ಬೀದರ್, ಜೂನ್ 6: ನ್ಯಾಯಾಲಯದ ಆದೇಶವಾಗಿದ್ದರೂ ಅಪಘಾತದಲ್ಲಿ ಮೃತಪಟ್ಟ ಮಹಿಳೆಯ ಕುಟುಂಬಕ್ಕೆ ನಿಗದಿತ ಪರಿಹಾರ ಮೊತ್ತ ನೀಡಲು ವಿಳಂಬ ಮಾಡಿದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ (KKRTC) ಬೀದರ್ ನ್ಯಾಯಾಲಯ ಭಾರಿ ಶಾಕ್ ನೀಡಿದೆ. ಕೋರ್ಟ್ ಆದೇಶ ಪಾಲಿಸದ ಹಿನ್ನೆಲೆಯಲ್ಲಿ ಕೆಕೆಆರ್ಟಿಸಿ ಸಂಸ್ಥೆಗೆ ಸೇರಿದ ಬಸ್ಸನ್ನೇ ಜಪ್ತಿ ಮಾಡಲಾಗಿದೆ. 2021 ರ ಆಗಸ್ಟ್ 15 ರಂದು ಭಾಲ್ಕಿ ತಾಲೂಕಿನ ಟೆಕ್ನಿ ಗ್ರಾಮದ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿತ್ತು. ಈ ಅಪಘಾತದಲ್ಲಿ ರೇಖಾ ಸುನೀಲ್ (35) ಎಂಬ ಮಹಿಳೆ ಮೃತಪಟ್ಟಿದ್ದರು. ಈ ಕುರಿತು ವಿಚಾರಣೆ ನಡೆಸಿದ್ದ ಬೀದರ್ನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು, ಮೃತ ಮಹಿಳೆಯ ಕುಟುಂಬಕ್ಕೆ ಸುಮಾರು 22.50 ಲಕ್ಷ ರೂಪಾಯಿ ಪರಿಹಾರ ಮೊತ್ತ ಪಾವತಿಸುವಂತೆ ಅಕ್ಟೋಬರ್ 2025ರಲ್ಲಿ ಕೆಕೆಆರ್ಟಿಸಿಗೆ ಆದೇಶ ನೀಡಿತ್ತು. ಆದರೆ, ಕೋರ್ಟ್ ಆದೇಶ ಹೊರಬಿದ್ದು 7 ತಿಂಗಳು ಕಳೆದರೂ ಸಾರಿಗೆ ಸಂಸ್ಥೆ ಮಾತ್ರ ಪರಿಹಾರ ನೀಡದೆ ನಿರ್ಲಕ್ಷ್ಯ ವಹಿಸಿತ್ತು. ಇದರಿಂದ ಆಕ್ರೋಶಗೊಂಡ ಕುಟುಂಬದವರು ನ್ಯಾಯಾಲಯದ ಮೊರೆ ಹೋಗಿದ್ದರು. ಇದೀಗ ಕೋರ್ಟ್ ಸೂಚನೆಯ ಮೇರೆಗೆ ಕೆಕೆಆರ್ಟಿಸಿ ಬಸ್ ಅನ್ನು ಜಪ್ತಿ ಮಾಡಿ ಬೀದರ್ ಕೋರ್ಟ್ ಆವರಣಕ್ಕೆ ತಂದು ನಿಲ್ಲಿಸಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಮಲಯಾಳಂನಲ್ಲಿ ಸಿದ್ಧವಾದ ‘ದೃಶ್ಯಂ’ (Drishyam) ಸರಣಿ ಅದೇ ಹೆಸರಲ್ಲಿ ಹಿಂದಿಗೂ ರಿಮೇಕ್ ಆಗಿದೆ. ಈಗಾಗಲೇ ಎರಡು ಭಾಗ ತೆರೆಗೆ ಬಂದಿದ್ದು, ಮೂರನೇ ಭಾಗದ ಶೂಟಿಂಗ್ ಮುಕ್ತಾಯಗೊಂಡಿದೆ. ಈ ವರ್ಷದ ಅಕ್ಟೋಬರ್ 2ರಂದು ಸಿನಿಮಾ ತೆರೆಗೆ ಬರಲು ಸಜ್ಜಾಗುತ್ತಿದೆ. ಈ ಬಾರಿ ಈ ಚಿತ್ರದಲ್ಲಿ ಕನ್ನಡಿಗರು ಹೆಮ್ಮೆಪಡುವಂತಹ ದೊಡ್ಡ ಸುದ್ದಿಯೊಂದಿದೆ. ಹೌದು, ಭಾರತೀಯ ಚಿತ್ರರಂಗದ ಸ್ಟಾರ್ ಮ್ಯೂಸಿಕ್ ಡೈರೆಕ್ಟರ್, ಕನ್ನಡಿಗ ರವಿ ಬಸ್ರೂರು ಅವರಿಗೆ ‘ದೃಶ್ಯಂ 3’ ಚಿತ್ರಕ್ಕೆ ಸಂಗೀತ ನೀಡುವ ಆಫರ್ ಸಿಕ್ಕಿದೆ.
ವಿಶೇಷವೆಂದರೆ, ‘ದೃಶ್ಯಂ’ ಸರಣಿಯ ಹಿಂದಿನ ಎರಡು ಭಾಗಗಳಿಗೆ ಬೇರೆ ಬೇರೆ ಸಂಗೀತ ನಿರ್ದೇಶಕರು ಕೆಲಸ ಮಾಡಿದ್ದರು. ಮೊದಲ ಭಾಗಕ್ಕೆ ವಿಶಾಲ್ ಭಾರದ್ವಾಜ್ ಹಾಗೂ ಎರಡನೇ ಭಾಗಕ್ಕೆ ದೇವಿ ಶ್ರೀ ಪ್ರಸಾದ್ ಸಂಗೀತ ನೀಡಿದ್ದರು. ಆದರೆ, ಈಗ ‘ದೃಶ್ಯಂ 3’ ಚಿತ್ರಕ್ಕೆ ಸಂಗೀತ ನೀಡುವ ಜವಾಬ್ದಾರಿಯನ್ನು ನಿರ್ಮಾಪಕರು ರವಿ ಬಸ್ರೂರು ಹೆಗಲಿಗೆ ಹೊರಿಸಿದ್ದಾರೆ.
ಅಜಯ್ ದೇವಗನ್ ಅವರೊಂದಿಗೆ ಈಗಾಗಲೇ ‘ಭೋಲಾ’ ಮತ್ತು ‘ಸಿಂಗಂ ಅಗೇನ್’ ಚಿತ್ರಗಳಲ್ಲಿ ಕೆಲಸ ಮಾಡಿರುವ ರವಿ ಬಸ್ರೂರು, ಈಗ ‘ದೃಶ್ಯಂ 3’ ಚಿತ್ರಕ್ಕೆ ಟ್ಯೂನ್ ಹಾಕುತ್ತಿರುವುದು ಅವರ ವೃತ್ತಿಜೀವನದ ಮತ್ತೊಂದು ಮೈಲಿಗಲ್ಲಾಗಿದೆ.
ಯಾವುದೇ ಗಾಡ್ಫಾದರ್ ಇಲ್ಲದೆ, ಕರಾವಳಿಯ ಸಣ್ಣ ಹಳ್ಳಿಯಿಂದ ಬಂದು ಇಂದು ಭಾರತೀಯ ಚಿತ್ರರಂಗವೇ ತಿರುಗಿ ನೋಡುವಂತೆ ಮಾಡಿರುವ ರವಿ ಬಸ್ರೂರು ಅವರ ಜರ್ನಿ ನಿಜಕ್ಕೂ ಸ್ಪೂರ್ತಿದಾಯಕ. ಪ್ರಶಾಂತ್ ನೀಲ್ ನಿರ್ದೇಶನದ ‘ಉಗ್ರಂ’ ಚಿತ್ರದ ಮೂಲಕ ಸ್ವತಂತ್ರ ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡ ಇವರು, ಮುಂದೆ ‘ಕೆಜಿಎಫ್’ ಫ್ರಾಂಚೈಸಿ ಮೂಲಕ ಇಡೀ ದೇಶಾದ್ಯಂತ ಸಂಚಲನ ಸೃಷ್ಟಿಸಿದರು. ಆ ಸಿನಿಮಾದ ಇವರ ಬಿಜಿಎಂ ಇಂಟರ್ನ್ಯಾಷನಲ್ ಮಟ್ಟದಲ್ಲಿ ಸೌಂಡ್ ಮಾಡಿತು. ಈಗ ರವಿ ಬಸ್ರೂರು ಇಂದು ಪ್ಯಾನ್-ಇಂಡಿಯಾ ಮಟ್ಟದ ಮೋಸ್ಟ್ ವಾಂಟೆಡ್ ಮ್ಯೂಸಿಕ್ ಡೈರೆಕ್ಟರ್ ಆಗಿ ಬೆಳೆದು ನಿಂತಿದ್ದಾರೆ.
ಮಲಯಾಳಂ ಕಿಂತ ವಿಭಿನ್ನವಾಗಿರಲಿದೆ ಹಿಂದಿ ‘ದೃಶ್ಯಂ 3’
ಕಳೆದ ಮೇ 21 ರಂದು ಬಿಡುಗಡೆಯಾದ ಮೂಲ ಮಲಯಾಳಂ ‘ದೃಶ್ಯಂ 3’ ಚಿತ್ರಕ್ಕೂ, ಹಿಂದಿ ಆವೃತ್ತಿಗೂ ಸಾಕಷ್ಟು ವ್ಯತ್ಯಾಸ ಇರಲಿದೆ ಎಂದು ತಿಳಿದುಬಂದಿದೆ. ಹಿಂದಿನ ಎರಡು ಭಾಗಗಳು ಒರಿಜಿನಲ್ ಕಥೆಯನ್ನೇ ಹೋಲುತ್ತಿದ್ದವು, ಆದರೆ ಈ ಬಾರಿ ಹಿಂದಿ ಪ್ರೇಕ್ಷಕರಿಗೆ ತಕ್ಕಂತೆ ಕಥೆ ಮತ್ತು ಟ್ವಿಸ್ಟ್ಗಳಲ್ಲಿ ದೊಡ್ಡ ಬದಲಾವಣೆ ಮಾಡಲಾಗಿದೆ. ಮಲಯಾಳಂ ಚಿತ್ರ ಎಮೋಷನಲ್ ಫ್ಯಾಮಿಲಿ ಡ್ರಾಮಾವಾಗಿದ್ದರೆ, ಅಜಯ್ ದೇವಗನ್ ನಟನೆಯ ಹಿಂದಿ ಚಿತ್ರ ಪಕ್ಕಾ ‘ಫ್ಯಾಮಿಲಿ ಥ್ರಿಲ್ಲರ್’ ಆಗಿರಲಿದೆ ಎಂದು ನಿರ್ದೇಶಕ ಅಭಿಷೇಕ್ ಪಾಠಕ್ ತಿಳಿಸಿದ್ದಾರೆ.
ಬೆಂಗಳೂರು, ಜೂನ್ 6: ಕರ್ನಾಟಕ ಕಾಂಗ್ರೆಸ್ (Congress) ಸರ್ಕಾರದಲ್ಲಿ ಉದ್ಭವಿಸಿರುವ ಖಾತೆ ಹಂಚಿಕೆ ಬಿಕ್ಕಟ್ಟು ಸದ್ಯ ಶಮನಗೊಳ್ಳುವ ಹಂತಕ್ಕೆ ತಲುಪಿದೆ. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಬಂಡಾಯವೆದ್ದಿದ್ದ ಹಿರಿಯ ನಾಯಕ ರಾಮಲಿಂಗಾ ರೆಡ್ಡಿ ಸಂಜೆ ವೇಳೆಗೆ ರಾಜೀನಾಮೆಯನ್ನು ವಾಪಸ್ ಪಡೆಯುವ ಸಾಧ್ಯತೆ ದಟ್ಟವಾಗಿದೆ. ಎಐಸಿಸಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಮಧ್ಯಪ್ರವೇಶಿಸಿ ಸಂಧಾನ ನಡೆಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಮತ್ತೊಂದೆಡೆ ಸಚಿವ ಸತೀಶ್ ಜಾರಕಿಹೊಳಿ ಅವರು ಅಸಮಾಧಾನಗೊಂಡಿರುವ ಮುನಿಯಪ್ಪ ಹಾಗೂ ರಾಮಲಿಂಗಾ ರೆಡ್ಡಿ ಪರವಾಗಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬಳಿ ಮಾತುಕತೆ ನಡೆಸಿದ್ದಾರೆ.
ಮುಖ್ಯಾಂಶಗಳು
ಸಂಜೆ ವೇಳೆಗೆ ರೆಡ್ಡಿ ರಾಜೀನಾಮೆ ವಾಪಸ್ ಸಾಧ್ಯತೆ.
ಸುರ್ಜೇವಾಲ ಜೊತೆ ಸಿಎಂ ಡಿಕೆಶಿ ತುರ್ತು ಚರ್ಚೆ.
ಮುನಿಯಪ್ಪಗೆ ಹೆಚ್ಚುವರಿ ಖಾತೆ ನೀಡಲು ಸತೀಶ್ ಆಗ್ರಹ.
ಸುರ್ಜೇವಾಲ ಭೇಟಿಯಾದ ರಾಮಲಿಂಗಾ ರೆಡ್ಡಿ
ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ರಾಮಲಿಂಗಾ ರೆಡ್ಡಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲರನ್ನು ಭೇಟಿಯಾಗಿ ಅಸಮಾಧಾನಕ್ಕೆ ಕಾರಣವನ್ನು ಸುದೀರ್ಘವಾಗಿ ವಿವರಿಸಿದ್ದಾರೆ. ‘ಬೆಂಗಳೂರು ಅಭಿವೃದ್ಧಿ ಖಾತೆಯನ್ನು ನೀಡುವುದಿಲ್ಲ ಎಂದಿದ್ದರೆ ನನಗೆ ಮೊದಲೇ ಹೇಳಬೇಕಿತ್ತು. ಮಾತು ಕೊಟ್ಟು ಈಗ ಹೀಗೆ ಮಾಡುವುದು ಸರಿಯಲ್ಲ. ಬೇರೆ ಖಾತೆ ನೀಡಲಾಗುತ್ತದೆ ಎಂದು ಮೊದಲೇ ತಿಳಿದಿದ್ದರೆ ನಾನು ಸಚಿವ ಸ್ಥಾನವನ್ನೇ ಸ್ವೀಕರಿಸುತ್ತಿರಲಿಲ್ಲ’ ಎಂದು ರೆಡ್ಡಿ ತೀವ್ರ ಬೇಸರ ಹೊರಹಾಕಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸುರ್ಜೇವಾಲ, ‘ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಈ ಸಮಸ್ಯೆಯನ್ನು ಸರಿಪಡಿಸಲಾಗುವುದು’ ಎಂಬ ಭರವಸೆ ನೀಡಿದ್ದಾರೆ. ಈ ಭರವಸೆಯ ಬೆನ್ನಲ್ಲೇ, ‘ನಾನು ಸಂಜೆವರೆಗೂ ಕಾಯುತ್ತೇನೆ, ಆ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ’ ಎಂದು ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ತಾಜ್ ವೆಸ್ಟ್ ಎಂಡ್ನಲ್ಲಿ ಡಿಕೆಶಿ-ಸುರ್ಜೇವಾಲ ತುರ್ತು ಸಭೆ
ರಾಮಲಿಂಗಾ ರೆಡ್ಡಿ ಭೇಟಿಯ ಬೆನ್ನಲ್ಲೇ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್ಗೆ ಧಾವಿಸಿ ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಭೇಟಿಯಾಗಿದ್ದಾರೆ. ರಾಮಲಿಂಗಾ ರೆಡ್ಡಿಯೊಂದಿಗೆ ತಾವು ನಡೆಸಿದ ಮಾತುಕತೆಯ ವಿವರಗಳನ್ನು ಸಿಎಂ ಡಿಕೆಶಿ ಅವರು ಉಸ್ತುವಾರಿಗಳಿಗೆ ವಿವರಿಸಿದ್ದಾರೆ. ಉಭಯ ನಾಯಕರು ಹೈಕಮಾಂಡ್ ಸೂಚನೆಯಂತೆ ಮುಂದಿನ ಕಾರ್ಯತಂತ್ರದ ಕುರಿತು ಸುದೀರ್ಘ ಚರ್ಚೆ ನಡೆಸಿದ್ದಾರೆ.
ಮುನಿಯಪ್ಪ, ರೆಡ್ಡಿ ಪರ ಸತೀಶ್ ಜಾರಕಿಹೊಳಿ ಬ್ಯಾಟಿಂಗ್
ಖಾತೆ ಹಂಚಿಕೆಯ ಬೆನ್ನಲ್ಲೇ ಹಿರಿಯ ಸಚಿವರಲ್ಲಿ ಉಂಟಾಗಿರುವ ಅಸಮಾಧಾನದ ಕುರಿತು ಸಚಿವ ಸತೀಶ್ ಜಾರಕಿಹೊಳಿ ಶುಕ್ರವಾರ ರಾತ್ರಿ ಪ್ರತ್ಯೇಕವಾಗಿ ಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ. ಚರ್ಚೆಯ ವೇಳೆ ಕೆ.ಎಚ್. ಮುನಿಯಪ್ಪ ಅವರ ಪರವಾಗಿ ಪ್ರಬಲವಾಗಿ ಧ್ವನಿ ಎತ್ತಿರುವ ಸತೀಶ್, ‘ಮುನಿಯಪ್ಪ ದಲಿತ ಎಡಗೈ ಸಮುದಾಯದ ಅತ್ಯಂತ ಪ್ರಮುಖ ಮತ್ತು ಹಿರಿಯ ನಾಯಕರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜೊತೆಯಲ್ಲಿಟ್ಟುಕೊಳ್ಳುವುದು ಪಕ್ಷಕ್ಕೆ ಅನಿವಾರ್ಯ. ಆದ್ದರಿಂದ ಅವರಿಗೆ ಆಹಾರ ಇಲಾಖೆಯ ಜೊತೆಗೆ ಹೆಚ್ಚುವರಿಯಾಗಿ ‘ಸಣ್ಣ ನೀರಾವರಿ’ ಖಾತೆಯನ್ನು ನೀಡಬೇಕು’ ಎಂದು ಒತ್ತಾಯಿಸಿದ್ದಾರೆ.
ಇದೇ ವೇಳೆ, ರಾಮಲಿಂಗಾ ರೆಡ್ಡಿ ಕುರಿತೂ ಮಾತನಾಡಿದ ಸತೀಶ್ ಜಾರಕಿಹೊಳಿ, ‘ರಾಮಲಿಂಗಾ ರೆಡ್ಡಿ ಬೆಂಗಳೂರಿನ ಪ್ರಮುಖ ಮತ್ತು ಪ್ರಭಾವಿ ನಾಯಕರು. ಬೆಂಗಳೂರು ನಗರದ ರಾಜಕೀಯವನ್ನು ನಿಭಾಯಿಸಲು ಅವರೇ ಸೂಕ್ತ ವ್ಯಕ್ತಿ. ಆದ್ದರಿಂದ ಅವರನ್ನು ಯಾವುದೇ ಕಾರಣಕ್ಕೂ ಕಡೆಗಣಿಸದೆ ವಿಶ್ವಾಸಕ್ಕೆ ಪಡೆಯುವುದು ಸೂಕ್ತ’ ಎಂದು ಮುಖ್ಯಮಂತ್ರಿಗಳಿಗೆ ಕಿವಿಮಾತು ಹೇಳಿದ್ದಾರೆ.
ರಾಜ್ಯ ಸರ್ಕಾರದ ವಿರುದ್ಧ ಪ್ರಧಾನಿ ಮೋದಿ ಟೀಕೆಗೆ ಸಿಎಂ ಡಿಕೆಶಿ ತಿರುಗೇಟು
ಕಾಂಗ್ರೆಸ್ ಸಂಪುಟದ ಆಂತರಿಕ ಭಿನ್ನಮತವನ್ನು ಗುಜರಾತ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಟೀಕಿಸಿರುವ ವಿಚಾರವಾಗಿ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ನೂತನ ಸರ್ಕಾರ ರಚನೆಯಾದಾಗ ನನಗೆ ವೈಯಕ್ತಿಕವಾಗಿ ಶುಭ ಹಾರೈಸಿದ್ದಾರೆ. ಅದಕ್ಕಾಗಿ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಆದರೆ, ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ನಾವು ಮತ್ತು ಅವರು ರಾಜಕೀಯ ಮಾಡುವುದು ಬೇಡ. ನಮ್ಮ ಸರ್ಕಾರ ಇರುವುದು ಜನರ ಕಲ್ಯಾಣ ಮತ್ತು ಅಭಿವೃದ್ಧಿಗಾಗಿ ಎಂದು ಡಿಕೆಶಿ ತಿರುಗೇಟು ನೀಡಿದ್ದಾರೆ.
ಅಲ್ಲದೆ, ರಾಜ್ಯದ ಪ್ರಮುಖ ನೀರಾವರಿ ಹಾಗೂ ಅಭಿವೃದ್ಧಿ ಯೋಜನೆಗಳ ಕುರಿತು ಶೀಘ್ರದಲ್ಲೇ ದೆಹಲಿಗೆ ತೆರಳಿ ಪ್ರಧಾನಿ ಮೋದಿಯನ್ನು ಖುದ್ದಾಗಿ ಭೇಟಿ ಮಾಡಿ ಚರ್ಚಿಸುವುದಾಗಿ ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಸುದೀಪ್ ಅಳಿಯ ಸಂಚಿತ್ ಸಂಜೀವ್ ಅವರ ‘ಮ್ಯಾಂಗೋ ಪಚ್ಚ’ ಸಿನಿಮಾ ಮೆಚ್ಚುಗೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಸಿನಿಮಾ ಸುದ್ದಿಗೋಷ್ಠಿ ಕರೆದಿದೆ. ಈ ಸುದ್ದಿಗೋಷ್ಠಿಯಲ್ಲಿ ಚಿತ್ರದ ವಿಭಿನ್ನ ಕಥಾಹಂದರ ಹಾಗೂ ಮೇಕಿಂಗ್ ಬಗ್ಗೆ ಪ್ರೇಕ್ಷಕರಿಂದ ಅದ್ಭುತವಾದ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಇಡೀ ತಂಡ ಸಂತಸ ವ್ಯಕ್ತಪಡಿಸಿದೆ. ಕಮರ್ಷಿಯಲ್ ಅಂಶಗಳ ಜೊತೆಗೆ ಸಾಗುವ ಈ ಕಥೆ ಜನರಿಗೆ ಸಖತ್ ಇಷ್ಟವಾಗಿದ್ದು, ಪ್ರೇಕ್ಷಕರು ಚಿತ್ರಮಂದಿರಗಳತ್ತ ಮುಖ ಮಾಡುತ್ತಿದ್ದಾರೆ. ಮೊದಲ ಸಿನಿಮಾದಲ್ಲೇ ಸಂಚಿತ್ ಸಂಜೀವ್ ತಮ್ಮ ಅತ್ಯುತ್ತಮ ನಟನೆ, ಆಕ್ಷನ್ ಹಾಗೂ ಸ್ವಾಗ್ ಮೂಲಕ ಸಿನಿಪ್ರೇಮಿಗಳ ಮತ್ತು ವಿಮರ್ಶಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಗಳೂರು: ಲಕ್ಷಾಂತರ ವಿದ್ಯಾರ್ಥಿಗಳ ಬಹುದಿನಗಳ ಕಾಯುವಿಕೆಗೆ ಕೊನೆಗೂ ತೆರೆ ಬಿದ್ದಿದೆ. 2026ನೇ ಸಾಲಿನ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯ (UGCET-2026) ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಇಂದು ಅಧಿಕೃತವಾಗಿ ಪ್ರಕಟಿಸಿದೆ.
ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವರು ಹಾಗೂ ಕೆಇಎ ಸಹಾಧ್ಯಕ್ಷರಾದ ಡಾ. ಶರಣ ಪ್ರಕಾಶ್ ಪಾಟೀಲ್ ಅವರು ಇಂದು ಮಧ್ಯಾಹ್ನ 12:00 ಗಂಟೆಗೆ ಜಂಟಿ ಸುದ್ದಿಗೋಷ್ಠಿ ನಡೆಸಿ ಫಲಿತಾಂಶವನ್ನು ಬಿಡುಗಡೆ ಮಾಡಿದ್ದಾರೆ. ಮಧ್ಯಾಹ್ನ 2:00 ಗಂಟೆಯ ನಂತರ ಅಭ್ಯರ್ಥಿಗಳು ಆನ್ಲೈನ್ ಮೂಲಕ ತಮ್ಮ ಅಂಕಪಟ್ಟಿ ಮತ್ತು ರ್ಯಾಂಕ್ ಅನ್ನು ವೀಕ್ಷಿಸಬಹುದಾಗಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ತಿಳಿಸಿದ್ದಾರೆ.
ಈ ಲಿಂಕ್ಗಳ ಮೂಲಕ ನೇರವಾಗಿ ಫಲಿತಾಂಶ ವೀಕ್ಷಿಸಿ:
ಹೆಚ್ಚಿನ ಟ್ರಾಫಿಕ್ನಿಂದಾಗಿ ವೆಬ್ಸೈಟ್ ಕ್ರ್ಯಾಶ್ ಆಗುವುದನ್ನು ತಪ್ಪಿಸಲು ಕೆಇಎ ಈ ಬಾರಿ ಹಲವು ಪರ್ಯಾಯ ಲಿಂಕ್ಗಳನ್ನು ನೀಡಿದೆ. ವಿದ್ಯಾರ್ಥಿಗಳು ಕೆಳಗಿನ ಅಧಿಕೃತ ಲಿಂಕ್ಗಳ ಮೇಲೆ ಕ್ಲಿಕ್ ಮಾಡಿ ರಿಸಲ್ಟ್ ಚೆಕ್ ಮಾಡಬಹುದು:
ಫಲಿತಾಂಶ ಪರಿಶೀಲಿಸುವುದು ಹೇಗೆ? (Steps to Check):
ವಿದ್ಯಾರ್ಥಿಗಳು ತಮ್ಮ ಸ್ಕೋರ್ಕಾರ್ಡ್ ಅನ್ನು ಸುಲಭವಾಗಿ ಡೌನ್ಲೋಡ್ ಮಾಡಲು ಈ ಕೆಳಗಿನ ಹಂತಗಳನ್ನು ಅನುಸರಿಸಿ:
ಮೊದಲು ಮೇಲೆ ನೀಡಲಾದ ಯಾವುದೇ ಒಂದು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.
ಮುಂದಿನ ಕೌನ್ಸೆಲಿಂಗ್ ಹಾಗೂ ಸೀಟು ಹಂಚಿಕೆ ಪ್ರಕ್ರಿಯೆಗೆ ಈ ಸ್ಕೋರ್ಕಾರ್ಡ್ ಅತ್ಯಂತ ಅಗತ್ಯವಾಗಿರುವುದರಿಂದ, ಫಲಿತಾಂಶದ ಪ್ರತಿಯನ್ನು ಪ್ರಿಂಟ್ (Print) ಅಥವಾ ಪಿಡಿಎಫ್ ರೂಪದಲ್ಲಿ ಡೌನ್ಲೋಡ್ ಮಾಡಿಕೊಂಡು ಸುರಕ್ಷಿತವಾಗಿ ಇಟ್ಟುಕೊಳ್ಳಿ.
ಸರ್ವರ್ ನಿಧಾನವಾದರೆ ಆತಂಕ ಬೇಡ:
ಒಂದೇ ಸಮಯದಲ್ಲಿ ರಾಜ್ಯಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳು ವೆಬ್ಸೈಟ್ಗೆ ಲಾಗಿನ್ ಆಗುವುದರಿಂದ ಸರ್ವರ್ ಸ್ಲೋ ಆಗುವ ಅಥವಾ ‘Error’ ಬರುವ ಸಾಧ್ಯತೆ ಇರುತ್ತದೆ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳು ಯಾವುದೇ ಆತಂಕಕ್ಕೆ ಒಳಗಾಗದೆ, ಸ್ವಲ್ಪ ಸಮಯ ಕಾಯ್ದು ಪರ್ಯಾಯ ಲಿಂಕ್ಗಳ ಮೂಲಕ ಮತ್ತೊಮ್ಮೆ ಪ್ರಯತ್ನಿಸುವಂತೆ ಕೆಇಎ ವಿದ್ಯಾರ್ಥಿಗಳಲ್ಲಿ ಮನವಿ ಮಾಡಿದೆ.
ರಾಜ್ಯದ ಪ್ರಮುಖ ಇಂಜಿನಿಯರಿಂಗ್, ಕೃಷಿ ವಿಜ್ಞಾನ (Agriculture), ಪಶುಸಂಗೋಪನೆ (Veterinary) ಹಾಗೂ ಫಾರ್ಮಸಿ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ಗಳ ಭವಿಷ್ಯವನ್ನು ಈ ಸಿಇಟಿ ಫಲಿತಾಂಶ ನಿರ್ಧರಿಸಲಿದೆ.
ಶಿಕ್ಷಣಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರಲ್ಲಿ 60 ಸಾವಿರ ಸಂಬಳದ ಕೆಲಸಕ್ಕೆ 22ರ ಯುವತಿ ದಿಢೀರ್ ರಿಸೈನ್! Image Credit source: dikshaaonly instagram account
ಬೆಂಗಳೂರು, ಜೂನ್ 06: ಇಂದಿನ ದಿನಗಳಲ್ಲಿ ಕೈತುಂಬಾ ಸಂಬಳ ಕೊಡುವ ಐಟಿ ಅಥವಾ ಕಾರ್ಪೊರೇಟ್ ಕೆಲಸ ಸಿಗುವುದೇ ಕಷ್ಟ. ಇಂತಹ ಸಂದರ್ಭದಲ್ಲಿ ಬೆಂಗಳೂರಿನಲ್ಲಿರುವ (Bengaluru)22 ವರ್ಷದ ದೀಕ್ಷಾ ಎಂಬ ಯುವತಿ, ತನಗಿದ್ದ ತಿಂಗಳ 60 ಸಾವಿರ ರೂ. ಆದಾಯದ ಮಾರ್ಕೆಟಿಂಗ್ ಕೆಲಸಕ್ಕೆ ಯಾವುದೇ ಪರ್ಯಾಯ ಯೋಜನೆ ಇಲ್ಲದೆ ರಾಜೀನಾಮೆ ನೀಡಿ ಎಲ್ಲರ ಗಮನ ಸೆಳೆದಿದ್ದಾಳೆ.
ಮುಖ್ಯಾಂಶಗಳು
ಬೆಂಗಳೂರಿನ 22 ವರ್ಷದ ಯುವತಿಯಿಂದ 60 ಸಾವಿರ ಸಂಬಳದ ಕೆಲಸಕ್ಕೆ ರಾಜೀನಾಮೆ.
ಯಾವುದೇ ಬ್ಯಾಕಪ್ ಪ್ಲಾನ್ ಇಲ್ಲದೆ ಕಾರ್ಪೊರೇಟ್ ಕೆಲಸ ಬಿಟ್ಟ ದೀಕ್ಷಾ.
ಒತ್ತಡದ ದಿನಚರಿಗೆ ಬೇಸತ್ತು ರಿಸ್ಕ್ ತಗೊಡ ಯುವತಿಗೆ ನೆಟ್ಟಿಗರ ಸಾಥ್.
ಕಾಲೇಜು ಪ್ಲೇಸ್ಮೆಂಟ್ ಮೂಲಕ ಮಾರ್ಕೆಟಿಂಗ್ ಕೆಲಸ ಗಿಟ್ಟಿಸಿಕೊಂಡಿದ್ದ ದೀಕ್ಷಾ, ಈ ಉದ್ಯೋಗಕ್ಕಾಗಿಯೇ ಬೆಂಗಳೂರಿಗೆ ಶಿಫ್ಟ್ ಆಗಿದ್ದಳು. ಇತ್ತೀಚೆಗೆ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿರುವ ಆಕೆ, ತನ್ನ ನಿರ್ಧಾರದ ಹಿಂದಿನ ಅಸಲಿ ಕಾರಣವನ್ನು ಬಿಚ್ಚಿಟ್ಟಿದ್ದಾಳೆ.
ಇದು 9 ಟು 5 ಅಲ್ಲ, 9 ಟು 9 ಲೈಫ್
ಅಷ್ಟು ಒಳ್ಳೆಯ ಕೆಲಸಕ್ಕೆ ರಿಸೈನ್ ಕೊಟ್ಟ ದೀಕ್ಷಾ, ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ಹಂಚಿಕೊಡಿದ್ದಾಳೆ. ನನಗೆ 22 ವರ್ಷಕ್ಕೇ ತಿಂಗಳಿಗೆ 60 ಸಾವಿರ ಸಂಬಳ ಸಿಗುತ್ತಿತ್ತು. ಕೆಲಸವೂ ಸಖತ್ ಮಜವಾಗಿತ್ತು, ಒಳ್ಳೆಯ ಸ್ನೇಹಿತರು ಸಿಕ್ಕಿದ್ದರು. ಆದರೆ ನನಗೆ ಪ್ರತಿದಿನ ಅದೇ ದಿನಚರಿ (Routine) ಸಾಕಾಗಿಹೋಗಿತ್ತು. ಇದು ಕೇವಲ ಬೆಳಗ್ಗೆ 9 ರಿಂದ ಸಂಜೆ 5 ರ ಕೆಲಸವಾಗಿರಲಿಲ್ಲ. ಬದಲಿಗೆ ಬೆಳಗ್ಗೆ 9 ರಿಂದ ರಾತ್ರಿ 9 ರವರೆಗೆ ದುಡಿಯುವುದು, ಮನೆಗೆ ಬಂದು ಊಟ ಮಾಡಿ ಮಲಗುವುದು. ಮತ್ತೆ ಇದನ್ನೇ ಪುನರಾವರ್ತಿಸುವ ಈ ಜೀವನ ನನಗೆ ಸಾಕೆನ್ನಿಸಿದೆ. ನಮ್ಮದೇ ಸ್ವಂತ ಜೀವನವನ್ನು ಆನಂದಿಸಲು ಕೇವಲ ವೀಕೆಂಡ್ಗಾಗಿ ಕಾಯುವ ಪರಿಸ್ಥಿತಿ ನನಗಿಷ್ಟವಿರಲಿಲ್ಲ ಎಂದು ದೀಕ್ಷಾ ಹೇಳಿದ್ದಾಳೆ.
ಯೋಚನೆ ಮಾಡಿ ತಲೆ ಕೆಡಿಸಿಕೊಳ್ಳುವುದಕ್ಕಿಂತ ರಿಸೈನ್ ಮಾಡುವುದೇ ಲೇಸು!
ಯಾವುದೇ ಪ್ಲಾನ್ ಇಲ್ಲದೆ ಕೆಲಸ ಬಿಡುವ ರಿಸ್ಕ್ ಬಗ್ಗೆ ಮಾತನಾಡಿದ ಆಕೆ, ದಿನವೂ ಯೋಚನೆ ಮಾಡಿ ತಲೆ ಕೆಡಿಸಿಕೊಳ್ಳುವುದಕ್ಕಿಂತ, ಯಾವುದೋ ಒಂದು ದಿನ ದಿಢೀರ್ ಎಂದು ಕಂಪನಿಗೆ ರಿಸೈನ್ ಮಾಡಿಬಿಟ್ಟೆ. ನನ್ನ ಬಳಿ ಯಾವುದೇ ಬ್ಯಾಕಪ್ ಪ್ಲಾನ್ ಇಲ್ಲ. ಮುಂದೆ ಜೀವನದಲ್ಲಿ ಏನು ಮಾಡಬೇಕೆಂದೂ ಗೊತ್ತಿಲ್ಲ. ಆದರೆ ಒಂದೇ ಕಡೆ ಇಡೀ ಜೀವನವನ್ನು ಕಳೆಯಲು ನನಗಿಷ್ಟವಿಲ್ಲ. ರಿಸ್ಕ್ ಇಲ್ಲದಿದ್ದರೆ ಲೈಫಲ್ಲಿ ಸ್ಟೋರಿಗಳೇ ಇರಲ್ಲ. ಸದ್ಯಕ್ಕೆ ನಾನು ಸ್ವತಂತ್ರವಾಗಿ ಬದುಕಲು ಬಯಸುತ್ತೇನೆ. ಒಂದು ವೇಳೆ ನನ್ನ ಈ ನಿರ್ಧಾರ ಕೈಕೊಟ್ಟರೆ, ಮತ್ತೆ ಮೊದಲಿನಿಂದ ಜೀವನ ಆರಂಭಿಸುತ್ತೇನೆ ಎಂದು ಧೈರ್ಯವಾಗಿ ಹೇಳಿಕೊಂಡಿದ್ದಾಳೆ.
ದೀಕ್ಷಾ ಧೈರ್ಯಕ್ಕೆ ನೆಟ್ಟಿಗರು ಫಿದಾ!
ದೀಕ್ಷಾ ಅವರ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಕಾರ್ಪೊರೇಟ್ ಜಗತ್ತಿನ ಒತ್ತಡದ ಜೀವನಕ್ಕೆ ಬೇಸತ್ತಿರುವ ಸಾವಿರಾರು ಯುವಜನರು ಈಕೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ನಿಮ್ಮ ವಿಡಿಯೋ ನನಗೂ ಕೆಲಸ ಬಿಡುವ ಧೈರ್ಯ ನೀಡಿದೆ ಎಂದು ಕೆಲವರು ಹೇಳಿದರೆ, ಕೆಲವೊಮ್ಮೆ ಜೀವನದಲ್ಲಿ ಇಂತಹ ಬ್ರೇಕ್ ತಗೊಳ್ಳುವುದು ತುಂಬಾನೇ ಮುಖ್ಯ, ಇದು ನಿಜಕ್ಕೂ ಧೈರ್ಯದ ನಿರ್ಧಾರ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ‘ಇಂಡಿಯನ್ ಪ್ರೀಮಿಯರ್ ಲೀಗ್’ (IPL) ಮುಕ್ತಾಯದ ಬೆನ್ನಲ್ಲೇ, ಕರ್ನಾಟಕದಲ್ಲಿ ‘ಮಹಾರಾಜ ಟ್ರೋಫಿ ಟಿ20’ ಟೂರ್ನಿಗೆ ವೇದಿಕೆ ಸಿದ್ಧವಾಗಿದೆ. ಇದರ ಮೊದಲ ಹೆಜ್ಜೆಯಾಗಿ ಈಗಾಗಲೇ 6 ತಂಡಗಳ ಹರಾಜು ಪ್ರಕ್ರಿಯೆ ಮುಗಿದಿದೆ. ಈ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಟಗಾರ ದೇವದತ್ ಪಡಿಕ್ಕಲ್ ಮಾರಾಟವಾಗಿದ್ದು ಕೇವಲ 2.6 ಲಕ್ಷ ರೂ.ಗೆ ಎಂದರೆ ನಂಬಲೇಬೇಕು!
ಮಹಾರಾಜ ಟ್ರೋಫಿ ಟಿ20 ಟೂರ್ನಿಯ ನಿಯಮಗಳ ಪ್ರಕಾರ, ಭಾರತ ತಂಡವನ್ನು ಅಥವಾ ಐಪಿಎಲ್ (IPL) ಪ್ರತಿನಿಧಿಸಿರುವ ಸ್ಟಾರ್ ಆಟಗಾರರನ್ನು ‘ಪೂಲ್ ಎ’ (Pool A) ವಿಭಾಗದಲ್ಲಿ ಸೇರಿಸಲಾಗಿತ್ತು. ಈ ವಿಭಾಗದ ಎಲ್ಲಾ ಆಟಗಾರರ ಕನಿಷ್ಠ ಮೂಲ ಬೆಲೆಯನ್ನು 2 ಲಕ್ಷ ರೂ. ಎಂದು ನಿಗದಿಪಡಿಸಲಾಗಿತ್ತು.
ಅದರಂತೆ 2 ಲಕ್ಷ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ದೇವದತ್ ಪಡಿಕ್ಕಲ್ ಮಾರಾಟವಾಗಿದ್ದು ಕೇವಲ 2.6 ಲಕ್ಷಕ್ಕೆ. ಇದರ ಬೆನ್ನಲ್ಲೇ ಇಷ್ಟೊಂದು ಕಡಿಮೆ ಮೊತ್ತಕ್ಕೆ ಬಿಡ್ ಆಗಲು ಕಾರಣವೇನು? ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಈ ಪ್ರಶ್ನೆಗೆ ಉತ್ತರ ಇಲ್ಲಿದೆ…
ಟೀಮ್ ಇಂಡಿಯಾ ಆಟಗಾರ:
2 ಲಕ್ಷ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ದೇವದತ್ಬ ಪಡಿಕ್ಕಲ್ ಅವರನ್ನು ಮೈಸೂರು ವಾರಿಯರ್ಸ್ ಫ್ರಾಂಚೈಸಿ 2.6 ಲಕ್ಷ ರೂ.ಗೆ ಖರೀದಿಸಿದ್ದರು. ಅಂದರೆ ಪಡಿಕ್ಕಲ್ ಅವರ ಖರೀದಿಗಾಗಿ ಹೆಚ್ಚಿನ ಫ್ರಾಂಚೈಸಿಗಳು ಆಸಕ್ತಿಯೇ ತೋರಿರಲಿಲ್ಲ. ಇದಕ್ಕೆ ಮುಖ್ಯ ಕಾರಣ ಟೀಮ್ ಇಂಡಿಯಾ ಆಟಗಾರ.
ಅಂತರರಾಷ್ಟ್ರೀಯ ಪಂದ್ಯಗಳ ವೇಳಾಪಟ್ಟಿಯಿಂದಾಗಿ ದೇವದತ್ ಪಡಿಕ್ಕಲ್ ಟೂರ್ನಿಯ ಎಲ್ಲಾ ಪಂದ್ಯಗಳಿಗೆ ಲಭ್ಯವಿರುವುದಿಲ್ಲ ಎಂಬುದು ಫ್ರಾಂಚೈಸಿಗಳಿಗೆ ಮೊದಲೇ ತಿಳಿದಿತ್ತು. ಮುಂಬರುವ ಭಾರತ ತಂಡದ ಸರಣಿಗಳಲ್ಲಿ ಭಾಗವಹಿಸಬೇಕಿರುವುದರಿಂದ, ಅವರು ಎಷ್ಟು ಪಂದ್ಯಗಳನ್ನು ಆಡಲಿದ್ದಾರೆ ಎಂಬ ಅನಿಶ್ಚಿತತೆ ಇತ್ತು. ಇದೇ ಕಾರಣಕ್ಕೆ ಹರಾಜಿನಲ್ಲಿ ಬೇರೆ ಯಾವುದೇ ತಂಡಗಳು ಇವರ ಮೇಲೆ ಭಾರಿ ಮೊತ್ತದ ಬಿಡ್ ಮಾಡಲು ಮುಂದಾಗಲಿಲ್ಲ.
ಪರಿಣಾಮವಾಗಿ, ಮೈಸೂರು ವಾರಿಯರ್ಸ್ ತಂಡವು ಕೇವಲ ತಲಾ 2.6 ಲಕ್ಷ ರೂ. ಮೂಲ ಬೆಲೆಗೆ ದೇವದತ್ ಪಡಿಕ್ಕಲ್ ಅವರನ್ನು ತಮ್ಮದಾಗಿಸಿಕೊಂಡಿದ್ದಾರೆ.
2025 ಮಹಾರಾಜ ಟಿ20 ಟೂರ್ನಿಯ ಹರಾಜಿನಲ್ಲಿ ದೇವದತ್ ಪಡಿಕ್ಕಲ್ ಬರೋಬ್ಬರಿ 13.20 ಲಕ್ಷ ರೂ.ಗೆ ಮಾರಾಟವಾಗಿದ್ದರು.
ಕಳೆದ ಸೀಸನ್ನಲ್ಲಿ ದೇವದತ್ ಪಡಿಕ್ಕಲ್ ಹುಬ್ಬಳ್ಳಿ ಟೈಗರ್ಸ್ ಪರ ಕಣಕ್ಕಿಳಿದಿದ್ದರು.
ಈ ಬಾರಿ ಮೈಸೂರು ವಾರಿಯರ್ಸ್ ಪರ ಆರ್ಸಿಬಿ ದಾಂಡಿಗ ಬ್ಯಾಟ್ ಬೀಸಲಿದ್ದಾರೆ.
ಇತ್ತ ಮಹಾರಾಜ ಟ್ರೋಫಿ ಸೀಸನ್-5 ಜೂನ್ 20 ರಿಂದ ಜುಲೈ 12, 2026 ರವರೆಗೆ ನಡೆಯಲಿದೆ. ಪಂದ್ಯಗಳು ಮೈಸೂರು, ಹುಬ್ಬಳ್ಳಿ ಮತ್ತು ಬೆಂಗಳೂರಿನಲ್ಲಿ ಆಯೋಜನೆಗೊಳ್ಳಲಿವೆ. ಇದೇ ವೇಳೆ ದೇವದತ್ ಪಡಿಕ್ಕಲ್ ಮಹಾರಾಜ ಟ್ರೋಫಿ ಟೂರ್ನಿಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.
ಅಂದರೆ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಅವರು ಆಯ್ಕೆಯಾದರೆ ಮಾತ್ರ ಬಹುತೇಕ ಪಂದ್ಯಗಳನ್ನು ತಪ್ಪಿಸಿಕೊಳ್ಳಲಿದ್ದಾರೆ. ಇಲ್ಲದಿದ್ದರೆ ಮೈಸೂರು ವಾರಿಯರ್ಸ್ ಪರ ಎಲ್ಲಾ ಮ್ಯಾಚ್ಗಳಲ್ಲೂ ಕಣಕ್ಕಿಳಿಯುವುದನ್ನು ಎದುರು ನೋಡಬಹುದು.
ಸ್ಯಾಂಡಲ್ವುಡ್ನ ನಟ, ನಿರ್ದೇಶಕ ‘ಸಿಂಪಲ್ ಸ್ಟಾರ್’ ರಕ್ಷಿತ್ ಶೆಟ್ಟಿ ಇಂದು (ಜೂನ್ 6) ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ವಿಶೇಷ ದಿನದಂದು ಅವರ ಆತ್ಮೀಯ ಗೆಳೆಯ, ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅವರು ಸೋಶಿಯಲ್ ಮೀಡಿಯಾದಲ್ಲಿ ವಿಭಿನ್ನವಾಗಿ ವಿಶ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಅಷ್ಟೇ ಅಲ್ಲದೆ, ಕಳೆದ ಕೆಲವು ದಿನಗಳಿಂದ ಇವರಿಬ್ಬರ ನಡುವೆ ಮನಸ್ತಾಪ ಉಂಟಾಗಿದೆ ಎಂದು ಹರಿದಾಡುತ್ತಿದ್ದ ಎಲ್ಲಾ ವದಂತಿಗಳಿಗೂ ರಿಷಬ್ ತಮ್ಮ ಒಂದೇ ಒಂದು ಪೋಸ್ಟ್ ಮೂಲಕ ಪೂರ್ಣವಿರಾಮ ಇಟ್ಟಿದ್ದಾರೆ.
ಮನಸ್ತಾಪದ ಸುದ್ದಿ ಸುಳ್ಳು ಮಾಡಿದ ರಿಷಬ್:
ಚಿತ್ರರಂಗದಲ್ಲಿ ದಶಕಗಳಿಗೂ ಹೆಚ್ಚಿನ ಸ್ನೇಹ ಹೊಂದಿರುವ ಈ ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವ ಮಾತುಗಳು ಗಾಂಧಿನಗರದ ತುಂಬೆಲ್ಲಾ ಕೇಳಿಬರುತ್ತಿದ್ದವು. ಆದರೆ ಇಂದು ರಕ್ಷಿತ್ ಹುಟ್ಟುಹಬ್ಬಕ್ಕೆ ಶುಭ ಕೋರಿರುವ ರಿಷಬ್ ಶೆಟ್ಟಿ, ಹಳೆಯ ಸುಂದರ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ.
‘ಕಿರಿಕ್ ಪಾರ್ಟಿ’ ಸೆಟ್ನನಲ್ಲಿ ತೆಗೆದ ಫೋಟೋ ಇದಾಗಿದೆ. ಇಬ್ಬರೂ ಮುಗುಳ್ನಗುತ್ತಾ ಇದ್ದಾರೆ. ‘ಬಂದು ಹೋಗುವ ಜನರ ಮಧ್ಯೆ ಈ ಗೆಳೆಯ ಶಾಶ್ವತ ಅಧ್ಯಾಯವಾಗಿದ್ದಾನೆ. ಹ್ಯಾಪಿ ಬರ್ತ್ಡೇ ಮಗ ರಕ್ಷಿತ್ ಶೆಟ್ಟಿ’ ಎಂದು ಬರೆಯುವ ಮೂಲಕ ತಮ್ಮ ನಡುವಿನ ಅಪೂರ್ವ ಸ್ನೇಹವನ್ನು ಜಗತ್ತಿಗೆ ಸಾರಿದ್ದಾರೆ.
ಹೊಸ ಸಿನಿಮಾ ಅಪ್ಡೇಟ್
ರಕ್ಷಿತ್ ಶೆಟ್ಟಿ ಅವರ ಮುಂದಿನ ಹೊಸ ಸಿನಿಮಾ ಅನೌನ್ಸ್ಮೆಂಟ್ ಆಗಿ ಸಾಕಷ್ಟು ಸಮಯ ಕಳೆದಿದೆ. ಆದರೆ, ಈ ಬಗ್ಗೆ ನಂತರ ಅಪ್ಡೇಟ್ ಸಿಕ್ಕಿಲ್ಲ. ಅಭಿಮಾನಿಗಳ ಪ್ರಶ್ನೆಗಳಿಗೂ ಈಗ ರಿಷಬ್ ಶೆಟ್ಟಿ ಅವರೇ ಉತ್ತರ ನೀಡಿದ್ದಾರೆ. ‘ಮೊನ್ನೆ ತಾನೇ ಭೇಟಿ ಮಾಡಿ ಬಂದೆ. ಅವನು ಸದ್ಯದಲ್ಲೇ ಮರಳಿ ಬರಲಿದ್ದಾನೆ’ ಎಂದು ರಿಷಬ್ ಬರೆದುಕೊಂಡಿದ್ದಾರೆ.
ಪರಿಶೋಧನಾ ಬಾವಿಯಲ್ಲಿ ಪರೀಕ್ಷೆ ವೇಳೆ ನೈಸರ್ಗಿಕ ಅನಿಲ ಹೊತ್ತಿ ಉರಿದಿರುವುದು ಹಾಗೂ ಬಲ ಚಿತ್ರದಲ್ಲಿ ಸಚಿವ ಹರ್ದೀಪ್ ಸಿಂಗ್ ಪುರಿImage Credit source: @HardeepSPuri
ನವದೆಹಲಿ, ಜೂನ್ 6: ಭಾರತದ ಇಂಧನ ಕ್ಷೇತ್ರದಲ್ಲಿ (Energy Sector) ಹೊಸದೊಂದು ಆಶಾವಾದ ಮೂಡಿಸುವ ಭಾರಿ ಬೆಳವಣಿಗೆ ನಡೆದಿದೆ. ಅಂಡಮಾನ್ ಸಮುದ್ರದಲ್ಲಿ ಬೃಹತ್ ಪ್ರಮಾಣದ ನೈಸರ್ಗಿಕ ಅನಿಲ ನಿಕ್ಷೇಪ ಪತ್ತೆಯಾಗಿದ್ದು, ದೇಶೀಯ ಇಂಧನ ಸ್ವಾವಲಂಬನೆಯ ಕನಸಿಗೆ ಹೊಸ ಚಾಲನೆ ಸಿಕ್ಕಂತಾಗಿದೆ. ಸರ್ಕಾರಿ ಸ್ವಾಮ್ಯದ ಆಯಿಲ್ ಇಂಡಿಯಾ ಲಿಮಿಟೆಡ್ (OIL) ಸಂಸ್ಥೆಯು ಅಂಡಮಾನ್ ದ್ವೀಪಗಳ ಸಾಗರೋತ್ತರ ಪರಿಶೋಧನಾ ಬಾವಿಯಲ್ಲಿ ನೈಸರ್ಗಿಕ ಅನಿಲ ಇರುವುದನ್ನು ಅಧಿಕೃತವಾಗಿ ಖಚಿತಪಡಿಸಿದೆ. ಇದು ಕೇಂದ್ರ ಸರ್ಕಾರದ ಸಾಗರೋತ್ತರ ಇಂಧನ ಪರಿಶೋಧನಾ ಯೋಜನೆಗೆ ಸಿಕ್ಕ ಅತ್ಯಂತ ದೊಡ್ಡ ಯಶಸ್ಸು ಎಂದು ಪರಿಗಣಿಸಲಾಗಿದೆ.
ಮುಖ್ಯಾಂಶಗಳು
ಅಂಡಮಾನ್ ಕಡಲಿನಲ್ಲಿ ಬೃಹತ್ ಅನಿಲ ನಿಕ್ಷೇಪ ಪತ್ತೆ.
‘ಶ್ರೀ ವಿಜಯಪುರಂ’ ಬಾವಿಯಲ್ಲಿ ನೈಸರ್ಗಿಕ ಅನಿಲ ನಿಕ್ಷೇಪ.
ಸಮುದ್ರ ಮಂಥನ ಮಿಷನ್ಗೆ ಬಿಗ್ ಬೂಸ್ಟ್.
ಅಂಡಮಾನ್ ದ್ವೀಪಗಳಲ್ಲಿ ಗ್ಯಾಸ್ ಪತ್ತೆಯ ಮಹತ್ವ ಏನು?
ಈ ನೈಸರ್ಗಿಕ ಅನಿಲದ ಆವಿಷ್ಕಾರವು ಕೇವಲ ಒಂದು ಬಾವಿಗೆ ಮಾತ್ರ ಸೀಮಿತವಾಗಿಲ್ಲ, ಇದರ ಮಹತ್ವ ಅತ್ಯಂತ ವಿಸ್ತಾರವಾದುದಾಗಿದೆ. ಅಂಡಮಾನ್ ಬೇಸಿನ್ (ಕೊಳ್ಳ) ಪ್ರದೇಶವು ಭಾರಿ ಪ್ರಮಾಣದ ಹೈಡ್ರೋಕಾರ್ಬನ್ ನಿಕ್ಷೇಪಗಳನ್ನು ಹೊಂದಿರಬಹುದು ಎಂದು ಭೂವಿಜ್ಞಾನಿಗಳು ದಶಕಗಳಿಂದ ನಂಬಿದ್ದರು. ಪ್ರಸ್ತುತ ಪತ್ತೆಯಾಗಿರುವ ಅನಿಲ ನಿಕ್ಷೇಪ ಆ ನಂಬಿಕೆಯನ್ನು ನಿಜವಾಗಿಸಿದೆ. ಆಯಿಲ್ ಇಂಡಿಯಾ ಲಿಮಿಟೆಡ್ ಪ್ರಸ್ತುತ ಕೈಗೊಂಡಿರುವ ಪರಿಶೋಧನಾ ಅಭಿಯಾನದಲ್ಲಿ ಕೊರೆದಿರುವ ಮೂರು ಬಾವಿಗಳಲ್ಲಿ ಈಗಾಗಲೇ ಎರಡು ಬಾವಿಗಳಲ್ಲಿ ಹೈಡ್ರೋಕಾರ್ಬನ್ ಇರುವುದು ವರದಿಯಾಗಿದೆ. ನಿಕ್ಷೇಪದ ಪ್ರಮಾಣ ಇನ್ನೂ ಪೂರ್ಣವಾಗಿ ಲಭ್ಯವಾಗಿಲ್ಲದಿದ್ದರೂ, ಇದು ಭವಿಷ್ಯದ ಇಂಧನ ಭದ್ರತೆಯ ದೃಷ್ಟಿಯಿಂದ ಅತ್ಯಂತ ಸಕಾರಾತ್ಮಕ ಸೂಚನೆಯಾಗಿದೆ.
ಭಾರತದ ಗ್ಯಾಸ್ ಸ್ವಾವಲಂಬನೆಗೆ ನೆರವಾಗಬಹುದೇ?
ಭಾರತವು ಪ್ರಸ್ತುತ ಇಂಧನ ಅಗತ್ಯಗಳಿಗಾಗಿ ವಿದೇಶಿ ಆಮದಿನ ಮೇಲೆ ಅತಿಯಾಗಿ ಅವಲಂಬಿತವಾಗಿದೆ. ದೇಶದ ಕಚ್ಚಾ ತೈಲದ ಶೇಕಡಾ 85 ಕ್ಕಿಂತ ಹೆಚ್ಚು ಅಗತ್ಯವನ್ನು ಆಮದಿನ ಮೂಲಕವೇ ಪೂರೈಸಲಾಗುತ್ತಿದೆ. ನೈಸರ್ಗಿಕ ಅನಿಲದ ಬೇಡಿಕೆಯ ಗಣನೀಯ ಪಾಲನ್ನು ಸಹ ಆಮದು ಮಾಡಿಕೊಳ್ಳಲಾದ ದ್ರವೀಕೃತ ನೈಸರ್ಗಿಕ ಅನಿಲ (LNG) ಮೂಲಕವೇ ಪಡೆದುಕೊಳ್ಳಲಾಗುತ್ತಿದೆ. ಅಂಡಮಾನ್ ಬೇಸಿನ್ನಲ್ಲಿ, ವಾಣಿಜ್ಯಿಕವಾಗಿ ಲಾಭದಾಯಕವಾಗಲ್ಲ ನಿಕ್ಷೇಪಗಳು ಅಧಿಕೃತವಾಗಿ ದೃಢಪಟ್ಟರೆ, ಭಾರತದ ಈ ಆಮದು ಅವಲಂಬನೆ ಗಣನೀಯವಾಗಿ ಕಡಿಮೆಯಾಗಲಿದೆ. ದೇಶೀಯ ಉತ್ಪಾದನೆ ಹೆಚ್ಚಳದಿಂದ ಜಾಗತಿಕ ಮಾರುಕಟ್ಟೆಯ ತೈಲ ಏರಿಳಿತಗಳಿಂದ ಭಾರತ ನಿರಾಳವಾಗಬಹುದು. ಆದರೆ ಗ್ರಾಹಕರಿಗೆ ಈ ಗ್ಯಾಸ್ ತಲುಪಬೇಕಿದ್ದರೆ ಅನೇಕ ಪ್ರಕ್ರಿಯೆಗಳಿವೆ. ಹಲವು ಸುತ್ತಿನ ಪರೀಕ್ಷೆಗಳು, ಮೂಲಸೌಕರ್ಯ ಅಭಿವೃದ್ಧಿ ಮತ್ತು ವಾಣಿಜ್ಯ ಅನುಮೋದನೆಗಳ ಸುದೀರ್ಘ ಪ್ರಕ್ರಿಯೆ ಆದ ನಂತರವಷ್ಟೇ ಅದು ಸಾಧ್ಯ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಭಾರತದ ಗಯಾನಾ ಆಗಲಿದೆಯೇ ಅಂಡಮಾನ್?
ಅಂಡಮಾನ್ ಬೇಸಿನ್ ಭಾರತದ ‘ಗಯಾನಾ’ ಆಗಲಿದೆಯೇ ಎಂಬ ಪ್ರಶ್ನೆ ಈಗ ಉದ್ಭವಿಸಿದೆ. ಗಯಾನಾದಲ್ಲಿ ಕಂಡುಬಂದ ಬೃಹತ್ ತೈಲ ನಿಕ್ಷೇಪಗಳು ಆ ದೇಶದ ಇಂಧನ ಚಿತ್ರಣವನ್ನೇ ಬದಲಾಯಿಸಿದ್ದವು. ಅದೇ ಮಾದರಿಯಲ್ಲಿ ಅಂಡಮಾನ್ ಕೂಡ ಭಾರತದ ಇಂಧನ ಭವಿಷ್ಯವನ್ನು ಬದಲಾಯಿಸಲಿದೆ ಎಂಬ ವಿಶ್ವಾಸ ವ್ಯಕ್ತವಾಗಿದೆ. ಈ ಬಗ್ಗೆ ಈ ಹಿಂದೆ ಇಂಧನ ಇಲಾಖೆ ಕೂಡ ವಿಶ್ವಾಸ ವ್ಯಕ್ತಪಡಿಸಿತ್ತು. ಪ್ರಾಥಮಿಕ ಸಮೀಕ್ಷೆಗಳ ಅಂದಾಜಿನ ಪ್ರಕಾರ, ಈ ಬೇಸಿನ್ನಲ್ಲಿ 307 ರಿಂದ 370 ಮಿಲಿಯನ್ ಮೆಟ್ರಿಕ್ ಟನ್ ತೈಲ-ಸಮಾನ ಹೈಡ್ರೋಕಾರ್ಬನ್ ಇರಬಹುದು ಎಂದು ಅಂದಾಜಿಸಲಾಗಿದೆ.
An ocean of energy opportunities reinforced in the Andaman Sea!
Very happy to report the presence of natural gas in Sri Vijayapuram-3 an exploratory well drilled by Oil India Ltd. 15 km off the east coast of the Andaman Islands at a water… pic.twitter.com/j6QvWqZkFx
ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅನಿಲ ನಿಕ್ಷೇಪ ಪತ್ತೆ ಕುರಿತು ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ. ‘ಅಂಡಮಾನ್ ಸಮುದ್ರದಲ್ಲಿ ಇಂಧನ ಅವಕಾಶಗಳ ಮಹಾಸಾಗರವೇ ಅನಾವರಣಗೊಂಡಿದೆ! ಆಯಿಲ್ ಇಂಡಿಯಾ ಲಿಮಿಟೆಡ್ ಅಂಡಮಾನ್ ದ್ವೀಪಗಳ ಪೂರ್ವ ಕರಾವಳಿಯಿಂದ 15 ಕಿಲೋಮೀಟರ್ ದೂರದಲ್ಲಿ, 355 ಮೀಟರ್ ನೀರಿನ ಆಳದಲ್ಲಿ ಕೊರೆದಿರುವ ‘ಶ್ರೀ ವಿಜಯಪುರಂ-3’ ಪರಿಶೋಧನಾ ಬಾವಿಯಲ್ಲಿ ನೈಸರ್ಗಿಕ ಅನಿಲ ಪತ್ತೆಯಾಗಿದೆ ಎಂಬುದನ್ನು ತಿಳಿಸಲು ಅತ್ಯಂತ ಸಂತೋಷವಾಗುತ್ತಿದೆ. ಬಾವಿಯ ಆರಂಭಿಕ ಉತ್ಪಾದನಾ ಪರೀಕ್ಷೆ ವೇಳೆ ನಿರಂತರ ಜ್ವಾಲೆ ಉರಿಯುವ ಮೂಲಕ ನೈಸರ್ಗಿಕ ಅನಿಲದ ಇರುವಿಕೆಯನ್ನು ದೃಢಪಡಿಸಿದೆ’ ಎಂದು ಸಚಿವರು ಬರೆದುಕೊಂಡಿದ್ದಾರೆ.
‘ಸಮುದ್ರ ಮಂಥನ ಮಿಷನ್’ಗೆ ಸಿಕ್ಕ ದೊಡ್ಡ ಗೆಲುವು
ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ್ದ ರಾಷ್ಟ್ರೀಯ ಆಳ ಸಮುದ್ರ ಪರಿಶೋಧನಾ ಯೋಜನೆ ಅಥವಾ ‘ಸಮುದ್ರ ಮಂಥನ ಮಿಷನ್’ಗೆ ಈ ಆವಿಷ್ಕಾರವು ಆರಂಭಿಕ ಮತ್ತು ದೊಡ್ಡ ಯಶಸ್ಸನ್ನು ತಂದುಕೊಟ್ಟಿದೆ. ಮಿಷನ್ ಮೋಡ್ನಲ್ಲಿ ಸಮುದ್ರದೊಳಗಿನ ಇಂಧನ ಸಂಪನ್ಮೂಲಗಳನ್ನು ಹೊರತೆಗೆಯಲು ಭಾರತ ಹೆಜ್ಜೆ ಇಟ್ಟಿರುವುದಕ್ಕೆ ಇದು ಪ್ರಬಲ ಸಾಕ್ಷಿಯಾಗಿದೆ. ಪ್ರಸ್ತುತ ಆಯಿಲ್ ಇಂಡಿಯಾ ಸಂಸ್ಥೆಯು ಗ್ಯಾಸ್ ಸ್ಯಾಂಪ್ಲಿಂಗ್ ಮತ್ತು ಐಸೊಟೋಪ್ ಅಧ್ಯಯನಗಳನ್ನು ನಡೆಸುತ್ತಿದ್ದು, ಮುಂಬರುವ ದಿನಗಳಲ್ಲಿ ಜಾಗತಿಕ ಆಳ ಸಮುದ್ರ ಪರಿಶೋಧನಾ ತಜ್ಞರ ಸಹಯೋಗದೊಂದಿಗೆ ಇಲ್ಲಿ ವಾಣಿಜ್ಯ ಕಾರ್ಯಾಚರಣೆ ಕೈಗೊಳ್ಳುವ ಯೋಜನೆಯನ್ನು ಸರ್ಕಾರ ಹೊಂದಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಭಾರತ ಮತ್ತು ಅಫ್ಘಾನಿಸ್ತಾನ್ ನಡುವಣ ಟೆಸ್ಟ್ ಪಂದ್ಯ ಶುರುವಾಗಿದೆ. ಮುಲ್ಲನ್ಪುರ್ನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ಶುಭ್ಮನ್ ಗಿಲ್ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. ಈ ಪಂದ್ಯವು ಭಾರತದ ಮುಖ್ಯವಲ್ಲ. ಅಂದರೆ ಈ ಮ್ಯಾಚ್ನಲ್ಲಿ ಗೆದ್ದರೂ, ಡ್ರಾ ಮಾಡಿಕೊಂಡರೂ ಅಥವಾ ಸೋತರೂ ಟೀಮ್ ಇಂಡಿಯಾ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ. ಏಕೆಂದರೆ ಈ ಪಂದ್ಯವು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಭಾಗವಲ್ಲ.
WTC ನಲ್ಲಿ ಅಫ್ಘಾನಿಸ್ತಾನ್ ತಂಡಕ್ಕೆ ಸ್ಥಾನವಿಲ್ಲ:
ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ನಿಯಮಗಳ ಪ್ರಕಾರ, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ (WTC) ಕೇವಲ ವಿಶ್ವದ ಅಗ್ರ 9 ಟೆಸ್ಟ್ ತಂಡಗಳು ಮಾತ್ರ ಆಡಲು ಅರ್ಹತೆ ಪಡೆದಿವೆ. ಅಫ್ಘಾನಿಸ್ತಾನ್ ತಂಡವು ಪೂರ್ಣ ಪ್ರಮಾಣದ ಟೆಸ್ಟ್ ಮಾನ್ಯತೆ ಹೊಂದಿದ್ದರೂ, ಸದ್ಯಕ್ಕೆ ಈ ಒಂಬತ್ತು ತಂಡಗಳ ಪಟ್ಟಿಯಲ್ಲಿಲ್ಲ. ಅಫ್ಘಾನಿಸ್ತಾನದ ಜೊತೆಗೆ ಐರ್ಲೆಂಡ್ ಮತ್ತು ಝಿಂಬಾಬ್ವೆ ತಂಡಗಳೂ ಸಹ WTC ಟೂರ್ನಿಯಿಂದ ಹೊರಗುಳಿದಿವೆ.
ಕನಿಷ್ಠ 2 ಪಂದ್ಯಗಳ ನಿಯಮ:
ಐಸಿಸಿ ನಿಯಮಾವಳಿಗಳ ಪ್ರಕಾರ, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಅಡಿಯಲ್ಲಿ ಬರುವ ಯಾವುದೇ ಸರಣಿಯಲ್ಲಿ ಕನಿಷ್ಠ 2 ಟೆಸ್ಟ್ ಪಂದ್ಯಗಳು ಇರಬೇಕು. ಆದರೆ ಭಾರತ ಮತ್ತು ಅಫ್ಘಾನಿಸ್ತಾನ್ ನಡುವೆ ನಡೆಯುತ್ತಿರುವುದು ಕೇವಲ ಒಂದು ಪಂದ್ಯದ ದ್ವಿಪಕ್ಷೀಯ ಸರಣಿಯಾಗಿದೆ. ಹೀಗಾಗಿ ಇದು WTC ವ್ಯಾಪ್ತಿಗೆ ಬರಲ್ಲ.
WTC ಪಾಯಿಂಟ್ಸ್ ಮೇಲೆ ಪ್ರಭಾವ ಬೀರಲ್ಲ!
ಈ ಪಂದ್ಯದಲ್ಲಿ ಭಾರತ ಗೆದ್ದರೂ ಅಥವಾ ಸೋತರೂ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಪಾಯಿಂಟ್ಸ್ ಟೇಬಲ್ನಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಭಾರತ ತಂಡವು ಪ್ರಸ್ತುತ WTC ಪಟ್ಟಿಯಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಶ್ರೀಲಂಕಾ, ವೆಸ್ಟ್ ಇಂಡೀಸ್ ಹಾಗೂ ನ್ಯೂಝಿಲೆಂಡ್ ತಂಡಗಳ ವಿರುದ್ಧದ ಸರಣಿಗಳನ್ನು ಅವಲಂಬಿಸಬೇಕಾಗಿದೆ.
ಮತ್ತೇಕೆ ಪಂದ್ಯವಾಡುತ್ತಿದ್ದಾರೆ?
ಐಸಿಸಿ ರ್ಯಾಂಕಿಂಗ್ ಬದಲಾವಣೆ: ಈ ಪಂದ್ಯದಿಂದ WTC ಪಾಯಿಂಟ್ಸ್ ಸಿಗದಿದ್ದರೂ, ತಂಡಗಳ ಮತ್ತು ಆಟಗಾರರ ಅಧಿಕೃತ ಐಸಿಸಿ (ICC) ರ್ಯಾಂಕಿಂಗ್ ಮೇಲೆ ಇದು ಪ್ರಭಾವ ಬೀರುತ್ತದೆ.
ಭವಿಷ್ಯದ ಸಿದ್ಧತೆ: ಮುಂಬರುವ ಪ್ರಮುಖ ಟೆಸ್ಟ್ ಸರಣಿಗಳಿಗೆ ಯುವ ಆಟಗಾರರನ್ನು ಸಿದ್ಧಪಡಿಸಲು ಮತ್ತು ಹೊಸ ಸಂಯೋಜನೆಗಳನ್ನು ಪರೀಕ್ಷಿಸಲು ಭಾರತೀಯ ಮ್ಯಾನೇಜ್ಮೆಂಟ್ಗೆ ಇದೊಂದು ಉತ್ತಮ ಅವಕಾಶವಾಗಿದೆ.
ದ್ವಿಪಕ್ಷೀಯ ಬಾಂಧವ್ಯ: ಅಫ್ಘಾನಿಸ್ತಾನ್ ಕ್ರಿಕೆಟ್ ಬೆಳವಣಿಗೆಗೆ ಭಾರತ ಮೊದಲಿನಿಂದಲೂ ಬೆಂಬಲ ನೀಡುತ್ತಾ ಬಂದಿದ್ದು, ಈ ಪಂದ್ಯವು ಉಭಯ ದೇಶಗಳ ಕ್ರೀಡಾ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಲಿದೆ.
ಭಾರತದ ಮುಂದಿನ WTC ಸರಣಿ ಯಾವುದು?
ಭಾರತ ತಂಡದ ಮುಂದಿನ ಅಧಿಕೃತ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (WTC) ಸರಣಿಯು ಆಗಸ್ಟ್ 2026 ರಲ್ಲಿ ಶ್ರೀಲಂಕಾ ವಿರುದ್ಧ ನಡೆಯಲಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾ 2 ಟೆಸ್ಟ್ ಪಂದಗಳನ್ನಾಡಲಿದೆ. ಇದಾದ ಬಳಿಕ ನ್ಯೂಝಿಲೆಂಡ್ ಹಾಗೂ ವೆಸ್ಟ್ ಇಂಡೀಸ್ ವಿರುದ್ಧ ತಲಾ 2 ಪಂದ್ಯಗಳ ಟೆಸ್ಟ್ ಸರಣಿಗಳನ್ನು ಆಡಲಿದೆ.
ಆ ಬಳಿಕ ಭಾರತ ತಂಡವು ನವೆಂಬರ್-ಡಿಸೆಂಬರ್ನಲ್ಲಿ ಸೌತ್ ಆಫ್ರಿಕಾ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕಣಕ್ಕಿಳಿಯಲಿದೆ. ಈ ಸರಣಿಯ ಬೆನ್ನಲ್ಲೇ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಶುರುವಾಗಲಿದೆ. ಈ ಎಲ್ಲಾ ಪಂದ್ಯಗಳು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಭಾಗವಾಗಿದ್ದು, ಟೀಮ್ ಇಂಡಿಯಾ WTC ನಲ್ಲಿ ಫೈನಲ್ಗೇರಲು ಈ ಮ್ಯಾಚ್ಗಳು ನಿರ್ಣಾಯಕ.