ಕಾಡಾನೆ ಹಾವಳಿಗೆ ಬ್ರೇಕ್ ಹಾಕುತ್ತಾ ರೈಲ್ವೆ ಹಳಿ ಬ್ಯಾರಿಕೇಡ್? ಹಾಸನ ಗಡಿಯಲ್ಲಿ 35 ಕಿಮೀ ಭದ್ರಕೋಟೆ ಸಿದ್ಧ!

ಕಾಡಾನೆ ಹಾವಳಿಗೆ ಬ್ರೇಕ್ ಹಾಕುತ್ತಾ ರೈಲ್ವೆ ಹಳಿ ಬ್ಯಾರಿಕೇಡ್? ಹಾಸನ ಗಡಿಯಲ್ಲಿ 35 ಕಿಮೀ ಭದ್ರಕೋಟೆ ಸಿದ್ಧ!

ಹಾಸನ, ಏಪ್ರಿಲ್ 9: ಕಳೆದ ಎರಡು ದಶಕಗಳಿಂದ ಹಾಸನ ಜಿಲ್ಲೆಯ ಮಲೆನಾಡು ಭಾಗದ ಜನರ ನಿದ್ದೆಗೆಡಿಸಿರುವ ಕಾಡಾನೆಗಳ ಸಮಸ್ಯೆಗೆ ಕೊನೆಗೂ ತಾಂತ್ರಿಕ ಪರಿಹಾರವೊಂದು ದಕ್ಕಿದೆ. ಕೊಡಗಿನಿಂದ ಹಾಸನಕ್ಕೆ (Hassan) ಲಗ್ಗೆಯಿಡುತ್ತಿದ್ದ ಆನೆ ಹಿಂಡುಗಳನ್ನು ತಡೆಯಲು ನಿರ್ಮಿಸಲಾಗುತ್ತಿದ್ದ ರೈಲ್ವೆ ಹಳಿ ಬ್ಯಾರಿಕೇಡ್ (Railway Track Barricade) ನಿರ್ಮಾಣ ಕಾರ್ಯ ಸಂಪೂರ್ಣಗೊಂಡಿದೆ. ಹಾಸನ ಜಿಲ್ಲೆಯ ಆಲೂರು, ಬೇಲೂರು ಮತ್ತು ಸಕಲೇಶಪುರ ತಾಲ್ಲೂಕುಗಳಲ್ಲಿ ಕಳೆದ 20 ವರ್ಷಗಳಲ್ಲಿ ಕಾಡಾನೆ ದಾಳಿಗೆ ಸುಮಾರು 80ಕ್ಕೂ ಹೆಚ್ಚು ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಕೋಟ್ಯಂತರ ರೂಪಾಯಿ ಮೌಲ್ಯದ ಬೆಳೆ ನಾಶವಾಗಿದೆ. ಕೊಡಗಿನಿಂದ ವಲಸೆ ಬರುವ ಆನೆಗಳು ಹಾಸನ ಜಿಲ್ಲೆಯ ಕಾಫಿ ತೋಟಗಳಲ್ಲೇ ಬೀಡುಬಿಡುವುದು ಈ ಸಮಸ್ಯೆಗೆ ಮುಖ್ಯ ಕಾರಣವಾಗಿತ್ತು. ಇದನ್ನು ತಡೆಯಲು ಸರ್ಕಾರವು ಹಾಸನ ಮತ್ತು ಕೊಡಗು ಗಡಿಭಾಗದಲ್ಲಿ ಸುಮಾರು 35 ಕಿಲೋಮೀಟರ್ ಉದ್ದದ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ಚಾಲನೆ ನೀಡಿತ್ತು.

ಮಾಸ್ಟರ್ ಪ್ಲಾನ್ ಸಿದ್ಧ

ಆಲೂರು ಮತ್ತು ಸಕಲೇಶಪುರ ತಾಲ್ಲೂಕಿನ ಗಡಿಭಾಗದಲ್ಲಿ ಈ ಬ್ಯಾರಿಕೇಡ್ ನಿರ್ಮಾಣವಾಗಿದ್ದು, ಇದರಲ್ಲಿ ಆನೆಗಳ ಸಂಚಾರ ನಿಯಂತ್ರಿಸಲು 13 ಪ್ರಮುಖ ಗೇಟ್‌ಗಳನ್ನು ಅಳವಡಿಸಲಾಗಿದೆ. ವಿಶೇಷವಾಗಿ ಬೇಸಿಗೆ ಸಮಯದಲ್ಲಿ ಹೇಮಾವತಿ ಜಲಾಶಯದ ಹಿನ್ನೀರಿನ ಪ್ರದೇಶಗಳಾದ ಕಟ್ಟೆಪುರ, ಶಿರಗಾವರ ಮೂಲಕ ನೀರಿಗಾಗಿ ಬರುವ ಆನೆಗಳಿಗೆ ಇನ್ಮುಂದೆ ಈ ರೈಲ್ವೆ ಹಳಿಗಳ ತಡೆಗೋಡೆ ಅಡ್ಡಿಯಾಗಲಿದೆ.

ಕಾಫಿ ಬೆಳೆಗಾರರ ಆಗ್ರಹವೇನು?

ಬ್ಯಾರಿಕೇಡ್ ನಿರ್ಮಾಣವೇನೋ ಪೂರ್ಣಗೊಂಡಿದೆ, ಇದರಿಂದ ಕೊಡಗಿನಿಂದ ಹೊಸ ಆನೆಗಳು ಬರುವುದು ತಪ್ಪಬಹುದು. ಆದರೆ ಈಗಾಗಲೇ ಹಾಸನದ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿರುವ 80ಕ್ಕೂ ಹೆಚ್ಚು ಆನೆಗಳ ಕಥೆಯೇನು? ಎಂಬುದು ಸ್ಥಳೀಯ ಬೆಳೆಗಾರರ ಪ್ರಶ್ನೆ. ನಾಡಿನಲ್ಲಿ ಬೀಡುಬಿಟ್ಟಿರುವ ಪುಂಡಾನೆಗಳನ್ನು ಸಂಪೂರ್ಣವಾಗಿ ಸ್ಥಳಾಂತರ ಮಾಡಬೇಕು ಅಥವಾ ಶ್ರೀಲಂಕಾ ಮಾದರಿಯಲ್ಲಿ ಆನೆಧಾಮ ನಿರ್ಮಾಣ ಮಾಡಿ ಶಾಶ್ವತ ಪರಿಹಾರ ನೀಡಬೇಕು ಎಂಬುದು ಜನರ ಒತ್ತಾಯವಾಗಿದೆ.

ಇದನ್ನೂ ಓದಿ: ಕಾಫಿಗೂ ತಟ್ಟಿದ ಯುದ್ಧದ ಬಿಸಿ! ರಫ್ತು ಸ್ಥಗಿತಗೊಂಡು ಕಂಗಾಲಾದ ಬೆಳೆಗಾರ; ಶೇ 20ರಷ್ಟು ಕುಸಿದ ದರ

ರೈಲ್ವೆ ಬ್ಯಾರಿಕೇಡ್ ನಿರ್ಮಾಣದ ಬೆನ್ನಲ್ಲೇ ಈಗ ಅರಣ್ಯ ಇಲಾಖೆಯು ನಾಡಿನಲ್ಲಿರುವ ಆನೆಗಳ ಸ್ಥಳಾಂತರ ಪ್ರಕ್ರಿಯೆಗೂ ತಯಾರಿ ನಡೆಸುತ್ತಿದ್ದು, ಮಲೆನಾಡಿಗರ ಆತಂಕ ದೂರವಾಗಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

VIDEO: ನನ್ನಿಂದಾನೇ ಸೋತ್ವಿ… ಕಣ್ಣೀರಿಟ್ಟ ಮಿಲ್ಲರ್

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 14ನೇ ಪಂದ್ಯವು ಹೈ ಡ್ರಾಮಾಗೆ ಸಾಕ್ಷಿಯಾಗಿತ್ತು. ಈ ಪಂದ್ಯದಲ್ಲಿ ಗೆಲುವಿನ ಹೊಸ್ತಿಲಲ್ಲಿ ಎಡವಿದ ಡೆಲ್ಲಿ ಕ್ಯಾಪಿಟಲ್ಸ್, ಗುಜರಾತ್ ಟೈಟಾನ್ಸ್ ವಿರುದ್ಧ ಕೇವಲ 1 ರನ್‌ನಿಂದ ಸೋಲೊಪ್ಪಿಕೊಂಡಿತು. ಆದರೆ ಈ ಸೋಲಿಗಿಂತ ಹೆಚ್ಚಾಗಿ ಕ್ರಿಕೆಟ್ ಪ್ರೇಮಿಗಳ ಮನ ಕಲಕಿದ್ದು ಸೌತ್ ಆಫ್ರಿಕಾದ ಸ್ಫೋಟಕ ಬ್ಯಾಟರ್ ಡೇವಿಡ್ ಮಿಲ್ಲರ್ ಅವರ ಕಣ್ಣೀರು.

ಕೊನೆಯ ಓವರ್‌ನಲ್ಲಿ ಪ್ರಸಿದ್ಧ್ ಕೃಷ್ಣ ದಾಳಿಗೆ ಇಳಿದಾಗ ಡೆಲ್ಲಿಗೆ ಗೆಲ್ಲಲು 13 ರನ್‌ಗಳ ಅಗತ್ಯವಿತ್ತು. ಮಿಲ್ಲರ್ ಅದ್ಭುತವಾಗಿ ಆಡುತ್ತಾ ಪಂದ್ಯವನ್ನು ಕೊನೆಯ ಎರಡು ಎಸೆತಗಳಲ್ಲಿ 2 ರನ್‌ಗಳ ಅಗತ್ಯಕ್ಕೆ ತಂದಿಟ್ಟರು.

ಆದರೆ 5ನೇ ಎಸೆತದಲ್ಲಿ ಮಿಲ್ಲರ್ ಚೆಂಡನ್ನು ಹೊಡೆದರೂ ಸಿಂಗಲ್ ಓಡಲು ನಿರಾಕರಿಸಿದರು. ಬಹುಶಃ ತಾನೇ ಸಿಕ್ಸರ್ ಅಥವಾ ಬೌಂಡರಿ ಬಾರಿಸಿ ಪಂದ್ಯ ಮುಗಿಸುವ ಆತ್ಮವಿಶ್ವಾಸ ಅವರಲ್ಲಿತ್ತು.

ಪ್ರಸಿದ್ಧ್ ಕೃಷ್ಣ ಎಸೆದ ಅಂತಿಮ ಬೌನ್ಸರ್ ಅನ್ನು ಮಿಲ್ಲರ್ ಕನೆಕ್ಟ್ ಮಾಡಲು ವಿಫಲರಾದರು. ಬೈ ರನ್ ಓಡಲು ಯತ್ನಿಸಿದ ಕುಲ್ದೀಪ್ ಯಾದವ್ ರನ್ ಔಟ್ ಆದರು. ಇದರೊಂದಿಗೆ ಗುಜರಾತ್ ಟೈಟಾನ್ಸ್ 1 ರನ್ ರೋಚಕ ಜಯ ಸಾಧಿಸಿತು.

ಇತ್ತ ಗುಜರತಾ ಟೈಟಾನ್ಸ್ ತಂಡವು ಕೇವಲ ಒಂದು ರನ್​​ನಿಂದ ಸೋಲುತ್ತಿದ್ದಂತೆ ಡೇವಿಡ್ ಮಿಲ್ಲರ್ ಭಾವುಕರಾದರು. ಅಲ್ಲದೆ ತಾನು ಮಾಡಿದ ಆ ಒಂದು ತಪ್ಪು (ಸಿಂಗಲ್ ಓಡದಿರುವುದು) ಮಿಲ್ಲರ್ ಅವರನ್ನು ಬಹುವಾಗಿ ಕಾಡಿದಂತಿತ್ತು.

ಈ ನೋವಿನೊಂದಿಗೆ ಕಣ್ಣೀರಿಡುತ್ತಾ ಪೆವಿಲಿಯನ್​ ಕಡೆ ಹೆಜ್ಜೆ ಹಾಕಿದ ಡೇವಿಡ್ ಮಿಲ್ಲರ್ ಅವರನ್ನು ರಶೀದ್ ಖಾನ್ ಮತ್ತು ಶುಭ್​ಮನ್ ಗಿಲ್, ಅಕ್ಷರ್ ಪಟೇಲ್ ಬಂದು ಸಂತೈಸಿದರು. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಮಿಲ್ಲರ್ ಅವರ ಆಟದ ಮೇಲಿನ ಬದ್ಧತೆಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.

 

Source link

2009ರಿಂದ ನನ್ನ ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದ ಎಂದ ಜಯರಾಂ ಕಾರ್ತಿಕ್

‘ಕಾಡ’ ಹೆಸರಿನ ಸಿನಿಮಾದಲ್ಲಿ ಜಯರಾಂ ಕಾರ್ತಿಕ್ ನಟಿಸಿದ್ದಾರೆ. ಸಿನಿಮಾ ಏಪ್ರಿಲ್ 10ರಂದು ರಿಲೀಸ್ ಆಗಲಿದೆ. ಈ ಚಿತ್ರದ ಬಗ್ಗೆ ಸುದ್ದಿಗೋಷ್ಠಿ ಕರೆಯಲಾಗಿತ್ತು. ಸಿನಿಮಾ ಬಗ್ಗೆ ಮಾತು ಆರಂಭಿಸಿವುದಕ್ಕೂ ಮೊದಲು ತಮ್ಮ ಬಣ್ಣದ ಲೋಕದ ಜರ್ನಿಯನ್ನು ಬೆಂಬಲಿಸಿದ ಎಲ್ಲರಿಗೂ ಅವರು ಧನ್ಯವಾದ ಹೇಳಿದ್ದಾರೆ. ‘ಕಾಡ’ ಚಿತ್ರ ಅವರು ತಮ್ಮ ಡ್ರೀಮ್ ಪ್ರಾಜೆಕ್ಟ್ ಎಂದು ವಿವರಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬಿಸಿಲಿನ ನಡುವೆ ತಂಪಾದ ಸುದ್ದಿ: ಬೆಂಗಳೂರು ಸೇರಿದಂತೆ ಈ ಜಿಲ್ಲೆಗಳಲ್ಲಿ ಇಂದು ಸಂಜೆ ಗುಡುಗು ಸಹಿತ ಮಳೆ!

ಬೆಂಗಳೂರು, ಏ.9: ರಾಜ್ಯದ ಕರಾವಳಿ ಮತ್ತು ಒಳನಾಡಿನ ಜಿಲ್ಲೆಗಳಲ್ಲಿ ಉಷ್ಣಾಂಶ ಏರಿಕೆಯಾಗಿದ್ದರೂ, ಇಂದು ಸಂಜೆ ವೇಳೆಗೆ ಹವಾಮಾನದಲ್ಲಿ ಬದಲಾವಣೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ (IMD) ತಿಳಿಸಿದೆ. ರಾಜಧಾನಿಯಲ್ಲಿ ಇಂದು ಗರಿಷ್ಠ ಉಷ್ಣಾಂಶ 35°C ರಿಂದ 37°C ರವರೆಗೆ ದಾಖಲಾಗುವ ಸಾಧ್ಯತೆಯಿದೆ. ಮಧ್ಯಾಹ್ನ ಬಿಸಿಲು ಹೆಚ್ಚಾಗಿದ್ದರೂ, ಇಂದು ಸಂಜೆ ಅಥವಾ ರಾತ್ರಿ ವೇಳೆಗೆ ನಗರದ ಕೆಲವು ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗುವ 60% ಮುನ್ಸೂಚನೆ ಇದೆ.

ಮಂಗಳೂರು, ಉಡುಪಿ ಮತ್ತು ಕಾರವಾರ ಭಾಗಗಳಲ್ಲಿ ಸೆಖೆ ಹೆಚ್ಚಿರಲಿದೆ. ಗಾಳಿಯಲ್ಲಿ ತೇವಾಂಶ ಹೆಚ್ಚಾಗಿರುವುದರಿಂದ ಅಸಹನೀಯ ವಾತಾವರಣವಿರಬಹುದು. ಬೆಳಗಾವಿ, ಧಾರವಾಡ, ಬಾಗಲಕೋಟೆ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದ್ದು, ಗರಿಷ್ಠ ತಾಪಮಾನ 40°C ದಾಟುವ ಸಾಧ್ಯತೆಯಿದೆ.

ಮೈಸೂರು, ಹಾಸನ, ಕೊಡಗು ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಕಲಬುರಗಿ, ರಾಯಚೂರು ಮತ್ತು ಬಳ್ಳಾರಿಯಲ್ಲಿ ತಾಪಮಾನ ಅತಿ ಹೆಚ್ಚಿರಲಿದೆ (41°C – 42°C). ಮಧ್ಯಾಹ್ನ ಬಿಸಿ ಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಜನರು ಮನೆಯಿಂದ ಹೊರಬರುವಾಗ ಎಚ್ಚರಿಕೆ ವಹಿಸಬೇಕು. ವಿಜಯಪುರ ಮತ್ತು ಬಾಗಲಕೋಟೆಯಲ್ಲಿ ಒಣ ಹವೆ ಮುಂದುವರಿಯಲಿದ್ದು, ತಾಪಮಾನದಲ್ಲಿ ಏರಿಕೆಯಾಗಲಿದೆ.

ಇದನ್ನೂ ಓದಿ: ಇಂದು ಈ ರಾಶಿಯವರಿಗೆ ವಸಂತ ಕಾಲ: ಎಲ್ಲವೂ ನೀವು ಹೇಳಿದಂತೆ ನಡೆಯುತ್ತದೆ

ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗುಜಿಲ್ಲೆಗಳಲ್ಲಿ ಇಂದು ಸಂಜೆ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿಯಲ್ಲಿ ಸೆಖೆ ಹೆಚ್ಚಿದ್ದರೂ, ಅಲ್ಲಲ್ಲಿ ತುಂತುರು ಮಳೆಯಾಗುವ ಮುನ್ಸೂಚನೆ ಇದೆ. ಸಮುದ್ರ ತೀರದಲ್ಲಿ ಗಾಳಿಯ ವೇಗ ಹೆಚ್ಚಿರಲಿದೆ. ತುಮಕೂರು ಮತ್ತು ಕೋಲಾರದಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿರಲಿದ್ದು, ಹಗುರ ಮಳೆಯ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪುನೀತ್ ಹೆಸರಲ್ಲಿ ದುಡ್ಡು ಮಾಡ್ತಾರೆ ಎಂದವರಿಗೆ ಗಿಲ್ಲಿ ಸ್ಟೈಲ್​​ನಲ್ಲಿ ಉತ್ತರ ಕೊಟ್ಟ ಅನುಶ್ರೀ

ಆ್ಯಂಕರ್ ಅನುಶ್ರೀ ಅವರು (Anushree) ಪುನೀತ್ ರಾಜ್​​ಕುಮಾರ್ ಅವರ ದೊಡ್ಡ ಅಭಿಮಾನಿ. ಈ ಕಾರಣದಿಂದಲೇ ಅನುಶ್ರೀ ಅವರ ಯೂಟ್ಯೂಬ್ ಲೋಗೋದಲ್ಲಿ ಪುನೀತ್ ಫೋಟೋ ಸೇರಿಸಿಕೊಂಡಿದ್ದಾರೆ. ಪುನೀತ್ ನಿಧನದ ಬಳಿಕ ಅನುಶ್ರೀ ಸಾಕಷ್ಟು ಬಾರಿ ಬಿಕ್ಕಿ ಬಿಕ್ಕಿ ಅತ್ತಿದ್ದಿದೆ. ತಮ್ಮ ಮದುವೆಯಲ್ಲಿ ಪುನೀತ್ ಫೋಟೋ ಇಟ್ಟು ಅವರು ಪೂಜಿಸಿದ್ದರು. ಇದು ಪುನೀತ್ ಮೇಲೆ ಅವರಿಗೆ ಇರೋ ಪ್ರೀತಿಗೆ ಸಾಕ್ಷಿ. ಆದರೆ, ಕೆಲವರು ಇದನ್ನು ಟ್ರೋಲ್ ಮಾಡಿದ್ದು ಇದೆ. ಇದಕ್ಕೆ ಅನುಶ್ರೀ ಖಡಕ್ ಉತ್ತರ ನೀಡಿದ್ದಾರೆ.

ಪುನೀತ್ ಅವರನ್ನು ಅನುಶ್ರೀ ಆರಾಧಿಸುತ್ತಾರೆ. ಅವರು ಅನೇಕ ಸಂದರ್ಶನಗಳಲ್ಲಿ ಪುನೀತ್ ಬಗ್ಗೆ ಹಾಡಿ ಹೊಗಳಿದ್ದಾರೆ. ಪುನೀತ್ ಅವರನ್ನು ನೆನೆದು ಕಣ್ಣೀರು ಹಾಕಿದ್ದಾರೆ. ಇದನ್ನು ನೋಡಿದ ಅನೇಕರು ಅನುಶ್ರೀ ಅವರನ್ನು ಟೀಕೆ ಮಾಡಿದ್ದರು. ಅವರದ್ದು ಮೊಸಳೆ ಕಣ್ಣೀರು, ಪುನೀತ್ ಹೆಸರಲ್ಲಿ ಅವರು ದುಡ್ಡು ಮಾಡುತ್ತಿದ್ದಾರೆ ಎಂದಿದ್ದರು. ಇದಕ್ಕೆ ಅನುಶ್ರೀ ಖಡಕ್ ಆಗಿ ಉತ್ತರ ನೀಡಿದ್ದಾರೆ.

ಆರ್​​ಜೆ ಮಯೂರ್ ಅವರ ‘ಗೋಲ್ಡನ್ ಕ್ಲಾಸ್ ವಿತ್ ಮಯೂರ’ ಯೂಟ್ಯೂಬ್ ಚಾನೆಲ್​​ಗೆ ನೀಡಿದ ಸಂದರ್ಶನದಲ್ಲಿ ಅನುಶ್ರೀ ಮಾತನಾಡಿದ್ದಾರೆ. ‘ಇವಳು ಎಷ್ಟು ಡವ್ ಮಾಡ್ತಾಳೆ ಗುರು ಎಂದು ಹೇಳುತ್ತಾರೆ. ಈ ಬಗ್ಗೆ ಏನು ಹೇಳ್ತೀರಾ’ ಎಂದು ಅನುಶ್ರೀಗೆ ಕೇಳಲಾಯಿತು. ಮುಚ್ಚುಮರೆ ಇಲ್ಲದೆ ಇದಕ್ಕೆ ಅವರು ಉತ್ತರಿಸಿದರು.

ಇದನ್ನೂ ಓದಿ: ‘ನಮ್ಮನ್ನು ಡ*ರ್ ಅಂತ ಕರೆದ್ರೆ ಹೇಗನಿಸುತ್ತೆ ನೀವೇ ಯೋಚಿಸಿ’; ಅನುಶ್ರೀ ಬೇಸರ

‘ನೀವು ತುಂಬಾನೇ ಸ್ವೀಟ್. ನಿಮ್ಮಂತವರ ಅಭಿಮಾನಿ ಹೊಂದಲು ನಿಜಕ್ಕೂ ಖುಷಿ ಆಗುತ್ತದೆ. ದೇವರು ಒಳ್ಳೆಯದು ಮಾಡಲಿ’ ಎಂದು ಪುನೀತ್ ಅವರು ಅನುಶ್ರೀಗೆ ಹೇಳಿದ್ದರಂತೆ. ಇದರ ಸ್ಕ್ರೀನ್​ ಶಾಟ್ ಅನ್ನು ಅನುಶ್ರೀ ತೋರಿಸಿದ್ದಾರೆ. ಆ ಬಳಿಕ ಮಾತನಾಡಿದ ಅವರು. ‘ನಾನು ಎಂತಹ ಫ್ಯಾನ್ ಅಂತ ಅವರಿಗೆ ಗೊತ್ತು. ಹೀಗಿರುವಾಗ ಇಂಥವರಿಗೆ ಯಾಕೆ ಉತ್ತರಿಸಬೇಕು. ಗಿಲ್ಲಿ ಸ್ಟೈಲ್ ಅಲ್ಲಿ ಹೇಳ್ತೀನಿ, ಜಸ್ಟ್ ಲೀವ್ ಇಟ್’ ಎಂದರು ಅನುಶ್ರೀ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕೃನಾಲ್ ಪಾಂಡ್ಯ ಬೌಲಿಂಗ್​ಗೆ ಬ್ಯಾನ್ ಭೀತಿ?

IPL 2026: ಐಪಿಎಲ್ 2026ರ ಸೀಸನ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಪರ ಆಡುತ್ತಿರುವ ಆಲ್-ರೌಂಡರ್ ಕೃನಾಲ್ ಪಾಂಡ್ಯ (Krunal Pandya) ತಮ್ಮ ವಿಭಿನ್ನ ಬೌಲಿಂಗ್ ಶೈಲಿಯಿಂದ ಭಾರಿ ಚರ್ಚೆಗೆ ಕಾರಣವಾಗಿದ್ದಾರೆ. ಒಬ್ಬ ಸ್ಪಿನ್ನರ್ ಆಗಿದ್ದರೂ 120-125 ಕಿ.ಮೀ. ವೇಗದಲ್ಲಿ ಬೌಲಿಂಗ್ ಮಾಡುತ್ತಿರುವುದು ಅಭಿಮಾನಿಗಳಲ್ಲಿ ಮತ್ತು ವಿಮರ್ಶಕರಲ್ಲಿ ಕುತೂಹಲ ಹಾಗೂ ಅನುಮಾನಗಳನ್ನು ಮೂಡಿಸಿದೆ.

ಚರ್ಚೆಗೆ ಕಾರಣವೇನು?

ಏಪ್ರಿಲ್ 5, 2026 ರಂದು ನಡೆದ ಸಿಎಸ್‌ಕೆ (CSK) ವಿರುದ್ಧದ ಪಂದ್ಯದಲ್ಲಿ ಕೃನಾಲ್ ಪಾಂಡ್ಯ ಬರೋಬ್ಬರಿ 126.1 ಕಿ.ಮೀ. ವೇಗದಲ್ಲಿ ಎಸೆತವೊಂದನ್ನು ಎಸೆದರು. ಇದು ಸಾಮಾನ್ಯ ಮಧ್ಯಮ ವೇಗದ ಬೌಲರ್‌ಗಳ ವೇಗಕ್ಕೆ ಸಮನಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ಇದು ‘ಚಕ್ಕಿಂಗ್’ (Chucking) ಇರಬಹುದೇ ಎಂದು ಪ್ರಶ್ನಿಸುತ್ತಿದ್ದಾರೆ.

ಹಿಂದೆ ಮಾರ್ಲನ್ ಸ್ಯಾಮ್ಯುಯೆಲ್ಸ್ ಕೂಡ ಇದೇ ರೀತಿಯ ವೇಗದ ಎಸೆತಗಳನ್ನು ಎಸೆದಾಗ ಅವರ ಬೌಲಿಂಗ್ ಆಕ್ಷನ್ ಬಗ್ಗೆ ದೂರುಗಳು ಕೇಳಿಬಂದಿದ್ದವು.

ನಿಯಮ ಏನು ಹೇಳುತ್ತದೆ?

ಐಸಿಸಿ ಮತ್ತು ಐಪಿಎಲ್ ನಿಯಮಗಳ ಪ್ರಕಾರ, ಒಬ್ಬ ಬೌಲರ್ ಚೆಂಡನ್ನು ಎಸೆಯುವಾಗ ಅವರ ಮೊಣಕೈ (Elbow) 15 ಡಿಗ್ರಿಗಿಂತ ಹೆಚ್ಚು ನೇರವಾಗಬಾರದು.

ವೇಗ ಮತ್ತು ಆಕ್ಷನ್: ಬೌಲರ್ ಎಷ್ಟೇ ವೇಗವಾಗಿ ಬೌಲಿಂಗ್ ಮಾಡಿದರೂ, ಅವರ ಮೊಣಕೈ ವಕ್ರತೆ 15 ಡಿಗ್ರಿಯ ಮಿತಿಯೊಳಗಿದ್ದರೆ ಅದು ಸಂಪೂರ್ಣವಾಗಿ ಕಾನೂನುಬದ್ಧವಾಗಿರುತ್ತದೆ.

ಅನುಮಾನ: ಕೃನಾಲ್ ಪಾಂಡ್ಯ 125 ಕ್ಕಿಂತ ವೇಗದಲ್ಲಿ ಚೆಂಡೆಸೆದಿರುವುದು ಇದೀಗ ಅನುಮಾನಕ್ಕೆ ಕಾರಣವಾಗಿದೆ. ಏಕೆಂದರೆ ಮೊಣಕೈ ವಕ್ರತೆ 15 ಡಿಗ್ರಿಯ ಮಿತಿಯೊಳಗೆ ಸ್ಪಿನ್ನರ್​ಗೆ ಇಷ್ಟೊಂದು ವೇಗದಲ್ಲಿ ಚೆಂಡೆಸಲು ಸಾಧ್ಯವಾಗುವುದಿಲ್ಲ ಎಂದು ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಸಂಶಯ ವ್ಯಕ್ತಪಡಿಸಿದ್ದಾರೆ.

ಸ್ಯಾಮ್ಯುಯೆಲ್ಸ್​ಗೆ ನಿಷೇಧ:

ಈ ಹಿಂದೆ ಐಪಿಎಲ್​ನಲ್ಲಿ ಇದೇ ಮಾದರಿಯಲ್ಲಿ ಚೆಂಡೆಸೆದಿದ್ದ ವೆಸ್ಟ್ ಇಂಡೀಸ್‌ನ ಆಲ್-ರೌಂಡರ್ ಮಾರ್ಲನ್ ಸ್ಯಾಮ್ಯುಯೆಲ್ಸ್ ಅವರ ಮೇಲೆ ನಿಷೇಧ ಹೇರಲಾಗಿತ್ತು ಎಂಬುದು ಇಲ್ಲಿ ಉಲ್ಲೇಖಾರ್ಹ.

2012ರ ಐಪಿಎಲ್‌ನಲ್ಲಿ ಪುಣೆ ವಾರಿಯರ್ಸ್ ಇಂಡಿಯಾ ತಂಡದ ಪರ ಆಡಿದ್ದ ಸ್ಯಾಮ್ಯುಯೆಲ್ಸ್, ಏಪ್ರಿಲ್ 14 ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದ ನಂತರ ಸಂಶಯಾಸ್ಪದ ಬೌಲಿಂಗ್ ಆಕ್ಷನ್ ಬಗ್ಗೆ ವರದಿ ಮಾಡಲ್ಪಟ್ಟಿದ್ದರು.

ಸ್ಪಿನ್ನರ್ ಆಗಿದ್ದ ಸ್ಯಾಮ್ಯುಯೆಲ್ಸ್​ ಸುಮಾರು 122 ಕಿ.ಮೀ. ವೇಗದಲ್ಲಿ ಎಸೆದಿದ್ದ “ಫಾಸ್ಟರ್ ಒನ್” ಎಸೆತಗಳು ಅಂಪೈರ್‌ಗಳಾದ ಅಲೀಂ ದಾರ್ ಮತ್ತು ಬ್ರೂಸ್ ಆಕ್ಸನ್‌ಫೋರ್ಡ್ ಅವರ ಸಂಶಯಕ್ಕೆ ಕಾರಣವಾಗಿದ್ದವು.

ಈ ಫಾಸ್ಟರ್ ಎಸೆತಗಳ ಬಗ್ಗೆ ಸಂಶಯ ಮೂಡಿದ್ದ ಕಾರಣ, ಈ ಪಂದ್ಯದ ಬಳಿಕ ಮಾರ್ಲನ್ ಸ್ಯಾಮ್ಯುಯೆಲ್ಸ್​ ಅವರನ್ನು ಆ ಸೀಸನ್‌ನ ಉಳಿದ ಪಂದ್ಯಗಳಲ್ಲಿ ಬೌಲಿಂಗ್ ಮಾಡದಂತೆ ನಿಷೇಧಿಸಲಾಯಿತು.

ಕೃನಾಲ್​ಗೆ ಬ್ಯಾನ್ ಭೀತಿ:

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದ ಬಳಿಕ ಕೃನಾಲ್ ಪಾಂಡ್ಯ ಅವರ ಎಸೆತಗಳ ವೇಗ ಕೂಡ ಚರ್ಚೆಗೀಡಾಗಿದೆ. ಅಲ್ಲದೆ ಈ  ‘ವೇಗದ ಸ್ಪಿನ್ ಬೌನ್ಸರ್’ ಆಕಸ್ಮಿಕವೇನಲ್ಲ. ಈ ಹಿಂದೆ ಕೂಡ ಕೃನಾಲ್ ಇಂತಹದ್ದೇ ಎಸೆತಗಳ ಮೂಲಕ ಬ್ಯಾಟರ್​ಗಳನ್ನು ತಬ್ಬಿಬ್ಬು ಮಾಡಿದ್ದರು. ಇದರ ಬೆನ್ನಲ್ಲೇ ಇದೀಗ ಅವರ ಬೌಲಿಂಗ್ ಶೈಲಿಯ ಬಗ್ಗೆ ಪ್ರಶ್ನೆಗಳೆದ್ದಿವೆ…

  • ಬೌಲಿಂಗ್ ವೇಗ: ಕೃನಾಲ್ ಅವರು ಸ್ಪಿನ್ನರ್ ಆಗಿದ್ದರೂ 125-130 kmph ವೇಗದಲ್ಲಿ ಚೆಂಡನ್ನು ಎಸೆಯುತ್ತಿದ್ದಾರೆ. ಒಬ್ಬ ಸ್ಪಿನ್ನರ್ ತನ್ನ ಶೈಲಿಯನ್ನು ಬದಲಿಸದೆ ಹಠಾತ್ತನೆ ವೇಗಿಗಳ ವೇಗದಲ್ಲಿ ಬೌನ್ಸರ್ ಎಸೆಯುವುದು ಬ್ಯಾಟರ್‌ಗಳಿಗೆ ಅಪಾಯಕಾರಿ ಎನಿಸಬಹುದು ಎಂಬುದು ಕೆಲವರ ವಾದ.
  • ಬೌಲಿಂಗ್ ಶೈಲಿಯ ಗೊಂದಲ: ಕೃನಾಲ್ ಅವರು ಬೌನ್ಸರ್ ಎಸೆಯುವಾಗ ಸ್ಲಿಂಗ್ (Slingy) ಅಥವಾ ಪಕ್ಕದಿಂದ ಕೈ ಬೀಸಿ ಬೌಲಿಂಗ್ ಮಾಡುತ್ತಿದ್ದಾರೆ. ಇದು ನಿಯಮಬದ್ಧವೇ ಅಥವಾ ಇಲ್ಲವೇ ಎಂಬ ಗೊಂದಲ ಅಭಿಮಾನಿಗಳಲ್ಲಿ ಮೂಡಿದೆ.
  • ಮಿತಿ ಮೀರಿದ ಪ್ರಯೋಗ: ಕೆಲವರು ಕೃನಾಲ್ ಅವರು ತುಂಬಾ ಹೆಚ್ಚು ಪ್ರಯೋಗಗಳನ್ನು ಮಾಡುತ್ತಿದ್ದಾರೆ, ಇದು ಕೇವಲ ಗೊಂದಲ ಮೂಡಿಸಲು ಮಾಡುತ್ತಿರುವ ‘ತಂತ್ರ’ವೇ ಹೊರತು ನೈಜ ಸ್ಪಿನ್ ಬೌಲಿಂಗ್ ಅಲ್ಲ ಎಂದು ಟೀಕಿಸುತ್ತಿದ್ದಾರೆ.
  • ಅಸುರಕ್ಷಿತ ಎಂಬ ಆರೋಪ: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಶಿವಂ ದುಬೆ ಅವರಿಗೆ ಸತತವಾಗಿ ಬೌನ್ಸರ್ ಎಸೆದ ಹಿನ್ನೆಲೆಯಲ್ಲಿ, ಸಿಎಸ್‌ಕೆ ಮ್ಯಾನೇಜ್‌ಮೆಂಟ್ ಈ ಬಗ್ಗೆ ಬಿಸಿಸಿಐಗೆ ದೂರು ನೀಡಲು ಮುಂದಾಗಿದೆ ಎಂಬ ವರದಿಗಳಿವೆ.

ಅಂದರೆ ಚೆನ್ನೈ ಸೂಪರ್ ಕಿಂಗ್ಸ್​ ತಂಡವು ಕೃನಾಲ್ ಪಾಂಡ್ಯ ಬೌಲಿಂಗ್ ಆ್ಯಕ್ಷನ್ ಬಗ್ಗೆ ದೂರು ನೀಡಿದರೆ, ಅವರು ಪರೀಕ್ಷೆಗೆ ಒಳಪಡಲಿದ್ದಾರೆ. ಅಲ್ಲಿಯವರೆಗೆ ಬೌಲಿಂಗ್ ಮಾಡಲು ಅವಕಾಶ ನೀಡುವ ಸಾಧ್ಯತೆಯಿಲ್ಲ. ಇನ್ನು ಪರೀಕ್ಷೆಗೆ ಒಳಗಾದರೆ ವೇಗದ ಸ್ಪಿನ್ ಬೌನ್ಸರ್​ಗೆ ಕಡಿವಾಣ ಹಾಕಬಹುದು.

ಏಕೆಂದರೆ ಈ ಹಿಂದೆ ಐಪಿಎಲ್​ನಲ್ಲಿ 120 ಕ್ಕಿಂತ ವೇಗದಲ್ಲಿ ಸ್ಪಿನ್ ಬೌಲಿಂಗ್ ಮಾಡಿದ್ದ ಮಾರ್ಲನ್ ಸ್ಯಾಮ್ಯುಯೆಲ್ಸ್ ಅವರ ಬೌಲಿಂಗ್ ಶೈಲಿಯ ಬಗ್ಗೆ ಸಂಶಯ ಮೂಡಿದ್ದ ಕಾರಣ ಅವರಿಗೆ ಐಪಿಎಲ್​ನಲ್ಲಿ ಬೌಲಿಂಗ್ ಬ್ಯಾನ್ ಮಾಡಲಾಗಿತ್ತು.

ಇದನ್ನೂ ಓದಿ: ಒಂದು ರನ್ ಸೋಲುಗಳೊಂದಿಗೆ ಹೀಗೊಂದು ದಾಖಲೆ ಬರೆದ ಡೆಲ್ಲಿ ಕ್ಯಾಪಿಟಲ್ಸ್

ಇದೀಗ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕೃನಾಲ್ ಪಾಂಡ್ಯ 125 ಕಿ.ಮೀ ವೇಗದಲ್ಲಿ ಬೌನ್ಸರ್​ ಎಸೆಯುವ ಮೂಲಕ ಹೊಸ ಚರ್ಚೆಯನ್ನು ಹುಟ್ಟುಹಾಕಿದ್ದಾರೆ. ಈ ಚರ್ಚೆಗಳ ನಡುವೆ ಸಿಎಸ್​ಕೆ ತಂಡ ಬಿಸಿಸಿಐಗೆ ದೂರು ನೀಡಲಿದೆಯಾ ಎಂಬುದೇ ಈಗ ಕುತೂಹಲ.

 

 

Source link

ಅಲ್ಲು ಅರ್ಜುನ್ ಸಿನಿಮಾ ‘ರಾಕಾ’ ಟೈಟಲ್ ಅರ್ಥವೇನು? ಶುರುವಾಗಿದೆ ಚರ್ಚೆ

‘ಪುಷ್ಪ 2’ ಅಂತಹ ಬ್ಲಾಕ್‌ಬಸ್ಟರ್ ಚಿತ್ರದ ನಂತರ ಅಲ್ಲು ಅರ್ಜುನ್ ಹೊಸ ಸಿನಿಮಾ ಘೋಷಿಸಿದ್ದಾರೆ. ಬನ್ನಿ ತಮ್ಮ ಮುಂದಿನ ಚಿತ್ರವನ್ನು ಅಟ್ಲೀ ಅವರೊಂದಿಗೆ ಮಾಡುತ್ತಿದ್ದಾರೆ. ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ತಮಿಳಿನಲ್ಲಿ ದೊಡ್ಡ ಬಜೆಟ್ ಚಿತ್ರಗಳಿಗೆ ಹೆಸರು ವಾಸಿಯಾಗಿರುವ ಸನ್ ಪಿಕ್ಚರ್ಸ್ ಸುಮಾರು 800 ಕೋಟಿ ರೂ. ಬಜೆಟ್‌ನಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದೆ. ಕಳೆದ ವರ್ಷ ಪ್ರಾರಂಭವಾದ ಈ ಚಿತ್ರದ ಚಿತ್ರೀಕರಣವು ಇಲ್ಲಿಯವರೆಗೆ ವರ್ಕಿಂಗ್ ಟೈಟಲ್‌ನೊಂದಿಗೆ ಮುಗಿದಿದೆ. ಅಲ್ಲು ಅರ್ಜುನ್ ಅವರ ಹುಟ್ಟುಹಬ್ಬದಂದು (ಏಪ್ರಿಲ್ 08) ಈ ಪ್ರಾಜೆಕ್ಟ್‌ನ ಶೀರ್ಷಿಕೆಯನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಈ ಚಿತ್ರಕ್ಕೆ ‘ರಾಕಾ’ ಎಂದು ಇಡಲಾಗಿದೆ.

ಅಲ್ಲು ಅರ್ಜುನ್-ಅಟ್ಲೀ ಸಿನಿಮಾಗೆ ಬುಧವಾರ ಶೀರ್ಷಿಕೆ ಬಿಡುಗಡೆಯಾಗಿದೆ. ಜೊತೆಗೆ, ಬಿಡುಗಡೆಯಾದ ಪೋಸ್ಟರ್ ಕೂಡ ಅಭಿಮಾನಿಗಳನ್ನು ಅಪಾರವಾಗಿ ಮೆಚ್ಚಿಸಿದೆ. ಈ ಸಂದರ್ಭದಲ್ಲಿ, ಅಲ್ಲು ಅರ್ಜುನ್ ಅವರ ರಾಕಾ ಚಿತ್ರದ ಶೀರ್ಷಿಕೆಯ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಆಸಕ್ತಿದಾಯಕ ಚರ್ಚೆ ನಡೆಯುತ್ತಿದೆ. ನೆಟಿಜನ್‌ಗಳು ರಾಕಾದ ನಿಜವಾದ ಅರ್ಥವನ್ನು ಹುಡುಕುತ್ತಿದ್ದಾರೆ.

ಪ್ರತಿ ತಿಂಗಳು ಬರುವ ಹುಣ್ಣಿಮೆಯನ್ನು ರಾಕಾ ಎಂದು ಕರೆಯಲಾಗುತ್ತದೆ. ಕತ್ತಲೆ ಮತ್ತು ದುಷ್ಟತನದ ವಿರುದ್ಧದ ಯುದ್ಧದಲ್ಲಿ ನಾಯಕನ ವಿಜಯದ ಸಂಕೇತವಾಗಿ ಬನ್ನಿ ಅವರ ಚಿತ್ರಕ್ಕೆ ರಾಕಾ ಎಂದು ಹೆಸರಿಸಲಾಗಿದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ಮನುಷ್ಯ ಮತ್ತು ಮೃಗವನ್ನು ಸಂಯೋಜಿಸುವ ರಾಕಾ ಪೋಸ್ಟರ್ ಅನ್ನು ನೋಡಿ, ಇತರರು ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದಾರೆ, ‘ನೀವು ಶೀರ್ಷಿಕೆಯನ್ನು ದೈತ್ಯ ಎಂದು ಅರ್ಥೈಸಲು ಆರಿಸಿದ್ದೀರಾ?’ ಎಂದು ಕೆಲವರು ಕೇಳಿದ್ದಾರೆ. ಹುಣ್ಣಿಮೆಯ ದಿನದಂದು ಜನರು ತೋಳಗಳಾಗಿ ಬದಲಾಗುತ್ತಾರೆ ಎಂಬ ಪುರಾಣಗಳಿವೆ ಮತ್ತು ಈ ಚಿತ್ರವೂ ಹಾಗೆಯೇ ಇದೆಯೇ ಎಂಬ ಪ್ರಶ್ನೆಗಳು ಉದ್ಭವಿಸುತ್ತಿವೆ.

ಇದನ್ನೂ ಓದಿ: ‘ರಾಕಾ’ ಆಗಿ ಅಲ್ಲು ಅರ್ಜುನ್: ಹೀರೋನಾ-ವಿಲನ್ನಾ?

ಇವುಗಳ ಜೊತೆಗೆ, ರಾಕಾ ಎಂದರೆ ಕ್ರೌರ್ಯ, ಅಪಾಯ ಮತ್ತು ಹಿಂಸೆ ಎಂದೂ ಕೆಲವರು ಹೇಳುತ್ತಾರೆ. ಆದಾಗ್ಯೂ, ಈ ಆಸಕ್ತಿದಾಯಕ ಶೀರ್ಷಿಕೆಯ ಬಗ್ಗೆ ಎಲ್ಲರೂ ತಮ್ಮ ಅಭಿಪ್ರಾಯ ತಿಳಿಸುತ್ತಿದ್ದಾರೆ. ತಯಾರಕರು ಈ ‘ರಾಕಾ’ದ ನಿಜವಾದ ಅರ್ಥವನ್ನು ಇನ್ನಷ್ಟೇ ರಿವೀಲ್ ಮಾಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Hindu Ritual: ತಿಥಿ ಊಟಕ್ಕೆ ಹೋಗಿ ಬಂದರೆ ಕೆಟ್ಟದ್ದೇ ಆಗುತ್ತಾ? ತಜ್ಞರು ಹೇಳುವುದೇನು?

ಯಾರೇ ದೈವಾಧೀನರಾದಾಗ, ಸ್ವರ್ಗಸ್ಥರಾದಾಗ ಅಥವಾ ವೈಕುಂಠ ಪ್ರಯಾಣ ಬೆಳೆಸಿದಾಗ, ಅವರ ನೆನಪಿನಲ್ಲಿ ತಿಥಿ ಊಟ ಅಥವಾ ತಿಥಿ ಆಹಾರವನ್ನು ಸೇವಿಸುವ ಪದ್ಧತಿ ನಮ್ಮ ಸಂಪ್ರದಾಯದಲ್ಲಿದೆ. ಆದರೆ, ಈ ತಿಥಿ ಊಟವನ್ನು ಸೇವಿಸಬಹುದೇ ಅಥವಾ ಇದು ಏನಾದರೂ ತೊಂದರೆಯನ್ನು ತರುತ್ತದೆಯೇ ಎಂಬ ಬಗ್ಗೆ ಹಲವರಲ್ಲಿ ಪ್ರಶ್ನೆಗಳು ಮತ್ತು ಸಂಶಯಗಳಿವೆ. ಕೆಲವರು ತಿಥಿ ಊಟಕ್ಕೆ ಹೋಗಲು ನಿರಾಕರಿಸುತ್ತಾರೆ, ಇದರಿಂದ ಅದೃಷ್ಟ ಕೆಡುತ್ತದೆ ಅಥವಾ ಅಶುಭವಾಗುತ್ತದೆ ಎಂದು ಭಾವಿಸುತ್ತಾರೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.

ವಾಸ್ತವವಾಗಿ, ಯಾವುದೇ ವ್ಯಕ್ತಿ ದೇಹ ತ್ಯಾಗ ಮಾಡಿದಾಗ, ಅವರ ಆತ್ಮವು ಈ ಲೋಕದಿಂದ ನಿರ್ಗಮಿಸುತ್ತದೆ. ಆ ನಂತರ ಮೂರು ದಿನಗಳ ಅಥವಾ ಹನ್ನೊಂದನೇ ದಿನದ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಈ ಹನ್ನೊಂದನೇ ದಿನದಂದು ಎಲ್ಲ ಬಂಧುಬಾಂಧವರನ್ನು, ಸ್ನೇಹಿತರನ್ನು ಕರೆದು, ದಿವಂಗತರ ಭಾವಚಿತ್ರಕ್ಕೆ ಪೂಜೆ ಮಾಡಿ, ಅವರ ನೆನಪಿನಲ್ಲಿ ಆಹಾರ ಸೇವನೆ ಮಾಡುವ ಪದ್ಧತಿಯನ್ನೇ ನಾವು ತಿಥಿ ಊಟ ಎಂದು ಕರೆಯುತ್ತೇವೆ. ಕುಟುಂಬದವರಿಗೆ ಮೂರು ಅಥವಾ ಹನ್ನೊಂದು ದಿನಗಳ ಸೂತಕವಿರುತ್ತದೆ ನಿಜ. ಆದರೆ, ಈ ಕಾರ್ಯಕ್ರಮಕ್ಕೆ ಬಂದು ಆಹಾರ ಸೇವನೆ ಮಾಡುವ ಬಂಧುಗಳು, ಸ್ನೇಹಿತರಿಗೆ ಇದರಿಂದ ಯಾವುದೇ ರೀತಿಯ ಕಂಟಕ ಅಥವಾ ಆಧ್ಯಾತ್ಮಿಕ ತೊಂದರೆಗಳು ಎದುರಾಗುತ್ತವೆ ಎಂಬುದು ಸಂಪೂರ್ಣ ತಪ್ಪು ಕಲ್ಪನೆ.

ತಿಥಿ ಊಟ ಸೇವಿಸುವುದರಿಂದ ಅದೃಷ್ಟ ಹಾಳಾಗುವುದಿಲ್ಲ, ಅಥವಾ ಯಾವುದೇ ತೊಂದರೆಗಳು ಬರುವುದಿಲ್ಲ. ಇದಕ್ಕೆ ಯಾವುದೇ ಸಂಬಂಧವೂ ಇಲ್ಲ. ಬದುಕಿದ್ದಾಗ ಆ ವ್ಯಕ್ತಿ ನಮ್ಮೊಂದಿಗಿದ್ದ ಬಾಂಧವ್ಯದಂತೆಯೇ, ಮರಣಾನಂತರ ಅವರ ಆತ್ಮಕ್ಕೆ ಸಲ್ಲಿಸುವ ಗೌರವವೇ ತಿಥಿ ಊಟ. ಅವರ ನೆನಪಿನಲ್ಲಿ ನೀಡುವ ಅನ್ನ ಅಥವಾ ಆಹಾರವು ಆ ಆತ್ಮಕ್ಕೆ ತೃಪ್ತಿ ನೀಡಿ, ನಿಮಗಿನ್ನೂ ಧನಾತ್ಮಕ ಆಶೀರ್ವಾದಗಳನ್ನು ನೀಡುತ್ತದೆ. ಅದು ಚಿಕ್ಕ ಮಕ್ಕಳಾಗಿರಲಿ, ಹಿರಿಯರಾಗಿರಲಿ, ಅಥವಾ ಅನಾರೋಗ್ಯದಿಂದ ಅಥವಾ ಆಕಸ್ಮಿಕವಾಗಿ ಹೋಗಿರಲಿ. ಅವರ ಆತ್ಮವು ನಿಮ್ಮನ್ನು ಹರಸುತ್ತದೆ.

ಇದನ್ನೂ ಓದಿ: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಿ ಕೊಡಬೇಕು ಯಾಕೆ ಗೊತ್ತಾ?

ತಿಥಿ ಊಟಕ್ಕೆ ಹೋಗಿ ಬಂದರೆ ಅಪಘಾತವಾಯಿತು, ಆರೋಗ್ಯ ಕೆಟ್ಟಿತು ಅಥವಾ ಇನ್ಯಾವುದೋ ತೊಂದರೆಯಾಯಿತು ಎಂಬ ಮಾತುಗಳು ಕೇವಲ ಕಾಕತಾಳೀಯ ಘಟನೆಗಳು. ಅವುಗಳಿಗೆ ತಿಥಿ ಊಟಕ್ಕೂ ಯಾವುದೇ ಸಂಬಂಧವಿಲ್ಲ. ಗರುಡ ಪುರಾಣದ ಪ್ರಕಾರವೂ, ಈ ಸಂದರ್ಭದಲ್ಲಿ ನೀಡುವ ಒಂದು ತೊಟ್ಟು ನೀರು, ತೀರ್ಥ ಅಥವಾ ಪ್ರಸಾದದಿಂದ ಯಾವುದೇ ರೀತಿಯ ದುಷ್ಪರಿಣಾಮಗಳಾಗುವುದಿಲ್ಲ.

ಹಿರಿಯರು ಮತ್ತು ಬುದ್ಧಿಜೀವಿಗಳ ಮಾತುಗಳನ್ನು ಗಮನಿಸಿದರೆ, ತಿಥಿ ಊಟಕ್ಕೆ ಹೋಗಿ ಬರುವುದರಿಂದ ನಮ್ಮಲ್ಲಿರುವ ಎಷ್ಟೋ ದೋಷಗಳು ಹೊರಟುಹೋಗುತ್ತವೆ ಎಂದು ಹೇಳುವುದನ್ನು ಕೇಳುತ್ತೇವೆ. ಹನ್ನೊಂದನೇ ದಿನದ ತಿಥಿ ಇರಬಹುದು ಅಥವಾ ವಾರ್ಷಿಕ ತಿಥಿ ಕಾರ್ಯಕ್ರಮಗಳಿರಬಹುದು, ಇವುಗಳಿಗೆ ಹೋಗಿ ಆಹಾರ ಸೇವಿಸುವುದು ಯಾವುದೇ ಕಾರಣಕ್ಕೂ ಹಾನಿಕರವಲ್ಲ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಡಿವೈಡರ್​ಗೆ ಗುದ್ದಿ ವಿರುದ್ಧ ದಿಕ್ಕಿನಲ್ಲಿ ಬಂದು ಕಾರಿಗೆ ಡಿಕ್ಕಿ ಹೊಡೆದ ಕಲ್ಲಿದ್ದಲು ಟ್ರಕ್, 4 ಮಂದಿ ಸಾವು

ಜಾರ್ಖಂಡ್, ಏಪ್ರಿಲ್ 09: ಕಲ್ಲಿದ್ದಲು ಟ್ರಕ್​ ಸ್ಕಾರ್ಪಿಯೋಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸಾವನ್ನಪ್ಪಿರುವ ಘಟನೆ ಜಾರ್ಖಂಡ್​​ನಲ್ಲಿ ನಡೆದಿದೆ. ಜಾರ್ಖಂಡ್​​ನ ದನ್ಬಾನ್​​ನಲ್ಲಿ ಕಲ್ಲಿದ್ದಲು ತುಂಬಿದ್ದ ಟ್ರಕ್ ಒಂದು ನಿಯಂತ್ರಣ ಕಳೆದುಕೊಂಡು ಡಿವೈಡರ್​ಗೆ ಡಿಕ್ಕಿ ಹೊಡೆದು ಬಳಿಕ ವಿರುದ್ಧ ದಿಕ್ಕಿಗೆ ಬಂದು ಸ್ಕಾರ್ಪಿಯೋಗೆ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ. ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಅಪಘಾತದ ಬಳಿಕ ಟ್ರಕ್ ಕೂಡ ಮಗುಚಿ ಬಿದ್ದಿದ್ದು, ಕಲ್ಲಿದ್ದಲು ರಸ್ತೆ ತುಂಬಾ ಹರಡಿತ್ತು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬಾಗಲಕೋಟೆ: ಬೆಳಗ್ಗೆಯೇ ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗಳಿಗೆ ಆಗಮಿಸಿದ ಮತದಾರರು

ಬಾಗಲಕೋಟೆ, ಏಪ್ರಿಲ್ 9: ಬಾಗಲಕೋಟೆ ವಿಧಾನಸಭಾ ಉಪಚುನಾವಣೆಗೆ ಮತದಾನ ಪ್ರಕ್ರಿಯೆ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಡೆಯುತ್ತಿದೆ. ಹೆಚ್. ವೈ. ಮೇಟಿ ಅವರ ಅಕಾಲಿಕ ನಿಧನದಿಂದ ತೆರವಾದ ಈ ಕ್ಷೇತ್ರಕ್ಕಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಎರಡೂ ಪಕ್ಷಗಳ ಪ್ರಮುಖ ನಾಯಕರು ತೀವ್ರ ಪ್ರಚಾರ ನಡೆಸಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆರು ದಿನಗಳ ಕಾಲ ಕ್ಷೇತ್ರದಲ್ಲಿ ಬೀಡುಬಿಟ್ಟು ಪ್ರಚಾರ ಮಾಡಿದರೆ, ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಪರವಾಗಿ ಮಾಜಿ ಸಿಎಂ ಯಡಿಯೂರಪ್ಪ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ವಿ. ಸೋಮಣ್ಣ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸೇರಿದಂತೆ ಅನೇಕ ಘಟಾನುಘಟಿ ನಾಯಕರು ಪ್ರಚಾರದಲ್ಲಿ ಭಾಗಿಯಾಗಿದ್ದರು.

ಮತದಾರರು ಬೆಳಗ್ಗೆಯಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗಳಿಗೆ ಆಗಮಿಸುತ್ತಿದ್ದು, ಸರದಿ ಸಾಲಿನಲ್ಲಿ ನಿಂತು ಉತ್ಸಾಹದಿಂದ ಮತ ಚಲಾಯಿಸುತ್ತಿದ್ದಾರೆ. ಈ ಉಪಚುನಾವಣೆ ಮುಂದಿನ ಚುನಾವಣೆಗೆ ದಿಕ್ಸೂಚಿ ಎಂದು ವಿಶ್ಲೇಷಿಸಲಾಗಿದೆ. ಕ್ಷೇತ್ರದಲ್ಲಿ ಒಟ್ಟು 2,59,797 ಮತದಾರರಿದ್ದು, 322 ಮತಗಟ್ಟೆಗಳಲ್ಲಿ ಮತದಾನ ಸುಗಮವಾಗಿ ನಡೆಯುತ್ತಿದೆ.

ಚುನಾವಣೆ ಸಂಬಂಧಿತ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version