ಅಡುಗೆಯ ರುಚಿ ಹೆಚ್ಚಿಸುವ ಇಂಗು ಆರೋಗ್ಯಕ್ಕೂ ಸಖತ್‌ ಪ್ರಯೋಜನಕಾರಿ – Kannada News | There are many health benefits of using Asafoetida in cooking

ಭಾರತೀಯರ ಅಡುಗೆ ಮನೆಗಳಲ್ಲಿ ಇಂಗು (Asafoetida) ಇದ್ದೇ ಇರುತ್ತದೆ. ಸಣ್ಣ ಬಗೆಯ ಮಸಾಲೆಯಾಗಿರುವ ಇಂಗು ಅಡುಗೆಗೆ ವಿಭಿನ್ನ ಸುವಾಸನೆ ಮತ್ತು ರುಚಿಯನ್ನು ನೀಡುತ್ತದೆ. ಬೇಳೆ ಸಾರು, ರಸಂ, ಸಾಂಬಾರು ಸೇರಿದಂತೆ ಹೆಚ್ಚಿನ ತರಕಾರಿ ಪದಾರ್ಥಗಳಿಗೆ ಇಂಗು ಹಾಕಲಾಗುತ್ತದೆ. ಹೀಗೆ ಭಾರತೀಯ ಪಾಕಪದ್ಧತಿಯಲ್ಲಿ ಪ್ರಮುಖ ಪಾತ್ರವಹಿಸುವಂತಹ ಇಂಗಿಗೆ ಆಯುರ್ವೇದದಲ್ಲೂ ಮುಖ್ಯ ಸ್ಥಾನವಿದೆ. ಹೌದು ಹಲವು ಔಷಧೀಯ ಗುಣಗಳನ್ನು ಹೊಂದಿರುವ ಇಂಗು ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಇದರಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದ್ದು, ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ತುಂಬಾ ಪ್ರಯೋಜನಕಾರಿ. ಒಟ್ಟಾರೆಯಾಗಿ ಅಡುಗೆಗೆ ಚಿಟಿಕೆ ಇಂಗು ಸೇರಿಸುವುದರಿಂದ ಏನೆಲ್ಲಾ ಪ್ರಯೋಜನಗಳು ಲಭಿಸುತ್ತವೆ ಎಂಬುದನ್ನು ನೋಡೋಣ ಬನ್ನಿ.

ಇಂಗಿನ ಆರೋಗ್ಯ ಪ್ರಯೋಜನಗಳೇನು?

ಜೀರ್ಣಕ್ರಿಯೆಗೆ ಸಹಕಾರಿ: ಇಂಗು ಜೀರ್ಣಕ್ರಿಯೆಗೆ ಬೇಕಾಗುವಂತಹ ಕಿಣ್ವಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಇದರ ಆಂಟಿಸ್ಪಾಸ್ಮೊಡಿಕ್‌ ಮತ್ತು ಉರಿಯೂತ ನಿವಾರಕ ಗುಣಗಳು ಹೊಟ್ಟೆಯುಬ್ಬರ, ಗ್ಯಾಸ್‌, ಅಜೀರ್ಣದಂತಹ ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸಲು ತುಂಬಾನೇ ಸಹಕಾರಿ.

ಉಸಿರಾಟದ ಸಮಸ್ಯೆಯನ್ನು ನಿವಾರಿಸುತ್ತದೆ: ಇಂಗು ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತ ನಿವಾರಕ ಗುಣಗಳನ್ನು ಹೊಂದಿದ್ದು, ಇದು ಶ್ವಾಸಕೋಶಗಳಿಗೆ ಪ್ರಯೋಜನಕಾರಿಯಾಗಿದೆ. ಇದು ಆಸ್ತಮಾ, ಕೆಮ್ಮು ಮತ್ತು ಎದೆಯಿಂದ ಕಫವನ್ನು ತೆರವುಗೊಳಿಸಲು ಸಹಾಯ ಮಾಡುತ್ತದೆ, ಉಸಿರಾಟವನ್ನು ಸುಲಭಗೊಳಿಸುತ್ತದೆ.

ತಲೆನೋವನ್ನು ನಿವಾರಿಸುತ್ತದೆ: ಇಂಗುವಿನ ಉರಿಯೂತ ನಿವಾರಕ ಗುಣಗಳು ತಲೆಯಲ್ಲಿರುವ ರಕ್ತನಾಳಗಳ ಊತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸ್ವಲ್ಪ ಇಂಗನ್ನು  ಬೆಚ್ಚಗಿನ ನೀರಿನೊಂದಿಗೆ ಬೆರೆಸಿ ಕುಡಿಯುವುದರಿಂದ ಮೈಗ್ರೇನ್ ಮತ್ತು ಒತ್ತಡದ ತಲೆನೋವಿನಿಂದ ಪರಿಹಾರ ಸಿಗುತ್ತದೆ.

ಇದನ್ನೂ ಓದಿ: ಪ್ರತಿದಿನ ಊಟದ ಬಳಿಕ ಒಂದು ಸ್ಪೂನ್‌ ಸೋಂಪು ತಿನ್ನಿ, ಅದ್ಭುತ ಪ್ರಯೋಜನಗಳನ್ನು ನಿಮ್ಮದಾಗಿಸಿಕೊಳ್ಳಿ

ಮುಟ್ಟಿನ ನೋವನ್ನು ನಿವಾರಿಸುತ್ತದೆ: ಹೆಚ್ಚಿನ ಮಹಿಳೆಯರು ಮುಟ್ಟಿನ ಸಮಯದಲ್ಲಿ ಹೊಟ್ಟೆ ನೋವು ಮತ್ತು ಸೆಳೆತವನ್ನು ಅನುಭವಿಸುತ್ತಾರೆ. ಇಂತಹ ಸಂದರ್ಭದಲ್ಲಿ ನೀರಿನೊಂದಿಗೆ ಒಂದು ಚಿಟಿಕೆ ಇಂಗು ಬೆರೆಸಿ  ಸೇವಿಸಿದರೆ ನೋವು ನಿವಾರಣೆಯಾಗುತ್ತದೆ ಎಂದು ಹೇಳಲಾಗುತ್ತದೆ.

ಚರ್ಮಕ್ಕೆ ಪ್ರಯೋಜನಕಾರಿ: ಇಂಗು ವಯಸ್ಸಾಗುವಿಕೆ ವಿರೋಧಿ ಗುಣಗಳನ್ನು ಹೊಂದಿದ್ದು, ಇದು ಮುಖದ ಸುಕ್ಕುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ: ಇಂಗಿನಲ್ಲಿ ಕೂಮರಿನ್ ಎಂಬ ಪದಾರ್ಥವಿದೆ. ಇದು ರಕ್ತ ತೆಳುವಾಗಲು ಸಹಾಯ ಮಾಡುತ್ತದೆ. ಇದು ರಕ್ತದೊತ್ತಡವನ್ನು ಸಹ ನಿಯಂತ್ರಿಸುತ್ತದೆ. ಇದು ದೇಹದಲ್ಲಿ ರಕ್ತದ ಹರಿವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಹೀಗೆ ಅಡುಗೆಗೆ ಒಂದು ಚಿಟಿಕೆ ಇಂಗು ಸೇರಿಸುವುದರಿಂದ ರುಚಿ ಮತ್ತು ಸುವಾಸನೆ ಎರಡನ್ನೂ ಹೆಚ್ಚಿಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದಲ್ಲಿ ರಶ್ಮಿಕಾ ಮಂದಣ್ಣ ಮತ್ತು ಕೃತಿ ಸನನ್ – Kannada News | Cocktail 2 stars Rashmika Mandanna Kriti Sanon visit Presidency University Bengaluru Campus

ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ಕೃತಿ ಸನನ್ ಅವರು ತಮ್ಮ ಹೊಸ ಚಿತ್ರ ‘ಕಾಕ್‌ಟೇಲ್ 2’ ಪ್ರಚಾರಕ್ಕಾಗಿ ಬೆಂಗಳೂರಿನ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ (Presidency University) ಕ್ಯಾಂಪಸ್‌ಗೆ ಬಂದಿದ್ದರಿಂದ ವಿದ್ಯಾರ್ಥಿಗಳಿಗೆ ಇದು ಸ್ಮರಣೀಯ ದಿನವಾಗಿತ್ತು. ರಶ್ಮಿಕಾ ಅವರು ಬೆಂಗಳೂರು ನಗರದಲ್ಲಿ ಉನ್ನತ ಶಿಕ್ಷಣವನ್ನು ಪಡೆದಿರುವುದರಿಂದ ಮತ್ತು ಸ್ಯಾಂಡಲ್‌ವುಡ್‌ನಿಂದ ತಮ್ಮ ಸಿನಿಮಾ ವೃತ್ತಿಜೀವನವನ್ನು ಪ್ರಾರಂಭಿಸಿದ್ದರಿಂದ ಬೆಂಗಳೂರು ಮತ್ತು ಕರ್ನಾಟಕದ ಜೊತೆ ಬಲವಾದ ಸಂಪರ್ಕವನ್ನು ಹೊಂದಿದ್ದಾರೆ.

ರಶ್ಮಿಕಾ ಅವರ ಮನದಲ್ಲಿ ಬೆಂಗಳೂರು ವಿಶೇಷ ಸ್ಥಾನವನ್ನು ಹೊಂದಿದೆ. ಕೃತಿ ಸನನ್‌ಗೂ ಈ ನಗರ ಮತ್ತು ಇಲ್ಲಿನ ಜನರ ಪರಿಚಯ ಮಾಡಿಕೊಡಲು ಈ ವೇದಿಕೆ ಸಹಕಾರಿ ಆಯಿತು. ಇಬ್ಬರೂ ನಟಿಯರು ತಮ್ಮ ಮೋಡಿಮಾಡುವ ನೃತ್ಯ ಮತ್ತು ಹಾಸ್ಯಮಯ ಸಂಭಾಷಣೆಯಿಂದ ಪ್ರೇಕ್ಷಕರನ್ನು ಮೋಡಿ ಮಾಡಿದರು. ಈ ಕಾರ್ಯಕ್ರಮದ ಫೋಟೋಗಳು ಗಮನ ಸೆಳೆಯುವಂತಿವೆ.

Presidency University Bengaluru

ಪ್ರೀತಿ ಮತ್ತು ಸ್ನೇಹದ ಬಗ್ಗೆ ಮಾತನಾಡುತ್ತಾ, ‘ರಶ್ಮಿಕಾ ತನ್ನ ಆತ್ಮೀಯ ಸ್ನೇಹಿತ ವಿಜಯ್ ಅವರನ್ನು ವಿವಾಹವಾಗಿದ್ದಾರೆ’ ಎಂದು ಕೃತಿ ಗಮನಸೆಳೆದರು. ಅವರ ಈ ಮಾತುಗಳು ವಿದ್ಯಾರ್ಥಿ ಬಳಗದಲ್ಲಿ ಇದ್ದ ವಿಜಯ್ ದೇವರಕೊಂಡ ಅವರ ಅಭಿಮಾನಿಗಳನ್ನು ಜೋರಾಗಿ ಹುರಿದುಂಬಿಸಿತು. ಈ ಕ್ಷಣ ರಶ್ಮಿಕಾ ಕೂಡ ಬಹಳ ಸಂತೋಷದಿಂದ ನಗು ಬೀರಿದರು.

‘ವಿಜಯ್ ನಿಮ್ಮೆಲ್ಲರನ್ನೂ ಪ್ರೀತಿಸುತ್ತಾರೆ’ ಎಂದು ರಶ್ಮಿಕಾ ಮಂದಣ್ಣ ಅವರು ಉತ್ಸಾಹಭರಿತ ಪ್ರೇಕ್ಷಕರಿಗೆ ತಿಳಿಸಿದರು. ‘ಕಾಕ್‌ಟೇಲ್ 2’ ಚಿತ್ರದಲ್ಲಿ ಸ್ನೇಹಿತರ ಪಾತ್ರ ಮಾಡಿರುವ ರಶ್ಮಿಕಾ ಮಂದಣ್ಣ ಮತ್ತು ಕೃತಿ ಸನನ್ ಅವರು ಅದ್ಭುತ ಕೆಮಿಸ್ಟ್ರಿ ನೋಡಲು ಅಭಿಮಾನಿಗಳು ಕಾದಿದ್ದಾರೆ. ಹಿಂದಿಯ ಈ ಸಿನಿಮಾ ಶೀಘ್ರದಲ್ಲೇ ಬಿಡುಗಡೆ ಆಗಲಿದೆ.

ಇದನ್ನೂ ಓದಿ: ಶಾಹಿದ್ ಕಪೂರ್ ಬಟ್ಟೆ ಹರಿದು, ರಶ್ಮಿಕಾ ಮೇಲೆ ಮುಗಿಬಿದ್ದ ಫ್ಯಾನ್ಸ್; ವಿಡಿಯೋ ವೈರಲ್

ವಿದ್ಯಾರ್ಥಿಗಳೊಂದಿಗಿನ ಭೇಟಿಯ ಅವಕಾಶಕ್ಕಾಗಿ ರಶ್ಮಿಕಾ ಮತ್ತು ಕೃತಿ ಸನನ್ ಅವರು ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ಆಡಳಿತ ಮಂಡಳಿಗೆ ಧನ್ಯವಾದ ಅರ್ಪಿಸಿದರು. ಈ ಸಂದರ್ಭದಲ್ಲಿ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ಉಪಾಧ್ಯಕ್ಷರಾದ ಶ್ರೀ ಸುಹೇಲ್ ಅಹ್ಮದ್, ಉಪಾಧ್ಯಕ್ಷರಾದ ಶ್ರೀ ಸಲ್ಮಾನ್ ಅಹ್ಮದ್, ಉಪಾಧ್ಯಕ್ಷರಾದ ಡಾ. ನಫೀಸಾ ಅಹ್ಮದ್ ಮತ್ತು ಸದಸ್ಯರಾದ ಶ್ರೀಮತಿ ಶೈಮಾ ಅಹ್ಮದ್ ಉಪಸ್ಥಿತರಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

‘ಇದು ಐಪಿಎಲ್ ಅಲ್ಲ, ಮನೆಗೆ ಹೋಗು’; ವೈಭವ್​ ಕೆರಳುವಂತೆ ಮಾಡಿದ್ದೇ ಲಂಕಾ ಕ್ರಿಕೆಟಿಗ..! – Kannada News | India A vs SL A: Vaibhav Suryavanshi Row Explained – Vishen Halambage’s ‘Go Home’ Provokes

ಶ್ರೀಲಂಕಾದಲ್ಲಿ ನಡೆಯುತ್ತಿರುವ ತ್ರಿಕೋನ ಸರಣಿಯ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ಎ ಹಾಗೂ ಭಾರತ ಎ (India A vs Sri Lanka A) ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಶ್ರೀಲಂಕಾ ಗೆದ್ದಿತ್ತಾದರೂ, ಪಂದ್ಯ ಮುಗಿದ ಬಳಿಕ ಉಂಟಾಗಿದ್ದ ಗದ್ದಲದಿಂದಾಗಿ ವಿವಾದವೊಂದು ಹುಟ್ಟಿಕೊಂಡಿತ್ತು. ಆರಂಭದಲ್ಲಿ ಆ ಗದ್ದಲದ ವಿಡಿಯೋವನ್ನು ನೋಡಿದವರು ಭಾರತದ ಯುವ ಆಟಗಾರ ವೈಭವ್ ಸೂರ್ಯವಂಶಿ (Vaibhav Sooryavanshi) ದುರಹಂಕಾರಿ ಎಂದು ಟೀಕಿಸಿದ್ದರು. ಅಲ್ಲದೆ ವೈಭವ್​ಗೆ ಸರಿಯಾದ ಶಿಕ್ಷೆಯಾಗಬೇಕೆಂಬ ಬೇಡಿಕೆಯನ್ನು ಇಟ್ಟಿದ್ದರು. ಆದರೆ ಪಂದ್ಯ ನಡೆದ ಒಂದು ದಿನದ ಬಳಿಕ ಇಡೀ ಘಟನೆಗೆ ಕಾರಣವೇನು? ವೈಭವ್ ಅಷ್ಟು ಕೋಪಗೊಳ್ಳುವಂತದ್ದು ಏನು ನಡೆಯಿತು ಎಂಬುದು ಈಗ ಬಹಿರಂಗವಾಗಿದೆ.

ವೈಭವ್ ಜಗಳದ ಹಿಂದಿನ ಕಾರಣ ಬಹಿರಂಗ

ವಾಸ್ತವವಾಗಿ ಜೂನ್ 15 ರಂದು ನಡೆದ ಈ ಪಂದ್ಯ ಸೂಪರ್ ಓವರ್​ನಲ್ಲಿ ಅಂತ್ಯಗೊಂಡಿತು. ಈ ಸೂಪರ್ ಓವರ್​ನಲ್ಲಿ ಆತಿಥೇಯ ತಂಡ ಗೆಲುವು ಸಾಧಿಸಿತು. ಇತ್ತ ಸೋಲಿನ ಹತಾಶೆಯೊಂದಿಗೆ ಡಗೌಟ್​ಗೆ ಮರಳುತ್ತಿದ್ದ ವೈಭವ್ ಸೂರ್ಯವಂಶಿ ಬಳಿ ಲಂಕಾ ಕ್ರಿಕೆಟಿಗರು ಕಾಲ್ಕೆರೆದು ಜಗಳ ಮಾಡಿದ್ದರು. ಇದರಿಂದ ಕೋಪಗೊಂಡಿದ್ದ ವೈಭವ್ ಕೂಡ ಲಂಕಾ ಕ್ರಿಕೆಟಿಗರ ವಿರುದ್ಧ ಸೆಟೆದು ನಿಂತಿದ್ದರು. ಆದರೆ ಆ ಸಮಯದಲ್ಲಿ ಈ ಇಡೀ ಘಟನೆಗೆ ಕಾರಣ ಏನು ಎಂಬುದು ತಿಳಿದುಬಂದಿರಲಿಲ್ಲ. ಆದರೀಗ ವೈಭವ್ ಅಷ್ಟು ಆಕ್ರೋಶಗೊಳ್ಳಲು ಏನು ಕಾರಣ ಎಂಬುದು ಬಹಿರಂಗವಾಗಿದೆ. ಈ ಇಡೀ ಘಟನೆಗೆ ಶ್ರೀಲಂಕಾದ ಆಲ್‌ರೌಂಡರ್ ವಿಷೇನ್ ಹಲಂಬಗೆ ಕಾರಣ ಎಂಬುದು ತಿಳಿದುಬಂದಿದೆ.

ಮನೆಗೆ ಹೋಗು, ಇದು ಐಪಿಎಲ್ ಅಲ್ಲ

ಕ್ರಿಕ್‌ಬಜ್ ವರದಿಯ ಪ್ರಕಾರ, ಸೂಪರ್​ ಓವರ್​ನಲ್ಲಿ ಪಂದ್ಯ ಮುಗಿದ ಬಳಿಕ ಡಗೌಟ್​ನತ್ತ ಬರುತ್ತಿದ್ದ ವೈಭವ್ ಬಳಿ ವಿಷೇನ್ ಹಲಂಬಗೆ, ‘ಮನೆಗೆ ಹೋಗು, ಇದು ಐಪಿಎಲ್ ಅಲ್ಲ’ ಎಂದು ಹೇಳಿದ್ದಾರೆ. ಇದನ್ನು ಕೇಳಿದ ವೈಭವ್ ಸೂರ್ಯವಂಶಿ ಕೋಪಗೊಂಡು ಅವರೊಂದಿಗೆ ಜಗಳಕ್ಕಿಳಿದಿದ್ದಾರೆ. ವಿಷೇನ್ ಹಲಂಬಗೆ ನಿನ್ನೆ ನಡೆದ ಪಂದ್ಯದಲ್ಲಿ ಮಾತ್ರವಲ್ಲದೆ ಜೂನ್ 9 ರಂದು ನಡೆದಿದ್ದ ಪಂದ್ಯದಲ್ಲೂ ವೈಭವ್​ಗೆ ಕಿರುಕುಳ ನೀಡಲು ಪ್ರಯತ್ನಿಸುತ್ತಿದ್ದರು ಎಂದು ತಿಳಿದುಬಂದಿದೆ. ಆ ಪಂದ್ಯದಲ್ಲಿ ವೈಭವ್​ನನ್ನು ಪದೇ ಪದೇ ಸ್ಲೆಡ್ಜ್ ಮಾಡಲು ಪ್ರಯತ್ನಿಸಿದ್ದ ವಿಷೇನ್ ಹಲಂಬಗೆ, ಸೋಮವಾರ ನಡೆದ ಪಂದ್ಯದಲ್ಲಿ ವೈಭವ್ ಬ್ಯಾಟಿಂಗ್ ಮಾಡುವಾಗಲೂ ಅದನ್ನು ಮುಂದುವರಿಸಿದ್ದರು ಎಂದು ವರದಿಯಾಗಿದೆ.

ಮೈದಾನದಲ್ಲಿ ಜಗಳ ಮಾಡಿಕೊಂಡಿದ್ದ ವೈಭವ್ ಬೆನ್ನಿಗೆ ನಿಂತ ಶ್ರೀಲಂಕಾದ ಮಾಜಿ ಕ್ರಿಕೆಟಿಗರು

ಅಷ್ಟಕ್ಕೆ ನಿಲ್ಲದ ವಿಷೇನ್ ಹಲಂಬಗೆ, ಸೂಪರ್ ಓವರ್​ನಲ್ಲಿ ವೈಭವ್ ಸೂರ್ಯವಂಶಿ ಬ್ಯಾಟಿಂಗ್ ಮಾಡಲು ಬಂದಾಗಲೂ ತನ್ನ ನೀಚತನವನ್ನು ಪ್ರದರ್ಶಿಸಿದ್ದಾರೆ. ಇದೇ ವೇಳೆ ವೈಭವ್​ಗೆ “ಮನೆಗೆ ಹೋಗು, ಇದು ಐಪಿಎಲ್ ಅಲ್ಲ” ಎಂದು ಟೀಕಿಸಿದ್ದಾರೆ ಎಂದು ವರದಿಯಾಗಿದೆ. ಮಾತ್ರವಲ್ಲದೆ ಸೂಪರ್ ಓವರ್ ಮುಗಿದ ನಂತರ ವಿಷೇನ್ ಹಲಂಬಗೆ, ವೈಭವ್ ಸೂರ್ಯವಂಶಿ ಜೊತೆಗೆ ಕಾಲ್ಕೆರೆದು ಮತ್ತೆ ಜಗಳಕ್ಕಿಳಿದಿದ್ದಾರೆ. ಇದರಿಂದ ಕೋಪಗೊಂಡ ವೈಭವ್ ಅವರೊಂದಿಗೆ ವಾಗ್ವಾದ ಶುರು ಮಾಡಿದ್ದಾರೆ. ಈ ಜಗಳಕ್ಕೆ ತಾರಕಕ್ಕೇರುತ್ತಿರುವುದನ್ನು ನೋಡಿದ ಇತರ ಆಟಗಾರರು ಇಬ್ಬರ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:25 pm, Tue, 16 June 26

Source link

ಪೇರಳೆ ಹಣ್ಣು ತಿಂದ ತಕ್ಷಣ ಅಪ್ಪಿತಪ್ಪಿಯೂ ಈ ಆಹಾರಗಳ ಸೇವನೆ ಮಾಡಬೇಡಿ! – Kannada News | Foods To Avoid Immediately After Eating Guava

ಪೇರಳೆ ಹಣ್ಣು (Guava) ಆರೋಗ್ಯಕ್ಕೆ ಅತ್ಯಂತ ಉಪಯುಕ್ತವಾದ ಹಣ್ಣುಗಳಲ್ಲಿ ಒಂದು. ಇದರಲ್ಲಿ ವಿಟಮಿನ್ ಸಿ, ಫೈಬರ್ ಹಾಗೂ ಆಂಟಿಆಕ್ಸಿಡೆಂಟ್‌ಗಳು ಸಮೃದ್ಧವಾಗಿದ್ದು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಹಾಗೂ ಜೀರ್ಣಕ್ರಿಯೆ ಸುಧಾರಿಸಲು ಸಹಾಯ ಮಾಡುತ್ತದೆ. ಆದರೆ ಪೇರಳೆ ಹಣ್ಣು ತಿಂದ ತಕ್ಷಣ ಕೆಲವು ಆಹಾರಗಳನ್ನು ಸೇವಿಸುವುದು ಆರೋಗ್ಯಕ್ಕೆ ಹಾನಿಕಾರಕ ಎಂಬುದು ನಿಮಗೆ ತಿಳಿದಿದೆಯೇ? ಹೌದು, ಪೇರಳೆಯ ಜೊತೆ ಕೆಲವು ಆಹಾರಗಳನ್ನು ಅಪ್ಪಿತಪ್ಪಿಯೂ ಸೇವನೆ ಮಾಡಬಾರದು ಇದರಿಂದ ಆರೋಗ್ಯ ಹಾಳಾಗುವುದರಲ್ಲಿ ಸಂಶಯವೇ ಇಲ್ಲ. ಹಾಗಾದರೆ ಆ ಆಹಾರಗಳು ಯಾವವು, ಯಾಕೆ ಸೇವನೆ ಮಾಡಬಾರದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಹಾಲು ಮತ್ತು ಹಾಲಿನ ಪದಾರ್ಥಗಳು:

ಪೇರಳೆ ಹಣ್ಣು ತಿಂದ ತಕ್ಷಣ ಹಾಲು ಕುಡಿಯುವುದು ಉತ್ತಮವಲ್ಲ. ಪೇರಳೆ ಹಣ್ಣಿನಲ್ಲಿರುವ ಆಮ್ಲ ಗುಣಗಳು ಹಾಲಿನೊಂದಿಗೆ ಬೆರೆತು ಜೀರ್ಣಕ್ರಿಯೆಯನ್ನು ನಿಧಾನಗೊಳಿಸಬಹುದು. ಇದರಿಂದ ಹೊಟ್ಟೆ ಉಬ್ಬರ, ಗ್ಯಾಸ್ಟ್ರಿಕ್ ಮತ್ತು ಅಜೀರ್ಣ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ತಣ್ಣೀರು ಕುಡಿಯಬೇಡಿ:

ಪೇರಳೆ ಹಣ್ಣು ತಿಂದ ತಕ್ಷಣ ತಣ್ಣೀರು ಕುಡಿಯುವುದರಿಂದ ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರುತ್ತದೆ. ಕೆಲವರಲ್ಲಿ ಹೊಟ್ಟೆನೋವು, ಗ್ಯಾಸ್ ಮತ್ತು ಅಸಹಜತೆ ಉಂಟಾಗಬಹುದು. ಆದ್ದರಿಂದ ಕನಿಷ್ಠ 20 ರಿಂದ 30 ನಿಮಿಷಗಳ ನಂತರ ನೀರು ಕುಡಿಯುವುದು ಉತ್ತಮ.

ಇದನ್ನೂ ಓದಿ: ಮಾನ್ಸೂನ್‌ ಋತುವಿನಲ್ಲಿ ಈ ಕಾಲೋಚಿತ ಹಣ್ಣುಗಳನ್ನು ತಿನ್ನಲು ಮರೆಯದಿರಿ

ಬಾಳೆಹಣ್ಣನ್ನು ಜೊತೆಗೆ ತಿನ್ನಬೇಡಿ:

ಪೇರಳೆ ಹಣ್ಣು ಮತ್ತು ಬಾಳೆಹಣ್ಣು ಒಂದೇ ಸಮಯದಲ್ಲಿ ಸೇವಿಸುವುದರಿಂದ ಕೆಲವರಿಗೆ ಜೀರ್ಣಕ್ರಿಯೆ ಸಮಸ್ಯೆಗಳು ಕಾಣಿಸಬಹುದು. ವಿಶೇಷವಾಗಿ ಗ್ಯಾಸ್ಟ್ರಿಕ್ ಅಥವಾ ಹೊಟ್ಟೆ ಉಬ್ಬರ ಸಮಸ್ಯೆ ಇರುವವರು ಈ ಎರಡು ಹಣ್ಣುಗಳ ಸೇವನೆ ಮಾಡದಿರುವುದು ಉತ್ತಮ.

ಹೆಚ್ಚು ಮಸಾಲೆ ಮತ್ತು ಎಣ್ಣೆಯುಕ್ತ ಆಹಾರದ ಸೇವನೆ ಒಳ್ಳೆಯದಲ್ಲ:

ಪೇರಳೆ ಹಣ್ಣಿನಲ್ಲಿ ಫೈಬರ್ ಅಧಿಕವಾಗಿರುವುದರಿಂದ ತಕ್ಷಣವೇ ಹೆಚ್ಚು ಮಸಾಲೆ ಅಥವಾ ಎಣ್ಣೆಯುಕ್ತ ಆಹಾರ ಸೇವಿಸಿದರೆ ಹೊಟ್ಟೆಯ ಮೇಲೆ ಒತ್ತಡ ಹೆಚ್ಚಾಗಬಹುದು. ಇದರಿಂದ ಅಜೀರ್ಣ, ಹೊಟ್ಟೆ ಉರಿ ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಆದರೆ ನೆನಪಿರಲಿ, ಪ್ರತಿಯೊಬ್ಬರ ದೇಹದ ಸ್ವಭಾವ ಬೇರೆಬೇರೆ ಆಗಿರುವುದರಿಂದ ಈ ಸಮಸ್ಯೆಗಳು ಎಲ್ಲರಲ್ಲೂ ಒಂದೇ ರೀತಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ. ಆದರೆ ಸಂವೇದನಾಶೀಲ ಜೀರ್ಣಕ್ರಿಯೆ ಇರುವವರು ಪೇರಳೆ ಹಣ್ಣು ತಿಂದ ಬಳಿಕ ಸ್ವಲ್ಪ ಸಮಯ ಬಿಡುವು ನೀಡಿ ಬೇರೆ ಆಹಾರ ಸೇವಿಸುವುದು ಆರೋಗ್ಯಕ್ಕೆ ಉತ್ತಮ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಿಗಿ ಅಪ್ಪುಗೆಯಿಲ್ಲದೆ, ಕೈ ಕುಲುಕಿ ಟ್ರಂಪ್​- ಮೋದಿ ಉಭಯಕುಶಲೋಪರಿ; 16 ತಿಂಗಳ ಬಳಿಕ ಇಬ್ಬರ ಮುಖಾಮುಖಿ – Kannada News | No Warm Hugs; PM Modi and Donald Trump shake hands at G7 Summit in France First Meet After 16 Months

ಎವಿಯಾನ್, ಜೂನ್ 16: ಫ್ರಾನ್ಸ್‌ನ ಎವಿಯಾನ್ ನಗರದಲ್ಲಿ ನಡೆಯುತ್ತಿರುವ ಜಿ7 ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi in France) ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಇಂದು ಪರಸ್ಪರ ಭೇಟಿಯಾಗಿದ್ದಾರೆ. ಕಳೆದ 16 ತಿಂಗಳುಗಳಲ್ಲಿ ಉಭಯ ನಾಯಕರ ನಡುವೆ ನಡೆದ ಮೊದಲ ಮುಖಾಮುಖಿ ಇದಾಗಿದೆ. ಆಪ್ತ ಸ್ನೇಹಿತರೆಂದು ಹೇಳಿಕೊಳ್ಳುತ್ತಿದ್ದ ಈ ಇಬ್ಬರೂ ನಾಯಕರು ಇಂದು ಈ ಮೊದಲಿನಿಂತೆ ಬಿಗಿ ಅಪ್ಪುಗೆಯಿಲ್ಲದೆ ಕೇವಲ ಪರಸ್ಪರ ಮುಗುಳ್ನಕ್ಕು ಹಸ್ತಲಾಘವ ಮಾಡಿಕೊಂಡಿದ್ದಾರೆ. ಸಾಮಾನ್ಯವಾಗಿ ಪ್ರತಿ ಬಾರಿಯೂ ಪ್ರಧಾನಿ ಮೋದಿ ಟ್ರಂಪ್​ಗೆ ಆತ್ಮೀಯವಾದ ಅಪ್ಪುಗೆ ನೀಡುತ್ತಿದ್ದರು. ಆದರೆ, ಈ ಬಾರಿ ಎರಡೂ ದೇಶಗಳ ನಡುವಿನ ಮುಸುಕಿನ ಗುದ್ದಾಟದಿಂದಾಗಿ ಉಭಯ ನಾಯಕರು ಕೇವಲ ಔಪಚಾರಿಕವಾಗಿ ಉಭಯಕುಶಲೋಪರಿ ನಡೆಸಿದ್ದು ಮೇಲ್ನೋಟಕ್ಕೆ ಕಾಣಿಸುತ್ತಿತ್ತು.

ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಆಯೋಜಿಸಿರುವ ಜಿ7 ಶೃಂಗಸಭೆಯ ಔಟ್‌ರೀಚ್ ಅಧಿವೇಶನದಲ್ಲಿ ಜಾಗತಿಕ ನಾಯಕರು ಒಟ್ಟುಗೂಡಿದಾಗ ಪ್ರಧಾನಿ ಮೋದಿ ಮತ್ತು ಡೊನಾಲ್ಡ್ ಟ್ರಂಪ್ ನಡುವೆ ಈ ಸಂಕ್ಷಿಪ್ತ ಭೇಟಿ ನಡೆದಿದೆ. ಶೃಂಗಸಭೆಯ ವೇದಿಕೆಯಲ್ಲಿ ಇಬ್ಬರೂ ನಾಯಕರು ಪರಸ್ಪರ ಪಕ್ಕದ ಆಸನಗಳಲ್ಲೇ ಕುಳಿತುಕೊಂಡು ಕೆಲಕಾಲ ಸಂಭಾಷಣೆ ನಡೆಸಿದರು. ಬುಧವಾರ ಇವರಿಬ್ಬರ ನಡುವೆ ದ್ವಿಪಕ್ಷೀಯ ಮಾತುಕತೆ ನಿಗದಿಯಾಗಿದೆ. ಈ ಮಾತುಕತೆಯ ಬಗ್ಗೆ ಕುತೂಹಲ ಹೆಚ್ಚಾಗಿದೆ.

2025ರ ಫೆಬ್ರವರಿಯಲ್ಲಿ ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಎರಡನೇ ಅವಧಿಗೆ ಅಧಿಕಾರ ವಹಿಸಿಕೊಂಡ ತಕ್ಷಣ ಪ್ರಧಾನಿ ಮೋದಿ ಅವರು ವಾಷಿಂಗ್ಟನ್‌ಗೆ ಭೇಟಿ ನೀಡಿದ್ದರು. ಆ ಪ್ರವಾಸದ ಬಳಿಕ ಇಬ್ಬರು ನಾಯಕರು ಮುಖಾಮುಖಿಯಾಗಿ ಭೇಟಿಯಾಗುತ್ತಿರುವುದು ಇದೇ ಮೊದಲು.

(Video Source: BJP)

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಮಳೆಗಾಲದಲ್ಲಿ ಎಣ್ಣೆಯುಕ್ತ ಚರ್ಮದ ಸಮಸ್ಯೆ ಹೆಚ್ಚಾಗೋದೇಕೆ? ಇದಕ್ಕೆ ಪರಿಹಾರವೇನು? – Kannada News | Why oily skin problems become more common during the rainy season?

ಮಾನ್ಸೂನ್‌ನಲ್ಲಿ ವಾತಾವರಣ ಆಹ್ಲಾದಕರವಾಗಿದ್ದು, ಮಳೆ ಮತ್ತು ತೇವಾಂಶದ ಕಾರಣದಿಂದ ಈ ಋತುವಿನಲ್ಲಿ ಅನೇಕ ರೋಗಗಳ ಅಪಾಯವೂ ಹೆಚ್ಚಾಗುತ್ತದೆ. ಜೊತೆಗೆ ಈ ಋತುವಿನಲ್ಲಿ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತವೆ. ಇದರಲ್ಲಿ ಎಣ್ಣೆಯುಕ್ತ ಚರ್ಮದ ಸಮಸ್ಯೆಯೂ ಒಂದು. ಹೌದು ಈ ಸಮಯದಲ್ಲಿ ಕೆಲವರ ತ್ವಚೆ ಸಾಮಾನ್ಯಕ್ಕಿಂತ ಹೆಚ್ಚು ಎಣ್ಣೆಯುಕ್ತವಾಗುತ್ತದೆ. ಈ ಎಣ್ಣೆಯುಕ್ತ ಚರ್ಮದ (oily skin) ಬಗ್ಗೆ ಸರಿಯಾಗಿ ಕಾಳಜಿ ವಹಿಸದಿದ್ದರೆ ಇದು ಮೊಡವೆ, ದದ್ದುಗಳು ಮೂಡಲು ಕಾರಣವಾಗಬಹುದು. ಹಾಗಿದ್ದರೆ ಮಳೆಗಾಲದಲ್ಲಿ ತ್ವಚೆ ಎಣ್ಣೆಯುಕ್ತವಾಗುವುದೇಕೆ, ಈ ಸಮಸ್ಯೆಯಿಂದ ಮುಕ್ತಿ ಪಡೆಯೋದೇಗೆ ಎಂಬುದರ ಸಂಕ್ಷಿಪ್ತ ಮಾಹಿತಿಯನ್ನು ತಿಳಿದುಕೊಳ್ಳಿ.

ಮಳೆಗಾಲದಲ್ಲಿ ತ್ವಚೆ ಎಣ್ಣೆಯುಕ್ತವಾಗಲು ಕಾರಣವೇನು?

ಎಣ್ಣೆಯುಕ್ತ ಚರ್ಮವು ಸಾಮಾನ್ಯ ತ್ವಚೆಯ ಸಮಸ್ಯೆಯಾಗಿದ್ದು, ಈ ಸ್ಥಿತಿಯು ವಿಶೇಷವಾಗಿ ಮಳೆಗಾಲದಲ್ಲಿ ಉಲ್ಬಣಗೊಳ್ಳುತ್ತದೆ. ಮೇದೋಗ್ರಂಥಿಗಳ ಸ್ರಾವ ಉತ್ಪಾದನೆಯು ಸಾಕಷ್ಟು ಪ್ರಮಾಣದಲ್ಲಿರದಿದ್ದರೆ, ಹೆಚ್ಚುವರಿ ಎಣ್ಣೆ ಸಂಗ್ರಹವಾಗುತ್ತದೆ. ಮೇದೋಗ್ರಂಥಿಗಳ ಸ್ರಾವವು ನಿಮ್ಮ ಮುಖದ ಮೇಲಿನ ಸೆಬಾಸಿಯಸ್ ಗ್ರಂಥಿಗಳಿಂದ ಉತ್ಪತ್ತಿಯಾಗುತ್ತದೆ. ಇದರ ಸ್ರವಿಸುವಿಕೆಯು ಮುಖದ ಮೇಲೆ ರಕ್ಷಣಾತ್ಮಕ ಪದರವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ಚರ್ಮವನ್ನು ರಕ್ಷಿಸುವುದಲ್ಲದೆ, ಹೈಡ್ರೇಟ್ ಮಾಡಲು ಸಹಾಯ ಮಾಡುತ್ತದೆ. ಅವುಗಳ ಕಾರ್ಯವು ಸೂಕ್ತವಾಗಿಲ್ಲದಿದ್ದರೆ, ಅತಿಯಾದ ಮೇದೋಗ್ರಂಥಿಗಳ ಸ್ರಾವ ಉತ್ಪಾದನೆ ಸಂಭವಿಸುತ್ತದೆ. ಇದರಿಂದಾಗಿ ಚರ್ಮ ಸಾಕಷ್ಟು ಎಣ್ಣೆಯುಕ್ತವಾಗಿ ಕಾಣಿಸುತ್ತದೆ.

ಇದಲ್ಲದೆ ಆನುವಂಶಿಕ ಕಾರಣ, ಹಾರ್ಮೋನ್  ಅಸಮತೋಲನ ಮತ್ತು ಪರಿಸರ ಅಂಶಗಳು ಸೇರಿದಂತೆ ಹಲವು ಅಂಶಗಳು ಮೇದೋಗ್ರಂಥಿಗಳ ಸ್ರಾವದ ಮೇಲೆ ಪರಿಣಾಮ ಬೀರಬಹುದು. ಇನ್ನೊಂದು ಪ್ರಮುಖ ಅಂಶವೆಂದರೆ, ಬೇಸಿಗೆ ಮತ್ತು ಮಳೆಗಾಲದಲ್ಲಿ ಮೇದೋಗ್ರಂಥಿಗಳ ಸ್ರಾವ ಉತ್ಪಾದನೆ ಹೆಚ್ಚಾಗುತ್ತದೆ. ಮಳೆಗಾಲ ಅತ್ಯಂತ ಆರ್ದ್ರವಾಗಿರುತ್ತವೆ, ಇದರಿಂದಾಗಿ ಬೆವರು ಆವಿಯಾಗುವುದು ಕಡಿಮೆಯಾಗುತ್ತದೆ ಇದರಿಂದ ಚರ್ಮ ಎಣ್ಣೆಯುಕ್ತವಾಗಿರುತ್ತದೆ.

ಮಳೆಗಾಲದಲ್ಲಿ ದೇಹವು ಹೆಚ್ಚು ಬೆವರು ಉತ್ಪಾದಿಸುತ್ತದೆ. ಚರ್ಮದ ಮೇಲೆ ಹೆಚ್ಚುವರಿ ಎಣ್ಣೆ ಮತ್ತು ಬೆವರು ಸಂಗ್ರಹವಾದಾಗ, ತ್ವಚೆ ಎಣ್ಣೆಯುಕ್ತವಾಗಿ ಕಾಣಲು ಪ್ರಾರಂಭಿಸುತ್ತದೆ. ಧೂಳು, ಕೊಳಕು ಮತ್ತು ಬ್ಯಾಕ್ಟೀರಿಯಾಗಳು ಸಂಗ್ರಹವಾದರೆ, ಮೊಡವೆಗಳ ಅಪಾಯ ಹೆಚ್ಚಾಗುತ್ತದೆ. ಇದಲ್ಲದೆ ಚರ್ಮವು ಅನೇಕ ಪ್ರಯೋಜನಕಾರಿ ಮತ್ತು ಸಾಮಾನ್ಯ ಸೂಕ್ಷ್ಮಜೀವಿಗಳನ್ನು ಹೊಂದಿರುತ್ತದೆ. ಹೆಚ್ಚುವರಿ ಎಣ್ಣೆ ಮತ್ತು ತೇವಾಂಶವು ಈ ಸಮತೋಲನವನ್ನು ಅಡ್ಡಿಪಡಿಸಬಹುದು. ಇದರಿಂದ ಕೆಲವು ಬ್ಯಾಕ್ಟೀರಿಯಾ ಮತ್ತು ಯೀಸ್ಟ್‌ಗಳು ಹೆಚ್ಚಾಗುತ್ತವೆ, ಇದು ಶಿಲೀಂಧ್ರಗಳ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ. ಹೀಗೆ ಮಳೆಗಾಲದಲ್ಲಿ ಚರ್ಮವು ಅನೇಕ ಸವಾಲುಗಳನ್ನು ಎದುರಿಸುತ್ತದೆ. ಹಾಗಾಗಿ ಈ ಋತುವಿನಲ್ಲಿ ತ್ವಚೆಯ ಆರೈಕೆಯ ಬಗ್ಗೆ ತುಸು ಹೆಚ್ಚೇ ಕಾಳಜಿ ವಹಿಸಬೇಕು.

ಇದನ್ನೂ ಓದಿ: ಜಪಾನೀಯರ ಅಭ್ಯಾಸಗಳನ್ನು ಪಾಲಿಸುವ ಮೂಲಕ ಆರೋಗ್ಯವಂತರಾಗಿ ನೂರ್ಕಾಲ ಬಾಳಿ

ಮಳೆಗಾಲದಲ್ಲಿ ಎಣ್ಣೆಯುಕ್ತ ಚರ್ಮವನ್ನು ಹೇಗೆ ಆರೈಕೆ ಮಾಡಬೇಕು?

  • ದಿನಕ್ಕೆ ಎರಡು ಬಾರಿ ಸ್ಯಾಲಿಸಿಲಿಕ್ ಆಮ್ಲವನ್ನು ಹೊಂದಿರುವ ಫೇಸ್ ವಾಶ್ ನಿಂದ ನಿಮ್ಮ ಮುಖವನ್ನು ಸ್ವಚ್ಛಗೊಳಿಸಿ.
  • ಚರ್ಮವನ್ನು ಸಮತೋಲನದಲ್ಲಿಡಲು ಹಗುರವಾದ, ಎಣ್ಣೆ ರಹಿತ ಮತ್ತು ಜೆಲ್ ಆಧಾರಿತ ಮಾಯಿಶ್ಚರೈಸರ್ ಬಳಸಿ.
  • ಹೊರಗೆ ಹೋಗುವಾಗ, ಜೆಲ್ ಆಧಾರಿತ ಅಥವಾ ಮ್ಯಾಟ್-ಫಿನಿಶ್ ಹೊಂದಿರುವ ಸನ್‌ಸ್ಕ್ರೀನ್ ಅನ್ನು ಹಚ್ಚಿ, ಇದು ಜಿಗುಟುತನವನ್ನು ಕಡಿಮೆ ಮಾಡುತ್ತದೆ.
  • ವಾರಕ್ಕೆ 1-2 ಬಾರಿ ಮುಲ್ತಾನಿ ಮಿಟ್ಟಿ ಮತ್ತು ರೋಸ್ ವಾಟರ್ ನ ಫೇಸ್ ಪ್ಯಾಕ್ ಹಚ್ಚಿಕೊಳ್ಳಿ. ಕಡ್ಲೆಹಿಟ್ಟಿನ ಫೇಸ್‌ ಪ್ಯಾಕ್‌ ಕೂಡ ಹಚ್ಚಿಕೊಳ್ಳಬಹುದು.
  • ಸೌತೆಕಾಯಿ ರಸ ಮತ್ತು ಅಲೋವೆರಾ ಜೆಲ್ ನಂತಹ ಮನೆಮದ್ದುಗಳು ಚರ್ಮವನ್ನು ತಂಪಾಗಿಸುತ್ತವೆ, ತೇವಗೊಳಿಸುತ್ತವೆ ಮತ್ತು ರಿಫ್ರೆಶ್ ಮಾಡುತ್ತವೆ.
  • ಎಣ್ಣೆಯುಕ್ತ ಚರ್ಮವನ್ನು ತಪ್ಪಿಸಲು, ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಮುಖ್ಯ. ದಿನವಿಡೀ ಸಾಕಷ್ಟು ಪ್ರಮಾಣದ ನೀರು ಕುಡಿಯಿರಿ. ಕಲ್ಲಂಗಡಿ ಇತ್ಯಾದಿ ನೀರಿನಾಂಶವಿರುವ ಹಣ್ಣುಗಳನ್ನು ಸೇವಿಸಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿದ್ಯಾರ್ಥಿಗಳಿಗೆ ಗುಡ್​​ನ್ಯೂಸ್: ಆಂಗ್ಲ ಮಾಧ್ಯಮ ಶಾಲೆಗಳ ಮೇಲ್ದರ್ಜೆಗೆ ಮುಂದಾದ ಶಿಕ್ಷಣ ಇಲಾಖೆ – Kannada News | Karnataka Education Department decide Upgrade Governmnet English Medium School up to 10th

ಬೆಂಗಳೂರು, (ಜೂನ್ 16): 2018-19ರಲ್ಲಿ ಆರಂಭವಾದ 1001 ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ (Karnataka English medium Schools) 7ನೇ ತರಗತಿ ಪೂರೈಸಿದ ಸುಮಾರು 30 ಸಾವಿರ ವಿದ್ಯಾರ್ಥಿಗಳ ಭವಿಷ್ಯ ಅತಂತ್ರ. ಸರ್ಕಾರವು 8ನೇ ತರಗತಿಗೆ ಆಂಗ್ಲ ಮಾಧ್ಯಮ ಪ್ರೌಢಶಾಲೆ ಆರಂಭಿಸದ ಕಾರಣ, ಎಲ್ಲಿಗೆ ಪ್ರವೇಶ ಪಡೆಯಬೇಕೆಂಬ ಗೊಂದಲದಲ್ಲಿ ವಿದ್ಯಾರ್ಥಿಗಳು ಮತ್ತು ಪಾಲಕರಿದ್ದರು. ಹೀಗಾಗಿ ಈ ಬಗ್ಗೆ ಟವಿ9 ವರದಿ ಮಾಡಿತ್ತು. ಇದರ ಬೆನ್ನಲ್ಲೇ ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳಿಗೆ ಪರ್ಯಾಯ ಕ್ರಮಕ್ಕೆ ಶಾಲಾ ಶಿಕ್ಷಣ ಇಲಾಖೆ ಮುಂದಾಗಿದ್ದು,  ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ  ಹಾಲಿ ಶಾಲೆಗಳಲ್ಲಿಯೇ 8ನೇ ತರಗತಿಯಿಂದ 10ರವರೆಗೆ ಆಂಗ್ಲ ಮಾಧ್ಯಮ ಶಾಲೆಗಳನ್ನ ಮೇಲ್ದರ್ಜೆಗೆ ಏರಿಸಲು ಮುಂದಾಗಿದೆ. ಈ ಬಗ್ಗೆ ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಕೆ ಮಾಡಿದೆ.

ಇಂಗ್ಲೀಷ್ ಮೀಡಿಯಂ ಶಾಲೆಗಳು ಮೇಲ್ದರ್ಜೆಗೆ

ಎಂಟನೇ ತರಗತಿಯಿಂದ 10ನೇ ತರಗತಿವರೆಗೆ ಆಂಗ್ಲ ಮಾಧ್ಯಮ ಆರಂಭಕ್ಕೆ ಶಿಕ್ಷಣ ಇಲಾಖೆ, ಸರ್ಕಾರಕ್ಕೆ ಪ್ರಸ್ತಾವನೆ ನೀಡಿದೆ. ಎರಡು ಕಿಲೋಮೀಟರ್ ವ್ಯಾಪ್ತಿಯಲ್ಲಿ ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳು ಇದ್ರೆ ಅಲ್ಲಿ ದಾಖಲಾತಿ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. ಯಾವ ಭಾಗದಲ್ಲಿ ಎರಡು ಕಿಲೋ ಮೀಟರ್ ವ್ಯಾಪ್ತಿಗಿಂತ ಒಳಗಡೆ ಆಂಗ್ಲ ಮಾಧ್ಯದ ಶಾಲೆಗಳು ಇಲ್ಲವಾದ್ರೆ ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳಲ್ಲಿಯೇ 8ನೇ ತರಗತಿಗೆ ಆಂಗ್ಲ ಮಾಧ್ಯಮ ಮೇಲ್ದರ್ಜೆಗೆ ಮಾಡೋದಕ್ಕೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ಸರ್ಕಾರಿ ಶಾಲೆಯಲ್ಲಿ ಓದಿದ 30 ಸಾವಿರ ಮಕ್ಕಳು ಅತಂತ್ರ! ಸರ್ಕಾರದ ಎಡವಟ್ಟಿಗೆ ವಿದ್ಯಾರ್ಥಿಗಳ ಭವಿಷ್ಯದ ಕಥೆ ಏನು?

ಅತಂತ್ರದಲ್ಲಿದ್ದ 30 ಸಾವಿರಕ್ಕೂ ಹೆಚ್ಚು ಮಕ್ಕಳು

2018-19ನೇ ಸಾಲಿನಲ್ಲಿ 1 ರಿಂದ 7 ನೇ ತರಗತಿಯವರೆಗೆ ರಾಜ್ಯಾದ್ಯಂತ 1001 ಕನ್ನಡ ಶಾಲೆಗಳಲ್ಲಿ ಆಂಗ್ಲ ಮಾಧ್ಯಮವನ್ನ ಪ್ರಾಥಮಿಕ ಶಾಲೆಗಳಲ್ಲಿ ಆರಂಭ ಮಾಡಲಾಗಿತ್ತು. ಈಗ 2018-19ನೇ ಸಾಲಿನಲ್ಲಿ ಒಂದನೇ ತರಗತಿ ಪಾಸ್ ಆದ 30 ಸಾವಿರ ವಿದ್ಯಾರ್ಥಿಗಳು 7 ನೇ ತರಗತಿಯವರೆಗೂ ಆಂಗ್ಲ ಮಾಧ್ಯಮದಲ್ಲಿ ಓದಿ ಪಾಸ್ ಆಗಿದ್ದಾರೆ ಮುಂದೆ ಪ್ರೌಢ ಶಿಕ್ಷಣ 8,9 ಹಾಗೂ 10ನೇ ತರಗತಿಯನ್ನ ಆಂಗ್ಲ ಮಾಧ್ಯಮದಲ್ಲಿ ಓದಬೇಕು ಅಂದ್ರೆ ಸರ್ಕಾರದಲ್ಲಿ ಆಂಗ್ಲ ಮಾಧ್ಯಮದ ಶಾಲೆಗಳಿಗೆ ದಾಖಲಾತಿ ಇಲ್ಲದಾಗಿ ಪರದಾಟವಾಗಿತ್ತು. ಖಾಸಗಿಯಲ್ಲಿ ದಾಖಲಾತಿಗೆ ಆರ್ಥಿಕ ಸಮಸ್ಯೆಯಿಂದ ಪೋಷಕರು ಪರದಾಟವಾಗಿತ್ತು. ಈ ಬಗ್ಗೆ ಟಿವಿ9 ಸುದ್ದಿ ಪ್ರಸಾರ ಬಳಿಕ ಶಿಕ್ಷಣ ಇಲಾಖೆ ಅಲರ್ಟ್ ಆಗಿದೆ.

1ರಿಂದ 7 ನೇ ತರಗತಿಯವರೆಗೆ ಮಾತ್ರ ಆಂಗ್ಲ ಮಾಧ್ಯಮ

ಸರ್ಕಾರದಲ್ಲಿ ಕೇವಲ ಒಂದನೇ ತರಗತಿಯಿಂದ 7 ನೇ ತರಗತಿಯವರೆಗೆ ಮಾತ್ರ ಆಂಗ್ಲ ಮಾಧ್ಯಮದ ಶಾಲೆಗಳಿದ್ದು, ಪ್ರೌಢ ಶಾಲೆಗಳಾ 8 ರಿಂದ 10 ನೇ ತರಗತಿಗೆ ಪ್ರೌಢ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಾಲೆಗಳು ಇಲ್ಲ. ಹೀಗಾಗಿ ಖಾಸಗಿ ಶಾಲೆಗಳಿಗೆ ದಾಖಲಾತಿ ಮಾಡಿಕೊಳ್ಳಲು ಅರ್ಥಿಕ ಶಕ್ತಿ ಪೋಷಕರ ಬಳಿ ಇಲ್ಲ. ಹೀಗಾಗಿ ಸರ್ಕಾರಿ ಶಾಲೆಯ ಸುಮಾರು 30 ಸಾವಿರ ವಿದ್ಯಾರ್ಥಿಗಳು ಮುಂದಿನ ದಾರಿ ಗೊತ್ತಾಗದೇ ಅತಂತ್ರರಾಗಿದ್ದರು. 8ನೇ ತರಗತಿಗೆ ಯಾವ ಶಾಲೆ ಮತ್ತು ಯಾವ ಮಾಧ್ಯಮದಲ್ಲಿ ಓದಬೇಕು ಎನ್ನುವ ಗೊಂದಲ ಎದುರಾಗಿತ್ತು. ಈಗ ಶಾಲಾ ಶಿಕ್ಷಣ ಇಲಾಖೆ ಎಂಟನೇ ತರಗತಿ ಆಂಗ್ಲ ಮಾಧ್ಯಮ ಆರಂಭಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

ಒಟ್ಟಿನಲ್ಲಿ 30 ಸಾವಿರ ವಿದ್ಯಾರ್ಥಿಗಳ ಭವಿಷ್ಯದ ದೃಷ್ಠಿಯಿಂದ ಶಾಲಾ ಶಿಕ್ಷಣ ಹಾಲಿ ಶಾಲೆಗಳಲ್ಲಿಯೇ ಎಂಟನೇ ತರಗತಿಯಿಂದ 10ರವರೆಗೆ ಆಂಗ್ಲ ಮಾಧ್ಯಮ ಶಾಲೆಗಳನ್ನ ಮೇಲ್ದರ್ಜೆಗೆ ಏರಿಸಲು ಮುಂದಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮೈದಾನದಲ್ಲಿ ಜಗಳ ಮಾಡಿಕೊಂಡಿದ್ದ ವೈಭವ್ ಬೆನ್ನಿಗೆ ನಿಂತ ಶ್ರೀಲಂಕಾದ ಮಾಜಿ ಕ್ರಿಕೆಟಿಗರು – Kannada News | Vaibhav Sooryavanshi Cleared: India A Star Avoids Ban After Sri Lanka A Cricket Controversy

ಶ್ರೀಲಂಕಾದಲ್ಲಿ ನಡೆಯುತ್ತಿರುವ ತ್ರಿಕೋನ ಸರಣಿಯ ನಾಲ್ಕನೇ ಪಂದ್ಯದಲ್ಲಿ ಭಾರತ ಎ ಹಾಗೂ ಶ್ರೀಲಂಕಾ ಎ (India A vs Sri Lanka A) ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಭಾರತದ ವೈಭವ್ ಸೂರ್ಯವಂಶಿ (Vaibhav Sooryavanshi), ಶ್ರೀಲಂಕಾ ಎ ತಂಡದ ಆಟಗಾರರೊಂದಿಗೆ ಜಗಳ ಮಾಡಿಕೊಂಡಿದ್ದು, ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಈ ಜಗಳ ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದ ಕಾರಣ, ನಿಯಮ ಉಲ್ಲಂಘಿಸಿದ ವೈಭವ್ ಸೂರ್ಯವಂಶಿ ವಿರುದ್ಧ ಶಿಸ್ತುಕ್ರಮ ಜರುಗಿಸುವ ಸಾಧ್ಯತೆಗಳಿವೆ ಎಂದು ವರದಿಯಾಗಿತ್ತು. ಅಂದರೆ ವೈಭವ್​ಗೆ ಡಿಮೆರಿಟ್ ಅಂಕಗಳೊಂದಿಗೆ ಪಂದ್ಯದಿಂದ ನಿಷೇಧಿಸುವ ಶಿಕ್ಷೆ ಸಿಗಬಹುದೆಂದು ಹೇಳಲಾಗುತಿತ್ತು. ಆದರೀಗ ಸಿಕ್ಕಿರುವ ಮಾಹಿತಿ ಪ್ರಕಾರ, ವೈಭವ್​ಗೆ ಆ ರೀತಿಯ ಯಾವುದೇ ಶಿಕ್ಷೆಯನ್ನು ವಿಧಿಸಲಾಗುತ್ತಿಲ್ಲ ಎಂದು ವರದಿಯಾಗಿದೆ.

ಇಡೀ ಘಟನೆಯ ಹಿಂದಿರುವ ಕಾರಣವೇನು?

ದಂಬುಲ್ಲಾದ ರೆವ್ ಸ್ಪೋರ್ಟ್ಸ್‌ನ ಕ್ರೀಡಾ ಪತ್ರಕರ್ತ ರೋಹಿತ್ ಜುಗ್ಲಾನ್ ಇಡೀ ಘಟನೆಯ ಬಗ್ಗೆ ಮಾತನಾಡಿದ್ದು, ಅದರಲ್ಲಿ ಅವರು, ವೈಭವ್ ಸೂರ್ಯವಂಶಿ ಅವರನ್ನು ಪಂದ್ಯದಿಂದ ನಿಷೇಧಿಸಲಾಗಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ ಪಂದ್ಯದ ರೆಫರಿ, ಭಾರತ ಎ ತಂಡದ ನಾಯಕ ತಿಲಕ್ ವರ್ಮಾ ಮತ್ತು ತಂಡದ ವ್ಯವಸ್ಥಾಪಕರೊಂದಿಗೆ ದೀರ್ಘ ಸಂಭಾಷಣೆ ನಡೆಸಿದ್ದಾರೆ. ಈ ಸಂಭಾಷಣೆಯ ಸಮಯದಲ್ಲಿ ಇಡೀ ಘಟನೆಗೆ ಕಾರಣ ಏನು ಎಂಬುದನ್ನು ತಿಲಕ್ ವರ್ಮಾ ರೆಫರಿಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಅಸಲಿಗೆ ಈ ಜಗಳಕ್ಕೆ ಪ್ರಮುಖ ಕಾರಣ, ಲಂಕಾ ಆಟಗಾರರ ಅತಿರೇಕತನ. ಪಂದ್ಯ ಪ್ರಾರಂಭವಾದಾಗಿನಿಂದಲೂ ಶ್ರೀಲಂಕಾ ಎ ಆಟಗಾರರು ವೈಭವ್ ಸೂರ್ಯವಂಶಿ ಬಗ್ಗೆ ನಿರಂತರವಾಗಿ ಕಾಮೆಂಟ್ ಮಾಡುತ್ತಿದ್ದರು ಮತ್ತು ಅವರ ಬಗ್ಗೆ ವೈಯಕ್ತಿಕ ಟೀಕೆಗಳನ್ನು ಮಾಡುತ್ತಿದ್ದರು.

ಇದರ ಜೊತೆಗೆ ಪಂದ್ಯ ಮುಗಿದ ಬಳಿಕ ನಡೆದ ಘಟನೆಯ ಸಮಯದಲ್ಲಿ ವೈಭವ್​ಗೆ ಆಟಗಾರನನ್ನು ತಳ್ಳುವ ಉದ್ದೇಶವಿರಲಿಲ್ಲ. ಆದರೆ ಶ್ರೀಲಂಕಾ ತಂಡದ ಆಟಗಾರ, ತನ್ನ ಬಳಿ ಬರುತ್ತಿರುವುದನ್ನು ನೋಡಿದ ವೈಭವ್, ಅವನನ್ನು ದೂರದಲ್ಲೇ ನಿಂತು ಮಾತನಾಡುವಂತೆ ಹೇಳುತ್ತ ಹಿಂದಕ್ಕೆ ತಳ್ಳಿದನು ಎಂಬುದನ್ನು ತಿಲಕ್, ರೆಫರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ವರದಿಯಾಗಿದೆ. ಘಟನೆಯ ಬಳಿಕ ಶ್ರೀಲಂಕಾದ ಕೆಲವು ಹಿರಿಯ ಆಟಗಾರರು ವೈಭವ್ ಸೂರ್ಯವಂಶಿ ಅವರೊಂದಿಗೆ ಮಾತನಾಡಿದ್ದಾರೆಂದು ವರದಿಯಾಗಿದೆ. ಐಪಿಎಲ್‌ನಲ್ಲಿ ಸೂರ್ಯವಂಶಿ ಅವರೊಂದಿಗೆ ಆಡಿದ ಆಟಗಾರರು ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಘಟನೆಗೆ ವಿಷಾದ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.

80ನೇ ವಯಸ್ಸಿನಲ್ಲಿ 161 ಕಿ.ಮೀ ಪ್ರಯಾಣ ಮಾಡಿ ವೈಭವ್​ನನ್ನು ಭೇಟಿಯಾದ ದಿಗ್ಗಜ ಕ್ರಿಕೆಟಿಗ

ಟೀಕಾಕಾರರಿಗೆ ವೈಭವ್ ಉತ್ತರ ಏನಿರಲಿದೆ?

ಇದೀಗ ತನ್ನನ್ನು ಟೀಕಿಸಿದವರಿಗೆ ಸರಿಯಾಗಿ ಉತ್ತರ ನೀಡುವ ಅವಕಾಶ ವೈಭವ್​ಗಿದೆ. ವಾಸ್ತವವಾಗಿ ಈ ಸರಣಿಯಲ್ಲಿ ವೈಭವ್ ಒಂದೇ ಒಂದು ಅರ್ಧಶತಕ ಗಳಿಸಿಲ್ಲ. ಇದು ಟೀಕಾಕಾರರ ಬಾಯಿಗೆ ಆಹಾರವಾಗುವಂತೆ ಮಾಡಿದೆ. ಇದೀಗ ವೈಭವ್ ಬುಧವಾರ ನಡೆಯಲಿರುವ ಅಫ್ಘಾನಿಸ್ತಾನ ಎ ವಿರುದ್ಧದ ಪಂದ್ಯದಲ್ಲಿ ಅವರು ದೊಡ್ಡ ಇನ್ನಿಂಗ್ಸ್ ಆಡಿ ಭಾರತ ಎ ತಂಡವನ್ನು ಗೆಲುವಿನತ್ತ ಕೊಂಡೊಯ್ದರೆ, ಅದು ಅವರಿಗೆ ಮತ್ತು ತಂಡಕ್ಕೆ ಪ್ರಯೋಜನವನ್ನು ನೀಡುತ್ತದೆ. ಅಫ್ಘಾನಿಸ್ತಾನ ಎ ವಿರುದ್ಧ ಭಾರತ ಎ ತಂಡ ಗೆಲ್ಲುವುದು ನಿರ್ಣಾಯಕ, ಏಕೆಂದರೆ ಈ ಪಂದ್ಯದಲ್ಲಿ ಸೋತರೆ ತ್ರಿಕೋನ ಸರಣಿಯಿಂದ ಹೊರಗುಳಿಯುತ್ತದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:26 pm, Tue, 16 June 26

Source link

ಭವಾನಿಪುರದ ಸೋಲು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಮಾಜಿ ಸಿಎಂ ಮಮತಾ ಬ್ಯಾನರ್ಜಿ – Kannada News | Mamata Banerjee files plea in Calcutta High Court challenging Assembly Election result in Bhabanipur

ಕೊಲ್ಕತ್ತಾ, ಜೂನ್ 16: ಇತ್ತೀಚೆಗೆ ಮುಕ್ತಾಯಗೊಂಡ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಸುವೇಂದು ಅಧಿಕಾರಿ ವಿರುದ್ಧ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ (Mamata Banerjee) ಭವಾನಿಪುರ ಕ್ಷೇತ್ರದಲ್ಲಿ 15,105 ಮತಗಳ ಅಂತರದಿಂದ ಹೀನಾಯ ಸೋಲು ಅನುಭವಿಸಿದ್ದರು. ಮೇ 4ರಂದು ಪ್ರಕಟವಾದ ಫಲಿತಾಂಶದಲ್ಲಿ ಬಿಜೆಪಿ ಅಭೂತಪೂರ್ವ ಬಹುಮತ ಗಳಿಸಿ, ಸುವೇಂದು ಅಧಿಕಾರಿ ರಾಜ್ಯದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಭವಾನಿಪುರ ಕ್ಷೇತ್ರದ ಸೋಲನ್ನು ಪ್ರಶ್ನಿಸಿ ಮಮತಾ ಬ್ಯಾನರ್ಜಿ ಹೈಕೋರ್ಟ್ ಮೊರೆ ಹೋಗಿದ್ದಾರೆ.

ತಮ್ಮದೇ ಭದ್ರಕೋಟೆಯಾಗಿದ್ದ ಸೀಟಿನಲ್ಲಿ ಎದುರಾದ ಈ ಸೋಲನ್ನು ಒಪ್ಪದ ಮಮತಾ ಬ್ಯಾನರ್ಜಿ, ಇಂದು ಖುದ್ದಾಗಿ ಕೊಲ್ಕತ್ತಾ ಹೈಕೋರ್ಟ್‌ನ ರಿಜಿಸ್ಟ್ರಿಗೆ ಭೇಟಿ ನೀಡಿ ಫಲಿತಾಂಶವನ್ನು ಪ್ರಶ್ನಿಸುವ ಅರ್ಜಿಯನ್ನು ದೃಢೀಕರಿಸಿದ್ದಾರೆ.

ಇದರ ನಡುವೆ, ಲೋಕಸಭೆಯ 20 ಸಂಸದರು ಬಂಡಾಯ ಎದ್ದಿರುವ ಬೆನ್ನಲ್ಲೇ, ಮಮತಾ ಬ್ಯಾನರ್ಜಿ ಅವರು ಪಕ್ಷದ ಯುವ ಘಟಕದ ಅಧ್ಯಕ್ಷೆ ಸಾಯೋನಿ ಘೋಷ್ ಸೇರಿದಂತೆ ಹಲವು ನಾಯಕರನ್ನು ಹುದ್ದೆಯಿಂದ ತೆಗೆದುಹಾಕುವ ಮೂಲಕ ಪಕ್ಷದ ಮೇಲಿನ ಹಿಡಿತ ಬಿಗಿಗೊಳಿಸಲು ಭಾರಿ ಸರ್ಜರಿ ನಡೆಸಿದ್ದಾರೆ.

ಇದನ್ನೂ ಓದಿ: ‘ಎನ್‌ಸಿಪಿಐ’ ಜೊತೆ 20 ಟಿಎಂಸಿ ಬಂಡಾಯ ಸಂಸದರ ವಿಲೀನ, ಸಂಸತ್ತಿನಲ್ಲಿ ಹೊಸ ಬಣದ ಉದಯ

ಲೋಕಸಭೆಯಲ್ಲಿ ಟಿಎಂಸಿಯ ಒಟ್ಟು 28 ಸಂಸದರ ಪೈಕಿ 20 ಸಂಸದರು ಮಮತಾ ಬ್ಯಾನರ್ಜಿ ನಾಯಕತ್ವದ ವಿರುದ್ಧ ದಂಗೆ ಎದ್ದಿದ್ದಾರೆ. ಈ ಬಂಡಾಯಗಾರರು ಸೋಮವಾರ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿ ಮಾಡಿ, ತಮಗೇ “ನೈಜ ಟಿಎಂಸಿ” ಎಂದು ಮಾನ್ಯತೆ ನೀಡಬೇಕು ಹಾಗೂ ತಾವು ಸಂಸತ್ತಿನಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ (NDA) ಒಕ್ಕೂಟವನ್ನು ಬೆಂಬಲಿಸುವುದಾಗಿ ಪತ್ರ ನೀಡಲು ಸಿದ್ಧತೆ ನಡೆಸಿದ್ದಾರೆ. ಈ ಬಂಡಾಯದ ಬಣದಲ್ಲಿ ಗುರುತಿಸಿಕೊಂಡಿದ್ದ ನಾಯಕರ ವಿರುದ್ಧ ಮಮತಾ ಬ್ಯಾನರ್ಜಿ ತಕ್ಷಣದ ಕ್ರಮ ಕೈಗೊಂಡಿದ್ದಾರೆ.

ಟಿಎಂಸಿ ಯುವ ಘಟಕದ ಅಧ್ಯಕ್ಷೆಯಾಗಿದ್ದ ಸಂಸದೆ ಸಾಯೋನಿ ಘೋಷ್ ಅವರನ್ನು ಹುದ್ದೆಯಿಂದ ಕಿತ್ತೊಗೆಯಲಾಗಿದ್ದು, ಅವರ ಜಾಗಕ್ಕೆ ಯುವ ನಾಯಕ ಅರ್ನಾಬ್ ಬ್ಯಾನರ್ಜಿ ಅವರನ್ನು ನೇಮಿಸಲಾಗಿದೆ. ಕೊಲ್ಕತ್ತಾ ದಕ್ಷಿಣ ಕ್ಷೇತ್ರದ ಸಂಸದೆ ಮಾಲಾ ರಾಯ್ ಅವರನ್ನು ಮಹಿಳಾ ಮೋರ್ಚಾ ಅಧ್ಯಕ್ಷೆ ಸ್ಥಾನದಿಂದ ತೆಗೆದುಹಾಕಿ, ನಾಡಿಯಾ ಜಿಲ್ಲೆಯ ಕಾಲಿಗಂಜ್ ಶಾಸಕಿ ಅಲಿಫಾ ಅಹ್ಮದ್ ಅವರಿಗೆ ಜವಾಬ್ದಾರಿ ನೀಡಲಾಗಿದೆ.

ಇದನ್ನೂ ಓದಿ: ಕೊಲ್ಕತ್ತಾದಲ್ಲಿ ಮಮತಾ ಬ್ಯಾನರ್ಜಿ ಮನೆ ಹೊರಗೆ ಟಿಎಂಸಿ ಶಾಸಕ ಕುನಾಲ್ ಘೋಷ್ ಮೇಲೆ ಮೊಟ್ಟೆ ದಾಳಿ

ಟಿಎಂಸಿ ಹಿರಿಯ ಸಂಸದ ಸುದೀಪ್ ಬಂಡೋಪಾಧ್ಯಾಯ ಕೂಡ ಬಂಡಾಯ ಕ್ಯಾಂಪ್ ಸೇರಿರುವುದರಿಂದ, ಅವರಿಂದ ತೆರವಾದ ಉತ್ತರ ಕೋಲ್ಕತ್ತಾ ಸಾಂಸ್ಥಿಕ ಜಿಲ್ಲೆಯ ಅಧ್ಯಕ್ಷ ಸ್ಥಾನಕ್ಕೆ ಇತ್ತೀಚೆಗೆ ಮೊಟ್ಟೆ ದಾಳಿ ಎದುರಿಸಿದ್ದ ಬೆಲೆಘಾಟಾ ಶಾಸಕ ಕುನಾಲ್ ಘೋಷ್ ಅವರನ್ನು ನಿಯೋಜಿಸಲಾಗಿದೆ.

ಜೂನ್ 5 ರಂದು ಮಮತಾ ಬ್ಯಾನರ್ಜಿ ಅವರು ಬಂಗಾಳದ ಎಲ್ಲಾ ಹಳೆಯ ಸಮಿತಿಗಳನ್ನು ರದ್ದುಗೊಳಿಸಿ, ತಮ್ಮ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯನ್ನಾಗಿ ಮರುನೇಮಕ ಮಾಡುವ ಮೂಲಕ ಪಕ್ಷವನ್ನು ಪುನರ್ ರಚಿಸಿದ್ದರು. ಆದರೆ, ಇಷ್ಟೆಲ್ಲಾ ಮಾಡಿದರೂ ಸಂಸದರು ದ್ರೋಹ ಬಗೆದಿರುವುದಕ್ಕೆ ಟಿಎಂಸಿ ನಿಷ್ಠಾವಂತರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

E20 ಪೆಟ್ರೋಲ್ ಹಾಕಿಸುವ ವಾಹನಗಳ ಇನ್ಷೂರೆನ್ಸ್ ಕ್ಲೇಮ್ ತಿರಸ್ಕೃತವಾಗುತ್ತದಾ? ಸರ್ಕಾರದ ಸ್ಪಷ್ಟನೆ ಇದು – Kannada News | E20 Fuel & Car Insurance: Government Clarifies No Claim Rejection for E20 Use

ನವದೆಹಲಿ, ಜೂನ್ 16: ಇ20 ಇಂಧನ ಬಳಸುವ ಕಾರಿಗೆ ಇನ್ಷೂರೆನ್ಸ್ ಕ್ಲೇಮ್ ತಿರಸ್ಕೃತವಾಗಬಹುದು ಎನ್ನುವ ಸುದ್ದಿ ವೈರಲ್ ಆಗುತ್ತಿದೆ. ಈ ಬಗ್ಗೆ ಸರ್ಕಾರ ಸ್ಪಷ್ಟನೆ ಕೊಟ್ಟಿದ್ದು, ಆ ರೀತಿ ಆಗುವುದಿಲ್ಲ ಎಂದು ಹೇಳಿದೆ. ಶೇ. 20ರಷ್ಟು ಎಥೆನಾಲ್ ಮಿಶ್ರಣವಿರುವ ಇ20 ಪೆಟ್ರೋಲ್ (E20 fuel) ಅನ್ನು ಹಳೆಯ ವಾಹನಗಳು ಬಳಸಿದರೆ ಇನ್ಷೂರೆನ್ಸ್ ಕ್ಲೇಮ್ ಸಾಧ್ಯವಾಗದೇ ಹೋಗಬಹುದು ಎಂದು ಐಸಿಐಸಿಐ ಲೊಂಬಾರ್ಡ್ ಎನ್ನುವ ವಿಮಾ ಕಂಪನಿ ಕಳೆದ ವಾರ ತನ್ನ ಬ್ಲಾಗ್​ನಲ್ಲಿ ಮಾಹಿತಿ ಹಂಚಿಕೊಂಡಿತ್ತು. ಅದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಹಬ್ಬಿ ವಾಹನ ಸವಾರರು ಇ20 ಇಂಧನದ ಬಗ್ಗೆ ಆತಂಕ ಪಡುವಂತಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಹಾಗೂ ಸ್ವತಃ ಐಸಿಐಸಿಐ ಲೊಂಬಾರ್ಡ್ ಕಂಪನಿ ಸ್ಪಷ್ಟನೆ ನೀಡಿ ಗೊಂದಲಕ್ಕೆ ತೆರೆ ಎಳೆಯಲು ಯತ್ನಿಸಿವೆ.

ವಿಮೆ ಸಂಪೂರ್ಣ ಸಿಂಧು

“ವಾಹನಗಳಲ್ಲಿ E20 ಇಂಧನವನ್ನು ಬಳಸುವುದರಿಂದ ನಿಮ್ಮ ಮೋಟಾರ್ ಇನ್ಶೂರೆನ್ಸ್ ಪಾಲಿಸಿಗಳು ರದ್ದಾಗುವುದಿಲ್ಲ, ಅವು ಸಂಪೂರ್ಣವಾಗಿ ಚಾಲ್ತಿಯಲ್ಲಿರುತ್ತವೆ” ಎಂದು ಕೇಂದ್ರ ಸರ್ಕಾರ ಮತ್ತು ಐಸಿಐಸಿಐ ಲೊಂಬಾರ್ಡ್ ಸಂಸ್ಥೆ ಸ್ಪಷ್ಟಪಡಿಸಿವೆ.

ಪಿಐಬಿ ಫ್ಯಾಕ್ಟ್ ಚೆಕ್ ಟ್ವೀಟ್

ಇದನ್ನೂ ಓದಿ: ಹಳೆಯ ಕಾರಿಗೆ ಇ20 ಪೆಟ್ರೋಲ್ ಹಾಕಿಸಿದ್ರೆ ಇನ್ಷೂರೆನ್ಸ್ ಸಿಗಲ್ಲವಾ? ವಿಮಾ ಕಂಪನಿ ಹೇಳಿದ್ದಿದು

ಇಂಧನದ ಆಧಾರದ ಮೇಲೆ ಕ್ಲೈಮ್ ತಿರಸ್ಕರಿಸಲ್ಲ

ಬ್ಯಾಂಕುಗಳು ಮತ್ತು ವಿಮಾ ನಿಯಂತ್ರಕರು ತಿಳಿಸಿರುವಂತೆ, ಅಪಘಾತ ಅಥವಾ ಕಳ್ಳತನದಂತಹ ಸಂದರ್ಭಗಳಲ್ಲಿ ಕ್ಲೈಮ್ ನೀಡಲು ವಾಹನದಲ್ಲಿ ಯಾವ ಇಂಧನ (ಪೆಟ್ರೋಲ್, ಡೀಸೆಲ್, ಸಿಎನ್‌ಜಿ ಅಥವಾ E20) ಬಳಸಲಾಗಿದೆ ಎಂಬುದು ಮುಖ್ಯವಾಗುವುದಿಲ್ಲ. ಸಾಮಾನ್ಯ ಇಂಧನ ಬಳಸಿದಾಗ ಯಾವೆಲ್ಲಾ ಅಪಘಾತದ ಕ್ಲೈಮ್‌ಗಳು ಸಿಗುತ್ತವೆಯೋ, ಅವೆಲ್ಲವೂ E20 ಇಂಧನ ಬಳಸುವ ವಾಹನಗಳಿಗೂ ಸಿಗಲಿವೆ.

ಹಳೆಯ ವಾಹನಗಳ ಬಳಕೆ ‘ಬೇಜವಾಬ್ದಾರಿತನ’ ಅಲ್ಲ

“ಹಳೆಯ ವಾಹನಗಳಲ್ಲಿ E20 ಪೆಟ್ರೋಲ್ ಹಾಕಿಸುವುದನ್ನು ನಾವು ‘ಗ್ರಾಹಕರ ನಿರ್ಲಕ್ಷ್ಯ’ ಎಂದು ಪರಿಗಣಿಸುವುದಿಲ್ಲ. ಸರ್ಕಾರದ ಎಥೆನಾಲ್ ಮಿಶ್ರಣ ಯೋಜನೆಯು ಪರಿಸರಸ್ನೇಹಿಯಾಗಿದ್ದು, ಇದರ ಕಾರಣಕ್ಕಾಗಿ ಯಾವುದೇ ಕ್ಲೈಮ್ ಅನ್ನು ತಿರಸ್ಕರಿಸಲಾಗುವುದಿಲ್ಲ” ಎಂದು ಇನ್ಶೂರೆನ್ಸ್ ಕಂಪನಿ ತನ್ನ ಹಳೆಯ ಹೇಳಿಕೆಯನ್ನು ತಿದ್ದಿ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಎಂಬಿಎ ಕಾಲಘಟ್ಟ ಮುಗಿಯಿತು, ಈಗ ಬೇಕಿರೋದು ಟ್ರೇಡ್ ಸ್ಕಿಲ್ಸ್: ಮುಖ್ಯ ಆರ್ಥಿಕ ಸಲಹೆಗಾರ ಅನಂತ ನಾಗೇಶ್ವರನ್ ಸಲಹೆ

ಗ್ರಾಹಕರು ಗಮನಿಸಬೇಕಾದ ಸಂಗತಿ

ಅಪಘಾತದಿಂದ ವಾಹನ ಜಖಂಗೊಂಡರೆ ವಿಮೆ ಸಿಗುತ್ತದೆ. ಆದರೆ, E20 ಹೊಂದಾಣಿಕೆಯಾಗದ ಹಳೆಯ ವಾಹನಗಳಲ್ಲಿ (ಏಪ್ರಿಲ್ 2023 ಕ್ಕಿಂತ ಮುಂಚಿನ ಮಾಡೆಲ್‌ಗಳು) ಈ ಇಂಧನವನ್ನು ಸತತವಾಗಿ ಬಳಸುವುದರಿಂದ ಇಂಜಿನ್‌ನ ರಬ್ಬರ್ ಪಾರ್ಟ್ಸ್ ಅಥವಾ ಪೈಪ್‌ಗಳು ಕಾಲಕ್ರಮೇಣ ಕೆಟ್ಟುಹೋದರೆ (Chemical Corrosion/Wear and tear), ಅಂತಹ ‘ಪರಿಣಾಮಕಾರಿ ಹಾನಿಗಳಿಗೆ’ (Consequential Damages) ಸಾಮಾನ್ಯ ಇನ್ಶೂರೆನ್ಸ್ ಪಾಲಿಸಿಗಳಲ್ಲಿ ಪರಿಹಾರ ಸಿಗುವುದಿಲ್ಲ. ಏಕೆಂದರೆ ಇನ್ಶೂರೆನ್ಸ್ ಕೇವಲ ದಿಢೀರ್ ಆಗುವ ಅಪಘಾತಗಳನ್ನು ಮಾತ್ರ ಕವರ್ ಮಾಡುತ್ತದೆ, ಸಮಯ ಕಳೆದಂತೆ ಆಗುವ ಸವೆತಗಳನ್ನಲ್ಲ.

ಹೀಗಾಗಿ ಹಳೆಯ ವಾಹನ ಸವಾರರು ಇನ್ಶೂರೆನ್ಸ್ ರದ್ದಾಗುವ ಭಯಪಡುವ ಅಗತ್ಯವಿಲ್ಲದಿದ್ದರೂ, ಇಂಧನ ವ್ಯವಸ್ಥೆಯ ಬಿಡಿಭಾಗಗಳನ್ನು ನಿಯಮಿತವಾಗಿ ಸರ್ವಿಸಿಂಗ್ ಮಾಡಿಸಿಕೊಳ್ಳುವುದು ಉತ್ತಮ ಎಂದು ತಜ್ಞರು ಸಲಹೆ ನೀಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Exit mobile version