ಜೊಹೊ ಮುಖ್ಯ ವಿಜ್ಞಾನಿ ಶ್ರೀಧರ್ ವೆಂಬು ಅವರ ಕರುವಿಯಿಂದ ಚೀನೀ ಪವರ್ ಟೂಲ್ಸ್​ಗೆ ಪೈಪೋಟಿ – Kannada News

ಚೆನ್ನೈ, ಜೂನ್ 3: ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಕ್ರಾಂತಿ ಮಾಡಿರುವ ಭಾರತದ ಪ್ರಮುಖ ಸಾಸ್ (SaaS) ಯೂನಿಕಾರ್ನ್ ಸಂಸ್ಥೆ ‘ಜೊಹೊ’ನ (Zoho) ಸಹ-ಸಂಸ್ಥಾಪಕ ಮತ್ತು ಮುಖ್ಯ ವಿಜ್ಞಾನಿ ಹಾಗು ಮಾಜಿ ಸಿಇಒ ಶ್ರೀಧರ್ ವೆಂಬು, ಈಗ ಉತ್ಪಾದನಾ (Manufacturing) ಕ್ಷೇತ್ರದಲ್ಲೂ ಭಾರತದ ಹೆಜ್ಜೆಯನ್ನು ಗಟ್ಟಿಗೊಳಿಸಲು ಮುಂದಾಗಿದ್ದಾರೆ. ಇವರ ಕರುವಿ ಎನ್ನುವ ಪವರ್ ಟೂಲ್ಸ್ ಉತ್ಪಾದನಾ ಸಂಸ್ಥೆ ಸದ್ದು ಮಾಡತೊಡಗಿದೆ. ಚೀನೀ ಕಂಪನಿಗಳ ಪ್ರಾಬಲ್ಯ ಇರುವ ಪವರ್ ಟೂಲ್ಸ್ ಕ್ಷೇತ್ರದಲ್ಲಿ ಕರುವಿ (Karuvi) ಗಟ್ಟಿ ಹೆಜ್ಜೆ ಊರಲು ಅಣಿಯಾಗಿದೆ. ಈ ಬಗ್ಗೆ ಶ್ರೀಧರ್ ವೆಂಬು ಅವರು ಒಂದಷ್ಟು ಮಾಹಿತಿ ಹಂಚಿಕೊಂಡಿದ್ದಾರೆ.

ಮೆಕಾಟ್ರಾನಿಕ್ಸ್ ಸ್ಟಾರ್ಟಪ್ ಆದ ಕರುವಿಯ ಮೊದಲ ಉತ್ಪನ್ನ ತಯಾರಾಗಿ ಪ್ರಾಯೋಗಿಕವಾಗಿ ಗ್ರಾಹಕರಿಗೆ ತಲುಪಿಸಲಾಗಿರುವ ವಿಚಾರವನ್ನು ವೆಂಬು ಹಂಚಿಕೊಂಡಿದ್ದಾರೆ. ಚೀನಾ ಉತ್ಪನ್ನಗಳನ್ನು ಎದುರಿಸಬೇಕಾದರೆ ಕೇವಲ ಬೆಲೆ ಮಾತ್ರವಲ್ಲ, ಜಾಗತಿಕ ಗುಣಮಟ್ಟವನ್ನು ಸರಿಗಟ್ಟುವುದು (Matching Global Quality) ಅತ್ಯಂತ ಪ್ರಮುಖ ಸವಾಲಾಗಿತ್ತು ಎಂದು ಅವರು ವಿವರಿಸಿದ್ದಾರೆ.

Karuvi ಸ್ಟಾರ್ಟ್-ಅಪ್‌ನ ಉಗಮ ಮತ್ತು ತಂತ್ರಜ್ಞಾನ

ತಮಿಳು ಭಾಷೆಯಲ್ಲಿ ‘ಕರುವಿ’ ಎಂದರೆ ಉಪಕರಣ ಅಥವಾ ಸಾಧನ (Instrument/Tool) ಎಂದರ್ಥ. ಸುಮಾರು ಎರಡು ವರ್ಷಗಳ ಹಿಂದೆ ತಮಿಳುನಾಡಿನ ಗ್ರಾಮೀಣ ಪ್ರದೇಶವಾದ ತೆನ್ಕಾಸಿಯಲ್ಲಿ ಒಂದು ಸಣ್ಣ ಇಂಜಿನಿಯರಿಂಗ್ ತಂಡದೊಂದಿಗೆ ಈ ಸಾಹಸವನ್ನು ಪ್ರಾರಂಭಿಸಲಾಯಿತು. ಶ್ರೀಧರ್ ವೆಂಬು ಮತ್ತು ಟೋನಿ ಥಾಮಾಸ್ ಇದರ ಸಹ-ಸಂಸ್ಥಾಪಕರು.

ಕರುವಿ ಉತ್ಪನ್ನಗಳ ಶ್ರೇಣಿ

‘ಕರುವಿ’ ಬ್ರ್ಯಾಂಡ್ ಅಡಿಯಲ್ಲಿ ಕೈಗಾರಿಕಾ ಮತ್ತು ಗ್ರಾಹಕ ಬಳಕೆಯ ರೋಟರಿ ಡ್ರಿಲ್ಸ್, ಹ್ಯಾಮರ್ ಡ್ರಿಲ್ಸ್, ಆಂಗಲ್ ಗ್ರೈಂಡರ್ಸ್, ಡೆಮೋಲಿಷನ್ ಹ್ಯಾಮರ್ಸ್ ಮತ್ತು ಗರಗಸಗಳಂತಹ (Saws) ಪ್ರಮುಖ ಪವರ್ ಟೂಲ್‌ಗಳನ್ನು ವಾಣಿಜ್ಯ ಉತ್ಪಾದನೆಗೆ ಸಿದ್ಧಪಡಿಸಲಾಗಿದೆ.

ಈ ಉಪಕರಣಗಳನ್ನು ಕೇವಲ ಸಾಮಾನ್ಯ ಯಂತ್ರಗಳಾಗಿ ಮಾಡದೆ, ಮೋಟಾರ್ ತಂತ್ರಜ್ಞಾನ (Motor Technology), ಮೆಟೀರಿಯಲ್ ಸೈನ್ಸ್ (ವಸ್ತು ವಿಜ್ಞಾನ) ಮತ್ತು ಎಲೆಕ್ಟ್ರಾನಿಕ್ಸ್ ವಲಯದ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿ ಅತ್ಯಂತ ನಿಖರವಾಗಿ (Precise) ವಿನ್ಯಾಸಗೊಳಿಸಲಾಗಿದೆ.

ಇದನ್ನೂ ಓದಿ: ಚೀನಾ ಔಟ್, ಭಾರತ ಇನ್: ಜಾಗತಿಕ ಮಾರುಕಟ್ಟೆಯಲ್ಲಿ ಜಪಾನ್ ಹೂಡಿಕೆದಾರರ ಭರ್ಜರಿ ದಿಕ್ಕು ಬದಲಾವಣೆ

ಚೀನಾ ಆಮದುಗಳ ವಿರುದ್ಧ ವೆಂಬು ಕಾರ್ಯತಂತ್ರಗಳು

ಭಾರತೀಯ ಪವರ್ ಟೂಲ್ಸ್ ಮಾರುಕಟ್ಟೆಯಲ್ಲಿ ಸದ್ಯ ಚೀನಾ ಉತ್ಪನ್ನಗಳದ್ದೇ ಮೇಲುಗೈಯಾಗಿದೆ. ಇದನ್ನು ಮೆಟ್ಟಿನಿಲ್ಲಲು ಶ್ರೀಧರ್ ವೆಂಬು ಮೂರು ಪ್ರಮುಖ ಸೂತ್ರಗಳನ್ನು ಮುಂದಿಟ್ಟಿದ್ದಾರೆ:

  • ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ: ಭಾರತೀಯ ಗ್ರಾಹಕರು ಕೇವಲ ಕಡಿಮೆ ಬೆಲೆಯ ವಸ್ತುಗಳನ್ನು ಹುಡುಕುವುದಿಲ್ಲ, ಬದಲಿಗೆ ಬಾಳಿಕೆ ಬರುವ ಗುಣಮಟ್ಟವನ್ನು ಬಯಸುತ್ತಾರೆ. ಚೀನಾದ ಅಗ್ಗದ ಆಮದುಗಳಿಗೆ ತಕ್ಕ ಟಕ್ಕರ್ ನೀಡಬೇಕಾದರೆ ಜಾಗತಿಕ ಗುಣಮಟ್ಟದ ಮಾನದಂಡಗಳಿಗೆ ಸರಿಸಮಾನವಾದ ಅತ್ಯುತ್ತಮ ಫಿನಿಷಿಂಗ್, ವಿನ್ಯಾಸ ಮತ್ತು ದಕ್ಷತೆಯನ್ನು ಕರುವಿ ಉತ್ಪನ್ನಗಳಲ್ಲಿ ತರಲಾಗಿದೆ.
  • ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿ: ಜೊಹೊ ಸಂಸ್ಥೆಯಂತೆಯೇ ‘ಕರುವಿ’ ಉತ್ಪಾದನಾ ಘಟಕವನ್ನೂ ಗ್ರಾಮೀಣ ಭಾಗದಲ್ಲೇ (ತೆನ್ಕಾಸಿ) ಸ್ಥಾಪಿಸಲಾಗುತ್ತಿದೆ. ಚೀನಾ ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದರ ಜೊತೆಗೆ, ಭಾರತದ ಗ್ರಾಮೀಣ ಯುವಕರಿಗೆ ಅತ್ಯಾಧುನಿಕ ಹಾರ್ಡ್‌ವೇರ್ ಮತ್ತು ಮೆಕ್ಯಾನಿಕಲ್ ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಉದ್ಯೋಗ ನೀಡುವುದು ಇದರ ಮುಖ್ಯ ಉದ್ದೇಶವಾಗಿದೆ.
  • ಕೈಗೆಟುಕುವ ಬೆಲೆ: ಜಾಗತಿಕ ಗುಣಮಟ್ಟವನ್ನು ಹೊಂದಿದ್ದರೂ, ಈ ಉತ್ಪನ್ನಗಳನ್ನು ಮಧ್ಯಮ ವರ್ಗದ ಕಾರ್ಮಿಕರು ಮತ್ತು ಕೈಗಾರಿಕೆಗಳಿಗೆ ಸುಲಭವಾಗಿ ಸಿಗುವಂತಹ ಕೈಗೆಟುಕುವ ಬೆಲೆಯಲ್ಲಿ ಮಾರುಕಟ್ಟೆಗೆ ತರಲು ಯೋಜನೆ ರೂಪಿಸಲಾಗಿದೆ.

ಇದನ್ನೂ ಓದಿ: ಭಾರತದ ಸೇವಾ ಕ್ಷೇತ್ರದಲ್ಲಿ ಹೊಸ ಹುರುಪು; ಮೇ ತಿಂಗಳ ಸರ್ವಿಸ್ ಸೆಕ್ಟರ್ ಪಿಎಂಐ 6 ತಿಂಗಳ ಗರಿಷ್ಠ ಮಟ್ಟಕ್ಕೆ

ವೆಂಬು ಈ ಕ್ಷೇತ್ರಕ್ಕೆ ಬಂದಿದ್ದು ಹೇಗೆ?

ಟ್ವಿಟರ್ (X) ನಲ್ಲಿ ಈ ಕುರಿತು ಬರೆದುಕೊಂಡಿದ್ದ ಶ್ರೀಧರ್ ವೆಂಬು, “ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಮಿಡಲ್ ಈಸ್ಟ್‌ನ ಪ್ರಮುಖ ಎಲೆಕ್ಟ್ರಾನಿಕ್ಸ್ ವಿತರಕರಾದ ಅಬ್ದುಲ್ ಗಫೂರ್ ಅವರು ನನ್ನನ್ನು ಭೇಟಿಯಾಗಿ, ಹ್ಯಾಂಡ್ ಟೂಲ್‌ಗಳ ಬಾಕ್ಸ್ ತೋರಿಸಿ ಇವುಗಳನ್ನು ಜೊಹೊ ತಯಾರಿಸಬೇಕು, ನಾನು ಜಾಗತಿಕವಾಗಿ ವಿತರಣೆ ಮಾಡುತ್ತೇನೆ ಎಂದಿದ್ದರು. ಆಗ ನಮಗೆ ಇದರ ಬಗ್ಗೆ ಏನೂ ತಿಳಿದಿರಲಿಲ್ಲ. ಆದರೆ ಇದು ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿಸುತ್ತದೆ ಎಂದು ಅವರು ಹೇಳಿದಾಗ ನಾನು ಈ ಸವಾಲನ್ನು ಸ್ವೀಕರಿಸಿದೆ,” ಎಂದು ಕರುವಿ ಹುಟ್ಟಿನ ಹಿಂದಿನ ಸ್ವಾರಸ್ಯಕರ ಕಥೆಯನ್ನು ಹಂಚಿಕೊಂಡಿದ್ದಾರೆ.

ಭಾರತವು ಸಾಫ್ಟ್‌ವೇರ್‌ನಲ್ಲಿ ಸಾಧಿಸಿರುವ ಯಶಸ್ಸನ್ನು ಈಗ ಹಾರ್ಡ್‌ವೇರ್ ಮತ್ತು ಮೆಕ್ಯಾನಿಕಲ್ ಉತ್ಪಾದನಾ ವಲಯದಲ್ಲೂ ಸಾಧಿಸಬಹುದು ಎಂಬುದಕ್ಕೆ ಶ್ರೀಧರ್ ವೆಂಬು ಅವರ ಈ ‘ಕರುವಿ’ ಪ್ರಮುಖ ಉದಾಹರಣೆಯಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಕುವೈತ್ ವಿಮಾನ ನಿಲ್ದಾಣದ ಮೇಲೆ ಇರಾನ್ ಡ್ರೋನ್ ದಾಳಿ; ಭಾರತೀಯ ಪ್ರಜೆಯ ದುರಂತ ಸಾವು – Kannada News

ಕುವೈತ್, ಜೂನ್ 3: ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಿಚ್ಚು ಮತ್ತಷ್ಟು ತಾರಕಕ್ಕೇರಿದೆ. ಕುವೈತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಇರಾನ್ (Iran Attack) ನಡೆಸಿರುವ ಭೀಕರ ಡ್ರೋನ್ ದಾಳಿಯಲ್ಲಿ ಅಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯ ಪ್ರಜೆಯೊಬ್ಬರು ಮೃತಪಟ್ಟಿದ್ದಾರೆ. ಈ ಘಟನೆಯು ಗಲ್ಫ್ ರಾಷ್ಟ್ರಗಳಲ್ಲಿ ನೆಲೆಸಿರುವ ಲಕ್ಷಾಂತರ ಭಾರತೀಯರಲ್ಲಿ ತೀವ್ರ ಆತಂಕವನ್ನು ಸೃಷ್ಟಿಸಿದೆ. ಕುವೈತ್ ವಿಮಾನ ನಿಲ್ದಾಣದ ಆವರಣದ ಮೇಲೆ ಏಕಕಾಲದಲ್ಲಿ ಹಲವು ಡ್ರೋನ್‌ಗಳು ಅಪ್ಪಳಿಸಿದ್ದು, ಭಾರಿ ಪ್ರಮಾಣದ ಆಸ್ತಿಪಾಸ್ತಿ ನಷ್ಟ ಸಂಭವಿಸಿದೆ ಎಂದು ವರದಿಯಾಗಿದೆ.

ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, ಇರಾನ್ ಸೇನೆಯು ಕುವೈತ್ ವಿಮಾನ ನಿಲ್ದಾಣದ ಪ್ರಮುಖ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಿದೆ. ಡ್ರೋನ್‌ಗಳು ಅಪ್ಪಳಿಸುತ್ತಿದ್ದಂತೆ ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ತಕ್ಷಣವೇ ಸ್ಥಗಿತಗೊಳಿಸಲಾಯಿತು. ಎಲ್ಲಾ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಯಿತು.

ಇದನ್ನೂ ಓದಿ: ಕುವೈತ್, ಬಹ್ರೇನ್‌ನಲ್ಲಿರುವ ಅಮೆರಿಕ ನೆಲೆಗಳ ಮೇಲೆ ಇರಾನ್ ದಾಳಿ

ಈ ದಾಳಿಯ ಸಮಯದಲ್ಲಿ ವಿಮಾನ ನಿಲ್ದಾಣದ ತಾಂತ್ರಿಕ ಅಥವಾ ನಿರ್ವಹಣಾ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಭಾರತೀಯ ಪ್ರಜೆಯೊಬ್ಬರು ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರ ವಿವರ ಇನ್ನೂ ಬಹಿರಂಗವಾಗಿಲ್ಲ.

ಇತ್ತೀಚಿನ ದಿನಗಳಲ್ಲಿ ಇರಾನ್ ಮತ್ತು ಅಮೆರಿಕ ಬೆಂಬಲಿತ ಗಲ್ಫ್ ರಾಷ್ಟ್ರಗಳ ನಡುವೆ ರಾಜತಾಂತ್ರಿಕ ಹಾಗೂ ಸೇನಾ ಸಂಘರ್ಷ ತೀವ್ರಗೊಂಡಿದೆ. ಅಮೆರಿಕದ ಮಿಲಿಟರಿ ಬೇಸ್‌ಗಳು ಅಥವಾ ಪಾಶ್ಚಿಮಾತ್ಯ ದೇಶಗಳಿಗೆ ಸಹಕರಿಸುತ್ತಿರುವ ರಾಷ್ಟ್ರಗಳನ್ನು ಗುರಿಯಾಗಿಸಿಕೊಂಡು ಇರಾನ್ ಈ ದಾಳಿ ನಡೆಸಿದೆ ಎಂದು ರಕ್ಷಣಾ ವಲಯದ ತಜ್ಞರು ವಿಶ್ಲೇಷಿಸಿದ್ದಾರೆ. ಆದರೆ, ಕುವೈತ್‌ನಂತಹ ಶಾಂತಿಯುತ ರಾಷ್ಟ್ರದ ನಾಗರಿಕ ವಿಮಾನ ನಿಲ್ದಾಣದ ಮೇಲೆ ದಾಳಿ ನಡೆಸಿರುವುದು ಜಾಗತಿಕ ಮಟ್ಟದಲ್ಲಿ ತೀವ್ರ ಖಂಡನೆಗೆ ಒಳಗಾಗಿದೆ.

ಇದನ್ನೂ ಓದಿ: ಇರಾನ್ ಮೇಲೆ ಮತ್ತೆ ಅಮೆರಿಕದ ‘ಆತ್ಮರಕ್ಷಣಾ ದಾಳಿ’: ಸೈನಿಕರು ಸುರಕ್ಷಿತ

ಈ ಘಟನೆಯ ಬೆನ್ನಲ್ಲೇ ಕುವೈತ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಅಲರ್ಟ್ ಆಗಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಮೃತಪಟ್ಟ ಭಾರತೀಯ ಪ್ರಜೆಯ ಮೃತದೇಹವನ್ನು ಶೀಘ್ರವಾಗಿ ಭಾರತಕ್ಕೆ ತರಲು ರಾಯಭಾರ ಕಚೇರಿ ಅಧಿಕಾರಿಗಳು ಕುವೈತ್ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಕುವೈತ್‌ನಲ್ಲಿರುವ ಉಳಿದ ಭಾರತೀಯ ನಾಗರಿಕರು ಸುರಕ್ಷಿತ ಸ್ಥಳಗಳಲ್ಲೇ ಇರುವಂತೆ ಮತ್ತು ಸ್ಥಳೀಯ ಸರ್ಕಾರದ ಸುರಕ್ಷತಾ ನಿಯಮಗಳನ್ನು ಪಾಲಿಸುವಂತೆ ಸೂಚನೆ ನೀಡಲಾಗಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On – 5:54 pm, Wed, 3 June 26

Source link

ಡಿಕೆಶಿಗೆ ಪ್ರಧಾನಿ ಮೋದಿ ವಿಶೇಷ ಅಭಿನಂದನೆ!: ಕರ್ನಾಟಕದ ಜನರ ಕಲ್ಯಾಣಕ್ಕಾಗಿ ಕೈಜೋಡಿಸಲಿದೆ ಕೇಂದ್ರ ಸರ್ಕಾರ! – Kannada News

ದೆಹಲಿ, ಜೂ.3: ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿಪ್ರಮಾಣವಚನ ಸ್ವೀಕರಿಸಿದ ಡಿ.ಕೆ. ಶಿವಕುಮಾರ್ (DK Shivakumar) ಅವರಿಗೆ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರು ಆತ್ಮೀಯ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಟ್ವಿಟರ್ ಮೂಲಕ ನೂತನ ಮುಖ್ಯಮಂತ್ರಿಗಳಿಗೆ ಶುಭ ಹಾರೈಸಿರುವ ಪ್ರಧಾನಿ ಮೋದಿ ಅವರು, “ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಶ್ರೀ ಡಿ.ಕೆ. ಶಿವಕುಮಾರ್ ಅವರಿಗೆ ಅಭಿನಂದನೆಗಳು. ಅವರ ಅಧಿಕಾರಾವಧಿ ಯಶಸ್ವಿಯಾಗಲಿ ಎಂದು ಶುಭ ಹಾರೈಸುತ್ತೇನೆ” ಎಂದು ಬರೆದಿದ್ದಾರೆ.

ತಮ್ಮ ಶುಭಾಶಯ ಸಂದೇಶದಲ್ಲಿ ಒಕ್ಕೂಟ ವ್ಯವಸ್ಥೆಯ ಗೌರವವನ್ನು ಎತ್ತಿಹಿಡಿದಿರುವ ಪ್ರಧಾನಿ ನರೇಂದ್ರ ಮೋದಿ, “ಕರ್ನಾಟಕದ ಸಾರ್ವಜನಿಕರ ಏಳಿಗೆ ಮತ್ತು ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರವು ಮುಂಬರುವ ದಿನಗಳಲ್ಲಿ ಕರ್ನಾಟಕ ಸರ್ಕಾರದೊಂದಿಗೆ ಅತ್ಯಂತ ನಿಕಟವಾಗಿ ಮತ್ತು ಜಂಟಿಯಾಗಿ ಕಾರ್ಯನಿರ್ವಹಿಸಲಿದೆ” ಎಂದು ಭರವಸೆ ನೀಡಿದ್ದಾರೆ. ಪ್ರಧಾನಿಯವರ ಈ ಸಕಾರಾತ್ಮಕ ಸಂದೇಶವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಆರೋಗ್ಯಕರ ರಾಜಕೀಯ ಬಾಂಧವ್ಯಕ್ಕೆ ದಿಕ್ಸೂಚಿಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ರಾಜಕೀಯ ವೈರತ್ವ ಬದಿಗಿಟ್ಟು ಸಿಎಂ ಡಿಕೆಶಿಗೆ  ವಿಶ್ ಮಾಡಿದ ಹೆಚ್.ಡಿ. ದೇವೇಗೌಡ

ಡಿ.ಕೆ. ಶಿವಕುಮಾರ್ ಅವರಿಗೆ ದೇಶದ ಮಾಜಿ ಪ್ರಧಾನಮಂತ್ರಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ. ದೇವೇಗೌಡ ಅವರು ತಮ್ಮ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಟ್ವಿಟರ್ (X) ಮೂಲಕ ನೂತನ ಮುಖ್ಯಮಂತ್ರಿಗಳಿಗೆ ರಾಜಕೀಯ ಸೌಹಾರ್ದತೆಯ ಸಂದೇಶ ಕಳುಹಿಸಿರುವ ದೊಡ್ಡಗೌಡರು, “ರಾಜ್ಯದ ನೂತನ ಮುಖ್ಯಮಂತ್ರಿಗಳಾಗಿ ಪ್ರಮಾಣ ಸ್ವೀಕರಿಸಿರುವ ಶ್ರೀ ಡಿ.ಕೆ. ಶಿವಕುಮಾರ್ ಅವರಿಗೆ ಹೃತ್ಪೂರ್ವಕ ಶುಭಾಶಯಗಳು ಮತ್ತು ಅಭಿನಂದನೆಗಳು” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ವೀರ ಗಂಗಾಧರ ಅಜ್ಜಯ್ಯನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿ.ಕೆ. ಶಿವಕುಮಾರ್​​: ಅಷ್ಟಕ್ಕೂ ಯಾರು ಈ ಅಜ್ಜಯ್ಯ?

ಸಿಎಂ ಡಿ.ಕೆ. ಶಿವಕುಮಾರ್ ಗೆ ಬಿ.ಎಸ್. ಯಡಿಯೂರಪ್ಪ ಅಭಿನಂದನೆ

ಡಿ.ಕೆ. ಶಿವಕುಮಾರ್ ಅವರಿಗೆ ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿಯ ಹಿರಿಯ ನಾಯಕರಾದ ಬಿ.ಎಸ್. ಯಡಿಯೂರಪ್ಪ ಅವರು ತಮ್ಮ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭ ಹಾರೈಕೆಗಳನ್ನು ಸಲ್ಲಿಸಿದ್ದಾರೆ. ಟ್ವಿಟರ್ (X) ಮೂಲಕ ನೂತನ ಮುಖ್ಯಮಂತ್ರಿಗಳಿಗೆ ರಾಜಕೀಯ ಸೌಹಾರ್ದತೆಯ ಸಂದೇಶ ಕಳುಹಿಸಿರುವ ಬಿಎಸ್‌ವೈ, “ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ ಸನ್ಮಾನ್ಯ ಶ್ರೀ ಡಿ.ಕೆ.ಶಿವಕುಮಾರ್ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು” ಎಂದು ತಿಳಿಸಿದ್ದಾರೆ.

ಸಿಕ್ಕ ಅವಕಾಶವನ್ನು ರಾಜ್ಯದ ಅಭಿವೃದ್ಧಿಗೆ ಬಳಸಿ: ಡಿಕೆಶಿಗೆ ಹೆಚ್​​.ಡಿ.ಕುಮಾರಸ್ವಾಮಿ ಹಾರೈಕೆ

ಡಿ.ಕೆ. ಶಿವಕುಮಾರ್ ಅವರಿಗೆ ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾದ ಹೆಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭ ಹಾರೈಕೆಗಳನ್ನು ಸಲ್ಲಿಸಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ನೂತನ ಮುಖ್ಯಮಂತ್ರಿಗಳಿಗೆ ರಾಜಕೀಯ ಸೌಹಾರ್ದತೆಯ ಸಂದೇಶ ಕಳುಹಿಸಿರುವ ಹೆಚ್‌ಡಿಕೆ, “ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿರುವ ಶ್ರೀ ಡಿ.ಕೆ. ಶಿವಕುಮಾರ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು” ಎಂದು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಪ್ರಿಯಾಂಕ್ ಖರ್ಗೆ, UT ಖಾದರ್, ಈಶ್ವರ್ ಖಂಡ್ರೆ ಪರಿಚಯ – Kannada News

ಬೆಂಗಳೂರು, ಜೂನ್ 03): ಕರ್ನಾಟಕದ (karnataka) 25ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ (DK Shivakumar) ಅವರು ಪ್ರಮಾಣವಚನವನ್ನು ಸ್ವೀಕರಿಸಿದರು. ರಾಜ್ಯಪಾಲರಾದ ಥಾವರಚಂದ್ ಗೆಹ್ಲೋಟ್ ಅವರು ಸಿಎಂ ಪ್ರತಿಜ್ಞಾವಿಧಿ ಬೋಧಿಸಿದರು. ಡಿ.ಕೆ. ಶಿವಕುಮಾರ್ ಅವರೊಂದಿಗೆ ಉಪಮುಖ್ಯಮಂತ್ರಿಯಾಗಿ ಡಾ.ಜಿ. ಪರಮೇಶ್ವರ ಸ್ವೀಕರಿಸಿದರೆ, ಯುಟಿ ಖಾದರ್, ಈಶ್ವರ್ ಖಂಡ್ರೆ ಹಾಗೂ ಪ್ರಿಯಾಂಕ್ ಖರ್ಗೆ ಅವರು ಸಂಪುಟ ದರ್ಜೆ ಸಚಿವರಾಗಿ ಅಧಿಕಾರ ಸ್ವೀಕಾರ ಮಾಡಿದರು. ವಿಶೇಷ ಅಂದ್ರೆ ಖಂಡ್ರೆ ಹಾಗೂ ಖರ್ಗೆ ಮೂರನೇ ಬಾರಿಗೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.

ಮುಖ್ಯಾಂಶಗಳು

  • ಮೂರನೇ ಬಾರಿಗೆ ಸಚಿವರಾದ ಈಶ್ವರ್ ಖಂಡ್ರೆ
  • ಕ್ಯಾಬಿನೆಟ್ ಸಚಿವರಾಗಿ ಪ್ರಿಯಾಂಕ್ ಖರ್ಗೆ ಪ್ರಮಾಣವಚನ
  • ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಯುಟಿ ಖಾದರ್ ಸಚಿವರಾಗಿ ಅಧಿಕಾರ ಸ್ವೀಕಾರ

ದಕ್ಷಿಣ ಕನ್ನಡ ಜಿಲ್ಲೆ ಉಳ್ಳಾಲ ಕ್ಷೇತ್ರದ ಶಾಸಕರಾಗಿರುವ ಯು.ಟಿ.ಖಾದರ್ ದೇವರ ಹೆಸರಿನಲ್ಲಿ ಸಚಿವರಾಗಿ ಪ್ರಮಣವಚನ ಸ್ವೀಕರಿಸಿದರೆ, ಭಾಲ್ಕಿ ಕ್ಷೇತ್ರದ ಈಶ್ವರ ಖಂಡ್ರೆ ಅವರು ದೇವರು, ಚನ್ನಬಸವ ಪಟ್ಟದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದರು. ಇನ್ನು ಕಲಬುರಗಿ ಜಿಲ್ಲೆ ಚಿತ್ತಾಪುರ ಕ್ಷೇತ್ರದ ಶಾಸಕರಾಗಿರುವ ಪ್ರಿಯಾಂಕ್ ಖರ್ಗೆ ಶ್ರದ್ಧಾಪೂರ್ವಕವಾಗಿ ಪ್ರತಿಜ್ಞೆ ಮಾಡುತ್ತೇನೆ ಎಂದು ಅಧಿಕಾರ ಸ್ವೀಕರಿಸಿದರು.

5 ಬಾರಿ ಶಾಸಕರಾಗಿ ಯು.ಟಿ.ಖಾದರ್‌ ಬಗ್ಗೆ

ಈವರೆಗೆ 5 ಬಾರಿ ಶಾಸಕರಾಗಿ ಯು.ಟಿ.ಖಾದರ್‌ ಆಯ್ಕೆಯಾಗಿದ್ದಾರೆ. 2007ರಲ್ಲಿ ಮೊದಲ ಸಲ ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದ್ರು. 2013ರಲ್ಲಿ ಆರೋಗ್ಯ & ಕುಟುಂಬ ಕಲ್ಯಾಣ ಸಚಿವರಾಗಿದ್ದರು. 2016ರಲ್ಲಿ ಆಹಾರ, ನಾಗರಿಕ ಪೂರೈಕೆ ಖಾತೆ ನಿರ್ವಹಣೆ ಮಾಡಿದ್ರು. 2018ರಲ್ಲಿ ವಸತಿ ಮತ್ತು ನಗರಾಭಿವೃದ್ಧಿ ಖಾತೆ ನಿಭಾಯಿಸಿದ್ದರು. ಚಾಮರಾಜನಗರ, ಕೋಲಾರ ಸೇರಿದಂತೆ ವಿವಿಧ ಜಿಲ್ಲೆಗಳ ಉಸ್ತುವಾರಿ ಸಚಿವರಾಗಿ ಸೇವೆ ಸಲ್ಲಿಸಿದ್ರು. 2022ರಲ್ಲಿ ವಿಧಾನಸಭೆ ಪ್ರತಿಪಕ್ಷ ಉಪನಾಯಕರಾಗಿದ್ದರು. 2023ರಲ್ಲಿ ಸಿದ್ದರಾಮಯ್ಯ ಅವಧಿಯಲ್ಲಿ ವಿಧಾನಸಭೆ ಸ್ಪೀಕರ್‌ ಆಗಿ ಆಯ್ಕೆಯಾಗಿದ್ರು.

ಪ್ರಿಯಾಂಕ್ ಖರ್ಗೆ ರಾಜಕೀಯ ಜರ್ನಿ

ಮೂರು ಬಾರಿ ಶಾಸಕರಾಗಿ ಆಯ್ಕೆ ಆಗಿರುವ ಪ್ರಿಯಾಂಕ್ ಖರ್ಗೆ, 2013ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ವಿಧಾನಸಭೆ ಪ್ರವೇಶ ಮಾಡಿದ್ದರು. 2016 ರಲ್ಲಿ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿ ಪದಾರ್ಪಣೆ ಮಾಡೋ ಮೂಲಕ ಐಟಿ, ಬಿಟಿ ಮತ್ತು ಪ್ರವಾಸೋದ್ಯಮ ಸಚಿವರಾಗಿ ಪ್ರಿಯಾಂಕ್ ಸೇವೆ ಸಲ್ಲಿಸಿದ್ದರು. ಇನ್ನು 2018ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಎರಡನೇ ಬಾರಿಗೆ ಗೆದ್ದು ಬೀಗಿದ್ದರು. ಆಗಲೂ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿ ಸಮಾಜ ಕಲ್ಯಾಣ ಇಲಾಖೆ ನಿರ್ವಹಿಸಿದ್ದರು. 2023ರಲ್ಲಿ ಚಿತ್ತಾಪುರ ಕ್ಷೇತ್ರದಿಂದ 3ನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿ, ಸಿದ್ದರಾಮಯ್ಯ ಸಂಪುಟದಲ್ಲಿ ಐಟಿ-ಬಿಟಿ ಸಚಿವರಾಗಿದ್ದ ಪ್ರಿಯಾಂಕ್, ಗ್ರಾಮೀಣಾಭಿವೃದ್ಧಿ & ಪಂಚಾಯತ್ ರಾಜ್ ಇಲಾಖೆಗಳನ್ನು ನಿರ್ವಹಣೆ ಮಾಡಿದ್ದಾರೆ.

3ನೇ ಬಾರಿಗೆ ಸಚಿವರಾದ ಈಶ್ವರ್ ಖಂಡ್ರೆ

ಬೀದರ್ ಜಿಲ್ಲೆಯ ಭಾಲ್ಕಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಈಶ್ವರ ಖಂಡ್ರೆ ಈ ವರೆಗೆ ಅವರು ನಾಲ್ಕು ಬಾರಿ ಗೆಲುವು ಸಾಧಿಸಿದ್ದಾರೆ. 2013ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ಪೌರಾಡಳಿತ ಮತ್ತು ಸಾರ್ವಜನಿಕ ಉದ್ದಿಮೆಗಳ ಖಾತೆ ಸಚಿವರಾಗಿದ್ದ ಖಂಡ್ರೆ, ಬಳಿಕ 2023ರ ಮತ್ತೊಮ್ಮೆ ಸಿದ್ದರಾಮಯ್ಯ ಸಂಪುಟದಲ್ಲಿ ಅರಣ್ಯ ಸಚಿವರಾಗಿದ್ದರು. ಇದೀಗ ಡಿಕೆ ಶಿವಕುಮಾರ್ ಸಂಪುಟದಲ್ಲೂ ಸಹ ಕ್ಯಾಬಿನೆಟ್ ಸಚಿವರಾಗಿದ್ದಾರೆ. ಅಲ್ಲದೇ ಈ ಹಿಂದೆ ಕೆಪಿಸಿಸಿ ಕಾರ್ಯಧ್ಯಕ್ಷರಾಗಿದ್ದರು. ಅಲ್ಲದೇ ಇದೀಗ ಅವರು ರಾಷ್ಟ್ರೀಯ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷರಾಗಿದ್ದಾರೆ.

Source link

ಒಟಿಟಿಗಳ ಮೇಲೆ ಆಸೆ ಬಿಟ್ಟು ಬಿಡಿ: ಅಲ್ಲು ಅರ್ಜುನ್ ತಂದೆ ಸಲಹೆ – Kannada News

ಕೋವಿಡ್ (Covid) ಬಳಿಕ ಚಿತ್ರರಂಗದಲ್ಲಿ ಭಾರಿ ದೊಡ್ಡ ಬದಲಾವಣೆಗಳನ್ನು ಈ ಒಟಿಟಿಗಳು (OTT) ತಂದಿವೆ. ಸಿನಿಮಾ ನಿರ್ಮಾಪಕರಿಗೆ ಭಾರಿ ದೊಡ್ಡ ನಿರಾಳತೆಯನ್ನು ಒಟಿಟಿಗಳು ನೀಡಿದ್ದು, ಕೇವಲ ಬಾಕ್ಸ್ ಆಫೀಸ್, ಆಡಿಯೋ ರೈಟ್ಸ್ ಮತ್ತು ಟಿವಿ ರೈಟ್ಸ್ ಮೇಲೆ ನಿರ್ಭರವಾಗಿದ್ದ ನಿರ್ಮಾಪಕರಿಗೆ ಮತ್ತೊಂದು ದೊಡ್ಡ ಆದಾಯದ ದಾರಿಯನ್ನು ಈ ಒಟಿಟಿಗಳು ತೆರೆದು ಕೊಟ್ಟಿವೆ. ಈಗಂತೂ ಹಲವು ಸಿನಿಮಾಗಳು ಒಟಿಟಿ ಆದಾಯವೊಂದನ್ನೇ ನಂಬಿಕೊಂಡು ನಿರ್ಮಾಣ ಆಗುತ್ತಿವೆ. ಆದರೆ ಇದೀಗ ತೆಲುಗು ಚಿತ್ರರಂಗದ ಬಲು ಹಿರಿಯ ಮತ್ತು ಯಶಸ್ವಿ ನಿರ್ಮಾಪಕರಾಗಿರುವ ಅಲ್ಲು ಅರವಿಂದ್ ಅವರು, ಒಟಿಟಿಗಳ ಮೇಲಿನ ನಂಬಿಕೆಯನ್ನು ಬಿಟ್ಟುಬಿಡಿ ಎಂದು ಕರೆ ನೀಡಿದ್ದಾರೆ.

ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ದಶಕಗಳಿಂದಲೂ ಚಿತ್ರರಂಗದಲ್ಲಿರುವವರು. ತೆಲುಗು ಚಿತ್ರರಂಗದ ವೃತ್ತಿಪರ ಸಿನಿಮಾ ನಿರ್ಮಾಪಕ ಎಂದು ಹೆಸರಾಗಿರುವವರು. ತೆಲುಗು ಮಾತ್ರವಲ್ಲದೆ ಬಾಲಿವುಡ್ ಸೇರಿದಂತೆ ಹಲವು ಭಾಷೆಗಳಲ್ಲಿ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ಅಲ್ಲು ಅರವಿಂದ್ ನೀಡಿದ್ದಾರೆ. ಲೆಕ್ಕಾಚಾರದಲ್ಲಿ ಮಾಸ್ಟರ್ ಎನಿಸಿಕೊಂಡಿರುವ ಅಲ್ಲು ಅರವಿಂದ್ ಇದೀಗ ಒಟಿಟಿಗಳ ಬಗ್ಗೆ ನೆಗೆಟಿವ್ ಆಗಿ ಮಾತನಾಡಿರುವುದು ಗಮನ ಸೆಳೆದಿದೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ಅಲ್ಲು ಅರವಿಂದ್, ‘ಒಟಿಟಿಗಳಿಂದ ಸಿನಿಮಾ ನಿರ್ಮಾಣ ವೆಚ್ಚದ ಅರ್ಧ ಹಣ ಬಂದುಬಿಡುತ್ತದೆ ಎಂಬ ಆಸೆ ಇಟ್ಟುಕೊಳ್ಳುವುದು ಬೇಡ. ಈಗ ಕಾಲ ಬದಲಾಗಿದೆ. ಒಟಿಟಿಗಳ ಕಾಲ ಮುಗಿದಿದೆ. ಒಟಿಟಿಗಳು ಈಗ ಬಹಳ ಚ್ಯೂಸಿ ಆಗಿಬಿಟ್ಟಿವೆ. ನಿರ್ಮಾಪಕರು ಕೇಳಿದಷ್ಟು ಹಣ ಕೊಡಲು ಅವರು ತಯಾರಿಲ್ಲ. ಅವರು ಅಳೆದು ತೂಗಿ ಸಿನಿಮಾಗಳನ್ನು ಆಯ್ದುಕೊಳ್ಳುತ್ತಿದ್ದಾರೆ. ಹಾಗಾಗಿ ಒಟಿಟಿಗಳ ಮೇಲೆ ಆಸೆಯನ್ನು ಬಿಟ್ಟುಬಿಡುವುದು ಒಳ್ಳೆಯದು’ ಎಂದಿದ್ದಾರೆ ಅಲ್ಲು ಅರವಿಂದ್.

ಇದನ್ನೂ ಓದಿ:ಈ ವಾರ ಒಟಿಟಿಯಲ್ಲಿ ಭರ್ಜರಿ ಸಿನಿಮಾಗಳು, ತಪ್ಪದೇ ನೋಡಿ

‘ಯಾರೋ ಕೆಲವು ನಿರ್ದೇಶಕರು ಮತ್ತು ಕೆಲವು ನಟರ ಸಿನಿಮಾಗಳನ್ನಷ್ಟೆ ಒಟಿಟಿಗಳು ಹಿಂದೆ-ಮುಂದೆ ನೋಡದೆ ಖರೀದಿ ಮಾಡುತ್ತಿದೆ. ಆದರೆ ಮುಂಚಿನಂತೆ ಎಲ್ಲ ಸಿನಿಮಾಗಳಿಗೂ ಉತ್ತಮ ಮೌಲ್ಯವನ್ನು ಅವು ನೀಡುತ್ತಿಲ್ಲ. ಈಗ ಒಟಿಟಿಗಳು ಸಾಕಷ್ಟು ಬದಲಾಗಿವೆ. ನಾನು ಸಹ ಈಗ ನನ್ನ ನಿರ್ಮಾಣ ಸಂಸ್ಥೆಯ ಕ್ರಿಯೇಟಿವ್ ಹೆಡ್ ಹಾಗೂ ಇತರೆ ಎಕ್ಸಿಕ್ಯೂಟಿವ್​​ಗಳಿಗೆ ಈ ಬಗ್ಗೆ ಎಚ್ಚರಿಸಿಬಿಟ್ಟಿದ್ದೇನೆ. ಚಿತ್ರಮಂದಿರದಲ್ಲಿ ಹಿಟ್ ಆಗುವ ನಿರ್ದೇಶಕ-ನಟರ ಕಾಂಬಿನೇಷನ್​​ನ ಸಿನಿಮಾಗಳ ಮೇಲೆ ಮಾತ್ರವೇ ಬಂಡವಾಳ ಹೂಡುವಂತೆ ಹೇಳಿದ್ದೇನೆ’ ಎಂದಿದ್ದಾರೆ ಅಲ್ಲು ಅರವಿಂದ್.

‘ಚಿತ್ರಮಂದಿರಗಳಲ್ಲಿ ವರ್ಕೌಟ್ ಆಗದ ಸಿನಿಮಾಗಳು ಇನ್ಯಾವುದೇ ಫ್ಲ್ಯಾಟ್​​ಫಾರ್ಮ್​​ನಲ್ಲಿ ಸಹ ವರ್ಕೌಟ್ ಆಗುವುದಿಲ್ಲ. ಅದು ಖಾತ್ರಿ. ಚಿತ್ರಮಂದಿರದಲ್ಲಿ ಹಿಟ್ ಆದರೆ ಬೇರೆಲ್ಲ ಫ್ಲ್ಯಾಟ್​​ಫಾರ್ಮ್​​ನಲ್ಲೂ ಸಿನಿಮಾ ವರ್ಕೌಟ್ ಆಗುತ್ತದೆ. ಒಟಿಟಿ, ಟಿವಿ ಏನೇ ಇದ್ದರು, ಮೊದಲು ಚಿತ್ರಮಂದಿರದಲ್ಲಿ ಸಿನಿಮಾ ಹಿಟ್ ಆಗುವುದು ಕಡ್ಡಾಯ’ ಎಂದಿದ್ದಾರೆ ಅವರು.

ಅಂದಹಾಗೆ ಅಲ್ಲು ಅರವಿಂದ್ ಅವರು ಖುದ್ದು ಒಂದು ಒಟಿಟಿಯ ಮಾಲೀಕರಾಗಿದ್ದಾರೆ. ಅವರು ತೆಲುಗಿನ ‘ಆಹಾ’ ಒಟಿಟಿಯ ಮಾಲೀಕರಾಗಿದ್ದು, ಆಹಾ ಒಟಿಟಿಯಲ್ಲಿ ಕೆಲವು ಒಳ್ಳೆಯ ತೆಲುಗು ಶೋಗಳನ್ನು ನಡೆಸುತ್ತಾರೆ. ಆ ಒಟಿಟಿ ಕೇವಲ ತೆಲುಗು ಕಂಟೆಂಟ್ ಅನ್ನು ಮಾತ್ರವೇ ಪ್ರಮೋಟ್ ಮಾಡುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಈ ರೀತಿ ವಾಶ್‌ ಮಾಡಿದ್ರೆ ಜೀನ್ಸ್‌ ಬಣ್ಣ ಮಾಸೋದೇ ಇಲ್ಲ – Kannada News

ಡೆನಿಮ್‌ ಜೀನ್ಸ್‌ (jeans) ಅಂದ್ರೆ ಪ್ರತಿಯೊಬ್ಬರಿಗೂ ಇಷ್ಟ. ಇದು ಕಂಫರ್ಟ್‌ ಮಾತ್ರವಲ್ಲದೆ ಸ್ಟೈಲಿಶ್‌ ಲುಕ್‌ ಅನ್ನು ಸಹ ನೀಡುತ್ತದೆ. ಹಾಗಾಗಿ ಹೆಚ್ಚಿನವರು ಜೀನ್ಸ್‌ ಧರಿಸಲು ಇಷ್ಟಪಡುತ್ತಾರೆ. ಆದರೆ ಡೆನಿಮ್‌ ಜೀನ್ಸ್‌ಗಳ ಬಣ್ಣ ಬಹುಬೇಗನೆ ಮಾಸಿ ಹೋಗಿ ಹಳೆಯದರಂತೆ ಕಾಣಿಸುತ್ತದೆ. ಈ ರೀತಿ ಡೆನಿಮ್‌ ಬಣ್ಣ ಮಸುಕಾಗಲು ಅವುಗಳ ಗುಣಮಟ್ಟ ಮಾತ್ರವಲ್ಲ, ಅವುಗಳನ್ನು ತೊಳೆಯುವ ವಿಧಾನವೂ ಕಾರಣವಾಗುತ್ತದೆ. ಜೀನ್ಸ್‌ ಮಸುಕಾಗದೆ ದೀರ್ಘಕಾಲ ಹೊಸದರಂತೆ ಕಾಣಲು ಸರಿಯಾದ ಆರೈಕೆ ಅತ್ಯಗತ್ಯ. ಸಣ್ಣ ತಪ್ಪು ಸಹ ಅವುಗಳ ಗುಣಮಟ್ಟವನ್ನು ಹಾಳುಮಾಡಬಹುದು. ಹಾಗಾಗಿ ಯಾವಾಗಲೂ ನಿಮ್ಮ ಜೀನ್ಸ್‌ಗಳನ್ನು ಈ ವಿಧಾನಗಳ ಮೂಲಕವೇ ತೊಳೆಯಲು ಪ್ರಯತ್ನಿಸಿ. ಇದರಿಂದ ಎಷ್ಟೇ ಬಾರಿ ಒಗೆದರೂ ಜೀನ್ಸ್‌ ಬಣ್ಣ ಮಸುಕಾಗುವುದಿಲ್ಲ.

ಜೀನ್ಸ್‌ ವಾಶ್‌ ಮಾಡುವ ಸರಿಯಾದ ವಿಧಾನ ಯಾವುದು?

ಯಾವಾಗಲೂ ಒಳಭಾಗದಿಂದ ತೊಳೆಯಿರಿ: ಡೆನಿಮ್‌ಗಳನ್ನು ಯಾವಾಗಲೂ ಒಳ ಭಾಗದಿಂದ ವಾಶ್‌ ಮಾಡಬೇಕು. ಇದು ಜೀನ್ಸ್‌ನ ಹೊರಭಾಗದ ಬಣ್ಣ ಮಸುಕಾಗದಂತೆ ಮತ್ತು ಸವೆಯದಂತೆ ತಡೆಯುತ್ತದೆ. ಹಾಗಾಗಿ ಯಾವಾಗಲೂ ಜೀನ್ಸ್‌ನ ಒಳ ಭಾಗವನ್ನು ಹೊರಗೆ ತೆಗೆದೇ ಒಗೆಯಿರಿ.

ತಣ್ಣೀರು ಬಳಸಿ: ಕೆಲವರು ಬಿಸಿ ನೀರಿನಿಂದ ಬಟ್ಟೆಗಳನ್ನು ಒಗೆಯುತ್ತಾರೆ. ಆದರೆ ಈ ವಿಧಾನ ಡೆನಿಮ್‌ಗಳಿಗೆ ಸೂಕ್ತವಲ್ಲ. ಜೀನ್ಸ್ ತೊಳೆಯುವಾಗ ಬಿಸಿನೀರನ್ನು ಎಂದಿಗೂ ಬಳಸಬಾರದು. ನೀವು ಯಾವಾಗಲೂ ತಣ್ಣನೆಯ ನೀರಿನಿಂದ ಅವುಗಳನ್ನು ಒಗೆಯಬಹುದು. ಬಿಸಿನೀರಿನಿಂದ ಜೀನ್ಸ್‌ ಒಗೆದರೆ ಅದರ ಬಣ್ಣ ಬಹುಬೇಗನೆ ಮಾಸುತ್ತದೆ.

ಹೆಚ್ಚು ಉಜ್ಜುವುದನ್ನು ತಪ್ಪಿಸಿ: ಜೀನ್ಸ್‌ ಅನ್ನು ಹೆಚ್ಚು ಉಜ್ಜಬಾರದು ಅಥವಾ ಹಿಂಡಬಾರದು, ಈ ರೀತಿ ಮಾಡುವುದರಿಂದ ಜೀನ್ಸ್‌ ಹಳೆಯದರಂತೆ ಕಾಣಿಸಲು ಪ್ರಾರಂಭಿಸುತ್ತದೆ. ಅಲ್ಲದೆ ಇದರ ಬಣ್ಣವು ಬಹು ಬೇಗನೆ ಮಾಸಲು ಕಾರಣವಾಗುತ್ತದೆ. ಹಾಗಾಗಿ ಡೆನಿಮ್‌ಗಳನ್ನು ಸೌಮ್ಯವಾಗಿ ವಾಶ್‌ ಮಾಡಬೇಕಾಗುತ್ತದೆ.

ಸೌಮ್ಯವಾದ ಡಿಟೆರ್ಜಂಟ್‌ ಬಳಸಿ: ಜೀನ್ಸ್‌ ಒಗೆಯಲು ಸರಿಯಾದ ಡಿಟೆರ್ಜಂಟ್‌ ಬಳಸುವುದು ಅತ್ಯಗತ್ಯ. ಹಾಗಾಗಿ ಕಠಿಣ ರಾಸಾಯನಿಕಗಳನ್ನು ಹೊಂದಿರುವ ಡಿಟರ್ಜೆಂಟ್‌ಗಳಿಂದ ಜೀನ್ಸ್‌ ಒಗೆಯಬೇಡಿ, ಏಕೆಂದರೆ ಇವು ಬಟ್ಟೆಗೆ ಹಾನಿ ಉಂಟು ಮಾಡುತ್ತವೆ. ಇದಲ್ಲದೆ ಕಲೆಗಳಿರುವ ಜಾಗಕ್ಕೆ  ಮಾತ್ರ ಡಿಟರ್ಜೆಂಟ್ ಹಚ್ಚಿ. ಇಡೀ ಜೀನ್ಸ್‌ ಅನ್ನು ಡಿಟೆರ್ಜಂಟ್‌ನಿಂದ  ತೊಳೆಯುವುದನ್ನು ತಪ್ಪಿಸಿ.

ಇದನ್ನೂ ಓದಿ: ಕಿಚನ್‌ ಸಿಂಕ್‌ನಿಂದ ಬರುವ ದುರ್ವಾಸನೆಯನ್ನು ತೊಡೆದು ಹಾಕಲು ಸರಳ ಸಲಹೆಯನ್ನು ಅನುಸರಿಸಿ

ಒಣಗಿಸುವ ವಿಧಾನವೂ ಮುಖ್ಯ: ಜೀನ್ಸ್‌ಗಳನ್ನು ಸರಿಯಾಗಿ ಒಣಗಿಸುವುದು ಸಹ ಅಷ್ಟೇ ಮುಖ್ಯ. ಯಾವತ್ತೂ ಜೀನ್ಸ್‌ ಅನ್ನು ಸೂರ್ಯನ ನೇರ ಬೆಳಕಿನಡಿ ಒಣಗಿಸಬಾರದು. ಯಾವಾಗಲೂ ನೆರಳಿರುವ ಜಾಗದಲ್ಲಿ ಡೆನಿಮ್‌ಗಳನ್ನು ಒಣಗಿಸಿ. ಇದರಿಂದ ಡೆನಿಮ್‌ ಬಣ್ಣ ಮಾಸುವುದನ್ನು ತಡೆಯಬಹುದು.

ಪ್ರತಿ ಬಳಕೆಯ ನಂತರ ಜೀನ್ಸ್‌ ಒಗೆಯಬೇಕೆ?

ಫ್ಯಾಷನ್ ತಜ್ಞರ ಪ್ರಕಾರ, ಪ್ರತಿ ಬಳಕೆಯ ನಂತರ ಜೀನ್ಸ್ ಅನ್ನು ತೊಳೆಯುವುದು ಅನಿವಾರ್ಯವಲ್ಲ. ಪದೇ ಪದೇ ತೊಳೆಯುವುದರಿಂದ ಡೆನಿಮ್ ಬೇಗನೆ ಹಾಳಾಗಬಹುದು. ಜೀನ್ಸ್ ಅನ್ನು 4 ರಿಂದ 5 ಬಾರಿ ಧರಿಸಿದ ನಂತರ ತೊಳೆಯುವುದು ಉತ್ತಮ. ಅಲ್ಲದೆ, ಜೀನ್ಸ್ ಅನ್ನು ಧರಿಸಿದ ನಂತರ ಸ್ವಲ್ಪ ಸಮಯದವರೆಗೆ ಚೆನ್ನಾಗಿ ಗಾಳಿ ಬರುವ ಸ್ಥಳದಲ್ಲಿ ಇಡುವುದರಿಂದ ಅದರ ವಾಸನೆ ಹೋಗುತ್ತದೆ ಮತ್ತು ಪದೇ ಪದೇ ಒಗೆಯುವ ಅಗತ್ಯವೂ ಇರುವುದಿಲ್ಲ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಕ್ಕಳ ಎತ್ತರ ಹೆಚ್ಚಾಗುತ್ತಿಲ್ಲ ಎಂಬ ಚಿಂತೆ ಕಾಡುತ್ತಿದೆಯೇ? ಈ ಪೋಷಕಾಂಶಗಳ ಕೊರತೆ ಕಾರಣವಾಗಿರಬಹುದು – Kannada News

ಇತ್ತೀಚಿನ ದಿನಗಳಲ್ಲಿ ಹಲವಾರು ಪೋಷಕರು ಮಕ್ಕಳ ಎತ್ತರ (Childs Height) ಸರಿಯಾಗಿ ಹೆಚ್ಚಳವಾಗದಿರುವ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿರುವುದು ಕಂಡುಬರುತ್ತಿದೆ. ನಿಮ್ಮ ಮನೆಯಲ್ಲಿ ಮಕ್ಕಳಿದ್ದೂ ನೀವು ಕೂಡ ಈ ಸಮಸ್ಯೆಯನ್ನು ಎದುರಿಸುತ್ತಿರಬಹುದು. ಸಾಮಾನ್ಯವಾಗಿ ಮಕ್ಕಳ ದೈಹಿಕ ಬೆಳವಣಿಗೆಗೆ ಕೇವಲ ಜನ್ಯಗುಣಗಳೇ ಅಲ್ಲ, ಸರಿಯಾದ ಪೋಷಣೆಯೂ ಬಹಳ ಮುಖ್ಯವಾಗುತ್ತದೆ ಎಂಬುದನ್ನು ಮರೆಯಬಾರದು. ಕೆಲವು ಅಗತ್ಯ ಪೋಷಕಾಂಶಗಳ ಕೊರತೆಯಿಂದ ಮಕ್ಕಳ ಬೆಳವಣಿಗೆಯ ಮೇಲೆ ಪರಿಣಾಮ ಬೀಳಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾದರೆ ಮಕ್ಕಳ ಬೆಳವಣಿಗೆಗೆ ಪೋಷಕಾಂಶಗಳು ಯಾಕೆ ಮುಖ್ಯವಾಗುತ್ತದೆ, ಎತ್ತರ ಹೆಚ್ಚಳಕ್ಕೆ ಸಹಾಯ ಮಾಡುವ ಪ್ರಮುಖ ಪೋಷಕಾಂಶಗಳು ಯಾವವು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಮಕ್ಕಳ ಬೆಳವಣಿಗೆಗೆ ಪೋಷಕಾಂಶಗಳು ಯಾಕೆ ಮುಖ್ಯ?

ಬಾಲ್ಯ ಮತ್ತು ಕೌಮಾರ್ಯ (Adolescence) ಮಾನವನ ಬೆಳವಣಿಗೆಯ ಎರಡು ಪ್ರಮುಖ ಮತ್ತು ನಿರ್ಣಾಯಕ ಹಂತಗಳಾಗಿರುತ್ತದೆ. ಈ ಸಮಯದಲ್ಲಿ ದೇಹ ವೇಗವಾಗಿ ಬೆಳೆಯುತ್ತದೆ. ಹಾಗಾಗಿ ಈ ಅವಧಿಯಲ್ಲಿ ದೇಹಕ್ಕೆ ಸಮರ್ಪಕ ಪ್ರಮಾಣದಲ್ಲಿ ಪ್ರೋಟೀನ್, ವಿಟಮಿನ್ ಮತ್ತು ಖನಿಜಾಂಶಗಳು ದೊರೆಯಬೇಕು. ಆಹಾರದಲ್ಲಿ ಪೌಷ್ಟಿಕಾಂಶಗಳ ಕೊರತೆ ಇದ್ದರೆ ಎಲುಬು, ಸ್ನಾಯು ಹಾಗೂ ದೇಹದ ಸಾಮಾನ್ಯ ಬೆಳವಣಿಗೆ ನಿಧಾನಗೊಳ್ಳಬಹುದು.

ಎತ್ತರ ಹೆಚ್ಚಳಕ್ಕೆ ಸಹಾಯ ಮಾಡುವ ಪ್ರಮುಖ ಪೋಷಕಾಂಶಗಳು:

ಪ್ರೋಟೀನ್: ಇದು ದೇಹದ ಸ್ನಾಯು ಮತ್ತು ಟಿಷ್ಯೂಗಳ ಬೆಳವಣಿಗೆಗೆ ಸಹಕಾರಿ. ಹಾಲು, ಮೊಟ್ಟೆ, ಬೇಳೆ, ಸೋಯಾ ಹಾಗೂ ಕಾಳುಗಳಲ್ಲಿ ಇದು ಹೆಚ್ಚು ದೊರೆಯುತ್ತದೆ.

ಕ್ಯಾಲ್ಸಿಯಂ: ಎಲುಬುಗಳನ್ನು ಬಲಪಡಿಸಲು ಕ್ಯಾಲ್ಸಿಯಂ ಅತ್ಯಗತ್ಯ. ಇದು ಹಾಲು, ಮೊಸರು, ಪನೀರ್ ಹಾಗೂ ಹಸಿರು ಸೊಪ್ಪುಗಳಲ್ಲಿ ಉತ್ತಮ ಪ್ರಮಾಣದಲ್ಲಿ ದೊರೆಯುತ್ತದೆ.

ವಿಟಮಿನ್ D: ಈ ಜೀವಸತ್ವ ದೇಹದಲ್ಲಿ ಕ್ಯಾಲ್ಸಿಯಂ ಪೋಷಣೆಗೆ ಸಹಾಯ ಮಾಡುತ್ತದೆ. ಬೆಳಗಿನ ಸೂರ್ಯರಶ್ಮಿ ಮತ್ತು ಕೆಲವು ಆಹಾರಗಳಿಂದ ಇದು ದೊರೆಯುತ್ತದೆ.

ಐರನ್: ಇದು ದೇಹಕ್ಕೆ ಆಮ್ಲಜನಕ ಪೂರೈಸಲು ನೆರವಾಗುತ್ತದೆ. ಇದರ ಕೊರತೆಯಿಂದ ಮಕ್ಕಳಲ್ಲಿ ದೌರ್ಬಲ್ಯ ಮತ್ತು ಬೆಳವಣಿಗೆಯ ಸಮಸ್ಯೆಗಳು ಕಾಣಿಸಬಹುದು.

ಜಿಂಕ್ ಮತ್ತು ಮ್ಯಾಗ್ನೀಷಿಯಂ: ಈ ಖನಿಜಾಂಶಗಳು ದೇಹದ ಸಾಮಾನ್ಯ ಬೆಳವಣಿಗೆ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿ.

ಇದನ್ನೂ ಓದಿ: ಬೆಳಗ್ಗಿನ ಈ ಅಭ್ಯಾಸಗಳು ನಿಮ್ಮ ಮಕ್ಕಳನ್ನು ಚುರುಕಾಗಿಸುತ್ತದೆ

ಮಕ್ಕಳ ಬೆಳವಣಿಗೆಗೆ ಉತ್ತಮ ಅಭ್ಯಾಸಗಳು:

  • ಪ್ರತಿದಿನ ಸರಿಯಾಗಿ ನಿದ್ರೆ ಮಾಡುವುದು
  • ನಿಯಮಿತ ವ್ಯಾಯಾಮ ಮತ್ತು ಆಟಗಳಲ್ಲಿ ಭಾಗವಹಿಸುವುದು
  • ಸಮತೋಲನಯುತ ಆಹಾರ ಸೇವಿಸುವುದು
  • ಸಾಕಷ್ಟು ನೀರು ಕುಡಿಯುವುದು
  • ಹೊರಾಂಗಣ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು

ಮಕ್ಕಳು ಯಾವುದರಿಂದ ದೂರವಿರಬೇಕು?

  • ಜಂಕ್ ಫುಡ್ ಮತ್ತು ಸಿಹಿ ಪಾನೀಯಗಳ ಅಧಿಕ ಸೇವನೆ
  • ಹೆಚ್ಚು ಸಮಯ ಮೊಬೈಲ್ ಅಥವಾ ಟಿವಿ ಮುಂದೆ ಕಳೆಯುವುದು
  • ಶಾರೀರಿಕ ಚಟುವಟಿಕೆಗಳ ಕೊರತೆ
  • ತಡರಾತ್ರಿ ಜಾಗರಣೆ

ಮಕ್ಕಳ ಎತ್ತರ ಮತ್ತು ದೈಹಿಕ ಬೆಳವಣಿಗೆಗೆ ಸಮತೋಲನಯುತ ಆಹಾರ, ಉತ್ತಮ ಜೀವನಶೈಲಿ ಮತ್ತು ಅಗತ್ಯ ಪೋಷಕಾಂಶಗಳು ಬಹಳ ಮುಖ್ಯ. ಮಕ್ಕಳ ಬೆಳವಣಿಗೆ ಬಗ್ಗೆ ಆತಂಕ ಇದ್ದರೆ ವೈದ್ಯರ ಸಲಹೆ ಪಡೆಯುವುದು ಉತ್ತಮ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:25 pm, Wed, 3 June 26

Source link

ವೀರ ಗಂಗಾಧರ ಅಜ್ಜಯ್ಯನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿ.ಕೆ. ಶಿವಕುಮಾರ್​​: ಅಷ್ಟಕ್ಕೂ ಯಾರು ಈ ಅಜ್ಜಯ್ಯ? – Kannada News

ಅಜ್ಜಯ್ಯನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿ.ಕೆ. ಶಿವಕುಮಾರ್Image Credit source: PTI

ಬೆಂಗಳೂರು, ಜೂನ್​​ 03: ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್​​ (DK Shivakumar) ಪ್ರಮಾಣವಚನ ಸ್ವೀಕರಿಸಿದ್ದಾರೆ.  ರಾಜ್ಯಪಾಲ ಥಾವರ್​​ಚಂದ್​​ ಗೆಹ್ಲೋಟ್​​ ಪ್ರತಿಜ್ಞಾವಿಧಿ ಬೋಧೀಸಿದ್ದು, ವೀರ ಗಂಗಾಧರ ಅಜ್ಜಯ್ಯನ ಹೆಸರಿನಲ್ಲಿ ಡಿಕೆಶಿ ಪ್ರಮಾಣ ಸ್ವೀಕರಿಸಿರೋದು ಗಮನ ಸೆಳೆದಿದೆ. ತಮ್ಮ ಜೀವನದ ಮಹತ್ವದ ಘಟ್ಟದ ವೇಳೆ ತಮ್ಮ ಆರಾಧ್ಯ ದೈವವಾದ ಅಜ್ಜಯ್ಯನನ್ನು ನೆನೆದಿರೋದು ಡಿ.ಕೆ. ಶಿವಕುಮಾರ್​​ಗೆ ಅವರ ಮೇಲಿರುವ ನಂಬಿಕೆ ಎಂತಹದ್ದು ಎಂಬುದಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಪ್ರಮಾಣವಚನಕ್ಕೂ ಮುನ್ನ ಅಜ್ಜಯ್ಯನಿಗೆ ಪುಷ್ಪಾಚನೆ

ವೇದಿಕೆಯಲ್ಲಿ ಇಡಲಾಗಿದ್ದ ಅಜ್ಜಯ್ಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರೆವೇರಸಿದ ಬಳಿಕೆಯೇ ಕರ್ನಾಟಕ ಸಿಎಂ ಆಗಿ ಡಿ.ಕೆ. ಶಿವಕುಮಾರ್​​ ಪ್ರಮಾಣವಚನ ಸ್ವೀಕರಿಸಿದ್ದಾರೆ. ವಿಶೇಷ ಎಂದರೆ ಪದಗ್ರಹಣ ಸಮಾರಂಭ ಕೂಡ ಅಜ್ಜಯ್ಯನ ಮಠ ನೀಡಿರುವ ದಿನಾಂಕ ಮತ್ತು ಸಮಯದಂದೇ ನೆರವೇರಿದೆ. ಸಿಎಂ ಸ್ಥಾನ ಪಡೆಯುವ ಮೊದಲಿಗಿಂತ ಹಿಡಿದು ಪ್ರಮಾಣವಚನದವರೆಗೂ ಪ್ರತಿ ನಿರ್ಧಾರವನ್ನು ಅಜ್ಜಯ್ಯನ ಮಠದ ಈಗಿನ ಡಾ. ಕರಿವೃಷಭ ಶಿವಯೋಗಿಶ್ವರ ಶ್ರೀಗಳ ಮಾರ್ಗದರ್ಶನದನುಸಾರ ಡಿಕೆಶಿ ತೆಗೆದುಕೊಂಡಿದ್ದಾರೆ. ನಿನ್ನೆ ರಾತ್ರಿಯೂ ಬೆಂಗಳೂರಿನ ನಾಗರಭಾವಿಯಲ್ಲಿರುವ ಅಜ್ಜಯ್ಯನ ಶಾಖಾ ಮಠಕ್ಕೆ ಕುಟುಂಬ ಸಮೇತ ಭೇಟಿ ನೀಡಿದ್ದ ಶಿವಕುಮಾರ್, ತಡರಾತ್ರಿಯವರೆಗೂ ಅಲ್ಲಿಯೇ ಸಮಯ ಕಳೆದಿದ್ದರು.

ಇದನ್ನೂ ಓದಿ: ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆ ಶಿವಕುಮಾರ್!

ಎಲ್ಲಿದೆ ಈ ಅಜ್ಜಯ್ಯನ ಮಠ?

ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ನೊಣವಿನಕೆರೆ ಕಾಡಸಿದ್ದೇಶ್ವರ ಮಠ (ಸೋಮೇಕಟ್ಟೆ ಶ್ರೀ ಕಾಡಸಿದ್ದೇಶ್ವರ ಮಠ) ಅತ್ಯಂತ ಪ್ರಸಿದ್ಧ ಹಾಗೂ ಐತಿಹಾಸಿಕ ಧಾರ್ಮಿಕ ಶಕ್ತಿ ಕೇಂದ್ರವಾಗಿದೆ. ಈ ಮಠವನ್ನು ಸ್ಥಳೀಯವಾಗಿ ‘ಅಜ್ಜಯ್ಯನ ಮಠ’ ಎಂದೂ ಕರೆಯಲಾಗುತ್ತದೆ. ಈ ಮಠವು ಕರ್ನಾಟಕದ ಪ್ರಮುಖ ರಾಜಕಾರಣಿಗಳ ನೆಚ್ಚಿನ ಧಾರ್ಮಿಕ ಶಕ್ತಿ ಕೇಂದ್ರವಾಗಿದ್ದು, ಕರ್ನಾಟಕದ ನೂತನ ಸಿಎಂ ಡಿಕೆ ಶಿವಕುಮಾರ್​​ ಸೇರಿ ಹಲವರು ಇಲ್ಲಿನ ಭಕ್ತರಾಗಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ

ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಅವರ ಆಪ್ತರು ಮತ್ತು ಕುಟುಂಬದವರು ಈ ಕ್ಷಣಕ್ಕೆ ಸಾಕ್ಷಿ ಆಗಿದ್ದಾರೆ. ಮಾಜಿ ಸಂಸದೆ, ನಟಿ ರಮ್ಯಾ ದಿವ್ಯ ಸ್ಪಂದನಾ ಕೂಡ ಬಂದು ಪ್ರಮಾಣವಚನ ಕಾರ್ಯಕ್ರಮವನ್ನು ವೀಕ್ಷಿಸಿದ್ದಾರೆ. ಈ ವೇಳೆ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ಡಿಕೆ ಶಿವಕುಮಾರ್ ಅವರು ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ. ಅವರಿಗೆ ಇರುವ ಸಾಮರ್ಥ್ಯಕ್ಕೆ ಖಂಡಿತವಾಗಿಯೂ ಅವರು ದೊಡ್ಡ ಮಟ್ಟದ ಬದಲಾವಣೆ ಮಾಡುತ್ತಾರೆ. ಕರ್ನಾಟಕಕ್ಕೆ ಅವರಿಂದ ಅನುಕೂಲ ಆಗಲಿದೆ. ಮತ್ತೆ ರಾಜಕೀಯಕ್ಕೆ ಮರಳುವ ಆಲೋಚನೆ ನನಗಿಲ್ಲ. ಇಂದು ನಾನು ಕೇವಲ ಅವರಿಗೆ ಶುಭ ಹಾರೈಸಿ, ಸಂಭ್ರಮಿಸಲು ಬಂದಿದ್ದೇನೆ’ ಎಂದು ರಮ್ಯಾ (Ramya) ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಇತ್ತ ಡಿಕೆಶಿ ಪದಗ್ರಹಣದ ಬೆನ್ನಲ್ಲೇ ಅತ್ತ ವಿಧಾನಸೌಧದಲ್ಲಿ ಬದಲಾಯ್ತು ಸಿಎಂ ಕಚೇರಿಯ ನಾಮಫಲಕ

ಬೆಂಗಳೂರು, ಜೂನ್​​ 03: ಕರ್ನಾಟಕದಲ್ಲಿ ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರ ವಹಿಸಿಕೊಂಡ ನಂತರ ಬೆಂಗಳೂರಿನ ವಿಧಾನಸೌಧದಲ್ಲಿರುವ ಮುಖ್ಯಮಂತ್ರಿಗಳ ಕಚೇರಿಯ ನಾಮಫಲಕವನ್ನು ಬದಲಾಯಿಸಲಾಗಿದೆ. ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರ ಹೆಸರಿನ ನಾಮಫಲಕವನ್ನು ತೆಗೆದು, ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಡಿ.ಕೆ. ಶಿವಕುಮಾರ್ ಅವರ ಹೆಸರಿನ ನಾಮಫಲಕವನ್ನು ಅಳವಡಿಸಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version