IND vs AFG: ಭಾರತ- ಅಫ್ಘನ್ ಟೆಸ್ಟ್ ಪಂದ್ಯ ಎಷ್ಟು ಗಂಟೆಗೆ ಆರಂಭ? ಯಾವ ಚಾನೆಲ್​ನಲ್ಲಿ ನೇರಪ್ರಸಾರ? – Kannada News

ಟೀಂ ಇಂಡಿಯಾ ಬರೋಬ್ಬರಿ 193 ದಿನಗಳ ನಂತರ ಟೆಸ್ಟ್ ಪಂದ್ಯವನ್ನು ಆಡಲು ಸಜ್ಜಾಗಿದೆ. ಭಾರತ ಮತ್ತು ಅಫ್ಘಾನಿಸ್ತಾನ (India vs Afghanistan) ನಡುವಿನ ಏಕೈಕ ಟೆಸ್ಟ್ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಭಾರತ ಮತ್ತು ಅಫ್ಘಾನಿಸ್ತಾನ ತಂಡಗಳು ಈ ಮಾದರಿಯಲ್ಲಿ ಪರಸ್ಪರ ಮುಖಾಮುಖಿಯಾಗುತ್ತಿರುವುದು ಇದು ಕೇವಲ ಎರಡನೇ ಬಾರಿ. 2018 ರಲ್ಲಿ ಬೆಂಗಳೂರಿನಲ್ಲಿ ಉಭಯ ತಂಡಗಳ ನಡುವಿನ ಏಕೈಕ ಟೆಸ್ಟ್ ಪಂದ್ಯ ನಡೆದಿತ್ತು, ಅಲ್ಲಿ ಭಾರತ ತಂಡ ಏಕಪಕ್ಷೀಯ ಪ್ರದರ್ಶನ ನೀಡಿ ಇನ್ನಿಂಗ್ಸ್ ಮತ್ತು 262 ರನ್‌ಗಳ ಅದ್ಭುತ ಜಯ ಸಾಧಿಸಿತು. ಈಗ, ಎಂಟು ವರ್ಷಗಳ ದೀರ್ಘ ಕಾಯುವಿಕೆಯ ನಂತರ, ಈ ಎರಡೂ ತಂಡಗಳು ಟೆಸ್ಟ್ ಕ್ರಿಕೆಟ್‌ನಲ್ಲಿ ಮತ್ತೆ ಮುಖಾಮುಖಿಯಾಗಲು ಸಜ್ಜಾಗಿವೆ.

ಮುಖಾಮುಖಿ ದಾಖಲೆ ಹೇಗಿದೆ?

ಭಾರತ ತಂಡವು ಕಳೆದ ವರ್ಷ ನವೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ತನ್ನ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿತು. ಅಂದಿನಿಂದ, ತಂಡವು ನಿರಂತರವಾಗಿ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ತೊಡಗಿಸಿಕೊಂಡಿದೆ. ಹೀಗಾಗಿ ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯವು ಆಟಗಾರರು ಮತ್ತು ಅಭಿಮಾನಿಗಳಿಗೆ 193 ದಿನಗಳ ಬರವನ್ನು ಕೊನೆಗೊಳಿಸಲಿದೆ. ಶುಭಮನ್ ಗಿಲ್ ನಾಯಕತ್ವದಲ್ಲಿ, ಯುವ ಮತ್ತು ಅನುಭವಿ ಆಟಗಾರರಿಂದ ತುಂಬಿರುವ ಭಾರತೀಯ ತಂಡವು ಈ ಪಂದ್ಯವನ್ನು ಆಡಲು ಸಜ್ಜಾಗಿದೆ. ಈ ಪಂದ್ಯವು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್​ನ ಭಾಗವಾಗಿಲ್ಲದಿದ್ದರೂ, ಎರಡೂ ತಂಡಗಳು ತಮ್ಮ ರೆಡ್-ಬಾಲ್ ಸಿದ್ಧತೆಗಳನ್ನು ಪರೀಕ್ಷಿಸಲು ಇದು ಅತ್ಯುತ್ತಮ ವೇದಿಕೆಯಾಗಿದೆ.

IND vs AFG: ಟೀಂ ಇಂಡಿಯಾಗೆ ಆಘಾತ; ಟೆಸ್ಟ್ ಪಂದ್ಯಕ್ಕೆ ಸ್ಟಾರ್ ವೇಗಿ ಅಲಭ್ಯ

ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಟೆಸ್ಟ್ ಪಂದ್ಯ ಯಾವಾಗ ನಡೆಯಲಿದೆ?

ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಟೆಸ್ಟ್ ಪಂದ್ಯ ಜೂನ್ 6 ರಿಂದ ಆರಂಭವಾಗಲಿದೆ.

ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಟೆಸ್ಟ್ ಪಂದ್ಯ ಎಲ್ಲಿ ನಡೆಯಲಿದೆ?

ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಟೆಸ್ಟ್ ಪಂದ್ಯ ಚಂಡೀಗಢದ ಮುಲ್ಲನ್‌ಪುರದಲ್ಲಿರುವ ಮಹಾರಾಜ ಯಾದವೀಂದ್ರ ಸಿಂಗ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ.

ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಟೆಸ್ಟ್ ಪಂದ್ಯ ಎಷ್ಟು ಗಂಟೆಗೆ ಆರಂಭ?

ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಟೆಸ್ಟ್ ಪಂದ್ಯ ಭಾರತೀಯ ಕಾಲಮಾನ ಬೆಳಿಗ್ಗೆ 9:30 ಕ್ಕೆ ಆರಂಭವಾಗಲಿದೆ.

ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಟೆಸ್ಟ್ ಪಂದ್ಯವನ್ನು ಎಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ?

ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಟೆಸ್ಟ್ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಷ್ಯಾ-ಉಕ್ರೇನ್ ಯುದ್ಧಕ್ಕೆ ಬೀಳುತ್ತಾ ತೆರೆ? ಶಾಂತಿ ಮಾತುಕತೆಯ ಸುಳಿವು ನೀಡಿದ ಪುಟಿನ್ – Kannada News

ಮಾಸ್ಕೋ, ಜೂನ್ 5: ರಷ್ಯಾ ಮತ್ತು ಉಕ್ರೇನ್ (Ukraine) ನಡುವಿನ ದೀರ್ಘಾವಧಿಯ ಯುದ್ಧಕ್ಕೆ ಕೊನೆಗೂ ತೆರೆ ಬೀಳುವ ಲಕ್ಷಣಗಳು ಕಾಣಿಸುತ್ತಿವೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ಪ್ರಸ್ತಾಪದ ಅಡಿಯಲ್ಲಿ ಯುದ್ಧವನ್ನು ಕೊನೆಗೊಳಿಸಿ, ಶಾಂತಿ ಮಾತುಕತೆಗೆ ತಾವು ಸಿದ್ಧರಿರುವುದಾಗಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸುಳಿವು ನೀಡಿದ್ದಾರೆ. ಅಂತಾರಾಷ್ಟ್ರೀಯ ಸಮಾವೇಶವೊಂದರಲ್ಲಿ ಮಾತನಾಡಿದ ವ್ಲಾಡಿಮಿರ್ ಪುಟಿನ್, “ನಾವು ಮೊದಲಿನಿಂದಲೂ ಶಾಂತಿ ಮಾತುಕತೆಯ ಪರವಾಗಿಯೇ ಇದ್ದೇವೆ. ಡೊನಾಲ್ಡ್ ಟ್ರಂಪ್ ಯುದ್ಧವನ್ನು ಕೊನೆಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದು, ಅವರ ಪ್ರಸ್ತಾಪಗಳನ್ನು ನಾವು ಸ್ವಾಗತಿಸುತ್ತೇವೆ” ಎಂದು ಹೇಳಿದ್ದಾರೆ.

ಯುದ್ಧ ನಿಲ್ಲಿಸಲು ರಷ್ಯಾ ತನ್ನದೇ ಆದ ಕೆಲವು ಷರತ್ತುಗಳನ್ನು ವಿಧಿಸಿದೆ. ಪ್ರಸ್ತುತ ಯುದ್ಧಭೂಮಿಯಲ್ಲಿನ ವಾಸ್ತವ ಸ್ಥಿತಿ ಮತ್ತು ಈ ಹಿಂದೆ ಇಸ್ತಾನ್‌ಬುಲ್‌ನಲ್ಲಿ ನಡೆದ ಮಾತುಕತೆಯ ನಿಯಮಗಳನ್ನು ಆಧರಿಸಿ ಶಾಂತಿ ಒಪ್ಪಂದ ನಡೆಯಬೇಕು ಎಂದು ಪುಟಿನ್ ಸ್ಪಷ್ಟಪಡಿಸಿದ್ದಾರೆ. ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಾಗಿನಿಂದಲೂ ಡೊನಾಲ್ಡ್ ಟ್ರಂಪ್ ರಷ್ಯಾ-ಉಕ್ರೇನ್ ಯುದ್ಧವನ್ನು 24 ಗಂಟೆಗಳಲ್ಲಿ ನಿಲ್ಲಿಸುವುದಾಗಿ ಹೇಳುತ್ತಾ ಬಂದಿದ್ದಾರೆ.

ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಈ ಹಿಂದೆ ತಮ್ಮ ಭೂಭಾಗವನ್ನು ರಷ್ಯಾಕ್ಕೆ ಬಿಟ್ಟುಕೊಡುವ ಒಪ್ಪಂದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಅಮೆರಿಕದಿಂದ ಸಿಗುತ್ತಿರುವ ಮಿಲಿಟರಿ ಧನಸಹಾಯದ ಕೊರತೆ ಮತ್ತು ಜಾಗತಿಕ ಒತ್ತಡದಿಂದಾಗಿ ಉಕ್ರೇನ್ ಕೂಡ ಈಗ ಮಣಿಯುವ ಪರಿಸ್ಥಿತಿಗೆ ಬಂದು ತಲುಪಿದೆ ಎನ್ನಲಾಗಿದೆ.

ಇದನ್ನೂ ಓದಿ: Video: ಪುಟಿನ್ ರಹಸ್ಯ ನಿವಾಸದ ಮೇಲೆ ಉಕ್ರೇನ್ ಡ್ರೋನ್ ದಾಳಿ, ವಿಡಿಯೋ ಇಲ್ಲಿದೆ

ಕಳೆದ ವರ್ಷ ಅಲಾಸ್ಕಾದ ಆಂಕರೇಜ್‌ನಲ್ಲಿ ಡೊನಾಲ್ಡ್ ಟ್ರಂಪ್ ಅವರೊಂದಿಗೆ ನಡೆದ ಭೇಟಿಯನ್ನು ನೆನಪಿಸಿಕೊಂಡ ಪುಟಿನ್, ಆ ಮಾತುಕತೆಯೇ ಯುದ್ಧದ ಅಂತ್ಯಕ್ಕೆ ದಾರಿಯಾಗಬಲ್ಲದು ಎಂದಿದ್ದಾರೆ. “ಆಂಕರೇಜ್ ಸಭೆಯಲ್ಲಿ ಚರ್ಚಿಸಲಾದ ರಾಜಿ ಸೂತ್ರಗಳಿಗೆ ರಷ್ಯಾ ಈಗಾಗಲೇ ಒಪ್ಪಿಗೆ ಸೂಚಿಸಿದೆ. ಈಗ ಉಕ್ರೇನ್ ಕೂಡ ಅದಕ್ಕೆ ಸಮ್ಮತಿಸಿದರೆ, ಈ ಸಂಘರ್ಷವು ಅತ್ಯಂತ ಸಹಜವಾಗಿ ಮತ್ತು ಶೀಘ್ರವಾಗಿ ಕೊನೆಗೊಳ್ಳುತ್ತದೆ” ಎಂದು ಪುಟಿನ್ ಹೇಳಿದ್ದಾರೆ. ಆದರೆ ಆ ರಾಜಿ ಸೂತ್ರಗಳು ಯಾವುವು ಎಂಬುದನ್ನು ಅವರು ಬಹಿರಂಗಪಡಿಸಿಲ್ಲ.

ಮತ್ತೊಂದೆಡೆ, ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ರಷ್ಯಾ ಅಧ್ಯಕ್ಷರಿಗೆ ಬಹಿರಂಗ ಪತ್ರ ಬರೆಯುವ ಮೂಲಕ ನೇರ ಮಾತುಕತೆಗೆ ಪ್ರಸ್ತಾಪ ಇಟ್ಟಿದ್ದಾರೆ. “ಈ ಯುದ್ಧವನ್ನು ಕೊನೆಗೊಳಿಸಲು ನಾವು ಮತ್ತು ನೀವು ಮುಖಾಮುಖಿ ಭೇಟಿಯಾಗುವುದು ಅಗತ್ಯ” ಎಂದು ಝೆಲೆನ್ಸ್ಕಿ ಕೋರಿದ್ದಾರೆ. ಅಲ್ಲದೆ, ಯಾವುದೇ ಪ್ರಮುಖ ಮಾತುಕತೆಗೂ ಮುನ್ನ ಸಂಪೂರ್ಣ ಕದನ ವಿರಾಮ ಘೋಷಿಸಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ.

ಇದನ್ನೂ ಓದಿ: 

2022ರಲ್ಲಿ ರಷ್ಯಾದ ಆಕ್ರಮಣದೊಂದಿಗೆ ಆರಂಭವಾದ ಈ ಯುದ್ಧವನ್ನು ನಿಲ್ಲಿಸಲು ಈ ಹಿಂದೆ ಜಿನೀವಾ, ಅಬುಧಾಬಿ ಮತ್ತು ಇಸ್ತಾನ್‌ಬುಲ್‌ನಲ್ಲಿ ನಡೆದ ಮಾತುಕತೆಗಳು ವಿಫಲವಾಗಿದ್ದವು. ಸದ್ಯ ಪುಟಿನ್ ಮತ್ತು ಝೆಲೆನ್ಸ್ಕಿ ಇಬ್ಬರೂ ಮಾತುಕತೆಯ ಸೂಚನೆ ನೀಡಿದ್ದರೂ, ಭೂಪ್ರದೇಶದ ಹಕ್ಕು ಮತ್ತು ಭದ್ರತೆಯ ವಿಚಾರದಲ್ಲಿ ಇಬ್ಬರ ನಡುವೆ ಇರುವ ಭಿನ್ನಾಭಿಪ್ರಾಯಗಳ ಕಾರಣದಿಂದ ಈ ಮಾತುಕತೆ ಫಲಪ್ರದವಾಗಲಿದೆಯೇ ಎಂಬ ಅನುಮಾನ ಮಾತ್ರ ಹಾಗೆಯೇ ಉಳಿದಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:21 pm, Fri, 5 June 26

Source link

ಚುರುಕು ಮುಟ್ಟಿಸಿದ ಡಿಕೆಶಿ:ಸರ್ಕಾರಿ ನೌಕರರು ಬೆಳಿಗ್ಗೆ 10 ಗಂಟೆಯೊಳಗೆ ಕಚೇರಿಗೆ ಹಾಜರಾಗುವುದು ಕಡ್ಡಾಯ – Kannada News

ಬೆಂಗಳೂರು, (ಜೂನ್ 05) : ರಾಜ್ಯ ಸರ್ಕಾರದ ಪ್ರತಿಯೊಬ್ಬ ಅಧಿಕಾರಿ ಮತ್ತು ಸಿಬ್ಬಂದಿ (karnataka government employees) ಪ್ರತಿದಿನ ಬೆಳಿಗ್ಗೆ 10 ಗಂಟೆಯೊಳಗೆ ಕಚೇರಿಗೆ ಹಾಜರಾಗಬೇಕೆಂದು ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ. ಸಿಎಂ ಡಿಕೆ ಶಿವಕುಮಾರ್  (DK Shivakumar) ಅವರ ಖಡಕ್ ಸೂಚನೆ ಬೆನ್ನಲ್ಲೇ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಇಂದು (ಜೂನ್ 05) ಅಧಿಕಾರಿಗಳಿಗೆ ಈ ಆದೇಶ ಹೊರಡಿಸಿದ್ದು, ಹಾಜರಾತಿಗೆ ‘ಕರ್ತವ್ಯ ಆ್ಯಪ್’ (Kartavya App) ಬಳಕೆ ಕುರಿತು ಕೆಳಗಿನ ನಿರ್ದೇಶನಗಳನ್ನು ಪಾಲಿಸಬೇಕು. ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ಚೆಕ್ ಇನ್, ಚೆಕ್ ಔಟ್ ಮಾಡಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.

ದಿನಾಂಕ 04-06-2026 ರಂದು ನಡೆದ ಸಭೆಯಲ್ಲಿ ಮುಖ್ಯಮಂತ್ರಿಗಳು, ರಾಜ್ಯ ಸರ್ಕಾರದ ಪ್ರತಿಯೊಬ್ಬ ಅಧಿಕಾರಿ ಮತ್ತು ಸಿಬ್ಬಂದಿ ಪ್ರತಿದಿನ ಬೆಳಿಗ್ಗೆ 10 ಗಂಟೆಯೊಳಗೆ ಕಚೇರಿಗೆ ಹಾಜರಾಗಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ‘ಕರ್ತವ್ಯ ಆ್ಯಪ್’ (Kartavya App) ಬಳಕೆ ಕುರಿತು ಕೆಳಗಿನ ನಿರ್ದೇಶನಗಳನ್ನು ಪಾಲಿಸಲು ಸೂಚಿಸಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರಿ ನೌಕರರು ಕಡ್ಡಾಯವಾಗಿ ಬೆಳಿಗ್ಗೆ 10 ಗಂಟೆಯೊಳಗೆ ಕಚೇರಿಗೆ ಹಾಜರಾಗಬೇಕೆಂಬ ಮುಖ್ಯಮಂತ್ರಿಗಳ ಕಟ್ಟುನಿಟ್ಟಿನ ಆದೇಶವನ್ನು ಜಾರಿಗೊಳಿಸಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದ ಸಿಎಂ ಡಿಕೆಶಿ, ಅಧಿಕಾರಿಗಳಿಗೆ ಕೊಟ್ಟ ಖಡಕ್ ಸೂಚನೆಗಳೇನು?

ಹಾಜರಾತಿ ದಾಖಲಾತಿ

ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ಬೆಳಿಗ್ಗೆ 10 ಗಂಟೆಗೆ ‘ಕರ್ತವ್ಯ ಆಯಪ್’ನಲ್ಲಿ ‘Check In’ ಮಾಡಬೇಕು ಮತ್ತು ಕಚೇರಿಯಿಂದ ನಿರ್ಗಮಿಸುವಾಗ ‘Check Out’ ಮಾಡಬೇಕು. ಆಯಪ್ ಬಳಸುವ ವಿಧಾನವನ್ನು ಯೂಟ್ಯೂಬ್ ಲಿಂಕ್ (https://youtu.be/ZNGtSt2mUPY?si=k3rfqZJIMENeF5q) ಮೂಲಕ ವೀಕ್ಷಿಸಬಹುದು. ಇ-ಆಡಳಿತ ಇಲಾಖೆಯು ಪ್ರತಿದಿನ ಬೆಳಿಗ್ಗೆ 10 ಗಂಟೆಗೆ ಹಾಜರಾತಿ ದಾಖಲಿಸಿದ ಅಧಿಕಾರಿ, ಸಿಬ್ಬಂದಿಯ ಜಿಲ್ಲಾವಾರು ಮತ್ತು ಕಚೇರಿವಾರು ಮಾಹಿತಿಯನ್ನು AI ತಂತ್ರಜ್ಞಾನದ ಮೂಲಕ ಆಯಾ ಇಲಾಖಾ ಮುಖ್ಯಸ್ಥರಿಗೆ ಸ್ವಯಂಚಾಲಿತವಾಗಿ ಕಳುಹಿಸುತ್ತದೆ.

ಇಲಾಖಾ ಮುಖ್ಯಸ್ಥರು ತಮ್ಮ ವೈಯಕ್ತಿಕ ಲಾಗಿನ್ ಮೂಲಕ ‘ಕರ್ತವ್ಯ ಡ್ಯಾಶ್‌ಬೋರ್ಡ್’ನಲ್ಲಿ ದೈನಂದಿನ ಹಾಜರಾತಿ ವರದಿಯನ್ನು ಪರಿಶೀಲಿಸಬೇಕು ಮತ್ತು ಹಾಜರಾತಿ ದಾಖಲಿಸದವರಿಗೆ ಸೂಕ್ತ ಸೂಚನೆ ನೀಡಬೇಕು. ಒಂದು ವೇಳೆ ಅಧಿಕಾರಿಗಳು ಅಥವಾ ಸಿಬ್ಬಂದಿ ಕಚೇರಿ ಕರ್ತವ್ಯದ ಮೇರೆಗೆ ಪ್ರವಾಸದಲ್ಲಿದ್ದರೆ, ಅವರು ‘OOD’ ಆಯ್ಕೆಯನ್ನು ಬಳಸಿಕೊಂಡು ಪ್ರವಾಸದ ಉದ್ದೇಶವನ್ನು ನಮೂದಿಸಿ ಹಾಜರಾತಿಯನ್ನು ದಾಖಲಿಸಬೇಕು ಮತ್ತು ಇದನ್ನು ಸಂಬಂಧಪಟ್ಟ ಮೇಲಾಧಿಕಾರಿಗಳು ದೃಢೀಕರಿಸಬೇಕು.

ಅಧಿಕಾರಿಗಳಿಗೆ ಆತ್ಮಸಾಕ್ಷಿ ಪಾಠ ಮಾಡಿದ್ದ ಡಿಕೆಶಿ

ಇನ್ನು ಸಿಎಂ ಆದ ಬಳಿಕೆ ಡಿಕೆ ಶಿವಕುಮಾರ್ ಅವರು ನಿನ್ನೆ (ಜೂನ್ 04) ಮೊದಲ ಬಾರಿಗೆ ಎಲ್ಲಾ ಇಲಾಖೆಗಳ ಕಾರ್ಯದರ್ಶಿಗಳ ಜತೆ ಸಭೆ ನಡೆಸಿದ್ದು, ಈ ಸಭೆಯಲ್ಲಿ ಅಧಿಕಾರಿಗಳಿಗೆ ಕೆಲ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಪ್ರಮುಖವಾಗಿ ಭ್ರಷ್ಟಾಚಾರ ಮುಕ್ತ, ಪಾದರ್ಶಕ ಕೆಲಸ ಹಾಗೂ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಬಗ್ಗೆ ಆತ್ಮಸಾಕ್ಷಿ ಪಾಠ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಗ್ಯಾಸ್ ಮತ್ತು ಹೊಟ್ಟೆ ಉಬ್ಬರ ಸಮಸ್ಯೆಗೆ ಆಹಾರ ಮಾತ್ರವಲ್ಲ, ನಿಮ್ಮ ಈ ಅಭ್ಯಾಸಗಳು ಕಾರಣವಾಗಿರಬಹುದು! – Kannada News

ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಯಿಂದ ಬಳಲುತ್ತಾರೆ. ಹೆಚ್ಚಿನವರಿಗೆ ಗ್ಯಾಸ್ ಆಗುವುದು (Stomach Gas Problems), ಹೊಟ್ಟೆ ಉಬ್ಬರ ಮತ್ತು ಅಜೀರ್ಣದಂತಹ ಸಮಸ್ಯೆಗಳಿಂದ ಬಳಲುತ್ತಾರೆ. ಸಾಮಾನ್ಯವಾಗಿ ಜನ ಈ ರೀತಿಯಾಗುವುದಕ್ಕೆ ಕೇವಲ ಆಹಾರ ಕಾರಣ ಎಂದು ಭಾವಿಸುತ್ತಾರೆ. ಆದರೆ ತಜ್ಞರ ಪ್ರಕಾರ, ನಮ್ಮ ದೈನಂದಿನ ಕೆಲವು ಕೆಟ್ಟ ಅಭ್ಯಾಸಗಳೂ ಕೂಡ ಈ ಸಮಸ್ಯೆಗೆ ಪ್ರಮುಖ ಕಾರಣವಾಗಬಹುದು. ಜೀರ್ಣಾಂಗ ವ್ಯವಸ್ಥೆ ನಮ್ಮ ದೇಹದ ಪ್ರಮುಖ ಭಾಗವಾಗಿದ್ದು, ಆಹಾರವನ್ನು ಜೀರ್ಣಿಸಿ ಪೋಷಕಾಂಶಗಳನ್ನು ದೇಹಕ್ಕೆ ತಲುಪಿಸುವ ಕೆಲಸ ಮಾಡುತ್ತದೆ. ಜೀರ್ಣಕ್ರಿಯೆಯಲ್ಲಿ ವ್ಯತ್ಯಯ ಉಂಟಾದರೆ ಗ್ಯಾಸ್, ಹೊಟ್ಟೆ ಉಬ್ಬರ ಮತ್ತು ಅಜೀರ್ಣದಂತಹ ಸಮಸ್ಯೆಗಳು ಕಾಣಿಸಬಹುದು. ಹಲವರು ಈ ಲಕ್ಷಣಗಳನ್ನು ಸಾಮಾನ್ಯವೆಂದು ನಿರ್ಲಕ್ಷಿಸುತ್ತಾರೆ. ಆದರೆ ಈ ಸಮಸ್ಯೆ ಪದೇಪದೇ ಕಂಡುಬರುತ್ತಿದ್ದರೆ ಅದರ ಹಿಂದಿರುವ ಕಾರಣಗಳನ್ನು ಅರಿಯುವುದು ಅಗತ್ಯ. ಹಾಗಾದರೆ ಯಾವ ಅಭ್ಯಾಸಗಳು ಗ್ಯಾಸ್ಟ್ರಿಕ್ ಸಮಸ್ಯೆಗೆ ಕಾರಣವಾಗುತ್ತದೆ, ಗ್ಯಾಸ್ ಮತ್ತು ಹೊಟ್ಟೆ ಉಬ್ಬರ ಸಮಸ್ಯೆಯಿಂದ ದೂರವಿರಲು ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಯಾವ ಅಭ್ಯಾಸಗಳಿಂದ ಹೊಟ್ಟೆಯಲ್ಲಿ ಗ್ಯಾಸ್ ಸಮಸ್ಯೆ ಉಂಟಾಗಬಹುದು?

ನೋಯ್ಡಾದ ಫೋರ್ಟಿಸ್ ಆಸ್ಪತ್ರೆಯ ಗ್ಯಾಸ್ಟ್ರೋಎಂಟರಾಲಜಿ ವಿಭಾಗದ ನಿರ್ದೇಶಕ ಡಾ. ಮಹೇಶ್ ಗುಪ್ತ ಅವರು ಹೇಳುವ ಪ್ರಕಾರ, ಅಸಮರ್ಪಕ ಜೀವನಶೈಲಿ ಮತ್ತು ಆಹಾರ ಪದ್ಧತಿ ಸರಿಯಾಗಿ ಇಲ್ಲದಿರುವುದು ಹೊಟ್ಟೆಯಲ್ಲಿ ಗ್ಯಾಸ್ ಸಮಸ್ಯೆಯನ್ನು ಹೆಚ್ಚಿಸಬಹುದು. ಸಮಯಕ್ಕೆ ಸರಿಯಾಗಿ ಊಟ ಮಾಡದೇ ಇರುವುದು, ಎರಡು ಊಟಗಳ ನಡುವೆ ಹೆಚ್ಚು ಅಂತರ ಮತ್ತು ಬೇಗ ಬೇಗನೆ ಊಟ ಮಾಡುವ ಅಭ್ಯಾಸಗಳು ಜೀರ್ಣಕ್ರಿಯೆಗೆ ತೊಂದರೆ ಉಂಟುಮಾಡಬಹುದು. ಇದಲ್ಲದೆ ಫಾಸ್ಟ್ ಫುಡ್, ಮೈದಾ ಪದಾರ್ಥಗಳು, ಅತಿಯಾಗಿ ಮಸಾಲೆ ಹಾಗೂ ಎಣ್ಣೆಯಲ್ಲಿ ತಯಾರಿಸಿದ ಆಹಾರಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಕೆಲವರಲ್ಲಿ ಗ್ಯಾಸ್ ಮತ್ತು ಹೊಟ್ಟೆ ಉಬ್ಬರ ಹೆಚ್ಚಾಗಬಹುದು. ಜೊತೆಗೆ ಹೊಟ್ಟೆಯಲ್ಲಿರುವ ಒಳ್ಳೆಯ ಮತ್ತು ಕೆಟ್ಟ ಬ್ಯಾಕ್ಟೀರಿಯಾದ ಸಮತೋಲನ ಹದಗೆಡುವ “ಇಂಟೆಸ್ಟೈನಲ್ ಡಿಸ್ಬಯೋಸಿಸ್” ಸಮಸ್ಯೆಯೂ ಇದಕ್ಕೆ ಕಾರಣವಾಗಬಹುದು. ಗಟ್ ಮೈಕ್ರೋಬಿಯೊಮ್ ಸಮತೋಲನ ತಪ್ಪಿದಾಗ ಜೀರ್ಣಕ್ರಿಯೆ ದುರ್ಬಲವಾಗುತ್ತದೆ ಮತ್ತು ಹೊಟ್ಟೆ ಸಂಬಂಧಿತ ಸಮಸ್ಯೆಗಳು ಹೆಚ್ಚಾಗಬಹುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಗ್ಯಾಸ್ಟ್ರಿಕ್, ಅಸಿಡಿಟಿಯಿಂದ ದಿನಪೂರ್ತಿ ಹಿಂಸೆ ಪಡುತ್ತಿದ್ದೀರಾ? ಹಾಗಿದ್ರೆ ತಪ್ಪದೆ ಈ ಅಭ್ಯಾಸಗಳನ್ನು ಮಾಡಿ

ಯಾವ ಲಕ್ಷಣಗಳು ಕಂಡುಬಂದರೆ ವೈದ್ಯರನ್ನು ಸಂಪರ್ಕಿಸಬೇಕು?

ಹೊಟ್ಟೆಯಲ್ಲಿ ಗ್ಯಾಸ್ ಸಮಸ್ಯೆ ಪದೇಪದೇ ಕಾಣಿಸಿಕೊಂಡು ಅದರ ಜೊತೆಗೆ ನಿರಂತರ ಹೊಟ್ಟೆನೋವು, ತೀವ್ರ ಹೊಟ್ಟೆ ಉಬ್ಬರ, ತೂಕ ಇಳಿಯುವುದು, ವಾಂತಿ ಅಥವಾ ಮಲವಿಸರ್ಜನೆ ಕ್ರಮದಲ್ಲಿ ಬದಲಾವಣೆ ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ. ಸಮಸ್ಯೆ ದೀರ್ಘಕಾಲ ಮುಂದುವರಿದು ದೈನಂದಿನ ಜೀವನದ ಮೇಲೆ ಪರಿಣಾಮ ಬೀರುತ್ತಿದ್ದರೆ ಅದನ್ನು ನಿರ್ಲಕ್ಷಿಸಬಾರದು. ಸಮಯಕ್ಕೆ ಸರಿಯಾಗಿ ಪರೀಕ್ಷೆ ಮಾಡಿಸಿಕೊಳ್ಳುವುದರಿಂದ ಮೂಲ ಕಾರಣ ಪತ್ತೆಹಚ್ಚಲು ಸಹಾಯವಾಗುತ್ತದೆ.

ಗ್ಯಾಸ್ ಮತ್ತು ಹೊಟ್ಟೆ ಉಬ್ಬರ ಸಮಸ್ಯೆಯಿಂದ ಹೇಗೆ ದೂರವಿರಬಹುದು?

ಜೀರ್ಣಕ್ರಿಯೆ ಸುಧಾರಿಸಲು ಸಮಯಕ್ಕೆ ಸರಿಯಾಗಿ ಊಟ ಮಾಡುವುದು ಮತ್ತು ಆಹಾರವನ್ನು ಚೆನ್ನಾಗಿ ಜಗಿದು ತಿನ್ನುವುದು ಮುಖ್ಯ. ಸಾಕಷ್ಟು ನೀರು ಕುಡಿಯಬೇಕು ಮತ್ತು ಆಹಾರದಲ್ಲಿ ಹಣ್ಣು, ತರಕಾರಿ ಹಾಗೂ ಫೈಬರ್ ಸಮೃದ್ಧ ಆಹಾರಗಳ ಸೇವನೆ ಮಾಡಬೇಕು. ನಿಯಮಿತ ವ್ಯಾಯಾಮ ಮಾಡುವುದು, ಜಂಕ್ ಫುಡ್ ಮತ್ತು ಹೆಚ್ಚು ಮಸಾಲೆಯ ಆಹಾರವನ್ನು ಕಡಿಮೆ ಮಾಡುವುದು ಸಹ ಉಪಯುಕ್ತ. ಆರೋಗ್ಯಕರ ಜೀವನಶೈಲಿ ಮತ್ತು ಸಮತೋಲನ ಆಹಾರ ಪದ್ಧತಿ ಜೀರ್ಣಾಂಗ ವ್ಯವಸ್ಥೆಯನ್ನು ಉತ್ತಮವಾಗಿಡಲು ಸಹಾಯ ಮಾಡುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಎಲ್ ನಿನೊ ಪರಿಣಾಮ; ಭಾರತದ ಆರ್ಥಿಕತೆಗೆ 1 ಬಿಲಿಯನ್ ಡಾಲರ್ ಗಂಡಾಂತರ? ಇದು ಹೇಗೆ ಸಾಧ್ಯ? – Kannada News

ನವದೆಹಲಿ, ಜೂನ್ 5: ಮುಂಬರುವ ಪ್ರಬಲ ‘ಎಲ್ ನಿನೊ’ (El Nino) ಹವಾಮಾನ ವೈಪರೀತ್ಯದಿಂದಾಗಿ ಭಾರತಕ್ಕೆ ಬರೋಬ್ಬರಿ 1 ಟ್ರಿಲಿಯನ್ ಡಾಲರ್ (ಸುಮಾರು 83 ಲಕ್ಷ ಕೋಟಿ ರೂಪಾಯಿ) ಭಾರಿ ಆರ್ಥಿಕ ನಷ್ಟ ಉಂಟಾಗಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ. ನಿನ್ನೆ ವಿಶ್ವ ಪರಿಸರ ದಿನದ ಭಾಗವಾಗ ಎಕನಾಮಿಕ್ ಟೈಮ್ಸ್ ಆಯೋಜಿಸಿದ ಸಂವಾದ ಕಾರ್ಯಕ್ರಮದಲ್ಲಿ ಅಮೆರಿಕದ ಡಾರ್ಟ್​ಮೌತ್ ಕಾಲೇಜಿನ ಭೂಗೋಳ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಜಸ್ಟಿನ್ ಎಸ್ ಮ್ಯಾನ್​ಕಿನ್ ಮಾತನಾಡುತ್ತಾ, ಜಾಗತಿಕವಾಗಿ ಎಲ್ ನಿನೋ ಮಾಡುವ ಪರಿಣಾಮಗಳನ್ನು ವಿಶ್ಲೇಷಿಸಿದರು.

ಏನಿದು ಎಲ್ ನಿನೊ?

ಎಲ್ ನಿನೊ ಎನ್ನುವುದು ಪೆಸಿಫಿಕ್ ಮಹಾಸಾಗರದ ಮೇಲ್ಮೈ ನೀರು ಅಸಹಜವಾಗಿ ಬಿಸಿಯಾಗುವ ಒಂದು ಹವಾಮಾನ ಪ್ರಕ್ರಿಯೆ. ದಕ್ಷಿಣ ಅಮೆರಿಕದ ಪೆರು ದೇಶದ ಸಮೀಪದ ಪೂರ್ವ ಉಷ್ಣವಲಯ ಪೆಸಿಫಿಕ್ ಸಾಗರದ ಮೇಲ್ಮೈ ನೀರಿನ ಉಷ್ಣಾಂಶವು ಸರಾಸರಿಗಿಂತ ಹೆಚ್ಚು ಬಿಸಿಯಾಗಿದ್ದರೆ ಅದನ್ನು ಎಲ್ ನಿನೊ ಎನ್ನುತ್ತಾರೆ. ಸ್ಪ್ಯಾನಿಷ್ ಭಾಷೆಯಲ್ಲಿ ‘ಎಲ್ ನಿನೊ’ ಎಂದರೆ “ಬಾಲ ಯೇಸು” (Little Boy / Christ Child) ಎಂದರ್ಥ. ಸಾಮಾನ್ಯವಾಗಿ ಕ್ರಿಸ್ಮಸ್ ಹಬ್ಬದ ಸಮಯದಲ್ಲಿ (ಡಿಸೆಂಬರ್) ದಕ್ಷಿಣ ಅಮೆರಿಕಾದ ಪೆರು ದೇಶದ ಕರಾವಳಿಯಲ್ಲಿ ಈ ಬದಲಾವಣೆ ಕಾಣಿಸಿಕೊಳ್ಳುವುದರಿಂದ ಇದಕ್ಕೆ ಈ ಹೆಸರು ಬಂದಿದೆ.

ಸಾಮಾನ್ಯ ದಿನಗಳಲ್ಲಿ, ಪೆಸಿಫಿಕ್ ಮಹಾಸಾಗರದ ಮೇಲೆ ಬೀಸುವ ಬಲವಾದ ಮಾರುತಗಳು (Trade Winds) ಸಮುದ್ರದ ಮೇಲ್ಮೈಯಲ್ಲಿರುವ ಬಿಸಿ ನೀರನ್ನು ಏಷ್ಯಾದ ಕಡೆಗೆ (ಪಶ್ಚಿಮಕ್ಕೆ) ತಳ್ಳುತ್ತವೆ. ಇದರಿಂದಾಗಿ ಇಂಡೋನೇಷ್ಯಾ ಮತ್ತು ಭಾರತದ ಸುತ್ತಮುತ್ತಲಿನ ಸಮುದ್ರದ ನೀರು ಬಿಸಿಯಾಗಿ ಇಲ್ಲಿ ಉತ್ತಮ ಮಳೆಯಾಗುತ್ತದೆ.

ಆದರೆ ಎಲ್ ನಿನೊ ವರ್ಷದಲ್ಲಿ, ಈ ಮಾರುತಗಳು ದುರ್ಬಲಗೊಳ್ಳುತ್ತವೆ. ಆಗ ಏಷ್ಯಾದ ಕಡೆಗೆ ಹೋಗಬೇಕಾದ ಬಿಸಿ ನೀರು ದಕ್ಷಿಣ ಅಮೆರಿಕಾದ (ಪೆರು ಮತ್ತು ಈಕ್ವೆಡಾರ್) ಕರಾವಳಿಯಲ್ಲೇ ಉಳಿದುಕೊಳ್ಳುತ್ತದೆ. ಸಮುದ್ರದ ಬಿಸಿನೀರು ಇರುವ ಜಾಗ ಬದಲಾಗುವುದರಿಂದ, ಜಾಗತಿಕವಾಗಿ ಮಳೆ ತರುವ ಮೋಡಗಳ ಚಲನೆ ಮತ್ತು ಹವಾಮಾನದ ಚಕ್ರವೇ ತಲೆಕೆಳಗಾಗುತ್ತದೆ.

ಇದನ್ನೂ ಓದಿ: ಸಿಮ್ ಸ್ವಾಪಿಂಗ್ ಹುಷಾರ್..! ದಿಢೀರನೇ ಸಿಮ್ ಡೀಆ್ಯಕ್ಟಿವೇಟ್ ಆಯ್ತು, ನೋಡನೋಡುತ್ತಿದ್ದಂತೆ ಬ್ಯಾಂಕ್ ಖಾತೆಯಿಂದ ಹಣ ಮಾಯ ಆಯ್ತು

ಎಲ್ ನಿನೊ ಈ ಬಾರಿ ಭಾರತದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಮುಂಗಾರು ಮಳೆ ಕ್ಷೀಣಿಸುತ್ತದೆ. ಉಷ್ಣಗಾಳಿ ತೀವ್ರವಾಗುತ್ತದೆ. ಈ ಹವಾಮಾನ ವೈಪರೀತ್ಯಗಳಿಂದ ಆರ್ಥಿಕ ಚಟುವಟಿಕೆಗಳಿಗೆ ಧಕ್ಕೆ ಆಗುತ್ತದೆ. ಅದು ಆರ್ಥಿಕ ಬೆಳವಣಿಗೆಗೆ ಹಿನ್ನಡೆ ತರುತ್ತದೆ. ಜಸ್ಟಿನ್​ ಮ್ಯಾನ್​ಕಿನ್ ಪ್ರಕಾರ ಭಾರತದ ಆರ್ಥಿಕತೆಗೆ ಇದು ಉಂಟು ಮಾಡುವ ನಷ್ಟ 1 ಟ್ರಿಲಿಯನ್ ಡಾಲರ್ ಇರಬಹುದು.

ಭಾರತದ ಮೇಲೆ ಆಗುವ ಪ್ರಮುಖ ಪರಿಣಾಮಗಳು

  • ಕೃಷಿ ವಲಯಕ್ಕೆ ಭಾರಿ ಹಾನಿ (Agricultural Distress): ಭಾರತದ ಕೃಷಿ ವಲಯವು ಇಂದಿಗೂ ಮುಂಗಾರು ಮಳೆಯನ್ನೇ ಹೆಚ್ಚಾಗಿ ಅವಲಂಬಿಸಿದೆ. ಮಳೆ ಕೈಕೊಟ್ಟರೆ ಆಹಾರ ಧಾನ್ಯಗಳು, ಬೇಳೆಕಾಳುಗಳು ಮತ್ತು ಎಣ್ಣೆಕಾಳುಗಳ ಉತ್ಪಾದನೆ ಕುಂಠಿತಗೊಳ್ಳುತ್ತದೆ. ಇದು ರೈತರ ಆದಾಯವನ್ನು ಕಸಿದುಕೊಳ್ಳುವುದಲ್ಲದೆ ಗ್ರಾಮೀಣ ಆರ್ಥಿಕತೆಯನ್ನು ನುಜ್ಜುಗುಜ್ಜು ಮಾಡುತ್ತದೆ.
  • ಆಹಾರ ಹಣದುಬ್ಬರ (Food Inflation): ಬೆಳೆಗಳ ಇಳುವರಿ ಕಡಿಮೆಯಾದಾಗ ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳ ಕೊರತೆ ಉಂಟಾಗಿ, ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರುತ್ತದೆ. ಇದು ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಲಿದ್ದು, ಹಣದುಬ್ಬರ ನಿಯಂತ್ರಿಸಲು ರಿಸರ್ವ್ ಬ್ಯಾಂಕ್ (RBI) ಬಡ್ಡಿ ದರಗಳನ್ನು ಹೆಚ್ಚಿಸಬೇಕಾದ ಅನಿವಾರ್ಯತೆ ಬರಬಹುದು.
  • ನೀರಿನ ಅಭಾವ ಮತ್ತು ವಿದ್ಯುತ್ ಕೊರತೆ: ಮಳೆ ಕೊರತೆಯಿಂದ ಜಲಾಶಯಗಳು ಮತ್ತು ಅಂತರ್ಜಲ ಮಟ್ಟ ಕುಸಿಯುತ್ತದೆ. ಇದರಿಂದ ಕುಡಿಯುವ ನೀರಿಗೆ ತತ್ವಾರ ಉಂಟಾಗುವುದರ ಜೊತೆಗೆ ಜಲವಿದ್ಯುತ್ (Hydroelectric power) ಉತ್ಪಾದನೆ ಕಡಿಮೆಯಾಗಿ ದೇಶದಲ್ಲಿ ವಿದ್ಯುತ್ ಕೊರತೆ ಎದುರಾಗಬಹುದು. ಅತಿಯಾದ ಸೆಕೆಯಿಂದಾಗಿ ಎಸಿ ಮತ್ತು ಫ್ಯಾನ್‌ಗಳ ಬಳಕೆ ಹೆಚ್ಚಿ ಪವರ್ ಗ್ರಿಡ್‌ಗಳ ಮೇಲೆ ಒತ್ತಡ ಬೀಳುತ್ತದೆ.
  • ಜಾಗತಿಕ ಸರಬರಾಜು ಜಾಲದ ಮೇಲೆ ಪ್ರಭಾವ: ಭಾರತವು ವಿಶ್ವದಲ್ಲೇ ಅಕ್ಕಿ, ಸಕ್ಕರೆ ಸೇರಿದಂತೆ ಹಲವು ಕೃಷಿ ಉತ್ಪನ್ನಗಳ ಪ್ರಮುಖ ರಫ್ತುದಾರ ದೇಶವಾಗಿದೆ. ಆಂತರಿಕ ಕೊರತೆಯಿಂದಾಗಿ ಭಾರತವು ರಫ್ತು ನಿಷೇಧಿಸಿದರೆ ಜಾಗತಿಕವಾಗಿ ಆಹಾರ ಧಾನ್ಯಗಳ ಬೆಲೆ ಏರಿಕೆಯಾಗಿ ಜಾಗತಿಕ ಮಾರುಕಟ್ಟೆಗೂ ನಷ್ಟವಾಗುತ್ತದೆ.

ಇದನ್ನೂ ಓದಿ: ಆರ್ಥಿಕತೆಯಲ್ಲಿ ಭರ್ಜರಿ ಕ್ಯಾಷ್ ಇದ್ದರೂ ಎಟಿಎಂಗಳಲ್ಲಿ ಇಲ್ಲ ಹೆಚ್ಚು ನೋಟು; ಕರ್ನಾಟಕದಲ್ಲೇ ಅತಿಹೆಚ್ಚು ಕೊರತೆ; ಯಾಕೆ ಈ ಕಥೆ?

ಈ ಭೀಕರ ಆರ್ಥಿಕ ರಿಸ್ಕ್ ಎದುರಿಸಲು ಭಾರತ ಸರ್ಕಾರ ಈಗಾಗಲೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಬೇಳೆಕಾಳುಗಳ ಬಫರ್ ಸ್ಟಾಕ್ (ದಾಸ್ತಾನು) ಅನ್ನು ದಾಖಲೆ ಮಟ್ಟದ 43 ಲಕ್ಷ ಟನ್‌ಗಳಿಗೆ ಹೆಚ್ಚಿಸಿದೆ. ಇದು ಎಲ್ ನಿನೊದ ಆರಂಭಿಕ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾಗದಂತೆ ತಡೆಯಲು ಸಹಕಾರಿಯಾಗಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ENG vs NZ: 140 ರನ್​ಗೆ ಆಂಗ್ಲರನ್ನು ಕಟ್ಟಿಹಾಕಿ ಅದಕ್ಕಿಂತ ಕಡಿಮೆ ಮೊತ್ತಕ್ಕೆ ಆಲೌಟ್ ಆದ ಕಿವೀಸ್ – Kannada News

ಪ್ರಸ್ತುತ ಇಂಗ್ಲೆಂಡ್‌ ಹಾಗೂ ನ್ಯೂಜಿಲೆಂಡ್ (Eng vs NZ) ನಡುವೆ ಮೂರು ಪಂದ್ಯಗಳ ಟೆಸ್ಟ್ ಸರಣಿ ಇಂಗ್ಲೆಂಡ್​ನಲ್ಲಿ ನಡೆಯುತ್ತಿದೆ. ಸರಣಿಯ ಮೊದಲ ಪಂದ್ಯ ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ (Lord’s Test) ನಡೆಯುತ್ತಿದ್ದು, ಈ ಪಂದ್ಯದಲ್ಲಿ ಇಲ್ಲಿಯವರೆಗೆ ಬೌಲರ್‌ಗಳೇ ಪಾರುಪತ್ಯ ಸಾಧಿಸಿದ್ದಾರೆ. ಪಂದ್ಯದ ಮೊದಲ ದಿನದಂದು ಎರಡೂ ತಂಡಗಳ ಬ್ಯಾಟ್ಸ್‌ಮನ್‌ಗಳಿಗೆ ನೆಲಕಚ್ಚಿ ಆಡಲು ಸಾಧ್ಯವಾಗಲಿಲ್ಲ. ಪರಿಣಾಮವಾಗಿ ದಿನದ ಆಟದ ಅಂತ್ಯದ ವೇಳೆಗೆ ಒಟ್ಟು 16 ವಿಕೆಟ್‌ಗಳು ಬಿದ್ದಿದ್ದವು. ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಕೇವಲ 140 ರನ್‌ಗಳಿಗೆ ಆಲೌಟ್ ಆಯಿತು. ಇತ್ತ ನ್ಯೂಜಿಲೆಂಡ್ ಕೂಡ ಎರಡನೇ ದಿನದಾಟದ ಮೊದಲ ಸೆಷನ್​ನಲ್ಲಿಯೇ 113 ರನ್​ಗಳಿಗೆ ತನ್ನ ಮೊದಲ ಇನ್ನಿಂಗ್ಸ್ ಮುಗಿಸಿತು.

7 ಆಟಗಾರರು ಒಂದಂಕಿಗೆ ಔಟ್

ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡವನ್ನು 140 ರನ್​ಗಳಿಗೆ ಆಲೌಟ್ ಮಾಡಿ ಮೊದಲ ಇನ್ನಿಂಗ್ಸ್ ಆರಂಭಿಸಿದ ಕಿವೀಸ್​ ತಂಡವನ್ನು ಇಂಗ್ಲೆಂಡ್ ವೇಗಿ ಆಲಿ ರಾಬಿನ್ಸನ್ ಇನ್ನಿಲ್ಲದಂತೆ ಕಾಡಿದರು. ಆಲಿ ರಾಬಿನ್ಸನ್ ಆರಂಭದಲ್ಲೇ ಡೆವೊನ್ ಕಾನ್ವೇ, ಕೇನ್ ವಿಲಿಯಮ್ಸನ್ ಮತ್ತು ರಚಿನ್ ರವೀಂದ್ರರನ್ನು ಕೇವಲ ನಾಲ್ಕು ಎಸೆತಗಳ ಅಂತರದಲ್ಲಿ ಔಟ್ ಮಾಡಿದರು. ಈ ವಿಕೆಟ್​ಗಳ ಪತನದ ನಂತರ ನ್ಯೂಜಿಲೆಂಡ್ ತಂಡದ ಇನ್ನಿಂಗ್ಸ್ ಸುಧಾರಿಸಲಿಲ್ಲ. ಕಿವೀಸ್ ಪರ ಕೈಲ್ ಜೇಮಿಸನ್ ಅತ್ಯಧಿಕ 38 ರನ್​ಗಳ ಇನ್ನಿಂಗ್ಸ್ ಆಡಿದರೆ, ಗ್ಲೆನ್ ಫಿಲಿಫ್ಸ್ 34 ರನ್​ಗಳ ಕಾಣಿಕೆ ನೀಡಿದರು. ಇವರಿಬ್ಬರನ್ನು ಹೊರತುಪಡಿಸಿ ಉಳಿದ ಆಟಗಾರರಿಗೆ ಹೆಚ್ಚು ಹೊತ್ತು ಮೈದಾನದಲ್ಲಿ ನಿಲ್ಲಲು ಸಾಧ್ಯವಾಗಲಿಲ್ಲ. ಅದರಲ್ಲೂ ತಂಡದ 7 ಆಟಗಾರರು ಕೇವಲ ಒಂದಂಕಿಗೆ ವಿಕೆಟ್ ಒಪ್ಪಿಸಿದರು.

ಇತ್ತ ಕಿವೀಸ್ ಬ್ಯಾಟಿಂಗ್‌ ಬೆನ್ನೇಲುಬು ಮುರಿದ ರಾಬಿನ್ಸನ್, ಈ ಇನ್ನಿಂಗ್ಸ್‌ನಲ್ಲಿ ಒಟ್ಟು 10.5 ಓವರ್‌ಗಳನ್ನು ಬೌಲ್ ಮಾಡಿ 39 ರನ್‌ಗಳಿಗೆ 5 ವಿಕೆಟ್‌ಗಳನ್ನು ಪಡೆದರು. ಪರಿಣಾಮವಾಗಿ, ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 113 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್​ನಲ್ಲಿ 27 ರನ್‌ಗಳ ಮುನ್ನಡೆ ಸಾಧಿಸಿತು. ಓಲಿ ರಾಬಿನ್ಸನ್ ಜೊತೆಗೆ, ಜೋಶ್ ಟಾಂಗ್ ಕೂಡ ಅದ್ಭುತ ಬೌಲಿಂಗ್ ಮಾಡಿ ಮೂರು ವಿಕೆಟ್‌ಗಳನ್ನು ಪಡೆದರು. ಗಸ್ ಅಟ್ಕಿನ್ಸನ್ ಕೂಡ ಎರಡು ವಿಕೆಟ್‌ಗಳನ್ನು ಪಡೆದರು.

ವಿಶ್ವ ಕ್ರಿಕೆಟ್​ನಲ್ಲಿ ಈಗ ವೈಭವ್​ದೇ ಮಾತು; ಟೆಸ್ಟ್​ಗೆ ಆಯ್ಕೆ ಮಾಡಿ ಎಂದ ದಿಗ್ಗಜ ಕ್ರಿಕೆಟಿಗರು

5 ವಿಕೆಟ್ ಪಡೆದ ಜೇಮಿಸನ್

ಇದಕ್ಕೂ ಮೊದಲು, ಇಂಗ್ಲೆಂಡ್ ತಂಡದ ಮೊದಲ ಇನ್ನಿಂಗ್ಸ್‌ನಲ್ಲಿ ಕೈಲ್ ಜೇಮಿಸನ್ ಮಿಂಚಿದರು. ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿದ ಕಿವೀಸ್ ವೇಗಿ ಕೈಲ್ ಜೇಮಿಸನ್ ಇಂಗ್ಲಿಷ್ ಬ್ಯಾಟ್ಸ್‌ಮನ್‌ಗಳಿಗೆ ನೆಲೆ ನಿಲ್ಲಲು ಯಾವುದೇ ಅವಕಾಶ ನೀಡಲಿಲ್ಲ. ಜೇಮಿಸನ್ ಅದ್ಭುತ ಬೌಲಿಂಗ್ ಮಾಡಿ 62 ರನ್‌ಗಳಿಗೆ 5 ವಿಕೆಟ್‌ಗಳನ್ನು ಕಬಳಿಸಿದರು. ಆದಾಗ್ಯೂ ಹ್ಯಾರಿ ಬ್ರೂಕ್ ಅವರ 56 ರನ್​ಗಳ ಇನ್ನಿಂಗ್ಸ್​ನಿಂದಾಗಿ ಇಂಗ್ಲೆಂಡ್ 140 ರನ್ ಕಲೆಹಾಕಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾಮಲಿಂಗಾರೆಡ್ಡಿಗೆ ಮಾತು ಕೊಟ್ಟಿದ್ದು ನಿಜ: ಖಾತೆ ಹಂಚಿಕೆ ಒಳ ರಹಸ್ಯ ಬಿಚ್ಚಿಟ್ಟ ಡಿಕೆ ಶಿವಕುಮಾರ್ – Kannada News

ಬೆಂಗಳೂರು, (ಜೂನ್ 05):ಸಿಎಂ ಡಿಕೆ ಶಿವಕುಮಾರ್ (DK Shivakumar) ಅವರೇ ಬೆಂಗಳೂರು ನಗರಾಭಿವೃದ್ಧಿ ಖಾತೆ ನೀಡುವುದಾಗಿ ಸಚಿವ ರಾಮಲಿಂಗಾರೆಡ್ಡಿಗೆ (Ramalinga Reddy) ಮಾತು ಕೊಟ್ಟಿದ್ದರು. ಆದ್ರೆ, ಕೊನೆಕ್ಷಣದಲ್ಲಿ ಬೆಂಗಳೂರು ನಗರಾಭಿವೃದ್ಧಿ ಖಾತೆ (Bengaluru Development Portfolio)  ಮತ್ತೋರ್ವ ಪ್ರಭಾವಿ ನಾಯಕ ಕೃಷ್ಣಭೈರೇಗೌಡ ಪಾಲಾಗಿದೆ. ಇದರಿಂದ ಅಸಮಾಧಾನಗೊಂಡ ಪ್ರಭಾವಿ ನಾಯಕ, ಹಿರಿಯ ಶಾಸಕ ಆಗಿರೋ ರಾಮಲಿಂಗಾರೆಡ್ಡಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬಳಿಕ ಸುದ್ದಿಗೋಷ್ಠಿ ನಡೆಸಿದ ರಾಮಲಿಂಗಾರೆಡ್ಡಿ, ಡಿಕೆಶಿ ಕೊಟ್ಟ ಮಾತನ್ನೇ ಉಲ್ಲೇಖಿಸಿದ್ದು, ಅವತ್ತೇ ನನಗೆ ಬೆಂಗಳೂರು ನಗರಾಭಿವೃದ್ಧಿ ಖಾತೆ ನಿನಗೆ ಕೊಡುತ್ತೇನೆ ಎಂದು ಭರವಸೆ ಕೊಟ್ಟಿದ್ರು. ಆದ್ರೆ ಇದೀಗ ನೋಡಿದ್ರೆ ಜಲಸಂಪನ್ಮೂಲ ಕೊಟ್ಟಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದಕ್ಕೆ ಇದೀಗ ಸ್ವತಃ ಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು, ರಾಮಲಿಂಗಾರೆಡ್ಡಿಗೆ ನಾವು ಮಾತು ಕೊಟ್ಟಿದ್ದು ನಿಜ. ನಾನು ನನ್ನ ತಮ್ಮ ಹೋಗಿ ಮಾತು ಕೊಟ್ಟಿದ್ದೇವು ಎಂದು ಒಪ್ಪಿಕೊಂಡಿದ್ದಾರೆ. ಅಲ್ಲದೇ ಖಾತೆ ಕೈತಪ್ಪಿರುವ ಬಗ್ಗೆಯೂ ಬಿಚ್ಚಿಟ್ಟಿದ್ದಾರೆ.

ಸಿಎಂ ಡಿಕೆ ಶಿವಕುಮಾರ್ ಹೇಳಿದ್ದೇನು?

ರಾಮಲಿಂಗಾರೆಡ್ಡಿ ರಾಜೀನಾಮೆ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಡಿಕೆ ಶಿವಕುಮಾರ್, ನಾನು ನನ್ನ ತಮ್ಮ ಹೋಗಿ ಮಾತನಾಡಿದ್ದು ನಿಜ. ಬೆಂಗಳೂರು ಅಭಿವೃದ್ಧಿ ಖಾತೆ ಕೊಡಿಸುತ್ತೇವೆ ಎಂದು ಹೇಳಿದ್ವಿ. ಆದರೆ ಹೈಕಮಾಂಡ್ ನಿರ್ಧಾರ ಏನು ಮಾಡೋದು ಎಂದು ತಮ್ಮ ಅಸಹಾಯಕತೆಯನ್ನು ಹೊರಹಾಕಿದ್ದಾರೆ. ಈ ಮೂಲಕ ನಗರಾಭಿವೃದ್ಧಿ ಖಾತೆಯನ್ನು ಕೃಷ್ಣಭೈರೇಗೌಡ ಅವರಿಗೆ ಕೊಟ್ಟಿರುವುದು ಹೈಕಮಾಂಡ್ ಎಂದು ಪರೋಕ್ಷವಾಗಿ ಹೇಳಿದ್ದಾರೆ.

ಇದನ್ನೂ ಓದಿ: ರಾಮಲಿಂಗಾರೆಡ್ಡಿ ರಾಜೀನಾಮೆ: ಬೆಂಗಳೂರು ನಗರಾಭಿವೃದ್ಧಿ ಖಾತೆಗೆ ಯಾಕಿಷ್ಟು ಡಿಮ್ಯಾಂಡ್?

ರಾಮಲಿಂಗಾರೆಡ್ಡಿಯವರು ಹೊರಗಡೆ ಇದ್ದಾರೆ. ಖುದ್ದಾಗಿ ನಾನೇ ಭೇಟಿಯಾಗಿ ಮಾತನಾಡ್ತೇನೆ. ಮುನಿಯಪ್ಪ ಜೊತೆ ಮಾತನಾಡಿದ್ದು ಆಯ್ತು, ರಾಹುಲ್‌ಗಾಂಧಿ ಹೇಳಿದ್ದು ಆಯ್ತು. ಮುನಿಯಪ್ಪ ಈಗ ಖುಷಿಯಾಗಿದ್ದಾರೆ.
ಯಾವ ಖಾತೆ ಕೊಟ್ಟರೂ ಕೆಲಸ ಮಾಡ್ತೀನಿ ಅಂದಿದ್ಧಾರೆ ಎಂದು ಹೇಳಿದರು.

ಕೇಳದೇ ಕೃಷ್ಣಭೈರೇಗೌಡ ಸಿಕ್ತಾ ಪ್ರಬಲ ಖಾತೆ?

ಸಚಿವರಾದ ಬಳಿಕ ಮಾಧ್ಯಮಳಿಗೆ ಪ್ರತಿಕ್ರಿಯಿಸಿದ್ದ ಕೃಷ್ಣಭೈರೇಗೌಡ, ಕಂದಾಯ ಇಲಾಖೆಯಲ್ಲಿ ಹಲವು ಕೆಲಸಗಳು ಅರ್ಧಕ್ಕೆ ನಿಂತಿವೆ. ಹೀಗಾಗಿ ಕಂದಾಯ ಇಲಾಖೆ ಕೊಟ್ಟರೇ ಅವುಗಳನ್ನು ಪೂರ್ಣಗೊಳಿಸುವ ಗುರಿ ಇದೆ ಎಂದಿದ್ದರು. ಹೀಗೆ ಅವರೇ ಕಂದಾಯ ಕೊಟ್ರೆ ಸಾಕು ಎಂದಿದ್ದಾಗ ಏಕಾಏಕಿ ಪ್ರಬಲ ಬೆಂಗಳೂರು ನಗರಾಭಿವೃದ್ಧಿ ಖಾತೆ ಸಿಕ್ಕಿದ್ಹೇಗೆ ಎನ್ನುವುದು ನಿಗೂಢವಾಗಿದೆ. ಮೂಲಗಳ ಪ್ರಕಾರ, ಕೃಷ್ಣಭೈರೇಗೌಡ ಅವರು ಸೈಲೆಂಟ್ ಆಗಿದ್ದರೂ ಸಹ ಅವರು ಹೈಕಮಾಂಡ್ ಮಟ್ಟದಲ್ಲಿ ತಮ್ಮದೇ ಪ್ರಭಾವ ಹೊಂದಿದ್ದಾರೆ. ಅವರ ಕೆಲಸ ಕಾರ್ಯಗಳು, ಇಲಾಖೆಯ ಕಾರ್ಯವೈಖರಿಯಿಂದ ಹೈಕಮಾಂಡ್ ಕೃಷ್ಣಭೈರೇಗೌಡ ಅವರನ್ನ ಮೆಚ್ಚಿಕೊಂಡಿದೆ. ಹೀಗಾಗಿ ಕೃಷ್ಣಭೈರೇಗೌಡ ಅವರಿಗೆ ಹೈಕಮಾಂಡ್ ಬೆಂಗಳೂರು ನಗರಾಭಿವೃದ್ಧಿ ಖಾತೆ ನೀಡಿದೆ ಎಂದು ಹೇಳಲಾಗುತ್ತಿದೆ.

ಯಾರ ಸಂಪರ್ಕಕ್ಕೆ ಸಿಗದ ರಾಮಲಿಂಗಾರೆಡ್ಡಿ

ರಾಹುಲ್ ಗಾಂಧಿ, ಸುರ್ಜೆವಾಲ, ವೇಣುಗೋಲಾಲ್, ಮಲ್ಲಿಕಾರ್ಜುನ ಖರ್ಗೆ ಅವರು ಬೆಂಗಳೂರಿಗೆ ಬಂದಿದ್ದು, ಕರೆದು ಮನವೊಲಿಸುವ ಯತ್ನ  ಮಾಡುತ್ತಾರೆ ಎನ್ನುವ ಸುದ್ದಿ ತಿಳಿಯುತ್ತಿದ್ದಂತೆಯೇ ರಾಮಲಿಂಗಾರೆಡ್ಡಿ ಫೋನ್ ಆಫ್ ಮಾಡಿಕೊಂಡು ಅಜ್ಞಾತ ಸ್ಥಳಕ್ಕೆ ಹೋಗಿದ್ದಾರೆ. ಮೂಲಕಗಳ ಪ್ರಕಾರ ಬೆಂಗಳೂರು ಬಿಟ್ಟು ತಮಿಳುನಾಡು ಕಡೆ ಹೋಗಿದ್ದಾರೆ ಎಂದು ತಿಳಿದುಬಂದಿದೆ.

ಒಟ್ಟಿನಲ್ಲಿ ಕೊಟ್ಟ ಮಾತಿನಂತೆ ಖಾತೆ ಕೊಟ್ಟಿಲ್ಲವೆಂದು ಮುನಿಸಿಕೊಂಡಿರುವ ರಾಮಲಿಂಗಾರೆಡ್ಡಿ ಅವರನ್ನು ಸಿಎಂ ಸಮಾಧಾನಪಡಿಸುವ ಮಾತುಗಳನ್ನಾಡಿದ್ದಾರೆ. ಆದ್ರೆ, ರಾಮಲಿಂಗಾರೆಡ್ಡಿ ಮನವೊಲಿಕೆಯಾಗುತ್ತಾರಾ ಎನ್ನುವುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ದೆಹಲಿ ಹೋಟೆಲ್ ದುರಂತ; ಅಕ್ರಮ ಬಾಂಗ್ಲಾದೇಶಿಗರಿಗೆ ನಕಲಿ ಭಾರತೀಯ ದಾಖಲೆ ನೀಡುತ್ತಿದ್ದ ಮಾಲೀಕ! – Kannada News

ನವದೆಹಲಿ, ಜೂನ್ 5: ದೆಹಲಿಯ ಮಾಳವೀಯ ನಗರದ ‘ಫ್ಲರಿಶ್ ಸ್ಟೇ’ ಬೆಡ್ ಆ್ಯಂಡ್ ಬ್ರೇಕ್‌ಫಾಸ್ಟ್ (BnB) ಹೋಟೆಲ್‌ನಲ್ಲಿ ಬುಧವಾರ ನಡೆದ ಭೀಕರ ಅಗ್ನಿ ದುರಂತದಲ್ಲಿ (Delhi Fire Accident) 21 ಜನರು ಸಜೀವ ದಹನವಾಗಿದ್ದರು. ಈ ಹೋಟೆಲ್‌ನ ಮಾಲೀಕ 60 ವರ್ಷದ ಲವ್ಕೇಶ್ ಬಜಾಜ್ ಈ ಹಿಂದೆಯೂ ಅನೇಕ ಅಪರಾಧಗಳನ್ನು ಎಸಗಿದ್ದ ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಬಾಂಗ್ಲಾದೇಶದ ಪ್ರಜೆಗಳಿಗೆ ಪಾಸ್‌ಪೋರ್ಟ್ ಹಾಗೂ ಆಧಾರ್ ಕಾರ್ಡ್ ಸೇರಿದಂತೆ ನಕಲಿ ಭಾರತೀಯ ದಾಖಲೆಗಳನ್ನು ಒದಗಿಸಿ, ಅವರು ದೆಹಲಿಯಲ್ಲಿ ಕಾನೂನುಬಾಹಿರವಾಗಿ ನೆಲೆಸಲು ಸಹಾಯ ಮಾಡಿದ ಆರೋಪದ ಮೇಲೆ ಈತನನ್ನು 2025ರಲ್ಲೇ ದೆಹಲಿ ಪೊಲೀಸರು ಬಂಧಿಸಿದ್ದರು.

2025ರ ಜನವರಿಯಲ್ಲಿ ಬಾಂಗ್ಲಾದೇಶದ ಕುಟುಂಬವೊಂದು ನಕಲಿ ದಾಖಲೆಗಳನ್ನು ಬಳಸಿಕೊಂಡು ಸೆಂಟ್ರಲ್ ದೆಹಲಿಯ ಪಹಡ್‌ಗಂಜ್ ಪ್ರದೇಶದಲ್ಲಿ ವಾಸಿಸುತ್ತಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ತಕ್ಷಣ ದಾಳಿ ನಡೆಸಿದ ಪೊಲೀಸರು ಸ್ವೀಟಿ ಸರ್ಕಾರ್ ಮತ್ತು ಆಕೆಯ ಮಗಳು ಪುಷ್ಪೋ ಸರ್ಕಾರ್ ಎಂಬ ಇಬ್ಬರು ಮಹಿಳೆಯರನ್ನು ವಶಕ್ಕೆ ಪಡೆದಿದ್ದರು. ಅವರ ಬಳಿ ಯಾವುದೇ ಭಾರತೀಯ ಗುರುತಿನ ಚೀಟಿಗಳು ಇರಲಿಲ್ಲ.

ಇದನ್ನೂ ಓದಿ: ದೆಹಲಿ ಬೆಂಕಿ ದುರಂತ; ಹೋಟೆಲ್ ಮಾಲೀಕ ಬಂಧನ, ನ್ಯಾಯಾಂಗ ತನಿಖೆಗೆ ಆದೇಶ

ಆದರೆ, ಅವರ ಮನೆಯನ್ನು ಶೋಧಿಸಿದಾಗ 2 ಬಾಂಗ್ಲಾದೇಶಿ ಪಾಸ್‌ಪೋರ್ಟ್‌ಗಳು, 1 ನಕಲಿ ಭಾರತೀಯ ಪಾಸ್‌ಪೋರ್ಟ್, ಹಲವು ಆಧಾರ್ ಕಾರ್ಡ್‌ಗಳು ಮತ್ತು ಬ್ಯಾಂಕ್ ದಾಖಲೆಗಳು ಪತ್ತೆಯಾಗಿದ್ದವು. ಆಶ್ಚರ್ಯದ ಸಂಗತಿಯೆಂದರೆ, ಎಲ್ಲಾ ದಾಖಲೆಗಳಲ್ಲಿದ್ದ ಹೆಸರು ಮತ್ತು ವಿಳಾಸಗಳು ಬೇರೆಯಾಗಿದ್ದರೂ, ಫೋಟೋ ಮಾತ್ರ ಇವರಿಬ್ಬರದೇ ಆಗಿತ್ತು.

ಸ್ವೀಟಿ ಸರ್ಕಾರ್ ಹೊಂದಿದ್ದ ನಕಲಿ ಭಾರತೀಯ ಪಾಸ್‌ಪೋರ್ಟ್‌ನಲ್ಲಿ ದೆಹಲಿಯ ಛತ್ತರ್‌ಪುರ ಎನ್‌ಕ್ಲೇವ್‌ನ ವಿಳಾಸವಿತ್ತು. ಪೊಲೀಸರು ಈ ವಿಳಾಸವನ್ನು ಪರಿಶೀಲಿಸಿದಾಗ, ಅದು ಸದ್ಯ ದೆಹಲಿಯ ಹೋಟೆಲ್ ದುರಂತದ ಆರೋಪಿಯಾಗಿರುವ ಲವ್ಕೇಶ್ ಬಜಾಜ್‌ಗೆ ಸೇರಿದ್ದು ಎಂದು ತಿಳಿದುಬಂದಿತ್ತು. ವಿಚಾರಣೆ ವೇಳೆ, ಹಣದ ಆಸೆಗಾಗಿ ಬಾಂಗ್ಲಾದೇಶಿ ಕುಟುಂಬಕ್ಕೆ ಭಾರತೀಯ ದಾಖಲೆಗಳನ್ನು ಪಡೆಯಲು ತಮ್ನ ವಸತಿ ವಿಳಾಸವನ್ನು ಬಳಸಿಕೊಳ್ಳಲು ಅನುಮತಿ ನೀಡಿದ್ದಾಗಿ ಬಜಾಜ್ ಒಪ್ಪಿಕೊಂಡಿದ್ದ. ಆಗ ಪೊಲೀಸರು ಮೂವರನ್ನು ಬಂಧಿಸಿ ತಿಹಾರ್ ಜೈಲಿಗಟ್ಟಿದ್ದರು. ಸುಮಾರು 15 ದಿನಗಳ ನಂತರ ಬಜಾಜ್ ಜಾಮೀನಿನ ಮೇಲೆ ಹೊರಬಂದಿದ್ದ ಮತ್ತು ಈ ಪ್ರಕರಣ ಈಗಲೂ ನ್ಯಾಯಾಲಯದಲ್ಲಿದೆ.

ಇದನ್ನೂ ಓದಿ: ದೆಹಲಿಯ ಬೆಂಕಿ ದುರಂತದಲ್ಲಿ ಬಾಂಗ್ಲಾ, ಅಫ್ಘಾನ್, ಆಫ್ರಿಕಾದ ಪ್ರವಾಸಿಗರೂ ಸಾವು; ಹೋಟೆಲ್ ಮಾಲೀಕ ಪರಾರಿ

ಮೊನ್ನೆ ನಡೆದ 12 ವಿದೇಶಿಗರು ಸೇರಿದಂತೆ 21 ಜನರನ್ನು ಬಲಿಪಡೆದ ಮಾಳವೀಯ ನಗರದ ಹೋಟೆಲ್ ಅಗ್ನಿ ದುರಂತದ ಬಳಿಕ ಲವ್ಕೇಶ್ ಬಜಾಜ್ ಮತ್ತೆ ಜೈಲು ಪಾಲಾಗಿದ್ದಾನೆ. ಬುಧವಾರ ರಾತ್ರಿ ನಡೆದ ವಿಚಾರಣೆಯಲ್ಲಿ ಈತ, “ಹೋಟೆಲ್ ಉರಿಯುತ್ತಿರುವುದನ್ನು ಮತ್ತು ಜನರು ಸಿಲುಕಿಕೊಂಡಿರುವುದನ್ನು ನೋಡಿದರೂ ನಾನು ಸಹಾಯ ಮಾಡಲು ನಿಲ್ಲದೆ, ಭಯದಿಂದ ಅಲ್ಲಿಂದ ಕಾರು ಚಲಾಯಿಸಿಕೊಂಡು ಓಡಿಹೋದೆ” ಎಂದು ಒಪ್ಪಿಕೊಂಡಿದ್ದಾನೆ. ಆತನ ಮಕ್ಕಳೂ ವಿದೇಶದಲ್ಲಿ ನೆಲೆಸಿರುವುದರಿಂದ ಆತ ದೇಶ ಬಿಟ್ಟು ಓಡಿಹೋಗುವ ಮುನ್ಸೂಚನೆ ಅರಿತ ಪೊಲೀಸರು, ಆತನ ಮತ್ತು ಆತನ ಪತ್ನಿಯ ವಿರುದ್ಧ ಲುಕೌಟ್ ನೋಟಿಸ್ (LOC) ಜಾರಿಗೊಳಿಸಿದ್ದರು.

ತನಿಖೆಯ ಪ್ರಕಾರ, ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಈ ಬೆಂಕಿ ಅವಘಡ ಸಂಭವಿಸಿದೆ. ಈ ಹೋಟೆಲ್‌ಗೆ ಯಾವುದೇ ಅಗ್ನಿಶಾಮಕ ಇಲಾಖೆಯ NOC ಇರಲಿಲ್ಲ. ನಿಯಮಗಳ ಪ್ರಕಾರ ಕೇವಲ 6 ರೂಮ್‌ಗಳನ್ನು ನಡೆಸಲು ಮಾತ್ರ ಅನುಮತಿ ಇತ್ತು, ಆದರೆ ಬೇಸ್‌ಮೆಂಟ್ ಸೇರಿದಂತೆ ಒಟ್ಟು 25 ರೂಮ್‌ಗಳನ್ನು ಅಕ್ರಮವಾಗಿ ನಿರ್ಮಿಸಲಾಗಿತ್ತು. ಇಡೀ 5 ಅಂತಸ್ತಿನ ಕಟ್ಟಡಕ್ಕೆ ಕೇವಲ ಒಂದೇ ಪ್ರವೇಶ ಮತ್ತು ನಿರ್ಗಮನ ದ್ವಾರವಿದ್ದಿದ್ದರಿಂದ ಹಾಗೂ ಕಿಟಕಿಗಳನ್ನು ಸಂಪೂರ್ಣವಾಗಿ ಸೀಲ್ ಮಾಡಲಾಗಿದ್ದರಿಂದ ಜನರು ಹೊರಬರಲಾಗದೆ ಸಾವನ್ನಪ್ಪಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಧಿಕಾರ ಕಳೆದುಕೊಂಡ ನಂತರ ಒಬ್ಬಂಟಿಯಾದ ಸಿದ್ದರಾಮಯ್ಯ: ಸಿದ್ದು ಒಂಟಿ ಪಯಣದ ವಿಡಿಯೋ ವೈರಲ್ – Kannada News

ಬೆಂಗಳೂರು, ಜೂ.5: ಕರ್ನಾಟಕ ರಾಜಕಾರಣದ ಅತ್ಯಂತ ಪ್ರಭಾವಿ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದ ಹೊರಾಂಗಣದಲ್ಲಿ ಯಾರು ಇಲ್ಲದೆ ಒಬ್ಬಂಟಿಯಾಗಿ ಓಡಾಡುತ್ತಿರುವ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಸದಾ ಬೆಂಬಲಿಗರು, ಶಾಸಕರು ಹಾಗೂ ಅಭಿಮಾನಿಗಳಿಂದ ಸುತ್ತುವರೆದಿರುತ್ತಿದ್ದ ನಾಯಕನೊಬ್ಬ, ಅಧಿಕಾರ ಕೈತಪ್ಪಿದ ಬಳಿಕ ಹೀಗೆ ಒಂಟಿಯಾಗಿ ಕಾಣಿಸಿಕೊಂಡಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಕುತೂಹಲ ಮತ್ತು ಚರ್ಚೆಗಳನ್ನು ಹುಟ್ಟುಹಾಕಿದೆ. ವಿಧಾನಸೌಧದ ಕಾರಿಡಾರ್ ಹಾಗೂ ಹೊರಾಂಗಣದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಗಂಭೀರ ಆಲೋಚನೆಯಲ್ಲಿ ಮುಳುಗಿ, ಕೈಗಳನ್ನು ಹಿಂದೆ ಕಟ್ಟಿಕೊಂಡು ಒಬ್ಬರೇ ನಡೆದುಕೊಂಡು ಹೋಗುತ್ತಿರುವುದು ವಿಡಿಯೋದಲ್ಲಿದೆ. ಸಾಮಾನ್ಯವಾಗಿ ಮುಖ್ಯಮಂತ್ರಿಯಾಗಿದ್ದಾಗ ಅಥವಾ ಅಧಿಕಾರದಲ್ಲಿದ್ದಾಗ ಅವರ ಹಿಂದೆ ನೂರಾರು ಜನರ ದಂಡೇ ಇರುತ್ತಿತ್ತು. ಆದರೆ, ಪ್ರಸ್ತುತ ರಾಜಕೀಯ ಬದಲಾವಣೆಗಳ ನಂತರ ಅವರು ಈ ರೀತಿ ಒಂಟಿಯಾಗಿ ಓಡಾಡುತ್ತಿರುವುದನ್ನು ಕಂಡು ನೆಟ್ಟಿಗರು “ಅಧಿಕಾರ ಹೋದ ಮೇಲೆ ರಾಜಕಾರಣಿಗಳು ಒಬ್ಬಂಟಿಯಾಗುವುದು ಸಹಜ” ಎಂದು ವಿಶ್ಲೇಷಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಾದ ಎಕ್ಸ್ (ಟ್ವಿಟರ್), ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ಗಳಲ್ಲಿ ಈ ವಿಡಿಯೋ ಶೇರ್ ಆಗುತ್ತಿದ್ದು, ಪರ-ವಿರೋಧದ ಚರ್ಚೆಗಳು ಆರಂಭವಾಗಿವೆ. ಸಿದ್ದರಾಮಯ್ಯ ಅವರ ವಿರೋಧಿಗಳು “ಅಧಿಕಾರ ಕಳೆದುಕೊಂಡ ನಂತರ ಲೀಡರ್ ಒಬ್ಬಂಟಿಯಾಗಿದ್ದಾರೆ” ಎಂದು ಲೇವಡಿ ಮಾಡುತ್ತಿದ್ದರೆ, ಅವರ ಅಭಿಮಾನಿಗಳು “ಅವರು ಒಬ್ಬಂಟಿಯಾಗಿಲ್ಲ, ಅವರ ಹಿಂದೆ ಕೋಟ್ಯಂತರ ಜನರಿದ್ದಾರೆ. ಅವರು ಸದಾ ಜನರ ನಾಯಕ” ಎಂದು ಬೆಂಬಲವಾಗಿ ಕಮೆಂಟ್ ಮಾಡುತ್ತಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗರ್ಭಕೋಶದಿಂದ 8 ಕೆಜಿ ಗಡ್ಡೆ ಹೊರತೆಗೆದ ಸರ್ಕಾರಿ ಆಸ್ಪತ್ರೆ ವೈದ್ಯರು: ಮಹಿಳೆಗೆ ಮರುಜನ್ಮ – Kannada News

ಗಡ್ಡೆ ಹೊರತೆಗೆದ ವೈದ್ಯರುImage Credit source: tv9 kannada

ಉಡುಪಿ, ಜೂನ್​​ 05: ಉಡುಪಿ (udupi) ಜಿಲ್ಲಾ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ವೈದ್ಯರ ತಂಡ ಅಪರೂಪದ ಹಾಗೂ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ 44 ವರ್ಷದ ಮಹಿಳೆಯ ಗರ್ಭಕೋಶದಲ್ಲಿದ್ದ ಸುಮಾರು 8 ಕೆಜಿ ತೂಕದ ಫೈಬ್ರಾಯ್ಡ್ ಗಡ್ಡೆಯನ್ನು ಹೊರತೆಗೆದಿದೆ. ಕಳೆದ ಒಂದು ವರ್ಷದಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಮಹಿಳೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೂ ಗುಣಮುಖವಾಗದೇ ಕೊನೆಗೆ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರ ಸಮಯೋಚಿತ ನಿರ್ಧಾರ ಮಹಿಳೆಗೆ (Woman) ಹೊಸ ಬದುಕು ನೀಡಿದೆ.

ಮುಖ್ಯಾಂಶಗಳು

  • 44 ವರ್ಷದ ಮಹಿಳೆಯ ಗರ್ಭಕೋಶದಲ್ಲಿದ್ದ 8 ಕೆಜಿ ತೂಕದ ಗಡ್ಡೆ ಪತ್ತೆ
  • ಖಾಸಗಿ ಆಸ್ಪತ್ರೆಗಳಲ್ಲಾಗದ ಪವಾಡ ಸರ್ಕಾರಿ ಆಸ್ಪತ್ರೆಯಲ್ಲಿ ಸೂಪರ್ ಸಕ್ಸಸ್!
  • ವೈದ್ಯರ ಸಮಯೋಚಿತ ನಿರ್ಧಾರದಿಂದ ಮಹಿಳೆಗೆ ಹೊಸ ಬದುಕು

ಮಹಿಳೆಯ ಗರ್ಭಕೋಶದಲ್ಲಿ ಗಡ್ಡೆ  

44 ವರ್ಷದ ಮಹಿಳೆ ಕಳೆದ ಒಂದು ವರ್ಷದಿಂದ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಹಲವು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೂ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಂಡಿರಲಿಲ್ಲ. ಬಳಿಕ ಉಡುಪಿ ಜಿಲ್ಲಾ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಾಗಿದ್ದ ವೇಳೆ ವೈದ್ಯರು ಸಮಗ್ರ ತಪಾಸಣೆ ಮಾಡಿದ್ದಾರೆ. ಈ ವೇಳೆ ಮಹಿಳೆಯ ಹೊಟ್ಟೆ ಗರ್ಭಿಣಿಯರ ಹೊಟ್ಟೆಯಂತೆ ಉಬ್ಬಿಕೊಂಡಿರುವುದು ವೈದ್ಯರ ಗಮನಕ್ಕೆ ಬಂದಿದೆ. ತಕ್ಷಣ ಅಲ್ಟ್ರಾಸೌಂಡ್ ಹಾಗೂ ಸಿಟಿ ಸ್ಕ್ಯಾನ್ ಪರೀಕ್ಷೆ ಮಾಡಿದಾಗ ಗರ್ಭಕೋಶದಲ್ಲಿ ದೊಡ್ಡ ಗಾತ್ರದ ಫೈಬ್ರಾಯ್ಡ್ ಗಡ್ಡೆ ಇರುವುದು ಪತ್ತೆಯಾಗಿದೆ.

ಇದನ್ನೂ ಓದಿ: ಇಂದಿರಾಗಾಂಧಿ ಆಸ್ಪತ್ರೆಯ ನಿರ್ಲಕ್ಷ್ಯದಿಂದ ವರ್ಷವಿಡೀ ಬೆಡ್ ಹಿಡಿದಿದ್ದ ಬಾಲಕ; ಖಾಸಗಿ ಆಸ್ಪತ್ರೆಯ ಚಿಕಿತ್ಸೆಯಿಂದ ಗುಣಮುಖ!

ಪ್ರಕರಣದ ಗಂಭೀರತೆಯನ್ನು ಅರಿತ ವೈದ್ಯರ ತಂಡ ಶಸ್ತ್ರಚಿಕಿತ್ಸೆಗೆ ಮುಂದಾಗಿದ್ದು, ಜಿಲ್ಲಾ ಆಸ್ಪತ್ರೆ ಹಾಗೂ ತಾಯಿ-ಮಕ್ಕಳ ಆಸ್ಪತ್ರೆಯ ಜಿಲ್ಲಾ ಸರ್ಜನ್ ಡಾ. ಹೆಚ್. ಅಶೋಕ್ ಅವರ ಸಲಹೆಯಂತೆ ಕ್ರಮಕೈಗೊಳ್ಳಲಾಗಿದೆ. ಸ್ತ್ರೀರೋಗ ತಜ್ಞರಾದ ಡಾ. ಶಶಾಂಕ್ ಕಿಣಿ, ಡಾ. ಜಾಸ್ಮಿನ್‌, ಡಾ. ಕವಿತಾ ಹಾಗೂ ಡಾ. ಅಮೃತಾಂಶ್ ನೇತೃತ್ವದ ವೈದ್ಯರ ತಂಡ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಸುಮಾರು 8 ಕೆಜಿ ತೂಕದ ಫೈಬ್ರಾಯ್ಡ್ ಗಡ್ಡೆಯನ್ನು ಹೊರತೆಗೆದಿದ್ದಾರೆ. ಅರವಳಿಕೆ ತಜ್ಞರಾದ ಡಾ. ಸೂರ್ಯನಾರಾಯಣ ಮತ್ತು ಡಾ. ರಾಜಗೋಪಾಲ್ ಭಂಡಾರಿ ಚಿಕಿತ್ಸೆಗೆ ಸಹಕರಿಸಿದ್ದು, ಶುಶ್ರೂಷಾಧಿಕಾರಿ ರಕ್ಷಿತಾ ಹಾಗೂ ಓಟಿ ಸಹಾಯಕಿ ಸಂಗೀತ ಭಾಗಿಯಾಗಿದ್ದರು.

ವೈದ್ಯ ತಂಡದ ಕಾರ್ಯಕ್ಕೆ ಮೆಚ್ಚುಗೆ

ಸದ್ಯ ಶಸ್ತ್ರಚಿಕಿತ್ಸೆಯ ಬಳಿಕ ಮಹಿಳೆ ಚೇತರಿಸಿಕೊಳ್ಳುತ್ತಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಸರ್ಕಾರಿ ಆಸ್ಪತ್ರೆಯ ವೈದ್ಯರ ತಂಡದ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸರ್ಕಾರಿ ಆಸ್ಪತ್ರೆಗಳ ಮೇಲಿನ ಜನರ ವಿಶ್ವಾಸವನ್ನೂ ಈ ಘಟನೆ ಮತ್ತಷ್ಟು ಹೆಚ್ಚಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version