Video: ಪುದುಚೇರಿಯಲ್ಲಿ ಸೀರೆಯುಟ್ಟು ಮತದಾರರನ್ನು ಸ್ವಾಗತಿಸಿದ ರೋಬೋಟ್ ನೀಲಾ

Video: ಪುದುಚೇರಿಯಲ್ಲಿ ಸೀರೆಯುಟ್ಟು ಮತದಾರರನ್ನು ಸ್ವಾಗತಿಸಿದ ರೋಬೋಟ್ ನೀಲಾ

ಪುದುಚೇರಿ, ಏಪ್ರಿಲ್ 09: ಇಂದು ಎರಡು ರಾಜ್ಯ ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದೆ. ಅದರಲ್ಲಿ ಪುದುಚೇರಿ ಕೂಡ ಒಂದು. ಇಂದು ಬೆಳಗ್ಗೆಯಿಂದಲೇ ಮತದಾನ ಶುರುವಾಗಿದೆ. ಮತದಾರರು ಮತಗಟ್ಟೆಗೆ ಬರುತ್ತಿದ್ದಂತೆ ಒಂದು ಅಚ್ಚರಿ ಕಾದಿತ್ತು. ರೋಬೋಟ್ ನೀಲಾ ಕೈಯಲ್ಲಿ ಹೂವು, ಸ್ವೀಟುಗಳನ್ನು ಹಿಡಿದು ಮತದಾರರನ್ನು ಸ್ವಾಗತಿಸುತ್ತಿರುವುದು ಕಂಡು ಬಂತು. ಪುದುಚೇರಿಯ ಸರ್ಕಾರಿ ಶಾಲೆಯ ಮತದಾನ ಕೇಂದ್ರದಲ್ಲಿ ನೀಲಾ ಎಂಬ ರೋಬೋಟ್ ಮತದಾರರನ್ನು ಸ್ವಾಗತಿಸುತ್ತಿದೆ, ಮತದಾನದ ಅನುಭವಕ್ಕೆ ತಂತ್ರಜ್ಞಾನದ ಟಚ್ ಸಿಕ್ಕಂತಾಗಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಹಂಪಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಕಿ ಅವಘಡ: ತಪ್ಪಿದ ಭಾರಿ ಅನಾಹುತ

ಬಳ್ಳಾರಿ, ಏಪ್ರಿಲ್ 9: ಬಳ್ಳಾರಿಯಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಹಂಪಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಬುಧವಾರ ತಡರಾತ್ರಿ ಬೆಂಕಿ ಕಾಣಿಸಿಕೊಂಡಿದೆ. ಹಗರಿ ಗ್ರಾಮದ ಬಳಿ ರೈಲು ಚಲಿಸುತ್ತಿದ್ದಾಗ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದ್ದು, ತಕ್ಷಣ ರೈಲು ನಿಲ್ಲಿಸಿ ಬೆಂಕಿ ನಂದಿಸಲಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬೆಂಕಿ ನಂದಿಸಿದ ಬಳಿಕ ರೈಲು ಪ್ರಯಾಣ ಮುಂದುವರಿಸಿದ್ದು, ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಚಾರಣಿಗರ ಸುರಕ್ಷತೆಗೆ ಸರ್ಕಾರದ ಮಾಸ್ಟರ್ ಪ್ಲಾನ್: ಕಡ್ಡಾಯವಾಗಲಿದೆ ಟ್ರ್ಯಾಕಿಂಗ್ ಆ್ಯಪ್, ವಿಮೆ ! ಸಚಿವ ಈಶ್ವರ ಖಂಡ್ರೆ ಸೂಚನೆ

ಬೆಂಗಳೂರು, ಏಪ್ರಿಲ್ 9: ಕರ್ನಾಟಕದ (Karnataka) ಗಿರಿಶ್ರೇಣಿಗಳಲ್ಲಿ ಚಾರಣಕ್ಕೆ (Trekking) ಹೋಗುವವರ ಸುರಕ್ಷತೆಯನ್ನು ಖಚಿತಪಡಿಸಲು ಅರಣ್ಯ ಇಲಾಖೆಯು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಲು ಮುಂದಾಗಿದೆ. ಚಂದ್ರದ್ರೋಣ ಪರ್ವತ ಶ್ರೇಣಿ ಮತ್ತು ಕೊಡಗಿನ ತಡಿಯಂಡಮೋಳ್​​ನಲ್ಲಿ ಇತ್ತೀಚೆಗೆ ಚಾರಣಿಗರು ನಾಪತ್ತೆಯಾದ ಆತಂಕಕಾರಿ ಪ್ರಕರಣಗಳ ಹಿನ್ನೆಲೆಯಲ್ಲಿ, ಸಚಿವ ಈಶ್ವರ ಖಂಡ್ರೆ ಅವರು ದೇಶಕ್ಕೇ ಮಾದರಿಯಾಗುವಂತಹ ಪ್ರಮಾಣಿತ ಕಾರ್ಯವಿಧಾನ (SOP) ರೂಪಿಸಲು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಹೊಸ SOP ನಲ್ಲಿ ಏನೇನು ಇರಲಿದೆ?

ಹೊಸ ಪ್ರಮಾಣಿತ ಕಾರ್ಯವಿಧಾನದಲ್ಲಿ ಏನೇನು ಇರಬೇಕು ಎಂಬ ಬಗ್ಗೆಯೂ ಸಚಿವರು ಸೂಚನೆ ನೀಡಿದ್ದಾರೆ. ಆ ಕುರಿತ ವಿವರ ಇಲ್ಲಿದೆ;

ಟ್ರ್ಯಾಕಿಂಗ್ ಆ್ಯಪ್ ಅಳವಡಿಕೆ

ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಬಳಸುವ ‘ಎಂ-ಸ್ಟ್ರೈಪ್ಸ್’ ಮಾದರಿಯಲ್ಲೇ ಚಾರಣಿಗರಿಗಾಗಿ ವಿಶೇಷ ಆ್ಯಪ್ ಅಭಿವೃದ್ಧಿಪಡಿಸಲು ಸೂಚಿಸಲಾಗಿದೆ. ಚಾರಣದ ಅವಧಿಯಲ್ಲಿ ಈ ಆ್ಯಪ್ ಚಾರಣಿಗರ ಮೊಬೈಲ್‌ನಲ್ಲಿ ತಾತ್ಕಾಲಿಕವಾಗಿ ಕಾರ್ಯನಿರ್ವಹಿಸಲಿದ್ದು, ಯಾರಾದರೂ ದಾರಿ ತಪ್ಪಿಸಿಕೊಂಡರೆ ಅವರನ್ನು ಪತ್ತೆಹಚ್ಚುವುದು ಸುಲಭವಾಗಲಿದೆ.

ಚಾರಣಿಗರಿಗೆ ಕಡ್ಡಾಯ ಗುಂಪು ವಿಮೆ

ಚಾರಣಿಗರ ಸುರಕ್ಷತೆಯ ದೃಷ್ಟಿಯಿಂದ ಅವರಿಗೆ ಕಡ್ಡಾಯವಾಗಿ ಗುಂಪು ವಿಮೆ (Group Insurance) ಮಾಡಿಸುವಂತೆ ಸಚಿವರು ನಿರ್ದೇಶನ ನೀಡಿದ್ದಾರೆ. ಇದರಿಂದ ಅನಿರೀಕ್ಷಿತ ಅಪಘಾತಗಳ ಸಂದರ್ಭದಲ್ಲಿ ಕುಟುಂಬಕ್ಕೆ ಆರ್ಥಿಕ ನೆರವು ಸಿಗಲಿದೆ.

ನೇಚರ್ ಗೈಡ್‌ಗಳಿಗೆ ಹೆಚ್ಚಿನ ಹೊಣೆ

ಚಾರಣಿಗರ ಜೊತೆ ಹೋಗುವ ಗೈಡ್‌ಗಳಿಗೆ ಇನ್ಮುಂದೆ ಹೆಚ್ಚಿನ ಹೊಣೆಗಾರಿಕೆ ಇರಲಿದೆ. ಪ್ರತಿ ಗೈಡ್​ಗೆ ‘ವೈರ್‌ಲೆಸ್ ಸೆಟ್’ ನೀಡುವಂತೆ ನಿರ್ದೇಶನ ನೀಡಲಾಗಿದೆ. ಇದರಿಂದ ನೆಟ್‌ವರ್ಕ್ ಇಲ್ಲದ ಕಾಡಿನ ಭಾಗದಲ್ಲೂ ಸಂಪರ್ಕ ಸಾಧ್ಯವಾಗುತ್ತದೆ.

ಹಳೆಯ ಘಟನೆಗಳಿಂದ ಪಾಠ

ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತ ಸಾಲಿನಲ್ಲಿ ಕೇರಳದ ಅಪ್ರಾಪ್ತೆ ನಾಪತ್ತೆಯಾಗಿರುವುದು ಹಾಗೂ ಕೊಡಗಿನ ತಡಿಯಂಡಮೋಳ್​​ನಲ್ಲಿ ಶರಣ್ಯ ಎಂಬ ಯುವತಿ ನಾಪತ್ತೆಯಾಗಿ ಬಳಿಕ ಪತ್ತೆಯಾದ ಪ್ರಕರಣದ ಬೆನ್ನಲ್ಲೇ ಸರ್ಕಾರ ಎಚ್ಚೆತ್ತುಕೊಂಡು ಕ್ರಮಕ್ಕೆ ಮುಂದಾಗಿದೆ. ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಈ ತಾಂತ್ರಿಕ ಮತ್ತು ಕಾನೂನುಬದ್ಧ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.

ಇದನ್ನೂ ಓದಿ: ಶರಣ್ಯ ಸಿಕ್ಕ ಬೆನ್ನಲ್ಲೇ ಮತ್ತೋರ್ವ ಬಾಲಕಿ ಕಾಣೆ: ಚಂದ್ರದ್ರೋಣ ಪರ್ವತ ಸರಣಿಯಲ್ಲಿ ಕೇರಳದ ಅಪ್ರಾಪ್ತೆ ನಾಪತ್ತೆ!

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

IPL 2026: ಐಪಿಎಲ್​ ನಡುವೆ 5 ಹೊಸ ನಿಯಮಗಳು ಜಾರಿ

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ 19ನೇ ಆವೃತ್ತಿಯಲ್ಲಿ ಪಂದ್ಯದ ಶಿಸ್ತು ಮತ್ತು ಸಮಯ ಪಾಲನೆಯನ್ನು ಕಾಪಾಡಿಕೊಳ್ಳಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದೆ. ಮುಖ್ಯವಾಗಿ ಪಂದ್ಯದ ವೇಳೆ ತಂಡದ ‘ಬೆಂಚ್ ಆಟಗಾರರ’ (ಆಡದ ಆಟಗಾರರು) ಅನಗತ್ಯ ಓಡಾಟಕ್ಕೆ ಬಿಸಿಸಿಐ ಕಡಿವಾಣ ಹಾಕಿದೆ.

ಪಂದ್ಯದ ವೇಳೆ ಮೈದಾನದ ಒಳಗೆ ಮತ್ತು ಬೌಂಡರಿ ಗೆರೆಯ ಸುತ್ತ ಉಂಟಾಗುವ ಗೊಂದಲಗಳನ್ನು ತಪ್ಪಿಸಲು ಈ ಕೆಳಗಿನ ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ:

  1. ಮೈದಾನ ಪ್ರವೇಶಕ್ಕೆ ನಿರ್ಬಂಧ: ತಂಡದ ಪಟ್ಟಿಯಲ್ಲಿ ಹೆಸರಿಸಲಾದ 16 ಆಟಗಾರರಿಗೆ (ಇಂಪ್ಯಾಕ್ಟ್ ಪ್ಲೇಯರ್ ಸೇರಿ) ಮಾತ್ರ ಮೈದಾನದ ಒಳಗೆ ಪ್ರವೇಶಿಸಲು ಅನುಮತಿ ಇರುತ್ತದೆ. ಈ 16 ಆಟಗಾರರ ಪಟ್ಟಿಯಲ್ಲಿ ಇಲ್ಲದ ಉಳಿದ ಆಟಗಾರರು ಪಂದ್ಯ ನಡೆಯುವಾಗ ಡ್ರಿಂಕ್ಸ್ ತರುವುದು, ಬ್ಯಾಟ್ ನೀಡುವುದು ಅಥವಾ ಸಂದೇಶ ರವಾನಿಸಲು ಮೈದಾನ ಪ್ರವೇಶಿಸುವಂತಿಲ್ಲ.
  2.  ಬೌಂಡರಿ ಲೈನ್ ಬಳಿ ಕೇವಲ ಐವರು: ಪಂದ್ಯದ ವೇಳೆ ಬೌಂಡರಿ ಲೈನ್​ ಸುತ್ತ ತರಬೇತಿ ಬಿಬ್ಸ್ (Bibs) ಧರಿಸಿ ಓಡಾಡುವ ಆಟಗಾರರ ಸಂಖ್ಯೆಯನ್ನು ಐದಕ್ಕೆ (5) ಸೀಮಿತಗೊಳಿಸಲಾಗಿದೆ. ಈ ಐವರು ಆಟಗಾರರು ನಾಮನಿರ್ದೇಶಿತ 16 ಆಟಗಾರರ ಪೈಕಿ ಇರಬಹುದು ಅಥವಾ ತಂಡದ ಇತರೆ ಆಟಗಾರರಾಗಿರಬಹುದು.
  3. ಡಗೌಟ್ ನಿಯಮ: ಬೌಂಡರಿ ಲೈನ್​ ಸುತ್ತ ತರಬೇತಿ ಬಿಬ್ಸ್​ ಧರಿಸಿದ ಆಟಗಾರರನ್ನು ಬಿಟ್ಟು ಉಳಿದ ಎಲ್ಲಾ ಆಟಗಾರರು ಕಡ್ಡಾಯವಾಗಿ ತಂಡದ ಡಗೌಟ್‌ನಲ್ಲೇ ಇರಬೇಕು.
  4. ಜಾಹೀರಾತು ಫಲಕಗಳ ನಿಯಮ: ಬೌಂಡರಿ ಲೈನ್ ಮತ್ತು ಎಲ್ಇಡಿ (LED) ಜಾಹೀರಾತು ಫಲಕಗಳ ನಡುವಿನ ಜಾಗದಲ್ಲಿ ಆಟಗಾರರು ಅನಗತ್ಯವಾಗಿ ಓಡಾಡುವಂತಿಲ್ಲ.
  5. ಬೌಂಡರಿ ಲೈನ್​ನಲ್ಲಿ ಕೂರುವಂತಿಲ್ಲ: ಯಾವುದೇ ಆಟಗಾರ ಅಥವಾ ಸಿಬ್ಬಂದಿ ಎಲ್ಇಡಿ ಬೋರ್ಡ್‌ಗಳ ಮುಂದೆ ಕುಳಿತುಕೊಳ್ಳುವಂತಿಲ್ಲ, ಇದು ಪ್ರಾಯೋಜಕರ ಪ್ರಚಾರಕ್ಕೆ ಅಡ್ಡಿಯಾಗಬಾರದು ಎಂಬುದು ಬಿಸಿಸಿಐ ಉದ್ದೇಶ.

ಈ ಹಿಂದೆ ಪ್ರಕಟಿಸಿದ ನಿಯಮಗಳು:

  1.  ಪಂದ್ಯದ ದಿನದ ಅಭ್ಯಾಸ: ಪಂದ್ಯ ನಡೆಯುವ ದಿನದಂದು ಮುಖ್ಯ ಪಿಚ್‌ನ ಸುತ್ತಲಿನ ಜಾಗದಲ್ಲಿ ಯಾವುದೇ ಅಭ್ಯಾಸ ನಡೆಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
  2. ಸಮವಸ್ತ್ರ ಸಂಹಿತೆ: ಪಂದ್ಯದ ನಂತರದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಆಟಗಾರರು ಸ್ಲೀವ್‌ಲೆಸ್ ಜೆರ್ಸಿ ಅಥವಾ ಫ್ಲಾಪಿ ಹ್ಯಾಟ್‌ಗಳನ್ನು ಧರಿಸುವಂತಿಲ್ಲ.
  3. ಖಾಸಗಿ ವಾಹನಗಳಿಗೆ ನೋ ಎಂಟ್ರಿ: ಆಟಗಾರರು ಕ್ರೀಡಾಂಗಣಕ್ಕೆ ಬರಲು ಕಡ್ಡಾಯವಾಗಿ ತಂಡದ ಬಸ್ ಮಾತ್ರ ಬಳಸಬೇಕು, ಖಾಸಗಿ ವಾಹನ ಬಳಕೆಗೆ ಅನುಮತಿ ಇಲ್ಲ.

ಇದನ್ನೂ ಓದಿ: IPL 2026: 5 ಆಟಗಾರರ ಬಗ್ಗೆ ಬಿಗ್ ಅಪ್​ಡೇಟ್​

ಐಪಿಎಲ್ ಪಂದ್ಯಗಳು ಜಾಗತಿಕ ಮಟ್ಟದಲ್ಲಿ ದೊಡ್ಡ ಪ್ರಭಾವ ಬೀರುತ್ತಿರುವುದರಿಂದ, ಪಂದ್ಯದ ಘನತೆ ಮತ್ತು ವೃತ್ತಿಪರತೆಯನ್ನು ಕಾಪಾಡಿಕೊಳ್ಳಲು ಈ ಬದಲಾವಣೆಗಳು ಅನಿವಾರ್ಯ ಎಂದು ಬಿಸಿಸಿಐ ಅಭಿಪ್ರಾಯಪಟ್ಟಿದೆ. ಈ ನಿಯಮಗಳನ್ನು ಉಲ್ಲಂಘಿಸುವ ತಂಡಗಳಿಗೆ ಕಠಿಣ ದಂಡ ವಿಧಿಸುವ ಸಾಧ್ಯತೆಯೂ ಇದೆ.

 

Source link

ಧುರಂಧರ್ ರಣವೀರ್ ಸಿಂಗ್ ಸಿನಿಮಾ ಎಂದು ಹೇಳಲು ಸಾಧ್ಯವಿಲ್ಲ; ಕರೀನಾ ಕಪೂರ್

ಆದಿತ್ಯ ಧಾರ್ ನಿರ್ದೇಶನದ ‘ಧುರಂಧರ್: ದಿ ರಿವೆಂಜ್’ (Dhurandhar Movie) ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಸೃಷ್ಟಿಸಿದೆ. ಈ ಚಿತ್ರದ ಎರಡೂ ಭಾಗಗಳನ್ನು ಪ್ರೇಕ್ಷಕರನ್ನು ರಂಜಿಸಿವೆ. ಬಾಲಿವುಡ್‌ನಿಂದ ಟಾಲಿವುಡ್‌ವರೆಗೆ.. ಅನೇಕ ನಟರು ಇದನ್ನು ಹೊಗಳುತ್ತಿದ್ದಾರೆ. ಅದೇ ರೀತಿ, ನಟಿ ಕರೀನಾ ಕಪೂರ್ ಅವರ ಪ್ರತಿಕ್ರಿಯೆಯ ಬಗ್ಗೆ ಪ್ರಸ್ತುತ ಸಾಕಷ್ಟು ಚರ್ಚೆ ನಡೆಯುತ್ತಿದೆ. ‘ಧುರಂಧರ್’ ಚಿತ್ರದ ಯಶಸ್ಸಿಗೆ ಅವರು ನೀಡಿದ ಪ್ರತಿಕ್ರಿಯೆಗಾಗಿ ನೆಟ್ಟಿಗರು ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.

‘ಫೈನಾನ್ಷಿಯಲ್ ಟೈಮ್ಸ್’ ಗೆ ನೀಡಿದ ಸಂದರ್ಶನದಲ್ಲಿ ಕರೀನಾ ಅವರು ಧುರಂಧರ್ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ‘ಧುರಂಧರ್ ಸಿನಿಮಾ ಕೇವಲ ನಾಯಕ ನಟ ರಣವೀರ್ ಸಿಂಗ್ ಚಿತ್ರ ಅಲ್ಲ. ಇದು ಸಂಪೂರ್ಣವಾಗಿ ನಿರ್ದೇಶಕರ ಚಿತ್ರ. ಇಂದಿಗೂ ಸಹ, ಈ ಚಿತ್ರವನ್ನು ಉಲ್ಲೇಖಿಸಿದಾಗ, ಇದನ್ನು ಆದಿತ್ಯ ಧಾರ್ ಅವರ ‘ಧುರಂಧರ್’ ಎಂದು ಕರೆಯಲಾಗುತ್ತದೆ’ ಎಂದಿದ್ದಾರೆ ಕರೀನಾ.

ಕರೀನಾ ಕಪೂರ್ ಹೇಳಿಕೆಗೆ ಈಗ ನೆಟ್ಟಿಗರು ವಿವಿಧ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಕೆಲವರು ಅವರ ಅಭಿಪ್ರಾಯವನ್ನು ಒಪ್ಪಿಕೊಂಡಿದ್ದಾರೆ. ‘ನಿರ್ದೇಶಕರು ಈ ಚಿತ್ರದ ಹಿಂದೆ ಸಾಕಷ್ಟು ಶ್ರಮ ವಹಿಸಿದ್ದಾರೆ. ಹೀಗಾಗಿ. ಕರೀನಾ ಹೇಳಿದ್ದರಲ್ಲಿ ತಪ್ಪಿಲ್ಲ’ ಎಂದು ಹೇಳಿದರು. ಕೆಲವರು ಕರೀನಾ ಪಕ್ಷಪಾತ ಹೊಂದಿದ್ದಾರೆ ಎಂದು ಆರೋಪಿಸಿದರು. ‘ಧುರಂಧರ್‌ನ ಯಶಸ್ಸನ್ನು ಅವರು ಅರಗಿಸಿಕೊಂಡಿಲ್ಲ . ಅವರು ರಣವೀರ್ ಸಿಂಗ್ ಅವರ ಕಠಿಣ ಪರಿಶ್ರಮವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ’ ಎಂದು ನೆಟ್ಟಿಗರು ಬರೆದಿದ್ದಾರೆ.

ಕೆಲವರು ಕರೀನಾ ಅವರನ್ನು ಟೀಕಿಸಿ, ‘ಜಬ್ ವಿ ಮೆಟ್ ಕೂಡ ಇಮ್ತಿಯಾಜ್ ಅಲಿ ಅವರ ಚಿತ್ರ. ಕರೀನಾ ಅವರದ್ದಲ್ಲ. ಈ ಲೆಕ್ಕಾಚಾರದ ಪ್ರಕಾರ, ರಾಮಾಯಣವು ನಿತೇಶ್ ತಿವಾರಿ ಅವರ ಚಿತ್ರ ಮಾತ್ರ, ರಣಬೀರ್ ಕಪೂರ್ ಅವರದ್ದಲ್ಲ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕೊಹ್ಲಿ ಹೊಗಳಿಕೆ ಬಳಿಕ ‘ಧುರಂಧರ್ 2’ ಹೌಸ್​​ಫುಲ್? ಕಲೆಕ್ಷನ್ ಏನ್​ ಅನ್ನುತ್ತೆ?

‘ಧುರಂಧರ್’ ಮತ್ತು ‘ಧುರಂಧರ್: ದಿ ರಿವೆಂಜ್’ ಎರಡೂ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಭಾರಿ ಲಾಭ ಗಳಿಸಿವೆ. ಇದರಲ್ಲಿ ರಣವೀರ್ ಸಿಂಗ್ ಗೂಢಚಾರ ಹಮ್ಜಾ ಅಲಿ ಮಜಾರಿ ಪಾತ್ರದಲ್ಲಿ ನಟಿಸಿದ್ದಾರೆ. ಅವರೊಂದಿಗೆ, ಚಿತ್ರದಲ್ಲಿ ಆರ್. ಮಾಧವನ್, ಅರ್ಜುನ್ ರಾಂಪಾಲ್, ಸಂಜಯ್ ದತ್, ರಾಕೇಶ್ ಬೇಡಿ ಮತ್ತು ಸಾರಾ ಅರ್ಜುನ್ ಕೂಡ ನಟಿಸಿದ್ದಾರೆ. ಮಾರ್ಚ್ 19 ರಂದು ಬಿಡುಗಡೆಯಾದ ‘ಧುರಂಧರ್ 2’ ಚಿತ್ರವು ಇಲ್ಲಿಯವರೆಗೆ ವಿಶ್ವಾದ್ಯಂತ 1600 ಕೋಟಿ ರೂ.ಗಳಿಗೂ ಹೆಚ್ಚು ಗಳಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

‘ಡಕೈತ್’ ಸಿನಿಮಾದಿಂದ ಶ್ರುತಿ ಹಾಸನ್ ಹೊರಬಂದಿದ್ದೇಕೆ?

ಅಡಿವಿ ಶೇಷ್ (Adivi Sesh) ನಟನೆಯ ‘ಡಕೈತ್’ (Dacoit) ಸಿನಿಮಾ ಇದೇ ವಾರ ಬಿಡುಗಡೆ ಆಗಲಿದೆ. ಈ ಮೊದಲು ಈ ಸಿನಿಮಾ ‘ಟಾಕ್ಸಿಕ್’ ಎದುರು ಬಿಡುಗಡೆಗೆ ಸಜ್ಜಾಗಿತ್ತು. ಆದರೆ ಸಿನಿಮಾ ಬಿಡುಗಡೆಯನ್ನು ಮುಂದೂಡಿ ಈಗ ನಾಳೆ ಅಂದರೆ ಏಪ್ರಿಲ್ 10ಕ್ಕೆ ತೆರೆಗೆ ಬರಲಿದೆ. ಈ ಸಿನಿಮಾದ ಮೊದಲ ಪ್ರೋಮೊ ಬಿಡುಗಡೆ ಆದಾಗ ಸಿನಿಮಾ ನಾಯಕಿ ಆಗಿದ್ದಿದ್ದು ಶ್ರುತಿ ಹಾಸನ್. ಅವರು ನಟಿಸಿದ್ದ ಪ್ರೋಮೊ ಸಹ ಒಂದು ಬಿಡುಗಡೆ ಆಗಿತ್ತು. ಆದರೆ ಅದಾದ ಕೆಲ ತಿಂಗಳ ಬಳಿಕ ಶ್ರುತಿ ಹಾಸನ್, ‘ಡಕೈತ್’ ಸಿನಿಮಾದಿಂದ ಹೊರ ನಡೆದರು. ಅವರ ಸ್ಥಾನಕ್ಕೆ ಮೃಣಾಲ್ ಠಾಕೂರ್ ಬಂದರು.

ಶ್ರುತಿ ಹಾಸನ್ ಅವರು ಹಲವು ದಿನಗಳ ಕಾಲ ಸಿನಿಮಾಕ್ಕಾಗಿ ಚಿತ್ರೀಕರಣ ಸಹ ನಡೆಸಿದ್ದರು. ಪ್ರೋಮೊ ನಲ್ಲಿ ಅವರ ಪಾತ್ರ ಚೆನ್ನಾಗಿತ್ತು. ಪಾತ್ರಕ್ಕೆ ಚೆನ್ನಾಗಿ ಸೂಟ್ ಆಗುತ್ತಾರೆ ಎನಿಸಿತ್ತು. ಅನುಭವಿ ನಟಿ ಸಹ ಆಗಿದ್ದ ಅವರನ್ನು ಚಿತ್ರತಂಡವೇ ಕೈಬಿಟ್ಟಿತು. ಅವರ ಜಾಗಕ್ಕೆ ಮೃಣಾಲ್ ಠಾಕೂರ್ ಅವರನ್ನು ನಾಯಕಿಯನ್ನಾಗಿ ಆಯ್ಕೆ ಮಾಡಲಾಯ್ತು. ಆದರೆ ಇದಕ್ಕೆ ಕಾರಣವೇನು ಎಂಬುದನ್ನು ಚಿತ್ರತಂಡದವರು ವಿವರಿಸಿರಲಿಲ್ಲ. ಆದರೆ ಇದೀಗ ಸಿನಿಮಾದ ನಾಯಕ ಮತ್ತು ಕತೆ ಬರೆದಿರುವ ಅಡಿವಿ ಶೇಷ್ ಅವರು ಈ ಬಗ್ಗೆ ಮಾತನಾಡಿದ್ದಾರೆ.

ತೆಲುಗಿನ ಖ್ಯಾತ ನಿರೂಪಕಿ ಸುಮಾ ಅವರೊಟ್ಟಿಗಿನ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಅಡಿವಿ ಶೇಷ್, ‘ಶ್ರುತಿ ಹಾಸನ್ ಆರಂಭದಲ್ಲಿ ಸಿನಿಮಾನಲ್ಲಿದ್ದರು, ಹಲವು ದಿನಗಳ ಕಾಲ ಚಿತ್ರೀಕರಣ ಸಹ ಮಾಡಿದೆವು. ಆದರೆ ನಮ್ಮ ಕೆಲಸ ಮಾಡುವ ವಿಧಾನ ಬೇರೆ ರೀತಿ, ನಾವು ನಾಲ್ಕೈದು ಶಾಟ್ ತೆಗೆದ ಮೇಲೆಯೂ ಸಹ ಇದನ್ನು ಭಿನ್ನವಾಗಿ ತೆಗೆಯಬಹುದಾ ಎಂದು ಯೋಚಿಸುತ್ತೀವಿ, ನಾವು ಸಿನಿಮಾ ತೆಗೆಯಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತೀವಿ, ಇದು ಕೆಲವರಿಗೆ ಕಿರಿ-ಕಿರಿ ಎನಿಸಬಹುದು’ ಎಂದಿದ್ದಾರೆ.

ಇದನ್ನೂ ಓದಿ:ರಾಷ್ಟ್ರೀಯ ಸಿನಿಮಾ ಅಕಾಡೆಮಿ ಪ್ರಶಸ್ತಿ ಘೋಷಣೆ: ಯಾರಿಗೆಲ್ಲ ಸಿಕ್ಕಿತು ಅವಾರ್ಡ್

‘ನಮ್ಮ ಮೊದಲ ಸಿನಿಮಾ ‘ಕ್ಷಣ-ಕ್ಷಣಂ’ನಿಂದಲೂ ನಮ್ಮ ತಂಡ ಹೀಗೆಯೇ ಕೆಲಸ ಮಾಡುತ್ತದೆ. ನಾವೆಲ್ಲ ಈ ರೀತಿಯ ಕೆಲಸದ ಪ್ರಾಸೆಸ್​ಗೆ ಒಗ್ಗಿ ಹೋಗಿದ್ದೇವೆ ಆದರೆ ಶ್ರುತಿ ಅವರಿಗೆ ಅದಕ್ಕೆ ಒಗ್ಗಿಕೊಳ್ಳಲಾಗಲಿಲ್ಲ. ಹಾಗಾಗಿ ಅವರನ್ನು ನಾವು ಕಳಿಸಿಕೊಡಬೇಕಾಯ್ತು. ನಾವು ಸೌಹಾರ್ದಯುತವಾಗಿಯೇ ಬೇರಾದೆವು, ಆ ಸ್ಥಾನಕ್ಕೆ ಮೃಣಾಲ್ ಠಾಕೂರ್ ಅವರನ್ನು ಕರೆದುಕೊಂಡೆವು’ ಎಂದಿದ್ದಾರೆ ಅಡಿವಿ ಶೇಷ್.

‘ಡಕೈತ್’ ಸಿನಿಮಾನಲ್ಲಿ ಅಡಿವಿ ಶೇಷ್, ಮೃಣಾಲ್ ಠಾಕೂರ್ ಜೊತೆಗೆ ವಿಲನ್ ಆಗಿ ಅನುರಾಗ್ ಕಶ್ಯಪ್ ನಟಿಸಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ಶನಿಲ್, ನಿರ್ಮಾಣ ಮಾಡಿರುವುದು ಸುಪ್ರಿಯಾ ಯರ್ಲಗಡ್ಡ, ಕತೆ ಅಡವಿ ಶೇಷ್ ಅವರದ್ದು. ಸಂಗೀತ ನೀಡಿರುವುದು ಭೀಮ್ಸ್. ಸಿನಿಮಾ ಏಪ್ರಿಲ್ 10ಕ್ಕೆ ತೆರೆಗೆ ಬರಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Video: ಮಗಳ ತೊಡೆ ಮೇಲೆ ತಲೆಯಿಟ್ಟು ಹಾಯಾಗಿ ಮಲಗಿದ ತಂದೆ; ಎಷ್ಟು ಚಂದ ನೋಡಿ ಈ ಬಾಂಧವ್ಯ

ಹೆಣ್ಣು ಮಕ್ಕಳಿಗೆ ತಂದೆಯೆಂದರೆ (father) ಪ್ರಪಂಚ. ಅದೇ ರೀತಿ ತಂದೆಗೂ ತಮ್ಮ ಮುದ್ದು ಮಗಳೆಂದರೆ ಅದೇನೋ ವಿಶೇಷ ಪ್ರೀತಿ ಹಾಗೂ ಕಾಳಜಿ. ತಂದೆ ಮಗಳ ಬಾಂಧವ್ಯ ಸಾರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಇದೀಗ ಇಲ್ಲೊಬ್ಬಳು ಮಗಳು ತನ್ನ ತಂದೆಗೆ ಎರಡನೇ ತಾಯಿಯಾಗಿದ್ದಾಳೆ. ತನ್ನ ತಂದೆಯನ್ನು ತೊಡೆ ಮೇಲೆ ಮಲಗಿಸಿಕೊಂಡಿದ್ದು, ತಂದೆ ತಲೆಯಿಟ್ಟು ನಿದ್ರಿಸುತ್ತಿರುವ ವಿಡಿಯೋ ವೈರಲ್ ಆಗಿದೆ.

theiconictrolls ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಂದೆ ಮಗಳ ಬಾಂಧವ್ಯ ಸಾರುವ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್‌ನಲ್ಲಿ ಪುಟಾಣಿಯೊಂದು ಬೆಂಚಿನ ಮೇಲೆ ಕುಳಿತುಕೊಂಡಿದೆ. ಈ ಪುಟಾಣಿಯ ತೊಡೆ ಮೇಲೆ ತಂದೆಯೂ ತಲೆಯಿಟ್ಟು ಹಾಯಾಗಿ ನಿದ್ರಿಸುತ್ತಿರುವುದನ್ನು ಕಾಣಬಹುದು. ಪುಟಾಣಿ ಅಪ್ಪನ ಕೂದಲಿನ ಮೇಲೆ ಕೈಯಾಡಿಸುತ್ತಿದೆ.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ನಡುರಸ್ತೆಯಲ್ಲೇ ಕೋಪಿಸಿಕೊಂಡ ಮಗಳನ್ನು ರಮಿಸಿ ಸಮಾಧಾನ ಪಡಿಸಿದ ತಂದೆ

ಈ ವಿಡಿಯೋ ಇಪ್ಪತ್ತಾರು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಇದಕ್ಕಿಂತ ದೊಡ್ಡ ಉಡುಗೊರೆ ಏನಿದೆ ಎಂದಿದ್ದಾರೆ. ಇನ್ನೊಬ್ಬರು, ಇದೇ ಕಾರಣಕ್ಕೆ ಪ್ರತಿಯೊಬ್ಬ ಪುರುಷನು ಮಗಳನ್ನು ಬಯಸೋದು ಎಂದು ಹೇಳಿದ್ದಾರೆ. ಮತ್ತೊಬ್ಬರು, ನನ್ನ ಮಗಳು ನನ್ನ ತಾಯಿಯಂತೆ ವರ್ತಿಸುತ್ತಾಳೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಹಿಂದೂ ದೇವರ ಹಾಡು ಹಾಡಿದಾಗ ಸುಹಾನಾಗೆ ಆದ ತೊಂದರೆಗಳು ಒಂದೆರಡಲ್ಲ; ಭದ್ರತೆ ಹೇಗಿತ್ತು?

ಗಾಯಕಿ ಸುಹಾನಾ ಸೈಯ್ಯದ್ (Suhana) ಅವರು ‘ಸರಿಗಮಪ’ ಮೂಲಕ ಫೇಮಸ್ ಆಗಿದ್ದಾರೆ. ಅವರು ಮುಸ್ಲಿಂ ಧರ್ಮದವರಾದರೂ ಹಿಂದೂ ಹಾಡನ್ನು ಹಾಡಿದ್ದರು. ಈ ಮೂಲಕ ಚರ್ಚೆ ಹುಟ್ಟುಹಾಕಿದ್ದರು. ಆ ಬಳಿಕ ಅವರು ರಂಗಭೂಮಿ ಕಲಾವಿದ ನಿತೀನ್ ಶಿವಾಂಶ್ ಜೊತೆ ಮದುವೆ ಆಗಿ ಮತ್ತಷ್ಟು ಚರ್ಚೆ ಹುಟ್ಟುಹಾಕಿದರು. ಅವರು ಮಂತ್ರ ಮಾಂಗಲ್ಯ ಮಾಡಿಕೊಂಡಿದ್ದಾರೆ. ಅವರಿಗೆ ಕೆಲವರು ಅಭಿನಂದನೆ ತಿಳಿಸಿದರೆ, ಇನ್ನೂ ಕೆಲವರು ವಿವಾಹವನ್ನು ಟೀಕೆ ಮಾಡಿದ್ದರು. ಭಕ್ತಿಗೀತೆ ಹಾಡಿದ ಬಳಿಕ ಆದ ಘಟನೆ ಬಗ್ಗೆ ಸುಹಾನಾ ಮಾಹಿತಿ ನೀಡಿದ್ದಾರೆ.

ಸುಹಾನಾ ಅವರು ಸರಿಗಮಪದಲ್ಲಿ ಹಿಂದೂ ಗೀತೆ ಹಾಡಿದ್ದಕ್ಕೆ ಚರ್ಚೆಗೆ ಒಳಗಾದರು. ಅವರ ಮೇಲೆ ದಾಳಿ ಪ್ರಯತ್ನ ಕೂಡ ಆಯಿತು. ಇದಾದ ಬಳಿಕ ಸುಹಾನಾಗೆ ಸಾಕಷ್ಟು ಭದ್ರತೆ ನೀಡಲಾಯಿತಂತೆ. ವಾಹಿನಿಯವರು ಸಚಿವರ ಬಳಿ ಮಾತನಾಡಿದ ಭದ್ರತೆ ಒದಗಿಸಿದ್ದರು.

ಸುಹಾನಾ ಉಳಿದುಕೊಂಡಿದ್ದ ಹೋಟೆಲ್​​ ರೂಂ ಅಕ್ಕ-ಪಕ್ಕದಲ್ಲಿ ಪೊಲೀಸರು ಇರುತ್ತಿದ್ದರು. ಯಾರಾದರೂ ಬಂದು ರೂಂ ಬೆಲ್ ಮಾಡಿದರೆ ಬಾಗಿಲು ತೆಗೆಯುವುದಕ್ಕೂ ಮೊದಲು ಇಂಟರ್​​ಕಾಮ್ ಮೂಲಕ ರಿಸೆಪ್ಶನ್​​ಗೆ ಕರೆ ಮಾಡಿ, ಅವರು ಸಿಸಿಟಿವಿಯಲ್ಲಿ ಯಾರು ಎಂದು ನೋಡಿ ಆ ಬಳಿಕವೇ ಸುಹಾನಾ ಬಾಗಿಲು ತೆಗೆಯಬೇಕಿತ್ತು. ಹೋಟೆಲ್ ಹೋಗುವಾಗ ಇವರ ವಾಹನದ ಹಿಂದೆ ಮುಂದೆ ಪೊಲೀಸರು ಇರುತ್ತಿದ್ದರು. ವಾಶ್​​ರೂಂ ಹೋಗುವಾಗಲೂ ಇವರಿಗೆ ಭದ್ರತೆ ಇರುತ್ತಿತ್ತು.

‘ಪ್ರೀತಿ ಹಂಚುವವರು ಹೆಚ್ಚಿದ್ದರು. ದ್ವೇಷಿಸಿಸುವರು ಇದ್ದರು. ಶೋ ಬೇಡ ಬಿಡು ಎಂದು ಹೇಳಿದ್ದರು. ಮಾನಸಿಕವಾಗಿ ಹಿಂಸೆ ಆಯಿತು. ಮನೆಯಲ್ಲೂ ಪೊಲೀಸರು ಇರುತ್ತಿದ್ದರು. ಆ ಸಮಯದಲ್ಲಿ ನಿತೀನ್ ತುಂಬಾ ಸಹಾಯ ಮಾಡಿದ್ದ. ಬೆಂಬಲಕ್ಕೆ ನಿಂತ. ಸರಿಗಮಪ ಚೆನ್ನಾಗಿ ಆಯ್ತು. ಆ ಶೋನಿಂದ ಸಾಕಷ್ಟು ಕಾನ್ಸರ್ಟ್​ ಸಿಕ್ತು’ ಎಂದಿದ್ದಾರೆ ಅವರು.

ಇದನ್ನೂ ಓದಿ: ಮಂತ್ರ ಮಾಂಗಲ್ಯ ಮಾಡಿಕೊಂಡ ಸುಹಾನಾ; ನಿತೀನ್ ಜೊತೆ ಹೊಸ ಬಾಳಿಗೆ ಕಾಲಿಟ್ಟ ಸಿಂಗರ್

ಸುಹಾನಾ ಹಾಗೂ ನಿತೀನ್ 16 ವರ್ಷಗಳ ಹಿಂದೆ ಪರಿಚಯ ಆದರು. ಆ ಬಳಿಕ ಇವರ ಮಧ್ಯೆ ಪ್ರೀತಿ ಮೂಡಿತು. ಪ್ರತಿ ಹಂತದಲ್ಲೂ ಸುಹಾನಾ ಬೆಂಬಲಕ್ಕೆ ನಿತೀನ್ ನಿಂತಿದ್ದಾರೆ. ಈ ವಿಷಯಕ್ಕೆ ಸುಹಾನಾಗೆ ಖುಷಿ ಇದೆ. ಸುಹಾನಾ ಅವರು ಸಾಕಷ್ಟು ಕಾನ್ಸರ್ಟ್​​ಗಳನ್ನು ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಶಾಂತಿ ಒಪ್ಪಂದದ ನಡುವೆಯೂ ಯುದ್ಧದ ಕಾರ್ಮೋಡ, ಒಪ್ಪಂದ ಮೀರಿದರೆ ಹುಷಾರ್, ಇರಾನ್ ಸುತ್ತ ಸೇನೆ ಜಮಾವಣೆ ಮಾಡಿದ ಟ್ರಂಪ್

ವಾಷಿಂಗ್ಟನ್, ಏಪ್ರಿಲ್ 09: ಅಮೆರಿಕ ಮತ್ತು ಇರಾನ್(Iran) ನಡುವಿನ ಕದನ ವಿರಾಮದ ಘೋಷಣೆಯ ಬೆನ್ನಲ್ಲೇ ಜಾಗತಿಕ ರಾಜಕೀಯದಲ್ಲಿ ಮತ್ತೆ ಯುದ್ಧದ ಕಾರ್ಮೋಡಗಳು ಕವಿಯತೊಡಗಿವೆ. ತಮ್ಮ ‘ಟ್ರುತ್ ಸೋಶಿಯಲ್’ ವೇದಿಕೆಯಲ್ಲಿ ಅಬ್ಬರಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ ಸರ್ಕಾರಕ್ಕೆ ಅತ್ಯಂತ ಗಂಭೀರ ಎಚ್ಚರಿಕೆ ನೀಡಿದ್ದಾರೆ.ಇರಾನ್ ಸುತ್ತಮುತ್ತ ಅಮೆರಿಕದ ನೌಕಾಪಡೆ, ಯುದ್ಧ ವಿಮಾನಗಳು ಮತ್ತು ಮಿಲಿಟರಿ ಸಿಬ್ಬಂದಿ ಸರ್ವ ಸನ್ನದ್ಧ ಸ್ಥಿತಿಯಲ್ಲಿ ಇರಲಿದ್ದಾರೆ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ.

ಹೆಚ್ಚುವರಿ ಮದ್ದುಗುಂಡು ಮತ್ತು ಅತ್ಯಾಧುನಿಕ ಶಸ್ತ್ರಾಸ್ತ್ರಗಳೊಂದಿಗೆ ನಮ್ಮ ಸೇನೆ ಇರಾನ್‌ನ ಸುತ್ತಲೂ ಮೊಕ್ಕಾಂ ಹೂಡಲಿದೆ. ಒಂದು ಶಾಶ್ವತ ಮತ್ತು ನೈಜ ಒಪ್ಪಂದ ಏರ್ಪಡುವವರೆಗೆ ನಮ್ಮ ಮಿಲಿಟರಿ ಅಲ್ಲಿಂದ ಕದಲುವುದಿಲ್ಲ ದು ಟ್ರಂಪ್ ಘೋಷಿಸಿದ್ದಾರೆ. ಒಪ್ಪಂದದ ಪಾಲನೆಯಲ್ಲಿ ಇರಾನ್ ಒಂದು ವೇಳೆ ವಿಫಲವಾದರೆ ಅಥವಾ ವಾಷಿಂಗ್ಟನ್‌ನ ಶರತ್ತುಗಳನ್ನು ಗಾಳಿಗೆ ತೂರಿದರೆ, ಅಮೆರಿಕ ಹಿಂದೆಂದೂ ನೋಡಿರದ ರೀತಿಯಲ್ಲಿ ಭೀಕರ ಮಿಲಿಟರಿ ದಾಳಿ ನಡೆಸಲಿದೆ ಎಂದು ಅವರು ಎಚ್ಚರಿಸಿದ್ದಾರೆ.

ಯಾವುದೇ ಕಾರಣಕ್ಕೂ ಒಪ್ಪಂದ ಮುರಿದರೆ ಆಗ ಗುಂಡಿನ ದಾಳಿ ಆರಂಭವಾಗಲಿದೆ. ಅದು ಹಿಂದೆಂದಿಗಿಂತಲೂ ದೊಡ್ಡದಾಗಿ ಮತ್ತು ಬಲವಾಗಿರಲಿದೆ ಎಂಬುದು ಟ್ರಂಪ್ ಹೇಳಿದ್ದಾರೆ.

ಇರಾನ್‌ನ ಅಸಮಾಧಾನ ಮತ್ತು ಇಸ್ರೇಲ್ ದಾಳಿ
ಬುಧವಾರ ಇಸ್ರೇಲ್ ಪಡೆಗಳು ಲೆಬನಾನ್ ಮೇಲೆ ನಡೆಸಿದ ಭೀಕರ ದಾಳಿಯಲ್ಲಿ ನೂರಾರು ಜನರು ಮೃತಪಟ್ಟಿದ್ದರು. ಇದರ ಬೆನ್ನಲ್ಲೇ ಇರಾನ್ ಸರ್ಕಾರ, ಅಮೆರಿಕದೊಂದಿಗೆ ಶಾಶ್ವತ ಶಾಂತಿ ಮಾತುಕತೆ ನಡೆಸುವುದು ಈಗಿನ ಸಂದರ್ಭದಲ್ಲಿ ಅಸಮಂಜಸ ಎಂದು ಕಿಡಿಕಾರಿದೆ. ಈ ಬೆಳವಣಿಗೆಯು ಎರಡೂ ದೇಶಗಳ ನಡುವಿನ ಮಾತುಕತೆಗೆ ಹಿನ್ನಡೆಯುಂಟು ಮಾಡಿದೆ.

ಮತ್ತಷ್ಟು ಓದಿ: ಅಮೆರಿಕದ ಎಫ್-18 ಯುದ್ಧವಿಮಾನವನ್ನು ಹೊಡೆದುರುಳಿಸಿದ ವಿಡಿಯೋ ಬಿಡುಗಡೆ ಮಾಡಿದ ಇರಾನ್

ಹಾರ್ಮುಜ್ ಜಲಸಂಧಿಯ ಭದ್ರತೆ
ಟ್ರಂಪ್ ತಮ್ಮ ಪೋಸ್ಟ್‌ನಲ್ಲಿ ಮತ್ತೊಂದು ಪ್ರಮುಖ ಅಂಶವನ್ನು ಪ್ರಸ್ತಾಪಿಸಿದ್ದಾರೆ. ಇರಾನ್ ಯಾವುದೇ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರಬಾರದು ಮತ್ತು ಜಾಗತಿಕ ತೈಲ ವ್ಯಾಪಾರಕ್ಕೆ ಪ್ರಮುಖವಾದ ಹಾರ್ಮುಜ್ ಜಲಸಂಧಿಯು (Strait of Hormuz) ಸುರಕ್ಷಿತವಾಗಿ ಮತ್ತು ಮುಕ್ತವಾಗಿರಬೇಕು. ಇದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ ಎಂದಿದ್ದಾರೆ.

ಟ್ರಂಪ್ ಅವರ ಈ ನಡೆ ಇರಾನ್ ಮೇಲೆ ಗರಿಷ್ಠ ಒತ್ತಡ ಹೇರುವ ತಂತ್ರದ ಮುಂದುವರಿದ ಭಾಗದಂತೆ ಕಾಣುತ್ತಿದೆ. ಇರಾನ್ ಈ ಬೆದರಿಕೆಗೆ ಮಣಿಯುತ್ತದೆಯೇ ಅಥವಾ ಮತ್ತೊಂದು ಸಂಘರ್ಷಕ್ಕೆ ನಾಂದಿ ಹಾಡುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Gold Rates: ನಿನ್ನೆ ಏರಿದ್ದ ಚಿನ್ನದ ಬೆಲೆ ಇವತ್ತು ಕುಸಿತ; ಬೆಳ್ಳಿಯೂ ಅಗ್ಗ

ಬೆಂಗಳೂರು, ಏಪ್ರಿಲ್ 9: ಚಿನ್ನ ಮತ್ತು ಬೆಳ್ಳಿ ಬೆಲೆಗಳು ಕಣ್ಣಾಮುಚ್ಚಾಳೆ ಆಟ ಆಡುತ್ತಿವೆ. ಅದರಲ್ಲೂ ಚಿನ್ನದ ಬೆಲೆಯಂತೂ ಪ್ರಕ್ಷುಬ್ಧತೆಯಿಂದ ಕೂಡಿದೆ. ನಿನ್ನ ಬಹುತೇಕ 500 ರೂಗಳಷ್ಟು ಏರಿದ್ದ ಚಿನ್ನದ ಬೆಲೆ (Gold Rates) ಇವತ್ತು 200ಕ್ಕೂ ಹೆಚ್ಚು ರೂಗಳಷ್ಟು ಕುಸಿತ ಕಂಡಿದೆ. ಆಭರಣ ಚಿನ್ನದ ಬೆಲೆ ಮತ್ತೆ 14,000 ರೂ ಗಡಿಯೊಳಗೆ ಇಳಿದಿದೆ. ಬೆಳ್ಳಿ ಬೆಲೆಯೂ ಇಂದು ಗುರುವಾರ ಕಡಿಮೆಗೊಂಡಿದೆ. ನಿನ್ನೆ 10 ರೂ ಇಳಿದಿದ್ದ ಇದರ ಬೆಲೆ ಇವತ್ತು 5 ರೂ ತಗ್ಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,38,850 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,51,480 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 25,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,38,850 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 25,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 26,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಏಪ್ರಿಲ್ 9ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,148 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,885 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,361 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 255 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,148 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,885 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 255 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 13,885 ರೂ
  • ಚೆನ್ನೈ: 14,000 ರೂ
  • ಮುಂಬೈ: 13,885 ರೂ
  • ದೆಹಲಿ: 13,900 ರೂ
  • ಕೋಲ್ಕತಾ: 13,885 ರೂ
  • ಕೇರಳ: 13,885 ರೂ
  • ಅಹ್ಮದಾಬಾದ್: 13,890 ರೂ
  • ಜೈಪುರ್: 13,900 ರೂ
  • ಲಕ್ನೋ: 13,900 ರೂ
  • ಭುವನೇಶ್ವರ್: 13,885 ರೂ

ಇದನ್ನೂ ಓದಿ: ಪಿಪಿಎಫ್​ನಲ್ಲಿ ಕೇವಲ 1 ಪರ್ಸಂಟ್ ಬಡ್ಡಿಗೆ ಸಾಲ? ಯಾವ ವರ್ಷ, ಎಷ್ಟು ಅವಧಿ ಇತ್ಯಾದಿ ನಿಯಮಗಳು ತಿಳಿದಿರಿ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 579 ರಿಂಗಿಟ್ (13,471 ರುಪಾಯಿ)
  • ದುಬೈ: 530.50 ಡಿರಾಮ್ (13,375 ರುಪಾಯಿ)
  • ಅಮೆರಿಕ: 148 ಡಾಲರ್ (13,696 ರುಪಾಯಿ)
  • ಸಿಂಗಾಪುರ: 187.80 ಸಿಂಗಾಪುರ್ ಡಾಲರ್ (13,636 ರುಪಾಯಿ)
  • ಕತಾರ್: 526 ಕತಾರಿ ರಿಯಾಲ್ (13,360 ರೂ)
  • ಸೌದಿ ಅರೇಬಿಯಾ: 540 ಸೌದಿ ರಿಯಾಲ್ (13,324 ರುಪಾಯಿ)
  • ಓಮನ್: 56.65 ಒಮಾನಿ ರಿಯಾಲ್ (13,625 ರುಪಾಯಿ)
  • ಕುವೇತ್: 43.50 ಕುವೇತಿ ದಿನಾರ್ (13,141 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 255 ರೂ
  • ಚೆನ್ನೈ: 260 ರೂ
  • ಮುಂಬೈ: 255 ರೂ
  • ದೆಹಲಿ: 255 ರೂ
  • ಕೋಲ್ಕತಾ: 255 ರೂ
  • ಕೇರಳ: 260 ರೂ
  • ಅಹ್ಮದಾಬಾದ್: 255 ರೂ
  • ಜೈಪುರ್: 255 ರೂ
  • ಲಕ್ನೋ: 255 ರೂ
  • ಭುವನೇಶ್ವರ್: 260 ರೂ
  • ಪುಣೆ: 255

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Exit mobile version