ಅಮಿತ್ ಶಾ ಜೊತೆ ಅಣ್ಣಾಮಲೈ ಮಾತುಕತೆ; ಮನವೊಲಿಕೆಗೆ ಬಿಜೆಪಿ ಹೈಕಮಾಂಡ್ ಕಸರತ್ತು – Kannada News

ನವದೆಹಲಿ, ಜೂನ್ 2: ಬಿಜೆಪಿಗೆ ರಾಜೀನಾಮೆ ನೀಡಿ ಸ್ವತಂತ್ರ ಹಾದಿ ಹಿಡಿಯಲು ನಿರ್ಧರಿಸಿರುವ ತಮಿಳುನಾಡು ಬಿಜೆಪಿಯ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ (K Annamalai) ಇಂದು ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಅಣ್ಣಾಮಲೈ ಈಗಾಗಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ ಎನ್ನಲಾಗಿದೆ. ಆದರೆ, ಅಣ್ಣಾಮಲೈ ಆಗಲಿ ಅಥವಾ ಬಿಜೆಪಿ ನಾಯಕರಾಗಲಿ ಇದುವರೆಗೂ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ. ಇದರ ಬೆನ್ನಲ್ಲೇ ನಡೆದಿರುವ ಈ ಭೇಟಿ ತೀವ್ರ ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ.

ಮೂಲಗಳ ಪ್ರಕಾರ, ಅಣ್ಣಾಮಲೈ ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಬಿಜೆಪಿ ಹೈಕಮಾಂಡ್ ಕೊನೆಯ ಹಂತದ ಪ್ರಯತ್ನಗಳನ್ನು ನಡೆಸುತ್ತಿದೆ. ಹೀಗಾಗಿ, ಅಣ್ಣಾಮಲೈ ಅವರಿಗೆ ಕೆಲವು ದಿನಗಳ ಕಾಲ ದೆಹಲಿಯಲ್ಲೇ ಇರುವಂತೆ ಸೂಚಿಸಲಾಗಿದೆ. ಇಂದು ರಾತ್ರಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಮತ್ತು ಅಣ್ಣಾಮಲೈ ನಡುವೆ ಈ ವಿಷಯದ ಕುರಿತು ಮತ್ತೊಂದು ಸುತ್ತಿನ ಮಾತುಕತೆ ನಡೆಯುವ ಸಾಧ್ಯತೆಯಿದೆ. ನಾಳೆ ಅಥವಾ ನಾಡಿದ್ದು ತಮಿಳುನಾಡಿನಲ್ಲಿ ಅಣ್ಣಾಮಲೈ ಅವರು ಸುದ್ದಿಗೋಷ್ಠಿ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ತಾವು ಹೊಸ ಪಕ್ಷ ಕಟ್ಟುವ ವದಂತಿ ಬಗ್ಗೆ ಅಣ್ಣಾಮಲೈ ಹೇಳಿದ್ದೇನು?

ಸುದ್ದಿ ಸಂಸ್ಥೆ ANI ಮೂಲಗಳ ಪ್ರಕಾರ, ಅಣ್ಣಾಮಲೈ ಅವರು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಮತ್ತು ಹಿರಿಯ ನಾಯಕ ಬಿ.ಎಲ್. ಸಂತೋಷ್ ಅವರನ್ನು ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿದ್ದಾರೆ. ಈ ಸಭೆಗಳಲ್ಲಿ ಅವರು ಪಕ್ಷಕ್ಕೆ ರಾಜೀನಾಮೆ ನೀಡುವ ಕುರಿತೇ ಪ್ರಮುಖವಾಗಿ ಮಾತುಕತೆ ನಡೆದಿದೆ ಎನ್ನಲಾಗಿದೆ. ರಾಜೀನಾಮೆ ನೀಡುವ ಕುರಿತು ಗಂಭೀರ ಚರ್ಚೆಗಳು ನಡೆದಿದ್ದರೂ ಸಹ, ಅಣ್ಣಾಮಲೈ ಅವರು ಇನ್ನೂ ಅಧಿಕೃತವಾಗಿ ತಮ್ಮ ರಾಜೀನಾಮೆ ಪತ್ರವನ್ನು ಪಕ್ಷಕ್ಕೆ ಸಲ್ಲಿಸಿಲ್ಲ ಎಂದು ಕೂಡ ಮೂಲಗಳು ಸ್ಪಷ್ಟಪಡಿಸಿವೆ.

ತಮಿಳುನಾಡಿನಲ್ಲಿ ಸ್ವತಂತ್ರವಾಗಿ ಪಕ್ಷ ಸಂಘಟಿಸಲು ಬಯಸಿದ್ದ ಅಣ್ಣಾಮಲೈ ಅವರಿಗೆ ಬಿಜೆಪಿ ಹೈಕಮಾಂಡ್ ಎಐಎಡಿಎಂಕೆ (AIADMK) ಜೊತೆ ಮೈತ್ರಿ ಮಾಡಿಕೊಳ್ಳುವಂತೆ ಒತ್ತಡ ಹೇರಿತ್ತು. ಇದರಿಂದ ಅಸಮಾಧಾನಗೊಂಡಿದ್ದ ಅವರನ್ನು ಈಗ ಸಮಾಧಾನ ಪಡಿಸಲು ರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಜವಾಬ್ದಾರಿ ಅಥವಾ ಹುದ್ದೆ ನೀಡುವ ಭರವಸೆಯನ್ನು ಅಮಿತ್ ಶಾ ನೀಡಿದ್ದಾರೆ ಎನ್ನಲಾಗಿದೆ.

ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ನಬಿನ್ ಅವರಿಗೆ ರಾಜೀನಾಮೆ ನೀಡುವ ವೇಳೆ ಅಣ್ಣಾಮಲೈ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪ್ರದರ್ಶನದ ಕುರಿತು 5 ಪುಟಗಳ ಸುದೀರ್ಘ ವರದಿಯನ್ನು ಹಸ್ತಾಂತರಿಸಿದ್ದಾರೆ. ಮೈತ್ರಿ ರಾಜಕಾರಣದಿಂದ ಪಕ್ಷಕ್ಕೆ ಹೇಗೆ ಹಿನ್ನಡೆಯಾಯಿತು ಎಂಬುದನ್ನು ಅವರು ಅದರಲ್ಲಿ ವಿವರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಣ್ಣಾಮಲೈ ಅವರ ಆಪ್ತ ವಲಯದಿಂದ ಬಂದ ಮಾಹಿತಿ ಪ್ರಕಾರ, ಅವರು ಬಿಜೆಪಿಯಿಂದ ಸೌಹಾರ್ದಯುತವಾಗಿ ಹೊರಬಂದು ತಮಿಳುನಾಡಿನಲ್ಲಿ ಹೊಸ ರಾಜಕೀಯ ಪಯಣ ಆರಂಭಿಸಲು ಸಿದ್ಧತೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ತಮಿಳುನಾಡಿನಲ್ಲಿ ಹೊಸ ಪಕ್ಷ ಕಟ್ಟಲು ಮುಂದಾದ್ರಾ ಬಿಜೆಪಿ ನಾಯಕ ಅಣ್ಣಾಮಲೈ?

ಅಣ್ಣಾಮಲೈ ಅವರು ಮುಂದಿನ 6 ರಿಂದ 8 ತಿಂಗಳಲ್ಲಿ ತಮಿಳುನಾಡಿನಲ್ಲಿ ಹೊಸ ಪ್ರಾದೇಶಿಕ ಪಕ್ಷವನ್ನು ಸ್ಥಾಪಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ಕೇಂದ್ರ ಸರ್ಕಾರವು ಸಿಬಿಎಸ್‌ಇ 9ನೇ ತರಗತಿ ವಿದ್ಯಾರ್ಥಿಗಳಿಗೆ ತಂದ ‘ತ್ರಿಭಾಷಾ ಸೂತ್ರ’ವನ್ನು ಅಣ್ಣಾಮಲೈ ಬಹಿರಂಗವಾಗಿ ಟೀಕಿಸಿದ್ದರು. ಇದು ಅವರು ಈಗಾಗಲೇ ಬಿಜೆಪಿ ಸಿದ್ಧಾಂತದಿಂದ ದೂರ ಸರಿದು, ತಮಿಳುನಾಡಿನ ಜನರ ಪರವಾಗಿ ನಿಲ್ಲುವ ಮುನ್ಸೂಚನೆ ನೀಡುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ.

ಅಣ್ಣಾಮಲೈ ಅವರ ರಾಜೀನಾಮೆ ಸುದ್ದಿ ಬೆನ್ನಲ್ಲೇ ತಮಿಳುನಾಡು ಬಿಜೆಪಿಯಲ್ಲಿ ಆಂತರಿಕ ಬಿಕ್ಕಟ್ಟು ಸ್ಫೋಟಗೊಂಡಿದೆ. ಅಣ್ಣಾಮಲೈ ಅವರ ನಿರ್ಗಮನದಿಂದ ಬೇಸತ್ತು ತಮಿಳುನಾಡು ಬಿಜೆಪಿ ಮೀನುಗಾರರ ಘಟಕದ ಅಧ್ಯಕ್ಷ ಎಂ.ಸಿ. ಮುನುಸ್ವಾಮಿ ಅವರೂ ಸಹ ಇಂದು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಇದು ತಮಿಳುನಾಡಿನಲ್ಲಿ ಬಿಜೆಪಿ ಸಂಪೂರ್ಣವಾಗಿ ನೆಲಕಚ್ಚುವ ಭೀತಿಯನ್ನು ಹುಟ್ಟುಹಾಕಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Karnataka Weather Forecast: ಮೇ 26ಕ್ಕೆ ಕೈಕೊಟ್ಟ ಮುಂಗಾರು, ಜೂ.4ಕ್ಕೆ ಪ್ರವೇಶ: ಕರ್ನಾಟಕದಲ್ಲಿ ಮುಂದಿನ 9 ದಿನ ಭಾರೀ ಮಳೆ – Kannada News

ಬೆಂಗಳೂರು (ಜೂ.02): ನೈಋತ್ಯ ಮುಂಗಾರು (monsoon)  ಪ್ರವೇಶದ ಹಿನ್ನೆಲೆಯಲ್ಲಿ, ಚಂಡಮಾರುತದ ಸುಳಿ ಹಾಗೂ ಟ್ರಫ್ ಪ್ರಭಾವದಿಂದಾಗಿ ಕರ್ನಾಟಕದಾದ್ಯಂತ ಇಂದಿನಿಂದ ಅಂದರೆ ಜೂನ್ 2ರಿಂದ 9 ದಿನಗಳ ಕಾಲ  ಭಾರೀ ಮಳೆಯಾಗುವ (Karnataka Rain) ನಿರೀಕ್ಷೆಯಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (Karnataka State Natural Disaster Monitoring Centre)  ಮುನ್ಸೂಚನೆ ನೀಡಿದೆ. ಕರಾವಳಿ, ಉತ್ತರ ಮತ್ತು ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಿಗೆ ಹಳದಿ ಅಲರ್ಟ್ ಘೋಷಸಲಾಗಿದೆ. ಇನ್ನು ಮೇ 26ಕ್ಕೆ ಮುಂಗಾರು ಪ್ರವೇಶಿಸಲಿದೆ ಎನ್ನಲಾಗಿತ್ತು. ಆದ್ರೆ, ಕೈಕೊಟ್ಟಿದ್ದು, ಜೂನ್ 4ರಂದು ಕೇರಳಕ್ಕೆ ಮುಂಗಾರು ಪ್ರವೇಶಿಸಲಿದ್ದು, ಬಳಿಕ ಜೂನ್ 7 ಅಥವಾ 8ಕ್ಕೆ ಕರ್ನಾಟಕಕ್ಕೆ ಪ್ರವೇಶಿಸಲಿದೆ.

ಮುಖ್ಯಾಂಶಗಳು

  • ಜೂನ್ 4ರಂದು ಕೇರಳಕ್ಕೆ ಮುಂಗಾರು ಪ್ರವೇಶ
  • ಕರ್ನಾಟಕದಲ್ಲಿ ಇಂದಿನಿಂದ 9 ದಿನಗಳ ಕಾಲ ಭಾರೀ ಮಳೆ ಸಾಧ್ಯತೆ
  • ರಾಜ್ಯದಲ್ಲಿ ಮಳೆ ಮುನ್ಸೂಚನೆ ನೀಡಿದ ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ

ಕರ್ನಾಟಕದಲ್ಲಿ 9 ದಿನಗಳ ಕಾಲ ಮಳೆ

02.06.2026 ರಿಂದ 10.06.2026 ರವರೆಗಿನ ಮುಂದಿನ 9 ದಿನಗಳ ರಾಜ್ಯದಲ್ಲಿ ಮಳೆ ಮುನ್ಸೂಚನೆ ಇದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದ್ದು, ಜೂನ್ 02 ಮತ್ತು 03 ರಂದು ರಾಜ್ಯಾದ್ಯಂತ ಅಲ್ಲಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಮಾಹಿತಿ ನೀಡಿದೆ.

ಕರಾವಳಿ ಕರ್ನಾಟಕ ಜೂನ್ 4 ರಂದು ವ್ಯಾಪಕವಾಗಿ ಹಗುರದಿಂದ ಸಾಧಾರಣ ಮಳೆ ಆರಂಭವಾಗಿ ಜೂನ್ 5 ರವರೆಗೆ ಮುಂದುವರಿಯುವ ನಿರೀಕ್ಷೆಯಿದೆ. ಜೂನ್ 06 ರಿಂದ 10 ರವರೆಗೆ ಮಳೆಯ ತೀವ್ರತೆ ಗಣನೀಯವಾಗಿ ಹೆಚ್ಚಾಗಲಿದ್ದು, ಕರಾವಳಿ ಪ್ರದೇಶದಲ್ಲಿ ವ್ಯಾಪಕ ಭಾರಿ ಮಳೆಯಾಗುವ ಮುನ್ಸೂಚನೆ ಇದೆ.

ಇದನ್ನೂ ಓದಿ: Monsoon 2026: ಜೂನ್ 4ರಂದು ಕೇರಳಕ್ಕೆ ಮುಂಗಾರು ಪ್ರವೇಶ; ಕರ್ನಾಟಕದಲ್ಲಿ ಮಳೆಗಾಲ ಯಾವಾಗ ಶುರು?

ಮಲೆನಾಡು ಭಾಗದಲ್ಲಿ ಮಳೆ

ಜೂನ್ 06 ರಿಂದ 10 ರ ಅವಧಿಯಲ್ಲಿ ಮಲೆನಾಡು ಜಿಲ್ಲೆಗಳಲ್ಲಿ ವ್ಯಾಪಕವಾಗಿ ಸಾಧಾರಣದಿಂದ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.

ಉತ್ತರ ಒಳನಾಡು

ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಜೂನ್ 05 ರವರೆಗೆ ಅಲ್ಲಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಜೂನ್ 06 ರಿಂದ ಈ ಪ್ರದೇಶದಾದ್ಯಂತ ಅಲ್ಲಲ್ಲಿ ಹಾಗೂ ವ್ಯಾಪಕವಾಗಿ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ.

ದಕ್ಷಿಣ ಒಳನಾಡು

ಇನ್ನು ಮುನ್ಸೂಚನೆಯ ಇಡೀ ಅವಧಿಯಲ್ಲಿ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಅಲ್ಲಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮಾಹಿತಿ ನೀಡಿದೆ.

ಕರ್ನಾಟಕಕ್ಕೆ ಮುಂಗಾರು ಪ್ರವೇಶ ಯಾವಾಗ ?

ಕಳೆದ ತಿಂಗಳು ಅಂತ್ಯಕ್ಕೆ ಅಂದರೆ ಮೇ 26ರಂದು ಕೇರಳಕ್ಕೆ ಮುಂಗಾರು ಪ್ರವೇಶ ಮಾಡುತ್ತೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿತ್ತು. ಆದ್ರೆ, ಇದೀಗ ಜೂನ್ 4ರಂದು ಅಧಿಕೃತವಾಗಿ ಕೇರಳ ಕರಾವಳಿಯನ್ನು ಪ್ರವೇಶಿಸಲಿದೆ ಎಂದು IMD ಸ್ಪಷ್ಟಪಡಿಸಿದೆ. ಹೀಗಾಗಿ ಸಾಮಾನ್ಯವಾಗಿ ಕೇರಳಕ್ಕೆ ಮುಂಗಾರು ಪ್ರವೇಶಿಸಿದ 3ರಿಂದ 5 ದಿನಗಳ ಒಳಗಾಗಿ ಮಳೆ ಕರ್ನಾಟಕವನ್ನು ತಲುಪುತ್ತದೆ. ಜೂನ್ 4ರಂದು ಕೇರಳಕ್ಕೆ ಮುಂಗಾರು ಪ್ರವೇಶಿಸಿದರೆ, ಜೂನ್ 7 ಅಥವಾ 8ರ ವೇಳೆಗೆ ಕರ್ನಾಟಕದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ಮಲೆನಾಡಿನ ಭಾಗಗಳಿಗೆ ಮುಂಗಾರು ಮಾರುತಗಳು ತಲುಪಲಿವೆ ಎಂದು ಹವಾಮಾನ ತಜ್ಞರು ಅಂದಾಜಿಸಿದ್ದಾರೆ.

ಕರ್ನಾಟಕದ ಮ್ತತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 5:58 pm, Tue, 2 June 26

Source link

1 ಕೋಟಿ ಕೊಟ್ಟು ಗಣೇಶನ ಪುಟ್ಟ ಮೂರ್ತಿ ಖರೀದಿಸಿದ ಹಾಲಿವುಡ್ ಸ್ಟಾರ್ – Kannada News

ಭಾರತೀಯರು ಮಾತ್ರವಲ್ಲ ಹಲವು ಹಾಲಿವುಡ್ (Hollywood) ಸ್ಟಾರ್ ನಟ, ನಟಿಯರು, ಉದ್ಯಮಿಗಳು, ಕೆಲ ವಿಜ್ಞಾನಿಗಳು ಸಹ ಹಿಂದೂ ದೇವತೆಗಳಲ್ಲಿ ನಂಬಿಕೆ ಇಟ್ಟಿದ್ದಾರೆ. ಈ ಬಗ್ಗೆ ಹಲವರು ಬಹಿರಂಗವಾಗಿ ಹೇಳಿಕೊಂಡಿದ್ದಾರೆ ಅವರಲ್ಲಿ ಪ್ರಮುಖರೆಂದರೆ ಸ್ಟಾರ್ ನಟಿ ಜೂಲಿಯಾ ರಾಬರ್ಟ್ಸ್, ನಟ ರಸಲ್ ಬ್ರ್ಯಾಂಡ್, ರಾಬರ್ಟ್ ಡೌನಿ ಜೂನಿಯರ್ (ಐರನ್ ಮ್ಯಾನ್) ಇನ್ನೂ ಹಲವು ಹಾಲಿವುಡ್ ಸ್ಟಾರ್ ನಟ, ನಟಿಯರು ತಾವು ಹಿಂದೂ ದೇವತೆಗಳ ಆರಾಧಕರು ಎಂದು ಹೇಳಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಖ್ಯಾತ ಹಾಲಿವುಡ್ ನಟ, ಆಸ್ಕರ್ ವಿಜೇತ ವಿಲ್ ಸ್ಮಿತ ಸಹ ಸೇರಿದ್ದಾರೆ. ಇತ್ತೀಚೆಗಷ್ಟೆ ವಿಲ್ ಸ್ಮಿತ್ ಅವರು ಗಣೇಶನ ಹಾರವೊಂದನ್ನು ಖರೀದಿಸಿ ಕೊರಳಿಗೆ ಧರಿಸಿದ್ದಾರೆ.

ವಿಲ್ ಸ್ಮಿತ್, ಮುಂಚಿನಿಂದಲೂ ಹಿಂದೂ ದೇವತೆಗಳ ಮೇಲೆ, ಧರ್ಮದ ಮೇಲೆ ನಂಬಿಕೆ ಇಟ್ಟಿರುವ ವ್ಯಕ್ತಿಯಾಗಿದ್ದಾರೆ. ಈ ಬಗ್ಗೆ ಕೆಲವು ಬಾರಿ ಮಾತನಾಡಿದ್ದೂ ಸಹ ಇದೆ. ವಿಲ್ ಸ್ಮಿತ್ ಭಾರತದೊಂದಿಗೆ ಆಪ್ತ ನಂಟು ಸಹ ಹೊಂದಿದ್ದಾರೆ. ಇತ್ತೀಚೆಗಷ್ಟೆ ಅವರು ಒಂದು ಕೋಟಿ ರೂಪಾಯಿ ನೀಡಿ ಗಣೇಶ ಮೂರ್ತಿಯ ಲಾಕೆಟ್ ಒಂದನ್ನು ಖರೀದಿಸಿ ಕೊರಳಿಗೆ ಧರಿಸಿದ್ದಾರೆ. ಅವರು ಗಣೇಶನ ಮೂರ್ತಿಯ ಲಾಕೆಟ್ ಖರೀದಿಸಿರುವ ವಿಡಿಯೋ ಇದೀಗ ಸಖತ್ ವೈರಲ್ ಆಗಿದೆ.

ಇದನ್ನೂ ಓದಿ:ಹಾಲಿವುಡ್ ಖ್ಯಾತ ನಟಿಗೆ ಪ್ರಭಾಸ್ ಸಿನಿಮಾ ಬಲು ಇಷ್ಟವಂತೆ

ವಿಲ್ ಸ್ಮಿತ್ ಅವರು ದೆಹಲಿಯ ಸುಂದರ್ ನಗರ್​​ನಲ್ಲಿನ ಮೋತಿ ಜ್ಯುವೆಲ್ಸ್ ಪ್ಯಾಲೆಸ್​ ಅವರಿಂದ ಚಿನ್ನ ಮತ್ತು ವಜ್ರದಿಂದ ಮಾಡಿರುವ ಗಣೇಶನ ಮೂರ್ತಿಯನ್ನು ಖರೀದಿಸಿದ್ದಾರೆ. ಮೋತಿ ಜ್ಯುವೆಲ್ಸ್​​ನ ಮಾಲೀಕ ಲಂಡನ್​​ಗೆ ಹೋಗಿ ಅಲ್ಲಿ ವಿಲ್ ಸ್ಮಿತ್ ಅವರನ್ನು ಭೇಟಿಯಾಗಿ ಅವರಿಗೆ ಗಣೇಶನ ಲಾಕೆಟ್ ಅನ್ನು ನೀಡಿದ್ದಾರೆ. ಬಲು ಖುಷಿಯಿಂದ ಲಾಕೆಟ್ ಅನ್ನು ಪಡೆದು, ಅದರ ವಿವರಣೆಗಳನ್ನು ಆಸಕ್ತಿಯಿಂದ ಕೇಳಿದ ವಿಲ್ ಸ್ಮಿತ್ ಅವರು, ‘ಇದು ನಿಜಕ್ಕೂ ಖುಷಿಯ ಕ್ಷಣ’ ಎಂದು ಬಣ್ಣಿಸಿದ್ದಾರೆ.

ವಿಲ್ ಸ್ಮಿತ್, ಹಾಲಿವುಡ್​ನ ಬ್ಲಾಕ್ ಬಸ್ಟರ್ ಸಿನಿಮಾಗಳಾದ ‘ಮೆನ್ ಇನ್ ಬ್ಲಾಕ್’, ‘ಇಂಡಿಪೆಂಡೆನ್ಸ್ ಡೇ’, ‘ಬ್ಯಾಡ್ ಬಾಯ್ಸ್’, ‘ಎನಿಮಿ ಆಫ್ ದಿ ಸ್ಟೇಟ್’, ‘ಐ ರೊಬಾಟ್’, ‘ದಿ ಪರ್ಸ್ಯೂಟ್ ಆಫ್ ಹ್ಯಾಪಿನೆಸ್’, ‘ಸೂಸೈಡ್ ಸ್ಕ್ವಾಡ್’, ‘ಅಲ್ಲಾದಿನ್’ ಇನ್ನೂ ಹಲವಾರು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಕಿಂಗ್ ರಿಚರ್ಡ್ಸ್’ ಸಿನಿಮಾದ ನಟನೆಗೆ ಅವರಿಗೆ ಆಸ್ಕರ್ ಸಹ ಲಭಿಸಿದೆ. ಅಂದಹಾಗೆ ವಿಲ್ ಸ್ಮಿತ್ ಅವರು ಬಾಲಿವುಡ್​ನ ‘ಸ್ಟುಡೆಂಟ್ ಆಫ್ ದಿ ಇಯರ್ 2’ ಸಿನಿಮಾನಲ್ಲಿ ಅತಿಥಿ ಪಾತ್ರದಲ್ಲಿ ಸಹ ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಹೊಸ ಸರ್ಕಾರ ರಚನೆ ಬೆನ್ನಲ್ಲೇ ಪೊಲೀಸ್ ಇಲಾಖೆಗೆ ಮೇಜರ್​​ ಸರ್ಜರಿ ನಿರೀಕ್ಷೆ: ಏನೆಲ್ಲ ಬದಲಾವಣೆ ಸಾಧ್ಯತೆ? – Kannada News

ಪೊಲೀಸ್​​ ಇಲಾಖೆಗೆ ಮೇಜರ್​​ ಸರ್ಜರಿ ಸಾಧ್ಯತೆImage Credit source: Tv9 Kannada

ಬೆಂಗಳೂರು, ಜೂನ್​​ 02: ಕರ್ನಾಟಕದಲ್ಲಿ ಹೊಸ ಸರ್ಕಾರ ರಚನೆಯಾಗುತ್ತಿದ್ದಂತೆ, ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆಗಳಿಗೆ ಸಿದ್ಧತೆ ನಡೆದಿದೆ. ಸಾಮಾನ್ಯವಾಗಿ ಹೊಸ ಮುಖ್ಯಮಂತ್ರಿ ಅಧಿಕಾರ ವಹಿಸಿಕೊಂಡಾಗ, ತಮ್ಮ ಆಪ್ತ ಹಾಗೂ ವಿಶ್ವಾಸಾರ್ಹ ಅಧಿಕಾರಿಗಳನ್ನು ಒಳಗೊಂಡ ಕೋರ್ ಟೀಮ್ ರಚಿಸುವುದು ವಾಡಿಕೆ. ಇದರ ಭಾಗವಾಗಿ, ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ನಡೆಯುವ ಸಾಧ್ಯತೆ ಇದೆ. ಡಿಜಿಪಿ, ಎಡಿಜಿಪಿ ಮತ್ತು ಬೆಂಗಳೂರು ನಗರ ಪೊಲೀಸ್ ಆಯುಕ್ತರು ಸೇರಿದಂತೆ ಹಲವು ಉನ್ನತ ಶ್ರೇಣಿಯ ಅಧಿಕಾರಿಗಳ ವರ್ಗಾವಣೆ ಆಗಲಿದೆ ಎನ್ನಲಾಗಿದೆ.

ಗುಪ್ತಚರ ಇಲಾಖೆಗೆ ಹೊಸ ಮುಖ್ಯಸ್ಥ?

https://www.youtube.com/watch?v=ANjmi9SSnPY

ಪ್ರಮುಖವಾಗಿ, ರಾಜ್ಯ ಗುಪ್ತಚರ ಇಲಾಖೆಗೆ ಹೊಸ ಮುಖ್ಯಸ್ಥರ ನೇಮಕದ ನಿರೀಕ್ಷೆಯಿದೆ. ಪ್ರಸ್ತುತ, ಐಜಿಪಿ ಶ್ರೇಣಿಯ ಲಾಬು ರಾಮ್ ಅವರು ಗುಪ್ತಚರ ಇಲಾಖೆಯ ಹೆಚ್ಚುವರಿ ಹೊಣೆಯನ್ನು ನಿಭಾಯಿಸುತ್ತಿದ್ದಾರೆ. ಅವರನ್ನು ಈ ಹೆಚ್ಚುವರಿ ಜವಾಬ್ದಾರಿಯಿಂದ ಮುಕ್ತಿಗೊಳಿಸಿ, ನೂತನ ಮುಖ್ಯಸ್ಥರನ್ನ ನೇಮಿಸುವ ಸಾಧ್ಯತೆ ಇದೆ. ಗುಪ್ತಚರ ಇಲಾಖೆಯ ಮುಖ್ಯಸ್ಥರ ಹುದ್ದೆ ಮುಖ್ಯಮಂತ್ರಿಗಳಿಗೆ ರಾಜ್ಯದ ರಾಜಕೀಯ ಮತ್ತು ಇತರೆ ಪ್ರಮುಖ ಬೆಳವಣಿಗೆಗಳ ಕುರಿತು ಮಾಹಿತಿ ಒದಗಿಸುವ ಪ್ರಮುಖ ಕೀ ಪೋಸ್ಟ್ ಆಗಿದೆ. ಹೀಗಾಗಿ, ತಮ್ಮ ವಿಶ್ವಾಸಾರ್ಹ ಅಧಿಕಾರಿಯನ್ನು ಈ ಹುದ್ದೆಗೆ ನೇಮಕ ಮಾಡಲು ಹೊಸ ಸರ್ಕಾರ ಮುಂದಾಗಿದೆ.

ಇದನ್ನೂ ಓದಿ: ಡಿಕೆ ಶಿವಕುಮಾರ್ ಸಂಪುಟ ಸೇರಲು ಆಕಾಂಕ್ಷಿಗಳ ಭರ್ಜರಿ ಲಾಬಿ, ದೆಹಲಿ ದಂಡಯಾತ್ರೆ; ಸ್ಪೀಕರ್ ಆಗಲು ನಾಯಕರ ಹಿಂದೇಟು

ನಗರ ಪೊಲೀಸ್ ಆಯುಕ್ತರ ಬದಲಾವಣೆಯೂ ಖಚಿತ!

ಬೆಂಗಳೂರು ನಗರ ಪೊಲೀಸ್ ಆಯುಕ್ತರ ಬದಲಾವಣೆಯೂ ಖಚಿತವಾಗಿದೆ. ಅವರ ಜಾಗಕ್ಕೆ ಯಾರು ಬರುತ್ತಾರೆ ಎಂಬ ಕುತೂಹಲವಿದ್ದು, ಡಿಜಿಪಿ ಶ್ರೇಣಿಯ ಅಧಿಕಾರಿಗಳನ್ನೂ ಸಹ ವರ್ಗಾವಣೆ ಮಾಡಲು ನೂತನ ಸರ್ಕಾರ ತೀರ್ಮಾನಿಸಿದೆ. ಐಪಿಎಸ್ ಅಧಿಕಾರಿಗಳಷ್ಟೇ ಅಲ್ಲದೆ, ಐಎಎಸ್ ಅಧಿಕಾರಿಗಳು, ಅದರಲ್ಲೂ ಮುಖ್ಯಮಂತ್ರಿಗಳ ವೈಯಕ್ತಿಕ ಕಾರ್ಯದರ್ಶಿಗಳಂತಹ ಪ್ರಮುಖ ಹುದ್ದೆಗಳಲ್ಲೂ ಬದಲಾವಣೆಗಳು ನಿರೀಕ್ಷಿತವಾಗಿವೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಮಾಣ ವಚನ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಈ ವರ್ಗಾವಣೆ ಪ್ರಕ್ರಿಯೆಗಳು ಆರಂಭವಾಗಲಿವೆ ಎಂದು ಹೇಳಲಾಗಿದೆ. ಈಗಾಗಲೇ ಪೊಲೀಸ್ ಇಲಾಖೆಯಲ್ಲಿ ಯಾರು ಬರುತ್ತಾರೆ, ಯಾರು ಹೋಗುತ್ತಾರೆ ಎಂಬ ಬಗ್ಗೆ ವ್ಯಾಪಕ ಚರ್ಚೆಗಳೂ ನಡೆಯುತ್ತಿವೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 6:03 pm, Tue, 2 June 26

Source link

ಅಗತ್ಯ ಸಂದರ್ಭದಲ್ಲೇ ಹೆಲ್ತ್ ಇನ್ಷೂರೆನ್ಸ್ ಕ್ಯಾಷ್​ಲೆಸ್ ಕೈಕೊಡಬಹುದು; ಇಲ್ಲಿವೆ ಪ್ರಮುಖ ಕಾರಣಗಳು – Kannada News

ಹೆಲ್ತ್ ಇನ್ಷೂರೆನ್ಸ್Image Credit source: Shutterstock

ಆರೋಗ್ಯ ವಿಮೆಯಲ್ಲಿ ‘ಕ್ಯಾಶ್‌ಲೆಸ್’ ಸೌಲಭ್ಯವು (cashless health insurance) ಆಸ್ಪತ್ರೆಗೆ ದಾಖಲಾಗುವ ಪ್ರಕ್ರಿಯೆಯನ್ನು ಸುಲಭಗೊಳಿಸಲು ಮತ್ತು ಆರ್ಥಿಕ ಒತ್ತಡವನ್ನು ಕಡಿಮೆ ಮಾಡಲು ವಿನ್ಯಾಸಗೊಳಿಸಲಾಗಿದೆ. ಆದರೆ, ಪಾಲಿಸಿ ಚಾಲ್ತಿಯಲ್ಲಿದ್ದರೂ ಸಹ ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ ವಿಮಾ ಕಂಪನಿಗಳು ತಕ್ಷಣವೇ ಕ್ಯಾಶ್‌ಲೆಸ್ ಅನುಮತಿ ನೀಡಲು ನಿರಾಕರಿಸುತ್ತವೆ. ‘ಪಾಲಿಸಿಬಜಾರ್’ ಇನ್ಶೂರೆನ್ಸ್ ಬಿಸಿನೆಸ್ ಹೆಡ್ ಸಿದ್ಧಾರ್ಥ್ ಸಿಂಘಾಲ್ ಈ ಕುರಿತು ಒಂದಷ್ಟು ಉಪಯುಕ್ತವೆನಿಸುವ ಮಾಹಿತಿ ಹಂಚಿಕೊಂಡಿದ್ದಾರೆ.

ಕ್ಯಾಶ್‌ಲೆಸ್ ಕ್ಲೈಮ್ ತಿರಸ್ಕೃತಗೊಳ್ಳಲು 5 ಪ್ರಮುಖ ಕಾರಣಗಳು

ಹೆಲ್ತ್ ಇನ್ಷೂರೆನ್ಸ್ ಪಾಲಿಸಿ 25 ಲಕ್ಷ ರೂ ಮೊತ್ತದ್ದಾಗಿದ್ದರೂ ಕ್ಯಾಷ್​ಲೆಸ್ ಕವರೇಜ್ ಆಗಿಯೇಬಿಡುತ್ತೆ ಎನ್ನುವ ಖಾತ್ರಿ ಇರೋದಿಲ್ಲ. ಕ್ಯಾಷ್ಲೆಸ್ ಕವರೇಜ್ ಸಿಗದೇ ಇರಲು, ಅಥವಾ ಅನುಮೋದನೆಗೆ ವಿಳಂಬವಾಗಲು ಬೇರೆ ಬೇರೆ ಕಾರಣಗಳಿರಬಹುದು. ಸಿದ್ಧಾರ್ಥ್ ಸಿಂಘಾಲ್ ಕೆಲ ಪ್ರಮುಖ ಕಾರಣಗಳನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಭಾರತ ಈಗ ಗ್ಲೋಬಲ್ ಬ್ಯಾಕ್ ಆಫೀಸ್ ಮಾತ್ರವೇ ಅಲ್ಲ, ವಿಶ್ವದರ್ಜೆ ಪ್ರಾಡಕ್ಟ್ ನೀಡುವ ದೇಶವಾಗಿದೆ: ಪ್ರಸಾದ್ ಷಣ್ಮುಗಂ

  1. ವೇಟಿಂಗ್ ಪೀರಿಯಡ್ (Waiting Period) ನಿರ್ಬಂಧಗಳು: ಆರೋಗ್ಯ ವಿಮೆ ಖರೀದಿಸಿದ ತಕ್ಷಣ ಎಲ್ಲ ಕಾಯಿಲೆಗಳಿಗೂ ಕವರೇಜ್ ಸಿಗುವುದಿಲ್ಲ. ಆರಂಭಿಕ ದಿನಗಳು, ನಿರ್ದಿಷ್ಟ ಕಾಯಿಲೆಗಳು ಅಥವಾ ಮೊದಲೇ ಇರುವ ಕಾಯಿಲೆಗಳಿಗೆ (Pre-existing diseases) ಪಾಲಿಸಿಯಲ್ಲಿ ನಿರ್ದಿಷ್ಟ ‘ವೇಟಿಂಗ್ ಪೀರಿಯಡ್’ ಇರುತ್ತದೆ. ಈ ಅವಧಿ ಮುಗಿಯುವ ಮುನ್ನವೇ ಆ ಕಾಯಿಲೆಗೆ ಚಿಕಿತ್ಸೆ ಪಡೆದರೆ ಕ್ಯಾಶ್‌ಲೆಸ್ ಸೌಲಭ್ಯ ಸಿಗುವುದಿಲ್ಲ.
  2. ಆರೋಗ್ಯದ ಮಾಹಿತಿ ಮುಚ್ಚಿಡುವುದು (Non-Disclosure): ವಿಮೆ ಖರೀದಿಸುವ ಸಮಯದಲ್ಲಿ ಮಧುಮೇಹ (Diabetes), ರಕ್ತದೊತ್ತಡ (Hypertension), ಥೈರಾಯ್ಡ್ ಅಥವಾ ಹಿಂದಿನ ಶಸ್ತ್ರಚಿಕಿತ್ಸೆಗಳಂತಹ ಪ್ರಮುಖ ಆರೋಗ್ಯ ಇತಿಹಾಸವನ್ನು ಪಾಲಿಸಿದಾರರು ಸರಿಯಾಗಿ ತಿಳಿಸದಿದ್ದರೆ, ವಿಮಾ ಕಂಪನಿಯು ಕ್ಲೈಮ್ ಅನ್ನು ತಡೆಹಿಡಿಯುತ್ತದೆ ಮತ್ತು ಹೆಚ್ಚುವರಿ ತಪಾಸಣೆಗೆ ಒಳಪಡಿಸುತ್ತದೆ.
  3. ಪಾಲಿಸಿಯಿಂದ ಹೊರಗಿಡಲಾದ ಚಿಕಿತ್ಸೆಗಳು (Exclusions): ಪ್ರತಿಯೊಂದು ವಿಮಾ ಪಾಲಿಸಿಯಲ್ಲೂ ಕೆಲವು ನಿರ್ದಿಷ್ಟ ಚಿಕಿತ್ಸೆಗಳು ಅಥವಾ ವೈದ್ಯಕೀಯ ವೆಚ್ಚಗಳನ್ನು ಕವರ್ ಮಾಡಲಾಗುವುದಿಲ್ಲ (Exclusions) ಎಂದು ಸ್ಪಷ್ಟವಾಗಿ ಬರೆಯಲಾಗಿರುತ್ತದೆ. ಗ್ರಾಹಕರು ಪಾಲಿಸಿ ದಾಖಲೆಗಳನ್ನು ಸರಿಯಾಗಿ ಓದದೆ ಆಸ್ಪತ್ರೆಗೆ ದಾಖಲಾದಾಗ ಈ ಸಮಸ್ಯೆ ಎದುರಾಗುತ್ತದೆ.
  4. ದಾಖಲೆಗಳ ಸಲ್ಲಿಕೆಯಲ್ಲಿ ವಿಳಂಬ: ಕ್ಯಾಶ್‌ಲೆಸ್ ಪ್ರಕ್ರಿಯೆಯಲ್ಲಿ ಆಸ್ಪತ್ರೆಗಳ ಪಾತ್ರವೂ ದೊಡ್ಡದಿದೆ. ಆಸ್ಪತ್ರೆಯು ರೋಗಿಯ ವೈದ್ಯಕೀಯ ವರದಿಗಳು, ಇನ್ವೆಸ್ಟಿಗೇಷನ್ ರಿಪೋರ್ಟ್‌ಗಳು ಅಥವಾ ಕೆವೈಸಿ (KYC) ದಾಖಲೆಗಳನ್ನು ವಿಮಾ ಕಂಪನಿಗೆ ಸಲ್ಲಿಸಲು ವಿಳಂಬ ಮಾಡಿದರೆ ಅಥವಾ ಅಪೂರ್ಣ ಮಾಹಿತಿ ನೀಡಿದರೆ ಕ್ಯಾಶ್‌ಲೆಸ್ ಅನುಮತಿ ಸಿಗುವುದು ತಡವಾಗುತ್ತದೆ.
  5. ಹೊಸ ಪಾಲಿಸಿಗಳ ಮೇಲಿನ ತೀವ್ರ ನಿಗಾ: ವಿಮೆ ಖರೀದಿಸಿದ ಕೆಲವೇ ದಿನಗಳಲ್ಲಿ ಅಥವಾ ತಿಂಗಳುಗಳಲ್ಲಿ ಕ್ಲೈಮ್ ಫೈಲ್ ಮಾಡಿದರೆ, ವಿಮಾ ಕಂಪನಿಗಳು ಆ ಕೇಸ್ ಅನ್ನು ಅತ್ಯಂತ ಸೂಕ್ಷ್ಮವಾಗಿ ಪರಿಶೀಲಿಸುತ್ತವೆ. ಯಾವುದೇ ಅಕ್ರಮ ಅಥವಾ ಮಾಹಿತಿ ಮುಚ್ಚಿಡುವಿಕೆ ನಡೆದಿಲ್ಲ ಎಂಬುದನ್ನು ಖಚಿತಪಡಿಸಿಕೊಂಡ ನಂತರವಷ್ಟೇ ಅನುಮತಿ ನೀಡಲಾಗುತ್ತದೆ.

ಇದನ್ನೂ ಓದಿ: ಪ್ಲಂಬರ್, ಎಲೆಕ್ಟ್ರಿಶಿಯನ್​ಗೂ ತಪ್ಪೋದಿಲ್ಲವಂತೆ ಎಐ ಕಂಟಕ; ಕೃತಕ ಬುದ್ಧಿಮತ್ತೆ ಪ್ಲಂಬಿಂಗ್ ಕೆಲಸ ಹೇಗೆ ಮಾಡುತ್ತೆ?

ವಿಮೆ ಖರೀದಿಸುವಾಗ ಕೇವಲ ಪ್ರೀಮಿಯಂ ಮೊತ್ತ ಮತ್ತು ‘ಸಮ್ ಇನ್ಶೂರ್ಡ್’ (ಒಟ್ಟು ವಿಮಾ ಮೊತ್ತ) ಅಷ್ಟನ್ನೇ ನೋಡಬೇಡಿ. ಪಾಲಿಸಿಯಲ್ಲಿರುವ ನಿಯಮಗಳು, ವೇಟಿಂಗ್ ಪೀರಿಯಡ್ ಮತ್ತು ಯಾವೆಲ್ಲಾ ಕಾಯಿಲೆಗಳು ಕವರ್ ಆಗುವುದಿಲ್ಲ (Exclusions) ಎಂಬುದನ್ನು ಕೂಲಂಕಷವಾಗಿ ಓದಿ ತಿಳಿದುಕೊಳ್ಳುವುದು ಅತ್ಯಗತ್ಯ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಶಾಸಕರ ಗಮನಕ್ಕೆ: ಟ್ಯಾಂಕ್ ಇದೆ, ಬೋರ್‌ವೆಲ್ ಇದೆ.. ಆದ್ರೆ ನೀರಿಲ್ಲ! ಬೆಳ್ತಂಗಡಿಯ ಬೆಳಾಲು ಗ್ರಾಮದ ಜನರಿಗೆ ಕಲುಷಿತ ಗುಂಡಿ ನೀರೇ ಗತಿ – Kannada News

ಬೆಳ್ತಂಗಡಿ, ಜೂ.2: ತಾಲೂಕಿನ ಬೆಳಾಲು ಗ್ರಾಮದ ಮಾಯ ಪರಿಸರದ ಮುಂಡ್ರೋಟ್ಟು ಎಂಬಲ್ಲಿನ ನಿವಾಸಿಗಳು ತೀವ್ರ ಕುಡಿಯುವ ನೀರಿನ ಸಮಸ್ಯೆಯಿಂದ ತತ್ತರಿಸುತ್ತಿದ್ದು, ದೈನಂದಿನ ಬಳಕೆಗಾಗಿ ಕಲುಷಿತಗೊಂಡ ಹೊಂಡದ ನೀರನ್ನೇ ಆಶ್ರಯಿಸಬೇಕಾದ ದಾರುಣ ಸ್ಥಿತಿ ನಿರ್ಮಾಣವಾಗಿದೆ. ಈ ಭಾಗದ ಸಣ್ಣ ಹೊಂಡ ಅಥವಾ ಗುಂಡಿಗಳಲ್ಲಿ ಶೇಖರಣೆಯಾಗುವ, ಕೀಟ ಹಾಗೂ ಕಸಕಡ್ಡಿಗಳಿಂದ ಕಲುಷಿತಗೊಂಡಿರುವ ಅಶುದ್ಧ ನೀರನ್ನೇ ಇಲ್ಲಿನ ಮಹಿಳೆಯರು ಮತ್ತು ಮಕ್ಕಳು ಕೊಡಗಳಲ್ಲಿ ತುಂಬಿಸಿಕೊಂಡು ಹೋಗುತ್ತಿದ್ದಾರೆ. ಕುಡಿಯಲು, ಅಡುಗೆ ಮಾಡಲು ಹಾಗೂ ಸ್ನಾನ ಸೇರಿದಂತೆ ಇತರೆ ಎಲ್ಲಾ ಗೃಹ ಬಳಕೆಗೂ ಇದೇ ನೀರನ್ನು ಬಳಸುತ್ತಿರುವುದರಿಂದ ಸ್ಥಳೀಯರ ಆರೋಗ್ಯದ ಮೇಲೆ ತೀವ್ರ ನಿಗಾ ಇಡಬೇಕಾದ ಆತಂಕ ಎದುರಾಗಿದೆ. ಈ ಬಗ್ಗೆ ವಿಜೆ ಶಿವು (@vj___shivu) ಎಂಬ ಇನ್ಸ್ಟಾಗ್ರಾಮ್​​​​​​​​ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಅಕ್ರೋಶ ವ್ಯಕ್ತವಾಗಿದೆ.

ಸ್ಥಳೀಯರ ಆಕ್ರೋಶಕ್ಕೆ ಮುಖ್ಯ ಕಾರಣವೆಂದರೆ, ಈ ಮುಂಡ್ರೋಟ್ಟು ನಿವಾಸಿಗಳ ಮನೆಯಿಂದ ಕೇವಲ 500 ಮೀಟರ್‌ ದೂರದಲ್ಲೇ ಗ್ರಾಮೀಣ ನೀರು ಸರಬರಾಜು ಯೋಜನೆಯಡಿ ನಿರ್ಮಿಸಲಾದ ಬೃಹತ್ ಓವರ್‌ಹೆಡ್ ವಾಟರ್ ಟ್ಯಾಂಕ್, ಬೋರ್‌ವೆಲ್ ಮತ್ತು ಮೋಟಾರ್ ಶೆಡ್‌ಗಳಿವೆ. ಕಳೆದ ನಾಲ್ಕು ವರ್ಷಗಳಿಂದ ಈ ಯೋಜನೆಯ ಕಾಮಗಾರಿಗಳು ನಡೆಯುತ್ತಿದ್ದು, ಪ್ರಸ್ತುತ ಕಾಮಗಾರಿ ಬಹುತೇಕ ಅಂತಿಮ ಹಂತ ತಲುಪಿದ್ದರೂ ಸಹ ಸಾರ್ವಜನಿಕರಿಗೆ ಮಾತ್ರ ಇನ್ನು ನೀರು ಸರಬರಾಜಾಗಿಲ್ಲ.

ವಿಡಿಯೋ ಇಲ್ಲಿದೆ ನೋಡಿ:

ಗ್ರಾಮ ಪಂಚಾಯತ್ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ:

“ಎಲ್ಲಾ ವ್ಯವಸ್ಥೆಗಳು ಕಣ್ಣೆದುರೇ ಇದ್ದರೂ ಸ್ಥಳೀಯ ಗ್ರಾಮ ಪಂಚಾಯತ್ ಆಡಳಿತದ ನಿರ್ಲಕ್ಷ್ಯ ಮತ್ತು ಸಮನ್ವಯದ ಕೊರತೆಯಿಂದಾಗಿ ನಮಗೆ ನೀರು ಸಿಗುತ್ತಿಲ್ಲ” ಎಂದು ಸ್ಥಳೀಯ ನಿವಾಸಿಗಳು ತೀವ್ರ ಆಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರತಿ ದಿನವೂ ದೂರದ ಹೊಂಡಗಳಿಂದ ನೀರನ್ನು ತಲೆಹೊತ್ತು ತರುವುದು ಇಲ್ಲಿನ ಮಹಿಳೆಯರಿಗೆ ಕಡು ಕಷ್ಟದ ಕೆಲಸವಾಗಿ ಪರಿಣಮಿಸಿದೆ.

ಇದನ್ನೂ ಓದಿ: ಮಂಗಳೂರಿನಿಂದ ಮಂತ್ರಾಲಯಕ್ಕೆ ನೇರ ಸಂಪರ್ಕ; ಜೂನ್ ಪೂರ್ತಿ ಓಡಲಿದೆ 24 ಬೋಗಿಗಳ ಬೃಹತ್ ವಿಶೇಷ ರೈಲು!

ಈ ಗಂಭೀರ ಸಮಸ್ಯೆಯು ಇನ್ನು ಕೂಡ ಕ್ಷೇತ್ರದ ಶಾಸಕರ ಗಮನಕ್ಕೆ ಬಂದಿಲ್ಲ ಎನ್ನಲಾಗುತ್ತಿದ್ದು, ಸ್ಥಳೀಯ ಸಾಮಾಜಿಕ ಕಾರ್ಯಕರ್ತರು ಮತ್ತು ನಿವಾಸಿಗಳು ಈ ದುಸ್ಥಿತಿಯ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಶಾಸಕರ ಗಮನ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತಕ್ಷಣವೇ ಎಚ್ಚೆತ್ತುಕೊಂಡು, ಸಿದ್ಧವಾಗಿರುವ ನೀರಿನ ಟ್ಯಾಂಕ್ ಮೂಲಕ ಮುಂಡ್ರೋಟ್ಟು ಪರಿಸರದ ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸಬೇಕಾಗಿ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಿಮ್ಮ ಚರ್ಮ ಮತ್ತು ಕೂದಲು ಡ್ಯಾಮೇಜ್ ಆಗುವುದಕ್ಕೆ ಹೈ ಬ್ಲಡ್ ಶುಗರ್ ಕಾರಣವೇ? – Kannada News

ಇತ್ತೀಚಿನ ದಿನಗಳಲ್ಲಿ ಮಧುಮೇಹ (ಡಯಾಬಿಟಿಸ್) ಮತ್ತು ಹೈ ಬ್ಲಡ್ ಶುಗರ್ (High Blood Sugar) ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸಾಮಾನ್ಯವಾಗಿ ಜನರು ಇದರ ಪರಿಣಾಮ ಹೃದಯ, ಮೂತ್ರಪಿಂಡ ಮತ್ತು ಕಣ್ಣುಗಳ ಆರೋಗ್ಯದ ಮೇಲಾಗುತ್ತದೆ ಎಂದು ಭಾವಿಸಿರುತ್ತಾರೆ. ಆದರೆ ಹೆಚ್ಚಿದ ರಕ್ತದ ಸಕ್ಕರೆ ಮಟ್ಟವು ಚರ್ಮ ಮತ್ತು ಕೂದಲಿನ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹೌದು, ಇವೆಲ್ಲಾ ಕೇಳುವುದಕ್ಕೆ ಆಶ್ಚರ್ಯವಾಗುತ್ತದೆ ಆದರೆ ಇದು ಸತ್ಯ. ಹಾಗಾಗಿ ಹೈ ಬ್ಲಡ್ ಶುಗರ್ ಚರ್ಮ ಮತ್ತು ಕೂದಲಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ, ಯಾವ ರೀತಿಯ ಲಕ್ಷಣ ಕಂಡು ಬಂದಾಗ ಪರೀಕ್ಷೆ ಮಾಡಿಸಬೇಕು, ಹೈ ಬ್ಲಡ್ ಶುಗರ್ ಸಮಸ್ಯೆಯನ್ನು ಹೇಗೆ ತಡೆಗಟ್ಟಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಚರ್ಮ ಮತ್ತು ಕೂದಲಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

ಅಮೆರಿಕನ್ ಡಯಾಬಿಟಿಸ್ ಅಸೋಸಿಯೇಷನ್ ಪ್ರಕಾರ, ದೀರ್ಘಕಾಲದವರೆಗೆ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗಿದ್ದರೆ ದೇಹದ ರಕ್ತಸಂಚಾರ ವ್ಯವಸ್ಥೆಯ ಮೇಲೆ ಪರಿಣಾಮ ಉಂಟಾಗುತ್ತದೆ. ಇದರ ಪರಿಣಾಮವಾಗಿ ಚರ್ಮದ ಕೋಶಗಳಿಗೆ ಅಗತ್ಯವಾದ ಪೋಷಕಾಂಶಗಳು ಸರಿಯಾಗಿ ತಲುಪುವುದಿಲ್ಲ. ಇದರಿಂದ ಚರ್ಮ ಒಣಗುವುದು, ತುರಿಕೆ, ಸೋಂಕುಗಳು ಹೆಚ್ಚಾಗುವುದು ಮತ್ತು ಗಾಯಗಳು ನಿಧಾನವಾಗಿ ಗುಣವಾಗುವಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಕೆಲವು ಸಂದರ್ಭಗಳಲ್ಲಿ ಚರ್ಮದ ಬಣ್ಣದಲ್ಲಿಯೂ ಬದಲಾವಣೆ ಕಂಡುಬರಬಹುದು. ಇದೇ ರೀತಿ, ಕೂದಲಿನ ಬೇರುಗಳಿಗೆ ಸರಿಯಾದ ಪೋಷಣೆ ದೊರೆಯದಿದ್ದರೆ ಕೂದಲು ದುರ್ಬಲವಾಗಿ ಉದುರುವ ಸಮಸ್ಯೆ ಹೆಚ್ಚಾಗಬಹುದು. ಕೂದಲಿನ ಬೆಳವಣಿಗೆ ನಿಧಾನವಾಗುವುದೂ ಕೂಡ ಕಂಡುಬರಬಹುದು.

ಯಾವ ಲಕ್ಷಣಗಳು ಕಂಡುಬಂದರೆ ಪರೀಕ್ಷೆ ಮಾಡಿಸಬೇಕು?

  • ಪದೇ ಪದೇ ದಾಹವಾಗುವುದು
  • ಆಗಾಗ ಮೂತ್ರ ವಿಸರ್ಜನೆ
  • ಕಾರಣವಿಲ್ಲದೆ ತೂಕ ಕಡಿಮೆಯಾಗುವುದು
  • ಅತಿಯಾದ ಆಯಾಸ
  • ದೃಷ್ಟಿ ಮಸುಕಾಗುವುದು
  • ಚರ್ಮದಲ್ಲಿ ಪದೇ ಪದೇ ಸೋಂಕು ಕಾಣಿಸಿಕೊಳ್ಳುವುದು
  • ಗಾಯಗಳು ನಿಧಾನವಾಗಿ ಗುಣವಾಗುವುದು
  • ಅತಿಯಾಗಿ ಕೂದಲು ಉದುರುವುದು

ಇದನ್ನೂ ಓದಿ: ರಾತ್ರಿ ಮಲಗುವ 3 ಗಂಟೆ ಮುಂಚಿತವಾಗಿ ಊಟ ಮಾಡಿ; ಈ ರೋಗ ಬೇಕು ಅಂದ್ರು ಬರುವುದಿಲ್ಲ!

ಚರ್ಮ ಮತ್ತು ಕೂದಲನ್ನು ಆರೋಗ್ಯಕರವಾಗಿ ಕಾಪಾಡಿಕೊಳ್ಳಲು ಏನು ಮಾಡಬೇಕು?

  • ಸಮತೋಲಿತ ಆಹಾರ ಸೇವಿಸಿ
  • ಸಿಹಿ ಮತ್ತು ಹೆಚ್ಚು ಸಂಸ್ಕರಿತ ಆಹಾರಗಳ ಸೇವನೆಯನ್ನು ಕಡಿಮೆ ಮಾಡಿ
  • ನಿಯಮಿತವಾಗಿ ವ್ಯಾಯಾಮ ಮಾಡಿ
  • ಸಾಕಷ್ಟು ನೀರು ಕುಡಿಯಿರಿ
  • ಉತ್ತಮ ನಿದ್ರೆ ಪಡೆಯಿರಿ
  • ಒತ್ತಡವನ್ನು ನಿಯಂತ್ರಿಸಿ
  • ವೈದ್ಯರ ಸಲಹೆಯಂತೆ ಔಷಧಿಗಳನ್ನು ತೆಗೆದುಕೊಳ್ಳಿ

ಹೆಚ್ಚಿದ ರಕ್ತದ ಸಕ್ಕರೆ ಮಟ್ಟವು ಕೇವಲ ಆಂತರಿಕ ಅಂಗಗಳಿಗಷ್ಟೇ ಅಲ್ಲ, ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೂ ಹಾನಿ ಉಂಟುಮಾಡಬಹುದು. ಆದ್ದರಿಂದ ಮಧುಮೇಹ ಇರುವವರು ರಕ್ತದ ಸಕ್ಕರೆ ಮಟ್ಟವನ್ನು ನಿಯಮಿತವಾಗಿ ಪರಿಶೀಲಿಸಿಕೊಳ್ಳುವುದು ಮತ್ತು ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವುದು ಅತ್ಯಗತ್ಯ. ಸಮಯಕ್ಕೆ ಸರಿಯಾದ ಆರೈಕೆ ಚರ್ಮ ಮತ್ತು ಕೂದಲಿನ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಿನಿಮಾಗಳಲ್ಲಿ ವಿಲನ್, ನಿಜ ಜೀವನದಲ್ಲಿ ‘ಹೀರೋ’ ಈ ನಟ – Kannada News

ಸಿನಿಮಾನಲ್ಲಿ (Cinema) ದೊಡ್ಡ ಹೆಸರು ಮಾಡಿದ ಸ್ಟಾರ್ ನಟರುಗಳು ತಮ್ಮ ಅಭಿಮಾನಿ ಸಂಘಗಳ ಮೂಲಕ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾರೆ. ಸಾಮಾನ್ಯವಾಗಿ ವರ್ಷದ ಒಂದು ದಿನ ರಕ್ತದಾನ, ಅನ್ನದಾನ ಇಂಥಹಾ ಕೆಲಸಗಳನ್ನು ಮಾಡಿಸುತ್ತಾರೆ ಅದರ ಚಿತ್ರಗಳನ್ನು ಹಂಚಿಕೊಂಡು ಭರ್ಜರಿ ಪ್ರಚಾರ ಪಡೆಯುತ್ತಾರೆ. ಆದರೆ ಇಲ್ಲೊಬ್ಬ ನಟ ಆ ಸ್ಟಾರ್ ಹೀರೋಗಳಿಗಿಂತಲೂ ಬಹಳ ವಿಭಿನ್ನ. ಸಾಮಾನ್ಯವಾಗಿ ಸಿನಿಮಾಗಳಲ್ಲಿ ವಿಲನ್ ಪಾತ್ರದಲ್ಲಿ ಮಾತ್ರವೇ ಕಾಣಿಸಿಕೊಳ್ಳುವ ಈ ನಟ ಮಾಡಿರುವ ಕೆಲಸದಿಂದ ನಿಜ ಬದುಕಿನಲ್ಲಿ ಹೀರೋ ಎನಿಸಿಕೊಂಡಿದ್ದಾರೆ. ಅವರೇ ಖ್ಯಾತ ನಟ ಸಯ್ಯಾಜಿ ಶಿಂಧೆ.

ಕನ್ನಡ, ಹಿಂದಿ, ತೆಲುಗು, ತಮಿಳು, ಮರಾಠಿ ಸೇರಿದಂತೆ ಹಲವಾರು ಭಾಷೆಗಳ ಸಿನಿಮಾಗಳಲ್ಲಿ ಸುಮಾರು 15 ವರ್ಷಗಳಿಗೂ ಹೆಚ್ಚು ಸಮಯದಿಂದ ನಟಿಸುತ್ತಾ ಬಂದಿರುವ ಸಯ್ಯಾಜಿ ಶಿಂಧೆ. ಬಹುತೇಕ ಸಿನಿಮಾಗಳಲ್ಲಿ ವಿಲನ್ ಪಾತ್ರಗಳಲ್ಲಿಯೇ ಹೆಚ್ಚು ನಟಿಸಿದ್ದಾರೆ. ಆದರೆ ನಿಜ ಜೀವನದಲ್ಲಿ ಇವರು ಅಪ್ಪಟ ಹೀರೋ. ಇತರೆ ನಟರು, ರಕ್ತದಾನ, ಅನ್ನದಾನ ಮಾಡುತ್ತಾ ಪ್ರಚಾರ ಪಡೆಯುತ್ತಿದ್ದರೆ, ಸಯ್ಯಾಜಿ ಶಿಂಧೆ, 6.50 ಲಕ್ಷ ಸಸಿಗಳನ್ನು ನೆಟ್ಟು ದೊಡ್ಡ ಕಾಡನ್ನೇ ಸೃಷ್ಟಿ ಮಾಡಿದ್ದಾರೆ. ಅದೂ ತಮ್ಮ ತಾಯಿಗೆ ಕೊಟ್ಟ ಮಾತು ಉಳಿಸಿಕೊಳ್ಳಲು.

ಸಯ್ಯಾಜಿ ಶಿಂಧೆ ಅವರ ತಾಯಿ ನಿಧನ ಹೊಂದುವಾಗ ಅವರ ಹೆಸರಲ್ಲಿ ಅರಣ್ಯ ಬೆಳೆಸುವುದಾಗಿ ಅವರಿಗೆ ಮಾತು ಕೊಟ್ಟಿದ್ದರಂತೆ. ‘ನಿಮ್ಮ ಹೆಸರಲ್ಲಿ 5000 ದೇಸೀಯ ಗಿಡಗಳನ್ನು ನೆಡುತ್ತೇನೆ’ ಎಂದಿದ್ದರಂತೆ. ಆದರೆ ಸಯ್ಯಾಜಿ ಅವರು 5000 ಗಿಡಗಳಿಗೆ ತಮ್ಮ ಪರಿಸರ ಪ್ರೇಮವನ್ನು ಸೀಮಿತಗೊಳಿಸಲಿಲ್ಲ ಬದಲಿಗೆ ಮಹಾರಾಷ್ಟ್ರದ 29 ಸ್ಥಳಗಳಲ್ಲಿ 6.50 ಲಕ್ಷ ಗಿಡಗಳನ್ನು ಈ ವರೆಗೆ ನೆಡಿಸಿದ್ದಾರೆ. ತಮ್ಮ ಸ್ವಂತ ಖರ್ಚಿನ ಮೂಲಕ. ಸಯ್ಯಾಜಿ ಶಿಂಧೆ ಅವರ ಈ ಸಾಹಸದಿಂದಾಗಿ ಅವರ ಕಾಡು ಇದೀಗ ಮಹಾರಾಷ್ಟ್ರದ ದೊಡ್ಡ ಮಾನವ ನಿರ್ಮಿತ ಅರಣ್ಯ ಎನಿಸಿಕೊಂಡಿದೆ. ಇದಕ್ಕೆ ‘ಸಹ್ಯಾದ್ರಿ ದೇವರಾಯ್’ ಎಂದು ಹೆಸರಿಡಲಾಗಿದೆ.

ಇದನ್ನೂ ಓದಿ:ಅಲ್ಲು ಅರ್ಜುನ್ ‘ರಾಕಾ’ ಸಿನಿಮಾ ಸೇರಿದ ಮತ್ತೊಬ್ಬ ನಟಿ: ಯಾರೀಕೆ ಫೆಮಿನಾ ಜಾರ್ಜ್?

ಸಹ್ಯಾದ್ರಿ ದೇವರಾಯ್ ಎಂಬುದು ಕೇವಲ ಸಯ್ಯಾಜಿ ಶಿಂಧೆ ಅವರ ‘ಹವ್ಯಾಸ’ವಾಗಿ ಉಳಿದಿಲ್ಲ ಈಗ ಅದು ಇಡೀ ಮಹಾರಾಷ್ಟ್ರದಲ್ಲಿ ಪರಿಸರ ಚಳವಳಿಯಾಗಿ ಮಾರ್ಪಟ್ಟಿದೆ. ‘ಸಹ್ಯಾದ್ರಿ ದೇವರಾಯ್’ ಹೆಸರಿನಡಿ ಸಾವಿರಾರು ಪರಿಸರ ಪ್ರೇಮಿಗಳನ್ನು ನಟ ಸಯ್ಯಾಜಿ ಶಿಂಧೆ ಒಗ್ಗೂಡಿಸಿದ್ದು, ಮಹಾರಾಷ್ಟ್ರದ ಹಲವಾರು ಜಿಲ್ಲೆಗಳಿಗೆ ಹೋಗಿ ಇವರು ದೇಶೀಯ ತಳಿಯ ಗಿಡಗಳನ್ನು ನೆಡುವುದು ಮಾತ್ರವೇ ಅಲ್ಲದೆ, ಅವುಗಳ ಉಳಿವಿಗೆ ಅವಿರತ ಶ್ರಮಿಸುತ್ತಿದ್ದಾರೆ. ಸ್ಥಳೀಯ ಗ್ರಾಮವಾಸಿಗಳ ನೆರವು ಪಡೆದುಕೊಂಡು ಗಿಡಗಳಿಗೆ ನೀರು ನೀಡುವುದು, ಅವುಗಳನ್ನು ಇತರೆ ಪ್ರಾಣಿಗಳಿಂದ ಕಾಪಾಡುವ ಕಾರ್ಯ ಮಾಡುತ್ತಾ ಬರುತ್ತಿದ್ದಾರೆ. ಈ ವರೆಗೆ ಸುಮಾರು 6.50 ಲಕ್ಷ ಗಿಡಗಳನ್ನು ‘ಸಹ್ಯಾದ್ರಿ ದೇವರಾಯ್’ ಚಳವಳಿ ಅಡಿಯಲ್ಲಿ ನಟ ಸಯ್ಯಾಜಿ ಶಿಂಧೆ ಹಾಗೂ ತಂಡ ನೆಟ್ಟಿದೆ.

ಸಯ್ಯಾಜಿ ಶಿಂಧೆ, ಮೂಲತಃ ಮಹಾರಾಷ್ಟ್ರದವರಾದರೂ ದಕ್ಷಿಣದ ಸಿನಿಮಾಗಳಲ್ಲಿ ಅತಿ ಹೆಚ್ಚು ನಟಿಸಿದ್ದಾರೆ. ಕನ್ನಡದ ‘ವೀರ ಕನ್ನಡಿಗ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಸಯ್ಯಾಜಿ, ತೆಲುಗಿನಲ್ಲಿ ಬಹುತೇಕ ಎಲ್ಲ ಸ್ಟಾರ್ ನಟ, ನಿರ್ದೇಶಕರುಗಳ ಸಿನಿಮಾಗಳಲ್ಲಿಯೂ ಕೆಲಸ ಮಾಡಿದ್ದಾರೆ. ಹಿಂದಿ, ಮರಾಠಿ, ಭೋಜ್​ಪುರಿ, ಬೆಂಗಾಲಿ, ಮಲಯಾಳಂ, ತಮಿಳು, ಇಂಗ್ಲೀಷ್ ಇನ್ನೂ ಕೆಲ ಭಾಷೆಗಳ ಸಿನಿಮಾಗಳಲ್ಲಿ ಸಯ್ಯಾಜಿ ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಶಾಸಕ ವಿಶ್ವನಾಥ್​​ ಬಿಟ್ಟು ಸುದ್ದಿಗೋಷ್ಠಿ ನಡೆಸಲು ಬಂದ ಸಂಸದ ಸುಧಾಕರ್​​ಗೆ ಸ್ವಪಕ್ಷಿಗರಿಂದಲೇ ತರಾಟೆ – Kannada News

ವಿಶ್ವನಾಥ್​​ vs ಸುಧಾಕರ್​​Image Credit source: wikipedia

ದೇವನಹಳ್ಳಿ, ಜೂನ್​​ 02: ಕಳೆದ ಲೋಕಸಭಾ ಚುನಾವಣೆ ವೇಳೆ ಚಿಕ್ಕಬಳ್ಳಾಪುರ ಕ್ಷೇತ್ರದ ಟಿಕೆಟ್​​ಗಾಗಿ ಬಿಜೆಪಿ (BJP) ಶಾಸಕ ಎಸ್​​.ಆರ್​​. ವಿಶ್ವನಾಥ್​​ ಮತ್ತು ಸಂಸದ ಡಾ.ಸುಧಾಕರ್​​ ನಡುವೆ ಶುರುವಾದ ಸಮರಕ್ಕೆ ಇನ್ನೂ ಬ್ರೇಕ್​​ ಬಿದ್ಧಂತೆ ಕಾಣುತ್ತಿಲ್ಲ. ಸ್ವಪಕ್ಷದ ಶಾಸಕರನ್ನು ಬಿಟ್ಟು ಒಬ್ಬರೇ ಸುದ್ದಿಗೋಷ್ಠಿ ನಡೆಸಲು ಬಂದಿದ್ದ ಸಂಸದರನ್ನು ಸ್ವಪಕ್ಷದ ಕಾರ್ಯಕರ್ತರೇ ತರಾಟೆಗೆ ತೆಗೆದುಕೊಂಡಿರುವ ಘಟನೆ ಯಲಹಂಕದಲ್ಲಿ ನಡೆದಿದೆ. ಕಾರ್ಯಕರ್ತರ ನಡುವಿನ ವಾಗ್ವಾದದ ಕಾರಣ ಯಲಹಂಕದ ಮಾಧ್ಯಮ ಕೇಂದ್ರದಲ್ಲಿ ಕೆಲ ಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಮುಖ್ಯಾಂಶಗಳು

  • ಶಾಸಕರ ಬಿಟ್ಟು ಸುದ್ದಿಗೋಷ್ಠಿ ನಡೆಸಲು ಬಂದ ಸಂದರ ಮೇಲೆ ಗರಂ
  • ಸಂಸದ ಡಾ.ಕೆ.ಸುಧಾಕರ್​​ಗೆ ಸ್ವಪಕ್ಷ ಕಾರ್ಯಕರ್ತರಿಂದಲೇ ತರಾಟೆ
  • ಯಲಹಂಕದ ಮಾಧ್ಯಮ ಕೇಂದ್ರದಲ್ಲಿ ಕೆಲ ಕಾಲ ಬಿಗುವಿನ ವಾತಾವರಣ

ಯಲಹಂಕ ಬಿಜೆಪಿ ಶಾಸಕರಾಗಿರುವ ಎಸ್​​.ಆರ್​​. ವಿಶ್ವನಾಥ್​​ ಅವರನ್ನು ಆಹ್ವಾನಿಸದೆ ಸಂಸದ ಸುಧಾಕರ್​​ ಸುದ್ದಿಗೋಷ್ಠಿ ನಡೆಸಲು ಬಂದಿರೋದು ಎಂಎಲ್​​ಎ ಬೆಂಬಲಿಗರನ್ನು ಕೆರಳಿಸಿದೆ. ಹೀಗಾಗಿ ಯಲಹಂಕದ ಮಾಧ್ಯಮ ಕೇಂದ್ರಕ್ಕೆ ಬಂದ ವಿಶ್ವನಾಥ್​​ ಬೆಂಬಲಿಗರು ಸಂಸದರ ನಡೆಯನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಶಾಸಕರು ಮತ್ತು ಸಂಸದರ ಬೆಂಬಲಿಗರ ನಡುವೆ ವಾಗ್ವಾದ ತಾರಕಕ್ಕೇರಿದ್ದುಕೂಡಲೇ ಸ್ಥಳಕ್ಕೆ ಆಗಮಿಸಿದ ಯಲಹಂಕ ಪೋಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಕಾರ್ಯಕರ್ತರ ನಡುವೆ ತೀವ್ರ ವಾಗ್ವಾದ ನಡೆಯುತ್ತಿದ್ದರೂ ಸಂಸದರು ಮಾತ್ರ ಮೌನವಾಗಿದ್ದರು ಎನ್ನಲಾಗಿದ್ದು, ಬಿಜೆಪಿ ಶಾಸಕ ಮತ್ತು ಸಂಸದರ ನಡುವಿನ ಶೀತನ ಸಮರ ಈಗ ಮತ್ತೊಮ್ಮೆ ಸ್ಫೋಟಗೊಂಡಿದೆ.

ಇದನ್ನೂ ಓದಿ: ಲಾಡ್ಲೆ ಮಶಾಕ್ ದರ್ಗಾ ಗಲಾಟೆ ಕೇಸ್ ವಾಪಸ್; ರಾಜ್ಯಪಾಲರ ಮೊರೆ ಹೋದ ಬಿಜೆಪಿ ನಿಯೋಗ

ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದ ಬಿಜೆಪಿ ಟಿಕೆಟ್​​ಗೆ ಭಾರಿ ಪೈಪೋಟಿ ಏರ್ಪಟ್ಟಿತ್ತು. ಅಂದಿನ ಮಾಜಿ ಶಾಸಕರಾಗಿದ್ದ ಡಾ.ಕೆ. ಸುಧಾಕರ್​​ ಮತ್ತು ಶಾಸಕ ಎಸ್​​.ಆರ್​​. ವಿಶ್ವನಾಥ್​​ ಪುತ್ರನ ನಡುವೆ ತೀವ್ರ ಸ್ಪರ್ಧೆ ನಡೆದು ಅಂತಿಮವಾಗಿ ಸುಧಾಕರ್​​ ಅವರೇ ಟಿಕೆಟ್​​ ಗಳಿಸುವಲ್ಲಿ ಯಶಸ್ವಿಯಾಗಿದ್ದರು. ಚುನಾವಣೆಯನ್ನೂ ಗೆದ್ದು ಸಂಸದರಾಗಿದ್ದರು. ಅಂದಿನಿಂದ ಸುಧಾಕರ್​​ ಮತ್ತು ವಿಶ್ವನಾಥ್​​ ನಡುವೆ ಮುನಿಸು ಆರಂಭವಾಗಿದ್ದು, ಯಲಹಂಕದಲ್ಲಿ ವಿಶ್ವನಾಥ್ ವಿರುದ್ಧ ಬಮುಲ್ ನಿರ್ದೇಶಕ ಕಡತನಮಲೆ ಸತೀಶ್​​ರನ್ನ ಪರ್ಯಾಯ ನಾಯಕನಾಗಿ ಬೆಳೆಸಲು ಹೊರಟಿರುವ ಆರೋಪವೂ ಸುಧಾಕರ್​​ ವಿರುದ್ಧ ಕೇಳಿಬಂದಿತ್ತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಭಾರತ ಈಗ ಗ್ಲೋಬಲ್ ಬ್ಯಾಕ್ ಆಫೀಸ್ ಮಾತ್ರವೇ ಅಲ್ಲ, ವಿಶ್ವದರ್ಜೆ ಪ್ರಾಡಕ್ಟ್ ನೀಡುವ ದೇಶವಾಗಿದೆ: ಪ್​ರಸಾದ್ ಷಣ್ಮುಗಂ – Kannada News

ನವದೆಹಲಿ, ಜೂನ್ 2: ಒಂದು ಕಾಲದಲ್ಲಿ ಭಾರತವನ್ನು ಕೇವಲ ಜಾಗತಿಕ ಕಂಪನಿಗಳಿಗೆ ಕಡಿಮೆ ವೆಚ್ಚದಲ್ಲಿ ತಾಂತ್ರಿಕ ಬೆಂಬಲ ನೀಡುವ (Support Centre) ದೇಶ ಎಂದು ನೋಡಲಾಗುತ್ತಿತ್ತು. ಆದರೆ ಇಂದು ಪರಿಸ್ಥಿತಿ ಬದಲಾಗಿದ್ದು, ಭಾರತೀಯ ಕಂಪನಿಗಳು ಜಾಗತಿಕ ಮಟ್ಟದ ವಿಶ್ವದರ್ಜೆಯ ಸಾಫ್ಟ್‌ವೇರ್ ಉತ್ಪನ್ನಗಳನ್ನು (World-Class Products) ಸ್ವತಃ ಭಾರತದಲ್ಲೇ ನಿರ್ಮಿಸುತ್ತಿವೆ ಎಂದು ಕೆಜಿಐಎಸ್ಎಲ್ ಸಿಇಒ ಪ್ರಸಾದ್ ಷಣ್ಮುಖಂ (Prassadh Shanmugam) ತಿಳಿಸಿದ್ದಾರೆ. ಬಿಸಿನೆಸ್ ಟುಡೇ (Business Today) ಪತ್ರಿಕೆಯ ‘ಹಿಡನ್ ಜೆಮ್ಸ್ ಆಫ್ ಇಂಡಿಯನ್ ಬಿಸಿನೆಸ್’ (Hidden Gems of Indian Business) ವಿಶೇಷ ಸಂವಾದದಲ್ಲಿ ಭಾಗವಹಿಸಿ ಅವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಭಾರತೀಯ ಐಟಿ ರಂಗವು ಕೇವಲ ವಿದೇಶಿ ಕಂಪನಿಗಳ ಆದೇಶದಂತೆ ಕೆಲಸ ಮಾಡುವ ಮತ್ತು ಗ್ರಾಹಕ ಸೇವೆ (Customer Support) ನೀಡುವ ಕೇಂದ್ರವಾಗಿತ್ತು. ಆದರೆ ಈಗ ಭಾರತೀಯ ಉದ್ಯಮಗಳು ಕೇವಲ ಸೇವೆ ನೀಡುವುದಕ್ಕೆ ಸೀಮಿತವಾಗದೆ, ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಬಲ್ಲ ಬೌದ್ಧಿಕ ಆಸ್ತಿ ಮತ್ತು ಸಾಫ್ಟ್‌ವೇರ್ ಉತ್ಪನ್ನಗಳನ್ನು ಸೃಷ್ಟಿಸುತ್ತಿವೆ ಎಂದು ಷಣ್ಮುಗಂ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಪ್ಲಂಬರ್, ಎಲೆಕ್ಟ್ರಿಶಿಯನ್​ಗೂ ತಪ್ಪೋದಿಲ್ಲವಂತೆ ಎಐ ಕಂಟಕ; ಕೃತಕ ಬುದ್ಧಿಮತ್ತೆ ಪ್ಲಂಬಿಂಗ್ ಕೆಲಸ ಹೇಗೆ ಮಾಡುತ್ತೆ?

ಷೇರು ಮಾರುಕಟ್ಟೆಯಲ್ಲಿ ‘ಡಾಲ್ಫಿನ್’ ಸಂಚಲನ

KGiSL ಕಂಪನಿಯು ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳ (BFSI) ವಲಯದ ಮೇಲೆ ಹೆಚ್ಚು ಗಮನ ಹರಿಸಿದೆ. ಕಂಪನಿಯ ಪ್ರಮುಖ ಸಾಫ್ಟ್‌ವೇರ್ ಪ್ಲಾಟ್‌ಫಾರ್ಮ್ ಆದ ‘ಡಾಲ್ಫಿನ್’ (Dolphin), ಭಾರತದ ಇಡೀ ಷೇರು ಮಾರುಕಟ್ಟೆಯ ಇತಿಹಾಸದಲ್ಲೇ ದೊಡ್ಡ ಕ್ರಾಂತಿ ಮಾಡಿದೆ. ಪ್ರಸ್ತುತ ಭಾರತದ ಮುಂಚೂಣಿ ಷೇರು ಮಾರುಕಟ್ಟೆಗಳಾದ ಎನ್‌ಎಸ್‌ಇ (NSE) ಮತ್ತು ಬಿಎಸ್‌ಇ (BSE) ನಲ್ಲಿ ನಡೆಯುವ ಒಟ್ಟು ವ್ಯವಹಾರದ ಬರೋಬ್ಬರಿ ಶೇ. 35 ರಷ್ಟು ಪ್ರಮಾಣವನ್ನು (ವಲ್ಯೂಮ್) ಅನ್ನು ಈ ಒಂದೇ ಪ್ಲಾಟ್‌ಫಾರ್ಮ್ ನಿರ್ವಹಿಸುತ್ತಿದೆ ಎಂದವರು ಮಾಹಿತಿ ನೀಡಿದ್ದಾರೆ.

ಕಂಪನಿಗಳ ತಾಂತ್ರಿಕ ಆವಿಷ್ಕಾರಗಳು ಯಾವಾಗಲೂ ಗ್ರಾಹಕರ ಅಗತ್ಯತೆಗಳಿಗೆ ತಕ್ಕಂತೆ ಇರಬೇಕು. ಕೇವಲ ತಂತ್ರಜ್ಞಾನದ ಪ್ರದರ್ಶನಕ್ಕಾಗಿ ಆವಿಷ್ಕಾರ ಮಾಡುವುದಕ್ಕಿಂತ, ಅದು ಗ್ರಾಹಕರ ಬಿಜಿನೆಸ್ ಸಮಸ್ಯೆಗಳನ್ನು ಪರಿಹರಿಸುವಂತಿರಬೇಕು ಎಂದು ಪ್ರಸಾದ್ ಒತ್ತು ನೀಡಿದ್ದಾರೆ.

ಇದನ್ನೂ ಓದಿ: ಇದು ರಿಯಲ್ ಸ್ಟೋರಿ..! ಆಟೋ, ಟೆಂಪೋ ಓಡಿಸುತ್ತಿದ್ದ ವ್ಯಕ್ತಿ ಏರ್ಲೈನ್ಸ್ ಕಂಪನಿಯ ಮಾಲೀಕನಾದ ಕಥೆ

ಮಧ್ಯಮ ಕ್ರಮಾಂಕದ ಕಂಪನಿಗಳತ್ತ ಹೂಡಿಕೆದಾರರ ಒಲವು

ಇದೇ ಸಂವಾದದಲ್ಲಿ ಭಾಗವಹಿಸಿದ್ದ ಇವೈ ಇಂಡಿಯಾ (EY India) ಸಂಸ್ಥೆಯ ಕಾರ್ತಿಕ್ ಹೆಚ್ ಅವರು ಮಾತನಾಡುತ್ತಾ, ಜಾಗತಿಕ ಹೂಡಿಕೆದಾರರು ಈಗ ಮಧ್ಯಮ ಗಾತ್ರದ (Mid-market) ತಂತ್ರಜ್ಞಾನ ಕಂಪನಿಗಳ ಕಡೆಗೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಇಂತಹ ಕಂಪನಿಗಳಲ್ಲಿ ಹೂಡಿಕೆಯ ರಿಸ್ಕ್ ಕಡಿಮೆ ಇರುತ್ತದೆ ಮತ್ತು ಇವು ವೇಗವಾಗಿ ದೊಡ್ಡ ಮಟ್ಟಕ್ಕೆ ಬೆಳೆಯುವ (Scalable) ಸಾಮರ್ಥ್ಯ ಹೊಂದಿರುತ್ತವೆ ಎಂದು ಹೇಳಿದ್ದಾರೆ.

ಒಟ್ಟಾರೆ, ಭಾರತೀಯ ಐಟಿ ರಂಗವು ‘ಸರ್ವಿಸ್’ ಮಾತ್ರವೇ ಇದ್ದ ಮಾಡಲ್​ನಿಂದ ‘ಉತ್ಪನ್ನ’ (Product-based) ಮಾಡಲ್ ಕಡೆಗೆ ಯಶಸ್ವಿಯಾಗಿ ಹೆಜ್ಜೆ ಇಡುತ್ತಿದೆ ಎಂಬುದಕ್ಕೆ KGiSL ನಂತಹ ಕಂಪನಿಗಳ ಬೆಳವಣಿಗೆಯೇ ಸಾಕ್ಷಿಯಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Exit mobile version