ಪ್ರಿಯಾಂಕಾ ಹಾಗೂ ಉಪೇಂದ್ರ ದಂಪತಿ ಮಗ ಆಯುಷ್ ಅವರು ಹೀರೋ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಈ ಸಿನಿಮಾ ಬಗ್ಗೆ ಪ್ರಿಯಾಂಕಾ ಅವರು ಎಗ್ಸೈಟ್ ಆಗಿದ್ದಾರೆ. ಇತ್ತೀಚೆಗೆ ಅವರು ಸಿನಿಮಾ ಸೆಟ್ಗೆ ಭೇಟಿ ಕೊಟ್ಟು ಮೇಲ್ವಿಚಾರಣೆ ಮಾಡಿದ್ದಾರೆ. ‘ಮಗ ಕಿಂಡರ್ಗಾರ್ಡನ್ ಅಲ್ಲಿ ಸ್ಟೇಜ್ ಮೇಲೆ ಡ್ಯಾನ್ಸ್ ಮಾಡಿದಾಗ ಖುಷಿಯಿಂದ ಕಣ್ಣಿರು ಬರುತ್ತಿತ್ತು. ಈಗ ಅವನು ಹೀರೋ ಆಗುತ್ತಿದ್ದಾನೆ. ಹೀಗಾಗಿ, ಎಮೋಷನಲ್ ಆಗುತ್ತೇನೆ’ ಎಂದು ಅವರು ಹೇಳಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ.
ಫಿಫಾ ವಿಶ್ವಕಪ್ನ 23ನೇ ಆವೃತ್ತಿಗೆ ತೆರೆಬಿದ್ದಿದೆ. ಈ ಬಾರಿ ಅರ್ಜೆಂಟೀನಾ ತಂಡವನ್ನು ಮಣಿಸಿ ಸ್ಪೇನ್ ಪಡೆ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಚಾಂಪಿಯನ್ ಪಟ್ಟದೊಂದಿಗೆ ಮುಂದಿನ ಬಾರಿ ಸ್ಪೇನ್ ಫಿಫಾ ವಿಶ್ವಕಪ್ಗೆ ಜಂಟಿ ಆತಿಥ್ಯವಹಿಸಲಿದೆ. ಅಂದರೆ 2030ರ ಫಿಫಾ ವಿಶ್ವಕಪ್ಗಾಗಿ ಈಗಾಗಲೇ ಆತಿಥೇಯ ರಾಷ್ಟ್ರಗಳ ಡ್ರಾ ಪ್ರಕ್ರಿಯೆ ನಡೆದಿದೆ. ಈ ಡ್ರಾನಂತೆ ಮುಂದಿನ ಬಾರಿಯ ವಿಶ್ವಕಪ್ 3 ಖಂಡಗಳ 6 ದೇಶಗಳಲ್ಲಿ ನಡೆಯಲಿದೆ.
ವಿಶ್ವಕಪ್ ಶತಮಾನೋತ್ಸವ:
ಫಿಫಾ ವಿಶ್ವಕಪ್ ಶುರುವಾಗಿ 96 ವರ್ಷಗಳಾಗಿವೆ. ಅಂದರೆ ಮುಂದಿನ ವಿಶ್ವಕಪ್ ನಡೆಯುವುದು 100ನೇ ವರ್ಷದಲ್ಲಿ. 1930ರಲ್ಲಿ ಜಗತ್ತಿನ ಮೊದಲ ಫಿಫಾ ಪುರುಷರ ವಿಶ್ವಕಪ್ ಪಂದ್ಯಾವಳಿ ನಡೆದಿತ್ತು. ಅದರ ನೆನಪಿಗಾಗಿ 2030ರಲ್ಲಿ ನಡೆಯಲಿರುವ 24ನೇ ಆವೃತ್ತಿಯನ್ನು ಶತಮಾನೋತ್ಸವದ ವರ್ಷವೆಂದು ಆಚರಿಸಲಾಗುತ್ತದೆ.
3 ಖಂಡಗಳು, 6 ದೇಶಗಳು:
ವಿಶ್ವಕಪ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಪಂದ್ಯಾವಳಿಗಳು ಮೂರು ವಿಭಿನ್ನ ಖಂಡಗಳ ಆರು ದೇಶಗಳಲ್ಲಿ ನಡೆಯಲಿವೆ. ಫಿಫಾ ವಿಶ್ವಕಪ್ನ ಶತಮಾನೋತ್ಸವನ್ನು ಅದ್ಧೂರಿಯಾಗಿ ಆಯೋಜಿಸುವ ಸಲುವಾಗಿ 6 ದೇಶಗಳಿಗೆ ಆತಿಥ್ಯದ ಹಕ್ಕನ್ನು ನೀಡಲಾಗಿದೆ. ಅದರಂತೆ ಮುಂದಿನ ವಿಶ್ವಕಪ್ ಈ ಕೆಳಗಿನ ದೇಶಗಳಲ್ಲಿ ನಡೆಯಲಿವೆ.
ಮುಖ್ಯ ಆತಿಥೇಯರು (ಯುರೋಪ್ ಮತ್ತು ಆಫ್ರಿಕಾ): ಟೂರ್ನಿಯ ಬಹುಪಾಲು ಪಂದ್ಯಗಳು ಸ್ಪೇನ್, ಪೋರ್ಚುಗಲ್ ಮತ್ತು ಮೊರಾಕೊ ದೇಶಗಳಲ್ಲಿ ಜಂಟಿಯಾಗಿ ನಡೆಯಲಿವೆ.
ಶತಮಾನೋತ್ಸವದ ಪಂದ್ಯಗಳು (ಸೌತ್ ಅಮೆರಿಕಾ): 1930ರ ಮೊದಲ ವಿಶ್ವಕಪ್ ನೆನಪಿಗಾಗಿ, ಟೂರ್ನಿಯ ಮೊದಲ ಮೂರು ಪಂದ್ಯಗಳನ್ನು ಸೌತ್ ಅಮೆರಿಕಾದ ಉರುಗ್ವೆ, ಅರ್ಜೆಂಟೀನಾ ಮತ್ತು ಪರಾಗ್ವೆ ದೇಶಗಳಲ್ಲಿ ಆಡಿಸಲಾಗುತ್ತದೆ. ಏಕೆಂದರೆ ಮೊದಲ ವಿಶ್ವಕಪ್ ಪಂದ್ಯವು ಸೌತ್ ಅಮೆರಿಕಾದ ಉರುಗ್ವೆಯಲ್ಲಿ ನಡೆದಿತ್ತು.
ಅಂದರೆ ಮುಂದಿನ ವಿಶ್ವಕಪ್ ಯುರೋಪ್ (ಸ್ಪೇನ್, ಪೋರ್ಚುಗಲ್), ಆಫ್ರಿಕಾ (ಮೊರಾಕೊ) ಹಾಗೂ ಸೌತ್ ಅಮೆರಿಕಾ (ಉರುಗ್ವೆ, ಅರ್ಜೆಂಟೀನಾ, ಪರಾಗ್ವೆ) ಖಂಡಗಳಲ್ಲಿ ನಡೆಯಲಿದೆ.
ವಿಶ್ವಕಪ್ 2030 ದಿನಾಂಕ:
ಫಿಫಾ ಪ್ರಕಟಿಸಿರುವ ತಾತ್ಕಾಲಿಕ ದಿನಾಂಕದಂತೆ 2030ರ ವಿಶ್ವಕಪ್ ಜೂನ್ 8 ರಿಂದ ಜುಲೈ 21 ರವರೆಗೆ ಒಟ್ಟು ಆರು ವಾರಗಳ ಕಾಲ ಜರುಗಲಿದೆ.
ಜೂನ್ 8 ಮತ್ತು 9 ರಂದು ಸೌತ್ ಅಮೆರಿಕಾದಲ್ಲಿ ಶತಮಾನೋತ್ಸವದ ಭಾಗವಾಗಿ ವಿಶೇಷ ಉದ್ಘಾಟನಾ ಪಂದ್ಯಗಳು ನಡೆಯಲಿದೆ.
ಜೂನ್ 13 ರಿಂದ 14 ರವರೆಗೆ ಪ್ರಮುಖ ಆತಿಥೇಯ ರಾಷ್ಟ್ರಗಳಾದ ಸ್ಪೇನ್, ಪೋರ್ಚುಗಲ್ ಮತ್ತು ಮೊರಾಕೊದಲ್ಲಿ ಅಧಿಕೃತ ಉದ್ಘಾಟನಾ ಸಮಾರಂಭ ಮತ್ತು ಪಂದ್ಯಗಳು ಜರುಗಲಿವೆ.
ಜುಲೈ 21 ರಂದು ಫೈನಲ್ ಮ್ಯಾಚ್ ಅನ್ನು ಆಯೋಜಿಸಲು ನಿರ್ಧರಿಸಲಾಗಿದೆ.
48 ತಂಡಗಳು:
ಈ ಬಾರಿಯಂತೆ ಮುಂದಿನ ವಿಶ್ವಕಪ್ನಲ್ಲೂ 48 ತಂಡಗಳನ್ನೇ ಕಣಕ್ಕಿಳಿಸಲು ನಿರ್ಧರಿಸಲಾಗಿದೆ. ಇದರಲ್ಲಿ 6 ದೇಶಗಳು ಆತಿಥೇಯ ರಾಷ್ಟ್ರಗಳಾಗಿ ನೇರವಾಗಿ ಟೂರ್ನಿಗೆ ಅರ್ಹತೆ ಪಡೆಯಲಿದೆ. ಇನ್ನುಳಿದ 42 ದೇಶಗಳು ಅರ್ಹತಾ ಸುತ್ತಿನ ಪಂದ್ಯಗಳನ್ನಾಡಬೇಕಾಗುತ್ತದೆ.
ಕ್ರೀಡಾಂಗಣಗಳು ಮತ್ತು ಸಿದ್ಧತೆ:
ಸ್ಪೇನ್ನ ಪ್ರಸಿದ್ಧ ರಿಯಲ್ ಮ್ಯಾಡ್ರಿಡ್ ಮತ್ತು ಬಾರ್ಸಿಲೋನಾ ಕ್ಲಬ್ಗಳ ಮೈದಾನಗಳು ಸೇರಿದಂತೆ ಮೊರಾಕೊ ಮತ್ತು ಪೋರ್ಚುಗಲ್ನ ಅತ್ಯಾಧುನಿಕ ಕ್ರೀಡಾಂಗಣಗಳನ್ನು ಈ ಪಂದ್ಯಾವಳಿಗೆ ಸಜ್ಜುಗೊಳಿಸಲಾಗುತ್ತಿದೆ. ಪರಿಸರ ಸ್ನೇಹಿ ಮತ್ತು ತಂತ್ರಜ್ಞಾನ ಆಧಾರಿತ ವ್ಯವಸ್ಥೆಗಳಿಗೆ ಇಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಫಿಫಾ ತಿಳಿಸಿದೆ.
ಒಟ್ಟಾರೆಯಾಗಿ ಹೇಳುವುದಾದರೆ, 2030ರ ಫಿಫಾ ವಿಶ್ವಕಪ್ ಕೇವಲ ಒಂದು ಕ್ರೀಡಾಕೂಟವಾಗಿ ಉಳಿಯದೆ, ಭೌಗೋಳಿಕ ಗಡಿಗಳನ್ನು ಮೀರಿ ಇಡೀ ಜಗತ್ತನ್ನು ಬೆಸೆಯುವ ಮಹಾನ್ ಉತ್ಸವವಾಗಲಿದೆ. ಕಾಲ್ಚೆಂಡಿನ ನೂರು ವರ್ಷಗಳ ಭವ್ಯ ಇತಿಹಾಸಕ್ಕೆ ಗೌರವ ಸಲ್ಲಿಸುತ್ತಾ, ಮೂರು ಖಂಡಗಳ ಮೈದಾನದಲ್ಲಿ ಹೊಸ ಇತಿಹಾಸ ಬರೆಯಲು ಸಜ್ಜಾಗುತ್ತಿರುವ ಈ ‘ಶತಮಾನದ ಮಹಾಸಮರ’ವನ್ನು ಕಣ್ಣುಂಬಿಕೊಳ್ಳಲು ಇನ್ನೂ 4 ವರ್ಷ ಕಾಯಲೇಬೇಕು.
ಕರ್ನಾಟಕ ಹೈಕೋರ್ಟ್ (ಸಂಗ್ರಹ ಚಿತ್ರ)Image Credit source: tv9
ಬೆಂಗಳೂರು, ಜುಲೈ 22: ಕರ್ನಾಟಕ ಲೋಕಸೇವಾ ಆಯೋಗದ (KPSC) ನೇಮಕಾತಿ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿರುವ ಕರ್ನಾಟಕ ಹೈಕೋರ್ಟ್, ರಾಜ್ಯ ಸರ್ಕಾರ ಹಾಗೂ ಸಿಬಿಐಗೆ (CBI) ಮಂಗಳವಾರ ನೋಟಿಸ್ ಜಾರಿ ಮಾಡಿದೆ. ಅಮಾನತುಗೊಂಡ ಕೆಪಿಎಸ್ಸಿ ಅಧ್ಯಕ್ಷ ಶಿವಶಂಕರಪ್ಪ ಎಸ್. ಸಾಹುಕಾರ್ ಅವರ ಪುತ್ರಿಯರ ಆಯ್ಕೆ ಸೇರಿದಂತೆ 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಲಾಗಿದೆ.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಅಖಿಲ ಕರ್ನಾಟಕ ವಿದ್ಯಾರ್ಥಿ ಸಂಘದ ಪರವಾಗಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ, ಜುಲೈ 29ರೊಳಗೆ ರಾಜ್ಯ ಸರ್ಕಾರ ತನ್ನ ನಿಲುವು ತಿಳಿಸುವಂತೆ ಸೂಚಿಸಿದ್ದಾರೆ. ಈ ನಡುವೆ ಸರ್ಕಾರ ವಿಶೇಷ ತನಿಖಾ ತಂಡ (SIT) ರಚಿಸಿ ಪ್ರಕರಣವನ್ನು ವರ್ಗಾಯಿಸಲು ಮುಂದಾದರೆ, ಅರ್ಜಿದಾರರು ಮತ್ತೆ ನ್ಯಾಯಾಲಯದ ಮೊರೆ ಹೋಗಲು ಅವಕಾಶವಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಅರ್ಜಿದಾರರ ವಾದವೇನು?
ಜುಲೈ 3ರಂದು ಸಲ್ಲಿಸಿದ್ದ ದೂರಿನ ಆಧಾರದಲ್ಲಿ ವಿಧಾನದೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರೂ, ಅದು ಕೇವಲ ಮೇಲ್ನೋಟದ ಕ್ರಮವಾಗಿದೆ. ಮೂಲ ಆರೋಪಗಳ ಬಗ್ಗೆ ಸಮಗ್ರ ತನಿಖೆ ನಡೆದಿಲ್ಲ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು. ಸಾರ್ವಜನಿಕರ ಆಕ್ರೋಶ ತಣಿಸಲು ಸರ್ಕಾರ ಎಸ್ಐಟಿ ರಚಿಸುವ ಸಾಧ್ಯತೆಯೂ ಇದೆ ಎಂದು ಅವರು ನ್ಯಾಯಾಲಯದ ಗಮನಕ್ಕೆ ತಂದರು.
ಕೆಪಿಎಸ್ಸಿ ವಿರುದ್ಧದ ಆರೋಪಗಳೇನು?
ಕೆಪಿಎಸ್ಸಿ ಅಧ್ಯಕ್ಷರಾಗಿದ್ದ ಶಿವಶಂಕರಪ್ಪ ಸಾಹುಕಾರ್ ಅವರು ನೇಮಕಾತಿ ಪ್ರಕ್ರಿಯೆಯಲ್ಲಿ ಹಿತಾಸಕ್ತಿ ಸಂಘರ್ಷ ಉಂಟುಮಾಡುವ ರೀತಿಯಲ್ಲಿ ವರ್ತಿಸಿ, ತಮ್ಮ ಇಬ್ಬರು ಪುತ್ರಿಯರ ಆಯ್ಕೆಗೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. ಅಲ್ಲದೆ, 3ಬಿ ಮೀಸಲಾತಿ ಪಡೆಯಲು ಅಗತ್ಯವಾಗಿರುವ ಆದಾಯ ಪ್ರಮಾಣಪತ್ರದಲ್ಲಿ ಅವರ ವಾರ್ಷಿಕ ಆದಾಯವನ್ನು ಕೇವಲ 40 ಸಾವಿರ ರೂಪಾಯಿ ಎಂದು ತೋರಿಸಲಾಗಿದೆ ಎಂಬ ಗಂಭೀರ ಆರೋಪವನ್ನೂ ಉಲ್ಲೇಖಿಸಲಾಗಿದೆ. ಪ್ರಕರಣದ ಮುಂದಿನ ವಿಚಾರಣೆ ಜುಲೈ 29ಕ್ಕೆ ನಿಗದಿಯಾಗಿದೆ.
ನವದೆಹಲಿ, ಜುಲೈ 22: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ನವದೆಹಲಿಯಲ್ಲಿ ಯುವಕರು ನಡೆಸುತ್ತಿರುವ ಪ್ರತಿಭಟನೆ 32 ನೇ ದಿನಕ್ಕೆ ಕಾಲಿಟ್ಟಿದೆ. ಈ ನಡುವೆ ದೆಹಲಿ ಹೈಕೋರ್ಟ್ ಆದೇಶದಂತೆ ಗುರುಗ್ರಾಮದ ಮೇದಾಂತ ಆಸ್ಪತ್ರೆಗೆ ದಾಖಲಾಗಿರುವ ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್(Sonam Wangchuk) ಅವರ ಆರೋಗ್ಯ ವಿಚಾರಿಸಲು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಮತ್ತು ಪಿಎಮ್ಒ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಮಂಗಳವಾರ ಮೇದಾಂತ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.
ಸಫ್ದರ್ಜಂಗ್ನಿಂದ ಮೇದಾಂತ ಆಸ್ಪತ್ರೆಗೆ ವಾಂಗ್ಚುಕ್ ಸ್ಥಳಾಂತರ
ಜೂನ್ 28 ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸೋನಮ್ ವಾಂಗ್ಚುಕ್ ಅವರ ಆರೋಗ್ಯ ಸ್ಥಿತಿ ಕ್ಷೀಣಿಸಿದ ಹಿನ್ನೆಲೆಯಲ್ಲಿ, ಅವರ ಪತ್ನಿ ಗೀತಾಂಜಲಿ ಆಂಗ್ಮೋ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ಸೂಚನೆಯ ಮೇರೆಗೆ ವಾಂಗ್ಚುಕ್ ಅವರನ್ನು ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಯಿಂದ ಗುರುಗ್ರಾಮದ ಮೇದಾಂತ ಆಸ್ಪತ್ರೆಗೆ ತಕ್ಷಣ ಭಾರಿ ಭದ್ರತೆಯ ನಡುವೆ ರವಾನಿಸಲಾಯಿತು.
ಹಿರಿಯ ವೈದ್ಯೆ ಡಾ. ಸುಶೀಲಾ ಕಟಾರಿಯಾ ಅವರ ಮೇಲ್ವಿಚಾರಣೆಯಲ್ಲಿ ವಾಂಗ್ಚುಕ್ ಅವರಿಗೆ ಮೇದಾಂತದ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಯ ಹಾಸಿಗೆಯಲ್ಲಿದ್ದರೂ ಅವರು ತಮ್ಮ ಉಪವಾಸ ಸತ್ಯಾಗ್ರಹವನ್ನು ಮುಂದುವರೆಸಿದ್ದಾರೆ.
ಇನ್ಮುಂದೆ ಸರ್ಕಾರಿ ಕಚೇರಿಗೆ ಹೋಗಿ ಮಾತುಕತೆ ನಡೆಸಲ್ಲ
ಸೋಮವಾರ ಸಂಸತ್ ಚಲೋ ವೇಳೆ ಪೋಲಿಸ್ ಲಾಠಿಚಾರ್ಜ್ ಮತ್ತು ನೂಕಾಟ ನಡೆದಿದ್ದರೂ, ಮಂಗಳವಾರ 5,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಬೆಂಬಲಿಗರು ಮತ್ತೆ ಜಂತರ್ ಮಂತರ್ ತಲುಪಿ ಪ್ರತಿಭಟನೆ ಮುಂದುವರೆಸಿದ್ದಾರೆ.
ಸಿಜೆಪಿ (CJP) ಸಂಸ್ಥಾಪಕ ಅಭಿಜೀತ್ ದೀಪ್ಕೆ ಮಾತನಾಡಿ, ‘‘ನಾವು ಇನ್ಮುಂದೆ ಸರ್ಕಾರದ ಸಚಿವರ ನಿವಾಸಕ್ಕೆ ಹೋಗಿ ಯಾವುದೇ ಮಾತುಕತೆ ನಡೆಸುವುದಿಲ್ಲ. ಚರ್ಚೆ ನಡೆಸಲು ಇಚ್ಛಿಸುವ ಯಾರೇ ನಾಯಕರಾಗಿದ್ದರೂ, ಅವರೇ ನಮ್ಮ ಪ್ರತಿಭಟನಾ ಸ್ಥಳವಾದ ಜಂತರ್ ಮಂತರ್ಗೆ ಬರಬೇಕು.” ಎಂದಿದ್ದಾರ5ಎ.
ಬೀದಿಯಿಂದ ಸಂಸತ್ತಿನವರೆಗೆ, ತೀವ್ರಗೊಂಡ ನೀಟ್ ವಿವಾದ
ಒಂದೆಡೆ ಜಂತರ್ ಮಂತರ್ನಲ್ಲಿ ಭಾರಿ ಪ್ರತಿಭಟನೆ ನಡೆಯುತ್ತಿದ್ದರೆ, ಮತ್ತೊಂದೆಡೆ ಸಂಸತ್ತಿನಲ್ಲಿ ವಿಪಕ್ಷಗಳು ಸರ್ಕಾರದ ವಿರುದ್ಧ ಸರಣಿ ವಾಗ್ದಾಳಿ ನಡೆಸುತ್ತಿವೆ. ವಿಪಕ್ಷಗಳ ನಾಯಕರು ಪ್ರಧಾನಿ ನರೇಂದ್ರ ಮೋದಿ ಅವರ ರಾಜೀನಾಮೆಗೆ ಆಗ್ರಹಿಸಿ ಧರಣಿ ನಡೆಸಿದ್ದಾರೆ. ಪರೀಕ್ಷಾ ಅಕ್ರಮ ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿರುವ ಕೇಂದ್ರ ಸರ್ಕಾರ, ವಿರೋಧ ಪಕ್ಷಗಳು ಈ ಸೂಕ್ಷ್ಮ ವಿಷಯವನ್ನು ರಾಜಕೀಯಗೊಳಿಸಿ ವಿದ್ಯಾರ್ಥಿಗಳನ್ನು ದಾರಿ ತಪ್ಪಿಸುತ್ತಿವೆ ಎಂದು ಪ್ರತ್ಯಾರೋಪ ಮಾಡಿದೆ.
ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ ‘ಲಕ್ಷ್ಮೀ ನಿವಾಸ’ ಈಗ ಅತ್ಯಂತ ರೋಚಕ ಹಂತಕ್ಕೆ ಬಂದು ತಲುಪಿದೆ. ಜಯಂತ್ ಹಾಗೂ ಜಾಹ್ನವಿ ಜೋಡಿಯ ಬದುಕಿನಲ್ಲಿ ಈಗ ದೊಡ್ಡ ಬಿರುಗಾಳಿಯೇ ಎದ್ದಿದೆ. ಇಷ್ಟು ದಿನ ಜಯಂತ್ನ ಅತಿಯಾದ ಪೊಸೆಸಿವ್ ಗುಣವನ್ನು ಸಹಿಸಿಕೊಂಡಿದ್ದ ಜಾಹ್ನವಿ, ಈಗ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾಳೆ. ಕೈ ಹಿಡಿದ ಗಂಡನ ಕೈಗೇ ತಾಳಿ ಬಿಚ್ಚಿಟ್ಟು ಆಕೆ ಮನೆಯಿಂದ ಹೊರನಡೆದಿದ್ದಾಳೆ.
ಪ್ರೋಮೋದಲ್ಲಿ ಏನಿದೆ?
ಧಾರಾವಾಹಿಯ ಹೊಸ ಪ್ರೋಮೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಪ್ರೇಕ್ಷಕರಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಜೀ ಕನ್ನಡ ವಾಹಿನಿ ತನ್ನ ಅಧಿಕೃತ ಪುಟದಲ್ಲಿ ಈ ಪ್ರೋಮೋ ಹಂಚಿಕೊಂಡಿದ್ದು, ಅದಕ್ಕೆ ನೀಡಿರುವ ಕ್ಯಾಪ್ಶನ್ ಕಥೆಯ ಗಾಂಭೀರ್ಯವನ್ನು ತಿಳಿಸುತ್ತಿದೆ.
‘ಕರುನಾಡು ಮೆಚ್ಚಿದ ಜೋಡಿಯ ಬದುಕಲ್ಲಿ ಬಿರುಗಾಳಿ. ಕೈ ಹಿಡಿದವನ ಕೈಗೇ ತಾಳಿ ಕೊಟ್ಟು ಹೊರಟ್ಲು ಚಿನ್ನುಮರಿ. ಮುರಿದು ಬಿತ್ತಾ ಏಳು ಜನ್ಮಗಳ ಜಯಂತ್- ಜಾಹ್ನವಿಯ ಬಂಧ?
ಅಂತ್ಯವಾಯ್ತಾ ಒಲವ ಸಾಕ್ಷಾತ್ಕಾರ’ ಎಂದು ಬರೆಯಲಾಗಿದೆ.
ಜಾಹ್ನವಿ ದಟ್ಟ ನಿರ್ಧಾರಕ್ಕೆ ಕಾರಣವೇನು?
ಜಯಂತ್ ಜಾಹ್ನವಿಯನ್ನು ಅಪಾರವಾಗಿ ಪ್ರೀತಿಸುತ್ತಿದ್ದರೂ ಆತನಲ್ಲಿ ಅತಿಯಾದ ಪೊಸೆಸಿವ್ನೆಸ್ ಇತ್ತು. ಆತನ ಈ ವರ್ತನೆಯಿಂದ ಬೇಸತ್ತು ಜಾಹ್ನವಿ ಒಮ್ಮೆ ಮನೆಯಿಂದ ತಪ್ಪಿಸಿಕೊಂಡು ಹೋಗಿದ್ದಳು. ಕಾಣೆಯಾಗಿದ್ದ ಅವಳನ್ನು ಜಯಂತ್ ಹೇಗೋ ಹುಡುಕಿಕೊಂಡು ಬಂದಿದ್ದ. ಆ ಬಳಿಕ ಜಯಂತ್ಗೆ ಬುದ್ಧಿ ಕಲಿಸಲು ಜಾಹ್ನವಿ ಆತನದೇ ಶೈಲಿಯಲ್ಲಿ ನಡೆದುಕೊಂಡು ಸರಿಯಾದ ತಿರುಗೇಟು ನೀಡಿದ್ದಳು.
ಆದರೆ ಜಯಂತ್ನ ಮಾನಸಿಕ ಕಿರುಕುಳ ಮತ್ತು ಪೊಸೆಸಿವ್ ಗುಣಕ್ಕೆ ಈಗ ಸಂಪೂರ್ಣ ಬ್ರೇಕ್ ಹಾಕಲು ನಿರ್ಧರಿಸಿರುವ ಜಾಹ್ನವಿ, ಹೆಣ್ಣಿನ ತಾಳ್ಮೆಗೂ ಒಂದು ಎಲೆಯಿದೆ ಎಂಬುದನ್ನು ತೋರಿಸಿದ್ದಾಳೆ. ಎಲ್ಲರ ಸಮ್ಮುಖದಲ್ಲೇ ತನ್ನ ಕೊರಳಿನ ತಾಳಿಯನ್ನು ಬಿಚ್ಚಿ ಜಯಂತ್ ಕೈಗೇ ಇಟ್ಟು ಅಲ್ಲಿಂದ ಹೊರಟಿದ್ದಾಳೆ.
ಈ ಜೋಡಿಯ ಸಂಸಾರದಲ್ಲಿ ಈಗ ಬಿರುಕು ಮೂಡಿದೆ. ಜಾಹ್ನವಿ ತಾಳಿ ಬಿಚ್ಚಿಕೊಟ್ಟಿರುವುದನ್ನು ನೋಡಿ ಜಯಂತ್ ಮಾತ್ರವಲ್ಲದೆ ಇಡೀ ಕುಟುಂಬವೇ ಶಾಕ್ ಆಗಿದೆ. ಜಯಂತ್ನ ಅತಿಯಾದ ಪ್ರೀತಿಯೇ ಈಗ ಇವರ ಸಂಸಾರ ಮುರಿಯಲು ಕಾರಣವಾಯಿತಾ? ಇವರಿಬ್ಬರ ನಡುವಿನ ಒಲವಿನ ಸಾಕ್ಷಾತ್ಕಾರ ಇಲ್ಲಿಗೆ ಅಂತ್ಯವಾಯಿತಾ? ಅಥವಾ ಜಯಂತ್ ತನ್ನ ತಪ್ಪನ್ನು ಅರಿತುಕೊಂಡು ಬದಲಾಗುತ್ತಾನಾ ಎಂಬುದನ್ನು ಮುಂದಿನ ಸಂಚಿಕೆಗಳಲ್ಲಿ ಕಾದು ನೋಡಬೇಕಿದೆ.
ದಳಪತಿ ವಿಜಯ್ ನಟನೆಯ ಬಹುನಿರೀಕ್ಷಿತ ‘ಜನ ನಾಯಗನ್’ ಸಿನಿಮಾ (Jana Nayagan Movie) ಜುಲೈ 23ರಂದು ವಿಶ್ವಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಇತ್ತೀಚೆಗಷ್ಟೇ ಈ ಸಿನಿಮಾ ಆನ್ಲೈನ್ನಲ್ಲಿ ಲೀಕ್ ಆಗುವ ಮೂಲಕ ಚಿತ್ರತಂಡಕ್ಕೆ ದೊಡ್ಡ ಆಘಾತ ನೀಡಿತ್ತು. ಆದರೆ, ಈ ಲೀಕ್ ವಿವಾದದ ಹೊರತಾಗಿಯೂ ಚಿತ್ರದ ಮೇಲಿರುವ ಕ್ರೇಜ್ ಕಮ್ಮಿಯಾಗಿಲ್ಲ. ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ದಾಖಲೆಯ ಓಪನಿಂಗ್ ಪಡೆಯುವುದು ಗ್ಯಾರಂಟಿ ಎಂದು ಟ್ರೇಡ್ ಅನಾಲಿಟಿಸ್ಟ್ ಮುನ್ಸೂಚನೆ ನೀಡಿದ್ದಾರೆ.
ಮೊದಲ ದಿನವೇ 100 ಕೋಟಿ ರೂಪಾಯಿ ಗಳಿಕೆ?
ಸಿನಿಮಾ ರಿಲೀಸ್ ಆದ ಬಳಿಕ ಲೀಕ್ ಆದರೂ ಅದು ಚಿತ್ರದ ಗಳಿಕೆಗೆ ತೊಂದರೆ ಆಗುತ್ತದೆ. ಹೀಗಿರುವಾಗ ರಿಲೀಸ್ ಆಗದೇ ಇರುವ ಸಿನಿಮಾ ಸೋರಿಕೆ ಆದರೆ ಕೇಳಬೇಕೇ? ಆದರೆ, ‘ಜನ ನಾಯಗನ್’ ಚಿತ್ರಕ್ಕೆ ಇದು ಸಮಸ್ಯೆ ಆಗುತ್ತಿಲ್ಲ ಎನ್ನಲಾಗಿದೆ. ಚಿತ್ರರಂಗದ ಪ್ರಮುಖ ಟ್ರ್ಯಾಕಿಂಗ್ ಸಂಸ್ಥೆಯಾದ ‘ಸ್ಯಾಕ್ನಿಲ್ಕ್’ ಪ್ರಕಾರ, ‘ಜನ ನಾಯಗನ್’ ಸಿನಿಮಾ ಮೊದಲ ದಿನವೇ ಭಾರತದಲ್ಲಿ ಬರೋಬ್ಬರಿ 50 ರಿಂದ 60 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ.
ಗ್ಲೋಬಲ್ ಬಾಕ್ಸ್ ಆಫೀಸ್ ಅಬ್ಬರ
ಇನ್ನು ವಿದೇಶಗಳಲ್ಲೂ ವಿಜಯ್ ಕ್ರೇಜ್ ಜೋರಾಗಿದೆ. ಅಮೆರಿಕ, ಯುಕೆ ಮತ್ತು ಗಲ್ಫ್ ರಾಷ್ಟ್ರಗಳಲ್ಲಿ ಪ್ರೀ-ಸೇಲ್ಸ್ ಭರ್ಜರಿಯಾಗಿ ನಡೆಯುತ್ತಿದೆ. ಹೀಗಾಗಿ ಮೊದಲ ದಿನವೇ ವಿಶ್ವಾದ್ಯಂತ ಈ ಸಿನಿಮಾ 100 ಕೋಟಿ ರೈಪಾಯಿಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.
ಮುಂಗಡ ಟಿಕೆಟ್ ಬುಕಿಂಗ್
ಸಿನಿಮಾ ರಿಲೀಸ್ ಆಗುವ ಮುನ್ನವೇ ಗ್ಲೋಬಲ್ ಅಡ್ವಾನ್ಸ್ ಬುಕಿಂಗ್ ಮೂಲಕ 40 ಕೋಟಿ ರೂಪಾಯಿಗೂ ಅಧಿಕ ಹಣ ಬಾಚಿಕೊಂಡಿದೆ. ತಮಿಳುನಾಡು, ಕರ್ನಾಟಕ ಹಾಗೂ ಓವರ್ಸೀಸ್ ಮಾರುಕಟ್ಟೆಯಲ್ಲಿ ಟಿಕೆಟ್ಗಾಗಿ ಭಾರಿ ಪೈಪೋಟಿ ನಡೆಯುತ್ತಿದೆ.
ವಿಜಯ್ ಅವರ ಕೊನೆಯ ಸಿನಿಮಾ ಇದಾಗಿರುವುದರಿಂದ ಚಿತ್ರಕ್ಕಿರುವ ಡಿಮ್ಯಾಂಡ್ ಹೆಚ್ಚಿದೆ. ಇದನ್ನು ಮನಗಂಡು ನಿರ್ಮಾಪಕರು ಪ್ರಪಂಚದಾದ್ಯಂತ ಬರೋಬ್ಬರಿ 7,000 ದಿಂದ 8,000 ಸ್ಕ್ರೀನ್ಗಳಲ್ಲಿ ಬಿಡುಗಡೆ ಮಾಡಲು ಪ್ಲಾನ್ ಮಾಡಿದ್ದಾರೆ.
ಪಾತ್ರವರ್ಗದ ವಿವರ
ವಿಜಯ್ಗೆ ಜೋಡಿಯಾಗಿ ಪೂಜಾ ಹೆಗ್ಡೆ ನಟಿಸಿದ್ದರೆ, ಬಾಬಿ ಡಿಯೋಲ್, ಮಮಿತಾ ಬೈಜು, ಗೌತಮ್ ವಾಸುದೇವ್ ಮೆನನ್, ಪ್ರಕಾಶ್ ರಾಜ್, ಪ್ರಿಯಾಮಣಿ, ನರೇನ್ ಮತ್ತು ನಾಸರ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಚಿತ್ರಕ್ಕೆ ರಾಕ್ಸ್ಟಾರ್ ಅನಿರುದ್ಧ್ ರವಿಚಂದರ್ ಸಂಗೀತ ನೀಡಿದ್ದಾರೆ. ಲೀಕ್ ಕಾಟದ ನಡುವೆಯೂ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಹೊಸ ಇತಿಹಾಸ ಸೃಷ್ಟಿಸಲಿದೆಯೇ ಎಂದು ಕಾದು ನೋಡಬೇಕಿದೆ.
ನವದೆಹಲಿ, ಜುಲೈ 22: ದೆಹಲಿಯ ಜಂತರ್ ಮಂತರ್ನಲ್ಲಿ ತಡರಾತ್ರಿ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ತೀವ್ರ ಘರ್ಷಣೆ ನಡೆದಿದೆ. ಮಧ್ಯರಾತ್ರಿಯವರೆಗೂ ಮುಂದುವರೆದ ಈ ಜಟಾಪಟಿಯಲ್ಲಿ, ಪ್ರತಿಭಟನಾ ನಿರತ ಯುವಕರು ಆರ್ಎಎಫ್ ಸಿಬ್ಬಂದಿಯನ್ನೇ ಅಟ್ಟಾಡಿಸಿ ಹಲ್ಲೆ ನಡೆಸಿದ್ದಾರೆ.. ಕೆಲವರು ಆರ್ಎಎಫ್ ಸಿಬ್ಬಂದಿಯನ್ನು ನೆಲಕ್ಕೆ ಕೆಡವಿ ಕಾಲಿನಲ್ಲಿ ಒದ್ದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಈ ಘಟನೆ ಜಂತರ್ ಮಂತರ್ನಲ್ಲಿ ರಾತ್ರಿಯಿಡೀ ಕೋಲಾಹಲಕ್ಕೆ ಕಾರಣವಾಯಿತು.
ಸಂಸದ್ ಚಲೋ ಪ್ರತಿಭಟನೆಯ ಭಾಗವಾಗಿ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸಲಾಗುತ್ತಿತ್ತು. ಸೋನಂ ವಾಂಗ್ಚುಕ್ ಅವರ ಉಪವಾಸ ಸತ್ಯಾಗ್ರಹ ಮತ್ತು ನೀಟ್ ಪರೀಕ್ಷಾ ಪೇಪರ್ ಸೋರಿಕೆ ಹಗರಣದಂತಹ ವಿಷಯಗಳ ಕುರಿತು ಪ್ರತಿಭಟನಾಕಾರರು ಧ್ವನಿ ಎತ್ತುತ್ತಿದ್ದರು. ಘರ್ಷಣೆ ವಿಕೋಪಕ್ಕೆ ತಿರುಗುತ್ತಿದ್ದಂತೆ, ಭದ್ರತಾ ಪಡೆ ಕೂಡಾ ಪ್ರತಿಭಟನಾಕಾರರ ಮೇಲೆ ಹಲ್ಲೆ ನಡೆಸಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಯಿತು. ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವುದನ್ನು ತಡೆಯಲು ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ಸ್ಥಳಕ್ಕೆ ನಿಯೋಜಿಸಲಾಯಿತು. ಈ ಘಟನೆ ಜಂತರ್ ಮಂತರ್ನಲ್ಲಿ ಉದ್ವಿಗ್ನ ವಾತಾವರಣವನ್ನು ಸೃಷ್ಟಿಸಿತು.
ಬಾಲಿವುಡ್ (Bollywood) ಮತ್ತು ದಕ್ಷಿಣ ಭಾರತದ ಚಿತ್ರರಂಗದ ನಡುವೆ ಹೋಲಿಕೆ ಇಂದಿನದೇನಲ್ಲ. ಸೌತ್ ಸಿನಿಮಾಗಳ ಮೇಕಿಂಗ್, ಕಥೆ ಮತ್ತು ನಿರ್ದೇಶನದ ಶಿಸ್ತನ್ನು ನೋಡಿ ಬಾಲಿವುಡ್ನವರು ಕಲಿಯಬೇಕಾದದ್ದು ತುಂಬಾನೇ ಇದೆ ಎಂದು ಸಿನಿಪ್ರಿಯರು ಮಾತನಾಡಿಕೊಳ್ಳುತ್ತಿರುತ್ತಾರೆ. ಇದೀಗ ಇದೇ ವಿಷಯವಾಗಿ ಸೌತ್ ಹಾಗೂ ನಾರ್ತ್ ಎರಡೂ ಕಡೆ ನಟಿಸಿ ಸೈ ಎನಿಸಿಕೊಂಡಿರುವ ಸ್ಟಾರ್ ನಟಿ ಕಾಜಲ್ ಅಗರ್ವಾಲ್ ಮುಕ್ತವಾಗಿ ಮಾತನಾಡಿದ್ದಾರೆ. ಅಷ್ಟೇ ಅಲ್ಲದೆ, ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಅವರ ಕೆಟ್ಟ ಅಭ್ಯಾಸವೊಂದನ್ನು ರಿವೀಲ್ ಮಾಡಿದ್ದಾರೆ.
ಬಾಲಿವುಡ್ಗಿಂತ ಸೌತ್ ಇಂಡಸ್ಟ್ರಿನೇ ಬೆಸ್ಟ್ ಅಂದಿದ್ದೇಕೆ ಕಾಜಲ್?
ಇತ್ತೀಚೆಗೆ ಶುಭಂಕರ್ ಮಿಶ್ರಾ ಅವರಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಕಾಜಲ್ ಅಗರ್ವಾಲ್, ಹಿಂದಿ ಚಿತ್ರರಂಗದಲ್ಲಿ ಎಲ್ಲಿ ಎಡವುತ್ತಿದ್ದಾರೆ ಎಂಬುದನ್ನು ವಿವರವಾಗಿ ಹಂಚಿಕೊಂಡಿದ್ದಾರೆ.
‘ಮೊದಲನೆಯದಾಗಿ ಬಾಲಿವುಡ್ನವರು ದಕ್ಷಿಣ ಭಾರತದ ಚಿತ್ರರಂಗದಿಂದ ಸಮಯಪಾಲನೆ ಕಲಿಯಬೇಕು. ಹಿಂದಿ ಚಿತ್ರರಂಗದಲ್ಲಿ ಸರಿಯಾದ ಸಮಯ ಪ್ರಜ್ಞೆಯೇ ಇರುವುದಿಲ್ಲ. ಆದರೆ ಸೌತ್ನಲ್ಲಿ ಪ್ರತಿಯೊಂದೂ ಸಮಯಕ್ಕೆ ಸರಿಯಾಗಿ ನಡೆಯುತ್ತದೆ. ನಾನು ಕೆಲಸದ ವಿಷಯದಲ್ಲಿ ಶಿಸ್ತು ಮತ್ತು ಸಮಯಪಾಲನೆಯನ್ನು ಇಷ್ಟಪಡುತ್ತೇನೆ. ಆದರೆ ಬಾಲಿವುಡ್ನಲ್ಲಿ ಇದು ಕಾಣಿಸುವುದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸಲ್ಮಾನ್ ಖಾನ್ಗಾಗಿ ಸೆಟ್ನಲ್ಲೇ ಜಿಮ್ ಮಾಡ್ತಿದ್ದೆ
ಯಾವುದಾದರೂ ನಟನಿಗಾಗಿ ನೀವು ಶೂಟಿಂಗ್ ಸೆಟ್ನಲ್ಲಿ ಗಂಟೆಗಟ್ಟಲೆ ಕಾಯಬೇಕಾಗಿ ಬಂದಿತ್ತೇ? ಎಂಬ ಪ್ರಶ್ನೆಗೆ ಕಾಜಲ್ ನೇರವಾಗಿ ಸಲ್ಮಾನ್ ಖಾನ್ ಹೆಸರನ್ನು ಹೇಳಿದ್ದಾರೆ.
‘ಸಲ್ಮಾನ್ ಖಾನ್ ಶೂಟಿಂಗ್ಗೆ ಬರುವುದು ತಡವಾಗುತ್ತಿತ್ತು. ಅವರು ಮಧ್ಯಾಹ್ನ ಅಥವಾ ಸಂಜೆ ಸೆಟ್ಗೆ ಬರುತ್ತಿದ್ದರು. ಸೌತ್ನ ಶಿಸ್ತು ಮತ್ತು ಸಮಯಪಾಲನೆಗೆ ಒಗ್ಗಿಕೊಂಡಿದ್ದ ನನಗೆ ಇದು ತುಂಬಾ ಆಶ್ಚರ್ಯ ತಂದಿತ್ತು. ಅವರು ಬರುವವರೆಗೂ ಕಾಯಬೇಕಿದ್ದರಿಂದ, ನಾನು ಶೂಟಿಂಗ್ ಸೆಟ್ನಲ್ಲೇ ಜಿಮ್ ಮಾಡಿಕೊಂಡು ಸಮಯ ಕಳೆಯುತ್ತಿದ್ದೆ’ ಎಂದು ಕಾಜಲ್ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ಇದೇ ವೇಳೆ, ಇತ್ತೀಚಿನ ದಿನಗಳಲ್ಲಿ ಚಿತ್ರರಂಗದಲ್ಲಿ ನಾಯಕಿಯರಿಗೂ ಪ್ರಾಮುಖ್ಯತೆ ಇರುವ ಮತ್ತು ನಟಿಸಲು ಹೆಚ್ಚಿನ ಅವಕಾಶವಿರುವ ಗಟ್ಟಿ ಪಾತ್ರಗಳು ಸೃಷ್ಟಿಯಾಗುತ್ತಿವೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.
ಗಂಟೆಗಟ್ಟಲೆ ಓದಿದರೂ ಪರೀಕ್ಷೆಯಲ್ಲಿ ನೆನಪಾಗದಿರುವುದು, ಆಫೀಸ್ ಕೆಲಸದಲ್ಲಿ ಪ್ರಮುಖ ಮಾಹಿತಿ ಮರೆಯುವುದು ಹಾಗೂ ಏಕಾಗ್ರತೆಯ ಕೊರತೆ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಆಧುನಿಕ ಜೀವನಶೈಲಿ ಮತ್ತು ಒತ್ತಡವೇ ಇದಕ್ಕೆ ಪ್ರಮುಖ ಕಾರಣ. ಇಂತಹ ಸಮಯದಲ್ಲಿ ಸನಾತನ ಸಂಪ್ರದಾಯದಲ್ಲಿ ಜ್ಞಾನ, ಸ್ಮರಣಶಕ್ತಿ ಮತ್ತು ಬುದ್ಧಿವಂತಿಕೆಯ ಸಂಕೇತವಾದ ‘ಶ್ರೀ ಲಕ್ಷ್ಮಿ ಹಯಗ್ರೀವ ಸ್ವಾಮಿ’ ಆರಾಧನೆಗೆ ವಿಶೇಷ ಮಹತ್ವವಿದೆ.
ಹಯಗ್ರೀವ ಅವತಾರದ ಹಿನ್ನೆಲೆ:
ಪುರಾಣಗಳ ಪ್ರಕಾರ, ರಾಕ್ಷಸರು ವೇದಗಳನ್ನು ಕದ್ದು ಜಗತ್ತನ್ನು ಅಜ್ಞಾನಕ್ಕೆ ತಳ್ಳಿದಾಗ, ಶ್ರೀಮನ್ನಾರಾಯಣನು ಕುದುರೆಯ ಮುಖ ಮತ್ತು ಮಾನವ ದೇಹದ ‘ಹಯಗ್ರೀವ’ ರೂಪ ತಾಳಿ ರಾಕ್ಷಸರನ್ನು ಸಂಹರಿಸಿ ವೇದಗಳನ್ನು ಮರಳಿ ತಂದನು. ನಂತರ ಲಕ್ಷ್ಮಿ ದೇವಿಯು ಅವನನ್ನು ಸಮಾಧಾನಪಡಿಸಿದಳು. ಅಂದಿನಿಂದ ಜ್ಞಾನ ಮತ್ತು ಐಶ್ವರ್ಯವನ್ನು ಕರುಣಿಸುವ ‘ಶ್ರೀ ಲಕ್ಷ್ಮಿ ಹಯಗ್ರೀವ’ನನ್ನು ಪೂಜಿಸಲಾಗುತ್ತದೆ.
ಗುರುವಾರದ ಪೂಜಾ ವಿಧಾನ:
ಹಯಗ್ರೀವ ದೇವರ ಆರಾಧನೆಗೆ ಗುರುವಾರ ಅತ್ಯಂತ ಶುಭ ದಿನ. ಬೆಳಿಗ್ಗೆ ಸ್ನಾನ ಮಾಡಿ, ದೀಪ ಹಚ್ಚಿ, ಹಳದಿ ಅಥವಾ ಬಿಳಿ ಹೂವುಗಳಿಂದ ಪೂಜಿಸಬೇಕು. ಪುಸ್ತಕಗಳನ್ನು ಸ್ವಾಮಿಯ ಮುಂದಿಟ್ಟು ಆಶೀರ್ವಾದ ಪಡೆಯುವುದು ಶುಭ. ಏಲಕ್ಕಿ ಹಾರ ಅರ್ಪಿಸುವುದು ಹಾಗೂ ಸಿಹಿ ನೈವೇದ್ಯ ನೀಡುವುದು ವಿಶೇಷ ಫಲ ನೀಡುತ್ತದೆ.
ಬೆಂಗಳೂರು, ಜುಲೈ 22: ಮೆಟ್ರೋ ಸಿಟಿ ಬೆಂಗಳೂರಿನ ಸಾರಿಗೆ ವ್ಯವಸ್ಥೆಗೆ ಹೊಸ ರೂಪ ನೀಡಲು ಮತ್ತು ಟ್ರಾಫಿಕ್ ಸಮಸ್ಯೆಯಿಂದ ಜನರನ್ನು ಮುಕ್ತರನ್ನಾಗಿಸಲು ರೈಲ್ವೆ ಇಲಾಖೆ ಮಹತ್ವದ ಹೆಜ್ಜೆಯೊಂದನ್ನು ಇಟ್ಟಿದೆ. ನಮ್ಮ ಮೆಟ್ರೋ (Namma Metro) ಹಳದಿ ಮಾರ್ಗದಲ್ಲಿ ರಾಗಿಗುಡ್ಡದಿಂದ ಸಿಲ್ಕ್ ಬೋರ್ಡ್ವರೆಗೆ ಈಗಾಗಲೇ ನಿರ್ಮಿಸಲಾಗಿರುವ ಡಬಲ್ ಡೆಕ್ಕರ್ ಫ್ಲೈ ಓವರ್ ಮಾದರಿಯಲ್ಲೇ, ಇದೀಗ ಬೆಂಗಳೂರು ಉಪನಗರ ರೈಲು ಯೋಜನೆಯಿಂದಲೂ (BSRP) ಡಬಲ್ ಡೆಕ್ಕರ್ ಕಾಮಗಾರಿ ಆರಂಭಿಸಲು ಯೋಜನೆ ರೂಪಿಸಲಾಗಿದೆ.
199 ಕೋಟಿ ರೂ. ವೆಚ್ಚದಲ್ಲಿ 1.2 ಕಿ.ಮೀ ಉದ್ದದ ಕಾರಿಡಾರ್
ಸಬ್ ಅರ್ಬನ್ ರೈಲು ಯೋಜನೆಯನ್ನು ಅನುಷ್ಠಾನಗೊಳಿಸುತ್ತಿರುವ ‘ಕೆ-ರೈಡ್’ (K-RIDE) ಸಂಸ್ಥೆಯು ಬೈಯಪ್ಪನಹಳ್ಳಿಯಿಂದ ಚಿಕ್ಕಬಾಣಾವರ ಸಂಪರ್ಕಿಸುವ ‘ಮಲ್ಲಿಗೆ’ (ಕಾರಿಡಾರ್-2) ಮಾರ್ಗದಲ್ಲಿ ಈ ವಿಶಿಷ್ಟ ಯೋಜನೆಯನ್ನು ಜಾರಿಗೆ ತರುತ್ತಿದೆ. ನಗರದ ಮತ್ತಿಕೆರೆಯ ಶ್ಯಾಮ್ ಪ್ರಸಾದ್ ಮುಖರ್ಜಿ ಮೇಲ್ಸೇತುವೆ ರಸ್ತೆ ಭಾಗದಲ್ಲಿ ಸುಮಾರು 1.2 ಕಿಲೋಮೀಟರ್ ವಿಸ್ತೀರ್ಣದಲ್ಲಿ ₹199 ಕೋಟಿ ವೆಚ್ಚದಲ್ಲಿ ಈ ಡಬಲ್ ಡೆಕ್ಕರ್ ಫ್ಲೈ ಓವರ್ ನಿರ್ಮಾಣವಾಗಲಿದೆ.
ಕೆಳಭಾಗದಲ್ಲಿ ಸಾಮಾನ್ಯ ರಸ್ತೆ ಸಂಚಾರ, ಮೊದಲ ಹಂತದಲ್ಲಿ ವಾಹನಗಳ ಸಂಚಾರಕ್ಕೆ ಮೇಲ್ಸೇತುವೆ ಮತ್ತು ಎರಡನೇ ಹಂದಲ್ಲಿ ಸಬ್ ಅರ್ಬನ್ ರೈಲುಗಳ ಸಂಚಾರಕ್ಕಾಗಿ ಎಲಿವೇಟೆಡ್ ಕಾರಿಡಾರ್ ಸೇರಿ ತಂತ್ರಜ್ಞಾನ ಆಧಾರಿತ ಫ್ಲೈ ಓವರ್ನಲ್ಲಿ 3 ಹಂತದ ಸಂಚಾರ ವ್ಯವಸ್ಥೆ ಇರಲಿದೆ.
ಪ್ರಮುಖ ನಿಲ್ದಾಣಗಳು
ಬೈಯಪ್ಪನಹಳ್ಳಿಯಿಂದ ಚಿಕ್ಕಬಾಣಾವರದವರೆಗಿನ ಈ ‘ಮಲ್ಲಿಗೆ’ ಮಾರ್ಗವು ಒಟ್ಟು 24.86 ಕಿಲೋಮೀಟರ್ ಉದ್ದವಿದ್ದು, ಮಾರ್ಗದುದ್ದಕ್ಕೂ ಚಿಕ್ಕಬಾಣಾವರ, ಮ್ಯಾದರಹಳ್ಳಿ, ಶೆಟ್ಟಿಹಳ್ಳಿ, ಜಾಲಹಳ್ಳಿ, ಯಶವಂತಪುರ, ಲೊಟ್ಟೆಗೊಲ್ಲಹಳ್ಳಿ, ಹೆಬ್ಬಾಳ, ಕನಕ ನಗರ, ನಾಗವಾರ, ಕಾವೇರಿ ನಗರ, ಬಾಣಸವಾಡಿ, ಸೇವಾ ನಗರ, ಕಸ್ತೂರಿ ನಗರ ಹಾಗೂ ಬೈಯಪ್ಪನಹಳ್ಳಿ ಸೇರಿದಂತೆ 14 ಪ್ರಮುಖ ನಿಲ್ದಾಣಗಳನ್ನು ಹೊಂದಿರಲಿದೆ.
ಸಾರ್ವಜನಿಕರು ಹೇಳುವುದೇನು?
ಪ್ರತಿದಿನ ಬೆಂಗಳೂರು ನಗರಕ್ಕೆ ಸುಮಾರು 3,000ಕ್ಕೂ ಹೆಚ್ಚು ಹೊಸ ವಾಹನಗಳು ಸೇರ್ಪಡೆಯಾಗುತ್ತಿವೆ. ಇದರಿಂದಾಗಿ ನಗರದಲ್ಲಿ ಎಷ್ಟೇ ಮೇಲ್ಸೇತುವೆಗಳನ್ನು ನಿರ್ಮಿಸಿದರೂ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಸಿಗುತ್ತಿಲ್ಲ ಎಂದು ಸಾರ್ವಜನಿಕರು ಮತ್ತು ವಾಹನ ಸವಾರರು ಅಳಲು ತೋಡಿಕೊಳ್ಳುತ್ತಿದ್ದಾರೆ.
ಯಶವಂತಪುರ ಹಾಗೂ ಮತ್ತಿಕೆರೆ ಭಾಗದಲ್ಲಿ ಪ್ರತಿದಿನ ಉಂಟಾಗುವ ತೀವ್ರ ಟ್ರಾಫಿಕ್ ಸಮಸ್ಯೆಗೆ ಈ ಡಬಲ್ ಡೆಕ್ಕರ್ ಫ್ಲೈ ಓವರ್ ಮುಕ್ತಿ ನೀಡಲಿದೆಯೇ ಹಾಗೂ ಸಾರ್ವಜನಿಕ ಸಾರಿಗೆಗೆ ಹೊಸ ವೇಗ ನೀಡಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ