Easter: ಈಸ್ಟರ್; ಸಾವನ್ನು ಗೆದ್ದ ಯೇಸುವಿನ ಪುನರುತ್ಥಾನದ ಹಬ್ಬ,ಇಲ್ಲಿದೆ ಈ ದಿನದ ಮಹತ್ವ

Easter: ಈಸ್ಟರ್; ಸಾವನ್ನು ಗೆದ್ದ ಯೇಸುವಿನ ಪುನರುತ್ಥಾನದ ಹಬ್ಬ,ಇಲ್ಲಿದೆ ಈ ದಿನದ ಮಹತ್ವ

ಕ್ರಿಶ್ಚಿಯನ್ ಧರ್ಮದಲ್ಲಿ ಗುಡ್ ಫ್ರೈಡೇ ಮತ್ತು ಈಸ್ಟರ್ ಭಾನುವಾರ ಅತ್ಯಂತ ಪವಿತ್ರವಾದ ದಿನಗಳು. ಈ ವರ್ಷ ಏಪ್ರಿಲ್ 3 ರಂದು ಶುಭ ಶುಕ್ರವಾರವನ್ನು (Good Friday) ಆಚರಿಸಲಾಗಿದ್ದು, ಅದರ ಎರಡು ದಿನಗಳ ನಂತರ ಅಂದರೆ ನಾಳೆ, ಏಪ್ರಿಲ್ 5 ರಂದು ಈಸ್ಟರ್ ಭಾನುವಾರವನ್ನು ವಿಶ್ವಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ದಿನವು ಕೇವಲ ಸಂಪ್ರದಾಯವಲ್ಲ, ಬದಲಿಗೆ ಮನುಕುಲಕ್ಕೆ ಭರವಸೆ ಮತ್ತು ಹೊಸ ಜೀವನದ ಸಂದೇಶವನ್ನು ನೀಡುವ ಪವಾಡದ ದಿನವಾಗಿದೆ.

ಪವಿತ್ರ ಶನಿವಾರದ ಮೌನ:

ಇಂದು ಪವಿತ್ರ ಶನಿವಾರ (Holy Saturday). ಈ ದಿನವನ್ನು ಶೋಕ, ಮೌನ ಮತ್ತು ಕಾಯುವಿಕೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಯೇಸುಕ್ರಿಸ್ತನನ್ನು ಶಿಲುಬೆಗೇರಿಸಿದ ನಂತರದ ಈ ದಿನದಂದು ಕ್ರೈಸ್ತರು ಪ್ರಾರ್ಥನೆ ಮತ್ತು ಧ್ಯಾನದಲ್ಲಿ ತೊಡಗಿಸಿಕೊಳ್ಳುತ್ತಾರೆ. ನಾಳೆಯ ಸಂಭ್ರಮಕ್ಕೆ ಸಿದ್ಧವಾಗುವ ಮುನ್ನ ಅನುಭವಿಸುವ ಶಾಂತಿಯುತ ಕಾಯುವಿಕೆ ಈ ದಿನದ ವಿಶೇಷ.

ಪುನರುತ್ಥಾನದ ವಿಜಯ – ಈಸ್ಟರ್ ಮಹತ್ವ:

ಕ್ರಿಶ್ಚಿಯನ್ ನಂಬಿಕೆಗಳ ಪ್ರಕಾರ, ಯೇಸುಕ್ರಿಸ್ತನನ್ನು ಗುಡ್ ಫ್ರೈಡೇ ದಿನದಂದು ಶಿಲುಬೆಗೇರಿಸಲಾಯಿತು. ಆದರೆ, ಸಾವನ್ನು ಜಯಿಸಿದ ಅವರು ಎರಡು ದಿನಗಳ ನಂತರ, ಅಂದರೆ ಭಾನುವಾರದಂದು ಪುನರುತ್ಥಾನಗೊಂಡರು (ಮರಳಿ ಜೀವಂತವಾಗಿ ಬಂದರು). ಈ ಅದ್ಭುತ ಘಟನೆಯ ನೆನಪಿಗಾಗಿ ಈಸ್ಟರ್ ಭಾನುವಾರವನ್ನು ಆಚರಿಸಲಾಗುತ್ತದೆ.

  • ಸಂದೇಶ: ಪ್ರತಿಯೊಂದು ಕತ್ತಲೆಯ ನಂತರ ಬೆಳಕು ಬಂದೇ ಬರುತ್ತದೆ ಎಂಬ ಸತ್ಯವನ್ನು ಯೇಸು ತನ್ನ ಪುನರುತ್ಥಾನದ ಮೂಲಕ ಜಗತ್ತಿಗೆ ತೋರಿಸಿಕೊಟ್ಟನು.
  • ಭೂಮಿಯ ಮೇಲಿನ ವಾಸ: ಬೈಬಲ್ ಪ್ರಕಾರ, ಪುನರುತ್ಥಾನದ ನಂತರ ಯೇಸು ಸುಮಾರು 40 ದಿನಗಳ ಕಾಲ ಭೂಮಿಯ ಮೇಲಿದ್ದು, ತನ್ನ ಅನುಯಾಯಿಗಳಿಗೆ ಪ್ರೀತಿ, ಕ್ಷಮೆ ಮತ್ತು ಕರುಣೆಯ ಮೌಲ್ಯಗಳನ್ನು ಬೋಧಿಸಿದನು.

ಈಸ್ಟರ್ ದಿನಾಂಕವನ್ನು ಹೇಗೆ ನಿರ್ಧರಿಸಲಾಗುತ್ತದೆ?

ಈಸ್ಟರ್ ಹಬ್ಬವನ್ನು ಯಾವಾಗಲೂ ಭಾನುವಾರವೇ ಆಚರಿಸಲಾಗುತ್ತದೆ, ಆದರೆ ಅದರ ದಿನಾಂಕ ಪ್ರತಿ ವರ್ಷ ಬದಲಾಗುತ್ತದೆ. ಇದು ಖಗೋಳಶಾಸ್ತ್ರದ ಲೆಕ್ಕಾಚಾರವನ್ನು ಅವಲಂಬಿಸಿದೆ. ಸಾಮಾನ್ಯವಾಗಿ ವಸಂತಕಾಲದ (Spring Equinox) ಮೊದಲ ಹುಣ್ಣಿಮೆಯ ನಂತರ ಬರುವ ಮೊದಲ ಭಾನುವಾರವನ್ನು ಈಸ್ಟರ್ ಎಂದು ಆಚರಿಸಲಾಗುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆರ್​ಸಿಬಿ ಫ್ಯಾನ್ಸ್​ ಎಚ್ಚರ! ಟಿಕೆಟ್ ಬುಕ್ಕಿಂಗ್ ನೆಪದಲ್ಲಿ ವಂಚನೆ: ಲಿಂಕ್​ ಕ್ಲಿಕ್​ ಮಾಡಿದ್ರೆ ಹಣ ಮಾಯ

ಆನೇಕಲ್​, ಏಪ್ರಿಲ್​ 04: ಐಪಿಎಲ್ ಟಿಕೆಟ್ ಬುಕ್ಕಿಂಗ್ ನೆಪದಲ್ಲಿ ಆನ್‌ಲೈನ್ ವಂಚನೆ ಪ್ರಕರಣಗಳು ಹೆಚ್ಚಾಗಿದ್ದು, ಕ್ರಿಕೆಟ್ ಅಭಿಮಾನಿಗಳು ಎಚ್ಚರದಿಂದ ಇರಬೇಕಾಗಿದೆ. “IPL Dhamaka Sale” ಎಂಬ ಹೆಸರಿನ ನಕಲಿ ಖಾತೆಗಳು ಮತ್ತು ವೆಬ್‌ಸೈಟ್‌ಗಳನ್ನು ಸೃಷ್ಟಿಸಿ, ಉಚಿತ ಐಪಿಎಲ್ ಟಿಕೆಟ್‌ಗಳ ಆಮಿಷವೊಡ್ಡಿ ಹಣ ಕಡಿತಗೊಳಿಸುವ ಜಾಲ ಸಕ್ರಿಯವಾಗಿದೆ. ನಕಲಿ ಲಿಂಕ್‌ಗಳನ್ನು ಕ್ಲಿಕ್ ಮಾಡಿದಾಗ ಬ್ಯಾಂಕ್ ಖಾತೆಗಳಿಂದ ಹಣ ಕಡಿತವಾಗುತ್ತಿದ್ದು, ಹಲವರು ಈಗಾಗಲೇ ಮೋಸ ಹೋಗಿದ್ದಾರೆ. ಈ ಕುರಿತು ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಲೆಕ್ಟ್ರಾನಿಕ್ ಸಿಟಿ ಉಪ ವಿಭಾಗದ ಡಿಸಿಪಿ ನಾರಾಯಣ್ ಅವರು ಅಭಿಮಾನಿಗಳಿಗೆ ಇಂತಹ ನಕಲಿ ಲಿಂಕ್‌ಗಳಿಗೆ ಬಲಿಯಾಗದಂತೆ ಎಚ್ಚರಿಕೆ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಈ ರಾಶಿಯವರು ಏ.05 ರಿಂದ 11ರೊಳಗೆ ನಿಮ್ಮ ಹುಡುಗಿಯನ್ನು ಆಯ್ಕೆ ಮಾಡಿಕೊಳ್ಳಿ, ಮತ್ತೆ ಈ ಭಾಗ್ಯ ಸಿಗುವುದಿಲ್ಲ

ಏಪ್ರಿಲ್ 05ರಿಂದ ಏಪ್ರಿಲ್ 11ರವರೆಗಿನ ಶುಕ್ರನ ಸಂಚಾರ ಮೇಷದಲ್ಲಿ ಆಗಲಿದೆ. ಪ್ರೇಮಕ್ಕೆ ಎಷ್ಟೇ ವಿಘ್ನಗಳು ಬಂದರೂ ಅದನ್ನು ಎದುರಿಸಿ ನಿಲ್ಲುವ ಉತ್ಸಾಹವೂ ಇರಲಿದೆ. ಏನನ್ನೂ ಊಹಿಸಿಕೊಂಡು ಹತಾಶರಾಗುವ ಸಂದರ್ಭವೂ ಬರಬಹುದು. ಎಚ್ಚರದಿಂದ ಇರಿ.

ಮೇಷ

​ಈ ವಾರ ಸಂಗಾತಿಯೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಉಂಟಾಗಬಹುದು. ಹಳೆಯ ನೆನಪುಗಳು ಕಾಡಿ ದುಃಖ ತರಬಹುದು. ತಾಳ್ಮೆಯಿಂದ ವರ್ತಿಸಿದರೆ ವಾರಾಂತ್ಯದಲ್ಲಿ ಪ್ರೇಮ ಪ್ರಯಾಣಕ್ಕೆ ಶುಭ ಯೋಗವಿದೆ. ಮಾತಿನ ಮೇಲೆ ನಿಗಾ ಇರಲಿ.

​ವೃಷಭ

​ಹೊಸ ಪ್ರೇಮ ಅಂಕುರಿಸುವ ಸಾಧ್ಯತೆ ದಟ್ಟವಾಗಿದೆ. ಸಂಗಾತಿಯ ಜೊತೆ ಸುಂದರ ಪಯಣ ನಿಮ್ಮ ಸಂಬಂಧವನ್ನು ಗಟ್ಟಿಗೊಳಿಸುತ್ತದೆ. ಗೊಂದಲಗಳು ದೂರವಾಗಿ ಪ್ರೀತಿಯಲ್ಲಿ ಸ್ಪಷ್ಟತೆ ಸಿಗಲಿದೆ. ಆಕರ್ಷಕ ವ್ಯಕ್ತಿತ್ವದಿಂದ ಎಲ್ಲರ ಗಮನ ಸೆಳೆಯುವಿರಿ.

​ಮಿಥುನ

​ಗ್ರಹಗಳ ಬದಲಾವಣೆಯಿಂದ ಪ್ರೇಮ ಜೀವನದಲ್ಲಿ ತಲ್ಲಣ ಉಂಟಾಗಬಹುದು. ಸಂಗಾತಿಯ ನಡವಳಿಕೆ ಗೊಂದಲ ಮೂಡಿಸಬಹುದು. ಏಕಾಂತ ಬಯಸುವಿರಿ. ವಾರದ ಮಧ್ಯಭಾಗದಲ್ಲಿ ಹಳೆಯ ಮಿತ್ರರಿಂದ ಹೊಸ ಪ್ರೇಮ ಪ್ರಸ್ತಾಪ ಬರುವ ನಿರೀಕ್ಷೆಯಿದೆ.

​ಕರ್ಕಾಟಕ

​ಭಾವನಾತ್ಮಕವಾಗಿ ಈ ವಾರ ಸ್ವಲ್ಪ ಏರುಪೇರಾಗಲಿದೆ. ಸಣ್ಣ ವಿಷಯಗಳಿಗೂ ದುಃಖ ಪಡುವ ಸಾಧ್ಯತೆಯಿದೆ. ಆದರೆ ಸಂಗಾತಿಯ ಬೆಂಬಲ ನಿಮಗೆ ಸಮಾಧಾನ ನೀಡುತ್ತದೆ. ದೂರದ ಪ್ರಯಾಣದ ಯೋಜನೆ ಕೈಗೂಡಲಿದೆ, ಸಂಬಂಧ ಸುಧಾರಿಸಲಿದೆ.

​ಸಿಂಹ

​ಪ್ರೇಮ ಜೀವನದಲ್ಲಿ ಉತ್ಸಾಹ ಹೆಚ್ಚಿರಲಿದೆ. ಸಂಗಾತಿಯ ಜೊತೆ ಪ್ರವಾಸ ಕೈಗೊಳ್ಳುವಿರಿ. ವೃತ್ತಿಜೀವನದ ಒತ್ತಡದಿಂದ ಸಂಗಾತಿಯ ಜೊತೆ ಸ್ವಲ್ಪ ವ್ಯತ್ಯಾಸ ಉಂಟಾಗಬಹುದು, ಅದನ್ನು ಪ್ರೀತಿಯಿಂದ ಸರಿಪಡಿಸಿಕೊಳ್ಳಿ. ಹೊಸ ಸಂಬಂಧಗಳಿಗೆ ಇದು ಸಕಾಲ.

​ಕನ್ಯಾ

​ಸಂಗಾತಿಯ ಬಗ್ಗೆ ಇಲ್ಲದ ಗೊಂದಲಗಳನ್ನು ಬೆಳೆಸಿಕೊಳ್ಳಬೇಡಿ. ಮೂರನೇ ವ್ಯಕ್ತಿಯ ಪ್ರವೇಶದಿಂದ ಸಂಬಂಧದಲ್ಲಿ ಬಿರುಕು ಮೂಡಬಹುದು. ವಾರಾಂತ್ಯದಲ್ಲಿ ಎಲ್ಲವೂ ಸರಿಯಾಗಿ ಹೊಸ ಪ್ರೇಮದ ಹೊಳಪು ಕಾಣಲಿದೆ. ಸಂವಹನಕ್ಕೆ ಹೆಚ್ಚಿನ ಒತ್ತು ನೀಡಿ.

​ತುಲಾ

​ಮನಸ್ಸಿನಲ್ಲಿ ಹೊಸ ಪ್ರೇಮದ ಸಂಚಲನವಾಗಲಿದೆ. ಪ್ರೇಮ ಪಯಣಕ್ಕೆ ಅದೃಷ್ಟದ ಬೆಂಬಲವಿದೆ. ಸಂಗಾತಿಯೊಂದಿಗೆ ಮನಸ್ತಾಪವಿದ್ದರೆ ಈ ವಾರ ಪರಿಹಾರವಾಗಲಿದೆ. ಪ್ರೀತಿಯಲ್ಲಿ ಸಮತೋಲನ ಕಾಯ್ದುಕೊಳ್ಳುವಲ್ಲಿ ನೀವು ಯಶಸ್ವಿಯಾಗುವಿರಿ.

​ವೃಶ್ಚಿಕ

​ಈ ವಾರ ಅತಿಯಾದ ಆತುರ ಪ್ರೇಮದಲ್ಲಿ ವಿಘ್ನ ತರಬಹುದು. ಸಂಗಾತಿಯಿಂದ ದೂರವಾಗುವ ಭಯ ಅಥವಾ ದುಃಖ ಕಾಡಬಹುದು. ತಾಳ್ಮೆಯಿಂದಿರಬೇಕು. ವಾರಾಂತ್ಯದಲ್ಲಿ ಸಂಗಾತಿಯಿಂದ ಅನಿರೀಕ್ಷಿತ ಉಡುಗೊರೆ ಅಥವಾ ಪ್ರವಾಸದ ಆಹ್ವಾನ ಬರಲಿದೆ.

​ಧನುಸ್ಸು

​ಹೊಸ ಪ್ರೇಮ ಸಂಬಂಧಗಳು ವಿವಾಹದ ಹಂತಕ್ಕೆ ತಲುಪಬಹುದು. ಸಂಗಾತಿಯ ಜೊತೆಗಿನ ಪಯಣವು ನಿಮಗೆ ನೆಮ್ಮದಿ ನೀಡಲಿದೆ. ಪ್ರೇಮ ಜೀವನದಲ್ಲಿ ಇದ್ದ ಗೊಂದಲಗಳು ಮರೆಯಾಗಿ, ಪರಸ್ಪರ ನಂಬಿಕೆ ಹೆಚ್ಚಾಗುವ ಸಮಯವಿದು.

​ಮಕರ

​ಕೆಲಸದ ಒತ್ತಡದಿಂದ ಸಂಗಾತಿಗೆ ಸಮಯ ನೀಡಲು ಸಾಧ್ಯವಾಗದೆ ವ್ಯತ್ಯಾಸಗಳು ಉಂಟಾಗಬಹುದು. ಇದು ಮನಸ್ಸಿಗೆ ಅಸಮಾಧಾನ ತರಬಹುದು. ವಾರದ ಕೊನೆಯಲ್ಲಿ ಸಂಗಾತಿಯನ್ನು ಪ್ರವಾಸಕ್ಕೆ ಕರೆದೊಯ್ಯುವುದು ನಿಮ್ಮ ನಡುವಿನ ಬಾಂಧವ್ಯವನ್ನು ವೃದ್ಧಿಸುತ್ತದೆ.

​ಕುಂಭ

​ಗ್ರಹಗಳ ಶುಭ ದೃಷ್ಟಿಯಿಂದ ಹೊಸ ಪ್ರೇಮ ಜೀವನ ಆರಂಭವಾಗಲಿದೆ. ಹಳೆಯ ದುಃಖಗಳನ್ನು ಮರೆತು ಮುನ್ನಡೆಯುವಿರಿ. ಸಂಗಾತಿಯ ಜೊತೆಗಿನ ಸುದೀರ್ಘ ಪಯಣವು ನಿಮ್ಮ ಪ್ರೇಮಕ್ಕೆ ಹೊಸ ಅರ್ಥ ನೀಡಲಿದೆ. ಆಕರ್ಷಣೆ ಹೆಚ್ಚಾಗಲಿದೆ.

​ಮೀನ

​ಈ ವಾರ ನೀವು ಪ್ರೇಮ ಜೀವನದಲ್ಲಿ ಹೆಚ್ಚು ಸಂವೇದನಾಶೀಲರಾಗಿರುತ್ತೀರಿ. ಸಣ್ಣ ಗೊಂದಲಗಳೂ ನಿಮ್ಮನ್ನು ಕಾಡಬಹುದು. ಸಂಗಾತಿಯ ಪ್ರೀತಿ ನಿಮ್ಮ ಎಲ್ಲ ದುಃಖಗಳನ್ನು ದೂರ ಮಾಡುತ್ತದೆ. ಧಾರ್ಮಿಕ ಸ್ಥಳಗಳಿಗೆ ಪ್ರಯಾಣ ಬೆಳೆಸುವ ಸಾಧ್ಯತೆಯಿದೆ.

– ಲೋಹಿತ ಹೆಬ್ಬಾರ್

Source link

DC vs MI Record Alert: 51 ಸಿಕ್ಸರ್‌, 1092 ರನ್‌.. ಡೆಲ್ಲಿ ವಿರುದ್ಧ ರೋಹಿತ್ ವಿಶೇಷ ಮೈಲಿಗಲ್ಲು

ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026 ರ 8 ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಮುಂಬೈ ಪರ ಮಾಜಿ ನಾಯಕ ರೋಹಿತ್ ಶರ್ಮಾ 26 ಎಸೆತಗಳಲ್ಲಿ 35 ರನ್‌ಗಳ ಸಣ್ಣ ಆದರೆ ಪ್ರಮುಖ ಇನ್ನಿಂಗ್ಸ್ ಆಡಿದರು. ಅವರ ಈ ಇನ್ನಿಂಗ್ಸ್‌ನಲ್ಲಿ 5 ಬೌಂಡರಿ ಮತ್ತು 1 ಸಿಕ್ಸ್ ಸೇರಿದ್ದವು. ಈ ಇನ್ನಿಂಗ್ಸ್ ಮೂಲಕ ರೋಹಿತ್ ಡೆಲ್ಲಿ ತಂಡದ ವಿರುದ್ಧ ವಿಶೇಷ ಮೈಲಿಗಲ್ಲನ್ನು ದಾಟಿದರು.

ಐಪಿಎಲ್‌ನಲ್ಲಿ ಒಂದೇ ತಂಡದ ವಿರುದ್ಧ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ರೋಹಿತ್ ಶರ್ಮಾ ಇದೀಗ ಮೂರನೇ ಸ್ಥಾನಕ್ಕೇರಿದ್ದಾರೆ. ಇಲ್ಲಿಯವರೆಗೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರೋಹಿತ್ 51 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಇದರ ಜೊತೆಗೆ, ದೆಹಲಿ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ರೋಹಿತ್ ಶರ್ಮಾ ಇದೀಗ ಅಗ್ರಸ್ಥಾನಕ್ಕೇರಿದ್ದಾರೆ. ರೋಹಿತ್ ಇಲ್ಲಿಯವರೆಗೆ ದೆಹಲಿ ವಿರುದ್ಧ 1092 ರನ್ ಗಳಿಸಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL ಟಿಕೆಟ್​​ ಪಡೆದ ಶಾಸಕರಿಗೆ ಮಾಜಿ ಸಿಎಂ ಕ್ಲಾಸ್​​: ಸದಾನಂದಗೌಡ ಹೇಳಿದ್ದೇನು?

ಬೆಂಗಳೂರು, ಏಪ್ರಿಲ್​​ 04: IPL ಟಿಕೆಟ್ ನೀಡುವಂತೆ ಸದನದಲ್ಲಿ ಶಾಸಕರ ಬೇಡಿಕೆ ವಿಚಾರ ಸಂಬಂಧ ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಸದಾನಂದಗೌಡ ಕಿಡಿ ಕಾರಿದ್ದಾರೆ. ಶಾಸಕರ ಪಿಎಗಳು IPL ಟಿಕೆಟ್ ಪಡೆದಿದ್ದನ್ನು ಖಂಡಿಸಿದ ಡಿವಿಎಸ್, ಪಂದ್ಯದ ಟಿಕೆಟ್​ಗಾಗಿ ಯಾವುದೇ ಶಾಸಕರು ಭಿಕ್ಷೆ ಬೇಡಬಾರದು. ಆರ್​ಸಿಬಿ ವಿಜಯೋತ್ಸವ ವೇಳೆ 11 ಅಭಿಮಾನಿಗಳ ಸಾವಿನ ವಿಚಾರ ವಿಧಾನಸಭೆಯಲ್ಲಿ ಚರ್ಚೆಯಾಗಿದ್ದರೆ ಗೌರವವಿರುತ್ತಿತ್ತು. ಚುನಾವಣೆಯಲ್ಲಿ ನೂರಾರು ಕೋಟಿ ಸುರಿದು ಶಾಸಕರಾದವರು ಟಿಕೆಟ್​ಗೆ ಭಿಕ್ಷೆ ಬೇಡುತ್ತಾರಲ್ಲಾ ನಾಚಿಕೆಯಾಗಬೇಕು. ಯಾವುದೇ ಜನಪ್ರತಿನಿಧಿ ಹೀಗೆ ಮಾಡಬಾರದು. ಕ್ಷೇತ್ರಕ್ಕೆ ಏನಾದರೂ ಸಹಕಾರ ಬೇಕು ಅಂದಾಗ ಭಿಕ್ಷೆ ಬೇಡಿ ಎಂದು ಅವರು ಕಿವಿಮಾತು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ನಾಲಿಗೆಯಲ್ಲಿ ಹುಣ್ಣುಗಳಾಗುವುದಕ್ಕೆ ಕಾರಣ ಏನ್ ಗೊತ್ತಾ? ಇದು ಗಂಭೀರ ರೋಗದ ಮುನ್ಸೂಚನೆಯೇ? ಇಲ್ಲಿದೆ ಉತ್ತರ

ನೀವು ಗಮನಿಸಿರಬಹುದು ಕೆಲವರಿಗೆ ಪದೇ ಪದೇ ಬಾಯಲ್ಲಿ ಹುಣ್ಣುಗಳಾಗುತ್ತವೆ ಇದನ್ನು ಮೌತ್ ಅಲ್ಸರ್ (Tongue Ulcers) ಎಂದು ಕರೆಯಲಾಗುತ್ತದೆ. ಆದರೆ ಇದರ ಬಗ್ಗೆ ಯಾರೂ ಕೂಡ ಅಷ್ಟಾಗಿ ತೆಲೆಕೆಡಿಕೊಳ್ಳುವುದಿಲ್ಲ, ಬದಲಾಗಿ ದೇಹದಲ್ಲಿ ಉಷ್ಣತೆ ಹೆಚ್ಚಾದಾಗ ಈ ರೀತಿ ಆಗುತ್ತದೆ ಎಂದು ನಿರ್ಲಕ್ಷ್ಯ ಮಾಡುತ್ತಾರೆ. ಹಾಗಾಗಿ ಎಲ್ಲರೂ ಕೂಡ ಇದನ್ನು ಸಾಮಾನ್ಯ ಸಮಸ್ಯೆ ಎಂದೇ ಎಂದುಕೊಳ್ಳುತ್ತಾರೆ. ಆದರೆ ಆರೋಗ್ಯ ತಜ್ಞರು ಹೇಳುವ ಪ್ರಕಾರ, ಈ ರೀತಿ ಆಗುವುದನ್ನು ಸಾಮಾನ್ಯವೆಂದು ನಿರ್ಲಕ್ಷಿಸುವುದು ಸರಿಯಲ್ಲ, ಏಕೆಂದರೆ ಇದು ಕೆಲವೊಮ್ಮೆ ದೇಹದ ಒಳಗಿನ ಸಮಸ್ಯೆಗಳ ಸೂಚನೆಯಾಗಿರಬಹುದು. ಹಾಗಾದರೆ ನಾಲಿಗೆಯಲ್ಲಿ ಹುಣ್ಣುಗಳಾಗುವುದಕ್ಕೆ ಕಾರಣವೇನು, ಪದೇ ಪದೇ ಕಂಡುಬಂದರೆ ಅದು ಯಾವ ರೋಗದ ಲಕ್ಷಣ, ಇದನ್ನು ತಡೆಗಟ್ಟಲು ಏನು ಮಾಡಬಹುದು ಎಂಬುದರ ಕುರಿತು ತಿಳಿದುಕೊಳ್ಳಿ. ಸಂಪೂರ್ಣ ಮಾಹಿತಿ ಸ್ಟೋರಿಯಲ್ಲಿದೆ.

ನಾಲಿಗೆಯಲ್ಲಿ ಹುಣ್ಣುಗಳು ಕಂಡುಬರುವುದಕ್ಕೆ ಕಾರಣವೇನು?

  • ದೇಹದ ಉಷ್ಣತೆ ಹೆಚ್ಚಾದಾಗ
  • ವಿಟಮಿನ್ ಕೊರತೆ (ವಿಶೇಷವಾಗಿ B ಮತ್ತು C)
  • ಹೆಚ್ಚು ಮಸಾಲೆಯುಕ್ತ ಅಥವಾ ಬಿಸಿ ಆಹಾರ ಸೇವನೆ
  • ಬಾಯಿಯ ಸ್ವಚ್ಛತೆಯ ಕೊರತೆ
  • ನಾಲಿಗೆಗೆ ಪದೇಪದೇ ಗಾಯವಾಗುವುದು
  • ಮಾನಸಿಕ ಒತ್ತಡ ಮತ್ತು ಹಾರ್ಮೋನ್ ಬದಲಾವಣೆ

ಇದು ಯಾವ ರೋಗದ ಸೂಚನೆ?

  • ಜೀರ್ಣಕ್ರಿಯೆ ಸಂಬಂಧಿತ ಸಮಸ್ಯೆಗಳು
  • ದುರ್ಬಲ ರೋಗನಿರೋಧಕ ಶಕ್ತಿ
  • ಪೋಷಕಾಂಶಗಳ ಕೊರತೆ
  • ಸೋಂಕು ಅಥವಾ ಅಲರ್ಜಿ ಸಮಸ್ಯೆ

ಹುಣ್ಣುಗಳಲ್ಲಿ ಹೆಚ್ಚು ನೋವು, ರಕ್ತಸ್ರಾವ ಕಂಡುಬಂದರೆ, ಇದು ಗಂಭೀರ ಸ್ಥಿತಿಯ ಸೂಚನೆಯಾಗಿರಬಹುದು. ಕೆಲವೊಮ್ಮೆ ಈ ರೀತಿ ಆಗುವುದಕ್ಕೆ ಬ್ಯಾಕ್ಟೀರಿಯಲ್ ಸೋಂಕು ಅಥವಾ ಬಾಯಿಯ ಅಶುದ್ಧತೆ ಕಾರಣವಾಗಿರಬಹುದು.

ಇದನ್ನೂ ಓದಿ: ಪದೇ ಪದೇ ಬಾಯಲ್ಲಿ ಹುಣ್ಣಾಗುತ್ತಿದ್ದರೆ ಡಾ. ಅಶೋಕ್ ಭಟ್ ಹೇಳಿದಂತೆ ಮಾಡಿ, ತಕ್ಷಣ ಪರಿಹಾರ ಸಿಗುತ್ತೆ

ತಡೆಗಟ್ಟುವುದು ಹೇಗೆ?

  • ನಾಲಿಗೆಯಲ್ಲಿ ಕಂಡುಬರುವ ಹುಣ್ಣುಗಳನ್ನು ತಡೆಯಲು ಆಹಾರ ಮತ್ತು ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು
  • ಹೆಚ್ಚು ಮಸಾಲೆ, ಹುಳಿ ಮತ್ತು ಬಿಸಿ ಆಹಾರ ಸೇವನೆ ಮಾಡುವುದನ್ನು ಕಡಿಮೆ ಮಾಡಬೇಕು
  • ಪ್ರತಿನಿತ್ಯ ಬಾಯಿಯನ್ನು ಸ್ವಚ್ಛವಾಗಿ ತೊಳೆಯಬೇಕು
  • ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಬೇಕು
  • ವಿಟಮಿನ್ B ಮತ್ತು C ಇರುವ ಹಣ್ಣು, ಹಸಿರು ತರಕಾರಿಗಳನ್ನು ಸೇವನೆ ಮಾಡಬೇಕು
  • ಒತ್ತಡವನ್ನು ಕಡಿಮೆ ಮಾಡಿಕೊಂಡು ಸರಿಯಾಗಿ ನಿದ್ರೆ ಮಾಡಬೇಕು
  • ತಂಬಾಕು ಮತ್ತು ಮದ್ಯಪಾನದಿಂದ ದೂರವಿರಬೇಕು

ಯಾವಾಗ ವೈದ್ಯರನ್ನು ಸಂಪರ್ಕಿಸಬೇಕು?

ನಾಲಿಗೆಯ ಹುಣ್ಣುಗಳು 10–15 ದಿನಗಳಲ್ಲಿ ಗುಣವಾಗದಿದ್ದರೆ ಅಥವಾ ಪದೇಪದೇ ಕಾಣಿಸಿಕೊಂಡರೆ, ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ. ಜೊತೆಗೆ ತೀವ್ರ ನೋವು, ಊತ, ಜ್ವರ, ರಕ್ತಸ್ರಾವ ಕಂಡುಬಂದರೆ ನಿರ್ಲಕ್ಷಿಸಬಾರದು. ಊಟದಲ್ಲಿ ತೊಂದರೆ ಅಥವಾ ತೂಕ ಕಡಿಮೆಯಾಗುತ್ತಿರುವುದನ್ನು ಗಮನಿಸಿದರೆ ಕೂಡ ವೈದ್ಯರ ಸಲಹೆ ಪಡೆಯುವುದು ಮುಖ್ಯ. ಒಟ್ಟಿನಲ್ಲಿ, ನಾಲಿಗೆಯ ಹುಣ್ಣುಗಳು ಸಾಮಾನ್ಯವಾಗಿದ್ದರೂ, ದೀರ್ಘಕಾಲ ಇದ್ದರೆ ಅದು ಗಂಭೀರ ಆರೋಗ್ಯ ಸಮಸ್ಯೆಗಳ ಸೂಚನೆಯಾಗಿರಬಹುದು. ಆದ್ದರಿಂದ ಸಮಯಕ್ಕೆ ಸರಿಯಾಗಿ ಗಮನ ನೀಡಿ, ಚಿಕಿತ್ಸೆ ಪಡೆಯುವುದು ಅಗತ್ಯ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಐಪಿಎಲ್ ಟಿಕೆಟ್​ಗಾಗಿ ಶಾಸಕ ಸುರೇಶ್ ಕುಮಾರ್‌ಗೆ ಅಪರಿಚಿತ ವ್ಯಕ್ತಿಯಿಂದ ಫೋನ್​ ಕಾಲ್​​

ಬೆಂಗಳೂರು, ಏಪ್ರಿಲ್​ 04: ನಗರದ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಏಪ್ರಿಲ್​ 05ರಂದು ಆರ್​ಸಿಬಿ ಮತ್ತು ಸಿಎಸ್​ಕೆ ಮಧ್ಯೆ ಹೈವೋಲ್ಟೇಜ್ ಪಂದ್ಯ (RCB vs CSK Match) ನಡೆಯಲಿದೆ. ಕ್ರಿಕೆಟ್​ ಫ್ಯಾನ್ಸ್​ ನಾಳೆ ನಡೆಯಲಿರುವ ಪಂದ್ಯ ನೋಡಲು ಕಾತರರಾಗಿದ್ದಾರೆ. ಇತ್ತ ರಾಜ್ಯದ ಶಾಸಕರಿಗೆ ತಲಾ ಮೂರು ಐಪಿಎಲ್ ಟಿಕೆಟ್ ವಿತರಣೆ ಮಾಡಲಾಗಿದೆ. ಹೀಗಾಗಿ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಸಂಬಂಧಿ ಎಂದು ಹೇಳಿಕೊಂಡು ರಾಜಾಜಿನಗರ ಶಾಸಕ ಸುರೇಶ್ ಕುಮಾರ್‌ಗೆ (MLA Suresh Kumar) ದೂರವಾಣಿ ಕರೆ ಮಾಡಿರುವ ಘಟನೆ ನಡೆದಿದೆ.

ಐಪಿಎಲ್ ಟಿಕೆಟ್​ಗಾಗಿ ಶಾಸಕರಿಗೆ ಕರೆ

ನಾಳಿನ ಪಂದ್ಯಕ್ಕೆ ಸರತಿಸಾಲಿನಲ್ಲಿ ನಿಂತು ಶಾಸಕರ ಪಿಎಗಳು ಇಂದು ಟಿಕೆಟ್ ಪಡೆದುಕೊಂಡಿದ್ದಾರೆ. ವಿಧಾನಸೌಧದ ಸ್ಪೀಕರ್ ಆಪ್ತ ಕಾರ್ಯದರ್ಶಿ ಮಹೇಶ್ ಕರ್ಜಗಿ ಕೊಠಡಿಯಲ್ಲಿ ತಲಾ 3 ಟಿಕೆಟ್ ವಿತರಣೆ ಮಾಡಲಾಗಿದೆ. ಶಾಸಕರಿಗೆ ಐಪಿಎಲ್ ಟಿಕೆಟ್ ವಿತರಣೆ ಮಾಡುತ್ತಿರುವುದನ್ನು ತಿಳಿದ ಸಂದೀಪ್ ಎಂಬ ಹೆಸರಿನ ವ್ಯಕ್ತಿ ಶಾಸಕ ಸುರೇಶ್ ಕುಮಾರ್‌ಗೆ ದೂರವಾಣಿ ಕರೆ ಮಾಡಿ ಟಿಕೆಟ್ ಪಡೆಯಲು ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ.

ಶಾಸಕ ಸುರೇಶ್ ಫೆಸ್​ಬುಕ್ ಪೋಸ್ಟ್

ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಸಂಬಂಧಿ ಎಂದು ಹೇಳಿರುವ ಸಂದೀಪ್​, ತೆಲಂಗಾಣ ಸಿಎಂ ಕಚೇರಿಯಿಂದ ನಿಮ್ಮ ದೂರವಾಣಿ ಸಂಖ್ಯೆ ಪಡೆದಿದ್ದೇನೆ. ಐಪಿಎಲ್ ಟಿಕೆಟ್ ಪಡೆಯಲು ಸಹಾಯ ಎಂದಿದ್ದಾರೆ. ಆದರೆ  ನಾನು ಟಿಕೆಟ್ ಬೇಡ ಎಂದು ಸ್ಪೀಕರ್‌ಗೆ ಪತ್ರ ಬರೆದಿದ್ದೇನೆ. ನನ್ನ ಬಳಿ ಐಪಿಎಲ್ ಟಿಕೆಟ್ ವಿಚಾರ ಮಾತನಾಡಬೇಡಿ ಎಂದು ಸಂದೀಪ್‌ಗೆ ಶಾಸಕ ಸುರೇಶ್‌ ಕುಮಾರ್ ಹೇಳಿದ್ದಾರೆ.

ವಿಚಿತ್ರ ಮೊಬೈಲ್ ಕರೆ

ಇನ್ನು ಈ ಬಗ್ಗೆ ಫೆಸ್​ಬುಕ್ ಪೋಸ್ಟ್ ಹಂಚಿಕೊಂಡ ಶಾಸಕ ಸುರೇಶ್‌ ಕುಮಾರ್, ಇಂದು ಮಧ್ಯಾಹ್ನ ಹೀಗೊಂದು ವಿಚಿತ್ರ ಮೊಬೈಲ್ ಕರೆ ನನಗೆ ಬಂದಿತ್ತು. ಆಹಾ.. ಎಂತಹ ಕರೆ ಅಂತೀರಿ! ಕರೆ ಮಾಡಿದವರ ಹೆಸರು ಸಂದೀಪ್ ಎಂದು. ಮಿಸ್ಡ್ ಕಾಲ್ ಲಿಸ್ಟ್ ಅಲ್ಲಿದ್ದ ಆ ನಂಬರ್​​ಗೆ ನಾನು ಮರುಕರೆ ಮಾಡಿ ಕನ್ನಡದಲ್ಲಿ ಮಾತನಾಡಿದಾಗ ಅವರು ಇಂಗ್ಲಿಷ್​ನಲ್ಲಿ ತಮ್ಮ ಪರಿಚಯ ಹೇಳಿಕೊಂಡಿದ್ದು ಹೀಗೆ. “ನನ್ನ ಹೆಸರು ಸಂದೀಪ್ ಎಂದು. ನಿಮ್ಮ ಮೊಬೈಲ್ ನಂಬರ್ ನನಗೆ ಶ್ರೀ ರೇವಂತ ರೆಡ್ಡಿ ಅವರ ಆಫೀಸಿಂದ ದೊರಕಿತು. ನಾನು ಕಾಂಗ್ರೆಸ್ ಕಾರ್ಯಕರ್ತ ಹಾಗೂ ರೇವಂತರ ರೆಡ್ಡಿ ಅವರ ಸಂಬಂಧಿ. ನನಗೆ ಐಪಿಎಲ್ ಟಿಕೆಟ್ ಬೇಕಿತ್ತು. ದಯವಿಟ್ಟು ಸಹಾಯ ಮಾಡುವಿರಾ” ಎಂಬುದು ಆ ಕರೆಯ ಸಾರಾಂಶ.

ಇದನ್ನೂ ಓದಿ: ಅತ್ತ ಗ್ಯಾಸ್​​ಗಾಗಿ ಆಟೋ ಚಾಲಕರ ಪರದಾಟ: ಇತ್ತ ಐಪಿಎಲ್ ಟಿಕೆಟ್​ಗಾಗಿ ಕ್ಯೂನಿಂತ ಶಾಸಕರ ಪಿಎಗಳು

ನಾನು ಅವರಿಗೆ ಮಾರುತ್ತರ ಕೊಟ್ಟೆ “ನನಗೆ ಐಪಿಎಲ್ ಟಿಕೆಟ್ ಬೇಡ. ನನ್ನ ಹೆಸರಿನಲ್ಲಿ ಯಾರಿಗೂ ಟಿಕೆಟ್ ಕೊಡುವುದು ಬೇಡ. ಈ ವಿಐಪಿ ಸಂಸ್ಕೃತಿಗೆ ಕೊನೆ ಹಾಡಬೇಕು” ಎಂದು ನಾನು ವಿಧಾನಸಭೆಯ ಸಭಾಧ್ಯಕ್ಷರಿಗೆ ಪತ್ರ ಬರೆದಿದ್ದೇನೆ. ದಯವಿಟ್ಟು ಈ ವಿಚಾರ ನನ್ನ ಜೊತೆ ಮಾತನಾಡಬೇಡಿ ಎಂದೆ. ಪಾಪ, ತುಂಬಾ ನಿರಾಶರಾದ ಅವರು ಫೋನ್ ಕರೆ ಕಟ್ ಮಾಡಿದರು. ನನಗೂ ನಗು ಬಂತು. ನಕ್ಕುಬಿಟ್ಟೆ. ಅಬ್ಬಾ.. IPL ಮಾಯೆ ತೆಲಂಗಾಣದವರನ್ನು ನನಗೆ ಫೋನಾಯಿಸುವಂತೆ ಮಾಡಿತು ಎಂದು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಬೆಂಗಳೂರಲ್ಲಿ 2BHK ಮನೆಗೆ 70 ಸಾವಿರ ರೂ. ಬಾಡಿಗೆ!, ಭಯಾನಕ ಅನುಭವ ಬಿಚ್ಚಿಟ್ಟ ವ್ಯಕ್ತಿ

ಬೆಂಗಳೂರು, ಏಪ್ರಿಲ್​​ 04: ಸಿಲಿಕಾನ್​​ ಸಿಟಿ ಬೆಂಗಳೂರು ದೇಶದ ಪ್ರಮುಖ ನಗರಗಳಲ್ಲಿ ಒಂದು. ಐಟಿ ಕ್ಷೇತ್ರದ ತವರು ಎಂದೇ ಕರೆಸಿಕೊಳ್ಳುವ ರಾಜ್ಯ ರಾಜಧಾನಿಯಲ್ಲಿ ಅನ್ಯರಾಜ್ಯ ಸೇರಿ ವಿದೇಶಿಯರು ಕೂಡ ಕೆಲಸ ಅರಸಿ ಬಂದು ನೆಲೆಸಿದ್ದಾರೆ. ಇವರ ಜೊತೆಗೆ ವಿದ್ಯಾರ್ಥಿಗಳ ಸಂಖ್ಯೆಯೂ ದೊಡ್ಡ ಪ್ರಮಾಣದಲ್ಲಿ ಇರುವ ಕಾರಣ, ನಗರದಲ್ಲಿ ಏರಿಕೆಯಾಗುತ್ತಿರುವ ಮನೆ ಬೆಲೆಗಳು ಮತ್ತು ಬಾಡಿಗೆ ದರಗಳು ಸಾಮಾನ್ಯ ಜನರಿಗೆ ಕೈಗೆಟುಕದಂತಾಗುತ್ತಿವೆ. ಕಳೆದ ಕೆಲವು ವರ್ಷಗಳಲ್ಲಿ ಆಸ್ತಿ ಬೆಲೆ ಹಾಗೂ ಬಾಡಿಗೆಗಳು ತೀವ್ರವಾಗಿ ಏರಿಕೆಯಾಗಿರುವ ಹಿನ್ನೆಲೆಯಲ್ಲಿ, ವಾಸಕ್ಕೆ ಸೂಕ್ತ ಮನೆ ಹುಡುಕುವುದೇ ಕಷ್ಟ ಎಂಬಂತಾಗಿದೆ.

ಇದಕ್ಕೆ ಪೂರಕ ಎಂಬಂತೆ ಇತ್ತೀಚೆಗೆ ನಗರದ ನಿವಾಸಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​​ ಒಂದನ್ನು ಹಂಚಿಕೊಂಡಿದ್ದು, ಬೆಂಗಳೂರಿನಲ್ಲಿ 2BHK ಮನೆ ಹುಡುಕುವುದು ಭಯಾನಕ ಅನುಭವ ಎಂದು ಹೇಳಿದ್ದಾರೆ. ಬೆಂಗಳೂರಿನ ರಿಯಲ್ ಎಸ್ಟೇಟ್ ಎಲ್ಲಿಗೆ ಹೋಗುತ್ತಿದೆ? ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್​​ ಮಾಡಿರುವ ಅವರು, ಕಳೆದ ಮೂರು ವರ್ಷಗಳಲ್ಲಿ ಹಲವು ದೋಷಗಳಿದ್ದ ಒಂದು ಫ್ಲಾಟ್‌ನ ಬೆಲೆ 1.4 ಕೋಟಿ ಇಂದ 2 ಕೋಟಿಗೆ ಏರಿಕೆಯಾಗಿದೆ. ದೊಡ್ಡ ಕಾಲುವೆ ಹತ್ತಿರ ಇರುವ ಈ ಅಪಾರ್ಟ್‌ಮೆಂಟ್‌ಗೆ ಹಲವು ಸಮಸ್ಯೆಗಳಿದ್ದರೂ, ಔಟರ್ ರಿಂಗ್ ರೋಡ್ ಹಾಗೂ ಐಟಿ ಕಂಪನಿಗಳ ಸಮೀಪ ಇರುವುದರಿಂದ ಬೇಡಿಕೆ ಹೆಚ್ಚಾಗಿದೆ ಎಂದಿದ್ದಾರೆ.

ಇದನ್ನೂ ಓದಿ: ಮನೆ ಕಟ್ಟುವವರಿಗೆ ಜಿಬಿಎ ಬಂಪರ್ ಗಿಫ್ಟ್! ಸೆಟ್ ಬ್ಯಾಕ್ ಉಲ್ಲಂಘನೆ ಮಿತಿ ವಿಸ್ತರಣೆ

ಕಳೆದ ಮೂರು ವರ್ಷಗಳಲ್ಲಿ ಬಾಡಿಗೆ ದರಗಳು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಈಗ ಅದೇ ಫ್ಲಾಟ್‌ಗೆ 70,000ಕ್ಕಿಂತ ಹೆಚ್ಚು ಬಾಡಿಗೆ ಕೇಳಲಾಗುತ್ತಿದೆ. ಮೂರರಿಂದ ನಾಲ್ಕು ವರ್ಷಗಳಲ್ಲಿ ಹಣ ಸಂಗ್ರಹಿಸಿ ಮನೆ ಖರೀದಿಸುವ ಯೋಜನೆ ಇದ್ದರೂ, ಆಸ್ತಿ ಬೆಲೆಗಳ ವೇಗವಾದ ಏರಿಕೆಯಿಂದ ಅದು ಸಾಧ್ಯವಾಗದಂತಾಗಿದೆ. ಇನ್ನು ಅನೇಕ ಅಪಾರ್ಟ್‌ಮೆಂಟ್‌ಗಳಲ್ಲಿ ಟ್ಯಾಂಕರ್ ನೀರಿನ ಮೇಲೆ ಅವಲಂಬನೆ ಹಾಗೂ ರಸ್ತೆ ಸಮಸ್ಯೆಗಳಿದ್ದರೂ, ಇಷ್ಟು ದೊಡ್ಡ ಮೊತ್ತವನ್ನು ಪಾವತಿಸುವುದು ಅಸಮಂಜಸ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಇನ್ನೋರ್ವ ಜಡ್ಜ್ ಮನೆಯಿಂದ ಆಭರಣ ಕದ್ದ ನ್ಯಾಯಾಧೀಶರಿಗೆ ಜಾಮೀನು ನಿರಾಕರಿಸಿದ ಕೋರ್ಟ್

ಪಟಿಯಾಲ, ಏಪ್ರಿಲ್ 4: ಮೃತ ನ್ಯಾಯಾಧೀಶರ ನಿವಾಸದಲ್ಲಿನ ಕಳ್ಳತನದ ಆರೋಪಗಳನ್ನು ಎದುರಿಸುತ್ತಿರುವ ಸಿವಿಲ್ ನ್ಯಾಯಾಧೀಶ (ಜೂನಿಯರ್ ವಿಭಾಗ) ಬಿಕ್ರಮ್‌ದೀಪ್ ಸಿಂಗ್ ಅವರಿಗೆ ಪಂಜಾಬ್​ನ (Punjab) ಪಟಿಯಾಲ ನ್ಯಾಯಾಲಯವು ನಿರೀಕ್ಷಣಾ ಜಾಮೀನು ನಿರಾಕರಿಸಿದೆ. ಮೃತ ನ್ಯಾಯಾಧೀಶರ ಮಗ ನೀಡಿದ ಆಧಾರದಲ್ಲಿ ಸಿವಿಲ್ ನ್ಯಾಯಾಧೀಶರ ವಿರುದ್ಧ ಕೇಸ್ ದಾಖಲಿಸಲಾಗಿತ್ತು. ಕಳೆದ ತಿಂಗಳು ದಾಖಲಾಗಿರುವ ಪೊಲೀಸ್ ಪ್ರಕರಣದ ಪ್ರಕಾರ, ಬಿಕ್ರಮ್‌ದೀಪ್ ಸಿಂಗ್ ಕಳೆದ ವರ್ಷ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಕನ್ವಲ್ಜಿತ್ ಸಿಂಗ್ ಅವರು ಆಸ್ಪತ್ರೆಯಲ್ಲಿ ನಿಧನರಾದ ರಾತ್ರಿ ಅವರ ನಿವಾಸದಿಂದ ಚಿನ್ನದ ಆಭರಣಗಳನ್ನು ಕದ್ದಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಪ್ರಕರಣದಲ್ಲಿ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಹರಿಂದರ್ ಸಿಧು ಏಪ್ರಿಲ್ 1ರಂದು ಬಿಕ್ರಮ್‌ದೀಪ್ ಸಿಂಗ್ ಅವರಿಗೆ ಜಾಮೀನು ನಿರಾಕರಿಸಿದ್ದಾರೆ. ಆರೋಪಗಳು ಗಂಭೀರ ಸ್ವರೂಪದ್ದಾಗಿದ್ದು, ಅನುಮಾನಾಸ್ಪದ ಸಂದರ್ಭಗಳಲ್ಲಿ ಮೃತ ಸಹೋದ್ಯೋಗಿಯ ನಿವಾಸದಿಂದ ಭಾರೀ ಪ್ರಮಾಣದ ಚಿನ್ನ ಮತ್ತು ಆಭರಣಗಳನ್ನು ಕದ್ದಿರುವ ಆರೋಪ ಕೇಳಿಬಂದಿದೆ. ಇದನ್ನು ಹಗುರವಾಗಿ ಪರಿಗಣಿಸಲು ಸಾಧ್ಯವಿಲ್ಲ. ಅದರಲ್ಲೂ ನ್ಯಾಯಾಂಗದ ಮುಖ್ಯಸ್ಥರಿಂದ ಇಂತಹ ಕೃತ್ಯವನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದು ಕೋರ್ಟ್ ಹೇಳಿದೆ.

ಇದನ್ನೂ ಓದಿ: ಮಗ ಸತ್ತಿದ್ದಾನೆ, ಸೊಸೆಯಿಂದ ಜೀವನಾಂಶ ಕೊಡಿಸಿ ಎಂದು ಕೋರ್ಟ್ ಮೆಟ್ಟಿಲೇರಿದ ವೃದ್ಧ ದಂಪತಿ; ನ್ಯಾಯಾಲಯ ಹೇಳಿದ್ದೇನು?

ಘಟನೆ ನಡೆದು 7 ತಿಂಗಳ ವಿಳಂಬದ ನಂತರ ದುರುದ್ದೇಶಪೂರಿತ ಉದ್ದೇಶದಿಂದ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಆರೋಪಿಸಲಾಗಿದೆಯಾದರೂ ದೂರುದಾರರು ಪಟಿಯಾಲದ ಉಪ ಪೊಲೀಸ್ ಮಹಾನಿರ್ದೇಶಕರಿಗೆ ಅರ್ಜಿಯನ್ನು ವರ್ಗಾಯಿಸಿದ್ದಾರೆ ಎಂಬ ಕಾರಣಕ್ಕೆ ಈ ಪ್ರಕರಣ ಮತ್ತಷ್ಟು ಜಟಿಲವಾಗಿದೆ. ಈ ವಿಷಯದ ಬಗ್ಗೆ ತನಿಖೆಗಾಗಿ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿಸಲಾಗಿದೆ. ತನಿಖಾ ದಾಖಲೆಯೊಂದಿಗೆ ಲಭ್ಯವಿರುವ ಪೆನ್‌ಡ್ರೈವ್‌ನಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳು ಜಾಮೀನು ಅರ್ಜಿದಾರರಾದ ಸಿವಿಲ್ ನ್ಯಾಯಾಧೀಶರು ಕೆಲವು ಪೆಟ್ಟಿಗೆಗಳು ಮತ್ತು ಚೀಲಗಳನ್ನು ಹೊತ್ತುಕೊಂಡು ಮೃತ ನ್ಯಾಯಾಧೀಶರ ಮನೆಯ ಆವರಣದೊಳಗೆ ಪ್ರವೇಶಿಸುವ ಮತ್ತು ಹೊರಗೆ ಹೋಗುವುದನ್ನು ತೋರಿಸುತ್ತವೆ. ಹೀಗಾಗಿ, ಈ ಪ್ರಕರಣದಲ್ಲಿ ಜಾಮೀನು ನೀಡಲು ಅಸಾಧ್ಯ ಎಂದು ನ್ಯಾಯಾಲಯ ಹೇಳಿದೆ.

ಇದನ್ನೂ ಓದಿ: ಕೋಲಾರ: ಸೆಷನ್ಸ್ ಕೋರ್ಟ್ ಒಳ ಸೇರಿಕೊಂಡಿದ್ದ ಹಾವು! ಆಮೇಲೇನಾಯ್ತು ನೋಡಿ

ಮಾರ್ಚ್ 21ರಂದು ಮೃತ ನ್ಯಾಯಾಧೀಶ ಕನ್ವಲ್ಜಿತ್ ಸಿಂಗ್ ಅವರ ಪುತ್ರ ಅಂಗದ್‌ಪಾಲ್ ಸಿಂಗ್ ಈ ಬಗ್ಗೆ ದೂರು ನೀಡಿದ್ದರು. ಆಗಸ್ಟ್ 1, 2025ರಂದು ಆಸ್ಪತ್ರೆಯಲ್ಲಿ ತನ್ನ ಸ್ನೇಹಿತ ಕನ್ವಲ್ಜಿತ್ ಸಿಂಗ್ ನಿಧನರಾದ ನಂತರ ಅವರ ಮನೆ ಸಹಾಯಕಿ ಅಮರ್‌ಜಿತ್ ಕೌರ್ ಅಲಿಯಾಸ್ ಪಿಂಕಿ, ಸರ್ಕಾರಿ ಅಧಿಕಾರಿ ಗೌರವ್ ಗೋಯಲ್ ಮತ್ತು ಒಬ್ಬ ಅಪರಿಚಿತ ವ್ಯಕ್ತಿ ಜೊತೆ ನ್ಯಾಯಾಧೀಶ ಬಿಕ್ರಮ್​ದೀಪ್ ಸಿಂಗ್ ಮೃತ ನ್ಯಾಯಾಧೀಶರ ನಿವಾಸಕ್ಕೆ ಬಂದರು. ಮನೆಯಲ್ಲಿ ಯಾರೂ ಇಲ್ಲದಿದ್ದ ಸಂದರ್ಭ ನೋಡಿ ಅಲ್ಲಿದ್ದ ನಮ್ಮ ಕುಟುಂಬದ ಪೂರ್ವಜರ ಒಡವೆಗಳನ್ನು ಕಳವು ಮಾಡಲಾಗಿದೆ. ಆ ವೇಳೆ ನಾವೆಲ್ಲರೂ ಆಸ್ಪತ್ರೆಯಲ್ಲಿ ಇದ್ದುದರಿಂದ ಈ ವಿಷಯ ಗಮನಕ್ಕೆ ಬಂದಿಲ್ಲ. ಬಿಕ್ರಮ್ ದೀಪ್ ಹಾಗೂ ಮೃತ ನ್ಯಾಯಾಧೀಶ ಸ್ನೇಹಿತರಾಗಿದ್ದು, ಅವರ ಆಗಾಗ ನಮ್ಮ ಮನೆಗೆ ಬರುತ್ತಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಇದಕ್ಕೆ ಪುರಾವೆಯಾಗಿ ಸಿಸಿಟಿವಿ ವಿಡಿಯೋ ಕೂಡ ನೀಡಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಅರ್ಧದಲ್ಲೇ ಐಪಿಎಲ್ ತೊರೆದು ಆಸ್ಟ್ರೇಲಿಯಾಕ್ಕೆ ಮರಳಿದ ಪ್ಯಾಟ್ ಕಮ್ಮಿನ್ಸ್

Source link

Exit mobile version