ಲಂಡನ್‌ನಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್‌ ಭಾಷಣಕ್ಕೆ ಅಡ್ಡಿ: ತೀವ್ರ ಆಕ್ರೋಶ ಹೊರಹಾಕಿದ ಹೈಕಮಿಷನ್! – Kannada News

ಸುಪ್ರೀಂ ಕೋರ್ಟ್​ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ Image Credit source: India Today

ನವದೆಹಲಿ, ಜೂನ್ 06: ಲಂಡನ್‌ನಲ್ಲಿ ಸುಪ್ರೀಂ ಕೋರ್ಟ್​ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ ಅವರು ಭಾಗವಹಿಸಿದ್ದ ಕಾರ್ಯಕ್ರಮವೊಂದರಲ್ಲಿ ಕೆಲವರು ಗದ್ದಲ ಸೃಷ್ಟಿಸಿ, ಅಡ್ಡಿಪಡಿಸಿರುವ ಘಟನೆ ನಡೆದಿದೆ. ಈ ವರ್ತನೆಯನ್ನು ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್ (ರಾಯಭಾರ ಕಚೇರಿ) ತೀವ್ರವಾಗಿ ಖಂಡಿಸಿದೆ. ಇದು ಸಭ್ಯತೆಯಿಂದ ಕೂಡಿದ ನಡವಳಿಕೆಯಲ್ಲ. ಗೌರವಾನ್ವಿತ ಕಾರ್ಯಕ್ರಮಗಳಲ್ಲಿ ಇಂತಹ ವರ್ತನೆಗಳನ್ನು ಒಪ್ಪಲು ಸಾಧ್ಯವಿಲ್ಲ. ಯಾವುದೇ ಭಿನ್ನಾಭಿಪ್ರಾಯಗಳಿದ್ದರೂ ಅವುಗಳನ್ನು ಶಾಂತಿಯುತ ಮತ್ತು ಗೌರವಾನ್ವಿತ ರೀತಿಯಲ್ಲಿ ವ್ಯಕ್ತಪಡಿಸಬೇಕು ಎಂದು ಹೈಕಮಿಷನ್ ತನ್ನ X ಖಾತೆಯಲ್ಲಿ ತಿಳಿಸಿದೆ.

ಮುಖ್ಯಾಂಶಗಳು

  • ಲಂಡನ್‌ನಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಕಾರ್ಯಕ್ರಮಕ್ಕೆ ಅಡ್ಡಿ.
  • ಭಾರತದಲ್ಲಿ ಭಿನ್ನಾಭಿಪ್ರಾಯ ಹತ್ತಿಕ್ಕುವಿಕೆ ಮತ್ತು ‘ಕಾಕ್ರೋಚ್’ ಹೇಳಿಕೆ ಕುರಿತು ಪ್ರಶ್ನಿಸಿದ ಮಹಿಳೆ.
  • ಗದ್ದಲದ ವರ್ತನೆಯನ್ನು ತೀವ್ರವಾಗಿ ಖಂಡಿಸಿದ ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್.

ಅಸಲಿಗೆ ಲಂಡನ್‌ನಲ್ಲಿ ಆಗಿದ್ದೇನು?

ಜೂನ್ 4 ರಂದು ಲಂಡನ್‌ನ ಬರ್ಕ್‌ಬೆಕ್ ಕಾಲೇಜಿನಲ್ಲಿ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ‘ಕೃತಕ ಬುದ್ಧಿಮತ್ತೆ (AI) ಮತ್ತು ಅಂತರರಾಷ್ಟ್ರೀಯ ಕಾನೂನು’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡುತ್ತಿದ್ದರು. ಈ ವೇಳೆ ಪ್ರಶ್ನೋತ್ತರ ಅವಧಿಯಲ್ಲಿ ಸಾರ್ವಜನಿಕರಲ್ಲಿದ್ದ ಕೆಲವರು, ಭಾರತದಲ್ಲಿ ವಿರೋಧದ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ ಎಂದು ಆರೋಪಿಸಿ ಪ್ರಶ್ನೆ ಕೇಳಲು ಆರಂಭಿಸಿದರು. ಅಲ್ಲದೆ, ನ್ಯಾಯಮೂರ್ತಿಗಳು ಇತ್ತೀಚೆಗೆ ನೀಡಿದ್ದ ಕಾಕ್ರೋಚ್ ಹೇಳಿಕೆಯ ಕುರಿತೂ ಪ್ರಶ್ನಿಸಲು ಯತ್ನಿಸಿದರು.

ಆಗ ಕಾರ್ಯಕ್ರಮದ ಸಂಘಟಕರು ಮತ್ತು ನಿರೂಪಕರು ಮಧ್ಯಪ್ರವೇಶಿಸಿ, ಈ ಪ್ರಶ್ನೆಗಳು ಇಂದಿನ ವಿಷಯಕ್ಕೆ ಸಂಬಂಧಿಸಿದ್ದಲ್ಲ ಎಂದು ಹೇಳಿ ಆ ಪ್ರಶ್ನೆಗಳನ್ನು ಅಲ್ಲಗಳಿದರು. ಈ ಘಟನೆಯ ವಿಡಿಯೋಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ.

ವೈರಲ್ ವಿಡಿಯೋದಲ್ಲೇನಿದೆ?

ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳೆಯೊಬ್ಬರು, ಭಾರತದಲ್ಲಿ ಸರ್ಕಾರದ ನಿಲುವುಗಳನ್ನು ವಿರೋಧಿಸುವವರನ್ನು ಹತ್ತಿಕ್ಕಲಾಗುತ್ತಿದೆ ಎಂದು ದೇಶದ ಮತ್ತು ಜಾಗತಿಕ ಕಾನೂನು ತಜ್ಞರು ಕಳವಳ ವ್ಯಕ್ತಪಡಿಸುತ್ತಿದ್ದಾರೆ ಎಂದು ಪ್ರಶ್ನೆ ಕೇಳುತ್ತಿರುವುದು ಕಂಡುಬಂದಿದೆ. ಈ ಒಂದು ಅಸಹಿಷ್ಣುತೆ ನ್ಯಾಯಾಧೀಶರ ಭಾಷಣದಲ್ಲೂ ಸ್ಪಷ್ಟವಾಗಿ ಎದ್ದು ಕಾಣುತ್ತಿದೆ ಎಂದಿದ್ದಾರೆ. ಆದರೆ ತಕ್ಷಣವೇ ನಿರೂಪಕರು, ಕ್ಷಮಿಸಿ, ಇಂದಿನ ವಿಷಯ ಕೃತಕ ಬುದ್ಧಿಮತ್ತೆಗೆ ಸಂಬಂಧಿಸಿದ್ದಾಗಿದೆ. ಹಾಗಾಗಿ ಈ ಪ್ರಶ್ನೆಯನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಮೈಕ್ ಕಟ್ ಮಾಡಿದ್ದಾರೆ.

ಕೃತಕ ಬುದ್ಧಿಮತ್ತೆ (AI) ಬಗ್ಗೆ ಸಿಜೆಐ ಹೇಳಿದ್ದೇನು?

ಇದಕ್ಕೂ ಮುನ್ನ ಭಾಷಣ ಮಾಡಿದ್ದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು, ಕೃತಕ ಬುದ್ಧಿಮತ್ತೆಯು ಆಡಳಿತ, ನ್ಯಾಯಾಂಗ ಮತ್ತು ಸಂವಹನ ವ್ಯವಸ್ಥೆಯನ್ನು ಸಂಪೂರ್ಣವಾಗಿ ಬದಲಾಯಿಸುತ್ತಿದೆ. ತಂತ್ರಜ್ಞಾನ ಎಷ್ಟೇ ಬೆಳೆದರೂ ಅದು ಸಂವಿಧಾನದ ಮೌಲ್ಯಗಳು, ಪ್ರಜಾಪ್ರಭುತ್ವ ಮತ್ತು ಮಾನವನ ಘನತೆಗೆ ಬದ್ಧವಾಗಿರಬೇಕು ಎಂದು ಒತ್ತಿ ಹೇಳಿದ್ದರು. ತಂತ್ರಜ್ಞಾನ ಮತ್ತು ಮಾನವ ಸ್ವಾತಂತ್ರ್ಯದ ನಡುವಿನ ಸಂಬಂಧವನ್ನು ಮುಂಬರುವ ದಿನಗಳು ನಿರ್ಧರಿಸಲಿವೆ ಎಂದು ಅವರು ತಿಳಿಸಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

KCET Results 2026: ಕೆಸಿಇಟಿ ಫಲಿತಾಂಶ ಪ್ರಕಟ, ಸಚಿವರ ಸುದ್ದಿಗೋಷ್ಠಿ ನೇರಪ್ರಸಾರ – Kannada News

ಬೆಂಗಳೂರು, ಜೂನ್ 06: ರಾಜ್ಯದಾದ್ಯಂತ ಇಂಜಿನಿಯರಿಂಗ್, ಫಾರ್ಮಸಿ, ಕೃಷಿ ವಿಜ್ಞಾನ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ಬರೆದಿದ್ದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (KCET) ಫಲಿತಾಂಶ ಇಂದು (ಜೂನ್ 6) ಪ್ರಕಟವಾಗಲಿದೆ. ಈ ಹಿನ್ನೆಲೆ ಉನ್ನತ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಅವರು ಅಧಿಕೃತ ಸುದ್ದಿಗೋಷ್ಠಿ ನಡೆಸಿ ಫಲಿತಾಂಶವನ್ನು ಬಿಡುಗಡೆ ಮಾಡುತ್ತಿದ್ದಾರೆ. ರಾಜ್ಯದ ಸುಮಾರು 3 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ಧರಿಸುವ ಈ ಫಲಿತಾಂಶವು ಮಧ್ಯಾಹ್ನ 2 ಗಂಟೆಯಿಂದ ವಿದ್ಯಾರ್ಥಿಗಳಿಗೆ ಆನ್‌ಲೈನ್‌ನಲ್ಲಿ ಲಭ್ಯವಾಗಲಿದೆ. ಸಚಿವರ ಜಂಟಿ ಸುದ್ದಿಗೋಷ್ಠಿಯ ನೇರಪ್ರಸಾರ ಇಲ್ಲಿದೆ.

ಶಿಕ್ಷಣಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗಿದ ಬಾಬಿ ಡಿಯೋಲ್ ‘ಬಂದರ್’; ಮೊದಲ ದಿನ ಲಕ್ಷಗಳಲ್ಲಿ ಗಳಿಕೆ – Kannada News

ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ಹಾಗೂ ಬಾಲಿವುಡ್ ನಟ ಬಾಬಿ ಡಿಯೋಲ್ ಕಾಂಬಿನೇಷನ್‌ನ ‘ಬಂದರ್’ ಚಿತ್ರ (Bandar Movie) ಶುಕ್ರವಾರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಆದರೆ, ಈ ಇಬ್ಬರು ದಿಗ್ಗಜರ ಮೊದಲ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ತೀವ್ರ ನಿರಾಶಾದಾಯಕ ಪ್ರತಿಕ್ರಿಯೆ ಪಡೆದುಕೊಂಡಿದೆ. ಬಾಕ್ಸ್ ಆಫೀಸ್ ಟ್ರ್ಯಾಕರ್ ಸಾಕ್ನಿಲ್ಕ್ ಪ್ರಕಾರ, ಚಿತ್ರವು ತನ್ನ ಮೊದಲ ದಿನ ದೇಶಾದ್ಯಂತ ಕೇವಲ 50 ಲಕ್ಷ ನೆಟ್ ಕಲೆಕ್ಷನ್ ಮಾಡಿದ್ದು, ಕನಿಷ್ಠ 1 ಕೋಟಿ ರೂಪಾಯಿ ಗಡಿ ದಾಟಲು ಕೂಡ ವಿಫಲವಾಗಿದೆ. ಚಿತ್ರದ ಒಟ್ಟು ಗ್ರಾಸ್ ಗಳಿಕೆ 60 ಲಕ್ಷಕ್ಕೆ ಬಂದು ನಿಂತಿದೆ.

ಸಿನಿಮಾ ವಿಶ್ಲೇಷಕರ ಪ್ರಕಾರ, ಚಿತ್ರದ ಈ ಭಾರಿ ಸೋಲಿಗೆ ನಿರ್ದೇಶಕ ಅನುರಾಗ್ ಕಶ್ಯಪ್ ಅವರ ಇತ್ತೀಚಿನ ನಡೆಗಳೂ ಕಾರಣ ಇರಬಹುದು ಎನ್ನಲಾಗುತ್ತಿದೆ. ಅನುರಾಗ್ ಕಶ್ಯಪ್ ಅವರು ಈ ಹಿಂದೆ ಬಾಲಿವುಡ್‌ನ ಕಾರ್ಯವೈಖರಿಯನ್ನು ಬಹಿರಂಗವಾಗಿಯೇ ಬೈದು, ತೀವ್ರ ಆಕ್ರೋಶ ಹೊರಹಾಕಿದ್ದರು. ಅಷ್ಟೇ ಅಲ್ಲದೆ, ಅವರು ಮುಂಬೈ ನಗರವನ್ನು ತೊರೆದು ಬೆಂಗಳೂರಿನಲ್ಲಿ ಬಂದು ಸೆಟಲ್ ಆಗಿದ್ದಾರೆ.

ಬಾಲಿವುಡ್ ಮಾರುಕಟ್ಟೆಯಿಂದ ದೂರ ಸರಿದು ಸಿಲಿಕಾನ್ ಸಿಟಿಯಲ್ಲಿ ನೆಲೆಸಿರುವುದು ಹಾಗೂ ಹಿಂದಿ ಚಿತ್ರರಂಗದ ವಿರುದ್ಧ ಅವರು ನೀಡಿದ್ದ ಹೇಳಿಕೆ ಉತ್ತರ ಭಾರತದ ಪ್ರೇಕ್ಷಕರಲ್ಲಿ ಚಿತ್ರದ ಬಗ್ಗೆ ನಕಾರಾತ್ಮಕ ಭಾವನೆ ಮೂಡಿಸಿರಬಹುದು. ಇದು ನೇರವಾಗಿ ‘ಬಂದರ್’ ಚಿತ್ರದ ಓಪನಿಂಗ್‌ಗೆ ಭಾರಿ ಹಿನ್ನಡೆ ತಂದಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಮೊದಲ ದಿನ ‘ಬಂದರ್’ ಸಿನಿಮಾ ದೇಶಾದ್ಯಂತ 1,365 ಶೋಗಳು ಪ್ರದರ್ಶನ ಕಂಡಿದ್ದು, ಕೇವಲ 12.58% ರಷ್ಟು ಒಟ್ಟಾರೆ ಆಕ್ಯುಪೆನ್ಸಿ ಪಡೆದುಕೊಂಡಿದೆ. ದೆಹಲಿ-ಎನ್‌ಸಿಆರ್ ಭಾಗದಲ್ಲಿ ಅತಿ ಹೆಚ್ಚು ಅಂದರೆ 253 ಶೋಗಳು ಇದ್ದರೂ ಅಲ್ಲಿ ಕೇವಲ 9% ಆಕ್ಯುಪೆನ್ಸಿ ಇತ್ತು. ಇನ್ನು ಅಹಮದಾಬಾದ್‌ನಲ್ಲಿ 106 ಶೋಗಳಿದ್ದರೂ ಕೇವಲ 6% ಪ್ರೇಕ್ಷಕರು ಮಾತ್ರ ಚಿತ್ರಮಂದಿರಕ್ಕೆ ಬಂದಿದ್ದಾರೆ.

ಇದನ್ನೂ ಓದಿ: ಬ್ರಾಹ್ಮಣರ ಬಗ್ಗೆ ಅನುರಾಗ್ ಕಶ್ಯಪ್ ಅವಹೇಳನಕಾರಿ ಹೇಳಿಕೆ: ಎಫ್‌ಐಆರ್ ದಾಖಲಿಸಲು ಕೋರ್ಟ್ ಆದೇಶ

‘ಅನಿಮಲ್’ ಬಳಿಕ ಬಾಬಿ ಡಿಯೋಲ್ ಸ್ಟಾರ್​​ಡಂ ಬಲದಾಗಿದೆ. ಅವರು ‘ಬಂದರ್’ ಚಿತ್ರದಲ್ಲಿ ಮುಖ್ಯ ಪಾತ್ರ ಮಾಡಿದ್ದಾರೆ. ಆದರೂ ಕಲೆಕ್ಷನ್ ಹೆಚ್ಚಿಲ್ಲ. ಸದ್ಯ ಚಿತ್ರಮಂದಿರಗಳಲ್ಲಿ ವರುಣ್ ಧವನ್ ನಟನೆಯ ‘ಹೈ ಜವಾನಿ ತೋ ಇಷ್ಕ್ ಹೋನಾ ಹೈ’ ಮತ್ತು ರಾಮ್ ಚರಣ್ ಅವರ ‘ಪೆದ್ದಿ’ ಚಿತ್ರಗಳು ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದ್ದು, ಈ ದೊಡ್ಡ ಸಿನಿಮಾಗಳ ಪೈಪೋಟಿಯ ನಡುವೆ ‘ಬಂದರ್’ ಸಿಲುಕಿದೆ. ಕನ್ನಡದ ಖ್ಯಾತ ನಟ ರಾಜ್ ಬಿ ಶೆಟ್ಟಿ ಸಿನಿಮಾದಲ್ಲಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Weekly Love Astrology: ಈ ರಾಶಿಯ ಪ್ರೇಮ ಸಂಬಂಧ ವಿವಾಹ ಹಂತಕ್ಕೆ ತಲುಪಲು ಈ ವಾರ ಸುಸಮಯ! – Kannada News

ವಾರದ ಪ್ರೇಮ – ಪ್ರೀತಿ ಭವಿಷ್ಯImage Credit source: Pinterest

ಜೂನ್ 07ರಿಂದ ಜೂನ್ 13ರವರೆಗೆ ಈ ತಿಂಗಳ ಎರಡನೇ ವಾರವಾಗಿದ್ದು, ಶುಕ್ರನು ಚಂದ್ರನ ರಾಶಿಯಲ್ಲಿಯೂ ಶನಿಯ ಆಧಿಪತ್ಯದ ನಕ್ಷತ್ರದಲ್ಲಿಯೂ ಇರುವನು. ಪ್ರೇಮ ಅಥವಾ ದಾಂಪತ್ಯದಲ್ಲಿ ಸುಮಧುರ ಕ್ಷಣಗಳನ್ನು ಕಳೆಯಬಹುದಾದರೂ ಭಯ ಆತಂಕಗಳು ನಿಮ್ಮೊಳಗೆ ಕಾಡುವುದು. ವನದುರ್ಗೆಯನ್ನು ಪ್ರಾರ್ಥಿಸಿ, ಭಯವನ್ನು ದೂರಮಾಡಿ.

​​ಮೇಷ ರಾಶಿ:

ನಿಮ್ಮ ರಾಶ್ಯಧಿಪತಿ ಮಂಗಲ ಸ್ವಕ್ಷೇತ್ರದಲ್ಲಿದ್ದಾನೆ. ಪ್ರೇಮ ಜೀವನದಲ್ಲಿ ಉತ್ಸಾಹ ಮತ್ತು ಆಕರ್ಷಣೆ ಹೆಚ್ಚಾಗಲಿದೆ. ಸಂಗಾತಿಯೊಂದಿಗೆ ನೇರ ನಡೆ ಹಾಗೂ ಮಾತುಕತೆ ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ. ಅವಿವಾಹಿತರಿಗೆ ಹೊಸ ಪ್ರೇಮ ಪ್ರಸ್ತಾಪಗಳು ಬರಬಹುದು. ಆದರೆ ಅತಿಯಾದ ಆತುರ ಅಥವಾ ಕೋಪದಿಂದ ಭಿನ್ನಾಭಿಪ್ರಾಯ ಬರದಂತೆ ಎಚ್ಚರ ವಹಿಸುವುದು ಉತ್ತಮ.

ವೃಷಭ ರಾಶಿ:

ನಿಮ್ಮ ರಾಶಿಯಲ್ಲಿ ಸೂರ್ಯ ಮತ್ತು ಚಂದ್ರರ ಯುತಿ ಇದೆ. ಪ್ರೇಮ ಸಂಬಂಧಗಳಲ್ಲಿ ಭಾವನಾತ್ಮಕ ಸ್ಥಿರತೆ ಮುಖ್ಯವಾಗುತ್ತದೆ. ಶುಕ್ರನ ಶುಭ ದೃಷ್ಟಿಯಿಂದಾಗಿ ಸಂಗಾತಿಯೊಂದಿಗೆ ಮಧುರ ಕ್ಷಣಗಳನ್ನು ಕಳೆಯುವಿರಿ. ಪ್ರೀತಿಪಾತ್ರರ ಮನಸ್ಸನ್ನು ಸುಲಭವಾಗಿ ಗೆಲ್ಲಬಹುದು. ಪರಸ್ಪರ ಗೌರವ ಹಾಗೂ ನಂಬಿಕೆ ಹೆಚ್ಚಾಗಲಿದ್ದು, ಪ್ರೇಮ ಸಂಬಂಧವು ಮುಂದಿನ ಹಂತಕ್ಕೆ (ವಿವಾಹ) ತಲುಪಲು ಸುಸಮಯ.

ಮಿಥುನ ರಾಶಿ:

ನಿಮ್ಮ ರಾಶಿಯಲ್ಲಿ ಬುಧನಿದ್ದಾನೆ. ಪ್ರೇಮ ಜೀವನದಲ್ಲಿ ಸಂವಹನವು ಪ್ರಮುಖ ಪಾತ್ರ ವಹಿಸಲಿದೆ. ನಿಮ್ಮ ಚತುರ ಮಾತುಗಳಿಂದ ಸಂಗಾತಿಯನ್ನು ಆಕರ್ಷಿಸುವಿರಿ. ಆದರೆ ಅತಿಯಾದ ಆಲೋಚನೆ ಗೊಂದಲ ಮೂಡಿಸಬಹುದು. ಪ್ರೀತಿಯಲ್ಲಿ ಪ್ರಾಮಾಣಿಕತೆ ಇರಲಿ. ಸಂಗಾತಿಯ ಸಣ್ಣಪುಟ್ಟ ತಪ್ಪುಗಳನ್ನು ನಿರ್ಲಕ್ಷಿಸಿ ಮುನ್ನಡೆದರೆ ಪ್ರೇಮ ಸಂಬಂಧವು ಅತ್ಯಂತ ಸುಂದರ ಹಾಗೂ ಸಾಮರಸ್ಯದಿಂದ ಕೂಡಿರಲಿದೆ.

​ಕರ್ಕಾಟಕ ರಾಶಿ:

ನಿಮ್ಮ ರಾಶಿಯಲ್ಲಿ ಶುಕ್ರ ಮತ್ತು ಗುರುಗಳ ಶುಭ ಯುತಿ ಇದೆ. ಪ್ರೇಮ ಜೀವನಕ್ಕೆ ಇದು ಅತ್ಯಂತ ಅದ್ಭುತವಾದ ಸಮಯ. ಸಂಗಾತಿಯ ಕಡೆಯಿಂದ ಅಪಾರ ಪ್ರೀತಿ, ಕಾಳಜಿ ಹಾಗೂ ಬೆಂಬಲ ಸಿಗಲಿದೆ. ಹಳೆಯ ಪ್ರೇಮ ವೈಮನಸ್ಯಗಳು ದೂರಾಗಲಿವೆ. ಅವಿವಾಹಿತರಿಗೆ ಮನಸ್ಸಿಗೆ ಒಪ್ಪುವ ಸೂಕ್ತ ಪ್ರೇಮ ಸಂಗಾತಿಯು ಸಿಗುವ ಅತ್ಯಂತ ಬಲವಾದ ಯೋಗ ಹಾಗೂ ಸಾಧ್ಯತೆಗಳು ಈ ಅವಧಿಯಲ್ಲಿವೆ.

​ಸಿಂಹ ರಾಶಿ:

ನಿಮ್ಮ ರಾಶಿಯಲ್ಲಿ ಕೇತು ಇದ್ದು, ಪ್ರೇಮ ಕಾರಕ ಶುಕ್ರ ವ್ಯಯದಲ್ಲಿದ್ದಾನೆ. ಪ್ರೇಮ ಜೀವನದಲ್ಲಿ ಸಣ್ಣಪುಟ್ಟ ತಪ್ಪು ತಿಳುವಳಿಕೆ ಅಥವಾ ನಿರಾಸಕ್ತಿ ಮೂಡಬಹುದು. ಸಂಗಾತಿಯ ಭಾವನೆಗಳಿಗೆ ಬೆಲೆ ಕೊಡುವುದು ಅತಿ ಮುಖ್ಯ. ಅಹಂಕಾರದ ಮಾತುಗಳನ್ನು ಬಿಟ್ಟು ತಾಳ್ಮೆಯಿಂದ ವರ್ತಿಸಿ. ಪ್ರೀತಿಯಲ್ಲಿ ಪಾರದರ್ಶಕತೆ ಕಾಯ್ದುಕೊಂಡರೆ ಮಾತ್ರ ಸಂಬಂಧವು ಯಾವುದೇ ಬಿರುಕಿಲ್ಲದೆ ಗಟ್ಟಿಯಾಗಿ ಮುಂದುವರಿಯಲು ಸಾಧ್ಯವಾಗುತ್ತದೆ.

​ಕನ್ಯಾ ರಾಶಿ:

ಪ್ರೇಮ ಜೀವನದಲ್ಲಿ ಲಾಭದಾಯಕ ಸನ್ನಿವೇಶಗಳಿವೆ. ಮಿತ್ರರ ಸಹಾಯದಿಂದ ಪ್ರೇಮ ಸಂಬಂಧಗಳು ಸುಧಾರಿಸಲಿವೆ. ಸಂಗಾತಿಯೊಂದಿಗೆ ದೂರದ ಪ್ರಯಾಣ ಅಥವಾ ಸುಂದರ ಒಡನಾಟದ ಯೋಗವಿದೆ. ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಹಿಂಜರಿಯಬೇಡಿ. ಪರಸ್ಪರ ನಂಬಿಕೆ ಹೆಚ್ಚಾಗಲಿದ್ದು, ಸಂಗಾತಿಯು ನಿಮ್ಮ ಪ್ರತಿಯೊಂದು ನಿರ್ಧಾರಕ್ಕೂ ಹೆಗಲಿಗೆ ಹೆಗಲು ಕೊಟ್ಟು ಪ್ರೋತ್ಸಾಹದಾಯಕವಾಗಿ ಜೊತೆಗಿರಲಿದ್ದಾರೆ.

​ತುಲಾ ರಾಶಿ:

ನಿಮ್ಮ ರಾಶ್ಯಾಧಿಪತಿ ಶುಕ್ರನು ಹತ್ತನೇ ಮನೆಯಲ್ಲಿದ್ದಾನೆ. ವೃತ್ತಿಜೀವನದ ಬಿಡುವಿಲ್ಲದ ಕೆಲಸಗಳ ನಡುವೆಯೂ ಪ್ರೇಮ ಜೀವನಕ್ಕೆ ಸಮಯವನ್ನು ಹೊಂದಿಸಬೇಕಾಗುತ್ತದೆ. ಸಂಗಾತಿಯು ನಿಮ್ಮ ಜವಾಬ್ದಾರಿಗಳನ್ನು ಅರ್ಥಮಾಡಿಕೊಳ್ಳಲಿದ್ದಾರೆ. ಪ್ರೀತಿಯಲ್ಲಿ ಸ್ಥಿರತೆ ಇರಲಿದೆ. ಕಚೇರಿ ಅಥವಾ ಕೆಲಸದ ಜಾಗದಲ್ಲಿ ಹೊಸ ಪ್ರೇಮದ ಚಿಗುರು ಮೂಡುವ ಸಾಧ್ಯತೆಯಿದೆ. ಪರಸ್ಪರ ಗೌರವದಿಂದ ಬಾಂಧವ್ಯ ಸುಂದರವಾಗಿರುತ್ತದೆ.

​ವೃಶ್ಚಿಕ ರಾಶಿ:

ಪ್ರೇಮ ಜೀವನದಲ್ಲಿ ಅದೃಷ್ಟದ ಒಲವು ಕಂಡುಬರಲಿದೆ. ಶುಕ್ರ ಮತ್ತು ಗುರುಗಳ ಶುಭ ಪ್ರಭಾವದಿಂದ ಪ್ರೇಮ ಸಂಬಂಧಗಳು ವಿವಾಹವಾಗಿ ಬದಲಾಗುವ ಸುವರ್ಣ ಅವಕಾಶವಿದೆ. ಸಂಗಾತಿಯೊಂದಿಗೆ ಧಾರ್ಮಿಕ ಅಥವಾ ಸುಂದರ ಪ್ರವಾಸಿ ತಾಣಗಳಿಗೆ ಭೇಟಿ ನೀಡುವಿರಿ. ಪರಸ್ಪರರ ಮೇಲಿನ ಪ್ರೀತಿ ಹಾಗೂ ಆಕರ್ಷಣೆ ಇಮ್ಮಡಿಯಾಗಲಿದ್ದು, ಒಟ್ಟಾರೆ ಪ್ರೇಮ ಜೀವನವು ಅತ್ಯಂತ ತೃಪ್ತಿದಾಯಕವಾಗಿರಲಿದೆ.

ಇದನ್ನೂ ಓದಿ: ಮದುವೆ ಆಮಂತ್ರಣ ಪತ್ರಿಕೆಯಲ್ಲಿ ವಧು-ವರರ ಫೋಟೋ ಹಾಕಬಾರದು ಯಾಕೆ?

ಧನು ರಾಶಿ:

ನಿಮ್ಮ ಲಗ್ನದಲ್ಲೇ ಗುರು ವೀಕ್ಷಣೆ ಇದ್ದರೂ, ಶುಕ್ರ ಎಂಟನೇ ಮನೆಯಲ್ಲಿರುವುದರಿಂದ ಪ್ರೇಮ ಜೀವನದಲ್ಲಿ ಮಿಶ್ರ ಫಲಿತಾಂಶವಿರಲಿದೆ. ಸಂಗಾತಿಯೊಂದಿಗೆ ಅನಗತ್ಯ ವಾದವಿವಾದಗಳು ಅಥವಾ ರಹಸ್ಯಗಳು ಉಂಟಾಗದಂತೆ ಎಚ್ಚರ ವಹಿಸಿ. ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳಿ. ತಾಳ್ಮೆ ಮತ್ತು ಪರಸ್ಪರ ಸಹನೆ ಇದ್ದರೆ ಮಾತ್ರ ಈ ಅವಧಿಯಲ್ಲಿ ಪ್ರೇಮ ಸಂಬಂಧವನ್ನು ಯಶಸ್ವಿಯಾಗಿ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ.

​ಮಕರ ರಾಶಿ:

ಸಪ್ತಮ ಭಾವದಲ್ಲಿ ಶುಕ್ರ ಮತ್ತು ಗುರುಗಳ ಬಲವಿರುವುದರಿಂದ ಪ್ರೇಮ ಜೀವನವು ರೋಮಾಂಚನಕಾರಿಯಾಗಿರಲಿದೆ. ಸಂಗಾತಿಯೊಂದಿಗೆ ಹತ್ತಿರವಾಗಲು ಅತ್ಯುತ್ತಮ ಅವಕಾಶಗಳು ಸಿಗಲಿವೆ. ನಿಮ್ಮಿಬ್ಬರ ನಡುವಿನ ಸಾಮರಸ್ಯ ಎಲ್ಲರ ಗಮನ ಸೆಳೆಯುತ್ತದೆ. ಅವಿವಾಹಿತರಿಗೆ ಪ್ರೇಮ ವಿವಾಹದ ಯೋಗಗಳು ಬಲವಾಗಿವೆ. ಸಂಗಾತಿಯ ಪೂರ್ಣ ಪ್ರೀತಿ ಮತ್ತು ಬೆಂಬಲವು ನಿಮ್ಮ ಜೀವನದ ಉತ್ಸಾಹವನ್ನು ದುಪ್ಪಟ್ಟು ಮಾಡಲಿದೆ.

ಕುಂಭ ರಾಶಿ:

ನಿಮ್ಮ ರಾಶಿಯಲ್ಲಿ ರಾಹು ಇರುವುದರಿಂದ ಪ್ರೇಮ ಜೀವನದಲ್ಲಿ ಭ್ರಮೆ ಅಥವಾ ಅತಿಯಾದ ನಿರೀಕ್ಷೆಗಳು ಬೇಡ. ಶುಕ್ರನ ಸ್ಥಿತಿಯು ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ತರಬಹುದು. ಸಂಗಾತಿಯ ಆರೋಗ್ಯದ ಕಡೆ ಗಮನವಿರಲಿ. ಪ್ರೀತಿಯಲ್ಲಿ ಮೂರನೇ ವ್ಯಕ್ತಿಯ ಹಸ್ತಕ್ಷೇಪಕ್ಕೆ ಅವಕಾಶ ನೀಡಬೇಡಿ. ಪರಸ್ಪರ ನಂಬಿಕೆಯನ್ನು ಗಟ್ಟಿಗೊಳಿಸಿಕೊಂಡರೆ ಪ್ರೇಮ ಸಂಬಂಧದಲ್ಲಿ ಯಾವುದೇ ದೊಡ್ಡ ತೊಂದರೆಗಳು ಎದುರಾಗುವುದಿಲ್ಲ.

​ಮೀನ ರಾಶಿ:

ನಿಮ್ಮ ರಾಶಿಯಲ್ಲಿ ಶನಿ ಇದ್ದರೂ, ಪಂಚಮ ಭಾವದಲ್ಲಿ ಶುಕ್ರ-ಗುರುಗಳ ಯುತಿ ಇರುವುದರಿಂದ ಪ್ರೇಮ ಜೀವನದಲ್ಲಿ ಅಪಾರ ಸುಖ-ಸಂತೋಷವಿರಲಿದೆ. ಪ್ರೀತಿಪಾತ್ರರೊಂದಿಗೆ ಭಾವನಾತ್ಮಕ ಒಡನಾಟ ಹೆಚ್ಚಾಗಲಿದೆ. ಹಳೆಯ ಪ್ರೇಮ ಸಂಬಂಧಗಳು ಪುನಃ ಚಿಗುರೊಡೆಯಬಹುದು. ನಿಮ್ಮ ಪ್ರೀತಿಯ ಪ್ರಸ್ತಾವನೆಗೆ ಸಕಾರಾತ್ಮಕ ಪ್ರತಿಕ್ರಿಯೆ ಸಿಗಲಿದೆ. ಒಟ್ಟಾರೆ ಪ್ರೇಮ ಬಂಧವು ಅತ್ಯಂತ ಮಧುರ ಹಾಗೂ ಗಟ್ಟಿಯಾಗಲಿದೆ.

– ಲೋಹಿತ್ ಹೆಬ್ಬಾರ್

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತಾಳ್ಮೆ ಕಳೆದುಕೊಂಡಿಲ್ಲ, ಮಾತು ತಪ್ಪಿದ್ದಕ್ಕೆ ಬೇಸರವಷ್ಟೇ: ರಾಜೀನಾಮೆ ಬಗ್ಗೆ ಸಚಿವ ರಾಮಲಿಂಗಾರೆಡ್ಡಿ ಮಹತ್ವದ ಹೇಳಿಕೆ – Kannada News

ಬೆಂಗಳೂರು, ಜೂನ್ 6: ಖಾತೆ ಹಂಚಿಕೆ ಅಸಮಾಧಾನದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿ ಸಂಚಲನ ಮೂಡಿಸಿದ್ದ ಹಿರಿಯ ನಾಯಕ ರಾಮಲಿಂಗಾರೆಡ್ಡಿ ಇಂದು (ಜೂನ್ 6) ಬೆಂಗಳೂರಿನ ಕೋರಮಂಗಲ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ತಮ್ಮ ಮುಂದಿನ ನಡೆಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ‘ನನ್ನ ರಾಜೀನಾಮೆಯನ್ನು ಅಂಗೀಕಾರ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದ್ದಾರೆ. ನಾನು ನನ್ನ ಸ್ಪಷ್ಟ ಅಭಿಪ್ರಾಯವನ್ನು ನಾಯಕರ ಮುಂದೆ ಇಟ್ಟಿದ್ದೇನೆ’ ಎಂದು ಅವರು ತಿಳಿಸಿದರು.

ಇದೇ ವೇಳೆ ತಮಗೆ ನೀಡಿರುವ ಖಾತೆ ಬಗ್ಗೆ ಮಾತನಾಡಿದ ಅವರು, ‘ನನಗೆ ನೀರಾವರಿ ಇಲಾಖೆಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ, ನಾನು ಯಾವತ್ತೂ ಜಲಸಂಪನ್ಮೂಲ ಖಾತೆಯನ್ನು ಕೇಳಿರಲಿಲ್ಲ. ಸಚಿವ ಸ್ಥಾನ ಅಥವಾ ಇಂತಹದ್ದೇ ಖಾತೆ ಬೇಕು ಎಂದು ನಾನು ಎಂದೂ ಹಠ ಹಿಡಿದವನಲ್ಲ. ಆದರೆ 2023ರಲ್ಲಿ ಮನೆಗೆ ಬಂದು ಮಾತು ಕೊಟ್ಟಂತೆ ನಾಯಕರು ನಡೆದುಕೊಳ್ಳಲಿಲ್ಲ ಎಂಬ ಬೇಸರವಷ್ಟೇ ನನಗಿದೆ. ಸುರ್ಜೇವಾಲ ಅವರು ಸಿಎಂ ಜೊತೆ ಚರ್ಚೆ ನಡೆಸುತ್ತಿದ್ದಾರೆ, ನಾಯಕರು ಏನು ತೀರ್ಮಾನ ಮಾಡುತ್ತಾರೋ ನೋಡೋಣ. ನಾನು ಯಾರ ಮೇಲೂ ಆರೋಪ ಮಾಡುವುದಿಲ್ಲ ಮತ್ತು ತಾಳ್ಮೆಯನ್ನೂ ಕಳೆದುಕೊಂಡಿಲ್ಲ’ ಎಂದು ಮಾರ್ಮಿಕವಾಗಿ ನುಡಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕ್ಲಿಯರ್ ಔಟ್ ಆಗಿದ್ದರೂ… ನಾಟಕವಾಡಿ ಬಚಾವಾದ ಕೆಎಲ್ ರಾಹುಲ್! – Kannada News

ಮುಲ್ಲನ್‌ಪುರ ಕ್ರೀಡಾಂಗಣದಲ್ಲಿ ಭಾರತ ಮತ್ತು ಅಫ್ಘಾನಿಸ್ತಾನ್ ನಡುವಣ ಟೆಸ್ಟ್ ಪಂದ್ಯ ನಡೆಯುತ್ತಿದೆ. ಈ ಪಂದ್ಯದ ಮೊದಲ ದಿನದಾಟದಲ್ಲೇ ಸ್ವಾರಸ್ಯಕರ ಘಟನೆ ನಡೆದಿದೆ. ಅದು ಕೂಡ ಕೆಎಲ್ ರಾಹುಲ್ ಅವರ ನಾಟಕದೊಂದಿಗೆ..! ಹೌದು, ಈ ಮ್ಯಾಚ್​ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುತ್ತಿರುವ ಟೀಮ್ ಇಂಡಿಯಾ ಪರ ಯಶಸ್ವಿ ಜೈಸ್ವಾಲ್ ಹಾಗೂ ಕೆಎಲ್ ರಾಹುಲ್ ಇನಿಂಗ್ಸ್ ಆರಂಭಿಸಿದ್ದರು.

ಈ ಪಂದ್ಯದ 11ನೇ ಓವರ್‌ನಲ್ಲಿ ಅಫ್ಘಾನಿಸ್ತಾನದ ವೇಗಿ ಝಿಯಾವುರ್ ರೆಹಮಾನ್ ಎಸೆದ ಚೆಂಡನ್ನು ರಾಹುಲ್ ಕಟ್ ಮಾಡಲು ಯತ್ನಿಸಿದರು. ಈ ವೇಳೆ ಚೆಂಡು ಬ್ಯಾಟ್‌ಗೆ ತಗುಲಿ ವಿಕೆಟ್ ಕೀಪರ್ ಕೈ ಸೇರಿತು, ಬ್ಯಾಟ್‌ಗೆ ಚೆಂಡು ಸವರಿದ ಸ್ಪಷ್ಟ ಶಬ್ದವೂ ಕೇಳಿಸಿತು. ಹೀಗಾಗಿ ಅಫ್ಘಾನ್ ಆಟಗಾರರು ಔಟ್​ಗಾಗಿ ಅಪೀಲ್ ಮಾಡಿದ್ದರು. ಇದಾಗ್ಯೂ ಫೀಲ್ಡ್ ಅಂಪೈರ್ ಔಟ್ ನೀಡಿರಲಿಲ್ಲ.

ಇದರ ಬೆನ್ನಲ್ಲೇ DRS ರಿವ್ಯೂ ತೆಗೆದುಕೊಳ್ಳುವ ಯೋಚನೆಯಲ್ಲಿದ್ದ ಅಫ್ಘಾನ್ ನಾಯಕ ಹಶ್ಮತುಲ್ಲಾ ಶಾಹಿದಿ ಹಾಗೂ ಕೀಪರ್ ಅಫ್ಸರ್ ಜಜಾಯ್ ಅವರು  ರಾಹುಲ್ ಮುಖ ನೋಡಿದರು. ರಾಹುಲ್ ಅತ್ಯಂತ ಶಾಂತವಾಗಿ, ತಮಗೇನೂ ತಿಳಿಯದಂತೆ ತಲೆ ಅಲ್ಲಾಡಿಸಿ ‘ಬ್ಯಾಟ್‌ಗೆ ಚೆಂಡು ತಗುಲೇ ಇಲ್ಲ’ ಎಂಬಂತೆ ನಟಿಸಿದರು.

ಅಷ್ಟೇ ಅಲ್ಲದೆ ಬ್ಯಾಟ್ ಹ್ಯಾಂಡಲ್​ ಲೂಸ್ ಆಗಿರುವುದರಿಂದ ಶಬ್ದ ಬಂದಿರುವಂತೆ ನಾಟಕವಾಡಿದ ಕೆಎಲ್ ರಾಹುಲ್ ಎಲ್ಲರನ್ನೂ ನಂಬಿಸಿದರು. ಇತ್ತ ಕೆಎಲ್ ರಾಹುಲ್ ಅವರನ್ನು ನಂಬಿಸಿದ ಅಫ್ಘಾನ್ ನಾಯಕ ಡಿಆರ್​ಎಸ್ ರಿವ್ಯೂ ತೆಗೆದುಕೊಳ್ಳಲಿಲ್ಲ.

ಆದರೆ, ಕೆಲವೇ ನಿಮಿಷಗಳಲ್ಲಿ ಬಿಗ್ ಸ್ಕ್ರೀನ್ ಮೇಲೆ  ಅಲ್ಟ್ರಾಎಡ್ಜ್ ತೋರಿಸಿದಾಗ ಬ್ಯಾಟ್‌ಗೆ ಚೆಂಡು ತಗುಲಿರುವುದು ಜಗಜ್ಜಾಹೀರಾಯಿತು. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ರಾಹುಲ್ ಅವರ ನಾಟಕ ವಿರುದ್ಧ ಪರ-ವಿರೋಧ ಚರ್ಚೆಗಳು ನಡೆಯು್ತ್ತಿದೆ.

 

Source link

Karnataka CET 2026 Toppers: ಕೆಸಿಇಟಿ ಫಲಿತಾಂಶ ಪ್ರಕಟ; ಈ ಬಾರಿಯೂ ಹೆಣ್ಣು ಮಕ್ಕಳದ್ದೇ ಮೇಲುಗೈ! – Kannada News

ಕೆಸಿಇಟಿ ಫಲಿತಾಂಶ ಟಾಪರ್‌ಗಳ ಪಟ್ಟಿ

ಬೆಂಗಳೂರು: ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದ 2026ನೇ ಸಾಲಿನ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯ (UGCET) ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಇಂದು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಫಲಿತಾಂಶದ ಜೊತೆಯಲ್ಲೇ ರಾಜ್ಯದ ಅತ್ಯಂತ ಪೈಪೋಟಿಯುಕ್ತ ವೃತ್ತಿಪರ ಕೋರ್ಸ್‌ಗಳಾದ ಇಂಜಿನಿಯರಿಂಗ್ ಹಾಗೂ ವೆಟರ್ನರಿ (ಪಶುಸಂಗೋಪನೆ) ವಿಭಾಗದ ಟಾಪರ್‌ಗಳ ಪಟ್ಟಿಯನ್ನು ಸಹ ಪ್ರಕಟಿಸಲಾಗಿದ್ದು, ಈ ಬಾರಿಯೂ ಹೆಣ್ಣು ಮಕ್ಕಳೇ ಮೇಲುಗೈ ಸಾಧಿಸಿದ್ದಾರೆ.

ಇಂಜಿನಿಯರಿಂಗ್ ವಿಭಾಗದಲ್ಲಿ ತನಿಷಾ ಕಾರ್ತಿಕ್ ಸಾಧನೆ:

ರಾಜ್ಯಾದ್ಯಂತ ತೀವ್ರ ಕುತೂಹಲ ಮೂಡಿಸಿದ್ದ ಇಂಜಿನಿಯರಿಂಗ್ ವಿಭಾಗದ ಫಲಿತಾಂಶದಲ್ಲಿ ಬೆಂಗಳೂರಿನ ವಿದ್ಯಾರ್ಥಿನಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಪಡೆದು ಬೀಗಿದ್ದಾರೆ. ಬೆಂಗಳೂರಿನ ಜಯನಗರದಲ್ಲಿರುವ ಪ್ರತಿಷ್ಠಿತ ಆರ್​.ವಿ ಪಿಯು ಕಾಲೇಜಿನ ವಿದ್ಯಾರ್ಥಿನಿ ತನಿಷಾ ಕಾರ್ತಿಕ್ ಅವರು ಇಂಜಿನಿಯರಿಂಗ್ ವಿಭಾಗದಲ್ಲಿ ಇಡೀ ರಾಜ್ಯಕ್ಕೆ ಪ್ರಥಮ ಸ್ಥಾನ ಅಲಂಕರಿಸಿದ್ದಾರೆ. ಇನ್ನುಳಿದಂತೆ ಇದೇ ವಿಭಾಗದಲ್ಲಿ ಸೃಜನ್​ ದ್ವಿತೀಯ ಸ್ಥಾನ ಪಡೆದರೆ, ನಿನಾದ್ ವಿಶಿಷ್ಟ ಅವರು ತೃತೀಯ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.

ವೆಟರ್ನರಿ ವಿಭಾಗದಲ್ಲಿ ನಯನ ಗೋಪಿಗೆ ಮೊದಲ ರ‍್ಯಾಂಕ್:

ಪಶುಸಂಗೋಪನೆ ಅಂದರೆ ವೆಟರ್ನರಿ ವಿಭಾಗದಲ್ಲೂ ಬೆಂಗಳೂರಿನ ವಿದ್ಯಾರ್ಥಿನಿಯೇ ಪ್ರಥಮ ಸ್ಥಾನವನ್ನು ಮುಡಿಗೇರಿಸಿಕೊಂಡಿದ್ದಾರೆ. ಬೆಂಗಳೂರಿನ ಶಿವನಗರದ ಪಿಯು ಕಾಲೇಜಿನ ವಿದ್ಯಾರ್ಥಿನಿಯಾದ ನಯನ ಗೋಪಿ ಅವರು ವೆಟರ್ನರಿ ವಿಭಾಗದಲ್ಲಿ ಇಡೀ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಪಡೆಯುವ ಮೂಲಕ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಈ ವಿಭಾಗದಲ್ಲಿ ದ್ವಿತೀಯ ರ‍್ಯಾಂಕ್ ಅನ್ನು ದಾವಣಗೆರೆಯ ಸರ್​​ ಎಂ.ವಿ ಪಿಯು ಕಾಲೇಜಿನ ವಿದ್ಯಾರ್ಥಿನಿ ಅಮೂಲ್ಯ ಪಡೆದುಕೊಂಡರೆ, ಆರ್​.ವಿ ಪಿಯು ಕಾಲೇಜಿನ ರಿತಿಕ್ ಕುಮಾರ್ ಅವರು ತೃತೀಯ ರ‍್ಯಾಂಕ್ ಪಡೆದಿದ್ದಾರೆ.

ಇದನ್ನೂ ಓದಿ: ಕೆಸಿಇಟಿ ಫಲಿತಾಂಶ ಪ್ರಕಟ; ರಿಸಲ್ಟ್ ನೋಡಲು ಡೈರೆಕ್ಟ್ ಲಿಂಕ್‌ ಇಲ್ಲಿದೆ..

ರ‍್ಯಾಂಕ್ ಪಟ್ಟಿಯಲ್ಲಿ ಆರ್.ವಿ. ಪಿಯು ಕಾಲೇಜಿನ ದರ್ಬಾರ್:

ಈ ಬಾರಿಯ ಕೆಸಿಇಟಿ ಟಾಪರ್ಸ್ ಲಿಸ್ಟ್‌ನಲ್ಲಿ ಬೆಂಗಳೂರಿನ ಜಯನಗರದಲ್ಲಿರುವ ಆರ್.ವಿ. ಪಿಯು ಕಾಲೇಜು (RV PU College) ಸಿಂಹಪಾಲು ರ‍್ಯಾಂಕ್‌ಗಳನ್ನು ಬಾಚಿಕೊಳ್ಳುವ ಮೂಲಕ ಭರ್ಜರಿ ಪ್ರದರ್ಶನ ನೀಡಿದೆ. ಇಂಜಿನಿಯರಿಂಗ್ ವಿಭಾಗದ ರಾಜ್ಯದ ಟಾಪರ್ ತನಿಷಾ ಕಾರ್ತಿಕ್ ಹಾಗೂ ವೆಟರ್ನರಿ ವಿಭಾಗದಲ್ಲಿ ಮೂರನೇ ರ‍್ಯಾಂಕ್ ಪಡೆದಿರುವ ರಿತಿಕ್ ಕುಮಾರ್ ಇಬ್ಬರೂ ಒಂದೇ ಕಾಲೇಜಿನವರಾಗಿದ್ದಾರೆ. ಇದರೊಂದಿಗೆ ದಾವಣಗೆರೆಯ ಸರ್ ಎಂ.ವಿ. ಪಿಯು ಕಾಲೇಜು ಕೂಡ ವೆಟರ್ನರಿ ವಿಭಾಗದಲ್ಲಿ ದ್ವಿತೀಯ ರ‍್ಯಾಂಕ್ ಪಡೆಯುವ ಮೂಲಕ ರಾಜ್ಯ ಮಟ್ಟದಲ್ಲಿ ಗಮನ ಸೆಳೆದಿದೆ.

ಅಧಿಕೃತ ವೆಬ್‌ಸೈಟ್‌ನಲ್ಲಿ ಫಲಿತಾಂಶ ಲಭ್ಯ:

ಪರೀಕ್ಷೆ ಬರೆದಿರುವ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ಗಳಾದ cetonline.karnataka.gov.in/kea/ ಅಥವಾ karresults.nic.in ಗೆ ಭೇಟಿ ನೀಡುವ ಮೂಲಕ ತಮ್ಮ ಫಲಿತಾಂಶವನ್ನು ವೀಕ್ಷಿಸಬಹುದಾಗಿದೆ. ವೆಬ್‌ಸೈಟ್‌ನಲ್ಲಿ ನಿಮ್ಮ ರಿಜಿಸ್ಟರ್ ನಂಬರ್ ನಮೂದಿಸಿ ಸ್ಕೋರ್‌ಕಾರ್ಡ್ ಅನ್ನು ಆನ್‌ಲೈನ್ ಮೂಲಕ ಸುಲಭವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಶಿಕ್ಷಣಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೃತ ಮಹಿಳೆಯ ಕುಟುಂಬದವರಿಗೆ ಪರಿಹಾರ ನೀಡದ್ದಕ್ಕೆ ಕೆಕೆಆರ್​ಟಿಸಿ ಬಸ್ಸನ್ನೇ ಜಪ್ತಿ ಮಾಡಿದ್ರು!

ಬೀದರ್, ಜೂನ್ 6: ನ್ಯಾಯಾಲಯದ ಆದೇಶವಾಗಿದ್ದರೂ ಅಪಘಾತದಲ್ಲಿ ಮೃತಪಟ್ಟ ಮಹಿಳೆಯ ಕುಟುಂಬಕ್ಕೆ ನಿಗದಿತ ಪರಿಹಾರ ಮೊತ್ತ ನೀಡಲು ವಿಳಂಬ ಮಾಡಿದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ (KKRTC) ಬೀದರ್ ನ್ಯಾಯಾಲಯ ಭಾರಿ ಶಾಕ್ ನೀಡಿದೆ. ಕೋರ್ಟ್ ಆದೇಶ ಪಾಲಿಸದ ಹಿನ್ನೆಲೆಯಲ್ಲಿ ಕೆಕೆಆರ್‌ಟಿಸಿ ಸಂಸ್ಥೆಗೆ ಸೇರಿದ ಬಸ್ಸನ್ನೇ ಜಪ್ತಿ ಮಾಡಲಾಗಿದೆ. 2021 ರ ಆಗಸ್ಟ್ 15 ರಂದು ಭಾಲ್ಕಿ ತಾಲೂಕಿನ ಟೆಕ್ನಿ ಗ್ರಾಮದ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿತ್ತು. ಈ ಅಪಘಾತದಲ್ಲಿ ರೇಖಾ ಸುನೀಲ್ (35) ಎಂಬ ಮಹಿಳೆ ಮೃತಪಟ್ಟಿದ್ದರು. ಈ ಕುರಿತು ವಿಚಾರಣೆ ನಡೆಸಿದ್ದ ಬೀದರ್‌ನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು, ಮೃತ ಮಹಿಳೆಯ ಕುಟುಂಬಕ್ಕೆ ಸುಮಾರು 22.50 ಲಕ್ಷ ರೂಪಾಯಿ ಪರಿಹಾರ ಮೊತ್ತ ಪಾವತಿಸುವಂತೆ ಅಕ್ಟೋಬರ್ 2025ರಲ್ಲಿ ಕೆಕೆಆರ್‌ಟಿಸಿಗೆ ಆದೇಶ ನೀಡಿತ್ತು. ಆದರೆ, ಕೋರ್ಟ್ ಆದೇಶ ಹೊರಬಿದ್ದು 7 ತಿಂಗಳು ಕಳೆದರೂ ಸಾರಿಗೆ ಸಂಸ್ಥೆ ಮಾತ್ರ ಪರಿಹಾರ ನೀಡದೆ ನಿರ್ಲಕ್ಷ್ಯ ವಹಿಸಿತ್ತು. ಇದರಿಂದ ಆಕ್ರೋಶಗೊಂಡ ಕುಟುಂಬದವರು ನ್ಯಾಯಾಲಯದ ಮೊರೆ ಹೋಗಿದ್ದರು. ಇದೀಗ ಕೋರ್ಟ್ ಸೂಚನೆಯ ಮೇರೆಗೆ ಕೆಕೆಆರ್‌ಟಿಸಿ ಬಸ್ ಅನ್ನು ಜಪ್ತಿ ಮಾಡಿ ಬೀದರ್ ಕೋರ್ಟ್ ಆವರಣಕ್ಕೆ ತಂದು ನಿಲ್ಲಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಾಲಿವುಡ್ ಸ್ಟಾರ್ ನಿರ್ದೇಶಕನ ಚಿತ್ರಕ್ಕೆ ರವಿ ಬಸ್ರೂರು ಮ್ಯೂಸಿಕ್

ಮಲಯಾಳಂನಲ್ಲಿ ಸಿದ್ಧವಾದ ‘ದೃಶ್ಯಂ’  (Drishyam) ಸರಣಿ ಅದೇ ಹೆಸರಲ್ಲಿ ಹಿಂದಿಗೂ ರಿಮೇಕ್ ಆಗಿದೆ. ಈಗಾಗಲೇ ಎರಡು ಭಾಗ ತೆರೆಗೆ ಬಂದಿದ್ದು, ಮೂರನೇ ಭಾಗದ ಶೂಟಿಂಗ್ ಮುಕ್ತಾಯಗೊಂಡಿದೆ. ಈ ವರ್ಷದ ಅಕ್ಟೋಬರ್ 2ರಂದು ಸಿನಿಮಾ ತೆರೆಗೆ ಬರಲು ಸಜ್ಜಾಗುತ್ತಿದೆ. ಈ ಬಾರಿ ಈ ಚಿತ್ರದಲ್ಲಿ ಕನ್ನಡಿಗರು ಹೆಮ್ಮೆಪಡುವಂತಹ ದೊಡ್ಡ ಸುದ್ದಿಯೊಂದಿದೆ. ಹೌದು, ಭಾರತೀಯ ಚಿತ್ರರಂಗದ ಸ್ಟಾರ್ ಮ್ಯೂಸಿಕ್ ಡೈರೆಕ್ಟರ್, ಕನ್ನಡಿಗ ರವಿ ಬಸ್ರೂರು ಅವರಿಗೆ ‘ದೃಶ್ಯಂ 3’ ಚಿತ್ರಕ್ಕೆ ಸಂಗೀತ ನೀಡುವ ಆಫರ್ ಸಿಕ್ಕಿದೆ.

ವಿಶೇಷವೆಂದರೆ, ‘ದೃಶ್ಯಂ’ ಸರಣಿಯ ಹಿಂದಿನ ಎರಡು ಭಾಗಗಳಿಗೆ ಬೇರೆ ಬೇರೆ ಸಂಗೀತ ನಿರ್ದೇಶಕರು ಕೆಲಸ ಮಾಡಿದ್ದರು. ಮೊದಲ ಭಾಗಕ್ಕೆ ವಿಶಾಲ್ ಭಾರದ್ವಾಜ್ ಹಾಗೂ ಎರಡನೇ ಭಾಗಕ್ಕೆ ದೇವಿ ಶ್ರೀ ಪ್ರಸಾದ್ ಸಂಗೀತ ನೀಡಿದ್ದರು. ಆದರೆ, ಈಗ ‘ದೃಶ್ಯಂ 3’ ಚಿತ್ರಕ್ಕೆ ಸಂಗೀತ ನೀಡುವ ಜವಾಬ್ದಾರಿಯನ್ನು ನಿರ್ಮಾಪಕರು ರವಿ ಬಸ್ರೂರು ಹೆಗಲಿಗೆ ಹೊರಿಸಿದ್ದಾರೆ.

ಅಜಯ್ ದೇವಗನ್ ಅವರೊಂದಿಗೆ ಈಗಾಗಲೇ ‘ಭೋಲಾ’ ಮತ್ತು ‘ಸಿಂಗಂ ಅಗೇನ್’ ಚಿತ್ರಗಳಲ್ಲಿ ಕೆಲಸ ಮಾಡಿರುವ ರವಿ ಬಸ್ರೂರು, ಈಗ ‘ದೃಶ್ಯಂ 3’ ಚಿತ್ರಕ್ಕೆ ಟ್ಯೂನ್ ಹಾಕುತ್ತಿರುವುದು ಅವರ ವೃತ್ತಿಜೀವನದ ಮತ್ತೊಂದು ಮೈಲಿಗಲ್ಲಾಗಿದೆ.

ಇದನ್ನೂ ಓದಿ: ಬುಧವಾರವೂ ಜಾರ್ಜ್‌ಕುಟ್ಟಿ ಕಮಾಲ್; 7 ದಿನಕ್ಕೆ ‘ದೃಶ್ಯಂ 3’ ಗಳಿಕೆ ಎಷ್ಟು?

ಯಾವುದೇ ಗಾಡ್‌ಫಾದರ್ ಇಲ್ಲದೆ, ಕರಾವಳಿಯ ಸಣ್ಣ ಹಳ್ಳಿಯಿಂದ ಬಂದು ಇಂದು ಭಾರತೀಯ ಚಿತ್ರರಂಗವೇ ತಿರುಗಿ ನೋಡುವಂತೆ ಮಾಡಿರುವ ರವಿ ಬಸ್ರೂರು ಅವರ ಜರ್ನಿ ನಿಜಕ್ಕೂ ಸ್ಪೂರ್ತಿದಾಯಕ. ಪ್ರಶಾಂತ್ ನೀಲ್ ನಿರ್ದೇಶನದ ‘ಉಗ್ರಂ’ ಚಿತ್ರದ ಮೂಲಕ ಸ್ವತಂತ್ರ ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡ ಇವರು, ಮುಂದೆ ‘ಕೆಜಿಎಫ್’ ಫ್ರಾಂಚೈಸಿ ಮೂಲಕ ಇಡೀ ದೇಶಾದ್ಯಂತ ಸಂಚಲನ ಸೃಷ್ಟಿಸಿದರು. ಆ ಸಿನಿಮಾದ ಇವರ ಬಿಜಿಎಂ ಇಂಟರ್ನ್ಯಾಷನಲ್ ಮಟ್ಟದಲ್ಲಿ ಸೌಂಡ್ ಮಾಡಿತು. ಈಗ ರವಿ ಬಸ್ರೂರು ಇಂದು ಪ್ಯಾನ್-ಇಂಡಿಯಾ ಮಟ್ಟದ ಮೋಸ್ಟ್ ವಾಂಟೆಡ್ ಮ್ಯೂಸಿಕ್ ಡೈರೆಕ್ಟರ್ ಆಗಿ ಬೆಳೆದು ನಿಂತಿದ್ದಾರೆ.

ಮಲಯಾಳಂ ಕಿಂತ ವಿಭಿನ್ನವಾಗಿರಲಿದೆ ಹಿಂದಿ ‘ದೃಶ್ಯಂ 3’

ಕಳೆದ ಮೇ 21 ರಂದು ಬಿಡುಗಡೆಯಾದ ಮೂಲ ಮಲಯಾಳಂ ‘ದೃಶ್ಯಂ 3’ ಚಿತ್ರಕ್ಕೂ, ಹಿಂದಿ ಆವೃತ್ತಿಗೂ ಸಾಕಷ್ಟು ವ್ಯತ್ಯಾಸ ಇರಲಿದೆ ಎಂದು ತಿಳಿದುಬಂದಿದೆ. ಹಿಂದಿನ ಎರಡು ಭಾಗಗಳು ಒರಿಜಿನಲ್ ಕಥೆಯನ್ನೇ ಹೋಲುತ್ತಿದ್ದವು, ಆದರೆ ಈ ಬಾರಿ ಹಿಂದಿ ಪ್ರೇಕ್ಷಕರಿಗೆ ತಕ್ಕಂತೆ ಕಥೆ ಮತ್ತು ಟ್ವಿಸ್ಟ್‌ಗಳಲ್ಲಿ ದೊಡ್ಡ ಬದಲಾವಣೆ ಮಾಡಲಾಗಿದೆ. ಮಲಯಾಳಂ ಚಿತ್ರ ಎಮೋಷನಲ್ ಫ್ಯಾಮಿಲಿ ಡ್ರಾಮಾವಾಗಿದ್ದರೆ, ಅಜಯ್ ದೇವಗನ್ ನಟನೆಯ ಹಿಂದಿ ಚಿತ್ರ ಪಕ್ಕಾ ‘ಫ್ಯಾಮಿಲಿ ಥ್ರಿಲ್ಲರ್’ ಆಗಿರಲಿದೆ ಎಂದು ನಿರ್ದೇಶಕ ಅಭಿಷೇಕ್ ಪಾಠಕ್ ತಿಳಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಇಂದು ಸಂಜೆಯೇ ರಾಮಲಿಂಗಾ ರೆಡ್ಡಿ ರಾಜೀನಾಮೆ ವಾಪಸ್ ಸಾಧ್ಯತೆ! ರಣದೀಪ್ ಸುರ್ಜೇವಾಲ, ಡಿಕೆಶಿ ತುರ್ತು ಮಾತುಕತೆ – Kannada News

ಬೆಂಗಳೂರು, ಜೂನ್ 6: ಕರ್ನಾಟಕ ಕಾಂಗ್ರೆಸ್ (Congress) ಸರ್ಕಾರದಲ್ಲಿ ಉದ್ಭವಿಸಿರುವ ಖಾತೆ ಹಂಚಿಕೆ ಬಿಕ್ಕಟ್ಟು ಸದ್ಯ ಶಮನಗೊಳ್ಳುವ ಹಂತಕ್ಕೆ ತಲುಪಿದೆ. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಬಂಡಾಯವೆದ್ದಿದ್ದ ಹಿರಿಯ ನಾಯಕ ರಾಮಲಿಂಗಾ ರೆಡ್ಡಿ ಸಂಜೆ ವೇಳೆಗೆ ರಾಜೀನಾಮೆಯನ್ನು ವಾಪಸ್ ಪಡೆಯುವ ಸಾಧ್ಯತೆ ದಟ್ಟವಾಗಿದೆ. ಎಐಸಿಸಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಮಧ್ಯಪ್ರವೇಶಿಸಿ ಸಂಧಾನ ನಡೆಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಮತ್ತೊಂದೆಡೆ ಸಚಿವ ಸತೀಶ್ ಜಾರಕಿಹೊಳಿ ಅವರು ಅಸಮಾಧಾನಗೊಂಡಿರುವ ಮುನಿಯಪ್ಪ ಹಾಗೂ ರಾಮಲಿಂಗಾ ರೆಡ್ಡಿ ಪರವಾಗಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬಳಿ ಮಾತುಕತೆ ನಡೆಸಿದ್ದಾರೆ.

ಮುಖ್ಯಾಂಶಗಳು

  • ಸಂಜೆ ವೇಳೆಗೆ ರೆಡ್ಡಿ ರಾಜೀನಾಮೆ ವಾಪಸ್ ಸಾಧ್ಯತೆ.
  • ಸುರ್ಜೇವಾಲ ಜೊತೆ ಸಿಎಂ ಡಿಕೆಶಿ ತುರ್ತು ಚರ್ಚೆ.
  • ಮುನಿಯಪ್ಪಗೆ ಹೆಚ್ಚುವರಿ ಖಾತೆ ನೀಡಲು ಸತೀಶ್ ಆಗ್ರಹ.

ಸುರ್ಜೇವಾಲ ಭೇಟಿಯಾದ ರಾಮಲಿಂಗಾ ರೆಡ್ಡಿ

ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ರಾಮಲಿಂಗಾ ರೆಡ್ಡಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲರನ್ನು ಭೇಟಿಯಾಗಿ ಅಸಮಾಧಾನಕ್ಕೆ ಕಾರಣವನ್ನು ಸುದೀರ್ಘವಾಗಿ ವಿವರಿಸಿದ್ದಾರೆ. ‘ಬೆಂಗಳೂರು ಅಭಿವೃದ್ಧಿ ಖಾತೆಯನ್ನು ನೀಡುವುದಿಲ್ಲ ಎಂದಿದ್ದರೆ ನನಗೆ ಮೊದಲೇ ಹೇಳಬೇಕಿತ್ತು. ಮಾತು ಕೊಟ್ಟು ಈಗ ಹೀಗೆ ಮಾಡುವುದು ಸರಿಯಲ್ಲ. ಬೇರೆ ಖಾತೆ ನೀಡಲಾಗುತ್ತದೆ ಎಂದು ಮೊದಲೇ ತಿಳಿದಿದ್ದರೆ ನಾನು ಸಚಿವ ಸ್ಥಾನವನ್ನೇ ಸ್ವೀಕರಿಸುತ್ತಿರಲಿಲ್ಲ’ ಎಂದು ರೆಡ್ಡಿ ತೀವ್ರ ಬೇಸರ ಹೊರಹಾಕಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸುರ್ಜೇವಾಲ, ‘ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಈ ಸಮಸ್ಯೆಯನ್ನು ಸರಿಪಡಿಸಲಾಗುವುದು’ ಎಂಬ ಭರವಸೆ ನೀಡಿದ್ದಾರೆ. ಈ ಭರವಸೆಯ ಬೆನ್ನಲ್ಲೇ, ‘ನಾನು ಸಂಜೆವರೆಗೂ ಕಾಯುತ್ತೇನೆ, ಆ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ’ ಎಂದು ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ತಾಜ್ ವೆಸ್ಟ್ ಎಂಡ್‌ನಲ್ಲಿ ಡಿಕೆಶಿ-ಸುರ್ಜೇವಾಲ ತುರ್ತು ಸಭೆ

ರಾಮಲಿಂಗಾ ರೆಡ್ಡಿ ಭೇಟಿಯ ಬೆನ್ನಲ್ಲೇ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್‌ಗೆ ಧಾವಿಸಿ ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಭೇಟಿಯಾಗಿದ್ದಾರೆ. ರಾಮಲಿಂಗಾ ರೆಡ್ಡಿಯೊಂದಿಗೆ ತಾವು ನಡೆಸಿದ ಮಾತುಕತೆಯ ವಿವರಗಳನ್ನು ಸಿಎಂ ಡಿಕೆಶಿ ಅವರು ಉಸ್ತುವಾರಿಗಳಿಗೆ ವಿವರಿಸಿದ್ದಾರೆ. ಉಭಯ ನಾಯಕರು ಹೈಕಮಾಂಡ್ ಸೂಚನೆಯಂತೆ ಮುಂದಿನ ಕಾರ್ಯತಂತ್ರದ ಕುರಿತು ಸುದೀರ್ಘ ಚರ್ಚೆ ನಡೆಸಿದ್ದಾರೆ.

ಮುನಿಯಪ್ಪ, ರೆಡ್ಡಿ ಪರ ಸತೀಶ್ ಜಾರಕಿಹೊಳಿ ಬ್ಯಾಟಿಂಗ್

ಖಾತೆ ಹಂಚಿಕೆಯ ಬೆನ್ನಲ್ಲೇ ಹಿರಿಯ ಸಚಿವರಲ್ಲಿ ಉಂಟಾಗಿರುವ ಅಸಮಾಧಾನದ ಕುರಿತು ಸಚಿವ ಸತೀಶ್ ಜಾರಕಿಹೊಳಿ ಶುಕ್ರವಾರ ರಾತ್ರಿ ಪ್ರತ್ಯೇಕವಾಗಿ ಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ. ಚರ್ಚೆಯ ವೇಳೆ ಕೆ.ಎಚ್. ಮುನಿಯಪ್ಪ ಅವರ ಪರವಾಗಿ ಪ್ರಬಲವಾಗಿ ಧ್ವನಿ ಎತ್ತಿರುವ ಸತೀಶ್, ‘ಮುನಿಯಪ್ಪ ದಲಿತ ಎಡಗೈ ಸಮುದಾಯದ ಅತ್ಯಂತ ಪ್ರಮುಖ ಮತ್ತು ಹಿರಿಯ ನಾಯಕರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜೊತೆಯಲ್ಲಿಟ್ಟುಕೊಳ್ಳುವುದು ಪಕ್ಷಕ್ಕೆ ಅನಿವಾರ್ಯ. ಆದ್ದರಿಂದ ಅವರಿಗೆ ಆಹಾರ ಇಲಾಖೆಯ ಜೊತೆಗೆ ಹೆಚ್ಚುವರಿಯಾಗಿ ‘ಸಣ್ಣ ನೀರಾವರಿ’ ಖಾತೆಯನ್ನು ನೀಡಬೇಕು’ ಎಂದು ಒತ್ತಾಯಿಸಿದ್ದಾರೆ.

ಇದೇ ವೇಳೆ, ರಾಮಲಿಂಗಾ ರೆಡ್ಡಿ ಕುರಿತೂ ಮಾತನಾಡಿದ ಸತೀಶ್ ಜಾರಕಿಹೊಳಿ, ‘ರಾಮಲಿಂಗಾ ರೆಡ್ಡಿ ಬೆಂಗಳೂರಿನ ಪ್ರಮುಖ ಮತ್ತು ಪ್ರಭಾವಿ ನಾಯಕರು. ಬೆಂಗಳೂರು ನಗರದ ರಾಜಕೀಯವನ್ನು ನಿಭಾಯಿಸಲು ಅವರೇ ಸೂಕ್ತ ವ್ಯಕ್ತಿ. ಆದ್ದರಿಂದ ಅವರನ್ನು ಯಾವುದೇ ಕಾರಣಕ್ಕೂ ಕಡೆಗಣಿಸದೆ ವಿಶ್ವಾಸಕ್ಕೆ ಪಡೆಯುವುದು ಸೂಕ್ತ’ ಎಂದು ಮುಖ್ಯಮಂತ್ರಿಗಳಿಗೆ ಕಿವಿಮಾತು ಹೇಳಿದ್ದಾರೆ.

ರಾಜ್ಯ ಸರ್ಕಾರದ ವಿರುದ್ಧ ಪ್ರಧಾನಿ ಮೋದಿ ಟೀಕೆಗೆ ಸಿಎಂ ಡಿಕೆಶಿ ತಿರುಗೇಟು

ಕಾಂಗ್ರೆಸ್ ಸಂಪುಟದ ಆಂತರಿಕ ಭಿನ್ನಮತವನ್ನು ಗುಜರಾತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಟೀಕಿಸಿರುವ ವಿಚಾರವಾಗಿ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ನೂತನ ಸರ್ಕಾರ ರಚನೆಯಾದಾಗ ನನಗೆ ವೈಯಕ್ತಿಕವಾಗಿ ಶುಭ ಹಾರೈಸಿದ್ದಾರೆ. ಅದಕ್ಕಾಗಿ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಆದರೆ, ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ನಾವು ಮತ್ತು ಅವರು ರಾಜಕೀಯ ಮಾಡುವುದು ಬೇಡ. ನಮ್ಮ ಸರ್ಕಾರ ಇರುವುದು ಜನರ ಕಲ್ಯಾಣ ಮತ್ತು ಅಭಿವೃದ್ಧಿಗಾಗಿ ಎಂದು ಡಿಕೆಶಿ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: ಮಧ್ಯರಾತ್ರಿ ಡಿಕೆಶಿ-ರಾಮಲಿಂಗಾ ರೆಡ್ಡಿ 2.5 ಗಂಟೆ ರಹಸ್ಯ ಸಂಧಾನ ಸಭೆ: ರಾಜೀನಾಮೆ ಹಿಂಪಡೆಯೋ ವಿಚಾರ ಮಾತ್ರ ಸಸ್ಪೆನ್ಸ್!

ಅಲ್ಲದೆ, ರಾಜ್ಯದ ಪ್ರಮುಖ ನೀರಾವರಿ ಹಾಗೂ ಅಭಿವೃದ್ಧಿ ಯೋಜನೆಗಳ ಕುರಿತು ಶೀಘ್ರದಲ್ಲೇ ದೆಹಲಿಗೆ ತೆರಳಿ ಪ್ರಧಾನಿ ಮೋದಿಯನ್ನು ಖುದ್ದಾಗಿ ಭೇಟಿ ಮಾಡಿ ಚರ್ಚಿಸುವುದಾಗಿ ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version