ಜೈಪುರ, ಏ.10: ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ಮಹಿಳೆಯರ ಸುರಕ್ಷತೆಯನ್ನು ಅಣಕಿಸುವಂತಹ ಘಟನೆಯೊಂದು ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಸಂಚಲನ ಮೂಡಿಸಿದೆ. ಚಲಿಸುವ ರಸ್ತೆಯಲ್ಲೇ ಯುವತಿಯೊಬ್ಬರ ಜೊತೆ ದುಷ್ಕರ್ಮಿಗಳು ಅಸಭ್ಯವಾಗಿ ವರ್ತಿಸಿರುವ ದೃಶ್ಯಗಳು ಹರಿದಾಡುತ್ತಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ, ಬ್ಯುಸಿ ರಸ್ತೆಯಲ್ಲೇ ಯುವತಿಗೆ ಕೆಲವರು ಕಿರುಕುಳ ನೀಡುತ್ತಿರುವುದು ಕಂಡುಬಂದಿದೆ. ಈ ಘಟನೆಯು ಕೇವಲ ಮಹಿಳೆಯರ ಸುರಕ್ಷತೆಯ ಪ್ರಶ್ನೆಯನ್ನಷ್ಟೇ ಅಲ್ಲದೆ, ಅಂತಹ ಸಮಯದಲ್ಲಿ ನೆರವಿಗೆ ಬಾರದ ಜನರ ಮನಸ್ಥಿತಿಯನ್ನೂ ಪ್ರಶ್ನಿಸುವಂತೆ ಮಾಡಿದೆ. ಸಾರ್ವಜನಿಕ ಸ್ಥಳದಲ್ಲಿ ಇಂತಹ ದುಸ್ಸಾಹಸ ನಡೆಯುತ್ತಿದ್ದರೂ ಕಾನೂನು ಸುವ್ಯವಸ್ಥೆ ಎಲ್ಲಿಗೆ ತಲುಪಿದೆ ಎಂಬುದು ಜನಸಾಮಾನ್ಯರ ಆತಂಕಕ್ಕೆ ಕಾರಣವಾಗಿದೆ. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ವರದಿಯಾಗಿದೆ. ಆದರೆ, ಜೈಪುರದಂತಹ ಪ್ರಮುಖ ನಗರದಲ್ಲಿ ಇಂತಹ ಘಟನೆಗಳು ಮಹಿಳೆಯರಲ್ಲಿ ಭಯದ ವಾತಾವರಣ ನಿರ್ಮಿಸಿವೆ. ಸಾಮಾಜಿಕ ಜಾಲತಾಣಗಳಲ್ಲಿ ಜನರು “ಪಿಂಕ್ ಸಿಟಿ ಈಗ ಮಹಿಳೆಯರಿಗೆ ಸುರಕ್ಷಿತವಲ್ಲವೇ?” ಎಂದು ಪ್ರಶ್ನಿಸುತ್ತಿದ್ದಾರೆ.
ಧಾರವಾಡ, ಏಪ್ರಿಲ್ 10: ರಾಜ್ಯದಲ್ಲಿ ಖಾಲಿ ಇರುವ ಸರ್ಕಾರಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಉದ್ಯೋಗಾಕಾಂಕ್ಷಿಗಳ ಹೋರಾಟಕ್ಕೆ ಹೈಕೋರ್ಟ್ನ ಧಾರವಾಡ ವಿಭಾಗೀಯ ಪೀಠ ಕೆಲ ಷರತ್ತುಗಳನ್ನು ವಿಧಿಸಿ ಗ್ರೀನ್ ಸಿಗ್ನಲ್ ನೀಡಿದೆ. ಏಪ್ರಿಲ್ 08ರಂದು ಡಿಸಿ ಕಚೇರಿ ಬಳಿ ಅನಿರ್ದಿಷ್ಟಾವಧಿ ಹೋರಾಟ ನಡೆಸಲು ಅಖಿಲ ಕರ್ನಾಟಕ ವಿದ್ಯಾರ್ಥಿಗಳ ಸಂಘ ಮುಂದಾಗಿತ್ತು. ಆದರೆ ವಿದ್ಯಾರ್ಥಿಗಳ ಸಂಘದಿಂದ ಕರೆ ನೀಡಲಾಗಿರುವ ಹೋರಾಟಕ್ಕೆ ಧಾರವಾಡ ಪೊಲೀಸರು ಅನುಮತಿ ನಿರಾಕರಿಸಿದ್ದರು. ಈ ಹಿನ್ನೆಲೆ ಕೋರ್ಟ್ ಮೊರೆ ಹೋಗಲಾಗಿತ್ತು. ಸಂಘಟನೆ ಸಲ್ಲಿಸಿದ್ದ ಅರ್ಜಿಯನ್ನು ಇಂದು ವಿಚಾರಣೆ ನಡೆಸಿರುವ ನ್ಯಾ.ಅಶೋಕ ಕಿನಗಿ ಅವರಿದ್ದ ಏಕ ಸದಸ್ಯ ಪೀಠ ಮಹತ್ವದ ಆದೇಶ ನೀಡಿದೆ.
ನ್ಯಾಯಾಲಯದ ಷರತ್ತುಗಳೇನು?
ನೆಹರು ಮೈದಾನದಲ್ಲಿ 100 ಜನರಿಗೆ ನಾತ್ರ ಪ್ರತಿಭಟನೆಗೆ ಅವಕಾಶ
ಪ್ರತಿಭಟನೆ ಮಾಡುವವರ ಕುರಿತ ಮಾಹಿತಿಯನ್ನು ಇಲಾಖೆಗೆ ನೀಡಬೇಕು
ಪ್ರತಿಭಟನೆಯಲ್ಲಿ ಕಾನೂನು ಸುವ್ಯವಸ್ಥೆ ಹಾಳು ಮಾಡುವಂತವರು ಇರಬಾರದು
ಯಾವುದೇ ಕಾರಣಕ್ಕೂ ಅಹಿತಕರ ಘಟನೆ ನಡೆಯದ ರೀತಿಯಲ್ಲಿ ಪ್ರತಿಭಟಿಸಬೇಕು
ಅರ್ಜಿಯೊಂದಿಗೆ ನೀಡಿದ ಪಟ್ಟಿಯಲ್ಲಿರುವವರು ಮಾತ್ರ ಭಾಗವಹಿಸಬೇಕು
ಇನ್ನು ಕೋರ್ಟ್ ಆದೇಶದ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಈ ಹಿಂದೆ ಕೆಲ ಅಹಿತಕರ ಘಟನೆಗಳು ನಡೆದಿರುವ ಕಾರಣ ಪ್ರತಿಭಟನೆಗೆ ನಾವು ಅನುಮತಿ ನೀಡಿರಲಿಲ್ಲ. ಆದರೆ ಸಂಘಟನೆಯವರು ಕೋರ್ಟ್ ಮೊರೆ ಹೋಗಿದ್ದು, ಈ ಸಂಬಂಧ ನಮಗೆ ಉತ್ತರಿಸಲು ಹೈಕೋರ್ಟ್ ಎರಡು ದಿನಗಳ ಕಾಲಾವಕಾಶ ನೀಡಿತ್ತು. ಅದರಂತೆ ನಾವು ವಿವರವಾದ ಮಾಹಿತಿಯನ್ನು ನೀಡಿದ್ದೆವು. ಅದರಂತೆ ಕೆಲ ಷರತ್ತುಗಳ ಜೊತೆ ಸಂಘಟನೆಗೆ ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಪ್ರತಿಭಟನೆಗೆ ಅವಕಾಶವನ್ನು ಕೋರ್ಟ್ ನೀಡಿದೆ ಹಿಂದಿನ 2 ಪ್ರತಿಭಟನೆಗಳಲ್ಲಿ ಅಹಿತಕರ ಘಟನೆಗಳು ನಡೆದಿದ್ದವು. ಕಳೆದ ಬಾರಿ ನಡೆದ ಪ್ರತಿಭಟನೆಯಲ್ಲಿ 17 ಸಿಬ್ಬಂದಿಗೆ ಪೆಟ್ಟುಗಳಾಗಿದ್ದು, ಆ ಕುರಿತು 6 ಪ್ರಕರಣಗಲು ದಾಖಲಾಗಿದ್ದವು ಎಂದು ತಿಳಿಸಿದ್ದಾರೆ.
ವಿಜಯಪುರ, ಏಪ್ರಿಲ್ 10: ಇತ್ತೀಚೆಗೆ ಮೊಬೈಲ್ ಕಳ್ಳತನ (Lost Mobiles) ಪ್ರಕರಣಗಳು ಹೆಚ್ಚುತ್ತಿವೆ. ಬೆಲೆ ಬಾಳುವ ಮೊಬೈಲ್ ಕಳ್ಳತನ ಪತ್ತೆಗೆ ಕೇಂದ್ರ ಸರ್ಕಾರ ನೂತನ ಸಾಫ್ಟ್ವೇರ್ಗಳನ್ನು ಬಿಡುಗಡೆ ಮಾಡಿದೆ. ಸಿಇಐಆರ್ ಸಾಫ್ಟ್ವೇರ್ ಮೂಲಕ ಜಿಲ್ಲಾ ಪೊಲೀಸರು ಕಳೆದ ಆರು ತಿಂಗಳಲ್ಲಿ ಕಳ್ಳತನವಾಗಿದ್ದ 3 ಕೋಟಿ ರೂ ಬೆಲೆ ಬಾಳುವ ಮೊಬೈಲ್ಗಳನ್ನು ಪತ್ತೆ ಮಾಡಿ ಮಾಲೀಕರಿಗೆ ನೀಡಿದ್ದಾರೆ. ಪೊಲೀಸರ ಕಾರ್ಯಕ್ಕೆ ಜನರು ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ.
ಕಳ್ಳತನವಾಗಿದ್ದ ಮೊಬೈಲ್ಗಳನ್ನು ಪತ್ತೆ ಮಾಡಿ, ಮಾಲೀಕರಿಗೆ ಹಸ್ತಾಂತರ ಮಾಡುವ ಮೂಲಕ ವಿಜಯಪುರ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ. ವಿಜಯಪುರ ಜಿಲ್ಲಾ ಪೊಲೀಸ್ ಇಲಾಖೆ ವ್ಯಾಪ್ತಿಯಲ್ಲಿ ಕಳೆದ ಆರು ತಿಂಗಳಲ್ಲಿ ಕಳೆದುಹೋಗಿದ್ದ 340 ಮೊಬೈಲ್ಗಳನ್ನು ಪತ್ತೆ ಹಚ್ಚಿ ಮಾಲೀಕರಿಗೆ ಹಸ್ತಾಂತರಿಸಲಾಗಿದೆ.
ಪತ್ತೆಯಾದ ಮೊಬೈಲ್ಗಳ ಮೌಲ್ಯ 3 ಕೋಟಿ ರೂ ಅಧಿಕ
ಜಿಲ್ಲೆಯ ಬಸವನಬಾಗೇವಾಡಿ, ಇಂಡಿ, ವಿಜಯಪುರ ಹಾಗೂ ಗ್ರಾಮೀಣ ಉಪ ವಿಭಾಗಗಳ ವ್ಯಾಪ್ತಿಯ 26 ಪೊಲೀಸ್ ಠಾಣೆಗಳ ಪೊಲೀಸರು ಕಾರ್ಯಾಚರಣೆ ನಡೆಸಿ 340 ಮೊಬೈಲ್ಗಳನ್ನು ಪತ್ತೆ ಮಾಡಿದ್ದಾರೆ. ಪತ್ತೆಯಾದ ಮೊಬೈಲ್ಗಳ ಒಟ್ಟು ಮೌಲ್ಯ ಅಂದಾಜು ಸುಮಾರು 3 ಕೋಟಿ ರೂಪಾಯಿಗೂ ಅಧಿಕ ತಿಳಿದುಬಂದಿದೆ.
ಮೊಬೈಲ್ ಪತ್ತೆ ಮಾಡಿದ್ದು ಹೇಗೆ?
ಸೆಂಟ್ರಲ್ ಎಕ್ವಿಪ್ಮೆಂಟ್ ಐಡೆಂಟಿಟಿ ರಿಜಿಸ್ಟರ್ (CEIR) ತಂತ್ರಜ್ಞಾನದ ಮೂಲಕ ಮೊಬೈಲ್ಗಳನ್ನು ಪತ್ತೆ ಮಾಡಿ ವಶಕ್ಕೆ ಪಡೆಯಲಾಗಿದೆ. ಬಳಿಕ ಕಾನೂನು ಪ್ರಕಾರ ಮೊಬೈಲ್ಗಳನ್ನು ಮಾಲೀಕರಿಗೆ ಹಿಂತಿರುಗಿಸಲಾಗಿದೆ. ಈ ಕುರಿತು ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಸಾರ್ವಜನಿಕರು ಮೊಬೈಲ್ ಕಳೆದುಕೊಂಡ ತಕ್ಷಣ ದೂರು ದಾಖಲಿಸಿದರೆ, ಶೀಘ್ರ ಪತ್ತೆಗೆ ಸಹಕಾರಿಯಾಗುತ್ತದೆ ಎಂದು ಹೇಳಿದ್ದಾರೆ. CEIR ಹಾಗೂ ಇತರೆ ತಂತ್ರಜ್ಞಾನಗಳ ಮೂಲಕ ಸೂಕ್ತ ಭದ್ರತೆಗಳನ್ನು ಕೈಗೊಳ್ಳಬೇಕೆಂದು ಎಸ್ಪಿ ಮಾಹಿತಿ ನೀಡಿದ್ದಾರೆ.
ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ವಿಜಯಪುರ ಜಿಲ್ಲೆಯಾದ್ಯಂತ ಕಳೆದ ಎರಡು ವರ್ಷಗಳಿಂದ ಮೊಬೈಲ್ ಕಳ್ಳತನ ಪ್ರಕರಣಗಳು ಹೆಚ್ಚಿವೆ. ಬೆಲೆ ಬಾಳುವ ಮೊಬೈಲ್ ಕಳ್ಳತನ ಪ್ರಕರಣಗಳು ಪೊಲೀಸರಿಗೆ ತಲೆನೋವಾಗಿತ್ತು. ಇದೇ ವೇಳೆ ಕೇಂದ್ರ ಸರ್ಕಾರ ಸಿಇಐಆರ್ ಸಾಫ್ಟ್ವೇರ್ ಅನುಷ್ಠಾನ ಹಾಗೂ ಸಾಥಿ ಆ್ಯಪ್ ಬಿಡುಗಡೆ ಮಾಡಿದ್ದು, ತನಿಖೆಗೆ ಸಾಕಷ್ಟು ಅನುಕೂಲವಾಗಿದೆ. ಈ ನಿಟ್ಟಿನಲ್ಲಿ ತನಿಖೆ ನಡೆಸಿದ ಜಿಲ್ಲಾ ಪೊಲೀಸ್ ಅಧಿಕಾರಿಗಳಿಗೆ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿದೆ. ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸದ್ಯ 340 ಮೊಬೈಲ್ಗಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ದೂರು ದಾಖಲಾತಿಯ ಆಧಾರದ ಮೇಲೆ ಆಯಾ ಮೊಬೈಲ್ ಮಾಲೀಕರುಗಳಿಗೆ ಕಾನೂನು ಪ್ರಕಾರ ಮೊಬೈಲ್ಗಳನ್ನು ವಾಪಸ್ ನೀಡಲಾಗಿದೆ. ಸಾರ್ವಜನಿಕರು ಸಹ ಸೂಕ್ತ ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಂಡು ಕಳ್ಳತನ ತಡೆಯುವುದಕ್ಕೆ ಹಾಗೂ ಕಳೆದುಕೊಳ್ಳದಂತೆ ಜಾಗೃತ ವಹಿಸಬೇಕಿದೆ.
ಹುಬ್ಬಳ್ಳಿ, ಏಪ್ರಿಲ್ 10: ಇತ್ತೀಚೆಗೆ ಹುಬ್ಬಳ್ಳಿ-ಧಾರವಾಡದಲ್ಲಿ ಕೇಳಿಬರುತ್ತಿರುವ ಲವ್ ಜಿಹಾದ್ ಪ್ರಕರಣಗಳಿಗೂ ಜಿಮ್ಗೂ ನಂಟಿದೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಜಿಮ್ ಮಾಲೀಕರು ಮತ್ತು ಟ್ರೈನರ್ಗಳ ಜೊತೆ ಪೊಲೀಸ್ ಅಧಿಕಾರಿಗಳು ಸಭೆ ನಡೆಸಿದ್ದು, ಕೆಲ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂಬ ಸೂಚನೆ ನೀಡಿದ್ದಾರೆ. ಮತ್ತೊಂದಡೆ ಯಾರಾದರೂ ಜಿಮ್ಗಳಲ್ಲಿ ಬೇರೆ ಕೆಲಸ ಮಾಡಿದ್ರೆ ಅವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಿ ಎಂಬ ಆಗ್ರಹ ಮಾಲೀಕರಿಂದಲೂ ವ್ಯಕ್ತವಾಗಿದೆ.
ಲವ್ ಜಿಹಾದ್ ಆರೋಪ ಹೊಂದಿರೋ ಸಮೀರ್ ಮುಲ್ಲಾಜಿಮ್ ಟ್ರೈನರ್ ಆಗಿದ್ದ. ಮತ್ತೊಂದು ಪ್ರಕರಣದ ಆರೋಪಿ ಮುಪಿಜ್ ಕೂಡಾ ಸಮೀರ್ ಇದ್ದ ಜಿಮ್ಗೆ ಹೋಗ್ತಿದ್ದ ವ್ಯಕ್ತಿ. ಅಲ್ಲದೆ ಈ ಹಿಂದೆ ನಡೆದ ನೇಹಾ ಹಿರೇಮಠ ಹತ್ಯೆ ಪ್ರಕರಣ ಆರೋಪಿ ಫಯಾಜ್ ಕೂಡ ಇದೇ ಜಿಮ್ಗೆ ಹೋಗುತ್ತಿದ್ದವ. ಇವುಗಳ ಜೊತೆ ಜಿಮ್ ಗೆ ಹೋಗ್ತಿದ್ದ ಯುವತಿ ಜೊತೆ ಮುಸ್ಲಿಂ ಟ್ರೈನರ್ ಅಸಭ್ಯವಾಗಿ ವರ್ತಿಸಿದ್ದ ಪ್ರಕರಣ ಕೂಡ ಧಾರವಾಡಲ್ಲಿ ನಡೆದಿತ್ತು. ಇದೇ ಕಾರಣಕ್ಕೆ ಹುಬ್ಬಳ್ಳಿ-ಧಾರವಾಡದಲ್ಲಿನ ಕೆಲ ಜಿಮ್ಗಳು ಲವ್ ಜಿಹಾದ್ ಅಡ್ಡಗಳಾಗುತ್ತಿವೆ ಎಂದು ಹಿಂದೂಪರ ಸಂಘಟನೆಗಳು ದೂರಿದ್ದವು. ಈ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಅವಳಿ ನಗರದ ಎಲ್ಲಾ ಜಿಮ್ ಮಾಲೀಕರು ಮತ್ತು ಟ್ರೈನರ್ಗಳ ಜೊತೆ ಸಭೆ ನಡೆಸಿದ್ದಾರೆ. ನಗರದ ಬಿವಿಬಿ ಕಾಲೇಜು ಕ್ಯಾಂಪಸ್ನ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಇನ್ನೂರಕ್ಕೂ ಹೆಚ್ಚು ಜಿಮ್ ಟ್ರೈನರ್ಗಳು ಮತ್ತು ಜಿಮ್ ಮಾಲೀಕರು ಭಾಗಿಯಾಗಿದ್ದರು.
ಕಡ್ಡಾಯವಾಗಿ ಎಲ್ಲಾ ಜಿಮ್ಗಳಲ್ಲಿ ಸಿಸಿಟಿವಿ ಕ್ಯಾಮರಾ ಹಾಕಬೇಕು
ಟ್ರೈನರ್ಗಳ ಪೂರ್ವಾಪರಗಳನ್ನು ವಿಚಾರಿಸಬೇಕು
ಜಿಮ್ಗೆ ಬರುವವರಿಗೆ ಟ್ರೈನರ್ಗಳ ಹಿನ್ನೆಲೆ ತಿಳಿಸಬೇಕು
ಜಿಮ್ಗೆ ಬರುವವರ ಮೊಬೈಲ್ ಸಂಖ್ಯೆ ಪಡೆದು ಟ್ರೈನರ್ಗಳು ಸಂಪರ್ಕ ಹೊಂದೋದನ್ನು ತಪ್ಪಿಸಬೇಕು
ಇನ್ನು ಯಾರಾದರೂ ಈ ನಿಯಮಗಳನ್ನು ಮೀರಿದರೆ ಅವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಪೊಲೀಸರು ನೀಡಿದ್ದಾರೆ. ಕೆಲ ಜಿಮ್ಗಳಲ್ಲಿ ನಡೆದಿರೋ ಘಟನೆಗಳಿಂದ ಎಲ್ಲ ಜಿಮ್ಗಳಿಗೆ ಕೆಟ್ಟ ಹೆಸರು ಬರುತ್ತಿದೆ. ಇದರಿಂದ ಹೆಚ್ಚಿನ ಪಾಲಕರು ಜಿಮ್ಗಳಿಗೆ ಮಕ್ಕಳನ್ನು ಕಳುಹಿಸಲು ಭಯ ಪಡ್ತಿದ್ದಾರೆ. ಹೀಗಾಗಿ ಯಾರೇ ತಪ್ಪು ಮಾಡಿದರೂ ಅವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು. ಅದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಜಿಮ್ಗಳ ಮಾಲೀಕರೂ ಹೇಳಿದ್ದಾರೆ.
ನೇರ ಮಾತುಗಳಿಗೆ ಹೆಸರಾಗಿರುವ ನಿರ್ದೇಶಕ ಸಂದೀಪ್ ರೆಡ್ಡಿ ವಂಗ (Sandeep Reddy Vanga), ಈಗ ಆದಿತ್ಯ ಧರ್ ನಿರ್ದೇಶನದ ಮತ್ತು ರಣವೀರ್ ಸಿಂಗ್ ನಟನೆಯ ‘ಧುರಂಧರ್: ದಿ ರಿವೆಂಜ್’ (Dhurandhar: The Revenge) ಚಿತ್ರದ ಪರವಾಗಿ ಬ್ಯಾಟ್ ಬೀಸಿದ್ದಾರೆ. ಇತ್ತೀಚೆಗೆ ಹೈದರಾಬಾದ್ನ ಅಲ್ಲು ಸಿನಿಮಾದಲ್ಲಿ ಪ್ರಭಾಸ್ ಜೊತೆ ಸೇರಿ ಅವರು ಈ ಸಿನಿಮಾವನ್ನು ವೀಕ್ಷಿಸಿದರು. ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿದ್ದಾರೆ. ‘ಧುರಂಧರ್ 2’ ಬಗ್ಗೆ ಅವರು ಭರಪೂರ ಮೆಚ್ಚುಗೆ ಸೂಚಿಸಿದ್ದಾರೆ. ಅಲ್ಲದೇ ರಣವೀರ್ ಸಿಂಗ್ ಮತ್ತು ಆದಿತ್ಯ ಧರ್ (Aditya Dhar) ಅವರಿಗೆ ಕೆಟ್ಟ ದೃಷ್ಟಿ ಆಗಿದೆ ಎಂದು ಕೂಡ ಸಂದೀಪ್ ರೆಡ್ಡಿ ವಂಗ ಹೇಳಿದ್ದಾರೆ.
ಈ ಚಿತ್ರವನ್ನು ಪ್ರೊಪಗಾಂಡಾ ಎಂದು ಕರೆಯುತ್ತಿರುವವರ ವಿರುದ್ಧ ಸಂದೀಪ್ ರೆಡ್ಡಿ ವಂಗ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ. ‘ಕೆಲವು ಬರಹಗಾರರು ಮತ್ತು ನಟರು ಪ್ರೊಪಗಾಂಡಾ ಮೂಲಕವೇ ತಮ್ಮ ವೃತ್ತಿಜೀವನವನ್ನು ಕಟ್ಟಿಕೊಂಡಿದ್ದಾರೆ. ಆಗ ಚಿತ್ರರಂಗ ಸುಮ್ಮನಿತ್ತು. ಆದರೆ ಈಗ ಅದೇ ಗುಂಪು ಧುರಂಧರ್ ಚಿತ್ರವನ್ನು ವ್ಯಂಗ್ಯ ಮಾಡುತ್ತಿದೆ. ಸತ್ಯವನ್ನು ಯಾವಾಗ ಪ್ರೊಪಗಾಂಡಾ ಎಂದು ಕರೆಯಲು ಆರಂಭಿಸಿದರೋ ತಿಳಿಯುತ್ತಿಲ್ಲ. ನಿಮ್ಮ ಮೊದಲ ಪ್ರತಿಕ್ರಿಯೆಯೇ ವ್ಯಂಗ್ಯ ಮಾಡುವುದಾಗಿದ್ದರೆ, ನಿಮ್ಮನ್ನು ನೀವು ಲಿಬರಲ್ ಎಂದು ಕರೆದುಕೊಳ್ಳುವ ಹಕ್ಕಿಲ್ಲ’ ಎಂದು ಬರೆದುಕೊಂಡಿದ್ದಾರೆ.
ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಂದೀಪ್ ರೆಡ್ಡಿ ವಂಗ ಅವರು, ಆದಿತ್ಯ ಧರ್ ಮತ್ತು ರಣವೀರ್ ಸಿಂಗ್ ಅವರಿಗೆ ವಿಚಿತ್ರ ಶೈಲಿಯಲ್ಲಿ ಶುಭ ಹಾರೈಸಿದ್ದಾರೆ. ‘ಈ ಕೆಟ್ಟ ದೃಷ್ಟಿ ಸುಲಭವಾಗಿ ಹೋಗುವುದಿಲ್ಲ. ಬರೀ ಒಂದು ಹಿಡಿ ಕೆಂಪು ಮೆಣಸಿನಕಾಯಿ ಸಾಲದು, ಇಡೀ ಹೊಲವನ್ನೇ ಸುಡಬೇಕಾಗುತ್ತದೆ. ಅಷ್ಟರಮಟ್ಟಿಗೆ ಸಿನಿಮಾ ಅದ್ಭುತವಾಗಿದೆ’ ಎಂದು ಹೇಳುವ ಮೂಲಕ ಚಿತ್ರದ ಯಶಸ್ಸನ್ನು ಕೊಂಡಾಡಿದ್ದಾರೆ.
Writers & actors built careers on propaganda, and the industry stayed quiet like cats. Now the same clan mock Dhurandhar. You don’t get to call yourself liberal if your first instinct is to Mock.
Don’t know when truth started getting labeled as propaganda…… strange times.…
— Sandeep Reddy Vanga (@imvangasandeep) April 9, 2026
ಸಂದೀಪ್ ರೆಡ್ಡಿ ವಂಗ ಅವರ ಈ ಬೆಂಬಲಕ್ಕೆ ಪ್ರತಿಕ್ರಿಯಿಸಿರುವ ನಿರ್ದೇಶಕ ಆದಿತ್ಯ ಧರ್, ‘ನನ್ನ ಪ್ರೀತಿಯ ಸಂದೀಪ್, ನೀವು ನಿಮ್ಮ ನಿಲುವಿಗೆ ಬದ್ಧವಾಗಿ ನಿಲ್ಲುವ ರೀತಿ ಮತ್ತು ಸಮಯ ಬಂದಾಗ ತಿರುಗೇಟು ನೀಡುವ ಶೈಲಿ ನನಗೆ ಇಷ್ಟ. ನಿಮ್ಮ ಪ್ರಾಮಾಣಿಕತೆ ಮತ್ತು ಸಿನಿಮಾದ ಮೇಲಿರುವ ನಂಬಿಕೆಯನ್ನು ನಾನು ಗೌರವಿಸುತ್ತೇನೆ’ ಎಂದು ಪೋಸ್ಟ್ ಮಾಡಿದ್ದಾರೆ.
ಬುಧವಾರ (ಏಪ್ರಿಲ್ 8) ರಾತ್ರಿ ಪ್ರಭಾಸ್ ಮತ್ತು ಸಂದೀಪ್ ರೆಡ್ಡಿ ವಂಗ ಅವರು ಸಾಮಾನ್ಯ ಪ್ರೇಕ್ಷಕರಂತೆ ಥಿಯೇಟರ್ನಲ್ಲಿ ಸಿನಿಮಾ ವೀಕ್ಷಿಸುತ್ತಿರುವ ವಿಡಿಯೋಗಳು ವೈರಲ್ ಆಗಿದ್ದವು. ಸಿನಿಮಾ ಮುಗಿದ ನಂತರವೂ ಅವರು ಪೋಸ್ಟ್-ಕ್ರೆಡಿಟ್ ದೃಶ್ಯಗಳನ್ನು ನೋಡುತ್ತಾ ನಿಂತಿದ್ದು ಅಭಿಮಾನಿಗಳ ಗಮನ ಸೆಳೆದಿತ್ತು.
ಚಿಕ್ಕಮಗಳೂರು, (ಏಪ್ರಿಲ್ 10): ಪ್ರವಾಸಕ್ಕೆ ಬಂದಿದ್ದ ಕೇರಳ ಮೂಲದ ಮೂಲದ ಬಾಲಕಿ ಶ್ರೀನಂದಾ (Srinanda) ಮೃತದೇಹ ಪತ್ತೆಯಾಗಿದೆ. ಮೂರು ದಿನದ ಬಳಿಕ ಚಿಕ್ಕಮಗಳೂರಿನ (Chikkamagaluru) ಚಂದ್ರದ್ರೋಣ ಪರ್ವತ ಶ್ರೇಣಿಯ ಮಾಣಿಕ್ಯಧಾರಾ ಜಲಪಾತದ ಶ್ರೀನಂದಾ ಶವ ಪತ್ತೆಯಾಗಿದೆ. ಇನ್ನು ಶ್ರೀನಂದಾ ಮೃತದೇಹ ಸಿಕ್ಕ ಸ್ಥಳ ನೋಡಿದ್ರೆ ಕೈ ಕಾಲು ನಡುಗುತ್ತವೆ. ಹೌದು… ಆಕೆ ಬಿದ್ದ ಜಾಗ ಅಷ್ಟೊಂದು ಭಯಾನಕವಾಗಿದೆ. ದೊಡ್ಡ ದೊಡ್ಡ ಗಿಡ ಮರಳು, ಬೃಹತ್ ಆಕಾದರ ಕಲ್ಲು ಬಂಡೆಯ ಸುಮಾರು 2000 ಅಡಿ ಆಳಕ್ಕೆ ಶ್ರೀನಂದಾ ಬಿದ್ದಿದ್ದಾಳೆ. ನೀವು ಆಕೆ ಬಿದ್ದ ಜಾಗವನ್ನು ನೋಡಿ.
ಇತ್ತೀಚಿನ ದಿನಗಳಲ್ಲಿ ಆಪ್ಟಿಕಲ್ ಇಲ್ಯೂಷನ್ (Optical Illusion) ಸೇರಿದಂತೆ ಕಠಿಣ ಸವಾಲಿನ ಒಗಟಿನ ಚಿತ್ರಗಳು ಸಾಕಷ್ಟು ಜನಪ್ರಿಯವಾಗಿವೆ. ಮೆದುಳಿಗೆ ಕೆಲಸ ನೀಡುವ ಇಂತಹ ಒಗಟಿನ ಚಿತ್ರವನ್ನು ಬಿಡಿಸುವುದರಲ್ಲಿರುವ ಖುಷಿಯೇ ಬೇರೆ. ಇದು ನಿಮ್ಮ ಮೆದುಳಿಗೆ ವ್ಯಾಯಾಮವನ್ನು ನೀಡುತ್ತವೆ. ಇದೀಗ ನಿಮ್ಮ ಕಣ್ಣಿನ ತೀಕ್ಷ್ಣತೆಯನ್ನು ಪರೀಕ್ಷಿಸಲು ಇದೊಂದು ಒಳ್ಳೆಯ ಸಮಯ. ಕಳ್ಳಿ ಸಸ್ಯಗಳ ನಡುವೆ ಜಿಂಕೆಯೊಂದು ಅಡಗಿ ಕುಳಿತಿದ್ದು, ಈ ಪ್ರಾಣಿಯನ್ನು ಹದಿನೈದು ಸೆಕೆಂಡುಗಳ ಒಳಗೆ ಗುರುತಿಸಬೇಕು. ಜಿಂಕೆಯನ್ನು ಪತ್ತೆ ಹಚ್ಚಿ ಈ ಒಗಟು ಬಿಡಿಸಿದರೆ ನೀವು ಜಾಣರು ಎಂದರ್ಥ.
ಈ ಚಿತ್ರದಲ್ಲಿ ನಿಮ್ಮ ಕಣ್ಣಿಗೆ ಕಾಣಿಸಿದ್ದೇನು?
ಇಲ್ಯೂಷನ್ ಚಿತ್ರಗಳೇ ಹಾಗೆ, ಹೇಳಿದ್ದಷ್ಟು ಸುಲಭವಲ್ಲ. ಕಣ್ಣಿನ ಸೂಕ್ಷ್ಮತೆ ಮತ್ತು ಏಕಾಗ್ರತೆ ಎಷ್ಟಿದೆ ಎಂಬುದನ್ನು ಪರೀಕ್ಷಿಸಲು ಸಹಾಯಕವಾಗಿರುವ ಈ ಚಿತ್ರದತ್ತ ಒಮ್ಮೆ ಗಮನ ಹರಿಸಿ. ಪ್ರಕೃತಿ ಸೌಂದರ್ಯ. ಬೆಟ್ಟದ ಮೇಲೆ ಯಥವತ್ತಾಗಿ ಬೆಳೆದು ನಿಂತ ಕಳ್ಳಿ ಸಸ್ಯಗಳು ಕಂಡುಬರುತ್ತವೆ. ಈ ಸಸ್ಯಗಳ ನಡುವೆ ಜಿಂಕೆ ಕೂಡ ಇದೆ. ಬಹಳ ಸೂಕ್ಷ್ಮವಾಗಿ ಗಮನಿಸಿದರೆ ಮಾತ್ರ ಈ ಪ್ರಾಣಿ ನಿಮ್ಮ ಕಣ್ಣಿಗೆ ಬೀಳುತ್ತದೆ. ತಾಳ್ಮೆ ಹಾಗೂ ಏಕಾಗ್ರತೆಯಿಂದ ಕೇವಲ ಹದಿನೈದು ಸೆಕೆಂಡುಗಳೊಳಗೆ ಈ ಪ್ರಾಣಿಯನ್ನು ಪತ್ತೆ ಹಚ್ಚಲು ಪ್ರಯತ್ನಿಸಿ. ನೀವು ಈ ಸವಾಲನ್ನು ಸ್ವೀಕರಿಸಿದ್ದೀರಾ ಎಂದು ಭಾವಿಸುತ್ತೇವೆ.
ಬೆಟ್ಟದ ಮೇಲೆ ಇರುವ ಕಳ್ಳಿ ಸಸ್ಯಗಳ ನಡುವೆ ಇರುವ ಜಿಂಕೆಯನ್ನು ಪತ್ತೆ ಹಚ್ಚುವುದು ಹೇಳಿದ್ದಷ್ಟು ಸುಲಭವಲ್ಲ. ಜಿಂಕೆಯ ಮೈ ಬಣ್ಣವು ಕಳ್ಳಿ ಸಸ್ಯಗಳ ಬಣ್ಣದೊಂದಿಗೆ ಬೆರೆತು ಹೋಗಿದೆ. ಹೀಗಾಗಿ ನೀವು ಎಷ್ಟೇ ಸೂಕ್ಷ್ಮವಾಗಿ ಗಮನಿಸಿದ್ರೂ ಜಿಂಕೆ ನಿಮ್ಮ ಕಣ್ಣಿಗೆ ಕಾಣಿಸುವುದಿಲ್ಲ. ನೀವು ಹೆಚ್ಚು ಚಿಂತಿಸುವ ಅಗತ್ಯವಿಲ್ಲ.. ನಾವೇ ಈ ಕೆಳಗಿನ ಚಿತ್ರದಲ್ಲಿ ಜಿಂಕೆ ಎಲ್ಲಿದೆ ಎಂದು ಗುರುತಿಸಿ, ನೀವು ತಲೆಕಕೆಡಿಸಿಕೊಳ್ಳುವುದನ್ನು ಕಡಿಮೆ ಮಾಡಿದ್ದೇವೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಭೋಪಾಲ್, ಏಪ್ರಿಲ್ 10: ಕಾಡುಪ್ರಾಣಿಗಳ ಪಾಲಿಗೆ ಮನುಷ್ಯರು ಯಮಕಿಂಕರರಾಗುತ್ತಿದ್ದಾರೆ. ಇತ್ತೀಚೆಗೆ ಅಭಯಾರಣ್ಯದ ರಸ್ತೆಯೊಂದರಲ್ಲಿ ಚಿರತೆ ನಡೆದುಕೊಂಡು ಹೋಗುವಾಗ ಅದರ ಪಕ್ಕದವರೆಗೂ ಸಾಲುಗಟ್ಟಿ ವಾಹನಗಳನ್ನು ನಿಲ್ಲಿಸಿಕೊಂಡು ಫೋಟೋ ಕ್ಲಿಕ್ಕಿಸುತ್ತಾ, ಆ ಚಿರತೆಗೆ (Leopard) ಹೋಗಲು ದಾರಿಯನ್ನೂ ಬಿಡದೆ ಗೊಂದಲವನ್ನುಂಟುಮಾಡುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ಕಾಡುಪ್ರಾಣಿಗಳ ಖಾಸಗಿತನಕ್ಕೆ ಸಫಾರಿಯ ಹೆಸರಿನಲ್ಲಿ ಯಾವ ರೀತಿ ತೊಂದರೆ ಮಾಡಲಾಗುತ್ತಿದೆ ಎಂಬ ಕುರಿತು ಸಾಕಷ್ಟು ಚರ್ಚೆಗಳಿಗೂ ಈ ವಿಡಿಯೋ ಕಾರಣವಾಗಿತ್ತು. ಇದೀಗ ಮಾಹಿತಿ ಹಕ್ಕಿನಡಿ ಪಡೆದ ಮಾಹಿತಿಯ ಪ್ರಕಾರ ಮಧ್ಯಪ್ರದೇಶದಲ್ಲಿ ಕಳೆದ 14 ತಿಂಗಳಲ್ಲಿ 149 ಚಿರತೆಗಳು ಮೃತಪಟ್ಟಿರುವ ಶಾಕಿಂಗ್ ಸಂಗತಿ ಬಯಲಾಗಿದೆ. ಈ ಸಾವಿಗೆ ಬಹುತೇಕವಾಗಿ ಅಪಘಾತಗಳೇ ಮುಖ್ಯ ಕಾರಣ ಎಂಬುದು ಇನ್ನೊಂದು ಆಘಾತಕಾರಿ ಸಂಗತಿ.
ಜನವರಿ 2025ರಿಂದ ಆರಂಭವಾದ 14 ತಿಂಗಳಲ್ಲಿ ಮಧ್ಯಪ್ರದೇಶದಲ್ಲಿ 149 ಚಿರತೆಗಳು ಸಾವನ್ನಪ್ಪಿವೆ ಎಂದು ಇಲಾಖೆ ತನ್ನ ಆರ್ಟಿಐ ಉತ್ತರದಲ್ಲಿ ತಿಳಿಸಿದೆ. ಇವುಗಳಲ್ಲಿ ಶೇ. 31ರಷ್ಟು ಸಾವುಗಳು ರಸ್ತೆ ಅಪಘಾತಗಳಿಂದಾಗಿವೆ. 19 ಸಾವುಗಳು ಹೆದ್ದಾರಿಗಳಲ್ಲಿ ಸಂಭವಿಸಿವೆ. ಶೇ. 24ರಷ್ಟು ಸಾವುಗಳು ವೃದ್ಧಾಪ್ಯ ಮತ್ತು ಕಾಯಿಲೆಯಂತಹ ನೈಸರ್ಗಿಕ ಕಾರಣಗಳಿಂದ ಸಂಭವಿಸಿದ್ದರೆ, ಶೇ. 21ರಷ್ಟು ಸಾವುಗಳು ವನ್ಯಜೀವಿಗಳ ನಡುವಿನ ಸಂಘರ್ಷದಿಂದಾಗಿ ಸಂಭವಿಸಿವೆ.
ಸುಮಾರು ಶೇ. 14ರಷ್ಟು ಸಾವುಗಳು ಬೇಟೆಯಾಡುವುದು ಮತ್ತು ಪ್ರತೀಕಾರದ ಹತ್ಯೆಗಳಿಂದ ಸಂಭವಿಸಿವೆ. 8 ಪ್ರಾಣಿಗಳು ಉದ್ದೇಶಪೂರ್ವಕವಾಗಿ ಅಥವಾ ಆಕಸ್ಮಿಕವಾಗಿ ವಿದ್ಯುತ್ ಆಘಾತಕ್ಕೊಳಗಾಗಿದ್ದರೆ, ಎರಡು ಚಿರತೆಗಳು ಬಲೆಗಳಿಂದ ಸಾವನ್ನಪ್ಪಿವೆ. ಶೇ. 9ರಷ್ಟು ಪ್ರಕರಣಗಳಲ್ಲಿ ಸಾವಿಗೆ ಕಾರಣವನ್ನು ಕಂಡುಹಿಡಿಯಲು ಸಾಧ್ಯವಾಗಿಲ್ಲ.
ಫೆಬ್ರವರಿ 2024ರಲ್ಲಿ ಬಿಡುಗಡೆಯಾದ’ಭಾರತದಲ್ಲಿ ಚಿರತೆಗಳ ಸ್ಥಿತಿ 2022′ ವರದಿಯ ಪ್ರಕಾರ, ಮಧ್ಯಪ್ರದೇಶವು ದೇಶದಲ್ಲಿಯೇ ಅತಿ ಹೆಚ್ಚು ಚಿರತೆ ಜನಸಂಖ್ಯೆಯನ್ನು ಹೊಂದಿದ್ದು, ಮಧ್ಯಪ್ರದೇಶದಲ್ಲಿ 3,907 ಚಿರತೆಗಳಿವೆ. ಮಹಾರಾಷ್ಟ್ರ ಮತ್ತು ಕರ್ನಾಟಕ ನಂತರದ ಸ್ಥಾನದಲ್ಲಿವೆ.
“ರಸ್ತೆಗಳ ಬಳಿ ನೀರಿನ ಮೂಲಗಳನ್ನು ರಚಿಸದಂತೆ ನಾವು ಸಲಹೆ ನೀಡುತ್ತಿದ್ದೇವೆ. ಏಕೆಂದರೆ ಪ್ರಾಣಿಗಳು ಹೆಚ್ಚಾಗಿ ಅವುಗಳ ಕಡೆಗೆ ಚಲಿಸುತ್ತವೆ ಮತ್ತು ಅಪಘಾತಗಳಿಗೆ ಗುರಿಯಾಗುತ್ತವೆ” ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬಂಟ್ವಾಳ, ಏ.10: ನೆನ್ನೆ (ಏ.9) ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ಜಿಲ್ಲಾವಾರು ಫಲಿತಾಂಶದಲ್ಲಿ ಉಡುಪಿ ಪ್ರಥಮ ಸ್ಥಾನ ಹಾಗೂ ದಕ್ಷಿಣ ಕನ್ನಡ ದ್ವಿತೀಯ ಬಂದಿದೆ. ದಕ್ಷಿಣ ಕನ್ನಡ ಈ ಹಿಂದೆ ಮೊದಲ ಸ್ಥಾನವನ್ನು ಪಡೆದುಕೊಂಡಿತ್ತು. ಇದೀಗ ಇದರ ನಡುವೆ ಒಂದು ಅಪರೂಪದ ಸಾಧನೆಯೊಂದು ವೈರಲ್ ಆಗಿದೆ. ಅಮ್ಮ ಮತ್ತು ಮಗಳು ಇಬ್ಬರು ಪರೀಕ್ಷೆ ಬರೆದು ಪಾಸ್ ಆಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೈಕಂಬದ ತಾಯಿ ಮತ್ತು ಮಗಳು ಏಕಕಾಲದಲ್ಲಿ ಉತ್ತೀರ್ಣರಾಗುವ ಮೂಲಕ ಜಿಲ್ಲೆಯ ಗಮನ ಸೆಳೆದಿದ್ದಾರೆ.
ಬಿ.ಮೂಡ ಸರಕಾರಿ ಪದವಿಪೂರ್ವ ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿನಿಯಾದ ಹೇಮಶ್ರೀ, 562 ಅಂಕಗಳನ್ನು (ವಿಶಿಷ್ಟ ಶ್ರೇಣಿ) ಗಳಿಸುವ ಮೂಲಕ ಕಾಲೇಜಿಗೆ ಪ್ರಥಮ ಸ್ಥಾನ (Topper) ಪಡೆದಿದ್ದಾರೆ. ಇವರ ತಾಯಿ ನೇತ್ರಾವತಿ ವಿ.ಆರ್ ಅವರು ಮೊಂಟೆಪದವು ಸರಕಾರಿ ಪದವಿಪೂರ್ವ ಕಾಲೇಜಿನ ಮೂಲಕ ಕಲಾ ವಿಭಾಗದಲ್ಲಿ ಖಾಸಗಿಯಾಗಿ ಪರೀಕ್ಷೆ ಬರೆದು 257 ಅಂಕಗಳನ್ನು ಪಡೆಯುವ ಮೂಲಕ ಪ್ರಥಮ ಪ್ರಯತ್ನದಲ್ಲೇ ಉತ್ತೀರ್ಣರಾಗಿದ್ದಾರೆ.
ನಂದಾವರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ರವಿಕುಮಾರ್ ಅವರ ಪತ್ನಿಯಾದ ನೇತ್ರಾವತಿ ಅವರಿಗೆ ವಿದ್ಯಾಭ್ಯಾಸ ಮುಂದುವರಿಸುವ ಆಸೆ ಇತ್ತು. ಮಗಳು ಕಾಲೇಜಿಗೆ ಸೇರಿದಾಗ ಪತಿಯ ಪ್ರೋತ್ಸಾಹದಿಂದ ತಾವೂ ಪರೀಕ್ಷೆ ಬರೆಯಲು ನಿರ್ಧರಿಸಿದರು. ಮಗಳ ಅದ್ಭುತ ಸಾಧನೆಯ ಜೊತೆಗೆ ತಾವೂ ಪಾಸಾಗಿರುವುದು ಇಡೀ ಕುಟುಂಬದಲ್ಲಿ ಸಂತಸ ಮೂಡಿಸಿದೆ.
ವೈಭವ್ ಸೂರ್ಯವಂಶಿ (Vaibhav Suryavanshi).. ಪ್ರಸ್ತುತ ಕ್ರಿಕೆಟ್ ಲೋಕದಲ್ಲಿ ಓಡುತ್ತಿರುವ ಕುದುರೆ. ತನ್ನ ಪ್ರತಿಭೆಯಿಂದ ಕೇವಲ 15ನೇ ವಯಸ್ಸಿನಲ್ಲೇ ವಿಶ್ವ ಕ್ರಿಕೆಟ್ನ ಮನೆಮಾತಾಗಿರುವ ಈ ಪೋರ ಪ್ರಸ್ತುತ ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್ನಲ್ಲಿ (IPL) ರಾಜಸ್ಥಾನ್ ರಾಯಲ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಕಳೆದ ಆವೃತ್ತಿಯಲ್ಲೇ ರಾಜಸ್ಥಾನ್ ಪರ ಐಪಿಎಲ್ನಲ್ಲಿ ಅಬ್ಬರಿಸಿದ್ದ ವೈಭವ್, ಇದೀಗ ತನ್ನ ಹಳೆಯ ಆಟವನ್ನು ಈ ಆವೃತ್ತಿಯಲ್ಲೂ ಮುಂದುವರೆಸಿದ್ದಾರೆ. ಬಲಿಷ್ಠ ತಂಡಗಳೆದುರು ಅದರಲ್ಲೂ ಸ್ಟಾರ್ ಬೌಲರ್ಗಳ ಎದುರು ವೈಭವ್ ಅವರ ನಿರ್ಭೀತಿಯ ಆಟ ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದೆ. ಇದೀಗ ಅದೇ ವೈಭವ್ ಸೂರ್ಯವಂಶಿ ಆರ್ಸಿಬಿ (RCB) ವಿರುದ್ಧ ತನ್ನ ಹಳೆಯ ಸೇಡನ್ನು ತೀರಿಸಿಕೊಳ್ಳುವ ಇರಾದೆಯಲ್ಲಿದ್ದಾರೆ.
351 ದಿನಗಳ ಹಿಂದಿನ ಸೇಡು
ಪ್ರಸ್ತುತ ಅದ್ಭುತ ಫಾರ್ಮ್ನಲ್ಲಿರುವ ವೈಭವ್ ಐಪಿಎಲ್ 2026 ರ ಮೊದಲ ಮೂರು ಪಂದ್ಯಗಳಲ್ಲಿ ಬೌಂಡರಿ ಮತ್ತು ಸಿಕ್ಸರ್ಗಳ ಮಳೆ ಸುರಿಸಿ, ಎಲ್ಲಾ ತಂಡಗಳಿಗೆ ಎಚ್ಚರಿಕೆ ನೀಡಿದ್ದಾರೆ. ಸನ್ರೈಸರ್ಸ್ ಹೈದರಾಬಾದ್, ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಮುಂಬೈ ಇಂಡಿಯನ್ಸ್ ನಂತರ, ವೈಭವ್ ಈಗ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಅಬ್ಬರಿಸಲು ಸಜ್ಜಾಗಿದ್ದು, 351 ದಿನಗಳ ಹಿಂದಿನ ಸೇಡಿಗೆ ಪ್ರತಿಕಾರ ತೀರಿಸಿಕೊಳ್ಳುವ ತವಕದಲ್ಲಿದ್ದಾರೆ.
ಮುಂದಿನ ಟಾರ್ಗೆಟ್ ಆರ್ಸಿಬಿ
ಮೇಲೆ ಹೇಳಿದಂತೆ ಐಪಿಎಲ್ 2026 ರ 16 ನೇ ಪಂದ್ಯವು ರಾಜಸ್ಥಾನ್ ರಾಯಲ್ಸ್ ಮತ್ತು ಬೆಂಗಳೂರು ರಾಯಲ್ಸ್ ನಡುವೆ ನಡೆಯಲಿದೆ. ಗುವಾಹಟಿಯಲ್ಲಿ ನಡೆಯಲಿರುವ ಈ ಪಂದ್ಯ ವೈಭವ್ ಸೂರ್ಯವಂಶಿ ಅವರಿಗೆ ತುಂಬಾ ವಿಶೇಷವಾಗಿದೆ. ಏಕೆಂದರೆ ಕಳೆದ ಆವೃತ್ತಿಯಲ್ಲಿ ಇದೇ ಆರ್ಸಿಬಿ ವಿರುದ್ಧ ವೈಭವ್ ಸೂರ್ಯವಂಶಿಗೆ ಮುಕ್ತವಾಗಿ ರನ್ ಗಳಿಸಲು ಆಗಿರಲಿಲ್ಲ. ಹೀಗಾಗಿ ಆ ಹಿಂದಿನ ವೈಫಲ್ಯವನ್ನು ಈ ಪಂದ್ಯದಲ್ಲಿ ಸರಿದೂಗಿಸುವತ್ತ ಸೂರ್ಯವಂಶಿ ಚಿತ್ತವಿದೆ. ಇದಕ್ಕೆ ಪೂರಕವಾಗಿ ಕಳೆದ ಆವೃತ್ತಿಯಲ್ಲಿ ಮುಂಬೈ ವಿರುದ್ಧ ರನ್ ಗಳಿಸಲು ವಿಫಲರಾಗಿದ್ದ ವೈಭವ್, ಈ ಆವೃತ್ತಿಯಲ್ಲಿ ಅಬ್ಬರಿಸಿದ್ದರು. ಕೇವಲ 14 ಎಸೆತಗಳಲ್ಲಿ 39 ರನ್ ಗಳಿಸಿದರು. ಹೀಗಾಗಿ ಇದೀಗ ಆರ್ಸಿಬಿ ವಿರುದ್ಧ ವೈಭವ್ ಯಾವ ರೀತಿಯ ಪ್ರದರ್ಶನ ನೀಡುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.
ಕಳೆದ ಆವೃತ್ತಿಯಲ್ಲಿ ಏಪ್ರಿಲ್ 24 ರಂದು, ಆರ್ಸಿಬಿ ಮತ್ತು ರಾಜಸ್ಥಾನ ತಂಡಗಳು ಮುಖಾಮುಖಿಯಾಗಿದ್ದವು. ಆ ಪಂದ್ಯದಲ್ಲಿ ವೈಭವ್ ರಾಜಸ್ಥಾನ್ ತಂಡದ ಭಾಗವಾಗಿದ್ದರು. 206 ರನ್ಗಳ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ್ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ವೈಭವ್, ಎರಡು ಸಿಕ್ಸರ್ಗಳನ್ನು ಬಾರಿಸುವ ಮೂಲಕ ಉತ್ತಮ ಆರಂಭವನ್ನು ಪಡೆದರು, ಆದರೆ ನಂತರ 12 ಎಸೆತಗಳಲ್ಲಿ 16 ರನ್ಗಳಿಸಿ ಔಟಾದರು. ಅವರನ್ನು ಅನುಭವಿ ವೇಗಿ ಭುವನೇಶ್ವರ ಕುಮಾರ್ ಔಟ್ ಮಾಡಿದ್ದರು.
ಈ ಆವೃತ್ತಿಯ ವೈಭವ್ ಪ್ರತಿ ಪಂದ್ಯದಲ್ಲೂ ಸ್ಫೋಟಕ ಇನ್ನಿಂಗ್ಸ್ ಆಡಿದ್ದಾರೆ. ಈ ಮೂಲಕ ತಂಡದ ಸತತ ಮೂರು ಗೆಲುವುಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ವೈಭವ್ ಇದುವರೆಗೆ ಮೂರು ಇನ್ನಿಂಗ್ಸ್ಗಳಲ್ಲಿ 122 ರನ್ ಗಳಿಸಿದ್ದಾರೆ, ಅವರ ಗರಿಷ್ಠ ಸ್ಕೋರ್ 52 ರನ್ ಆಗಿದೆ. ಇದರಲ್ಲಿ 11 ಸಿಕ್ಸರ್ ಮತ್ತು 10 ಬೌಂಡರಿಗಳು ಸೇರಿವೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ