‘ರಾಕಿಂಗ್ ಸ್ಟಾರ್ ಯಶ್ ಕೇವಲ ನಟನಲ್ಲ..’; ರಾಮಾಯಣ ನಿರ್ಮಾಪಕನ ಮೆಚ್ಚುಗೆ – Kannada News

ರಾಕಿಂಗ್ ಸ್ಟಾರ್ ಯಶ್ ಅವರು ‘ಟಾಕ್ಸಿಕ್’ ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಇದಾದ ಬಳಿಕ ಅವರ ನಟನೆಯ ‘ರಾಮಾಯಣ’ ಸಿನಿಮಾ ತೆರೆಗೆ ಬರಲಿದೆ. ಈ ಚಿತ್ರದಲ್ಲಿ ಅವರು ರಾವಣನ ಪಾತ್ರ ಮಾಡುವುದರ ಜೊತೆಗೆ ಸಿನಿಮಾ ನಿರ್ಮಾಣದಲ್ಲೂ ಕೈ ಜೋಡಿಸಿದ್ದಾರೆ. ಕನ್ನಡದ ಹೀರೋ ಒಬ್ಬರು ಬಾಲಿವುಡ್ ಸಿನಿಮಾ ನಿರ್ಮಾಣ ಮಾಡುತ್ತಾರೆ ಎಂದರೆ ಅದು ನಿಜಕ್ಕೂ ಹೆಮ್ಮೆಯ ಸಂಗತಿ. ಯಶ್ ಅವರು ಕೇವಲ ಕಾಟಾಚಾರಕ್ಕೆ ಸಿನಿಮಾ ನಿರ್ಮಾಣದಲ್ಲಿ ತೊಡಗಿಕೊಂಡಿಲ್ಲ. ಈ ವಿಷಯವನ್ನು ಚಿತ್ರದ ಪ್ರಮುಖ ನಿರ್ಮಾಪಕ ನಮಿತ್ ಮಲ್ಹೋತ್ರ ಅವರು ವಿವರಿಸಿದ್ದಾರೆ.

‘ಯಶ್ ಅವರಲ್ಲಿರುವ ಶ್ರೇಷ್ಠ ಗುಣ ಏನೆಂದರೆ, ಅವರು ಕೇವಲ ಒಬ್ಬ ಅದ್ಭುತ ನಟ ಮಾತ್ರ ಅಲ್ಲ. ನಾವು ಹಾಕಿಕೊಂಡಿದ್ದ ಗುರಿ ಮತ್ತು ನಮ್ಮ ಆಕಾಂಕ್ಷೆಯನ್ನು ಅವರು ನೋಡಿದ ತಕ್ಷಣವೇ ನಮ್ಮೊಂದಿಗೆ ಕೈಜೋಡಿಸಿದರು. ಸಂಪೂರ್ಣ ಬೆಂಬಲವನ್ನು ನೀಡಿದ ಅವರು, ನಮಿತ್, ನಾವು ಇದನ್ನು ಒಟ್ಟಾಗಿ ಮಾಡಬೇಕು ಮತ್ತು ಇದನ್ನು ಸಾಧ್ಯವಾದಷ್ಟು ಅತ್ಯುತ್ತಮ ರೀತಿಯಲ್ಲಿ ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಬೇಕು ಎಂದು ಹೇಳಿದರು’ ಎಂಬುದಾಗಿ ನಮಿತ್ ವಿವರಿಸಿದ್ದಾರೆ.

‘ಅವರ ಆ ಮಾತು ನನಗೆ ಅತ್ಯಂತ ಅಮೂಲ್ಯವಾದದ್ದು. ಏಕೆಂದರೆ, ಅವರಂತಹ ದೊಡ್ಡ ಮಟ್ಟದ ವ್ಯಕ್ತಿಯೊಬ್ಬರು ಕೇವಲ ಒಬ್ಬ ನಟನಾಗಿ ಮಾತ್ರ ಉಳಿಯದೆ, ನಮ್ಮೊಂದಿಗೆ ಜೊತೆಯಾಗಿ ನಿಂತು ತಮ್ಮ ಸಂಪೂರ್ಣ ಶಕ್ತಿಯನ್ನು ಧಾರೆ ಎರೆದಾಗ ತುಂಬಾ ದೂರದವರೆಗೆ ಸಾಗಲು ಸಹಾಯ ಮಾಡುತ್ತದೆ. ಅವರ ಆ ಧೃಢ ಸಂಕಲ್ಪವೇ ಇಂದು ಜನರ ಕಣ್ಣಮುಂದೆ ಕಾಣಿಸುತ್ತಿದೆ ಎಂದು ನಾನು ಭಾವಿಸುತ್ತೇನೆ. ಅಂತಿಮವಾಗಿ ನಾವು ಭಾರತದಿಂದ ಇಡೀ ಜಗತ್ತಿಗಾಗಿ, ಈ ಹಿಂದೆ ಎಂದೂ ಮಾಡಿರದಂತಹ ಒಂದು ವಿಶಿಷ್ಟವಾದ ಕೆಲಸವನ್ನು ಮಾಡಲು ಪ್ರಯತ್ನಿಸುತ್ತಿದ್ದೇವೆ’ ಎಂಬುದು ನಮಿತ್ ಮಾತು.

ಇದನ್ನೂ ಓದಿ: ನನ್ನಲ್ಲಿದ್ದ ಕೆಟ್ಟ ಅಭ್ಯಾಸಗಳನ್ನು ರಾಮಾಯಣ ದೂರ ಮಾಡಿದೆ ಎಂದ ರಣಬೀರ್

‘ರಾಮಾಯಣ’ ಸಿನಿಮಾ ಎರಡು ಪಾರ್ಟ್​ ಅಲ್ಲಿ ತೆರೆಗೆ ಬರುತ್ತಿದೆ. ಮೊದಲ ಭಾಗ ಈ ವರ್ಷ ದೀಪಾವಳಿಗೆ, ಎರಡನೇ ಭಾಗ ಮುಂದಿನ ವರ್ಷ ದೀಪಾವಳಿಗೆ ತೆರೆಗೆ ಬರುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಸಚಿವ ಸಂಪುಟ ರಚನೆಗೆ ಕಾಂಗ್ರೆಸ್ ಹೈಕಮಾಂಡ್ ಕಸರತ್ತು: ವರಿಷ್ಠರಿಗೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಪ್ರತ್ಯೇಕ ಪಟ್ಟಿ! – Kannada News

ವರಿಷ್ಠರಿಗೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಪ್ರತ್ಯೇಕ ಪಟ್ಟಿ!Image Credit source: tv9

ನವದೆಹಲಿ, ಜೂನ್ 2: ಕರ್ನಾಟಕದಲ್ಲಿ ಅಧಿಕಾರ ಹಂಚಿಕೆಯನ್ನು ಯಶಸ್ವಿಯಾಗಿ ನೆರವೇರುವಂತೆ ಮಾಡಿದರೂ ಇದೀಗ ಸಚಿವ ಸಂಪುಟ ರಚನೆ ಕಾಂಗ್ರೆಸ್ (Congress) ಹೈಕಮಾಂಡ್‌ಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಈಗ ಮಂತ್ರಿ ಮಂಡಲಕ್ಕೆ ಯಾರನ್ನು ಸೇರಿಸಬೇಕು, ಯಾರನ್ನು ಬಿಡಬೇಕು ಎಂಬುದು ಹೈಕಮಾಂಡ್​ಗೆ ಪ್ರಮುಖ ತಲೆನೋವಾಗಿದೆ. ಈ ಕುರಿತು ದೆಹಲಿಯಲ್ಲಿ ಕಳೆದ ಕೆಲವು ದಿನಗಳಿಂದ ಮ್ಯಾರಥಾನ್ ಸಭೆಗಳು ನಡೆಯುತ್ತಿದ್ದು, ನಿರ್ಧಾರ ಅಂತಿಮಗೊಳಿಸಲು ವರಿಷ್ಠರು ತೀವ್ರ ಕಸರತ್ತು ನಡೆಸುತ್ತಿದ್ದಾರೆ. ಏತನ್ಮಧ್ಯೆ, ಸಿದ್ದರಾಮಯ್ಯ (Siddaramaiah) ಮತ್ತು ಡಿಕೆ ಶಿವಕುಮಾರ್ (DK Shivakumar) ಇಬ್ಬರೂ ಪ್ರತ್ಯೇಕ ಪಟ್ಟಿಗಳನ್ನು ಕಾಂಗ್ರೆಸ್ ಹೈಕಮಾಂಡ್‌ಗೆ ಸಲ್ಲಿಸಿದ್ದಾರೆ ಎಂಬುದು ತಿಳಿದುಬಂದಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆಸಿ ವೇಣುಗೋಪಾಲ್ ಮತ್ತು ರಣದೀಪ್ ಸುರ್ಜೆವಾಲ ಈ ಪಟ್ಟಿಗಳನ್ನು ಪರಿಶೀಲಿಸಿ, ನಾಯಕರೊಂದಿಗೆ ಪ್ರತ್ಯೇಕವಾಗಿ ಸಭೆ ನಡೆಸಿದ್ದಾರೆ. ಸಣ್ಣದೊಂದು ಎಡವಟ್ಟಾದರೂ ಪಕ್ಷಕ್ಕೆ ಸಮಸ್ಯೆಯಾಗಬಹುದು ಎಂಬ ಆತಂಕ ವರಿಷ್ಠರಲ್ಲಿದೆ.

ಮುಖ್ಯಾಂಶಗಳು

  • ಸಚಿವರ ಪಟ್ಟಿ ಅಂತಿಮಗೊಳಿಸಲು ದೆಹಲಿಯಲ್ಲಿ ಸರಣಿ ಸಭೆಗಳು.
  • ಸುಗಮ ಅಧಿಕಾರ ಹಂಚಿಕೆಯ ನಂತರ ಹೈಕಮಾಂಡ್ ಎದುರು ಮತ್ತೊಂದು ಸವಾಲು.
  • ಸಚಿವರ ಪಟ್ಟಿ ಬಹುತೇಕ ಇಂದೇ ಫೈನಲ್, ನಾಳೆ ಲೋಕಭವನಕ್ಕೆ ರವಾನೆ.

ದೆಹಲಿಯಲ್ಲಿರುವ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಇಬ್ಬರನ್ನೂ ಕೆಸಿ ವೇಣುಗೋಪಾಲ್ ನಿವಾಸಕ್ಕೆ ಕರೆಸಿಕೊಂಡು ಪ್ರತ್ಯೇಕವಾಗಿ ಚರ್ಚೆ ನಡೆಸಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ಸಭೆ ನಿಗದಿಯಾಗಿದೆ. ಈ ಸಭೆಯಲ್ಲಿ ಮೊದಲ ಹಂತದ ಸಚಿವರ ಪಟ್ಟಿಗೆ ಅಂತಿಮ ಮುದ್ರೆ ಬೀಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಸಂಭಾವ್ಯ ಸಚಿವರ ಪಟ್ಟಿ ಮತ್ತು ಜಾತಿ ಸಮೀಕರಣ

ಸಂಭಾವ್ಯ ಸಚಿವರ ಪಟ್ಟಿಯ ಪ್ರಕಾರ, ಹತ್ತರಿಂದ ಹನ್ನೆರಡು ಮಂದಿ ಶಾಸಕರು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ. ಹೈಕಮಾಂಡ್ ಕೈ ಸೇರಿರುವ ಸಂಭಾವ್ಯ ಪಟ್ಟಿಯಲ್ಲಿ ಕೆಲವು ಪ್ರಮುಖ ಹೆಸರುಗಳು ಇಲ್ಲಿವೆ;

  • ಸತೀಶ್ ಜಾರಕಿಹೊಳಿ: ಬೆಳಗಾವಿ ಭಾಗದ ಪ್ರಭಾವಿ ನಾಯಕ ಹಾಗೂ ಹಿಂದುಳಿದ ವರ್ಗದ ಮುಖಂಡ.
  • ಡಾ. ಜಿ. ಪರಮೇಶ್ವರ: ಕೆಪಿಸಿಸಿ ಅಧ್ಯಕ್ಷರಾಗಿ ಎರಡು ಬಾರಿ ಸೇವೆ ಸಲ್ಲಿಸಿದ ಹಿರಿಯ ದಲಿತ ನಾಯಕ.
  • ಯು.ಟಿ. ಖಾದರ್: ಮಾಜಿ ಸ್ಪೀಕರ್ ಆಗಿ ಉತ್ತಮ ಕೆಲಸ ಮಾಡಿದವರು, ಮಾಜಿ ಸಚಿವರು.
  • ಪ್ರಿಯಾಂಕ್ ಖರ್ಗೆ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ.
  • ರಾಮಲಿಂಗ ರೆಡ್ಡಿ: ಬೆಂಗಳೂರಿನ ಹಿರಿಯ ನಾಯಕ.
  • ಎಂ.ಬಿ. ಪಾಟೀಲ್: ಲಿಂಗಾಯತ ಸಮುದಾಯದ ಪ್ರಮುಖ ನಾಯಕ.
  • ಕೃಷ್ಣ ಭೈರೇಗೌಡ: ಕಂದಾಯ ಇಲಾಖೆಯಲ್ಲಿ ಉತ್ತಮ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.
  • ಕೆ.ಜೆ. ಜಾರ್ಜ್: ಕಾಂಗ್ರೆಸ್‌ನ ಹಿರಿಯ ಸಚಿವರು, ಹೈಕಮಾಂಡ್‌ನೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ.
  • ಈಶ್ವರ್ ಖಂಡ್ರೆ: ಲಿಂಗಾಯತ ಸಮುದಾಯದ ಮತ್ತೊಬ್ಬ ಪ್ರಮುಖ ನಾಯಕ.
  • ಜಮೀರ್ ಅಹಮದ್ ಖಾನ್: ಮುಸ್ಲಿಂ ಸಮುದಾಯದ ಕೋಟಾದಿಂದ ಪ್ರಮುಖ ಹೆಸರು.

ಸಚಿವ ಸಂಪುಟ ರಚನೆಯಲ್ಲಿ ಜಾತಿ ಸಮೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಎಸ್ಸಿ, ಎಸ್ಟಿ, ಒಕ್ಕಲಿಗ, ಲಿಂಗಾಯತ, ಅಲ್ಪಸಂಖ್ಯಾತರು (ಮುಸ್ಲಿಂ ಸೇರಿದಂತೆ) ಸೇರಿದಂತೆ ಎಲ್ಲಾ ಸಮುದಾಯಗಳಿಗೂ ಪ್ರಾತಿನಿಧ್ಯ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನೀಡಿರುವ ಪ್ರತ್ಯೇಕ ಪಟ್ಟಿಗಳಲ್ಲಿ ಕೆಲ ಸಾಮಾನ್ಯ ಹೆಸರುಗಳು ಇರಬಹುದಾಗಿದ್ದರೂ, ತಮ್ಮ ಬೆಂಬಲಿಗರನ್ನು ಸಂಪುಟದಲ್ಲಿ ಒಳಗೊಳ್ಳುವಂತೆ ನೋಡಿಕೊಳ್ಳಲು ಇಬ್ಬರೂ ಶ್ರಮಿಸುತ್ತಿದ್ದಾರೆ.

ಇದನ್ನೂ ಓದಿ: ಡಿಕೆ ಶಿವಕುಮಾರ್ ಸಂಪುಟ ಸೇರಲು ಆಕಾಂಕ್ಷಿಗಳ ಭರ್ಜರಿ ಲಾಬಿ, ದೆಹಲಿ ದಂಡಯಾತ್ರೆ: ಸ್ಪೀಕರ್ ಆಗಲು ನಾಯಕರ ಹಿಂದೇಟು

ಒಟ್ಟಿನಲ್ಲಿ, ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಜತೆಗಿನ ಸಭೆಯ ಬಳಿಕ ಅಂತಿಮ ಪಟ್ಟಿ ಸಿದ್ಧವಾಗಲಿದೆ. ಬಂಡಾಯ ಅಥವಾ ಗೊಂದಲಗಳನ್ನು ತಪ್ಪಿಸಲು, ಪಟ್ಟಿಯನ್ನು ನಾಳೆ (ಜೂನ್ 3) ಬೆಳಗ್ಗೆ ಲೋಕಭವನಕ್ಕೆ ರವಾನಿಸುವ ಸಾಧ್ಯತೆಯಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Viral: ಕಾರ್ಪೊರೇಟ್ ಕೆಲಸಕ್ಕೆ ಬೇಸತ್ತು ಕುರಿ ಕಾಯುವ ಕೆಲಸಕ್ಕೆ ಮುಗಿಬಿದ್ದ ಯುವಕರು! ಒಂದು ಜಾಹೀರಾತು, 700ಕ್ಕೂ ಹೆಚ್ಚು ಅರ್ಜಿ! – Kannada News

ಕುರಿ ಕಾಯುವ ಕೆಲಸಕ್ಕೆ ಮುಗಿಬಿದ್ದ ಚೀನಾ ಯುವಕರುImage Credit source: Pinterest

ಚೀನಾದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಮತ್ತು ಕಾರ್ಪೊರೇಟ್ ವಲಯದ ಕಠಿಣ ಕೆಲಸದ ಒತ್ತಡಕ್ಕೆ (Corporate Burnout) ಅಲ್ಲಿನ ಯುವ ಪೀಳಿಗೆ ಎಷ್ಟು ಬೇಸತ್ತಿದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಮಂಗೋಲಿಯಾದ (Inner Mongolia) ರೈತನೊಬ್ಬ ತನ್ನ ಫಾರ್ಮ್‌ನಲ್ಲಿ ಕುರಿ ಕಾಯಲು ಇಬ್ಬರು ನೌಕರರು ಬೇಕಾಗಿದ್ದಾರೆ ಎಂದು ನೀಡಿದ ಸಣ್ಣದೊಂದು ಜಾಹೀರಾತು ಇಡೀ ಚೀನಾದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಐಟಿ ಉದ್ಯೋಗಿಗಳು ಮತ್ತು ಪದವೀಧರರು ಈ ಕೆಲಸಕ್ಕಾಗಿ ಮುಗಿಬಿದ್ದಿರುವ ಸತ್ಯ ಹೊರಬಿದ್ದಿದೆ.

ವೈರಲ್ ಆದ ಆ ಒಂದು ಜಾಹೀರಾತು:

ಮಂಗೋಲಿಯನ್ ಗಡಿಯ ಸಮೀಪವಿರುವ ಕ್ಸಿಲಿನ್‌ಹೋಟ್ ನಗರದಿಂದ ಸುಮಾರು 300 ಕಿಲೋಮೀಟರ್ ದೂರದಲ್ಲಿರುವ ಫಾರ್ಮ್ ಮಾಲೀಕ ‘ಜುವೊ ಕ್ಸಿಯಾವೊಯಾಂಗ್’ ಎಂಬುವವರು ಏಪ್ರಿಲ್ ಕೊನೆಯಲ್ಲಿ ಚೀನಾದ ಪ್ರಮುಖ ಸಾಮಾಜಿಕ ಜಾಲತಾಣವಾದ ‘ವೈಬೋ’ (Weibo) ನಲ್ಲಿ ಒಂದು ಸರಳ ಜಾಹೀರಾತು ಪೋಸ್ಟ್ ಮಾಡಿದ್ದರು. ಹಸಿರು ಹುಲ್ಲುಗಾವಲಿನಲ್ಲಿ ಕುರಿಗಳು ಓಡಾಡುತ್ತಿರುವ ವೀಡಿಯೊ ಹೊಂದಿದ್ದ ಈ ಪೋಸ್ಟ್ ಚೀನಾದಲ್ಲಿ ಬರೋಬ್ಬರಿ 5.9 ಕೋಟಿಗೂ ಹೆಚ್ಚು ವೀಕ್ಷಣೆ (Views) ಪಡೆದುಕೊಂಡಿದೆ.

ಕೆಲಸವೇನು? ಸಂಬಳ ಎಷ್ಟು?

ಜುವೊ ಅವರ 2,000 ಹೆಕ್ಟೇರ್ ವಿಸ್ತೀರ್ಣದ ವಿಶಾಲವಾದ ಹುಲ್ಲುಗಾವಲಿನಲ್ಲಿರುವ 3,000 ಕುರಿಗಳನ್ನು ಕಾಯಲು ಮೇಲ್ನೋಟಕ್ಕೆ ದಂಪತಿಗಳಾಗಿರುವ ಇಬ್ಬರು ಕುರುಬರು ಬೇಕಾಗಿದ್ದರು. ಬೇಸಿಗೆಯಲ್ಲಿ ಕುರಿಗಳನ್ನು ಮೇಯಿಸಲು ಹೊರಗೆ ಕರೆದೊಯ್ಯುವುದು ಮತ್ತು ಚಳಿಗಾಲದಲ್ಲಿ ತಾಪಮಾನವು ಮೈನಸ್ 30 ಡಿಗ್ರಿ (-30°C) ಗಿಂತ ಕೆಳಗೆ ಕುಸಿದಾಗ ಅವುಗಳಿಗೆ ಶೆಡ್‌ನಲ್ಲೇ ಆಹಾರ ನೀಡಿ ಸ್ವಚ್ಛಗೊಳಿಸುವುದು ಇವರ ಕೆಲಸವಾಗಿತ್ತು.

ಈ ಕೆಲಸಕ್ಕೆ ಅವರು ತಿಂಗಳಿಗೆ ತಲಾ 8,000 ಯುವಾನ್ (ಸುಮಾರು ₹95,000) ಸಂಬಳದ ಜೊತೆಗೆ ಉಚಿತ ವಸತಿ ಮತ್ತು ದಿನಸಿ ಸಾಮಗ್ರಿಗಳನ್ನು ನೀಡುವುದಾಗಿ ಘೋಷಿಸಿದ್ದರು. ಈ ಸಂಬಳವು ಚೀನಾದ ನಗರ ಪ್ರದೇಶದ ಖಾಸಗಿ ಕಂಪನಿಗಳ ಸರಾಸರಿ ವೇತನಕ್ಕಿಂತ (6,000 ಯುವಾನ್) ಗಣನೀಯವಾಗಿ ಹೆಚ್ಚಾಗಿದೆ.

ಇದನ್ನೂ ಓದಿ: ಫೇವರಿಟ್ ಟೀಚರ್‌ಗಾಗಿ ಮನೆಯಿಂದ ಟೀ ಮಾಡಿಕೊಂಡು ತಂದ ಪುಟಾಣಿ

ಸಾಫ್ಟ್‌ವೇರ್ ಇಂಜಿನಿಯರ್‌ಗಳು ಮತ್ತು ಪದವೀಧರರಿಂದ ಅರ್ಜಿ:

ಕೇವಲ ಇಬ್ಬರು ಕುರುಬರ ಹುದ್ದೆಗೆ ಜುವೊ ಅವರಿಗೆ ಬಂದಿದ್ದು ಬರೋಬ್ಬರಿ 700 ಕ್ಕೂ ಹೆಚ್ಚು ಅರ್ಜಿಗಳು. ವಿಶೇಷವೆಂದರೆ, ಅರ್ಜಿ ಸಲ್ಲಿಸಿದವರಲ್ಲಿ ಶೇಕಡಾ 10 ರಷ್ಟು ಮಂದಿ ಇತ್ತೀಚೆಗೆ ವಿಶ್ವವಿದ್ಯಾಲಯಗಳಿಂದ ಪದವಿ ಪಡೆದ ಯುವಕರಾಗಿದ್ದರೆ, ಇನ್ನುಳಿದವರು ಶಾಂಘೈ ಮತ್ತು ಚಾಂಗ್‌ಕಿಂಗ್‌ನಂತಹ ಮೆಗಾಸಿಟಿಗಳ ಆಫೀಸ್ ರಾಜಕೀಯ ಹಾಗೂ ಐಟಿ ಕಂಪನಿಗಳ ಒತ್ತಡಕ್ಕೆ ಬೇಸತ್ತ ಬಿಳಿ ಕಾಲರ್ (White-collar) ಉದ್ಯೋಗಿಗಳು ಮತ್ತು ಫ್ಯಾಕ್ಟರಿ ಕಾರ್ಮಿಕರಾಗಿದ್ದಾರೆ.

“ಸಾಮಾನ್ಯ ಜನರಿಗೆ ನಗರಗಳಲ್ಲಿ ಕೆಲಸ ಸಿಗುವುದು ಎಷ್ಟು ಕಷ್ಟವಾಗಿದೆ ಎಂಬುದಕ್ಕೆ ಇದುವೇ ಸಾಕ್ಷಿ” ಎಂದು ಆಶ್ಚರ್ಯ ವ್ಯಕ್ತಪಡಿಸಿದ ಮಾಲೀಕ ಜುವೊ, “ಇದು ಪ್ರವಾಸೋದ್ಯಮವಲ್ಲ, ಮೈನಸ್ 30 ಡಿಗ್ರಿ ಚಳಿಯಲ್ಲಿ ದೀರ್ಘಕಾಲ ಇಲ್ಲಿ ಬದುಕುವುದು ಮುಖ್ಯ” ಎಂದು ಎಚ್ಚರಿಸಿದ್ದಾರೆ.

ಚೀನಾದ ಮಾರಕ ‘996’ ಸಂಸ್ಕೃತಿಗೆ ಯುವಕರ ಆಕ್ರೋಶ:

ಚೀನಾದ ಬಹುತೇಕ ಕಂಪನಿಗಳಲ್ಲಿ ‘996’ ಕೆಲಸದ ಸಂಸ್ಕೃತಿ ಜಾರಿಯಲ್ಲಿದೆ. ಅಂದರೆ ಬೆಳಗ್ಗೆ 9 ರಿಂದ ರಾತ್ರಿ 9 ರವರೆಗೆ, ವಾರದಲ್ಲಿ 6 ದಿನಗಳ ಕಾಲ ಕಡ್ಡಾಯವಾಗಿ ದುಡಿಯಬೇಕು. ಇದರಿಂದ ಬೇಸತ್ತ ಯುವಕರು ಇದರಿಂದ ತಪ್ಪಿಸಿಕೊಳ್ಳಲು ಹಂಬಲಿಸುತ್ತಿದ್ದಾರೆ ಎಂಬುದು ಬಹಿರಂಗವಾಗಿದೆ.

ಅಂತಿಮವಾಗಿ ಆಯ್ಕೆಯಾದವರು ಯಾರು?

ಅರ್ಜಿಗಳ ಮಹಾಪೂರವೇ ಹರಿದುಬಂದರೂ, ಮಾಲೀಕ ಜುವೊ ಅವರು ನಗರದ ಯುವಕರನ್ನು ಅಥವಾ ಒಂಟಿ ವ್ಯಕ್ತಿಗಳನ್ನು ಕೆಲಸಕ್ಕೆ ಆಯ್ಕೆ ಮಾಡಿಕೊಂಡಿಲ್ಲ. ಬದಲಿಗೆ ಹಿಂದೆ ಫಾರ್ಮ್‌ಗಳಲ್ಲಿ ಕೆಲಸ ಮಾಡಿದ ಅನುಭವವಿರುವ ಎರಡು ದಂಪತಿಗಳನ್ನು (ಒಟ್ಟು 4 ಜನ) ಕೆಲಸಕ್ಕೆ ನಿಯೋಜಿಸಿಕೊಂಡಿರುವುದು ವರದಿಯಾಗಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 12:03 pm, Tue, 2 June 26

Source link

ಬಿಟ್ಟು ಹೋದ ಕಾರ್ಯಕರ್ತರನ್ನು ಪಕ್ಷಕ್ಕೆ ಮತ್ತೆ ಕರೆ ತರಲು ಬಿಜೆಪಿ ಮಾಸ್ಟರ್ ಪ್ಲ್ಯಾನ್, ರಾಷ್ಟ್ರಮಟ್ಟದಲ್ಲಿ ಆಂದೋಲನ, ತ್ರಿಪಾಠಿಗೆ ಮಹತ್ವದ ಜವಾಬ್ದಾರಿ – Kannada News

ನಾಗೇಂದ್ರ ನಾಥ್ ತ್ರಿಪಾಠಿ Image Credit source: Newsdrum

ನವದೆಹಲಿ, ಜೂನ್ 02: ಪಕ್ಷವನ್ನು ಮತ್ತಷ್ಟು ಬಲಪಡಿಸುವ ಹಾಗೂ ಚುನಾವಣಾ ಸಿದ್ಧತೆ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷ(BJP)ವು ತನ್ನ ತಳಮಟ್ಟದ ಜಾಲವನ್ನು ಮತ್ತಷ್ಟು ಗಟ್ಟಿಗೊಳಿಸಲು ಮಹತ್ವದ ಮಾಸ್ಟರ್ ಪ್ಲ್ಯಾನ್ ರೂಪಿಸಿದೆ. ಪಕ್ಷಕ್ಕಾಗಿ ದಶಕಗಳ ಕಾಲ ದುಡಿದು, ಈಗ ಯಾವುದೇ ಅಧಿಕಾರ ಅಥವಾ ಮುಂಚೂಣಿ ಹುದ್ದೆಗಳಲ್ಲಿ ಇಲ್ಲದ ಪಕ್ಷವನ್ನು ಬಿಟ್ಟು ಹೋದ ಅನುಭವಿ ಕಾರ್ಯಕರ್ತರನ್ನು ಮರಳಿ ಸಕ್ರಿಯಗೊಳಿಸಲು ರಾಷ್ಟ್ರ ಮಟ್ಟದಲ್ಲಿ ವಿಶೇಷ ಸಂಪರ್ಕ ಆಂದೋಲವನ್ನು ಹಮ್ಮಿಕೊಳ್ಳಲಾಗಿದೆ. ಈ ಬೃಹತ್ ಆಂದೋಲನದ ನೇತೃತ್ವವನ್ನು ವಹಿಸಲು ಆರ್‌ಎಸ್‌ಎಸ್‌ನ ಹಿರಿಯ ಧೀಮಂತ ಸಂಘಟಕ ನಾಗೇಂದ್ರ ನಾಥ್ ತ್ರಿಪಾಠಿ ಅವರನ್ನು ಬಿಜೆಪಿಯ ರಾಷ್ಟ್ರೀಯ ಸಂಘಟಕರನ್ನಾಗಿ ನೇಮಕ ಮಾಡಲಾಗಿದೆ.

ದಶಕಗಳ ಅನುಭವದ ‘ತ್ರಿಪಾಠಿ’ ಬಲ

ರಾಷ್ಟ್ರಾಧ್ಯಕ್ಷ ನಿತಿನ್ ನಬಿನ್ ನೇತೃತ್ವದ ಹೊಸ ತಂಡದಲ್ಲಿ ಪಕ್ಷ ಹಾಗೂ ಸಂಘ ಪರಿವಾರದ ನಡುವೆ ಹೆಚ್ಚಿನ ಸಮನ್ವಯ ಸಾಧಿಸಲು ಈ ನೇಮಕ ಶುರುವಾಗಿದೆ. 71 ವರ್ಷದ ನಾಗೇಂದ್ರ ನಾಥ್ ತ್ರಿಪಾಠಿ ಆರ್​ಎಸ್​ಎಸ್​, ಎಬಿವಿಪಿ ಹಾಗೂ ಬಿಜೆಪಿಯಲ್ಲಿ ಸುಮಾರು ನಾಲ್ಕು ದಶಕಗಳ ಕಾಲ ತಳಮಟಗಟದಲ್ಲಿ ಕೆಲಸ ಮಾಡಿದ ಅಪಾರ ಅನುಭವವಿದೆ.

2002 ರಲ್ಲಿ ಉತ್ತರ ಪ್ರದೇಶ ಬಿಜೆಪಿಯ ಸಾಂಸ್ಥಿಕ ರಚನೆಯನ್ನು ಏಕೀಕರಿಸಿದಾಗ, ಇಡೀ ರಾಜ್ಯದ ಏಕೈಕ ಪ್ರಧಾನ ಕಾರ್ಯದರ್ಶಿಯಾಗಿ (ಸಂಘಟನೆ) ತ್ರಿಪಾಠಿ ಕಾರ್ಯನಿರ್ವಹಿಸಿದ್ದರು. ಸುಮಾರು ಒಂದು ದಶಕದ ಕಾಲ ಯುಪಿಯಲ್ಲಿ ಪಕ್ಷದ ಜಾಲವನ್ನು ವಿಸ್ತರಿಸಿದ ಕೀರ್ತಿ ಇವರಿಗಿದೆ.

ಪ್ರಾದೇಶಿಕ ಪರಿಣತಿ: ಇತ್ತೀಚಿನವರೆಗೂ ರಾಂಚಿಯಲ್ಲಿ ಬಿಹಾರ ಮತ್ತು ಜಾರ್ಖಂಡ್‌ನ ಪ್ರಾದೇಶಿಕ ಸಂಘಟನಾ ಕಾರ್ಯದರ್ಶಿಯಾಗಿ ಯಶಸ್ವಿಯಾಗಿ ಸೇವೆ ಸಲ್ಲಿಸಿದ್ದ ಇವರು, ಈಗ ತಮ್ಮ ಕಾರ್ಯಕ್ಷೇತ್ರವನ್ನು ದೆಹಲಿಗೆ ಬದಲಾಯಿಸಲಿದ್ದಾರೆ.

ಆಂದೋಲನದ ಮುಖ್ಯ ಉದ್ದೇಶಗಳೇನು?
ಬಿಜೆಪಿ ಮತ್ತು ಆರ್‌ಎಸ್‌ಎಸ್ ನಡುವಿನ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವುದು ಈ ಆಂದೋಲನದ ಪ್ರಮುಖ ಗುರಿಯಾಗಿದೆ. ಕುಂದುಕೊರತೆಗಳ ನಿವಾರಣೆ: ತ್ರಿಪಾಠಿ ನೇತೃತ್ವದ ಹಿರಿಯ ನಾಯಕರ ತಂಡವು ದೇಶಾದ್ಯಂತ ವ್ಯಾಪಕ ಪ್ರವಾಸ ಕೈಗೊಳ್ಳಲಿದೆ. ಸಕ್ರಿಯ ರಾಜಕಾರಣದಿಂದ ಕೊಂಚ ದೂರ ಉಳಿದಿರುವ ಹಿರಿಯ ಕಾರ್ಯಕರ್ತರ ಮನೆ ಬಾಗಿಲಿಗೆ ತೆರಳಿ, ಅವರ ಕೊಡುಗೆಗಳನ್ನು ಗೌರವಿಸಿ, ಅವರ ಕುಂದುಕೊರತೆಗಳನ್ನು ಆಲಿಸಲಿದೆ.

ಮತ್ತಷ್ಟು ಓದಿ: ತಾವು ಹೊಸ ಪಕ್ಷ ಕಟ್ಟುವ ವದಂತಿ ಬಗ್ಗೆ ಅಣ್ಣಾಮಲೈ ಹೇಳಿದ್ದೇನು?

ತಳಮಟ್ಟದ ಶಕ್ತಿ ಪುನಶ್ಚೇತನ: ರಾಷ್ಟ್ರೀಯ ಹಿತಾಸಕ್ತಿ ಮತ್ತು ಸಿದ್ಧಾಂತಕ್ಕಾಗಿ ಇಡೀ ಜೀವನ ಮುಡಿಪಾಗಿಟ್ಟ ನಿಷ್ಠಾವಂತ ಕಾರ್ಯಕರ್ತರು ತಮಗೆ ಸೂಕ್ತ ಮನ್ನಣೆ ಸಿಗುತ್ತಿದೆ ಎಂದು ಭಾವಿಸುವಂತೆ ಮಾಡುವುದು ಈ ಆಂದೋಲನದ ಪ್ರಮುಖ ಆಶಯವಾಗಿದೆ.

ವರ್ಷಗಳ ಕಾಲ ಪಕ್ಷದ ಬೆನ್ನೆಲುಬಾಗಿದ್ದ ಶಕ್ತಿಯನ್ನು ಮರುಸಂಘಟಿಸುವ ಬಿಜೆಪಿಯ ಈ ತಂತ್ರವು ದೇಶಾದ್ಯಂತ ಇರುವ ಲಕ್ಷಾಂತರ ಹಿರಿಯ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ತುಂಬಲಿದ್ದು, ಪಕ್ಷದ ಸಾಂಸ್ಥಿಕ ಬಲವನ್ನು ಮತ್ತೊಂದು ಉನ್ನತ ಮಟ್ಟಕ್ಕೆ ಕೊಂಡೊಯ್ಯಲಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಹಾಡಹಗಲೇ ಸಿನಿಮೀಯ ಮಾದರಿ ದರೋಡೆ: ಬಂಗಾರದ ಅಂಗಡಿಗೆ ನುಗ್ಗಿ ಆಭರಣ ದೋಚಿ ಎಸ್ಕೇಪ್​​ ಆದ ಮೂವರು – Kannada News

ದರೋಡೆಯಾದ ಬಂಗಾರದ ಅಂಗಡಿImage Credit source: Tv9 Kannada

ನೆಲಮಂಗಲ, ಜೂನ್​ 02: ಹಾಡಹಗಲೇ ಸಿನಿಮೀಯ ಮಾದರಿ ದರೋಡೆ ಪ್ರಕರಣವೊಂದು ಬೆಂಗಳೂರು (Bengaluru) ಗ್ರಾಮಾಂತರದ ನೆಲಮಂಗಲದಲ್ಲಿ ನಡೆದಿದೆ. ಬೈಕ್​​ನಲ್ಲಿ ಬಂದಿದ್ದ ಆರೋಪಿಗಳು ಬಂಗಾರ ಅಂಗಡಿಯಲ್ಲಿದ್ದವರನ್ನು ಬೆದರಿಸಿ ಆಭರಣಗಳನ್ನು ದೋಚಿ ಎಸ್ಕೇಪ್​​ ಆಗಿದ್ದು, ಘಟನೆ ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ. ನೆಲಮಂಗಲ ಭಾಗದಲ್ಲಿ ಮೇಲಿಂದ ಮೇಲೆ ದರೋಡೆ ಪ್ರಕರಣಗಳು ನಡೆಯುತ್ತಿರೋದು ಸಾರ್ವಜನಿಕರ ತೀವ್ರ ಆತಂಕಕ್ಕೂ ಕಾರಣವಾಗಿದೆ.

ಮುಖ್ಯಾಂಶಗಳು

  • ಹಾಡಹಗಲೇ ಬಂಗಾರದ ಅಂಗಡಿಗೆ ನುಗ್ಗಿ ದರೋಡೆ
  • ಬೈಕ್​​ನಲ್ಲಿ ಬಂದಿದ್ದ ಮೂವರು ಆರೋಪಿಗಳಿಂದ ಕೃತ್ಯ
  • ನೆಲಮಂಗಲದ ಟಿ.ಬೇಗೂರಿನಲ್ಲಿ ನಡೆದಿರುವ ಘಟನೆ

ಬೈಕ್​ನಲ್ಲಿ ಬಂದಿದ್ದ ಮೂವರು ದರೋಡೆಕೋರರು ನೆಲಮಂಗಲ ತಾಲೂಕಿನ ಟಿ.ಬೇಗೂರಿನಲ್ಲಿರುವ ಮಹಾಲಕ್ಷ್ಮೀ ಜ್ಯುವೆಲರ್ಸ್​​ಗೆ ನುಗ್ಗಿದ್ದಾರೆ. ಬಂಗಾರದ ಅಂಗಡಿಯಲ್ಲಿದ್ದವರಿಗೆ ಡ್ಯಾಗರ್​​ ತೋರಿಸಿ ಬೆದರಿಸಿರುವ ಆರೋಪಿಗಳು, ಶೋ ಗ್ಲಾಸ್​​​ನಲ್ಲಿದ್ದ 20 ಉಂಗುರಗಳು ಇದ್ದ ಟ್ರೇ ದೋಚಿ ಪರಾರಿಗೆ ಯತ್ನಿಸಿದ್ದಾರೆ. ಈ ವೇಳೆ ಕೆಲ ಉಂಗುರಗಳು ರಸ್ತೆಗೆ ಬಿದ್ದಿವೆ ಎನ್ನಲಾಗಿದೆ. ಒಟ್ಟು 5 ಉಂಗುರಗಳು ಕಳವಾಗಿರುವ ಬಗ್ಗೆ ಶಾಪ್​​ ಮಾಲೀಕರು ಪೊಲೀಸರಿಗೆ ದೂರು ನೀಡಿದ್ದು, ಕಳುವಾಗಿರುವ ಬಂಗಾರದ ಒಟ್ಟು ತೀಕ ಸುಮಾರು 35 ಗ್ರಾಂ ಎನ್ನಲಾಗಿದೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಆನ್‌ಲೈನ್ ಹೂಡಿಕೆ ಹೆಸರಲ್ಲಿ ಭಾರಿ ವಂಚನೆ, ಮಹಿಳೆಯ ಮಾತಿಗೆ ಮರುಳಾಗಿ 5.95 ಕೋಟಿ ರೂ. ಕಳಕೊಂಡ ವ್ಯಕ್ತಿ

ಇನ್ನು ಘಟನೆ ಬಗ್ಗೆ ದೂರು ದಾಖಲಾಗುತ್ತಿದ್ದಂತೆ ನೆಲಮಂಗಲ ಗ್ರಾಮಾಂತರ ಪೊಲೀಸರು ತನಿಖೆ ಆರಂಭಿಸಿದ್ದು, ಬಂಗಾರದ ಅಂಗಡಿಯಲ್ಲಿದ್ದ ಸಿಸಿಟಿವಿ ಕ್ಯಾಮರಾಗಳ ಪರಿಶೀಲನೆಗೆ ಮುಂದಾಗಿದ್ದಾರೆ. ಆದರೆ ಅವು ಕಾರ್ಯನಿರ್ವಹಿಸುತ್ತಿಲ್ಲ ಎಂಬ ವಿಚಾರ ಗೊತ್ತಾದ ಕಾರಣ, ಶಾಪ್​​ ಮಾಲೀಕನ ಬಳಿಯಿಂದಲೇ ಘಟನೆ ಸಂಬಂಧ ಸಂಪೂರ್ಣ ಮಾಹಿತಿ ಕಲೆ ಹಾಕಲು ಪೊಲೀಸರು ಮುಂದಾಗಿದ್ದಾರೆ ಎನ್ನಲಾಗಿದೆ.

ವರದಿ: ಮಂಜುನಾಥ್​​, ಟಿವಿ9 ನೆಲಮಂಗಲ

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಪಾರ್ಶ್ವವಾಯುವಿಗೆ ತುತ್ತಾಗಿದ್ದ ವ್ಯಕ್ತಿಯ ಕೈಗೆ ಸುತ್ತಿಕೊಂಡ ಹಾವು, 4 ತಾಸು ನರಕಯಾತನೆ – Kannada News

ಬೌಧ್, ಜೂನ್ 02: ವ್ಯಕ್ತಿಯೊಬ್ಬರ ತಾಳ್ಮೆ ಹಾಗೂ ಸಮಯಪ್ರಜ್ಞೆಯಿಂದ ಸಂಭವಿಸಬಹುದಾದ ದೊಡ್ಡ ದುರಂತವೊಂದು ಸ್ವಲ್ಪದರಲ್ಲೇ ತಪ್ಪಿದೆ. ಪಾರ್ಶ್ವವಾಯುವಿಗೆ ತುತ್ತಾಗಿದ್ದ ವ್ಯಕ್ತಿಯ ಕೈಗೆ ವಿಷಕಾರಿ ಹಾವೊಂದು ಸುತ್ತಿಕೊಂಡ ಪರಿಣಾಮ ಸುಮಾರು ನಾಲ್ಕು ಗಂಟೆಗಳ ಕಾಲ ನರಕಯಾತನೆ ಅನುಭವಿಸಬೇಕಾಯಿತು. ಆದರೆ ಅದೃಷ್ಟವಶಾತ್ ಯಾವುದೇ ತೊಂದರೆಯಾಗಿಲ್ಲ. ಒಡಿಶಾದ ಬೌಧ್ ಜಿಲ್ಲೆಯ ಹರಭಂಗ ಬ್ಲಾಕ್‌ನ ಅದೇನಿಗಢ ಗ್ರಾಮದಲ್ಲಿ ಪಾರ್ಶ್ವವಾಯು (Paralysis) ಪೀಡಿತರಾಗಿ ಚಲನಶೀಲತೆ ಕಳೆದುಕೊಂಡಿದ್ದ ಕೃಷ್ಣ ಚಂದ್ರ ಸಾಹು ಎಂಬ ವ್ಯಕ್ತಿಗೆ ಮಲಗಿದ್ದ ಹಾಸಿಗೆಗೆ ವಿಷಕಾರಿ ಹಾವು ನುಗ್ಗಿತ್ತು.

ಕಿಟಕಿಯಿಂದ ನುಗ್ಗಿದ ಯಮಸ್ವರೂಪಿ ಹಾವು!
ರಾತ್ರಿ ಮನೆಯ ಕೋಣೆಯ ಕಿಟಕಿ ತೆರೆದಿದ್ದರಿಂದ, ತಡರಾತ್ರಿಯಲ್ಲಿ ಭೀಕರ ವಿಷಪೂರಿತ ಹಾವೊಂದು ಸಾಹು ಅವರ ಹಾಸಿಗೆಯ ಬಳಿ ಬಂದಿದೆ. ಅದು ಅವರ ದೇಹದ ಮೇಲೆ ಚಲಿಸಲು ಪ್ರಾರಂಭಿಸಿದಾಗ ಸಾಹು ಅವರಿಗೆ ಎಚ್ಚರವಾಗಿದೆ. ಆದರೆ, ಪಾರ್ಶ್ವವಾಯು ಸಮಸ್ಯೆಯಿಂದಾಗಿ ಅವರಿಗೆ ತಕ್ಷಣವೇ ಎದ್ದು ಓಡಲು ಸಾಧ್ಯವಾಗಲಿಲ್ಲ. ಪರಿಸ್ಥಿತಿ ಇನ್ನಷ್ಟು ಗಂಭೀರವಾದದ್ದು ಎಂದರೆ, ಆ ಹಾವು ವೃದ್ಧರ ಒಂದು ಕೈಯನ್ನು ಗಟ್ಟಿಯಾಗಿ ಸುತ್ತಿಕೊಂಡು, ತನ್ನ ದೇಹದ ಇನ್ನೊಂದು ಭಾಗವನ್ನು ಪಕ್ಕದಲ್ಲಿದ್ದ ಕುರ್ಚಿಗೆ ಸುತ್ತಿಕೊಂಡಿತ್ತು.

ಯಾವುದೇ ಸಣ್ಣ ಅಲುಗಾಟವೂ ಹಾವನ್ನು ಕೆರಳಿಸಿ ಕಚ್ಚುವಂತೆ ಮಾಡಬಹುದು ಎಂದು ಅರಿತ ಸಾಹು, ತೀವ್ರ ಆತಂಕದ ನಡುವೆಯೂ ರಕ್ತ ಹೆಪ್ಪುಗಟ್ಟುವಂತಹ ನಿಶ್ಚಲತೆಯನ್ನು ಕಾಯ್ದುಕೊಂಡು ಜಾಣ್ಮೆ ಪ್ರದರ್ಶಿಸಿದರು.

ಮತ್ತಷ್ಟು ಓದಿ: ಬ್ರೈನ್ ಸ್ಟ್ರೋಕ್​​ಗೂ ಮೊದಲು ದೇಹದಲ್ಲಿ ಈ 5 ಲಕ್ಷಣಗಳು ಕಂಡುಬರುತ್ತವೆ

ಧೈರ್ಯ ಮತ್ತು ತಾಳ್ಮೆಯ ಯಶಸ್ವಿ ರಕ್ಷಣೆ
ಬೆಳಗ್ಗೆ ಕುಟುಂಬದ ಸದಸ್ಯರು ಕೋಣೆಗೆ ಬಂದಾಗ ಈ ಭೀಕರ ದೃಶ್ಯವನ್ನು ಕಂಡು ದಿಗ್ಭ್ರಮೆಗೊಂಡರು. ಆದರೆ, ಅವರು ಗಾಬರಿಯಾಗಿ ಕಿರುಚಾಡದೆ ಅತ್ಯಂತ ಜಾಣ್ಮೆಯ ನಿರ್ಧಾರ ಕೈಗೊಂಡರು.

ಸಮಯಪ್ರಜ್ಞೆ: ಹಾವನ್ನು ಹಿಡಿಯಲು ಹೋಗಿ ಕೆರಳಿಸಿದರೆ ವೃದ್ಧರಿಗೆ ಕಚ್ಚಬಹುದು ಎಂದು ತಿಳಿದ ಕುಟುಂಬಸ್ಥರು, ಅತ್ಯಂತ ಎಚ್ಚರಿಕೆಯಿಂದ ಪರಿಸ್ಥಿತಿಯನ್ನು ಗಮನಿಸುತ್ತಾ ಸರಿಯಾದ ಸಮಯಕ್ಕಾಗಿ ಕಾಯ್ದರು.

ಸುರಕ್ಷಿತ ಬಿಡುಗಡೆ: ಸತತ ನಾಲ್ಕು ಗಂಟೆಗಳ ಈ ಸುದೀರ್ಘ ಅಗ್ನಿಪರೀಕ್ಷೆಯ ನಂತರ, ಕುಟುಂಬದವರು ಯಾವುದೇ ಹರಸಾಹಸವಿಲ್ಲದೆ, ಹಾವಿಗೆ ತೊಂದರೆಯಾಗದಂತೆ ಅದನ್ನು ವ್ಯಕ್ತಿಯ ದೇಹದಿಂದ ಯಶಸ್ವಿಯಾಗಿ ಬೇರ್ಪಡಿಸುವಲ್ಲಿ ಯಶಸ್ವಿಯಾದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

‘ಪೆದ್ದಿ’ ಅಡ್ವಾನ್ಸ್ ಬುಕಿಂಗ್ ಶುರು, ಬೆಂಗಳೂರಿನಲ್ಲಿ ಎಷ್ಟು ಶೋ? ಟಿಕೆಟ್ ಬೆಲೆ ಎಷ್ಟು?

ರಾಮ್ ಚರಣ್ (Ram Charan), ಶಿವರಾಜ್ ಕುಮಾರ್ ಮತ್ತು ಜಾನ್ಹವಿ ಕಪೂರ್ ನಟಿಸಿರುವ ‘ಪೆದ್ದಿ’ ಸಿನಿಮಾ ಬಿಡುಗಡೆಗೆ ಇನ್ನೆರಡು ದಿನಗಳಷ್ಟೆ ಇದೆ. ಜೂನ್ 4 ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ. ಸಿನಿಮಾದ ಅಡ್ವಾನ್ಸ್ ಬುಕಿಂಗ್ ಈಗಾಗಲೇ ಓಪನ್ ಆಗಿದ್ದು, ಬೆಂಗಳೂರು ಸೇರಿದಂತೆ ಹಲವು ಪ್ರಮುಖ ನಗರಗಳಲ್ಲಿ ಸಿನಿಮಾ ಟಿಕೆಟ್ ಮುಂಗಡವಾಗಿ ಕಾಯ್ದಿರಿಸಬಹುದಾಗಿದೆ. ಬೆಂಗಳೂರಿನಲ್ಲಿ ‘ಪೆದ್ದಿ’ ಸಿನಿಮಾಕ್ಕೆ ಸಾಕಷ್ಟು ಶೋಗಳು ಲಭಿಸಿದ್ದು, ಟಿಕೆಟ್ ಬೆಲೆ ಎಷ್ಟಿದೆ? ಮಾಹಿತಿ ಇಲ್ಲಿದೆ…

ಈ ಹಿಂದೆ ಜನವರಿ ತಿಂಗಳಲ್ಲಿ ‘ಜನ ನಾಯಗನ್’ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಓಪನ್ ಆದಾಗ ಬೆಂಗಳೂರಿನಲ್ಲಿ ಪ್ರತಿ ಟಿಕೆಟ್ ಬೆಲೆ 900 ರಿಂದ 1000 ವರೆಗೆ ನಿಗದಿ ಪಡಿಸಲಾಗಿತ್ತು. ಸಿಂಗಲ್ ಸ್ಕ್ರೀನ್​​ಗಳಲ್ಲಿ ಸಹ 500 ರಿಂದ 600 ರೂಪಾಯಿ ಬೆಲೆ ನಿಗದಿಪಡಿಸಲಾಗಿತ್ತು. ಆದರೆ ‘ಪೆದ್ದಿ’ ಚಿತ್ರತಂಡ ಈ ಬಾರಿ ಅಂಥಹಾ ‘ಲೂಟಿ’ಗೆ ಮುಂದಾಗಿಲ್ಲ. ಸಹ್ಯ ಟಿಕೆಟ್ ಬೆಲೆಯನ್ನೇ ನಿಗದಿಪಡಿಸಲಾಗಿದೆ. ಮಲ್ಟಿಪ್ಲೆಕ್ಸ್​​ಗಳಲ್ಲಿ ಸಹಜವಾಗಿಯೇ ಟಿಕೆಟ್ ಬೆಲೆ ತುಸು ಹೆಚ್ಚಿವೆ ಆದರೆ ಸಿಂಗಲ್ ಸ್ಕ್ರೀನ್​​ಗಳಲ್ಲಿ 200 ರಿಂದ 250ಕ್ಕೆ ಟಿಕೆಟ್ ಕಾಯ್ದಿರಿಸಬಹುದಾಗಿದೆ.

ಬೆಂಗಳೂರಿನಲ್ಲಿ ‘ಪೆದ್ದಿ’ ಸಿನಿಮಾದ ನಾಲ್ಕು ಆವೃತ್ತಿಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ತೆಲುಗು, ಕನ್ನಡ, ಹಿಂದಿ ಮತ್ತು ತಮಿಳು. ಜೂನ್ 2ರ ಬೆಳಿಗ್ಗೆ ವೇಳೆಗೆ ಕನ್ನಡಕ್ಕೆ ಈ ವರೆಗೆ 12 ಶೋಗಳನ್ನು ನೀಡಲಾಗಿದ್ದು, ನಾಳೆ ವೇಳೆಗೆ ಈ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಇನ್ನು ತಮಿಳಿನ ಎರಡು ಶೋಗಳು, ಹಿಂದಿಯ ಒಂದು ಶೋ ಪ್ರದರ್ಶನವಾಗುತ್ತಿದೆ. ತೆಲುಗಿಗೆ ಹೆಚ್ಚು ಶೋಗಳು ಸಹಜವಾಗಿಯೇ ದೊರೆತಿವೆ.

ಇದನ್ನೂ ಓದಿ:ಕಣ್ಣು ಕುಕ್ಕಿದ ರಾಮ್ ಚರಣ್ ಬಾಡಿಗಾರ್ಡ್ ಕೆವಿನ್ ಕುಂಟ

ಜೂನ್ 2 ರ ಬೆಳಿಗ್ಗೆ ವೇಳೆಗೆ ಪಿವಿಆರ್, ಐನಾಕ್ಸ್ ಇನ್ನೂ ಕೆಲವು ಮಲ್ಟಿಪ್ಲೆಕ್ಸ್​​ಗಳಲ್ಲಿ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿಲ್ಲ ಆದರೆ ನಗರದ ಬಹುತೇಕ ಸಿಂಗಲ್ ಸ್ಕ್ರೀನ್​​ಗಳು ಹಾಗೂ ಮಹೇಶ್ ಬಾಬು ಒಡೆತನದ ಎಎಂಬಿಯಲ್ಲಿ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿದ್ದು, ಟಿಕೆಟ್ ಬೆಲೆ ಸಾಧಾರಣವಾಗಿಯೇ ಇದೆ. ಬೆಂಗಳೂರಿನ ಬಹುತೇಕ ಚಿತ್ರಮಂದಿರಗಳಲ್ಲಿ ಮಾರ್ನಿಂಗ್ ಶೋಗಳನ್ನು ಪ್ರದರ್ಶಿಸಲಾಗುತ್ತಿದೆ. ಬೆಳಿಗ್ಗೆ 6:30 ಇಂದಲೇ ಹಲವು ಚಿತ್ರಮಂದಿರಗಳಲ್ಲಿ ಶೋಗಳು ಆರಂಭವಾಗುತ್ತಿವೆ.

ಮಲ್ಟಿಪ್ಲೆಕ್ಸ್​ ಆಗಿರುವ ಎಎಂಬಿ ಸಿನಿಮಾಸ್ ನಲ್ಲಿ 600 ರಿಂದ 400 ವರೆಗೆ ಟಿಕೆಟ್​​ ಬೆಲೆ ನಿಗದಿ ಪಡಿಸಿದ್ದರೆ. ಬಹುತೇಕ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ 250 ಹಾಗೂ 200 ಟಿಕೆಟ್ ಬೆಲೆ ಇದೆ. ಕೆಲ ಎಸಿ ಚಿತ್ರಮಂದಿರದಲ್ಲಿ 300-250-200 ಟಿಕೆಟ್ ಬೆಲೆ ಇದೆ. ಇದು ಉತ್ತಮ ಮೊತ್ತವೇ ಆಗಿದೆ. ಈ ಹಿಂದೆ ಬಿಡುಗಡೆ ಆದ ಕೆಲ ಪರಭಾಷೆ ಸಿನಿಮಾಗಳಿಗೆ ಇದರ ದುಪ್ಪಟ್ಟು ಟಿಕೆಟ್ ಬೆಲೆಯನ್ನು ನಿಗದಿ ಮಾಡಲಾಗಿತ್ತು.

‘ಪೆದ್ದಿ’ ಸಿನಿಮಾವು ಹಳ್ಳಿಯ ಕ್ರೀಡಾಪಟು ಒಬ್ಬನ ಕತೆಯನ್ನು ಒಳಗೊಂಡಿದೆ. ಸಿನಿಮಾನಲ್ಲಿ ರಾಮ್ ಚರಣ್ ಜೊತೆಗೆ ಶಿವರಾಜ್ ಕುಮಾರ್ ಸಹ ಪ್ರಮುಖವಾದ ಪಾತ್ರದಲ್ಲಿ ನಟಿಸಿದ್ದಾರೆ. ಜಾನ್ಹವಿ ಕಪೂರ್ ನಾಯಕಿ. ದಿವ್ಯೇಂದು ವಿಲನ್. ಜೊತೆಗೆ ಬೊಮನ್ ಇರಾನಿ, ಜಗಪತಿ ಬಾಬು ಇನ್ನೂ ಕೆಲವರಿದ್ದಾರೆ. ಸಿನಿಮಾಕ್ಕೆ ಎಆರ್ ರೆಹಮಾನ್ ಸಂಗೀತ ನೀಡಿದ್ದು, ಸಿನಿಮಾ ನಿರ್ದೇಶಿಸಿರುವುದು ಬುಚ್ಚಿಬಾಬು ಸನಾ. ನಿರ್ಮಾಣ ಮೈತ್ರಿ ಮೂವಿ ಮೇಕರ್ಸ್​​ನವರದ್ದು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಸುದೀಪ್ ರೀತಿಯೇ ಸಂಜಿತ್ ಇದ್ದಾರೆ; ಕಾರಣ ಕೊಟ್ಟ ಪ್ರಿಯಾ

ಕಿಚ್ಚ ಸುದೀಪ್ ಅವರ ಅಳಿಯ ಸಂಜಿತ್ ಸಂಜೀವ್ ಅವರು ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಅವರ ನಟನೆಯ ‘ಮ್ಯಾಂಗೋ ಪಚ್ಚ’ ಜೂನ್ 5ರಂದು ರಿಲೀಸ್ ಆಗುತ್ತಿದೆ. ಈ ಚಿತ್ರವನ್ನು ಪ್ರಿಯಾ ಸುದೀಪ್ ಅವರು ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾ ಬಗ್ಗೆ ಮಾತನಾಡುವಾಗ ಸಂಜಿತ್ ಗುಣದ ಬಗ್ಗೆ ಮಾತನಾಡಿದ್ದಾರೆ. ಕಿಚ್ಚ ಸುದೀಪ್ ಅವರ ಧ್ವನಿ, ಮ್ಯಾನರಿಸಂ ಸೇರಿದಂತೆ ಅನೇಕ ವಿಷಯಗಳು ಸಂಜಿತ್​​ಗೆ ಬಂದಿವೆ ಎಂಬ ವಿಷಯವನ್ನು ರಿವೀಲ್ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

CBSE 12ನೇ ತರಗತಿ ವಿದ್ಯಾರ್ಥಿಗಳ ಗಮನಕ್ಕೆ: ಅಂಕಗಳ ಮರುಪರಿಶೀಲನೆ, ಮರುಮೌಲ್ಯಮಾಪನ ಪ್ರಕ್ರಿಯೆ ಆರಂಭ; ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ

CBSE 12ನೇ ತರಗತಿ ಮರುಮೌಲ್ಯಮಾಪನ ಪೋರ್ಟಲ್Image Credit source: Pinterest

ಕೇಂದ್ರ ಪ್ರೌಢಶಿಕ್ಷಣ ಮಂಡಳಿ (CBSE) 12ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರಮುಖ ಸುದ್ದಿಯೊಂದನ್ನು ನೀಡಿದೆ. 2026ರ ಬೋರ್ಡ್ ಪರೀಕ್ಷೆಯ ಅಂಕಗಳ ಮರುಪರಿಶೀಲನೆ (Verification of Marks) ಮತ್ತು ಪ್ರಶ್ನೆವಾರು ಮರುಮೌಲ್ಯಮಾಪನ (Re-evaluation) ಪ್ರಕ್ರಿಯೆಯ ಪೋರ್ಟಲ್ ಇಂದು ಅಧಿಕೃತವಾಗಿ ಆರಂಭವಾಗಿದೆ. ತಾಂತ್ರಿಕ ನವೀಕರಣಗಳ ನಂತರ ಸದ್ಯ ಪೋರ್ಟಲ್ ಸುಗಮವಾಗಿ ಕಾರ್ಯನಿರ್ವಹಿಸುತ್ತಿದ್ದು, ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸಲು ಜೂನ್ 6 ರವರೆಗೆ ಕಾಲಾವಕಾಶ:

ಸಿಬಿಎಸ್‌ಇ ಪ್ರಕಟಣೆಯ ಪ್ರಕಾರ, ವಿದ್ಯಾರ್ಥಿಗಳು ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಜೂನ್ 6 ಮಧ್ಯರಾತ್ರಿಯವರೆಗೆ ಅವಕಾಶ ಕಲ್ಪಿಸಲಾಗಿದೆ. ಕೊನೆಯ ದಿನದಂದು ಸರ್ವರ್ ಸಮಸ್ಯೆ ಉಂಟಾಗುವ ಸಾಧ್ಯತೆ ಇರುವುದರಿಂದ, ವಿದ್ಯಾರ್ಥಿಗಳು ಆದಷ್ಟು ಬೇಗ ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿದೆ. ಇದರೊಂದಿಗೆ ವಿದ್ಯಾರ್ಥಿಗಳಿಗೆ ನೆರವಾಗಲು ಸಿಬಿಎಸ್‌ಇ ಹಂತ-ಹಂತವಾಗಿ ಅರ್ಜಿ ಸಲ್ಲಿಸುವ ವೀಡಿಯೊ ಮಾರ್ಗದರ್ಶನವನ್ನೂ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿದೆ.

ಪರಿಷ್ಕೃತ ಶುಲ್ಕ ಪಟ್ಟಿ ಮತ್ತು ಹಣ ವಾಪಸಾತಿ ನಿಯಮ:

ವಿದ್ಯಾರ್ಥಿಗಳಿಗೆ ಹೊರೆಯಾಗದಂತೆ ಈ ಬಾರಿ ಸಿಬಿಎಸ್‌ಇ ತನ್ನ ಶುಲ್ಕದಲ್ಲಿ ಭಾರಿ ಕಡಿತ ಮಾಡಿದೆ. ಅಂಕಗಳ ಮರುಪರಿಶೀಲನೆಗೆ (Verification) ಪ್ರತಿ ಉತ್ತರ ಪತ್ರಿಕೆಗೆ 100 ರೂಪಾಯಿ ಹಾಗೂ ಮರುಮೌಲ್ಯಮಾಪನಕ್ಕೆ (Re-evaluation) ಪ್ರತಿ ಪ್ರಶ್ನೆಗೆ 25 ರೂಪಾಯಿ ಶುಲ್ಕ ನಿಗದಿಪಡಿಸಲಾಗಿದೆ. ಅಷ್ಟೇ ಅಲ್ಲದೆ, ಒಂದು ವೇಳೆ ಮರುಮೌಲ್ಯಮಾಪನದಲ್ಲಿ ಅಂಕಗಳು ಹೆಚ್ಚಾದರೆ ವಿದ್ಯಾರ್ಥಿಗಳು ಪಾವತಿಸಿದ ಈ ಶುಲ್ಕವನ್ನು ಪೂರ್ತಿಯಾಗಿ ರೀಫಂಡ್ (ಹಣ ವಾಪಸ್) ಮಾಡಲಾಗುವುದು ಎಂದು ಕೇಂದ್ರ ಶಿಕ್ಷಣ ಸಚಿವಾಲಯ ತಿಳಿಸಿದೆ.

ಅರ್ಜಿ ಸಲ್ಲಿಸಲು ಯಾರೆಲ್ಲಾ ಅರ್ಹರು?

ಈ ಹಂತದಲ್ಲಿ ಅರ್ಜಿ ಸಲ್ಲಿಸಲು ಒಂದು ಪ್ರಮುಖ ನಿಯಮವನ್ನು ಅನ್ವಯಿಸಲಾಗಿದೆ. ಈಗಾಗಲೇ ತಮ್ಮ ಉತ್ತರ ಪತ್ರಿಕೆಯ ಡಿಜಿಟಲ್ ಸ್ಕ್ಯಾನ್ಡ್ ಪ್ರತಿಯನ್ನು (Stage 1) ಪಡೆದುಕೊಂಡ ವಿದ್ಯಾರ್ಥಿಗಳು ಮಾತ್ರ ಈಗ ಈ ಹಂತದಲ್ಲಿ (Stage 2) ನಿರ್ದಿಷ್ಟ ಪ್ರಶ್ನೆಗಳ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ನೇರವಾಗಿ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಪೋರ್ಟಲ್‌ನಲ್ಲಿ ಅವಕಾಶವಿರುವುದಿಲ್ಲ.

ಇದನ್ನೂ ಓದಿ: 16 ಸರ್ಕಾರಿ ಉದ್ಯೋಗ ತಿರಸ್ಕರಿಸಿ IPS ಆದ ಯುವತಿ; ಮೊದಲ ಪ್ರಯತ್ನದಲ್ಲೇ UPSC ಪಾಸ್ ಮಾಡಿದ ತೃಪ್ತಿ ಭಟ್ ಯಶೋಗಾಥೆ

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಸರಳ ವಿಧಾನ:

ವಿದ್ಯಾರ್ಥಿಗಳು ಮೊದಲಿಗೆ ಸಿಬಿಎಸ್‌ಇಯ ಅಧಿಕೃತ ಪೋರ್ಟಲ್ postresult.cbseit.in/pvr/ ಗೆ ಭೇಟಿ ನೀಡಬೇಕು. ಅಲ್ಲಿ ನಿಮ್ಮ ಅಡ್ಮಿಟ್ ಕಾರ್ಡ್‌ನಲ್ಲಿರುವ 12ನೇ ತರಗತಿಯ ರೋಲ್ ನಂಬರ್ (Roll Number), ಸ್ಕೂಲ್ ನಂಬರ್ (School No.) ಮತ್ತು ಸೆಂಟರ್ ನಂಬರ್ (Center No.) ವಿವರಗಳನ್ನು ದಾಖಲಿಸಿ ಲಾಗಿನ್ ಆಗಬೇಕು. ಲಾಗಿನ್ ಆದ ನಂತರ, ನೀವು ಮರುಮೌಲ್ಯಮಾಪನ ಬಯಸುವ ಪ್ರಶ್ನೆ ಸಂಖ್ಯೆಗಳನ್ನು ನಿಖರವಾಗಿ ಆಯ್ಕೆ ಮಾಡಿ, ಡೆಬಿಟ್/ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಅಥವಾ ಯುಪಿಐ (UPI) ಮೂಲಕ ನಿಗದಿಪಡಿಸಿದ ಶುಲ್ಕವನ್ನು ಪಾವತಿಸಿ ಅಪ್ಲಿಕೇಶನ್ ಸಬ್ಮಿಟ್ ಮಾಡಬಹುದು.

ವಿದ್ಯಾರ್ಥಿಗಳ ಸಹಾಯಕ್ಕಾಗಿ ಹೆಲ್ಪ್‌ಲೈನ್ ವಿವರಗಳು:

ಅರ್ಜಿ ಸಲ್ಲಿಸುವಾಗ ಲಾಗಿನ್ ಸಮಸ್ಯೆ ಅಥವಾ ಆನ್‌ಲೈನ್ ಹಣ ಪಾವತಿ ವಿಫಲವಾದರೆ ವಿದ್ಯಾರ್ಥಿಗಳು ಆತಂಕ ಪಡಬೇಕಾಗಿಲ್ಲ. ವಿದ್ಯಾರ್ಥಿಗಳ ನೆರವಿಗಾಗಿ ಮಂಡಳಿಯು ಟೋಲ್-ಫ್ರೀ ಸಹಾಯವಾಣಿ ಸಂಖ್ಯೆ 1800 11 8004 ಅನ್ನು ಬಿಡುಗಡೆ ಮಾಡಿದೆ. ಇದರೊಂದಿಗೆ resultcbse2026@cbseshiksha.in ಇಮೇಲ್ ಐಡಿ ಮೂಲಕವೂ ವಿದ್ಯಾರ್ಥಿಗಳು ತಮ್ಮ ದೂರುಗಳನ್ನು ಸಲ್ಲಿಸಿ ಪರಿಹಾರ ಪಡೆದುಕೊಳ್ಳಬಹುದು.

ಶಿಕ್ಷಣಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭುವನೇಶ್ವರ್ ಕುಮಾರ್​ ಯಶಸ್ಸಿನ ಗುಟ್ಟು ರಟ್ಟು ಮಾಡಿದ ಸಚಿನ್!

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಈ ಬಾರಿಯ ಐಪಿಎಲ್​ನಲ್ಲಿ ಭರ್ಜರಿ ಬೌಲಿಂಗ್ ಪ್ರದರ್ಶಿಸಿದ್ದರು. ಪ್ರತಿ ಪಂದ್ಯದಲ್ಲೂ ಅತ್ಯುತ್ತಮ ದಾಳಿ ಸಂಘಟಿಸಿದ್ದ ಭುವಿ ರನ್​ ನಿಯಂತ್ರಿಸುವುದರೊಂದಿಗೆ 28 ವಿಕೆಟ್​ಗಳನ್ನೂ ಸಹ ಪಡೆದಿದ್ದರು. ಭುವನೇಶ್ವರ್ ಕುಮಾರ್ ಅವರ ಈ ಭರ್ಜರಿ ಯಶಸ್ಸಿಗೆ ಕಾರಣ ವೋಬ್ಲಿ ಸೀಮ್ ಕೌಶಲ್ಯವೇ ಎಂದಿದ್ದಾರೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ವಿಶ್ಲೇಷಿಸಿದ್ದಾರೆ.

ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮಾತನಾಡಿರುವ ಸಚಿನ್ ತೆಂಡೂಲ್ಕರ್, “ಭುವನೇಶ್ವರ್ ಕುಮಾರ್ ಈ ಬಾರಿ ವೋಬ್ಲಿ ಸೀಮ್ ಬೌಲಿಂಗ್​ನೊಂದಿಗೆ ಅತ್ಯುತ್ತಮ ದಾಳಿ ನಡೆಸಿದ್ದಾರೆ. ಸಾಮಾನ್ಯವಾಗಿ ಸ್ವಿಂಗ್ ಮಾಡಲು ಬೌಲರ್​ಗಳು ಚೆಂಡಿನ ಸೀಮ್​ (ಚೆಂಡಿನ ಸ್ಟಿಚ್) ಮೇಲೆ ಹಿಡಿತ ಹೊಂದಿರುತ್ತಾರೆ. ಇದನ್ನು ಬ್ಯಾಟರ್​ಗಳು ಸುಲಭವಾಗಿ ಗ್ರಹಿಸಿ ರನ್​ಗಳಿಸುತ್ತಾರೆ”.

“ಆದರೆ ಭುವನೇಶ್ವರ್ ಕುಮಾರ್ ಈ ಬಾರಿ ವೋಬ್ಲಿ ಸೀಮ್ ಕೌಶಲ್ಯದ ಮೂಲಕ ದಾಳಿ ಸಂಘಟಿಸಿದ್ದಾರೆ. ಅಂದರೆ ಭುವಿ ಚೆಂಡಿನ ಸೀಮ್​ ಮೇಲೆ ತುಸು ವಕ್ರವಾಗಿ ಬೆರಳನ್ನಿಟ್ಟು ಬೌಲಿಂಗ್ ಮಾಡಿದ್ದಾರೆ. ಇದರಿಂದ ಚೆಂಡು ಬಿದ್ದ ಮೇಲೆ ಎತ್ತ ಸಾಗುತ್ತದೆ ಎಂಬುದು ಗೊತ್ತಾಗುವುದಿಲ್ಲ. ಕೆಲವೊಮ್ಮೆ ಅದು ಇನ್​ ಸ್ವಿಂಗ್ ಆಗಬಹುದು, ಇಲ್ಲಾ ಔಟ್ ಸ್ವಿಂಗ್ ಆಗಬಹುದು. ಹೀಗೆ ಬರುವ ಚೆಂಡನ್ನು ಗುರುತಿಸಿ ಬ್ಯಾಟಿಂಗ್ ಮಾಡುವುದು ತುಸು ಕಷ್ಟ”.

“ಏಕೆಂದರೆ ಬಾಲ್​ ಪಿಚ್ ಆದ ನಂತರ ಬ್ಯಾಟರ್‌ಗಳಿಗೆ ತಿಳಿಯದಂತೆ ದಿಕ್ಕು ಬದಲಾಯಿಸುತ್ತದೆ. ಇಂತಹದೊಂದು ಕೌಶಲ್ಯದೊಂದಿಗೆ ಈ ಬಾರಿ ಭುವನೇಶ್ವರ್​ ಕುಮಾರ್​ಗೆ ದಾಳಿ ಸಂಘಟಿಸಿದ್ದಾರೆ. ಅಲ್ಲದೆ ಆಫ್-ಸ್ಟಂಪ್ ಲೈನ್‌ಗೆ ಸತತವಾಗಿ ಬೌಲಿಂಗ್ ಮಾಡುವ ಮೂಲಕ ಬ್ಯಾಟರ್‌ಗಳನ್ನು ಕಟ್ಟಿಹಾಕಿದ್ದಾರೆ. ಇದುವೇ ಭುವನೇಶ್ವರ್ ಕುಮಾರ್ ಅವರ ಯಶಸ್ಸಿನ ಸಿಕ್ರೇಟ್” ಎಂದು ಸಚಿನ್ ತೆಂಡೂಲ್ಕರ್ ತಿಳಿಸಿದ್ದಾರೆ.

ವೋಬ್ಲಿ ಸೀಮ್ ದಾಳಿಯೊಂದಿಗೆ ಈ ಬಾರಿ ಭುವನೇಶ್ವರ್ ಕುಮಾರ್ ಪಡೆದಿರುವುದು ಬರೋಬ್ಬರಿ 28 ವಿಕೆಟ್​ಗಳು. ಹಾಗೆಯೇ 16 ಇನಿಂಗ್ಸ್​ಗಳಲ್ಲಿ ಬೌಲಿಂಗ್ ಮಾಡಿರುವ ಅವರು ಒಟ್ಟು 378 ಎಸೆತಗಳನ್ನು ಎಸೆದಿದ್ದಾರೆ. ಈ ವೇಳೆ ನೀಡಿರುವುದು ಕೇವಲ 501 ರನ್​ಗಳು ಮಾತ್ರ.

ಇದನ್ನೂ ಓದಿ: ವೈಭವ್ ಸೂರ್ಯವಂಶಿಗೆ 12 ಕೋಟಿ ರೂ. ಆಫರ್..!

ಅಂದರೆ ಪ್ರತಿ ಓವರ್​ನಲ್ಲಿ 7.95 ಸರಾಸರಿಯಲ್ಲಿ ಮಾತ್ರ ರನ್ ನೀಡಿದ್ದಾರೆ. ಈ ಮೂಲಕ ಈ ಬಾರಿಯ ಐಪಿಎಲ್​ನಲ್ಲಿ ಕನಿಷ್ಠ 100 ಎಸೆತಗಳನ್ನು ಎಸೆದು ಅತೀ ಕಡಿಮೆ ಸರಾಸರಿಯಲ್ಲಿ ರನ್ ನೀಡಿದ ಬೌಲರ್ ಎನಿಸಿಕೊಂಡಿದ್ದಾರೆ. ಹಾಗೆಯೇ 28 ವಿಕೆಟ್​ಗಳೊಂದಿಗೆ ಅತ್ಯಧಿಕ ವಿಕೆಟ್ ಪಡೆದ ಬೌಲರ್​ಗಳ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಅಲಂಕರಿಸಿದ್ದಾರೆ.

Source link

Exit mobile version