ಕಲಬುರಗಿ, ಫೆಬ್ರವರಿ 16: ಹಲಾಲ್ ಕಟ್, ಜಟ್ಕಾ ಕಟ್, ಹಿಜಾಬ್ ವಿವಾದಗಳ ಬಳಿಕ ಇದೀಗ ಕಲಬುರಗಿಯಲ್ಲಿ ಮತ್ತೊಂದು ಧರ್ಮ ದಂಗಲ್ ಶುರುವಾಗಿದೆ. ಶಿವನ ದೇವಸ್ಥಾನಕ್ಕೆ (Shiva Temple) ಮುಸ್ಲಿಂ ಯುವಕರು (Muslim boys) ಪುಷ್ಪಾಲಂಕಾರ ಮಾಡಿದ್ದಕ್ಕೆ ಹಿಂದೂ ಸಂಘಟನೆಗಳು ಕೆರಳಿ ಕೆಂಡವಾಗಿವೆ. ಮುಸ್ಲಿಮರು ಪುಷ್ಪಾಲಂಕಾರ ಮಾಡಿದ್ದಕ್ಕೆ ಹಿಂದೂ ಸಂಘಟನೆ ಕಾರ್ಯಕರ್ತರು ಗೋಮೂತ್ರದಿಂದ ದೇವಸ್ಥಾನ ಶುದ್ಧೀಕರಣ ಮಾಡುವುದರ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತ್ತೊಂದು ಧರ್ಮ ದಂಗಲ್ ಶುರು
ಕಲಬುರಗಿಯಲ್ಲಿ ಧರ್ಮ ದಂಗಲ್ ಪ್ರಕರಣಗಳು ನಿಲ್ಲುವ ಹಾಗೆ ಕಾಣಿಸುತ್ತಿಲ್ಲ. ನಿನ್ನೆಯಷ್ಟೇ ಆಳಂದ ಲಾಡ್ಲೇ ಮಶಾಕ್ ದರ್ಗಾದಲ್ಲಿನ ಶಿವಲಿಂಗ ಪೂಜಾವಿವಾದ, ಕಲಬುರಗಿಯ ಕೋಟೆ ಆವರಣದಲ್ಲಿ ಸ್ವಯಂ ಶಂಭೋ ದೇವಸ್ಥಾನದಲ್ಲಿ ಪೂಜೆಗೆ ಹೈಡ್ರಾಮಾ ನಡೆದಿತ್ತು. ಅದಾದ ಬಳಿಕ ಮತ್ತೊಂದು ಧರ್ಮದಂಗಲ್ ಶುರುವಾಗಿದೆ.
ಇದನ್ನೂ ಓದಿ: ಆಳಂದ ಲಾಡ್ಲೇ ಮಶಾಕ್ ದರ್ಗಾದಲ್ಲಿನ ಶಿವಲಿಂಗ ಬದಲಾವಣೆ: ಪೂಜೆ ಬಳಿಕ ಹಿಂದೂಗಳು ಸ್ಫೋಟಕ ಆರೋಪ
ಅಂದಹಾಗೆ ನಿನ್ನೆ ಮಹಾಶಿವರಾತ್ರಿ ಹಬ್ಬವನ್ನ ನಗರದ ಎಲ್ಲಾ ಶಿವನ ದೇವಸ್ಥಾನಗಳಲ್ಲಿ ಸಡಗರ ಸಂಭ್ರಮದಿಂದ ಆಚರಿಸಲಾಗಿದೆ. ಅದರಂತೆ ನಗರದ ರಾಮತೀರ್ಥ ಶಿವನ ಮಂದಿರದಲ್ಲಿ ಶಿವರಾತ್ರಿ ನಿಮಿತ್ಯ ದೇವಸ್ಥಾನದ ಆವರಣ ಹಾಗೂ ಗರ್ಭ ಗುಡಿಯಲ್ಲಿನ ಶಿವಲಿಂಗಕ್ಕೆ ಪುಷ್ಪಾಲಂಕಾರ ಮಾಡಲಾಗಿತ್ತು. ಆದರೆ ಆ ಪುಷ್ಪಾಲಂಕಾರ ಮಾಡಿದ್ದು ಹೂವಿನ ವ್ಯಾಪಾರ ಮಾಡುವ ಮುಸ್ಲಿಮರು.
ಮುಸ್ಲಿಂ ಯುವಕರು ಶಿವಲಿಂಗಕ್ಕೆ ಪುಷ್ಪಾಲಂಕಾರ ಮಾಡುವ ವಿಡಿಯೋ ಯಾವಾಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಯಿತೋ, ಹಿಂದೂ ಸಂಘಟನೆಗಳು ರಾಮತೀರ್ಥ ದೇಗುಲ ಟ್ರಸ್ಟ್ ವಿರುದ್ಧ ಕಿಡಿಕಾರಿವೆ. ಅದರಂತೆ ಇಂದು ಹಿಂದೂ ಜಾಗೃತಿ ಸೇನೆ ಕಾರ್ಯಕರ್ತರು ಗೋಮೂತ್ರ ಹಾಕಿ ಶಿವಲಿಂಗ ಶುದ್ಧೀಕರಣ ಮಾಡಿದ್ದಾರೆ. ಬಳಿಕ ಶಾಸ್ತ್ರೋಕ್ತವಾಗಿ ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ್ದಾರೆ.
ಟ್ರಸ್ಟ್ ನಡೆ ಖಂಡಿಸಿದ ಹಿಂದೂ ಸಂಘಟನೆಗಳು
ಇನ್ನು ಕಲಬುರಗಿ ನಗರದ ಐತಿಹಾಸಿಕ ಹಾಗೂ ಪುರಾತನ ಕಾಲದ ರಾಮತೀರ್ಥ ದೇಗುಲಕ್ಕೆ ಖುದ್ದು ರಾಮನೇ ಭೇಟಿ ನೀಡಿ ಶಿವಲಿಂಗ ಸ್ಥಾಪನೆ ಮಾಡಿದ್ದು, ಇಂತಹ ಪವಿತ್ರ ಶಿವನ ದೇವಸ್ಥಾನವನ್ನ ಅಲಂಕಾರ ಮಾಡಲು ಮುಸ್ಲಿಂರಿಗೆ ಏಕೆ ಕೊಟ್ಟಿದ್ದಿರಿ ಅಂತಾ ರಾಮತೀರ್ಥ ಟ್ರಸ್ಟ್ ವಿರುದ್ಧ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಮುಸ್ಲಿಂ ವ್ಯಾಪಾರಸ್ಥರಿಂದ ಪುಷ್ಪಾಲಂಕಾರ ಮಾಡುವ ಮೂಲಕ ಲಕ್ಷಾಂತರ ಭಕ್ತರ ಭಕ್ತಿಗೆ ಟ್ರಸ್ಟ್ ಅಪಚಾರ ಎಸಗಿದ್ದು, ಟ್ರಸ್ಟ್ ನಡೆಯನ್ನ ಹಿಂದೂ ಸಂಘಟನೆಗಳು ತೀವ್ರವಾಗಿ ಖಂಡಿಸಿವೆ.
ಮುಸ್ಲಿಂ ವ್ಯಾಪಾರಸ್ಥರು ರಾಮತೀರ್ಥ ಶಿವನ ಮಂದಿರಕ್ಕೆ ಪುಷ್ಪಾಲಂಕಾರ ಮಾಡುವುದು ಇದೇ ಮೊದಲಲ್ಲ. ಕಳೆದ ಸುಮಾರು ವರ್ಷಗಳಿಂದಲೂ ಮುಸ್ಲಿಂ ವ್ಯಾಪಾರಸ್ಥರೇ ಪ್ರತಿವರ್ಷ ಮಹಾಶಿವರಾತ್ರಿಯಂದು ರಾಮತೀರ್ಥ ಶಿವನ ಮಂದಿರಕ್ಕೆ ಹೂವಿನ ಅಲಂಕಾರ ಮಾಡುತ್ತಾ ಬಂದಿದ್ದಾರೆ. ಆದರೆ ಈ ವಿಚಾರ ನಮಗೆ ಈ ವರ್ಷ ತಿಳಿದೆ ಅಂತಾರೆ ಹಿಂದೂ ಸಂಘಟನೆ ಕಾರ್ಯಕರ್ತರು.
ಇದನ್ನೂ ಓದಿ: ಆಳಂದದ ದರ್ಗಾದಲ್ಲಿ ನಡೆಯುತ್ತೆ ಶಿವರಾತ್ರಿ ಪೂಜೆ: ದರ್ಗಾ ಸಮಿತಿಗೆ ಸುಪ್ರೀಂನಲ್ಲೂ ಶಾಕ್
ಒಟ್ಟಿನಲ್ಲಿ ರಾಮತೀರ್ಥ ದೇವಸ್ಥಾನಕ್ಕೆ ಮುಸ್ಲಿಂ ಯುವಕರು ಪುಷ್ಪಾಲಂಕಾರ ಮಾಡಿದ್ದಕ್ಕೆ ಹಿಂದೂ ಸಂಘಟನೆಗಳು ಸಿಡಿದ್ದೆದ್ದಿದ್ದು, ಈ ಮೂಲಕ ಕಲಬುರಗಿಯಲ್ಲಿ ಮತ್ತೊಂದು ಧರ್ಮ ದಂಗಲ್ ನಡೆಯುತ್ತಾ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
