ರಾಕಿಂಗ್ ಸ್ಟಾರ್ ಯಶ್ (Yash) ನಟನೆಯ ಬಹುನಿರೀಕ್ಷಿತ ಸಿನಿಮಾ ‘ಟಾಕ್ಸಿಕ್’ ಕೆಲಸಗಳು ಭರದಿಂದ ಸಾಗುತ್ತಿವೆ. ಈ ಚಿತ್ರ ಜೂನ್ 4ರಂದು ತೆರೆಗೆ ಬರಲಿದೆ. ಇತ್ತೀಚೆಗೆ ಸಿನಿಮಾದ ಟೀಸರ್ ಹಾಗೂ ಸಾಂಗ್ ರಿಲೀಸ್ ಆಗಿ ಸದ್ದು ಮಾಡಿತ್ತು. ಈ ಚಿತ್ರದ ಜೊತೆ ಅವರು ‘ರಾಮಾಯಣ’ ಸಿನಿಮಾದಲ್ಲೂ ನಟಿಸಿದ್ದಾರೆ. ಈ ಚಿತ್ರದಲ್ಲಿ ರಾವಣನ ಪಾತ್ರ ಮಾಡಿದ್ದಾರೆ. ಈ ಚಿತ್ರ ಒಪ್ಪಿಕೊಳ್ಳಲು ಕಾರಣವಾದ ವಿಷಯವೇನು ಎಂಬ ವಿಷಯ ಈಗ ರಿವೀಲ್ ಆಗಿದೆ.
ಇತ್ತೀಚೆಗೆ ರಿಲೀಸ್ ಆದ ‘ರಾಮಾಯಣ’ ಟೀಸರ್ನಲ್ಲಿ ಯಶ್ ಅವರು ರಾವಣನ ಪಾತ್ರ ಹೇಗಿರಬಹುದು ಎಂಬುದರ ಸಣ್ಣ ಝಲಕ್ ತೋರಿಸಲಾಗಿದೆ. ಈ ಟೀಸರ್ನಲ್ಲಿ ರಾವಣನ ಪಾತ್ರವನ್ನು ಹಿಂಭಾಗದಿಂದ ಮಾತ್ರ ತೋರಿಸಲಾಗಿದೆ. ಈ ಮೂಲಕ ನಿರೀಕ್ಷೆ ಮುಂದುವರಿಯುವಂತೆ ಮಾಡಲಾಗಿದೆ.ಈ ಪಾತ್ರದ ಬಗ್ಗೆ ನಿರ್ದೇಶಕ ನಿತೇಶ್ ತಿವಾರಿ ಇತ್ತೀಚೆಗೆ ಮಾತನಾಡಿದ್ದರು.
‘ರಾವಣ ಎಂದಾಕ್ಷಣ ನೆನಪಿಗೆ ಬರೋದು ಆತನ ಕೆಟ್ಟ ಗುಣಗಳು. ಆದರೆ, ರಾವಣ ಕೇವಲ ಕೆಟ್ಟವನು ಮಾತ್ರ ಆಗಿರಲಿಲ್ಲ. ಆತ, ಶಿವನ ದೊಡ್ಡ ಭಕ್ತನಾಗಿದ್ದ. ಆತನಿಗೆ ಸಾಕಷ್ಟು ಜ್ಞಾನ ಇತ್ತು. ರಾವಣನ ಹಲವು ಶೇಡ್ಗಳನ್ನು ತೋರಿಸುವ ಪ್ರಯತ್ನ ಸಿನಿಮಾದಲ್ಲಿ ಆಗಲಿದೆ’ ಎಂದು ನಿತೇಶ್ ಹೇಳಿದ್ದಾರೆ.
‘ಒಬ್ಬ ಮನುಷ್ಯ ಅಹಂಕಾರ ಮತ್ತು ಪ್ರತೀಕಾರವನ್ನು ಬೆಳೆಸಿಕೊಂಡರೆ ಅವನ ಯಾವುದೇ ಉತ್ತಮ ಗುಣಗಳು ಕೆಲಸಕ್ಕೆ ಬರೋದಿಲ್ಲ ಮತ್ತು ಅವನು ರಾವಣನಂತೆ ಕೊನೆಗೊಳ್ಳುತ್ತಾನೆ’ ಎಂಬ ಸಂದೇಶ ಸಿನಿಮಾದಲ್ಲಿ ಇರಲಿದೆಯಂತೆ. ಈ ಚಿತ್ರದಲ್ಲಿ ರಾವಣನ ವ್ಯಾಖ್ಯಾನವು ನಾವು ಈ ಮೊದಲು ನೋಡಿದ ಇತರ ರಾಮಾಯಣ ಚಿತ್ರಗಳಲ್ಲಿ ನೋಡಿದ್ದಕ್ಕಿಂತ ಬಹಳ ಭಿನ್ನವಾಗಿರುತ್ತದೆ ಎಂದು ರಣಬೀರ್ ಕಪೂರ್ ಹೇಳಿದ್ದಾರೆ. ಯಶ್ ಅವರು ಈ ಪಾತ್ರವನ್ನು ನೋಡುವ ರೀತಿ ಕೂಡ ಭಿನ್ನವಾಗಿದೆ ಎಂದು ರಣಬೀರ್ ವಿವರಿಸಿದ್ದರು.
ಈ ಎಲ್ಲಾ ಕಾರಣದಿಂದ ಯಶ್ ಅವರು ರಾವಣನ ಪಾತ್ರ ಮಾಡಲು ಒಪ್ಪಿರಬಹುದು ಎನ್ನಲಾಗುತ್ತಿದೆ. ಈ ಮೊದಲು ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ಯಶ್, ರಾವಣನ ಪಾತ್ರ ಮಾಡಲು ತುಂಬಾನೇ ಇಷ್ಟ ಎಂದಿದ್ದರು.
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ 13ನೇ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ (Vaibhav Suryavanshi) ಹಾಗೂ ಯಶಸ್ವಿ ಜೈಸ್ವಾಲ್ (Yashasvi Jaiswal) ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಗುವಾಹಟಿಯ ಬರ್ಸಪರಾ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಿದ್ದವು.
ಮಳೆಯ ಕಾರಣ 11 ಓವರ್ಗಳಿಗೆ ಸೀಮಿತವಾಗಿದ್ದ ಈ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ವೈಭವ್ ಸೂರ್ಯವಂಶಿ ಹಾಗೂ ಯಶಸ್ವಿ ಜೈಸ್ವಾಲ್ ವಿಸ್ಫೋಟಕ ಆರಂಭ ಒದಗಿಸಿದ್ದರು.
ಈ ಸಿಡಿಲಬ್ಬರದ ಬ್ಯಾಟಿಂಗ್ನೊಂದಿಗೆ ಯುವ ಜೋಡಿ ಮೂರು ಓವರ್ಗಳಲ್ಲಿ ಕಲೆಹಾಕಿದ್ದು ಬರೋಬ್ಬರಿ 58 ರನ್ಗಳು. ಇತ್ತ 18 ಎಸೆತಗಳಲ್ಲಿ 58 ರನ್ ಬಾರಿಸಿದರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ದಾಖಲೆ ಮುರಿಯಲು ಸಾಧ್ಯವಾಗಿಲ್ಲ ಎಂಬುದು ವಿಶೇಷ.
ಅಂದರೆ ಐಪಿಎಲ್ ಇತಿಹಾಸದಲ್ಲಿ ಮೊದಲ ಮೂರು ಓವರ್ಗಳಲ್ಲಿ ಅತ್ಯಧಿಕ ರನ್ ಕಲೆಹಾಕಿದ ದಾಖಲೆ ಆರ್ಸಿಬಿ ತಂಡದ ಹೆಸರಿನಲ್ಲಿದೆ. 2011 ರಲ್ಲಿ ಕೊಚ್ಚಿ ಟಸ್ಕರ್ಸ್ ಕೇರಳ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ಪರ ಆರಂಭಿಕರಾಗಿ ಕಣಕ್ಕಿಳಿದ ಕ್ರಿಸ್ ಗೇಲ್ ಹಾಗೂ ತಿಲಕರತ್ನೆ ದಿಲ್ಶಾನ್ ಕೇವಲ 3 ಓವರ್ಗಳಲ್ಲಿ 66 ರನ್ ಬಾರಿಸಿದ್ದರು. ಇದು ಐಪಿಎಲ್ ಇತಿಹಾಸದಲ್ಲಿ ಮೊದಲ 3 ಓವರ್ಗಳಲ್ಲಿ ಮೂಡಿಬಂದ ಗರಿಷ್ಠ ಸ್ಕೋರ್.
ಇತ್ತ ವೈಭವ್ ಸೂರ್ಯವಂಶಿ ಹಾಗೂ ಯಶಸ್ವಿ ಜೈಸ್ವಾಲ್ 3 ಓವರ್ಗಳಲ್ಲಿ 58 ರನ್ ಗಳಿಸಲಷ್ಟೇ ಶಕ್ತರಾದರು. ಇದಾಗ್ಯೂ ಈ ಸ್ಫೋಟಕ ಆರಂಭದ ನೆರವಿನೊಂದಿಗೆ ರಾಜಸ್ಥಾನ್ ರಾಯಲ್ಸ್ ತಂಡವು ಈ ಪಂದ್ಯದಲ್ಲಿ ನಿಗದಿತ 11 ಓವರ್ಗಳಲ್ಲಿ 150 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡವು 11 ಓವರ್ಗಳಲ್ಲಿ 123 ರನ್ಗಳಿಸಿ 27 ರನ್ಗಳಿಂದ ಸೋಲೊಪ್ಪಿಕೊಂಡಿದೆ.
ಟೆಹ್ರಾನ್, ಏಪ್ರಿಲ್ 08: ಎರಡು ವಾರಗಳ ಕದನ ವಿರಾಮಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಒಪ್ಪಿಗೆ ಕೊಡುತ್ತಿದ್ದಂತೆ ಇತ್ತ ಇರಾನ್ ಹಾರ್ಮುಜ್ ಜಲಸಂಧಿಯನ್ನು ತೆರೆಯಲು ಅನುಮತಿ ನೀಡಿದ್ದು, ಇರಾನ್ನಿಂದ ತೈಲ ಸಾಗಾಟ ಸುಗಮವಾಗಲಿದೆ. ಭಾರತ ಸೇರಿ ಅನೇಕ ದೇಶಗಳಿಗೆ ಇದರಿಂದ ಅನುಕೂಲವಾಗಲಿದೆ. ಇರಾನ್ ಮೇಲಿನ ದಾಳಿಯನ್ನು ಎರಡು ವಾರಗಳ ಕಾಲ ಮುಂದೂಡಲು ಅಮೆರಿಕ ಅಧ್ಯಕ್ಷ ಟ್ರಂಪ್ ನಿರ್ಧರಿಸಿದ್ದು, ಜಾಗತಿಕ ಮಾರುಕಟ್ಟೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ. ಘೋಷಣೆಯ ನಂತರ, ಕಚ್ಚಾ ತೈಲ ಬೆಲೆಗಳು ತೀವ್ರವಾಗಿ ಕುಸಿದಿವೆ ಮತ್ತು ಅಮೆರಿಕದ ಷೇರುಗಳು ಏರಿಕೆಯಾಗಿವೆ.
ಇರಾನ್ ಹಾರ್ಮುಜ್ ಜಲಸಂಧಿಯ ಮೂಲಕ ಹಡಗುಗಳನ್ನು ಸುರಕ್ಷಿತವಾಗಿ ಹಾದುಹೋಗಲು ಅನುಮತಿಸಿದರೆ ಮಿಲಿಟರಿ ಕ್ರಮವನ್ನು ನಿಲ್ಲಿಸಬಹುದು ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದರು. ಇದೀಗ ಇರಾನ್ ಅದಕ್ಕೆ ಒಪ್ಪಿಕೊಂಡಿದೆ. ಹಾರ್ಮುಜ್ ಜಲಸಂಧಿಯನ್ನು ಎರಡು ವಾರಗಳ ಅವಧಿಗೆ ತೆರೆಯಲಾಗುವುದು ಎಂದು ಅರಾಘ್ಚಿ ಘೋಷಿಸಿದ್ದಾರೆ.
ಯುಎಸ್ ಕಚ್ಚಾ ತೈಲ ಬೆಲೆಗಳು ಸುಮಾರು ಶೇ. 18 ರಷ್ಟು ಇಳಿದು ಪ್ರತಿ ಬ್ಯಾರೆಲ್ಗೆ 92.60 ಡಾಲರ್ಗೆ ಕ್ಕೆ ತಲುಪಿದರೆ, ಬ್ರೆಂಟ್ ಕಚ್ಚಾ ತೈಲ ಬೆಲೆಗಳು ಸುಮಾರು ಶೇ.6 ರಷ್ಟು ಇಳಿದು ಪ್ರತಿ ಬ್ಯಾರೆಲ್ಗೆ 103.40 ಡಾಲರ್ಗೆ ತಲುಪಿವೆ. ಅಮೆರಿಕದ ಷೇರು ಮಾರುಕಟ್ಟೆಗಳು ಏರಿಕೆಯಾಗಿದ್ದು, ಹೂಡಿಕೆದಾರರ ವಿಶ್ವಾಸವನ್ನು ಹೆಚ್ಚಿಸಿವೆ.
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಮುಖ ಘೋಷಣೆ ಮಾಡಿದ್ದು, ಇರಾನ್ ಮೇಲಿನ ಸಂಭಾವ್ಯ ದಾಳಿಗಳು ಮತ್ತು ಬಾಂಬ್ ದಾಳಿಗಳನ್ನು ಎರಡು ವಾರಗಳ ಕಾಲ ನಿಲ್ಲಿಸಲಾಗಿದೆ ಎಂದು ಹೇಳಿದ್ದಾರೆ. ಇದು ದ್ವಿಪಕ್ಷೀಯ ಕದನ ವಿರಾಮ ಎಂದು ಟ್ರಂಪ್ ಹೇಳಿದ್ದಾರೆ.
ಅಂದರೆ ಈ ಅವಧಿಯಲ್ಲಿ ಅಮೆರಿಕ ಅಥವಾ ಇರಾನ್ ಯಾವುದೇ ಆಕ್ರಮಣಕಾರಿ ಕ್ರಮವನ್ನು ತೆಗೆದುಕೊಳ್ಳುವುದಿಲ್ಲ.ಈ ಒಪ್ಪಂದಕ್ಕೆ ಒಂದು ಮಹತ್ವದ ಷರತ್ತು ವಿಧಿಸಲಾಗಿದೆ: ಇರಾನ್ ತಕ್ಷಣವೇ, ಸಂಪೂರ್ಣವಾಗಿ ಮತ್ತು ಸುರಕ್ಷಿತವಾಗಿ ಹಾರ್ಮುಜ್ ಜಲಸಂಧಿಯನ್ನು ತೆರೆಯಬೇಕು. ಕದನ ವಿರಾಮಕ್ಕೆ ಪಾಕಿಸ್ತಾನದ ಪ್ರಯತ್ನಗಳಿಗೆ ಅಬ್ಬಾಸ್ ಅರಘ್ಚಿ ಕೃತಜ್ಞತೆ ಸಲ್ಲಿಸಿದರು ಮತ್ತು ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಅವರನ್ನು ಶ್ಲಾಘಿಸಿದರು.
ಇರಾನ್ಗೆ ನೀಡಿದ್ದ 48 ಗಂಟೆಗಳ ಡೆಡ್ಲೈನ್ ಅಮೆರಿಕ ಕಾಲಮಾನ ರಾತ್ರಿ 8 ಗಂಟೆಗೆ ಅಂತ್ಯವಾಗುವ ಒಂದು ಗಂಟೆಯ ಮೊದಲು ಟ್ರಂಪ್ ತಮ್ಮ ಟ್ರೂಥ್ ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರು ಇಂದು ರಾತ್ರಿ ಇರಾನ್ಗೆ ಕಳುಹಿಸಲಾಗುತ್ತಿರುವ ವಿನಾಶಕಾರಿ ಪಡೆಗಳನ್ನು ತಡೆಹಿಡಿಯುವಂತೆ ಮನವಿ ಮಾಡಿದರು. ಹಾರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ಈ ಕೂಡಲೇ ತೆರೆಯಲು ಒಪ್ಪಿಕೊಂಡರೆ ಇರಾನ್ ಮೇಲೆ ಮಾಡಲು ಉದ್ದೇಶಿಸಿರುವ ಬಾಂಬ್ ದಾಳಿಯನ್ನು ಎರಡು ವಾರಗಳ ಕಾಲ ತಡೆ ಹಿಡಿಯಲು ಒಪ್ಪಿಗೆ ನೀಡುತ್ತೇನೆ. ಇದು ದ್ವಿಪಕ್ಷೀಯ ಕದನ ವಿರಾಮ ಆಗಲಿದೆ ಎಂದಿದ್ದಾರೆ.
ಟಿವಿ9 ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ತಿಥಿ ಊಟ ಮಾಡಿದರೆ ಅದೃಷ್ಟ ನಷ್ಟವಾಗುತ್ತಾ ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ಆಧ್ಯಾತ್ಮಿಕವಾಗಿ, ತಿಥಿ ಊಟವು ದಿವಂಗತ ಆತ್ಮದ ನೆನಪಿನಲ್ಲಿ ಆಚರಿಸುವ ಒಂದು ಪದ್ಧತಿಯಾಗಿದೆ. ಬದುಕಿದ್ದಾಗ ಆ ವ್ಯಕ್ತಿಯೊಂದಿಗೆ ಇದ್ದ ಬಾಂಧವ್ಯದಂತೆ, ಅವರ ನೆನಪಿನಲ್ಲಿ ನೀಡುವ ಆಹಾರವು ಆತ್ಮಕ್ಕೆ ತೃಪ್ತಿ ನೀಡಿ, ಸಕಾರಾತ್ಮಕ ಆಶೀರ್ವಾದಗಳನ್ನು ನೀಡುತ್ತದೆ. ಗರುಡ ಪುರಾಣದ ಪ್ರಕಾರ, ಈ ಸಂದರ್ಭದಲ್ಲಿ ನೀಡುವ ತೀರ್ಥ ಅಥವಾ ಪ್ರಸಾದದಿಂದ ಯಾವುದೇ ದುಷ್ಪರಿಣಾಮಗಳಾಗುವುದಿಲ್ಲ ಹಿರಿಯರು ಮತ್ತು ಬುದ್ಧಿಜೀವಿಗಳು ಕೂಡ ತಿಥಿ ಊಟಕ್ಕೆ ಹೋಗಿ ಬರುವುದರಿಂದ ಅನೇಕ ದೋಷಗಳು ನಿವಾರಣೆಯಾಗುತ್ತವೆ ಎಂದು ಹೇಳುವುದನ್ನು ಕೇಳುತ್ತೇವೆ. ಆದ್ದರಿಂದ, ತಿಥಿ ಊಟವು ಹಾನಿಕರವಲ್ಲ, ಬದಲಿಗೆ ದಿವಂಗತರಿಗೆ ಸಲ್ಲಿಸುವ ಗೌರವ ಮತ್ತು ಆತ್ಮಕ್ಕೆ ಸಕಾರಾತ್ಮಕ ಶಕ್ತಿಯನ್ನು ನೀಡುವ ನಂಬಿಕೆಯಾಗಿದೆ.ಎಂದು ಗುರೂಜಿ ಹೇಳಿದ್ದಾರೆ.
ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಏಪ್ರಿಲ್ 8, ಬುಧವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಈ ದಿನ ಪರಾಭವ ನಾಮ ಸಂವತ್ಸರ, ಉತ್ತರಾಯಣ, ಚೈತ್ರ ಮಾಸ, ವಸಂತ ಋತು, ಕೃಷ್ಣ ಪಕ್ಷ, ಸಪ್ತಮಿ ತಿಥಿಯಾಗಿದೆ. ಇಂದು ಡಾ. ಬಸವರಾಜ ಗುರೂಜಿಯವರು ಪ್ರತಿ ರಾಶಿಯವರಿಗೂ ಆರೋಗ್ಯ, ಆರ್ಥಿಕ ಸ್ಥಿತಿ, ಉದ್ಯೋಗ, ವ್ಯಾಪಾರ, ಕುಟುಂಬ ಮತ್ತು ವೈಯಕ್ತಿಕ ಸಂಬಂಧಗಳ ಕುರಿತು ವಿವರವಾದ ಸಲಹೆಗಳನ್ನು ನೀಡಿದ್ದಾರೆ.
ವಾಷಿಂಗ್ಟನ್/ಟೆಹ್ರಾನ್, ಏಪ್ರಿಲ್ 8: ವಿಶ್ವವೇ ಕುತೂಹಲದಿಂದ ಕಾಯುತ್ತಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಣಭೀಕರ ದಾಳಿಯ ಡೆಡ್ಲೈನ್ ಮುಗಿದಿದೆ. ಅಷ್ಟರಲ್ಲಿ ಅಮೆರಿಕ, ಇರಾನ್ 2 ವಾರಗಳ ಕದನ ವಿರಾಮ ಘೋಷಣೆ (US Iran Ceasefire) ಒಪ್ಪಂದಕ್ಕೆ ಬಂದಿವೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಇರಾನ್ ಮೇಲೆ ಅಮೆರಿಕದ ಫೈಟರ್ ಜೆಟ್ಗಳು ದಾಳಿ ಮಾಡಬೇಕಿತ್ತು, ಅಷ್ಟರಲ್ಲಿ ತ್ಕಾಲಿಕ ಕದನ ವಿರಾಮ ಘೋಷಣೆಯಾಗಿದೆ. ಪಾಕಿಸ್ತಾನದ ಪ್ರಧಾನಿ ಮತ್ತು ಸೇನಾ ಮುಖ್ಯಸ್ಥರ ಮನವಿಯ ಮೇರೆಗೆ ಟ್ರಂಪ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ.
ದಾಳಿ ಎರಡು ವಾರಗಳ ಅವಧಿಗೆ ಸ್ಥಗಿತ: ಡೊನಾಲ್ಡ್ ಟ್ರಂಪ್
ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಹಾಗೂ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರೊಂದಿಗಿನ ಮಾತುಕತೆಗಳ ಆಧಾರದ ಮೇಲೆ 2 ವಾರಗಳ ಕದನ ವಿರಾಮ ಒಪ್ಪಂದಕ್ಕೆ ಬರಲಾಗಿದೆ. ಅವರು (ಪಾಕ್ ಪ್ರಧಾನಿ, ಫೀಲ್ಡ್ ಮಾರ್ಷಲ್) ಇರಾನ್ ಮೇಲಿನ ವಿನಾಶಕಾರಿ ದಾಳಿಯನ್ನು ತಡೆಹಿಡಿಯುವಂತೆ ವಿನಂತಿಸಿದರು. ಇರಾನ್ ಹೊರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ಮತ್ತು ಸುರಕ್ಷಿತವಾಗಿ ತೆರೆಯಲು ಒಪ್ಪುತ್ತಿದೆ. ಹೀಗಾಗಿ ಇರಾನ್ ಮೇಲಿನ ದಾಳಿಯನ್ನು ಎರಡು ವಾರಗಳ ಅವಧಿಗೆ ಸ್ಥಗಿತಗೊಳಿಸಲು ನಾನು ಕೂಡ ಒಪ್ಪುತ್ತೇನೆ. ಇದು ಎರಡು ಕಡೆಯಿಂದಲೂ ಕದನ ವಿರಾಮವಾಗಿರುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಹಾಗೆ ಮಾಡಲು ಕಾರಣವೇನೆಂದರೆ, ನಾವು ಈಗಾಗಲೇ ಎಲ್ಲಾ ಮಿಲಿಟರಿ ಉದ್ದೇಶಗಳನ್ನು ಮೀರಿದ್ದೇವೆ. ಇರಾನ್ನೊಂದಿಗೆ ದೀರ್ಘಾವಧಿಯ ಶಾಂತಿಗೆ ಸಂಬಂಧಿಸಿದ ನಿರ್ಣಾಯಕ ಒಪ್ಪಂದದೊಂದಿಗೆ ನಾವು ಬಹಳ ಹತ್ತಿರದಲ್ಲಿದ್ದೇವೆ. ನಾವು ಇರಾನ್ನಿಂದ 10 ಅಂಶಗಳ ಪ್ರಸ್ತಾವನೆಯನ್ನು ಸ್ವೀಕರಿಸಿದ್ದೇವೆ, ಅದು ಮಾತುಕತೆಗೆ ಆಧಾರವಾಗಿದೆ ಎಂದು ನಂಬುತ್ತೇವೆ. ಆದರೆ ಎರಡು ವಾರಗಳ ಕಾಲಾವಧಿಯು ಒಪ್ಪಂದವನ್ನು ಅಂತಿಮಗೊಳಿಸಲು ಅನುವು ಮಾಡಿಕೊಡುತ್ತದೆ. ಅಧ್ಯಕ್ಷನಾಗಿ ಈ ದೀರ್ಘಕಾಲೀನ ಸಮಸ್ಯೆ ಪರಿಹಾರದ ಹಂತಕ್ಕೆ ತಲುಪಿರುವುದು ಗೌರವದ ಸಂಗತಿ ಎಂದು ಟ್ರಂಪ್ ಹೇಳಿದ್ದಾರೆ.
ಇರಾನ್ ವಿದೇಶಾಂಗ ಸಚಿವ ಸೈಯದ್ ಅಬ್ಬಾಸ್ ಅರಾಘ್ಚಿ ಸಂದೇಶ
ಇರಾನ್ ಪರವಾಗಿ, ಈ ಪ್ರದೇಶದಲ್ಲಿ ಯುದ್ಧವನ್ನು ಕೊನೆಗೊಳಿಸಲು ಅವಿಶ್ರಾಂತ ಪ್ರಯತ್ನ ಮಾಡಿದ್ದಕ್ಕಾಗಿ ಪಾಕಿಸ್ತಾನದ ಪ್ರಧಾನಿ ಷರೀಫ್ ಹಾಗೂ ಫೀಲ್ಡ್ ಮಾರ್ಷಲ್ ಮುನೀರ್ ಅವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. 15 ಅಂಶಗಳ ಪ್ರಸ್ತಾವನೆಯ ಆಧಾರದ ಮೇಲೆ ಮಾತುಕತೆಗಾಗಿ ಅಮೆರಿಕದ ವಿನಂತಿಯನ್ನು ಮತ್ತು ಇರಾನ್ನ 10 ಅಂಶಗಳ ಪ್ರಸ್ತಾವನೆಯನ್ನು ಸ್ವೀಕರಿಸುವ ಬಗ್ಗೆ ಅಮೆರಿಕ ಅಧ್ಯಕ್ಷರು ಮಾಡಿದ ಘೋಷಣೆಯನ್ನು ಪರಿಗಣಿಸಿ, ಇರಾನ್ನ ಸುಪ್ರೀಂ ರಾಷ್ಟ್ರೀಯ ಭದ್ರತಾ ಮಂಡಳಿಯ ಪರವಾಗಿ ನಾನು ಈ ಮೂಲಕ ಘೋಷಣೆ ಮಾಡುತ್ತಿದ್ದೇನೆ ಎಂದು ಇರಾನ್ ವಿದೇಶಾಂಗ ಸಚಿವ ಸೈಯದ್ ಅಬ್ಬಾಸ್ ಅರಾಘ್ಚಿ ಅವರು ಸಂದೇಶ ಬಿಡುಗಡೆ ಮಾಡಿದ್ದಾರೆ.
ಇರಾನ್ ವಿರುದ್ಧದ ದಾಳಿಗಳನ್ನು ಅಮೆರಿಕ ನಿಲ್ಲಿಸಿದರೆ, ನಮ್ಮ ಪ್ರಬಲ ಸಶಸ್ತ್ರ ಪಡೆಗಳು ತಮ್ಮ ರಕ್ಷಣಾತ್ಮಕ ಕಾರ್ಯಾಚರಣೆಗಳನ್ನು ನಿಲ್ಲಿಸುತ್ತವೆ. ಎರಡು ವಾರಗಳ ಅವಧಿಗೆ ಇರಾನ್ನ ಸಶಸ್ತ್ರ ಪಡೆಗಳೊಂದಿಗೆ ಸಮನ್ವಯದ ಮೂಲಕ, ತಾಂತ್ರಿಕ ಮಿತಿಗಳನ್ನು ಪರಿಗಣಿಸಿ ಹೊರ್ಮುಜ್ ಜಲಸಂಧಿ ಮೂಲಕ ಸುರಕ್ಷಿತ ಸಂಚಾರ ಸಾಧ್ಯವಾಗುತ್ತದೆ ಎಂದು ಸೈಯದ್ ಅಬ್ಬಾಸ್ ಅರಾಘ್ಚಿ ತಿಳಿಸಿದ್ದಾರೆ.
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ 11ನೇ ಪಂದ್ಯದಲ್ಲಿ ಬದ್ಧ ವೈರಿಗಳಾಗಿ ಗುರುತಿಸಿಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿವೆ. ಇದಾಗ್ಯೂ ಉಭಯ ತಂಡಗಳು ಲೀಗ್ ಹಂತದಲ್ಲಿ ಮತ್ತೆ ಎದುರು ಬದರಾಗುವುದಿಲ್ಲ.
ಇದಕ್ಕೆ ಮುಖ್ಯ ಕಾರಣ ಈ ಬಾರಿಯ ಐಪಿಎಲ್ನಲ್ಲಿ ಆರ್ಸಿಬಿ ಮತ್ತು ಸಿಎಸ್ಕೆ ತಂಡಗಳು ಒಂದೇ ಗ್ರೂಪ್ನಲ್ಲಿರುವುದು.ಈ ಬಾರಿಯ ಫಾರ್ಮ್ಯಾಟ್ ಪ್ರಕಾರ, ಒಂದು ತಂಡವು ತನ್ನದೇ ಗುಂಪಿನಲ್ಲಿರುವ ಉಳಿದ 4 ತಂಡಗಳ ವಿರುದ್ಧ ತಲಾ ಒಂದೇ ಒಂದು ಪಂದ್ಯವನ್ನು ಆಡಲಿದೆ. ಆದರೆ ಎದುರಾಳಿ ಗುಂಪಿನ (Group B) 5 ತಂಡಗಳ ವಿರುದ್ಧ ತಲಾ ಎರಡು ಪಂದ್ಯಗಳನ್ನು (ಹೋಮ್ & ಅವೇ) ಆಡಲಿದೆ. ಇತ್ತ RCB ಮತ್ತು CSK ತಂಡಗಳು ಗ್ರೂಪ್ A ನಲ್ಲಿರುವ ಕಾರಣ ಉಭಯ ತಂಡಗಳಿಗೆ ಒಂದು ಪಂದ್ಯ ಮಾತ್ರ ಇದೆ.
ಅದರಂತೆ ಆರ್ಸಿಬಿ ಮತ್ತು ಸಿಎಸ್ಕೆ ನಡುವಣ ಆ ಒಂದು ಪಂದ್ಯವು ಮುಗಿದಿದೆ. ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 43 ರನ್ಗಳ ಭರ್ಜರಿ ಜಯ ಸಾಧಿಸಿದೆ. ಇದಾಗ್ಯೂ ಉಭಯ ತಂಡಗಳು ದ್ವಿತೀಯ ಸುತ್ತಿನಲ್ಲಿ ಮುಖಾಮುಖಿಯಾಬಹುದು. ಇದಕ್ಕಾಗಿ ಈ ಕೆಳಗಿನಂತೆ ಫಲಿತಾಂಶ ಮೂಡಿಬರಬೇಕು…
ಅಂಕ ಪಟ್ಟಿ ಲೆಕ್ಕಾಚಾರ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಪಾಯಿಂಟ್ಸ್ ಟೇಬಲ್ನಲ್ಲಿ ಟಾಪ್-4 ನಲ್ಲಿ ಸ್ಥಾನ ಪಡೆಯಬೇಕು. ಈ ಮೂಲಕ ಪ್ಲೇ-ಆಫ್ಗೆ ಅರ್ಹತೆ ಪಡೆಯಬಹುದು. ಇನ್ನು ಪ್ಲೇಆಫ್ನಲ್ಲಿ ಮೂರು ಹಂತಗಳಲ್ಲಿ ಮುಖಾಮುಖಿಯಾಗಬಹುದು.
ಕ್ವಾಲಿಫೈಯರ್ ಪಂದ್ಯ: ಪ್ಲೇ-ಆಫ್ ಹಂತದಲ್ಲಿ ಉಭಯ ತಂಡಗಳ ಸ್ಥಾನಗಳಿಗೆ ಅನುಗುಣವಾಗಿ ಆರ್ಸಿಬಿ ಮತ್ತು ಸಿಎಸ್ಕೆ ಮುಖಾಮುಖಿಯಾಗಬಹುದು. ಅಂದರೆ ಆರ್ಸಿಬಿ ಮತ್ತು ಸಿಎಸ್ಕೆ ಮೊದಲೆರಡು ಸ್ಥಾನಗಳನ್ನು ಪಡೆದರೆ ಮೊದಲ ಕ್ವಾಲಿಫೈಯರ್ನಲ್ಲಿ ಮುಖಾಮುಖಿಯಾಗಲಿದ್ದಾರೆ.
ಎಲಿಮಿನೇಟರ್ ಪಂದ್ಯ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಅಂಕ ಪಟ್ಟಿಯಲ್ಲಿ ಮೂರನೇ ಮತ್ತು ನಾಲ್ಕನೇ ಸ್ಥಾನ ಪಡೆದರೆ, ಎಲಿಮಿನೇಟರ್ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ.
ಎರಡನೇ ಕ್ವಾಲಿಫೈಯರ್ ಪಂದ್ಯ: ಒಂದು ವೇಳೆ ಆರ್ಸಿಬಿ ತಂಡ ಮೊದಲ ಕ್ವಾಲಿಫೈಯರ್ನಲ್ಲಿ ಸೋತು, ಅತ್ತ ಸಿಎಸ್ಕೆ ತಂಡವು ಎಲಿನೇಟರ್ ಪಂದ್ಯದಲ್ಲಿ ಗೆದ್ದರೆ ಉಭಯ ತಂಡಗಳು ಎರಡನೇ ಕ್ವಾಲಿಫೈಯರ್ನಲ್ಲಿ ಮುಖಾಮುಖಿಯಾಗಲಿದೆ.
ಫೈನಲ್ ಪಂದ್ಯ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಪ್ಲೇ-ಆಫ್ ಪಂದ್ಯಗಳನ್ನು ಗೆದ್ದು ಫೈನಲ್ಗೆ ಪ್ರವೇಶಿಸಿದರೆ ಆರ್ಸಿಬಿ ಮತ್ತು ಸಿಎಸ್ಕೆ ನಡುವಣ ಮತ್ತೊಂದು ಮುಖಾಮುಖಿಯನ್ನು ವೀಕ್ಷಿಸಬಹುದು.
ವಾಷಿಂಗ್ಟನ್/ಟೆಹ್ರಾನ್, ಏಪ್ರಿಲ್ 8: ಇರಾನ್ (Iran) ಮೇಲೆ ವಿನಾಶಕಾರಿ ದಾಳಿ ನಡೆಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ನೀಡಿದ್ದ ಗಡುವು ಮುಗಿಯಲು ಕೇವಲ ಎರಡು ಗಂಟೆಗಳಿರುವಾಗ ಬಹು ದೊಡ್ಡ ರಾಜತಾಂತ್ರಿಕ ಬೆಳವಣಿಗೆ ನಡೆದಿದೆ. ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಸೇನಾ ಮುಖ್ಯಸ್ಥರ ಮನವಿಯ ಮೇರೆಗೆ ಟ್ರಂಪ್ ತಮ್ಮ ಬಾಂಬ್ ದಾಳಿಯ ನಿರ್ಧಾರವನ್ನು ಸ್ಥಗಿತಗೊಳಿಸಿದ್ದು, ಎರಡು ವಾರಗಳ ಕದನ ವಿರಾಮಕ್ಕೆ (US Iran Ceasefire) ಸಮ್ಮತಿಸಿದ್ದಾರೆ.
ಹಾರ್ಮುಜ್ ಜಲಸಂಧಿ ತೆರೆಯಲು ಇರಾನ್ ಸಮ್ಮತಿ
ಕಳೆದ ಐದು ವಾರಗಳಿಂದ ನಡೆಯುತ್ತಿದ್ದ ಯುದ್ಧವು ಜಗತ್ತಿನ ತೈಲ ಪೂರೈಕೆಯ ನಾಡಿಮಿಡಿತವಾದ ‘ಹಾರ್ಮುಜ್ ಜಲಸಂಧಿ’ಯನ್ನು ಬಂದ್ ಮಾಡಿತ್ತು. ಈಗ ಇರಾನ್ ಈ ಜಲಸಂಧಿಯನ್ನು ತಕ್ಷಣವೇ ಮತ್ತು ಸುರಕ್ಷಿತವಾಗಿ ತೆರೆಯಲು ಒಪ್ಪಿಕೊಂಡಿದೆ. ಟ್ರಂಪ್ ಈ ಹಿಂದೆ ಇರಾನ್ನ ನಾಗರಿಕ ಮೂಲಸೌಕರ್ಯಗಳ ಮೇಲೆ ದಾಳಿ ಮಾಡುವುದಾಗಿ ಎಚ್ಚರಿಸಿದ್ದರು, ಇದು ಯುದ್ಧಾಪರಾಧವಾಗಬಹುದು ಎಂದು ವಿಶ್ವಸಂಸ್ಥೆ ಮತ್ತು ಪೋಪ್ ಕೂಡ ಆತಂಕ ವ್ಯಕ್ತಪಡಿಸಿದ್ದರು. ಆದರೆ ಈಗ ಇರಾನ್ ನೀಡಿರುವ 10 ಅಂಶಗಳ ಪ್ರಸ್ತಾವನೆಯ ಆಧಾರದ ಮೇಲೆ ಶಾಂತಿ ಮಾತುಕತೆ ನಡೆಸಲು ಅಮೆರಿಕ ಮುಂದಾಗಿದೆ. ಇಸ್ರೇಲ್ ಕೂಡ ಈ ಕದನ ವಿರಾಮಕ್ಕೆ ಬೆಂಬಲ ಸೂಚಿಸಿದೆ ಎಂದು ವರದಿಯಾಗಿದೆ.
ಇರಾನ್ನ 10 ಅಂಶಗಳ ಪ್ರಸ್ತಾವನೆ ಏನು?
ಆಕ್ರಮಣಶೀಲತೆ ಮಾಡದಿರುವಿಕೆಗೆ ಬದ್ಧತೆ
ಹೊರ್ಮುಝ್ ಮೇಲೆ ಇರಾನ್ ನಿಯಂತ್ರಣ ಮುಂದುವರಿಕೆ
ಯುರೇನಿಯಂ ಪುಷ್ಟೀಕರಣದ ಸ್ವೀಕಾರ
ಎಲ್ಲಾ ಪ್ರಾಥಮಿಕ & ದ್ವಿತೀಯ ನಿರ್ಬಂಧ ತೆರವು
UN ಭದ್ರತಾ ಮಂಡಳಿ & IEAE ಆಡಳಿತ ಮಂಡಳಿಯ ನಿರ್ಣಯ ರದ್ದು
ಜಲಸಂಧಿ ಆದಾಯ ಮೂಲಸೌಕರ್ಯಕ್ಕೆ ಪುನರ್ನಿರ್ಮಾಣಕ್ಕೆ ಬಳಕೆ
ಇರಾನ್ಗೆ ಪರಿಹಾರ ಪಾವತಿಗಳು
ಅಮೆರಿಕ ಯುದ್ಧ ಪಡೆಗಳನ್ನ ಹಿಂತೆಗೆದುಕೊಳ್ಳುವುದು
ಎಲ್ಲಾ ರಂಗಗಳಲ್ಲಿ ಯುದ್ಧವನ್ನ ನಿಲ್ಲಿಸುವುದು
ಲೆಬನಾನ್ ಮೇಲೆ ಇಸ್ರೇಲ್ ದಾಳಿ ನಿಲ್ಲಿಸಬೇಕು
ಡೊನಾಲ್ಡ್ ಟ್ರಂಪ್ ಅವರ ಅಧಿಕೃತ ಹೇಳಿಕೆ ಇಲ್ಲಿದೆ
‘ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರೊಂದಿಗೆ ನಡೆಸಿದ ಮಾತುಕತೆಯ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ. ಇಂದು ರಾತ್ರಿ ಇರಾನ್ ಮೇಲೆ ನಡೆಸಬೇಕಿದ್ದ ವಿನಾಶಕಾರಿ ದಾಳಿಯನ್ನು ತಡೆಹಿಡಿಯುವಂತೆ ಅವರು ವಿನಂತಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ ಮತ್ತು ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಹಾರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ, ತಕ್ಷಣವೇ ಮತ್ತು ಸುರಕ್ಷಿತವಾಗಿ ತೆರೆಯಲು ಒಪ್ಪಿಕೊಂಡಿರುವುದಕ್ಕೆ ಪ್ರತಿಯಾಗಿ, ನಾನು ಇರಾನ್ ಮೇಲಿನ ಬಾಂಬ್ ದಾಳಿ ಮತ್ತು ದಾಳಿಯನ್ನು ಎರಡು ವಾರಗಳ ಅವಧಿಗೆ ಅಮಾನತುಗೊಳಿಸಲು ಒಪ್ಪುತ್ತೇನೆ’ ಎಂದು ಟ್ರಂಪ್ ತಿಳಿಸಿದ್ದಾರೆ.
ಇದು ಉಭಯಪಕ್ಷೀಯ ಕದನ ವಿರಾಮವಾಗಿರುತ್ತದೆ! ನಾವು ಈಗಾಗಲೇ ಎಲ್ಲಾ ಮಿಲಿಟರಿ ಉದ್ದೇಶಗಳನ್ನು ಪೂರೈಸಿದ್ದೇವೆ ಮತ್ತು ಇರಾನ್ನೊಂದಿಗೆ ದೀರ್ಘಕಾಲೀನ ಶಾಂತಿ ಹಾಗೂ ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ನಿರ್ಣಾಯಕ ಒಪ್ಪಂದಕ್ಕೆ ಬಹಳ ಹತ್ತಿರದಲ್ಲಿದ್ದೇವೆ. ನಾವು ಇರಾನ್ನಿಂದ 10 ಅಂಶಗಳ ಪ್ರಸ್ತಾವನೆಯನ್ನು ಸ್ವೀಕರಿಸಿದ್ದೇವೆ ಮತ್ತು ಇದು ಮಾತುಕತೆಗೆ ಪೂರಕ ಆಧಾರವಾಗಿದೆ ಎಂದು ನಂಬುತ್ತೇವೆ. ಎರಡು ವಾರಗಳ ಕಾಲಾವಧಿಯು ಒಪ್ಪಂದವನ್ನು ಅಂತಿಮಗೊಳಿಸಲು ಮತ್ತು ಪೂರ್ಣಗೊಳಿಸಲು ಅನುವು ಮಾಡಿಕೊಡುತ್ತದೆ. ಅಮೆರಿಕದ ಪರವಾಗಿ ಅಧ್ಯಕ್ಷನಾಗಿ ಮತ್ತು ಮಧ್ಯಪ್ರಾಚ್ಯದ ದೇಶಗಳನ್ನು ಪ್ರತಿನಿಧಿಸುತ್ತಾ, ಈ ದೀರ್ಘಕಾಲದ ಸಮಸ್ಯೆಯು ಪರಿಹಾರದ ಹತ್ತಿರಕ್ಕೆ ಬಂದಿರುವುದು ಗೌರವದ ವಿಷಯವಾಗಿದೆ. ಧನ್ಯವಾದಗಳು ಎಂದು ಟ್ರಂಪ್ ಹೇಳಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ವಸಂತ, ಚಾಂದ್ರಮಾಸ : ಚೈತ್ರ, ಸೌರ ಮಾಸ : ಮೀನ, ಮಹಾನಕ್ಷತ್ರ : ರೇವತೀ, ವಾರ : ಬುಧ, ಪಕ್ಷ : ಕೃಷ್ಣ, ತಿಥಿ : ಸಪ್ತಮೀ, ನಿತ್ಯನಕ್ಷತ್ರ : ಮೂಲಾ, ಯೋಗ : ವ್ಯತಿಪಾತ್, ಕರಣ : ಬಾಲ, ಸೂರ್ಯೋದಯ – 06 – 16 am, ಸೂರ್ಯಾಸ್ತ – 06 – 35 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 12:26 – 13:59, ಯಮಗಂಡ ಕಾಲ 07:49 – 09:21, ಗುಳಿಕ ಕಾಲ 10:54 – 12:25
ಮೇಷ ರಾಶಿ :
ಪ್ರೀತಿಪಾತ್ರರ ಜೊತೆ ಇಂದು ವಿವಾಹ ನಿಶ್ಚಯದ ಸಾಧ್ಯತೆ ಇದೆ. ವಿದ್ಯಾರ್ಥಿಗಳು ಯಂತ್ರೋಪಕರಣಗಳನ್ನು ಪಡೆದು ಆನಂದಿಸುವರು. ಕೆಲಸವನ್ನು ನಿರ್ಧರಿಸುವಾಗ ಯಾವುದೇ ಒತ್ತಡಗಳಿಗೆ ಅವಕಾಶ ಕೊಡಬೇಡಿ. ಒಪ್ಪಂದವನ್ನು ಕೇವಲ ಪತ್ರದ ಮೇಲೆ ಮಾತ್ರವಲ್ಲ, ಮನಸ್ಸಿನಲ್ಲಿ ಕೂಡ ದೃಢಪಡಿಸಿ. ಸಮಯವನ್ನು ಹಾಗೇ ವ್ಯರ್ಥವಾಗಿ ಕಳಡಯಬೇಡಿ. ವ್ಯವಹಾರದಲ್ಲಿ ಹೊಸ ಕೊಡುಗೆಗಳನ್ನು ಕಾಣಬಹುದು. ರಾಜಕೀಯದಿಂದ ನಿಮ್ಮ ವ್ಯವಹಾರಕ್ಕೆ ಹೊಸ ದಿಕ್ಕನ್ನು ಸಿಗಬಹುದು.
ವೃಷಭ ರಾಶಿ :
ಇಂದು ನೀವು ನಿಮ್ಮ ಅಂತರಂಗವನ್ನು ಮುಚ್ಚಿಡಲು ಪ್ರಯತ್ನಿಸಿದರೂ ಅದು ನಿಲ್ಲದು. ಸ್ನೇಹಿತರು ನಿಮ್ಮ ಜೊತೆಗೇ ಇದ್ದು ನಿಮ್ಮ ಎಲ್ಲ ಆಗುಹೋಗುಗಳಿಗೂ ಜೊತೆಯಾಗುವರು. ಸಾಧನೆಯ ಫಲಿತಾಂಶದ ಬಗ್ಗೆ ಅಂಜಿಕೆ ಇರುವುದು. ಪ್ರೀತಿಯಿಂದ ಎಲ್ಲರೊಂದಿಗೆ ಮಾತನಾಡಿ. ಕುಟುಂಬದ ಮೋಜಿನ ಚಟುವಟಿಕೆಗಳನ್ನು ಮಾಡುತ್ತ ಕಾಲ ಕಳೆಯುವಿರಿ. ನೌಕರರ ನಿರ್ಲಕ್ಷ್ಯದಿಂದ ಆಗುವ ಹೊಣೆಯನ್ನೂ ಹೊರಬೇಕಾಗುವುದು. ಕೆಲವು ರೀತಿಯ ಹಾನಿಯ ಬಗ್ಗೆಯೂ ಚಿಂತಿಸುವುದು ಅಗತ್ಯ.
ಮಿಥುನ ರಾಶಿ:
ಮಾನಸಿಕ ಒತ್ತಡಕ್ಕೆ ಸಿಲುಕದೇ ನಿಶ್ಚಿಂತೆಯಿಂದ ಇರಲು ಪ್ರಯತ್ನಿಸಿ. ಇಂದು ನಿಮ್ಮ ದಕ್ಷತೆಯಿಂದ ಉತ್ತಮ ರೀತಿಯಲ್ಲಿ ಅನೇಕ ವಿಷಯಗಳನ್ನು ಸಾಧಿಸಲು ಇದು ನಿಮಗೆ ಸಹಾಯ ಮಾಡುತ್ತದೆ. ಖಾಸಗಿ ಉದ್ಯೋಗದಲ್ಲಿ ಬಯಸದೇ ಉನ್ನತ ಸ್ಥಾನಕ್ಕೆ ಏರಿದ್ದು ನಂಬಲು ಕಷ್ಟವಾಗಕಿದೆ. ನಿಮ್ಮ ಕೋಪವನ್ನು ನಿಯಂತ್ರಿಸಿ. ಕೆಲವೊಮ್ಮೆ ಸ್ವಭಾವದಲ್ಲಿ ಭ್ರಮೆಯಿಂದ ಕೋಪದ ಸ್ಥಿತಿ ಇರಬಹುದು. ನಿಮ್ಮಲ್ಲಿರುವ ನ್ಯೂನತೆಗಳನ್ನು ನೀವೇ ತಿಳಿದು ಸರಿಪಡಿಸಿ.
ಕರ್ಕಾಟಕ ರಾಶಿ:
ನ್ಯಾಯಾಲಯಕ್ಕೆ ಸಂಬಂಧಿಸಿದ್ದನ್ನು ತುರ್ತಾಗಿ ಮಾಡುವಿರಿ. ಎಷ್ಟೋ ದಿನದ ನಿಮ್ಮ ಜಟಿಲತೆಗಳು ಮಂದಗತಿಯಲ್ಲಿ ಸಾಗುತ್ತಿದ್ದು ಇಂದು ವೇಗವನ್ನು ಪಡೆಯುತ್ತದೆ. ನಿಮ್ಮ ಸುತ್ತಲಿನ ಜಗತ್ತಿಗೆ ನೀವು ಅಚ್ಚರಿಯ ಆಸಾಮಿಯಾಗುತ್ತೀರಿ. ದೂರದ ಪ್ರಯಾಣಕ್ಕೆ ಸಕಾರಣ ಸಿಕ್ಕಿದ್ದು, ಕುಟುಂಬದ ಜೊತೆ ಪ್ರಯಾಣ ಮಾಡುವಿರಿ. ಭೂಮಿ ಅಥವಾ ವಾಹನಕ್ಕೆ ಸಂಬಂಧಿಸಿದಂತೆ ಕೆಲವು ಸಮಸ್ಯೆಗಳಿವೆ. ಯಾವುದೇ ರೀತಿಯ ವ್ಯವಹಾರಕ್ಕೆ ನಿಮ್ಮ ಕೆಲಸದ ಗುಣಮಟ್ಟಕ್ಕೆ ಹೆಚ್ಚಿನ ಗಮನ ಬೇಕಾಗುತ್ತದೆ.
ಸಿಂಹ ರಾಶಿ:
ಎಷ್ಟೋ ದಿನದ ಅನಂತರ ಇಂತಹ ಅಪರೂಪದ ಉಲ್ಲಾಸದ ಕ್ಷಣ ನಿಮ್ಮ ಪಾಲಿಗಿ ಇರಲಿದೆ. ವ್ಯಾಪಾರಸ್ಥರು ಗ್ರಾಹಕರ ಜೊತೆಗೆ ಸಮಾಧಾನದಿಂದ ಮಾತನಾಡಿ ಆದಾಯವನ್ನು ಹೆಚ್ಚು ಮಾಡಿಕೊಳ್ಳಬೇಕಿದೆ. ಎಂದೋ ಉಳಿಸಿಟ್ಟ ಕಾಸು ಇಂದು ತುರ್ತಿಮನ ಕಾಲಕ್ಕೆ ಬಳಕೆಗೆ ಬರುತ್ತದೆ. ಋಣಾತ್ಮಕ ಚಿಂತನೆಯನ್ನು ಬಿಡುವುದು ಉತ್ತಮ. ವ್ಯವಹಾರದಲ್ಲಿ ನೀವು ತೆಗೆದುಕೊಳ್ಳುವ ತ್ವರಿತ ನಿರ್ಧಾರಗಳು ಸಕಾರಾತ್ಮಕವಾಗಿರುತ್ತವೆ.
ಕನ್ಯಾ ರಾಶಿ:
ಹಣದ ಹೂಡಿಕೆಯ ಮಾರ್ಗಗಳನ್ನು ಅನ್ಯರ ಮೂಲಕ ಪಡೆದುಕೊಳ್ಳುವಿರಿ. ಯಾರಿಗೂ ಮಾತನ್ನು ಕೊಡಲು ಹೋಗಬೇಡಿ. ನಿಮ್ಮ ನೋವನ್ನು ಆಲಿಸುವ ಕಿವಿಗಳ ಕೊರತೆ ಇದೆ. ನೀವು ನೀಡುವ ಅಭಿಪ್ರಾಯಗಳು ಬಾಲಿಶ ಎಂದು ಮನೆಯವರಿಗೆ ಅನ್ನಿಸಬಹುದು. ಹೂಡಕೆ ಮಾಡಿದರೂ ಅದರ ಪ್ರಮಾಣ ಕಡಿಮೆ ಇರಲಿ. ನಿಮ್ಮ ಆಲೋಚನೆಗಳ ಬಗ್ಗೆ ಯೋಚಿಸುವುದು ಕೆಲವು ಪರಿಣಾಮಗಳನ್ನು ಉಂಟುಮಾಡಬಹುದು. ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳು ಹೆಚ್ಚು ಸಮಯ ಕಳೆಯಬಹುದು.
ತುಲಾ ರಾಶಿ:
ಪ್ರೀತಿಸುವುದನ್ನು ಕಲಿತರೆ ನಿಮ್ಮ ಸುತ್ತಲು ಎಂತಹದೇ ನಕಾರಾತ್ಮಕ ಅಂಶಗಳಿರಲಿ ಅವುಗಳು ಸಕಾರಾತ್ಮಕವಾಗಿ ನಿಮಗೆ ತೋರುತ್ತವೆ. ವಾಹನ ಸೌಕರ್ಯವನ್ನು ಬಳಸಿಕೊಂಡು ಕಾರ್ಯವನ್ನು ಸಾಧಿಸುವಿರಿ. ನಿಮ್ಮ ನೆಚ್ಚಿನ ಕೆಲಸಗಳು ತೃಪ್ತಿಕರ ರೀತಿಯಲ್ಲಿ ಪೂರ್ಣಗೊಳ್ಳುವುದು. ಸಂಬಂಧಿಕರ ಜೊತೆ ಸಂತೋಷದ ಸಮಯವನ್ನು ಕಳೆಯುವಿರಿ. ನಿಮ್ಮದಲ್ಲದ ತಪ್ಪಿನಿಂದ ನಿಮಗೆ ಕಷ್ಟ. ವೈಯಕ್ತಿಕ ಸಮಸ್ಯೆಗಳನ್ನು ವ್ಯವಹಾರಕ್ಕೆ ತಂದುಕೊಳ್ಳುವುದು ಬೇಡ.
ವೃಶ್ಚಿಕ ರಾಶಿ:
ಇಂದಿನ ಜೀವನ ಸಂತೋಷದಿಂದ ಕೂಡಿರುವುದು. ಅತ್ಯಾಪ್ತರಿಂದ ಅಪರೂಪದ ಬಹುಮಾನ ಸಿಗಲಿದೆ. ಆರ್ಥಿಕತೆಯ ಬಗ್ಗೆ ಯಾರಲ್ಲಿಯೂ ಹೇಳಲಾರಿರಿ. ಪ್ರಭಾವೀ ವ್ಯಕ್ತಿಗಳ ಭೇಟಿಯಾಗುವುದು. ನಿಮ್ಮ ಜೀವನದ ದಿಕ್ಕಿಗೆ ಹೊಸ ಮಾರ್ಗವೂ ಸೇರ್ಪಡೆಯಾಗುವುದು. ವಿದ್ಯಾರ್ಥಿಗಳು ಓದಿನ ಕಡೆಗೆ ಗಮನಹರಿಸಲಿ. ಮನೆಯಲ್ಲಿ ಕೆಲವು ನವೀಕರಣ ಕಾರ್ಯಗಳನ್ನು ಮಾಡಿಸುವಿರಿ. ವಿದ್ಯಾರ್ಥಿಗಳು ಅಧ್ಯಯನದ ಮೇಲೆ ಕೇಂದ್ರೀಕರಿಸಲಾರು. ಖರೀದಿಸುವಾಗ ಅನುಭವಿಗಳ ಸಲಹೆಯನ್ನು ತೆಗೆದುಕೊಳ್ಳಲು ಮರೆಯದಿರಿ.
ಧನು ರಾಶಿ:
ಹಣವನ್ನು ಸಂಪೂರ್ಣವಾಗಿ ಇತರೇತರ ಕಾರ್ಯಗಳಿಗೆ ಖರ್ಚು ಮಾಡಿ ತುರ್ತು ಅವಶ್ಯಕತೆಗೆ ಹಣವಿಲ್ಲದಂತೆ ಮಾಡಿಕೊಳ್ಳುವಿರಿ. ಸುತ್ತ ನಡೆಯುವ ವಿದ್ಯಮಾನಗಳನ್ನು ಗಮನಿಸಿಕೊಂಡು ಜೀವನವನ್ನು ಸಾಗಿಸಿ. ಅನೇಕ ಬದಲಾವಣೆಗಳು ನಿಮ್ಮ ಜೀವನಕ್ಕೆ ಅಗತ್ಯವಿದೆ. ಎಲ್ಲವನ್ನೂ ಸರಿ ಮಾಡಬಲ್ಲೆನೆಂಬ ಮನಃಸ್ಥಿತಿಯಿಂದ ಹೊರಗುಳಿದು ಯೋಚಿಸಿ. ಯಾರ ಜೊತೆಗೆ ಅಸಭ್ಯ ವರ್ತನೆ ಬೇಡ. ಸಂಬಂಧಿಕರಿಂದ ನಿಮ್ಮ ಬಗ್ಗೆ ದೂರುಗಳು ಬರಬಹುದು. ಆದರೆ ಉತ್ತಮ ಸಂಬಂಧಗಳನ್ನು ಕಾಪಾಡಿಕೊಳ್ಳಲು ಪ್ರಯತ್ನವೂ ಅಗತ್ಯ.
ಮಕರ ರಾಶಿ:
ದೂರದ ಪ್ರಯಾಣವನ್ನು ಮಾಡಬೇಡಿ. ಹಣದ ಅಗತ್ಯತೆ ಇಂದು ತುಂಬಾ ಕಾಡಲಿದೆ. ಸಂಗಾತಿಯ ಜೊತೆ ಸಂತೋಷದಿಂದ ಕಳೆಯಲು ಇಚ್ಛಿಸುವಿರಿ. ಮಹಿಳಾ ಉದ್ಯಮಕ್ಕೆ ಆರ್ಥಿಕಬೆಂಬಲ ಸಿಗುವುದು. ಕಛೇರಿಯಲ್ಲಿ ನಿಮ್ಮ ಮೇಲಿನ ಅಭಿಪ್ರಾಯ ಬದಲಾಗಬಹುದು. ನೀವು ಸಂಬಂಧಗಳನ್ನು ಬಳಸದೇ ಸಡಿಲಾಗಬಹುದು. ವಿದ್ಯಾಕ್ಷೇತ್ರದ ಉದ್ಯಮಕ್ಕೆ ಹಿನ್ನಡೆ. ಕಠಿಣ ಪರಿಶ್ರಮದ ಹೊರತಾಗಿ ಸರಿಯಾದ ಫಲಿತಾಂಶವನ್ನು ಸಾಧಿಸಲಾಗುವುದಿಲ್ಲ. ಯುವಕರು ಸಂಶೋಧನೆಯ ಚಟುವಟಿಕೆಗಳಲ್ಲಿ ಯಶಸ್ಸನ್ನು ಸಾಧಿಸುವರು.
ಕುಂಭ ರಾಶಿ:
ನಿಮ್ಮ ಅಂತಸ್ಸತ್ತ್ವವೇ ಎಲ್ಲ ಕಾರ್ಯಗಳನ್ನು ಖುಷಿಯಿಂದ ಮಾಡಲು ಸಹಕಾರಿಯಾಗುವುದು. ಭೂಮಿಯನ್ನು ಕಳೆದುಕೊಳ್ಳುವ ಸ್ಥಿತಿ ಬಂದೀತು. ಉತ್ಸವದಲ್ಲಿ ಪಾಲ್ಗೊಳ್ಳುವಿರಿ ಹಾಗೂ ಮಿತ್ರರ ಜೊತೆ ಇಂದು ಸಂತೋಷದಿಂದ ಸಮಯವನ್ನು ಕಳೆಯುವಿರಿ. ಸಂಗಾತಿಯ ಜೊತೆ ಕಾಲದ ಮಿತಿಯಿಲ್ಲದೇ ಹರಟೆಯನ್ನು ಹೊಡೆಯುವಿರಿ. ನಿಮ್ಮ ಕಾರ್ಯಕ್ಕೆ ಸಮಾಜದಿಂದ ಪುರಸ್ಕಾರ. ವ್ಯವಹಾರಕ್ಕೆ ಸಂಬಂಧಿಸಿದಂತೆ ಯಾವುದಾದರೂ ನಿರ್ಧಾರವನ್ನು ತೆಗೆದುಕೊಳ್ಳುವಾಗ, ಉತ್ತಮ ಅನುಭವಿ ವ್ಯಕ್ತಿಯನ್ನು ಸಂಪರ್ಕಿಸಿ.
ಮೀನ ರಾಶಿ:
ನಿಮ್ಮ ಆಸಕ್ತಿಗೆ ಯೋಗ್ಯವಾದ ಕಾರ್ಯವು ಸಿಗುವತನಕ ಕಾಯಬೇಕಾಗುವುದು. ಸ್ಪರ್ಧೆಗಳಲ್ಲಿ ಗಮನಾರ್ಹ ಫಲಿತಾಂಶ ನಿಮ್ಮದಾಗಲಿದೆ. ನಿಮ್ಮವರ ಜೊತೆ ಆನಂದದಿಂದ ಕಾಲವನ್ನು ಕಳೆಯುವಿರಿ. ಪರಸ್ಪರ ಚರ್ಚೆಯ ಮೂಲಕ ಹಳೆಯ ಹಲವು ಸಮಸ್ಯೆಗಳು ಬಗೆಹರಿಯಲಿವೆ. ಪ್ರೀತಿಯಲ್ಲಿ ಪಾರದರ್ಶಕತೆ ಇರುವುದು ಬಹಳ ಮುಖ್ಯ. ತುರ್ತು ನಿರ್ಧಾರಗಳನ್ನು ತೆಗೆದುಕೊಳ್ಳುವುದು ಬೇಡ. ಹಣಕಾಸಿನ ವಹಿವಾಟಿನ ಜೊತೆ ವ್ಯವಹರಿಸುವಾಗ ಜಾಗರೂಕತೆ ಇರಲಿ.
IPL 2026: ಗುವಾಹಟಿಯ ಬರ್ಸಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ನ 13ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಜಯಭೇರಿ ಬಾರಿಸಿದೆ. ಮಳೆಯ ಕಾರಣ 11 ಓವರ್ಗಳಿಗೆ ನಿಗದಿತವಾಗಿದ್ದ ಈ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಯುವ ದಾಂಡಿಗರಾದ ವೈಭವ್ ಸೂರ್ಯವಂಶಿ ಹಾಗೂ ಯಶಸ್ವಿ ಜೈಸ್ವಾಲ್ ಸಿಡಿಲಬ್ಬರದ ಆರಂಭ ಒದಗಿಸಿದ್ದರು.
ದೀಪಕ್ ಚಹರ್ ಎಸೆದ ಮೊದಲ ಪಂದ್ಯದಲ್ಲಿ ಬರೋಬ್ಬರಿ 22 ರನ್ ಚಚ್ಚುವ ಮೂಲಕ ಯಶಸ್ವಿ ಜೈಸ್ವಾಲ್ ಸ್ಫೋಟಕ ಆರಂಭ ಒದಗಿಸಿದರೆ, ಮತ್ತೊಂದೆಡೆ ಬುಮ್ರಾ ಎಸೆದ 2ನೇ ಓವರ್ನಲ್ಲಿ ವೈಭವ್ ಸೂರ್ಯವಂಶಿ 2 ಭರ್ಜರಿ ಸಿಕ್ಸ್ ಸಿಡಿಸಿದರು. ಇನ್ನು ಟ್ರೆಂಟ್ ಬೌಲ್ಟ್ ಎಸೆದ ಮೂರನೇ ಓವರ್ನಲ್ಲಿ ಈ ಜೋಡಿ ಕಲೆಹಾಕಿದ್ದು ಬರೋಬ್ಬರಿ 22 ರನ್ಗಳು. ಈ ಮೂಲಕ ಕೇವಲ 3 ಓವರ್ಗಳಲ್ಲೇ ತಂಡದ ಸ್ಕೋರ್ ಅನ್ನು 50ರ ಗಡಿದಾಟಿಸಿದರು.
ಇದಾದ ಬಳಿಕ ಬಿರುಸಿನ ಬ್ಯಾಟಿಂಗ್ ಮುಂದುವರೆಸಿದ ವೈಭವ್ ಸೂರ್ಯವಂಶಿ 14 ಎಸೆತಗಳಲ್ಲಿ 39 ರನ್ ಬಾರಿಸಿ ಔಟಾದರು. ಇದರ ಬೆನ್ನಲ್ಲೇ ಧ್ರುವ್ ಜುರೆಲ್ (2) ಕೂಡ ವಿಕೆಟ್ ಒಪ್ಪಿಸಿದರು. ಆ ಬಳಿಕ ಬಂದ ರಿಯಾನ್ ಪರಾಗ್ 20 ರನ್ಗಳ ಕೊಡುಗೆ ನೀಡಿದರು.
ಮತ್ತೊಂದೆಡೆ ಆಕ್ರಮಣಕಾರಿ ಬ್ಯಾಟಿಂಗ್ ಮುಂದುವರೆಸಿದ ಯಶಸ್ವಿ ಜೈಸ್ವಾಲ್ ಕೇವಲ 32 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 10 ಫೋರ್ಗಳೊಂದಿಗೆ ಅಜೇಯ 77 ರನ್ ಬಾರಿಸಿದರು. ಈ ಮೂಲಕ ರಾಜಸ್ಥಾನ್ ರಾಯಲ್ಸ್ ತಂಡವು ನಿಗದಿತ 11 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 150 ರನ್ ಕಲೆಹಾಕಿತು.
151 ರನ್ಗಳ ಗುರಿ:
ಈ ಕಠಿಣ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡವು ಜೋಫ್ರಾ ಆರ್ಚರ್ ಎಸೆದ ಮೊದಲ ಓವರ್ನಲ್ಲೇ ರಯಾನ್ ರಿಕೆಲ್ಟನ್ (8) ವಿಕೆಟ್ ಕಳೆದುಕೊಂಡಿತು. ಇದರ ಬೆನ್ನಲ್ಲೇ ಒಂದು ಸಿಕ್ಸ್ ಬಾರಿಸಿ ಸೂರ್ಯಕುಮಾರ್ ಯಾದವ್ (6) ನಾಂಡ್ರೆ ಬರ್ಗರ್ಗೆ ವಿಕೆಟ್ ಒಪ್ಪಿಸಿದರು.
ಇನ್ನು ರೋಹಿತ್ ಶರ್ಮಾ ಇನಿಂಗ್ಸ್ ಕೇವಲ 5 ರನ್ಗಳಿಗೆ ಸೀಮಿತವಾಯಿತು. ಇದರ ಬೆನ್ನಲ್ಲೇ ನಾಯಕ ಹಾರ್ದಿಕ್ ಪಾಂಡ್ಯ (9) ಹಾಗೂ ತಿಲಕ್ ವರ್ಮಾ (14) ಕೂಡ ಕ್ಯಾಚಿತ್ತು ನಿರ್ಗಮಿಸಿದರು. ಪರಿಣಾಮ ಮುಂಬೈ ಇಂಡಿಯನ್ಸ್ ತಂಡಕ್ಕೆ ಅಂತಿಮ 6 ಓವರ್ಗಳಲ್ಲಿ ಗೆಲ್ಲಲು ಬರೋಬ್ಬರಿ 105 ರನ್ಗಳು ಬೇಕಿದ್ದವು.
ಈ ಹಂತದಲ್ಲಿ ಜೊತೆಗೂಡಿದ ಶೆರ್ಫೇನ್ ರದರ್ಫೋರ್ಡ್ ಹಾಗೂ ನಮನ್ಧೀರ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಅಲ್ಲದೆ 17 ಎಸೆತಗಳಲ್ಲಿ 47 ರನ್ ಚಚ್ಚಿದರು. ಈ ಹಂತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ರದರ್ಫೋರ್ಡ್ (25) ಔಟಾದರು. ಅದರಂತೆ ಕೊನೆಯ 18 ಎಸೆತಗಳಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ 57 ರನ್ಗಳಿಸಬೇಕಿತ್ತು.
ಅಂತಿಮವಾಗಿ ಮುಂಬೈ ಇಂಡಿಯನ್ಸ್ ತಂಡವು ನಿಗದಿತ 11 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 123 ರನ್ ಕಲೆಹಾಕಲಷ್ಟೇ ಶಕ್ತರಾದರು. ಈ ಮೂಲಕ ರಾಜಸ್ಥಾನ್ ರಾಯಲ್ಸ್ ತಂಡವು 27 ರನ್ಗಳ ಭರ್ಜರಿ ಸಾಧಿಸಿದೆ.