ಸಿಎಸ್‌ಕೆ ಸೋಲಿಗೆ ರುತುರಾಜ್ ಗಾಯಕ್ವಾಡ್ ದೂರಿದ್ದು ಯಾರನ್ನ ಗೊತ್ತಾ?

ಸಿಎಸ್‌ಕೆ ಸೋಲಿಗೆ ರುತುರಾಜ್ ಗಾಯಕ್ವಾಡ್ ದೂರಿದ್ದು ಯಾರನ್ನ ಗೊತ್ತಾ?

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 7ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ತಂಡ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸಿಎಸ್​ಕೆ ತಂಡವು 20 ಓವರ್​ಗಳಲ್ಲಿ 209 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಪಂಜಾಬ್ ಕಿಂಗ್ಸ್ 18.4 ಓವರ್​ಗಳಲ್ಲಿ 210 ರನ್​ಗಳಿಸಿ 5 ವಿಕೆಟ್​ಗಳ ಗೆಲುವು ದಾಖಲಿಸಿದೆ. ಇದರೊಂದಿಗೆ ಸಿಎಸ್​ಕೆ ತಂಡವು ಬ್ಯಾಕ್ ಟು ಬ್ಯಾಕ್ 2 ಪಂದ್ಯಗಳಲ್ಲಿ ಸೋಲನುಭವಿಸಿದಂತಾಗಿದೆ.

ಈ ಸೋಲಿನ ಬಳಿಕ ಮಾತನಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ರುತುರಾಜ್ ಗಾಯಕ್ವಾಡ್, ನಮ್ಮ ತಂಡವು ಕಲೆಹಾಕಿದ ಮೊತ್ತವು ಆ ಪಿಚ್‌ಗೆ ಅತ್ಯುತ್ತಮವಾಗಿತ್ತು. “ನನ್ನ ಪ್ರಕಾರ ಇದು ನಿಜಕ್ಕೂ ಒಂದು ಒಳ್ಳೆಯ ಸ್ಕೋರ್. ವಿಕೆಟ್ ವೇಗದ ಬೌಲರ್‌ಗಳಿಗೆ ಸಹಕಾರಿಯಾಗಿದ್ದರೂ, ಸ್ಪಿನ್ನರ್‌ಗಳಿಗೂ ಚೆಂಡು ಸ್ವಲ್ಪ ಗ್ರಿಪ್ ನೀಡುತ್ತಿತ್ತು. ಮೈದಾನದ ಬೌಂಡರಿಗಳು ದೊಡ್ಡದಾಗಿದ್ದರಿಂದ, ಈ ಮೊತ್ತವನ್ನು ರಕ್ಷಿಸಿಕೊಳ್ಳಬಹುದು ಎಂಬ ನಂಬಿಕೆ ನನಗಿತ್ತು.

ಆದರೆ ನಮ್ಮ ಬೌಲರ್​ಗಳು ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಪಂದ್ಯದ ಸೋಲಿಗೆ ಪ್ರಮುಖವಾಗಿ ಬೌಲಿಂಗ್ ವಿಭಾಗದ ಹಿನ್ನಡೆಯೇ ಕಾರಣ. ತಂಡವು ಮೂವರು ವೇಗಿಗಳು ಮತ್ತು ಇಬ್ಬರು ಪ್ರತಿಭಾವಂತ ರಿಸ್ಟ್ ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿದಿತ್ತು. ಪವರ್‌ಪ್ಲೇ ನಂತರ ಮಧ್ಯದ ಓವರ್‌ಗಳಲ್ಲಿ ಸ್ಪಿನ್ನರ್‌ಗಳು ಪಂದ್ಯದ ಮೇಲೆ ಹಿಡಿತ ಸಾಧಿಸುತ್ತಾರೆ ಎಂಬ ನಿರೀಕ್ಷೆಯಿತ್ತು. ಆದರೆ, “ಇಬ್ಬರೂ ಸ್ಪಿನ್ನರ್‌ಗಳು ಇಂದು ಸರಿಯಾಗಿ ಬೌಲಿಂಗ್ ಮಾಡಿರಲಿಲ್ಲ/ ಅದು ನಮಗೆ ದೊಡ್ಡ ಹೊಡೆತ ನೀಡಿತು,” ಎಂದು  ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನು ಪಂಜಾಬ್ ಕಿಂಗ್ಸ್ ಬ್ಯಾಟಿಂಗ್ ಬಗ್ಗೆ ಮಾತನಾಡುತ್ತಾ, “ನಾವು ಸರಿಯಾದ ಸಮಯದಲ್ಲಿ ಒತ್ತಡ ಹೇರಲು ವಿಫಲವಾದೆವು. ಎದುರಾಳಿ ತಂಡದ ರನ್ ರೇಟ್ ಪ್ರತಿ ಓವರ್‌ಗೆ 11ಕ್ಕೆ ಏರಿದಾಗ, ನಮಗೆ ಒಂದೆರಡು ಒಳ್ಳೆಯ ಓವರ್‌ಗಳ ಅಗತ್ಯವಿತ್ತು. ಆದರೆ ಅದೇ ಹೊತ್ತಿಗೆ ಬೌಂಡರಿ ಅಥವಾ ಸಿಕ್ಸರ್ ಬಿಟ್ಟುಕೊಟ್ಟಿದ್ದರಿಂದ ಒತ್ತಡ ಕಡಿಮೆಯಾಯಿತು. ಆ ವೇಗವನ್ನು ತಡೆಯಲು ನಮಗೆ ಸಾಧ್ಯವಾಗಲಿಲ್ಲ,” ಎಂದಿದ್ದಾರೆ.

ಈ ಸೋಲಿನ ನಡುವೆಯೂ ತಂಡದ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ಗಾಯಕ್ವಾಡ್ ಸಂತಸ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ಯುವ ಆಟಗಾರ ಆಯುಷ್ ಮ್ಹಾತ್ರೆ ಮತ್ತು ಶಿವಂ ದುಬೆ ಅವರ ಬ್ಯಾಟಿಂಗ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, “ಆಯುಷ್ ಅದ್ಭುತವಾಗಿ ಆಡಿದರು. ಅವರ ಈ ಆತ್ಮವಿಶ್ವಾಸ ಮುಂದಿನ ಪಂದ್ಯಗಳಿಗೆ ತಂಡಕ್ಕೆ ಪ್ಲಸ್ ಪಾಯಿಂಟ್. ಶಿವಂ ದುಬೆ ಕೂಡ ಉತ್ತಮ ಲಯದಲ್ಲಿದ್ದಾರೆ,” ಎಂದು ಹೇಳಿದ್ದಾರೆ.

ಇನ್ನು  ತನ್ನ ನಿಧಾನಗತಿಯ ಬ್ಯಾಟಿಂಗ್ ಬಗ್ಗೆ ಸ್ಪಷ್ಟನೆ ನೀಡಿದ ರುತುರಾಜ್ ಗಾಯಕ್ವಾಡ್, ಪಿಚ್‌ನ ಪರಿಸ್ಥಿತಿಗೆ ತಕ್ಕಂತೆ ಆಂಕರ್ ಪಾತ್ರ ವಹಿಸಲು ಬಯಸಿದ್ದಾಗಿ ತಿಳಿಸಿದರು. ಒಂದು ತುದಿಯಲ್ಲಿ ಆಯುಷ್ ವೇಗವಾಗಿ ರನ್ ಗಳಿಸುತ್ತಿದ್ದಾಗ, ನಾನು ಕ್ರೀಸ್‌ನಲ್ಲಿ ಗಟ್ಟಿಯಾಗಿ ನಿಂತು ನಂತರ ದೊಡ್ಡ ಹೊಡೆತಗಳಿಗೆ ಮುಂದಾಗುವ ಯೋಜನೆಯಲ್ಲಿದೆ. ಆದರೆ ದುರದೃಷ್ಟವಶಾತ್ ನನ್ನ ಲೆಕ್ಕಾಚಾರ ತಲೆಕೆಳಗಾಯಿತು ಎಂದರು.

ಇದನ್ನೂ ಓದಿ: RCB ಬರೋಬ್ಬರಿ 72 ವರ್ಷ ತೆಗೆದುಕೊಳ್ಳಲಿದೆ… ರಾಯುಡು ವ್ಯಂಗ್ಯ

ಒಟ್ಟಾರೆಯಾಗಿ, ಬ್ಯಾಟಿಂಗ್‌ನಲ್ಲಿ ಲಯ ಕಂಡುಕೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್, ಬೌಲಿಂಗ್ ವಿಭಾಗದಲ್ಲಿ ಶಿಸ್ತು ಕಂಡುಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ನಾಯಕ ರುತುರಾಜ್ ಗಾಯಕ್ವಾಡ್ ಅಭಿಪ್ರಾಯಪಟ್ಟಿದ್ದಾರೆ.

Source link

‘ಜೋಡಿ ನಂ. 1’ ವೇದಿಕೆ ಮೇಲೂ ವ್ಲಾಗ್ ಮಾಡಿದ ಧನರಾಜ್-ಪ್ರಜ್ಞಾ ದಂಪತಿ

‘ಜೋಡಿ ನಂಬರ್ 1’ ಕಾರ್ಯಕ್ರಮದಲ್ಲಿ ಧನರಾಜ್ ಹಾಗೂ ಪ್ರಜ್ಞಾ ದಂಪತಿ ಗಮನ ಸೆಳೆಯಲಿದ್ದಾರೆ. ಇಂದಿನಿಂದದ (ಏಪ್ರಿಲ್ 4) ಶೋ ಆರಂಭ ಆಗಲಿದೆ. ಈ ಶೋ ನೋಡಲು ಫ್ಯಾನ್ಸ್ ಕೂಡ ಕಾದಿದ್ದಾರೆ. ವೇದಿಕೆ ಮೇಲೂ ಇವರು ವ್ಲಾಗ್ ಮಾಡಿದ್ದಾರೆ. ಇವರ ಹಾಸ್ಯಪ್ರಜ್ಞೆ ನೋಡಿ ಜಡ್ಜ್​​ಗಳು ಕೂಡ ಖುಷಿ ಆಗಿದ್ದಾರೆ. ನೆನಪಿರಲಿ ಪ್ರೇಮ್, ಮಾಳವಿಕಾ ಅವಿನಾಶ್, ರಾಜೇಶ್ ನಟರಂಗ ಹಾಗೂ ಛಾಯಾ ಸಿಂಗ್ ಅವರು ‘ಜೋಡಿ ನಂಬರ್ 1’ ಶೋನಲ್ಲಿ ಜಡ್ಜ್ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

RCB ಬರೋಬ್ಬರಿ 72 ವರ್ಷ ತೆಗೆದುಕೊಳ್ಳಲಿದೆ… ರಾಯುಡು ವ್ಯಂಗ್ಯ

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಮಾಜಿ ಕ್ರಿಕೆಟಿಗ ಅಂಬಾಟಿ ರಾಯುಡು ನಡುವಿನ “ಸೋಷಿಯಲ್ ಮೀಡಿಯಾ ವಾರ್” ಹೊಸದೇನಲ್ಲ. ಈ ವ್ಯಂಗ್ಯದ ವಾರ್ ಈ ಬಾರಿ ಕೂಡ ಮುಂದುವರೆದಿದೆ. ಆದರೆ, ಈ ಸಲ ರಾಯುಡು “72 ವರ್ಷಗಳ” ಲೆಕ್ಕಾಚಾರದೊಂದಿಗೆ ಅಭಿಮಾನಿಗಳ ಮುಂದೆ ಬಂದಿದ್ದಾರೆ.

ಏನಿದು 72 ವರ್ಷಗಳ ಲೆಕ್ಕಚಾರ?

ಈ ಬಾರಿಯ ಐಪಿಎಲ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಾಲಿ ಚಾಂಪಿಯನ್ ಪಟ್ಟದೊಂದಿಗೆ ಕಣಕ್ಕಿಳಿಯುತ್ತಿದೆ. ಈ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳುವಂತಹ ಭರ್ಜರಿ ನಿರೀಕ್ಷೆಯನ್ನು ಸಹ ಮೊದಲ ಪಂದ್ಯದಲ್ಲೇ ಹುಟ್ಟುಹಾಕಿದ್ದಾರೆ. ಇದಾಗ್ಯೂ ಆರ್​ಸಿಬಿ ಬ್ಯಾಕ್ ಟು ಬ್ಯಾಕ್ ಟ್ರೋಫಿಗಳನ್ನು ಗೆಲ್ಲುವುದು ಅನುಮಾನ ಎಂದಿದ್ದಾರೆ ಅಂಬಾಟಿ ರಾಯುಡು.

ಈ ಬಗ್ಗೆ ಮಾತನಾಡಿದ ಅಂಬಾಟಿ ರಾಯುಡು  “ಆರ್‌ಸಿಬಿ ತನ್ನ ಮೊದಲ ಟ್ರೋಫಿ ಗೆಲ್ಲಲು 18 ವರ್ಷ ತೆಗೆದುಕೊಂಡಿದೆ. ಇದೇ ವೇಗದಲ್ಲಿ ಹೋದರೆ, ಮುಂಬೈ ಇಂಡಿಯನ್ಸ್ ಅಥವಾ ಸಿಎಸ್‌ಕೆ ಮಾಡಿದಂತೆ 5 ಟ್ರೋಫಿಗಳನ್ನು ಗೆಲ್ಲಲು ಆರ್‌ಸಿಬಿಗೆ ಇನ್ನೂ 72 ವರ್ಷಗಳು ಬೇಕಾಗುತ್ತವೆ!” ಎಂದು ವ್ಯಂಗ್ಯವಾಡಿದ್ದಾರೆ.

ಅಂದರೆ ಮೊದಲ ಟ್ರೋಫಿ ಗೆಲ್ಲಲು 18 ವರ್ಷಗಳನನ್ನು ತೆಗೆದುಕೊಂಡಿರುವ ಆರ್​ಸಿಬಿ, ಪ್ರತಿ 18 ವರ್ಷಗಳಿಗೊಮ್ಮೆ ಪ್ರಶಸ್ತಿ ಗೆಲ್ಲಬಹುದು ಎಂದು ಕಾಲೆಳೆದಿದ್ದಾರೆ. ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್​ನ 5 ಟ್ರೋಫಿಗಳ ಸಾಧನೆಯನ್ನು ಸರಿಗಟ್ಟಲು 72 ವರ್ಷಗಳನ್ನು ತೆಗೆದುಕೊಳ್ಳಬಹುದು ಎಂದು ಅಣಕಿಸಿದ್ದಾರೆ.

ಇದಕ್ಕೂ ಮುನ್ನ, ಅಂದರೆ ಕಳೆದ ಸೀಸನ್​ನಲ್ಲಿ ಅಂಬಾಟಿ ರಾಯುಡು, ಆರ್‌ಸಿಬಿ ಆಟಗಾರರು ತಂಡದ ಗೆಲುವಿಗಿಂತ ಹೆಚ್ಚಾಗಿ ತಮ್ಮ ವೈಯಕ್ತಿಕ ದಾಖಲೆಗಳ ಮೇಲೆ ಗಮನ ಹರಿಸುತ್ತಾರೆ ಎಂದು ಗಂಭೀರ ಆರೋಪ ಮಾಡಿದ್ದರು.

ಅಲ್ಲದೆ ಟ್ರೋಫಿ ಗೆಲ್ಲುವ ಮೊದಲೇ ಅತಿಯಾದ ಸಂಭ್ರಮಾಚರಣೆ ಮಾಡುವುದು ಆರ್​ಸಿಬಿ ತಂಡಕ್ಕೆ ಮುಳುವಾಗುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಅಷ್ಟೇ ಅಲ್ಲದೆ ದೊಡ್ಡ ಪಂದ್ಯಗಳಲ್ಲಿ ಆರ್‌ಸಿಬಿ ಒತ್ತಡಕ್ಕೆ ಮಣಿಯುತ್ತದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಟಗಾರರಿಗೆ ಒತ್ತಡವನ್ನು ನಿಭಾಯಿಸಲು ಬರಲ್ಲ ಎಂದು ಹೀಯಾಳಿಸಿದ್ದರು.

ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟ್ರೋಫಿ ಗೆದ್ದಿದ್ದರೂ ಸಿಎಸ್​ಕೆ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳ 5 ಟ್ರೋಫಿಗಳ ಸಾಧನೆಯನ್ನು ಸರಿಗಟ್ಟಲು 72 ವರ್ಷಗಳನ್ನು ತೆಗೆದುಕೊಳ್ಳಲಿದೆ ಎಂದು ಅಣಕಿಸಿದ್ದಾರೆ.

ರಾಯುಡು ಸಾಧನೆ:

ಅಂಬಾಟಿ ರಾಯುಡು ಅವರು ಇಷ್ಟೊಂದು ಆತ್ಮವಿಶ್ವಾಸದಿಂದ ಮಾತನಾಡಲು ಕಾರಣ ಅವರ ಟ್ರೋಫಿ ದಾಖಲೆ. ಅವರು ಐಪಿಎಲ್ ಇತಿಹಾಸದಲ್ಲಿ 6 ಬಾರಿ ಚಾಂಪಿಯನ್ ತಂಡದ ಭಾಗವಾಗಿದ್ದಾರೆ. ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಪರ ತಲಾ 3 ಬಾರಿ ಟ್ರೋಫಿ ಎತ್ತಿ ಹಿಡಿದ್ದರು. ಹೀಗಾಗಿಯೇ ಟ್ರೋಫಿ ವಿಷಯದಲ್ಲಿ ಅಂಬಾಟಿ ರಾಯುಡು ಆರ್​ಸಿಬಿ ತಂಡವನ್ನು ಅಣಕಿಸುತ್ತಾ ಬಂದಿದ್ದಾರೆ.

ಇದನ್ನೂ ಓದಿ: IPL 2026: CSK ದಾಂಡಿಗರ ಆರ್ಭಟಕ್ಕೆ RCB ದಾಖಲೆ ಧೂಳೀಪಟ

ಇನ್ನು ಅಂಬಾಟಿ ರಾಯುಡು ಅವರ ಈ ವ್ಯಂಗ್ಯ ಆರ್‌ಸಿಬಿ ಅಭಿಮಾನಿಗಳನ್ನು ಕೆರಳಿಸಿದ್ದರೂ, 2025ರ ಟ್ರೋಫಿ ಗೆಲುವಿನ ನಂತರ ಆರ್‌ಸಿಬಿ ಹೊಸ ಹಾದಿಯಲ್ಲಿದೆ. 2026ರ ಐಪಿಎಲ್‌ನಲ್ಲಿ ಆರ್‌ಸಿಬಿ ಮತ್ತೆ ಪ್ರಶಸ್ತಿ ಗೆಲ್ಲುವ ಮೂಲಕ ರಾಯುಡು ಅವರ 72 ವರ್ಷಗಳ ಲೆಕ್ಕಾಚಾರವನ್ನು ತಪ್ಪು ಎಂದು ನಿರೂಪಿಸುತ್ತದೆಯೇ ಎಂದು ಕಾದು ನೋಡಬೇಕಿದೆ.

 

Source link

ಹುಬ್ಬಳ್ಳಿ ಲವ್ ಜಿಹಾದ್ ಕೇಸ್​ಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್: ವಿಡಿಯೋ ಇರೋದು ನಿಜ, ಆದ್ರೆ… ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಆರೋಪಿ!

ಹುಬ್ಬಳ್ಳಿ, ಏಪ್ರಿಲ್ 4: ಹುಬ್ಬಳ್ಳಿಯಲ್ಲಿನ ಲವ್ ಜಿಹಾದ್ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಮುಖ ಆರೋಪಿ ಸಮೀರ್ ತನ್ನ ಮೇಲಿನ ಆರೋಪಗಳನ್ನು ಬಲವಾಗಿ ಅಲ್ಲಗಳೆದಿದ್ದಾನೆ. ಪ್ರಕರಣದ ಮಧ್ಯೆ ವೈರಲ್ ಆಗಿರುವ ವಿಡಿಯೋದ ಬಗ್ಗೆ ಮಾತನಾಡಿದ ಸಮೀರ್, ವಿಡಿಯೋ ರೆಕಾರ್ಡ್ ಆಗಿರುವುದು ನಿಜ, ಆದರೆ ಅದನ್ನು ತಾನು ಚಿತ್ರೀಕರಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾನೆ. ಈ ವಿಡಿಯೋವನ್ನು ಯಾರು ಮಾಡಿದ್ದಾರೆ ಎಂಬುದನ್ನು ಪರಿಶೀಲಿಸಲು ತನ್ನ ಮತ್ತು ಆರೋಪಿಯಾದ ಹುಡುಗಿಯ ಮೊಬೈಲ್ ಫೋನ್‌ಗಳನ್ನು ಪರಿಶೀಲಿಸುವಂತೆ ಸಮೀರ್ ಆಗ್ರಹಿಸಿದ್ದಾನೆ. ತಂಪು ಪಾನೀಯದಲ್ಲಿ ಪ್ರಜ್ಞೆ ತಪ್ಪಿಸುವ ಔಷಧ ನೀಡಿದ್ದರೆ, ಹುಡುಗಿ ಪ್ರಜ್ಞೆ ಕಳೆದುಕೊಳ್ಳಬೇಕಿತ್ತು. ಆದರೆ, ನಿಜವಾಗಿ ಪ್ರಜ್ಞೆ ಕಳೆದುಕೊಂಡಿದ್ದು ನಾನೇ, ಹುಡುಗಿಯಲ್ಲ ಎಂದು ಸಮೀರ್ ಹೇಳಿಕೆ ನೀಡಿದ್ದಾನೆ. ವಿಡಿಯೋವನ್ನು ಆ ಹುಡುಗಿಯೇ ತನ್ನ ಫೋನ್‌ನಲ್ಲಿ ರೆಕಾರ್ಡ್ ಮಾಡಿರುವುದಾಗಿ ಸಮೀರ್ ಆರೋಪಿಸಿದ್ದಾನೆ.

ಪೂರ್ಣ ವಿವರಗಳಿಗೆ ಓದಿ: ಹುಬ್ಬಳ್ಳಿಯಲ್ಲೊಂದು ಲವ್ ಜಿಹಾದ್: ಜಿಮ್ ಟ್ರೈನರ್​ನ​​​​​​​​​ ಕಾಮುಕ ಮುಖ ಬಿಚ್ಚಿಟ್ಟ ಯುವತಿ

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾಣವ್​ಗೆ ನಾನೇ ಮೊದಲು ಪ್ರಪೋಸ್ ಮಾಡಿದ್ದು; ಒಪ್ಪಿಕೊಂಡ ರಾಧಾ ಭಗವತಿ

ರಾಧಾ ಭಗವತಿ ಹಾಗೂ ರಾಣವ್ ಗೌಡ (Ranav Gowda) ಅವರು ವಿವಾಹ ಆಗಲು ರೆಡಿ ಆಗಿರುವುದು ಗೊತ್ತೇ ಇದೆ. ಇತ್ತೀಚೆಗೆ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡರು ಮತ್ತು ಆ ಫೋಟೋ ವೈರಲ್ ಆಗಿ ಗಮನ ಸೆಳೆಯಿತು. ರಾಣವ್ ಬಗ್ಗೆ ಇತ್ತೀಚೆಗೆ ರಾಧಾ ಭಗವತಿ ಅವರು ಮಾತನಾಡಿದರು. ಸಿನಿಮಾ ಒಂದರ ಶೋಗೆ ಬಂದಾಗ ರಾಧಾ ಅವರು ರಾಣವ್ ಬಗ್ಗೆ ಮಾತನಾಡಿದ್ದಾರೆ. ಆ ವಿಷಯ ಇಲ್ಲಿದೆ.

ರಾಧಾ ಹಾಗೂ ರಾಣವ್ ಅವರು ‘ಅಮೃತಧಾರೆ’ ಧಾರಾವಾಹಿಯಲ್ಲಿ ಒಟ್ಟಿಗೆ ನಟಿಸಿದ್ದು ಗೊತ್ತೇ ಇದೆ. ರಾಣವ್ ಅವರು ಜೆಡಿ ಪಾತ್ರದಲ್ಲಿ ಕಾಣಿಸಿಕೊಂಡರೆ ರಾಧಾ ಅವರು ಆ ಸಂದರ್ಭದಲ್ಲಿ ಮಲ್ಲಿ ಪಾತ್ರ ಮಾಡುತ್ತಿದ್ದರು. ಆ ಬಳಿಕ ‘ಭಾರ್ಗವಿ ಎಲ್​​ಎಲ್​​ಬಿ’ ಧಾರಾವಾಹಿ ಆಫರ್ ಸಿಕ್ಕ ಬಳಿಕ ಅವರು ಈ ಸೀರಿಯಲ್ ತೊರೆದರು ಮತ್ತು ಭಾರ್ಗವಿ ಎಲ್​​ಎಲ್​ಬಿಯ ಭಾಗ ಆದರು. ಈಗ ರಾಧಾ ಹಾಗೂ ರಾಣವ್ ನಿಶ್ಚಿತಾರ್ಥ ಮಾಡಿಕೊಂಡರು.

ರಾಣವ್ ಅವರು ಮೊದಲು ಮಾತನಾಡಿದರು. ‘ಅವಳನ್ನು ಇಷ್ಟಪಡ್ತೀನಿ, ಮದುವೆ ಆಗುತ್ತೇನೆ ಎಂದು ಅಂದುಕೊಂಡಿರಲಿಲ್ಲ. ನನ್ನ ಅರ್ಥ ಮಾಡಿಕೊಳ್ಳಯವವರು ಸ್ಟ್ರಾಂಗ್ ಆಗಿರಬೇಕು. ಇವರು ಮೇಲಿನಿಂದ ಸಾಫ್ಟ್ ಅನಿಸಿದರೂ, ಒಳಗಿನಿಂದ ಸ್ಟ್ರಾಂಗ್. ಮೈನಸ್ ಇದ್ರೆ ಬಿಟ್ಟು ಹೋಗುವವರು ಬೇರೆ. ಆದರೆ, ಅದನ್ನು ಅರ್ಥ ಮಾಡಿಕೊಂಡು, ತಿದ್ದಿ ಇರುವವರು ಬೇರೆ’ ಎಂದಿದ್ದಾರೆ ಅವರು.

‘ನಾನೇ ಅವರಿಗೆ ಪ್ರಪೋಸ್ ಮಾಡಿದ್ದು. ಅವರ ಅಭಿಮಾನಿ ನಾನು’ ಎಂದು ರಾಧಾ ಭಗವತಿ ಹೇಳಿದರು. ಇನ್ನು ಮದುವೆ ಯಾವಾಗ ಎಂಬ ಪ್ರಶ್ನೆಗೆ ಅವರು ಉತ್ತರ ನೀಡಿದರು. ‘ಅಧಿಕ ಮಾಸ ಇದೆ, ಆಶಾಢ ಇದೆ.. ಆ ಬಳಿಕ ಶ್ರಾವಣ. ಹೀಗಾಗಿ ಮದುವೆ ಮುಂದಕ್ಕೆ ಹೋಗಿದೆ’ ಯಾರ ಕಣ್ಣು ಬಿದ್ದಿದೆಯೋ ಏನೋ’ ಎಂದು ಅವರು ಹೇಳಿದರು. ಆ ವಿಡಿಯೋ ಕೂಡ ಗಮನ ಸೆಳೆದಿದೆ.

ಇದನ್ನೂ ಓದಿ: ‘ಅಮೃತಧಾರೆ’: ದೊಡ್ಡ ಸಾಧನೆ ಮಾಡಿದ ಮಲ್ಲಿ; ಜಯದೇವ್ ಬಾಳಲ್ಲಿ ಕತ್ತಲು

‘ಅಮೃತಧಾರೆ’ ಧಾರಾವಾಹಿಯಲ್ಲಿ ರಾಣವ್ ಮಾಡುತ್ತಿರುವ ವಿಲನ್ ಪಾತ್ರ ಗಮನ ಸೆಳೆದಿದೆ. ಅವರ ಪಾಥ್ರವನ್ನು ಮೆಚ್ಚುಗೆ ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Bengaluru Air Quality: ಬೆಂಗಳೂರು, ಹುಬ್ಬಳ್ಳಿ ವಾಯು ಗುಣಮಟ್ಟದಲ್ಲಿ ಸುಧಾರಣೆ

ಬೆಂಗಳೂರು, ಏಪ್ರಿಲ್ 04: ಕೆಲ ದಿನಗಳಿಂದ ಬೆಂಗಳೂರು ಸೇರಿದಂತೆ ಬಳ್ಳಾರಿ, ಮಂಗಳೂರಿನ ವಾಯುಗುಣಮಟ್ಟವೂ (Bengaluru Air Quality) ಹದಗೆಟ್ಟಿತ್ತು. ಆದರೆ ಇಂದು ಸ್ವಲ್ಪ ಮಟ್ಟಿಗೆ ಏರ್ ಕ್ವಾಲಿಟಿ ಸುಧಾರಿಸಿದ್ದು, ನಿಟ್ಟುಸಿರು ಬಿಡುವಂತಾಗಿದೆ. ಆದರೂ ವಾಯು ಗುಣಮಟ್ಟ ಎಲ್​ಲೆಡೆಯೂ ಅನಾರೋಗ್ಯಕರ ಮಟ್ಟದಲ್ಲಿಯೆ ಇದೆ ಎಂದು ತಜ್ಞರು ತಿಳಿಸಿದ್ದಾರೆ.

ಉಡುಪಿ, ಮಂಗಳೂರು ಸೇರಿದಂತೆ ಇಂದು ಹಲವೆಡೆ ವಾಯು ಗುಣಮಟ್ಟ ಸುಧಾರಿಸಿದೆ. ಕೆಲ ದಿನಗಳ ಹಿಂದೆಯಷ್ಟೇ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದ್ದ ಬೆಂಗಳೂರಿನ ಏರ್ ಕ್ವಾಲಿಟಿ ಇಂದು 124ಕ್ಕೆ ತಲುಪಿದೆ. ಬೆಂಗಳೂರಿನ AQI ಇನ್ನೂ ಆರೋಗ್ಯಕ್ಕೆ ಮಾರಕವಾಗಿಯೇ ಇದೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕೆಗಳಲ್ಲಿ ಸಣ್ಣ ಏರುಪೇರು ಕಂಡರೂ, WHO ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ.

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)

  • ಬೆಂಗಳೂರು –124
  • ಮಂಗಳೂರು-102
  • ಮೈಸೂರು –119
  • ಬೆಳಗಾವಿ – 74
  • ಕಲಬುರ್ಗಿ-99
  • ಶಿವಮೊಗ್ಗ – 104
  • ಬಳ್ಳಾರಿ – 123
  • ಹುಬ್ಬಳ್ಳಿ- 80
  • ಉಡುಪಿ –111
  • ವಿಜಯಪುರ –111

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

‘ಈಗ ನಾವು ಮೂವರು’; ಅಚ್ಚರಿ ಮೂಡಿಸಿದ ರಶ್ಮಿಕಾ ಮಂದಣ್ಣ ಪೋಸ್ಟ್

ಖ್ಯಾತ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ನಟ ವಿಜಯ್ ದೇವರಕೊಂಡ ಫೆಬ್ರವರಿ 26ರಂದು ಅದ್ದೂರಿಯಾಗಿ ವಿವಾಹವಾದರು. ಈ ವಿವಾಹದ ಕೆಲವು ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ವಿವಾಹ ಸಮಾರಂಭಕ್ಕೆ ಅವರು ಅಲಂಕಾರ ಮತ್ತು ಉಡುಗೆ ತೊಡುಗೆಗಾಗಿ ಆಯ್ಕೆ ಮಾಡಿದ ವಿಷಯ ದೇಶಾದ್ಯಂತ ಚರ್ಚೆಯಾಯಿತು. ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ವಿವಾಹ ಸಮಾರಂಭದಲ್ಲಿ ರಾಜ ಮತ್ತು ರಾಣಿಯಂತೆ ಕಾಣುತ್ತಿದ್ದರು. ಅತ್ಯಂತ ರಾಜ ವೈಭವದಲ್ಲಿ ನಡೆದ ಈ ವಿವಾಹದ ಚರ್ಚೆಯ ನಂತರ, ಈಗ ಈ ಜೋಡಿ ಮತ್ತೊಮ್ಮೆ ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿ ಆಗಿದೆ. ರಶ್ಮಿಕಾ ಮಂದಣ್ಣ ಇನ್‌ಸ್ಟಾಗ್ರಾಮ್‌ನಲ್ಲಿ ಮಾಡಿದ ಪೋಸ್ಟ್‌ನಿಂದಾಗಿ ಅವರು ತಾಯಿಯಾಗಲಿದ್ದಾರೆ ಎಂದು ಊಹಿಸಲಾಗುತ್ತಿದೆ.

ರಶ್ಮಿಕಾ ಮಂದಣ್ಣ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಗ್ರಾಫಿಕ್ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅವರನ್ನು ಹೋಲುವ ದಂಪತಿಗಳು ಇದ್ದಾರೆ. ಈ ವಿಡಿಯೋದಲ್ಲಿ ಸುಂದರವಾದ ಹಳದಿ ಹೂವು ಇದೆ. ಈ ಹೂವು ರಶ್ಮಿಕಾ ಜೊತೆ ಆಟವಾಡುತ್ತಿರುವುದನ್ನು ತೋರಿಸಲಾಗಿದೆ. ಇದರ ಜೊತೆಗೆ, ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಈ ವಿಡಿಯೋದಲ್ಲಿ ತುಂಬಾ ಸಂತೋಷವಾಗಿದ್ದಾರೆ.

ಇದನ್ನೂ ಓದಿ: ಸಿಂಪಲ್ ಸುನಿ ನಿರ್ದೇಶನದ ಹೊಸ ಸಿನಿಮಾಗೆ ಶುಭ ಕೋರಿದ ರಶ್ಮಿಕಾ ಮಂದಣ್ಣ

ಕುತೂಹಲಕಾರಿಯಾಗಿ, ಈ ವೀಡಿಯೊವನ್ನು ಪೋಸ್ಟ್ ಮಾಡುವಾಗ ರಶ್ಮಿಕಾ ಮಂದಣ್ಣ ವಿಶೇಷ ಶೀರ್ಷಿಕೆ ನೀಡಿದ್ದಾರೆ. ‘ಈಗ ನಾವು ಮೂವರು’ ಎಂದು ಸೂಚಿಸುವ ಶೀರ್ಷಿಕೆಯನ್ನು ನೀಡಿದ್ದಾರೆ. ಇದರಿಂದಾಗಿ, ಅವರು ತಾಯಿಯಾಗಲಿದ್ದಾರೆ ಎಂಬ ಚರ್ಚೆಯೂ ಹೆಚ್ಚಾಗಿದೆ. ಅವರು ತಾಯಿಯಾಗಲಿದ್ದಾರೆ ಎಂದು ವೀಡಿಯೊದಲ್ಲಿ ಎಲ್ಲಿಯೂ ಹೇಳಿಲ್ಲ. ಅದಕ್ಕಾಗಿಯೇ ಅವರ ಪೋಸ್ಟ್‌ನ ಸಸ್ಪೆನ್ಸ್ ಹೆಚ್ಚಾಗಿದೆ.

ಈ ವೀಡಿಯೊವನ್ನು ಪೋಸ್ಟ್ ಮಾಡುವಾಗ, ಅವರು ಇನ್‌ಸ್ಟಾಗ್ರಾಮ್ ಖಾತೆಯನ್ನು ‘ಟೆರಿಬ್ಲಿ ಟೈನಿ ಪೋಸ್ಟ್’ ಎಂದು ಟ್ಯಾಗ್ ಮಾಡಿದ್ದಾರೆ. ಆದ್ದರಿಂದ, ಈಗ ರಶ್ಮಿಕಾ ನಿಜವಾಗಿಯೂ ತಾಯಿಯಾಗುತ್ತಾರೆಯೇ? ಈ ಪ್ರಶ್ನೆಯನ್ನು ಅವರ ಅಭಿಮಾನಿಗಳು ಎತ್ತುತ್ತಿದ್ದಾರೆ. ಈ ಪ್ರಶ್ನೆಗೆ ಭವಿಷ್ಯದಲ್ಲಿ ಉತ್ತರ ಸಿಗುತ್ತದೆ. ಇದು ಪ್ರಮೋಷನ್ ಭಾಗವೂ ಕೂಡ ಆಗಿರಬಹುದು ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೆಂಗಳೂರು: ಮನೆ ಕಟ್ಟುವವರಿಗೆ ಜಿಬಿಎ ಬಂಪರ್ ಗಿಫ್ಟ್! ಸೆಟ್ ಬ್ಯಾಕ್ ಉಲ್ಲಂಘನೆ ಮಿತಿ ವಿಸ್ತರಣೆ

ಬೆಂಗಳೂರು, ಏಪ್ರಿಲ್ 4: ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯಲ್ಲಿನ ಕಟ್ಟಡ ಉಪವಿಧಿಗಳ ಕುರಿತು ಮಹತ್ವದ ಕರಡು ಅಧಿಸೂಚನೆ ಪ್ರಕಟಗೊಂಡಿದೆ. ಇದರೊಂದಿಗೆ ಬೆಂಗಳೂರಿನಲ್ಲಿ (Bangalore) ಮನೆ ಕಟ್ಟುವವರಿಗೆ ಸರ್ಕಾರದಿಂದ ಅತಿ ದೊಡ್ಡ ಪರಿಹಾರ ಒದಗಿಸಿದಂತಾಗಿದೆ. ಹೊಸ ಪ್ರಸ್ತಾವನೆಯಲ್ಲಿ ಸೆಟ್ ಬ್ಯಾಕ್ ಉಲ್ಲಂಘನೆ ವಿನಾಯಿತಿ ಮಿತಿಯನ್ನು ಶೇಕಡ 5ರಿಂದ ಶೇಕಡ 15ಕ್ಕೆ ಏರಿಸಲು ನಿರ್ಧರಿಸಲಾಗಿದೆ. ಈ ಹಿಂದೆ, ಕಟ್ಟಡ ನಿರ್ಮಾಣದಲ್ಲಿ ಶೇಕಡ 5ರಷ್ಟು ಮಾತ್ರ ಸೆಟ್ ಬ್ಯಾಕ್ ಉಲ್ಲಂಘನೆಗಳನ್ನು ಸಕ್ರಮಗೊಳಿಸಲು ಅವಕಾಶವಿತ್ತು. ಹೆಚ್ಚಿನ ಕಟ್ಟಡಗಳು ಈ ಮಿತಿಯನ್ನು ಮೀರಿ ನಿರ್ಮಾಣಗೊಂಡಿದ್ದರಿಂದ ಸಮಸ್ಯೆ ಉಂಟಾಗಿತ್ತು. ಇದನ್ನು ಮನಗಂಡು, ಸರ್ಕಾರವು 2003ರ ಉಪವಿಧಿ ಆರಕ್ಕೆ ತಿದ್ದುಪಡಿ ತರಲು ನಿರ್ಧರಿಸಿದೆ.

ಈ ಹೊಸ ನಿಯಮ ಜಾರಿಗೆ ಬಂದರೆ, ಶೇಕಡ 15ರಷ್ಟು ಜಾಗವನ್ನು ಒತ್ತುವರಿ ಮಾಡಿ ಮನೆ ಕಟ್ಟಿದರೂ, ನಿಗದಿತ ದಂಡವನ್ನು ಪಾವತಿಸಿ ಅದನ್ನು ಸಕ್ರಮ ಮಾಡಿಕೊಳ್ಳಲು ಅವಕಾಶ ಲಭಿಸಲಿದೆ. ಸಾರ್ವಜನಿಕರು ಈ ಕರಡು ಅಧಿಸೂಚನೆ ಕುರಿತು ಆಕ್ಷೇಪಣೆಗಳು ಅಥವಾ ಸಲಹೆಗಳನ್ನು ನೀಡಲು ಆಹ್ವಾನಿಸಲಾಗಿದೆ.

ಸೆಟ್ ಬ್ಯಾಕ್ ಉಲ್ಲಂಘನೆ ಎಂದರೇನು?

ಸೆಟ್ ಬ್ಯಾಕ್ ಉಲ್ಲಂಘನೆ ಎಂದರೇನು ಎಂಬುದನ್ನು ಸರಳವಾಗಿ ಹೇಳುವುದಾದರೆ, ನಿಮ್ಮ ಜಾಗದಲ್ಲಿ ಮನೆ ಕಟ್ಟುವಾಗ ಕಟ್ಟಡದ ಸುತ್ತಲೂ ನಿರ್ದಿಷ್ಟ ಪ್ರಮಾಣದ ಖಾಲಿ ಜಾಗವನ್ನು ಬಿಡಬೇಕು ಎಂಬುದು ನಿಯಮ. ಉದಾಹರಣೆಗೆ, 30×40 ಅಳತೆಯ ನಿವೇಶನದಲ್ಲಿ ಮನೆ ಕಟ್ಟುವಾಗ ರಸ್ತೆಯ ಕಡೆಗೆ ಅಥವಾ ಅಕ್ಕಪಕ್ಕದ ಮನೆಗಳ ಗೋಡೆಗಳಿಗೆ ತಾಗದಂತೆ ಮೂರು ಅಥವಾ ನಾಲ್ಕು ಅಡಿಗಳಷ್ಟು ಜಾಗವನ್ನು ಖಾಲಿ ಬಿಡಬೇಕು. ಹಳೆಯ ನಿಯಮದ ಪ್ರಕಾರ, ಈ ರೀತಿ ಬಿಡಬೇಕಾದ ಜಾಗದಲ್ಲಿ ಶೇಕಡ 5ರಷ್ಟು ಮಾತ್ರ ವ್ಯತ್ಯಾಸ (ಉಲ್ಲಂಘನೆ) ಆಗಲು ಅವಕಾಶವಿತ್ತು. ಅದಕ್ಕಿಂತ ಹೆಚ್ಚು ಜಾಗವನ್ನು ಒತ್ತುವರಿ ಮಾಡಿ ಕಟ್ಟಿದರೆ ಅದು ಅಕ್ರಮ ಕಟ್ಟಡವೆಂದು ಪರಿಗಣಿಸಲ್ಪಟ್ಟು ಪಾಲಿಕೆಯು ದಂಡ ವಿಧಿಸುತ್ತಿತ್ತು ಅಥವಾ ಅದನ್ನು ತೆರವುಗೊಳಿಸುತ್ತಿತ್ತು. ಈಗಿನ ಹೊಸ ಪ್ರಸ್ತಾವನೆಯು ಈ ಮಿತಿಯನ್ನು ಶೇಕಡ 15ಕ್ಕೆ ಏರಿಸಿರುವುದರಿಂದ, ಸಣ್ಣ ಪ್ರಮಾಣದ ಉಲ್ಲಂಘನೆಗಳಿಗೆ ಕಾನೂನುಬದ್ಧ ಪರಿಹಾರ ಸಿಗಲಿದೆ.

ಕಟ್ಟಡ ಉಪವಿಧಿಗಳ ತಿದ್ದುಪಡಿಯ ಜೊತೆಗೆ, ಹೊಸದಾಗಿ ಅಸ್ತಿತ್ವಕ್ಕೆ ಬಂದ ಜಿಬಿಎ ಮತ್ತು ಅದರ ವ್ಯಾಪ್ತಿಯ ಐದು ನಗರ ಪಾಲಿಕೆಗಳಿಗೆ ಹೊಸ ಲೋಗೋಗಳನ್ನು ಬಿಡುಗಡೆ ಮಾಡಲಾಗಿದೆ. ಪ್ರತಿ ಪಾಲಿಕೆಗೂ ಒಂದೊಂದು ವಿಶಿಷ್ಟ ಬಣ್ಣದ ಥೀಮ್ ನೀಡಲಾಗಿದೆ. ಜಿಬಿಎ ಲಾಂಛನದಲ್ಲಿ ಬೆಂಗಳೂರಿನ ಗಡಿಗೋಪುರದ ಚಿತ್ರದ ಜೊತೆಗೆ ಕೆಂಪೇಗೌಡರ ಚಿತ್ರವನ್ನು ಸೇರಿಸಲಾಗಿದೆ.

ಬೆಂಗಳೂರು ಕೇಂದ್ರ ಪಾಲಿಕೆಯ ಲೋಗೋಗೆ ನೀಲಿ ಬಣ್ಣ, ಬೆಂಗಳೂರು ಉತ್ತರ ಪಾಲಿಕೆಯ ಲೋಗೋಗೆ ಗುಲಾಬಿ ಬಣ್ಣ, ಬೆಂಗಳೂರು ದಕ್ಷಿಣ ಪಾಲಿಕೆಯ ಲೋಗೋಗೆ ತಿಳಿ ಹಸಿರು ಬಣ್ಣ, ಬೆಂಗಳೂರು ಪೂರ್ವ ಪಾಲಿಕೆಯ ಲೋಗೋಗೆ ನವಿಲು ಹಸಿರು ಬಣ್ಣ, ಹಾಗೂ ಬೆಂಗಳೂರು ಪಶ್ಚಿಮ ಪಾಲಿಕೆಯ ಲೋಗೋಗೆ ಕಂದು ಬಣ್ಣದ ಥೀಮ್ ನೀಡಲಾಗಿದೆ.

ಇದನ್ನೂ ಓದಿ: ಬೆಂಗಳೂರಲ್ಲಿ ಹೊಸ ಫ್ಲೈಓವರ್ ನಿರ್ಮಾಣಕ್ಕೆ ಮುಂದಾದ ಜಿಬಿಎ: ಎಲ್ಲಿಂದ ಎಲ್ಲಿಗೆ ಸಂಪರ್ಕ?

ಪ್ರತಿಯೊಂದು ಲೋಗೋದಲ್ಲಿಯೂ ಕೆಂಪೇಗೌಡ ಗೋಪುರ ಸಾಮಾನ್ಯ ಅಂಶವಾಗಿದ್ದು, ಅವುಗಳನ್ನು ವಿಭಿನ್ನ ಬಣ್ಣಗಳಲ್ಲಿ ರಚಿಸಿರುವುದು ವಿಶೇಷ. ಈ ಮೂಲಕ ಜಿಬಿಎ ತನ್ನ ಕಾರ್ಯಾಚರಣೆಗಳನ್ನು ಹೊಸದಾಗಿ ಗುರುತಿಸಿಕೊಂಡಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

CSKಗೆ ಸೋಲುಣಿಸಿ ಆಸ್ಟ್ರೇಲಿಯಾದ ವಿಶ್ವ ದಾಖಲೆ ಮುರಿದ ಪಂಜಾಬ್ ಕಿಂಗ್ಸ್

Source link

ಇಲ್ಲಿವರೆಗೆ ಒಂದು ಲೆಕ್ಕ, ಇನ್ಮೇಲೆ ಮತ್ತೊಂದು ಲೆಕ್ಕ; ವರ್ಕೌಟ್ ಶುರು ಮಾಡಿದ ಗಿಲ್ಲಿ ನಟ

ಗಿಲ್ಲಿ ನಟ ಅವರು (Gilli Nata) ‘ಬಿಗ್ ಬಾಸ್ ಕನ್ನಡ ಸೀಸನ್ 12’ ಗೆದ್ದ ಬಳಿಕ ಅಪಾರ ಜನಪ್ರಿಯತೆ ಪಡೆದುಕೊಂಡರು. ಅವರಿಗೆ ಇನ್​​ಸ್ಟಾಗ್ರಾಮ್ ಅಲ್ಲಿ 2.2 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಬಿಗ್ ಬಾಸ್​​ಗೆ ಬಂದು ಸ್ಪರ್ಧಿಯೊಬ್ಬರು ಇಷ್ಟು ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದಿದ್ದು ಇದೇ ಮೊದಲು. ಈಗ ಗಿಲ್ಲಿ ನಟ ಅವರು ಹೀರೋ ಆಗಿ ಬಡ್ತಿ ಪಡೆಯುತ್ತಿದ್ದಾರಾ ಎಂಬ ಕುತೂಹಲ ಮೂಡಿದೆ. ಏಕೆಂದರೆ ಅವರು ಜಿಮ್​​ನಲ್ಲಿ ವರ್ಕೌಟ್ ಶುರು ಮಾಡಿದ್ದಾರೆ.

ಗಿಲ್ಲಿ ನಟ ಅವರು ತಮ್ಮ ಫಿಟ್ನೆಸ್​​ಗೆ ಎಂದಿಗೂ ಪ್ರಾಮುಖ್ಯತೆ ಕೊಟ್ಟವರಲ್ಲ. ಅದೇ ರೀತಿ ಸ್ಟೈಲ್ ಬಗ್ಗೆಯೂ ಅವರು ಗಮನ ಹರಿಸಿದವರಲ್ಲ. ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಅವರು ಕೇವಲ ಒಂದು ಶಾರ್ಟ್ಸ್, ಬನಿಯನ್ ಹಾಕಿ ಓಡಾಡುತ್ತಿದ್ದರು. ತಲೆಕೂದಲು ಬಾಚಿಕೊಳ್ಳುತ್ತಾ ಇರಲಿಲ್ಲ. ಹೊರಗೆ ಯಾವ ರೀತಿ ಇದ್ದೀನೋ ಅದೇ ರೀತಿ ಬಿಗ್ ಬಾಸ್ ಮನೆಯಲ್ಲೂ ಇದ್ಧೇನೆ ಎಂದು ಗಿಲ್ಲಿ ಹೇಳುತ್ತಿದ್ದರು.

ಬಿಗ್ ಬಾಸ್ ಮನೆಯಲ್ಲಿದ್ದಾಗ ಗಿಲ್ಲಿ ಅವರು ಜಿಮ್ ಅಲ್ಲಿ ವರ್ಕೌಟ್ ಮಾಡುವ ಪ್ರಯತ್ನ ಮಾಡಿದ್ದರು. ‘ವರ್ಕೌಟ್ ಮಾಡೋ. ಫಿಟ್ ಆಗಿರ್ತೀಯಾ’ ಎಂದು ರಘು ಅವರು ಅನೇಕ ಬಾರಿ ಗಿಲ್ಲಿಗೆ ಹೇಳಿದ್ದು ಇದೆ. ಇದನ್ನು ಗಿಲ್ಲಿ ಗಂಭೀರವಾಗಿ ಸ್ವೀಕರಿಸಿರಲಿಲ್ಲ. ಬಿಗ್ ಬಾಸ್ ಮನೆಯಿಂದ ಬಂದ ಬಳಿಕ ಈ ವಿಷಯದಲ್ಲಿ ಸೀರಿಯಸ್ ಆದಂತೆ ಇದೆ.

ಈಗ ಫಿಟ್ನೆಸ್ ಟ್ರೇನರ್ ಕೌಶಿಕ್ ಗೌಡ ಅವರು ಗಿಲ್ಲಿ ವರ್ಕೌಟ್ ಮಾಡುತ್ತಿರುವ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅವರು ಭರ್ಜರಿಯಾಗಿ ವರ್ಕೌಟ್ ಮಾಡುತ್ತಿದ್ದಾರೆ. ಗಿಲ್ಲಿಗೆ ಫಿಟ್ನೆಸ್ ಬಗ್ಗೆ ಕಾಳಜಿ ಬಂದಿದ್ದು ನೋಡಿ ಫ್ಯಾನ್ಸ್ ಖುಷಿ ಪಟ್ಟಿದ್ದಾರೆ. ‘ಇಲ್ಲಿವರೆಗೆ ಒಂದು ಲೆಕ್ಕ, ಇನ್ಮೇಲೆ ಒಂದು ಲೆಕ್ಕ’ ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.

ಇದನ್ನೂ ಓದಿ: ಗಿಲ್ಲಿ ಬಳಿ ಲವ್​ ಟಿಪ್ಸ್ ಕೇಳಿದ ಅಭಿಮಾನಿ; ನಟನ ಉತ್ತರ ಏನು? 

ಗಿಲ್ಲಿ ವರ್ಕೌಟ್ ಆರಂಭಿಸಿದ್ದು ನೋಡಿ ಅವರು ಹೀರೋ ಆಗಿ ಬಡ್ತಿ ಪಡೆಯುತ್ತಿದ್ದಾರಾ ಎನ್ನುವ ಕುತೂಹಲವೂ ಮೂಡಿದೆ. ಅವರಿಗೆ ಹೀರೋ ಆಗುವುದಕ್ಕಿಂತ, ನಿರ್ದೇಶನದಲ್ಲಿ ಸಾಕಷ್ಟು ಆಸಕ್ತಿ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version