ನಾಳೆ ಸಿಎಂ ಆಗಿ ಡಿಕೆಶಿ ಪ್ರಮಾಣವಚನ: ಹೇಗಿರಲಿದೆ ಕಾರ್ಯಕ್ರಮದ ಭದ್ರತೆ? ಪೊಲೀಸ್ ಆಯುಕ್ತರೇ ಕೊಟ್ರು ಮಾಹಿತಿ – Kannada News

ಡಿಕೆಶಿ ಪದಗ್ರಹಣಕ್ಕೆ ಬಿಗಿ ಭದ್ರತೆImage Credit source: Tv9 Kannada

ಬೆಂಗಳೂರು, ಜೂನ್​​ 02: ಸಿಎಂ ಆಗಿ ಡಿ.ಕೆ.ಶಿವಕುಮಾರ್​ (DK Shivakumar) ಪ್ರಮಾಣವಚನ ಸ್ವೀಕಾರ ಹಿನ್ನೆಲೆ ನಾಳಿನ ಕಾರ್ಯಕ್ರಮಕ್ಕೆ ಬಿಗಿ ಪೊಲೀಸ್​​ ಬಂದೋಬಸ್ತ್​​ ಕೈಗೊಳ್ಳಲಾಗಿದೆ. ಈ ಸಂಬಂಧ ಬೆಂಗಳೂರು ನಗರ ಪೊಲೀಸ್​​ ಆಯುಕ್ತ ಸೀಮಂತ್​​ ಕುಮಾರ್​​ ಸಿಂಗ್​ ಎಲ್ಲಾ ವಿಭಾಗದ ಜಂಟಿ ಪೊಲೀಸ್ ಆಯುಕ್ತರು, ಡಿಸಿಪಿಗಳು, ಸಂಚಾರ ವಿಭಾಗದ ಡಿಸಿಪಿಗಳ ಜೊತೆ ಸಭೆ ನಡೆಸಿ ಸಲಹೆ, ಸೂಚನೆ ನೀಡಿದ್ದಾರೆ. ಸಭೆ ಬಳಿಕ ಮಾಹಿತಿ ನೀಡಿರುವ ಪೊಲೀಸ್​​ ಆಯುಕ್ತರು, ಲೋಕಭವನಕ್ಕೆ ಆಹ್ವಾನಿತರಿಗೆ ಮಾತ್ರ ಪವೇಶವಿರಲಿದೆ. ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗಿಯಾಗಲು ಅವಕಾಶವಿರುವುದಿಲ್ಲ ಎಂದು ತಿಳಿಸಿದ್ದಾರೆ.

ಮುಖ್ಯಾಂಶಗಳು

  • ನಾಳೆ ಸಿಎಂ ಪದಗ್ರಹಣ ಕಾರ್ಯಕ್ರಮಕ್ಕೆ ಬಿಗಿ ಭದ್ರತೆ
  • ಲೋಕಭವನಕ್ಕೆ ಆಹ್ವಾನಿತರಿಗೆ ಮಾತ್ರ ಇರಲಿದೆ ಪವೇಶ
  • ಕಾರ್ಯಕ್ರಮದಲ್ಲಿ ಭಾಗಿ ಸಾರ್ವಜನಿಕರಿಗಿಲ್ಲ ಅವಕಾಶ

ವಿವಿಧ ರೀತಿಯಲ್ಲಿ ಕಾರ್ಯಕ್ರಮಕ್ಕೆ ಪಾಸ್​ ಹಂಚಿಕೆ ಮಾಡಲಾಗಿದ್ದು, ಆ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದೇವೆ. ಸಂಚಾರ ಮಾರ್ಗದಲ್ಲಿ ಕೆಲವೊಂದು ಬದಲಾವಣೆ ಮಾಡಿದ್ದು, ರೋಡ್ ಶೋ ನಡೆಸುವುದರ ಭಗ್ಗೆ ಯಾವುದೇ ಮಾಹಿತಿ ಇಲ್ಲ. ಹೊರ ರಾಜ್ಯದಿಂದಲೂ ವಿಐಪಿಗಳು ಕಾರ್ಯಕ್ರಮಕ್ಕೆ ಬರುತ್ತಿರುವ ಹಿನ್ನೆಲೆ ಗಣ್ಯರ ಭದ್ರತೆಗೂ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ‌ ಎಂದು ಪೊಲೀಸ್ ಕಮಿಷನರ್​ ಸೀಮಂತ್ ಕುಮಾರ್ ಸಿಂಗ್​ ತಿಳಿಸಿದ್ದಾರೆ.

ಇದನ್ನೂ ಓದಿ: ಸರ್ವ ಧರ್ಮ ಸ್ವಾಮೀಜಿಗಳ ಸಮ್ಮುಖದಲ್ಲಿ ಪೂರ್ವಾಭಿಮುಖವಾಗಿ ಪ್ರಮಾಣವಚನ ಸ್ವೀಕರಿಸಲಿರುವ ಡಿಕೆಶಿ

ಅರ್ಧದಿನ ರಜೆ

ಕರ್ನಾಟಕ ಲೋಕಭವನ ಮತ್ತು ಸುತ್ತ ಮುತ್ತ ಪ್ರದೇಶದಲ್ಲಿ ಜನಸಂದಣಿ ಸೇರುವ ಹಾಗೂ ವಾಹನ ಸಂಚಾರ ದಟ್ಟಣೆ ಉಂಟಾಗುವ ಸಂಭವನೀಯತೆ ಇರುವುದರಿಂದ, ಭದ್ರತೆ ಮತ್ತು ಸುರಕ್ಷತೆಯ ದೃಷ್ಟಿಯಿಂದ ವಿಧಾನ ಸೌಧ, ವಿಕಾಸ ಸೌಧ ಹಾಗೂ ಬಹುಮಹಡಿಗಳ ಕಟ್ಟಡದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ನಾಳ (ಜೂನ್​​ 03)ಮಧ್ಯಾಹ್ನ ಅರ್ಧ ದಿನ ರಜೆ ಘೋಷಣೆ ಮಾಡಲಾಗಿದೆ. ಈ ಬಗ್ಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಅಧೀನ ಕಾರ್ಯದರ್ಶಿ (ಕಾರ್ಯಕಾರಿ) ಆರ್.ಯದು ಕುಮಾರ್ ಆದೇಶಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ರೈಲ್ವೆ ಉದ್ಯೋಗಾಕಾಂಕ್ಷಿಗಳ ಗಮನಕ್ಕೆ: RRB NTPC ಪರೀಕ್ಷಾ ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆ – Kannada News

ರೈಲ್ವೆ ಇಲಾಖೆಯಲ್ಲಿ ಉದ್ಯೋಗImage Credit source: Pinterest

ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಹುಡುಕುತ್ತಿರುವ ಯುವಜನತೆಗೆ ರೈಲ್ವೆ ನೇಮಕಾತಿ ಮಂಡಳಿ (RRB) ಪ್ರಮುಖ ಮಾಹಿತಿಯೊಂದನ್ನು ನೀಡಿದೆ. ಆರ್‌ಆರ್‌ಬಿ ತಾಂತ್ರಿಕೇತರ ಜನಪ್ರಿಯ ವರ್ಗಗಳ (RRB NTPC) ಪದವಿಪೂರ್ವ (Undergraduate – CEN 07/2025) ವಿಭಾಗದ ಮೊದಲ ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆಯ (CBT 1) ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಲಾಗಿದ್ದು, ಈ ಕುರಿತು ಅಧಿಕೃತ ಅಧಿಸೂಚನೆಯನ್ನು ಹೊರಡಿಸಲಾಗಿದೆ.

ಎರಡನೇ ಹಂತದ ಪರೀಕ್ಷಾ ದಿನಾಂಕಗಳಲ್ಲಿ ಬದಲಾವಣೆ:

ಈ ಹಿಂದೆ ಪ್ರಕಟಿಸಲಾಗಿದ್ದ ವೇಳಾಪಟ್ಟಿಯ ಪ್ರಕಾರ, ಮೊದಲ ಹಂತದ ಪರೀಕ್ಷೆಗಳು ಈಗಾಗಲೇ ಮೇ 7, 8 ಮತ್ತು 9 ರಂದು ಯಶಸ್ವಿಯಾಗಿ ನಡೆದಿವೆ. ಆದರೆ, ಜೂನ್ ತಿಂಗಳಿನಲ್ಲಿ ನಡೆಯಬೇಕಿದ್ದ ಎರಡನೇ ಹಂತದ ಪರೀಕ್ಷಾ ದಿನಾಂಕಗಳನ್ನು ಈಗ ಪರಿಷ್ಕರಿಸಲಾಗಿದೆ. ಹಳೆಯ ವೇಳಾಪಟ್ಟಿಯಲ್ಲಿ ಜೂನ್ 13, 14 ಮತ್ತು ಜೂನ್ 16 ರಿಂದ 20 ರವರೆಗೆ ಪರೀಕ್ಷೆಗಳನ್ನು ನಡೆಸಲು ನಿರ್ಧರಿಸಲಾಗಿತ್ತು (ಜೂನ್ 15 ರಂದು ಬಿಡುವು ನೀಡಲಾಗಿತ್ತು). ಆದರೆ, ಹೊಸ ಬದಲಾವಣೆಯ ಪ್ರಕಾರ ಜೂನ್ 13, 14, 15, 16 ರಿಂದ ಜೂನ್ 20 ರವರೆಗೆ ಯಾವುದೇ ಮಧ್ಯಂತರ ಬಿಡುವಿಲ್ಲದೆ ಸತತವಾಗಿ ಪರೀಕ್ಷೆಗಳು ನಡೆಯಲಿವೆ ಎಂದು ರೈಲ್ವೆ ಮಂಡಳಿ ಸ್ಪಷ್ಟಪಡಿಸಿದೆ.

ಪ್ರವೇಶ ಪತ್ರ ಮತ್ತು ನಗರ ಮಾಹಿತಿ ಸ್ಲಿಪ್ ಲಭ್ಯತೆ:

ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳ ಅನುಕೂಲಕ್ಕಾಗಿ ರೈಲ್ವೆ ಮಂಡಳಿಯು ಪರೀಕ್ಷಾ ಕೇಂದ್ರವಿರುವ ನಗರದ ಮಾಹಿತಿ ಸ್ಲಿಪ್ (City Notification Slip) ಅನ್ನು ಪರೀಕ್ಷೆಗಿಂತ 10 ದಿನಗಳ ಮುಂಚಿತವಾಗಿ ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಲಿದೆ. ಇದರೊಂದಿಗೆ, ಅಭ್ಯರ್ಥಿಗಳು ತಮ್ಮ ಅಧಿಕೃತ ಪ್ರವೇಶ ಪತ್ರಗಳನ್ನು (Admit Cards) ತಮ್ಮ ಪರೀಕ್ಷಾ ದಿನಾಂಕಕ್ಕಿಂತ ಕೇವಲ 4 ದಿನಗಳ ಮೊದಲು ಆರ್‌ಆರ್‌ಬಿಯ ಅಧಿಕೃತ ಜಾಲತಾಣದಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಒಟ್ಟು 3,058 ಹುದ್ದೆಗಳ ಭರ್ತಿ:

RRB NTPC UG ನೇಮಕಾತಿ ಪ್ರಕ್ರಿಯೆಯ ಮೂಲಕ ಪದವಿಪೂರ್ವ ವಿಭಾಗದಲ್ಲಿ ಒಟ್ಟು 3,058 ವಿವಿಧ ತಾಂತ್ರಿಕೇತರ ಜನಪ್ರಿಯ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಇವುಗಳಲ್ಲಿ ವಾಣಿಜ್ಯ ಕಮ್ ಟಿಕೆಟ್ ಕ್ಲರ್ಕ್ (Commercial cum Ticket Clerk) – 2,424 ಹುದ್ದೆಗಳು, ಅಕೌಂಟ್ಸ್ ಕ್ಲರ್ಕ್ ಕಮ್ ಟೈಪಿಸ್ಟ್ (Accounts Clerk cum Typist) – 394 ಹುದ್ದೆಗಳು, ಜೂನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್ (Junior Clerk cum Typist) – 163 ಹುದ್ದೆಗಳು ಮತ್ತು ರೈಲು ಕ್ಲರ್ಕ್ (Trains Clerk) ವಿಭಾಗದಲ್ಲಿ 77 ಹುದ್ದೆಗಳು ಸೇರಿವೆ.

ಇದನ್ನೂ ಓದಿ: 16 ಸರ್ಕಾರಿ ಉದ್ಯೋಗ ತಿರಸ್ಕರಿಸಿ IPS ಆದ ಯುವತಿ; ಮೊದಲ ಪ್ರಯತ್ನದಲ್ಲೇ UPSC ಪಾಸ್ ಮಾಡಿದ ತೃಪ್ತಿ ಭಟ್ ಯಶೋಗಾಥೆ

ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ?

ಅಭ್ಯರ್ಥಿಗಳ ಅಂತಿಮ ಆಯ್ಕೆಯನ್ನು ಒಟ್ಟು ಐದು ಹಂತಗಳ ಕಠಿಣ ಪ್ರಕ್ರಿಯೆಯ ಮೂಲಕ ಮಾಡಲಾಗುತ್ತದೆ. ಮೊದಲಿಗೆ CBT 1 ಮತ್ತು CBT 2 ಲಿಖಿತ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಅದರಲ್ಲಿ ತೇರ್ಗಡೆಯಾದವರಿಗೆ ಕಂಪ್ಯೂಟರ್ ಆಧಾರಿತ ಟೈಪಿಂಗ್ ಕೌಶಲ್ಯ ಪರೀಕ್ಷೆ (Typing Test) ಇರಲಿದೆ. ಕೊನೆಯ ಹಂತದಲ್ಲಿ ಮೂಲ ದಾಖಲಾತಿಗಳ ಪರಿಶೀಲನೆ (Document Verification) ಮತ್ತು ವೈದ್ಯಕೀಯ ಪರೀಕ್ಷೆಯನ್ನು (Medical Examination) ನಡೆಸಿ ಅರ್ಹರನ್ನು ಹುದ್ದೆಗಳಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಸಿಬಿಟಿ 1 ಪರೀಕ್ಷಾ ವಿಧಾನ ಮತ್ತು ನೆಗೆಟಿವ್ ಮಾರ್ಕ್​​:

RRB NTPC UG CBT 1 ಪರೀಕ್ಷೆಯು ಒಟ್ಟು 100 ಬಹು ಆಯ್ಕೆಯ (MCQ) ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಈ ಪರೀಕ್ಷೆಯನ್ನು ಬರೆಯಲು ಅಭ್ಯರ್ಥಿಗಳಿಗೆ 90 ನಿಮಿಷಗಳ (ಒಂದೂವರೆ ಗಂಟೆ) ಕಾಲಾವಕಾಶ ನೀಡಲಾಗುತ್ತದೆ. ಪ್ರಶ್ನೆ ಪತ್ರಿಕೆಯಲ್ಲಿ ಸಾಮಾನ್ಯ ಜಾಗೃತಿ (General Awareness) ವಿಷಯದಿಂದ 40 ಪ್ರಶ್ನೆಗಳು, ಗಣಿತ (Mathematics) ವಿಷಯದಿಂದ 30 ಪ್ರಶ್ನೆಗಳು ಹಾಗೂ ಸಾಮಾನ್ಯ ಬುದ್ಧಿಮತ್ತೆ ಮತ್ತು ತಾರ್ಕಿಕತೆ (General Intelligence and Reasoning) ವಿಭಾಗದಿಂದ 30 ಪ್ರಶ್ನೆಗಳನ್ನು ಕೇಳಲಾಗುತ್ತದೆ. ಈ ಪರೀಕ್ಷೆಯಲ್ಲಿ ತಪ್ಪು ಉತ್ತರಗಳಿಗೆ ಋಣಾತ್ಮಕ ಅಂಕಗಳ (Negative Marking) ವ್ಯವಸ್ಥೆ ಇರಲಿದ್ದು, CBT 1 ರಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳನ್ನು ಮಾತ್ರ ಮುಂದಿನ CBT 2 ಪರೀಕ್ಷೆಗೆ ಆಹ್ವಾನಿಸಲಾಗುತ್ತದೆ.

ಶಿಕ್ಷಣಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸೊಳ್ಳೆಗಳ ಸಂತತಿ ಮುಗಿಸಲು ಗೂಗಲ್ ಮಾಸ್ಟರ್ ಪ್ಲಾನ್!: 3.2 ಕೋಟಿ ‘ವಿಶೇಷ’ ಸೊಳ್ಳೆಗಳನ್ನು ಸೃಷ್ಟಿಸಿದ ಆಲ್ಫಾಬೆಟ್ – Kannada News

ಅಮೆರಿಕ, ಜೂ.2: ಪ್ರಪಂಚದಾದ್ಯಂತ ಸೊಳ್ಳೆಗಳಿಂದ ಹರಡುವ ರೋಗಗಳನ್ನು ನಿಯಂತ್ರಿಸಲು ಗೂಗಲ್‌ನ ಮಾತೃಸಂಸ್ಥೆ ಆಲ್ಫಾಬೆಟ್ ಒಂದು ವಿನೂತನ ಯೋಜನೆಯನ್ನು ಕೈಗೊಂಡಿದೆ. ಡಿಬಗ್ ಎಂಬ ಈ ಯೋಜನೆಯ ಅಡಿಯಲ್ಲಿ, 3.2 ಕೋಟಿ ಗಂಡು ಸೊಳ್ಳೆಗಳನ್ನು ಪ್ರಯೋಗಾಲಯದಲ್ಲಿ ಸಿದ್ಧಪಡಿಸಿ ಪರಿಸರಕ್ಕೆ ಬಿಡುಗಡೆ ಮಾಡಲು ಸಿದ್ಧತೆ ನಡೆಸಲಾಗಿದೆ. ಈ ಸೊಳ್ಳೆಗಳು ಓಲ್ಬಾಚಿಯ ಪೈಪಿ ಎಂಬ ನೈಸರ್ಗಿಕ ಬ್ಯಾಕ್ಟೀರಿಯಾವನ್ನು ಹೊಂದಿದ್ದು, ಇವು ಹೆಣ್ಣು ಸೊಳ್ಳೆಗಳೊಂದಿಗೆ ಮಿಲನಗೊಂಡಾಗ ಇಡುವ ಮೊಟ್ಟೆಗಳು ಒಡೆಯುವುದಿಲ್ಲ. ಇದರಿಂದ ಹೊಸ ಸೊಳ್ಳೆಗಳ ಜನನವನ್ನು ತಡೆದು ಕ್ರಮೇಣ ಸೊಳ್ಳೆ ಸಂತತಿಯನ್ನೇ ನಿರ್ಮೂಲನೆ ಮಾಡುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ. ಗಂಡು ಸೊಳ್ಳೆಗಳು ರಕ್ತ ಹೀರುವುದಿಲ್ಲವಾದ್ದರಿಂದ ಅವು ಮನುಷ್ಯರಿಗೆ ಯಾವುದೇ ಅಪಾಯವನ್ನುಂಟು ಮಾಡುವುದಿಲ್ಲ. ಡೆಂಗ್ಯು, ಜಿಕಾ ಮತ್ತು ಚಿಕನ್‌ಗುನ್ಯಾದಂತಹ ರೋಗಗಳನ್ನು ಹರಡುವ ಸೊಳ್ಳೆಗಳನ್ನು ನಿಯಂತ್ರಿಸಲು ಇದು ಪರಿಣಾಮಕಾರಿ ರಾಸಾಯನಿಕ-ಮುಕ್ತ ಪರ್ಯಾಯ ಮಾರ್ಗವಾಗಿದೆ. ಪ್ರಸ್ತುತ, ಈ ಯೋಜನೆ ಅಮೆರಿಕಾದ ಪರಿಸರ ಸಂರಕ್ಷಣಾ ಸಂಸ್ಥೆ (ಇಪಿಎ) ಪರಿಶೀಲನೆಯಲ್ಲಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜಾನ್ವಿ ಕಪೂರ್ ಮೈಮೇಲೆ ಬೀಳಲು ಬಂದ ರಾಮ್ ಚರಣ್ ಅಭಿಮಾನಿ; ವಿಡಿಯೋ ವೈರಲ್ – Kannada News

ಮೆಗಾ ಪವರ್ ಸ್ಟಾರ್ ರಾಮ್ ಚರಣ್ (Ram Charan) ಮತ್ತು ಬಾಲಿವುಡ್ ನಟಿ ಜಾನ್ವಿ ಕಪೂರ್ (Janhvi Kapoor) ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಬಹುನಿರೀಕ್ಷಿತ ತೆಲುಗು ಚಿತ್ರ ‘ಪೆದ್ದಿ’ (Peddi) ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಈ ಕ್ರೀಡಾ ಆಧಾರಿತ ಆ್ಯಕ್ಷನ್ ಡ್ರಾಮಾ ಸಿನಿಮಾದ ಪ್ರಚಾರಕ್ಕಾಗಿ ಚಿತ್ರತಂಡ ಸೋಮವಾರ (ಜೂನ್ 1) ಆಂಧ್ರಪ್ರದೇಶದ ವಿಜಯವಾಡದಲ್ಲಿ ಭರ್ಜರಿ ಪ್ರಚಾರ ಕಾರ್ಯಕ್ರಮವನ್ನು ಆಯೋಜಿಸಿತ್ತು. ಆದರೆ, ಈ ಈವೆಂಟ್‌ನಲ್ಲಿ ನಡೆದ ಒಂದು ಅನಿರೀಕ್ಷಿತ ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ಕಾರ್ಯಕ್ರಮದಲ್ಲಿ ರಾಮ್ ಚರಣ್, ಜಾನ್ವಿ ಕಪೂರ್ ಮತ್ತು ನಿರ್ದೇಶಕ ಬುಚ್ಚಿ ಬಾಬು ಸನಾ ವೇದಿಕೆಯ ಮೇಲಿದ್ದಾಗ, ಅಭಿಮಾನಿಯೊಬ್ಬ ಭದ್ರತಾ ವಲಯವನ್ನು ದಾಟಿ ಒಮ್ಮೆಗೆ ವೇದಿಕೆಯತ್ತ ನುಗ್ಗಿದ್ದಾನೆ. ರಾಮ್ ಚರಣ್ ಅವರಂತೆಯೇ ಹೇರ್‌ಸ್ಟೈಲ್ ಮಾಡಿಕೊಂಡಿದ್ದ ಈ ಅಭಿಮಾನಿ, ನೇರವಾಗಿ ನಟನ ಬಳಿಗೆ ಓಡಿ ಬಂದಿದ್ದಾನೆ. ಅವನು ವೇದಿಕೆಗೆ ನುಗ್ಗಿದ ರಭಸಕ್ಕೆ ರಾಮ್ ಚರಣ್ ಪಕ್ಕದಲ್ಲೇ ಕುಳಿತಿದ್ದ ಜಾನ್ವಿ ಕಪೂರ್ ಒಂದು ಕ್ಷಣ ತೀವ್ರವಾಗಿ ಬೆಚ್ಚಿಬಿದ್ದಿದ್ದಾರೆ.

ಜಾನ್ವಿ ಕಪೂರ್ ಅವರ ಮುಖದಲ್ಲಿ ಅಸಹಜತೆ ಎದ್ದು ಕಾಣುತ್ತಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಭದ್ರತಾ ಸಿಬ್ಬಂದಿ ಹಾಗೂ ರಾಮ್ ಚರಣ್ ಅವರ ವೈಯಕ್ತಿಕ ಬಾಡಿಗಾರ್ಡ್, ಅಂತಾರಾಷ್ಟ್ರೀಯ ಎಂಎಂಎ ಫೈಟರ್ ಆಗಿರುವ ಕೆವಿನ್ ಕುಂಟ, ಆ ಅಭಿಮಾನಿಯನ್ನು ಹಿಡಿದು ಹಿಂದಕ್ಕೆ ಎಳೆದಿದ್ದಾರೆ. ಈ ವೇಳೆ ವೇದಿಕೆಯ ಮೇಲೆ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ಆದಾಗ್ಯೂ, ಪರಿಸ್ಥಿತಿ ತಿಳಿಯಾದ ನಂತರ ಆ ಅಭಿಮಾನಿಗೆ ರಾಮ್ ಚರಣ್ ಅವರನ್ನು ಭೇಟಿ ಮಾಡಲು ಅವಕಾಶ ನೀಡಲಾಯಿತು. ಮತ್ತೊಂದು ವಿಡಿಯೋದಲ್ಲಿ, ಆತ ರಾಮ್ ಚರಣ್ ಕಾಲಿಗೆ ಬಿದ್ದು ಕೃತಜ್ಞತೆ ಸಲ್ಲಿಸುತ್ತಿರುವುದು ಕಂಡುಬಂದಿದೆ. ಇಷ್ಟು ದೊಡ್ಡ ಜನಸಂದಣಿಯ ನಡುವೆಯೂ ಪರಿಸ್ಥಿತಿಯನ್ನು ಅತ್ಯಂತ ಜಾಣ್ಮೆಯಿಂದ ನಿಭಾಯಿಸಿದ ಬಾಡಿಗಾರ್ಡ್ ಕೆವಿನ್ ಕುಂಟ ಅವರ ಸಮಯಪ್ರಜ್ಞೆಯನ್ನು ನೆಟ್ಟಿಗರು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ.

ಇದನ್ನೂ ಓದಿ: ‘ಪೆದ್ದಿ’ ಸಿನಿಮಾ ಐಟಂ ಹಾಡಿಗೆ ಶ್ರುತಿ ಹಾಸನ್ ಪಡೆದ ಸಂಭಾವನೆ ಎಷ್ಟು?

ಇತ್ತೀಚೆಗೆ ಮಾಧ್ಯಮ ಸಂದರ್ಶನವೊಂದರಲ್ಲಿ ತಮ್ಮ ಬಾಡಿಗಾರ್ಡ್ ಕೆವಿನ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸ್ಟಾರ್ ಆಗುತ್ತಿರುವ ಬಗ್ಗೆ ರಾಮ್ ಚರಣ್ ತಮಾಷೆಯಾಗಿ ಮಾತನಾಡಿದ್ದರು. ‘ನೀವೆಲ್ಲರೂ ಸೇರಿ ಅವನನ್ನು ತುಂಬಾ ಫೇಮಸ್ ಮಾಡಿಬಿಟ್ಟಿದ್ದೀರಿ. ಅದಕ್ಕೇ ನಾನು ಈಗ ಅವನನ್ನು ಜಾಸ್ತಿ ಹೊರಗಡೆ ಬಿಡುತ್ತಿಲ್ಲ. ಯಾರಾದರೂ ಅವನಿಗೆ ಚಾಕೊಲೇಟ್ ಅಥವಾ ಬಿಸ್ಕೆಟ್ ಆಮಿಷ ಒಡ್ಡಿ ನನ್ನ ಬಗ್ಗೆ ಸೀಕ್ರೆಟ್ಸ್ ತಿಳಿದುಕೊಳ್ಳಬಹುದು’ ಎಂದು ಹಾಸ್ಯ ಮಾಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 3:09 pm, Tue, 2 June 26

Source link

Optical Illusion: ಹಚ್ಚ ಹಸಿರಿನ ಗಿಡಗಳ ನಡುವೆ ಅಡಗಿರುವ ಹಸಿರು ಹಾವನ್ನು ಗುರುತಿಸಬಲ್ಲಿರಾ? – Kannada News

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರImage Credit source: imgur.com

ಇತ್ತೀಚೆಗಿನ ದಿನಗಳಲ್ಲಿ ಆಪ್ಟಿಕಲ್‌ ಇಲ್ಯೂಷನ್‌ (Optical Illusion) ಚಿತ್ರಗಳು ಬಹಳಷ್ಟು ಜನಪ್ರಿಯತೆ ಗಳಿಸುತ್ತಿವೆ. ಬಿಡುವು ಸಿಕ್ಕಾಗಲೆಲ್ಲಾ ಇಂತಹ ಒಗಟಿನ ಚಿತ್ರ ಬಿಡಿಸಲು ಹೆಚ್ಚಿನವರು ಇಷ್ಟ ಪಡುತ್ತಿದ್ದಾರೆ. ಇದೀಗ ವೈರಲ್ ಆಗಿರುವ ಇಲ್ಯೂಷನ್ ಚಿತ್ರವು ಟ್ರಿಕ್ಕಿಯಾಗಿದೆ. ಮೆದುಳನ್ನು ಚುರುಕುಗೊಳಿಸುವ ಈ ಚಿತ್ರದಲ್ಲಿ ಹಚ್ಚ ಹಸಿರಿನ ಹಾವು ಅಡಗಿ ಕುಳಿತಿದೆ. ನೀವು ಈ ಖತರ್ನಾಕ್ ಹಾವನ್ನು ಹತ್ತು ಸೆಕೆಂಡುಗಳೊಳಗೆ ಪತ್ತೆ ಹಚ್ಚಬೇಕು.

ಈ ಚಿತ್ರದಲ್ಲಿ ನಿಮಗೇನು ಕಾಣಿಸಿತು?

ಆಪ್ಟಿಕಲ್‌ ಇಲ್ಯೂಷನ್‌ ನೋಡುವಷ್ಟು ಸುಲಭವಲ್ಲ. ಈ ಚಿತ್ರದಲ್ಲಿ ನಿಮ್ಮ ಕಣ್ಣಿಗೆ ಬೀಳುವುದೇ ಹಚ್ಚ ಹಸಿರಿನ ಗಿಡಗಳು. ಇಲ್ಲಿ ಎಲ್ಲವೂ ಸಾಮಾನ್ಯವಾಗಿ ಕಂಡರೂ ಈ ಹಸಿರು ಹಾವು ಜಾಣತನದಿಂದ ಎಲೆಗಳ ನಡುವೆ ಅಡಗಿ ಕುಳಿತುಕೊಂಡಿದೆ. ಈ ಹಾವಿನ ಬಣ್ಣವು ಸುತ್ತಮುತ್ತಲಿನ ಪ್ರದೇಶಗಳೊಂದಿಗೆ ಸಂಪೂರ್ಣವಾಗಿ ಬೆರೆತು ಹೋಗಿದ್ದು ನಿಮಗೆ ಗುರುತಿಸಲು ಕಷ್ಟವಾಗಬಹುದು. ಈ ಒಗಟು ಕೇವಲ 10 ಸೆಕೆಂಡುಗಳಲ್ಲಿ ಪೂರ್ಣಗೊಳಿಸಲು ಸವಾಲು ಹಾಕಲಾಗಿದೆ. ನೀವು ಈ ಸವಾಲನ್ನು ಸ್ವೀಕರಿಸಿದ್ದೀರಿ ಎಂದು ಭಾವಿಸುತ್ತೇವೆ.

ಇದನ್ನೂ ಓದಿ: ನೀವು ಜಾಣರೇ, ಈ ಚಿತ್ರದಲ್ಲಿರುವ HOG ಪದವನ್ನು 10 ಸೆಕೆಂಡುಗಳಲ್ಲಿ ಕಂಡು ಹಿಡಿಯುವಿರಾ?

ಹಸಿರು ಹಾವು ನಿಮ್ಮ ಕಣ್ಣಿಗೆ ಬಿದ್ದಿತೇ?

ನೂರು ಜನರಲ್ಲಿ ಐದು ಜನರು ಮಾತ್ರ ನಿಗದಿತ ಸಮಯದಲ್ಲಿ ಈ ಹಾವನ್ನು ಗುರುತಿಸಲು ಸಾಧ್ಯ. ನೀವು ಕೂಡ ಛಲ ಬಿಡದೇ ಪ್ರಯತ್ನಿಸಿ. ಹಾವು ನಿಮ್ಮ ಕಣ್ಣಿಗೆ ಬಿದ್ದಿಲ್ಲವಾದರೆ ಚಿಂತಿಸಬೇಡಿ. ನಾವೇ ನಿಮಗೆ ಹಾವು ಎಲ್ಲಿದೆ ಎಂದು ಹೇಳುತ್ತೇವೆ. ಈ ಕೆಳಗಿನ ಚಿತ್ರವನ್ನು ಗಮನಿಸಿ, ನಿಮ್ಮ ಕಣ್ಣಿಗೆ ಹಸಿರು ಹಾವು ಕಾಣಿಸುತ್ತದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

MNNIT ಇಂಟರ್ನ್‌ಶಿಪ್‌ ಆಫರ್; ಸೈಬರ್ ಸೆಕ್ಯೂರಿಟಿ ಕಲಿಯುವವರಿಗೆ ಸುವರ್ಣಾವಕಾಶ, ಜೊತೆಗೆ 20,000ರೂ. ಸ್ಟೈಪೆಂಡ್! – Kannada News

MNNIT ಇಂಟರ್ನ್‌ಶಿಪ್‌ ಆಫರ್Image Credit source: Pinterest

ಇಂದಿನ ಡಿಜಿಟಲ್ ಯುಗದಲ್ಲಿ ಆನ್‌ಲೈನ್ ವಂಚನೆ ಹಾಗೂ ಸೈಬರ್ ಅಪರಾಧಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಇಂತಹ ಸೈಬರ್ ದಾಳಿಗಳಿಗೆ ಬ್ರೇಕ್ ಹಾಕಲು ದೇಶದ ಯುವ ಸಮೂಹವನ್ನು ಹೈಟೆಕ್ ಸುರಕ್ಷತಾ ಕವಚದೊಂದಿಗೆ ಸಜ್ಜುಗೊಳಿಸಲು ಕೇಂದ್ರ ಸರ್ಕಾರ ಮತ್ತು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಮುಂದಾಗಿವೆ. ಇದರ ಭಾಗವಾಗಿ, ಪ್ರಯಾಗ್‌ರಾಜ್‌ನ ಮೋತಿಲಾಲ್ ನೆಹರು ರಾಷ್ಟ್ರೀಯ ತಾಂತ್ರಿಕ ಸಂಸ್ಥೆ (MNNIT) ಸೈಬರ್ ಸೆಕ್ಯೂರಿಟಿ ವಲಯದಲ್ಲಿ ವಿಶೇಷ ಇಂಟರ್ನ್‌ಶಿಪ್ (Internship) ಅವಕಾಶಗಳನ್ನು ಪ್ರಕಟಿಸಿದೆ. ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ (MeitY) ಪ್ರಾಯೋಜಕತ್ವದಡಿ, ಮಾಹಿತಿ ಭದ್ರತೆ ಮತ್ತು ಜಾಗೃತಿ (ISEA) ಪ್ರಾಜೆಕ್ಟ್‌ನ ಮೂರನೇ ಹಂತದ ಅಡಿಯಲ್ಲಿ ಈ ತರಬೇತಿಯನ್ನು ನೀಡಲಾಗುತ್ತಿದೆ.

ಇಂಟರ್ನ್‌ಶಿಪ್ ಅವಧಿ ಮತ್ತು ಸಿಗುವ ಸ್ಟೈಪೆಂಡ್ ಎಷ್ಟು?

ಈ ತಾಂತ್ರಿಕ ಇಂಟರ್ನ್‌ಶಿಪ್ ಕಾರ್ಯಕ್ರಮವು ಒಟ್ಟು 6 ರಿಂದ 8 ವಾರಗಳ ಅವಧಿಯದ್ದಾಗಿರಲಿದೆ (ಅಂದಾಜು 2 ತಿಂಗಳು). ತರಬೇತಿಯ ಅವಧಿಯಲ್ಲಿ ಆಯ್ಕೆಯಾಗುವ ಪ್ರತಿ ವಿದ್ಯಾರ್ಥಿಗೆ ಒಟ್ಟು 20,000ರೂ. ಸ್ಟೈಪೆಂಡ್ (ಅಂದರೆ ತಿಂಗಳಿಗೆ 10,000ರೂ. ರಂತೆ) ಆರ್ಥಿಕ ಸಹಾಯವನ್ನು ನೀಡಲಾಗುತ್ತದೆ. ಇದರೊಂದಿಗೆ ವಿದ್ಯಾರ್ಥಿಗಳಿಗೆ ಸಂಸ್ಥೆಯ ಕ್ಯಾಂಪಸ್ ಒಳಗಡೆಯೇ ಉಚಿತ ಹಾಸ್ಟೆಲ್ (ವಸತಿ) ಮತ್ತು ಭೋಜನದ ಸೌಲಭ್ಯವನ್ನೂ ಕಲ್ಪಿಸಿಕೊಡಲಾಗುತ್ತದೆ.

ಯಾರಿಗೆಲ್ಲಾ ಅವಕಾಶ?

  • ಕಂಪ್ಯೂಟರ್ ಸೈನ್ಸ್ ಮತ್ತು ಇನ್ಫರ್ಮೇಷನ್ ಟೆಕ್ನಾಲಜಿ (IT) ಹಿನ್ನೆಲೆಯುಳ್ಳ ವಿದ್ಯಾರ್ಥಿಗಳಿಗೆ ಮಾತ್ರ ಈ ಇಂಟರ್ನ್‌ಶಿಪ್‌ನಲ್ಲಿ ಭಾಗವಹಿಸಲು ಅವಕಾಶವಿದೆ.
  • ಪ್ರಸ್ತುತ B.Tech, MCA, BCA, B.Sc (CS/IT) ಅಥವಾ M.Sc (CS/IT) ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
  • ಅರ್ಜಿದಾರರು C, C++, Java, ಅಥವಾ Python ನಂತಹ ಪ್ರೋಗ್ರಾಮಿಂಗ್ ಭಾಷೆಗಳಲ್ಲಿ ಉತ್ತಮ ಜ್ಞಾನ ಹೊಂದಿರಬೇಕು.
  • ನೆಟ್‌ವರ್ಕ್ ಸೆಕ್ಯೂರಿಟಿ, ಕ್ರಿಪ್ಟೋಗ್ರಫಿ (Cryptography) ಮತ್ತು ಆಧುನಿಕ ಸೈಬರ್ ಸೆಕ್ಯೂರಿಟಿ ಪರಿಕರಗಳ ಬಗ್ಗೆ ಮೂಲಭೂತ ಜ್ಞಾನ ಇರುವವರಿಗೆ ಆಯ್ಕೆ ಪ್ರಕ್ರಿಯೆಯಲ್ಲಿ ಮೊದಲ ಆದ್ಯತೆ ನೀಡಲಾಗುತ್ತದೆ.
  • ಅರ್ಜಿದಾರರ ಗರಿಷ್ಠ ವಯೋಮಿತಿ 25 ವರ್ಷ ಮೀರಿರಬಾರದು (SC/ST/OBC ಮತ್ತು ಮಹಿಳಾ ಅಭ್ಯರ್ಥಿಗಳಿಗೆ ನಿಯಮಾವಳಿಗಳ ಪ್ರಕಾರ ವಯೋಮಿತಿ ಸಡಿಲಿಕೆ ಇರುತ್ತದೆ).

ಇದನ್ನೂ ಓದಿ: 16 ಸರ್ಕಾರಿ ಉದ್ಯೋಗ ತಿರಸ್ಕರಿಸಿ IPS ಆದ ಯುವತಿ; ಮೊದಲ ಪ್ರಯತ್ನದಲ್ಲೇ UPSC ಪಾಸ್ ಮಾಡಿದ ತೃಪ್ತಿ ಭಟ್ ಯಶೋಗಾಥೆ

ಇಂಟರ್ನ್‌ಶಿಪ್‌ನಲ್ಲಿ ಏನೆಲ್ಲಾ ಕಲಿಯಬಹುದು?

ಆಯ್ಕೆಯಾದ ಅಭ್ಯರ್ಥಿಗಳಿಗೆ MNNIT ಸಂಸ್ಥೆಯ ಹಿರಿಯ ಪ್ರೊಫೆಸರ್‌ಗಳು ಹಾಗೂ ತಜ್ಞರ ಮಾರ್ಗದರ್ಶನದಲ್ಲಿ ಈ ಕೆಳಗಿನ ಪ್ರಮುಖ ವಿಷಯಗಳ ಕುರಿತು ಪ್ರಾಯೋಗಿಕ ಅನುಭವ ಮತ್ತು ಲೈವ್ ರಿಸರ್ಚ್ ಮಾಡುವ ಅವಕಾಶ ಸಿಗಲಿದೆ:

  • ಇನ್ಫರ್ಮೇಷನ್ ಸೆಕ್ಯೂರಿಟಿ (ಮಾಹಿತಿ ಭದ್ರತೆ)
  • ನೆಟ್‌ವರ್ಕ್ ಸೆಕ್ಯೂರಿಟಿ ಮತ್ತು ಎಥಿಕಲ್ ಹ್ಯಾಕಿಂಗ್
  • ಸೈಬರ್ ದಾಳಿಗಳನ್ನು ತಡೆಯುವ ಸುಧಾರಿತ ಫ್ರೇಮ್‌ವರ್ಕ್ ವಿನ್ಯಾಸ

ಆಯ್ಕೆ ಪ್ರಕ್ರಿಯೆ ಮತ್ತು ಅರ್ಜಿ ಸಲ್ಲಿಸುವ ವಿಧಾನ:

ಈ ಇಂಟರ್ನ್‌ಶಿಪ್‌ಗಾಗಿ ದೇಶಾದ್ಯಂತದ ಮೆರಿಟ್ ವಿದ್ಯಾರ್ಥಿಗಳಿಂದ ಈಗಾಗಲೇ ಭಾರಿ ಪ್ರಮಾಣದ ಅರ್ಜಿಗಳು ಸಲ್ಲಿಕೆಯಾಗುತ್ತಿವೆ. ಅರ್ಹ ಅಭ್ಯರ್ಥಿಗಳನ್ನು ಇಂಟರ್ವ್ಯೂ (ಸಂದರ್ಶನ) ಮೂಲಕ ಆಯ್ಕೆ ಮಾಡಲಾಗುತ್ತದೆ.

ಆಸಕ್ತ ವಿದ್ಯಾರ್ಥಿಗಳು MNNIT ಅಧಿಕೃತ ವೆಬ್‌ಸೈಟ್‌ನಿಂದ ನಿಗದಿಪಡಿಸಿದ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಂಡು, ತಮ್ಮ ಶೈಕ್ಷಣಿಕ ದಾಖಲಾತಿಗಳ ಸ್ಕ್ಯಾನ್ ಮಾಡಿದ ಪ್ರತಿಗಳೊಂದಿಗೆ isea@mnnit.ac.in ಇಮೇಲ್ ಐಡಿಗೆ ಇಮೇಲ್ ಕಳುಹಿಸುವ ಮೂಲಕ ಅರ್ಜಿ ಸಲ್ಲಿಸಬೇಕಿರುತ್ತದೆ. ಇಮೇಲ್ ಕಳುಹಿಸುವಾಗ ಸಬ್ಜೆಕ್ಟ್ ಲೈನ್‌ನಲ್ಲಿ “Application for Internship for 6-8 Weeks” ಎಂದು ಕಡ್ಡಾಯವಾಗಿ ನಮೂದಿಸಬೇಕು.

ಶಿಕ್ಷಣಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಐಪಿಎಲ್​ನಲ್ಲಿ ‘ಹ್ಯಾಟ್ರಿಕ್’ ಟ್ರೋಫಿ ಗೆದ್ದ ಮೂವರು ಆಟಗಾರರು ಯಾರು ಗೊತ್ತಾ?

Source link

ಆನ್‌ಲೈನ್ ಬೆಟ್ಟಿಂಗ್ ವಿರುದ್ಧ ಪೊಲೀಸರ ಕಾರ್ಯಾಚರಣೆ: 8,750 ಕ್ಕೂ ಹೆಚ್ಚು ವೆಬ್‌ಸೈಟ್‌ಗಳು ಬ್ಲಾಕ್! – Kannada News

ಆನ್‌ಲೈನ್ ಬೆಟ್ಟಿಂಗ್ ವಿರುದ್ಧ ಕರ್ನಾಟಕ ಪೊಲೀಸರ ಬಿಗ್ ಕ್ರಾಕ್‌ಡೌನ್

ಬೆಂಗಳೂರು, ಜೂನ್ 02: ಇತ್ತೀಚೆಗಷ್ಟೇ ಮುಕ್ತಾಯಗೊಂಡ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಫೈನಲ್ ಪಂದ್ಯದ ವೇಳೆ ಅಕ್ರಮ ಆನ್‌ಲೈನ್ ಜೂಜಾಟ ಮತ್ತು ಬೆಟ್ಟಿಂಗ್‌ಗೆ ಲಗಾಮು ಹಾಕಲು ಕರ್ನಾಟಕ ಪೊಲೀಸರು ಮತ್ತು ಸೈಬರ್ ಕ್ರೈಮ್ ವಿಭಾಗದ ಅಧಿಕಾರಿಗಳು ಬೃಹತ್ ಕಾರ್ಯಾಚರಣೆ ನಡೆಸಿದ್ದಾರೆ. ಐಪಿಎಲ್ ಕ್ರಿಕೆಟ್ ಜೂಜಾಟವನ್ನು ಗುರಿಯಾಗಿಸಿಕೊಂಡು ದೇಶಾದ್ಯಂತ ಸಕ್ರಿಯವಾಗಿದ್ದ ಸುಮಾರು 8,750ಕ್ಕೂ ಹೆಚ್ಚು ಅಕ್ರಮ ಬೆಟ್ಟಿಂಗ್ ವೆಬ್‌ಸೈಟ್‌ಗಳು ಹಾಗೂ ಲಿಂಕ್‌ಗಳನ್ನು ಯಶಸ್ವಿಯಾಗಿ ಬ್ಲಾಕ್ ಮಾಡಲಾಗಿದೆ.

ಮುಖ್ಯಾಂಶಗಳು

  • ಐಪಿಎಲ್ ಫೈನಲ್ ವೇಳೆ ಅಕ್ರಮ ಆನ್‌ಲೈನ್ ಬೆಟ್ಟಿಂಗ್ ವಿರುದ್ಧ ಬೃಹತ್ ಕಾರ್ಯಾಚರಣೆ.
  • ಕರ್ನಾಟಕ ಪೊಲೀಸರ ಶಿಫಾರಸಿನ ಮೇರೆಗೆ 8,750 ವೆಬ್‌ಸೈಟ್‌ಗಳು ಸಂಪೂರ್ಣ ಬ್ಲಾಕ್.
  • ಯುವ ಪೀಳಿಗೆ ಹಣ ಕಳೆದುಕೊಳ್ಳದಂತೆ ಸೈಬರ್ ಪೊಲೀಸರಿಂದ ಕಟ್ಟುನಿಟ್ಟಿನ ಎಚ್ಚರಿಕೆ.

ಸೈಬರ್ ಪೊಲೀಸರ ಹದ್ದಿನ ಕಣ್ಣು

ಐಪಿಎಲ್ ಫೈನಲ್ ಪಂದ್ಯದ ಸಂದರ್ಭದಲ್ಲಿ ಕೋಟ್ಯಂತರ ರೂಪಾಯಿ ಬೆಟ್ಟಿಂಗ್ ನಡೆಯುವ ಸಾಧ್ಯತೆ ಇರುವುದನ್ನು ಮನಗಂಡಿದ್ದ ಸೈಬರ್ ಕ್ರೈಮ್ ವಿಭಾಗದ ಸಿಐಡಿ (CID) ಅಧಿಕಾರಿಗಳು ತೀವ್ರ ನಿಗಾ ವಹಿಸಿದ್ದರು. ಸಾರ್ವಜನಿಕರನ್ನು ಸುಲಭವಾಗಿ ಹಣ ಗಳಿಸುವ ಆಮಿಷಕ್ಕೆ ಒಡ್ಡಿ ಹಣ ದೋಚುತ್ತಿದ್ದ ಸಾವಿರಾರು ಬೆಟ್ಟಿಂಗ್ ಪ್ಲಾಟ್‌ಫಾರ್ಮ್‌ಗಳನ್ನು ತಾಂತ್ರಿಕ ವಿಶ್ಲೇಷಣೆಯ ಮೂಲಕ ಪತ್ತೆ ಹಚ್ಚಲಾಗಿದೆ.

ಕರ್ನಾಟಕ ಪೊಲೀಸರ ಶಿಫಾರಸಿನ ಮೇರೆಗೆ ಕೇಂದ್ರ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ಈ ಅಕ್ರಮ ವೆಬ್‌ಸೈಟ್‌ಗಳನ್ನು ದೇಶಾದ್ಯಂತ ನಿಷೇಧಿಸಲು ತಕ್ಷಣದ ಆದೇಶ ಹೊರಡಿಸಿದೆ.

ಯುವ ಪೀಳಿಗೆಗೆ ಸೈಬರ್ ತಜ್ಞರ ಎಚ್ಚರಿಕೆ

ಅನಧಿಕೃತ ಆನ್‌ಲೈನ್ ಗೇಮಿಂಗ್ ಮತ್ತು ಬೆಟ್ಟಿಂಗ್ ವೆಬ್‌ಸೈಟ್‌ಗಳು ಕೇವಲ ಹಣದ ನಷ್ಟವನ್ನು ಮಾತ್ರ ಉಂಟುಮಾಡುವುದಿಲ್ಲ, ಬದಲಿಗೆ ಬಳಕೆದಾರರ ಬ್ಯಾಂಕಿಂಗ್ ವಿವರಗಳು ಹಾಗೂ ವೈಯಕ್ತಿಕ ಡೇಟಾವನ್ನು ಕದಿಯುವ ಸೈಬರ್ ವಂಚನೆಗಳಿಗೂ ದಾರಿಯಾಗುತ್ತಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ವಿಶೇಷವಾಗಿ ಯುವಕರು ಮತ್ತು ವಿದ್ಯಾರ್ಥಿಗಳು ಇಂತಹ ಆಪ್‌ಗಳ ಮೋಡಿಗೆ ಬಲಿಯಾಗಿ ಲಕ್ಷಾಂತರ ರೂಪಾಯಿ ಸಾಲದ ಸುಳಿಗೆ ಸಿಲುಕುತ್ತಿದ್ದಾರೆ. ಯಾವುದೇ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಹಣ ಹೂಡಿ ಕ್ರಿಕೆಟ್ ಬೆಟ್ಟಿಂಗ್ ನಡೆಸುವುದು ಕಾನೂನುಬಾಹಿರ ಹಾಗೂ ಶಿಕ್ಷಾರ್ಹ ಅಪರಾಧ. ಇಂತಹ ಸೈಬರ್ ಅಪರಾಧಗಳ ವಿರುದ್ಧ ನಮ್ಮ ತನಿಖೆ ಮತ್ತು ಕ್ರಾಕ್‌ಡೌನ್ ಕಾರ್ಯಾಚರಣೆ ಮುಂದೆಯೂ ಮುಂದುವರಿಯಲಿದೆ ಎಂದು ಕರ್ನಾಟಕ ಸೈಬರ್ ಪೊಲೀಸ್ ವಿಭಾಗ ಎಚ್ಚರಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಸರ್ವ ಧರ್ಮ ಸ್ವಾಮೀಜಿಗಳ ಸಮ್ಮುಖದಲ್ಲಿ ಪೂರ್ವಾಭಿಮುಖವಾಗಿ ಪ್ರಮಾಣವಚನ ಸ್ವೀಕರಿಸಲಿರುವ ಡಿಕೆಶಿ – Kannada News

ಬೆಂಗಳೂರು, (ಜೂನ್ 02): ಡಿಕೆ ಶಿವಕುಮಾರ್ (DK Shivakumar) ಅವರು ನಾಳೆ (ಮೇ ಜೂನ್ 03) ಸಂಜೆ 4.05ಕ್ಕೆ ಲೋಕಭವನದ (Lokbhavana) ಗಾಜಿನಮನೆಯಲ್ಲಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ವಿಶೇಷ ಅಂದ್ರೆ, ಸರ್ವ ಧರ್ಮ ಸ್ವಾಮೀಜಿಗಳ ಸಮ್ಮುಖದಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ಈವರೆಗೂ ರಾಜ್ಯದಲ್ಲಿ ಸರ್ವಧರ್ಮಗಳ ಸ್ವಾಮೀಜಿಗಳ ಸಮ್ಮುಖದಲ್ಲಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಉದಾಹರಣೆಗಳಿಲ್ಲ. ಹೀಗಾಗಿ ಡಿಕೆ ಶಿವಕುಮಾರ್ ಅವರೇ ಮೊದಲ ಬಾರಿಗೆ ಎಲ್ಲಾ ಧರ್ಮಗಳ ಸ್ವಾಮೀಜಿಗಳ ಸಮ್ಮುಖದಲ್ಲಿ ಅಧಿಕಾರ ಸ್ವೀಕರಿಸಲಿದ್ದು, ಈಗಾಗಲೇ ಎಲ್ಲಾ ಧರ್ಮ, ಜಾತಿಗಳ ಸುಮಾರು 55 ಸ್ವಾಮೀಜಿಗಳಿಗೆ ಆಹ್ವಾನ ನೀಡಲು ಸೂಚನೆ ನೀಡಲಾಗಿದೆ. ಈ ಮೂಲಕ ಸರ್ವ ಧರ್ಮ ಸಹಿಷ್ಣುತೆ, ಪರಸ್ಪರ ಸಹಬಾಳ್ವೆ, ಶಾಂತಿ ಸೌಹಾರ್ದತೆಯ ಸಂದೇಶ ಸಾರಲು ಮುಂದಾಗಿದ್ದಾರೆ.

ಮುಖ್ಯಾಂಶಗಳು

  • ನಾಳೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸುವ ಡಿ.ಕೆ.ಶಿವಕುಮಾರ್​
  • ಸರ್ವ ಧರ್ಮ, ಸಮುದಾಯದ ಶ್ರೀಗಳ ಸಮ್ಮುಖದಲ್ಲಿ ಡಿಕೆ ಪದಗ್ರಹಣ
  • ಲೋಕಭವನದಲ್ಲಿ ನಡೆಯೋ ಪ್ರಮಾಣವಚನಕ್ಕೆ 55 ಮಠಾಧಿಪತಿಗಳು,
    ಫಾದರ್ ಹಾಗೂ ಮೌಲ್ವಿಗಳಿಗೆ ಸರ್ಕಾರದಿಂದ ಆಹ್ವಾನ
  • ಪೂರ್ವಾಭಿಮುಖವಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಸಿಎಂ ಮತ್ತು ಸಚಿವರು

ಸರ್ವ ಧರ್ಮ ಸ್ವಾಮೀಜಿಗಳ ಸಮ್ಮುಖದಲ್ಲಿ ಪ್ರಮಾಣವಚನ

ಸರ್ವ ಧರ್ಮ, ಸರ್ವ ಸಮುದಾಯದ ಸ್ವಾಮೀಜಿಗಳ ಸಮ್ಮುಖದಲ್ಲಿ ಡಿಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದು, 55 ಸ್ವಾಮೀಜಿಗಳು, ಫಾದರ್ , ಮಠಾಧಿಪತಿಗಳು ಹಾಗೂ ಮೌಲ್ವಿಗಳಿಗೆ ಸರ್ಕಾರದಿಂದಲೇ ಅಧಿಕೃತ ಆಹ್ವಾನ ಕಳಿಸಲು ಡಿಕೆ ಶಿವಕುಮಾರ್ ಸೂಚನೆ ನೀಡಿದೆ.ಇದರ ಬೆನ್ನಲ್ಲೇ ಯಾರಿಗೆಲ್ಲಾ ಆಹ್ವಾನ ನೀಡಬೇಕೆಂದು ಶಿಷ್ಟಾಚಾರ ವಿಭಾಗವು ಡಿ.ಕೆ ಶಿವಕುಮಾರ್ ಕಚೇರಿಯಿಂದ ಪಟ್ಟಿ ಪಡೆದುಕೊಂಡಿದೆ.

ಇದನ್ನೂ ಓದಿ: ಬೆಂಗಳೂರಿಗರೇ ಗಮನಿಸಿ: ಸಿಎಂ ಪದಗ್ರಹಣದ ಹಿನ್ನೆಲೆ ನಾಳೆ ನಗರದ ಈ ರಸ್ತೆಗಳ ಸಂಚಾರದಲ್ಲಿ ಮಾರ್ಪಾಡು

ಪೂರ್ವಾಭಿಮುಖವಾಗಿ ಪ್ರಮಾಣ ವಚನ

ಇನ್ನು ಡಿಕೆ ಶಿವಕುಮಾರ್ ಜ್ಯೋತಿಷ್ಯಯನ್ನು ಬಹಳ ನಂಬುವರು. ಹೀಗಾಗಿ ಸ್ವಾಮೀಜಿಗಳು ಹೇಳಿದ ದಿನಾಂಕ, ಸಮಯವನ್ನು ಚಾಚು ತಪ್ಪಿದೆ ಪಾಲನೆ ಮಾಡಲಿದ್ದಾರೆ. ಅದರಂತೆ ಡಿಕೆ ಶಿವಕುಮಾರ್ ಅವರು ಪೂರ್ವಾಭಿಮುಖವಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದಕ್ಕಾಗಿ ಲೋಕಭವನದ ಗಾಜಿನ ಮನೆಯಲ್ಲಿ ಪೂರ್ವಾಭಿಮುಖವಾಗಿ ವೇದಿಕೆ ನಿರ್ಮಾಣ ಮಾಡಲಾಗಿದೆ. ಗಾಜಿನ ಮನೆಯಲ್ಲಿ 1100 ರಷ್ಟು ಆಸನಗಳ ವ್ಯವಸ್ಥೆ ಮಾಡಲಾಗಿದೆ. ಸ್ವಾಮೀಜಿಗಳು, ಧರ್ಮಗುರುಗಳು, ನ್ಯಾಯಾಧೀಶರು, ವಿಶೇಷ ಆಹ್ವಾನಿತರು, ಬೇರೆ ರಾಜ್ಯಗಳ ಸಿಎಂಗಳಿಗೆ ಸೇರಿದಂತೆ ವಿಶೇಷ ಆಸನಗಳ ವ್ಯವಸ್ಥೆ ಮಾಡಲಾಗಿದೆ.

ಆಹ್ವಾನದ ಪಟ್ಟಿಯಲ್ಲಿರುವ ಪ್ರಮುಖ ಶ್ರೀಗಳ ಹೆಸರು

  •  ಶ್ರೀ ನಿರ್ಮಲಾನಂದನಾಥ ಮಹಾಸ್ವಾಮಿಗಳು- ಆದಿಚುಂಚನಗಿರಿ ಮಹಾಸಂಸ್ಥಾನಮಠ, ಆದಿಚುಂಚನಗಿರಿ.
  •  ಶ್ರೀ ಶಿವರಾತ್ರಿದೇಶಿಕೇಂದ್ರ ಮಹಾಸ್ವಾಮಿಗಳು- ಸುತ್ತೂರುಮಠ,ಮೈಸೂರು.
  • ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು- ಶ್ರೀಸಿದ್ಧಗಂಗಾಮಠ, ತುಮಕೂರು.
  •  ಶ್ರೀ ನಿಶ್ಚಲಾನಂದನಾಥ ಮಹಾಸ್ವಾಮಿಗಳು- ವಿಶ್ವ ಒಕ್ಕಲಿಗ ಮಹಾಸಂಸ್ಥಾನಮಠ, ಬೆಂಗಳೂರು.
    05. ಶ್ರೀ ನಂಜಾವಧೂತ ಮಹಾಸ್ವಾಮಿಗಳು- ಗುರು ಬೃಹ್ಮೇಶ್ವರಮಠ, ಪಟ್ಟನಾಯಕನಹಳ್ಳಿ, ಶಿರಾ.
  • .ಶ್ರೀ ಕರಿವೃಷಭ ದೇಶಿಕೇಂದ್ರ ಶಿವಯೋಗಿ ಮಹಾಸ್ವಾಮಿಗಳು, ಕಾಡಸಿದ್ಧೇಶ್ವರಮಠ, ನೊಣವಿನಕೆರೆ.
  •  ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು, ತರಳಬಾಳು ಬೃಹನ್ಮಠ, ಸಿರಿಗೆರೆ.
  •  ಶ್ರೀ ವಚನಾನಂದ ಮಹಾಸ್ವಾಮಿಗಳು- ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ, ಹರಿಹರ.
  •  ಶ್ರೀ ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ-ಮಹಾಸ್ವಾಮಿಗಳು,ರಂಭಾಪುರ ಪೀಠ, ಬಾಳೆಹೊನ್ನೂರು.
  • ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಮಹಾಸ್ವಾಮಿಗಳು, ಉಜ್ಜಯಿನಿಪೀಠ,ಉಜ್ಜಯಿನಿ. ವಿಜಯನಗರ ಜಿಲ್ಲೆ.
  • ಶ್ರೀ ಭೀಮಾಶಂಕರ ಶಿವಾಚಾರ್ಯ ಮಹಾಸ್ವಾಮಿಗಳು, ಕೇದಾರಪೀಠ, ಕೇದಾರನಾಥ.
  •  ಶ್ರೀ ಚೆನ್ನಸಿದ್ಧರಾಮ ಶಿವಾಚಾರ್ಯ ಮಹಾಸ್ವಾಮಿಗಳು,ಶ್ರೀಶೈಲಪೀಠ,ಶ್ರೀಶೈಲ.
  •  ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಕನಕ ಗುರುಪೀಠ,ಕಾಗಿನೆಲೆ
  •  ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಭೋವಿ ಗುರುಪೀಠ,ಚಿತ್ರದುರ್ಗ.
  • ಶ್ರೀ ಶಾಂತವೀರ ಸ್ವಾಮೀಜಿ ಕುಂಚಟಿಗ ಗುರುಪೀಠ,ಹೊಸದುರ್ಗ.
  • ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ,ಮಾದಾರ ಚನ್ನಯ್ಯ ಗುರುಪೀಠ, ಚಿತ್ರದುರ್ಗ.
  •  ಶ್ರೀ ವಿಶ್ವಪ್ರಸನ್ನ ತೀರ್ಥ ಮಹಾಸ್ವಾಮಿಗಳು, ಪೇಜಾವರಮಠ, ಉಡುಪಿ.
  •  ಶ್ರೀ ರವಿಶಂಕರ ಗುರೂಜೀ, ಆರ್ಟ್ ಆಪ್ ಲಿವಿಂಗ್ ಆಶ್ರಮ, ಬೆಂಗಳೂರು.
  •  ಶ್ರೀ ಸ್ವಸ್ತಿಶ್ರೀ ಆಗಮಕೀರ್ತಿ ಭಟ್ಟಾರಕ ಮಹಾಸ್ವಾಮಿಗಳು, ದಿಗಂಬರ ಜೈನಮಠ, ಶ್ರವಣಬೆಳಗೊಳ.
  • ಶ್ರೀ ವೀರಭದ್ರ ಚನ್ನಮಲ್ಲ ಮಹಾಸ್ವಾಮಿಗಳು, ನಿಡುಮಾಮಡಿಮಠ, ಬೆಂಗಳೂರು.
  •  ಆನಂದ ಬಿಕ್ಕು, ಮಹಾಬೋಧಿ ಸೊಸಾಯಿಟಿ, ಬೆಂಗಳೂರು.
  •  ಆರ್ಚಬಿಷಪ್ ಡಾ.ಪೀಟರ್ ಮಚಾಡೋ,ಕ್ಯಾಥೋಲಿಕ್ ಚರ್ಚ,ಬೆಂಗಳೂರು.
  • ಹಜರತ್ ಹಫೀಜ್ ಡಾ.ಸೈಯದ್ ಮೊಹಮ್ಮದ್ ಅಲಿ ಅಲ್ ಹುಸೈನ್,ದರ್ಗಾ ಹಜರತ್ ಖ್ವಾಜಾ ಬಂದೆನವಾಜ್,ಕಲಬುರ್ಗಿ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ತಮಿಳುನಾಡು ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ; ಬಿಜೆಪಿಗೆ ಕೆ. ಅಣ್ಣಾಮಲೈ ದಿಢೀರ್ ರಾಜೀನಾಮೆ

ನವದೆಹಲಿ, ಜೂನ್ 2: ತಮಿಳುನಾಡಿನ ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಮೂಡಿಸುವಂತಹ ಬೆಳವಣಿಗೆಯೊಂದು ನಡೆದಿದೆ. ತಮಿಳುನಾಡು ಬಿಜೆಪಿಯ ಪ್ರಮುಖ ನಾಯಕ ಕೆ. ಅಣ್ಣಾಮಲೈ ಇಂದು ಭಾರತೀಯ ಜನತಾ ಪಕ್ಷಕ್ಕೆ (BJP) ರಾಜೀನಾಮೆ ನೀಡಿದ್ದಾರೆ. ಕೆಲವು ದಿನಗಳಿಂದ ಅಣ್ಣಾಮಲೈ ಬಿಜೆಪಿನ ತೊರೆದು ಹೊಸ ಪಕ್ಷ ಕಟ್ಟಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಲೇ ಇದ್ದವು. ಆದರೆ, ಈ ಬಗ್ಗೆ ಅಣ್ಣಾಮಲೈ ಯಾವುದೇ ಸುಳಿವು ಬಿಟ್ಟುಕೊಟ್ಟಿರಲಿಲ್ಲ. ಇಂದು ದೆಹಲಿಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ನಬಿನ್ ಅವರನ್ನು ಭೇಟಿಯಾದ ಅಣ್ಣಾಮಲೈ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ.

ತಮಿಳುನಾಡು ರಾಜಕಾರಣದಲ್ಲಿ ಅತ್ಯಂತ ಪ್ರಭಾವಶಾಲಿ ಮತ್ತು ಆಕ್ರಮಣಕಾರಿ ನಾಯಕ ಎಂದೇ ಗುರುತಿಸಿಕೊಂಡಿದ್ದ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಅವರು ಬಿಜೆಪಿಗೆ ದಿಢೀರ್ ರಾಜೀನಾಮೆ ನೀಡಿರುವುದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ದೆಹಲಿಗೆ ಭೇಟಿ ನೀಡಿರುವ ಅವರು ಪಕ್ಷದ ಉಸ್ತುವಾರಿ ಹಾಗೂ ಹಿರಿಯ ನಾಯಕರಾದ ನಿತಿನ್ ನಬಿನ್ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಹಸ್ತಾಂತರಿಸಿದ್ದಾರೆ. ತಮಿಳುನಾಡಿನಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣಾ ಫಲಿತಾಂಶಗಳು ಮತ್ತು ಬಿಜೆಪಿಯ ಆಂತರಿಕ ಭಿನ್ನಾಭಿಪ್ರಾಯಗಳ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

Source link

Exit mobile version