ಬೆಂಗಳೂರು ಪೊಲೀಸರಿಗೆ ಚಾಲೆಂಜ್ ಹಾಕಿದ್ದ ಅಂತರರಾಜ್ಯ ಡ್ರಗ್ ಪೆಡ್ಲರ್ಸ್ ಅರೆಸ್ಟ್: 34 ಕೋಟಿ ರೂ. ಮೌಲ್ಯದ ಎಂಡಿಎಂಎ ವಶ! – Kannada News | Bengaluru Drug Bust: Hebbal Police Arrest 4 Peddlers Who Challenged Khaki, Seize MDMA Worth Rs 34 Crore

ಬೆಂಗಳೂರು ಪೊಲೀಸರಿಗೆ ಚಾಲೆಂಜ್ ಹಾಕಿದ್ದ ಅಂತರರಾಜ್ಯ ಡ್ರಗ್ ಪೆಡ್ಲರ್ಸ್ ಅರೆಸ್ಟ್

ಬೆಂಗಳೂರು, ಜುಲೈ 15: “ಕರ್ನಾಟಕ ಪೊಲೀಸರು ಎಷ್ಟೇ ಕಣ್ಗಾವಲು ಇಟ್ಟರೂ ನಮ್ಮನ್ನು ಏನೂ ಮಾಡಲು ಸಾಧ್ಯವಿಲ್ಲ” ಎಂದು ಸೋಷಿಯಲ್ ಮೀಡಿಯಾ ಮೂಲಕ ಸವಾಲು ಹಾಕಿದ್ದ ಅಂತರರಾಜ್ಯ ಡ್ರಗ್ ಪೆಡ್ಲರ್‌ಗಳ (Drug Peddlers) ಜಾಲವನ್ನು ಹೆಬ್ಬಾಳ ಪೊಲೀಸರು ಅತ್ಯಂತ ಚಾಣಾಕ್ಷತನದಿಂದ ಭೇದಿಸಿದ್ದಾರೆ. ನೈಜೀರಿಯಾ ಪ್ರಜೆ ಸೇರಿ ನಾಲ್ವರು ಕುಖ್ಯಾತ ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿರುವ ಪೊಲೀಸರು, ಅವರಿಂದ ಬರೋಬ್ಬರಿ 34 ಕೋಟಿ ರೂಪಾಯಿ ಮೌಲ್ಯದ 17 ಕೆಜಿ 580 ಗ್ರಾಂ ಎಂಡಿಎಂಎ (MDMA) ಕ್ರಿಸ್ಟಲ್ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ.

ಪೊಲೀಸರಿಗೆ ಚಾಲೆಂಜ್ ಹಾಕಿದ್ದ ಕಿಂಗ್‌ಪಿನ್

ಕೆಲ ದಿನಗಳ ಹಿಂದಷ್ಟೇ ಹೆಬ್ಬಾಳ ಪೊಲೀಸರು 34 ಕೋಟಿ ರೂ. ಮೌಲ್ಯದ 17 ಕೆಜಿ 400 ಗ್ರಾಂ ಡ್ರಗ್ಸ್ ಜಪ್ತಿ ಮಾಡಿ ಎಂಟು ಮಂದಿಯನ್ನು ಜೈಲಿಗಟ್ಟಿದ್ದರು. ಈ ಕಾರ್ಯಾಚರಣೆ ಬೆನ್ನಲ್ಲೇ, ನೈಜೀರಿಯಾದಲ್ಲಿದ್ದ ಪ್ರಮುಖ ಆರೋಪಿಯೊಬ್ಬ ಇಲ್ಲಿನ ಸ್ಥಳೀಯ ಪೆಡ್ಲರ್‌ಗಳಿಗೆ ಮೆಸೇಜ್ ಮಾಡಿದ್ದ. ಬೆಂಗಳೂರಿನಲ್ಲಿ ಈಗ ಡ್ರಗ್ಸ್ ಪೆಡ್ಲಿಂಗ್ ಮಾಡುವುದು ಕಷ್ಟವಾಗುತ್ತಿದೆ, ಕರ್ನಾಟಕ ಪೊಲೀಸರು ಫುಲ್ ಟೈಟ್ ಮಾಡ್ತಿದ್ದಾರೆ. ಆದರೂ ನಾವು ಬಿಸಿನೆಸ್ ಮುಂದುವರಿಸೋಣ, ಪೊಲೀಸರು ಏನ್ ಮಾಡ್ತಾರೆ ನೋಡೋ ಎಂದು ಚಾಲೆಂಜ್ ಹಾಕಿದ್ದ.

ಖಾದ್ಯ ಪದಾರ್ಥಗಳ ಪ್ಯಾಕೆಟ್‌ಗಳಲ್ಲಿ ಸಾಗಾಟ

ಪೊಲೀಸರ ಕಣ್ಣು ತಪ್ಪಿಸಲು ಆರೋಪಿಗಳು ವಿವಿಧ ಫುಡ್ ಐಟಂ (ಖಾದ್ಯ ಪದಾರ್ಥ)ಗಳ ಪ್ಯಾಕೆಟ್‌ಗಳ ಒಳಗೆ ಎಂಡಿಎಂಎ ಡ್ರಗ್ಸ್ ಇಟ್ಟು ಸಾಗಿಸುತ್ತಿದ್ದ ಸ್ಫೋಟಕ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಖಚಿತ ಮಾಹಿತಿ ಆಧರಿಸಿ ತಕ್ಷಣವೇ ಕಾರ್ಯಪ್ರವೃತ್ತರಾದ ಹೆಬ್ಬಾಳ ಪೊಲೀಸರು ಒಟ್ಟು 5 ಪ್ರತ್ಯೇಕ ವಿಶೇಷ ತಂಡಗಳನ್ನು ರಚಿಸಿ ದೆಹಲಿ ಹಾಗೂ ಬೆಂಗಳೂರಿನಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದರು.

ನಾಲ್ವರ ಬಂಧನ

ಬೃಹತ್ ಕಾರ್ಯಾಚರಣೆಯ ಮೂಲಕ ಪೊಲೀಸರು ದೆಹಲಿಯಲ್ಲಿ ತಲೆಮರೆಸಿಕೊಂಡಿದ್ದ ನೈಜೀರಿಯಾ ಮೂಲದ ಸೊಲೊಮನ್ ಟಚುಕ್ಯೂ ಎಂಬಾತನನ್ನು ಹೆಡೆಮುರಿಕಟ್ಟಿದ್ದಾರೆ. ಇದರೊಂದಿಗೆ ಬೆಂಗಳೂರಿನಲ್ಲಿ ಡ್ರಗ್ಸ್ ಹಂಚಿಕೆ ಮಾಡುತ್ತಿದ್ದ ಮಣಿಪುರ ಮೂಲದ ರಾಕಾಂಗ್ಮಿ ತನಿರೋಸ್, ಸ್ಥಳೀಯರಾದ ಮೋಹನ್ ಕುಮಾರ್ ಮತ್ತು ಜಾನ್ಸನ್ ಎಂಬುವವರನ್ನು ಬಂಧಿಸಲಾಗಿದೆ. ಪೊಲೀಸರ ಸವಾಲನ್ನು ಸ್ವೀಕರಿಸಿ ಭರ್ಜರಿ ಬೇಟೆಯಾಡಿದ ಹೆಬ್ಬಾಳ ಪೊಲೀಸರ ಈ ಯಶಸ್ವಿ ಕಾರ್ಯಾಚರಣೆಗೆ ಹಿರಿಯ ಅಧಿಕಾರಿಗಳಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

ವರದಿ: ವಿಕಾಸ್, ಟಿವಿ9 ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕ ಶಾಶ್ವತ ನಿವಾಸ ಪ್ರಮಾಣಪತ್ರ ರದ್ದುಪಡಿಸುವಂತೆ ರಾಜ್ಯಪಾಲರಿಗೆ ಬಿಜೆಪಿ ಮನವಿ – Kannada News | Karnataka Permanent Resident Certificate Row: BJP Urges Governor to Revoke State Government Decision

ಬೆಂಗಳೂರು, ಜುಲೈ 15: ಕರ್ನಾಟಕದಲ್ಲಿ ಶಾಶ್ವತ ನಿವಾಸ ಪ್ರಮಾಣಪತ್ರ ನೀಡುವ ಕಾಂಗ್ರೆಸ್ ಸರ್ಕಾರದ ನಿರ್ಧಾರವನ್ನು ರದ್ದುಪಡಿಸಬೇಕೆಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದಾರೆ. ಸರ್ಕಾರದ ಈ ನಿರ್ಧಾರವು ಅಕ್ರಮ ಬಾಂಗ್ಲಾದೇಶೀಯರನ್ನು ರಾಜ್ಯದ ಶಾಶ್ವತ ಮತದಾರರನ್ನಾಗಿ ಮಾಡುವ ಹುನ್ನಾರ ಎಂದು ಅಶೋಕ್ ಆರೋಪಿಸಿದ್ದಾರೆ. ರಾಜ್ಯದಲ್ಲಿ 20 ರಿಂದ 30 ಲಕ್ಷ ಬಾಂಗ್ಲಾದೇಶೀಯರಿದ್ದಾರೆ ಎಂಬ ಮಾಹಿತಿ ಇದ್ದು, ಇವರಿಗೆ ಶಾಶ್ವತ ನಿವಾಸ ಪ್ರಮಾಣಪತ್ರ ನೀಡುವುದರಿಂದ ಅವರಿಗೆ ರೇಷನ್ ಕಾರ್ಡ್, ಆರೋಗ್ಯ ಕಾರ್ಡ್ ಮತ್ತು ಮನೆಗಳಂತಹ ಸೌಲಭ್ಯಗಳು ಲಭ್ಯವಾಗುತ್ತವೆ ಎಂದು ಅಶೋಕ್ ಹೇಳಿದ್ದಾರೆ. ಈ ಮೂಲಕ ಕಾಂಗ್ರೆಸ್‌ಗೆ ಮತ ಹಾಕುವವರನ್ನು ಶಾಶ್ವತ ನಾಗರಿಕರನ್ನಾಗಿ ಮಾಡುವ ಪ್ರಯತ್ನ ಇದಾಗಿದೆ ಎಂದು ಅವರು ದೂರಿದ್ದಾರೆ.

ಇದು ದೇಶದ ಭದ್ರತೆಗೆ ಅಪಾಯ ತರುತ್ತದೆ ಎಂದು ಅಶೋಕ್ ಎಚ್ಚರಿಸಿದ್ದಾರೆ. ಪಿಎಫ್‌ಐ ಮತ್ತು ಕೆಎಫ್‌ಡಿ ಸಂಘಟನೆಗಳ ಉದಾಹರಣೆ ನೀಡಿದ ಅವರು, ಬಾಂಗ್ಲಾದೇಶೀಯರು ಭವಿಷ್ಯದಲ್ಲಿ ಭಯೋತ್ಪಾದಕರಾಗುವ ಸಾಧ್ಯತೆ ಇದೆ ಎಂದಿದ್ದಾರೆ. ವಿದೇಶೀಯರ ವಿಷಯದಲ್ಲಿ ಕೇಂದ್ರ ಸರ್ಕಾರಕ್ಕೆ ಮಾತ್ರ ಅಧಿಕಾರವಿದ್ದು, ರಾಜ್ಯ ಸರ್ಕಾರಕ್ಕೆ ಪ್ರಮಾಣಪತ್ರ ನೀಡುವ ಅಧಿಕಾರವಿಲ್ಲ ಎಂದು ಅಶೋಕ್ ಸ್ಪಷ್ಟಪಡಿಸಿದ್ದಾರೆ.

ಈ ನಿರ್ಧಾರವು ಅಕ್ರಮವಾಗಿದ್ದು, ದೇಶದ ಕಾನೂನುಗಳಿಗೆ ತೊಂದರೆಯಾಗಲಿದೆ. ಆದ್ದರಿಂದ ಕೂಡಲೇ ಈ ನಿರ್ಧಾರವನ್ನು ರದ್ದುಪಡಿಸುವಂತೆ ರಾಜ್ಯಪಾಲರಿಗೆ ಮನವಿ ಮಾಡಿದ್ದು, ರಾಜ್ಯಪಾಲರು ಸಹಾನುಭೂತಿಯಿಂದ ಆಲಿಸಿ ಸರ್ಕಾರಕ್ಕೆ ಎಚ್ಚರಿಕೆ ನೀಡುವುದಾಗಿ ತಿಳಿಸಿದ್ದಾರೆ ಎಂದು ಅಶೋಕ್ ಮಾಹಿತಿ ನೀಡಿದರು.

ಕರ್ನಾಟಕ ಶಾಶ್ವತ ನಿವಾಸ ಪ್ರಮಾಣ ಪತ್ರ ಕುರಿತ ಹೆಚ್ಚಿನ ಮಾಹಿತಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

Source link

ವೈಭವ್ ವಿಷಯದಲ್ಲಿ ಎಡವಿತೇ ಟೀಮ್ ಇಂಡಿಯಾ? ದಿನೇಶ್ ಕಾರ್ತಿಕ್ ಕಿಡಿ!

ಭಾರತೀಯ ಕ್ರಿಕೆಟ್‌ನ ಭವಿಷ್ಯದ ಆಶಾಕಿರಣ ಎಂದೇ ಬಿಂಬಿತವಾಗಿರುವ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರ ಅಂತರರಾಷ್ಟ್ರೀಯ ಪಾದಾರ್ಪಣೆಯ ನಿರ್ವಹಣೆ ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಭಾರತ ತಂಡದ ಮಾಜಿ ವಿಕೆಟ್ ಕೀಪರ್-ಬ್ಯಾಟರ್ ದಿನೇಶ್ ಕಾರ್ತಿಕ್, ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್‌ನ ಈ ನಿರ್ಧಾರವನ್ನು ಕಠಿಣ ಪದಗಳಲ್ಲಿ ಟೀಕಿಸಿದ್ದು, “ಅವರು ಸಂಪೂರ್ಣವಾಗಿ ತಪ್ಪು ದಾರಿ ತುಳಿದಿದ್ದಾರೆ” ಎಂದು ಹೇಳಿದ್ದಾರೆ.

ಡಿಕೆ ಆಕ್ರೋಶ:

ಸ್ಕೈ ಸ್ಪೋರ್ಟ್ಸ್ ವಾಹಿನಿಯೊಂದಿಗೆ ಮಾತನಾಡಿದ ದಿನೇಶ್ ಕಾರ್ತಿಕ್, ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ನಡುವಿನ ಸಮನ್ವಯದ ಕೊರತೆಯನ್ನು ಬಹಿರಂಗವಾಗಿ ಪ್ರಶ್ನಿಸಿದ್ದಾರೆ. ಈ ಸಮನ್ವಯ ಕೊರತೆಯಿಂದಾಗಿ ವೈಭವ್ ಸೂರ್ಯವಂಶಿಯನ್ನು ಪಾದಾರ್ಪಣೆಯ ನಿರ್ವಹಣೆ ಸಂಪೂರ್ಣ ವಿಫಲವಾಗಿದೆ ಎಂದಿದ್ದಾರೆ.

ವೈಭವ್ ಸೂರ್ಯವಂಶಿ ಅವರಂತಹ ಕಿರಿಯ ಆಟಗಾರನನ್ನು ಪರೀಕ್ಷಿಸಲು ಇಂಗ್ಲೆಂಡ್‌ನ ಬಲಿಷ್ಠ ವೇಗಿಗಳಿಗಿಂತ, ಐರ್ಲೆಂಡ್ ಸರಣಿ ಅತ್ಯಂತ ಸೂಕ್ತವಾಗಿತ್ತು ಎಂದು ದಿನೇಶ್ ಕಾರ್ತಿಕ್ ಅಭಿಪ್ರಾಯಪಟ್ಟಿದ್ದಾರೆ.

ಸೀನಿಯರ್ ಮತ್ತು ಜೂನಿಯರ್ ಆಟಗಾರರನ್ನು ರೊಟೇಟ್ ಮಾಡುವ ವಿಷಯದಲ್ಲಿ ತಂಡದಲ್ಲಿ ಯಾವುದೇ ಸ್ಪಷ್ಟ ಮಾರ್ಗದರ್ಶಿ ಸೂಚಿಗಳಿಲ್ಲ ಎಂಬುದು ಸಾಬೀತಾಗಿದೆ.

ಟಿ20 ವಿಶ್ವಕಪ್ ಹೀರೋ ಸಂಜು ಸ್ಯಾಮ್ಸನ್ ಅವರನ್ನು ಕೇವಲ ಮೂರು ಪಂದ್ಯಗಳ ವೈಫಲ್ಯದ ಬಳಿಕ ಕೈಬಿಟ್ಟು ವೈಭವ್‌ಗೆ ಅವಕಾಶ ನೀಡಲಾಯಿತು. ಆದರೆ, ವೈಭವ್ ಕೂಡ ಮೂರು ಪಂದ್ಯಗಳಲ್ಲಿ ಮಿಂಚದಿದ್ದಾಗ ಅಂತಿಮ ಟಿ20 ಪಂದ್ಯದಿಂದ ಅವರನ್ನೂ ಹೊರಗಿಡಲಾಯಿತು. ಇದು ಆಟಗಾರರಲ್ಲಿ ಅಭದ್ರತೆಯನ್ನು ಉಂಟುಮಾಡುತ್ತದೆ ಎಂದು ಡಿಕೆ ಆತಂಕ ವ್ಯಕ್ತಪಡಿಸಿದ್ದಾರೆ.

ನಾಯಕತ್ವದ ನಡುವಿನ ಗೊಂದಲ:

ಕೋಚ್ ಮತ್ತು ಆಯ್ಕೆಗಾರರ ನಡುವಿನ ಭಿನ್ನ ಆಲೋಚನೆಗಳೇ ಈ ಎಡವಟ್ಟಿಗೆ ಕಾರಣ ಎಂದು ದಿನೇಶ್ ಕಾರ್ತಿಕ್ ವಿಶ್ಲೇಷಿಸಿದ್ದಾರೆ.

ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಅವರು ಭವಿಷ್ಯದ ತಂಡವನ್ನು ಕಟ್ಟುವ ನಿಟ್ಟಿನಲ್ಲಿ ಯುವ ಆಟಗಾರರಿಗೆ ಹೆಚ್ಚಿನ ಅವಕಾಶ ನೀಡಲು ಬಯಸುತ್ತಿದ್ದಾರೆ.

ಇದೇ ವೇಳೆ ಟೀಮ್ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ ತಕ್ಷಣದ ಸರಣಿ ಗೆಲುವುಗಳ ಮೇಲೆ ಕಣ್ಣಿಟ್ಟಿದ್ದು, ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ಒತ್ತಡದಲ್ಲಿದ್ದಾರೆ.

ಈ ಇಬ್ಬರ ವಿಭಿನ್ನ ಗುರಿಗಳಿಂದಾಗಿ ತಂಡದ ಒಳಗಿನ ವಾತಾವರಣದ ಮೇಲೆ ಪರಿಣಾಮ ಬೀರಿದೆ. ಇದರ ಫಲವಾಗಿಯೇ ಭಾರತ ತಂಡವು ಈ ಯುಕೆ ಪ್ರವಾಸದಲ್ಲಿ ಒಂದೂ ಸರಣಿ ಗೆಲ್ಲಲು ಸಾಧ್ಯವಾಗಲಿಲ್ಲ ಎಂದು ದಿನೇಶ್ ಕಾರ್ತಿಕ್ ವಿಶ್ಲೇಷಿಸಿದ್ದಾರೆ.

ಇದನ್ನೂ ಓದಿ: ಸೋಲರಿಯದ ಸರದಾರರು: 37 ಪಂದ್ಯಗಳ ‘ಸ್ಪೇನ್’ ಸಾಮ್ರಾಜ್ಯ!

ಒಟ್ಟಾರೆಯಾಗಿ ಹೇಳುವುದಾದರೆ, 15 ವರ್ಷದ ವೈಭವ್ ಸೂರ್ಯವಂಶಿ ಅವರಲ್ಲಿ ಅದ್ಭುತ ಪ್ರತಿಭೆ ಇರುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ಅಂತಾರಾಷ್ಟ್ರೀಯ ಕ್ರಿಕೆಟ್‌ನ ತೀವ್ರ ಒತ್ತಡಕ್ಕೆ ಅವರನ್ನು ಸರಿಯಾದ ಯೋಜನೆ ಇಲ್ಲದೆ ತಳ್ಳಿರುವುದು ಮ್ಯಾನೇಜ್‌ಮೆಂಟ್‌ನ ಅಪಕ್ವತೆಯನ್ನು ತೋರಿಸುತ್ತದೆ ಎಂದು ದಿನೇಶ್ ಕಾರ್ತಿಕ್ ಅವರ ಮಾತುಗಳು ಸಾಬೀತುಪಡಿಸುತ್ತವೆ.

 

Source link

ರಷ್ಯಾ ತೈಲ ಖರೀದಿ: ಭಾರತ ಮತ್ತು ಚೀನಾ ವಿರುದ್ಧ ಶೇ. 100 ಸುಂಕ ವಿಧಿಸಲು ಅಮೆರಿಕ ಮುಂದು; ಬಂತು ಹೊಸ ವಿಧೇಯಕ – Kannada News | US brings a revised bill that proposes upto 100pc tariffs on India, China and few other countries

ನರೇಂದ್ರ ಮೋದಿ ಮತ್ತು ಡೊನಾಲ್ಡ್ ಟ್ರಂಪ್Image Credit source: PTI

ವಾಷಿಂಗ್ಟನ್, ಜುಲೈ 15: ರಷ್ಯಾದಿಂದ ಕಚ್ಚಾ ತೈಲವನ್ನು (Russian Crude Oil) ಖರೀದಿಸುತ್ತಿರುವವರನ್ನು ಬೆದರಿಸಲು ಅಮೆರಿಕದ ಪ್ರಯತ್ನಸುತ್ತಲೇ ಇದೆ. ಅದರಲ್ಲೂ ಚೀನಾ, ಭಾರತ ಸೇರಿ ಐದು ದೇಶಗಳನ್ನು ಗುರಿ ಮಾಡಿ ಹೊಸ ನಿರ್ಬಂಧ ವಿಧೇಯಕವನ್ನು ಅಮೆರಿಕದ ಸಂಸತ್ತು ಹೊರತಂದಿದೆ. ಈ ವಿಧೇಯಕದ ಪ್ರಕಾರ ಅತಿಹೆಚ್ಚು ರಷ್ಯನ್ ತೈಲ ಖರೀದಿಸುತ್ತಿರುವ ಐದು ದೇಶಗಳ ಮೇಲೆ ಶೇ. 100ರವರೆಗೆ ಟ್ಯಾರಿಫ್ ವಿಧಿಸಲು ಪ್ರಸ್ತಾಪ ಮಾಡಲಾಗಿದೆ. ಅಮೆರಿಕದ ಎರಡು ಪ್ರಮುಖ ಪಕ್ಷಗಳಾದ ಡೆಮಾಕ್ರಾಟ್ ಮತ್ತು ರಿಪಬ್ಲಿಕನ್​ನ ಸೆನೆಟರ್​ಗಳ ಗುಂಪು ಈ ಹೊಸ ರಷ್ಯಾ ಸ್ಯಾಂಕ್ಷನ್ಸ್ ಪರಿಷ್ಕೃತ ಮಸೂದೆಯನ್ನು ಪರಿಚಯಿಸಿದೆ. ಕಳೆದ ವರ್ಷದ ಮಸೂದೆಯಲ್ಲಿ ರಷ್ಯನ್ ತೈಲ ಖರೀದಿಸುವ ದೇಶಗಳ ಮೇಲೆ ಶೇ. 500ರವರೆಗೆ ಟ್ಯಾರಿಫ್ ಹಾಕುವ ಪ್ರಸ್ತಾಪ ಇತ್ತು. ಈ ಪರಿಷ್ಕೃತ ಮಸೂದೆಯಲ್ಲಿ ನಿಲುವು ಮೆದುಗೊಂಡಿದೆ.

ಸರ್ವಪಕ್ಷಗಳ ಬೆಂಬಲ ಹೊಂದಿರುವ ಈ ವಿಧೇಯಕವು ಆಗಸ್ಟ್ ತಿಂಗಳೊಳಗೆ ಅಂಗೀಕಾರವಾಗುವ ಸಾಧ್ಯತೆಯಿದೆ. ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ಯುದ್ಧವನ್ನು ಅಂತ್ಯಗೊಳಿಸುವ ಉದ್ದೇಶದಿಂದ ಅಮೆರಿಕ ಈ ಕ್ರಮ ತೆಗೆದುಕೊಂಡಿದೆ ಎನ್ನಲಾಗುತ್ತಿದೆ. ರಷ್ಯಾಗೆ ಅದರ ತೈಲ ಮಾರಾಟವೇ ಪ್ರಮುಖ ಆದಾಯ ಮೂಲವಾಗಿದೆ. ಇದಕ್ಕೆ ತುಂಡರಿಸುವ ಸಲುವಾಗಿ ಅಮೆರಿಕ ನಿಷೇಧದ ಕ್ರಮ ತೆಗೆದುಕೊಳ್ಳುತ್ತಿದೆ. ತೈಲ ಖರೀದಿ ನಿಲ್ಲಿಸಿದರೆ ರಷ್ಯಾದ ಆರ್ಥಿಕತೆ ದುರ್ಬಲಗೊಳ್ಳುತ್ತದೆ. ಯುದ್ಧ ಮಾಡಲು ಅಗತ್ಯವಾಗಿರುವ ಹಣ ರಷ್ಯಾಗೆ ಸಿಗುವುದಿಲ್ಲ. ಆಗ ಯುದ್ಧದಿಂದ ಅದು ಹೊರಬರುತ್ತದೆ ಎಂಬುದು ಅಮೆರಿಕದ ಲೆಕ್ಕಾಚಾರ.

ಇದನ್ನೂ ಓದಿ: ಭಾರತದಲ್ಲಿ ಬೆಳೆಯುತ್ತಿರುವ ಡೇಟಾ ಸೆಂಟರ್​ಗಳಿಂದ ಭರ್ಜರಿ ಉದ್ಯೋಗ ಸೃಷ್ಟಿ; 4 ವರ್ಷದಲ್ಲಿ 1 ಲಕ್ಷ ಎಂಜಿನಿಯರುಗಳಿಗೆ ಉದ್ಯೋಗಾವಕಾಶ

ಅಮೆರಿಕದ ಮಸೂದೆಯಲ್ಲಿ ಗುರಿ ಮಾಡಲಾಗಿರುವ ಐದು ದೇಶಗಳು

ವಾಷಿಂಗ್ಟನ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಮೆರಿಕದ ಸೆನೆಟರ್ ರಿಚರ್ಡ್ ಬ್ಲೂಮೆಂಥಾಲ್ ತಿಳಿಸಿದಂತೆ, ರಷ್ಯಾದಿಂದ ಪ್ರಮುಖವಾಗಿ ತೈಲ ಖರೀದಿಸುತ್ತಿರುವ 5 ದೇಶಗಳನ್ನು ಈ ವಿಧೇಯಕದಲ್ಲಿ ಗುರಿಯಾಗಿಸಲಾಗಿದೆ:

  1. ಭಾರತ
  2. ಚೀನಾ
  3. ಸ್ಲೋವಾಕಿಯಾ
  4. ಹಂಗೇರಿ
  5. ಅಜೆರ್ಬೈಜಾನ್

ರಷ್ಯಾದ ಒಟ್ಟು ಎಲ್​ಎನ್​ಜಿ ಗ್ಯಾಸ್ ಪೂರೈಕೆಯಲ್ಲಿ ಶೇ. 15ಕ್ಕಿಂತ ಕಡಿಮೆ ಅನಿಲ ಖರೀದಿಸುತ್ತಿರುವ ದೇಶಗಳಿಗೆ ವಿನಾಯಿತಿ ನೀಡುವ ಒಂದು ಪ್​ರಸ್ತಾಪವೂ ಇದರಲ್ಲಿದೆ. ಹಾಗೆಯೇ, ರಷ್ಯನ್ ತೈಲವನ್ನು ಪಡೆಯುವುದನ್ನು ಕಡಿಮೆಗೊಳಿಸುವ ಇರಾದೆ ಇರುವ ದೇಶಗಳನ್ನು ಅಮೆರಿಕ ಉತ್ತೇಜಿಸಲು ಮುಂದಾಗಿದೆ.

ಹಿಂದಿನ ಪ್ರಸ್ತಾಪಕ್ಕಿಂತ ಸೌಮ್ಯವಾದ ವಿಧೇಯಕ

ಕಳೆದ ವರ್ಷ ಏಪ್ರಿಲ್‌ನಲ್ಲಿ ಮಂಡಿಸಲಾಗಿದ್ದ “ಸ್ಯಾಂಕ್ಷನಿಂಗ್ ರಷ್ಯಾ ಆಕ್ಟ್” ನಲ್ಲಿ ರಷ್ಯಾ ಇಂಧನ ಖರೀದಿಸುವ ದೇಶಗಳ ಮೇಲೆ ಬರೋಬ್ಬರಿ ಶೇ. 500 ರಷ್ಟು ಸುಂಕ ವಿಧಿಸುವ ಪ್ರಸ್ತಾಪವಿತ್ತು. ಆದರೆ ಆ ತೀವ್ರ ನಿರ್ಧಾರಕ್ಕೆ ಜನಪ್ರತಿನಿಧಿಗಳಿಂದ ಹಾಗೂ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಂದ ನಿರೀಕ್ಷಿತ ಬೆಂಬಲ ಸಿಕ್ಕಿರಲಿಲ್ಲ. ಹಾಗಾಗಿ, ಈಗ ಮಂಡಿಸಲಾಗಿರುವ ಹೊಸ ವಿಧೇಯಕವು ಅದರ ಸೌಮ್ಯ ರೂಪವಾಗಿದ್ದು, ಗರಿಷ್ಠ ಶೇ. 100 ರಷ್ಟು ಸುಂಕದ ಮಿತಿಯನ್ನು ಪ್ರಸ್ತಾಪಿಸಿದೆ.

ಇದನ್ನೂ ಓದಿ: ಭಾರತ-ಯುಕೆ ಮುಕ್ತ ವ್ಯಾಪಾರ ಒಪ್ಪಂದ ಇಂದಿನಿಂದ ಜಾರಿ: ಸಾಮಾನ್ಯ ಜನರಿಗೆ ಹಬ್ಬ, ಕಾರು, ವಿಸ್ಕಿ, ಚಾಕೊಲೇಟ್ ಭಾರಿ ಅಗ್ಗ

ಈ ದೇಶಗಳ ಮೇಲಿನ ನಿಖರವಾದ ಸುಂಕದ ದರವನ್ನು ಅಮೆರಿಕದ ವ್ಯಾಪಾರ ಪ್ರತಿನಿಧಿ (United States Trade Representative – USTR) ನಿರ್ಧರಿಸಲಿದ್ದಾರೆ.

ಶೀಘ್ರದಲ್ಲಿಯೇ ಅಂಗೀಕಾರದ ನಿರೀಕ್ಷೆ

ಸೆನೆಟ್‌ನಲ್ಲಿ ಈ ವಿಧೇಯಕವನ್ನು ಅಂಗೀಕರಿಸಲು ಅಗತ್ಯವಿರುವ ಬೆಂಬಲ ಕ್ರೋಢೀಕರಿಸಲಾಗಿದೆ. ಶೀಘ್ರದಲ್ಲೇ, ಅಂದರೆ ಆಗಸ್ಟ್‌ಗಿಂತ ಮೊದಲೇ ಇದು ಕಾನೂನಾಗಿ ಜಾರಿಗೆ ಬರುವ ನಿರೀಕ್ಷೆಯಿದೆ. ಇತ್ತೀಚೆಗೆ ನಿಧನರಾದ ಪ್ರಭಾವಿ ಅಮೆರಿಕನ್ ಸೆನೆಟರ್ ಲಿಂಡ್ಸೆ ಗ್ರಹಾಂ ಅವರು ಈ ವಿಧೇಯಕವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಪತ್ರಿಕಾಗೋಷ್ಠಿಯಲ್ಲಿ ಸ್ಮರಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

‘ಸಿಗಂದೂರು ಸೇತುವೆ’ಗೆ ಒಂದು ವರ್ಷದ ಸಂಭ್ರಮ: ವಿದ್ಯುತ್ ದೀಪಾಲಂಕಾರದ ವೈಭವ – Kannada News | Sigandur Bridge Anniversary: Sagara’s Cable Bridge Lights Up Sharavathi Backwaters, Viral Drone Views

ಸಾಗರ, ಜು.15: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಸಿಗಂದೂರು ಚೌಡೇಶ್ವರಿ ದೇವಾಲಯವನ್ನು ಸಂಪರ್ಕಿಸುವ ಹಾಗೂ ಶರಾವತಿ ಹಿನ್ನೀರಿನ ಮೇಲೆ ನಿರ್ಮಾಣಗೊಂಡಿರುವ ಐತಿಹಾಸಿಕ ಸಿಗಂದೂರು ಸೇತುವೆಯು ಸಾರ್ವಜನಿಕ ಸೇವೆಗೆ ಮುಕ್ತವಾಗಿ ಯಶಸ್ವಿಯಾಗಿ ಒಂದು ವರ್ಷ ಪೂರೈಸಿದೆ. ಈ ವಿಶೇಷ ದಿನವನ್ನು ಮಲೆನಾಡಿನ ಗಡಿಭಾಗದ ಜನತೆ ಹಬ್ಬದಂತೆ ಆಚರಿಸಿ ಸಂಭ್ರಮಿಸಿದ್ದಾರೆ. ಕಳೆದ ವರ್ಷ ಜುಲೈ ತಿಂಗಳಲ್ಲಿ ಉದ್ಘಾಟನೆಗೊಂಡಿದ್ದ ಈ ಸುಂದರ ಕೇಬಲ್ ಸೇತುವೆಯು, ಇದೀಗ ಮೊದಲ ವರ್ಷದ ವಾರ್ಷಿಕೋತ್ಸವದ ನೆನಪಿನಲ್ಲಿ ಮೈದುಂಬಿ ಕಂಗೊಳಿಸುತ್ತಿದೆ. ಸೇತುವೆಯ ಮೊದಲ ವರ್ಷದ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಇಡೀ ಸೇತುವೆಗೆ ವಿಶೇಷವಾಗಿ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಬಣ್ಣ ಬಣ್ಣದ ಎಲ್ಇಡಿ ದೀಪಗಳಿಂದ ಸಿಂಗಾರಗೊಂಡಿದ್ದ ಸೇತುವೆಯು ಶರಾವತಿ ನದಿಯ ಹಿನ್ನೀರಿನ ಮಧ್ಯೆ ಸ್ವರ್ಗಲೋಕದಂತೆ ಕಂಗೊಳಿಸುತ್ತಿತ್ತು.ರಾತ್ರಿಯ ಹೊತ್ತು ಕಗ್ಗತ್ತಲ ನಡುವೆ ದೀಪಾಲಂಕಾರದ ಭವ್ಯತೆಯಿಂದ ಮಿಂಚುತ್ತಿದ್ದ ಸೇತುವೆಯ ರಮಣೀಯ ದೃಶ್ಯಗಳನ್ನು ಡ್ರೋನ್ ಕ್ಯಾಮರಾ ಬಳಸಿ ಅತ್ಯಂತ ಆಕರ್ಷಕವಾಗಿ ವಿಡಿಯೋ ಮತ್ತು ಫೋಟೋಗಳ ಮೂಲಕ ಸೆರೆಹಿಡಿಯಲಾಗಿದೆ. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹಲವು ಕತೆಗಳಿವೆ ಡಾಲಿ ಧನಂಜಯ್ ಬಳಿ, ಹೇಳಲು ಕಾತರ: ವಿಡಿಯೋ ನೋಡಿ – Kannada News | Daali Dhananjay says he has lot of stories to tell through cinema

ಡಾಲಿ ಧನಂಜಯ್ (Daali Dhananjay), ನಟನಾಗಿ ಜೊತೆಗೆ ನಿರ್ಮಾಪಕನಾಗಿಯೂ ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದಾರೆ. ವಿಶೇಷವಾಗಿ ನಿರ್ಮಾಪಕನಾಗಿ ಹೊಸ ರೀತಿಯ ಧ್ವನಿಗಳಿಗೆ ಬೆಂಬಲ ನೀಡುತ್ತಿದ್ದಾರೆ. ಹೊಸ ಪ್ರತಿಭೆಗಳಿಗೆ ಅವಕಾಶಗಳನ್ನು ಕೊಡುತ್ತಿದ್ದಾರೆ. ಹೊಸ-ಹೊಸ ಕಲಾವಿದರು, ತಂತ್ರಜ್ಞರನ್ನು ಪರಿಚಯಿಸುತ್ತಿದ್ದಾರೆ. ಹೊಸ ರೀತಿಯ ಸಿನಿಮಾಗಳನ್ನು ಕೊಡು ಪ್ರಯತ್ನ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೆ ಅವರು ‘ಮದರ್ ಪ್ರಾಮಿಸ್’ ಹೆಸರಿನ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈ ಬಗ್ಗೆ ಟಿವಿ9 ಜೊತೆಗೆ ಮಾತನಾಡಿರುವ ನಟ ಡಾಲಿ, ತಮ್ಮ ಬಳಿ ಹಲವಾರು ಕತೆಗಳಿದ್ದು, ಅವುಗಳನ್ನು ಹೇಳಲು ಕಾತರವಾಗಿರುವುದಾಗಿ ಹೇಳಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

ಸಂಬಂಧ ಹಾಳಾಗದಿರಲು 35 ವರ್ಷದೊಳಗೆ ಈ 4 ವೈವಾಹಿಕ ಪಾಠಗಳನ್ನು ಕಲಿಯಿರಿ – Kannada News | 4 marriage rules every couple should learn before age 35

ಮದುವೆ (Marriage) ಎಂದರೆ ಕೇವಲ ಒಟ್ಟಿಗೆ ಬದುಕುವುದು ಮಾತ್ರವಲ್ಲ, ಪರಸ್ಪರ ಅರ್ಥೈಸಿಕೊಳ್ಳುವುದು, ಗೌರವಿಸುವುದು ಮತ್ತು ವಿಶ್ವಾಸ ಬೆಳೆಸಿಕೊಳ್ಳುವುದೂ ಆಗಿದೆ. ಅನೇಕ ದಂಪತಿಗಳು ಸಣ್ಣ-ಪುಟ್ಟ ವಿಚಾರಗಳಿಂದ ಸಂಬಂಧದಲ್ಲಿ ಅಂತರವನ್ನು ಉಂಟುಮಾಡಿಕೊಳ್ಳುತ್ತಾರೆ. ಸಂಬಂಧ ತಜ್ಞೆ ಕೋಮಲ್ ಅವರ ಪ್ರಕಾರ, 35 ವರ್ಷ ತುಂಬುವ ವೇಳೆಗೆ ಪ್ರತಿಯೊಬ್ಬ ದಂಪತಿಯೂ ಕೆಲವು ಪ್ರಮುಖ ವೈವಾಹಿಕ ಪಾಠಗಳನ್ನು ಕಲಿತಿರಬೇಕು. ಇವು ಸಂಬಂಧವನ್ನು ದೀರ್ಘಕಾಲ ಗಟ್ಟಿಯಾಗಿಡಲು ಸಹಾಯ ಮಾಡುತ್ತವೆ.

  1. ದೈಹಿಕ ಸನಿಹ ಮಾತ್ರ ಸಾಕಾಗುವುದಿಲ್ಲ

ಗಂಡ-ಹೆಂಡತಿಯ ನಡುವೆ ಭಾವನಾತ್ಮಕ ಅಂತರ ಉಂಟಾದರೆ, ಕೇವಲ ದೈಹಿಕ ಸನಿಹದಿಂದ ಸಮಸ್ಯೆ ಪರಿಹಾರವಾಗುವುದಿಲ್ಲ. ಮನಸ್ಸಿನಲ್ಲಿರುವ ಬೇಸರ, ನೋವು ಅಥವಾ ತಪ್ಪು ತಿಳುವಳಿಕೆಗಳನ್ನು ಮುಕ್ತವಾಗಿ ಮಾತನಾಡಿ ಬಗೆಹರಿಸಿಕೊಳ್ಳುವುದು ಮುಖ್ಯ. ಒಬ್ಬರ ಭಾವನೆಗಳನ್ನು ಮತ್ತೊಬ್ಬರು ಅರ್ಥ ಮಾಡಿಕೊಂಡಾಗಲೇ ಸಂಬಂಧ ಮತ್ತಷ್ಟು ಗಟ್ಟಿಯಾಗುತ್ತದೆ.

  1. ಪ್ರತಿಯೊಂದು ವಾದದಲ್ಲೂ ಗೆಲ್ಲಬೇಕೆಂಬ ಹಠ ಬೇಡ

ಪ್ರತಿ ಜಗಳದಲ್ಲೂ ತಾನೇ ಸರಿ ಎಂದು ಸಾಬೀತುಪಡಿಸಲು ಯತ್ನಿಸಿದರೆ ಸಂಬಂಧಕ್ಕೆ ಧಕ್ಕೆಯಾಗಬಹುದು. ಕೆಲವೊಮ್ಮೆ ವಾದದಲ್ಲಿ ಗೆದ್ದರೂ, ಸಂಬಂಧವನ್ನು ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಬಹುದು. ಆದ್ದರಿಂದ ಸರಿ ಎನ್ನಿಸಿಕೊಳ್ಳುವುದಕ್ಕಿಂತ ಪ್ರೀತಿ, ಗೌರವ ಮತ್ತು ಪರಸ್ಪರ ಅರ್ಥೈಸಿಕೊಳ್ಳುವ ಮನೋಭಾವ ಹೆಚ್ಚು ಮುಖ್ಯ.

  1. ನಿಮ್ಮ ಸಂಬಂಧವನ್ನು ಇತರರೊಂದಿಗೆ ಹೋಲಿಸಬೇಡಿ

ಸಾಮಾಜಿಕ ಜಾಲತಾಣಗಳಲ್ಲಿ ಕಾಣುವ ದಂಪತಿಗಳ ಜೀವನ ಯಾವಾಗಲೂ ನೈಜವಾಗಿರಬೇಕೆಂದಿಲ್ಲ. ಅವರ ಜೀವನವನ್ನು ನೋಡಿ ನಿಮ್ಮ ಸಂಬಂಧವನ್ನು ಅಳೆಯಲು ಹೋಗಬೇಡಿ. ಪ್ರತಿಯೊಂದು ಮದುವೆ ಮತ್ತು ಸಂಬಂಧ ವಿಭಿನ್ನವಾಗಿರುತ್ತದೆ. ಇತರರನ್ನು ಅನುಕರಿಸುವ ಬದಲು, ನಿಮ್ಮ ಸಂಬಂಧವನ್ನು ಉತ್ತಮಗೊಳಿಸಲು ಗಮನಹರಿಸುವುದು ಉತ್ತಮ.

‘‘ನನ್ನ ಮಗ ಬಾತ್​ರೂಮ್​ನಲ್ಲಿ ಹೆಚ್ಚು ಸಮಯ ಕಳೆಯುತ್ತಾನೆ’’ ಎಂದ ತಾಯಿಗೆ ಮನೋವೈದ್ಯರ ಉತ್ತರವೇನು ನೋಡಿ

  1. ಸಂಗಾತಿಯ ಮಾತು ಕೇಳುವುದು ಅತ್ಯಗತ್ಯ

ಒಬ್ಬ ಸಂಗಾತಿಗೆ ತನ್ನ ಮಾತಿಗೆ ಬೆಲೆ ಇಲ್ಲ ಎನ್ನುವ ಭಾವನೆ ಬಂದರೆ, ಅವರು ನಿಧಾನವಾಗಿ ಮನದ ಮಾತು ಹಂಚಿಕೊಳ್ಳುವುದನ್ನೇ ನಿಲ್ಲಿಸಬಹುದು. ಇದರಿಂದ ಸಂವಹನ ಕಡಿಮೆಯಾಗಿ, ಭಾವನಾತ್ಮಕ ಬಾಂಧವ್ಯವೂ ದುರ್ಬಲವಾಗುತ್ತದೆ. ಆದ್ದರಿಂದ ಸಂಗಾತಿಯ ಮಾತನ್ನು ಕೇವಲ ಕೇಳುವುದಷ್ಟೇ ಅಲ್ಲ, ಅವರ ಭಾವನೆಗಳಿಗೆ ಗೌರವ ನೀಡುವುದೂ ಅಗತ್ಯ.

ಮದುವೆ ಬಳಿಕ ಈ ವಿಷಯಗಳನ್ನು ಪಾಲಿಸುವುದು ಉತ್ತಮ:

ಆರೋಗ್ಯಕರ ಸಂಬಂಧಕ್ಕೆ ಸಂವಹನವೇ ಅಡಿಪಾಯ

ಯಶಸ್ವಿ ದಾಂಪತ್ಯ ಜೀವನಕ್ಕೆ ದೊಡ್ಡ ರಹಸ್ಯವೆಂದರೆ ಪರಸ್ಪರ ವಿಶ್ವಾಸ, ಮುಕ್ತ ಸಂವಹನ ಮತ್ತು ಗೌರವ. ಸಣ್ಣ ಭಿನ್ನಾಭಿಪ್ರಾಯಗಳು ಸಹಜವಾದರೂ, ಅವುಗಳನ್ನು ಸಮಾಧಾನದಿಂದ ಬಗೆಹರಿಸಿಕೊಂಡರೆ ಸಂಬಂಧ ಮತ್ತಷ್ಟು ಗಟ್ಟಿಯಾಗುತ್ತದೆ. ಒಬ್ಬರ ಭಾವನೆಗಳಿಗೆ ಮತ್ತೊಬ್ಬರು ಸ್ಪಂದಿಸುವ ಗುಣವೇ ಸಂತೋಷದ ದಾಂಪತ್ಯ ಜೀವನದ ಪ್ರಮುಖ ಆಧಾರ ಎಂದು ಸಂಬಂಧ ತಜ್ಞರು ಅಭಿಪ್ರಾಯಪಡುತ್ತಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಯಾರೂ ಮತಾಂತರವಾಗಿಲ್ಲ’: ಲವ್ ಜಿಹಾದ್ ಆರೋಪ ತಳ್ಳಿಹಾಕಿದ ಆಮೀರ್ ಖಾನ್ – Kannada News | Aamir Khan rejects love jihad allegations, says his wives never converted

ಬಾಲಿವುಡ್ ಸ್ಟಾರ್ ನಟ, ನಿರ್ಮಾಪಕ ಆಮೀರ್ ಖಾನ್ (Aamir Khan) ಇತ್ತೀಚೆಗಷ್ಟೆ ಮೂರನೇ ಬಾರಿ ಮದುವೆ ಆಗಿದ್ದಾರೆ. ಬೆಂಗಳೂರಿನ ನಿವಾಸಿ ಗೌರಿ ಸ್ಪ್ರಾಟ್ ಅವರು ಆಮಿರ ಖಾನ್ ಅವರ ಮೂರನೇ ಪತ್ನಿ. ಈ ಹಿಂದೆ ಅವರು ರೀನಾ ದತ್ತಾ ಮತ್ತು ಕಿರಣ್ ರಾವ್ ಅವರುಗಳನ್ನು ವಿವಾಹವಾಗಿದ್ದರು. ಆಮಿರ್ ಅವರ ಮೂರನೇ ಮದುವೆ ಬಳಿಕ ಆಮಿರ್ ವಿರುದ್ಧ ಲವ್ ಜಿಹಾದ್ ಆರೋಪಗಳನ್ನು ಕೆಲವರು ಹೊರಿಸಿದ್ದರು. ಅನ್ಯ ಧರ್ಮೀಯರನ್ನು ಮದುವೆ ಆಗಿರುವುದಕ್ಕೆ ಆಮಿರ್ ವಿರುದ್ಧ ಫತ್ವಾ ಸಹ ಹೊರಡಿಸಲಾಗಿತ್ತು. ಇದೀಗ ನಟ ಆಮಿರ್ ಖಾನ್ ತಮ್ಮ ಮೇಲೆ ಹೊರಿಸಲಾದ ಲವ್ ಜಿಹಾದ್ ಆರೋಪಗಳನ್ನು ತಳ್ಳಿಹಾಕಿದ್ದು, ತಮ್ಮ ಕುಟುಂಬದಲ್ಲಿ ನಡೆದ ಅಂತರ್ಧರ್ಮೀಯ ವಿವಾಹಗಳಲ್ಲಿ ಯಾವುದೇ ರೀತಿಯ ಧಾರ್ಮಿಕ ಮತಾಂತರ ನಡೆದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಆಮಿರ್ ಖಾನ್, ‘ತಮ್ಮ ಕುಟುಂಬದ ಸದಸ್ಯರು ಸಿವಿಲ್ ಮ್ಯಾರೇಜ್ ಆಕ್ಟ್ ಮೂಲಕ ಹಿಂದೂಗಳು ಮತ್ತು ಕ್ರಿಶ್ಚಿಯನ್ನರನ್ನು ವಿವಾಹವಾಗಿದ್ದಾರೆ. ಈ ಮದುವೆಗಳಲ್ಲಿ ಧಾರ್ಮಿಕ ಮತಾಂತರ ಎಂದಿಗೂ ನಡೆದಿಲ್ಲ ಎಂದು ಆಮಿರ್ ಖಾನ್ ಹೇಳಿದ್ದಾರೆ. ‘ನಮ್ಮದು ಬಹಳ ಎಲ್ಲರನ್ನೂ ಒಳಗೊಳ್ಳುವಂತಹ ಕುಟುಂಬ. ನನ್ನ ಇಬ್ಬರು ಸಹೋದರಿಯರು ಹಿಂದೂಗಳನ್ನು ಮದುವೆಯಾಗಿದ್ದಾರೆ. ನನ್ನ ಮಗಳು ಕೂಡ ಒಬ್ಬ ಹಿಂದೂ ವ್ಯಕ್ತಿಯನ್ನು ಮದುವೆಯಾಗಿದ್ದಾಳೆ. ನನ್ನ ಸೋದರಸಂಬಂಧಿ ಮನ್ಸೂರ್ ಒಬ್ಬ ಕ್ರಿಶ್ಚಿಯನ್ ಮಹಿಳೆಯನ್ನು ಮದುವೆಯಾಗಿದ್ದಾರೆ’ ಎಂದಿದ್ದಾರೆ.

ಮುಂದೆ ಮಾತನಾಡಿ, ‘ಗೌರಿ, ಕಿರಣ್ ಅಥವಾ ರೀನಾ ಯಾರೂ ತಮ್ಮ ಧರ್ಮವನ್ನು ಬದಲಾಯಿಸಲಿಲ್ಲ, ಏಕೆಂದರೆ ನಾವು ಸಿವಿಲ್ ಮ್ಯಾರೇಜ್ (ನೊಂದಣಿ ಮದುವೆ) ಮಾಡಿಕೊಂಡಿದ್ದೆವು. ಈಗ ಮದುವೆ ಆಗಿರುವ ಗೌರಿ ಹಿಂದೂ ಕೂಡ ಅಲ್ಲ, ಅವರು ಕ್ರಿಶ್ಚಿಯನ್, ಅವರು ಸಹ ಧರ್ಮದ ಕಟ್ಟಳೆಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವವರಲ್ಲ. ಕಾಲ ಕಳೆಯುತ್ತಿದ್ದಂತೆ ಜೀವನವು ಹೆಚ್ಚು ಹಾಸ್ಯಾಸ್ಪದವಾಗುತ್ತಿದೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:ಈ ಪ್ಯಾನ್ ಇಂಡಿಯಾ ಸ್ಟಾರ್ ನಟನಿಗೆ ಶಿವಣ್ಣನ ಆ ಸಿನಿಮಾ ಬಲು ಇಷ್ಟ

ಆಮೀರ್ ಮತ್ತು ಗೌರಿ ಸುಮಾರು 25 ವರ್ಷಗಳ ಹಿಂದೆ ಪರಿಚಯ ಆಗಿದ್ದರು. ಆದರೆ ಆಗ ಪರಸ್ಪರರು ತಮ್ಮ ತಮ್ಮ ಕೆಲಸ, ಕುಟುಂಬಗಳಲ್ಲಿ ತೊಡಗಿಕೊಂಡಿದ್ದರು. ಗೌರಿಗೆ ಮದುವೆ ಆಗಿ ವಿಚ್ಛೇದನ ಆಗಿತ್ತು, ಆಮಿರ್ ಸಹ ಎರಡು ಮದುವೆ ಆಗಿ ವಿಚ್ಛೇದನ ಮಾಡಿಕೊಂಡಿದ್ದರು. ಸುಮಾರು ಎರಡು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಆಮಿರ್ ಅವರ ಸೋದರ ಸಂಬಂಧಿ ನುಜಾತ್ ಖಾನ್ ಅವರ ಮೂಲಕ ಗೌರಿ ಮತ್ತೆ ಸಂಪರ್ಕಕ್ಕೆ ಬಂದರು. ಕಳೆದ ವರ್ಷ ಮಾರ್ಚ್‌ನಲ್ಲಿ ತಮ್ಮ 60ನೇ ಹುಟ್ಟುಹಬ್ಬದ ಸಂಭ್ರಮಾಚರಣೆಯ ಸಂದರ್ಭದಲ್ಲಿ ನಟ ಗೌರಿಯನ್ನು ಸಾರ್ವಜನಿಕರಿಗೆ ಪರಿಚಯಿಸಿದ್ದರು. ಅವರ ಸ್ನೇಹವು ನಂತರ ಪ್ರೀತಿಗೆ ತಿರುಗಿತು. ಇಬ್ಬರೂ ಎರಡು ವರ್ಷಗಳಿಗೂ ಹೆಚ್ಚು ಕಾಲ ಡೇಟಿಂಗ್ ನಡೆಸಿದ ನಂತರ ಜುಲೈ 5 ರಂದು ವಿವಾಹವಾದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IND vs ENG ನಡುವಣ 2ನೇ ಪಂದ್ಯ ಯಾವಾಗ? ಇಲ್ಲಿದೆ ಸಂಪೂರ್ಣ ಮಾಹಿತಿ – Kannada News | India vs England 2nd ODI Date and Venue

ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿರುವ ಟೀಮ್ ಇಂಡಿಯಾ ಇದೀಗ ದ್ವಿತೀಯ ಪಂದ್ಯಕ್ಕಾಗಿ ಸಜ್ಜಾಗುತ್ತಿದೆ. ಕಾರ್ಡಿಫ್​ನಲ್ಲಿ ನಡೆಯಲಿರುವ ಈ ಪಂದ್ಯವು ಇಂಗ್ಲೆಂಡ್ ಪಾಲಿಗೆ ನಿರ್ಣಾಯಕ. ಏಕೆಂದರೆ ಈ ಮ್ಯಾಚ್​ನಲ್ಲೂ ಟೀಮ್ ಇಂಡಿಯಾ ಗೆದ್ದರೆ 2-0 ಅಂತರದಿಂದ ಸರಣಿ ವಶಪಡಿಸಿಕೊಳ್ಳಲಿದೆ. ಹೀಗಾಗಿ ನಾಳಿನ (ಜು.16) ಪಂದ್ಯದಲ್ಲಿ ಆಂಗ್ಲರ ಪಡೆಯಿಂದ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು. ಇನ್ನು ಈ ಪಂದ್ಯದ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ.

ಭಾರತ ಮತ್ತು ಇಂಗ್ಲೆಂಡ್ ನಡುವಣ 2ನೇ ಪಂದ್ಯ ನಡೆಯುವುದು ಎಲ್ಲಿ?

ಮೂರು ಪಂದ್ಯದ ಏಕದಿನ ಸರಣಿಯ 2ನೇ ಪಂದ್ಯವು ಕಾರ್ಡಿಫ್​ನ ಸೋಫಿಯಾ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿದೆ.

ಪಂದ್ಯ ಶುರುವಾಗುವುದು ಎಷ್ಟು ಗಂಟೆಗೆ?

ಭಾರತೀಯ ಕಾಲಮಾನ (IST) ಸಂಜೆ 5:30 ಕ್ಕೆ (ಕಾರ್ಡಿಫ್ ಸ್ಥಳೀಯ ಸಮಯ ಮಧ್ಯಾಹ್ನ 1:00 ಗಂಟೆ) ಮ್ಯಾಚ್ ಆರಂಭವಾಗಲಿದೆ.

ಯಾವ ಚಾನೆಲ್​ನಲ್ಲಿ ಪಂದ್ಯವನ್ನು ವೀಕ್ಷಿಸಬಹುದು?

ಈ ಪಂದ್ಯವನ್ನು ಟಿವಿಯಲ್ಲಿ ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ (Sony Sports Ten 1, 3, 4 ಮತ್ತು 5) ಚಾನೆಲ್​ಗಳಲ್ಲಿ ವೀಕ್ಷಿಸಬಹುದು. ಹಾಗೆಯೇ ಜಿಯೋಸ್ಟಾರ್ ಆ್ಯಪ್ ಮತ್ತು ವೆಬ್​ಸೈಟ್​ನಲ್ಲೂ ಈ ಪಂದ್ಯದ ಲೈವ್ ಸ್ಟ್ರೀಮಿಂಗ್ ಇರಲಿದೆ.

ಪಿಚ್ ರಿಪೋರ್ಟ್​:

ಕಾರ್ಡಿಫ್‌ನ ಸೋಫಿಯಾ ಗಾರ್ಡನ್ಸ್ ಮೈದಾನದ ಪಿಚ್ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡಕ್ಕೂ ಸಮಾನ ನೆರವು ನೀಡುವ ಒಂದು ಸಮತೋಲಿತ ಮೈದಾನವಾಗಿದೆ.

ಆರಂಭದಲ್ಲಿ ಬ್ಯಾಟರ್‌ಗಳಿಗೆ ಈ ಪಿಚ್ ಉತ್ತಮವಾಗಿರಲಿದ್ದು, ಒಮ್ಮೆ ಕ್ರೀಸ್‌ಗೆ ಸೆಟ್ ಆದರೆ ದೊಡ್ಡ ರನ್ ಗಳಿಸಲು ಇಲ್ಲಿ ಉತ್ತಮ ಅವಕಾಶವಿದೆ.

ಇನ್ನು ಪಂದ್ಯದ ಆರಂಭದಲ್ಲಿ ಗಾಳಿಯ ವೇಗದಿಂದಾಗಿ ವೇಗದ ಬೌಲರ್‌ಗಳಿಗೆ ಪಿಚ್ ನೆರವಾಗಲಿದೆ. ಆದರೆ ಪಂದ್ಯ ಮುಂದುವರಿದಂತೆ ಪಿಚ್ ನಿಧಾನಗತಿಯಾಗಲಿದ್ದು, ಸ್ಪಿನ್ನರ್‌ಗಳು ಮತ್ತು ಸ್ಲೋ ಬೌಲರ್‌ಗಳಿಗೆ ಹೆಚ್ಚಿನ ವಿಕೆಟ್ ಪಡೆಯಲು ಸಹಾಯ ಮಾಡುತ್ತದೆ.

ಭಾರತ ಏಕದಿನ ತಂಡ: ಶುಭ್​ಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ (ಉಪನಾಯಕ), ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಪ್ರಸಿದ್ಧ್ ಕೃಷ್ಣ, ಪ್ರಿನ್ಸ್ ಯಾದವ್, ಅರ್ಷದೀಪ್ ಸಿಂಗ್, ಗುರ್ನೂರ್ ಬ್ರಾರ್, ಶಿವಂ ದುಬೆ.

ಇದನ್ನೂ ಓದಿ: ಸೋಲರಿಯದ ಸರದಾರರು: 37 ಪಂದ್ಯಗಳ ‘ಸ್ಪೇನ್’ ಸಾಮ್ರಾಜ್ಯ!

ಇಂಗ್ಲೆಂಡ್ ಏಕದಿನ ತಂಡ: ಜೇಕಬ್ ಬೆಥೆಲ್, ಬೆನ್ ಡಕೆಟ್ , ಜೋ ರೂಟ್ , ಹ್ಯಾರಿ ಬ್ರೂಕ್ (ನಾಯಕ) , ಜೋಸ್ ಬಟ್ಲರ್ (ವಿಕೆಟ್ ಕೀಪರ್), ಸ್ಯಾಮ್ ಕರನ್ , ವಿಲ್ ಜ್ಯಾಕ್ಸ್ , ಲಿಯಾಮ್ ಡಾಸನ್ , ಜೋಫ್ರಾ ಆರ್ಚರ್ , ಆದಿಲ್ ರಶೀದ್ , ಜೋಶ್ ಟಂಗ್, ಸಾಕಿಬ್ ಮಹಮೂದ್ , ಟಾಮ್ ಬ್ಯಾಂಟನ್ , ಗಸ್ ಅಟ್ಕಿನ್ಸನ್ , ಜೇಮ್ಸ್ ಕೋಲ್ಸ್ , ರೆಹಾನ್ ಅಹ್ಮದ್.

Source link

Gold Rate: ಚಿನ್ನದ ಬೆಲೆ ಗ್ರಾಮ್​ಗೆ 70 ರೂ ಏರಿಕೆ; ಇಲ್ಲಿದೆ ದರಪಟ್ಟಿ – Kannada News | Gold Price Today on 15th July 2026, Gold And Silver Rates In Bengaluru, Delhi, Mumbai | Latest News in Kannada

ನವದೆಹಲಿ, ಜುಲೈ 15: ಕಳೆದ ಎರಡು ದಿನದಲ್ಲಿ ಗ್ರಾಮ್​ಗೆ 140 ರೂ ಕಡಿಮೆಗೊಂಡಿದ್ದ ಬಂಗಾರದ ದರ (Gold Price) ಇವತ್ತು ಬುಧವಾರ 70 ರೂ ಹೆಚ್ಚಿದೆ. ಇದರ ನಡುವೆಯೂ ಕಳೆದ ಎರಡು ವಾರದಲ್ಲಿ ಚಿನ್ನದ ಬೆಲೆ 1,700 ರೂಗಳಷ್ಟು ಕಡಿಮೆ ಆಗಿದೆ. ಮೇ ಎರಡನೇ ವಾರದಲ್ಲಿ ಆಭರಣ ಚಿನ್ನದ ಬೆಲೆ 14,850 ರೂವರೆಗೂ ಏರಿತ್ತು. ಬೆಳ್ಳಿ ಬೆಲೆ ಇವತ್ತೂ ಬದಲಾವಣೆ ಆಗಿಲ್ಲ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,30,900 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,42,800 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 23,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,30,900 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 23,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 24,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜುಲೈ 15ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,357 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,160 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 10,767 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 235 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,357 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,160 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 235 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 13,160 ರೂ
  • ಚೆನ್ನೈ: 13,180 ರೂ
  • ಮುಂಬೈ: 13,160 ರೂ
  • ದೆಹಲಿ: 13,175 ರೂ
  • ಕೋಲ್ಕತಾ: 13,160 ರೂ
  • ಕೇರಳ: 13,160 ರೂ
  • ಅಹ್ಮದಾಬಾದ್: 13,165 ರೂ
  • ಜೈಪುರ್: 13,175 ರೂ
  • ಲಕ್ನೋ: 13,175 ರೂ
  • ಭುವನೇಶ್ವರ್: 13,160 ರೂ

ಇದನ್ನೂ ಓದಿ: ಸಾಲ ಮರುಪಾವತಿ ಮಾಡಿದ ಕೂಡ್ಲೇ ಬ್ಯಾಂಕ್‌ನಿಂದ ಈ ದಾಖಲೆಗಳನ್ನು ತಪ್ಪದೇ ಪಡೆಯಿರಿ

ವಿದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 543 ರಿಂಗಿಟ್ (12,818 ರುಪಾಯಿ)
  • ದುಬೈ: 491.25 ಡಿರಾಮ್ (12,859 ರುಪಾಯಿ)
  • ಅಮೆರಿಕ: 135 ಡಾಲರ್ (12,976 ರುಪಾಯಿ)
  • ಸಿಂಗಾಪುರ: 177.60 ಸಿಂಗಾಪುರ್ ಡಾಲರ್ (13,230 ರುಪಾಯಿ)
  • ಕತಾರ್: 491 ಕತಾರಿ ರಿಯಾಲ್ (12,797 ರೂ)
  • ಸೌದಿ ಅರೇಬಿಯಾ: 507 ಸೌದಿ ರಿಯಾಲ್ (12,975 ರುಪಾಯಿ)
  • ಓಮನ್: 51.95 ಒಮಾನಿ ರಿಯಾಲ್ (12,970 ರುಪಾಯಿ)
  • ಕುವೇತ್: 40.90 ಕುವೇತಿ ದಿನಾರ್ (12,776 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 235 ರೂ
  • ಚೆನ್ನೈ: 240 ರೂ
  • ಮುಂಬೈ: 235 ರೂ
  • ದೆಹಲಿ: 235 ರೂ
  • ಕೋಲ್ಕತಾ: 235 ರೂ
  • ಕೇರಳ: 240 ರೂ
  • ಅಹ್ಮದಾಬಾದ್: 235 ರೂ
  • ಜೈಪುರ್: 235 ರೂ
  • ಲಕ್ನೋ: 235 ರೂ
  • ಭುವನೇಶ್ವರ್: 240 ರೂ
  • ಪುಣೆ: 235

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 11:22 am, Wed, 15 July 26

Source link

Exit mobile version