ಕಾಲುಂಗರ ಹಾಕಿಕೊಳ್ತಾರೆ ನಟಿ ರಜಿನಿ ಪತಿ ಅರುಣ್ 

ಕಾಲುಂಗರ ಹಾಕಿಕೊಳ್ತಾರೆ ನಟಿ ರಜಿನಿ ಪತಿ ಅರುಣ್ 

ಅರುಣ್ ಗೌಡ ಹಾಗೂ ಅಮೃತವರ್ಷಿಣಿ ರಜಿನಿ ವಿವಾಹ ಆಗಿದ್ದಾರೆ. ಅರುಣ್ ಫಿಟ್ನೆಸ್ ಟ್ರೇನರ್. ರಜಿನಿ ಹಾಗೂ ಅರುಣ್​​ಗೆ ಪರಿಚಯ ಆಗಿದ್ದು ಜಿಮ್ ಅಲ್ಲಿಯೇ. ಈಗ ಇಬ್ಬರೂ ‘ಜೋಡಿ ನಂಬರ್ 1’ ಶೋಗೆ ಬಂದಿದ್ದಾರೆ. ಅರುಣ್ ಅವರು ಶೋನಲ್ಲಿ ಒಂದು ಅಚ್ಚರಿಯ ವಿಷಯ ರಿವೀಲ್ ಮಾಡಿದ್ದಾರೆ. ಅವರು ಕಾಲುಂಗರ ಧರಿಸುತ್ತಾರಂತೆ. ‘ಮಮ್ಮಿಗೆ (ರಜಿನಿ) ಕಮಿಟ್ ಆಗಿದ್ದೇನೆ ಎಂಬುದರ ಅರ್ಥ ಇದು’ ಎಂದು ಅರುಣ್ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Viral: ವ್ಯವಹಾರ ಶುದ್ಧವಾಗಿರಲಿ; ಸಾಲ ಕೇಳುವವರಿಗೆ ಅಂಗಡಿ ಮುಂಭಾಗ ಬೋರ್ಡ್ ಹಾಕಿ ಎಚ್ಚರಿಕೆ ಕೊಟ್ಟ ಮಾಲೀಕ

ಹಣ ಅಂದ್ರೆ ಹೆಣ ಕೂಡ ಬಾಯಿ ಬಿಡುತ್ತೆ ಅನ್ನೋ ಮಾತಿದೆ. ಹಣದ ವಿಚಾರ ಬಂದ್ರೆ ಅತ್ಯಾಪ್ತರು ಸಹ ದೂರವಾಗಿ ಬಿಡ್ತಾರೆ. ಹೀಗಾಗಿ ವ್ಯಾಪಾರಸ್ಥರು ಹಾಗೂ ಅಂಗಡಿ ಮಾಲೀಕರು (shop owner) ವ್ಯವಹಾರ ವಿಷ್ಯದಲ್ಲಿ ಕಟ್ಟುನಿಟ್ಟಾಗಿ ಇರೋದನ್ನು ನೀವು ನೋಡಿರುತ್ತೀರಿ. ಅಷ್ಟೇ ಅಲ್ಲ, ಸಾಲ ಕೇಳಿ ಸ್ನೇಹ (Friendship) ಕಳೆದುಕೊಳ್ಳಬೇಡಿ ಅನ್ನೋದನ್ನು ದೊಡ್ಡ ಅಕ್ಷರದಲ್ಲಿ ಅಂಗಡಿಗಳಲ್ಲಿ ಬರೆದಿರುತ್ತಾರೆ. ಇದೀಗ ಇಂತಹದ್ದೇ ಅಂಗಡಿ ಮುಂಭಾಗದಲ್ಲಿನ  ಬೋರ್ಡ್‌ ಪೋಟೋ ವೈರಲ್‌ ಆಗಿದೆ. ಈ ಬೋರ್ಡ್‌ನಲ್ಲಿ ಸಾಲ ಕೇಳುವವರಿಗೆ  ಅಂಗಡಿ ಮಾಲೀಕ ಖಡಕ್ ವಾರ್ನಿಂಗ್‌ ನೀಡಿದ್ದಾರೆ. ಈ ಫೋಟೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರ ಹುಬ್ಬೇರಿಸುವಂತೆ ಮಾಡಿದೆ.

ನಿಕ್ಷೇಪ್ ಗೌಡ (Nikshep gowda) ಹೆಸರಿನ ಖಾತೆಯಲ್ಲಿ ಅಂಗಡಿ ಮುಂಭಾಗದಲ್ಲಿ ಹಾಕಲಾದ ದೊಡ್ಡ ಬೋರ್ಡ್‌ನ ಫೋಟೋವನ್ನು ಹಂಚಿಕೊಳ್ಳಲಾಗಿದೆ. ಈ ಬೋರ್ಡ್‌ನಲ್ಲಿ ವ್ಯವಹಾರ ಶುದ್ಧವಾಗಿರಲಿ, ನಾಳೆ ಕೊಡ್ತೀನಿ, ಆಮೇಲೆ ಕೊಡ್ತೀನಿ, ಸ್ವಲ್ಪ ಹೊತ್ತಿನಲ್ಲಿ ಕೊಡ್ತೀನಿ, ಬಂದು ಕೊಡ್ತೀನಿ, ನಾ ಓಡಿ ಹೋಗ್ತಿನಾ?, ನನ್ನ ಮೇಲೆ ನಂಬಿಕೆ ಇಲ್ವಾ?, ನಾವೇನ್ ಮೋಸ ಮಾಡ್ತೀವಾ?, ದಿನಾ ನಾನು ಇಲ್ಲೇ ಬರ್ತಿನಿ? ಹಾಗೂ ನಾನು ಇದೇ ಊರಿನವನು, ಇನ್ನು ಮುಂತಾದ ವಾಕ್ಯಗಳನ್ನು ನಮ್ಮಲ್ಲಿ ದಯವಿಟ್ಟು ಬಳಸಬೇಡಿ. ಸ್ನೇಹ ಬೇರೆ ವ್ಯವಹಾರ ಬೇರೆ ನಮ್ಮಲ್ಲಿ ಸಾಲ ದೊರೆಯುವುದಿಲ್ಲ ಸಹಕರಿಸಿ ಎಂದು ಬರೆಯಲಾಗಿದೆ.

ವೈರಲ್ ಪೋಸ್ಟ್ ಇಲ್ಲಿದೆ

ಇದನ್ನೂ ಓದಿ: ಬೀದಿ ಬದಿ ಕಸ ಹಾಕುವವರಿಗೆ ವಿಶಿಷ್ಟ ಬ್ಯಾನರ್ ಹಾಕಿ ವಾರ್ನಿಂಗ್ ಕೊಟ್ಟ ವ್ಯಕ್ತಿ

ಈ ಪೋಸ್ಟ್ ಮೂವತ್ತೇರಡು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಪಾಪ ತುಂಬಾ ಮೋಸ ಹೋಗಿದ್ದಾನೆ ಅನಿಸ್ತದೆ, ಅದಕ್ಕೆ ಹೀಗೆ ಬರೆದು ಹಾಕಿದ್ದಾನೆ ಅನಿಸ್ತದೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ಈ ರೀತಿ ಇರುವವರಿಗೆ ಬೇಗನೆ ನಾಮ ಬೀಳೋದು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ನೊಂದು ಬೆಂದಿರುವ ಜೀವ ಎಂದು ತಮಾಷೆ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಮಲಯಾಳಂನ ‘ಪಳ್ಳಿ ಚಟ್ಟಂಬಿ’ ಚಿತ್ರದಲ್ಲಿ ಬಳಕೆ ಆಯ್ತು ಯಕ್ಷಗಾನ; ಇದೆ ಕನ್ನಡದ ಡೈಲಾಗ್

ಮಲಯಾಳಂ ಸಿನಿಮಾಗಳು ಮೊದಲಿನಿಂದಲೂ ಬೆಂಗಳೂರು ನಂಟನ್ನು ಹೊಂದಿವೆ. ಅವರ ಅನೇಕ ಸಿನಿಮಾಗಳು ಬೆಂಗಳೂರಿನಲ್ಲಿ ಶೂಟ್ ಆದ ಉದಾಹರಣೆ ಇದೆ. ‘ಬೆಂಗಳೂರು ಡೇಸ್’, ‘ಡಿಯರ್ ಫ್ರೆಂಡ್’, ‘ಲೋಕಃ: ಚಾಪ್ಟರ್ 1’ ಹೀಗೆಯೇ ಅನೇಕ ಚಿತ್ರಗಳು ಬೆಂಗಳೂರು ಕನೆಕ್ಷನ್ ಹೊಂದಿವೆ. ಈಗ ಮುಂಬರುವ ಮಲಯಾಳಂನ ‘ಪಳ್ಳಿ ಚಟ್ಟಂಬಿ’ ಚಿತ್ರಕ್ಕೂ ಕರ್ನಾಟಕದ ಲಿಂಕ್ ಇದೆ ಎಂಬ ವಿಷಯ ರಿವೀಲ್ ಆಗಿದೆ.

‘ಪಳ್ಳಿ ಚಟ್ಟಂಬಿ’ ಸಿನಿಮಾದಲ್ಲಿ ಟುವಿನೋ ಥಾಮಸ್ ನಟಿಸಿದ್ದಾರೆ. ಈ ಚಿತ್ರಕ್ಕೆ ಕಯಾದು ಲೋಹರ್ ನಾಯಕಿ. ಈ ಮೊದಲು ಕಯಾದು ಅವರು ‘ಮುಗಿಲ್​​ ಪೇಟೆ’ ಹೆಸರಿನ ಕನ್ನಡ ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರಕ್ಕೆ ಡಿಜೋ ಜೊಸೆ ಆಂಟೋನಿ ನಿರ್ದೇಶನ ಇದೆ. ಈ ಮೊದಲು ‘ಜನ ಗಣ ಮನ’ ಹೆಸರಿನ ಸಿನಿಮಾ ಮಾಡಿದ್ದರು. ಈ ಚಿತ್ರದ ಕಥೆ ನಡೆದಿದ್ದು ಕೂಡ ಕರ್ನಾಟಕದ ರಾಮನಗರದಲ್ಲಾಗಿತ್ತು. ಈಗ ಅವರ ನಿರ್ದೇಶನದ ‘ಪಳ್ಳಿ ಚಟ್ಟಂಬಿ’ ಚಿತ್ರದಲ್ಲಿ ಕನ್ನಡದ ಕಲೆಯ ಕನೆಕ್ಷನ್ ಇರುವ ವಿಷಯ ರಿವೀಲ್ ಆಗಿದೆ.

ಬೆಂಗಳೂರಿನಲ್ಲಿ ‘ಪಳ್ಳಿ ಚಟ್ಟಂಬಿ’ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟುವಿನೋ, ‘ಈ ಸಿನಿಮಾದಲ್ಲಿ ಯಕ್ಷಗಾನದ ಬಳಕೆ ಆಗಿದೆ. ಅಲ್ಲಿ, ಕನ್ನಡದ ಡೈಲಾಗ್ ಬರುತ್ತದೆ’ ಎಂದು ಟುವಿನೋ ಮಾಹಿತಿ ನೀಡಿದರು. ಇದು ಕುತೂಹಲ ಹೆಚ್ಚಿಸಿದೆ. ಕನ್ನಡ ಪ್ರೇಕ್ಷಕರನ್ನು ಸೆಳೆಯುವ ಉದ್ದೇಶದಿಂದಲೇ ಕನ್ನಡವನ್ನು ಮಲಯಾಳಂನಲ್ಲಿ ಸೇರಿಸಲಾಗುತ್ತದೆಯೇ ಎನ್ನುವ ಪ್ರಶ್ನೆ ಮೂಡಿತು. ಇದಕ್ಕೆ ಉತ್ತರಿಸಿದ ಅವರು, ‘ಕಥೆ ಡಿಮ್ಯಾಂಡ್​ ಮಾಡಿದರೆ ಮಾತ್ರ ಅದನ್ನು ಸೇರಿಸೋದಾಗಿ’ ಹೇಳಿದ್ದಾರೆ ಟುವಿನೋ.

‘ಪಳ್ಳಿ ಚಟ್ಟಂಬಿ’ ಸಿನಿಮಾದ ಕಥೆ ಸಾಗೋದು ಹಳ್ಳಿಯಲ್ಲಿ. ಈ ಸಿನಿಮಾದ ಟ್ರೇಲರ್ ಗಮನ ಸೆಳೆದಿದೆ. ಮಲಯಾಳಂ ಜೊತೆ ಕನ್ನಡದಲ್ಲೂ ಸಿನಿಮಾ ರಿಲೀಸ್ ಆಗುತ್ತಿದೆ. ಈ ಚಿತ್ರವನ್ನು ಕರ್ನಾಟಕದಲ್ಲಿ ಹೊಂಬಾಳೆ ಫಿಲ್ಮ್ಸ್ ಹಂಚಿಕೆ ಮಾಡುತ್ತಿದೆ. ಏಪ್ರಿಲ್ 15ರಂದು ಸಿನಿಮಾ ತೆರೆಗೆ ಬರಲಿದೆ.

ಇದನ್ನೂ ಓದಿ: ‘ಟಾಕ್ಸಿಕ್’ ಚಿತ್ರದಲ್ಲಿ ಯಾವ ಪಾತ್ರ? ಕೊನೆಗೂ ಮೌನ ಮುರಿದ ಟೊವಿನೋ ಥಾಮಸ್

‘ಪಳ್ಳಿ ಚಟ್ಟಂಬಿ’ ಚಿತ್ರವನ್ನು ವರ್ಲ್ಡ್ ವೈಡ್ ಫಿಲಂಸ್, ಸಿ ಕ್ಯೂಬ್ ಬ್ರೋಸ್ ಎಂಟರ್ಟೇನ್ಮೆಂಟ್ ಬ್ಯಾನರ್ ಅಡಿಯಲ್ಲಿ ನೌಫಲ, ಬ್ರಿಜೇಶ್, ಚಾಣುಕ್ಯ ಚೈತನ್ಯ, ಚರಣ್ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾಗೆ ಎಸ್ ಸುರೇಶ್ ಬಾಬು ಕಥೆ ಬರೆದಿದ್ದಾರೆ. ಟಿಜೋ ಟಾಮಿ ಛಾಯಾಗ್ರಹಣ, ಶ್ರೀಜಿತ್ ಸಾರಂಗ್ ಸಂಕಲನ, ಜೇಕ್ಸ್ ಬಿಜೋಯ್ ಸಂಗೀತ ಸಂಯೋಜನೆ ಚಿತ್ರಕ್ಕೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಸಿನಿಮಾ ಬಿಡುಗಡೆಗೆ ಎಂಟು ತಿಂಗಳು, ಈಗಲೇ 90,000ಕ್ಕೆ ಟಿಕೆಟ್ ಸೋಲ್ಡ್ ಔಟ್

ಸಿನಿಮಾದ (Cinema) ಬಿಡುಗಡೆ ಆಗುವ ಕೆಲ ದಿನಗಳ ಮುಂಚೆ ಕೆಲವೊಮ್ಮೆ ಕೆಲವು ಗಂಟೆಗಳ ಮುಂಚೆ ಮಾತ್ರ ಸಿನಿಮಾದ ಅಡ್ವಾನ್ಸ್ ಬುಕಿಂಗ್​​ಗಳು ಶುರು ಆಗುತ್ತವೆ. ಆದರೆ ಇಲ್ಲೊಂದು ಸಿನಿಮಾ ಬಿಡುಗಡೆಗೆ ಎಂಟು ತಿಂಗಳ ಮುಂಚೆಯೇ ಟಿಕೆಟ್​​ಗಳು ಮಾರಾಟ ಆಗಿವೆ, ಅದೂ 90 ಸಾವಿರ ರೂಪಾಯಿಗೆ ಮಾರಾಟ ಆಗಿವೆ. ವಿಶ್ವ ಸಿನೆಮಾ ರಂಗದಲ್ಲಿ ಅತ್ಯಂತ ಯಶಸ್ವಿ ಸೈನ್ಸ್ ಫಿಕ್ಷನ್ ಫ್ರಾಂಚೈಸಿಗಳಲ್ಲಿ ಒಂದಾದ ‘ಡ್ಯೂನ್’ ಸರಣಿಯ ಮೂರನೇ ಭಾಗವು ಈ ವರ್ಷದ ಡಿಸೆಂಬರ್ 18ರಂದು ಬಿಡುಗಡೆಯಾಗಲಿದೆ. ಈ ಚಿತ್ರವು ತಾಂತ್ರಿಕವಾಗಿ ಅತ್ಯಂತ ಶ್ರೀಮಂತವಾಗಿದ್ದು, ಜಗತ್ತಿನಾದ್ಯಂತ ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಹೊಂದಿದೆ.

ಚಿತ್ರದ ಬಿಡುಗಡೆಗೆ ಸುಮಾರು 8 ತಿಂಗಳು ಇರುವಾಗಲೇ, ವಿತರಕರು ವಿಶ್ವದ ಕೆಲವು ಆಯ್ದ ಐಮ್ಯಾಕ್ಸ್ ಚಿತ್ರಮಂದಿರಗಳಲ್ಲಿ ಮುಂಗಡ ಬುಕಿಂಗ್ ಅನ್ನು ಪ್ರಾರಂಭಿಸಿದ್ದರು. ಅಚ್ಚರಿಯೆಂದರೆ, ಬುಕಿಂಗ್ ಆರಂಭವಾದ ಕೆಲವೇ ನಿಮಿಷಗಳಲ್ಲಿ ಎಲ್ಲಾ ಟಿಕೆಟ್‌ಗಳು ಮಾರಾಟವಾಗಿವೆ. ಡಿಮ್ಯಾಂಡ್ ಹೆಚ್ಚಾದಂತೆ, ಟಿಕೆಟ್ ಖರೀದಿಸಿದವರು ಅವುಗಳನ್ನು ‘ಇ-ಬೇ’ ನಂತಹ ಖಾಸಗಿ ಹರಾಜು ವೆಬ್‌ಸೈಟ್‌ಗಳಲ್ಲಿ ಮರುಮಾರಾಟಕ್ಕೆ ಇಟ್ಟಿದ್ದಾರೆ. ವರದಿಗಳ ಪ್ರಕಾರ, ಕೇವಲ ಒಂದು ಟಿಕೆಟ್ ಬರೋಬ್ಬರಿ 999 ಡಾಲರ್‌ಗೆ (ಭಾರತೀಯ ರೂಪಾಯಿಗಳಲ್ಲಿ ಸುಮಾರು ₹83,000 ರಿಂದ ₹90,000) ಮಾರಾಟವಾಗಿದೆ. ಇದು ಸಿನೆಮಾ ಪ್ರೇಮಿಗಳಲ್ಲಿ ಈ ಚಿತ್ರದ ಬಗ್ಗೆ ಇರುವ ವಿಪರೀತ ಕ್ರೇಜ್ ಅನ್ನು ತೋರಿಸುತ್ತದೆ.

ಇದನ್ನೂ ಓದಿ:‘ಟಾಕ್ಸಿಕ್’ ಎದುರು ಬರಲು ರೆಡಿ ಆಯ್ತು ಬಾಲಿವುಡ್​​ನ ಸ್ಟಾರ್ ನಟನ ಸಿನಿಮಾ

ಭಾರತೀಯ ಮಾರುಕಟ್ಟೆಯಲ್ಲೂ ‘ಡ್ಯೂನ್’ ಸರಣಿಗೆ ಭರ್ಜರಿ ಬೇಡಿಕೆಯಿದೆ. ಈ ಹಿಂದೆ ತೆಲುಗಿನ ‘ಕಲ್ಕಿ 2898 AD‘ ಚಿತ್ರದ ಪೋಸ್ಟರ್‌ಗಳು ಮತ್ತು ಮರುಭೂಮಿಯ ದೃಶ್ಯಗಳು ‘ಡ್ಯೂನ್’ ಚಿತ್ರಕ್ಕೆ ಹೋಲಿಕೆಯಾಗುತ್ತವೆ ಎಂಬ ಚರ್ಚೆಗಳು ನಡೆದಿದ್ದವು. ಇದು ಭಾರತೀಯ ಪ್ರೇಕ್ಷಕರಿಗೂ ಈ ಹಾಲಿವುಡ್ ಸರಣಿಯ ಪರಿಚಯವನ್ನು ಹೆಚ್ಚಿಸಿದೆ. ಕೇವಲ ಸಿನೆಮಾ ಮಾತ್ರವಲ್ಲದೆ, ಈ ಸರಣಿಯ ‘ಡ್ಯೂನ್: ಪ್ರೊಫೆಸಿ’ ಕೂಡ ಬಿಡುಗಡೆ ಆಗಿದೆ. ವೆಬ್ ಸರಣಿಯಲ್ಲಿ ಭಾರತೀಯ ನಟಿ ಟಬು ಸಹ ನಟಿಸಿದ್ದಾರೆ.

‘ಡ್ಯೂನ್’ ಸಿನಿಮಾದ ಮೂರನೇ ಸರಣಿ ಇದೀಗ ಬಿಡುಗಡೆ ಆಗಲಿದ್ದು, ಸಿನಿಮಾನಲ್ಲಿ ಟೀಮಟಿ ಶಾಲೊಮೇಟ್, ಜೆಂಡೆಯಾ, ಜಾಸನ್ ಮವೋಮಾ ಇನ್ನೂ ಹಲವು ಸ್ಟಾರ್ ನಟರು ನಟಿಸಿದ್ದಾರೆ. ಸಿನಿಮಾವನ್ನು ಡೆನ್ನಿಸ್ ವೆಲ್ಲಿನ್ಯುವಿ ನಿರ್ದೇಶನ ಮಾಡಿದ್ದಾರೆ. ಸಿನಿಮಾ ಇದೇ ವರ್ಷ ಡಿಸೆಂಬರ್ 18ಕ್ಕೆ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕಾಫಿಗೂ ತಟ್ಟಿದ ಯುದ್ಧದ ಬಿಸಿ! ರಫ್ತು ಸ್ಥಗಿತಗೊಂಡು ಕಂಗಾಲಾದ ಬೆಳೆಗಾರ; ಶೇ 20ರಷ್ಟು ಕುಸಿದ ದರ

ಹಾಸನ, ಏಪ್ರಿಲ್ 8: ಇಡೀ ಜಗತ್ತನ್ನೇ ತಲ್ಲಣಗೊಳಿಸಿರುವ ಮಧ್ಯಪ್ರಾಚ್ಯ ಯುದ್ಧದ ಪರಿಣಾಮಗಳು ಈಗ ಕರ್ನಾಟಕದ (Karnataka) ಕಾಫಿ ತೋಟಗಳಿಗೂ ತಟ್ಟಿವೆ. ಅಡುಗೆ ಅನಿಲ ಮತ್ತು ಆಟೋ ಗ್ಯಾಸ್ ಕೊರತೆಯ ನಡುವೆ, ದೇಶಕ್ಕೆ ಅತಿ ಹೆಚ್ಚು ವಿದೇಶಿ ವಿನಿಮಯ ತಂದುಕೊಡುತ್ತಿದ್ದ ಕಾಫಿ ಉದ್ಯಮ ಈಗ ಸಂಕಷ್ಟದ ಸುಳಿಗೆ ಸಿಲುಕಿದೆ. ಇಸ್ರೇಲ್ ಮತ್ತು ಇರಾನ್ ನಡುವಿನ ಭೀಕರ ಕದನದಿಂದಾಗಿ ಕಾಫಿ ರಫ್ತು (Coffee Export) ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಮಾರುಕಟ್ಟೆಯಲ್ಲಿ ಕಾಫಿ ಬೆಲೆ ತೀವ್ರವಾಗಿ ಕುಸಿಯುತ್ತಿದೆ.

ದಶಕದ ಬಳಿಕ ಏರಿದ್ದ ಬೆಲೆ ಈಗ ದಿಢೀರ್ ಕುಸಿತ

ಕಳೆದ ಹಲವು ದಶಕಗಳ ನಂತರ ಕಾಫಿಗೆ ಬಂಪರ್ ಬೆಲೆ ಬಂದಿತ್ತು. ಇದರಿಂದ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದ ಬೆಳೆಗಾರರು, ಬೆಲೆ ಮತ್ತಷ್ಟು ಏರಬಹುದು ಎಂಬ ನಿರೀಕ್ಷೆಯಲ್ಲಿ ಕಾಫಿಯನ್ನು ಮಾರಾಟ ಮಾಡದೆ ಸಂಗ್ರಹಿಸಿಟ್ಟುಕೊಂಡಿದ್ದರು. ಆದರೆ, ಯುದ್ಧ ಶುರುವಾದ ಕೇವಲ ಒಂದು ತಿಂಗಳ ಅವಧಿಯಲ್ಲಿ ಬೆಲೆ ಬರೋಬ್ಬರಿ ಶೇಕಡಾ 20 ರಷ್ಟು ಕುಸಿದಿದೆ.

ಕಾಫಿ ದರ ವಿವರ

  • ಅರೇಬಿಕಾ ಕಾಫಿ: ಕಳೆದ ವರ್ಷ 50 ಕೆಜಿ ಚೀಲಕ್ಕೆ 29 ಸಾವಿರ ರೂ. ಇದ್ದ ಬೆಲೆ ಈಗ 23 ಸಾವಿರಕ್ಕೆ ಕುಸಿದಿದೆ.
    ರೊಬಸ್ಟಾ ಕಾಫಿ: 12 ಸಾವಿರ ರೂ. ಇದ್ದ ಬೆಲೆ ಈಗ ಕೇವಲ 8 ಸಾವಿರಕ್ಕೆ ಇಳಿಕೆಯಾಗಿದೆ.
  • ಗಾಯದ ಮೇಲೆ ಬರೆ ಎಳೆದ ವಿದೇಶಿ ಫಸಲು

ಒಂದೆಡೆ ಯುದ್ಧದಿಂದ ರಫ್ತು ನಿಂತಿದ್ದರೆ, ಮತ್ತೊಂದೆಡೆ ಜಗತ್ತಿನ ಅತಿ ದೊಡ್ಡ ಕಾಫಿ ಬೆಳೆಗಾರ ರಾಷ್ಟ್ರಗಳಾದ ಬ್ರೆಜಿಲ್ ಮತ್ತು ವಿಯೆಟ್ನಾಂನಲ್ಲಿ ಈ ಬಾರಿ ಉತ್ತಮ ಫಸಲು ಬಂದಿದೆ. ಕಳೆದ ವರ್ಷ ಅಲ್ಲಿ ಫಸಲು ಕೈಕೊಟ್ಟಿದ್ದರಿಂದ ಭಾರತದ ಕಾಫಿಗೆ ಭಾರಿ ಬೇಡಿಕೆ ಇತ್ತು. ಆದರೆ ಈಗ ಆ ದೇಶಗಳಲ್ಲೂ ಫಸಲು ಚೆನ್ನಾಗಿರುವುದು ಮತ್ತು ಯುದ್ಧದ ಪರಿಣಾಮ ರಫ್ತು ರದ್ದಾಗಿರುವುದು ಬೆಳೆಗಾರರ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಕಾಫಿ ಬೆಳೆಗಾರರ ಆಗ್ರಹವೇನು?

ದೇಶದ ಒಟ್ಟು ಕಾಫಿ ಉತ್ಪಾದನೆಯಲ್ಲಿ ಕರ್ನಾಟಕದ ಪಾಲು ಶೇ 70 ರಷ್ಟಿದೆ. ಕೊಡಗು, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಯ ಲಕ್ಷಾಂತರ ಕುಟುಂಬಗಳು ಈ ಉದ್ಯಮವನ್ನೇ ನಂಬಿವೆ. ‘ರಫ್ತುದಾರರಿಗೆ ಕೇಂದ್ರ ಸರ್ಕಾರ ಹೇಗೆ ನೆರವಿನ ಹಸ್ತ ನೀಡುತ್ತದೆಯೋ, ಅದೇ ಮಾದರಿಯಲ್ಲಿ ಕಾಫಿ ಬೆಳೆಗಾರರಿಗೂ ವಿಶೇಷ ಪರಿಹಾರ ಘೋಷಿಸಬೇಕು’ ಎಂದು ಅಂತರಾಷ್ಟ್ರೀಯ ಕಾಫಿ ಸಂಘಟನೆ ಸಲಹಾ ಸಮಿತಿ ಸದಸ್ಯರಾದ ಡಾ. ಎಚ್ ಡಿ ಮೋಹನ್ ಕುಮಾರ್ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಇರಾನ್ ಮೇಲೆ ಭೀಕರ ದಾಳಿ ನಿರ್ಧಾರದಿಂದ ಹಿಂದೆ ಸರಿದ ಟ್ರಂಪ್: ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ 2 ವಾರಗಳ ಕದನ ವಿರಾಮ ಘೋಷಣೆ!

ಸದಗಯ ಇರಾನ್-ಅಮೆರಿಕ ಯುದ್ಧಕ್ಕೆ 2 ವಾರಗಳ ಕದನ ವಿರಾಮ ಘೋಷಿಸಲಾಗಿದ್ದು, ಇದು ಮುಂದೆ ಯಾವ ರೀತಿ ಪರಿಣಾಮ ಬೀರಲಿದೆ ಎಂಬುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಾಗಲಕೋಟೆ ಉಪ ಚುನಾವಣೆಗೆ ಕೊನೇ ಹಂತದ ಸಿದ್ಧತೆ ಹೇಗಿದೆ ಗೊತ್ತಾ?

ಬಾಗಲಕೋಟೆ, ಏಪ್ರಿಲ್​​ 08: ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ನಾಳೆ ನಡೆಯಲಿರುವ ಮತದಾನ ಪ್ರಕ್ರಿಯೆಗಾಗಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಸಂಪೂರ್ಣವಾಗಿ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ. ಬಾಗಲಕೋಟೆಯ ನವನಗರದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಸ್ಟರಿಂಗ್ ಕಾರ್ಯ ನಡೆದಿದ್ದು, ಮತಗಟ್ಟೆಗಳಿಗೆ ನಿಯೋಜಿಸಲಾಗಿರುವ ಸಿಬ್ಬಂದಿಗಳು ಇವಿಎಂ ಯಂತ್ರಗಳನ್ನು ಪಡೆದು ತಮ್ಮ ಬೂತ್‌ಗಳತ್ತ ತೆರಳಿದ್ದಾರೆ. ಕ್ಷೇತ್ರದಲ್ಲಿ ಒಟ್ಟು 2,59,797 ಮತದಾರರಿದ್ದು, ಇದರಲ್ಲಿ 1,26,999 ಪುರುಷರು, 1,32,775 ಮಹಿಳೆಯರು ಮತ್ತು 23 ಇತರೆ ಮತದಾರರಿದ್ದಾರೆ. ಒಟ್ಟು 322 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, 1564 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಎಲ್ಲ ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಅಹಿತಕರ ಘಟನೆಗಳನ್ನು ತಪ್ಪಿಸಲು 2,500ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

 

Source link

ಯುವಕರಿಗೆ ರಜನಿಕಾಂತ್ ಕಿವಿಮಾತು: ಸೂಪರ್ ಸ್ಟಾರ್ ಹೇಳಿದ್ದೇನು?

ತಮ್ಮ ವಿಶಿಷ್ಟ ಮ್ಯಾನರಿಸಂ ಮತ್ತು ಅಭಿನಯದ ಮೂಲಕ ದಶಕಗಳಿಂದ ಚಿತ್ರರಂಗವನ್ನು ಆಳುತ್ತಿರುವ ನಟ ರಜನಿಕಾಂತ್ (Rajinikanth), ಭಾರತದ ಅತ್ಯಂತ ಪ್ರಭಾವಿ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ ಅವರು. ಕೇವಲ ಸಿನಿಮಾ ಪರದೆಯ ಮೇಲೆ ನಾಯಕನಷ್ಟೇ ಅಲ್ಲದೆ ಸಾಮಾಜಿಕ ಕಾಳಜಿಯುಳ್ಳ ವ್ಯಕ್ತಿಯೂ ಹೌದು ರಜನೀಕಾಂತ್. ಇತ್ತೀಚೆಗಂತೂ ತಮ್ಮ ಸಿನಿಮಾ ಕಾರ್ಯಕ್ರಮಗಳಲ್ಲಿಯೂ ಸಹ ರಜನೀಕಾಂತ್ ಅವರು ಸಾಕಷ್ಟು ಸಂದೇಶಗಳನ್ನು, ಕಿವಿಮಾತುಗಳನ್ನು ಹೇಳುತ್ತಾರೆ. ಇದೀಗ ರಜನೀಕಾಂತ್ ಅವರು ಯುವಕರಿಗಾಗಿ ಸಂದೇಶವೊಂದನ್ನು ನೀಡಿದ್ದಾರೆ.

ಇದೀಗ ನಟ ರಜನೀಕಾಂತ್ ಮಾಧ್ಯಮಗಳೊಟ್ಟಿಗೆ ಮಾತನಾಡಿದ್ದು, ‘ಯುವಜನತೆಯು ತಮ್ಮ ವಿದ್ಯಾಭ್ಯಾಸ ಮತ್ತು ಭವಿಷ್ಯದ ಬಗ್ಗೆ ಗಂಭೀರವಾಗಿ ಆಲೋಚಿಸಬೇಕು’ ಎಂದು ಅವರು ಹೇಳಿದ್ದಾರೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳಲು ಶಿಕ್ಷಣವೇ ಅಡಿಪಾಯ ಎಂಬುದನ್ನು ಅವರು ಒತ್ತಿ ಹೇಳಿದ್ದಾರೆ. ಇಂದಿನ ಕಾಲಘಟ್ಟದಲ್ಲಿ ಯುವಕರು ಬೇಗನೆ ಆಕರ್ಷಿತರಾಗುತ್ತಿರುವ ಮದ್ಯಪಾನ ಮತ್ತು ಮಾದಕವಸ್ತುಗಳ ಬಗ್ಗೆ ರಜನಿಕಾಂತ್ ಕಳವಳ ವ್ಯಕ್ತಪಡಿಸಿದ್ದಾರೆ.

‘ನಾನು ಯುವಜನತೆಯಲ್ಲಿ ವಿನಂತಿಸಿಕೊಳ್ಳುವುದೇನೆಂದರೆ, ದಯವಿಟ್ಟು ಮದ್ಯ ಮತ್ತು ಮಾದಕವಸ್ತುಗಳಿಂದ ದೂರವಿರಿ. ಒಂದು ವೇಳೆ ನೀವು ಈ ವ್ಯಸನಕ್ಕೆ ಬಲಿಯಾದರೆ, ನಿಮ್ಮ ಜೀವನ ಕೇವಲ ನಿಮಗಷ್ಟೇ ಅಲ್ಲ, ನಿಮ್ಮನ್ನು ನಂಬಿರುವ ಪೋಷಕರಿಗೆ ಮತ್ತು ಪ್ರೀತಿಪಾತ್ರರಿಗೂ ನರಕವಾಗಿ ಪರಿಣಮಿಸುತ್ತದೆ. ವ್ಯಸನಿಯಾದ ಒಬ್ಬ ವ್ಯಕ್ತಿ ಕೇವಲ ತನ್ನ ಆರೋಗ್ಯವನ್ನಷ್ಟೇ ಹಾಳುಮಾಡಿಕೊಳ್ಳುವುದಿಲ್ಲ, ಬದಲಾಗಿ ಇಡೀ ಕುಟುಂಬವನ್ನು ಬೀದಿಗೆ ತರುತ್ತಾನೆ. ಪೋಷಕರು ತಮ್ಮ ಮಕ್ಕಳ ಮೇಲೆ ಇಟ್ಟಿರುವ ಕನಸುಗಳು ನುಚ್ಚುನೂರಾಗುತ್ತವೆ. ಈ ಭಾವನಾತ್ಮಕ ಅಂಶವನ್ನು ರಜನಿಕಾಂತ್ ತಮ್ಮ ಸಂದೇಶದಲ್ಲಿ ಬಹಳ ತೀಕ್ಷ್ಣವಾಗಿ ಪ್ರಸ್ತಾಪಿಸಿದ್ದಾರೆ’ ಎಂದಿದ್ದಾರೆ ರಜನೀಕಾಂತ್.

ಇದನ್ನೂ ಓದಿ:ರಜನೀಕಾಂತ್​​ಗೆ ಕೈಕೊಟ್ಟ ಶಾರುಖ್ ಖಾನ್, ‘ಜೈಲರ್ 2’ಗೆ ನೋ?

ರಜನೀಕಾಂತ್ ಪ್ರಸ್ತುತ ‘ಜೈಲರ್ 2’ ಸಿನಿಮಾನಲ್ಲಿ ನಟಿಸುತ್ತಿದ್ದು, ಇದೀಗ ಸಿನಿಮಾದ ಚಿತ್ರೀಕರಣ ಕೊನೆಯ ಹಂತದಲ್ಲಿದೆ. ಅದಾದ ಬಳಿಕ ರಜನೀಕಾಂತ್ ಹಾಗೂ ಕಮಲ್ ಹಾಸನ್ ಅವರು ಒಟ್ಟಿಗೆ ಸಿನಿಮಾನಲ್ಲಿ ನಟಿಸಲಿದ್ದು, ಸಿನಿಮಾ ಅನ್ನು ನೆಲ್ಸನ್ ನಿರ್ದೇಶನ ಮಾಡಲಿದ್ದು, ಕಮಲ್ ಹಾಸನ್ ಅವರೇ ನಿರ್ಮಾಣ ಮಾಡಲಿದ್ದಾರೆ. ಅದಾದ ಬಳಿಕ ಐತಿಹಾಸಿಕ ಸಿನಿಮಾ ಒಂದರಲ್ಲಿ ರಜನೀಕಾಂತ್ ನಟಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

R Ashwin: ನಾ ನಿವೃತ್ತಿ ಘೋಷಿಸಲು ಇದುವೇ ಅಸಲಿ ಕಾರಣ!

ಭಾರತೀಯ ಕ್ರಿಕೆಟ್‌ನ ದಿಗ್ಗಜ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್‌ (IPL 2026) ಸೀಸನ್-19 ಆರಂಭಕ್ಕೂ ಮುನ್ನ ಹಠಾತ್ ವಿದಾಯ ಘೋಷಿಸಿ ಅಚ್ಚರಿ ಮೂಡಿಸಿದ್ದರು. ಅತ್ತ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಸ್ಥಾನ ಪಡೆದಿದ್ದರೂ ಅಶ್ವಿನ್ ರಿಟೈನ್ ಪ್ರಕ್ರಿಯೆಗೂ ಮುನ್ನ ನಿವೃತ್ತಿ ಘೋಷಿಸಿದ್ದರು. ಇದಕ್ಕೇನು ಕಾರಣ ಎಂಬುದನ್ನು ಅಶ್ವಿನ್ ತಮ್ಮಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ವಿವರಿಸಿದ್ದಾರೆ.

ಈ ಬಗ್ಗೆ ಮನಬಿಚ್ಚಿ ಮಾತನಾಡಿರುವ ಅಶ್ವಿನ್, ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಮೇಲಿನ ಅಭಿಮಾನಕ್ಕಾಗಿ ಈ ಕಠಿಣ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ. ತನ್ನ ನಿವೃತ್ತಿಯ ಹಿಂದೆ ಕೇವಲ ವಯಸ್ಸಿನ ಕಾರಣವಿಲ್ಲ, ಬದಲಾಗಿ ತಂಡದ ಭವಿಷ್ಯದ ಯೋಜನೆಗಳನ್ನು ಸಹ ನಾನು ಪರಿಗಣಿಸಿದ್ದೆ ಎಂಬುದನ್ನು ಬಹಿರಂಗಪಡಿಸಿದ್ದಾರೆ.

ಐಪಿಎಲ್ ಮಿನಿ ಹರಾಜಿಗೂ ಮುನ್ನ “ನನ್ನನ್ನು ತಂಡದಲ್ಲಿ ಉಳಿಸಿಕೊಳ್ಳಬೇಕೇ ಅಥವಾ ಕೈಬಿಡಬೇಕೇ ಎಂಬ ಗೊಂದಲ ಸಿಎಸ್‌ಕೆ ಮ್ಯಾನೇಜ್‌ಮೆಂಟ್‌ಗೆ ಬೇಡ ಎಂದು ನಾನು ಭಾವಿಸಿದೆ. ನನ್ನ ನಿವೃತ್ತಿಯಿಂದ ಅವರಿಗೆ ಆ ತಲೆನೋವು ತಪ್ಪಲಿದೆ,” ಎಂದು ನನಗೆ ಗೊತ್ತಿತ್ತು.

ಅಷ್ಟೇ ಅಲ್ಲದೆ ನನ್ನ ಈ ನಿರ್ಧಾರದಿಂದ ಸಿಎಸ್‌ಕೆ ತಂಡಕ್ಕೆ ಬರೋಬ್ಬರಿ 10 ಕೋಟಿ ರೂಪಾಯಿಗಳ ಪರ್ಸ್ ಮೊತ್ತ ಉಳಿತಾಯವಾಗಲಿದೆ. ಈ ಹಣವನ್ನು ತಂಡವು ಹರಾಜಿನಲ್ಲಿ ಯುವ ಪ್ರತಿಭೆಗಳನ್ನು ಖರೀದಿಸಲು ಬಳಸಿಕೊಳ್ಳಬಹುದು ಎಂಬುದು ನನ್ನ ಆಶಯವಾಗಿತ್ತು ಎಂದು ರವಿಚಂದ್ರನ್ ಅಶ್ವಿನ್ ಹೇಳಿದ್ದಾರೆ.

ಇದೇ ವೇಳೆ 2025ರ ಸೀಸನ್ ತಮಗೆ ಮಾನಸಿಕವಾಗಿ ಸ್ವಲ್ಪ ಕಷ್ಟಕರವಾಗಿತ್ತು ಎಂದು ಒಪ್ಪಿಕೊಂಡಿರುವ ಅವರು, ತಂಡಕ್ಕೆ ಆಡುವಾಗ ಪೂರ್ಣ ಪ್ರಮಾಣದ ಭಾವನಾತ್ಮಕ ಬೆಂಬಲ ನೀಡಲು ಸಾಧ್ಯವಾಗುತ್ತಿರಲಿಲ್ಲ. ಹೀಗೆ ಸಂಪೂರ್ಣವಾಗಿ ತೊಡಗಿಸಿಕೊಳ್ಳಲಾಗದ ನೋವು ಕೂಡ ನನ್ನಲ್ಲಿತ್ತು. ಹೀಗಾಗಿ ಐಪಿಎಲ್ ಆರಂಭಕ್ಕೂ ಮುನ್ನವೇ ನಿವೃತ್ತಿ ನಿರ್ಧಾರ ತೆಗೆದುಕೊಂಡೆ ಎಂದು ಅಶ್ವಿನ್ ಸ್ಪಷ್ಟಪಡಿಸಿದ್ದಾರೆ.

ಐಪಿಎಲ್‌ನಲ್ಲಿ ಅಶ್ವಿನ್ ಸಾಧನೆ:

  • ಅಶ್ವಿನ್ ಐಪಿಎಲ್ ಇತಿಹಾಸದ ಅತ್ಯಂತ ಯಶಸ್ವಿ ಸ್ಪಿನ್ನರ್‌ಗಳಲ್ಲಿ ಒಬ್ಬರು. ಅದರಲ್ಲೂ ಸಿಎಸ್‌ಕೆ ಪರ ಅವರ ಕೊಡುಗೆ ಅಪಾರ
  • ಚೆನ್ನೈ ಸೂಪರ್ ಕಿಂಗ್ಸ್​ ಜೊತೆ ಹಲವು ಐಪಿಎಲ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
  • ಐಪಿಎಲ್ ಕೆರಿಯರ್‌ನಲ್ಲಿ 185ಕ್ಕೂ ಹೆಚ್ಚು ವಿಕೆಟ್‌ಗಳನ್ನು ಪಡೆದ ಸಾಧನೆ ಮಾಡಿದ್ದಾರೆ.
  • ಬೌಲಿಂಗ್ ಮಾತ್ರವಲ್ಲದೆ, ಕೆಳಕ್ರಮಾಂಕದಲ್ಲಿ ಉಪಯುಕ್ತ ಬ್ಯಾಟಿಂಗ್ ಮೂಲಕವೂ ಹಲವು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ.
  • ಪಂಜಾಬ್ ಕಿಂಗ್ಸ್ ತಂಡದ ನಾಯಕನಾಗಿಯೂ ಅಶ್ವಿನ್ ಕಾಣಿಸಿಕೊಂಡಿದ್ದಾರೆ.

ಅಶ್ವಿನ್ ಅವರ ಮುಂದಿನ ಹಾದಿ?

ಪ್ರಸ್ತುತ 2026ರ ಐಪಿಎಲ್ ಆವೃತ್ತಿಯಲ್ಲಿ ಅಶ್ವಿನ್ ಅವರು ಹಿಂದಿ ಕಾಮೆಂಟರಿ ಪ್ಯಾನೆಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಮೈದಾನದಲ್ಲಿ ಚೆಂಡಿನ ಮೂಲಕ ಮ್ಯಾಜಿಕ್ ಮಾಡುತ್ತಿದ್ದ ಅಶ್ವಿನ್, ಈಗ ತಮ್ಮ ವಿಶ್ಲೇಷಣೆಯ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.

ಇನ್ನು ಐಪಿಎಲ್ ಮುಗಿದ ಬಳಿಕ ಅಮೆರಿಕನ್ ಕ್ರಿಕೆಟ್ ಬೋರ್ಡ್ ಆಯೋಜಿಸುವ ಮೇಜರ್ ಲೀಗ್​ ಕ್ರಿಕೆಟ್ ಟೂರ್ನಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಟೂರ್ನಿಯಲ್ಲಿ ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ಪರ ಕಣಕ್ಕಿಳಿಯಲು ಅಶ್ವಿನ್ ಒಪ್ಪಂದ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಮಹಾ ಎಡವಟ್ಟು… ಅವೇಶ್ ಖಾನ್​ಗೆ ಬ್ಯಾನ್ ಭೀತಿ..!

ನಿಸ್ವಾರ್ಥ ನಿರ್ಧಾಕ್ಕೆ ಮೆಚ್ಚುಗೆ:

“ನನಗೆ ಇನ್ನೂ ಐಪಿಎಲ್ ಆಡುವ ಆಸೆ ಇತ್ತು, ಸಾಕಷ್ಟು ನಿರೀಕ್ಷೆಗಳಿದ್ದವು. ಆದರೆ ತಂಡದ ಹಿತದೃಷ್ಟಿಯಿಂದ ನಿವೃತ್ತಿ ಅನಿವಾರ್ಯವಾಗಿತ್ತು,” ಎಂದು ಅವರು ಭಾವುಕರಾಗಿ ನುಡಿದಿದ್ದಾರೆ. ಅಶ್ವಿನ್ ಅವರ ಈ ನಿಸ್ವಾರ್ಥ ನಿರ್ಧಾರಕ್ಕೆ ಕ್ರಿಕೆಟ್ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

 

 

Source link

ಹಿಂದೂ ಯುವತಿ ಜೊತೆ ವಿವಾಹಿತ ಮುಸ್ಲಿಂ ವ್ಯಕ್ತಿ ಪರಾರಿ: ಲವ್​​ ಜಿಹಾದ್​​ಗೆ ಒಳಗಾದ ಮಗಳನ್ನು ಹುಡುಕಿಕೊಡಿ ಎಂದು ತಾಯಿಯ ಅಳಲು

ಹುಬ್ಬಳ್ಳಿ, ಏಪ್ರಿಲ್​ 08: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಸಾಲು ಸಾಲು ಲವ್​​ ಜಿಹಾದ್​​ ಆರೋಪ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇದೀಗ ಇವುಗಳ ಸಾಲಿಗೆ ಮತ್ತೊಂದು ಹೊಸ ಸೇರ್ಪಡೆಯಾಗಿದ್ದು, ತನ್ನ ಮಗಳನ್ನು ಮುಸ್ಲಿಂ ಸಮುದಾಯದ ವಿವಾಹಿತ ವ್ಯಕ್ತಿ ಪುಸಲಾಯಿಸಿ ಕರೆದುಕೊಂಡು ಹೋಗಿದ್ದಾನೆ. ಜೊತಗೆ ಮನೆ ಖರೀದಿಸಲು ನೀಡಿದ್ದ ಹತ್ತು ಲಕ್ಷ ಹಣ ಕೂಡಾ ತೆಗೆದುಕೊಂಡು ಹೋಗಿದ್ದಾನೆ. ಇದೀಗ ಹಣವೂ ಇಲ್ಲ, ಮಗಳೂ ಇಲ್ಲ ಎಂಬಂತಾಗಿದೆ. ದಯವಿಟ್ಟು ಮಗಳನ್ನು ಹುಡುಕಿ ಕೊಡಿ ಎಂದು ತಾಯಿಯೊಬ್ಬಳು ಮನವಿ ಮಾಡಿದ್ದಾರೆ. ಕಳೆದ ಎರಡು ವರ್ಷಗಳಿಂದ ಮಗಳಿಗಾಗಿ ಹುಡುಕಾಟ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದ್ದಾರೆ.

ಧಾರವಾಡದ ಕೆಲಗೇರಿಯ ನಿವಾಸಿ ಇಪ್ಪತ್ತೆರಡು ವರ್ಷದ ತಂಗೆಮ್ಮಾ ಎಂಬ ಯುವತಿ ಮನೆ ಎದುರಿನ ನಿವಾಸಿ ಕಾರು ಚಾಲಕನಾಗಿದ್ದ ಮುಸ್ಲಿಂ ವ್ಯಕ್ತಿಯ ಜೊತೆಗೆ ಓಡಿ ಹೋಗಿದ್ದಾಳಂತೆ. ಈ ಬಗ್ಗೆ ಆಕೆಯ ತಾಯಿ ಮಂಜುಳಾ ಅವರೇ ಮಾಹಿತಿ ನೀಡಿದ್ದು, ತಮ್ಮ ಮಗಳಿಗೆ ಪರಿಚಿತ ಯುವಕನ ಜೊತೆ ವಿವಾಹವಾಗಿತ್ತು. ಆದ್ರೆ ಮಗಳು ನಮ್ಮ ಜೊತೆಯೇ ಇದ್ದಳು. ಆಕೆಯ ಪತಿ ಆಗಾಗ ಬಂದು ಹೋಗುತ್ತಿದ್ದ. ಧಾರವಾಡದ ಕೆಲಗೇರಿಯಲ್ಲಿ ಬಾಡಿಗೆ ಮನೆಯಲ್ಲಿದ್ದಾಗ, ತಮಗೆ ವಕೀಲರೊಬ್ಬರು ಪರಿಚಯವಿದ್ದರು. ಅವರ ಕಾರ್ ಡ್ರೈವರ್ ಆಗಿ ಮುನ್ನಾ ಎಂಬಾತ ಕೆಲಸ ಮಾಡ್ತಿದ್ದ. ಆಗ ನಾವು ನಮಗೆ ಸ್ವಂತದೊಂದು ಮನೆ ಮಾಡಬೇಕು. ಹೀಗಾಗಿ ಮನೆ ಹುಡುಕಿ ಕೊಡಿ ಎಂದು ಮುನ್ನಾ ಮತ್ತು ವಕೀಲರಿಗೆ ಹತ್ತು ಲಕ್ಷ ಹಣ ನೀಡಿದ್ದೆವು.  ಆ ಬಳಿಕ ವಕೀಲರು ಮತ್ತು ಮುನ್ನಾ ಆಗಾಗ ಮನೆಗೆ ಬಂದು ಹೋಗಿ ಮಾಡುತ್ತಿದ್ದರು. ಆದರೆ 2023ರಲ್ಲಿ ನಾವು ಮನೆಯಲ್ಲಿ ಇಲ್ಲದ ಸಂದರ್ಭ ಮುನ್ನಾ ತಮ್ಮ ಮಗಳನ್ನು ಪುಸಲಾಯಿಸಿ ಕರೆದುಕೊಂಡು ಹೋಗಿದ್ದಾನೆ. ಈ ಬಗ್ಗೆ ಧಾರವಾಡದ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೆವು. ಆಗ ಪೊಲೀಸರು ಮುನ್ನಾ ವಿರುದ್ದ ದೂರು ದಾಖಲಿಸಿಕೊಳ್ಳದೇ ಕೇವಲ ಮಿಸ್ಸಿಂಗ್ ಕಂಪ್ಲೇಟ್ ದಾಖಲಿಸಿಕೊಂಡಿದ್ದರು. ಆದ್ರೆ ಇಲ್ಲಿವರಗೆ ಮುನ್ನಾ ಮತ್ತು ತಮ್ಮ ಮಗಳು ಎಲ್ಲಿದ್ದಾರೆ ಎಂದು ಹುಡುಕಿಲ್ಲ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿ ಲವ್ ಜಿಹಾದ್ ಪ್ರಕರಣ; ಮತ್ತೆರಡು ಸ್ಫೋಟಕ ವಿಡಿಯೋ ಬಿಡುಗಡೆ! ಕಾಂಗ್ರೆಸ್ ಮುಖಂಡನ ಕೈವಾಡ ಇದೆ ಎಂದ ಯುವತಿ

ಇನ್ನು ಮುನ್ನಾಗೆ ಬೆಳಗಾವಿ ಜಿಲ್ಲೆಯ ರಾಮದುರ್ಗದ ಮುಸ್ಲಿಂ ಯುವತಿ ಜೊತೆ ಈ ಹಿಂದೆಯೇ ವಿವಾಹವಾಗಿತ್ತಂತೆ. ದಂಪತಿಗೆ ಇಬ್ಬರು ಮಕ್ಕಳು ಕೂಡಾ ಇವೆಯಂತೆ. ಹೀಗಿದ್ದರೂ ಹೆಂಡತಿ ಮಕ್ಕಳನ್ನು ಬಿಟ್ಟು ಮುನ್ನಾ ತಂಗೆಮ್ಮಳನ್ನು ಕರೆದುಕೊಂಡು ನಾಪತ್ತೆಯಾಗಿದ್ದಾನೆ. ಆತನಿಗಾಗಿ ಆರಂಭದಲ್ಲಿ ಪೊಲೀಸರು ಅನೇಕ ಕಡೆ ಹುಡುಕಾಡಿದ್ದರು. ಹೈದ್ರಾಬಾದ್ ಸೇರಿದಂತೆ ಅನೇಕ ಕಡೆ ತೆರಳಿದ್ದರು. ಆದ್ರೆ ಆತ ಸಿಮ್ ಬದಲಾವಣೆ ಮಾಡಿದ್ದು, ಕುಟುಂಬದವರ ಸಂಪರ್ಕ ಕೂಡ ಇಟ್ಟುಕೊಂಡಿಲ್ಲ. ಹೀಗಾಗಿ ಮುನ್ನಾ ಮತ್ತು ತಂಗೆಮ್ಮಾ ಎಲ್ಲಿದ್ದಾರೆಂದು ಪತ್ತೆ ಮಾಡೋದು ಪೊಲೀಸರಿಗೂ ಸವಾಲಾಗಿ ಮಾರ್ಪಟ್ಟಿದೆ. ಇನ್ನು ಮುನ್ನಾ ಮೇಲೆ ದೆಹಲಿಯಲ್ಲಿ ಅತ್ಯಾಚಾರ ಪ್ರಕರಣ ಕೂಡಾ ಇರೋದು ಗೊತ್ತಾಗಿದ್ದು, ಆತ ಕ್ರಿಮಿನಲ್ ಹಿನ್ನೆಲೆಯಳ್ಳ ವ್ಯಕ್ತಿ ಎಂಬುದು ಬಹಿರಂಗಗೊಂಡಿದೆ.  ತಮ್ಮ ಮಗಳನ್ನು ಹುಡುಕಿ ಕೊಡುವಂತೆ ಧಾರವಾಡ ಸಬ್ ಅರ್ಬನ್ ಪೊಲೀಸರಿಗೆ ಹತ್ತಾರು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗದ ಕಾರಣ ಹಿಂದೂಪರ ಸಂಘಟನೆಗಳ ಜೊತೆ ಆಗಮಿಸಿ ಪೊಲೀಸ್ ಕಮಿಷನರ್​​ಗೆ ಮಂಜುಳಾ ದೂರು ನೀಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Video Viral: ಕೆಲಸಕ್ಕೆ ಸೇರಿದ ಮೊದಲ ದಿನವೇ ವೈದ್ಯೆ ರಾಜೀನಾಮೆ; ವೈದ್ಯಕೀಯ ಲೋಕದ ಕರಾಳ ಮುಖ ಅನಾವರಣ!

ಚಂಡೀಗಢ: ವೈದ್ಯಕೀಯ ವೃತ್ತಿ ಎಂದರೆ ಅದೊಂದು ಪವಿತ್ರ ಸೇವೆ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವು ಖಾಸಗಿ ಆಸ್ಪತ್ರೆಗಳು ರೋಗಿಗಳನ್ನು ಕೇವಲ ‘ಹಣ ಮಾಡುವ ಯಂತ್ರ’ಗಳಂತೆ ನೋಡುತ್ತಿವೆ ಎಂಬ ಕಹಿಸತ್ಯವೊಂದನ್ನು ಯುವ ವೈದ್ಯೆಯೊಬ್ಬರು ಧೈರ್ಯವಾಗಿ ಬಯಲಿಗೆಳೆದಿದ್ದಾರೆ. ಚಂಡೀಗಢದ ಖಾಸಗಿ ಆಸ್ಪತ್ರೆಯೊಂದರಲ್ಲಿ ನಡೆದ ಈ ಘಟನೆ ಈಗ ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಏನಿದು ಘಟನೆ?

ಯುವ ವೈದ್ಯೆ ಡಾ. ಪ್ರಭ್ಲೀನ್ ಕೌರ್ ಅವರು ಚಂಡೀಗಢದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯೊಂದಕ್ಕೆ ವೈದ್ಯೆಯಾಗಿ ಕೆಲಸಕ್ಕೆ ಸೇರಿದ್ದರು. ಆದರೆ, ಕೆಲಸಕ್ಕೆ ಸೇರಿದ ಮೊದಲ ದಿನವೇ ಆಸ್ಪತ್ರೆಯ ಆಡಳಿತ ಮಂಡಳಿಯ ಅಮಾನವೀಯ ಧೋರಣೆಯನ್ನು ಕಂಡು ಬೆಚ್ಚಿಬಿದ್ದ ಅವರು, ಕೂಡಲೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಹೊರಬಂದಿದ್ದಾರೆ.

ಆಸ್ಪತ್ರೆಯ ವಿರುದ್ಧ ಡಾ. ಪ್ರಭ್ಲೀನ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಆಸ್ಪತ್ರೆಯ ‘ಕಲೆಕ್ಷನ್’ ದಂಧೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಆಸ್ಪತ್ರೆಗೆ ಬರುವ ಸಾಮಾನ್ಯ ರೋಗಿಗಳಿಗೂ ಪ್ರಾಥಮಿಕ ಚಿಕಿತ್ಸೆ ನೀಡುವ ಬದಲು, ಹಣ ಸುಲಿಗೆ ಉದ್ದೇಶದಿಂದ ನೇರವಾಗಿ ಐಸಿಯು (ICU) ಗೆ ದಾಖಲಿಸಲಾಗುತ್ತಿದೆ. ಆಸ್ಪತ್ರೆಯ ಆದಾಯವನ್ನು ಹೆಚ್ಚಿಸಲು ವೈದ್ಯರ ಮೇಲೆ ಒತ್ತಡ ಹೇರಲಾಗುತ್ತಿದೆ. ರೋಗಿಗಳಿಗೆ ಅಗತ್ಯವಿಲ್ಲದಿದ್ದರೂ ದುಬಾರಿ ಪರೀಕ್ಷೆ ಮತ್ತು ಚಿಕಿತ್ಸೆಗಳನ್ನು ನೀಡಲಾಗುತ್ತಿದೆ. ಈ ಸಂಪೂರ್ಣ ದಂಧೆಯು ಆಸ್ಪತ್ರೆಯ ಹಿರಿಯ ವೈದ್ಯರೊಬ್ಬರ ನೇರ ನಿಯಂತ್ರಣದಲ್ಲಿ ನಡೆಯುತ್ತಿದೆ ಎಂದು ಅವರು ಗಂಭೀರವಾಗಿ ಆರೋಪಿಸಿದ್ದಾರೆ.

ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: ವಿಮಾನ ನಿಲ್ದಾಣದಲ್ಲಿ ಉದ್ಯೋಗ ಪಡೆಯುವುದು ಹೇಗೆ? ಅರ್ಹತೆ ಮತ್ತು ಆಯ್ಕೆ ಪ್ರಕ್ರಿಯೆಯ ಸಂಪೂರ್ಣ ಮಾಹಿತಿ ಇಲ್ಲಿದೆ

ನನಗೆ ವೃತ್ತಿ ನೈತಿಕತೆಯೇ ಮುಖ್ಯ:

ವಿಡಿಯೋದಲ್ಲಿ ಭಾವುಕರಾಗಿಯೇ ಮಾತನಾಡಿದ ಡಾ. ಪ್ರಭ್ಲೀನ್, “ನನಗೆ ಸಂಬಳ ಅಥವಾ ದೊಡ್ಡ ಹುದ್ದೆಗಿಂತ ರೋಗಿಗಳ ಸುರಕ್ಷತೆ ಮತ್ತು ವೈದ್ಯಕೀಯ ವೃತ್ತಿಯ ನೈತಿಕತೆಯೇ ಮುಖ್ಯ. ರೋಗಿಗಳನ್ನು ಲೂಟಿ ಮಾಡುವ ಇಂತಹ ವ್ಯವಸ್ಥೆಯಲ್ಲಿ ನಾನು ಭಾಗಿಯಾಗಲಾರೆ,” ಎಂದು ಹೇಳಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ವೈರಲ್:

ಡಾ. ಪ್ರಭ್ಲೀನ್ ಕೌರ್ ಅವರ ಈ ಧೈರ್ಯದ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಬೆಂಬಲ ವ್ಯಕ್ತವಾಗಿದೆ. ನೆಟ್ಟಿಗರು ಆಸ್ಪತ್ರೆಯ ಹೆಸರನ್ನು ಬಹಿರಂಗಪಡಿಸಿ ಅದರ ಪರವಾನಗಿ ರದ್ದುಗೊಳಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ. “ವೈದ್ಯಕೀಯ ಕ್ಷೇತ್ರಕ್ಕೆ ಇಂತಹ ಪ್ರಾಮಾಣಿಕ ವೈದ್ಯರ ಅಗತ್ಯವಿದೆ” ಎಂದು ಸಾವಿರಾರು ಜನರು ಕಮೆಂಟ್ ಮಾಡುತ್ತಿದ್ದಾರೆ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version