Bengaluru Air Quality: ಬಳ್ಳಾರಿಯಲ್ಲಿ ಉಸಿರಾಡಿದರೂ ಸಾಕು 3 ಸಿಗರೇಟ್ ಸೇದಿದ ಹಾಗೆ! – Kannada News | Bangalore Air Pollution Crisis: Ballary have Air quality worse than Bengaluru

ಬಳ್ಳಾರಿಯಲ್ಲಿ ಉಸಿರಾಡಿದರೂ ಸಾಕು 3 ಸಿಗರೇಟ್ ಸೇದಿದ ಹಾಗೆ

ಬೆಂಗಳೂರು, ಜನವರಿ 24: ರಾಜ್ಯದೆಲ್ಲೆಡೆ ವಾಯು ಗುಣಮಟ್ಟ (Bengaluru Air Quality) ಆತಂಕಕಾರಿ ಮಟ್ಟದಲ್ಲಿಯೇ ಇದೆ. ಬೆಂಗಳೂರಿನ ಗಾಳಿಯ ಗುಣಮಟ್ಟ 165 ಇದ್ದು, ಅನಾರೋಗ್ಯಕಾರಿ ಹಂತದಲ್ಲೇ ಇದೆ. ಆದರೆ ರಾಜಧಾನಿಯನ್ನೂ ಮೀರಿಸುವಷ್ಟು AQI ಹೊಂದಿರುವುದು ಬಳ್ಳಾರಿ. ಕೆಲ ತಿಂಗಳ ಹಿಂದೆಯೂ ಒಮ್ಮೆ ಬಳ್ಳಾರಿಯ ವಾಯ ಗುಣಮಟ್ಟ 200ಕ್ಕೇರಿತ್ತು. ಅದಾದ ಬಳಿಕ ಇಂದು ಮತ್ತೊಮ್ಮೆ ಕಳಪೆ ಮಟ್ಟಕ್ಕೆ ತಲುಪಿದೆ.

200ರ ಗಡಿ ದಾಟಿದ ಬಳ್ಳಾರಿಯ AQI

ಕೆಲ ದಿನಗಳ ಹಿಂದೆ ಬಳ್ಳಾರಿಯ ಗಾಳಿಯ ಗುಣಮಟ್ಟ 150ರ ಆಸುಪಾಸಿನಲ್ಲಿತ್ತು. ಆದರಿಂದು ಏಕಾಏಕಿ 224ಕ್ಕೆ ತಲುಪಿರುವುದು ಆತಂಕ ಸೃಷ್ಟಿಸಿದೆ. ಇದು ಬೆಂಗಳೂರಿಗಿಂತ ಕಳಪೆ ಗುಣಮಟ್ಟದ ಏರ್ ಕ್ವಾಲಿಟಿಯಾಗಿದೆ. ಇದರಿಂದ ಶ್ವಾಸಕೋಶದ ಕ್ಯಾನ್ಸರ್, ಅಸ್ತಮಾ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಿದೆ. ಬೆಂಗಳೂರಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ (WHO) ಮಿತಿಗಿಂತ 5 ಪಟ್ಟು ಹೆಚ್ಚಿರುವ ಸೂಕ್ಷ್ಮ ಕಣಗಳ ಪ್ರಮಾಣ ಆತಂಕಕಾರಿಯಾಗಿದೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕೆಗಳಲ್ಲಿ ಸಣ್ಣ ಏರುಪೇರು ಕಂಡರೂ, WHO ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ.

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)

  • ಬೆಂಗಳೂರು –165
  • ಮಂಗಳೂರು-169
  • ಮೈಸೂರು –172
  • ಬೆಳಗಾವಿ – 104
  • ಕಲಬುರ್ಗಿ-150
  • ಶಿವಮೊಗ್ಗ – 160
  • ಬಳ್ಳಾರಿ – 224
  • ಹುಬ್ಬಳ್ಳಿ- 153
  • ಉಡುಪಿ –158
  • ವಿಜಯಪುರ –53

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

16 ವಿಭಾಗದಲ್ಲಿ ನಾಮನಿರ್ದೇಶನಗೊಂಡ ಹಾರರ್ ಚಿತ್ರ; 3 ಸಾವಿರ ಕೋಟಿ ಕಲೆಕ್ಷನ್ – Kannada News | Sinners: Horror Film Creates History with 16 Oscar Noms and 3255 Cr Box Office

ಪ್ರಪಂಚದಾದ್ಯಂತ ಪ್ರತಿ ದಿನ ಹೊಸ ಹೊಸ ಸಿನಿಮಾಗಳು ಬಿಡುಗಡೆಯಾಗುತ್ತವೆ. ಆದಾಗ್ಯೂ, ಕೆಲವು ಚಲನಚಿತ್ರಗಳ ಕಥೆಯನ್ನು ಪ್ರೇಕ್ಷಕರು ತುಂಬಾ ಇಷ್ಟಪಡುತ್ತಾರೆ, ಪ್ರೇಕ್ಷಕರು ಅದನ್ನು ವೀಕ್ಷಿಸಲು ಬರುತ್ತಾರೆ. ಅಂತಹ ಒಂದು ಹಾರರ್ ಚಿತ್ರವು ಪ್ರೇಕ್ಷಕರಿಗೆ ತುಂಬಾ ಇಷ್ಟವಾಯಿತು. ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಯಶಸ್ಸು ಕಂಡಿತು. ಈ ಚಿತ್ರವು 3255 ಕೋಟಿ ರೂ. ಗಳಿಸಿದೆ. ಈ ಚಿತ್ರ ಈಗ 16 ಆಸ್ಕರ್ (Oscar) ಪ್ರಶಸ್ತಿಗಳಿಗೆ ನಾಮ ನಿರ್ದೇಶನಗೊಂಡಿದೆ. ಈ ಚಿತ್ರ ಯಾವುದು? ಆ ಬಗ್ಗೆ ಇಲ್ಲಿದೆ ವಿವರ.

ನಾವು ಮಾತನಾಡುತ್ತಿರುವ ಚಿತ್ರ ಬಾಲಿವುಡ್ ಚಿತ್ರವಲ್ಲ, ಬದಲಾಗಿ ಹಾಲಿವುಡ್ ಚಿತ್ರ. ಕಳೆದ ಕೆಲವು ದಿನಗಳಿಂದ ಹಾಲಿವುಡ್ ಹಾರರ್ ಚಿತ್ರಗಳಿಗೆ ಆಸ್ಕರ್‌ನಲ್ಲಿ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುವುದಿಲ್ಲ ಎಂಬುದನ್ನು ನೀವು ಗಮನಿಸಿರಬೇಕು. ಆದಾಗ್ಯೂ, ಈ ವರ್ಷ ಈ ನೀತಿ ಬದಲಾಗುತ್ತಿರುವಂತೆ ತೋರುತ್ತಿದೆ. ಹಾಲಿವುಡ್ ಹಾರರ್ ಚಿತ್ರ ‘ಸಿನ್ನರ್ಸ್’ ಪ್ರಸ್ತುತ ಆಸ್ಕರ್ ರೇಸ್‌ನಲ್ಲಿ ಮುಂಚೂಣಿಯಲ್ಲಿದೆ ಮತ್ತು 98 ನೇ ಅಕಾಡೆಮಿ ಪ್ರಶಸ್ತಿಗಳಿಗೆ 16 ನಾಮನಿರ್ದೇಶನಗಳನ್ನು ಪಡೆಯುವ ಮೂಲಕ ಇತಿಹಾಸ ಸೃಷ್ಟಿಸಿದೆ.

ಇದಕ್ಕೂ ಮೊದಲು, 14 ನಾಮನಿರ್ದೇಶನಗಳ ದಾಖಲೆಯನ್ನು ‘ಆಲ್ ಅಬೌಟ್ ಈವ್’, ‘ಟೈಟಾನಿಕ್’ ಮತ್ತು ‘ಲಾ ಲಾ ಲ್ಯಾಂಡ್’ ಚಿತ್ರಗಳು ಹೊಂದಿದ್ದವು. ಆದಾಗ್ಯೂ, ‘ಸಿನ್ನರ್ಸ್’ ಈ ದಾಖಲೆಯನ್ನು ಮುರಿಯುವ ಮೂಲಕ ಎಲ್ಲಾ ಚಿತ್ರಗಳನ್ನು ಮೀರಿಸಿದೆ. ಪ್ರಸಿದ್ಧ ನಿರ್ದೇಶಕ ರಯಾನ್ ಕೂಗ್ಲರ್ ನಿರ್ದೇಶನದ ಈ ಚಿತ್ರವು ಅತ್ಯುತ್ತಮ ನಿರ್ದೇಶನ, ಅತ್ಯುತ್ತಮ ಚಿತ್ರಕಥೆ ಸೇರಿದಂತೆ ಹಲವು ಪ್ರಮುಖ ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದೆ.

ನೀವು ಈ ಹಾರರ್ ಚಿತ್ರವನ್ನು ದೊಡ್ಡ ಪರದೆಯಲ್ಲಿ ವೀಕ್ಷಿಸಲು ಸಾಧ್ಯವಾಗದಿದ್ದರೆ, ನೀವು ಇನ್ನು ಮುಂದೆ ಚಿಂತಿಸಬೇಕಾಗಿಲ್ಲ. ‘ಸಿನ್ನರ್ಸ್’ ಚಿತ್ರವು OTT ಪ್ಲಾಟ್‌ಫಾರ್ಮ್ ಜಿಯೋ ಹಾಟ್‌ಸ್ಟಾರ್‌ನಲ್ಲಿ ಲಭ್ಯವಿದೆ. ಈ ಸಿನಿಮಾ ಕನ್ನಡ, ಹಿಂದಿಯಲ್ಲಿ ಲಭ್ಯವಿಲ್ಲದಿದ್ದರೂ ವೀಕ್ಷಕರು ಇಂಗ್ಲಿಷ್ ಆಡಿಯೋ ಮತ್ತು ಉಪಶೀರ್ಷಿಕೆಗಳ ಸಹಾಯದಿಂದ ಚಿತ್ರವನ್ನು ಆನಂದಿಸಬಹುದು. ‘ಸಿನ್ನರ್ಸ್’ ಚಿತ್ರವು ತನ್ನ ನಟನೆ ಮತ್ತು ನಿರ್ದೇಶನಕ್ಕಾಗಿ ಮಾತ್ರವಲ್ಲದೆ, ತಾಂತ್ರಿಕ ವಿಭಾಗದಲ್ಲೂ ವ್ಯಾಪಕ ಮೆಚ್ಚುಗೆಯನ್ನು ಗಳಿಸಿದೆ.

ಇದನ್ನೂ ಓದಿ: ಆಸ್ಕರ್ ನಾಮಿನೇಷನ್ಸ್ ಘೋಷಣೆ: ಭಾರತದ ‘ಹೋಮ್​​ಬೌಂಡ್​’ಗೆ ನಿರಾಸೆ

ಛಾಯಾಗ್ರಹಣ, ಧ್ವನಿ ನಿರ್ಮಾಣ, ನಿರ್ಮಾಣ ವಿನ್ಯಾಸ, ಸಂಕಲನ, ಪಾತ್ರವರ್ಗ, ವೇಷಭೂಷಣ ವಿನ್ಯಾಸ, ಸಂಗೀತ, ಮೇಕಪ್ ಮತ್ತು ಕೇಶ ವಿನ್ಯಾಸ ಮೊದಲಾದ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

‘ರಾಜಾಸಾಬ್’ ಚಿತ್ರದಿಂದ ನಿರ್ಮಾಪಕರಿಗೆ ಆದ ನಷ್ಟ ಎಷ್ಟು? – Kannada News | Prabhas’s Raja Saab Flop: Big Budget Fails, Story Reigns Supreme at Box Office

ದೊಡ್ಡ ಸೂಪರ್‌ಸ್ಟಾರ್ ನಿರ್ಮಾಣಕ್ಕೆ ಸಾಕಷ್ಟು ಹಣ ಖರ್ಚು ಮಾಡಿ ಮಾಡಿದ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಬ್ಲಾಕ್‌ಬಸ್ಟರ್ ಆಗುವುದಿಲ್ಲ. ಕಥೆಯೇ ಚಿತ್ರದ ಮೂಲ ಮತ್ತು ಕಥೆಯ ಬಲದ ಮೇಲೆ ಮಾತ್ರ ಚಿತ್ರ ಸೂಪರ್‌ಹಿಟ್ ಆಗಬಹುದು. ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ಬಿಡುಗಡೆಯಾದ ದೊಡ್ಡ ಬಜೆಟ್ ಚಿತ್ರ ಈಗ ಸಂಕಷ್ಟದಲ್ಲಿದೆ. ಅದುವೇ ಪ್ರಭಾಸ್ ಅವರ ‘ದಿ ರಾಜಾ ಸಾಬ್’. ಈ ಚಿತ್ರ ಅತಿದೊಡ್ಡ ಫ್ಲಾಪ್ ಚಿತ್ರವಾಗಿದೆ.

ಪ್ರಭಾಸ್ ಅವರ ಸ್ಟಾರ್‌ಡಮ್ ಕಾರಣಕ್ಕೆ ಸಿನಿಮಾ ಒಳ್ಳೆಯ ಓಪನಿಂಗ್ ಪಡೆಯಿತು. ಆದರೆ ಈ ಆವೇಗವನ್ನು ಕಾಯ್ದುಕೊಳ್ಳಲು ಸಾಧ್ಯವಾಗಲಿಲ್ಲ. ಈಗ, ಬಿಡುಗಡೆಯಾದ ಹನ್ನೆರಡನೇ ದಿನದಂದು, ಕೆಲವು ಲಕ್ಷ ರೂಪಾಯಿಗಳನ್ನು ಗಳಿಸುವುದು ಕಷ್ಟಕರವಾಗಿದೆ. 400 ಕೋಟಿ ರೂಪಾಯಿಗಳ ಬಜೆಟ್‌ನಲ್ಲಿ ನಿರ್ಮಿಸಲಾದ ಈ ಚಿತ್ರವು ಇಲ್ಲಿಯವರೆಗೆ ಶೇಕಡಾ 64ಕ್ಕಿಂತ ಹೆಚ್ಚು ನಷ್ಟವನ್ನು ಕಂಡಿದೆ.

ಪ್ರಭಾಸ್ ಅವರ ‘ದಿ ರಾಜಾ ಸಾಬ್’ ಚಿತ್ರ ನಿರ್ಮಾಪಕರ ಎಲ್ಲಾ ನಿರೀಕ್ಷೆಗಳನ್ನು ಹುಸಿಗೊಳಿಸಿದೆ. ಬಿಡುಗಡೆಗೂ ಮುನ್ನ ಈ ಚಿತ್ರದ ಬಗ್ಗೆ ತುಂಬಾ ಚರ್ಚೆ ನಡೆದಿದ್ದು, ಅದು ಎಲ್ಲಾ ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿಯುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಚಿತ್ರ ಥಿಯೇಟರ್‌ಗಳಲ್ಲಿ ಬಿಡುಗಡೆಯಾದ ತಕ್ಷಣ ಚಿತ್ರದ ಭವಿಷ್ಯ ಸ್ಪಷ್ಟವಾಯಿತು. ಮೊದಲು, ಚಲನಚಿತ್ರ ವಿಮರ್ಶಕರು ಅದರ ಬಗ್ಗೆ ನಕಾರಾತ್ಮಕವಾಗಿ ಪ್ರತಿಕ್ರಿಯಿಸಿದರು. ಪ್ರೇಕ್ಷಕರು ಚಿತ್ರವನ್ನು ಇಷ್ಟಪಡಲಿಲ್ಲ. ಚಿತ್ರದ ಕಥೆ ಮತ್ತು ನಿರ್ದೇಶನವನ್ನು ತುಂಬಾ ಟೀಕಿಸಲಾಯಿತು. ನಂತರ ಅನೇಕ ಜನರು ಸಿನಿಮಾ ಬಗ್ಗೆ ಆಸಕ್ತಿ ಕಳೆದುಕೊಂಡರು.

ಇದನ್ನೂ ಓದಿ: ಧಾರುಣವಾಗಿ ಕುಸಿದ ‘ರಾಜಾ ಸಾಬ್’ ಗಳಿಕೆ, ‘ಆದಿಪುರುಷ್’, ‘ಸಾಹೋ’ಗಿಂತಲೂ ಕಳಪೆ

‘ದಿ ರಾಜಾ ಸಾಬ್’ ಮೊದಲ ವಾರದಲ್ಲಿ 130.25 ಕೋಟಿ ರೂ. ಗಳಿಸಿತು. ಅದಾದ ನಂತರ, ಎಂಟನೇ ದಿನ ಕೇವಲ 3.5 ಕೋಟಿ ರೂ., ಒಂಬತ್ತನೇ ದಿನ 3 ಕೋಟಿ ರೂ., ಹನ್ನೊಂದನೇ ದಿನ 2.6 ಕೋಟಿ ರೂ., ಹನ್ನೆರಡನೇ ದಿನ 80 ಲಕ್ಷ ರೂ. ಮತ್ತು ಹದಿಮೂರನೇ ದಿನ 50 ಲಕ್ಷ ರೂ. ಗಳಿಸಿತು. ಕಳೆದ 14 ದಿನಗಳಲ್ಲಿ ‘ದಿ ರಾಜಾ ಸಾಬ್’ ಚಿತ್ರದ ಒಟ್ಟು ಗಳಿಕೆ ಸುಮಾರು 142.71 ಕೋಟಿ ರೂ. ಇದರಿಂದಾಗಿ, ನಿರ್ಮಾಪಕರು ಶೇ. 64.48 ಕ್ಕಿಂತ ಹೆಚ್ಚು ನಷ್ಟ ಅನುಭವಿಸಿದ್ದಾರೆ. ಟಾಲಿವುಡ್‌ಗೆ ಇದು ಇತ್ತೀಚಿನ ದಿನಗಳಲ್ಲಿ ಕಂಡ ಅತಿದೊಡ್ಡ ವೈಫಲ್ಯಗಳಲ್ಲಿ ಒಂದಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಗರಿಷ್ಠ ಸ್ಕೋರ್​ ಗಳಿಸಿದರೂ ಸೂರ್ಯನಿಗೆ ಸಿಗದ ಪಂದ್ಯ ಶ್ರೇಷ್ಠ ಪ್ರಶಸ್ತಿ – Kannada News | Instead of Suryakumar Yadav, Ishan Kishan won the Player of the Match award

ನ್ಯೂಝಿಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಭಾರತ ತಂಡ ಅಮೋಘ ಜಯ ಸಾಧಿಸಿದೆ. ಅದು ಕೂಡ 208 ರನ್​ಗಳ ಬೃಹತ್ ಗುರಿಯನ್ನು ಬೆನ್ನತ್ತುವ ಮೂಲಕ. ರಾಯ್​ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ತಂಡವು 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 208 ರನ್​ ಕಲೆಹಾಕಿತು.

ಈ ಗುರಿಯನ್ನು ಬೆನ್ನತ್ತಿದ ಭಾರತ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಕೇವಲ 6 ರನ್​ಗಳಿಸುವಷ್ಟರಲ್ಲಿ ಸಂಜು ಸ್ಯಾಮ್ಸನ್ (6) ಹಾಗೂ ಅಭಿಷೇಕ್ ಶರ್ಮಾ (0) ಅವರ ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಕಣಕ್ಕಿಳಿದ ಇಶಾನ್ ಕಿಶನ್ ಹಾಗೂ ಸೂರ್ಯಕುಮಾರ್ ಯಾದವ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು.

ಕ್ರೀಸ್​ಗೆ ಆಗಮಿಸುತ್ತಿದ್ದಂತೆ ಸಿಡಿಲಬ್ಬರ ಶುರು ಮಾಡಿದ ಇಶಾನ್ ಕಿಶನ್ ನ್ಯೂಝಿಲೆಂಡ್ ಬೌಲರ್​ಗಳನ್ನು ಮನಸೋ ಇಚ್ಛೆ ದಂಡಿಸಿದರು. ಪರಿಣಾಮ ಪಾಕೆಟ್ ಡೈನಾಮೊ ಬ್ಯಾಟ್​ನಿಂದ ಕೇವಲ 32 ಎಸೆತಗಳಲ್ಲಿ 11 ಫೋರ್ ಹಾಗೂ 4 ಭರ್ಜರಿ ಸಿಕ್ಸರ್​ಗಳು ಮೂಡಿಬಂತು. ಅಷ್ಟೇ ಅಲ್ಲದೆ 3ನೇ ವಿಕೆಟ್​ಗೆ 116 ರನ್​ಗಳ ಜೊತೆಯಾಟವಾಡಿದ ಇಶಾನ್ ಕಿಶನ್ (76) ಔಟಾದರು.

ಇದಾದ ಬಳಿಕ ಸಂಪೂರ್ಣ ಜವಾಬ್ದಾರಿ ಹೆಗಲೇರಿಸಿಕೊಂಡ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಮೈದಾನದ ಮೂಲೆ ಮೂಲೆಗೂ ಫೋರ್​ಗಳನ್ನು ಬಾರಿಸಿದ ಸೂರ್ಯ 37 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 9 ಫೋರ್​ಗಳೊಂದಿಗೆ ಅಜೇಯ 82 ರನ್​ ಬಾರಿಸಿದರು. ಈ ಮೂಲಕ 15.2 ಓವರ್​ಗಳಲ್ಲಿ ಟೀಮ್ ಇಂಡಿಯಾ ಗುರಿ ಮುಟ್ಟಿಸಿದರು.

ಸೂರ್ಯನಿಗೆ ಸಿಗದ ಪಂದ್ಯ ಶ್ರೇಷ್ಠ ಪ್ರಶಸ್ತಿ:

ಈ ಪಂದ್ಯದಲ್ಲಿ ಗರಿಷ್ಠ ಸ್ಕೋರ್​ಗಳಿಸಿದ್ದ ಸೂರ್ಯಕುಮಾರ್ ಯಾದವ್. ಕೇವಲ 37 ಎಸೆತಗಳನ್ನು ಎದುರಿಸಿದ ಸೂರ್ಯ ಅಜೇಯ 82 ರನ್​ ಚಚ್ಚಿದ್ದರು. ಇದಾಗ್ಯೂ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಿದ್ದು ಇಶಾನ್ ಕಿಶನ್​ಗೆ ಎಂಬುದು ವಿಶೇಷ.

ಇದಕ್ಕೆ ಮುಖ್ಯ ಕಾರಣ ಇಶಾನ್ ಕಿಶನ್ ಆಡಿದ ಇನಿಂಗ್ಸ್. ಟೀಮ್ ಇಂಡಿಯಾ 6 ವಿಕೆಟ್ ಕಳೆದುಕೊಂಡಿದ್ದಾಗ ಕ್ರೀಸ್​ಗೆ ಆಗಮಿಸಿದ ಇಶಾನ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಈ ಸಿಡಿಲಬ್ಬರದೊಂದಿಗೆ ಇಡೀ ಪಂದ್ಯದ ಚಿತ್ರಣವನ್ನು ಸಹ ಬದಲಿಸಿದ್ದರು.

ಅಂದರೆ ಆರಂಭಿಕ ಆಘಾತಕ್ಕೊಳಗಾಗಿದ್ದ ಭಾರತ ತಂಡವನ್ನು ಪಾರು ಮಾಡಿದ್ದು ಇಶಾನ್ ಕಿಶನ್. ಯುವ ಎಡಗೈ ದಾಂಡಿಗನ ಸಿಡಿಲಬ್ಬರದಿಂದಾಗಿ ಉಳಿದ ಬ್ಯಾಟರ್​ಗಳ ಒತ್ತಡ ಕೂಡ ಇಳಿಯಿತು. ಇದಾದ ಬಳಿಕವಷ್ಟೇ ಸೂರ್ಯಕುಮಾರ್ ಯಾದವ್ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ್ದರು.

ಹೀಗಾಗಿಯೇ ಅಜೇಯ 82 ರನ್​ ಬಾರಿಸಿದ ಸೂರ್ಯಕುಮಾರ್ ಯಾದವ್ ಅವರ ಬ್ಯಾಟಿಂಗ್​ಗಿಂತ 76 ರನ್​ಗಳಿಸಿದ ಇಶಾನ್ ಕಿಶನ್ ಅವರ ಇನಿಂಗ್ಸ್​ ಅನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ಈ ಇನಿಂಗ್ಸ್ ಇಡೀ ಪಂದ್ಯ ಚಿತ್ರಣ ಬದಲಿಸಿದ್ದರಿಂದ ಇಶಾನ್ ಕಿಶನ್​ಗೆ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ನೀಡಲಾಗಿದೆ.

ಇದನ್ನೂ ಓದಿ: ಭಾರತೀಯ ಬ್ಯಾಟರ್​ಗಳ ಸಿಡಿಲಬ್ಬರಕ್ಕೆ ಪಾಕಿಸ್ತಾನ್ ವಿಶ್ವ ದಾಖಲೆ ಧೂಳೀಪಟ

ವಿಶೇಷ ಎಂದರೆ ಇಶಾನ್ ಕಿಶನ್ ಟೀಮ್ ಇಂಡಿಯಾ ಪರ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆಯುತ್ತಿರುವುದು ಬರೋಬ್ಬರಿ 4 ವರ್ಷಗಳ ಬಳಿಕ. ಅಂದರೆ ಇದಕ್ಕೂ ಮುನ್ನ 2022 ರಲ್ಲಿ ಶ್ರೀಲಂಕಾ ವಿರುದ್ಧ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಇದೀಗ ಸಿಡಿಲಬ್ಬರದ ಬ್ಯಾಟಿಂಗ್​ನೊಂದಿಗೆ ಪಾಕೆಟ್ ಡೈನಾಮೊ ಮತ್ತೆ ಸದ್ದು ಮಾಡಿರುವುದು ವಿಶೇಷ.

Source link

ಹುಬ್ಬಳ್ಳಿ ಮನೆ ಹಂಚಿಕೆಗೆ ಕೇಂದ್ರ ಸಚಿವರ ಆಹ್ವಾನಿಸದೆ ಶಿಷ್ಟಾಚಾರ ಮರೆತ ಸಿದ್ದರಾಮಯ್ಯ ಸರ್ಕಾರ: ಬಿಜೆಪಿ ಆರೋಪ – Kannada News | Hubballi Slum Board pmay House Distribution Turns Political, BJP Protests Alleging Congress violates protocol

ಕೇಂದ್ರ ಸಚಿವರ ಆಹ್ವಾನಿಸದೆ ಶಿಷ್ಟಾಚಾರ ಮರೆತ ಸಿದ್ದರಾಮಯ್ಯ ಸರ್ಕಾರ: ಬಿಜೆಪಿ ಆರೋಪ

ಹುಬ್ಬಳ್ಳಿ, ಜನವರಿ 24: ಕರ್ನಾಟಕ ಸ್ಲಂ ಅಭಿವೃದ್ಧಿ (Karnataka Slum Board) ಮಂಡಳಿಯಿಂದ ನಿರ್ಮಾಣಗೊಂಡ ಮನೆಗಳ ಹಕ್ಕುಪತ್ರ ಹಂಚಿಕೆ ಕಾರ್ಯಕ್ರಮ ಇಂದು ಹುಬ್ಬಳ್ಳಿಯ ಮಂಟೂರು ರಸ್ತೆಯಲ್ಲಿ ನಡೆಯಲಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ (PMAY) ಮಂಜೂರಾದ ಮನೆಗಳ ಹಂಚಿಕೆ ನೆಪದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮ ರಾಜಕೀಯವಾಗಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಕಾರ್ಯಕ್ರಮಕ್ಕೆ ಕೇಂದ್ರ ಸಚಿವರು ಹಾಗೂ ಬಿಜೆಪಿ (BJP) ಶಾಸಕರನ್ನು ಆಹ್ವಾನಿಸಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿ ಇಂದು ಬೆಳಗ್ಗೆ 11.30ಕ್ಕೆ ಪ್ರತಿಭಟನೆ ನಡೆಸಲಿದೆ. ಸರ್ಕಾರ ಶಿಷ್ಟಾಚಾರ ಉಲ್ಲಂಘನೆ ಮಾಡಿದೆ ಎಂದು ಆರೋಪಿಸಿರುವ ಬಿಜೆಪಿ, ಇದು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮದಂತೆಯೇ ಆಯೋಜನೆಯಾಗಿದೆ ಎಂದು ಟೀಕಿಸಿದೆ. ಪ್ರತಿಭಟನೆಯ ಭಾಗವಾಗಿ ದುರ್ಗದಬೈಲ್ ವೃತ್ತದಿಂದ ಬಸವೇಶ್ವರ ನಗರವರೆಗೆ ರ್ಯಾಲಿ ನಡೆಯಲಿದ್ದು, ಶಾಸಕ ಮಹೇಶ್ ಟೆಂಗಿನಕಾಯಿ, ಶಾಸಕ ಎಂ.ಆರ್. ಪಾಟೀಲ್ ಹಾಗೂ ವಿಧಾನಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್ ಭಾಗಿಯಾಗಲಿದ್ದಾರೆ.

ಸಚಿವ ಜಮೀರ್ ಅಹ್ಮದ್ ಹೇಳಿದ್ದೇನು?

ಕೇಂದ್ರ ಸಚಿವರಿಗೆ ಆಹ್ವಾನ ನೀಡಿಲ್ಲ ಎಂಬ ಆರೋಪವನ್ನು ವಸತಿ ಸಚಿವ ಜಮೀರ್ ಅಹ್ಮದ್ ಅಲ್ಲಗಳೆದಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರಿಗೆ ಆಹ್ವಾನ ನೀಡಿದ್ದೆವು. ಆದರೆ ಅವರು, ವಿದೇಶ ಪ್ರವಾಸ ನಿಗದಿಯಾಗಿರುವುದರಿಂದ ದಿನಾಂಕ ಬದಲಾಯಿಸಲು ಮನವಿ ಮಾಡಿದ್ದರು ಎಂದು ಜಮೀರ್ ಅಹ್ಮದ್ ತಿಳಿಸಿದ್ದಾರೆ.

ಇಂದು ನಡೆಯುವ ಮನೆಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಜಮೀರ್ ಅಹ್ಮದ್ ಸೇರಿದಂತೆ ಹಲವು ಹಿರಿಯ ಕಾಂಗ್ರೆಸ್ ನಾಯಕರು ಭಾಗವಹಿಸಲಿದ್ದಾರೆ. ಐದು ಜಿಲ್ಲೆಗಳ 20,360 ಫಲಾನುಭವಿಗಳಿಗೆ ಇಂದು ಹಕ್ಕುಪತ್ರ ವಿತರಣೆ ಮಾಡಲಾಗುತ್ತಿದ್ದು, ಕಾರ್ಯಕ್ರಮಕ್ಕೆ ಸುಮಾರು ಮೂರು ಲಕ್ಷ ಜನ ಸೇರುವ ನಿರೀಕ್ಷೆ ಇದೆ.

ರಾಜ್ಯಾದ್ಯಂತ ಒಟ್ಟು 42,345 ಮನೆಗಳ ಹಸ್ತಾಂತರದ ನೆಪದಲ್ಲಿ ಅದ್ದೂರಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಇದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಶಕ್ತಿ ಪ್ರದರ್ಶನವೆಂದು ವಿರೋಧ ಪಕ್ಷಗಳು ವ್ಯಾಖ್ಯಾನಿಸುತ್ತಿವೆ. ವಿಶೇಷವಾಗಿ ಎಐಸಿಸಿ ಅಧ್ಯಕ್ಷ ಖರ್ಗೆ ಅವರ ಸಮ್ಮುಖದಲ್ಲಿ ಈ ಕಾರ್ಯಕ್ರಮ ನಡೆಯುತ್ತಿರುವುದು ರಾಜಕೀಯ ಮಹತ್ವ ಪಡೆದುಕೊಂಡಿದೆ.

ಮನೆ ಹಂಚಿಕೆ ಹೆಸರಲ್ಲಿ ಸಿದ್ದರಾಮಯ್ಯ ಶಕ್ತಿ ಪ್ರದರ್ಶನವಾ?

ಉತ್ತರ ಕರ್ನಾಟಕದಲ್ಲಿ ತಮ್ಮ ಜನಬೆಂಬಲ ತೋರಿಸುವ ಉದ್ದೇಶದಿಂದಲೇ ಈ ರೀತಿಯ ಭಾರೀ ಜನಸಮಾವೇಶ ಆಯೋಜಿಸಲಾಗಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ. ಮುಖ್ಯಮಂತ್ರಿ ಸ್ಥಾನಕ್ಕೆ ಸಂಬಂಧಿಸಿದ ರಾಜಕೀಯ ಸಂದೇಶ ರವಾನೆಗೂ ಈ ಕಾರ್ಯಕ್ರಮ ಉಪಯೋಗವಾಗಬಹುದು ಎಂಬ ಊಹಾಪೋಹಗಳು ಹರಿದಾಡುತ್ತಿವೆ.

ಇದನ್ನೂ ಓದಿ: ಧಾರವಾಡ: ಮನೆ ಕೊಟ್ಟ ಸರ್ಕಾರ, ಮೂಲ ಸೌಕರ್ಯ ಕೊಡಲು ಮರೆಯಿತು!

ಲಕ್ಷಾಂತರ ಜನ ಸೇರುವ ಈ ಕಾರ್ಯಕ್ರಮದಿಂದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದೂರ ಉಳಿದಿರುವುದು ಸಹ ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸೇರಿಸಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಲಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಒಟ್ಟಾರೆ, ಮನೆಗಳ ಹಸ್ತಾಂತರ ಕಾರ್ಯಕ್ರಮವು ಕೇವಲ ಕಲ್ಯಾಣ ಯೋಜನೆಯಷ್ಟೇ ಅಲ್ಲದೆ, ರಾಜ್ಯ ರಾಜಕೀಯದಲ್ಲಿ ಮತ್ತೊಂದು ಮಹತ್ವದ ಅಧ್ಯಾಯಕ್ಕೆ ಸಾಕ್ಷಿಯಾಗುತ್ತಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕ ಹವಾಮಾನ ವರದಿ: ಬೆಂಗಳೂರಿನಲ್ಲಿ ಚಳಿ, ರಾಜ್ಯದೆಲ್ಲೆಡೆ ಒಣ ಹವೆ – Kannada News | Bengaluru temperature: Cold weather in Bengaluru, Dry weather all over karnataka

ಕರ್ನಾಟಕ ಹವಾಮಾನ ವರದಿ: ಬೆಂಗಳೂರಿನಲ್ಲಿ ಚಳಿ, ರಾಜ್ಯದೆಲ್ಲೆಡೆ ಒಣ ಹವೆ

ಬೆಂಗಳೂರು, ಜನವರಿ 24: ಹಲವು ದಿನಗಳಿಂದ ರಾಜ್ಯದಲ್ಲಿ ಶೀತ ಮತ್ತು ಒಣಹವೆಯ (Weather Forecast) ವಾತಾವರಣದವಿದೆ. ಇಂದೂ ಕರಾವಳಿ ಸೇರಿದಂತೆ ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನಲ್ಲಿಯೂ ತೀವ್ರ ಚಳಿಯ ಜೊತೆಗೆ ಒಣಹವೆಯಿರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ರಾಜ್ಯದೆಲ್ಲೆಡೆ ಕಳೆದ ಕೆಲ ದಿನಗಳಿಂದ ಒಣ ಹವೆಯ ವಾತಾವರಣವಿದ್ದು, ಇನ್ನೂ ನಾಲ್ಕು ದಿನ ಇದೇ ಹವಾಮಾನ ಇರಲಿದೆ ಎಂದು ಇಲಾಖೆ ತಿಳಿಸಿದೆ. ಬೆಂಗಳೂರಿನಲ್ಲಿ ಶೀತದೊಂದಿಗೆ ಮಂಜು ಕವಿದ ವಾತಾವರಣ ಇರಲಿದ್ದು, ಬೆಚ್ಚಗಿನ ಉಡುಪು ಧರಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.

ಎಲ್ಲೆಲ್ಲಿ ಒಣಹವೆ?

ದಕ್ಷಿಣ ಒಳನಾಡಿನ ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಬಳ್ಳಾರಿ, ಚಾಮರಾಜನಗರ, ತುಮಕೂರು, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ ಮತ್ತು ಮೈಸೂರು ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಕೊಡಗು, ಹಾಸನ, ಶಿವಮೊಗ್ಗ ಮತ್ತು ವಿಜಯನಗರ ಜಿಲ್ಲೆಗಳಲ್ಲಿಯೂ ಒಣ ಹವೆಯ ವಾತಾವರಣ ಇರಲಿದೆ.

ಉತ್ತರ ಒಳನಾಡು ಭಾಗದ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರದಲ್ಲಿ ಕಳೆದ ಹಲವು ದಿನಗಳಿಂದ ಒಣಹವೆಯ ವಾತಾವರಣವಿದ್ದು, ಇಂದೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿಯ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣ ಹವೆಯಿರಲಿದೆ ಎಂದು ಇಲಾಖೆ ತಿಳಿಸಿದೆ.

ಬೆಂಗಳೂರಿನಲ್ಲಿ ಮಂಜು

ಇಂದು ನಗರದಲ್ಲಿ ಎಂದಿನಂತೆ ಚಳಿಯ ಜೊತೆಗೆ ಮಂಜು ಮುಸುಕಿದ ವಾತಾವರಣವಿರುವುದರಿಂದ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಚ್ಚರಿಕೆಯಿಂದಿರುವಂತೆ ಸಲಹೆ ನೀಡಿರುವ ಹವಾಮಾನ ಇಲಾಖೆ, ಬೆಚ್ಚನೆಯ ಉಡುಪು ಧರಿಸುವುದರ ಜೊತೆಗೆ ಸಮತೋಲನ ಆಹಾರ ಸೇವನೆಗೆ ಒತ್ತು ನೀಡುವಂತೆ ಸಲಹೆ ನೀಡಿದೆ. ಇಂದು ಬೆಂಗಳೂರಿನ ತಾಪಮಾನ ಕನಿಷ್ಠ 15°C ಇದ್ದು, ಗರಿಷ್ಠ 30°C ಇರಲಿದೆ ಎಂದು ಇಲಾಖೆ ತಿಳಿಸಿದೆ. ಈ ರೀತಿಯ ತೀವ್ರ ಚಳಿಯಿಂದ ಜನರ ಆರೋಗ್ಯದಲ್ಲಿ ಏರುಪೇರಾಗುತ್ತಿದ್ದು, ಬೆಚ್ಚಗಿನ ಹೊದಿಕೆ ಹೊತ್ತುಕೊಳ್ಳಬೇಕು ಹಾಗೂ ಬಿಸಿ ಆಹಾರ ಸೇವನೆ ಮಾಡಬೇಕೆಂದು ವೈದ್ಯರು ಸೂಚಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 7:29 am, Sat, 24 January 26

Source link

ಭಾರತೀಯ ಬ್ಯಾಟರ್​ಗಳ ಸಿಡಿಲಬ್ಬರಕ್ಕೆ ಪಾಕಿಸ್ತಾನ್ ವಿಶ್ವ ದಾಖಲೆ ಧೂಳೀಪಟ – Kannada News | Indian Team Breaks Pakistan World Record in T20 Cricket

ಟಿ20 ಕ್ರಿಕೆಟ್​ನಲ್ಲಿ ಹೊಸ ವಿಶ್ವ ದಾಖಲೆ ನಿರ್ಮಾಣವಾಗಿದೆ. ಈ ವರ್ಲ್ಡ್​ ರೆಕಾರ್ಡ್ ನಿರ್ಮಿಸಿರುವುದು ಟೀಮ್ ಇಂಡಿಯಾ (Team India). ಅದು ಕೂಡ ಪಾಕಿಸ್ತಾನ್ (Pakistan) ತಂಡದ ವಿಶ್ವ ದಾಖಲೆಯನ್ನು ಧೂಳೀಪಟ ಮಾಡುವ ಮೂಲಕ ಎಂಬುದು ವಿಶೇಷ. 

Source link

ಗಿಲ್ಲಿ ಬಳಿಯೇ ಉಳೀತಾ ಚಿನ್ನದ ಚೈನ್, ಉಂಗುರ? ವಿವರಿಸಿದ ನಟ – Kannada News | Gilli Nata Got Those Gold From Sharavana? Bigg Boss Kannada 12 Winner explain real story

‘ಬಿಗ್ ಬಾಸ್ ಕನ್ನಡ ಸೀಸನ್ 12’ರ ವಿನ್ನರ್ ಗಿಲ್ಲಿ ನಟ (GillI Nata) ಅವರಿಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿದೆ. ಹೀಗಾಗಿ, ಅವರಿಗೆ ಕೆಲವು ಕಡೆಗಳಲ್ಲಿ ಅವರನ್ನು ಉದ್ಘಾಟನೆಗೆ ಕರೆಯಲಾಗುತ್ತಿದೆ. ಚಿನ್ನದ ಶಾಪ್ ಒಂದರ ಉದ್ಘಾಟನೆಗೆ ಗಿಲ್ಲಿ ನಟ ತೆರಳಿದ್ದರು. ಈ ವೇಳೆ ಅವರ ಮೇಲೆ ಸಾಕಷ್ಟು ಚಿನ್ನ ಹೇರಲಾಯಿತು. ನಂತರದ ಕಥೆಯನ್ನು ಗಿಲ್ಲಿ ವಿವರಿಸಿದ್ದಾರೆ. ಆ ಚಿನ್ನ ನೋಡಿದ ಅವರು ತಮ್ಮದೇ ಎಂದುಕೊಂಡಿದ್ದರು.

ಶರವಣ ಒಡೆತನದ ಚಿನ್ನದ ಅಂಗಡಿ ಉದ್ಘಾಟನೆ ನಡೆದಿದೆ. ಗಿಲ್ಲಿ ನಟ ಅವರನನು ಉದ್ಘಾಟನೆಗೆ ಕರೆಸಲಾಗಿದೆ. ಈ ವೇಳೆ ಗಿಲ್ಲಿ ಅವರು ರಿಬ್ಬನ್ ಕತ್ತರಿಸಿ ಶಾಪ್ ಓಪನ್ ಮಾಡಿದರು. ಆ ಬಳಿಕ ಶರವಣ ಅವರು ಚಿನ್ನದ ಸರಗಳನ್ನು ಗಿಲ್ಲಿಗೆ ತೊಡಿಸಿದ್ದರು. ಅಷ್ಟೇ ಅಲ್ಲ, ಉಂಗುರಗಳನ್ನು ಕೂಡ ಹಾಕಿದರು. ಈ ವಿಡಿಯೋ ವೈರಲ್ ಆಗಿತ್ತು.

ಗಿಲ್ಲಿ ಸಾಮಾನ್ಯ ಜೀವನ ನಡೆಸುತ್ತಾ ಬಂದವರು. ಅವರು ಇಷ್ಟೊಂದು ಚಿನ್ನವನ್ನು ನೋಡಿಯೂ ಇರಲಿಲ್ಲ. ಹಾಗಿರುವಾಗ ದಪ್ಪನೆಯ ಚಿನ್ನದ ಹಾರಗಳೆಲ್ಲ ಇವರ ಕತ್ತೇರಿತ್ತು. ಶರವಣ ಅವರು ಒಂದೊಂದೇ ಚೈನ್​ ಹಾಗೂ ಉಂಗುರು ತೆಗೆದು ಗಿಲ್ಲಿಗೆ ತೊಡಿಸಿದ್ದರು. ಇದನ್ನು ನೋಡಿ ಗಿಲ್ಲಿ ಶಾಕ್ ಆಗಿದ್ದರು. ಅಷ್ಟೇ ಅಲ್ಲ, ಶರವಣಗೂ ಶಾಕ್ ಕೊಟ್ಟಿದ್ದರು. ‘ಈ ಚಿನ್ನ ನನಗೆ ಅಲ್ಲವ’ ಎಂದು ಪ್ರಶ್ನಿಸಿದ್ದರು ಗಿಲ್ಲಿ. ಹಾಗಾದರೆ ಶರವಣ ಅವರು ಈ ಚಿನ್ನವನ್ನು ಗಿಲ್ಲಿಗೆ ಕೊಟ್ರಾ?

ಈ ಬಗ್ಗೆ ಗಿಲ್ಲಿ ನಟ ಮಾತನಾಡಿದ್ದಾರೆ. ಗಿಲ್ಲಿ ಕೈಗೆ ಹಾಕುತ್ತಾ ಇದ್ದಿದ್ದು ಉಂಗುರುವಂತೆ. ಅಷ್ಟೊಂದು ಚಿನ್ನವನ್ನು ಅವರು ಹಾಕಿಯೇ ಇರಲಿಲ್ಲವಂತೆ. ಶರವಣ ಅವರು ಚಿನ್ನ ಹಾಕಿದ್ದು ನೋಡಿ ಅದು ತಮಗೇ ಇರಬಹುದು ಎಂದು ಅವರು ಭಾವಿಸಿದ್ದರಂತೆ. ‘ಏನಿದು ಕೇಳ್ತಾನೆ ಇಲ್ವಲ್ಲ. ಬಹುಶಃ ನನಗೆ ಇರಬಹುದು ಎಂದುಕೊಂಡು, ಚೈನ್​​ನ ಶರ್ಟ್ ಒಳಗೆ ಹಾಕಿಕೊಂಡೆ’ ಎಂದಿದ್ದಾರೆ ಗಿಲ್ಲಿ. ಆದರೆ, ಆ ಬಳಿಕ ಅಸಲಿ ವಿಷಯ ಗೊತ್ತಾಗಿದೆ. ಅವರು ಚಿನ್ನವನ್ನು ಹಿಂದಿರುಗಿಸಿದ್ದಾರೆ.

ಇದನ್ನೂ ಓದಿ: ಗಿಲ್ಲಿಗೆ ದಪ್ಪನೆಯ ಚಿನ್ನದ ಚೈನ್ ಗಿಫ್ಟ್ ಕೊಟ್ಟ ಶರವಣ?

ಈ ಮೊದಲು ಕಿಚ್ಚ ಸುದೀಪ್ ಅವರು ಶರವಣ ಅವರ ಚಿನ್ನದ ಶಾಪ್​​​ನ ಉದ್ಘಾಟನೆ ಮಾಡಲು ತೆರಳಿದ್ದರು. ಈ ವೇಳೆ ಅವರಿಗೂ ಶರವಣ ಅವರು ಚಿನ್ನ ಹಾಕಿದ್ದರು. ಈ ಮೊದಲಿನಿಂದಲೂ ಅವರು ಶಾಪ್ ಉದ್ಘಾಟನೆಗೆ ಬರೋ ಅತಿಥಿಗಳಿಗೆ ಈ ರೀತಿ ಉಂಗುರ ಹಾಕುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

SSLC ಟಾಪರ್​ಗಳಿಗೆ ಇನ್ಮುಂದೆ ಲ್ಯಾಪ್‌ಟಾಪ್ ಬದಲು ನಗದು ಬಹುಮಾನ – Kannada News | Now SSLC Toppers from Karnataka to Get Cash Prize Instead of Laptops, Government Decision

ಬೆಂಗಳೂರು, ಜನವರಿ 24: ರಾಜ್ಯ ಸರ್ಕಾರ ಇನ್ನು ಮುಂದೆ ಎಸ್‌ಎಸ್‌ಎಲ್‌ಸಿ (SSLC) ಟಾಪರ್‌ಗಳಿಗೆ ಲ್ಯಾಪ್‌ಟಾಪ್‌ ಬದಲಿಗೆ ನಗದು ಬಹುಮಾನ (Cash Prize) ನೀಡಲಿದೆ. ಈ ಬಗ್ಗೆ ಶಿಕ್ಷಣ ಇಲಾಖೆ ಈಗಾಗಲೇ ಆದೇಶ ಹೊರಡಿಸಿದ್ದು, ಅದರ ಪ್ರಕಾರ ಪ್ರತಿ ಜಿಲ್ಲೆಯಲ್ಲಿ ಅಗ್ರ ಸ್ಥಾನ ಪಡೆದ ಟಾಪ್-3 ವಿದ್ಯಾರ್ಥಿಗಳ ಆಧಾರ್ ಲಿಂಕ್ಡ್ ಖಾತೆಗೆ ನೇರ ನಗದು ವರ್ಗಾವಣೆ ಮಾಡಲಾಗುತ್ತದೆ. ನಗದು ಬಹುಮಾನವು ಪ್ರತಿ ವಿದ್ಯಾರ್ಥಿಗೆ 50,000 ರೂ. ಆಗಿರಲಿದೆ.

2024-25ನೇ ಶೈಕ್ಷಣಿಕ ವರ್ಷದಲ್ಲಿ 758 ವಿದ್ಯಾರ್ಥಿಗಳು ರಾಜ್ಯ ವಿದ್ಯಾರ್ಥಿವೇತನ ಪೋರ್ಟಲ್ (SSP) ಮೂಲಕ ನಗದು ಬಹುಮಾನಕ್ಕೆ ಅರ್ಹರಾಗಿದ್ದಾರೆ.

ವಿದ್ಯಾರ್ಥಿಗಳ ಆಧಾರ್ ಸಂಖ್ಯೆಗೆ ಲಿಂಕ್ ಮಾಡಲಾದ ಬ್ಯಾಂಕ್ ಖಾತೆಗೆ ಹಣವನ್ನು ಜಮಾ ಮಾಡಲಾಗುತ್ತದೆ. ‘ಗುಣಮಟ್ಟದ ಭರವಸೆ ಮತ್ತು ವಿದ್ಯಾರ್ಥಿಗಳಿಗೆ ಪ್ರೋತ್ಸಾಹದ ಉಪಕ್ರಮ’ ಯೋಜನೆ ಅಡಿಯಲ್ಲಿ ಈ ಯೋಜನೆಗೆ ಸುಮಾರು 325 ಲಕ್ಷ ರೂ.ಗಳನ್ನು ಮೀಸಲಿಡಲಾಗಿದೆ ಎಂದು ಇಲಾಖೆ ತಿಳಿಸಿದೆ.

ಮಕ್ಕಳ ದಿನಾಚರಣೆ ಸಂದರ್ಭದಲ್ಲಿಈ ನಿರ್ಧಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದರು. ಆ ನಂತರ, ಸರ್ಕಾರ ಇದೀಗ ಆದೇಶ ಹೊರಡಿಸಿದೆ. ತಮಗೆ ದೊರೆತ ಬಹುಮಾನವನ್ನು ಹೇಗೆ ಬಳಸಿಕೊಳ್ಳಬೇಕೆಂಬ ಸ್ವಾತಂತ್ರ್ಯ ವಿದ್ಯಾರ್ಥಿಗಳಿಗೆ ನೀಡಬೇಕು ಎಂಬ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಶಾಲೆಗಳಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಶಿಕ್ಷಣ ಇಲಾಖೆ ವಿಶೇಷ ಕಾಳಜಿ: ಇಲ್ಲಿದೆ ಮಾರ್ಗಸೂಚಿ

ಲ್ಯಾಪ್‌ಟಾಪ್‌ ನೀಡುವ ಬದಲು ನಗದು ಬಹುಮಾನ ನೀಡುವುದರಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಆಯ್ಕೆ ಮತ್ತು ಪ್ರಯೋಜನ ದೊರಕಲಿದೆ ಎಂದು ಶಾಲಾ ಹಾಗೂ ಶಿಕ್ಷಣ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಐಎಂಡಿಬಿಯಲ್ಲಿ 7.1 ರೇಟಿಂಗ್; ಈ ಗೋಲ್ಡ್ ಸ್ಮಗ್ಲಿಂಗ್ ವೆಬ್ ಸೀರಿಸ್​​ನ ಮಿಸ್ ಮಾಡಬೇಡಿ – Kannada News | Taskaree: The Smuggler’s Web: Emraan Hashmi’s Netflix Thriller on Gold Smuggling

ಇತ್ತೀಚೆಗೆ ರನ್ಯಾ ರಾವ್ ಪ್ರಕರಣ ಸಾಕಷ್ಟು ಚರ್ಚೆಗೆ ಕಾರಣ ಆಗಿತ್ತು. ನಟಿ ಹಾಗೂ ಪೊಲೀಸ್ ಅಧಿಕಾರಿ ಮಗಳಾಗಿರೋ ಅವರು ವಿದೇಶದಿಂದ ಭಾರತಕ್ಕೆ ಚಿನ್ನವನ್ನು ತರುತ್ತಿದ್ದರು. ಅಕ್ರಮವಾಗಿ ಸಾಕಷ್ಟು ಚಿನ್ನವನ್ನು ಭಾರತಕ್ಕೆ ಸೇರಿಸಿದ್ದರು. ಈ ಸಂದರ್ಭದಲ್ಲಿ ಚಿನ್ನ ಕಳ್ಳ ಸಾಗಣೆಯ ಕುರಿತು ಈಗ ವೆಬ್ ಸೀರಿಸ್ ಒಂದು ಬಂದಿದೆ. ಅದುವೇ ‘ಟಾಸ್ಕ್​​ರೀ: ದಿ ಸ್ಮಗ್ಲರ್ಸ್ ವೆಬ್’. ಇಮ್ರಾನ್ ಹಶ್ಮಿ (Emraan Hashmi ) ನಟನೆಯ ಈ ವೆಬ್ ಸೀರಿಸ್ ನೆಟ್​ಫ್ಲಿಕ್ಸ್​​ನಲ್ಲಿ ವೀಕ್ಷಣೆಗೆ ಲಭ್ಯವಿದೆ. ಹಿಂದಿ, ಇಂಗ್ಲಿಷ್ ಮೊದಲಾದ ಭಾಷೆಗಳಲ್ಲಿ ಸರಣಿ ಲಭ್ಯವಿದೆ. ಕನ್ನಡ ಭಾಷೆಯಲ್ಲಿ ಚಿತ್ರ ಇಲ್ಲ.

ಬೇರೆ ಬೇರೆ ದೇಶಗಳಿಂದ ಭಾರತಕ್ಕೆ ಚಿನ್ನ, ಡ್ರಗ್ಸ್, ದುಬಾರಿ ಬ್ಯಾಗ್, ವಾಚ್​​ಗಳನ್ನು ಅಕ್ರಮವಾಗಿ ತರಲಾಗುತ್ತದೆ. ಟ್ಯಾಕ್ಸ್ ಕಟ್ಟದೆ ಅದನ್ನು ಭಾರತದ ಮಾರುಕಟ್ಟೆಗೆ ಸೇರಿಸುವ ದೊಡ್ಡ ಜಾಲವೇ ಇದೆ. ಈ ಜಾಲ ಹೇಗೆ ಕೆಲಸ ಮಾಡುತ್ತದೆ ಎಂಬುದರ ಐಡಿಯಾ ಯಾರಿಗೂ ಇರೋದಿಲ್ಲ. ಇದನ್ನು ತೋರಿಸುವ ಉದ್ದೇಶದಿಂದಲೇ ‘ಟಾಸ್ಕ್​​ರೀ’ ವೆಬ್ ಸರಣಿ ಬಂದಿದೆ.

ಅರ್ಜುನ್ (ಇಮ್ರಾನ್ ಹಷ್ಮಿ) ಓರ್ವ ಪ್ರಾಮಾಣಿಕ ಕಸ್ಟಮ್ ಅಧಿಕಾರಿ. ಅಲ್ಲಿ ಅವರು ಸುಪರಿಡಂಟ್ ಸ್ಥಾನ ಅಲಂಕರಿಸಿದ್ದಾರೆ. ಅವರ ರೀತಿಯೇ ಕೆಲವು ಪ್ರಾಮಾಣಿಕ ಅಧಿಕಾರಿಗಳು ಮುಂಬೈ ವಿಮಾನ ನಿಲ್ದಾಣದ ಕಸ್ಟಮ್ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೆಲ ಅಪ್ರಾಮಾಣಿಕ ಅಧಿಕಾರಿಗಳು ಇದ್ದಾರೆ. ಇವರು ಒಂದು ದೊಡ್ಡ ಚಿನ್ನ ಅಕ್ರಮ ಸಾಗಾಣೆಯ ಜಾಲ ಪತ್ತೆ ಹಚ್ಚುತ್ತಾರೆ. ಅಲ್ಲಿಂದ ತೆರೆದುಕೊಳ್ಳುತ್ತದೆ ಕಥೆ. ಕೆಲವು ಕಡೆಗಳಲ್ಲಿ ಟ್ವಿಸ್ಟ್​​ಗಳನ್ನು ಇಡಲಾಗಿದೆ. ಕಥೆ ಹಾಗೂ ನಿರೂಪಣೆ ವಿಷಯದಲ್ಲಿ ಇನ್ನಷ್ಟು ಗಟ್ಟಿತನ ಬೇಕಿತ್ತು. ಚಿನ್ನ ಕಳ್ಳ ಸಾಗಣೆ ಹೇಗೆಲ್ಲ ನಡೆಯಬಹುದು ಎಂಬುದನ್ನು ತಿಳಿದುಕೊಳ್ಳಲು ಇದೊಂದು ಒಳ್ಳೆಯ ಸರಣಿ.

ಇದನ್ನೂ ಓದಿ: ಇಮ್ರಾನ್ ಹಶ್ಮಿ ಜೊತೆಗೆ ದಿಶಾ ಪಟಾನಿ ಸಿನಿಮಾ, ತಾಳಲಿದ್ದಾರೆ ಹಾಟ್ ಅವತಾರ

ಇಮ್ರಾನ್ ಹಶ್ಮಿ, ಶರದ್ ಕೇಲ್ಕರ್, ನಂದೀಶ್ ಸಂಧು ಸೇರಿದಂತೆ ಅನೇಕರು ಈ ಸರಣಿಯಲ್ಲಿ ನಟಿಸಿದ್ದಾರೆ. ‘ಎ ವೆಡ್​​ನೆಸ್​ಡೇ’, ‘ಧೋನಿ’ ರೀತಿಯ ಸಿನಿಮಾಗಳನ್ನು ನೀಡಿದ ನೀರಜ್ ಪಾಂಡೆ ಇದನ್ನು ನಿರ್ದೇಶನ ಮಾಡಿದ್ದಾರೆ. ಅವರು ಇತ್ತೀಚೆಗೆ ವೆಬ್ ಸರಣಿ ಲೋಕದಲ್ಲಿ ಹೆಚ್ಚು ಆ್ಯಕ್ಟೀವ್ ಆಗಿದ್ದಾರೆ. ‘ಸ್ಪೆಷಲ್ ಆಪರೇಷನ್’, ‘ಖಾಕೀ’ ರೀತಿಯ ಸರಣಿಗಳನ್ನು ಅವರು ನಿರ್ದೇಶನ ಮಾಡಿದ್ದಾರೆ. ಈ ಸರಣಿ ಐಂಡಿಬಿಯಲ್ಲಿ 7.1 ರೇಟಿಂಗ್ (ಜನವರಿ 24, ಮುಂಜಾನೆಎ 7 ಗಂಟೆವರೆಗೆ) ಪಡೆದುಕೊಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version