ಬಾಲಿವುಡ್‌ ಸುವರ್ಣಯುಗಕ್ಕೆ ಕರೆದೊಯ್ದ ‘ಅಲಂಕೃತ್‌’ ನೃತ್ಯ ಸಂಸ್ಥೆಯ ‘ಸದಾಬಹಾರ್‌’ ಕಲಾ ವೈಭವ – Kannada News | Sadabahar Dance Festival 2026: Alankruth Artists Revive Bollywood Golden Era in Bengaluru

ಬೆಂಗಳೂರು ಜುಲೈ 21: ಇಂದಿನ ಡಿಜಿಟಲ್ ಯುಗದ ಏಕತಾನತೆಯ ನಡುವೆ, ನೃತ್ಯ ಪ್ರೇಮಿಗಳನ್ನು ಐದು ದಶಕಗಳ ಹಿಂದಿನ ಸುಮಧುರ ನೆನಪುಗಳ ಲೋಕಕ್ಕೆ ಕರೆದೊಯ್ಯುವಲ್ಲಿ ‘ಅಲಂಕೃತ್‌’ ನೃತ್ಯ ಸಂಸ್ಥೆಯ ಕಲಾವಿದೆಯರು ಯಶಸ್ವಿಯಾಗಿದ್ದಾರೆ. ವಿದುಷಿ ಪೂರ್ಣ ಆಚಾರ್ಯ ಅವರ ಸಾರಥ್ಯದಲ್ಲಿ ಶನಿವಾರ ಸಂಜೆ (ಜುಲೈ 18) ಬೆಂಗಳೂರಿನ ಮೀನಾಕ್ಷಿ ರಂಗಮಂಚ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ‘ಸದಾಬಹಾರ್‌ ನೃತ್ಯೋತ್ಸವ–2026’ ಪ್ರೇಕ್ಷಕರ ಅಪಾರ ಪ್ರಶಂಸೆಗೆ ಪಾತ್ರವಾಯಿತು.

ವೇದಿಕೆಯಲ್ಲಿ ಮರುಜೀವ ಪಡೆದ ಹಳೆಯ ಮಧುರ ಗೀತೆಗಳು

ಬಾಲಿವುಡ್‌ನ ಸುವರ್ಣಯುಗದ ಜನಪ್ರಿಯ ಮತ್ತು ಸಾರ್ವಕಾಲಿಕ ಮಧುರ ಗೀತೆಗಳಿಗೆ ಕಲಾವಿದೆಯರು ಅದ್ಭುತವಾಗಿ ಹೆಜ್ಜೆ ಹಾಕಿದರು. ಆಕರ್ಷಕ ನೃತ್ಯ ಸಂಯೋಜನೆ, ನಿಖರವಾದ ಲಯ ಹಾಗೂ ಭಾವಪೂರ್ಣ ಅಭಿನಯದ ಮೂಲಕ ಇಡೀ ಸಭಾಂಗಣದಲ್ಲಿ ನಾಸ್ಟಾಲ್ಜಿಯಾ ಮೂಡಿಸುವಲ್ಲಿ ಯಶಸ್ವಿಯಾದರು. ಈ ಪ್ರದರ್ಶನದ ಮೂಲಕ ಹಿರಿಯರು ತಮ್ಮ ಯೌವನದ ದಿನಗಳನ್ನು ನೆನಪಿಸಿಕೊಂಡರೆ, ಯುವ ಪೀಳಿಗೆಯು ಹಳೆಯ ಸಂಗೀತದ ಸೌಂದರ್ಯವನ್ನು ಕಣ್ತುಂಬಿಕೊಂಡಿತು.

ಸದಾಬಹಾರ್‌ ನೃತ್ಯೋತ್ಸವ–2026

ಗುರು–ಶಿಷ್ಯ ಪರಂಪರೆಯ ಶ್ರೇಷ್ಠ ಪ್ರದರ್ಶನ

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪ್ರಸಿದ್ಧ ತಬಲಾ ವಾದಕ ಪಂಡಿತ್‌ ಸತೀಶ್‌ ಹಂಪಿಹೊಳಿ ಅವರು, ‘ನಮ್ಮ ಗುರು–ಶಿಷ್ಯ ಪರಂಪರೆಗೆ ಅದ್ಭುತ ಇತಿಹಾಸವಿದೆ. ಕಲಾವಿದೆಯೂ, ಸಂಘಟಕರೂ ಆಗಿರುವ ಪೂರ್ಣ ಆಚಾರ್ಯ ಅವರು ಇಡೀ ಕಾರ್ಯಕ್ರಮವನ್ನು ಅತ್ಯಂತ ವಿನೂತನವಾಗಿ ರೂಪಿಸಿದ್ದಾರೆ. ಕಲೆಯ ಮೇಲಿರುವ ಅವರ ಬದ್ಧತೆಯೇ ಈ ಅದ್ಭುತ ಯಶಸ್ಸಿಗೆ ಕಾರಣ’ ಎಂದು ಶ್ಲಾಘಿಸಿದರು.

ಇದೇ ವೇಳೆ ಮಾತನಾಡಿದ ಖ್ಯಾತ ವಿದ್ವಾಂಸ ಜಗದೀಶ ಶರ್ಮಾ ಸಂಪ ಅವರು, ‘ಈ ಕಾರ್ಯಕ್ರಮದ ಪ್ರತಿಯೊಂದು ಪ್ರಸ್ತುತಿಯಲ್ಲೂ ವೈವಿಧ್ಯತೆಯಿತ್ತು. ಬಣ್ಣ, ನೃತ್ಯ, ಸಂಗೀತ ಎಲ್ಲವೂ ವಿಭಿನ್ನವಾಗಿದ್ದರೂ, ಪೂರ್ಣ ಆಚಾರ್ಯ ಅವರ ಸಮರ್ಥ ಸಂಯೋಜನೆಯಿಂದಾಗಿ ಇಡೀ ನೃತ್ಯೋತ್ಸವ ಒಂದು ಪರಿಪೂರ್ಣ ಕಲಾಕೃತಿಯಾಗಿ ಮೂಡಿಬಂದಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮನ ಸೆಳೆದ ‘ಮಧುರಾಷ್ಟಕಂ’ ಕಥಕ್ ಪ್ರದರ್ಶನ

ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಜಗದ್ಗುರು ಶ್ರೀ ವಲ್ಲಭಾಚಾರ್ಯರ ‘ಮಧುರಾಷ್ಟಕಂ’ ಸ್ತೋತ್ರಕ್ಕೆ ಕಥಕ್ ಶೈಲಿಯಲ್ಲಿ ಮೂಡಿಬಂದ ಭಾವಾಭಿನಯವು ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತು. ಇದರೊಂದಿಗೆ ವೇದಿಕೆಯ ಮೇಲೆ ಪ್ರದರ್ಶನಗೊಂಡ ಶಿವ–ಪಾರ್ವತಿ ನೃತ್ಯರೂಪಕ ಸೇರಿದಂತೆ ಪ್ರತಿಯೊಂದು ನೃತ್ಯವೂ ಹೊಸತನದಿಂದ ಕೂಡಿತ್ತು. ವೇಷಭೂಷಣ, ಸಾಹಿತ್ಯ ಹಾಗೂ ಬೆಳಕಿನ ವಿನ್ಯಾಸದ ಸುಂದರ ಸಂಗಮದೊಂದಿಗೆ ‘ಸದಾಬಹಾರ್‌’ ನೃತ್ಯೋತ್ಸವವು ಪ್ರೇಕ್ಷಕರ ಮನದಲ್ಲಿ ಸದಾ ಹಸಿರಾಗಿ ಉಳಿಯುವಂತಹ ಅನುಭವ ನೀಡಿತು.

ಇದನ್ನೂ ಓದಿ:

ಈ ಸಾಂಸ್ಕೃತಿಕ ಸಂಜೆಯಲ್ಲಿ ವಿದುಷಿ ಪೂರ್ಣ ಆಚಾರ್ಯ, ಶ್ರೀರಾಮದಾಸ ಆಚಾರ್ಯ, ಯಶವಂತ ರಾವ್‌, ಉದಯಕುಮಾರ್‌, ಭಾಸ್ಕರ್‌, ನಟಿ ರಾಧಿಕಾ ನಾರಾಯಣ್‌ ಹಾಗೂ ಖ್ಯಾತ ವಿದ್ವಾಂಸರಾದ ಜಗದೀಶ ಶರ್ಮಾ ಸಂಪ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 2:36 pm, Tue, 21 July 26

Source link

ಶಿವಾಜಿನಗರದಲ್ಲಿ ಫುಟ್​ಪಾತ್ ತೆರವು: ಪೂರ್ವ ಮಾಹಿತಿ ಇಲ್ಲದೆ ವ್ಯಾಪಾರಿಗಳ ಅಂಗಡಿ ಧ್ವಂಸ ಆರೋಪ – Kannada News | Shivaji Nagar Footpath Clearance: Traders Allege Sudden Eviction Without Notice

ಬೆಂಗಳೂರು, ಜುಲೈ 21: ಶಿವಾಜಿನಗರದಲ್ಲಿ ನಡೆದ ಫುಟ್​​ಪಾತ್​​ ಒತ್ತುವರಿ ತೆರವು ಕಾರ್ಯಾಚಾರಣೆ ವೇಳೆ ಭಾರಿ ಹೈಡ್ರಾಮಾವೇ ನಡೆದಿದೆ. ಜಿಬಿಎ ಸಿಬ್ಬಂದಿ ಮೇಲೆ ದಾಳಿ ನಡೆಸಿರುವ ಆರೋಪದ ಹಿನ್ನೆಲೆ ಹಲವರನ್ನು ವಶಕ್ಕೆ ಪಡೆದಿರುವ ನಡುವೆ ಅಧಿಕಾರಿಗಳ ವಿರುದ್ಧವೇ ವ್ಯಾಪಾರಿಗಳು ಗಂಭೀರ ಆರೋಪ ಮಾಡಿದ್ದಾರೆ. ನಮಗೆ ಒಂದು ನಿಮಿಷದ ಸಮಯವನ್ನೂ ನೀಡಿಲ್ಲ. ನಮ್ಮ ಫ್ರಿಡ್ಜ್, ಶೋಕೇಸ್ ಮತ್ತು ಇತರೆ ವ್ಯಾಪಾರದ ವಸ್ತುಗಳು ಸಂಪೂರ್ಣ ಪುಡಿಪುಡಿಯಾಗಿ ಹಾಳಾಗಿವೆ ಎಂದು ದೂರಿದ್ದಾರೆ. ಅರ್ಧ ಗಂಟೆ ಕಾಲಾವಕಾಶವನ್ನೂ ನೀಡದೆ ಬುಲ್ಡೋಜರ್ ಹಾಕಿ ಅಂಗಡಿಗಳನ್ನು ತೆರವುಗೊಳಿಸಿದ್ದಾರೆ. ತಮ್ಮ ಜೀವ ಉಳಿಸಿಕೊಳ್ಳಲು ಸ್ಥಳದಿಂದ ಹೊರ ಓಡಿ ಬಂದಿದ್ದೇವೆ ಎಂದವರು ದೂರಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಜಿಬಿಎ ಇಂಜಿನಿಯರ್‌ಗಳ ಮೇಲೆ ಹೆಲ್ಮೆಟ್‌, ಪೆಪ್ಪರ್ ಸ್ಪ್ರೇ ದಾಳಿ: ಹಲ್ಲೆಗೆ ಹೆದರದೆ ಮತ್ತೆ ಅಖಾಡಕ್ಕಿಳಿದ ಜಿಬಿಎ ಪಡೆ – Kannada News | Shivajinagar Assault: GBA Officers Pepper Sprayed During Encroachment Drive

ಬೆಂಗಳೂರು, ಜು. 21: ರಾಜಧಾನಿ ಬೆಂಗಳೂರಿನ ಶಿವಾಜಿನಗರ ಪ್ರದೇಶದಲ್ಲಿ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ನಡೆಸುತ್ತಿದ್ದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಇಂಜಿನಿಯರ್‌ಗಳ ಮೇಲೆ ಹೆಲ್ಮೆಟ್ ಹಾಗೂ ಪೆಪ್ಪರ್ ಸ್ಪ್ರೇ ಬಳಸಿ ಭೀಕರ ಹಲ್ಲೆ ನಡೆಸಿರುವ ಘಟನೆ ಮಂಗಳವಾರ ನಡೆದಿದೆ. ಈ ಕೃತ್ಯದ ವಿಡಿಯೋ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತೀವ್ರ ರಾಜಕೀಯ ಆಕ್ರೋಶಕ್ಕೆ ಕಾರಣವಾಗಿದೆ.

ಶಿವಾಜಿನಗರದಲ್ಲಿ ಫುಟ್‌ಪಾತ್ ತೆರವುಗೊಳಿಸಲು ಹೋದ ವೇಳೆ, ಕೆಲವರು ಗುಂಪು ಸೇರಿಸಿಕೊಂಡು ಜಿಬಿಎ ಸಹಾಯಕ ಕಾರ್ಯಪಾಲಕ ಅಭಿಯಂತರ ಮಾಧವ ರಾವ್, ಸಹಾಯಕ ಅಭಿಯಂತರ ಗೌತಮ್ ಅವರ ಮೇಲೆ ಹೆಲ್ಮೆಟ್‌ಗಳಿಂದ ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ್ದಾರೆ. ಇಷ್ಟಕ್ಕೇ ನಿಲ್ಲದ ಕಿಡಿಗೇಡಿಗಳು, ಸ್ಥಳದಲ್ಲಿದ್ದ ಮಹಿಳಾ ಇಂಜಿನಿಯರ್ ರುಚಿತಾ ಅವರ ಮುಖಕ್ಕೆ ಪೆಪ್ಪರ್ ಸ್ಪ್ರೇ ಎರಚಿದ್ದಾರೆ. ಅಲ್ಲದೆ ಕಾರ್ಯಾಚರಣೆಯಲ್ಲಿದ್ದ ಜೆಸಿಬಿ ಚಾಲಕನಿಗೂ ಸ್ಪ್ರೇ ಎರಚಲು ಯತ್ನಿಸಿದ್ದಾರೆ. ಹಲ್ಲೆಗೊಳಗಾದ ಅಧಿಕಾರಿಗಳು ತಕ್ಷಣವೇ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಲು ನಿರ್ಧರಿಸಿದ್ದಾರೆ.

ಇಲ್ಲಿದೆ ನೋಡಿ ವಿಡಿಯೋ:

‘ಓಟ್ ಬ್ಯಾಂಕ್‌ಗಾಗಿ ಸರ್ಕಾರ ಮೌನ’: ಆರ್. ಅಶೋಕ್

ಅಧಿಕಾರಿಗಳ ಮೇಲೆ ನಡೆದ ಈ ಮಾರಣಾಂತಿಕ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ರಾಜ್ಯ ಸರ್ಕಾರದ ವಿರುದ್ಧ ತಮ್ಮ ಎಕ್ಸ್ ಖಾತೆಯಲ್ಲಿ ಸರಣಿ ವಾಗ್ದಾಳಿ ನಡೆಸಿದ್ದಾರೆ. “ಶಿವಾಜಿನಗರದಲ್ಲಿ ಒತ್ತುವರಿ ತೆರವು ವೇಳೆ ಅಧಿಕಾರಿಯ ಮೇಲೆಯೇ ಹಲ್ಲೆ ನಡೆದಿರುವುದು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎಂಬುದಕ್ಕೆ ಸಾಕ್ಷಿ. ಬೇರೆ ಭಾಗಗಳಲ್ಲಿ ತೆರವು ವೇಳೆ ಕ್ಯಾಮೆರಾ ಮುಂದೆ ‘ರೀಲ್ಸ್’ ಮಾಡುವ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರೇ, ಈಗ ನಿಮ್ಮ ಮೌನ ಏಕೆ? ನಿಮ್ಮ ಓಟ್‌ ಬ್ಯಾಂಕ್ ರಾಜಕೀಯವೇ ಕಾನೂನಿಗಿಂತ ದೊಡ್ಡದಾಗಿದೆಯೇ?” ಎಂದು ಆರ್. ಅಶೋಕ್ ಪ್ರಶ್ನಿಸಿದ್ದಾರೆ.

ಇಲ್ಲಿದೆ ನೋಡಿ ಎಕ್ಸ್​ ಪೋಸ್ಟ್

“ಕಾನೂನು ಪಾಲನೆ ಮಾಡುವ ಅಧಿಕಾರಿಗಳಿಗೆ ರಕ್ಷಣೆ ನೀಡಲಾಗದ ಸರ್ಕಾರವಿದ್ದರೆ ದುಷ್ಕರ್ಮಿಗಳಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಶಿವಾಜಿನಗರದಲ್ಲಿ ಒತ್ತುವರಿ ತೆರವು ಮಾಡಲು ಸರ್ಕಾರಕ್ಕೆ ಧೈರ್ಯವಿಲ್ಲವೇ? ರಾಜ್ಯದಲ್ಲಿ ಎರಡು ರೀತಿಯ ಕಾನೂನು ಇದೆಯೇ? ತಕ್ಷಣವೇ ದೋಷಿಗಳನ್ನು ಬಂಧಿಸಿ ಅಧಿಕಾರಿಗಳಿಗೆ ರಕ್ಷಣೆ ನೀಡಿ” ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಶಿವಾಜಿನಗರ ಹಲ್ಲೆ ಪ್ರಕರಣ: ಇವರು ಜೀವನೋಪಾಯಕ್ಕಾಗಿ ಕಷ್ಟಪಟ್ಟು ದುಡಿಯುವ ಬಡಜನರಲ್ಲ, ಸಮಾಜಘಾತುಕರು; ಸಚಿವ ಕೃಷ್ಣಭೈರೇಗೌಡ ಕಿಡಿ

ಪೋಲಿಸ್ ಬಂದೋಬಸ್ತ್‌ನಲ್ಲಿ ಮತ್ತೆ ಬಿರುಸಿನ ಕಾರ್ಯಚರಣೆ:

ಇದರ ನಡುವೆ ಮಧ್ಯಾಹ್ನದ ವೇಳೆಗೆ ಜಿಬಿಎ ಆಡಳಿತ ಮಂಡಳಿ ಹಿರಿಯ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಬೃಹತ್ ಕಾರ್ಯಾಚರಣೆಯನ್ನು ಪುನಃ ಆರಂಭಿಸಿತು. ಕೇಂದ್ರ ಮಹಾನಗರ ಪಾಲಿಕೆ ಆಯುಕ್ತ ಜಗದೀಶ್ ಹಾಗೂ ಜಿಬಿಎ ಯೂನಿಯನ್ ಅಧ್ಯಕ್ಷ ಅಮೃತ್ ರಾಜ್ ಅವರ ನೇತೃತ್ವದಲ್ಲಿ, ಸ್ಥಳಕ್ಕೆ ಭಾರಿ ಪೊಲೀಸ್ ಬಂದೋಬಸ್ತ್ ನಿಯೋಜಿಸಿ ತೆರವು ಕಾರ್ಯ ಮುಂದುವರಿಸಲಾಯಿತು. ಹಲ್ಲೆಗೆ ಜಗ್ಗದೆ, ಸ್ಥಳದಲ್ಲಿದ್ದ ಉಳಿದ ಅಕ್ರಮ ಅಂಗಡಿ ಮುಂಗಟ್ಟು ಹಾಗೂ ಒತ್ತುವರಿ ಜಾಗಗಳನ್ನು ಜೆಸಿಬಿ ಯಂತ್ರಗಳ ಮೂಲಕ ಸಂಪೂರ್ಣವಾಗಿ ಧ್ವಂಸಗೊಳಿಸಿ ಫುಟ್‌ಪಾತ್ ಮುಕ್ತಗೊಳಿಸಲಾಯಿತು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ನೀತಿ ವಿರುದ್ಧ ರಾಜ್ಯಪಾಲರಿಗೆ ದೂರು, ಏನಿದು ನೀತಿ ? – Kannada News | Complaints To Governor Against Karnataka Government bilingual policy in Karnataka, What Is bilingual policy

ಬೆಂಗಳೂರು, (ಜುಲೈ 21): ರಾಜ್ಯ ಶಿಕ್ಷಣ ನೀತಿ ಆಯೋಗವು ರಾಜ್ಯದ ಎಲ್ಲಾ ಶಾಲೆಗಳಲ್ಲಿ 1 ರಿಂದ 5ನೇ ತರಗತಿವರೆಗೆ ದ್ವಿಭಾಷಾ ನೀತಿ (bilingual policy) ಜಾರಿಗೆಗೆ ಸರ್ಕಾರ ಮುಂದಾಗಿದ್ದು, ಮತ್ತೊಂದೆಡೆ ರಾಜ್ಯ ಸರ್ಕಾರದ ಈ ನಿರ್ಧಾರಕ್ಕೆ ವಿರೋಧ ವ್ಯಕ್ತವಾಗಿದೆ. ಸರ್ಕಾರಿ ಶಾಲೆಗಳಲ್ಲಿ 5ನೇ ತರಗತಿವರೆಗೆ ದ್ವಿಭಾಷಾ ನೀತಿ ಜಾರಿಗೆ ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಲಾಗಿದೆ. ಅಖಿಲ ಭಾರತೀಯ ಸಾಹಿತ್ಯ ಪರಿಷತ್ ನಿಯೋಗ ಇಂದು (ಜುಲೈ 21) ಲೋಕಭವನದಲ್ಲಿ ಗವರ್ನರ್ ಥಾವರ್ ಚೆಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ ದೂರು ನೀಡಿದೆ. ಕನ್ನಡ ಭಾಷೆಯನ್ನು ತೆರೆಮರೆಗೆ ಸರಿಸುವ ಕುತಂತ್ರವಾಗಿದೆ. ಹೀಗಾಗಿ ಇದಕ್ಕೆ ಅವಕಾಶ ನೀಡಬೇಡಿ ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್ ನಿಯೋಗವು ರಾಜ್ಯಪಾಲರಿಗೆ ಮನವಿ ಮಾಡಿದೆ.

ಹಾಲಿ ನಮ್ಮಲ್ಲಿ ತ್ರಿಭಾಷಾ ನೀತಿ ಜಾರಿಯಲ್ಲಿದೆ. ಪ್ರಥಮ-ಕನ್ನಡ, ದ್ವಿತೀಯ-ಆಂಗ್ಲಭಾಷೆ ಮತ್ತು ತೃತೀಯ-ಹಿಂದಿ ಭಾಷೆ ಬೋಧನೆ ಮಾಡಲಾಗುತ್ತಿದೆ. ದ್ವಿಭಾಷಾ ನೀತಿ ಜಾರಿಗೆ ಬಂದ ಮೇಲೆ ವಿದ್ಯಾರ್ಥಿಗಳು ಕನ್ನಡ ಮಾಧ್ಯಮದ ಶಾಲೆಗಳಲ್ಲಿ ಕನ್ನಡ ಪ್ರಥಮ ಹಾಗೂ ದ್ವಿತೀಯ ಆಂಗ್ಲ ಮಾಧ್ಯಮವಾಗಿ ಮಾತ್ರ ವ್ಯಾಸಂಗ ಮಾಡುತ್ತಾರೆ. ತೃತೀಯ ಭಾಷೆ ಇರುವುದಿಲ್ಲ. ಇನ್ನು, ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಆಂಗ್ಲ ಭಾಷೆಯನ್ನು ಪ್ರಥಮ ಭಾಷೆಯಾಗಿ ವ್ಯಾಸಂಗ ಮಾಡಲಿದ್ದು, ಕನ್ನಡವನ್ನು ದ್ವಿತೀಯ ಭಾಷೆಯಾಗಿ ವ್ಯಾಸಂಗ ಮಾಡುತ್ತಾರೆ.

ಇದನ್ನೂ ಓದಿ: ಶಾಲಾ ಶಿಕ್ಷಣದಲ್ಲಿ ದ್ವಿಭಾಷಾ ನೀತಿ ಸೇರಿದಂತೆ ಹಲವು ಶಿಫಾರಸು ಮಾಡಿದ ಎಸ್​ಇಪಿ

ದ್ವಿಭಾಷಾ ನೀತಿಗೆ ರಾಜ್ಯ ಶಿಕ್ಷಣ ನೀತಿ ಶಿಫಾರಸ್ಸು

ಪ್ರಾಥಮಿಕ ಶಿಕ್ಷಣದ ಎಲ್ಲಾ ಮಾದರಿಯ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕದಿಂದ 5ನೇ ತರಗತಿವರೆಗೆ ಕನ್ನಡ ಅಥವಾ ಮಾತೃ ಭಾಷೆ ಮತ್ತು ದ್ವಿಭಾಷಾ ಶಿಕ್ಷಣವನ್ನು ಕಡ್ಡಾಯಗೊಳಿಸುವಂತೆ ರಾಜ್ಯ ಶಿಕ್ಷಣ ನೀತಿ (ಎಸ್‌ಇಪಿ) ಆಯೋಗ ರಾಜ್ಯ ಸರಕಾರಕ್ಕೆ ಶಿಫಾರಸು ಮಾಡಿದೆ. ಆಯೋಗದ ಅಧ್ಯಕ್ಷ ಪ್ರೊ. ಸುಖ್‌ದೇವ್‌ ಥೋರಟ್‌ ನೇತೃತ್ವದ ನಿಯೋಗ ಈ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದೆ.

ಶಿಫಾರಸ್ಸಿನಲ್ಲೇನಿದೆ?

ಇತ್ತೀಚಿನ ದಿನಗಳಲ್ಲಿ ಬೋಧನಾ ಮಾಧ್ಯಮ ಮತ್ತು ತ್ರಿಭಾಷಾ ಸೂತ್ರದ ವಿಷಯ ವಿವಾದ ಸ್ವರೂಪ ಪಡೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಮತ್ತು ಕೇಂದ್ರ ಪಠ್ಯಕ್ರಮ ಸೇರಿದಂತೆ ಎಲ್ಲಾ ಮಂಡಳಿಗಳ ಶಾಲೆಗಳಲ್ಲಿ 5ನೇ ತರಗತಿವರೆಗೆ ಕನ್ನಡ, ಮಾತೃಭಾಷೆಯನ್ನೇ ಬೋಧನೆ ಮಾಡುವುದನ್ನು ಕಡ್ಡಾಯಗೊಳಿಸಬೇಕೆಂದು ಆಯೋಗ ತನ್ನ ವರದಿಯಲ್ಲಿ ಸಲಹೆ ನೀಡಿದೆ. ಅಲ್ಲದೆ, ದ್ವಿಭಾಷಾ ನೀತಿ ಅನುಷ್ಠಾನ ಮಾಡುವುದು ಸೂಕ್ತ. ಕನ್ನಡ ಅಥವಾ ಮಾತೃ ಭಾಷೆ ಜತೆಗೆ ಇಂಗ್ಲಿಷ್‌ ಭಾಷೆಯನ್ನು ಬೋಧಿಸುವುದು ಉತ್ತಮ ಎಂದು ಆಯೋಗ ಅಭಿಪ್ರಾಯಪಟ್ಟಿದೆ. ಆ ಮೂಲಕ ಆಯೋಗವು ಪರೋಕ್ಷವಾಗಿ ತ್ರಿಭಾಷಾ ನೀತಿ ಅವಶ್ಯಕತೆ ಇಲ್ಲ ಎಂದು ಪ್ರತಿಪಾದಿಸಿದೆ. ಅದೇ ರೀತಿ ಶಾಲಾ ಶಿಕ್ಷಣ, ಉನ್ನತ ಶಿಕ್ಷಣ ಮತ್ತು ವೃತ್ತಿಪರ ಶಿಕ್ಷಣ ವಿಭಾಗಗಳಲ್ಲಿ ಆಯೋಗ ಸರಕಾರಕ್ಕೆ ಪ್ರತ್ಯೇಕ ಶಿಫಾರಸುಗಳನ್ನು ಮಾಡಿದೆ.

ರಾಜ್ಯದಲ್ಲಿ ಬಿಜೆಪಿ ಸರಕಾರ ಆಡಳಿತದಲ್ಲಿದ್ದ ವೇಳೆ ಜಾರಿಗೆ ತಂದ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ರದ್ದುಗೊಳಿಸಿ ಎಸ್‌ಇಪಿ ಜಾರಿಗೆ ತರುವುದಾಗಿ ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬರುವ ಮೊದಲೇ ತನ್ನ ಚುನಾವಣಾ ಪ್ರಣಾಳಿಕೆಯಲ್ಲೇ ಘೋಷಿಸಿತ್ತು. ಆನಂತರ ಅಕಾರಕ್ಕೆ ಬಂದ ತಕ್ಷಣ 2023ರ ಅಕ್ಟೋಬರ್‌ನಲ್ಲಿ ರಾಜ್ಯ ಶಿಕ್ಷಣ ಆಯೋಗವನ್ನು ಶಿಕ್ಷಣ ತಜ್ಞ ಪ್ರೊ. ಸುಖ್‌ದೇವ್‌ ಥೋರಟ್‌ ಅಧ್ಯಕ್ಷತೆಯಲ್ಲಿ ರಚಿಸಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಶಿವಾಜಿನಗರ ಹಲ್ಲೆ ಪ್ರಕರಣ: ಇವರು ಜೀವನೋಪಾಯಕ್ಕಾಗಿ ಕಷ್ಟಪಟ್ಟು ದುಡಿಯುವ ಬಡಜನರಲ್ಲ, ಸಮಾಜಘಾತುಕರು; ಸಚಿವ ಕೃಷ್ಣಭೈರೇಗೌಡ ಕಿಡಿ – Kannada News | Shivajinagar Assault Case: ‘They Are Not Poor, They Are Anti Social Elements,’ Minister Krishna Byre Gowda Slams Attackers; 7 Detained

ಸಚಿವ ಕೃಷ್ಣಬೈರೇಗೌಡ ಕಿಡಿImage Credit source: Tv9 Kannada

ಬೆಂಗಳೂರು, ಜುಲೈ 21: ಜಿಬಿಎ ವತಿಯಿಂದ ನಡೆದ ಫುಟ್​ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಸಿಬ್ಬಂದಿ ಮೇಲೆ ಸ್ಥಳೀಯ ಸಂಘಟನೆಗಳ ಕಾರ್ಯಕರ್ತರು ಹಲ್ಲೆ ನಡೆಸಿರುವ ಆರೋಪ ಶಿವಾಜಿನಗರದಲ್ಲಿ ಕೇಳಿಬಂದಿದೆ. ಈ ಬಗ್ಗೆ ಕಿಡಿ ಕಾರಿರುವ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ, ಇವರು ಜೀವನೋಪಾಯಕ್ಕಾಗಿ ಕಷ್ಟಪಟ್ಟು ದುಡಿಯುವ ಬಡಜನರಲ್ಲ. ಇವರು ಸಮಾಜಘಾತುಕ ಶಕ್ತಿಗಳು ಎಂದಿದ್ದಾರೆ. ಸರ್ಕಾರಿ ಪ್ರತಿನಿಧಿಗಳ ಮೇಲೆ ಹಲ್ಲೆ ನಡೆಸಿದ ಪ್ರತಿಯೊಬ್ಬರನ್ನೂ ಬಂಧಿಸಲಾಗುವುದು ಈ ಬಗ್ಗೆ ಪೊಲೀಸ್ ಆಯುಕ್ತರು ಮತ್ತು ಜಿಬಿಎ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ ಎಂದವರು ತಿಳಿಸಿದ್ದಾರೆ.

ಸಚಿವ ಕೃಷ್ಣ ಭೈರೇಗೌಡರು ಹೇಳಿದ್ದೇನು?

ಮಾನ್ಯ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನವನ್ನು ಜಾರಿಗೊಳಿಸುವಾಗ ಸರ್ಕಾರಿ ಪ್ರತಿನಿಧಿಗಳ ಮೇಲೆ ಹಲ್ಲೆ ನಡೆಸುವುದು ಕಾನೂನಿನ ಗಂಭೀರ ಉಲ್ಲಂಘನೆಯಾಗಿದೆ. ಕಾನೂನಿನಂತೆ ಸಾರ್ವಜನಿಕ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳ ಪರವಾಗಿ ನಾವು ದೃಢವಾಗಿ ನಿಲ್ಲುತ್ತೇವೆ. ಸಾರ್ವಜನಿಕ ಕರ್ತವ್ಯದಲ್ಲಿರುವ ಅಧಿಕಾರಿಗಳ ಮೇಲೆ ಹಲ್ಲೆ ನಡೆಸುವ ಯಾರನ್ನೂ ಸಹ ನಾವು ಬಿಡುವುದಿಲ್ಲ. ನಾನು ಜಿಬಿಎ (GBA) ಮತ್ತು ಪೊಲೀಸರೊಂದಿಗೆ ಸತತ ಸಂಪರ್ಕದಲ್ಲಿದ್ದು ಪರಿಸ್ಥಿತಿಯನ್ನು ಗಮನಿಸುತ್ತಿದ್ದೇನೆ. ಅಲ್ಲದೆ ನಾವು ಒಟ್ಟಾಗಿ ಮಾದರಿಯಾಗುವಂತಹ ಕಠಿಣ ಕ್ರಮಗಳನ್ನು ಜರುಗಿಸುತ್ತಿದ್ದೇವೆ ಎಂದವರು ತಿಳಿಸಿದ್ದಾರೆ.

ಇದನ್ನೂ ಓದಿ: ಶಿವಾಜಿನಗರದಲ್ಲಿ ಫುಟ್​ಪಾತ್ ತೆರವು ಕಾರ್ಯಾಚರಣೆ ವೇಳೆ ಜಿಬಿಎ ಸಿಬ್ಬಂದಿ ಮೇಲೆ ಪೆಪ್ಪರ್ ಸ್ಪ್ರೇ, ಹಲ್ಲೆ ಆರೋಪ

ಅಧಿಕಾರಿಗಳ ಮೇಲೆ ದಾಳಿ ಸಂಬಂಧ 7 ಜನ ವಶಕ್ಕೆ

ಫುಟ್​ಪಾತ್​ ತೆರವು ವೇಳೆ ಅಧಿಕಾರಿಗಳ ಮೇಲೆ ದಾಳಿ ಸಂಬಂಧ 7 ಜನರನ್ನು ವಶಕ್ಕೆ ಪಡೆಯಲಾಗಿದೆ ಎಂದು ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ ವಿಕ್ರಮ್ ಆಮ್ಟೆ ತಿಳಿಸಿದ್ದಾರೆ. ಕಮರ್ಷಿಯಲ್ ಸ್ಟ್ರೀಟ್ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಯುತ್ತಿದ್ದ ವೇಳೆ ಹಲ್ಲೆ ನಡೆದಿರುವ ಬಗ್ಗೆ ಎಇಇ ಮಾಧವ ರಾವ್ ದೂರಿನ ಮೇರೆಗೆ ಎಫ್‌ಐಆರ್‌ ದಾಖಲಿಸಲಾಗಿದೆ. ವಿಶೇಷ ತಂಡ ರಚಿಸಿ ತನಿಖೆ ಮಾಡುತ್ತೇವೆ. ರಕ್ಷಣೆ ಕೋರಿ ಅಧಿಕಾರಿಗಳು ಮನವಿ ಸಲ್ಲಿಸಿದ್ದ ಬಗ್ಗೆ ಪರಿಶೀಲಿಸುತ್ತೇವೆ. ಕಾನೂನು ಕೈಗೆ ತೆಗೆದುಕೊಳ್ಳೋಕೆ ಯಾರಿಗೂ ಹಕ್ಕಿಲ್ಲ. ಯಾರೇ ತಪ್ಪು ಮಾಡಿದರೂ ಅವರನ್ನು ಯಾವುದೇ ಕಾರಣಕ್ಕೂ ಬಿಡಲ್ಲ ಎಂದವರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 2:48 pm, Tue, 21 July 26

Source link

ವಿಚ್ಛೇದನ ಪ್ರಕರಣದಲ್ಲಿ ಪತಿಯ ಕಂಪನಿ ಮಾಲೀಕರಿಗೆ ಹೆಂಡತಿ ಪತ್ರ ಬರೆಯುವುದೇಕೆ? ಸುಪ್ರೀಂ ಕೋರ್ಟ್ ತರಾಟೆ – Kannada News | Why wife involve her husbands employer in Divorce Case? Supreme Court calls it as worst practice

ನವದೆಹಲಿ, ಜುಲೈ 21: ದಂಪತಿಗಳ ನಡುವಿನ ವೈವಾಹಿಕ ವಿವಾದ ಅಥವಾ ವಿಚ್ಛೇದನ ಪ್ರಕರಣಗಳ ಸಂದರ್ಭದಲ್ಲಿ ಪತಿಯ ಉದ್ಯೋಗದಾತ ಕಂಪನಿ ಅಥವಾ ಮೇಲಧಿಕಾರಿಗಳಿಗೆ ಪತ್ನಿ ದೂರು ಪತ್ರ ಬರೆಯುವ ಇತ್ತೀಚಿನ ಪ್ರವೃತ್ತಿಯ ಬಗ್ಗೆ ಸುಪ್ರೀಂ ಕೋರ್ಟ್ (Supreme Court) ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಇಂತಹ ದೂರುಗಳಿಂದ ಪತಿಯ ಕೆಲಸವೇ ಹೊರಟುಹೋಗಬಹುದು. ಇದರಿಂದ ಪತ್ನಿಗೆ ಸಿಗಬೇಕಾದ ಜೀವನಾಂಶದ ಮೇಲೆ ಕೂಡ ತೀವ್ರ ಪರಿಣಾಮ ಬೀರುತ್ತದೆ ಎಂದು ನ್ಯಾಯಾಲಯ ಎಚ್ಚರಿಸಿದೆ. ಏನಿದು ಪ್ರಕರಣ? ಪತ್ನಿ ದೂರು ನೀಡಿದ್ದೇಕೆ? ಎಂಬ ಕುರಿತಾದ ಮಾಹಿತಿ ಇಲ್ಲಿದೆ.

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಮತ್ತು ನ್ಯಾಯಮೂರ್ತಿ ಆರ್. ಮಹಾದೇವನ್ ಅವರಿದ್ದ ಪೀಠವು ಈ ಬಗ್ಗೆ ವಿಚಾರಣೆ ನಡೆಸಿದೆ. ಈ ಪ್ರಕರಣದ ವಿಚಾರಣೆ ವೇಳೆ ನ್ಯಾಯಮೂರ್ತಿ ನಾಗರತ್ನ ಅವರು, “ವೈವಾಹಿಕ ವಿವಾದಗಳ ಸಂದರ್ಭದಲ್ಲಿ ಪತಿಯ ಉದ್ಯೋಗದಾತರಿಗೆ ದೂರಿನ ಪತ್ರ ಬರೆಯುವುದು ಪತ್ನಿ ಮಾಡುವ ಅತ್ಯಂತ ಕೆಟ್ಟ ಕೆಲಸಗಳಲ್ಲಿ ಒಂದಾಗಿದೆ” ಎಂದು ಹೇಳಿದ್ದಾರೆ. ವಿಚ್ಛೇದನ ಕೋರುವುದು ಕಾನೂನಾತ್ಮಕ ಹಕ್ಕು. ಆದರೆ ಪತಿಯ ಜೀವನೋಪಾಯವನ್ನೇ ಕಸಿದುಕೊಳ್ಳುವುದು ಅಥವಾ ಆತನ ಉದ್ಯೋಗಕ್ಕೆ ಕಂಟಕ ತರುವುದು ಅತ್ಯಂತ ಅಪಾಯಕಾರಿ ನಡವಳಿಕೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಸುಪ್ರೀಂ ಕೋರ್ಟ್ ಎಚ್ಚರಿಕೆ:

ಪತಿ ಕೆಲಸ ಮಾಡುವ ಕಂಪನಿ ಅಥವಾ ಇಲಾಖೆಗೆ ದೂರು ನೀಡಿರುವುದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ನಾಗರತ್ನ, “ವೈವಾಹಿಕ ವಿವಾದದ ಸಮಯದಲ್ಲಿ ಪತಿಯ ಉದ್ಯೋಗದಾತರಿಗೆ ಪತ್ರ ಬರೆಯುವುದು ಪತ್ನಿ ಮಾಡಬಹುದಾದ ಅತ್ಯಂತ ಕೆಟ್ಟ ಕೆಲಸಗಳಲ್ಲಿ ಒಂದಾಗಿದೆ. ಇದರಿಂದ ಗಂಡ ತನ್ನ ಉದ್ಯೋಗವನ್ನು ಕಳೆದುಕೊಳ್ಳಬೇಕಾಗುತ್ತದೆ. ಗಂಡನಿಗೆ ಕೆಲಸವೇ ಇಲ್ಲದಿದ್ದರೆ ಭವಿಷ್ಯದಲ್ಲಿ ಆತನಿಂದ ಪಡೆಯಬಹುದಾದ ಜೀವನಾಂಶಕ್ಕೂ ಯಾವುದೇ ಆಧಾರ ಉಳಿಯುವುದಿಲ್ಲ. ಇದರಿಂದ ಪತ್ನಿಗೇ ತೊಂದರೆಯಾಗುತ್ತದೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ‘ನ್ಯಾಯಾಲಯದ ದಾರಿ ತಪ್ಪಿಸಬೇಡಿ’; ಕಾಮಿಡಿಯನ್ ಸಮಯ್ ರೈನಾಗೆ 3 ಲಕ್ಷ ರೂ. ದಂಡ ವಿಧಿಸಿದ ಸುಪ್ರೀಂ ಕೋರ್ಟ್!

ಇದಕ್ಕೆ ಸ್ಪಷ್ಟನೆ ನೀಡಿದ ಮಹಿಳೆಯ ವಕೀಲರು, “ವಾಯುಪಡೆಗೆ ಸೇರಿದ ಹೆಲ್ಮೆಟ್ ಅನ್ನು ಪತ್ನಿ ಮತ್ತು ಆಕೆಯ ಸಹೋದರ ಕದ್ದಿದ್ದಾರೆ ಎಂದು ಪತಿಯು ಈ ಹಿಂದೆ ಸುಳ್ಳು ದೂರು ನೀಡಿದ್ದನು. ಆ ಹೆಲ್ಮೆಟ್ ಎಲ್ಲಿದೆ ಎಂದು ತಿಳಿಯುವ ಉದ್ದೇಶದಿಂದಷ್ಟೇ ವಾಯುಪಡೆಗೆ ಪತ್ರ ಬರೆಯಲಾಗಿತ್ತು” ಎಂದು ವಾದಿಸಿದರು.

ಈ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ದಂಪತಿಯ ನಡುವಿನ ಎಲ್ಲಾ ವಿವಾದಗಳನ್ನು ಪರಸ್ಪರ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳುವ ಸಾಧ್ಯತೆಯನ್ನು ಪರಿಶೀಲಿಸಲು ಪ್ರಕರಣವನ್ನು ‘ಸುಪ್ರೀಂ ಕೋರ್ಟ್ ಮಧ್ಯಸ್ಥಿಕೆ ಕೇಂದ್ರಕ್ಕೆ’ ಉಲ್ಲೇಖಿಸಿದೆ. ಅಲ್ಲದೆ, ಎಲ್ಲಾ ಆರೋಪಗಳನ್ನು ಹಿಂಪಡೆದು ಸಮಸ್ಯೆಯನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳುವಂತೆ ಮಹಿಳೆಗೆ ಸಲಹೆ ನೀಡುವಂತೆ ಆಕೆಯ ಪರ ವಕೀಲರಿಗೆ ನ್ಯಾಯಪೀಠ ಸೂಚಿಸಿದೆ.

ಇದನ್ನೂ ಓದಿ: 9ನೇ ತರಗತಿಯಿಂದಲೇ ಏಕೆ?; ಸಿಬಿಎಸ್​ಇ ತ್ರಿಭಾಷಾ ನೀತಿಗೆ ಸುಪ್ರೀಂ ಕೋರ್ಟ್ ಆಕ್ಷೇಪ

ಈ ಪ್ರಕರಣದ ಹಿನ್ನೆಲೆ ಏನು?:

ಅಸ್ಸಾಂನಲ್ಲಿ ಪತಿಯ ಸ್ನೇಹಿತ ತನ್ನ ವಿರುದ್ಧ ದಾಖಲಿಸಿರುವ ಮಾನನಷ್ಟ ಮೊಕದ್ದಮೆಯನ್ನು ಉತ್ತರ ಪ್ರದೇಶದ ಗಾಜಿಯಾಬಾದ್‌ಗೆ ವರ್ಗಾಯಿಸುವಂತೆ ಕೋರಿ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಈ ಪ್ರಸಂಗ ನಡೆಯಿತು. ಅಸ್ಸಾಂನಲ್ಲಿ ಪತಿಯ ಸ್ನೇಹಿತ ತನ್ನ ವಿರುದ್ಧ ದಾಖಲಿಸಿರುವ ಮಾನನಷ್ಟ ಮೊಕದ್ದಮೆಯನ್ನು ಉತ್ತರ ಪ್ರದೇಶದ ಗಾಜಿಯಾಬಾದ್‌ಗೆ ವರ್ಗಾಯಿಸುವಂತೆ ಕೋರಿ ಮಹಿಳೆಯೊಬ್ಬರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ತಾನು ಈಗಾಗಲೇ ಗಾಜಿಯಾಬಾದ್‌ನಲ್ಲಿ ಪತಿಯ ವಿರುದ್ಧ ಹಲವು ಪ್ರಕರಣಗಳನ್ನು ದಾಖಲಿಸಿರುವುದಾಗಿ ಆಕೆ ವಾದಿಸಿದ್ದರು.

ಅರ್ಜಿದಾರ ಮಹಿಳೆಯ ಪತಿ ಭಾರತೀಯ ವಾಯುಪಡೆಯ ಅಧಿಕಾರಿಯಾಗಿದ್ದು, ಅವರು ಸೇವಾ ನಿಯಮಗಳನ್ನು ಉಲ್ಲಂಘಿಸಿ ಸ್ವತಂತ್ರ ಉದ್ಯಮ ನಡೆಸುತ್ತಿದ್ದಾರೆ ಎಂದು ಆ ಮಹಿಳೆಯು ದೆಹಲಿಯ ವಾಯುಪಡೆ ಆಡಳಿತ ಮಂಡಳಿಗೆ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಆಕೆಯ ಪತಿಯ ಸಹೋದ್ಯೋಗಿ ಹಾಗೂ ಸ್ನೇಹಿತ ಆ ಮಹಿಳೆಯ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

15 ಸಾವಿರ ಶಿಕ್ಷಕರ ನೇಮಕಾತಿಗೆ ಸಂಪುಟ ಸಭೆ ಅನುಮೋದನೆ; ವಿವಿಧ ಮೂಲಸೌಕರ್ಯ ಯೋಜನೆಗಳಿಗೆ ಅಸ್ತು! – Kannada News | Karnataka Cabinet Approves 15,000 Teacher Posts and Key Development Projects

ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರ ಮುಂದಾಗಿದ್ದು, ಒಟ್ಟು 15 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ರವಿವಾರ ವಿಧಾನಸೌಧದಲ್ಲಿ ನಡೆದ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ಪ್ರಮುಖ ತೀರ್ಮಾನಗಳ ಕುರಿತು ಮಾಹಿತಿ ಹಂಚಿಕೊಂಡರು.

ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳು (ಸಾರ್ವಜನಿಕ ಶಿಕ್ಷಣ ಇಲಾಖೆ) ಕೆಲವು ಬೋಧನಾ ಹುದ್ದೆಗಳಿಗೆ ನೇಮಕಾತಿ ನಿಯಮ-2026ರ ಕರಡು ಅಧಿಸೂಚನೆಯನ್ನು ಹೊರಡಿಸಿರುವ ಕ್ರಮಕ್ಕೆ ಘಟನೋತ್ತರ ಅನುಮೋದನೆ ನೀಡಲಾಗಿದ್ದು, ಅದರಂತೆ 15 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಶೀಘ್ರವೇ ನಡೆಯಲಿದೆ ಎಂದು ಅವರು ಪ್ರಕಟಿಸಿದರು.

ಸಂಪುಟ ಸಭೆಯ ಇತರೆ ಪ್ರಮುಖ ತೀರ್ಮಾನಗಳು:

  • ಬೆಂಗಳೂರಿನ ಲೋಕಭವನ ಆವರಣದಲ್ಲಿ ರಾಜ್ಯಪಾಲರ ಆಡಳಿತ ಕಚೇರಿ, ವಿಶೇಷ ಕಾರ್ಯದರ್ಶಿಗಳ ವಸತಿ ಗೃಹ ಹಾಗೂ ಒಳಾಂಗಣ ಕ್ರೀಡಾಂಗಣ ನಿರ್ಮಾಣ ಕಾಮಗಾರಿಗಳಿಗೆ 27 ಕೋಟಿ ವೆಚ್ಚದ ಯೋಜನೆಯನ್ನು ಸಚಿವ ಸಂಪುಟ ಅನುಮೋದಿಸಿದೆ
  • ಅಲೆಮಾರಿ ಮತ್ತು ಅರೆ ಅಲೆಮಾರಿ ಕಾಲೋನಿಗಳ ಸಮಗ್ರ ಅಭಿವೃದ್ಧಿಗಾಗಿ ಮೂಲಭೂತ ಸೌಕರ್ಯಗಳನ್ನು ಒಳಗೊಂಡಂತೆ ಮನೆಗಳನ್ನು ನಿರ್ಮಿಸಲು ನಿರ್ಧರಿಸಲಾಗಿದೆ. 10 ಲಕ್ಷ ರೂ. ಘಟಕ ವೆಚ್ಚದಲ್ಲಿ 380 ಚದರ ಅಡಿಗಳ ವಿಸ್ತೀರ್ಣದ ಮನೆಗಳನ್ನು ನಿರ್ಮಿಸಿಕೊಡಲಾಗುವುದು.
  • ರಾಯಚೂರಿನಲ್ಲಿರುವ ರಾಯಚೂರು ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯಡಿ (IIIT) ಎಐ (AI) ಶ್ರೇಷ್ಠತಾ ಕೇಂದ್ರವನ್ನು 5 ವರ್ಷಗಳ ಅವಧಿಯಲ್ಲಿ ಸ್ಥಾಪಿಸಲು ಒಟ್ಟು 12 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ.
  • ಬೆಂಗಳೂರಿನ ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕಾಲೇಜುಗಳ ಎಂಬಿಬಿಎಸ್ (MBBS) ಮತ್ತು ಬಿಡಿಎಸ್ (BDS) ವಿದ್ಯಾರ್ಥಿಗಳಿಗೆ ಬಾಲಕರ ವಸತಿ ಕಟ್ಟಡ ನಿರ್ಮಾಣ ಕಾಮಗಾರಿಯನ್ನು 83.50 ಕೋಟಿ ವೆಚ್ಚದಲ್ಲಿ ಕೈಗೊಳ್ಳಲು ಅನುಮೋದಿಸಲಾಗಿದೆ.
  • 2025-26ನೇ ಸಾಲಿನ ಮುಖ್ಯಮಂತ್ರಿಯವರ ಮೂಲಭೂತ ಸೌಕರ್ಯ ಅಭಿವೃದ್ಧಿ ಯೋಜನೆಯಡಿ ಕಲಬುರಗಿ ಜಿಲ್ಲೆಯಲ್ಲಿ ರಾಜ್ಯ ಹೆದ್ದಾರಿ SH-156 ಹಾಗೂ ಜಿಲ್ಲಾ ಮುಖ್ಯ ರಸ್ತೆ ಅಭಿವೃದ್ಧಿಪಡಿಸುವ ಕಾಮಗಾರಿಗಳನ್ನು 25 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗುವುದು.
  • ಕಪಿಲಾ ನದಿಗೆ ನಂಜನಗೂಡು ನಗರ ವ್ಯಾಪ್ತಿಯ ಮಲಿನ ನೀರು ಸೇರದಂತೆ ಹಾಗೂ ಪ್ರವಾಹವನ್ನು ತಡೆಯಲು 70 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
  • ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವಗೊಂಡನಹಳ್ಳಿ ಹೋಬಳಿ ನೀರಾವರಿ ಜಲಮಂಡಳಿಯ 116 ಕೆರೆಗಳು ಹಾಗೂ ಗಾಯತ್ರಿ ಜಲಾಶಯದ ಕುಡಿಯುವ ನೀರು ತುಂಬಿಸುವ ಮತ್ತು ಅಂತರ್ಜಲ ಅಭಿವೃದ್ಧಿಪಡಿಸುವ 244 ಕೋಟಿ ರೂ. ಮೊತ್ತದ ಕಾಮಗಾರಿಗಳಿಗೆ ಅನುಮೋದನೆ ದೊರೆತಿದೆ.

ಕರ್ನಾಟಕ ಲೋಕಸೇವಾ ಆಯೋಗದ (KPSC) ಅಧ್ಯಕ್ಷರನ್ನು ಅಮಾನತಿನಲ್ಲಿರಿಸಿರುವ ರಾಜ್ಯಪಾಲರ ಆದೇಶವನ್ನು ಸಂಪುಟ ಸಭೆಯು ಅನುಮೋದಿಸಿದೆ. ಈ ಪತ್ರಿಕಾಗೋಷ್ಠಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಯು.ಟಿ. ಖಾದರ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On – 3:22 pm, Tue, 21 July 26

Source link

Ramlingareddy Visit Almatti Dam: ಆಲಮಟ್ಟಿ ಜಲಾಶಯಕ್ಕೆ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಭೇಟಿ – Kannada News | Water Resources Minister Ramlingareddy Inspects Almatti Dam Operations

ವಿಜಯಪುರ, ಜುಲೈ 21: ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಅವರು ವಿಜಯಪುರ ಜಿಲ್ಲೆಯ ನಿಡಗುಂದಿ ತಾಲ್ಲೂಕಿನಲ್ಲಿರುವ ಐತಿಹಾಸಿಕ ಆಲಮಟ್ಟಿ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯ ಎಂದೂ ಕರೆಯಲ್ಪಡುವ ಈ ಅಣೆಕಟ್ಟಿನ ಪ್ರಸ್ತುತ ಸ್ಥಿತಿಗತಿಗಳನ್ನು ಮತ್ತು ಅದರ ಗೇಟ್‌ಗಳ ನಿರ್ವಹಣೆಯನ್ನು ಸಚಿವರು ವೀಕ್ಷಿಸಿದರು. ಅವರು ಡ್ಯಾಂ ಗೇಟ್‌ಗಳ ಮುಂಭಾಗದಲ್ಲಿ ನಿಂತು ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳಿಂದ ವಿವರವಾದ ಮಾಹಿತಿ ಪಡೆದರು.

ಸಚಿವರ ಸಮ್ಮುಖದಲ್ಲಿ ಜಲಾಶಯದಿಂದ ನೀರನ್ನು ಗೇಟ್‌ಗಳ ಮೂಲಕ ಹೊರಬಿಡುವ ಪ್ರಕ್ರಿಯೆ ನಡೆಯಿತು. ಈ ನೀರು ಬಿಡುಗಡೆಯ ಸಂಪೂರ್ಣ ಪ್ರಕ್ರಿಯೆಯನ್ನು ರಾಮಲಿಂಗಾರೆಡ್ಡಿ ಅವರು ವೀಕ್ಷಿಸಿದರು. ಈ ಸಂದರ್ಭದಲ್ಲಿ, ಸ್ಥಳೀಯ ನಿವಾಸಿಗಳು ಮತ್ತು ರೈತರು ಸೇರಿದಂತೆ ಸಾರ್ವಜನಿಕರು ಸಚಿವರನ್ನು ಭೇಟಿ ಮಾಡಿ ತಮ್ಮ ಅಹವಾಲುಗಳನ್ನು ಮಂಡಿಸಿದರು. ಮುಖ್ಯಮಂತ್ರಿಯವರು ಈ ಹಿಂದೆ ನೀಡಿದ್ದ ಕೆಲವು ಭರವಸೆಗಳ ಬಗ್ಗೆ ಮತ್ತು ಅವುಗಳ ಅನುಷ್ಠಾನದ ಕುರಿತು ಚರ್ಚೆ ನಡೆಯಿತು. ಅಲ್ಲದೆ, ಸ್ಥಳೀಯರಿಗೆ ಕಾಲೇಜು ನಿರ್ಮಾಣದಂತಹ ಅಭಿವೃದ್ಧಿ ಬೇಡಿಕೆಗಳು ಮತ್ತು ನದಿಗಳಿಗೆ ಸಂಬಂಧಿಸಿದ ಕೆಲವು ಸಮಸ್ಯೆಗಳನ್ನು ಸಹ ಸಚಿವರ ಗಮನಕ್ಕೆ ತರಲಾಯಿತು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿಂಬಲ್ಡನ್ ಕೋರ್ಟ್‌ನಲ್ಲಿ ರಾರಾಜಿಸುವ ‘ಮೇಡ್ ಇನ್ ಇಂಡಿಯಾ’!

ಟೆನಿಸ್ ಲೋಕದ ಅತ್ಯಂತ ಪ್ರತಿಷ್ಠಿತ ಮತ್ತು ಹಳೆಯ ಟೂರ್ನಿ ವಿಂಬಲ್ಡನ್, ತನ್ನದೇ ಆದ ಕೆಲವು ಕಟ್ಟುನಿಟ್ಟಿನ ರಾಜಮನೆತನದ ಸಂಪ್ರದಾಯಗಳಿಗೆ ಹೆಸರುವಾಸಿ. ಆಟಗಾರರು ಕಡ್ಡಾಯವಾಗಿ ಬಿಳಿ ಬಣ್ಣದ ಉಡುಪನ್ನೇ ಧರಿಸಬೇಕು ಎಂಬ ನಿಯಮದಿಂದ ಹಿಡಿದು, ಗ್ಯಾಲರಿಯಲ್ಲಿ ರಾಜಮನೆತನದ ಗಣ್ಯರ ಉಪಸ್ಥಿತಿಯವರೆಗೆ ಇಲ್ಲಿನ ಪ್ರತಿಯೊಂದು ಸಂಗತಿಯೂ ಇತಿಹಾಸದ ಪುಟಗಳಂತೆ ಭಾಸವಾಗುತ್ತದೆ. ಆದರೆ, ಈ ಐತಿಹಾಸಿಕ ಕ್ರೀಡಾಕೂಟದಲ್ಲಿ ಭಾರತದ ಹೆಜ್ಜೆಯ ಗುರುತೂ ಇದೆ ಎಂಬುದು ಎಷ್ಟು ಜನರಿಗೆ ಗೊತ್ತು?

ಹೌದು, ನೋವಾಕ್ ಜೊಕೊವಿಚ್, ಯಾನಿಕ್ ಸಿನ್ನರ್, ಕಾರ್ಲೋಸ್ ಅಲ್ಕರಾಝ್ ಅವರಂತಹ ಆಟಗಾರರು ಪಂದ್ಯದ ಮಧ್ಯೆ ಬೆವರು ಒರೆಸಿಕೊಳ್ಳಲು ಬಳಸುವ ಆ ಐಕಾನಿಕ್ ಹಸಿರು ಮತ್ತು ನೇರಳೆ ಬಣ್ಣದ ವಿಂಬಲ್ಡನ್ ಟವೆಲ್‌ಗಳು ಸಂಪೂರ್ಣವಾಗಿ ತಯಾರಾಗುವುದು ಭಾರತದ ಗುಜರಾತ್‌ನ ವಾಪಿ ಎಂಬ ನಗರದಲ್ಲಿ!

ಮ್ಯಾಂಚೆಸ್ಟರ್‌ನಿಂದ ಗುಜರಾತ್‌ಗೆ ಬೆಳೆದ ಇತಿಹಾಸ!

ಬ್ರಿಟನ್‌ನ ಐಷಾರಾಮಿ ಟೆಕ್ಸ್‌ಟೈಲ್ ಬ್ರಾಂಡ್ ಆದ ‘ಕ್ರಿಸ್ಟಿ’ 1987 ರಿಂದ ವಿಂಬಲ್ಡನ್ ಟೂರ್ನಿಗೆ ಅಧಿಕೃತ ಟವೆಲ್ ಪೂರೈಕೆದಾರರು. ಆದರೆ, 2006 ರಲ್ಲಿ ಭಾರತದ ಜವಳಿ ದೈತ್ಯ ‘ವೆಲ್ಸ್‌ಪನ್ ಲಿವಿಂಗ್ ಲಿಮಿಟೆಡ್’ ಸಂಸ್ಥೆಯು ಈ ಕ್ರಿಸ್ಟಿ ಬ್ರಾಂಡ್ ಅನ್ನು ಖರೀದಿಸಿತು.

ತದನಂತರ, 2010 ರಲ್ಲಿ ಟವೆಲ್ ಉತ್ಪಾದನಾ ಘಟಕವನ್ನು ಇಂಗ್ಲೆಂಡ್‌ನ ಮ್ಯಾಂಚೆಸ್ಟರ್‌ನಿಂದ ಗುಜರಾತ್‌ನ ವಾಪಿ ಮತ್ತು ಅಂಜಾರ್‌ಗೆ ಸಂಪೂರ್ಣವಾಗಿ ಸ್ಥಳಾಂತರಿಸಲಾಯಿತು. ಅಂದಿನಿಂದ ಇಂದಿನವರೆಗೆ, ವಿಂಬಲ್ಡನ್‌ನ ಪ್ರತಿಯೊಂದು ಅಧಿಕೃತ ಟವೆಲ್ ಕೂಡ ಭಾರತದಲ್ಲೇ ನೇಯಲಾಗುತ್ತಿದೆ.

ವಿನ್ಯಾಸ ಬ್ರಿಟನ್‌ನದ್ದು, ತಯಾರಿಕೆ ಭಾರತದ್ದು!

ಈ ಟವೆಲ್‌ಗಳ ವಿನ್ಯಾಸದ ಪ್ರಕ್ರಿಯೆಯು ಬ್ರಿಟನ್‌ನ ಮ್ಯಾಂಚೆಸ್ಟರ್‌ನಲ್ಲಿರುವ ಕ್ರಿಸ್ಟಿ ಸ್ಟುಡಿಯೋದಲ್ಲಿ ನಡೆಯುತ್ತದೆ. ಆದರೆ ಅಲ್ಲಿಂದ ಮುಂದೆ ಹತ್ತಿ ಸಂಗ್ರಹಣೆ, ನೂಲು ತಯಾರಿಕೆ, ಅತ್ಯಾಧುನಿಕ ತಂತ್ರಜ್ಞಾನದ ನೇಯ್ಗೆ ಮತ್ತು ಅಂತಿಮ ಪ್ಯಾಕಿಂಗ್‌ವರೆಗೆ ಎಲ್ಲವೂ ಗುಜರಾತ್‌ನಲ್ಲೇ ನಡೆಯುತ್ತದೆ.

ಈ ಟವೆಲ್‌ಗಳನ್ನು ತಯಾರಿಸಲು ‘ಹೈಗ್ರೋ ಕಾಟನ್’ ಎಂಬ ವಿಶೇಷ ತಂತ್ರಜ್ಞಾನವನ್ನು ಬಳಸಲಾಗುತ್ತದೆ. ಇದು ಟವೆಲ್‌ಗೆ ಗರಿಷ್ಠ ಮೃದುತ್ವ ಮತ್ತು ನೀರನ್ನು ಹೀರಿಕೊಳ್ಳುವ ಅದ್ಭುತ ಸಾಮರ್ಥ್ಯವನ್ನು ನೀಡುತ್ತದೆ. ಟೂರ್ನಿ ಆರಂಭವಾಗುವ 18 ತಿಂಗಳು ಮುಂಚಿತವಾಗಿಯೇ ಇದರ ಯೋಜನೆ ಮತ್ತು ಸಿದ್ಧತೆಗಳು ಭಾರತದಲ್ಲಿ ಆರಂಭವಾಗುತ್ತವೆ.

ಆಟಗಾರರ ನೆನಪಿನ ಕಾಣಿಕೆ:

ವಿಂಬಲ್ಡನ್ ಟವೆಲ್‌ಗಳು ಕೇವಲ ಬಳಸುವ ವಸ್ತುವಲ್ಲ, ಅವು ಜಾಗತಿಕ ಮಟ್ಟದ ‘ವಿಶೇಷ ಸಂಗ್ರಹ’ ವಸ್ತುವಾಗಿ ಮಾರ್ಪಟ್ಟಿದೆ. ಪಂದ್ಯ ಮುಗಿದ ನಂತರ ಆಟಗಾರರು ಈ ಟವೆಲ್‌ಗಳನ್ನು ತಮ್ಮ ಕಿಟ್ ಬ್ಯಾಗ್‌ನಲ್ಲಿ ಇಟ್ಟುಕೊಂಡು ಮನೆಗೆ ಕೊಂಡೊಯ್ಯುವುದು ಒಂದು ಸಂಪ್ರದಾಯವಾಗಿ ಬೆಳೆದಿದೆ. ಇದೇ ಕಾರಣಕ್ಕೆ ಟೂರ್ನಿಯ ಅವಧಿಯಲ್ಲಿ ಪ್ರತಿದಿನ ಸುಮಾರು ಟವೆಲ್‌ಗಳು ಕೋರ್ಟ್‌ನಿಂದ ಮಾಯವಾಗುತ್ತವೆ.

“ನಾನು ವಿಂಬಲ್ಡನ್‌ನಿಂದ ಈ ಟವೆಲ್‌ಗಳನ್ನು ಮನೆಗೆ ಕೊಂಡೊಯ್ಯಲೆಂದೇ ನನ್ನ ಬ್ಯಾಗ್‌ನಲ್ಲಿ ಹೆಚ್ಚುವರಿ ಜಾಗವನ್ನು ಇಟ್ಟುಕೊಂಡು ಬರುತ್ತೇನೆ. ನನ್ನ ಸ್ನೇಹಿತರು ಮತ್ತು ಕುಟುಂಬದವರಿಗೆ ಇದು ಅತ್ಯುತ್ತಮ ಉಡುಗೊರೆ” ಎಂದು ಈ ಹಿಂದೊಮ್ಮೆ ಟೆನಿಸ್ ದಿಗ್ಗಜ ನೊವಾಕ್ ಜೊಕೊವಿಚ್ ಹೇಳಿದ್ದರು. ಈ ಹೇಳಿಕೆಯಲ್ಲೇ ಭಾರತದಲ್ಲಿ ತಯಾರಾರುವ ಈ ಟವೆಲ್​ನ ಗುಣಮಟ್ಟ ಮತ್ತು ಮಹತ್ವ ಏನೆಂಬುದು ತಿಳಿಯಬಹುದು.

ಒಟ್ಟಾರೆಯಾಗಿ, ವಿಂಬಲ್ಡನ್‌ನ ಹಸಿರು ಹುಲ್ಲಿನ ಕೋರ್ಟ್‌ನಲ್ಲಿ ಜಗತ್ತಿನ ಶ್ರೇಷ್ಠ ಟೆನಿಸ್ ತಾರೆಯರು ಜಿದ್ದಾಜಿದ್ದಿನ ಪಂದ್ಯ ಆಡುವಾಗ, ಅವರ ಬೆವರಿನ ಹನಿಗಳನ್ನು ಒರೆಸುವ ಈ ಟವೆಲ್‌ಗಳು ಕೇವಲ ಒಂದು ಜವಳಿ ಉತ್ಪನ್ನವಲ್ಲ. ಅದು ಭಾರತದ ನುರಿತ ನೇಕಾರರ ಶ್ರಮ, ಗುಜರಾತ್‌ನ ಕೈಗಾರಿಕಾ ಕೌಶಲ್ಯ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಭಾರತೀಯ ಉದ್ಯಮ ಸಾಧಿಸಿದ ಅಪ್ರತಿಮ ಯಶಸ್ಸಿನ ಸಂಕೇತ.

ಇದನ್ನೂ ಓದಿ: ಒಂದೇ ಒಂದು ಗೋಲು… ಎಲ್ಲಾ ತಂಡಗಳಿಗೆ ಪೇನ್ ನೀಡಿದ ಸ್ಪೇನ್!

ಲಂಡನ್‌ನ ಪ್ರತಿಷ್ಠಿತ ಕ್ರೀಡಾಂಗಣದಲ್ಲಿ ಪ್ರತಿಬಾರಿಯೂ ಆಟಗಾರರು ಈ ಟವೆಲ್ ಬಳಸುವಾಗ, ವಾಪಿ ನಗರದ ಮಣ್ಣಿನ ಹೆಗ್ಗುರುತು ಅಲ್ಲಿ ರಾರಾಜಿಸುತ್ತಿರುತ್ತದೆ. ಇದು ಕೇವಲ ಬ್ರಾಂಡ್ ಒಂದರ ಬೆಳವಣಿಗೆಯಲ್ಲ, ಬದಲಿಗೆ ಜಾಗತಿಕ ಗುಣಮಟ್ಟಕ್ಕೆ ಭಾರತವೇ ಮುಂಚೂಣಿ ಎಂಬುದಕ್ಕೆ ಪ್ರತ್ಯಕ್ಷ ಸಾಕ್ಷಿ!

Source link

ಮೂರು ದಿನ ಆ ಹೆಂಡತಿ ಮನೆ, ಮೂರು ದಿನ ಈ ಹೆಂಡತಿ ಮನೆ, ಅಂತೂ ಇಬ್ಬರು ಹೆಂಡತಿಯರ ಕಗ್ಗಂಟು ಸಡಿಲ – Kannada News | UP Panchayat’s Unique Two Wife Solution: Three Days Each, Financial Aid

ರಾಂಪುರ, ಜುಲೈ 21: ಪತಿ(Husband) ತನ್ನೊಂದಿಗಿರಬೇಕು, ತನ್ನೊಂದಿಗಿರಬೇಕು ಎಂದು ಇಬ್ಬರು ಹೆಂಡತಿಯರು ಪಟ್ಟು ಹಿಡಿದಿದ್ದು, ಗಂಡನಿಗೆ ಕಗ್ಗಂಟಾಗಿ ಪರಿಣಮಿಸಿತ್ತು. ಈ ಕಲಹ ಬಗೆಹರಿಸಲು ಗ್ರಾಮೀಣ ಪಂಚಾಯತಿ ನೀಡಿದ ತೀರ್ಪು ಇಡೀ ಉತ್ತರ ಪ್ರದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ವಾರದ ಏಳು ದಿನಗಳನ್ನು ಇಬ್ಬರು ಪತ್ನಿಯರ ನಡುವೆ ಹಂಚಿಕೆ ಮಾಡಿ ಪಂಚಾಯಿತಿ ಅಚ್ಚರಿಯ ‘ಸಮಪಾಲು-ಸಮಬಾಳು’ ಸೂತ್ರವನ್ನು ರೂಪಿಸಿದೆ.

ಉತ್ತರ ಪ್ರದೇಶದ ರಾಂಪುರ ಜಿಲ್ಲೆಯ ದಧಿಯಾಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಆ ವ್ಯಕ್ತಿಗೆ ಸುಮಾರು 14 ವರ್ಷಗಳ ಹಿಂದೆ ಮೊದಲ ಮದುವೆಯಾಗಿದ್ದು, ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಮೊದಲ ಪತ್ನಿಯ ಒಪ್ಪಿಗೆಯಿಲ್ಲದೆ ಆತ ಎರಡನೇ ಮದುವೆಯಾಗಿದ್ದ. ಎರಡನೇ ಪತ್ನಿಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

ಯುವಕ ಸಂಪೂರ್ಣವಾಗಿ ಮೊದಲ ಪತ್ನಿಯನ್ನು ನಿರ್ಲಕ್ಷಿಸಿ, ಹೆಚ್ಚಿನ ಸಮಯವನ್ನು ಎರಡನೇ ಹೆಂಡತಿಯೊಂದಿಗೇ ಕಳೆಯಲು ಪ್ರಾರಂಭಿಸಿದ. ಇದರಿಂದ ಬೇಸರ ಉಂಟಾಗಿ ಮೊದಲ ಪತ್ನಿ ತನಗೆ ಜೀವನ ನಿರ್ವಹಣೆಗೆ ಹಣ ಹಾಗೂ ಬೆಂಬಲ ಸಿಗುತ್ತಿಲ್ಲ ಎಂದು ಪೋಲಿಸ್ ಠಾಣೆಗೆ ದೂರು ನೀಡಿದ್ದಳು. ಈ ವಿಷಯ ಪೊಲೀಸ್ ಠಾಣೆ ಮೆಟ್ಟಿಲೇರಿದ ನಂತರ, ಗ್ರಾಮದ ಹಿರಿಯರು ಹಾಗೂ ಎರಡೂ ಕುಟುಂಬಗಳ ಸಮ್ಮುಖದಲ್ಲಿ ಪಂಚಾಯಿತಿ ಕರೆಯಲಾಯಿತು. ಸುದೀರ್ಘ ಚರ್ಚೆಯ ನಂತರ ಪಂಚಾಯಿತಿ ಈ ಕೆಳಗಿನಂತೆ ಲಿಖಿತ ಒಪ್ಪಂದ ರೂಪಿಸಿತು. ಮೂರು ದಿನ ಒಂದು ಪತ್ನಿ ಜತೆ, ಮತೆತ ಮೂರು ದಿನ ಎರಡನೇ ಜತೆ ಕಳೆಯಬೇಕು ಎಂದು ತೀರ್ಪು ನೀಡಲಾಗಿದೆ.

ಮತ್ತಷ್ಟು ಓದಿ: ರೋಗಿಗಳ ಜೀವದ ಜೊತೆ ಚೆಲ್ಲಾಟ: ಪತಿ ಸರಕಾರಿ ವೈದ್ಯ, ಆದರೆ ಚಿಕಿತ್ಸೆ ನೀಡೋದು ಪತ್ನಿ!

ಭಾನುವಾರ ಆತನಿಗೆ ಸಂಪೂರ್ಣ ಸ್ವಾತಂತ್ರ್ಯ, ಅವರು ತನ್ನ ಇಷ್ಟದಂತೆ ಯಾರ ಜೊತೆಯಾದರೂ ಇರಬಹುದು ಅಥವಾ ಎಲ್ಲಿಗಾದರೂ ಹೋಗಬಹುದು ಎಂದು ಹೇಳಲಾಗಿದೆ.

ಇಷ್ಟೇ ಅಲ್ಲದೆ, ಮೊದಲ ಪತ್ನಿ ಮತ್ತು ಮಕ್ಕಳ ದಿನನಿತ್ಯದ ನಿರ್ವಹಣೆಗಾಗಿ ಪ್ರತಿ ತಿಂಗಳು ಪಡಿತರ ಹಾಗೂ ಸಾಪ್ತಾಹಿಕ ಖರ್ಚಿನ ಹಣವನ್ನು ಗಂಡ ಕಡ್ಡಾಯವಾಗಿ ನೀಡಬೇಕೆಂದು ಪಂಚಾಯಿತಿ ಆದೇಶಿಸಿದೆ. ಪಂಚಾಯಿತಿಯ ಈ ವಿಶಿಷ್ಟ ತೀರ್ಪಿಗೆ ಇಬ್ಬರೂ ಹೆಂಡತಿಯರು ಹಾಗೂ ಗಂಡ ಒಪ್ಪಿಗೆ ಸೂಚಿಸಿದ್ದಾರೆ. ಒಪ್ಪಂದದ ನಂತರ ಮೊದಲ ಪತ್ನಿ ಪೋಲಿಸ್ ಠಾಣೆಯಲ್ಲಿದ್ದ ತನ್ನ ದೂರನ್ನು ವಾಪಸ್ ಪಡೆದುಕೊಂಡಿದ್ದಾಳೆ. ಪ್ರಕರಣವು ಸೌಹಾರ್ದಯುತವಾಗಿ ಇತ್ಯರ್ಥವಾಗಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version