಮೈಕ್ರೋಸಾಫ್ಟ್ ಕಚೇರಿ ಕ್ಯಾಂಪಸ್‌ಗೆ ಭೇಟಿ ನೀಡುತ್ತಿರುವುದನ್ನು ಕಾಣಬಹುದು. ದಂಪತಿಗಳು ಕಚೇರಿಯ ವಿವಿಧ ವಿಭಾಗಗಳನ್ನು ನೋಡುತ್ತಿದ್ದಾಳೆ. ಇತ್ತ ಮಗಳು ತನ್ನ ತಂದೆತಾಯಿಗೆ ಮಾರ್ಗದರ್ಶನ ಮಾಡುತ್ತಿದ್ದು, ಹೆಮ್ಮೆಯಿಂದ ತನ್ನ ವೃತ್ತಿಪರ ಜಗತ್ತಿಗೆ ಪರಿಚಯಿಸುತ್ತಿರುವುದನ್ನು ಕ್ಲಿಪ್‌ನಲ್ಲಿ ಸೆರೆ ಹಿಡಿಯಲಾಗಿದೆ.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಅಮ್ಮನಿಗೆ ಭಯ, ಆದ್ರೆ ಅದು ನನ್ನ ಕನಸು: ಕೊನೆಗೂ ತಾಯಿಯನ್ನು ಆಕಾಶದಲ್ಲಿ ಹಾರಾಡಿಸಿದ ಮಗ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಹೆಮ್ಮೆ ಹಾಗೂ ಸಾಧನೆಯ ಕ್ಷಣ ಎಂದು ಹೇಳಿದ್ದಾರೆ. ಇನ್ನೊಬ್ಬರು, ಪ್ರಾಮಾಣಿಕವಾಗಿ ಹೇಳಬೇಕೆಂದರೆ ಪೋಷಕರು ಮಕ್ಕಳ ಇಂತಹ ಕೆಲಸದಿಂದ ಹೆಚ್ಚು ಸಂತೋಷಪಡುತ್ತಾರೆ. ಈ ಕ್ಷಣವನ್ನು ಎಂದಿಗೂ ಮರೆಯುವುದಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಇಂತಹ ಮಗಳನ್ನು ಪಡೆದ ಕ್ಷಣ ನೀವೇ ಧನ್ಯ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 12:02 pm, Wed, 4 March 26

Source link

ಭಾರತದ ಷೇರುಪೇಟೆ ಭರ್ಜರಿ ಕುಸಿತ; 8 ಲಕ್ಷ ಕೋಟಿ ರೂ ನಷ್ಟ; ಶೇ 80 ಷೇರುಗಳಿಗೆ ಹಿನ್ನಡೆ – Kannada News | Stock market nifty, sensex down by 2pc, investors face 8 trillion Rs loss

ನವದೆಹಲಿ, ಮಾರ್ಚ್ 4: ಭಾರತದ ಈಕ್ವಿಟಿ ಮಾರುಕಟ್ಟೆಯಲ್ಲಿ (Stock Market) ಕರಡಿ ಕುಣಿತ ಮುಂದುವರಿದಿದೆ. ಇಂದು ಬಿಎಸ್​ಇ ಮತ್ತು ಎನ್​ಎಸ್​ಇಯ ಹೆಚ್ಚಿನ ಸೂಚ್ಯಂಕಗಳು ಕೆಂಪು ಬಣ್ಣಕ್ಕೆ ತಿರುಗಿವೆ. ನಿಫ್ಟಿ, ಸೆನ್ಸೆಕ್ಸ್ ಶೇ. 2ರವರೆಗೂ ಕುಸಿತ ಕಂಡಿವೆ. ಹೂಡಿಕೆದಾರರಿಗೆ ಬರೋಬ್ಬರಿ 8 ಲಕ್ಷ ಕೋಟಿ ರೂ ನಷ್ಟ ಎದುರಾಗಿದೆ. ಇರಾನ್ ಯುದ್ಧ ನಡೆಯುತ್ತಿರುವುದರಿಂದ ಷೇರು ಮಾರುಕಟ್ಟೆ ಕುಸಿತ ಅನಿರೀಕ್ಷಿತವೇನಲ್ಲ. ಭಾರತದಲ್ಲಿ ಮಾತ್ರವಲ್ಲ, ವಿಶ್ವದ ಎಲ್ಲಾ ಷೇರು ಮಾರುಕಟ್ಟೆಗಳು ಹಿನ್ನಡೆ ಕಾಣುತ್ತಿವೆ.

ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ನ ಸೆನ್ಸೆಕ್ಸ್ ಸೂಚ್ಯಂಕ 1,523 ಅಂಕ ಕಳೆದುಕೊಂಡು 78,711 ಮಟ್ಟ ಮುಟ್ಟಿತ್ತು. ಬುಧವಾರದ ಟ್ರೇಡಿಂಗ್​ನ ಒಂದು ಹಂತದಲ್ಲಿ ಸೆನ್ಸೆಕ್ಸ್ 78,528 ಅಂಕಗಳ ಮಟ್ಟದವರೆಗೆ ಕುಸಿದಿತ್ತು.

ಇದನ್ನೂ ಓದಿ: ಮಹಿಳೆಯ ಘೋಷಿತ ಆದಾಯ 4.81 ಲಕ್ಷ ರೂ; ಇನ್ಷೂರೆನ್ಸ್ ಕಟ್ಟಿದ್ದು 50 ಲಕ್ಷ ರೂ; ಕೋರ್ಟ್​ಗೆ ಹೋಯ್ತು ಕೇಸ್

ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​ನ ನಿಫ್ಟಿ ಸೂಚ್ಯಂಕ 506 ಅಂಕಗಳನ್ನು ತೊಡೆದುಕೊಂಡು 24,359 ಮಟ್ಟಕ್ಕೆ ಇಳಿದಿದೆ. ಒಂದು ಹಂತದಲ್ಲಿ ಇದು 24,325 ಅಂಕಗಳಿಗೆ ಇಳಿದಿತ್ತು. 50 ಸ್ಟಾಕ್​ಗಳ ಬುಟ್ಟಿಯಾದ ನಿಫ್ಟಿ, ಶೇ. 2ಕ್ಕಿಂತಲೂ ಹೆಚ್ಚು ಕುಸಿತ ಕಂಡಿದೆ. ಒಂದು ಅಂದಾಜು ಪ್ರಕಾರ ಭಾರತದ

ಗೋಲ್ಡ್ ಇಟಿಎಫ್, ಸಿಲ್ವರ್ ಇಟಿಎಫ್​ಗಳೂ ಕೂಡ ಕುಸಿತ ಕಾಣುತ್ತಿವೆ. ಹೆಚ್ಚಿನ ಹೂಡಿಕೆದಾರರು ಈ ಇಟಿಎಫ್​ಗಳಿಂದ ಹೂಡಿಕೆ ಹಿಂಪಡೆಯುತ್ತಿರುವ ಟ್ರೆಂಡ್ ಇದೆ. ಭಾರತದ ಷೇರು ಪೇಟೆಯ ಭಯದ ಸೂಚಕವಾಗಿರುವ ವಿಐಎಕ್ಸ್ 20ರ ಮಟ್ಟ ದಾಟುತ್ತಿದೆ. ಇದು ಹೂಡಿಕೆದಾರರು ಆತಂಕದಲ್ಲಿರುವುದನ್ನು ಸೂಚಿಸುತ್ತದೆ.

ಇದನ್ನೂ ಓದಿ: ಎನ್​ಪಿಎಸ್ ಸ್ವಾಸ್ಥ್ಯ ಈಕ್ವಿಟಿ ಪ್ಲಸ್; ಇದು ರಿಟೈರ್ಮೆಂಟ್​ಗೂ ಸೈ, ಹೆಲ್ತ್​ಕೇರ್ ವೆಚ್ಚಕ್ಕೂ ಸೈ; ಹೇಗೆ ಕೆಲಸ ಮಾಡುತ್ತೆ ಈ ಹೈಬ್ರಿಡ್ ಸ್ಕೀಮ್?

ಷೇರು ಮಾರುಕಟ್ಟೆ ಕುಸಿಯುತ್ತಿರುವುದ್ಯಾಕೆ?

  • ಪಶ್ಚಿಮ ಏಷ್ಯಾದಲ್ಲಿ ಯುದ್ಧ ಸಂಭವಿಸುತ್ತಿರುವುದು ಎಲ್ಲರನ್ನೂ ಚಿಂತಿತರನ್ನಾಗಿ ಮಾಡುತ್ತಿದೆ.
  • ಹಾರ್ಮುಜ್ ಜಲಸಂಧಿಯಲ್ಲಿ ಹಡಗು ಸಾಗಣೆಗೆ ತಡೆ ಎದುರಾಗಿರುವುದರಿಂದ ತೈಲ ಪೂರೈಕೆಯಲ್ಲಿ ವ್ಯತ್ಯಯ ಆಗುತ್ತಿದೆ. ಕಚ್ಚಾ ತೈಲ ಬೆಲೆ ಏರಿಕೆ ಆಗುತ್ತಿದೆ.
  • ಜಾಗತಿಕ ಮಾರುಕಟ್ಟೆಗಳು ಹಿನ್ನಡೆಯಲ್ಲಿವೆ. ಅದರಲ್ಲೂ ಏಷ್ಯನ್ ಸೂಚ್ಯಂಕಗಳು ತೀವ್ರ ಒತ್ತಡದಲ್ಲಿವೆ. ಇದು ಭಾರತೀಯ ಮಾರುಕಟ್ಟೆ ಮೇಲೂ ಪರಿಣಾಮ ಬೀರುತ್ತಿರಬಹುದು.
  • ಡಾಲರ್ ಎದುರು ರುಪಾಯಿ ಮೌಲ್ಯ ಹೊಸ ದಾಖಲೆ ಮಟ್ಟಕ್ಕೆ ಕುಸಿದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

KAS ಗ್ರೂಪ್ ಎ,ಬಿ ಪರೀಕ್ಷೆ ರಿಸಲ್ಟ್ ವಿರುದ್ಧ ವಿದ್ಯಾರ್ಥಿಗಳ ಅಪಸ್ವರ: ಸಿಬಿಐ ತನಿಖೆಗೆ ಒತ್ತಾಯ – Kannada News | KPSC KAS Results: Students Allege Corruption, Demand CBI Probe for Irregularities

ಬೆಂಗಳೂರು, ಮಾರ್ಚ್​​ 04: ಗೆಜೆಟೆಡ್​​ ಪ್ರೊಬೇಷನರಿ ಗ್ರೂಪ್ ಎ ಮತ್ತು ಬಿ ವೃಂದದ 384 ಹುದ್ದೆಗಳಿಗೆ ನಡೆದ ಪರೀಕ್ಷೆಯಲ್ಲಿ 1:3 ಅನುಪಾತದಲ್ಲಿ ವ್ಯಕ್ತಿತ್ವ ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಿ ಪಟ್ಟಿಯನ್ನು ನಿನ್ನೆ ಪ್ರಕಟಿಸಲಾಗಿದೆ. ಸದ್ಯ ಈ ಫಲಿತಾಂಶ ವಿರುದ್ಧ ವಿದ್ಯಾರ್ಥಿಗಳು ಅಪಸ್ವರ ಎತ್ತಿದ್ದಾರೆ. ಒಂದೇ ಕುಟುಂಬದ ಕೆಲವರು ಆಯ್ಕೆ ಆಗಿರುವ ಬಗ್ಗೆ ಗಂಭೀರ ಆರೋಪ ಮಾಡಲಾಗಿದ್ದು, CBI ತನಿಖೆಗೆ ಒತ್ತಾಯಿಸಿದ್ದಾರೆ.

ಮತ್ತಷ್ಟು ಮಾಹಿತಿ ಅಪ್​​ಡೇಟ್ ಆಗಲಿದೆ.

Source link

ದೊಡ್ಡಬಳ್ಳಾಪುರ ಬಳಿ ಕಲ್ಲಂಗಡಿ ಕ್ಯಾಂಟರ್ ಪಲ್ಟಿ, ಹಣ್ಣು ಹೊತ್ತೊಯ್ದ ಜನ! – Kannada News | Watermelon Canter Overturns in Doddaballapura, Driver Escapes Unhurt

ದೊಡ್ಡಬಳ್ಳಾಪುರ, ಮಾರ್ಚ್​ 04: ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಲ್ಲಂಗಡಿ ಸಾಗಿಸುತ್ತಿದ್ದ ಕ್ಯಾಂಟರ್ ಪಲ್ಟಿಯಾದ ಘಟನೆ ದೊಡ್ಡಬಳ್ಳಾಪುರ ಹೊರ ವಲಯದಲ್ಲಿ ನಡೆದಿದೆ.ದೊಡ್ಡಬಳ್ಳಾಪುರ ಹೊರ ವಲಯದ ಮೇಷ್ಟ್ರು ಮನೆ ಸರ್ಕಲ್‌ ಬಳಿ ಈ ಅಪಘಾತ ಸಂಭವಿಸಿದೆ. ಚೆನ್ನೈನಿಂದ ದಾವಣಗೆರೆಯ ಹೊನ್ನಾಳಿಗೆ ಕಲ್ಲಂಗಡಿ ಸಾಗಿಸುತ್ತಿದ್ದ ಈ ಕ್ಯಾಂಟರ್, ಅನಿರೀಕ್ಷಿತವಾಗಿ ನಿಯಂತ್ರಣ ಕಳೆದುಕೊಂಡಿದೆ. ವೇಗವಾಗಿ ಬರುತ್ತಿದ್ದ ಕ್ಯಾಂಟರ್ ಹೆದ್ದಾರಿಯಲ್ಲಿದ್ದ ಮೂರು ಡಿವೈಡರ್‌ಗಳನ್ನು ದಾಟಿ ಪಕ್ಕದ ಪಳ್ಳಕ್ಕೆ ಬಂದು ಬಿದ್ದಿದೆ. ಅಪಘಾತದ ತೀವ್ರತೆಗೆ ಕ್ಯಾಂಟರ್‌ನಲ್ಲಿದ್ದ ಸಾವಿರಾರು ಕಲ್ಲಂಗಡಿಗಳು ರಸ್ತೆಯ ಮೇಲೆ ಹಾಗೂ ಸುತ್ತಮುತ್ತ ಚಲ್ಲಾಪಿಲ್ಲಿಯಾಗಿ ಬಿದ್ದಿವೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಸ್ಥಳೀಯರು, ರಸ್ತೆಯ ಮೇಲೆ ಚೆಲ್ಲಿದ್ದ ಕಲ್ಲಂಗಡಿ ಹಣ್ಣುಗಳನ್ನು ಹೊತ್ತೊಯ್ದಿದ್ದಾರೆ. ಕೆಲವರು ತಮ್ಮ ವಾಹನಗಳಲ್ಲಿ ಕಲ್ಲಂಗಡಿಗಳನ್ನು ತುಂಬಿಕೊಂಡು ಹೋದ ದೃಶ್ಯ ಕಂಡುಬಂದಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕೆ ನಿಖರ ಕಾರಣಗಳ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಈ ಘಟನೆಯಲ್ಲಿ ಕ್ಯಾಂಟರ್ ಚಾಲಕ ವೇದಮೂರ್ತಿ (22) ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸಣ್ಣಪುಟ್ಟ ಗಾಯಗಳಾಗಿದ್ದು, ಚಾಲಕ ಚೇತರಿಸಿಕೊಳ್ಳುತ್ತಿದ್ದಾನೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

 

Source link

‘ಟಾಕ್ಸಿಕ್’ ಸಿನಿಮಾ ಬಿಡುಗಡೆ ಮುಂದೂಡಿಕೆ ನಿರ್ಧಾರಕ್ಕೆ ಕಾರಣವೇನು? – Kannada News | Why Toxic movie release postponed what is the reason

ಯಶ್ (Yash) ನಟನೆಯ ‘ಟಾಕ್ಸಿಕ್’ ಸಿನಿಮಾ ಭಾರತದ ಅತ್ಯಂತ ನಿರೀಕ್ಷೆಯ ಸಿನಿಮಾ ಎನಿಸಿಕೊಂಡಿತ್ತು. ಸಿನಿಮಾದ ಟೀಸರ್, ಪೋಸ್ಟರ್, ಹಾಡುಗಳು ಬಿಡುಗಡೆ ಆಗಿ ಸಿನಿಮಾಕ್ಕೆ ಹೈಪ್ ನೀಡಿದ್ದವು. ಸಿನಿಮಾ ನೋಡಲು ಪ್ರೇಕ್ಷಕರು ಸಹ ತುದಿಗಾಲಲ್ಲಿ ಎದುರು ನೋಡುತ್ತಿದ್ದರು. ಮಾರ್ಚ್ 19ರಂದು ‘ಟಾಕ್ಸಿಕ್’ ಬಿಡುಗಡೆ ಆಗಲಿತ್ತು, ಸಿನಿಮಾದ ವಿತರಣೆ ಹಕ್ಕುಗಳ ಮಾರಾಟ ಸಹ ಆಗಿಬಿಟ್ಟಿತ್ತು. ಆದರೆ ಇದೀಗ ಹಠಾತ್ತನೆ ಸಿನಿಮಾದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಮುಂದೂಡಿದೆ. ಇದು ಯಶ್ ಅವರ ಅಭಿಮಾನಿಗಳಿಗೆ ಮಾತ್ರವಲ್ಲದೆ ಸಿನಿಮಾ ಪ್ರೇಮಿಗಳಿಗೂ ಸಹ ಸಾಕಷ್ಟು ಬೇಸರ ಮೂಡಿಸಿದೆ. ಆದರೆ ಯಶ್ ಹಾಗೂ ಚಿತ್ರತಂಡದ ಈ ನಿರ್ಧಾರದ ಹಿಂದೆ ಮುಖ್ಯವಾದ ಕಾರಣವೂ ಇದೆ.

ಪ್ರಸ್ತುತ ನಡೆಯುತ್ತಿರುವ ಇಸ್ರೇಲ್-ಅಮೆರಿಕ ಮತ್ತು ಇರಾನ್ ದೇಶಗಳ ನಡುವಿನ ಸಂಘರ್ಷದ ಕಾರಣದಿಂದ ಸಿನಿಮಾ ಬಿಡುಗಡೆಯನ್ನು ಮುಂದೂಡಲಾಗುತ್ತಿದೆ ಎಂದು ಚಿತ್ರತಂಡ ಹೇಳಿದೆ. ಅಲ್ಲೆಲ್ಲೋ ಆಗುತ್ತಿರುವ ಯುದ್ಧಕ್ಕೆ ಭಾರತದಲ್ಲಿ ಸಿನಿಮಾ ಬಿಡುಗಡೆ ಮಾಡದಿರುವುದೇಕೆ ಎಂಬ ಪ್ರಶ್ನೆ ಮೂಡುವುದು ಸಹಜ. ಆದರೆ ಬ್ಯುಸಿನೆಸ್ ದೃಷ್ಟಿಯಿಂದ ನೋಡಿದಲ್ಲಿ ಯಶ್ ಮತ್ತು ತಂಡ ಭಾವನೆಗಳನ್ನು ಪಕ್ಕಕ್ಕಿಟ್ಟು ಸೂಕ್ತ ಮತ್ತು ಉದ್ಯಮಸಹಜ ನಿರ್ಣಯವನ್ನೇ ಕೈಗೊಂಡಿದೆ.

ಇಸ್ರೇಲ್-ಅಮೆರಿಕ ಹಾಗೂ ಇರಾನ್ ನಡುವಿನ ಯುದ್ಧ ಸ್ಥಿತಿ ನಿರ್ಮಾಣವಾಗಿದ್ದು, ಇದರಿಂದ ಭಾರತೀಯ ಸಿನಿಮಾಗಳಿಗೆ ಉತ್ತಮ ಮಾರುಕಟ್ಟೆ ಆಗಿರುವ ಅರಬ್ ದೇಶಗಳಲ್ಲಿ ಪರಿಸ್ಥಿತಿ ಹದಗೆಟ್ಟಿದೆ. ದುಬೈ, ಅಬುದಾಭಿ, ಶಾರ್ಜಾ, ಅಲ್ ಐನ್,ಯುಎಕ್ಯು ಇನ್ನೂ ಕೆಲವು ನಗರಗಳಲ್ಲಿ ಪರಿಸ್ಥಿತಿ ಗಂಭೀರವಾಗಿದೆ. ಯುಎಇಯಲ್ಲಿ ವಿಷಮ ಪರಿಸ್ಥಿತಿ ಇದ್ದು, ಈ ಸಮಯದಲ್ಲಿ ಅಲ್ಲಿ ಸಿನಿಮಾ ಬಿಡುಗಡೆ ಮಾಡುವುದು ಅಸಾಧ್ಯ ಮಾತ್ರವಲ್ಲ ಅಮಾನವೀಯವೂ ಎನಿಸಿಕೊಳ್ಳಲಿದೆ.

ಇದನ್ನೂ ಓದಿ:ಕೊನೇ ಕ್ಷಣದಲ್ಲಿ ಅಭಿಮಾನಿಗಳಿಗೆ ಶಾಕ್ ಕೊಟ್ಟ ಯಶ್; ಟಾಕ್ಸಿಕ್ ಸಿನಿಮಾ ರಿಲೀಸ್ ಮುಂದಕ್ಕೆ 

ಯುಎಇ ಮಾತ್ರವೇ ಅಲ್ಲದೆ ಭಾರತೀಯ ಸಿನಿಮಾಗಳಿಗೆ ಒಳ್ಳೆಯ ಮಾರುಕಟ್ಟೆ ಆಗಿರುವ ಕುವೈತ್, ಒಮಾನ್ ದೇಶಗಳು ಸಹ ಈ ಯುದ್ಧ ಪರಿಸ್ಥಿತಿಯಿಂದ ವಿಷಮ ಸ್ಥಿತಿಯಲ್ಲಿದ್ದು, ಅಲ್ಲಿಯೂ ಸಹ ಸಿನಿಮಾ ಬಿಡುಗಡೆ ಅಸಾಧ್ಯವೇ ಆಗಿದೆ. ಕತಾರ್​​ನಲ್ಲಿಯೂ ಇದೇ ಪರಿಸ್ಥಿತಿ ಇದೆ. ಅರಬ್ ರಾಷ್ಟ್ರಗಳು ಮಾತ್ರವೇ ಅಲ್ಲದೆ ಈ ಅಮೆರಿಕದಲ್ಲಿಯೂ ಸಹ ಪರಿಸ್ಥಿತಿ ಶಾಂತವಾಗಿಲ್ಲ. ಅಮೆರಿಕದಲ್ಲಿ ಪರ-ವಿರೋಧ ಪ್ರತಿಭಟನೆಗಳು ನಡೆಯುತ್ತಲೇ ಇವೆ. ಇಂಥಹಾ ಪರಿಸ್ಥಿತಿಯಲ್ಲಿ ಸಿನಿಮಾ ಬಿಡುಗಡೆ ಮಾಡುವುದು ಸಿನಿಮಾದ ಕಲೆಕ್ಷನ್ ದೃಷ್ಟಿಯಿಂದ ಒಳಿತಲ್ಲ.

ಇಸ್ರೇಲ್-ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷವಾದರೂ ಸಹ ಇದರಿಂದ ನೇರವಾಗಿ, ಪರೋಕ್ಷವಾಗಿ ಹಲವಾರು ದೇಶಗಳು ಪರಿಣಾಮ ಎದುರಿಸುತ್ತಿವೆ. ಭಾರತವೂ ಸೇರಿದಂತೆ ಬಹ್ರೇನ್, ಕತಾರ್, ಸೌದಿ ಅರೆಬಿಯಾ, ಯುಎಇ, ಲೆಬನಾನ್, ಪೂರ್ವ ಮತ್ತು ಆಗ್ನೇಯ ಏಷ್ಯಾದ ದೇಶಗಳಾದ ಚೀನಾ, ಜಪಾನ್ ದಕ್ಷಿಣ ಕೊರಿಯಾ, ಕೊರಿಯಾ, ಇಂಡೊನೇಷಿಯಾ, ಥೈಲಾಂಡ್, ಸಿಂಗಪುರ, ವಿಯೇತ್ನಾಮ್ ಹಾಗೂ ಯುರೋಪಿಯನ್ ಯೂನಿಯನ್​​ನಲ್ಲಿರು ಹಲವಾರು ದೇಶಗಳು ಸಹ ಪರೋಕ್ಷ ಪರಿಣಾಮ ಎದುರಿಸುತ್ತಿವೆ. ‘ಟಾಕ್ಸಿಕ್’ ಸಿನಿಮಾ ಪ್ಯಾನ್ ಇಂಡಿಯಾ ಅಲ್ಲ ಬದಲಿಗೆ ಪ್ಯಾನ್ ವರ್ಲ್ಡ್​ ಎಂಬುದು ಯಶ್ ಅವರ ಕನಸಾಗಿದ್ದು, ವಿಶ್ವದ ಹಲವು ದೇಶಗಳು ಯುದ್ಧದ ಆತಂಕದಲ್ಲಿರುವಾಗ ಸಿನಿಮಾ ಬಿಡುಗಡೆ ಮಾಡುವುದು ಸೂಕ್ತವಲ್ಲ ಎಂದು ಚಿತ್ರತಂಡಕ್ಕೆ ಸಹಜವಾಗಿಯೇ ಅನಿಸಿದಂತಿದೆ.

ಅಲ್ಲದೆ ಸಿನಿಮಾದ ಪ್ರಚಾರಕ್ಕಾಗಿ ಯಶ್ ಹಾಗೂ ಚಿತ್ರತಂಡ ಭಾರತ ಮಾತ್ರವಲ್ಲದೆ ಅಮೆರಿಕ, ದುಬೈ, ಮಲೇಷ್ಯಾ, ಜಪಾನ್ ಇನ್ನೂ ಹಲವು ಕಡೆಗಳಿಗೆ ಸುತ್ತು ಹಾಕಲಿತ್ತು. ಆದರೆ ಯುದ್ಧ ಪರಿಸ್ಥಿತಿ ಇರುವ ಕಾರಣ ವೈಮಾನಿಕ ಸಂಚಾರ ವ್ಯವಸ್ಥೆಯೇ ಅಸ್ಥವ್ಯಸ್ಥವಾಗಿದ್ದು, ಇದು ಸಿನಿಮಾದ ಪ್ರಚಾರದ ಮೇಲೆ ಪರಿಣಾಮ ಬೀರುವುದು ಮಾತ್ರವೇ ಅಲ್ಲದೆ ಯಶ್ ಸೇರಿದಂತೆ ಚಿತ್ರತಂಡದ ಜೀವಕ್ಕೂ ಅಪಾಯವಾಗುವ ಸಾಧ್ಯತೆ ಇದೆ. ಇದೆಲ್ಲ ವಿಷಯಗಳನ್ನು ಪರಿಗಣಿಸಿ ಚಿತ್ರತಂಡ ಸಿನಿಮಾದ ಬಿಡುಗಡೆಯನ್ನು ಚಿತ್ರತಂಡ ಮುಂದಕ್ಕೆ ಹಾಕಿಕೊಂಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Vastu Warning: ಈ ಒಂದು ವಸ್ತುವನ್ನು ಎಂದಿಗೂ ಯಾರಿಗೂ ಉಡುಗೊರೆಯಾಗಿ ನೀಡಬೇಡಿ; ಅಪಾಯ ತಪ್ಪಿದ್ದಲ್ಲ! – Kannada News | Vastu Warning: Why Keeping Taj Mahal Replicas at Home Can Attract Negative Energy

ಮನೆಯಲ್ಲಿ ಇಡುವ ಪ್ರತಿಯೊಂದು ವಸ್ತುವೂ ಮನೆಯ ಸದಸ್ಯರ ಮನಸ್ಥಿತಿ, ಶಕ್ತಿ ಮತ್ತು ವಾತಾವರಣದ ಮೇಲೆ ಪರಿಣಾಮ ಬೀರುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಪ್ರೀತಿಯ ಪ್ರತೀಕವಾಗಿ ಜಗತ್ತಿನಲ್ಲಿ ಪ್ರಸಿದ್ಧಿ ಪಡೆದಿರುವ ತಾಜ್​ ಮಹಲ್​​ ಎಷ್ಟೇ ಸುಂದರವಾಗಿದ್ದರೂ, ಅದು ವಾಸ್ತವವಾಗಿ ಒಂದು ಸಮಾಧಿ ಸ್ಮಾರಕವಾಗಿದೆ. ಆದ್ದರಿಂದ ಶಾಸ್ತ್ರ ಸಂಪ್ರದಾಯಗಳ ಪ್ರಕಾರ ತಾಜ್ ಮಹಲ್ ಚಿತ್ರ ಅಥವಾ ಶೋಪೀಸ್‌ ಗಳನ್ನು ಮನೆಯಲ್ಲಿ ಇಡದಿರುವುದು ಒಳಿತು ಎಂದು ಹೇಳಲಾಗುತ್ತದೆ.

ಸಮಾಧಿಯ ಸಂಕೇತ:

ತಾಜ್ ಮಹಲ್ ಮುಮ್ತಾಜ್ ಸಮಾಧಿಯಾಗಿ ನಿರ್ಮಿಸಲ್ಪಟ್ಟ ಸ್ಮಾರಕ. ವಾಸ್ತು ಪ್ರಕಾರ, ಸಾವು ಅಥವಾ ಸ್ಮಶಾನಕ್ಕೆ ಸಂಬಂಧಿಸಿದ ವಸ್ತುಗಳು ಮನೆಯಲ್ಲಿ ಇರಬಾರದು ಎಂದು ನಂಬಿಕೆ ಇದೆ. ಇವು ಮನೆಯಲ್ಲಿನ ಸಕಾರಾತ್ಮಕ ಶಕ್ತಿಯನ್ನು ಕಡಿಮೆ ಮಾಡಿ, ಮನಶ್ಶಾಂತಿಗೆ ಧಕ್ಕೆಯುಂಟುಮಾಡಬಹುದು ಎಂದು ತಜ್ಞರು ಎಚ್ಚರಿಕೆ ನೀಡುತ್ತಾರೆ.

ಪ್ರಗತಿಗೆ ಅಡಚಣೆ:

ವಾಸ್ತು ನಂಬಿಕೆಗಳ ಪ್ರಕಾರ, ಸಮಾಧಿ ಸಂಕೇತವನ್ನು ಮನೆ ಅಲಂಕಾರವಾಗಿ ಬಳಸುವುದರಿಂದ ಕುಟುಂಬ ಸದಸ್ಯರ ಬೆಳವಣಿಗೆ ಮತ್ತು ಆರ್ಥಿಕ ಪ್ರಗತಿಗೆ ಅಡ್ಡಿಯಾಗಬಹುದು. ಕೆಲಸಗಳಲ್ಲಿ ವಿಳಂಬ, ನಿರಾಶೆ ಅಥವಾ ಅಸಮಾಧಾನ ಹೆಚ್ಚಾಗಬಹುದು ಎಂಬ ಅಭಿಪ್ರಾಯವೂ ಇದೆ.

ಇದನ್ನೂ ಓದಿ: ಮಾ.03 ಕೇತುಗ್ರಸ್ತ ಚಂದ್ರಗ್ರಹಣ; ಈ ರಾಶಿಗೆ ಡಬಲ್ ಧಮಾಕ!

ಮಾನಸಿಕ ಆರೋಗ್ಯದ ಮೇಲೆ ಪರಿಣಾಮ:

ಸಾವು ಮತ್ತು ವಿಯೋಗವನ್ನು ಪ್ರತಿನಿಧಿಸುವ ಚಿತ್ರಗಳು ಮನಸ್ಸಿನಲ್ಲಿ ನಕಾರಾತ್ಮಕ ಭಾವನೆಗಳನ್ನು ಹುಟ್ಟಿಸಬಹುದು. ಇದರಿಂದ ಆತಂಕ, ಭಯ ಅಥವಾ ದುಃಖದ ಭಾವನೆಗಳು ಹೆಚ್ಚಾಗಬಹುದು ಎಂದು ಕೆಲವರು ನಂಬುತ್ತಾರೆ.

ಉಡುಗೊರೆಯಾಗಿ ನೀಡುವ ವಿಚಾರ:

ಮದುವೆ ಅಥವಾ ಶುಭ ಸಂದರ್ಭಗಳಲ್ಲಿ ತಾಜ್ ಮಹಲ್ ಶೋಪೀಸ್ ನೀಡುವುದು ಸಾಮಾನ್ಯ. ಆದರೆ ವಾಸ್ತು ನಂಬಿಕೆಗಳ ಪ್ರಕಾರ, ಸಮಾಧಿ ಸಂಕೇತವನ್ನು ಉಡುಗೊರೆಯಾಗಿ ನೀಡುವುದು ಅಶುಭವೆಂದು ಪರಿಗಣಿಸಲಾಗುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತಾಯಿಯೂ ಇಲ್ಲ, ಗೊಂಬೆಯನ್ನೇ ಸರ್ವಸ್ವ ಎಂದುಕೊಂಡಿರುವ ಪಂಚ್ ಕೋತಿಯಿಂದ ಗೊಂಬೆಯನ್ನು ದೂರ ಮಾಡ್ತಾರಾ? – Kannada News | Viral Star Punch May Be Separated From Signature Plushie, Fans React

ಜಪಾನ್, ಮಾರ್ಚ್​ 04: ಜಪಾನ್​​ನ ಮೃಗಾಲಯದಲ್ಲಿರುವ ಪಂಚ್ ಕೋತಿಯ ಬಗ್ಗೆ ಈಗ ಇಡೀ ಪ್ರಪಂಚಕ್ಕೆ ಗೊತ್ತಿದೆ. ಹುಟ್ಟಿನಿಂದಲೇ ತಾಯಿ ಪ್ರೀತಿ ಕಳೆದುಕೊಂಡಿದ್ದ ಕೋತಿಗೆ ಅದರ ಬಳಿ ಇರುವ ಕೋತಿಯ ಗೊಂಬೆಯೇ ಆಸರೆ. ನೋವಾದರೂ, ಬೇಸರವೆನಿಸಿದರೂ, ಬೇರೆ ಕೋತಿಗಳು ದಾಳಿ ಮಾಡಿದಾಗಲೂ ಈ ಕೋತಿ ಹೋಗಿ ಅಪ್ಪಿಕೊಂಡಿದ್ದು, ಆ ಗೊಂಬೆಯನ್ನೇ ಹೊರತು ಮತ್ತೊಂದು ಕೋತಿಯನ್ನಲ್ಲ.

ಅದರ ಮೇಲೆ ತಲೆಇಟ್ಟು ಮಲಗುವ, ತಿಂಡಿ ಮಾಡುವಾಗಲೂ, ಎಲ್ಲೇ ನಡೆದಾಡುವಾಗಲೂ ಆ ಗೊಂಬೆಯನ್ನೇ ಹೊತ್ತು ತಿರುಗುವ ಕೋತಿಯಿಂದ ಆ ಗೊಂಬೆಯನ್ನು ಕಸಿದುಕೊಳ್ಳಲಾಗುತ್ತಿದೆ ಎನ್ನುವ ಸುದ್ದಿ ವೈರಲ್ ಆಗಿದೆ. ಆ ಗೊಂಬೆಯನ್ನು ಐಕಿಯಾದಿಂದ ಖರೀದಿಸಲಾಗಿದೆ.

ಒಂದೊಮ್ಮೆ ಆ ಗೊಂಬೆ ಅದರೊಟ್ಟಿಗಿದ್ದರೆ ಈ ಕೋತಿ ಮರಿ ಉಳಿದ ಕೋತಿಗಳ ಜತೆ ಸ್ನೇಹ ಬೆಳೆಸುವುದಿಲ್ಲ, ಕೊನೆಯವರೆಗೂ ಅದು ಒಂಟಿಯಾಗಿರುವ ಪ್ರಸಂಗ ಬಂದರೂ ಬರಬಹುದು ಈ ದೃಷ್ಟಿಯಿಂದ ಆ ಮತಿಯಿಂದ ಗೊಂಬೆಯನ್ನು ಹಿಂಪಡೆಯಲಾಗುತ್ತದೆ ಎನ್ನುವ ಮಾತು ಕೇಳಿಬರುತ್ತಿದೆ.

ಆರು ತಿಂಗಳ ವಯಸ್ಸಿನಲ್ಲಿ ಈ ಕೋತಿಗಳು ಹಾಲು ಕುಡಿಯುವುದು ಬಿಡಬೇಕು ಹಾಗೂ ಸ್ವತಂತ್ರವಾಗಿರಬೇಕು ಇದೇ ನಿಯಮ. ಹಾಗಾಗಿ ಅದರ ಬಳಿ ಇರುವ ಆಟಿಕೆಯನ್ನು ಶೀಘ್ರ ತೆಗೆದುಕೊಂಡು ಹೋಗಲಾಗುವುದು ಎಂದು ಪೋಸ್ಟ್​ನಲ್ಲಿ ತಿಳಿಸಲಾಗಿದೆ.

ಈ ವಿಡಿಯೋಗೆ ವ್ಯಕ್ತಿಯೊಬ್ಬರು ಪ್ರತಿಕ್ರಿಯಿಸಿದ್ದು, ಸ್ವಲ್ಪ ದಿನ ಆಟಿಕೆ ಅದರ ಬಳಿಯೇ ಇರಬಹುದಲ್ಲಾ ಎಂದಿದ್ದಾರೆ. ಇನ್ನು ಮನುಷ್ಯನ ಬಗ್ಗೆ ಮಾತನಾಡುವುದಾಗಿ ಮಕ್ಕಳು ಚಿಕ್ಕವರಿದ್ದಾಗಲೇ ಯಾವುದೇ ಒಂದಕ್ಕೆ ಅಡಿಕ್ಟ್​ ಆದರೆ ಅದನ್ನು ಬಿಡಿಸುವುದು ಕಷ್ಟ ಹಾಗೆಯೇ ಕೋತಿಗಳು ಕೂಡ. ಅವರ ಬೆಳವಣಿಗೆಗೆ ಈ ಗೊಂಬೆಗಳು ಅಡ್ಡಿಯಾಗಬಹುದು. ಜಪಾನಿನ ಮಕಾಕ್ ಪ್ರಸ್ತುತ ಇಚಿಕಾವಾ ಸಿಟಿ ಮೃಗಾಲಯದಲ್ಲಿದೆ. ಆದರೆ ಮೃಗಾಲಯದಿಂದ ಇದರ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಗಳು ಬಂದಿಲ್ಲ. ಪಂಚ್​​ಗೆ ಈಗ 8 ತಿಂಗಳಾಗಿದೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕೆವಿಎನ್​​ಗೆ ಕೈಕೊಟ್ಟ ಅದೃಷ್ಟ, ಎರಡು ದೊಡ್ಡ ಸಿನಿಮಾ ಬಿಡುಗಡೆ ಮುಂದೂಡಿಕೆ – Kannada News | Double trouble for KVN Productions two big movie release postponed

ಈ ಹಿಂದೆ 2021-22 ರಲ್ಲಿ ‘ಸಖತ್’, ‘ಬೈ ಟು ಲವ್’ ಅಂಥಹಾ ಸಾಮಾನ್ಯ ಬಜೆಟ್​​ನ ಕನ್ನಡ ಸಿನಿಮಾಗಳನ್ನು ನಿರ್ಮಿಸಿದ್ದ ಕೆವಿಎನ್ ನಿರ್ಮಾಣ ಸಂಸ್ಥೆ ಎರಡನೇ ಇನ್ನಿಂಗ್ಸ್​ ಅನ್ನು ಭಾರಿ ಉತ್ಸಾಹದಿಂದ ಆರಂಭಿಸಿತ್ತು. ಭಾರತದ ಇಬ್ಬರು ಅತಿ ದೊಡ್ಡ ಸ್ಟಾರ್ ನಟರ ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ಬಂಡವಾಳ ಹೂಡಿತು, ಆದರೆ ಕೆವಿಎನ್ ಅದೃಷ್ಟ ಕೈಕೊಟ್ಟು, ಎರಡೂ ಸಿನಿಮಾಗಳ ಬಿಡುಗಡೆ ಮುಂದೂಡಲ್ಪಟ್ಟಿದೆ. ಒಂದು ಸಿನಿಮಾದ ಬಿಡುಗಡೆಯೇ ಅಡಕತ್ತರಿಯಲ್ಲಿ ಸಿಲುಕಿದೆ.

2022 ರಲ್ಲಿ ‘ಬೈ ಟು ಲವ್’ ಸಿನಿಮಾ ನಿರ್ಮಿಸಿದ್ದ ಕೆವಿನ್ ಆ ಬಳಿಕ ಅಚಾನಕ್ಕಾಗಿ ದೊಡ್ಡ ಸಿನಿಮಾಗಳತ್ತ ಹೊರಳಿತು. ನಿರ್ಮಾಪಕ ವೆಂಕಟ್ ಅವರು ಕೆಲವೇ ತಿಂಗಳುಗಳ ಅಂತರದಲ್ಲಿ ಯಶ್ ಅವರೊಟ್ಟಿಗೆ ‘ಟಾಕ್ಸಿಕ್’ ಸಿನಿಮಾ ಮತ್ತು ದಳಪತಿ ವಿಜಯ್ ಅವರೊಟ್ಟಿಗೆ ‘ಜನ ನಾಯಗನ್’ ಸಿನಿಮಾ ಘೋಷಿಸಿದರು. ಒಟ್ಟಿಗೆ ಇಬ್ಬರು ಸೂಪರ್ ಸ್ಟಾರ್ ನಟರ ಬಹುದೊಡ್ಡ ಸಿನಿಮಾಗಳನ್ನು ನಿರ್ಮಾಣಕ್ಕೆ ಏಕಕಾಲದಲ್ಲಿ ಕೈಹಾಕಿದ್ದು ಅತ್ಯಂತ ಸಾಹಸಮಯ ನಿರ್ಧಾರವಾಗಿತ್ತು.

ಆದರೆ ಆ ಸವಾಲವನ್ನು ಸೂಕ್ತವಾಗಿ ಕೆವಿಎನ್ ನಿಭಾಯಿಸಿತಾದರೂ ಅದೃಷ್ಟ ಅವರಿಗೆ ಸಾಥ್ ನೀಡಿಲ್ಲ. ‘ಜನ ನಾಯಗನ್’ ಸಿನಿಮಾ ಇನ್ನೇನು ಬಿಡುಗಡೆ ಆಗಲಿದೆ ಎನ್ನುವಾಗ ರಾಜಕೀಯ ತಂತ್ರಗಳಿಗೆ ಸಿಲುಕಿ ಸಿನಿಮಾದ ಬಿಡುಗಡೆ ಮುಂದಕ್ಕೆ ಹೋಯ್ತು. ಕೆವಿಎನ್ ಅವರು ನ್ಯಾಯಾಲಯದ ಮೆಟ್ಟಿಲೇರಿದರೂ ಸಹ ಅವರಿಗಿನ್ನೂ ನ್ಯಾಯ ದೊರಕಿಲ್ಲ. ತಮಿಳುನಾಡು ಚುನಾವಣೆ ಮುಗಿವ ವರೆಗೆ ಸಿನಿಮಾ ಬಿಡುಗಡೆ ಆಗುವುದಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ‘ಜನ ನಾಯಗನ್’ ಬಿಡುಗಡೆ ವಿಳಂಬ ಆಗಿರುವುದರಿಂದ ಕೆವಿಎನ್​​ಗೆ ದೊಡ್ಡ ನಷ್ಟವೇ ಆಗಿದೆ.

ಇದನ್ನೂ ಓದಿ:‘ಟಾಕ್ಸಿಕ್’ ಸಿನಿಮಾ ಬಿಡುಗಡೆ ಮುಂದೂಡಿಕೆ ನಿರ್ಧಾರಕ್ಕೆ ಕಾರಣವೇನು?

‘ಜನ ನಾಯಗನ್’ ವಿಳಂಬವಾದರೂ ‘ಟಾಕ್ಸಿಕ್’ ಸಿನಿಮಾ ಮೇಲೆ ಕೆವಿಎನ್​​ಗೆ ಬಹಳ ವಿಶ್ವಾಸವಿತ್ತು. ಮಾರ್ಚ್ 19ರಂದು ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ ಇದೀಗ ಹಠಾತ್ತನೆ ‘ಟಾಕ್ಸಿಕ್’ ಸಿನಿಮಾದ ಬಿಡುಗಡೆ ಮುಂದೂಡಲ್ಪಟ್ಟಿದೆ. ಇಸ್ರೇಲ್-ಅಮರಿಕ ಮತ್ತು ಇರಾನ್ ದೇಶಗಳ ನಡುವೆ ಉಂಟಾಗಿರುವ ಯುದ್ಧ ರೀತಿ ಪರಿಸ್ಥಿತಿಯಿಂದಾಗಿ ಸಿನಿಮಾದ ಬಿಡುಗಡೆಯನ್ನು ಮುಂದೂಡಲಾಗಿದೆ. ಇದು ಕೆವಿಎನ್ ನಿರ್ಮಾಣ ಸಂಸ್ಥೆಗೆ ಮತ್ತೊಂದು ದೊಡ್ಡ ಹೊಡೆತವನ್ನೇ ನೀಡಿದಂತಿದೆ.

ಕೆವಿಎನ್ ಅವರು ಧ್ರುವ ಸರ್ಜಾ ನಟನೆಯ ‘ಕೆಡಿ’ ಸಿನಿಮಾಕ್ಕೂ ಸಹ ಬಂಡವಾಳ ಹೂಡಿದ್ದು, ಆ ಸಿನಿಮಾವನ್ನು ಪ್ರೇಮ್ ನಿರ್ದೇಶನ ಮಾಡಲಿದ್ದಾರೆ. ಪ್ರೇಮ್-ದರ್ಶನ್ ಕಾಂಬಿನೇಷನ್​​ನ ಹೊಸ ಸಿನಿಮಾಕ್ಕೂ ಕೆವಿಎನ್ ಬಂಡವಾಳ ಹೂಡಬೇಕಿತ್ತು, ಆದರೆ ಆ ಸಿನಿಮಾ ಸೆಟ್ಟೇರಲೇ ಇಲ್ಲ. ಇದೀಗ ‘ಜನ ನಾಯಗನ್’, ‘ಟಾಕ್ಸಿಕ್’ ಎರಡೂ ಸಿನಿಮಾಗಳ ಬಿಡುಗಡೆ ಮುಂದಕ್ಕೆ ಹೋಗಿದ್ದು, ‘ಕೆಡಿ’ ಬಿಡುಗಡೆಯೂ ಮುಂದೂಡಲ್ಪಡುತ್ತಾ ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಪರೀಕ್ಷೆಗೆ ಹೆದರಿ ಮನೆ ಬಿಟ್ಟ ಪಿಯು ವಿದ್ಯಾರ್ಥಿನಿಯರು! ಮಕ್ಕಳಿಗಾಗಿ ಕುಟುಂಬಸ್ಥರ ಕಣ್ಣೀರು – Kannada News | Bengaluru PU Students Missing: Exam Fear Suspected, High Court Intervention

ಪರೀಕ್ಷೆಗೆ ಹೆದರಿ ಮನೆ ಬಿಟ್ಟ ಪಿಯು ವಿದ್ಯಾರ್ಥಿನಿಯರು! ಮಕ್ಕಳಿಗಾಗಿ ಕುಟುಂಬಸ್ಥರ ಕಣ್ಣೀರು

ಬೆಂಗಳೂರು, ಮಾರ್ಚ್​ 04: ರಾಜ್ಯದಲ್ಲಿ ಪಿಯುಸಿ ಪರೀಕ್ಷೆ (PUC Exams) ನಡೆಯುತ್ತಿರುವ ಬೆನ್ನಲ್ಲೇ ಇಬ್ಬರು ಪಿಯು ವಿದ್ಯಾರ್ಥಿನಿಯರು ನಾಪತ್ತೆಯಾಗಿರುವ ಘಟನೆ ಆತಂಕಕ್ಕೆ ಕಾರಣವಾಗಿದೆ. ವಿದ್ಯಾರಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜನವರಿ 31ರಂದು 2ನೇ ಪಿಯು ಓದುತ್ತಿದ್ದ ತನಿಷ್ಕಾ ಹಾಗೂ 1ನೇ ಪಿಯು ವಿದ್ಯಾರ್ಥಿನಿ ತೇಜಸ್ವಿನಿ ಕಾಣೆಯಾಗಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಈ ಹಿಂದೆಯೂ ಪರೀಕ್ಷೆ ವೇಳೆ ಕೈ ಕತ್ತರಿಸಿಕೊಂಡಿದ್ದ ವಿದ್ಯಾರ್ಥಿನಿ

ಪರೀಕ್ಷೆ ಸಮೀಪಿಸುತ್ತಿದ್ದ ಹಿನ್ನೆಲೆ ಎಕ್ಸಾಮ್ ಭಯದಿಂದ ಸೀನಿಯರ್ ವಿದ್ಯಾರ್ಥಿನಿ ತನ್ನ ಜೂನಿಯರ್ ಸ್ನೇಹಿತೆಯನ್ನು ಕರೆದುಕೊಂಡು ಮನೆ ಬಿಟ್ಟು ತೆರಳಿರುವ ಶಂಕೆ ವ್ಯಕ್ತವಾಗಿದೆ. ಕಳೆದ ವರ್ಷ ಪರೀಕ್ಷೆ ತಪ್ಪಿಸಿಕೊಳ್ಳಲು ತನಿಷ್ಕಾ ತನ್ನ ಕೈ ಕತ್ತರಿಸಿಕೊಂಡಿದ್ದಳೆಂದು ತಿಳಿದುಬಂದಿದೆ. ಹೀಗಾಗಿ ಈ ಬಾರಿ ಎಕ್ಸಾಮ್ ಬರೆಯಲು ಇಚ್ಚಿಸದೆ ಈ ನಿರ್ಧಾರ ಕೈಗೊಂಡಿರಬಹುದೆಂದು ಕುಟುಂಬಸ್ಥರು ಮತ್ತು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಕಾಣೆಯಾಗಿರುವ ಈ ಇಬ್ಬರು ವಿದ್ಯಾರ್ಥಿನಿಯರು ತಮ್ಮ ಮೊಬೈಲ್ ಫೋನ್‌ಗಳನ್ನು ಮನೆಯಲ್ಲೇ ಬಿಟ್ಟು ಹೋಗಿದ್ದು, ಎಟಿಎಂ ಕಾರ್ಡ್ ಸೇರಿದಂತೆ ಯಾವುದೇ ಹಣಕಾಸು ಕೊಂಡೊಯ್ದಿಲ್ಲವೆಂದು ಹೇಳಲಾಗಿದೆ. ಆಧಾರ್ ಕಾರ್ಡ್ ಹಾಗೂ ಕಾಲೇಜು ಬ್ಯಾಗ್ ಮಾತ್ರ ತೆಗೆದುಕೊಂಡು ನಾಪತ್ತೆಯಾಗಿರುವ ಇವರು, ಉಚಿತ ಬಸ್ ಪ್ರಯಾಣ ಸೌಲಭ್ಯ ಬಳಸಿಕೊಂಡಿರುವ ಶಂಕೆಯೂ ವ್ಯಕ್ತವಾಗಿದೆ.

ಇದನ್ನೂ ಓದಿ ಕೊಡಲಿಯಿಂದ ತಂದೆಯನ್ನೇ ಕಡಿದು ಕೊಂದು, ಟ್ಯಾಂಕ್​ಗೆ ಎಸೆದು ನೆಮ್ಮದಿಯಿಂದ ಕುಳಿತು ಬಿರಿಯಾನಿ ತಿಂದ ಮಗ

ಒಂದು ವಾರದ ಗಡುವು ನೀಡಿರುವ ಹೈ ಕೋರ್ಟ್​

ಕಳೆದ ಕೆಲ ದಿನಗಳ ಹಿಂದೆ ಸ್ನೇಹಿತರಿಗೆ ಕರೆ ಮಾಡಿ ಮಲೆ ಮಹಾದೇಶ್ವರ ಬೆಟ್ಟದಲ್ಲಿದ್ದೇವೆ ಎಂದು ತಿಳಿದಿದ್ದರಂತೆ. ಒಂದು ವಾರದಲ್ಲಿ ಮತ್ತೆ ಸಂಪರ್ಕಿಸುವುದಾಗಿಯೂ ಹೇಳಿದ್ದರು ಎನ್ನಲಾಗಿದೆ. ಆದರೆ ಅದಾದ ಬಳಿಕ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಈ ಸಂಬಂಧ ಪೊಲೀಸರು 50ಕ್ಕೂ ಹೆಚ್ಚು ಸ್ಥಳಗಳಲ್ಲಿ ಹುಡುಕಾಟ ನಡೆಸಿದ್ದಾರೆ. ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹೈ ಕೋರ್ಟ್​ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯ ಒಂದು ವಾರದ ಗಡುವು ನೀಡಿದೆ ಎಂದು ತಿಳಿದುಬಂದಿದೆ. ಒಂದು ತಿಂಗಳಿಂದ ಮಕ್ಕಳಿಗಾಗಿ ಕಣ್ಣೀರಿಡುತ್ತಿರುವ ಕುಟುಂಬಸ್ಥರು, ಸುರಕ್ಷಿತವಾಗಿ ಮರಳಿ ಬರುವಂತೆ ಮನವಿ ಮಾಡಿದ್ದಾರೆ. ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version