ಬುಲೆಟ್ ರೈಲು ಯೋಜನೆ ವಿಳಂಬವನ್ನು ಟೀಕಿಸಿದ ಜಪಾನ್ ಮಾಜಿ ಸಚಿವ; ಭಾರತ ತಿರುಗೇಟು – Kannada News | Former Japan minister slams India for bullet train project delay Government hits back

ನವದೆಹಲಿ, ಜುಲೈ 17: ಮುಂಬೈ-ಅಹಮದಾಬಾದ್ ಬುಲೆಟ್ ರೈಲು (Bullet Train) ಯೋಜನೆ ವಿಳಂಬವಾಗುತ್ತಿದೆ ಎಂದು ಜಪಾನ್‌ನ ಮಾಜಿ ಸಚಿವರೊಬ್ಬರು ಮಾಡಿರುವ ಆರೋಪಗಳನ್ನು ಭಾರತ ತಳ್ಳಿಹಾಕಿದೆ. ಇದು ಕೇವಲ ಜಪಾನ್ ಮಾಜಿ ಸಚಿವರ ವೈಯಕ್ತಿಕ ಅಭಿಪ್ರಾಯ ಎಂದು ಹೇಳಿರುವ ಭಾರತ ಈ ಯೋಜನೆಯ ನಿರ್ಮಾಣ ಕಾಮಗಾರಿಯು ಪ್ರಗತಿಯಲ್ಲಿದೆ ಎಂದು ಸ್ಪಷ್ಟಪಡಿಸಿದೆ. ಈ ಬಗ್ಗೆ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಅಹಮದಾಬಾದ್-ಮುಂಬೈ ಹೈಸ್ಪೀಡ್ ರೈಲು ಯೋಜನೆಗೆ ಸಂಬಂಧಿಸಿದಂತೆ ಭಾರತ ಮತ್ತು ಜಪಾನ್ ನಡುವಿನ ಮಾತುಕತೆಗಳು ಉತ್ತಮವಾಗಿ ಸಾಗುತ್ತಿವೆ ಎಂದು ತಿಳಿಸಿದ್ದಾರೆ.

ಜಪಾನ್ ಮಾಜಿ ಸಚಿವರ ಸಾಮಾಜಿಕ ಜಾಲತಾಣದ ಪೋಸ್ಟ್ ಕುರಿತು ಪ್ರತಿಕ್ರಿಯಿಸಿದ ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, “ನಾವು ಆ ಪೋಸ್ಟ್ ಅನ್ನು ನೋಡಿದ್ದೇವೆ. ಅದು ಅವರ ವೈಯಕ್ತಿಕ ಅಭಿಪ್ರಾಯವಷ್ಟೇ. ಜಪಾನ್ ನಮಗೆ 2030ರ ವೇಳೆಗೆ ‘E20 ರೈಲು ಸರಣಿ’ಯನ್ನು (E20 train series) ಪೂರೈಸಲಿದೆ. ಏಕೆಂದರೆ ಆ ರೈಲು ಇನ್ನೂ ಅಭಿವೃದ್ಧಿ ಹಂತದಲ್ಲಿದೆ. ಈ ನಡುವೆ ಭಾರತದಲ್ಲಿ ನಿರ್ಮಾಣ ಕಾರ್ಯವು ತೀವ್ರ ಗತಿಯಲ್ಲಿ ಸಾಗುತ್ತಿದ್ದು, ಬುಲೆಟ್ ರೈಲಿನ ಮೊದಲ ವಿಭಾಗವು 2027ರಲ್ಲೇ ಸಾರ್ವಜನಿಕರ ಬಳಕೆಗೆ ಮುಕ್ತವಾಗಲಿದೆ. ಆದ್ದರಿಂದ ಹೈ-ಸ್ಪೀಡ್ ರೈಲನ್ನು ಆದಷ್ಟು ಬೇಗ ಆರಂಭಿಸಲು ಉಭಯ ದೇಶಗಳು ಒಪ್ಪಿಕೊಂಡಿವೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಹೈಸ್ಪೀಡ್ ಯುಗಕ್ಕೆ ಭಾರತ ಸಜ್ಜು: 2027 ಆಗಸ್ಟ್ 15 ರಿಂದ ದೇಶದ ಮೊದಲ ಬುಲೆಟ್ ರೈಲು ಸಂಚಾರ ಆರಂಭ

ಜಪಾನ್ ಮಾಜಿ ಸಚಿವರ ಆರೋಪವೇನು?:

ಜಪಾನ್‌ನ ಮಾಜಿ ನ್ಯಾಯಾಂಗ ಸಚಿವ ಹಿದೇಕಿ ಮಾಕಿಹರಾ ಅವರು, ಶಿಂಕನ್‌ಸೆನ್ ಯೋಜನೆಯ ಮಾತುಕತೆಯ ವೇಳೆ ಭಾರತೀಯ ಅಧಿಕಾರಿಗಳು ನೀಡಿದ ಭರವಸೆಗಳನ್ನು ಈಡೇರಿಸಲು ಪದೇ ಪದೇ ವಿಫಲರಾಗಿದ್ದಾರೆ. ಅವರು ಸ್ವಹಿತಾಸಕ್ತಿಗೆ ಆದ್ಯತೆ ನೀಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು.

ಬುಲೆಟ್ ರೈಲು ಯೋಜನೆಯ ಸಿಗ್ನಲಿಂಗ್ ವ್ಯವಸ್ಥೆಯಿಂದ ಜಪಾನ್ ಅನ್ನು ಹೊರಗಿಡಲಾಗಿದೆ ಎಂಬ ಆರೋಪದ ಕುರಿತು ಪ್ರತಿಕ್ರಿಯಿಸಿದ ವಿದೇಶಾಂಗ ಸಚಿವಾಲಯ, “ಸಿಗ್ನಲಿಂಗ್ ಉಪಕರಣಗಳನ್ನು ಅಂತಾರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿಯೇ ಆರ್ಡರ್ ಮಾಡಲಾಗಿದೆ. ಈ ವಿಷಯದಲ್ಲಿ ಜಪಾನ್‌ನಿಂದ ಯಾವುದೇ ಅಧಿಕೃತ ಪ್ರಸ್ತಾಪ ಬಂದಿರಲಿಲ್ಲ. ಹೈ-ಸ್ಪೀಡ್ ರೈಲು ಯೋಜನೆಯನ್ನು ಆದಷ್ಟು ಬೇಗ ಪ್ರಾರಂಭಿಸಬೇಕೆಂಬ ಉಭಯ ದೇಶಗಳ ಗುರಿಗೆ ಅನುಗುಣವಾಗಿಯೇ ಈ ಇಡೀ ಯೋಜನೆ ಸಾಗುತ್ತಿದೆ” ಎಂದು ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಬುಲೆಟ್ ರೈಲು ಕಾರಿಡಾರ್ ವೇಗದ ಪ್ರಗತಿ; ಜಪಾನ್​ನಿಂದ ಇ10 ಬರುವಷ್ಟರಲ್ಲೇ ಭಾರತ ನಿರ್ಮಿತ ಟ್ರೈನ್ ಬಳಕೆಗೆ ನಿರ್ಧಾರ

ಭಾರತದ ಮೊದಲ ಬುಲೆಟ್ ರೈಲು ಯೋಜನೆ ಹೇಗಿದೆ?:

ಮುಂಬೈ-ಅಹಮದಾಬಾದ್ ಹೈಸ್ಪೀಡ್ ರೈಲು ಕಾರಿಡಾರ್ ಭಾರತದ ಮೊದಲ ಬುಲೆಟ್ ರೈಲು ಯೋಜನೆಯಾಗಿದ್ದು, ಇದು ಒಟ್ಟು 508 ಕಿಲೋಮೀಟರ್ ಉದ್ದವನ್ನು ಹೊಂದಿದೆ. ಇದು ಮಹಾರಾಷ್ಟ್ರ ಮತ್ತು ಗುಜರಾತ್ ನಡುವೆ ವೇಗದ ಸಂಪರ್ಕವನ್ನು ಕಲ್ಪಿಸಲಿದೆ. ಈ ಕಾರಿಡಾರ್ ಜಪಾನ್‌ನ ಪ್ರಸಿದ್ಧ ‘ಶಿಂಕನ್‌ಸೆನ್’ ತಂತ್ರಜ್ಞಾನವನ್ನು ಬಳಸುತ್ತಿದ್ದು, ಜಪಾನ್ ಅಂತಾರಾಷ್ಟ್ರೀಯ ಸಹಕಾರ ಸಂಸ್ಥೆ ದೀರ್ಘಾವಧಿಯ ರಿಯಾಯಿತಿ ಸಾಲಗಳ ಮೂಲಕ ಈ ಯೋಜನೆಗೆ ಭಾಗಶಃ ಧನಸಹಾಯ ನೀಡುತ್ತಿದೆ.

ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ (BKC)ನಿಂದ ಆರಂಭವಾಗುವ ಈ ರೈಲುಗಳು ಗಂಟೆಗೆ 320 ಕಿಮೀ ವೇಗದಲ್ಲಿ ಚಲಿಸಲಿವೆ. ಇದು ಮುಂಬೈ, ವಾಪಿ, ಸೂರತ್, ಆನಂದ್, ವಡೋದರಾ ಮತ್ತು ಅಹಮದಾಬಾದ್ ನಡುವಿನ ಆರ್ಥಿಕ ಸಂಯೋಜನೆಯನ್ನು ಬಲಪಡಿಸಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:15 pm, Fri, 17 July 26

Source link

ಭಾರತದಲ್ಲಿ ಹಸಿರು ಇಂಧನ ಕ್ರಾಂತಿ; ಆರು ತಿಂಗಳಲ್ಲಿ ದಾಖಲೆಯ ಶೇ.25ರಷ್ಟು ಪ್ರಗತಿ- ಮಾಹಿತಿ ಬಿಚ್ಚಿಟ್ಟ ಸಚಿವ ಪ್ರಲ್ಹಾದ್ ಜೋಶಿ – Kannada News | India’s renewable energy capacity increase by 25pc in 2026, says union minister Pralhad Joshi

ನವೀಕರಣ ಇಂಧನImage Credit source: Pralhad Joshi’s X @JoshiPralhad

ನವದೆಹಲಿ, ಜುಲೈ 17: ಭಾರತವು ಸ್ವಚ್ಛ ಮತ್ತು ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ (Clean and Renewable energy capacity) ಜಾಗತಿಕ ಮಟ್ಟದಲ್ಲಿ ಹೊಸ ಮೈಲಿಗಲ್ಲುಗಳನ್ನು ಸೃಷ್ಟಿಸುತ್ತಿದೆ. 2026ರ ಮೊದಲ ಆರು ತಿಂಗಳ ಅವಧಿಯಲ್ಲೇ ದೇಶದ ಹಸಿರು ಇಂಧನ ಕ್ಷೇತ್ರವು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 25ರಷ್ಟು ಅಭೂತಪೂರ್ವ ಪ್ರಗತಿ ಕಂಡಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ (Pralhad Joshi) ತಿಳಿಸಿದ್ದಾರೆ.

2026ರ ಜನವರಿಯಿಂದ ಜೂನ್ ವರೆಗಿನ ಅವಧಿಯಲ್ಲಿ ಭಾರತವು ತನ್ನ ಇಂಧನ ಜಾಲಕ್ಕೆ 30,581.31 ಮೆಗಾವ್ಯಾಟ್ (MW) ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಯಶಸ್ವಿಯಾಗಿ ಸೇರ್ಪಡೆಗೊಳಿಸಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ (ಜೂನ್ 2025ರ ವೇಳೆಗೆ) ಈ ಪ್ರಮಾಣವು 24,554.49 ಮೆಗಾವ್ಯಾಟ್ ಆಗಿತ್ತು.

ಪ್ರಲ್ಹಾದ್ ಜೋಶಿ ಅವರ ಎಕ್ಸ್ ಪೋಸ್ಟ್

ಸೌರಶಕ್ತಿಯ ಭರ್ಜರಿ ಜಿಗಿತ: ಭಾರತದ ಈ ಇಂಧನ ಕ್ರಾಂತಿಗೆ ಸೌರಶಕ್ತಿ (Solar Energy) ಪ್ರಮುಖ ಇಂಜಿನ್ ಆಗಿ ಕೆಲಸ ಮಾಡಿದೆ. ಈ ಆರು ತಿಂಗಳಲ್ಲಿ ಕೇವಲ ಸೌರಶಕ್ತಿಯಿಂದಲೇ 26,342.07 ಮೆಗಾವ್ಯಾಟ್ ಸಾಮರ್ಥ್ಯವನ್ನು ಸೃಜಿಸಲಾಗಿದೆ. ಇದು ಕಳೆದ ವರ್ಷದ ಇದೇ ಅವಧಿಯ (18,383.12 ಮೆಗಾವ್ಯಾಟ್) ಸಾಧನೆಗೆ ಹೋಲಿಸಿದರೆ ಶೇ. 43ರಷ್ಟು ಭಾರಿ ಪ್ರಗತಿಯಾಗಿದೆ.

ಇದನ್ನೂ ಓದಿ: ಚಿಪ್ ತಯಾರಿಸದಿದ್ದರೂ ಸೆಮಿಕಂಡಕ್ಟರ್ ಕ್ರಾಂತಿಯ ಲಾಭ ಪಡೆಯುತ್ತಿರುವ 3 ಭಾರತೀಯ ಕಂಪನಿಗಳು

ಸ್ವಾವಲಂಬಿ ಭಾರತಕ್ಕೆ ಭದ್ರ ಬುನಾದಿ

ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಭಾರತದ ಹಸಿರು ಇಂಧನ ಪಯಣವು ಅತ್ಯಂತ ವೇಗವಾಗಿ ಸಾಗುತ್ತಿದೆ ಎಂದು ಸಚಿವ ಪ್ರಲ್ಹಾದ ಜೋಶಿ ಶ್ಲಾಘಿಸಿದ್ದಾರೆ. “ಸ್ವಚ್ಛ ಇಂಧನ ಪರಿವರ್ತನೆ ಮತ್ತು ಇಂಧನ ವಲಯದಲ್ಲಿ ದೇಶವನ್ನು ‘ಆತ್ಮನಿರ್ಭರ’ ಮಾಡುವ ಪ್ರಧಾನಿಯವರ ಬದ್ಧತೆಗೆ ಈ ಹೊಸ ಮೈಲಿಗಲ್ಲು ಅತ್ಯುತ್ತಮ ಉದಾಹರಣೆಯಾಗಿದೆ” ಎಂದು ಅವರು ಪ್ರತಿಪಾದಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ದೃಷ್ಟಿ ಮಸಕಾಗುವುದನ್ನು ತಡೆಯಲು ಆಹಾರದಲ್ಲಿ ಈ ಬೀಜಗಳನ್ನು ಸೇರಿಸಿಕೊಳ್ಳಿ – Kannada News | Flax Seeds vs Pumpkin Seeds: Which Is Better for Eye Health?

ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನಲ್ಲೇ ಕಣ್ಣಿನ ದೃಷ್ಟಿ ಮಸುಕಾಗುವುದು, ಕಣ್ಣಿನ ಆಯಾಸ, ಡ್ರೈ ಐ (Dry Eye), ಕಂಪ್ಯೂಟರ್ ಹಾಗೂ ಮೊಬೈಲ್ ಬಳಕೆಯಿಂದ ಉಂಟಾಗುವ ಡಿಜಿಟಲ್ ಐ ಸ್ಟ್ರೇನ್ ಸಮಸ್ಯೆಗಳು ಹೆಚ್ಚುತ್ತಿವೆ. ಹಲವರು “ಕೆಲವು ಆಹಾರ ತಿಂದರೆ ಕನ್ನಡಕವೇ ಬೇಡ” ಎಂಬ ನಂಬಿಕೆಯಲ್ಲಿ ನೈಸರ್ಗಿಕ ಪರಿಹಾರಗಳನ್ನು ಹುಡುಕುತ್ತಾರೆ. ಆರೋಗ್ಯ ತಜ್ಞರ ಪ್ರಕಾರ, ಕೆಲವು ಪೌಷ್ಟಿಕ ಆಹಾರಗಳು ಕಣ್ಣಿನ ಆರೋಗ್ಯವನ್ನು ಕಾಪಾಡಲು ಮತ್ತು ದೃಷ್ಟಿ ಕುಗ್ಗುವ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು. ಅದರಲ್ಲಿಯೂ ಕಣ್ಣಿನ ಆರೋಗ್ಯ ಕಾಪಾಡಲು ಅಗಸೆ ಬೀಜ ಮತ್ತು ಕುಂಬಳಕಾಯಿ ಬೀಜ ಇವೆರಡರಲ್ಲಿ ಯಾವುದು ಎಷ್ಟು ಉಪಯುಕ್ತ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಕಣ್ಣಿನ ಆರೋಗ್ಯಕ್ಕೆ ಅಗಸೆ ಬೀಜ (Flax Seeds) ಎಷ್ಟು ಉಪಯುಕ್ತ?

ಅಗಸೆ ಬೀಜಗಳಲ್ಲಿ ಒಮೆಗಾ-3 ಫ್ಯಾಟಿ ಆಸಿಡ್, ಫೈಬರ್, ವಿಟಮಿನ್ ಇ ಹಾಗೂ ಲಿಗ್ನಾನ್ಸ್ ನಿಂದ ಸಮೃದ್ಧವಾಗಿವೆ. ಇವು ಕಣ್ಣಿನ ರೆಟಿನಾದ ಆರೋಗ್ಯವನ್ನು ಕಾಪಾಡುವುದರ ಜೊತೆಗೆ, ಡ್ರೈ ಐ ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು. ಕೆಲವು ಅಧ್ಯಯನಗಳ ಪ್ರಕಾರ, ಒಮೆಗಾ-3 ಕೊಬ್ಬಿನಾಮ್ಲಗಳು ಕಣ್ಣಿನ ಉರಿಯೂತವನ್ನು ಕಡಿಮೆ ಮಾಡಿ ಕಣ್ಣೀರಿನ ಗುಣಮಟ್ಟವನ್ನು ಸುಧಾರಿಸಲು ನೆರವಾಗಬಹುದು. ಆದರೆ ಇವು ಕನ್ನಡಕದ ಸಂಖ್ಯೆಯನ್ನು ಕಡಿಮೆ ಮಾಡುತ್ತವೆ ಎಂಬುದಕ್ಕೆ ವೈಜ್ಞಾನಿಕ ಸಾಕ್ಷ್ಯಗಳಿಲ್ಲ.

ಕುಂಬಳಕಾಯಿ ಬೀಜಗಳಿಂದ ದೊರೆಯುವ ಪ್ರಯೋಜನಗಳು:

ಕುಂಬಳಕಾಯಿ ಬೀಜಗಳಲ್ಲಿ ಜಿಂಕ್, ಮೆಗ್ನೀಷಿಯಂ, ವಿಟಮಿನ್ ಇ ಮತ್ತು ಆಂಟಿಆಕ್ಸಿಡೆಂಟ್‌ಗಳು ಅಧಿಕವಾಗಿವೆ. ಜಿಂಕ್ ಕಣ್ಣಿನ ರೆಟಿನಾದ ಕಾರ್ಯಕ್ಷಮತೆಗೆ ಮುಖ್ಯವಾದ ಪೋಷಕಾಂಶವಾಗಿದೆ. ಜೊತೆಗೆ ವಯೋಸಹಜ ದೃಷ್ಟಿ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡಲು ಸಹ ಸಹಕಾರಿಯಾಗಬಹುದು. ಈ ಬೀಜಗಳನ್ನು ಹುರಿದು ಅಥವಾ ಸಲಾಡ್, ಮೊಸರು, ಸ್ಮೂಥಿ ಹಾಗೂ ಓಟ್ಸ್ ಜೊತೆ ಸೇರಿಸಿ ಸೇವಿಸಬಹುದು.

ಕಣ್ಣಿನ ದೃಷ್ಟಿಗೆ ಸಹಾಯ ಮಾಡುವ ಇನ್ನಿತರ ಆಹಾರಗಳು

ಕೇವಲ ಬೀಜಗಳಷ್ಟೇ ಅಲ್ಲ, ಈ ಆಹಾರಗಳನ್ನೂ ನಿಯಮಿತವಾಗಿ ಸೇವಿಸಿದರೆ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು.

  • ಕ್ಯಾರೆಟ್ (ಬೀಟಾ ಕ್ಯಾರೋಟಿನ್)
  • ಪಾಲಕ್, ಮೆಂತೆ, ಸೊಪ್ಪುಗಳು (ಲ್ಯೂಟಿನ್ ಮತ್ತು ಜಿಯಾಕ್ಸಾಂಥಿನ್)
  • ಮೊಟ್ಟೆ
  • ಮೀನು (ಸ್ಯಾಲ್ಮನ್, ಸಾರ್ಡಿನ್)
  • ಕಿತ್ತಳೆ, ನಿಂಬೆ (ವಿಟಮಿನ್ ಸಿ)
  • ಬಾದಾಮಿ, ವಾಲ್ನಟ್
  • ಸಿಹಿ ಗೆಣಸು

ದೃಷ್ಟಿ ಮಸುಕಾಗಲು ಕಾರಣಗಳೇನು?

  • ಸಮೀಪದೃಷ್ಟಿ ಅಥವಾ ದೂರದೃಷ್ಟಿ
  • ಕಣ್ಣಿನ ಒಣತನ (Dry Eye Syndrome)
  • ಮಧುಮೇಹದಿಂದ ಉಂಟಾಗುವ ಕಣ್ಣಿನ ಸಮಸ್ಯೆಗಳು
  • ಕ್ಯಾಟರಾಕ್ಟ್
  • ಗ್ಲೂಕೋಮಾ
  • ಹೆಚ್ಚು ಸಮಯ ಮೊಬೈಲ್ ಅಥವಾ ಕಂಪ್ಯೂಟರ್ ಬಳಕೆ

ದೃಷ್ಟಿ ಹಠಾತ್ ಮಸುಕಾದರೆ ಅಥವಾ ನೋವು, ಕೆಂಪಾಗುವಿಕೆ, ಬೆಳಕಿಗೆ ಅಸಹನೆ ಕಂಡುಬಂದರೆ ತಕ್ಷಣ ನೇತ್ರ ತಜ್ಞರನ್ನು ಸಂಪರ್ಕಿಸಬೇಕು.

ಇದನ್ನೂ ಓದಿ: ಪದೇ ಪದೇ ಗ್ಯಾಸ್‌, ಅಸಿಡಿಟಿ ಸಮಸ್ಯೆಯಿಂದ ಬಳಲುತ್ತಿದ್ದರೆ ಪುದೀನಾ ಎಲೆಗಳನ್ನು ಈ ರೀತಿ ಸೇವಿಸಿ

ಕಣ್ಣಿನ ಆರೋಗ್ಯ ಕಾಪಾಡಲು ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ

  • ಪ್ರತೀ 20 ನಿಮಿಷಕ್ಕೊಮ್ಮೆ 20-20-20 ನಿಯಮ ಪಾಲಿಸಿ.
  • ದಿನಕ್ಕೆ ಕನಿಷ್ಠ 7–8 ಗಂಟೆಗಳ ನಿದ್ರೆ ಮಾಡಿ.
  • ಸಾಕಷ್ಟು ನೀರು ಕುಡಿಯಿರಿ.
  • ಸೂರ್ಯನ ತೀವ್ರ ಬೆಳಕಿನಲ್ಲಿ ಯುವಿ ರಕ್ಷಣೆ ಇರುವ ಕನ್ನಡಕ ಧರಿಸಿ.
  • ವರ್ಷಕ್ಕೊಮ್ಮೆ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳಿ.

ಆರೋಗ್ಯಕರ ಆಹಾರವು ಕಣ್ಣಿನ ಆರೋಗ್ಯವನ್ನು ಉತ್ತಮಗೊಳಿಸಲು ನೆರವಾಗುತ್ತದೆ. ಆದರೆ ಅಗಸೆ ಬೀಜ ಅಥವಾ ಕುಂಬಳಕಾಯಿ ಬೀಜ ತಿಂದರೆ ಕನ್ನಡಕದ ಅಗತ್ಯವೇ ಇಲ್ಲ ಎಂಬ ಮಾತಿಗೆ ವೈಜ್ಞಾನಿಕ ಆಧಾರವಿಲ್ಲ. ಸರಿಯಾದ ಪೌಷ್ಟಿಕ ಆಹಾರ, ನಿಯಮಿತ ಕಣ್ಣಿನ ಪರೀಕ್ಷೆ ಮತ್ತು ಆರೋಗ್ಯಕರ ಜೀವನಶೈಲಿಯೇ ಉತ್ತಮ ದೃಷ್ಟಿ ಕಾಪಾಡುವ ನಿಜವಾದ ಮಾರ್ಗವಾಗಿದೆ.

ಸೂಚನೆ: ಈ ಲೇಖನವು ಆರೋಗ್ಯ ಜಾಗೃತಿಗಾಗಿ ಮಾತ್ರ. ಕಣ್ಣಿನ ದೃಷ್ಟಿ ಮಸುಕಾಗುವುದು, ಕಣ್ಣಿನ ನೋವು ಅಥವಾ ಇತರ ಸಮಸ್ಯೆಗಳಿದ್ದರೆ ಸ್ವಯಂ ಚಿಕಿತ್ಸೆ ಮಾಡದೇ ನೇತ್ರ ತಜ್ಞರ ಸಲಹೆ ಪಡೆಯುವುದು ಅತ್ಯಗತ್ಯ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

141 ವರ್ಷಗಳ ಹಳೆಯ ಶಾಲೆಯ ಸ್ಥಿತಿ ನೋಡಿ: ಗೆದ್ದಲು ಹಿಡಿದ ಮೇಲ್ಚಾವಣಿ, ಬಿರುಕು ಬಿಟ್ಟ ಮಣ್ಣಿನ ಗೋಡೆಗಳು; ವಿದ್ಯಾರ್ಥಿಗಳ ಜೀವದ ಜತೆ ಚೆಲ್ಲಾಟ – Kannada News | Dilapidated Ankola School: Harawada Students Face Life Threat in Crumbling Classrooms

ಅಂಕೋಲಾ, ಜು.17: ಶಾಲೆ ಅಂದರೆ ಮಕ್ಕಳ ಉಜ್ವಲ ಭವಿಷ್ಯವನ್ನು ರೂಪಿಸುವ ಜ್ಞಾನದ ದೇವಾಲಯ. ಆದರೆ, ಉತ್ತರ ಕನ್ನಡ ಜಿಲ್ಲೆಯ ಈ ಶಾಲೆಯಲ್ಲಿ ಮಕ್ಕಳಿಗೆ ಅಕ್ಷರ ಕಲಿಯುವುದಕ್ಕಿಂತ ಹೆಚ್ಚಾಗಿ ದಿನವಿಡೀ ತಮ್ಮ ಜೀವ ಉಳಿಸಿಕೊಳ್ಳುವುದೇ ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಯಾವ ಕ್ಷಣದಲ್ಲಾದರೂ ಕುಸಿದು ಬೀಳುವ ಸ್ಥಿತಿಯಲ್ಲಿರುವ ಕಟ್ಟಡ, ಗೆದ್ದಲು ಹಿಡಿದ ಮೇಲ್ಚಾವಣಿ, ಮಳೆ ಬಂದರೆ ಸೋರುವ ಮಣ್ಣಿನ ಗೋಡೆಗಳು, ಇಂತಹದ್ದೇ ಒಂದು ತೀವ್ರ ಅಪಾಯಕಾರಿ ಪರಿಸ್ಥಿತಿಯಲ್ಲಿ ಪುಟಾಣಿ ಮಕ್ಕಳು ಪ್ರತಿದಿನ ಜೀವ ಭಯದಲ್ಲೇ ಪಾಠ ಕೇಳುತ್ತಿದ್ದಾರೆ.

ಇದು ಅಂಕೋಲಾ ತಾಲೂಕಿನ ಹಾರವಾಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ. ಬರೋಬ್ಬರಿ 141 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಈ ಹೆಮ್ಮೆಯ ಶಾಲಾ ಕಟ್ಟಡ ಇಂದು ಸಂಪೂರ್ಣವಾಗಿ ಶಿಥಿಲಾವಸ್ಥೆಗೆ ಬಂದು ತಲುಪಿದೆ. ಶಾಲೆಯ ಮೇಲ್ಚಾವಣಿಗೆ ಸಂಪೂರ್ಣವಾಗಿ ಗೆದ್ದಲು ಹಿಡಿದಿದ್ದು, ಮಣ್ಣಿನ ಗೋಡೆಗಳು ಅಲ್ಲಲ್ಲಿ ಬಿರುಕು ಬಿಟ್ಟಿವೆ. ಯಾವುದೇ ಮುನ್ಸೂಚನೆ ಇಲ್ಲದೆ ಕಟ್ಟಡ ನೆಲಸಮವಾಗುವ ಭೀತಿ ಎದುರಾಗಿದೆ.

ಶಾಲೆಯ ಹಳೆಯ ಕಟ್ಟಡಗಳು ಅತ್ಯಂತ ಅಪಾಯಕಾರಿಯಾಗಿರುವ ಹಿನ್ನೆಲೆಯಲ್ಲಿ ಮುಖ್ಯ ಶಿಕ್ಷಕರು ಅನಿವಾರ್ಯವಾಗಿ ಆ ಕೊಠಡಿಗಳನ್ನು ಬಂದ್ ಮಾಡಿದ್ದಾರೆ. ಸ್ತುತ ಒಂದೇ ಕೊಠಡಿಯಲ್ಲಿ ಎರಡೆರಡು ತರಗತಿಗಳನ್ನು ಒಟ್ಟಿಗೆ ನಡೆಸಲಾಗುತ್ತಿದೆ. ಆದರೆ, ಈಗ ತರಗತಿ ನಡೆಯುತ್ತಿರುವ ಕೊಠಡಿಯೂ ಅಷ್ಟೇನೂ ಸುರಕ್ಷಿತವಾಗಿಲ್ಲ.

ಜೋರು ಮಳೆ ಬಂದರೆ ಸಾಕು, ಶಾಲೆಯ ಗೋಡೆಗಳಿಂದ ನೀರು ಒಳಗೆ ಸೋರುತ್ತದೆ. ಗಾಳಿ ಜೋರಾಗಿ ಬೀಸಿದರೆ ಇಡೀ ಕಟ್ಟಡವೇ ಅಲುಗಾಡುವಂತಾಗಿ ಆತಂಕ ಸೃಷ್ಟಿಸುತ್ತದೆ. “ನಮ್ಮ ಮಕ್ಕಳು ಸುರಕ್ಷಿತವಾಗಿದ್ದಾರೋ ಇಲ್ಲವೋ ಎಂದು ಪೋಷಕರು ಪ್ರತಿದಿನ ಕಳವಳದಿಂದ ಶಾಲೆಗೆ ಬಂದು ನೋಡಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದು ಶಾಲೆಯ ಮುಖ್ಯ ಶಿಕ್ಷಕಿ ವನಿತಾ ನಾಯ್ಕ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮುರುಡೇಶ್ವರ ದೇವಸ್ಥಾನದ ಹೆಸರಲ್ಲಿ ನಕಲಿ ಲಾಟರಿ ದಂಧೆ: ಬೀದರ್ ಮೂಲದ ವ್ಯಕ್ತಿ ಅರೆಸ್ಟ್

ಶಾಲೆಯ ಈ ದುಃಸ್ಥಿತಿಯ ಬಗ್ಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳಿಗೆ ಹಲವು ಬಾರಿ ಲಿಖಿತ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಬೇಸತ್ತ ಪೋಷಕರು ತಾವೇ ಸ್ವತಃ ಹಣ ಸಂಗ್ರಹಿಸಿ ಸಣ್ಣಪುಟ್ಟ ದುರಸ್ತಿ ಕೆಲಸ ಮಾಡಿಸಿದ್ದಾರೆ. ಆದರೂ ಭೀತಿ ಮಾತ್ರ ದೂರಾಗಿಲ್ಲ. ಎಸ್‌ಡಿಎಂಸಿ ಅಧ್ಯಕ್ಷರಾದ ವಿನೋದ್ ಅವರು ಈ ಬಗ್ಗೆ ಮಾತನಾಡಿದ್ದಾರೆ. “ಒಂದು ಕಾಲದಲ್ಲಿ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ತುಂಬಿ ತುಳುಕುತ್ತಿದ್ದ ಈ ಶಾಲೆಯಲ್ಲಿ ಇಂದು ಕೇವಲ 40 ಮಕ್ಕಳು ಮಾತ್ರ ಉಳಿದಿದ್ದಾರೆ. ಶಿಥಿಲಗೊಂಡಿರುವ ಕಟ್ಟಡದ ಭಯದಿಂದಲೇ ಪೋಷಕರು ತಮ್ಮ ಮಕ್ಕಳನ್ನು ಈ ಶಾಲೆಗೆ ಕಳುಹಿಸಲು ಹಿಂಜರಿಯುತ್ತಿದ್ದಾರೆ. ಇಲ್ಲಿ ಶಿಕ್ಷಣದ ಗುಣಮಟ್ಟಕ್ಕಿಂತ ಮೊದಲು ಮಕ್ಕಳ ಜೀವದ ಸುರಕ್ಷತೆಯೇ ದೊಡ್ಡ ಪ್ರಶ್ನೆಯಾಗಿದೆ” ಎಂದು ಅಳಲು ತೋಡಿಕೊಂಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾಜ್ಯಾದ್ಯಂತ 579 ಮದ್ಯ ಮಾರಾಟ ಸನ್ನದುಗಳ ಇ-ಹರಾಜು: ಅಬಕಾರಿ ಇಲಾಖೆಯಿಂದ ವೇಳಾಪಟ್ಟಿ ಪ್ರಕಟ – Kannada News | Karnataka Liquor Licence E Auction 2026–31: 579 Permits Up for Bidding; Check Dates, Eligibility and Details

ಪ್ರಾತಿನಿಧಿಕ ಚಿತ್ರImage Credit source: Getty images

ಬೆಂಗಳೂರು, ಜುಲೈ 17: ರಾಜ್ಯಾದ್ಯಂತ ಒಟ್ಟು 579 ಮದ್ಯ ಮಾರಾಟ ಪರವಾನಗಿಗಳನ್ನ (Licenses) ಮುಂದಿನ 5 ವರ್ಷಗಳ ಅವಧಿಗೆ, ಅಂದರೆ 2026-27 ರಿಂದ 2030-31 ರವರೆಗೆ ಇ-ಹರಾಜು ಮೂಲಕ ಹಂಚಿಕೆ ಮಾಡಲು ಜುಲೈ 1ರಂದು ಅಧಿಕೃತ ಅಧಿಸೂಚನೆಯನ್ನು ಹೊರಡಿಸಲಾಗಿತ್ತು. ಇದೀಗ ಅಬಕಾರಿ ಇಲಾಖೆಯು ಇ-ಹರಾಜು ವೇಳಾಪಟ್ಟಿಯನ್ನು ಪ್ರಕಟಿಸಿದೆ.

ಯಾರಿಗೆ ಎಷ್ಟು ಮೀಸಲಾತಿ?

ಒಟ್ಟು ಪರವಾನಗಿಗಳ ಪೈಕಿ 483 ಸಿಎಲ್(2-ಎ) ಮತ್ತು 96 ಸಿಎಲ್(9-ಎ) ಲಭ್ಯವಿವೆ. ಬೆಂಗಳೂರು ನಗರ ಜಿಲ್ಲೆಯೊಂದರಲ್ಲೇ 119 ಸಿಎಲ್(2-ಎ) ಮತ್ತು 67 ಸಿಎಲ್(9-ಎ) ಸನ್ನದುಗಳು ಇವೆ. ಈ ಇ-ಹರಾಜಿನಲ್ಲಿ ಪರಿಶಿಷ್ಟ ಜಾತಿ-ಎ ವರ್ಗದವರಿಗೆ ಶೇ. 5.25, ಪರಿಶಿಷ್ಟ ಜಾತಿ-ಬಿ ವರ್ಗದವರಿಗೆ ಶೇ. 5.25, ಪರಿಶಿಷ್ಟ ಜಾತಿ-ಸಿ ವರ್ಗದವರಿಗೆ ಶೇ. 4.50 ಹಾಗೂ ಪರಿಶಿಷ್ಟ ಪಂಗಡ ವರ್ಗದವರಿಗೆ ಶೇ. 3 ರಷ್ಟು ಮೀಸಲಾತಿಯನ್ನು ಕಲ್ಪಿಸಲಾಗಿದೆ.

ಇ-ಹರಾಜು ನಡೆಯುವ ದಿನಾಂಕ ಮತ್ತು ವಿವರ

  • ಜುಲೈ 24ರಂದು ಬೀದರ್​, ಹಾವೇರಿ, ಚಿಕ್ಕಮಗಳೂರು, ಕಲಬುರಗಿ
  • ಜುಲೈ 27ರಂದು ಹಾಸನ, ರಾಯಚೂರು, ಶಿವಮೊಗ್ಗ, ಯಾದಗಿರಿ
  • ಜುಲೈ 28ರಂದು ಬೆಳಗಾವಿ (ಉತ್ತರ), ಉತ್ತರ ಕನ್ನಡ, ಬಳ್ಳಾರಿ, ಬಾಗಲಕೋಟೆ
  • ಜುಲೈ 29ರಂದು ತುಮಕೂರು, ಕೊಪ್ಪಳ, ಚಿಕ್ಕಬಳ್ಳಾಪುರ, ಮೈಸೂರು ಗ್ರಾಮಾಂತರ
  • ಜುಲೈ 30ರಂದು ದಾವಣಗೆರೆ, ವಿಜಯನಗರ, ಚಿತ್ರದುರ್ಗ, ಮಂಡ್ಯ, ವಿಜಯಪುರ, ಚಾಮರಾಜನಗರ, ದಕ್ಷಿಣ ಕನ್ನಡ, ಗದಗ,
  • ಜುಲೈ 31ರಂದು ಕೋಲಾರ, ಧಾರವಾಡ, ಕೊಡಗು, ಬೆಳಗಾವಿ (ದಕ್ಷಿಣ), ಬೆಂಗಳೂರು ಗ್ರಾಮಾಂತರ, ಮೈಸೂರು (ನಗರ), ಬೆಂಗಳೂರು (ದಕ್ಷಿಣ) ಮತ್ತು ಉಡುಪಿ ಜಿಲ್ಲೆಗಳಲ್ಲಿ ಇ-ಹರಾಜು ನಡೆಯಲಿದೆ.

ಇದನ್ನೂ ಓದಿ: ಡಿಸಿಆರ್‌ಇ ಘಟಕದ ಪೊಲೀಸ್​ ಸಿಬ್ಬಂದಿಗೆ ಗುಡ್​ನ್ಯೂಸ್​​: ವಾರದಲ್ಲಿ ಒಂದು ದಿನ ಕಡ್ಡಾಯ ರಜೆ

ಇ-ಹರಾಜಿನ ಸಂಪೂರ್ಣ ವಿವರಗಳು ಅಬಕಾರಿ ಇಲಾಖೆಯ ಅಧಿಕೃತ ವೆಬ್‌ಸೈಟ್ stateexcise.karnataka.gov.in ಹಾಗೂ ಇ-ಕಾಮರ್ಸ್ ಪೋರ್ಟಲ್ www.mstcecommerce.comನಲ್ಲಿ ಲಭ್ಯವಿವೆ. ಬಿಡ್‌ದಾರರ ನೋಂದಣಿ ಪ್ರಕ್ರಿಯೆಯು ಜುಲೈ 3 ರಿಂದಲೇ ಪ್ರಾರಂಭವಾಗಿದ್ದು, ಲೈವ್ ಬಿಡ್ಡಿಂಗ್ ಪ್ರಕ್ರಿಯೆಯು ಜುಲೈ 24ರಿಂದ 31 ರವರೆಗೆ ನಡೆಯಲಿದೆ. ಬಿಡ್‌ದಾರರು ತಾವು ಇಚ್ಛಿಸುವ ಸ್ಥಳಗಳ ನಿಯಮಿತ ಇ-ಹರಾಜಿನಲ್ಲಿ ಭಾಗವಹಿಸಲು ಎರಡು ದಿನಗಳ ಮುಂಚಿತವಾಗಿಯೇ ವೆಬ್‌ಸೈಟ್‌ನಲ್ಲಿ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು.

ಅರ್ಜಿ ಸಲ್ಲಿಕೆ ಮತ್ತು ಶುಲ್ಕದ ವಿವರ

ಇ-ಹರಾಜಿನಲ್ಲಿ ಯಾವುದೇ ವ್ಯಕ್ತಿ, ಏಕವ್ಯಕ್ತಿ ಮಾಲೀಕತ್ವದ ಸಂಸ್ಥೆ ಅಥವಾ ಭಾರತದ ಕಾನೂನುಗಳ ಅಡಿಯಲ್ಲಿ ನೋಂದಾಯಿತವಾದ ಟ್ರಸ್ಟ್, ಸೊಸೈಟಿ, ಪಾಲುದಾರಿಕೆ ಸಂಸ್ಥೆ, ಸೀಮಿತ ಪಾಲುದಾರಿಕೆ ಒಪ್ಪಂದ ಮತ್ತು ಕಂಪನಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಇದನ್ನೂ ಓದಿ: ಕರಾವಳಿ ಕಂಬಳ ಆಯೋಜಕರಿಗೆ ಸರ್ಕಾರ ಗುಡ್​ನ್ಯೂಸ್​​! 1.15 ಕೋಟಿ ರೂ ಅನುದಾನ ಘೋಷಣೆ

1 ಸಾವಿರ ರೂ ನೋಂದಣಿ ಶುಲ್ಕ ನಿಗದಿ ಪಡಿಸಲಾಗಿದ್ದು, ಜಿಎಸ್‌ಟಿ ಮೊತ್ತವನ್ನು ಆನ್‌ಲೈನ್ ಮೂಲಕವೇ ಪಾವತಿಸಬೇಕು. ಪ್ರತಿ ಸನ್ನದಿನ ಅರ್ಜಿಗೆ 50 ಸಾವಿರ ರೂ ಅರ್ಜಿ ಶುಲ್ಕ ನಿಗದಿಪಡಿಸಲಾಗಿದ್ದು, ಇದು ಯಾವುದೇ ಕಾರಣಕ್ಕೂ ಮರುಪಾವತಿಯಾಗುವುದಿಲ್ಲ. ಬಿಡ್‌ದಾರರು ತಮ್ಮ ಆಯ್ಕೆಗೆ ಅನುಗುಣವಾಗಿ ಎಷ್ಟು ಸನ್ನದುಗಳಿಗಾದರೂ ಅರ್ಜಿಗಳನ್ನು ಸಲ್ಲಿಸಲು ಮುಕ್ತ ಅವಕಾಶ ಕಲ್ಪಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 7:42 pm, Fri, 17 July 26

Source link

ಸೋನಮ್ ವಾಂಗ್ಚುಕ್ ಉಪವಾಸ ಸತ್ಯಾಗ್ರಹ ಮುಂದುವರಿಸಿದರೆ ಏನಾಗುತ್ತದೆ? ಸರ್ಕಾರ ಬಲವಂತವಾಗಿ ಆಹಾರ ನೀಡಬಹುದೇ? – Kannada News | Sonam wangchuk hunger strike; Can the government force feed him like it did Irom Sharmila?

ನವದೆಹಲಿ, ಜುಲೈ 17: ಇಂದಿಗೆ ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ (Sonam Wangchuk) ಅವರ ಉಪವಾಸ ಸತ್ಯಾಗ್ರಹದ 20ನೇ ದಿನಕ್ಕೆ ಕಾಲಿಟ್ಟಿದೆ. ಅವರ ತೂಕ ವೇಗವಾಗಿ ಕಡಿಮೆಯಾಗುತ್ತಿದೆ. ಇಲ್ಲಿಯವರೆಗೆ 9 ಕೆಜಿ ತೂಕ ಕಳೆದುಕೊಂಡಿರುವ ಅವರ ಆರೋಗ್ಯವು ಕ್ಷೀಣಿಸುತ್ತಿದೆ. ದೀರ್ಘಕಾಲದ ಉಪವಾಸ ಸತ್ಯಾಗ್ರಹವು ಈಗಾಗಲೇ ಅವರ ಅಂಗಗಳ ಮೇಲೆ ಪರಿಣಾಮ ಬೀರಿದೆ. ಅವರ ಆರೋಗ್ಯವನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಬೇಕು ಎಂದು ಹೈಕೋರ್ಟ್ ಕೂಡ ಹೇಳಿದೆ. ಆದರೂ ಸತ್ಯಾಗ್ರಹವನ್ನು ಮುಂದುವರಿಸುವ ಬಗ್ಗೆ ದೃಢನಿಶ್ಚಯ ಹೊಂದಿರುವ ಸೋನಮ್ ವಾಂಗ್‌ಚುಕ್ ಅವರ ಜೀವವನ್ನು ಉಳಿಸಲು ಸರ್ಕಾರಕ್ಕೆ ಯಾವ ಆಯ್ಕೆಗಳಿವೆ?

ಗುರುವಾರ ದೆಹಲಿ ಹೈಕೋರ್ಟ್ ವಾಂಗ್‌ಚುಕ್ ಅವರ ಆರೋಗ್ಯ ಕ್ಷೀಣಿಸುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು. ಪ್ರತಿಯೊಬ್ಬ ನಾಗರಿಕನ ಜೀವವು ಅಮೂಲ್ಯವಾದುದು, ಅದನ್ನು ರಕ್ಷಿಸಲು ಸರ್ಕಾರ ಎಲ್ಲ ಪ್ರಯತ್ನಗಳನ್ನು ಮಾಡಬೇಕು ಎಂದು ನ್ಯಾಯಾಲಯ ಹೇಳಿದೆ. ಸರ್ಕಾರಿ ವೈದ್ಯರು ದೈನಂದಿನ ತಪಾಸಣೆ ಮತ್ತು ನಿರಂತರ ಕ್ಲಿನಿಕಲ್ ಮೇಲ್ವಿಚಾರಣೆ ನಡೆಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

19 ದಿನಗಳಲ್ಲಿ 9 ಕೆಜಿ ತೂಕ ಇಳಿಕೆ:

ನ್ಯಾಯಾಲಯದ ನಿರ್ದೇಶನದ ಮಧ್ಯೆ, ಸೋನಮ್ ವಾಂಗ್​ಚುಕ್ ಅವರ ದೀರ್ಘಕಾಲದ ಉಪವಾಸ ಸತ್ಯಾಗ್ರಹದಿಂದಾಗಿ ಅವರು ಗಂಭೀರ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂದು ವೈದ್ಯರು ಎಚ್ಚರಿಸಿದ್ದಾರೆ. ಈ ರೀತಿ ಉಪವಾಸ ಇರುವುದರಿಂದಾಗಿ ಅವರ ಅಂಗಾಂಗಗಳು ವಿಫಲಗೊಳ್ಳಲು ಪ್ರಾರಂಭಿಸಬಹುದು ಎಂದು ಎಚ್ಚರಿಸಿದ್ದಾರೆ. ಕಳೆದ 19 ದಿನಗಳಲ್ಲಿ ಅವರು 9 ಕೆಜಿಗಿಂತ ಹೆಚ್ಚು ತೂಕವನ್ನು ಕಳೆದುಕೊಂಡಿದ್ದಾರೆ. ಆದರೆ ವಾಂಗ್ಚುಕ್ ತಮ್ಮ ಸತ್ಯಾಗ್ರಹ ನಿಲ್ಲಿಸಲು ಇನ್ನೂ ಸಿದ್ಧರಿಲ್ಲ.

ಇದನ್ನೂ ಓದಿ: ಉಪವಾಸ ನಿರತ ಹೋರಾಟಗಾರ ಸೋನಮ್ ವಾಂಗ್ಚುಕ್​ಗೆ ಬಲವಂತವಾಗಿ ದ್ರವಾಹಾರ ನೀಡಿ; ಹೈಕೋರ್ಟ್‌ಗೆ ತುರ್ತು ಅರ್ಜಿ

ಇದಕ್ಕೂ ಮೊದಲು, ಬುಧವಾರ ತಡರಾತ್ರಿ ಸೋನಮ್ ವಾಂಗ್ಚುಕ್ ಒಂದು ವೀಡಿಯೊ ಸಂದೇಶವನ್ನು ಬಿಡುಗಡೆ ಮಾಡಿದರು, ಅದರಲ್ಲಿ ರಾಜಕೀಯ ಪಕ್ಷದ ಮುಖಂಡರು ಮತ್ತು ಬೆಂಬಲಿಗರು ಮನವಿ ಮಾಡಿದರೂ ಅವರು ತಮ್ಮ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸಲು ನಿರಾಕರಿಸಿದ್ದರು. ಸರ್ಕಾರದಿಂದ ಪ್ರತಿಕ್ರಿಯೆ ಸಿಗದೆ ಮುಷ್ಕರವನ್ನು ಕೊನೆಗೊಳಿಸುವುದು ತಪ್ಪು ಸಂದೇಶವನ್ನು ರವಾನಿಸುತ್ತದೆ ಎಂದು ಅವರು ಹೇಳಿದ್ದರು. ಜುಲೈ 20ರಂದು ನಡೆಯಲಿರುವ ಕಾಕ್ರೋಚ್ ಜನತಾ ಪಕ್ಷದ ಪ್ರಸ್ತಾವಿತ ಸಂಸತ್ ಮಾರ್ಚ್‌ನಲ್ಲಿ ಎಲ್ಲರೂ ಸೇರುವಂತೆ ಅವರು ಮನವಿ ಮಾಡಿದ್ದರು.

ಸರ್ಕಾರದ ಮುಂದಿರುವ ಆಯ್ಕೆಯೇನು?:

ಸೋನಮ್ ವಾಂಗ್ಚುಕ್ ತಮ್ಮ ನಿಲುವಿನಲ್ಲಿ ಅಚಲವಾಗಿದ್ದು, ತಮ್ಮ ಉಪವಾಸ ಸತ್ಯಾಗ್ರಹವನ್ನು ಮುಂದುವರೆಸಿದ್ದಾರೆ. ಪ್ರತಿಪಕ್ಷಗಳು ವಾಂಗ್ಚುಕ್ ಅವರ ಬೆಂಬಲಕ್ಕೆ ನಿಂತಂತೆ ಕಾಣುತ್ತಿದೆ. ನ್ಯಾಯಾಲಯವು ಅವರ ಜೀವವನ್ನು ಉಳಿಸಲು ಆದೇಶಿಸಿದೆ. ಆದ್ದರಿಂದ ವಾಂಗ್ಚುಕ್ ಅವರನ್ನು ಜೀವಂತವಾಗಿಡಲು ಸರ್ಕಾರಕ್ಕೆ ಯಾವ ಆಯ್ಕೆಗಳಿವೆ? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಮಣಿಪುರದ ಉಕ್ಕಿನ ಮಹಿಳೆ ಎಂದು ಕರೆಯಲ್ಪಡುವ ಇರೋಮ್ ಶರ್ಮಿಳಾ ಸಾಮಾಜಿಕ ಕಾರ್ಯಕರ್ತೆಯೂ ಹೌದು. ಅವರು 2000ರ ನವೆಂಬರ್ ತಿಂಗಳಲ್ಲಿ ರಾಜ್ಯದಲ್ಲಿ AFSPA (ಅಧಿಕೃತ ಪೊಲೀಸ್ ಪಡೆ) ರದ್ದುಗೊಳಿಸುವಂತೆ ಒತ್ತಾಯಿಸಿ ಚಳುವಳಿಯನ್ನು ಪ್ರಾರಂಭಿಸಿದ್ದರು. 2000ರ ನವೆಂಬರ್ 2ರಂದು ಮಣಿಪುರದ ಇಂಫಾಲ್ ಕಣಿವೆಯ ಮಾಲೋಮ್ ಪ್ರದೇಶದಲ್ಲಿ, ಬಸ್ ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುತ್ತಿದ್ದ 10 ನಾಗರಿಕರನ್ನು ಅಸ್ಸಾಂ ರೈಫಲ್ಸ್ ಸಿಬ್ಬಂದಿ ಗುಂಡು ಹಾರಿಸಿ ಕೊಂದಿದ್ದರು. ಈ ಹತ್ಯಾಕಾಂಡದ 3 ದಿನಗಳ ನಂತರ, ನವೆಂಬರ್ 5ರಂದು ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲು ಮತ್ತು AFSPA ರದ್ದುಗೊಳಿಸುವಂತೆ ಒತ್ತಾಯಿಸಿ, ಶರ್ಮಿಳಾ ಹತ್ಯೆ ನಡೆದ ಸ್ಥಳದ ಬಳಿ ಉಪವಾಸ ಸತ್ಯಾಗ್ರಹ ನಡೆಸಿದ್ದರು.

ಇದನ್ನೂ ಓದಿ: ನಾವು ಲಡಾಖ್ ಜನರು ಜಮ್ಮು ಕಾಶ್ಮೀರ ರಾಜ್ಯದ ಭಾಗವಾಗಿದ್ದಾಗ ಉತ್ತಮವಾಗಿದ್ದೆವು: ಸೋನಮ್ ವಾಂಗ್ಚುಕ್

ಪೊಲೀಸರು ಇದನ್ನು ಆತ್ಮಹತ್ಯೆ ಯತ್ನ ಎಂದು ಹೇಳಿದ್ದರು. ಇದನ್ನು ಭಾರತೀಯ ದಂಡ ಸಂಹಿತೆ (ಐಪಿಸಿ) ಅಡಿಯಲ್ಲಿ ಕಾನೂನುಬಾಹಿರವೆಂದು ಪರಿಗಣಿಸಲಾಯಿತು. ಶರ್ಮಿಳಾ ಅವರನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಯಿತು. ಜೈಲಿನಲ್ಲಿದ್ದಾಗ ಅವರಿಗೆ ಬಲವಂತವಾಗಿ ಬಾಯಿಯ ಮೂಲಕ ಆಹಾರವನ್ನು ನೀಡಬೇಕಾಗಿತ್ತು. ಆದರೆ ಅವರು ವೈದ್ಯರನ್ನು ಮೂಗಿನ ಮೂಲಕ ಟ್ಯೂಬ್ ಬಳಸುವಂತೆ ಮನವೊಲಿಸಿದರು.

ಉಪವಾಸ ಸತ್ಯಾಗ್ರಹದಿಂದಾಗಿ, ಅವರ ತೂಕ ಕಡಿಮೆಯಾಗುತ್ತಲೇ ಇತ್ತು. ಪ್ರತಿಭಟನೆಯ 17ನೇ ದಿನವಾದ ನವೆಂಬರ್ 21 ರಂದು, ಅವರನ್ನು ಜೀವಂತವಾಗಿಡಲು ಮೂಗಿನ ಕೊಳವೆಯ ಮೂಲಕ (ನಾಸೊಗ್ಯಾಸ್ಟ್ರಿಕ್ ಇಂಟ್ಯೂಬೇಶನ್) ಬಲವಂತವಾಗಿ ಆಹಾರವನ್ನು ನೀಡಲಾಯಿತು. ಅವರು ತಮ್ಮ 16 ವರ್ಷಗಳ ಸುದೀರ್ಘ ಉಪವಾಸ ಸತ್ಯಾಗ್ರಹದ ಬಹುಪಾಲು ಸಮಯವನ್ನು ಆಸ್ಪತ್ರೆಯ ಕೋಣೆಯೊಳಗೆ ಕಳೆದರು. ಅವರ ಮೂಗಿಗೆ ಸೇರಿಸಲಾದ ಕೊಳವೆಯ ಮೂಲಕ ದ್ರವ ಪೋಷಕಾಂಶಗಳು ಮತ್ತು ಔಷಧಿಗಳನ್ನು ಬಲವಂತವಾಗಿ ನೀಡಲಾಗುತ್ತಿತ್ತು. ಈ ವಿಧಾನವನ್ನು ಕೆಲವೊಮ್ಮೆ ದಿನಕ್ಕೆ 3 ಬಾರಿ ನಡೆಸಲಾಗುತ್ತಿತ್ತು. ಇದು ಮುಂದಿನ 16 ವರ್ಷಗಳವರೆಗೆ ಮುಂದುವರೆಯಿತು. ಅವರ ಮೂಗು ಮತ್ತು ಹೊಟ್ಟೆಯ ನಡುವೆ ಸಂಪರ್ಕಗೊಂಡಿರುವ 3 ಅಡಿ ಉದ್ದದ ಕೊಳವೆಯ ಮೂಲಕ ಪಂಪ್ ಮಾಡಿದ ಪೋಷಕಾಂಶಗಳು ಮತ್ತು ನೀರಿನ ಮಿಶ್ರಣದಿಂದ ಅವರನ್ನು ಜೀವಂತವಾಗಿರಿಸಲಾಯಿತು.

ಇರೋಮ್ ಶರ್ಮಿಳಾ ನವೆಂಬರ್ 2000ರಲ್ಲಿ ತಮ್ಮ ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸಿದರು. 16 ವರ್ಷಗಳ ನಂತರ ಆಗಸ್ಟ್ 2016ರಲ್ಲಿ ರಾಜ್ಯ ವಿಧಾನಸಭಾ ಚುನಾವಣೆಗೆ ಸ್ವಲ್ಪ ಮೊದಲು ಅದನ್ನು ಕೊನೆಗೊಳಿಸಿದರು. ಒಂದುವೇಳೆ ಸೋನಮ್ ವಾಂಗ್ಚುಕ್ ಉಪವಾಸ ಸತ್ಯಾಗ್ರಹ ನಿಲ್ಲಿಸದಿದ್ದರೆ ಶರ್ಮಿಳಾ ಅವರಿಗೆ ಮಾಡಿದಂತೆ ಬಲವಂತವಾಗಿ ಅವರಿಗೆ ಆಹಾರ ನೀಡಿ ಬದುಕಿಸಿಕೊಳ್ಳುವ ಮಾರ್ಗವನ್ನು ಸರ್ಕಾರ ಅನುಸರಿಸಬೇಕಾಗುತ್ತದೆ.

ಪ್ರಾಣ ಉಳಿಸುವುದು ಬೇರೆ, ಪ್ರತಿಭಟನೆ ಹತ್ತಿಕ್ಕುವುದು ಬೇರೆ:

ಕಳೆದ ಕೆಲವು ವರ್ಷಗಳಿಂದ ನ್ಯಾಯಾಲಯಗಳು ಉಪವಾಸ ಸತ್ಯಾಗ್ರಹಗಳನ್ನು ನೋಡುವ ದೃಷ್ಟಿಕೋನವನ್ನು ಬದಲಾಯಿಸಿಕೊಂಡಿವೆ. ಇಂದು ನ್ಯಾಯಾಲಯಗಳ ಗಮನ ಪ್ರತಿಭಟನೆಯನ್ನು ಹತ್ತಿಕ್ಕುವುದರ ಮೇಲಿಲ್ಲ, ಬದಲಿಗೆ ವ್ಯಕ್ತಿಯ ಪ್ರಾಣ ಉಳಿಸುವುದರ ಮೇಲಿದೆ. ದೆಹಲಿ ಹೈಕೋರ್ಟ್ ಮುಂದೆ ಸಲ್ಲಿಕೆಯಾಗಿರುವ ಅರ್ಜಿಯು ವಾಂಗ್‌ಚುಕ್ ಅವರ ಬೇಡಿಕೆಗಳ ಬಗ್ಗೆಯಲ್ಲ, ಬದಲಿಗೆ ಅವರ ಆರೋಗ್ಯ ಕ್ಷೀಣಿಸುತ್ತಿರುವುದರಿಂದ ಸರ್ಕಾರ ಏನು ಮಾಡಬೇಕು ಎಂಬುದರ ಕುರಿತಾಗಿದೆ. ಸರ್ಕಾರಿ ವೈದ್ಯರು ಪ್ರತಿದಿನ ಅವರ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ ಎಂದು ಕೇಂದ್ರ ಸರ್ಕಾರ ಕೋರ್ಟ್‌ಗೆ ಭರವಸೆ ನೀಡಿದೆ. ಉಪವಾಸ ಸತ್ಯಾಗ್ರಹವು ಸಾವಿನ ಅಂಚಿಗೆ ತಲುಪಿದಾಗ ಪ್ರಾಣ ಉಳಿಸುವ ಜವಾಬ್ದಾರಿ ಸರ್ಕಾರದ ಮೇಲಿರುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಚಿಪ್ ತಯಾರಿಸದಿದ್ದರೂ ಸೆಮಿಕಂಡಕ್ಟರ್ ಕ್ರಾಂತಿಯ ಲಾಭ ಪಡೆಯುತ್ತಿರುವ 3 ಭಾರತೀಯ ಕಂಪನಿಗಳು – Kannada News | India’s Semicon 2 programme to give boost to supply chain companies

ನವದೆಹಲಿ, ಜುಲೈ 17: ಸರ್ಕಾರವು ಇತ್ತೀಚೆಗೆ ಅನುಮೋದಿಸಿರುವ ₹1.3 ಲಕ್ಷ ಕೋಟಿ ಬಜೆಟ್‌ನ ‘ಸೆಮಿಕಾನ್ 2.0’ (Semicon 2.0) ಯೋಜನೆಯು ದೇಶದ ಬಾಹ್ಯಾಕಾಶ ಮತ್ತು ತಂತ್ರಜ್ಞಾನ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಆದರೆ ಈ ಕ್ರಾಂತಿಯ ಅತ್ಯಂತ ಆಸಕ್ತಿದಾಯಕ ವಿಷಯವೆಂದರೆ, ಈ ಯೋಜನೆಯಿಂದ ತಕ್ಷಣವೇ ಭಾರಿ ಲಾಭ ಗಳಿಸುತ್ತಿರುವ ದೇಶದ ಪ್ರಮುಖ 3 ಕಂಪನಿಗಳು ನೇರವಾಗಿ ಯಾವುದೇ ಮೈಕ್ರೋಚಿಪ್‌ಗಳನ್ನು (Chips) ತಯಾರಿಸುವುದಿಲ್ಲ! ಬದಲಿಗೆ, ಚಿಪ್ ತಯಾರಿಕಾ ಘಟಕಗಳಿಗೆ (Fabs) ಅತ್ಯಗತ್ಯವಾಗಿ ಬೇಕಾಗುವ ಜಾಗತಿಕ ಗುಣಮಟ್ಟದ ರಾಸಾಯನಿಕಗಳು, ಗ್ಯಾಸ್‌ಗಳು ಮತ್ತು ಪ್ಲಾಸ್ಟಿಕ್ ಘಟಕಗಳನ್ನು ಪೂರೈಸುವ ಮೂಲಕ ಇವು ಮಾರುಕಟ್ಟೆಯಲ್ಲಿ ವಿಜೇತರಾಗಿ ಹೊರಹೊಮ್ಮುತ್ತಿವೆ.

ಗುಜರಾತ್ ಫ್ಲೋರೋಕೆಮಿಕಲ್ಸ್

ಚಿಪ್ ತಯಾರಿಕಾ ಘಟಕಗಳಲ್ಲಿ ಅತ್ಯಂತ ತೀವ್ರವಾದ ತಾಪಮಾನ ಮತ್ತು ರಾಸಾಯನಿಕ ತುಕ್ಕು (Chemical Corrosion) ತಡೆಯಲು ವಿಶೇಷ ‘ಫ್ಲೋರೋಪಾಲಿಮರ್ಸ್’ (Fluoropolymers – PTFE, PFA, PVDF) ಅಗತ್ಯವಿರುತ್ತದೆ. ಇವುಗಳಿಗೆ ಮಾರುಕಟ್ಟೆಯಲ್ಲಿ ಯಾವುದೇ ಪರ್ಯಾಯ ತಂತ್ರಜ್ಞಾನವಿಲ್ಲ.

ಮುಂಬರುವ 5G ನೆಟ್‌ವರ್ಕ್ ಮತ್ತು AI ಡೇಟಾ ಸೆಂಟರ್‌ಗಳ ಬೇಡಿಕೆ ಪೂರೈಸಲು ಈ GFL (Gujarat Fluorochemicals) ಸಂಸ್ಥೆಯು ಈಗಾಗಲೇ ಗ್ರಾಹಕರಿಂದ ಅಗತ್ಯ ಅನುಮೋದನೆ ಪಡೆದು ವಾಣಿಜ್ಯ ಪೂರೈಕೆ ಆರಂಭಿಸಿದೆ. ಸೆಮಿಕಂಡಕ್ಟರ್ ವಲಯದ ವಿಶೇಷ ಕೆಮಿಕಲ್‌ಗಳಿಗಾಗಿ ಕಂಪನಿಯು ₹222 ಕೋಟಿ ಹಾಗೂ ತನ್ನ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲು ₹250 ಕೋಟಿ ಹೂಡಿಕೆ ಮಾಡುತ್ತಿದೆ.

ಇದನ್ನೂ ಓದಿ: ಕೇವಲ 4 ನಿಮಿಷಗಳಲ್ಲಿ ಚಾರ್ಜ್; ವಿಜ್ಞಾನಿಗಳಿಂದ ಸೋಡಿಯಂ ಮೆಟಲ್ ಬ್ಯಾಟರಿ ಕ್ರಾಂತಿ

ನವೀನ್ ಫ್ಲೋರಿನ್ ಇಂಟರ್ನ್ಯಾಷನಲ್

ಸ್ಮಾರ್ಟ್‌ಫೋನ್ ಮತ್ತು ಡೇಟಾ ಸೆಂಟರ್‌ಗಳ ಮೈಕ್ರೋಚಿಪ್‌ಗಳಿಗೆ ಆಧಾರವಾಗಿರುವ ಸಿಲಿಕಾನ್ ವೇಫರ್‌ಗಳನ್ನು (Silicon Wafers) ಸ್ವಚ್ಛಗೊಳಿಸಲು ಮತ್ತು ಅವುಗಳ ಮೇಲೆ ವಿನ್ಯಾಸ ಕೆತ್ತಲು (Etching) ಅಲ್ಟ್ರಾ-ಪ್ಯೂರ್ ಗುಣಮಟ್ಟದ ಆಸಿಡ್‌ಗಳು ಬೇಕಾಗುತ್ತವೆ. ನವಿನ್ ಫ್ಲೋರಿನ್ ಇಂಟರ್ನ್ಯಾಷನಲ್ ಸಂಸ್ಥೆ (Navin Fluorine International) ಈ ಆಸಿಡ್​​ಗಳನ್ನು ಪೂರೈಸುತ್ತದೆ.

ಸ್ವಿಸ್ ಮೂಲದ ಬಸ್ ಕೆಮ್ಟೆಕ್ (Buss ChemTech) ಕಂಪನಿಯೊಂದಿಗೆ ತಾಂತ್ರಿಕ ಪಾಲುದಾರಿಕೆ ಹೊಂದಿರುವ ನವೀನ್ ಫ್ಲೋರಿನ್, ಗುಜರಾತ್‌ನ ದಹೇಜ್‌ನಲ್ಲಿ ₹450 ಕೋಟಿ ವೆಚ್ಚದಲ್ಲಿ ಹೈಡ್ರೋಫ್ಲೋರಿಕ್ ಆಸಿಡ್ (HF) ಪ್ಲಾಂಟ್ ಸ್ಥಾಪಿಸಿ ಈಗಾಗಲೇ ವಾಣಿಜ್ಯ ಸರಬರಾಜು ಆರಂಭಿಸಿದೆ. ಇದಲ್ಲದೆ, ಹಾರ್ಡ್‌ವೇರ್ ಕೂಲಿಂಗ್ ತಂತ್ರಜ್ಞಾನಕ್ಕಾಗಿ ಮತ್ತೊಂದು ಜಾಗತಿಕ ಸಂಸ್ಥೆಯೊಂದಿಗೆ ₹120 ಕೋಟಿ ಒಪ್ಪಂದ ಮಾಡಿಕೊಂಡಿದೆ.

ಸ್ಟಾಲಿಯನ್ ಇಂಡಿಯಾ ಫ್ಲೋರೋಕೆಮಿಕಲ್ಸ್

ಸೆಮಿಕಂಡಕ್ಟರ್, ಸೋಲಾರ್ ಸೆಲ್ ಮತ್ತು ಆಪ್ಟಿಕಲ್ ಫೈಬರ್ ಉದ್ಯಮದಲ್ಲಿ ಅತಿ ಹೆಚ್ಚು ಶುದ್ಧತೆಯುಳ್ಳ ರೆಫ್ರಿಜರೆಂಟ್ ಹಾಗೂ ವಿಶೇಷ ಕೈಗಾರಿಕಾ ಗ್ಯಾಸ್‌ಗಳ (ಮುಖ್ಯವಾಗಿ ದ್ರವ ಹೀಲಿಯಂ – Liquid Helium) ಅಗತ್ಯವಿರುತ್ತದೆ.

ಇದನ್ನೂ ಓದಿ: ಶೇ. 100 ಚಾರ್ಜ್ ಆದರೂ ಫೋನ್ ಚಾರ್ಜಿಂಗ್ ಏಕೆ ನಿಲ್ಲುವುದಿಲ್ಲ?, ಆ ವಿದ್ಯುತ್ ಎಲ್ಲಿಗೆ ಹೋಗುತ್ತದೆ?

ಸ್ಟಾಲಿಯನ್ ಇಂಡಿಯಾ ಫ್ಲೋರೋಕೆಮಿಕಲ್ಸ್ ಕಂಪನಿಯು (Stallion India Fluorochemicals) ತನ್ನ ಖಾಲಾಪುರ ಮತ್ತು ಆಂಧ್ರಪ್ರದೇಶದ ಮಾಂಬಟ್ಟು ಘಟಕಗಳಲ್ಲಿ ದ್ರವ ಹೀಲಿಯಂ ಮೂಲಸೌಕರ್ಯವನ್ನು ದೊಡ್ಡ ಮಟ್ಟದಲ್ಲಿ ವಿಸ್ತರಿಸುತ್ತಿದ್ದು, ಇದು 2026 ರ ಮಧ್ಯಭಾಗದಲ್ಲಿ ಲಭ್ಯವಾಗಲಿದೆ. ತನ್ನ ಪೂರೈಕೆಯನ್ನು ಸುರಕ್ಷಿತಗೊಳಿಸಲು ಕತಾರ್ ಆಯಿಲ್‌ಫೀಲ್ಡ್ಸ್‌ನಿಂದ ಗ್ಯಾಸ್ ಪಡೆಯಲು ಶಾರ್ಜಾ ಆಕ್ಸಿಜನ್ ಕಂಪನಿಯೊಂದಿಗೆ ದೀರ್ಘಾವಧಿಯ ಒಪ್ಪಂದ ಮಾಡಿಕೊಂಡಿದೆ. 2030 ರ ವೇಳೆಗೆ ₹3,000 ಕೋಟಿ ಆದಾಯದ ಗುರಿಯನ್ನು ಕಂಪನಿ ಹೊಂದಿದೆ.

ಒಂದು ದೊಡ್ಡ ಉದ್ಯಮ ಬೆಳೆಯುವಾಗ ಕೇವಲ ಅಂತಿಮ ಉತ್ಪನ್ನ ತಯಾರಿಸುವ ಕಂಪನಿಗಳು ಮಾತ್ರವಲ್ಲದೆ, ಅದಕ್ಕೆ ಕಚ್ಚಾ ವಸ್ತು ಹಾಗೂ ಅಗತ್ಯ ಬಿಡಿಭಾಗಗಳನ್ನು ಒದಗಿಸುವ ‘ಸಪ್ಲೈ ಚೈನ್’ (Supply Chain) ಕಂಪನಿಗಳು ಕೂಡ ಹೂಡಿಕೆಗೆ ಅತ್ಯುತ್ತಮ ಅವಕಾಶಗಳನ್ನು ಸೃಷ್ಟಿಸುತ್ತವೆ ಎಂಬುದಕ್ಕೆ ಭಾರತದ ಸೆಮಿಕಂಡಕ್ಟರ್ ಯೋಜನೆ ಮತ್ತು ಈ ಮೂರು ಕಂಪನಿಗಳ ಬೆಳವಣಿಗೆಯೇ ಸಾಕ್ಷಿ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

IND vs ENG: ಸಚಿನ್ ತೆಂಡೂಲ್ಕರ್‌ ದಾಖಲೆ ಮುರಿದ ವಿರಾಟ್ ಕೊಹ್ಲಿ – Kannada News | Virat Kohli Breaks Sachin’s England Record: Most 50+ Scores in ODIs and New Milestones!

ಇಂಗ್ಲೆಂಡ್‌ ವಿರುದ್ಧದ ಎರಡನೇ ಏಕದಿನ ಪಂದ್ಯವನ್ನು ಟೀಂ ಇಂಡಿಯಾ ಸೋತಿರಬಹುದು. ಆದರೆ ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹಲವು ದಾಖಲೆಗಳನ್ನು ಸೃಷ್ಟಿಸಿದರು. ಕಾರ್ಡಿಫ್​ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಅರ್ಧಶತಕದ ಇನ್ನಿಂಗ್ಸ್ ಆಡಿದ ಕೊಹ್ಲಿ, ಇದರೊಂದಿಗೆ ಇಂಗ್ಲೆಂಡ್‌ನಲ್ಲಿ ಅತಿ ಹೆಚ್ಚು ಐವತ್ತು ಪ್ಲಸ್ ರನ್​ಗಳ ಇನ್ನಿಂಗ್ಸ್ ಆಡಿದ ಸಾಧನೆಯನ್ನೂ ಮಾಡಿದರು(PC-PTI).

Source link

‘ರುಕ್ಮಿಣಿ ರಾಧಾಕೃಷ್ಣ’ ಸಿನಿಮಾದಿಂದ ಬಿಡುಗಡೆ ಆಯ್ತು 2 ಭಾಷೆಯ ವಿಶೇಷ ಹಾಡು – Kannada News | Rukhmini Radhakrishna Movie Songs Released Lahari Music Mokshitha Pai Bharath Kumar

‘ರುಕ್ಮಿಣಿ ರಾಧಾಕೃಷ್ಣ’ (Rukhmini Radhakrishna) ಸಿನಿಮಾದ ಚಿತ್ರೀಕರಣ ಕೊನೆಯ ಹಂತದಲ್ಲಿದೆ. ‘ಉಮೇಶ್ ಫಿಲ್ಮ್ಸ್’ ಬ್ಯಾನರ್ ಮೂಲಕ ಎನ್. ಹನುಮಂತರಾಜು, ಎನ್.ಹೆಚ್. ಉಮೇಶ್ ಅವರು ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಈ ಸಿನಿಮಾಗೆ ಪ್ರಾಣ್ ಸುವರ್ಣ ಅವರು ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಶಿಲ್ಪಾ ಶ್ರೀನಿವಾಸ್ ಅವರ ಪುತ್ರ ಭರತ್ ಕುಮಾರ್ (Bharath Kumar) ಅವರು ಈ ಸಿನಿಮಾದಲ್ಲಿ ಮುಖ್ಯಭೂಮಿಕೆ ನಿಭಾಯಿಸುತ್ತಿದ್ದಾರೆ. ನಟಿಯರಾದ ಮೋಕ್ಷಿತಾ ಪೈ (Mokshitha Pai) ಹಾಗೂ ರಿಯಾ ಸಚ್ ದೇವ್ ಅವರು ನಾಯಕಿಯರಾಗಿ ನಟಿಸುತ್ತಿದ್ದಾರೆ. ‘ರುಕ್ಮಿಣಿ ರಾಧಾಕೃಷ್ಣ’ ಚಿತ್ರಕ್ಕೆ ಸುನಾದ್ ಗೌತಮ್ ಅವರು ಸಂಗೀತ ನೀಡಿದ್ದು, 2 ಹಾಡುಗಳನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಯಿತು.

ಲಹರಿ ವೇಲು ಅವರು ‘ರುಕ್ಮಿಣಿ ರಾಧಾಕೃಷ್ಣ’ ಹಾಡುಗಳನ್ನು ಬಿಡುಗಡೆ ಮಾಡಿದ್ದಾರೆ. ‘ಈ ಸಿನಿಮಾದಲ್ಲಿ 5 ಸುಮಧುರ ಹಾಡುಗಳಿವೆ. ಅವುಗಳನ್ನು ಅಷ್ಟೇ ಸುಂದರವಾಗಿ ಚಿತ್ರಿಸಲಾಗಿದೆ. ನಾನು ಕೂಡ ಈ ಸಿನಿಮಾ ಮೇಲೆ ನಿರೀಕ್ಷೆ ಇಟ್ಟುಕೊಂಡಿದ್ದೇನೆ’ ಎಂದು ಲಹರಿ ವೇಲು ಅವರು ಹೇಳಿದರು. ಹಿರಿಯ ಗೀತರಚನಕಾರ ಕೆ. ಕಲ್ಯಾಣ್ ಅವರು ಸಾಹಿತ್ಯ ಬರೆದಿದ್ದಾರೆ.

ಮೆಚ್ಚುಗೆ ಸೂಚಿಸಿದ ಕೆ. ಕಲ್ಯಾಣ್:

ಸುದ್ದಿಗೋಷ್ಠಿ ವೇಳೆ ಕೆ. ಕಲ್ಯಾಣ್ ಮಾತನಾಡಿದರು. ‘ನಿರ್ಮಾಪಕರಲ್ಲಿರುವ ಸಿದ್ದತೆ, ನಿರ್ದೇಶಕರಲ್ಲಿರುವ ಬದ್ದತೆ ಈ ಹಾಡುಗಳಲ್ಲಿ ಎದ್ದು ಕಾಣುತ್ತದೆ. ನಾಯಕಿ ಪಾತ್ರಕ್ಕೆ ತಮಿಳು ಹಿನ್ನೆಲೆ ಇರುತ್ತದೆ. ಹಾಗಾಗಿ ತಮಿಳು, ಕನ್ನಡ ಸೇರಿಸಿ ಒಂದು ಹಾಡನ್ನು ರಚಿಸಿದ್ದೇನೆ’ ಎಂದು ಅವರು ಹೇಳಿದರು. ಈ ಸಿನಿಮಾದ ಕಥೆ ತುಂಬಾ ವಿಶೇಷವಾಗಿದೆ ಎಂದು ಸಂಗೀತ ನಿರ್ದೇಶಕ ಸುನಾದ್ ಗೌತಮ್ ಅವರ ಹೇಳಿದ್ದಾರೆ.

‘ಲಹರಿ’ ಸಂಸ್ಥೆಗೆ ಆಡಿಯೋ ಹಕ್ಕುಗಳು:

ನಾಯಕ ನಟ ಭರತ್ ಕುಮಾರ್ ಮಾತನಾಡಿ, ‘ಒಳ್ಳೆಯ ಮೊತ್ತ ನೀಡಿ ಲಹರಿ ಸಂಸ್ಥೆಯು ಆಡಿಯೋ ಖರೀದಿ ಮಾಡಿದೆ. 2 ಭಾಷೆಯ ಸಾಂಗ್ ಬೇಕು ಎಂದಾಗ ಕೆ. ಕಲ್ಯಾಣ್ ಅವರು ಅದಕ್ಕೆ ತಕ್ಕಂತೆ ಸಾಲುಗಳನ್ನು ಪೋಣಿಸಿದರು. ರಾಧಾ ಪಾತ್ರವನ್ನು ಪಾರು ಖ್ಯಾತಿಯ ಮೋಕ್ಷಿತಾ ಮಾಡಿದರೆ ಚೆನ್ನಾಗಿರುತ್ತೆ ಎಂದು ನಮ್ಮಮ್ಮ ಸಲಹೆ ಕೊಟ್ಟರು. ನಿರ್ಮಪಕರಿಬ್ಬರೂ ನನ್ನ ಸಹೋದರರಿದ್ದಂತೆ’ ಎಂದು ಹೇಳಿದರು.

ಇದನ್ನೂ ಓದು: ಬಿಗ್ ಬಾಸ್ ಬೆಡಗಿ ಮೋಕ್ಷಿತಾ ಪೈ ಪಾಲಿಗೆ ರಾಧಾ ಪಾತ್ರ ಒಲಿದು ಬಂದಿದ್ದು ಹೇಗೆ?

ರಾಧಾ ಪಾತ್ರ ಸಿಕ್ಕಿದ್ದಕ್ಕೆ ಮೋಕ್ಷಿತಾಗೆ ಖುಷಿ:

ತಮ್ಮ ಪಾತ್ರದ ಬಗ್ಗೆ ನಟಿ ಮೋಕ್ಷಿತಾ ಪೈ ಅವರಿಗೆ ಬಹಳ ಖುಷಿ ಇದೆ. ‘ಕಥೆ ಹೇಳಲು ನಿರ್ಮಾಪಕರ ಜತೆ ಭರತ್ ಕೂಡ ಬಂದಿದ್ದರು. ನಿಮಗೆ ಯಾವ ಪಾತ್ರ ಬೇಕು ಎಂದಾಗ ನಾನು ರಾಧಾ ಪಾತ್ರವನ್ನೇ ಸೆಲೆಕ್ಟ್ ಮಾಡಿಕೊಂಡೆ. ಆ ಪಾತ್ರದ ತೀವ್ರತೆ ನನಗೆ ಬಹಳ ಇಷ್ಟವಾಯಿತು. ಕುಂಭಕೋಣಂನಲ್ಲಿ ಈ ಹಾಡನ್ನು ಚಿತ್ರೀಕರಿಸಿದ್ದೇವೆ’ ಎಂದು ಅವರು ಹೇಳಿದರು. ರುಕ್ಮಿಣಿ ಪಾತ್ರವನ್ನು ನಟಿ, ಮಾಡೆಲ್ ರಿಯಾ ಸಚ್ ದೇವ್ ಅವರು ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಲಂಚ ಪಡೆಯುವಾಗಲೇ ರೇಡ್​​: ಕಲಬುರಗಿ, ಚಿತ್ರದುರ್ಗದಲ್ಲಿ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಗಳು – Kannada News | Lokayukta Raid: Government Officials Caught Red Handed Taking Bribes in Kalaburagi and Chitradurga

ಕಲಬುರಗಿ/ಚಿತ್ರದುರ್ಗ, ಜುಲೈ 17: 10 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆಯೇ ಕಲಬುರಗಿ ಜಿಲ್ಲಾ ನ್ಯಾಯಾಲಯದಲ್ಲಿ ಎಪಿಪಿ ಲೋಕಾಯುಕ್ತ ಬಲೆಗೆ ಬಿದ್ದ ಪ್ರಸಂಗ ನಡೆದಿದೆ. ಕರಣವೊಂದರಲ್ಲಿ ನ್ಯಾಯಾಲಯಕ್ಕೆ ರಾಜಿ ಅರ್ಜಿ ಸಲ್ಲಿಸಲು ಹೈದರಾಬಾದ್ ಮೂಲದ ದೂರುದಾರ ರಾಹುಲ್​ರಿಂದ 5ನೇ ಜೆಎಂಎಫ್​ಸಿ ಕೋರ್ಟ್ ಎಪಿಪಿ ಸಂತೋಷ್ ಕುಮಾರ್ ಲೋಖಂಡೆ ಲಂಚ ಸ್ವೀಕರಿಸುತ್ತಿದ್ದರು. ಈ ವೇಳೆ ಕೋರ್ಟ್​ ಆವರಣದಲ್ಲಿಯೇ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. 10 ಸಾವಿರ ನಗದು, 9 ಸೀರೆ, 4 ಶರ್ಟ್, 4 ಲಂಡನ್ ಜೀನ್ಸ್ ಪ್ಯಾಂಟ್, 1 ಜೊತೆ ಶೂ, ಮಹಿಳೆಯರ 4 ಡ್ರೆಸ್ ಮತ್ತು 6 ಜೊತೆ ಚಪ್ಪಲಿಗೆ ಸಂತೋಷ್​​ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಲೋಕಾಯುಕ್ತ ಇನ್ಸ್​ಪೆಕ್ಟರ್ ಅರುಣ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.

ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕ ವಶಕ್ಕೆ

ಚಿತ್ರದುರ್ಗ ಜಿಲ್ಲೆ ಹಿರಿಯೂರು ಬಳಿ ಕಾರ್ಯಾಚರಣೆ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು ಕಲಬುರಗಿ ವಿಭಾಗದ ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕ ತಿಪ್ಪೇಸ್ವಾಮಿ ಅವರನ್ನು ಖೆಡ್ಡಾಗೆ ಕೆಡವಿದ್ದಾರೆ. ಹೊಸಪೇಟೆಯ ಗುತ್ತಿಗೆದಾರ ಲಕ್ಷ್ಮೀಕಾಂತ್‌ ಎಂಬವರು ಮಾಡಿದ್ದ 48 ಲಕ್ಷದ ಕಾಮಗಾರಿ ಬಗ್ಗೆ ತನಿಖೆ ಮಾಡಿಸುತ್ತೇನೆಂದು ತಿಪ್ಪೇಸ್ವಾಮಿ ಬೆದರಿಸಿದ್ದರು. ಅಲ್ಲದೆ 10 ಲಕ್ಷ ರೂ. ಲಂಚ ನೀಡಿದರೆ ತನಿಖೆ ಮಾಡಲ್ಲ ಎಂದು ತಿಳಿಸಿದ್ದರು. ಈ ಸಂಬಂಧ ಹಿರಿಯೂರು ಬಳಿ 5 ಲಕ್ಷ ಲಂಚ ಸ್ವೀಕಾರ ವೇಳೆ ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಬಳ್ಳಾರಿ ಲೋಕಾಯುಕ್ತ ಎಸ್‌ಪಿ ವಾಸುದೇವರಾಮ್ ನೇತೃತ್ವದಲ್ಲಿ ದಾಳಿ ನಡೆದಿದ್ದು, ತಿಪ್ಪೇಸ್ವಾಮಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಇದನ್ನೂ ಓದಿ: ಲಂಚ ಪಡೆಯುತ್ತಿರುವಾಗಲೇ ಲೋಕಾ ಬಲೆಗೆ ಬಿದ್ದ ಇಬ್ಬರು ಅಧಿಕಾರಿಗಳು; ಬೆಂಗಳೂರಿನಲ್ಲಿ ಲೋಕಾಯುಕ್ತ ಭರ್ಜರಿ ಟ್ರ್ಯಾಪ್

ಶಿರಾ ನಗರಸಭೆ ಕಚೇರಿಯ ಮೇಲೆಯೂ ದಾಳಿ

ಇ-ಖಾತೆ, ಹಕ್ಕುಪತ್ರ ವರ್ಗಾವಣೆ, ಇ-ಸ್ವತ್ತು, ಯುಜಿಡಿ, ಕಟ್ಟಡ ಪರವಾನಿಗೆ ಕೊಡಲು ಭ್ರಷ್ಟಾಚಾರ ಆರೋಪ ಹಿನ್ನೆಲೆ ಶಿರಾ ನಗರಸಭೆ ಕಚೇರಿಯ ಮೇಲೆಯೂ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ನಗರಸಭೆ ಕಚೇರಿಯಲ್ಲಿ ದಾಖಲಾತಿ ಪರಿಶೀಲನೆ ನಡೆಸಲಾಗಿದ್ದು, ತುಮಕೂರು ಲೋಕಾಯುಕ್ತ ಎಸ್‌ಪಿ ನೇತೃತ್ವದಲ್ಲಿ ಇಬ್ಬರು DySP, ನಾಲ್ವರು ಇನ್ಸ್‌ಪೆಕ್ಟರ್‌, 10ಕ್ಕೂ ಹೆಚ್ಚು ಸಿಬ್ಬಂದಿಯಿಂದ ರೇಡ್ ನಡೆದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 6:02 pm, Fri, 17 July 26

Source link

Exit mobile version