ಪ್ರೇಮಿ ಜತೆ ಸೇರಿ ಗಂಡನ ಕೊಲೆಗೆ ಸುಪಾರಿ ಕೊಟ್ಟ ಪತ್ನಿ, ಚಲಿಸುವ ರೈಲಿನಲ್ಲೇ ಗುಂಡು ಹಾರಿಸಿ ಹತ್ಯೆ – Kannada News | Bihar Train Case: Woman and Associate Accused of Hiring Contract Attacker Against Husband

ಕತಿಹಾರ್, ಜುಲೈ 16:ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನನ್ನು ಕೊಲ್ಲಲು ಸ್ವತಃ ಪತ್ನಿಯೇ ತನ್ನ ಪ್ರಿಯಕರನೊಂದಿಗೆ ಸೇರಿ ಹಂತಕನನ್ನು ನೇಮಿಸಿ, ಚಲಿಸುವ ರೈಲಿನಲ್ಲಿಯೇ ಕೊಲೆ ಮಾಡಿಸಿರುವ ಘಟಮೆ ಬಿಹಾರದ ಕತಿಹಾರ್‌ನಲ್ಲಿ ನಡೆದಿದೆ. ಈ ಕೊಲೆಗೆ ಸಂಚು ರೂಪಿಸಿದ ಆರೋಪದ ಮೇಲೆ ಮೃತನ ಪತ್ನಿ, ಆಕೆಯ ಪ್ರಿಯಕರ ಹಾಗೂ ಸುಪಾರಿ ಕಿಲ್ಲರ್ ಮೂವರನ್ನೂ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಮೃತರನ್ನು ಜಮುಯಿ ಜಿಲ್ಲೆಯ ಬಿಹಾರ ವಿದ್ಯುತ್ ಇಲಾಖೆಯಲ್ಲಿ ತಂತ್ರಜ್ಞರಾಗಿ ಕೆಲಸ ಮಾಡುತ್ತಿದ್ದ ದೇವ್ ಕುಮಾರ್ ಗುಂಜನ್ ಎಂದು ಗುರುತಿಸಲಾಗಿದೆ.

ರೈಲು ಪ್ರಯಾಣದ ವೇಳೆ ನಡೆದ ಭೀಕರ ಹತ್ಯೆ

ದೇವ್ ಕುಮಾರ್ ಗುಂಜನ್ ಮತ್ತು ಸಮಿತಾ ಕುಮಾರಿ ಅವರಿಗೆ 2018 ರಲ್ಲಿ ವಿವಾಹವಾಗಿದ್ದು, ಐದು ವರ್ಷದ ಮುದ್ದಾದ ಮಗಳಿದ್ದಾಳೆ. ಸಮಿತಾ ಕುಮಾರಿ ಸುಪೌಲ್‌ನಲ್ಲಿ ಮೋಟಾರ್ ವೆಹಿಕಲ್ ಇನ್ಸ್‌ಪೆಕ್ಟರ್ ಆಗಿ ಸರ್ಕಾರಿ ಹುದ್ದೆಯಲ್ಲಿದ್ದಾಳೆ. ಜೂನ್ 11 ರಂದು ಗುಂಜನ್ ಅವರು ಖಗಾರಿಯಾ ಜಿಲ್ಲೆಯ ಬದ್ಲಾ ಘಾಟ್ ಬಳಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಅವರ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿದ್ದರು. ತೀವ್ರ ರಕ್ತಸ್ರಾವದಿಂದ ಗುಂಜನ್ ಸಾವನ್ನಪ್ಪಿದ್ದರು.

ತನಿಖೆಯಲ್ಲಿ ಬಯಲಾಯ್ತು ಪತ್ನಿಯ ಅಸಲಿ ಮುಖ

ಮೊದಲಿಗೆ ಇದು ಸಾಮಾನ್ಯ ದರೋಡೆ ಅಥವಾ ವೈಷಮ್ಯದ ಕೊಲೆ ಇರಬಹುದು ಎಂದು ಪೊಲೀಸರು ಶಂಕಿಸಿದ್ದರು. ಆದರೆ ಕತಿಹಾರ್ ರೈಲ್ವೆ ಪೊಲೀಸ್ ವರಿಷ್ಠಾಧಿಕಾರಿ (SP) ಹರಿಶಂಕರ್ ಕುಮಾರ್ ನೇತೃತ್ವದಲ್ಲಿ ತನಿಖೆ ತೀವ್ರಗೊಂಡಾಗ ಪತ್ನಿಯ ರಹಸ್ಯ ಬಯಲಾಗಿದೆ.

ಮತ್ತಷ್ಟು ಓದಿ: ಪತ್ನಿಯ ಮುಗಿಸಲು ಮಚ್ಚು ಹಿಡಿದು ಅಟ್ಟಾಡಿಸಿದ ಪಿಎಸ್ಐ ಭೈರಪ್ಪ ಅರೆಸ್ಟ್

ಸಹೋದ್ಯೋಗಿ ಜೊತೆ ಸಂಬಂಧ: ಪತ್ನಿ ಸಮಿತಾ ಕುಮಾರಿಗೆ ನಳಂದದಲ್ಲಿ ಸರ್ಕಾರಿ ತಂತ್ರಜ್ಞನಾಗಿರುವ ಅಜಿತ್ ಕುಮಾರ್ ಎಂಬಾತನೊಂದಿಗೆ ಅಕ್ರಮ ಸಂಬಂಧವಿತ್ತು. ಇಬ್ಬರ ಪ್ರೀತಿಗೆ ಪತಿ ಗುಂಜನ್ ದೊಡ್ಡ ಅಡ್ಡಿಯಾಗಿದ್ದರು.

ರಾಜು ಕುಮಾರ್ ಅಲಿಯಾಸ್ ಧೀರಜ್ ಎಂಬ ಅಪರಾಧ ಹಿನ್ನೆಲೆಯುಳ್ಳ ಕೊಲೆಗಾರನಿಗೆ ಸುಪಾರಿ ನೀಡಿದ್ದರು. ಧೀರಜ್ 2025 ರ ಶಸ್ತ್ರಾಸ್ತ್ರ ಕಾಯ್ದೆಯಡಿ ಜೈಲು ಪಾಲಾಗಿ ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಹೊರಬಂದಿದ್ದ.

ರೈಲಿನಲ್ಲಿ ಸಂಚು: ಗುಂಜನ್ ರೈಲು ಹತ್ತಿದ ತಕ್ಷಣ ಆತನ ಬೆನ್ನಟ್ಟಿದ ಧೀರಜ್, ನಿರ್ಜನ ಜಾಗದಲ್ಲಿ ತಲೆಗೆ ಗುಂಡಿಕ್ಕಿ ಹತ್ಯೆ ಮಾಡಿದ್ದ.

ವಿಚಾರಣೆಯ ವೇಳೆ ಆರೋಪಿಗಳಾದ ಸಮಿತಾ ಮತ್ತು ಅಜಿತ್ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಕೊಲೆಗೆ ಸ್ಕೆಚ್ ಹಾಕಲು ಬಳಸಲಾಗಿದ್ದ ಮೊಬೈಲ್ ಫೋನ್‌ಗಳು ಮತ್ತು ಸಿಮ್ ಕಾರ್ಡ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಪುಣೆಯ ಕೇಸ್ ನೆನಪಿಸಿದ ಬಿಹಾರದ ಘಟನೆ
ಇದೇ ಮಾದರಿಯ ಘಟನೆ ಇತ್ತೀಚೆಗೆ ಪುಣೆಯಲ್ಲೂ ನಡೆದಿತ್ತು. ಅಲ್ಲಿ ಪ್ರಸಿದ್ಧ ಉದ್ಯಮಿ ಕೇತನ್ ಅಗರ್ವಾಲ್ ಅವರನ್ನು ಅವರ ನಿಶ್ಚಿತಾರ್ಥವಾಗಿದ್ದ ಪತ್ನಿ ಸಿಯಾ ಗೋಯಲ್ ಮತ್ತು ಆಕೆಯ ಪ್ರೇಮಿ ಚೇತನ್ ಸೇರಿ ಕೊಲೆ ಮಾಡಿದ್ದರು. ಪ್ರೀತಿಯ ಹುಚ್ಚಿನಲ್ಲಿ ಐದು ವರ್ಷದ ಮಗಳನ್ನು ಅನಾಥ ಮಾಡಿ, ಗಂಡನನ್ನೇ ಕೊಲ್ಲಿಸಿದ ಈ ಮಹಿಳೆಯ ಕ್ರೌರ್ಯಕ್ಕೆ ಬಿಹಾರದ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರಿಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬೆಂಗಳೂರು: ಶಾಲೆ ಕೊಠಡಿ ಒಳಗಡೆ ಕುಸಿದುಬಿದ್ದು 5ನೇ ತರಗತಿ ಬಾಲಕ ಸಾವು – Kannada News | Bengaluru School Student Death: Class 5 Boy Collapses in Classroom, Family Alleges Delay in Medical Aid

ಬೆಂಗಳೂರು, ಜುಲೈ 16: ಬೆಂಗಳೂರು ನಗರದ ಬನ್ನೇರುಘಟ್ಟ ರಸ್ತೆಯ ವೀವರ್ಸ್ ಕಾಲೋನಿಯಲ್ಲಿರುವ ನ್ಯೂ ಬ್ಲಾಸಮ್ ಖಾಸಗಿ ಶಾಲೆಯಲ್ಲಿ ದಾರುಣ ಘಟನೆಯೊಂದು ನಡೆದಿದೆ. ಜೂನ್ 10 ರಂದು ಐದನೇ ತರಗತಿಯ 12 ವರ್ಷದ ವಿದ್ಯಾರ್ಥಿ ಅರ್ಹನ್ ಪಾಷಾ ತರಗತಿ ಕೊಠಡಿಯಲ್ಲೇ ಕುಸಿದುಬಿದ್ದು ಮೃತಪಟ್ಟಿದ್ದು, ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿತ್ತು. ಬಾಲಕ ಕುಸಿದುಬೀಳುವ ಮೊದಲು ತನಗೆ ಸುಸ್ತಾಗಿದೆ ಎಂದು ಶಿಕ್ಷಕಿಗೆ ಹೇಳಿಕೊಂಡಿದ್ದ ಎನ್ನಲಾಗಿದೆ. ಆದರೆ, ಶಾಲಾ ಸಿಬ್ಬಂದಿ ಮತ್ತು ಶಿಕ್ಷಕರು ಮಗುವಿನ ಸ್ಥಿತಿಯನ್ನು ಸೌಜನ್ಯಕ್ಕೂ ವಿಚಾರಿಸದೆ ನಿರ್ಲಕ್ಷ್ಯ ತೋರಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ತರಗತಿಗೆ ಬಂದು ಕುಳಿತ ಅರ್ಹನ್ ಪಾಷಾ ಬೆಂಚ್ ಮೇಲೆ ಕುಸಿದುಬಿದ್ದಿದ್ದಾನೆ. ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಬದಲು, ಶಾಲಾ ಸಿಬ್ಬಂದಿ 45 ನಿಮಿಷಗಳ ಕಾಲ ಬಾಲಕನ ಮೃತದೇಹವನ್ನು ಕೊಠಡಿಯಲ್ಲೇ ಇರಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೆ ಮಗು ಮೃತಪಟ್ಟಿದೆ ಎಂದು ಕುಟುಂಬಸ್ಥರು ದೂರಿದ್ದಾರೆ. 45 ನಿಮಿಷಗಳ ನಂತರ ಮಗುವಿನ ಕುಟುಂಬಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಮಾಹಿತಿತಿಯ ನಂತರ ಕುಟುಂಬಸ್ಥರು ತಕ್ಷಣ ಶಾಲೆಗೆ ಧಾವಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಘಟನೆ ಸಂಬಂಧ ಬೆಂಗಳೂರು ದಕ್ಷಿಣ ವಿಭಾಗ ಶಿಕ್ಷಣಾಧಿಕಾರಿ ರಾಮಮೂರ್ತಿ ಪ್ರತಿಕ್ರಿಯಿಸಿದ್ದು, ‘ನಾನು ಈಗಾಗಲೆ ಎಲ್ಲಾ ಶಾಲೆ ಆಡಳಿತ ಮಂಡಳಿ ಜೊತೆ ಸಭೆ ಮಾಡಿದ್ದೇನೆ. ಮಕ್ಕಳಿಗೆ ಆರೋಗ್ಯ ಸಮಸ್ಯೆಯಾದಾಗ ಪ್ರಥಮ ಚಿಕಿತ್ಸೆ ನೀಡಬೇಕು. ಮಕ್ಕಳು ಬೆಳಿಗ್ಗೆ ಬಂದು ಸಂಜೆ ಹೋಗುವವರೆಗೆ ಮಕ್ಕಳ ಜವಾಬ್ದಾರಿ ಶಾಲೆಯದ್ದಾಗಿರುತ್ತೆ. ಮಕ್ಕಳ ಆರೋಗ್ಯ ಕೆಟ್ಟಾಗ ಹತ್ತಿರದ ಆಸ್ಪತ್ರೆಗೆ ತಕ್ಷಣ ಕರೆದೊಯ್ಯಬೇಕು. ಪೋಷಕರು ಬರುವವರೆಗೂ ಆಡಳಿತ ಮಂಡಳಿ ಕಾಯಬಾರದು. ಈ‌ ಬಗ್ಗೆ ಎಲ್ಲಾ ಶಾಲೆಗಳಿಗೂ ಲಿಖಿತ ರೂಪದಲ್ಲಿ ನೋಟಿಸ್ ಜಾರಿ ಮಾಡುತ್ತೇನೆ’ ಎಂದು ತಿಳಿಸಿದ್ದಾರೆ.

ವರದಿ: ವಿಕಾಸ್, ಟಿವಿ9  ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕದ ರೈತರು ಹಾಗೂ ಉದ್ಯಮಿಗಳಿಗೆ ಯುಕೆ ಗಿಫ್ಟ್: ಬ್ರಿಟನ್ ಮಾರುಕಟ್ಟೆಯಲ್ಲಿ ಬ್ಯಾಡಗಿ ಮೆಣಸಿನಕಾಯಿ, ಕಾಫಿಗೆ ಸಿಗಲಿದೆ ಭಾರಿ ಡಿಮ್ಯಾಂಡ್ – Kannada News | Karnataka Gains Big from India UK Free Trade Deal: Zero Duty Exports and UK Investment

ಬೆಂಗಳೂರು, ಜು.16: ಭಾರತ ಮತ್ತು ಬ್ರಿಟನ್ (UK) ನಡುವಿನ ಆರ್ಥಿಕ ಬಾಂಧವ್ಯದಲ್ಲಿ ಹೊಸದೊಂದು ಚಾರಿತ್ರಿಕ ಅಧ್ಯಾಯ ಆರಂಭವಾಗಿದೆ. ಉಭಯ ದೇಶಗಳ ನಡುವಿನ ಮುಕ್ತ ವ್ಯಾಪಾರ ಒಪ್ಪಂದವು (Free Trade Agreement) ಬುಧವಾರದಿಂದ ಜಾರಿಗೆ ಬಂದಿದ್ದು, ಇದರಿಂದ ಕರ್ನಾಟಕ ರಾಜ್ಯದ ವ್ಯಾಪಾರ, ಉದ್ಯಮ ಹಾಗೂ ಶಿಕ್ಷಣ ಕ್ಷೇತ್ರಗಳಿಗೆ ಬಂಪರ್ ಲಾಭ ದೊರೆಯಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

ಈ ಒಪ್ಪಂದದ ಅನ್ವಯ ಭಾರತದ ಶೇಕಡಾ 99ರಷ್ಟು ಉತ್ಪನ್ನಗಳು ಯಾವುದೇ ಸುಂಕವಿಲ್ಲದೆ ಬ್ರಿಟನ್ ಮಾರುಕಟ್ಟೆಯನ್ನು ಪ್ರವೇಶಿಸಲಿವೆ. ಪ್ರಮುಖ ವಲಯಗಳ ಉತ್ಪನ್ನಗಳ ಮೇಲಿನ ಭಾರಿ ಸುಂಕವನ್ನು ಸಂಪೂರ್ಣವಾಗಿ ಶೂನ್ಯಕ್ಕೆ ಇಳಿಸಲಾಗಿದೆ. ಆಟೋಮೋಟಿವ್ ವಲಯ ಸಂಬಂಧಿಸಿದಂತೆ ಈ ಹಿಂದೆ ಇದ್ದ ಶೇಕಡಾ 110 ರಷ್ಟು ಸುಂಕವನ್ನು ಶೂನ್ಯಕ್ಕೆ ಇಳಿಸಲಾಗಿದೆ. ಎಲೆಕ್ಟ್ರಿಕಲ್ ಮಷೀನರಿಗಳಿಗೆ ಶೇ. 22 ರಷ್ಟಿದ್ದ ಸುಂಕ ಇನ್ಮುಂದೆ ಶೂನ್ಯವಾಗಲಿದೆ.

ವೈದ್ಯಕೀಯ ಉಪಕರಣಗಳಿಗೆ ಶೇ. 13.75 ರಷ್ಟಿದ್ದ ಸುಂಕವನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ. ಏರೋಸ್ಪೇಸ್ ಉತ್ಪನ್ನಗಳಿಗೂ ಶೇ. 11 ರಷ್ಟಿದ್ದ ಸುಂಕ ಈಗ ಶೂನ್ಯಕ್ಕೆ ಇಳಿಕೆಯಾಗಿದೆ. ಇನ್ನು ಕೆಲವು ನಿರ್ದಿಷ್ಟ ಉತ್ಪನ್ನಗಳ ಮೇಲಿನ ಸುಂಕವು ಮುಂದಿನ 5 ರಿಂದ 6 ವರ್ಷಗಳಲ್ಲಿ ಹಂತಹಂತವಾಗಿ ಶೂನ್ಯಕ್ಕೆ ಇಳಿಯಲಿದೆ.

ಈ ಒಪ್ಪಂದದಿಂದ ಕರ್ನಾಟಕದ ಮಲೆನಾಡು ಹಾಗೂ ಕರಾವಳಿ ಭಾಗದ ರಫ್ತುದಾರರಿಗೆ ದೊಡ್ಡ ಮಾರುಕಟ್ಟೆ ಸಿಕ್ಕಂತಾಗಿದೆ. ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಯ ಉತ್ಕೃಷ್ಟ ಗುಣಮಟ್ಟದ ಕಾಫಿ, ಏಲಕ್ಕಿ, ಕಾಳುಮೆಣಸು, ಸಾಂಬಾರ ಪದಾರ್ಥಗಳು, ತೆಂಗು, ಸಿರಿಧಾನ್ಯಗಳು ಹಾಗೂ ಪ್ರಸಿದ್ಧ ಬ್ಯಾಡಗಿ ಮತ್ತು ದೇವನೂರು ಮೆಣಸಿನಕಾಯಿಗೆ ಯುಕೆ ಮಾರುಕಟ್ಟೆಯಲ್ಲಿ ಇನ್ಮುಂದೆ ಸುಂಕದ ಹೊರೆ ಇರುವುದಿಲ್ಲ.

ಎಕ್ಸ್​​ ಪೋಸ್ಟ್​​ ಇಲ್ಲಿದೆ ನೋಡಿ:

ಮಲ್ಲಿಗೆ, ಚೆಂಡುಹೂವು, ಮಾವು, ನಿಂಬೆಹಣ್ಣು, ತರಕಾರಿ, ಮೀನು ಹಾಗೂ ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತಿಗೆ ಭಾರಿ ಬೇಡಿಕೆ ಬರಲಿದೆ. ರಾಜ್ಯದ ಜೈವಿಕ ತಂತ್ರಜ್ಞಾನ , ಫಾರ್ಮಸುಟಿಕಲ್ಸ್, ಜವಳಿ ಮತ್ತು ಗಾರ್ಮೆಂಟ್ಸ್ ಹಾಗೂ ಸಣ್ಣ ಕೈಗಾರಿಕೆಗಳಿಗೆ ಈ ಒಪ್ಪಂದದಿಂದ ಹೊಸ ಚೈತನ್ಯ ಸಿಗಲಿದೆ.

ಈಗಾಗಲೇ ಕರ್ನಾಟಕದಲ್ಲಿ ಬ್ರಿಟನ್ ಮೂಲದ ಪ್ರಮುಖ ಕಂಪನಿಗಳಾದ ರೋಲ್ಸ್ ರಾಯ್ಸ್, ಬಿಎಇ ಸಿಸ್ಟಮ್ಸ್, ಟೆಸ್ಕೋ, ಎಆರ್‌ಎಂ ಮತ್ತು ಹೆಚ್‌ಎಸ್‌ಬಿಸಿ ನೆಲೆಯೂರಿದ್ದು, 30,000ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿವೆ. ಸ್ತುತ ‘ಟೆಸ್ಕೋ’ ಕಂಪನಿಯು ನೂತನ ವಿಸ್ತರಣಾ ಕೇಂದ್ರವನ್ನು ತೆರೆಯುತ್ತಿದ್ದು, ಇದರಿಂದ ಹೊಸದಾಗಿ 15,000 ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ರೋಲ್ಸ್ ರಾಯ್ಸ್’ ರಾಜ್ಯದಲ್ಲಿ ಮತ್ತಷ್ಟು ಹೂಡಿಕೆ ಮಾಡಲು ಉತ್ಸುಕತೆ ತೋರಿಸಿದೆ. ಬ್ರಿಟನ್ ಹೂಡಿಕೆದಾರರನ್ನು ಸೆಳೆಯಲು ರಾಜ್ಯ ಸರ್ಕಾರವು ಲಂಡನ್‌ನಲ್ಲಿ ರೋಡ್‌ಶೋ ನಡೆಸಲು ನಿರ್ಧರಿಸಿದ್ದು, ಏರೋಸ್ಪೇಸ್, ಸೆಮಿಕಂಡಕ್ಟರ್, ಶುದ್ಧ ಇಂಧನ ಹಾಗೂ ವಿದ್ಯುತ್ ಚಾಲಿತ ವಾಹನ ಕ್ಷೇತ್ರಗಳಲ್ಲಿ ಸಹಭಾಗಿತ್ವ ವಹಿಸಲಿದೆ.

ಇದನ್ನೂ ಓದಿ: ಇಂಜಿನಿಯರಿಂಗ್ ಸೇರ ಬಯಸುವವರಿಗೆ ಜುಲೈ 24 ಕೊನೆ ದಿನ; ಈ ಬಾರಿ ನಿಯಮದಲ್ಲಿ ದೊಡ್ಡ ಬದಲಾವಣೆ

ಕರ್ನಾಟಕಕ್ಕೆ ಬರಲಿವೆ ಬ್ರಿಟಿಷ್ ವಿಶ್ವವಿದ್ಯಾಲಯಗಳು:

ಕೇವಲ ವ್ಯಾಪಾರ ಮಾತ್ರವಲ್ಲದೆ ಶಿಕ್ಷಣ ಕ್ಷೇತ್ರದಲ್ಲೂ ಈ ಒಪ್ಪಂದ ಕ್ರಾಂತಿ ಸೃಷ್ಟಿಸಲಿದೆ. ಬ್ರಿಟನ್‌ನ ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಮತ್ತು ಪ್ರಮುಖ ಶಾಲೆಗಳು ತಮ್ಮ ಕ್ಯಾಂಪಸ್‌ಗಳನ್ನು ಕರ್ನಾಟಕದಲ್ಲೇ ತೆರೆಯಲು ಹಸಿರು ನಿಶಾನೆ ಸಿಕ್ಕಿದೆ. ಇದಲ್ಲದೆ, ಪ್ರಸ್ತುತ ಬೆಂಗಳೂರು ಮತ್ತು ಲಂಡನ್ ನಡುವೆ ವಾರಕ್ಕೆ 34 ನೇರ ವಿಮಾನ ಸೇವೆಗಳಿದ್ದು, ಮುಂಬರುವ ದಿನಗಳಲ್ಲಿ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ. ರಾಜ್ಯದ ರಫ್ತುದಾರರಿಗೆ ಮತ್ತು ಸಣ್ಣ ಉದ್ಯಮಿಗಳಿಗೆ ಈ ಮುಕ್ತ ವ್ಯಾಪಾರದ ಬಗ್ಗೆ ಹೆಚ್ಚಿನ ತಿಳಿವಳಿಕೆ ಮೂಡಿಸಲು ಸರ್ಕಾರ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಿದೆ ಎಂದು ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಈ ಪುಟ್ಟ ಪುಟಾಣಿಯೇ ಈಗ ಮೆಸ್ಸಿಯ ಎದುರಾಳಿ! – Kannada News | Lionel Messi once bathed baby Lamine Yamal

ವಿಶ್ವ ಫುಟ್‌ಬಾಲ್ ಇತಿಹಾಸದಲ್ಲಿ ಕೆಲವು ಘಟನೆಗಳು ಕೇವಲ ಕಾಕತಾಳೀಯವಾಗಿರಲು ಸಾಧ್ಯವೇ ಇಲ್ಲ, ಅವುಗಳನ್ನು ವಿಧಿಯೇ ಬರೆದಿಟ್ಟಿರುತ್ತದೆ ಅನಿಸುತ್ತದೆ. ಇದಕ್ಕೆ ಅತ್ಯುತ್ತಮ ಉದಾಹರಣೆ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಸೃಷ್ಟಿಸುತ್ತಿರುವ ಒಂದು ಹಳೆಯ ಫೋಟೋ. ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ಫುಟ್‌ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ, ಕೇವಲ ಕೆಲವು ತಿಂಗಳ ಮಗುವಿಗೆ ಜಳಕ ಮಾಡಿಸುತ್ತಿರುವ ಅಪರೂಪದ ಚಿತ್ರವಿದು. ಅಷ್ಟಕ್ಕೂ ಮೆಸ್ಸಿ ಕೈಯಲ್ಲಿದ್ದ ಆ ಪುಟ್ಟ ಮಗು ಬೇರೆ ಯಾರೂ ಅಲ್ಲ. ಇಂದು ಇಡೀ ಫುಟ್‌ಬಾಲ್ ಜಗತ್ತನ್ನು ತನ್ನ ಅದ್ಭುತ ಆಟದ ಮೂಲಕ ಮಂತ್ರಮುಗ್ಧಗೊಳಿಸುತ್ತಿರುವ ಸ್ಪೇನ್ ದೇಶದ ಯುವ ತಾರೆ ಲಾಮಿನ್ ಯಮಾಲ್!

2007 ರಲ್ಲಿ ಮುಖಾಮುಖಿ:

ಲಿಯೋನೆಲ್ ಮೆಸ್ಸಿ ಮತ್ತು ಲಾಮಿನ್ ಯಮಾಲ್ ಮುಖಾಮುಖಿಯಾಗಿದ್ದು 2007 ರಲ್ಲಿ. ಮೆಸ್ಸಿ ಅವರು ಬಾರ್ಸಿಲೋನಾ ಕ್ಲಬ್ ಪರ ಕಣಕ್ಕಿಳಿಯುತ್ತಿದ್ದ ದಿನಗಳಲ್ಲಿ. ಸ್ಪೇನ್‌ನ ಪ್ರಸಿದ್ಧ ಪತ್ರಿಕೆ ‘ಡಿಯಾರಿಯೋ ಸ್ಪೋರ್ಟ್’ ಮತ್ತು ವಿಶ್ವಸಂಸ್ಥೆಯ ಯುನಿಸೆಫ್ ಸಂಸ್ಥೆಗಳು ಜಂಟಿಯಾಗಿ ಒಂದು ಚಾರಿಟಿ ಕ್ಯಾಲೆಂಡರ್ ತಯಾರಿಸಲು ನಿರ್ಧರಿಸಿದ್ದವು.

ಕ್ಯಾಲೆಂಡರ್‌ನ ಚಿತ್ರೀಕರಣಕ್ಕಾಗಿ ಬಾರ್ಸಿಲೋನಾ ಆಟಗಾರರೊಂದಿಗೆ ಫೋಟೋ ತೆಗೆಸಿಕೊಳ್ಳಲು ಯುನಿಸೆಫ್ ಸಂಸ್ಥೆಯು ಬಾರ್ಸಿಲೋನಾದ ರೊಕಾಫೊಂಡಾ ಎಂಬ ಬಡ ಪ್ರದೇಶದಲ್ಲಿ ಒಂದು ಲಾಟರಿ ಪ್ರಕ್ರಿಯೆ ನಡೆಸಿತ್ತು. ಈ ಲಾಟರಿ ಪ್ರಕ್ರಿಯೆಯಲ್ಲಿ ವಿಜೇತರಾದದ್ದೇ ಲಾಮಿನ್ ಯಮಾಲ್ ಅವರ ಪೋಷಕರು!

ಲಾಕರ್ ರೂಮ್​ನಲ್ಲೇ ಮೊದಲ ಭೇಟಿ:

ಲಿಯೋನೆಲ್ ಮೆಸ್ಸಿ ಹಾಗೂ ಲಾಮಿನ್ ಯಮಾಲ್ ಮೊದಲ ಭೇಟಿಯಾಗಿದ್ದು ಬಾರ್ಸಿಲೋನಾ ಕ್ಲಬ್‌ನ ತವರು ಮೈದಾನವಾದ ‘ಕಂಪ್ ನೌ’ ಕ್ರೀಡಾಂಗಣದ ಲಾಕರ್ ರೂಮ್‌ನಲ್ಲಿ. ಅಂದರೆ ಚಾರಿಟಿ ಕ್ಯಾಲೆಂಡರ್ ಫೋಟೋ ಶೂಟ್​ಗಾಗಿ ಛಾಯಾಗ್ರಾಹಕ ಜೋನ್ ಮಾನ್‌ಫೋರ್ಟ್ ‘ಕಂಪ್ ನೌ’ ಕ್ರೀಡಾಂಗಣದ ಲಾಕರ್ ರೂಮ್​ಗೆ ಆಗಮಿಸಿದ್ದರು. ಈ ವೇಳೆ ಸೆರೆ ಹಿಡಿದ ಫೋಟೋವೇ ಇದೀಗ ವೈರಲ್ ಆಗುತ್ತಿದೆ.

ಮಾನ್‌ಫೋರ್ಟ್ ಇತ್ತೀಚೆಗೆ ನೆನಪಿಸಿಕೊಂಡಂತೆ, ಆ ದಿನ ಮೆಸ್ಸಿ ತುಂಬಾ ನಾಚಿಕೆ ಸ್ವಭಾವದವರಾಗಿದ್ದರು. ಯುವ ಮೆಸ್ಸಿಗೆ ಪ್ಲಾಸ್ಟಿಕ್ ಟಬ್‌ನಲ್ಲಿದ್ದ ಪುಟ್ಟ ಮಗುವನ್ನು ಹೇಗೆ ಎತ್ತಿಕೊಳ್ಳಬೇಕು, ಹೇಗೆ ನಿಭಾಯಿಸಬೇಕು ಎಂಬುದು ಆರಂಭದಲ್ಲಿ ತಿಳಿಯದೆ ತಬ್ಬಿಬ್ಬಾಗಿದ್ದರು.

ಆಗ ಮಗುವಿನ ತಾಯಿ ಶೀಲಾ ಎಬಾನಾ ಅವರು ಅಲ್ಲಿಯೇ ಇದ್ದು ಮೆಸ್ಸಿಗೆ ಸಹಾಯ ಮಾಡಿದರು. ಹಾಗೆ ಹುಟ್ಟಿಕೊಂಡಿದ್ದೇ ಈ ಐತಿಹಾಸಿಕ ಫೋಟೋ. ಈ ವೇಳೆ ನಾನು ತೆಗೆದ ಫೋಟೋ ಇದು ಜೋನ್ ಮಾನ್‌ಫೋರ್ಟ್  ನೆನಪಿಸಿಕೊಂಡಿದ್ದಾರೆ.

ವೈರಲ್ ಆಗಿದ್ದು ಹೇಗೆ?

ಈ ಫೋಟೋ ಶೂಟ್ ಮುಗಿದ ನಂತರ ಎಲ್ಲರೂ ಇದನ್ನು ಮರೆತುಬಿಟ್ಟಿದ್ದರು. ಆದರೆ ಇತ್ತೀಚೆಗೆ ಲಾಮಿನ್ ಯಮಾಲ್ ಅವರ ತಂದೆ ಮುನೀರ್ ನಸ್ರಾವಿ ಅವರು “ಎರಡು ದಂತಕಥೆಗಳ ಆರಂಭ” ಎಂಬ ಶೀರ್ಷಿಕೆಯೊಂದಿಗೆ ಈ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಾಗ ಇಡೀ ಜಗತ್ತೇ ಆಶ್ಚರ್ಯಚಕಿತವಾಯಿತು.

ಹಲವರು ಇದನ್ನು ಎಐ ಸೃಷ್ಟಿಸಿದ ನಕಲಿ ಫೋಟೋ ಇರಬಹುದು ಎಂದು ಶಂಕಿಸಿದ್ದರು. ಆದರೆ ಛಾಯಾಗ್ರಾಹಕ ಮತ್ತು ಪತ್ರಿಕೆ ಇದನ್ನು ಅಧಿಕೃತವಾಗಿ ಹೌದು ಎಂದು ಖಚಿತಪಡಿಸಿದಾಗ ಫುಟ್‌ಬಾಲ್ ಅಭಿಮಾನಿಗಳಿಗೆ ರೋಮಾಂಚನವಾಯಿತು.

ಪುಟ್ಟ ಪುಟಾಣಿಯೇ ಎದುರಾಳಿ:

19 ವರ್ಷಗಳ ಹಿಂದೆ ಟಬ್‌ನಲ್ಲಿ ಮಲಗಿದ್ದ ಲಾಮಿನ್ ಯಮಾಲ್ ಇದೀಗ ಫೈನಲ್​ ಪಂದ್ಯದಲ್ಲಿ ಸ್ಪೇನ್ ತಂಡದ ಪ್ರಮುಖ ಆಟಗಾರನಾಗಿ ಕಣಕ್ಕಿಳಿಯಲು ಸಜ್ಜಾಗಿದ್ದಾನೆ. ಅದು ಕೂಡ ತನ್ನನ್ನು ಸ್ನಾನ ಮಾಡಿಸಿದ ಲಿಯೋನೆಲ್ ಮೆಸ್ಸಿ ವಿರುದ್ಧ ವಿಶ್ವಕಪ್ ಕಿರೀಟಕ್ಕಾಗಿ ಎಂಬುದು ವಿಶೇಷ.

ಲಾಮಿನ್ ಯಮಾಲ್ ಮತ್ತು ಲಿಯೋನೆಲ್ ಮೆಸ್ಸಿ

ಇದನ್ನೂ ಓದಿ: ಟಿ20 ವಿಶ್ವಕಪ್​ನಲ್ಲೂ ಎಲಿಮಿನೇಟರ್ ರೌಂಡ್: ಸೆಮಿಫೈನಲ್ ಎಂಟ್ರಿ ಮತ್ತಷ್ಟು ರೋಚಕ!

ಒಟ್ಟಾರೆಯಾಗಿ ಹೇಳುವುದಾದರೆ, ಇದು ಕೇವಲ ಒಂದು ಫುಟ್‌ಬಾಲ್ ಪಂದ್ಯವಲ್ಲ. ಇತಿಹಾಸ ಮತ್ತು ಭವಿಷ್ಯದ ನಡುವಿನ ಮಹಾಸಂಗಮ. ಅಂದು ಮೆಸ್ಸಿಯ ಕೈಯಲ್ಲಿದ್ದ ಪುಟ್ಟ ಮಗು ಇಂದು ಜಾಗತಿಕ ಫುಟ್‌ಬಾಲ್‌ನ ದೈತ್ಯ ತಾರೆಯಾಗಿ ಬೆಳೆದು ನಿಂತಿದೆ. ಮೆಸ್ಸಿಯ ವೃತ್ತಿಜೀವನದ ಅಂತಿಮ ಹಂತದಲ್ಲಿ ಯಮಾಲ್ ಅವರಂತಹ ಉದಯೋನ್ಮುಖ ಆಟಗಾರ ಎದುರಾಳಿಯಾಗಿ ನಿಂತಿರುವುದು ಕ್ರೀಡಾಲೋಕದ ಸಾರ್ವಕಾಲಿಕ ಶ್ರೇಷ್ಠ ಮತ್ತು ಭಾವುಕ ಕ್ಷಣವಾಗಿ ಇತಿಹಾಸದ ಪುಟ ಸೇರಲಿದೆ.

Source link

Rain Water: ನೇರವಾಗಿ ಮಳೆ ನೀರು ಕುಡಿಯುವುದು ಸುರಕ್ಷಿತವೇ? ತಜ್ಞರು ಹೇಳಿದ ಸತ್ಯ – Kannada News | Rain water is it safe to drink rainwater health risks expert warning

ಮಳೆಗಾಲ (Monsoon) ಬಂದಾಗ ಕೆಲವರಿಗೆ ಆಕಾಶದಿಂದ ನೇರವಾಗಿ ಬೀಳುವ ಮಳೆ ಹನಿಗಳನ್ನು ಬಾಯಿಗೆ ಹಾಕಿ ಕುಡಿಯುವ ಅಭ್ಯಾಸ ಇರುತ್ತದೆ. ಪ್ರಕೃತಿಯಿಂದ ನೇರವಾಗಿ ಸಿಗುವ ನೀರು ಆದ್ದರಿಂದ ಇದು ಅತ್ಯಂತ ಶುದ್ಧ ಮತ್ತು ಆರೋಗ್ಯಕರ ಎಂದು ಹಲವರು ನಂಬುತ್ತಾರೆ. ಆದರೆ ತಜ್ಞರ ಪ್ರಕಾರ, ಶುದ್ಧೀಕರಿಸದ ಮಳೆ ನೀರನ್ನು ನೇರವಾಗಿ ಕುಡಿಯುವುದು ಆರೋಗ್ಯಕ್ಕೆ ಅಪಾಯಕಾರಿಯಾಗಬಹುದು. ಮಳೆ ಹನಿಗಳು ಭೂಮಿಗೆ ತಲುಪುವ ಮುನ್ನವೇ ಗಾಳಿಯಲ್ಲಿರುವ ಧೂಳು, ಹೊಗೆ, ಮಾಲಿನ್ಯಕಾರಿ ಕಣಗಳು, ಬ್ಯಾಕ್ಟೀರಿಯಾ ಹಾಗೂ ವೈರಸ್‌ಗಳ ಸಂಪರ್ಕಕ್ಕೆ ಬರುತ್ತವೆ. ಹೀಗಾಗಿ ಮಳೆ ನೀರು ಮೊದಲ ನೋಟಕ್ಕೆ ಸ್ವಚ್ಛವಾಗಿ ಕಂಡರೂ, ಅದರಲ್ಲಿ ಹಾನಿಕಾರಕ ಅಂಶಗಳು ಇರಬಹುದೆಂದು ತಜ್ಞರು ಎಚ್ಚರಿಸುತ್ತಿದ್ದಾರೆ.

ತಜ್ಞರ ಪ್ರಕಾರ, ವಿಶೇಷವಾಗಿ ಋತುವಿನ ಮೊದಲ ಮಳೆಯನ್ನು ಕುಡಿಯಬಾರದು. ಏಕೆಂದರೆ ವಾತಾವರಣದಲ್ಲಿ ಸಂಗ್ರಹವಾಗಿರುವ ಧೂಳು, ರಾಸಾಯನಿಕಗಳು ಮತ್ತು ಮಾಲಿನ್ಯಕಾರಿ ಕಣಗಳು ಮೊದಲ ಮಳೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆರೆತು ಬರುತ್ತವೆ. ಕೆಲವರು ಮಳೆ ನೀರು ಕ್ಷಾರೀಯ (Alkaline) ಗುಣ ಹೊಂದಿದ್ದು ಆರೋಗ್ಯಕ್ಕೆ ಒಳ್ಳೆಯದು ಎಂದು ನಂಬುತ್ತಾರೆ. ಆದರೆ ವೈಜ್ಞಾನಿಕವಾಗಿ ಮಳೆ ನೀರು ಸ್ವಲ್ಪ ಆಮ್ಲೀಯ (Acidic) ಸ್ವಭಾವ ಹೊಂದಿರುತ್ತದೆ. ಆದ್ದರಿಂದ ಯಾವುದೇ ಶುದ್ಧೀಕರಣವಿಲ್ಲದೆ ಅದನ್ನು ಕುಡಿಯುವುದು ಸೂಕ್ತವಲ್ಲ.

ಕಲುಷಿತ ಮಳೆ ನೀರನ್ನು ಕುಡಿದರೆ ಹೊಟ್ಟೆ ಸೋಂಕು, ಅತಿಸಾರ, ವಾಂತಿ, ಆಹಾರ ವಿಷಬಾಧೆ ಸೇರಿದಂತೆ ಹಲವು ಜೀರ್ಣಾಂಗ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ. ಕೆಲ ಸಂದರ್ಭಗಳಲ್ಲಿ ಟೈಫಾಯ್ಡ್, ಕಾಲರಾ ಹಾಗೂ ಹೆಪಟೈಟಿಸ್ ಎ ಮುಂತಾದ ನೀರಿನ ಮೂಲಕ ಹರಡುವ ಸೋಂಕುಗಳ ಅಪಾಯವೂ ಹೆಚ್ಚಾಗಬಹುದು. ವಿಶೇಷವಾಗಿ ಮಕ್ಕಳು, ವೃದ್ಧರು ಮತ್ತು ರೋಗನಿರೋಧಕ ಶಕ್ತಿ ಕಡಿಮೆ ಇರುವವರು ಹೆಚ್ಚು ಎಚ್ಚರಿಕೆ ವಹಿಸಬೇಕು.

Kids Sleep: ಸ್ಕೂಲ್‌ನಿಂದ ಬಂದ ತಕ್ಷಣ ಮಕ್ಕಳನ್ನು ಮಲಗಿಸಬಹುದೇ?

ಒಂದು ವೇಳೆ ಮಳೆ ನೀರನ್ನು ಕುಡಿಯುವ ಉದ್ದೇಶವಿದ್ದರೆ, ಮೊದಲು ಅದನ್ನು ಚೆನ್ನಾಗಿ ಕುದಿಸಬೇಕು. ನಂತರ ಉತ್ತಮ ಗುಣಮಟ್ಟದ ವಾಟರ್ ಫಿಲ್ಟರ್ ಅಥವಾ ಶುದ್ಧೀಕರಣ ವ್ಯವಸ್ಥೆಯ ಮೂಲಕ ಶೋಧಿಸಿ ಮಾತ್ರ ಬಳಸಬೇಕು. ಕೇವಲ ಕುದಿಸುವುದರಿಂದ ಕೆಲವು ಸೂಕ್ಷ್ಮಾಣುಗಳು ನಾಶವಾಗುತ್ತವಷ್ಟೆ. ಆದರೆ ರಾಸಾಯನಿಕ ಮಾಲಿನ್ಯ ಅಥವಾ ಭಾರವಾದ ಲೋಹಗಳನ್ನು ತೆಗೆದುಹಾಕಲು ಸೂಕ್ತ ಫಿಲ್ಟರ್ ಅಗತ್ಯವಾಗಬಹುದು. ಸರಿಯಾದ ಶುದ್ಧೀಕರಣ ವ್ಯವಸ್ಥೆ ಇಲ್ಲದಿದ್ದರೆ ಮಳೆ ನೀರನ್ನು ಕುಡಿಯುವುದಕ್ಕಿಂತ ಗಿಡಗಳಿಗೆ ನೀರು ಹಾಕುವುದು, ಬಟ್ಟೆ ತೊಳೆಯುವುದು ಅಥವಾ ಇತರ ಗೃಹಬಳಕೆಗೆ ಬಳಸುವುದು ಉತ್ತಮ ಎಂದು ತಜ್ಞರು ಸಲಹೆ ನೀಡಿದ್ದಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Puri Rath Yatra 2026: ಜಗನ್ನಾಥ ರಥಯಾತ್ರೆ ಆರಂಭ; ರಥಯಾತ್ರೆಯ ಮಾರ್ಗವನ್ನು ಚಿನ್ನದ ಪೊರಕೆಯಿಂದ ಗುಡಿಸುವ ಸಂಪ್ರದಾಯದ ಬಗ್ಗೆ ನಿಮಗೆ ಗೊತ್ತಾ? – Kannada News | Puri Jagannath Rath Yatra 2026: Unveiling the Golden Broom Tradition

ಚಿನ್ನದ ಪೊರಕೆಯಿಂದ ರಥಯಾತ್ರೆಯ ಮಾರ್ಗವನ್ನು ಸ್ವಚ್ಛಗೊಳಿಸುವ ಆಚರಣೆ

ಒಡಿಶಾದ ಪುರಿಯಲ್ಲಿರುವ ಶ್ರೀ ಜಗನ್ನಾಥ ದೇವಸ್ಥಾನದಲ್ಲಿ ಪ್ರತಿ ವರ್ಷ ನಡೆಯುವ ‘ಜಗನ್ನಾಥ ರಥಯಾತ್ರೆ‘ ವಿಶ್ವಪ್ರಸಿದ್ಧ ಹಿಂದೂ ಆಧ್ಯಾತ್ಮಿಕ ಉತ್ಸವಗಳಲ್ಲಿ ಒಂದಾಗಿದೆ. ಈ ವರ್ಷ ರಥಯಾತ್ರೆಯು ಇಂದಿನಿಂದ (ಜುಲೈ 16) ಪ್ರಾರಂಭವಾಗುತ್ತಿದೆ. ಈ ಸಂದರ್ಭದಲ್ಲಿ, ಜಗನ್ನಾಥನು ತಮ್ಮ ಅಣ್ಣ ಬಲಭದ್ರ ಮತ್ತು ಸಹೋದರಿ ಸುಭದ್ರಾ ದೇವಿ ಅವರೊಂದಿಗೆ ದೇವಾಲಯದಿಂದ ಭವ್ಯ ರಥದಲ್ಲಿ ಹೊರಟು ಗುಂಡಿಚಾ ದೇವಸ್ಥಾನವನ್ನು ತಲುಪುತ್ತಾರೆ. ದೇಶ ಮತ್ತು ವಿದೇಶಗಳಿಂದ ಲಕ್ಷಾಂತರ ಭಕ್ತರು ಈ ದೈವಿಕ ಮೆರವಣಿಗೆಯನ್ನು ಪ್ರತ್ಯಕ್ಷವಾಗಿ ವೀಕ್ಷಿಸಲು ಪುರಿಗೆ ಬರುತ್ತಾರೆ. ರಥಯಾತ್ರೆಯ ಸಮಯದಲ್ಲಿ ಅನೇಕ ವಿಶಿಷ್ಟ ಸಂಪ್ರದಾಯಗಳನ್ನು ಅನುಸರಿಸಲಾಗುತ್ತದೆ. ಅವುಗಳಲ್ಲಿ ಅತ್ಯಂತ ಆಕರ್ಷಕವಾದದ್ದು ‘ಚಿನ್ನದ ಪೊರಕೆಯಿಂದ ರಥಯಾತ್ರೆಯ ಮಾರ್ಗವನ್ನು ಸ್ವಚ್ಛಗೊಳಿಸುವ ಆಚರಣೆ’. ಈ ಸಂಪ್ರದಾಯದ ಹಿಂದಿನ ಆಧ್ಯಾತ್ಮಿಕ ಸಂದೇಶವು ಬಹಳ ಶ್ರೀಮಂತವಾಗಿದೆ.

ಚಿನ್ನದ ಪೊರಕೆಯಿಂದ ಹಾದಿಯನ್ನು ಗುಡಿಸುವವರು ಯಾರು?

ರಥಯಾತ್ರೆ ಪ್ರಾರಂಭವಾಗುವ ಮೊದಲು, ಪುರಿಯ ಗಜಪತಿ ಮಹಾರಾಜ ಅಥವಾ ಅವರ ವಂಶಸ್ಥರು ‘ಛೇರಾ ಪಹಾನ್ರ’ ಎಂಬ ಪವಿತ್ರ ಸೇವೆಯನ್ನು ಮಾಡುತ್ತಾರೆ. ಚಿನ್ನದ ಹಿಡಿಕೆಯಿಂದ ಅಲಂಕರಿಸಲ್ಪಟ್ಟ ವಿಶೇಷ ಪೊರಕೆಯನ್ನು ರಥಯಾತ್ರೆಯ ಮಾರ್ಗವನ್ನು ಮತ್ತು ರಥಗಳ ಸುತ್ತಲೂ ಗುಡಿಸಿ ಪವಿತ್ರ ನೀರನ್ನು ಸಿಂಪಡಿಸಲು ಬಳಸಲಾಗುತ್ತದೆ. ರಾಜನೇ ಸ್ವತಃ ಪೊರಕೆ ಹಿಡಿದು ರಸ್ತೆ ಗುಡಿಸಿದ ನಂತರ, ವೇದ ಮಂತ್ರಗಳ ಪಠಣದ ನಡುವೆ ರಥಯಾತ್ರೆಯು ಭವ್ಯವಾಗಿ ಚಾಲನೆ ಪಡೆಯುತ್ತದೆ.

ಈ ಸಂಪ್ರದಾಯದ ಹಿಂದಿನ ಆಧ್ಯಾತ್ಮಿಕ ಪರಿಕಲ್ಪನೆ:

ಸನಾತನ ಧರ್ಮದಲ್ಲಿ, ಚಿನ್ನವನ್ನು ಶುದ್ಧತೆ, ದೈವತ್ವ ಮತ್ತು ಶುಭದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಅದಕ್ಕಾಗಿಯೇ ಜಗನ್ನಾಥನ ರಥವು ಪ್ರಯಾಣಿಸುವ ಮಾರ್ಗವನ್ನು ಚಿನ್ನದ ಪೊರಕೆಯಿಂದ ಸ್ವಚ್ಛಗೊಳಿಸಲಾಗುತ್ತದೆ, ಇದು ಭಗವಂತನಿಗೆ ಅತ್ಯುನ್ನತ ಗೌರವವನ್ನು ತೋರಿಸುತ್ತದೆ. ಆದಾಗ್ಯೂ, ಈ ಪದ್ಧತಿಯು ಕೇವಲ ಮಾರ್ಗವನ್ನು ಸ್ವಚ್ಛಗೊಳಿಸುವುದರ ಬಗ್ಗೆ ಅಲ್ಲ. ದೇವರ ಮುಂದೆ ಎಲ್ಲರೂ ಸಮಾನರು ಎಂಬ ದೊಡ್ಡ ಸಂದೇಶವನ್ನು ಇದು ಜಗತ್ತಿಗೆ ರವಾನಿಸುತ್ತದೆ. ಪೊರಕೆ ಹಿಡಿದು ರಥದ ಮುಂದೆ ಸೇವೆ ಸಲ್ಲಿಸುವ ಮೂಲಕ, ಗಜಪತಿ ಮಹಾರಾಜರು ಸ್ವತಃ ದೇವರ ಸನ್ನಿಧಿಯಲ್ಲಿ ರಾಜ, ಬಡವ ಮತ್ತು ಸಾಮಾನ್ಯ ಮನುಷ್ಯನ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎಂದು ಜಗತ್ತಿಗೆ ಸಾರುತ್ತಾರೆ.

ಇದನ್ನೂ ಓದಿ: ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಹಳದಿ ಮತ್ತು ಕೆಂಪು ಬಣ್ಣದ ಉಡುಪುಗಳನ್ನೇ ಆಯ್ಕೆ ಮಾಡುವುದೇಕೆ ಗೊತ್ತಾ? ಇಲ್ಲಿದೆ ಆಧ್ಯಾತ್ಮಿಕ ಮಹತ್ವ!

ಪರಮೋಚ್ಚ ಭಕ್ತಿ ಮತ್ತು ನಮ್ರತೆಯ ಸಂಕೇತ:

ಜಗನ್ನಾಥ ರಥಯಾತ್ರೆಯ ಸಮಯದಲ್ಲಿ ಚಿನ್ನದ ಪೊರಕೆಯಿಂದ ರಸ್ತೆ ಗುಡಿಸುವ ಸಂಪ್ರದಾಯವನ್ನು ನಮ್ರತೆ, ಸೇವೆ ಮತ್ತು ಸಮರ್ಪಣೆಯ ಪರಮೋಚ್ಚ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ಪದ್ಧತಿಯು ಎಷ್ಟೇ ದೊಡ್ಡ ಅಧಿಕಾರ ಅಥವಾ ಅಂತಸ್ತಿನಲ್ಲಿರುವವರು ಸಹ ಭಗವಂತನ ಮುಂದೆ ಕೇವಲ ಒಬ್ಬ ಸಾಮಾನ್ಯ ಭಕ್ತನಷ್ಟೇ ವಿನಮ್ರರಾಗಿರಬೇಕು ಎಂಬ ಅದ್ಭುತ ಸಂದೇಶವನ್ನು ನೀಡುತ್ತದೆ. ಭಕ್ತರ ನಂಬಿಕೆಯ ಪ್ರಕಾರ, ಈ ದೈವಿಕ ಸಂಪ್ರದಾಯವನ್ನು ನೇರವಾಗಿ ನೋಡುವುದು, ರಥಯಾತ್ರೆಯಲ್ಲಿ ಭಾಗವಹಿಸುವುದು ಮತ್ತು ರಥದ ಹಗ್ಗಗಳನ್ನು ಎಳೆಯುವುದು ಜಗನ್ನಾಥನ ವಿಶೇಷ ಆಶೀರ್ವಾದವನ್ನು ತರುತ್ತದೆ. ಶತಮಾನಗಳಿಂದ ಅತ್ಯಂತ ನಿಷ್ಠೆಯಿಂದ ನಡೆದುಕೊಂಡು ಬರುತ್ತಿರುವ ಈ ವಿಶಿಷ್ಟ ಆಚರಣೆಯು ಇಂದಿಗೂ ರಥಯಾತ್ರೆಯ ಅತ್ಯಂತ ಪವಿತ್ರ ಮತ್ತು ಭಾವನಾತ್ಮಕ ಕ್ಷಣವಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Karnataka Dam Water Level: ಕೆಆರ್​ಎಸ್ ಡ್ಯಾಂ ಒಳಹರಿವಿನಲ್ಲಿ ಭಾರಿ ಇಳಿಕೆ, ಕರ್ನಾಟಕದ ಜಲಾಶಯಗಳ ಇಂದಿನ ನೀರಿನ ಮಟ್ಟದ ವಿವರ – Kannada News | Karnataka Reservoir Water Level on 16 July 2026: KRS Inflow Drops Sharply, Water Storage Remains Below Last Year

ಬೆಂಗಳೂರು, ಜುಲೈ 16: ಕರ್ನಾಟಕದಲ್ಲಿ (Karnataka) ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಸುರಿಯದ ಪರಿಣಾಮ ಪ್ರಮುಖ ಜಲಾಶಯಗಳಿಗೆ ಒಳಹರಿವು ಇನ್ನೂ ಗಣನೀಯವಾಗಿ ಹೆಚ್ಚಾಗಿಲ್ಲ. ವಿಶೇಷವಾಗಿ ಕಾವೇರಿ ಕಣಿವೆಯ ಕೆಆರ್‌ಎಸ್, ಕಬಿನಿ, ಹಾರಂಗಿ ಮತ್ತು ಹೇಮಾವತಿ ಜಲಾಶಯಗಳಲ್ಲಿ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ನೀರಿನ ಸಂಗ್ರಹ (Karnataka Dam Water Level) ಕಡಿಮೆಯೇ ಇದೆ. ಕೆಆರ್‌ಎಸ್ ಜಲಾಶಯಕ್ಕೆ ಒಳಹರಿವು 2 ಸಾವಿರ ಕ್ಯೂಸೆಕ್‌ಗಿಂತಲೂ ಕಡಿಮೆಯಾಗಿದ್ದು, ಜಲಾಶಯದ ನೀರಿನ ಮಟ್ಟ ಇನ್ನೂ 100 ಅಡಿ ಗಡಿ ದಾಟಿಲ್ಲ.

ಕೆಆರ್‌ಎಸ್ ಜಲಾಶಯ ನೀರಿನ ಮಟ್ಟ

ಬೆಂಗಳೂರಿನ ಜೀವನಾಡಿಯಾಗಿರುವ ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ (ಕೆಆರ್‌ಎಸ್) ಜಲಾಶಯದ ಗರಿಷ್ಠ ನೀರಿನ ಮಟ್ಟ 124.80 ಅಡಿಯಾಗಿದ್ದು, ಗುರುವಾರ ಬೆಳಿಗ್ಗೆ ಜಲಾಶಯದ ನೀರಿನ ಮಟ್ಟ 92.90 ಅಡಿ ದಾಖಲಾಗಿದೆ. ಜಲಾಶಯಕ್ಕೆ 1,909 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, 626 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.

ಕೆಆರ್‌ಎಸ್ ಜಲಾಶಯದ ಗರಿಷ್ಠ ಸಂಗ್ರಹ ಸಾಮರ್ಥ್ಯ 49.452 ಟಿಎಂಸಿ ಆಗಿದ್ದು, ಪ್ರಸ್ತುತ 17.740 ಟಿಎಂಸಿ ನೀರು ಸಂಗ್ರಹವಾಗಿದೆ.

ಕಬಿನಿ ಜಲಾಶಯದ ನೀರಿನ ಮಟ್ಟ

ಮೈಸೂರು ಜಿಲ್ಲೆಯ ಕಬಿನಿ ಜಲಾಶಯದ ನೀರಿನ ಮಟ್ಟ 70.90 ಅಡಿ ಇದೆ. ಕಳೆದ ವರ್ಷ ಇದೇ ದಿನ 81.15 ಅಡಿ ನೀರಿನ ಮಟ್ಟ ದಾಖಲಾಗಿತ್ತು. ಜಲಾಶಯದಲ್ಲಿ ಪ್ರಸ್ತುತ 12.12 ಟಿಎಂಸಿ ನೀರು ಸಂಗ್ರಹವಾಗಿದ್ದು, ಕಳೆದ ವರ್ಷ ಇದೇ ದಿನ 17.72 ಟಿಎಂಸಿ ನೀರಿತ್ತು. ಜಲಾಶಯಕ್ಕೆ 1,636 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಕಳೆದ ವರ್ಷ ಇದೇ ದಿನ 10,995 ಕ್ಯೂಸೆಕ್ ಒಳಹರಿವು ದಾಖಲಾಗಿತ್ತು. ಪ್ರಸ್ತುತ 400 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದ್ದು, ಕಳೆದ ವರ್ಷ ಇದೇ ದಿನ 12,000 ಕ್ಯೂಸೆಕ್ ನೀರು ಹೊರಹರಿಸಲಾಗಿತ್ತು. ಕಳೆದ 24 ಗಂಟೆಗಳಲ್ಲಿ ಜಲಾನಯನ ಪ್ರದೇಶದಲ್ಲಿ 5 ಮಿ.ಮೀ. ಮಳೆಯಾಗಿದೆ.

ತುಂಗಭದ್ರಾ ಜಲಾಶಯ ನೀರಿನ ಮಟ್ಟ

ವಿಜಯನಗರ ಜಿಲ್ಲೆಯ ತುಂಗಭದ್ರಾ ಜಲಾಶಯದ ಗರಿಷ್ಠ ಮಟ್ಟ 1633 ಅಡಿ. ಪ್ರಸ್ತುತ ನೀರಿನ ಮಟ್ಟ 1603.12 ಅಡಿ ಇದೆ. ಜಲಾಶಯದ ಒಟ್ಟು ಸಂಗ್ರಹ ಸಾಮರ್ಥ್ಯ 105.788 ಟಿಎಂಸಿ ಆಗಿದ್ದು, ಸದ್ಯ 25.826 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ 24 ಗಂಟೆಗಳ ಸರಾಸರಿ ಒಳಹರಿವು 4,814 ಕ್ಯೂಸೆಕ್, ಪ್ರಸ್ತುತ ಒಳಹರಿವು 4,620 ಕ್ಯೂಸೆಕ್ ಇದೆ. ಸರಾಸರಿ 522 ಕ್ಯೂಸೆಕ್ ನೀರನ್ನು ಕಾಲುವೆಗಳಿಗೆ ಬಿಡಲಾಗುತ್ತಿದ್ದು, ನದಿಗೆ ನೀರು ಬಿಡುಗಡೆ ಮಾಡಲಾಗುತ್ತಿಲ್ಲ.

ಹಾರಂಗಿ ಜಲಾಶಯ ನೀರಿನ ಮಟ್ಟ

ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2859 ಅಡಿ. ಪ್ರಸ್ತುತ ನೀರಿನ ಮಟ್ಟ 2847.90 ಅಡಿ ದಾಖಲಾಗಿದೆ. ಜಲಾಶಯಕ್ಕೆ 1,012 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, 180 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ.

ಹೇಮಾವತಿ ಜಲಾಶಯ ನೀರಿನ ಮಟ್ಟ

ಹಾಸನ ಜಿಲ್ಲೆಯ ಗೊರೂರು ಸಮೀಪದ ಹೇಮಾವತಿ ಜಲಾಶಯದ ಗರಿಷ್ಠ ಮಟ್ಟ 2922 ಅಡಿ (37 ಟಿಎಂಸಿ). ಪ್ರಸ್ತುತ ನೀರಿನ ಮಟ್ಟ 2903.77 ಅಡಿ ಇದ್ದು, ಜಲಾಶಯದಲ್ಲಿ 22.218 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯಕ್ಕೆ 1,383 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, 300 ಕ್ಯೂಸೆಕ್ ನೀರನ್ನು ಹೊರಹರಿಸಲಾಗುತ್ತಿದೆ. ಕಳೆದ ವರ್ಷ ಇದೇ ದಿನ ಜಲಾಶಯದ ನೀರಿನ ಮಟ್ಟ 2920.87 ಅಡಿ ಇದ್ದು, 36.108 ಟಿಎಂಸಿ ನೀರು ಸಂಗ್ರಹವಾಗಿತ್ತು. ಆಗ 8,714 ಕ್ಯೂಸೆಕ್ ಒಳಹರಿವು ಹಾಗೂ 5,350 ಕ್ಯೂಸೆಕ್ ಹೊರಹರಿವು ದಾಖಲಾಗಿತ್ತು.

ಇದನ್ನೂ ಓದಿ: ಇನ್ನೂ 100 ಅಡಿ ತಲುಪಿಲ್ಲ ಕೆಆರ್​ಎಸ್, ಕರ್ನಾಟಕದ ಡ್ಯಾಂಗಳ ಇಂದಿನ ನೀರಿನ ಮಟ್ಟದ ವಿವರ

ಮುಂಗಾರು ಮಳೆ ನಿರೀಕ್ಷಿತ ಮಟ್ಟದಲ್ಲಿ ಸುರಿಯದಿರುವುದರಿಂದ ರಾಜ್ಯದ ಬಹುತೇಕ ಜಲಾಶಯಗಳಲ್ಲಿ ನೀರಿನ ಸಂಗ್ರಹ ಇನ್ನೂ ಕಳೆದ ವರ್ಷದ ಮಟ್ಟವನ್ನು ತಲುಪಿಲ್ಲ. ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾದರೆ ಮಾತ್ರ ಜಲಾಶಯಗಳ ಒಳಹರಿವಿನಲ್ಲಿ ಗಣನೀಯ ಏರಿಕೆಯಾಗುವ ನಿರೀಕ್ಷೆಯಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಪ್ಪ ಇಟ್ಟ ಹೆಸರಿನಿಂದ ಹೊಸ ಉದ್ಯಮ ಆರಂಭಿಸಿದ ಅಪ್ಪು ಪುತ್ರಿ – Kannada News | Puneeth Rajkumar’s daughter Vanditha started small business

ಪುನೀತ್ ರಾಜ್​ಕುಮಾರ್ (Puneeth Rajkumar) ಅವರಿಗೆ ಉದ್ಯಮಗಳ ಬಗ್ಗೆ ಸಾಕಷ್ಟು ಆಸಕ್ತಿ ಇತ್ತು. ನಟರಾಗಿರುವ ಜೊತೆಗೆ ನಿರ್ಮಾಣ ಮತ್ತು ಸಂಗೀತ ಕ್ಷೇತ್ರದಲ್ಲಿ ಉದ್ಯಮವನ್ನು ಪುನೀತ್ ನಡೆಸುತ್ತಿದ್ದರು. ಜೊತೆಗೆ ಇತರೆ ಕೆಲವು ಉದ್ಯಮಗಳ ಮೇಲೂ ಸಹ ಅವರು ಹೂಡಿಕೆ ಮಾಡಿದ್ದರು. ಮಾತ್ರವಲ್ಲದೆ, ಅವರ ಅತ್ತಿಗೆ, ಶಿವರಾಜ್ ಕುಮಾರ್ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಸಹ ಬೇಕಿಂಗ್ ಉದ್ಯಮ ಆರಂಭಿಸುವಂತೆ ಅಪ್ಪು ತಮಗೆ ಹೇಳುತ್ತಿದ್ದುದಾಗಿ ಹಿಂದೆ ಹೇಳಿಕೊಂಡಿದ್ದರು. ಆದರೆ ಇದೀಗ ಪುನೀತ್ ರಾಜ್​​ಕುಮಾರ್ ಅವರ ಪುತ್ರಿಯೇ ಹೊಸ ಉದ್ಯಮ ಆರಂಭ ಮಾಡಿದ್ದಾರೆ. ಅದೂ ಅಪ್ಪ ತಮಗೆ ಇಟ್ಟ ಹೆಸರಿನಿಂದಲೇ ಉದ್ಯಮ ಆರಂಭಿಸಿರುವುದು ವಿಶೇಷ.

ಪುನೀತ್ ರಾಜ್​​ಕುಮಾರ್ ಅವರ ಕಿರಿಯ ಪುತ್ರಿ ವಂದಿತಾ ಅವರು ಬೇಕಿಂಗ್ ಉದ್ಯಮ ಆರಂಭಿಸಿದ್ದಾರೆ. ದೊಡ್ಡಮ್ಮ ಗೀತಾ ಶಿವರಾಜ್ ಕುಮಾರ್ ರೀತಿಯಲ್ಲಿಯೇ ವಂದಿತಾ ಅವರಿಗೂ ಸಹ ಬೇಕಿಂಗ್ ಬಗ್ಗೆ ಸಾಕಷ್ಟು ಆಸಕ್ತಿ ಮತ್ತು ನಿಪುಣತೆಯೂ ಇದೆ. ಹಾಗಾಗಿ ಇದೀಗ ಅವರೇ ಖುದ್ದು ಬೇಕಿಂಗ್ ಉದ್ಯಮಕ್ಕೆ ಕಾಲಿರಿಸಿದ್ದು, ಸಣ್ಣದಾಗಿ ಬ್ಯುಸಿನೆಸ್ ಪ್ರಾರಂಭ ಮಾಡಿದ್ದಾರೆ. ಅದಕ್ಕೆ ‘ನುಕಾಸ್ ಕೆಫೆ’ ಎಂದು ಹೆಸರಿಟ್ಟಿದ್ದಾರೆ. ಅಂದಹಾಗೆ ನುಕಾ ಎಂಬುದು, ವಂದಿತಾರನ್ನು ಅಪ್ಪು ಅವರು ಪ್ರೀತಿಯಿಂದ ಕರೆಯುತ್ತಿದ್ದ ಹೆಸರು.

ಕೇಕು, ಬಿಸ್ಕೆಟ್ಟುಗಳು ಸೇರಿದಂತೆ ಇನ್ನೂ ಹಲವು ಬೇಕ್ಡ್ ಐಟಂಗಳನ್ನು ವಂದಿತಾ ಮಾರಾಟ ಮಾಡುತ್ತಿದ್ದಾರೆ. ಆನ್​​ಲೈನ್ ಮೂಲಕ ಆರ್ಡರ್ ಮಾಡಿ ಖಾಸ್ಯಗಳನ್ನು ಖರೀದಿ ಮಾಡಬಹುದಾಗಿದೆ. ಕೆಫೆಗಾಗಿ ವಿಶೇಷ ವೆಬ್​​ಸೈಟ್ ಅನ್ನು ಸಹ ವಂದಿತಾ ಮಾಡಿಸಿದ್ದಾರೆ. ಖುದ್ದು ಅವರೇ ಮನೆಯಲ್ಲಿ ಖಾದ್ಯ ತಯಾರಿಸಿ ಅದನ್ನು ಆನ್​​ಲೈನ್​​ನಲ್ಲಿ ಮಾರಾಟ ಮಾಡುತ್ತಾರೆ ವಂದಿತಾ. ತಾವು ಒಬ್ಬರೇ ಈ ಖಾದ್ಯಗಳನ್ನು ತಯಾರಿಸುವ ಕಾರಣ, ಕೆಲವೊಮ್ಮೆ ಆರ್ಡರ್ ಹೆಚ್ಚಾದಾಗ ಡೆಲಿವರಿ ತಡ ಆಗಬಹುದು ಎಂದು ತಮ್ಮ ವೆಬ್​​ಸೈಟ್​​ನಲ್ಲಿ ಅವರು ಮೊದಲೇ ಹೇಳಿಬಿಟ್ಟಿದ್ದಾರೆ.

ಇದನ್ನೂ ಓದಿ:ಶಾಲಾ ಪಠ್ಯಪುಸ್ತಕದಲ್ಲಿ ಇರಲಿದೆ ಪುನೀತ್ ರಾಜ್​ಕುಮಾರ್ ಜೀವನದ ಪಾಠ

ವಂದಿತಾ ಅವರು ತಮ್ಮ ಪ್ರೀತಿ ಪಾತ್ರರಿಗೆ, ಆಪ್ತರಿಗಾಗಿ ಕೇಕು ಇನ್ನಿತರೆ ಖಾದ್ಯಗಳನ್ನು ತಯಾರಿಸುತ್ತಿದ್ದರಂತೆ. ಇತ್ತೀಚೆಗಷ್ಟೆ ತಮ್ಮ ಸಹೋದರ ವಿನಯ್ ರಾಜ್​ಕುಮಾರ್ ಅವರ ‘ಗ್ರಾಮಾಯಣ’ ಸಿನಿಮಾದ ಬಿಡುಗಡೆ ಸಂದರ್ಭದಲ್ಲಿ ವಂದಿತಾ ಅವರು ಅಣ್ಣನಿಗಾಗಿ ವಿಶೇಷ ಕೇಕ್ ತಯಾರಿಸಿದ್ದರು. ಅದರ ಮೇಲೆ ‘ಗ್ರಾಮಾಯಣ’ ಎಂದು ಸಹ ಬರೆದಿದ್ದರು. ಈ ಹವ್ಯಾಸವನ್ನೇ ಈಗ ಉದ್ಯಮವನ್ನಾಗಿ ಮಾಡಿಕೊಂಡಿದ್ದಾರೆ.

ಬೇಕಿಂಗ್ ಎಂಬುದು ವಂದಿತಾ ಅವರಿಗೆ ಹವ್ಯಾಸ ಆಗಿತ್ತಂತೆ ಈಗ ಹವ್ಯಾಸವನ್ನೇ ಬ್ಯುಸಿನೆಸ್ ಮಾಡಿಕೊಂಡಿದ್ದಾರೆ. ತಿರಮಿಸು, ಥರಹೇವಾರಿ ಕೇಕುಗಳು, ಬಿಸ್ಟೆಟ್ಟುಗಳು, ಬ್ರೆಡ್, ಬ್ರೌನಿ, ಚೀಸ್​ ಕೇಕ್, ಕಪ್ ಕೇಕ್ ಇನ್ನೂ ಹಲವು ಖಾದ್ಯಗಳನ್ನು ವಂದಿತಾ ರೆಡಿ ಮಾಡಿ ಗ್ರಾಹಕರು ಮನೆಗಳಿಗೆ ಕಳಿಸಿಕೊಡುತ್ತಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 9:48 am, Thu, 16 July 26

Source link

ಇಷ್ಟಪಟ್ಟು ಕಾರು ತಗೊಂಡೆ, ಇಎಂಐ ಕಟ್ಟೋದು ಕಷ್ಟ ಆಗ್ತಿದೆ: ಮೋಕ್ಷಿತಾ – Kannada News | Mokshitha Pai talks about her new car and EMI struggles

ಮೋಕ್ಷಿತಾ (Mokshita) ಅವರು ‘ಜಗದ್ಧಾತ್ರಿ’ ಹೆಸರಿನ ಧಾರಾವಾಹಿಯಲ್ಲಿ ನಟಿಸಲು ಆರಂಭಿಸಿದ್ದಾರೆ. ಅದರ ಜೊತೆಗೆ ಇದೀಗ ಮೋಕ್ಷಿತಾ ಹೊಸ ಸಿನಿಮಾನಲ್ಲಿ ಸಹ ನಟಿಸುತ್ತಿದ್ದಾರೆ. ಒಟ್ಟಾರೆ ಅವರಿಗೆ ಇದು ಡಬಲ್ ಧಮಾಕಾ ಆಗಿದೆ. ಅಂದಹಾಗೆ ಇತ್ತೀಚೆಗಷ್ಟೆ ಮೋಕ್ಷಿತಾ ಅವರು ತಮ್ಮಿಷ್ಟದ ಕಾರೊಂದನ್ನು ಸಹ ಖರೀದಿ ಮಾಡಿದ್ದಾರೆ. ಮಹಿಂದ್ರಾ ಕಂಪೆನಿಯ ಎಲೆಕ್ರಿಕ್ ಕಾರೊಂದನ್ನು ಸಹ ನಟಿ ಖರೀದಿಸಿದ್ದಾರೆ. ಈ ಬಗ್ಗೆ ಟಿವಿ9 ಜೊತೆಗೆ ಮಾತನಾಡಿರುವ ನಟಿ ಮೋಕ್ಷಿತಾ, ತಮಗೆ ಕಾರು ಬಹಳ ಇಷ್ಟ, ಆ ಕಾರು ಬಹಳ ಇಷ್ಟವಾಗಿ ಖರೀದಿ ಮಾಡಿದೆ. ಈಗ ತಿಂಗಳಿಗೊಮ್ಮೆ ಇಎಂಐ ಕಟ್ಟಬೇಕು, ಅದೇ ಬೇಸರ ಎಂದಿದ್ದಾರೆ. ನಟಿ ಹೇಳಿರುವುದೇನು? ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Kids Sleep: ಸ್ಕೂಲ್‌ನಿಂದ ಬಂದ ತಕ್ಷಣ ಮಕ್ಕಳನ್ನು ಮಲಗಿಸಬಹುದೇ? – Kannada News | Should kids sleep after returning from school

ಶಾಲೆಯಿಂದ ಮನೆಗೆ ಬಂದ ಮಕ್ಕಳು (Children) ತುಂಬಾ ದಣಿದಂತೆ ಕಾಣುವುದು ಸಾಮಾನ್ಯ. ಬ್ಯಾಗ್ ಹೊತ್ತು, ತರಗತಿಗಳಲ್ಲಿ ಹಲವು ಗಂಟೆಗಳ ಕಾಲ ಕುಳಿತುಕೊಳ್ಳುವುದು, ಆಟ-ಪಾಠಗಳಲ್ಲಿ ಭಾಗವಹಿಸುವುದು, ಹೋಮ್‌ವರ್ಕ್‌ನ ಒತ್ತಡ ಇವೆಲ್ಲವೂ ಮಕ್ಕಳನ್ನು ಆಯಾಸಗೊಳಿಸುತ್ತವೆ. ಹೀಗಾಗಿ ಅನೇಕ ಪೋಷಕರು, “ಸ್ವಲ್ಪ ಹೊತ್ತು ಮಲಗಿದರೆ ದಣಿವು ಕಡಿಮೆಯಾಗುತ್ತದೆ” ಎಂದು ಮಕ್ಕಳನ್ನು ಮಲಗಲು ಬಿಡುತ್ತಾರೆ. ಆದರೆ ಶಾಲೆಯಿಂದ ಬಂದ ತಕ್ಷಣ ಮಕ್ಕಳನ್ನು ಮಲಗಿಸುವುದು ಎಲ್ಲ ಸಂದರ್ಭದಲ್ಲೂ ಸರಿಯಾದ ಅಭ್ಯಾಸವಲ್ಲ ಎಂದು ತಜ್ಞರು ಎಚ್ಚರಿಸುತ್ತಾರೆ.

ತಜ್ಞರ ಪ್ರಕಾರ, ಮಕ್ಕಳು ಶಾಲೆಯಿಂದ ಮನೆಗೆ ಬಂದ ಕೂಡಲೇ ಎರಡು-ಮೂರು ಗಂಟೆಗಳ ಕಾಲ ಮಲಗಿದರೆ ರಾತ್ರಿ ನಿದ್ರೆಯ ಸಮಯ ಹಾಳಾಗುವ ಸಾಧ್ಯತೆ ಹೆಚ್ಚಿರುತ್ತದೆ. ರಾತ್ರಿ ತಡವಾಗಿ ಮಲಗುವುದು, ಬೆಳಗ್ಗೆ ಎದ್ದೇಳಲು ಕಷ್ಟವಾಗುವುದು ಮತ್ತು ಮರುದಿನ ಶಾಲೆಯಲ್ಲಿ ಏಕಾಗ್ರತೆ ಕಡಿಮೆಯಾಗುವುದು ಸೇರಿದಂತೆ ಹಲವು ಸಮಸ್ಯೆಗಳು ಕಾಣಿಸಬಹುದು. ಆದ್ದರಿಂದ ಶಾಲೆಯ ನಂತರದ ನಿದ್ರೆಯನ್ನು ನಿಯಂತ್ರಿಸುವುದು ಮುಖ್ಯ.

ಒಂದು ವೇಳೆ ಮಗು ತುಂಬಾ ದಣಿದಿದ್ದರೆ ಅಥವಾ ಆರೋಗ್ಯ ಸರಿಯಿಲ್ಲದಿದ್ದರೆ, 20 ರಿಂದ 30 ನಿಮಿಷಗಳವರೆಗೆ ಮಾತ್ರ ವಿಶ್ರಾಂತಿ ಪಡೆಯಲು ಅವಕಾಶ ನೀಡಬಹುದು. ಇದಕ್ಕಿಂತ ಹೆಚ್ಚು ಹೊತ್ತು ಮಲಗಿದರೆ ದೇಹದ ಜೈವಿಕ ಗಡಿಯಾರ (Body Clock) ಅಸ್ತವ್ಯಸ್ತವಾಗುವ ಸಾಧ್ಯತೆ ಇರುತ್ತದೆ. ಪರಿಣಾಮವಾಗಿ ರಾತ್ರಿ ಸಮಯದಲ್ಲಿ ನಿದ್ರೆ ಬರದೆ ಮಗು ಮೊಬೈಲ್, ಟಿವಿ ಅಥವಾ ಇತರ ಚಟುವಟಿಕೆಗಳತ್ತ ಹೆಚ್ಚು ಗಮನ ಹರಿಸಬಹುದು.

ಮಕ್ಕಳು ಮನೆಗೆ ಬಂದ ಬಳಿಕ ಮೊದಲು ಸ್ವಲ್ಪ ನೀರು ಕುಡಿಯುವುದು, ಪೌಷ್ಟಿಕ ತಿಂಡಿ ತಿನ್ನುವುದು ಮತ್ತು 30-45 ನಿಮಿಷಗಳ ಕಾಲ ಆಟವಾಡುವುದು ಅಥವಾ ದೈಹಿಕ ಚಟುವಟಿಕೆಯಲ್ಲಿ ತೊಡಗುವುದು ಉತ್ತಮ. ಇದರಿಂದ ಅವರ ದಣಿವು ಸಹಜವಾಗಿ ಕಡಿಮೆಯಾಗುತ್ತದೆ. ನಂತರ ಹೋಮ್‌ವರ್ಕ್ ಅಥವಾ ಓದಿಗೆ ಸಮಯ ಮೀಸಲಿಡಬಹುದು.

ಸಂಬಂಧ ಹಾಳಾಗದಿರಲು 35 ವರ್ಷದೊಳಗೆ ಈ 4 ವೈವಾಹಿಕ ಪಾಠಗಳನ್ನು ಕಲಿಯಿರಿ

ಮಕ್ಕಳಿಗೆ ಬೇಕಾಗುವ ನಿದ್ರೆಯ ಪ್ರಮಾಣ ಅವರ ವಯಸ್ಸಿನ ಮೇಲೆ ಅವಲಂಬಿತವಾಗಿರುತ್ತದೆ. 6 ರಿಂದ 12 ವರ್ಷದ ಮಕ್ಕಳಿಗೆ ಪ್ರತಿದಿನ ಸುಮಾರು 9 ರಿಂದ 12 ಗಂಟೆಗಳ ನಿದ್ರೆ ಇದ್ದರೆ ಒಳ್ಳೆಯದು. 13 ರಿಂದ 18 ವರ್ಷದ ಹದಿಹರೆಯದವರಿಗೆ 8 ರಿಂದ 10 ಗಂಟೆಗಳ ನಿದ್ರೆ ಸಾಕಷ್ಟು ಎಂದು ನಿದ್ರಾ ತಜ್ಞರು ಶಿಫಾರಸು ಮಾಡುತ್ತಾರೆ. ಈ ಪ್ರಮಾಣದ ನಿದ್ರೆ ದೊರೆತರೆ ಮಕ್ಕಳ ಮೆದುಳಿನ ಬೆಳವಣಿಗೆ, ನೆನಪಿನ ಶಕ್ತಿ, ಕಲಿಕೆಯ ಸಾಮರ್ಥ್ಯ, ರೋಗನಿರೋಧಕ ಶಕ್ತಿ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ.

ಪೋಷಕರು ಮತ್ತೊಂದು ವಿಷಯಕ್ಕೂ ಗಮನ ಕೊಡಬೇಕು. ರಾತ್ರಿ ಮಲಗುವ ಮುನ್ನ ಮೊಬೈಲ್, ಟ್ಯಾಬ್ಲೆಟ್ ಅಥವಾ ಟಿವಿಯ ಬಳಕೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು. ಪರದೆಗಳಿಂದ ಹೊರಬರುವ ನೀಲಿ ಬೆಳಕು (Blue Light) ನಿದ್ರೆಗೆ ಅಗತ್ಯವಾದ ಮೆಲಟೊನಿನ್ ಹಾರ್ಮೋನ್ ಉತ್ಪಾದನೆಗೆ ಅಡ್ಡಿಯಾಗುತ್ತದೆ. ಇದರಿಂದ ಮಕ್ಕಳು ತಡವಾಗಿ ನಿದ್ರೆಗೆ ಜಾರುವ ಸಾಧ್ಯತೆ ಹೆಚ್ಚಾಗುತ್ತದೆ.

ಒಟ್ಟಾರೆ, ಶಾಲೆಯಿಂದ ಬಂದ ತಕ್ಷಣ ಮಕ್ಕಳನ್ನು ದೀರ್ಘ ಸಮಯ ಮಲಗಿಸುವ ಬದಲು, ಅವರಿಗೆ ಆರೋಗ್ಯಕರ ತಿಂಡಿ, ಸ್ವಲ್ಪ ವಿಶ್ರಾಂತಿ, ಆಟ ಮತ್ತು ನಿಯಮಿತ ದಿನಚರಿಯನ್ನು ರೂಢಿಸುವುದು ಉತ್ತಮ. ಅಗತ್ಯವಿದ್ದರೆ ಕೇವಲ 20-30 ನಿಮಿಷಗಳ ಚಿಕ್ಕ ನಿದ್ದೆ ಸಾಕು. ಆದರೆ ಮಕ್ಕಳಿಗೆ ವಯಸ್ಸಿಗೆ ತಕ್ಕಷ್ಟು ರಾತ್ರಿ ನಿದ್ರೆ ದೊರೆಯುವಂತೆ ಪೋಷಕರು ಗಮನಹರಿಸಿದರೆ ಅವರ ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ಉತ್ತಮವಾಗಿರುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version