ತಿರುವಿನಲ್ಲಿ ವೇಗವಾಗಿ ಬಂದ ಗೂಡ್ಸ್ ಆಟೋ ಜಸ್ಟ್ ಮಿಸ್!

ಕೊಡಗು, ಮೇ 31: ಮಡಿಕೇರಿ ಬಳಿಯ ಬೋಯಿಕೇರಿ ಬಳಿ ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ಕೆಎಸ್‌ಆರ್‌ಟಿಸಿ (KSRTC) ಬಸ್ ಚಾಲಕನ ಸಮಯಪ್ರಜ್ಞೆಯಿಂದಾಗಿ ಭೀಕರ ರಸ್ತೆ ಅಪಘಾತವೊಂದು ಜಸ್ಟ್ ಮಿಸ್ ಆಗಿದ್ದು, ಭಾರೀ ಅನಾಹುತ ತಪ್ಪಿದೆ. ಮಡಿಕೇರಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ತಿರುವಿನಲ್ಲಿ ಗೂಡ್ಸ್ ಆಟೋವೊಂದು ಅತಿ ವೇಗವಾಗಿ ಬಂದಿದೆ. ಈ ವೇಳೆ ಎದುರಿಗಿದ್ದ ಕಾರಿಗೆ ಅಪ್ಪಳಿಸುವುದನ್ನು ತಪ್ಪಿಸಲು ಆಟೋ ಚಾಲಕ ವಾಹನವನ್ನು ತಕ್ಷಣವೇ ಬಲಬದಿಗೆ ತಿರುಗಿಸಿದ್ದಾನೆ. ಅದೇ ಸಮಯದಲ್ಲಿ ಎದುರಿನಿಂದ ಬರುತ್ತಿದ್ದ ಸಾರಿಗೆ ಬಸ್‌ಗೆ ಆಟೋ ಡಿಕ್ಕಿಯಾಗುವ ಸಾಧ್ಯತೆ ಇತ್ತು. ಆದರೆ, ಕೆಎಸ್‌ಆರ್‌ಟಿಸಿ ಚಾಲಕ ತಕ್ಷಣವೇ ಬ್ರೇಕ್ ಹಾಕಿ ಬಸ್ ಪಕ್ಕಕ್ಕೆ ಸರಿಸಿದ್ದರಿಂದ ದೊಡ್ಡ ದುರಂತ ತಪ್ಪಿದೆ. ಈ ಇಡೀ ರೋಮಾಂಚನಕಾರಿ ಅಪಘಾತದ ದೃಶ್ಯವು ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ನೂತನ ಮುಖ್ಯಮಂತ್ರಿ ಆಯ್ಕೆ ಬೆನ್ನಲ್ಲೇ ಡಿಸಿಎಂ ಸ್ಥಾನಕ್ಕೆ ಪೈಪೋಟಿ, ಮಂತ್ರಿಗಿರಿಗೂ ಹೆಚ್ಚಿದ ಲಾಬಿ

ಬೆಂಗಳೂರು, ಮೇ 31: ನೂತನ ಮುಖ್ಯಮಂತ್ರಿಯ ಆಯ್ಕೆ ಬೆನ್ನಲ್ಲಿಯೇ ಡಿಸಿಎಂ ಮತ್ತು ಸಚಿವ ಸ್ಥಾನಕ್ಕಾಗಿ ರಾಜ್ಯ ಕಾಂಗ್ರೆಸ್​​ (Congress) ಪಾಳಯದಲ್ಲಿ ಲಾಬಿ ಜೋರಾಗಿ ನಡೆಯುತ್ತಿದೆ. ಉಪ ಮುಖ್ಯಮಂತ್ರಿ ಸ್ಥಾನಗಳ ವಿಚಾರದಲ್ಲಿ ಇನ್ನೂ ಪ್ರಸ್ತಾಪ ಬಂದಿಲ್ಲ. ಪ್ರಸ್ತಾಪ ಬಂದ ಬಳಿಕ ಎಷ್ಟು ಡಿಸಿಎಂ, ಎಷ್ಟು ಸಚಿವರು ಅಂತಾ ತೀರ್ಮಾನ ಆಗುತ್ತೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆ ನಡುವೆಯೂ ಪಟ್ಟಕ್ಕಾಗಿ ಪೈಪೋಟಿ ನಡೆದಿದೆ. ಅದರಲ್ಲಿ ದಲಿತ ಕೋಟಾದಡಿ ಉಪ ಮುಖ್ಯಮಂತ್ರಿ ಸ್ಥಾನಕ್ಕಾಗಿ ತೀವ್ರ ರೇಸ್​ ಶುರುವಾಗಿರುವ ಮಾಹಿತಿ ಲಭಿಸಿದೆ.

ಪರಮೇಶ್ವರ್​​- ಪ್ರಿಯಾಂಕ್​​ ಖರ್ಗೆ ನಡುವೆ ರೇಸ್​​

ದಲಿತ ಕೋಟಾದಡಿ ಉಪ ಮುಖ್ಯಮಂತ್ರಿ ಸ್ಥಾನಕ್ಕಾಗಿ ಪ್ರಿಯಾಂಕ್ ಖರ್ಗೆ ಹಾಗೂ ಡಾ.ಜಿ.ಪರಮೇಶ್ವರ್ ನಡುವೆ ಪೈಪೋಟಿ ಏರ್ಪಟ್ಟಿದೆ. ಉಪ ಮುಖ್ಯಮಂತ್ರಿ ಸ್ಥಾನ ನೀಡುವ ಸಂಬಂಧ ಮೊನ್ನೆ ದೆಹಲಿಗೆ ತೆರಳಿದ್ದಾಗ ಪರಮೇಶ್ವರ್ ಹೈಕಮಾಡ್​​ ನಾಯರಿಗೆ ಒತ್ತಾಯ ಮಾಡಿ ಬಂದಿದ್ದಾರೆ. ಡಿಸಿಎಂ ಹುದ್ದೆ ಜೊತೆ ಪ್ರಮುಖ ಖಾತೆ ಕೊಡಿ ಎಂದು ಪರಮೇಶ್ವರ್ ಪಟ್ಟು ಹಿಡಿದಿದ್ದು, ಇಲ್ಲದಿದ್ದರೆ ಮಂತ್ರಿಸ್ಥಾನವೇ ಬೇಡ ಶಾಸಕನಾಗಿಯೇ ಇರುತ್ತೇನೆ ಎಂದು ಹೈಕಮಾಂಡ್ ಮುಂದೆ ತಮ್ಮ ನಿಲುವು ಪ್ರಕಟಿಸಿದ್ದಾರೆ. ಕಳೆದ ಬಾರಿ ನೀಡಿದ್ದ ಗೃಹ ಇಲಾಖೆಯೂ ಬೇಡ ಎಂದು ಅವರು ಹೇಳಿದ್ದು, ಎಐಸಿಸಿ ಅಧ್ಯಕ್ಷ ಖರ್ಗೆ ಬಳಿಯೇ ನೇರವಾಗಿ ಅಸಮಾಧಾನ ಹೊರಹಾಕಿದ್ದಾರೆ. ಇತ್ತ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿದ್ದ ಪ್ರಿಯಾಂಕ್​​ ಖರ್ಗೆ ಅವರ ಹೆಸರೂ ಡಿಸಿಎಂ ರೇಸ್​​ನಲ್ಲಿ ಕೇಳಿಬಂದಿರೋದು ಭಾರಿ ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ಯಾರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ?; ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೊಟ್ರು ಬಿಗ್​​ ಅಪ್ಡೇಟ್​​

ಸಿದ್ದರಾಮಯ್ಯರಿಂದ ಕೆಲವರ ಹೆಸರು ಶಿಫಾರಸ್ಸು

ಡಿಸಿಎಂ ಹುದ್ದೆ ಮಾತ್ರವಲ್ಲದೆ ಸಚಿವ ಸ್ಥಾನಕ್ಕಾಗಿಯೂ ಆಕಾಂಕ್ಷಿಗಳ ಪೈಪೋಟಿ ಜೋರಾಗಿಯೇ ನಡೆಯುತ್ತಿದೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರಾಗಿದ್ದವರು ಮತ್ತೆ ಸ್ಥಾನ ಗಿಟ್ಟಿಸುವ ಪ್ರಯತ್ನದಲ್ಲಿದ್ದರೆ, ಹಿರಿಯರಾಗಿಯೂ ಸ್ಥಾನ ಸಿಗದವರು ಕೂಡ ಲಾಬಿಗೆ ಇಳಿದಿದ್ದಾರೆ. ಕೆಲ ಹೊಸ ಸಚಿವರೂ ಮಂತ್ರಿಗಿರಿ ಮೇಲೆ ಕಣ್ಣಿಟ್ಟಿರುವ ಕಾರಣ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಈ ನಡುವೆ ಸಚಿವ ಸ್ಥಾನಕ್ಕೆ ಹೈಕಮಾಂಡ್​​ಗೆ ಕೆಲ ಹೆಸರುಗಳನ್ನು ಸಿದ್ದರಾಮಯ್ಯ ಶಿಫಾರಸ್ಸು ಮಾಡಿದ್ದಾರೆ ಎನ್ನಲಾಗಿದೆ. ಅವರು ಯಾರ್ಯಾರು ಎಂಬುದರ ಮಾಹಿತಿ ಟಿವಿ9ಗೆ ಲಭ್ಯವಾಗಿದೆ.

ಯಾರ್ಯಾರ ಹೆಸರು ಶಿಫಾರಸ್ಸು?

ಎ.ಎಸ್. ಪೊನ್ನಣ್ಣ, ಶಿವರಾಜ್ ತಂಗಡಗಿ, ಪುಟ್ಟರಂಗ ಶೆಟ್ಟಿ, ಕೆ. ವೆಂಕಟೇಶ್, ಬಸವರಾಜ್ ರಾಯರೆಡ್ಡಿ, ಬಿ. ಕೆ. ಹರಿಪ್ರಸಾದ್, ಸಂತೋಷ್ ಲಾಡ್, ಹೆಚ್. ಸಿ. ಮಹದೇವಪ್ಪ, ಜಮೀರ್ ಅಹಮದ್ ಖಾನ್ ಹೆಸರುಗಳು ಸಿದ್ದರಾಮಯ್ಯ ಶಿಫಾರಸು ಮಾಡಿರುವ ಪಟ್ಟಿಯಲ್ಲಿ ಇವೆ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ವಾರಣಾಸಿ’ ಸಿನಿಮಾಗೆ ಲೀಕ್ ಕಾಟ; ಭದ್ರತೆ ಹೆಚ್ಚಿಸಿದ ನಿರ್ದೇಶಕ ರಾಜಮೌಳಿ

ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ಹಾಗೂ ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು (Mahesh Babu) ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ, ಜಾಗತಿಕ ಮಟ್ಟದಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿರುವ ‘ವಾರಣಾಸಿ’ (Varanasi) ಸಿನಿಮಾದ ಸೆಟ್‌ನಿಂದ ಹೊಸ ಫೋಟೋವೊಂದು ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ. ಚಿತ್ರತಂಡ ಎಷ್ಟು ಮುನ್ನೆಚ್ಚರಿಕೆ ವಹಿಸಿದರೂ ಸೆಟ್‌ನ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಈಗ ರಾಜಮೌಳಿ (SS Rajamouli) ತಂಡಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ವರದಿಗಳ ಪ್ರಕಾರ, ಮೇ 26ರಂದು ಸೋರಿಕೆಯಾದ ಈ ಹೊಸ ಫೋಟೋದಲ್ಲಿ ಸಿನಿಮಾದ ಅದ್ದೂರಿ ಸೆಟ್ ವಿನ್ಯಾಸ ಕಣ್ಣಿಗೆ ಕಟ್ಟುವಂತಿದೆ. ಬೃಹತ್ ಬ್ಲೂ-ಸ್ಕ್ರೀನ್ ಹಿನ್ನೆಲೆಯೊಂದಿಗೆ ಕಲ್ಲಿನ ಕೆತ್ತನೆಗಳು ಮತ್ತು ಕಲಾತ್ಮಕವಾದ ಕಲ್ಲಿನ ಕಂಬಗಳು ಈ ಫೋಟೋದಲ್ಲಿ ಕಾಣಿಸಿಕೊಂಡಿವೆ. ಇದು ಚಿತ್ರದ ಅತ್ಯಂತ ಪ್ರಮುಖ ಭಾಗವಾದ ‘ಉಗ್ರಭಟ್ಟಿ ಗುಹೆಗಳ’ ಸೀಕ್ವೆನ್ಸ್‌ನ ಸೆಟ್ ಎನ್ನಲಾಗಿದೆ. ಈಗಾಗಲೇ ಬಿಡುಗಡೆಯಾಗಿರುವ ಮಹೇಶ್ ಬಾಬು ಹಾಗೂ ಪ್ರಿಯಾಂಕಾ ಚೋಪ್ರಾ ಅವರ ಕ್ಯಾರೆಕ್ಟರ್ ಪೋಸ್ಟರ್‌ಗಳಲ್ಲಿ ಈ ಗುಹೆಯ ಸಣ್ಣ ಝಲಕ್ ಕಾಣಿಸಿತ್ತು. ಆದರೆ ಈಗ ಲೀಕ್ ಆಗಿರುವ ಫೋಟೋ ಇಡೀ ಸೆಟ್‌ನ ಭವ್ಯತೆಯನ್ನು ಬಹಿರಂಗಪಡಿಸಿದೆ.

ವರದಿಗಳ ಪ್ರಕಾರ, ಈ ಉಗ್ರಭಟ್ಟಿ ಗುಹೆಯ ಸೀಕ್ವೆನ್ಸ್ ಹಿಂದೂ ಪುರಾಣಗಳ ಉಗ್ರ ದೇವತೆಯಾದ ಮಾತಾ ಛಿನ್ನಮಸ್ತಾ ದೇವಿಯ ಸುತ್ತ ಹೆಣೆಯಲಾಗಿದೆ. ಸ್ವಯಂತ್ಯಾಗ, ಪರಿವರ್ತನೆ ಮತ್ತು ಬ್ರಹ್ಮಾಂಡದ ಸಮತೋಲನದ ಸಂಕೇತವಾಗಿರುವ ಈ ದೇವತೆಯ ಕಥೆ ಚಿತ್ರದ ಕಥಾಹಂದರಕ್ಕೆ ಬಹಳ ಮುಖ್ಯವಾಗಿದೆ. ಸಿನಿಮಾದಲ್ಲಿ ಮಹೇಶ್ ಬಾಬು ಅವರ ಪಾತ್ರವು ದುಷ್ಟ ಶಕ್ತಿಯನ್ನು ಸೋಲಿಸಲು ಈ ದೇವತೆಯ ದೈವಿಕ ಅನುಗ್ರಹವನ್ನು ಪಡೆಯಲು ಈ ಗುಹೆಗೆ ಭೇಟಿ ನೀಡುತ್ತದೆ ಎಂದು ಹೇಳಲಾಗುತ್ತಿದೆ.

ಕೆಲವು ತಿಂಗಳುಗಳ ಹಿಂದೆಯಷ್ಟೇ ವಾರಣಾಸಿ ಶೆಡ್ಯೂಲ್‌ನಲ್ಲಿ ಮಹೇಶ್ ಬಾಬು ಮತ್ತು ಪೃಥ್ವಿರಾಜ್ ಸುಕುಮಾರನ್ ಒಟ್ಟಿಗೆ ಇರುವ ವಿಡಿಯೋವೊಂದು ಲೀಕ್ ಆಗಿತ್ತು. ಇದರಿಂದ ನಿರ್ದೇಶಕ ರಾಜಮೌಳಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಇನ್ನುಮುಂದೆ ಸೆಟ್‌ನಿಂದ ಯಾವುದೇ ಮಾಹಿತಿ ಹೊರಹೋಗಬಾರದು ಎಂದು ಚಿತ್ರದ ಇಡೀ ತಂಡಕ್ಕೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿ, ಮೊಬೈಲ್ ಬಳಕೆಯ ಮೇಲೆಯೂ ನಿಯಂತ್ರಣ ಹೇರಿದ್ದರು.

ಇದನ್ನೂ ಓದಿ: ‘ವಾರಣಾಸಿ’ ಶೂಟಿಂಗ್​​ಗೆ 150 ಟ್ಯಾಂಕರ್ ನೀರು ಕೇಳಿದ ರಾಜಮೌಳಿ; ಶಾಕ್ ಕೊಟ್ಟ ಅಧಿಕಾರಿಗಳು

ಆದರೆ, ಇಷ್ಟೆಲ್ಲಾ ಕಟ್ಟುನಿಟ್ಟಿನ ಭದ್ರತೆಯ ನಡುವೆಯೂ ಚಿತ್ರದ ಕಥೆಗೆ ಅತ್ಯಂತ ಮುಖ್ಯವಾಗಿರುವ ಉಗ್ರಭಟ್ಟಿ ಗುಹೆಯ ದೃಶ್ಯಗಳು ಲೀಕ್ ಆಗಿರುವುದು ನಿರ್ಮಾಪಕರ ಆತಂಕಕ್ಕೆ ಕಾರಣವಾಗಿದೆ. ಸಾಹಸ ಪ್ರಧಾನವಾಗಿರುವ ಈ ಪ್ಯಾನ್-ವರ್ಲ್ಡ್ ಸಿನಿಮಾವನ್ನು ಒಡಿಶಾ, ಆಫ್ರಿಕಾ ಮತ್ತು ಹೈದರಾಬಾದ್‌ನ ವಿವಿಧ ಭಾಗಗಳಲ್ಲಿ ಅದ್ದೂರಿಯಾಗಿ ಚಿತ್ರೀಕರಿಸಲಾಗುತ್ತಿದೆ. 2027ರಲ್ಲಿ ಈ ಸಿನಿಮಾ ವಿಶ್ವಾದ್ಯಂತ ತೆರೆಗೆ ಬರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮೋದಿ ‘ಮನ್ ಕಿ ಬಾತ್’ 134ನೇ ಸಂಚಿಕೆ: ಕ್ರೀಡಾ ತಾರೆಗಳ ಕೊಂಡಾಡಿದ ಪ್ರಧಾನಿ; ಚೋಳರ ಕಾಲದ ವಿಗ್ರಹ ವಾಪಸಾತಿಗೆ ಹೆಮ್ಮೆ

ನವದೆಹಲಿ, ಮೇ 31: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ತಮ್ಮ ಮನ್ ಕೀ ಬಾತ್​ನ 134ನೇ ಸಂಚಿಕೆಯಲ್ಲಿ (Mann Ki Baat, 13th Episode) ಭಾರತೀಯ ಕ್ರೀಡಾ ಪ್ರತಿಭೆಗಳ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿ, ಕೆಲ ಸಾಧಕರೊಂದಿಗೆ ಸಂವಾದ ಕೂಡ ನಡೆಸಿದ್ದಾರೆ. ಕ್ರೀಡಾ ಜಗತ್ತಿನಲ್ಲಿ ಹೊಸ ದಾಖಲೆಗಳನ್ನು ಬರೆದ ಭಾರತದ ಯುವ ಪ್ರತಿಭೆಗಳನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಇದರೊಂದಿಗೆ ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಮರಳಿ ದೇಶಕ್ಕೆ ತರುವಲ್ಲಿ ಯಶಸ್ವಿಯಾಗಿರುವುದನ್ನು ದೇಶದ ಜನರೊಂದಿಗೆ ಹಂಚಿಕೊಂಡರು.

ರಾಷ್ಟ್ರೀಯ ದಾಖಲೆ ಬರೆದ ಕ್ರೀಡಾಪಟುಗಳಿಗೆ ಪ್ರಧಾನಿ ಶ್ಲಾಘನೆ

ಇತ್ತೀಚಿನ ಕ್ರೀಡಾಕೂಟಗಳಲ್ಲಿ ಅದ್ಭುತ ಪ್ರದರ್ಶನ ನೀಡಿ, ಹಳೆಯ ದಾಖಲೆಗಳನ್ನು ಮುರಿದು ಹೊಸ ಇತಿಹಾಸ ಸೃಷ್ಟಿಸಿದ ನಾಲ್ಕು ಪ್ರಮುಖ ಅಥ್ಲೀಟ್‌ಗಳನ್ನು ಪ್ರಧಾನಿ ಮೋದಿ ಅವರು ವಿಶೇಷವಾಗಿ ಸ್ಮರಿಸಿದರು. ಗುರಿಂದರ್​ವೀರ್ ಸಿಂಗ್, ವಿಶಾಲ್ ಕುಮಾರ್, ತೇಜಸ್ವಿನ್ ಶಂಕರ್, ದೇವ್ ಮೀನಾ ಅವರ ಸಾಧನೆಗೆ ಹೆಮ್ಮೆ ಪಟ್ಟರು. ಟ್ರ್ಯಾಕ್ ರೇಸಿಂಗ್​ನಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ ಗುರಿಂದರ್ ವೀರ್ ಸಿಂಗ್ (Gurindervir Singh) ಅವರ ವೇಗ ಮತ್ತು ಸಮರ್ಪಣಾ ಭಾವವನ್ನು ಪ್ರಧಾನಿಗಳು ಕೊಂಡಾಡಿದರು.

ಕಠಿಣ ಪರಿಶ್ರಮದಿಂದ ಕ್ರೀಡಾ ಕ್ಷೇತ್ರದಲ್ಲಿ ದೇಶದ ಕೀರ್ತಿ ಹೆಚ್ಚಿಸಿದ ವಿಶಾಲ್ ಕುಮಾರ್ (Vishal Kumar) ಅವರ ಸಾಧನೆ ಯುವಕರಿಗೆ ಪ್ರೇರಣೆ ಎಂದರು. ಹೈಜಂಪ್ ಮತ್ತು ಡೆಕಾಥ್ಲಾನ್‌ನಲ್ಲಿ ಸತತವಾಗಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ತೇಜಸ್ವಿನ್ ಶಂಕರ್ (Tejaswin Shankar) ಅವರ ಕ್ರೀಡಾ ಮನೋಭಾವವನ್ನು ಶ್ಲಾಘಿಸಿದರು. ಪೋಲ್ ವಾಲ್ಟ್ (Pole Vault) ಸ್ಪರ್ಧೆಯಲ್ಲಿ ಹೊಸ ರಾಷ್ಟ್ರೀಯ ದಾಖಲೆ ಬರೆದ ಮಧ್ಯಪ್ರದೇಶದ ಯುವ ಪ್ರತಿಭೆ ದೇವ್ ಮೀನಾ ಶಂಕರ್ ಅವರ ಸಾಧನೆಯನ್ನು ಪ್ರಧಾನಿ ಮುಕ್ತವಾಗಿ ಜನರಿಗೆ ಪರಿಚಯಿಸಿದರು.

ಇದನ್ನೂ ಓದಿ: ಹಿಮಾಚಲ ಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ: 8 ಮಂದಿ ಸಾವು, ಮೃತರ ಪೈಕಿ ಬೆಂಗಳೂರು ಮೂಲದ ಪ್ರವಾಸಿಗರೂ ಇರುವ ಶಂಕೆ

“ನಮ್ಮ ಯುವ ಕ್ರೀಡಾಪಟುಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಮತ್ತು ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಹಳೆಯ ದಾಖಲೆಗಳನ್ನು ಧೂಳೀಪಟ ಮಾಡುತ್ತಿದ್ದಾರೆ. ಈ ಪ್ರತಿಯೊಬ್ಬ ಸಾಧಕನ ಯಶೋಗಾಥೆಯೂ ಭಾರತದ ಕ್ರೀಡಾ ಭವಿಷ್ಯದ ಬಲವಾದ ಹೆಜ್ಜೆಯಾಗಿದೆ.” ಎಂದು ಪ್ರಧಾನಿ ಸಂತಸ ವ್ಯಕ್ತಪಡಿಸಿದರು.

ಭಾರತಕ್ಕೆ ಮರಳಿದ ಚೋಳರ ಕಾಲದ ಅಮೂಲ್ಯ ಕಲಾಕೃತಿ

ಸಾಂಸ್ಕೃತಿಕ ರಂಗದಲ್ಲಿ ಭಾರತ ಸಾಧಿಸಿರುವ ಮತ್ತೊಂದು ದೊಡ್ಡ ಯಶಸ್ಸನ್ನು ಪ್ರಕಟಿಸಿದ ಪ್ರಧಾನಿ ಮೋದಿ, ತಮಿಳುನಾಡಿನ ಪ್ರಸಿದ್ಧ ಚೋಳರ ರಾಜವಂಶದ (Chola Era) ಕಾಲಕ್ಕೆ ಸೇರಿದ ಪುರಾತನ ಮತ್ತು ಅತ್ಯಂತ ಅಪರೂಪದ ಕಲಾಕೃತಿಯನ್ನು ಯಶಸ್ವಿಯಾಗಿ ಭಾರತಕ್ಕೆ ಮರಳಿ ತರಲಾಗಿದೆ ಎಂದು ತಿಳಿಸಿದರು.

ರಾಷ್ಟ್ರೀಯ ಹೆಮ್ಮೆಯ ವಿಷಯ: ಈ ಕಲಾಕೃತಿಯನ್ನು ಈ ಹಿಂದೆ ಭಾರತದಿಂದ ಕಾನೂನುಬಾಹಿರವಾಗಿ ವಿದೇಶಕ್ಕೆ ಸಾಗಿಸಲಾಗಿತ್ತು. ಜಾಗತಿಕ ರಾಜತಾಂತ್ರಿಕ ಪ್ರಯತ್ನಗಳು ಮತ್ತು ಕಟ್ಟುನಿಟ್ಟಾದ ನಿಯಮಗಳ ಮೂಲಕ ಇದನ್ನು ಈಗ ಭಾರತಕ್ಕೆ ತಾಯ್ನಾಡಿಗೆ ತರಲಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ಭಾರತದಿಂದ ಕಳುವಾಗಿದ್ದ ನೂರಾರು ಪವಿತ್ರ ವಿಗ್ರಹಗಳು ಮತ್ತು ಕಲಾಕೃತಿಗಳನ್ನು ಜಗತ್ತಿನ ವಿವಿಧ ದೇಶಗಳಿಂದ ಭಾರತಕ್ಕೆ ವಾಪಸ್ ತರಲಾಗುತ್ತಿದ್ದು, ಇದು ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಗೌರವಿಸುವ ಕೆಲಸವಾಗಿದೆ ಎಂದು ಪಿಎಂ ಮೋದಿ ಹೇಳಿದರು.

ಇದನ್ನೂ ಓದಿ: ಜರ್ಮನಿಯಲ್ಲಿ ಭಾರತೀಯ ಸಂಘಟನೆಗಳ ಹೊಸ ಒಕ್ಕೂಟ; ಎರಡು ದೇಶಗಳ ಬಾಂಧವ್ಯ ಹೆಚ್ಚಿಸಲು ಒಗ್ಗೂಡಿದ ಭಾರತೀಯರು

ಬೇಸಿಗೆಯ ಬಿಸಿಗೆ ತಂಪೆರೆಯುವ ಪಾನಕ ವೈವಿಧ್ಯಗಳ ಪರಿಚಯ ತಿಳಿಸಿದ ಮೋದಿ

ಮನ್ ಕಿ ಬಾತ್​ನ 134ನೇ ಎಪಿಸೋಡ್​ನಲ್ಲಿ ಪಿಎಂ ಮೋದಿ ಅವರು ಬೇಸಿಗೆಯ ಬಿಸಿಲನ್ನು ನೀಗಿಸಬಲ್ಲಂತಹ ದೇಸೀ ತಂಪು ಪಾನೀಯಗಳನ್ನು ಪ್ರಸ್ತಾಪಿಸಿದರು. ಪಾನಕ, ಲಸ್ಸಿ, ಆಮ್ ರಸ್ ಇತ್ಯಾದಿ ಪಾನೀಯಗಳನ್ನು ಪ್ರಧಾನಿಗಳು ಉದಾಹರಿಸಿದರು. ಈ ದೇಸೀ ಪಾನೀಯಗಳು ಯಾವುದೇ ದೊಡ್ಡ ಬ್ರ್ಯಾಂಡ್ ಹೊಂದಿಲ್ಲ. ಬದಲಾಗಿ ತಲೆತಲೆಮಾರುಗಳಿಂದ ತಯಾರಾಗುತ್ತಾ ಬಂದಿವೆ ಎಂದರು. ಹಾಗೆಯೇ, ಭಾರತದಲ್ಲಿರುವ ಮಾವಿನ ವೈವಿಧ್ಯತೆಯನ್ನೂ ಮೋದಿ ತಿಳಿಸಿದರು. ತೋತಾಪುರಿ, ಮಲಗೋಬಾ ಇತ್ಯಾದಿ ತಳಿಯ ಮಾವನ್ನೂ ಉದಾಹರಿಸಿದರು.

ಜಾಗತಿಕ ವೇದಿಕೆಯಲ್ಲಿ ಭಾರತದ ಪ್ರಭಾವ

ಈ ಬಾರಿಯ ಮನ್ ಕಿ ಬಾತ್‌ನಲ್ಲಿ ಪ್ರಧಾನಿಯವರು, ಭಾರತೀಯ ಯುವಶಕ್ತಿ ತಂತ್ರಜ್ಞಾನ, ಕ್ರೀಡೆ ಮತ್ತು ನಾವೀನ್ಯತೆಗಳಲ್ಲಿ ಜಾಗತಿಕವಾಗಿ ಹೇಗೆ ಮುಂಚೂಣಿಗೆ ಬರುತ್ತಿದೆ ಎಂಬುದನ್ನು ಒತ್ತಿ ಹೇಳಿದರು. ನಮ್ಮ ದೇಶದ ಇತಿಹಾಸ, ಸಂಸ್ಕೃತಿ ಮತ್ತು ಕ್ರೀಡೆಯನ್ನು ಒಟ್ಟಿಗೆ ಕೊಂಡೊಯ್ಯುವ ಮೂಲಕ ದೇಶವು ‘ವಿಕಸಿತ ಭಾರತ’ದತ್ತ ಮುನ್ನಡೆಯುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.

ಉಭಯ ಕ್ರೀಡಾ ಸಾಧನೆಗಳು ಹಾಗೂ ಸಾಂಸ್ಕೃತಿಕ ಮೌಲ್ಯಗಳ ಮರುಸ್ಥಾಪನೆಯು 140 ಕೋಟಿ ಭಾರತೀಯರಲ್ಲಿ ಹೊಸ ಚೈತನ್ಯ ಮತ್ತು ಹೆಮ್ಮೆಯನ್ನು ಮೂಡಿಸಿದೆ ಎಂದು ಪ್ರಧಾನಿ ಮೋದಿ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

RCB vs GT: ಅವರನ್ನು ಕಣಕ್ಕಿಳಿಸುವ ಬಗ್ಗೆ ಇನ್ನೂ ಕೂಡ ನಿರ್ಧಾರ ಮಾಡಿಲ್ಲ!

ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್​ನ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಗುಜರಾತ್ ಟೈಟಾನ್ಸ್ (GT) ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯದಲ್ಲಿ ಆರ್​ಸಿಬಿ ಪರ ಫಿಲ್ ಸಾಲ್ಟ್ ಕಣಕ್ಕಿಳಿಯಲಿದ್ದಾರಾ ಎಂಬುದೇ ಪ್ರಶ್ನೆ. ಈ ಪ್ರಶ್ನೆಗೆ ಉತ್ತರಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ರಜತ್ ಪಾಟಿದಾರ್ ನಿಗೂಢತೆಯನ್ನು ಕಾಯ್ದುಕೊಂಡಿದ್ದಾರೆ.

ಏಪ್ರಿಲ್ 18 ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದ ವೇಳೆ ಫಿಲ್ ಸಾಲ್ಟ್ ಅವರ ಬೆರಳಿಗೆ ಗಾಯವಾಗಿತ್ತು. ಈ ಗಾಯದ ಕಾರಣ ಅವರು ಚಿಕಿತ್ಸೆಗಾಗಿ ಇಂಗ್ಲೆಂಡ್​ಗೆ ತೆರಳಿದ್ದರು. ಇದೀಗ ಅವರು ಆರ್​ಸಿಬಿ ತಂಡವನ್ನು ಕೂಡಿಕೊಂಡಿದ್ದಾರೆ. ಇತ್ತ ಪ್ಲೇಆಫ್ ಪಂದ್ಯಕ್ಕೂ ಮುನ್ನ ಆರ್​ಸಿಬಿ ತಂಡವನ್ನು ಕೂಡಿಕೊಂಡರೂ ಸಾಲ್ಟ್ ಅವರನ್ನು ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಕಣಕ್ಕಿಳಿಸಿರಲಿಲ್ಲ.

ಇದೀಗ ಆರ್​ಸಿಬಿ ತಂಡವು ಕೊನೆಯ ಪಂದ್ಯವಾಡಲು ಸಜ್ಜಾಗಿದೆ. ಈ ಪಂದ್ಯದಲ್ಲಾದರೂ ಫಿಲ್ ಸಾಲ್ಟ್ ಕಣಕ್ಕಿಳಿಯಲಿದ್ದಾರಾ ಎಂಬ ಪ್ರಶ್ನೆಯನ್ನು ರಜತ್ ಪಾಟಿದಾರ್ ಅವರ ಮುಂದಿಡಲಾಗಿದೆ.

ಫೈನಲ್ ಪಂದ್ಯಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಗೆ ಉತ್ತರಿಸಿದ ರಜತ್ ಪಾಟಿದಾರ್, ಫಿಲ್ ಸಾಲ್ಟ್ ಸದ್ಯ ಸಂಪೂರ್ಣ ಫಿಟ್ ಆಗಿದ್ದಾರೆ. ಅಲ್ಲದೆ ಅಭ್ಯಾಸ ಪಂದ್ಯಗಳಲ್ಲಿ ಭಾಗವಹಿಸಿದ್ದಾರೆ. ಆದರೆ ನಾವು ಇನ್ನೂ ಕೂಡ ಪ್ಲೇಯಿಂಗ್ ಇಲೆವೆನ್ ನಿರ್ಧರಿಸಿಲ್ಲ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದ ಪಿಚ್ ಪರಿಸ್ಥಿತಿಯನ್ನು ಪರಿಶೀಲಿಸಿದ ನಂತರವೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ರಜತ್ ಪಾಟಿದಾರ್ ಹೇಳಿದ್ದಾರೆ.

ಅಂದರೆ ಫಿಲ್ ಸಾಲ್ಟ್ ಅವರನ್ನು ಪ್ಲೇಯಿಂಗ್ ಇಲೆವೆನ್​ಗೆ ಸೇರಿಸಿಕೊಳ್ಳುವ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಹೀಗಾಗಿ ಇಂದಿನ ಮ್ಯಾಚ್​ನಲ್ಲಿ ಅವರನ್ನು ಕಣಕ್ಕಿಳಿಸುವ ಬಗ್ಗೆ ಇನ್ನೂ ಕೂಡ ಅಂತಿಮ ನಿರ್ಧಾರ ಮಾಡಿಲ್ಲ ಎಂದು ರಜತ್ ಪಾಟಿದಾರ್ ತಿಳಿಸಿದ್ದಾರೆ.

ಸಾಲ್ಟ್ ಬದಲಿಗೆ ಯಾರು?

ಒಂದು ವೇಳೆ ಫೈನಲ್ ಪಂದ್ಯದಲ್ಲಿ ರಜತ್ ಪಾಟಿದಾರ್ ಕಣಕ್ಕಿಳಿದಿದ್ದರೆ ಆರಂಭಿಕನಾಗಿ ವೆಂಕಟೇಶ್ ಅಯ್ಯರ್ ಮುಂದುವರೆಯಲಿದ್ದಾರೆ. ಕಳೆದ ಮ್ಯಾಚ್​ನಲ್ಲಿ ವಿರಾಟ್ ಕೊಹ್ಲಿ ಜೊತೆ ಇನಿಂಗ್ಸ್ ಆರಂಭಿಸಿದ್ದ ಅಯ್ಯರ್ ಆರ್​ಸಿಬಿ ತಂಡಕ್ಕೆ ಸ್ಫೋಟಕ ಆರಂಭ ಒದಗಿಸುವಲ್ಲಿ ಯಶಸ್ವಿಯಾಗಿದ್ದರು.

ಇದನ್ನೂ ಓದಿ: IPL 2026 Final: ಫೈನಲ್ ವೇಳೆ ಮಳೆ ಬಂದರೆ ಫಲಿತಾಂಶ ನಿರ್ಧರಿಸುವುದು ಹೇಗೆ?

ಹೀಗಾಗಿ ಫಿಲ್ ಸಾಲ್ಟ್ ಹೊರಗುಳಿದರೆ ವಿರಾಟ್ ಕೊಹ್ಲಿ ಹಾಗೂ ವೆಂಕಟೇಶ್ ಅಯ್ಯರ್ ಇನಿಂಗ್ಸ್ ಆರಂಭಿಸಲಿದ್ದಾರೆ. ಹಾಗೆಯೇ ವಿದೇಶಿ ಆಟಗಾರರನ್ನಾಗಿ ಟಿಮ್ ಡೇವಿಡ್, ಜೋಶ್ ಹೇಝಲ್​ವುಡ್, ರೊಮಾರಿಯೊ ಶೆಫರ್ಡ್ ಹಾಗೂ ಜೇಕಬ್ ಡಫಿಯನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ.

Source link

15 ದಿನ ಆದ್ಮೇಲೆ ಮತ್ತೊಮ್ಮೆ ಸಂಪುಟ ವಿಸ್ತರಣೆ ಎಂದ ಮಲ್ಲಿಕಾರ್ಜುನ ಖರ್ಗೆ

ಕಲಬುರಗಿ, ಮೆ 31: ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಹತ್ವದ ಹೇಳಿಕೆ ನೀಡಿದ್ದು, ರಾಜ್ಯದಲ್ಲಿ ಸದ್ಯಕ್ಕೆ ಮೊದಲ ಹಂತದಲ್ಲಿ ಸಚಿವರ ಪ್ರಮಾಣವಚನ ನಡೆಯಲಿದ್ದು, ಅದಾದ 15 ದಿನ ಅಥವಾ ಒಂದು ತಿಂಗಳ ನಂತರ ಮತ್ತೊಮ್ಮೆ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಸಿಎಂ ಜೊತೆ ಎಷ್ಟು ಜನ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂಬ ಪ್ರಸ್ತಾಪ ಇನ್ನೂ ಬಂದಿಲ್ಲ. ಪ್ರಸ್ತಾಪ ಬಂದ ಬಳಿಕವೇ ಡಿಸಿಎಂ ಹಾಗೂ ಸಚಿವರ ಸಂಖ್ಯೆ ತೀರ್ಮಾನವಾಗಲಿದೆ. ಜೂನ್ 3ರ ನಂತರ ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಇನ್ನು ಡಿಕೆಶಿ ಸಿಎಂ ಆದ ಬಳಿಕ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಸಹಜ. ಮುಂಬರುವ ಚುನಾವಣೆ ದೃಷ್ಟಿಯಿಂದ ಎಲ್ಲರನ್ನೂ ಒಗ್ಗಟ್ಟಾಗಿ ಕೊಂಡೊಯ್ಯುವ, ಸಿಎಂ ಜೊತೆ ಉತ್ತಮ ಸಮನ್ವಯ ಹೊಂದಿರುವ ಸೂಕ್ತ ನಾಯಕನನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲಾಗುವುದು ಎಂದು ಖರ್ಗೆ ಸ್ಪಷ್ಟಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಯಾರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ?: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೊಟ್ರು ಬಿಗ್​​ ಅಪ್ಡೇಟ್​​

ಕಲಬುರಗಿ, ಮೇ 31: ಹಾಲಿ ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಿ.ಕೆ. ಶಿವಕುಮಾರ್​​ ಸಿಎಂ ಆಗಿ ಆಯ್ಕೆಯಾಗುತ್ತಿದ್ದಂತೆ ಪಕ್ಷದ ಅಧ್ಯಕ್ಷ ಸ್ಥಾನಕ್ಕಾಗಿ ರಾಜ್ಯ ಕಾಂಗ್ರೆಸ್​​ನಲ್ಲಿ ಪೈಪೋಟಿ ಶುರುವಾಗಿದೆ. ಈ ಬಗ್ಗೆ ಕಲಬುರಗಿಯಲ್ಲಿ ಮಾಹಿತಿ ನೀಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಡಿಕೆಶಿ ಸಿಎಂ ಆದ ಬಳಿಕ ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಹಜವಾಗಿ ಬದಲಾವಣೆ ಆಗುತ್ತೆ. ಜನ ಬೆಂಬಲ ಇರುವ ಸೂಕ್ತ ವ್ಯಕ್ತಿಗೆ ಪಕ್ಷದ ಅಧ್ಯಕ್ಷ ಸ್ಥಾನ ನೀಡುತ್ತೇವೆ. ಸಿಎಂಗೆ ಉತ್ತಮ ಸಮನ್ವಯ ಇರಬೇಕು, ಅಂತಹವರನ್ನು ಆಯ್ಕೆ ಮಾಡ್ತೇವೆ. ವಿಧಾನಸಭಾ ಚುನಾವಣೆಗೆ ಕೇವಲ 24 ತಿಂಗಳು ಮಾತ್ರ ಬಾಕಿಯಿರುವ ಕಾರಣ ಎಲೆಕ್ಷನ್​​ ಮತ್ತು ಪಕ್ಷ ಕಟ್ಟುವ ದೃಷ್ಟಿಯಿಂದ ಆಯ್ಕೆ ಮಾಡಬೇಕಾಗುತ್ತೆ. ಸ್ಪೀಡ್ ಆಗಿ, ಕಲೆಕ್ಟಿವ್ ಆಗಿ ಎಲ್ಲರನ್ನೂ ಒಗ್ಗಟ್ಟಾಗಿ ತಗೊಂಡು ಹೋಗುವ ನಾಯಕನನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾವು ಹುಡುಕಬೇಕಿದೆ. ಜೊತೆಗೆ ಅವರಿಗೆ ಕೋ-ಆಪರೇಟ್ ಮಾಡುವ ಜನರೂ ಇರಬೇಕಾಗುತ್ತದೆ. ಇವೆಲ್ಲವೂ ವಿಚಾರ ಮಾಡಿ ಕೆಪಿಸಿಸಿ ಅಧ್ಯಕ್ಷರ ಆಯ್ಕೆ ನಡೆಯಲಿದೆ ಎಂದವರು ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ವಿಶ್ವ ತಂಬಾಕು ರಹಿತ ದಿನ: ಧೂಮಪಾನಕ್ಕಿಂತಲೂ ಧೂಮರಹಿತ ತಂಬಾಕು ಹೆಚ್ಚು ಅಪಾಯಕಾರಿ ಏಕೆ?

ವಿಶ್ವ ತಂಬಾಕು ರಹಿತ ದಿನImage Credit source: Pinterest

ವಿಶ್ವದಾದ್ಯಂತ ತಡೆಗಟ್ಟಬಹುದಾದ ಸಾವುಗಳಿಗೆ ತಂಬಾಕು ಅತ್ಯಂತ ಪ್ರಮುಖ ಕಾರಣವಾಗಿದೆ. ಸಾಮಾನ್ಯವಾಗಿ ತಂಬಾಕಿನ ಹಾನಿಯ ಬಗ್ಗೆ ಮಾತನಾಡುವಾಗ ಸಿಗರೇಟ್ ಮತ್ತು ಬೀಡಿ ಧೂಮಪಾನಕ್ಕೆ ಮಾತ್ರ ಹೆಚ್ಚಿನ ಗಮನ ನೀಡಲಾಗುತ್ತದೆ. ಆದರೆ ವಾಸ್ತವದಲ್ಲಿ, ಭಾರತದಲ್ಲಿ ಗುಟ್ಕಾ, ಖೈನಿ, ಪಾನ್, ಜರ್ದಾ ಮತ್ತು ಇತರೆ ಧೂಮರಹಿತ ತಂಬಾಕು ಉತ್ಪನ್ನಗಳು ಧೂಮಪಾನಕ್ಕಿಂತಲೂ ಮೌನವಾಗಿ, ತೀವ್ರವಾಗಿ ಸಮಾಜದ ಆರೋಗ್ಯವನ್ನು ನುಂಗಿ ನೀರು ಕುಡಿಯುತ್ತಿವೆ.

ಬಾಯಿಯ ಕೋಶಗಳ ಮೇಲೆ ನೇರ ಮತ್ತು ನಿರಂತರ ದಾಳಿ:

ಧೂಮಪಾನದಲ್ಲಿ ಹೊಗೆಯೂ ಶ್ವಾಸಕೋಶದ ಮೂಲಕ ದೇಹವನ್ನು ಪ್ರವೇಶಿಸಿದರೆ, ಧೂಮರಹಿತ ತಂಬಾಕು ನೇರವಾಗಿ ಬಾಯಿ, ಕೆನ್ನೆ, ಒಸಡು ಮತ್ತು ನಾಲಿಗೆಯ ಮೇಲ್ಮೈಗೆ ಅಂಟಿಕೊಂಡಿರುತ್ತದೆ. ಭಕ್ತರು ಅಥವಾ ಬಳಕೆದಾರರು ಹಲವು ನಿಮಿಷಗಳಿಂದ ಗಂಟೆಗಳ ಕಾಲ ಇದನ್ನು ಬಾಯಿಯಲ್ಲೇ ಇಟ್ಟುಕೊಳ್ಳುವುದರಿಂದ, ಅದರಲ್ಲಿರುವ ಕ್ಯಾನ್ಸರ್ ಉಂಟುಮಾಡುವ ಭೀಕರ ರಾಸಾಯನಿಕಗಳು ನೇರವಾಗಿ ಬಾಯಿಯ ಕೋಶಗಳನ್ನು ಹಾನಿಗೊಳಿಸುತ್ತವೆ. ಇದೇ ಕಾರಣಕ್ಕೆ ಭಾರತದಲ್ಲಿ ಪ್ರತಿವರ್ಷ ಪತ್ತೆಯಾಗುವ ಸುಮಾರು ಒಂದು ಲಕ್ಷ ಹೊಸ ಬಾಯಿ ಕ್ಯಾನ್ಸರ್ ಪ್ರಕರಣಗಳಲ್ಲಿ ಬಹುಪಾಲು ಧೂಮರಹಿತ ತಂಬಾಕು ಬಳಕೆಯಿಂದಲೇ ಸಂಭವಿಸುತ್ತಿವೆ.

ಗಾಢ ವ್ಯಸನಕ್ಕೆ ತಳ್ಳುವ ನಿಕೋಟಿನ್ ಪ್ರಮಾಣ:

ಅನೇಕರು ಧೂಮರಹಿತ ತಂಬಾಕನ್ನು ಲಘುವಾಗಿ ಪರಿಗಣಿಸುತ್ತಾರೆ, ಆದರೆ ಇದು ಧೂಮಪಾನಕ್ಕಿಂತಲೂ ಹೆಚ್ಚು ವ್ಯಸನಕಾರಿಯಾಗಿದೆ. ಕೇವಲ ಒಂದು ಚಿಟಿಕೆ ಖೈನಿ ಅಥವಾ ಗುಟ್ಕಾದಿಂದ ದೇಹವನ್ನು ಸೇರುವ ನಿಕೋಟಿನ್ ಪ್ರಮಾಣವು ಮೂರರಿಂದ ನಾಲ್ಕು ಸಿಗರೇಟುಗಳಿಗೆ ಸಮಾನವಾಗಿರುತ್ತದೆ. ರಕ್ತದಲ್ಲಿ ನಿಕೋಟಿನ್ ಮಟ್ಟವು ದೀರ್ಘಕಾಲದವರೆಗೆ ಇರುವುದರಿಂದ, ಮೆದುಳು ಈ ವ್ಯಸನಕ್ಕೆ ದಾಸವಾಗುತ್ತದೆ. ಪರಿಣಾಮವಾಗಿ, ಧೂಮರಹಿತ ತಂಬಾಕಿನ ಅಭ್ಯಾಸವನ್ನು ಬಿಡುವುದು ಧೂಮಪಾನವನ್ನು ಬಿಡುವುದಕ್ಕಿಂತಲೂ ಅತ್ಯಂತ ಕಷ್ಟಕರವಾದ ಸವಾಲಾಗಿ ಪರಿಣಮಿಸುತ್ತದೆ.

ಬಾಯಿಯ ಆರೋಗ್ಯಕ್ಕೆ ಶಾಶ್ವತ ಕಂಟಕ:

ಈ ಉತ್ಪನ್ನಗಳ ನಿರಂತರ ಬಳಕೆಯು ಬಾಯಿಯ ಒಳಭಾಗಕ್ಕೆ ಸರಿಪಡಿಸಲಾಗದಂತಹ ಹಾನಿಯನ್ನು ಉಂಟುಮಾಡುತ್ತದೆ. ಇದು ಒಸಡುಗಳ ರೋಗಗಳು, ಹಲ್ಲುಗಳ ಸಡಿಲಿಕೆ, ಹಲ್ಲುಗಳು ಬೇಗನೆ ಉದುರುವುದು ಮತ್ತು ಬಾಯಿಯಲ್ಲಿ ಮರುಮರು ಬರುವ ಹುಣ್ಣುಗಳಿಗೆ ಕಾರಣವಾಗುತ್ತದೆ. ಅಷ್ಟೇ ಅಲ್ಲದೆ, ಇದು ರುಚಿ ಗ್ರಹಣ ಶಕ್ತಿಯನ್ನು ಕುಂಠಿತಗೊಳಿಸಿ ಆಹಾರ ಸೇವನೆಗೆ ತೊಂದರೆ ಮಾಡುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ, ‘ಓರಲ್ ಸಬ್‌ಮ್ಯೂಕಸ್ ಫೈಬ್ರೋಸಿಸ್’ ಎಂಬ ರೋಗಕ್ಕೆ ತುತ್ತಾಗಿ ಬಾಯಿ ನಿಧಾನವಾಗಿ ತೆರೆಯುವ ಸಾಮರ್ಥ್ಯವನ್ನೇ ಕಳೆದುಕೊಳ್ಳುತ್ತದೆ, ಇದು ಮುಂದೆ ನೇರವಾಗಿ ಕ್ಯಾನ್ಸರ್ ಆಗಿ ಬದಲಾಗುತ್ತದೆ.

ಹೃದಯ ಮತ್ತು ಒಳಾಂಗಾಂಗಗಳ ಮೇಲಾಗುವ ಗಂಭೀರ ಪರಿಣಾಮಗಳು:

ಧೂಮರಹಿತ ತಂಬಾಕು ಕೇವಲ ಬಾಯಿಯ ಆರೋಗ್ಯವನ್ನು ಮಾತ್ರವಲ್ಲದೆ ಇಡೀ ದೇಹದ ಒಳಾಂಗಾಂಗಗಳನ್ನು ದಂಡಿಸುತ್ತದೆ. ಇದು ರಕ್ತದೊತ್ತಡವನ್ನು ಕ್ಷಣಾರ್ಧದಲ್ಲಿ ಹೆಚ್ಚಿಸಿ ಹೃದಯಾಘಾತ (Heart Attack) ಮತ್ತು ಪಾರ್ಶ್ವವಾಯು (Stroke) ಉಂಟಾಗುವ ಅಪಾಯವನ್ನು ಬಹುವಾಗಿ ಹೆಚ್ಚಿಸುತ್ತದೆ. ಇದರೊಂದಿಗೆ, ತಂಬಾಕಿನ ರಸವು ಹೊಟ್ಟೆಯನ್ನು ಸೇರುವುದರಿಂದ ಅನ್ನನಾಳದ ಕ್ಯಾನ್ಸರ್, ಅಗ್ನ್ಯಾಶಯದ (Pancreas) ಕ್ಯಾನ್ಸರ್ ಹಾಗೂ ಜೀರ್ಣಾಂಗ ವ್ಯವಸ್ಥೆಯ ಇತರೆ ಗಂಭೀರ ಕಾಯಿಲೆಗಳಿಗೆ ದಾರಿಯಾಗುತ್ತದೆ.

ಗರ್ಭಿಣಿಯರು ಮತ್ತು ಗರ್ಭಸ್ಥ ಶಿಶುವಿಗೆ ಕಾಯ್ದಿಟ್ಟ ಗಂಡಾಂತರ:

ಗರ್ಭಾವಸ್ಥೆಯಲ್ಲಿ ಮಹಿಳೆಯರು ಧೂಮರಹಿತ ತಂಬಾಕನ್ನು ಬಳಸುವುದರಿಂದ ಅದರಲ್ಲಿರುವ ವಿಷಕಾರಿ ರಾಸಾಯನಿಕಗಳು ರಕ್ತದ ಮೂಲಕ ನೇರವಾಗಿ ಬೆಳೆಯುತ್ತಿರುವ ಮಗುವಿನ ದೇಹವನ್ನು ತಲುಪುತ್ತವೆ. ಇದು ಹುಟ್ಟುವ ಮಗುವಿನ ತೂಕ ಕಡಿಮೆಯಾಗಲು (Low Birth Weight), ಜನ್ಮಜಾತ ಅಂಗವೈಕಲ್ಯಗಳಿಗೆ ಮತ್ತು ಮಗುವಿನ ಒಟ್ಟಾರೆ ಬೆಳವಣಿಗೆ ಕುಂಠಿತಗೊಳ್ಳಲು ಕಾರಣವಾಗುತ್ತದೆ. ಕೆಲವು ದುರದೃಷ್ಟಕರ ಸಂದರ್ಭಗಳಲ್ಲಿ ಇದು ಗರ್ಭಪಾತ ಅಥವಾ ಸತ್ತ ಮಗು ಜನಿಸುವ (Stillbirth) ಭೀಕರ ಪರಿಸ್ಥಿತಿಗೂ ಕಾರಣವಾಗಬಹುದು.

ಉಗುಳುವ ಅಭ್ಯಾಸ ಮತ್ತು ಸಾರ್ವಜನಿಕ ಆರೋಗ್ಯದ ದುರಂತ:

ಧೂಮರಹಿತ ತಂಬಾಕು ಸೇವಿಸುವವರು ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೆಂದರಲ್ಲಿ ಉಗುಳುವುದು ಕೇವಲ ಅಸ್ವಚ್ಛತೆಯನ್ನಷ್ಟೇ ಸೃಷ್ಟಿಸುವುದಿಲ್ಲ, ಬದಲಿಗೆ ಇದೊಂದು ದೊಡ್ಡ ಆರೋಗ್ಯ ತುರ್ತುಸ್ಥಿತಿಯಾಗಿದೆ. ಈ ಲಾಲಾರಸದ ಮೂಲಕ ಕ್ಷಯರೋಗ (TB) ಸೇರಿದಂತೆ ಹಲವು ಮಾರಕ ಸಾಂಕ್ರಾಮಿಕ ರೋಗಾಣುಗಳು ಗಾಳಿಯಲ್ಲಿ ಹರಡಿ ಸಾರ್ವಜನಿಕರಿಗೆ ಹರಡುತ್ತವೆ. ಇದು ರಸ್ತೆ, ಗೋಡೆ ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ಹಾಳುಗೆಡವುದರ ಜೊತೆಗೆ ಇಡೀ ಪರಿಸರವನ್ನು ದುರ್ವಾಸನೆ ಹಾಗೂ ರೋಗಗಳ ತಾಣವನ್ನಾಗಿ ಮಾರ್ಪಡಿಸುತ್ತದೆ.

ಇದನ್ನೂ ಓದಿ ಬೆಂಗಳೂರಿನಲ್ಲಿ ಹೆಚ್ಚುತ್ತಿದೆ ಕ್ಯಾನ್ಸರ್ ಭೀತಿ, ವೈದ್ಯರ ಎಚ್ಚರಿಕೆ!

ಸಾಮಾಜಿಕ ಸ್ವೀಕಾರಾರ್ಹತೆ ಹೆಮ್ಮಾರಿಯ ಅಡಗಿರುವ ಶಕ್ತಿ:

ಧೂಮರಹಿತ ತಂಬಾಕಿನ ಅತ್ಯಂತ ದೊಡ್ಡ ದುರಂತವೆಂದರೆ ಅದಕ್ಕೆ ಸಿಕ್ಕಿರುವ ಸಾಮಾಜಿಕ ಸ್ವೀಕಾರ. ಅನೇಕ ಕಡೆಗಳಲ್ಲಿ ಊಟದ ನಂತರ, ಮದುವೆ ಸಮಾರಂಭಗಳಲ್ಲಿ ಅಥವಾ ಹಬ್ಬ ಹರಿದಿನಗಳಲ್ಲಿ ಇದನ್ನು ವೀಳ್ಯದೆಲೆಯ ಜೊತೆ ಗೌರವದ ಸಂಕೇತವಾಗಿ ಬಳಸಲಾಗುತ್ತದೆ. ಬಣ್ಣಬಣ್ಣದ ಪ್ಯಾಕೆಟ್‌ಗಳು, ಆಕರ್ಷಕ ಸುಗಂಧಗಳು ಮತ್ತು ಸುಲಭ ಲಭ್ಯತೆಯು ಇದರ ಹಿಂದಿರುವ ಸಾವಿನ ಮುಖವನ್ನು ಜನರು ಮರೆಯುವಂತೆ ಮಾಡಿದೆ. ಈ ಕಾರಣದಿಂದಲೇ, ಅನೇಕರು ರೋಗವು ತೀವ್ರ ಹಂತಕ್ಕೆ ತಲುಪಿದಾಗ ಮಾತ್ರ ವೈದ್ಯರನ್ನು ಸಂಪರ್ಕಿಸುತ್ತಾರೆ.

ಧೂಮರಹಿತ ತಂಬಾಕು ಕಣ್ಣಿಗೆ ಕಾಣುವ ಹೊಗೆಯನ್ನು ಉತ್ಪಾದಿಸದೇ ಇರಬಹುದು, ಆದರೆ ದೇಹದ ಒಳಗಡೆ ಅದು ಉಂಟುಮಾಡುವ ವಿನಾಶ ಧೂಮಪಾನಕ್ಕಿಂತಲೂ ಭಯಾನಕವಾಗಿದೆ. ವಿಶ್ವ ತಂಬಾಕು ರಹಿತ ದಿನದ ಸಂದೇಶ ಸ್ಪಷ್ಟವಾಗಿದೆ – ತಂಬಾಕಿನ ಯಾವುದೇ ರೂಪವೂ ಸುರಕ್ಷಿತವಲ್ಲ. ಸುಳ್ಳು ಪ್ರತಿಷ್ಠೆ ಮತ್ತು ಕ್ಷಣಿಕ ಸುಖವನ್ನು ಬದಿಗೊತ್ತಿ, ಜಾಗೃತಿಯನ್ನು ಮೂಡಿಸುವ ಮೂಲಕ ವ್ಯಸನಮುಕ್ತ ಜೀವನ ನಡೆಸುವುದು ಆರೋಗ್ಯಕರ ಸಮಾಜದ ನಿರ್ಮಾಣಕ್ಕೆ ಇಂದಿನ ತುರ್ತು ಅಗತ್ಯವಾಗಿದೆ.

ಲೇಖನ: ಡಾ. ರವಿಕಿರಣ ಪಟವರ್ಧನ (ಪಟವರ್ಧನ ಆಯುರ್ವೇದ ಕ್ಲಿನಿಕ್, ಶಿರಸಿ. 08384225836)

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL 2026 Final: ಫೈನಲ್ ವೇಳೆ ಮಳೆ ಬಂದರೆ ಫಲಿತಾಂಶ ನಿರ್ಧರಿಸುವುದು ಹೇಗೆ?

IPL 2026 Final: ಇಂಡಿಯನ್ ಪ್ರೀಮಿಯರ್ ಲೀಗ್​ನ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಅಹಮದಾಬಾದ್​ನಲ್ಲಿ ನಡೆಯಲಿರುವ ಅಂತಿಮ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಗುಜರಾತ್ ಟೈಟಾನ್ಸ್​ (GT) ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯದ ವೇಳೆ ಮಳೆ ಬಂದರೆ ಪಂದ್ಯ ಆಯೋಜಿಸುವುದು ಹೇಗೆ ಎಂಬ ಪ್ರಶ್ನೆ ಮೂಡುವುದು ಸಹಜ. ಈ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ…

ಫೈನಲ್ ಪಂದ್ಯವನ್ನು ಪೂರ್ಣಗೊಳಿಸಲು ಐಪಿಎಲ್ ರೈನ್ ರೂಲ್ಸ್ ಅನ್ನು ಪರಿಚಯಿಸಲಾಗಿದೆ. ಈ ನಿಯಮಗಳ ಮೂಲಕ ಐಪಿಎಲ್​ನ ಅಂತಿಮ ಪಂದ್ಯವನ್ನು ಪೂರ್ಣಗೊಳಿಸಲಾಗುತ್ತದೆ. ಹಾಗಿದ್ರೆ ಫೈನಲ್ ಪಂದ್ಯಕ್ಕೆ ಮಳೆ ಅಡಚಣೆಯನ್ನು ಉಂಟು ಮಾಡಿದರೆ ಯಾವೆಲ್ಲಾ ನಿಯಮಗಳು ಅನ್ವಯವಾಗಲಿದೆ ಎಂದು ನೋಡೋಣ…

  • ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ನಡುವಣ ಪಂದ್ಯವು ರಾತ್ರಿ 7.30 ಕ್ಕೆ ಶುರುವಾಗಲಿದೆ. ಒಂದು ವೇಳೆ ಮಳೆಯಿಂದಾಗಿ ಪಂದ್ಯ ಶುರುವಾಗುವುದು ವಿಳಂಬವಾದರೆ ಹೆಚ್ಚುವರಿ 120 ನಿಮಿಷಗಳನ್ನು ತೆಗೆದುಕೊಳ್ಳಲಾಗುತ್ತದೆ. ಅದರಂತೆ ರಾತ್ರಿ 9.40 ರೊಳಗೆ ಪಂದ್ಯ ಶುರುವಾದರೆ ಯಾವುದೇ ಓವರ್​ ಕಡಿತ ಇರುವುದಿಲ್ಲ. 2 ತಂಡಗಳು 20 ಓವರ್​ಗಳನ್ನು ಆಡಲಿದೆ.
  • ಮಳೆಯಿಂದ ಅಥವಾ ಇನ್ನಿತರೆ ಕಾರಣಗಳಿಂದ ವಿಳಂಬವಾಗಿ ರಾತ್ರಿ 9.40 ರ ಬಳಿಕ ಪಂದ್ಯ ಆರಂಭವಾಗುವುದಾರೆ, ಓವರ್​ಗಳ ಕಡಿತ ಮಾಡಲಾಗುತ್ತದೆ. ಅಲ್ಲದೆ ಆ ಬಳಿಕ ಡಕ್​ವರ್ತ್​ ಲೂಯಿಸ್ ನಿಯಮದ ಪ್ರಕಾರ ಫಲಿತಾಂಶ ನಿರ್ಧರಿಸಬೇಕಿದ್ದರೆ ಉಭಯ ತಂಡಗಳು ಕನಿಷ್ಠ 5 ಓವರ್​ಗಳನ್ನು ಆಡಿರಬೇಕು.
  • ಇನ್ನು ನಿಗದಿತ ಸಮಯದೊಳಗೆ ಪಂದ್ಯ ನಡೆಯದಿದ್ದರೆ ಹೆಚ್ಚುವರಿ ಸಮಯ ತೆಗೆದುಕೊಳ್ಳಲಾಗುತ್ತದೆ. ಈ ಮೂಲಕ 5 ಓವರ್​ಗಳ ಪಂದ್ಯವನ್ನು ಆಯೋಜಿಸಲಿದೆ. ಅದರಂತೆ ಮಧ್ಯರಾತ್ರಿ 1.30 ರೊಳಗೆ 5 ಓವರ್​ಗಳ ಪಂದ್ಯವನ್ನು ಆಯೋಜಿಸಲು ಮುಂದಾಗಲಿದ್ದಾರೆ.
  • ಒಂದು ವೇಳೆ ಮಧ್ಯರಾತ್ರಿ 1.30 ರೊಳಗೆ 5 ಓವರ್​ಗಳ ಪಂದ್ಯ ಆಯೋಜಿಸಲು ಸಾಧ್ಯವಾಗದಿದ್ದರೆ ಮಾತ್ರ ಪಂದ್ಯವನ್ನು ಮೀಸಲು ದಿನದಾಟಕ್ಕೆ ಮುಂದೂಡಲಾಗುತ್ತದೆ. ಅದರಂತೆ ಸೋಮವಾರ ಫೈನಲ್ ಪಂದ್ಯವನ್ನು ಮರು ಆಯೋಜಿಸಲಿದ್ದಾರೆ.
  • ಒಂದು ವೇಳೆ ಮಳೆಯಿಂದಾಗಿ ಮೀಸಲು ದಿನದಾಟದಲ್ಲೂ ಕನಿಷ್ಠ 5 ಓವರ್​ಗಳ ಪಂದ್ಯ ನಡೆಸಲು ಸಾಧ್ಯವಾಗದೇ ಇದ್ದರೆ ಮಾತ್ರ ಫೈನಲ್ ಪಂದ್ಯವನ್ನು ರದ್ದುಗೊಳಿಸಲಾಗುತ್ತದೆ. ಅಲ್ಲದೆ ಲೀಗ್​ ಹಂತದ 70 ಪಂದ್ಯಗಳ ನಂತರ ಪಾಯಿಂಟ್ಸ್​ ಟೇಬಲ್​ನಲ್ಲಿ ಅಗ್ರಸ್ಥಾನ ಅಲಂಕರಿಸಿದ ತಂಡವನ್ನು ಚಾಂಪಿಯನ್ಸ್ ಎಂದು ಘೋಷಿಸಲಾಗುತ್ತದೆ.

ಇದನ್ನೂ ಓದಿ: ಐಪಿಎಲ್​ನಲ್ಲಿ ಈ 3 ನಿಯಮ ಬದಲಿಸಿ: ಸಚಿನ್ ತೆಂಡೂಲ್ಕರ್ ಸಲಹೆ!

ಅಂದರೆ ಮೀಸಲು ದಿನದಾಟದಲ್ಲೂ ಪಂದ್ಯ ನಡೆಯದಿದ್ದರೆ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಚಾಂಪಿಯನ್ ಆಗಲಿದೆ. ಏಕೆಂದರೆ ಈ ಬಾರಿಯ ಐಪಿಎಲ್​ನ ಅಂಕ ಪಟ್ಟಿಯಲ್ಲಿ ಆರ್​ಸಿಬಿ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನ ಅಲಂಕರಿಸಿದರೆ, ಗುಜರಾತ್ ಟೈಟಾನ್ಸ್ ತಂಡ ದ್ವಿತೀಯ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಹೀಗಾಗಿ ಮಳೆಯಿಂದಾಗಿ ಅಥವಾ ಇನ್ನಿತರೆ ಕಾರಣಗಳಿಂದಾಗಿ ಮೀಸಲು ದಿನದಾಟದಲ್ಲೂ ಪಂದ್ಯ ರದ್ದಾದರೆ ಆರ್​ಸಿಬಿ ತಂಡವನ್ನು ವಿಜಯಿ ಎಂದು ಘೋಷಿಸಲಾಗುತ್ತದೆ.

Source link

‘ನಾಚಿಕೆಗೇಡಿನ ಕುಟುಂಬ’: ಕೊಲೆ ಆರೋಪಿಯ ಸಂಭ್ರಮ ನೋಡಿ ಗರಂ ಆದ ನಟ ವಿಶಾಲ್

ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ 2024ರ ಪುಣೆ ಪೋರ್ಷೆ ಕಾರ್ ಅಪಘಾತದ (Pune Porsche Case) ಪ್ರಮುಖ ಆರೋಪಿ ವೇದಾಂತ್ ಅಗರ್ವಾಲ್ ಕುಟುಂಬವು ಜೈಲಿನಿಂದ ಬೇಲ್ ಸಿಕ್ಕಿದ್ದಕ್ಕೆ ಪಾರ್ಟಿ ಮಾಡಿ ಸಂಭ್ರಮಿಸಿದೆ ಎನ್ನಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಸುಪ್ರೀಂ ಕೋರ್ಟ್‌ನಿಂದ ಕಠಿಣ ಷರತ್ತುಗಳೊಂದಿಗೆ ಇತ್ತೀಚೆಗೆ ಜಾಮೀನು ಪಡೆದ ಬಳಿಕ, ಇಡೀ ಕುಟುಂಬ ಹೋಟೆಲ್ ಒಂದರಲ್ಲಿ ನೃತ್ಯ ಮಾಡುತ್ತಾ ಸಂಭ್ರಮಿಸುತ್ತಿರುವ ಈ ದೃಶ್ಯ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಕಾಲಿವುಡ್ ನಟ ವಿಶಾಲ್ (Actor Vishal) ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆರೋಪಿ ಕುಟುಂಬದ ವಿರುದ್ಧ ಹರಿಹಾಯ್ದಿರುವ ವಿಶಾಲ್, ‘ನೀವೇನು ಒಲಿಂಪಿಕ್ಸ್‌ನಲ್ಲಿ ಮೆಡಲ್ ಗೆದ್ದಿಲ್ಲ ಅಥವಾ ಕಾಲೇಜು ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್‌ನಲ್ಲಿ ಪಾಸ್ ಆಗಿಲ್ಲ. ನಿಮ್ಮ ನಾಚಿಕೆಗೇಡಿನ ಅಗರ್ವಾಲ್ ಕುಟುಂಬ ಹೆಮ್ಮೆ ಪಡುವಂತಹ ಯಾವುದೇ ಕೆಲಸವನ್ನೂ ನೀವು ಮಾಡಿಲ್ಲ. ಮೂರ್ಖ ವೇದಾಂತ್ ಅಗರ್ವಾಲ್, ನಿನ್ನ ಮದ್ಯದ ಅಮಲಿನ ಡ್ರೈವಿಂಗ್‌ನಿಂದಾಗಿ ಇಬ್ಬರು ಉದಯೋನ್ಮುಖ ಐಟಿ ಇಂಜಿನಿಯರ್‌ಗಳನ್ನು ಕೊಂದಿದ್ದೀಯ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಇಲ್ಲಿನ ಸಿಸ್ಟಮ್ ಭ್ರಷ್ಟವಾಗಿರಬಹುದು. ನೀನು ಮಾಡಿದ ತಪ್ಪಿಗೆ ನಿನ್ನ ಹಣದ ಬಲ ಹಾಗೂ ಪ್ರಭಾವ ಬಳಸಿ ಬೇಲ್ ಪಡೆದಿರಬಹುದು. ನಿನ್ನ ನಾಚಿಕೆಯಿಲ್ಲದ ಕುಟುಂಬದ ಜೊತೆ ಸಮಾಜದಲ್ಲಿ ಬಹಿರಂಗವಾಗಿ ಸಂಭ್ರಮಿಸುತ್ತಿರಬಹುದು. ಆದರೆ ನೆನಪಿರಲಿ, ಕರ್ಮ ಅನ್ನೋದು ತುಂಬಾ ಡೇಂಜರ್. ನಾವು ಏನು ಬಿತ್ತುತ್ತೇವೋ ಅದನ್ನೇ ಉಣ್ಣಬೇಕಾಗುತ್ತದೆ. ನಾನು ನಿನಗೆ ಶಾಪ ಹಾಕುತ್ತಿಲ್ಲ. ಆದರೆ ನಿನ್ನ ತಂದೆ ಕಾನೂನಿನ ಎಲ್ಲಾ ಲೋಪದೋಷಗಳನ್ನು ಮುಚ್ಚಿ ನಿನ್ನನ್ನು ಹೊರಗೆ ತಂದಿದ್ದರೂ, ನೀನು ಈ ರೀತಿ ಸಂಭ್ರಮಿಸಲು ಖಂಡಿತ ಅರ್ಹನಲ್ಲ’ ಎಂದು ವಿಶಾಲ್ ಖಾರವಾಗಿ ಬರೆದಿದ್ದಾರೆ.

ಈ ವಿಡಿಯೋ ಮಾಧ್ಯಮಗಳಲ್ಲಿ ಭಾರಿ ಸುದ್ದಿಯಾಗುತ್ತಿದ್ದಂತೆ ಎಚ್ಚೆತ್ತ ಆರೋಪಿ ವೇದಾಂತ್ ಅಗರ್ವಾಲ್ ತಂದೆ ವಿಶಾಲ್ ಅಗರ್ವಾಲ್ ಸ್ಪಷ್ಟನೆ ನೀಡಿದ್ದಾರೆ. ‘ಈ ವಿಡಿಯೋವನ್ನು ತಪ್ಪಾಗಿ ಬಿಂಬಿಸಲಾಗುತ್ತಿದೆ. ಇದು ನಮ್ಮ 25ನೇ ಮದುವೆಯ ವಾರ್ಷಿಕೋತ್ಸವದ ಅಂಗವಾಗಿ 2023ರ ಸೆಪ್ಟೆಂಬರ್ 2ರಂದು ಗೋವಾದಲ್ಲಿ ಶೂಟ್ ಮಾಡಲಾದ ವಿಡಿಯೋ ಆಗಿದೆ. ಅಪಘಾತಕ್ಕೂ ಇದಕ್ಕೂ ಸಂಬಂಧವಿಲ್ಲ. ಜೈಲಿನಿಂದ ಬಿಡುಗಡೆಯಾಗಿದ್ದಕ್ಕೆ ಸಂಭ್ರಮಿಸುತ್ತಿದ್ದೇವೆ ಎಂಬ ವರದಿಗಳು ಸುಳ್ಳು’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ನಟಿ ಸಾಯಿ ಧನ್ಷಿಕಾ ಜೊತೆಗೆ ತಮಿಳು ನಟ ವಿಶಾಲ್ ನಿಶ್ಚಿತಾರ್ಥ: ಚಿತ್ರಗಳು ಇಲ್ಲಿವೆ

ಏನಿದು ಪುಣೆ ಪೋರ್ಷೆ ಕಾರ್ ಘಟನೆ?

ಮೇ 2024ರಲ್ಲಿ ಪುಣೆಯಲ್ಲಿ ಅಪ್ರಾಪ್ತ ಬಾಲಕ ವೇದಾಂತ್ ಅಗರ್ವಾಲ್ ಮದ್ಯದ ಅಮಲಿನಲ್ಲಿ ಅತಿ ವೇಗವಾಗಿ ಪೋರ್ಷೆ ಕಾರನ್ನು ಚಲಾಯಿಸಿ ಇಬ್ಬರು ಐಟಿ ಇಂಜಿನಿಯರ್‌ಗಳ ಸಾವಿಗೆ ಕಾರಣವಾಗಿದ್ದನು. ಈ ಪ್ರಕರಣದಲ್ಲಿ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ ಆರೋಪದ ಮೇಲೆ ಪೋಷಕರನ್ನು ಬಂಧಿಸಲಾಗಿತ್ತು. ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್ ಇವರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version