ಸಿಎಂ ದಳಪತಿ ವಿಜಯ್ ಭೇಟಿಯಾದ ಲೋಕೇಶ್ ಕನಗರಾಜ್: ‘ಲಿಯೋ 2’ ನಿರೀಕ್ಷೆಯಲ್ಲಿ ಅಭಿಮಾನಿಗಳು

ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ನಟ ಸಿ. ಜೋಸೆಫ್ ವಿಜಯ್ (CM Vijay) ಅವರು ಇತ್ತೀಚೆಗೆ ಸಿನಿಮಾ ರಂಗದ ಪ್ರಮುಖರೊಂದಿಗೆ ಸಭೆ ನಡೆಸಿ, ಚಿತ್ರಮಂದಿರಗಳಲ್ಲಿ ದಿನಕ್ಕೆ 5 ಪ್ರದರ್ಶನಗಳನ್ನು ನಡೆಸಲು ಅನುಮತಿ ನೀಡುವ ಮೂಲಕ ಕಾಲಿವುಡ್‌ಗೆ ದೊಡ್ಡ ರಿಲೀಫ್ ನೀಡಿದ್ದಾರೆ. ಇದರ ಬೆನ್ನಲ್ಲೇ ತಮಿಳಿನ ಸ್ಟಾರ್ ನಿರ್ದೇಶಕ ಲೋಕೇಶ್ ಕನಗರಾಜ್ (Lokesh Kanagaraj) ಅವರು ಮುಖ್ಯಮಂತ್ರಿ ವಿಜಯ್ ಅವರನ್ನು ಭೇಟಿಯಾಗಿದ್ದು, ಈ ಕ್ಷಣದ ಫೋಟೋವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ನೋಡಿದ ಕೂಡಲೇ ಅಭಿಮಾನಿಗಳಿಗೆ ‘ಲಿಯೋ 2’ (Leo 2) ಸಿನಿಮಾದ ನಿರೀಕ್ಷೆ ಮೂಡಿದೆ.

ತಮ್ಮ ಅಧಿಕೃತ ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ವಿಜಯ್ ಜೊತೆಗಿನ ಫೋಟೋ ಹಂಚಿಕೊಂಡಿರುವ ಲೋಕೇಶ್ ಅವರು, ಮುಗುಳ್ನಗುತ್ತಾ ಪೋಸ್ ನೀಡಿದ್ದಾರೆ. ‘ಗೌರವಾನ್ವಿತ ಮುಖ್ಯಮಂತ್ರಿಗಳಿಗೆ ಅಭಿನಂದನೆಗಳು ಅಣ್ಣಾ’ ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ. ಈ ಫೋಟೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಅಭಿಮಾನಿಗಳಿಂದ ತರಹೇವಾರಿ ಕಮೆಂಟ್‌ಗಳು ಹರಿದುಬರುತ್ತಿವೆ.

ಲೋಕೇಶ್ ಕನಗರಾಜ್ ಪೋಸ್ಟ್:

ಈ ಇಬ್ಬರ ಕಾಂಬಿನೇಷನ್‌ನ ಫೋಟೋ ನೋಡಿದ ಅಭಿಮಾನಿಯೊಬ್ಬರು, ‘ಇದೇನಾದರೂ 2024ರಲ್ಲಿ ಆಗಿದ್ದರೆ, ನಾನು ಇದನ್ನು ‘ಲಿಯೋ 2’ ಚಿತ್ರದ ಅನೌನ್ಸ್‌ಮೆಂಟ್ ಫೋಟೋ ಎಂದು ಭಾವಿಸುತ್ತಿದ್ದೆ. ಆದರೆ ದೇವರ ಲೆಕ್ಕಾಚಾರವೇ ಬೇರೆ ಇತ್ತು’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬ ಅಭಿಮಾನಿ, ‘ನೀವಿಬ್ಬರು ಸೇರಿ ಮತ್ತೊಂದು ಸಿನಿಮಾ ಮಾಡಬೇಕಿತ್ತು. ಲಿಯೋ ಮತ್ತು ಮಾಸ್ಟರ್ ಸಿನಿಮಾಗಳಿಗೆ ಧನ್ಯವಾದಗಳು’ ಎಂದು ಕಮೆಂಟ್ ಮಾಡಿದ್ದಾರೆ. ‘ನೀವು ವಿಜಯ್ ಅವರ ಬಳಿ ಲಿಯೋ ಸೀಕ್ವೆಲ್ ಬಗ್ಗೆ ಕೇಳಿದಿರಾ? ರಾಜಕೀಯಕ್ಕೆ ಹೋಗುವ ಮುನ್ನ ಅವರ ಕೊನೆಯ ಸಿನಿಮಾ ಇದಾಗಬೇಕಿತ್ತು’ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.

ವಿಜಯ್ ಅವರು ಲೋಕೇಶ್ ಕನಗರಾಜ್ ನಿರ್ದೇಶನದಲ್ಲಿ ‘ಮಾಸ್ಟರ್’ (2021) ಮತ್ತು ‘ಲಿಯೋ’ (2023) ಸಿನಿಮಾಗಳನ್ನು ನೀಡಿದ್ದಾರೆ. ‘ಲಿಯೋ’ ಚಿತ್ರವು ಲೋಕೇಶ್ ಸಿನಿಮ್ಯಾಟಿಕ್ ಯೂನಿವರ್ಸ್ (LCU) ಭಾಗವಾಗಿತ್ತು. ಈ ಹಿಂದೆ ಲೋಕೇಶ್ ಅವರು ‘ಲಿಯೋ 2’ ಮಾಡಲು ಆಸಕ್ತಿ ಹೊಂದಿದ್ದರಾದರೂ, ನಂತರದ ದಿನಗಳಲ್ಲಿ ವಿಜಯ್ ಜೊತೆ ‘ಮಾಸ್ಟರ್ 2’ ಮಾಡಲು ಹೆಚ್ಚು ಒಲವು ತೋರಿದ್ದರು. ಆದರೆ ವಿಜಯ್ ಅವರು ಸಿನಿಮಾ ರಂಗದಿಂದ ಸಂಪೂರ್ಣ ನಿವೃತ್ತಿ ಘೋಷಿಸಿದ ಕಾರಣ, ಲೋಕೇಶ್ ಕನಗರಾಜ್ ಅವರು ವಿಜಯ್ ಜೊತೆಗಿನ ಮುಂದಿನ ಸೀಕ್ವೆಲ್ ಯೋಜನೆಗಳನ್ನು ಕೈಬಿಟ್ಟಿರುವುದಾಗಿ ಸ್ಪಷ್ಟಪಡಿಸಿದ್ದರು.

ಇದನ್ನೂ ಓದಿ: ಸಿಎಂ ವಿಜಯ್ ಭೇಟಿ ಮಾಡಿ 6 ಬೇಡಿಕೆ ಇಟ್ಟ ನಟ ಕಮಲ್ ಹಾಸನ್; ಏನದು?

ರಾಜಕೀಯದತ್ತ ಸಂಪೂರ್ಣ ಗಮನ ಹರಿಸಲು ನಿರ್ಧರಿಸಿರುವ ವಿಜಯ್ ಅವರು, ‘ಜನ ನಾಯಗನ್’ ಆಡಿಯೋ ಲಾಂಚ್ ವೇಳೆ ಚಿತ್ರರಂಗದ ನಿವೃತ್ತಿ ಘೋಷಿಸಿದ್ದರು. ‘ಜನ ನಾಯಗನ್’ ಸಿನಿಮಾ ಜನವರಿ 9ರಂದೇ ಬಿಡುಗಡೆಯಾಗಬೇಕಿತ್ತು. ಆದರೆ ಸೆನ್ಸಾರ್ ಮಂಡಳಿಯಿಂದ ಸಮಯಕ್ಕೆ ಸರಿಯಾಗಿ ಪ್ರಮಾಣಪತ್ರ ಸಿಗದ ಕಾರಣ ಚಿತ್ರದ ರಿಲೀಸ್ ಮುಂದೂಡಲ್ಪಟ್ಟಿತ್ತು. ಪೂಜಾ ಹೆಗ್ಡೆ, ಮಮಿತಾ ಬೈಜು ಮತ್ತು ಬಾಬಿ ಡಿಯೋಲ್ ನಟಿಸಿರುವ ಈ ಬಹುನಿರೀಕ್ಷಿತ ಸಿನಿಮಾ ಜೂನ್ 19ರಂದು ಬಿಡುಗಡೆಯಾಗಲಿದೆ ಎಂದು ವರದಿಯಾಗಿದೆ. ಆದರೆ ಚಿತ್ರತಂಡದಿಂದ ಅಧಿಕೃತ ಪ್ರಕಟಣೆ ಹೊರಬೀಳಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕೇವಲ 4ನೇ ವಯಸ್ಸಿಗೆ ಕಮಲ್ ಹಾಸನ್ ದಾಖಲೆ ಮುರಿದಿದ್ದ ಬಾಲನಟಿ ತ್ರೀಶಾ ಥೋಸರ್‌

ಖ್ಯಾತ ನಟ ಕಮಲ್ ಹಾಸನ್ (Kamal Haasan) ಅವರು 6ನೇ ವಯಸ್ಸಿಗೆ ರಾಷ್ಟ್ರ ಪ್ರಶಸ್ತಿ ಪಡೆದಿದ್ದರು. ನ್ಯಾಷನಲ್ ಅವಾರ್ಡ್ ಪಡೆದ ಅತಿ ಕಿರಿಯ ಬಾಲನಟ ಎಂಬ ಖ್ಯಾತಿ ಅವರ ಹೆಸರಿನಲ್ಲಿತ್ತು. ಆದರೆ 2025ರಲ್ಲಿ ಮರಾಠಿ ನಟಿ ತ್ರೀಶಾ ವಿವೇಕ್ ಥೋಸರ್ ಆ ದಾಖಲೆಯನ್ನು ಮುರಿದಳು. ಕೇವಲ 4ನೇ ವಯಸ್ಸಿಗೆ ಅವಳು ‘ಅತ್ಯುತ್ತಮ ಬಾಲ ನಟಿ’ ರಾಷ್ಟ್ರ ಪ್ರಶಸ್ತಿ (National Film Award) ಪಡೆದಳು. ಮರಾಠಿಯ ‘ನಾಳ್ 2’ ಸಿನಿಮಾದಲ್ಲಿನ ಅಭಿನಯಕ್ಕಾಗಿ ಆಕೆಗೆ ಈ ಪ್ರಶಸ್ತಿ ಸಿಕ್ಕಿತು. ಈಗ ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ತ್ರೀಶಾ ಥೋಸರ್ (Treesha Thosar) ವಿಡಿಯೋ ವೈರಲ್ ಆಗಿದೆ. ನೆಟ್ಟಿಗರು ಮೆಚ್ಚುಗೆಯ ಕಮೆಂಟ್ ಮಾಡುತ್ತಿದ್ದಾರೆ.

‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ತ್ರೀಶಾ ಥೋಸರ್‌ ಅವರ ವಿಡಿಯೋವನ್ನು ಹಂಚಿಕೊಳ್ಳುತ್ತಾ ಬಳಕೆದಾರರೊಬ್ಬರು ಹೀಗೆ ಬರೆದಿದ್ದಾರೆ, ‘ಅವಳು ಸ್ಕೂಲ್ ಬ್ಯಾಗ್ ಹೆಗಲಿಗೇರಿಸಿಕೊಳ್ಳುವ ಮುನ್ನವೇ ಸೀರೆ ಉಟ್ಟಿದ್ದಳು. ನಾಲ್ಕು ವರ್ಷ ದಾಟದ ಪುಟ್ಟ ಬಾಲಕಿ ಗರಿಗರಿ ಸೀರೆಯನ್ನು ಉಟ್ಟು ಭಾರತದ ಅತ್ಯಂತ ಭವ್ಯವಾದ ವೇದಿಕೆಯ ಮೇಲೆ ಆತ್ಮವಿಶ್ವಾಸದಿಂದ ಹೆಜ್ಜೆ ಹಾಕುತ್ತಿದ್ದಾಳೆ. ಯಾವುದೇ ಆತಂಕವಿಲ್ಲ, ಹಿಂಜರಿಕೆಯೂ ಇಲ್ಲ. ಕೇವಲ ಶಾಂತ ಹಾಗೂ ಅಚಲವಾದ ಗಾಂಭೀರ್ಯವಷ್ಟೇ ಅಲ್ಲಿತ್ತು. ಅವಳು ಭಾರತದ ರಾಷ್ಟ್ರಪತಿಗಳಿಂದ ಅತ್ಯುತ್ತಮ ಬಾಲನಟಿಗಾಗಿ ರಾಷ್ಟ್ರ ಪ್ರಶಸ್ತಿಯನ್ನು ಸ್ವೀಕರಿಸುತ್ತಿದ್ದಾಳೆ ಮತ್ತು ಆ ಒಂದು ಕ್ಷಣದಲ್ಲಿ ಇತಿಹಾಸವನ್ನೇ ಮರುಸೃಷ್ಟಿಸುತ್ತಿದ್ದಾಳೆ’

ತ್ರೀಶಾ ಥೋಸರ್‌ ವೈರಲ್ ವಿಡಿಯೋ:

‘ಅವಳ ಹೆಸರು ತ್ರೀಶಾ ವಿವೇಕ್ ಥೋಸರ್. ಮತ್ತು ಆಕೆ ಆರು ದಶಕಗಳಿಗೂ ಹೆಚ್ಚು ಕಾಲ ಉಳಿದಿದ್ದ ದಾಖಲೆಯೊಂದನ್ನು ಇದೀಗ ಮುರಿದಿದ್ದಾಳೆ. ಅವಳು ಮೂರನೇ ವಯಸ್ಸಿನಲ್ಲಿ ನಟಿಸಿದಳು, ನಾಲ್ಕನೇ ವಯಸ್ಸಿನಲ್ಲಿ ಪ್ರಶಸ್ತಿ ಗೆದ್ದಳು. ತ್ರೀಶಾ ಮರಾಠಿ ಚಿತ್ರ ‘ನಾಳ್ 2’ ಸಿನಿಮಾದಲ್ಲಿ ಮುಗ್ಧ ಗ್ರಾಮೀಣ ಬಾಲಕಿ ‘ಚಿಮಿ’ ಎಂಬ ಪಾತ್ರವನ್ನು ನಿರ್ವಹಿಸಿದ್ದಾಳೆ. ಅವಳು ಅಲ್ಲಿ ಕೇವಲ ನಟಿಸುತ್ತಿರಲಿಲ್ಲ, ಬದಲಿಗೆ ಆ ಪಾತ್ರದಲ್ಲೇ ಜೀವಿಸುತ್ತಿದ್ದಳು. ಹೆಚ್ಚಿನ ಮಕ್ಕಳು ಅಕ್ಷರಗಳನ್ನು ಕಲಿಯುವ ವಯಸ್ಸಿನಲ್ಲಿ, ಈಕೆ ತನ್ನ ಸಹಜ ಭಾವನೆಗಳಿಂದ ರಾಷ್ಟ್ರೀಯ ತೀರ್ಪುಗಾರರ ಮನಗೆದ್ದಿದ್ದಾಳೆ. ಈ ಮೂಲಕ ಅವಳು ಕಮಲ್ ಹಾಸನ್ ಅವರ 60 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದ್ದಾಳೆ’ ಎಂದು ಪೋಸ್ಟ್ ಮಾಡಿದ್ದಾರೆ.

2025ರಲ್ಲಿ ಬಾಲನಟಿಯನ್ನು ಅಭಿನಂದಿಸಿದವರಲ್ಲಿ ಹಿರಿಯ ನಟ ಕಮಲ್ ಹಾಸನ್ ಕೂಡ ಪ್ರಮುಖರಾಗಿದ್ದರು. ಅವರು ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಈ ಪೋಸ್ಟ್ ಹಂಚಿಕೊಂಡಿದ್ದರು. ‘ಆತ್ಮೀಯ ಕುಮಾರಿ ತ್ರೀಶಾ ಥೋಸರ್, ನನ್ನ ಅತ್ಯಂತ ಜೋರಾದ ಚಪ್ಪಾಳೆಗಳು ನಿನಗೆ ಸಲ್ಲುತ್ತವೆ. ನೀನು ನನ್ನ ದಾಖಲೆಯನ್ನು ಮುರಿದಿದ್ದೀಯ. ಏಕೆಂದರೆ ನನಗೆ ಮೊದಲ ಪ್ರಶಸ್ತಿ ಬಂದಾಗ ನನಗೆ ಈಗಾಗಲೇ ಆರು ವರ್ಷ ವಯಸ್ಸಾಗಿತ್ತು. ನಿನ್ನ ಈ ಅದ್ಭುತ ಪ್ರತಿಭೆಯೊಂದಿಗೆ ಸದಾ ಕೆಲಸ ಮಾಡುತ್ತಿರು. ನಿನ್ನ ಮನೆಯ ಹಿರಿಯರಿಗೂ ನನ್ನ ಅಭಿನಂದನೆಗಳು’ ಎಂದು ಬರೆದುಕೊಂಡಿದ್ದರು.

ಇದನ್ನೂ ಓದಿ: ಭಾರತದ ಶ್ರೀಮಂತ ಬಾಲನಟಿ ಇವರೇ ನೋಡಿ; ಒಟ್ಟೂ ಆಸ್ತಿ ಎಷ್ಟು ಕೋಟಿ ರೂಪಾಯಿ?  

ರಾಷ್ಟ್ರ ಪ್ರಶಸ್ತಿ ಗೆದ್ದ ನಂತರ ತ್ರೀಶಾ ಕೂಡ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಳು. ಸುದ್ದಿ ಸಂಸ್ಥೆ ‘ಎಎನ್‌ಐ’ ಜೊತೆ ಮಾತನಾಡಿದ ಆಕೆ, ‘ರಾಷ್ಟ್ರಪತಿಗಳು ನನಗೆ ಅಭಿನಂದನೆ ಸಲ್ಲಿಸಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ’ ಎಂದು ಹೇಳುವ ಮೂಲಕ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ ಅವರಿಂದ ಪ್ರಶಸ್ತಿ ಸ್ವೀಕರಿಸಿದ್ದಕ್ಕೆ ತಮ್ಮ ಸಂತಸವನ್ನು ಹಂಚಿಕೊಂಡಿದ್ದಳು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಟಾಲಿವುಡ್​​ನಲ್ಲಿ ಉಲ್ಬಣಗೊಂಡ ನಿರ್ಮಾಪಕ vs ಪ್ರದರ್ಶಕ ವಿವಾದ: ಡಿಸಿಎಂ ಪವನ್​​ಗೆ ದೂರು

ತೆಲುಗು ಚಿತ್ರರಂಗದಲ್ಲಿ (Tollywood) ಸಿನಿಮಾ ನಿರ್ಮಾಪಕ ಮತ್ತು ಪ್ರದರ್ಶಕರ ನಡುವೆ ವಿವಾದ ಭುಗಿಲೆದ್ದಿದ್ದು, ಇತ್ತೀಚೆಗಷ್ಟೆ ಸಭೆ ನಡೆಸಿ ಸಂಧಾನ ನಡೆಸಿದ್ದರೂ ಸಹ ಸಮಸ್ಯೆ ಮುಗಿದಿಲ್ಲ. ನಿರ್ಮಾಪಕರು ಹಾಗೂ ಪ್ರದರ್ಶಕರು ಪರಸ್ಪರ ಬಹಿರಂಗವಾಗಿಯೇ ಪರಸ್ಪರ ಹೇಳಿಕೆ-ಪ್ರತಿಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದೀಗ ತೆಲಂಗಾಣ ಪ್ರದರ್ಶಕರು ‘ಪೆದ್ದಿ’ ಸಿನಿಮಾವನ್ನು ಬಿಡುಗಡೆ ಮಾಡುವುದಿಲ್ಲವೆಂದು ‘ಬೆದರಿಕೆ’ ಸಹ ಹಾಕಿದ್ದಾರೆ. ಇದೆಲ್ಲದರ ನಡುವೆ ಕೆಲ ನಿರ್ಮಾಪಕರು ಆಂಧ್ರ ಪ್ರದೇಶ ಡಿಸಿಎಂ ಮತ್ತು ಸ್ಟಾರ್ ನಟ ಪವನ್ ಕಲ್ಯಾಣ್ ಅವರನ್ನು ಭೇಟಿ ಮಾಡಿ ಕೆಲ ಮನವಿಗಳನ್ನು ಸಲ್ಲಿಸಿದ್ದು, ಪವನ್ ಅವರು ನಿರ್ಮಾಪಕರಿಗೆ ಅಭಯ ನೀಡಿದ್ದಾರೆ ಎನ್ನಲಾಗುತ್ತಿದೆ.

ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ಕ್ಯಾಬಿನೆಟ್ ಮಂತ್ರಿಗಳಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದ್ದಾರೆ. ಆಡಳಿತಾತ್ಮಕ ಮಟ್ಟದಲ್ಲಿ ಹಲವು ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯ ಅವರಿಗೆ ಇದೆ. ಇದೇ ಕಾರಣಕ್ಕೆ ಇದೀಗ ತೆಲುಗು ಚಲನಚಿತ್ರ ರಂಗದ ಕೆಲ ನಿರ್ಮಾಪಕರು ಅವರನ್ನು ಭೇಟಿ ಮಾಡಿದ್ದಾರೆ. ರಾಜಮಂಡ್ರಿ ಭೇಟಿ ನೀಡಿದ್ದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರನ್ನು ನಿರ್ಮಾಪಕರಾದ ನಾಗ ವಂಶಿ, ರವಿಶಂಕರ್, ಸಾಹು ಗಾರಪಾಟಿ ಮತ್ತು ಇತರರು ಭೇಟಿಯಾಗಿದ್ದರು. ವಿಶೇಷವಾಗಿ ಪ್ರಮುಖ ನಿರ್ಮಾಪಕ ಮತ್ತು ಹಲವು ಸಿನಿಮಾ ಮಂದಿರಗಳ ಮಾಲೀಕ ಆಗಿರುವ ಏಷಿಯನ್ ಸುನಿಲ್ ವಿರುದ್ಧ ಪವನ್ ಬಳಿ ದೂರುಗಳನ್ನು ಹೇಳಿದ್ದಾರೆ ಎನ್ನಲಾಗುತ್ತಿದೆ.

ಪ್ರಸ್ತುತ ಚಲನಚಿತ್ರ ಪ್ರದರ್ಶಕರು ನಿರ್ಮಾಪಕರಿಂದ ಶೇಕಡಾವಾರು ಆಧಾರದ ಸಿನಿಮಾಗಳ ಲಾಭ ಹಂಚಿಕೆ ಮಾಡಬೇಕೆಂದು ಒತ್ತಾಯಿಸುತ್ತಿದ್ದಾರೆ. ವರದಿಗಳ ಪ್ರಕಾರ, ಈಗ ನಿರ್ಮಾಪಕರ ದೂರುಗಳನ್ನು ಪವನ್ ಕಲ್ಯಾಣ್ ಅವರು ಈ ಸಮಸ್ಯೆಯನ್ನು ಆಲಿಸಿ ತಮ್ಮ ಜೊತೆಯಲ್ಲೇ ಇದ್ದ ಆಂಧ್ರದ ಸಿನೆಮಾಟೋಗ್ರಫಿ ಸಚಿವ ಕಂದುಲ ದುರ್ಗೇಶ್ ಅವರ ಗಮನಕ್ಕೆ ತಂದರು. ಈ ಪರಿಸ್ಥಿತಿಯನ್ನು ಆದ್ಯತೆಯ ಮೇರೆಗೆ ನಿರ್ವಹಿಸಬೇಕು ಮತ್ತು ಆಗಾಗ್ಗೆ ತಮಗೆ ಇದರ ಪ್ರಗತಿಯ ಬಗ್ಗೆ ಅಪ್‌ಡೇಟ್ ನೀಡುತ್ತಿರಬೇಕು ಎಂದು ಸಂಬಂಧಪಟ್ಟ ತಂಡಕ್ಕೆ ಕಲ್ಯಾಣ್ ಅವರು ಸೂಚನೆ ನೀಡಿದ್ದಾರೆ.

ಇದನ್ನೂ ಓದಿ:ರಾಮ್ ಚರಣ್-ಪವನ್ ಕಲ್ಯಾಣ್ ಬಾಂಡಿಂಗ್ ನೋಡಿ ಹೊಗಳಿದ ಶಿವಣ್ಣ 

ಪ್ರಸ್ತುತ ತೆಲುಗು ರಾಜ್ಯಗಳಲ್ಲಿ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಬಾಡಿಗೆ ಆಧಾರದಲ್ಲಿ ಸಿನಿಮಾಗಳನ್ನು ಪ್ರದರ್ಶಿಸುತ್ತಿವೆ. ಆದರೆ ಇದೀಗ ಪ್ರದರ್ಶಕರು, ಇನ್ನು ಮುಂದೆ ಪರ್ಸೆಂಟೇಜ್ ಆಧಾರದಲ್ಲಿ ಸಿನಿಮಾಗಳನ್ನು ಪ್ರದರ್ಶಿಸುವುದಾಗಿ ಪಟ್ಟು ಹಿಡಿದಿದ್ದು, ನಿರ್ಮಾಪಕರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇತ್ತೀಚೆಗಷ್ಟೆ ನಡೆದ ಸಂಧಾನ ಸಭೆಯಲ್ಲಿ ನಿರ್ಮಾಪಕರು ಲಾಭ ಹಂಚಿಕೆಗೆ ಒಪ್ಪಿಕೊಂಡಿದ್ದಾರೆ. ಆದರೆ ಪ್ರತಿ ಸೆಂಟರ್​​ಗಳಿಗೂ ಭಿನ್ನವಾದ ಪರ್ಸೆಂಟೇಜ್ ಮಾದರಿಗಳನ್ನು ನಿಗದಿ ಪಡಿಸಬೇಕು ಎಂಬ ತೀರ್ಮಾನಕ್ಕೆ ಬಂದಿದ್ದು, ಆದರೆ ಈಗ ಬಿಡುಗಡೆ ಆಗಲಿರುವ ‘ಪೆದ್ದಿ’ ಸಿನಿಮಾ ಅನ್ನು ಹಳೆಯ ಮಾದರಿಯಲ್ಲೇ ಪ್ರದರ್ಶಿಸಬೇಕು ಎಂದಿದ್ದರು. ಆದರೆ ಇದೀಗ ಕೆಲ ಸಿನಿಮಾ ಪ್ರದರ್ಶಕರು, ‘ಪೆದ್ದಿ’ ಸಿನಿಮಾ ಅನ್ನು ಲಾಭ ಹಂಚಿಕೆ ಆಧಾರದಲ್ಲೇ ಬಿಡುಗಡೆ ಮಾಡುವುದಾಗಿ ಹೇಳುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಇದ್ದ ನಿರೀಕ್ಷೆಯೇ ಒಂದು, ಹೈಕಮಾಂಡ್​ ಹೇಳಿದ್ದೇ ಮತ್ತೊಂದು: ಸಿದ್ದರಾಮಯ್ಯಗೆ ಭರ್ಜರಿ ಶಾಕ್​​ ಕೊಟ್ಟ ರಾಹುಲ್​​ ಗಾಂಧಿ

ಬೆಂಗಳೂರು, ಮೇ 27: ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡವಂತೆ ಹೈಕಮಾಂಡ್​​ ಸೂಚನೆ ನೀಡಿರುವ ಬಗ್ಗೆ ಸಿದ್ದರಾಮಯ್ಯ (Siddaramaiah) ಆಪ್ತರ ಬಳಿ ಹೇಳಿಕೊಂಡಿರುವ ನಡುವೆಯೇ ರಾಹುಲ್​​ ಗಾಂಧಿ ಜೊತೆಗಿನ ಒನ್​​ ಟು ಒನ್​​ ಮೀಟಿಂಗ್​​ ವೇಳೆ ಚರ್ಚೆಯಾಗಿದ್ದೇನು ಎಂಬ ವಿಚಾರ ಬಹಿರಂಗಗೊಂಡಿದೆ. ಸಚಿವ ಸಂಪುಟ ಪುನಾರಚನೆ ವಿಚಾರವಾಗಿ ಮಾತುಕತೆಯ ನಿರೀಕ್ಷೆಯಲ್ಲಿದ್ದ ಸಿದ್ದರಾಮಯ್ಯಗೆ ರಾಹುಲ್​​ ಶಾಕ್​​ ಕೊಟ್ಟಿದ್ದು, ವರಿಷ್ಠ ನಾಯಕನ ಮಾತು ಕೇಳಿ ಸಿಎಂ ಅಕ್ಷರಶಃ ಶಾಕ್​​ ಆಗಿದ್ದಾರೆ ಎನ್ನಲಾಗಿದೆ.

ಮುಖ್ಯಾಂಶಗಳು

  • ಸಚಿವ ಸಂಪುಟ ವಿಚಾರವಾಗಿ ಚರ್ಚೆ ನಿರೀಕ್ಷೆಯಲ್ಲಿದ್ದ ಸಿಎಂ
  • ರಾಹುಲ್​​ ಗಾಂಧಿ ಮಾತು ಕೇಳೆ ಸಿಎಂ ಸಿದ್ದರಾಮಯ್ಯಗೆ ಶಾಕ್
  • ಮೀಟಿಂಗ್​​ ವೇಳೆ ರಾಹುಲ್​​ ಗಾಂಧಿಯಿಂದ ಖ​​ಡಕ್​ ಸೂಚನೆ

ಸಿದ್ದರಾಮಯ್ಯಗೆ ರಾಹುಲ್​​ ಗಾಂಧಿ ಹೇಳಿದ್ದೇನು?

ಸಂಪುಟ ಪುನಾರಚನೆ ಮತ್ತು ನೂತನ ಕೆಪಿಸಿಸಿ ಅಧ್ಯಕ್ಷರ ನೇಮಕಾತಿ ಬಗ್ಗೆ ರಾಹುಲ್​​ ಗಾಂಧಿ ಮುಂದೆ ಪ್ರಸ್ತಾಪ ಮಾಡಲು ಸಿಎಂ ಸಿದ್ದರಾಮಯ್ಯ ಮುಂದಾಗಿದ್ದರು. ಇದೇ ವಿಚಾರವಾಗಿ ಮಾತುಕತೆಯ ಆರಂಭದಲ್ಲಿ ರಾಹುಲ್ ಎದುರು ಆರಂಭಿಕ ಪ್ರಸ್ತಾವನೆಯನ್ನೂ ಇಟ್ಟಿದ್ದರು. ಆದರೆ ಈ ವೇಳೆ ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್ ನಿರ್ಧಾರ ಏನೆಂಬುದನ್ನು ರಾಹುಲ್ ಗಾಂಧಿ ನೇರವಾಗಿ ತಿಳಿಸಿದ್ದಾರೆ. ನೀವು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ, ಇದು ಪಕ್ಷದ ಹೈಕಮಾಂಡ್ ನ ನಿರ್ಧಾರ ಎಂದು ರಾಹುಲ್​​ ಹೇಳಿದ್ದಾರೆ. ರಾಹುಲ್ ಗಾಂಧಿ ಈ ಮಾತುಗಳನ್ನು ಕೇಳಿ ಸಿದ್ದರಾಮಯ್ಯ ಅರೆಕ್ಷಣ ಗರಬಡಿದವರಂತಾಗಿದ್ದಾರೆ.

ಇದನ್ನೂ ಓದಿ: ಸಿಎಂ ಕುರ್ಚಿ ಬಿಡಲು ಸಿದ್ದರಾಮಯ್ಯ ಕೊನೆಗೂ ಒಪ್ಪಿದ್ಯಾಕೆ? ಇಲ್ಲಿದೆ ಇಂಟರೆಸ್ಟಿಂಗ್​​ ಮಾಹಿತಿ

ಮನವೊಲಿಕೆಗೂ ಜಗ್ಗದ ರಾಹುಲ್​​ ಗಾಂಧಿ

ಕೆಲ ಕ್ಷಣಗಳ ಬಳಿಕ ಈ ಸಂಬಂಧ ರಾಹುಲ್ ಮನವೊಲಿಕೆ ಸಿದ್ದರಾಮಯ್ಯ ಯತ್ನಿಸಿದ್ದು, ಚಿಂತನೆಗೆ ಕಾಲವಕಾಶ ನೀಡಿ ಎಂಬ ಮನವಿ ಮುಂದಿಟ್ಟಿದ್ದಾರೆ. ಕನಿಷ್ಠ 15 ದಿನಗಳ ಕಾಲ ಅವಕಾಶ ನೀಡಿ ಎಂದು ಕೇಳಿದ್ದು, ಜಾತಿ ಗಣತಿ ವರದಿ ಅನುಷ್ಠಾನ‌ ನನ್ನ ಕನಸು. ಹೀಗಾಗಿ ವರದಿ ಸ್ವೀಕರಿಸಲು ಅವಕಾಶ ಕೊಡುವಂತೆ ಕೇಳಿಕೊಂಡಿದ್ದಾರೆ. ಆದರೆ ಸಿದ್ದರಾಮಯ್ಯ ಮನವಿ ನಿರಾಕರಸಿರುವ ರಾಹುಲ್ ಗಾಂಧಿ, ಹೆಚ್ಚಿನ ಸಮಯ ನೀಡಲು ಸಾಧ್ಯವಿಲ್ಲ. ಎರಡು ದಿನಗಳ ಒಳಗೆ ರಾಜೀನಾಮೆ ನೀಡಿ ಎಂದು ಖಡಕ್ ಆಗಿ ಹೇಳಿದ್ದಾರೆ. ಈ ವೇಳೆ ರಾಹುಲ್ ಮಾತಿಗೆ ಸಿದ್ದರಾಮಯ್ಯ ಕೂಡ ಸಮ್ಮತಿ ಸೂಚಿಸಿ ಬಂದಿದ್ದಾರೆ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Weather Forecast: ಮುಂದಿನ ಕೆಲವು ಗಂಟೆಗಳ ಕಾಲ ಬೆಂಗಳೂರಿಗೆ ಹೈ ಅಲರ್ಟ್!: ಬಿರುಗಾಳಿ ಸಹಿತ ಭಾರಿ ಮಳೆ ಮುನ್ಸೂಚನೆ ನೀಡಿದ ಐಎಂಡಿ

ಬೆಂಗಳೂರು,ಮೇ,27: ರಾಜಧಾನಿ ಬೆಂಗಳೂರು ಮತ್ತು ಅದರ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಮುಂಗಾರು ಪೂರ್ವ ಮಳೆಯ ಆರ್ಭಟ ಮುಂದುವರಿದಿದೆ. ಭಾರತೀಯ ಹವಾಮಾನ ಇಲಾಖೆಯು (IMD) ಬೆಂಗಳೂರು ನಗರ ಮತ್ತು ಗ್ರಾಮಾಂತರ ಸೇರಿದಂತೆ ರಾಜ್ಯದ ಒಟ್ಟು 9 ಪ್ರಮುಖ ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ಮುನ್ನೆಚ್ಚರಿಕೆ ನೀಡಿದೆ. ಮುಂದಿನ ಕೆಲವು ಗಂಟೆಗಳಲ್ಲಿ ಭಾರಿ ಗುಡುಗು ಸಹಿತ ಸಾಧಾರಣದಿಂದ ಅತ್ಯಂತ ತೀವ್ರ ಸ್ವರೂಪದ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಮಳೆಯ ಸಮಯದಲ್ಲಿ ಗಂಟೆಗೆ 40 ರಿಂದ 50 ಕಿಲೋಮೀಟರ್ ವೇಗದಲ್ಲಿ ಬಲವಾದ ಬಿರುಗಾಳಿ (Gusty Winds) ಬೀಸುವ ಸಾಧ್ಯತೆಯಿದೆ. ಬಿರುಗಾಳಿಯ ತೀವ್ರತೆಗೆ ನಗರದ ಹಲವೆಡೆ ಮರಗಳು ಮತ್ತು ವಿದ್ಯುತ್ ಕಂಬಗಳು ಧರೆಗುರುಳುವ ಆತಂಕವಿದ್ದು, ವಿದ್ಯುತ್ ಸಂಪರ್ಕದಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಗಬಹುದು. ಕರಾವಳಿ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಧಾರವಾಡ, ಗದಗ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೋಲಾರ ಮತ್ತು ರಾಮನಗರ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಹೆಚ್ಚಿರಲಿದೆ.

ಇದನ್ನೂ ಓದಿ: ಮಳೆಯ ಎಫೆಕ್ಟ್, ಬೆಂಗಳೂರಿನಲ್ಲಿ ಶುದ್ಧ ಗಾಳಿ

ಇಲ್ಲಿದೆ ನೋಡಿ ಎಕ್ಸ್​​ ಪೋಸ್ಟ್​:

ಹವಾಮಾನ ವೈಪರೀತ್ಯದ ಸಮಯದಲ್ಲಿ ಸಾರ್ವಜನಿಕರು ಅನಗತ್ಯ ಪ್ರಯಾಣವನ್ನು ತಪ್ಪಿಸಬೇಕು. ಮನೆಯ ಬಾಗಿಲು ಮತ್ತು ಕಿಟಕಿಗಳನ್ನು ಭದ್ರವಾಗಿ ಮುಚ್ಚಿ ಒಳಗಡೆಯೇ ಇರಲು ಸೂಚಿಸಲಾಗಿದೆ. ಬಿರುಗಾಳಿ ಸಹಿತ ಮಳೆ ಬರುವಾಗ ಮರಗಳ ಕೆಳಗೆ ಅಥವಾ ದುರ್ಬಲ ಕಟ್ಟಡಗಳ ಕೆಳಗೆ ವಾಹನ ನಿಲ್ಲಿಸುವುದು ಅಥವಾ ಆಶ್ರಯ ಪಡೆಯಬೇಡಿ ಎಂದು ಹೇಳಲಾಗಿದೆ. ಸಿಡಿಲಿನ ಅಪಾಯ ತಪ್ಪಿಸಲು ಮನೆಯಲ್ಲಿರುವ ಟಿವಿ, ಫ್ರಿಡ್ಜ್ ನಂತಹ ಎಲೆಕ್ಟ್ರಾನಿಕ್ ಉಪಕರಣಗಳ ಪ್ಲಗ್‌ಗಳನ್ನು ಹೊರತೆಗೆಯಲು (Unplug) ತಿಳಿಸಲಾಗಿದೆ. ಮಳೆಯಿಂದಾಗಿ ರಸ್ತೆಗಳು ಜಾರುವ ಸಾಧ್ಯತೆಯಿದ್ದು, ದೃಶ್ಯದರ್ಶಕತ್ವ (Visibility) ಕಡಿಮೆಯಾಗುವುದರಿಂದ ವಾಹನ ಸವಾರರು ಅತ್ಯಂತ ಜಾಗರೂಕತೆಯಿಂದ ವಾಹನ ಚಲಾಯಿಸಬೇಕು ಎಂದು ಹೇಳಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:18 pm, Wed, 27 May 26

Source link

ಸಿದ್ದರಾಮಯ್ಯ ರಾಜೀನಾಮೆ ಸುದ್ದಿ ನಡುವೆ ಕುತೂಹಲ ಮೂಡಿಸಿದ ಕಾಂಗ್ರೆಸ್​​ನ ಮುಸ್ಲಿಂ ನಾಯಕರ ಸಭೆ

ಬೆಂಗಳೂರು, ಮೇ 27: ಮುಖ್ಯಮಂತ್ರಿ ಬದಲಾವಣೆ ಕುರಿತು ತೀವ್ರ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ, ಮುಸ್ಲಿಂ ನಾಯಕರು ತಮ್ಮ ತಮ್ಮ ಸಮುದಾಯದ ಸ್ಥಾನಮಾನ ಮತ್ತು ಭವಿಷ್ಯದ ಬಗ್ಗೆ ಚರ್ಚಿಸಿದ್ದಾರೆ.. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುವ ಸಾಧ್ಯತೆಗಳ ಬಗ್ಗೆ ವದಂತಿಗಳು ಹರಡಿರುವ ಹಿನ್ನೆಲೆಯಲ್ಲಿ ಈ ಸಭೆ ಮಹತ್ವ ಪಡೆದುಕೊಂಡಿದೆ. ಸಚಿವ ಜಮೀರ್ ಅಹಮದ್ ಮತ್ತು ಶಾಸಕ ರಿಜ್ವಾನ್ ಅರ್ಷದ್ ಸೇರಿದಂತೆ ಹಲವು ಅಲ್ಪಸಂಖ್ಯಾತ ನಾಯಕರು ಒಂದು ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದಾರೆ. ಸಿದ್ದರಾಮಯ್ಯನವರಿಗೆ ಆಪ್ತರಾಗಿರುವ ಜಮೀರ್ ಅಹಮದ್, ಪ್ರಸ್ತುತ ಸನ್ನಿವೇಶದಲ್ಲಿ ತಮ್ಮ ಸಮುದಾಯಕ್ಕೆ ಹೊಸ ಸಂಪುಟದಲ್ಲಿ ಯಾವ ಸ್ಥಾನಮಾನಗಳು ಲಭ್ಯವಾಗಬಹುದು, ಎಷ್ಟು ಸಚಿವ ಸ್ಥಾನಗಳನ್ನು ಕೇಳಬೇಕು ಮತ್ತು ಉಪಮುಖ್ಯಮಂತ್ರಿ ಸ್ಥಾನದ ಕುರಿತೂ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಈ ಸಭೆ ರಾಜ್ಯ ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Anik Dutta: ಮನೆಯ ಮಹಡಿಯಿಂದ ಬಿದ್ದು ಖ್ಯಾತ ನಿರ್ದೇಶಕ ನಿಧನ; ಮೂಡಿದೆ ಹಲವು ಅನುಮಾನ

ಬೆಂಗಾಲಿ ಚಿತ್ರರಂಗದ (Bengali Film Industry) ಖ್ಯಾತ ನಿರ್ದೇಶಕ ಅನಿಕ್ ದತ್ತಾ (Anik Dutta) ಅವರು ದಕ್ಷಿಣ ಕೋಲ್ಕತ್ತಾದ ತಮ್ಮ ನಿವಾಸದ ಟೆರೇಸ್‌ನಿಂದ ಬಿದ್ದು ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಬುಧವಾರ (ಮೇ 27) ಮಧ್ಯಾಹ್ನ ಈ ಘಟನೆ ನಡೆದಿದೆ. 64 ವರ್ಷ ವಯಸ್ಸಿನ ಅನಿಕ್ ದತ್ತಾ ಅವರು ತಮ್ಮ ಚೊಚ್ಚಲ ಚಿತ್ರ ‘ಭೂತೇರ್ ಭವಿಷ್ಯತ್’ (2012) ಮತ್ತು ವಿಮರ್ಶಾತ್ಮಕವಾಗಿ ಪ್ರಶಂಸೆ ಗಳಿಸಿದ ‘ಅಪರಾಜಿತೋ’ (2022) ಸಿನಿಮಾ ಮೂಲಕ ದೇಶಾದ್ಯಂತ ಹೆಸರುವಾಸಿಯಾಗಿದ್ದರು. ಅವರ ನಿಧನಕ್ಕೆ (Anik Dutta Death) ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ಕಂಬನಿ ಮಿಡಿಯುತ್ತಿದ್ದಾರೆ.

ಕೋಲ್ಕತ್ತಾದ ಹಿಂದುಸ್ತಾನ್ ಪಾರ್ಕ್‌ನಲ್ಲಿರುವ ಅನಿಕ್ ದತ್ತಾ ಅವರ ಬಹುಮಹಡಿ ಕಟ್ಟಡದಲ್ಲಿ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಮಹಡಿಯಿಂದ ಬಿದ್ದ ತಕ್ಷಣವೇ ಅವರನ್ನು ಗಂಭೀರ ಸ್ಥಿತಿಯಲ್ಲಿ ಧಾಕುರಿಯಾದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಹಾಗಿದ್ದರೂ ಕೂಡ, ಆಸ್ಪತ್ರೆಗೆ ತಲುಪುವ ಮೊದಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು ಎನ್ನಲಾಗಿದೆ.

ಅನಿಕ್ ದತ್ತಾ ಅವರ ಸಾವು ಆಕಸ್ಮಿಕವಾಗಿ ಸಂಭವಿಸಿದ್ದೇ ಅಥವಾ ಇದರ ಹಿಂದೆ ಬೇರೆನಾದರೂ ಕಾರಣವಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಸದ್ಯ ಪೊಲೀಸರು ಮತ್ತು ತನಿಖಾ ವಿಭಾಗದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದಾರೆ. ಆದರೆ, ಅವರ ಆಪ್ತರ ಪ್ರಕಾರ, ಅನಿಕ್ ದತ್ತಾ ಅವರು ಕಳೆದ ಕೆಲವು ಸಮಯದಿಂದ ತೀವ್ರ ಖಿನ್ನತೆ ಮತ್ತು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ತಮ್ಮ ಫ್ಲ್ಯಾಟ್‌ನಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದರು ಎಂದು ತಿಳಿದುಬಂದಿದೆ.

ಎಡಪಂಥೀಯ ಸಿದ್ಧಾಂತದ ಮತ್ತು ತೀಕ್ಷ್ಣ ಹಾಸ್ಯಪ್ರಜ್ಞೆಯ ಕಥೆಗಾರರಾಗಿದ್ದ ಅನಿಕ್ ದತ್ತಾ, ಆಧುನಿಕ ಬೆಂಗಾಲಿ ಚಿತ್ರರಂಗದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದರು. ಚಲನಚಿತ್ರ ರಂಗಕ್ಕೆ ಬರುವ ಮುನ್ನ ಅವರು ಎರಡು ದಶಕಗಳಿಗೂ ಹೆಚ್ಚು ಕಾಲ ಜಾಹೀರಾತು ರಂಗದಲ್ಲಿ ಯಶಸ್ವಿ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಭಾರತದ ಸಾರ್ವಕಾಲಿಕ ಶ್ರೇಷ್ಠ ನಿರ್ದೇಶಕ ಸತ್ಯಜಿತ್ ರೇ ಕೂಡ ಜಾಹೀರಾತು ಲೋಕದಿಂದಲೇ ಸಿನಿಮಾ ರಂಗಕ್ಕೆ ಬಂದವರಾಗಿದ್ದರು.

ಇದನ್ನೂ ಓದಿ: ನಟಿ ಟ್ವಿಶಾ ಶರ್ಮಾ ಅನುಮಾನಾಸ್ಪದ ಸಾವು; ಚಿತ್ರರಂಗ ತೊರೆಯಲು ಅಸಲಿ ಕಾರಣ ಇಲ್ಲಿದೆ

ಸತ್ಯಜಿತ್ ರೇ ಅವರಿಗೆ ಗೌರವ ಸಲ್ಲಿಸಲು ಅನಿಕ್ ದತ್ತಾ ಅವರು 2022ರಲ್ಲಿ ‘ಅಪರಾಜಿತೋ’ ಚಿತ್ರವನ್ನು ನಿರ್ದೇಶಿಸಿದ್ದರು. ಸತ್ಯಜಿತ್ ರೇ ಅವರ ‘ಪಥೇರ್ ಪಾಂಚಾಲಿ’ ಸಿನಿಮಾ ಮೇಕಿಂಗ್‌ನ ಜರ್ನಿಯನ್ನು ಈ ಚಿತ್ರದಲ್ಲಿ ತೋರಿಸಲಾಗಿತ್ತು. ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಯಶಸ್ಸು ಗಳಿಸಿದ್ದಲ್ಲದೆ, 2024ರಲ್ಲಿ ಘೋಷಣೆಯಾದ 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಎರಡು ರಾಷ್ಟ್ರ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 5:12 pm, Wed, 27 May 26

Source link

ನಾಳೆ ರಾಜೀನಾಮೆ ಕೊಡ್ತೀನಿ ಎಂದು CM ಹೇಳಿದ್ದಾರೆ: ಬಹಿರಂಗ ಪಡಿಸಿದ ಕಾಂಗ್ರೆಸ್ ಹಿರಿಯ ಶಾಸಕ

ಬೆಂಗಳೂರು, (ಮೇ 27): ಕರ್ನಾಟಕ ಕಾಂಗ್ರೆಸ್​​ನಲ್ಲಿನ  (Karnataka Congress) ನಾಯಕತ್ವ ಬದಲಾವಣೆ ಕ್ಲೈಮ್ಯಾಕ್ಸ್ ಹಂತ ತಲುಪಿದ್ದು, ಸಿದ್ದರಾಮಯ್ಯನವರು (Siddaramaiah) ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎನ್ನುವುದು ಬಹುತೇಕ ಖಚಿತವಾಗಿದೆ. ಸದ್ಯ ಕಾಂಗ್ರೆಸ್​​ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿದ್ರೆ ನಾಳೆಯೇ (ಮೇ 28) ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ತಿಳಿದುಬಂದಿದೆ. ಆದ್ರೆ, ದೆಹಲಿ ಸಭೆ ಬಳಿಕ ಯಾವುದೇ ಶಾಸಕರು, ಸಚಿವರು ಸಿಎಂ ರಾಜೀನಾಮೆ ಗುಟ್ಟು ಬಿಟ್ಟು ಕೊಟ್ಟಿರಲಿಲ್ಲ. ಇದರ ಮಧ್ಯೆ ಇದೀಗ ಕಾಂಗ್ರೆಸ್ ಹಿರಿಯ ಶಾಸಕ ಆರ್ ವಿ ದೇಶಪಾಂಡೆ, ಸಿದ್ದರಾಮಯ್ಯನವರ ರಾಜೀನಾಮೆಯನ್ನು ಬಹಿರಂಗಪಡಿಸಿದ್ದಾರೆ.

ಬೆಂಗಳೂರಿನ ಕಾವೇರಿ ನಿವಾಸದಲ್ಲಿಂದು ಸಿಎಂ ಸಿದ್ದರಾಮಯ್ಯನವರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ದೇಶಪಾಂಡೆ. ನಾಳೆ ರಾಜೀನಾಮೆ ಕೊಡ್ತೀನಿ ಎಂದು ಸಿಎಂ ಹೇಳಿದ್ದು, ನಾವು ರಾಜೀನಾಮೆ ಕೊಡಬೇಡಿ ಎಂದು ಹೇಳಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ನಾಳೆ (ಮೇ 28) ರಾಜೀನಾಮೆಯನ್ನು ಖಚಿತಪಡಿಸಿದರು.

ಇದನ್ನೂ ಓದಿ: ರಾಜೀನಾಮೆ ಸುದ್ದಿ ಬೆನ್ನಲ್ಲೇ ತಮ್ಮ ಮಹತ್ವಕಾಂಕ್ಷಿ ಯೋಜನೆ ನೆನೆದ ಸಿದ್ದರಾಮಯ್ಯ, ಇದು ವಿದಾಯದ ಸುಳಿವೇ?

Source link

ಧಾರವಾಡ ಜನರ ದಶಕಗಳ ಬೇಡಿಕೆ ಈಡೇರುವ ಸಮಯ ಸನಿಹ: ಇದರಿಂದ ಜಿಲ್ಲೆಯ ಜನರಿಗೆ ಎಷ್ಟು ಲಾಭ?

ಬೆಣ್ಣೆಹಳ್ಳ ಅಭಿವೃದ್ಧಿ ಕಾಮಗಾರಿImage Credit source: tv9 kannada

ಧಾರವಾಡ, ಮೇ 27: ಜಿಲ್ಲೆಯ ಜನತೆಯ ಬಹುದಶಕಗಳ ಬೇಡಿಕೆಯೊಂದಕ್ಕೆ ಇದೀಗ ಪರಿಹಾರ ಸಿಗುತ್ತಿದೆ. ಪ್ರತಿವರ್ಷದಂತೆ ಹಲವು ದಶಕಗಳಿಂದ ಬೆಂಬಿಡದೇ ಕಾಡುತ್ತಿದ್ದ ಬೆಣ್ಣೆಹಳ್ಳದ (Bennehalla) ಪ್ರವಾಹಕ್ಕೆ ಶಾಶ್ವತ ತಡೆಗಾಗಿ ಕೊನೆಗೂ ಕಾಮಗಾರಿ ನಡೆದಿದ್ದು, ಶೇ. 60 ರಷ್ಟು ಕಾಮಗಾರಿ ಮುಕ್ತಾಯವಾಗಿದೆ. ಫೆಬ್ರವರಿ ತಿಂಗಳಲ್ಲಿ ಈ ಕಾಮಗಾರಿಗೆ ಚಾಲನೆ ನೀಡಿದ್ದ ಸಿಎಂ ಸಿದ್ದರಾಮಯ್ಯ (Siddaramaiah) ಆದಷ್ಟು ಬೇಗನೇ ಕೆಲಸ ಮುಗಿಸುವಂತೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಕಾಮಗಾರಿ ಭರದಿಂದ ಸಾಗಿದ್ದು, ಈ ಬಾರಿ ಮಳೆಗಾಲದಲ್ಲಿ ಅನೇಕ ಗ್ರಾಮಗಳ ಜನರಿಗೆ ನೆಮ್ಮದಿ ಸಿಗುವ ಲಕ್ಷಣಗಳು ಕಾಣುತ್ತಿದೆ.

ಮುಖ್ಯಾಂಶಗಳು

  • ಧಾರವಾಡ ಜಿಲ್ಲೆಯ ಜನತೆಯ ಬಹುದಶಕಗಳ ಬೇಡಿಕೆಗೆ ಪರಿಹಾರ
  • ಭರದಿಂದ ಸಾಗಿರುವ ಬೆಣ್ಣೆ ಹಳ್ಳ ಅಭಿವೃದ್ಧಿ ಕಾಮಗಾರಿ
  • 200 ಕೋಟಿ ರೂ ಬಿಡುಗಡೆ ಮಾಡಿರುವ ರಾಜ್ಯ ಸರಕಾರ

ಬೆಣ್ಣೆಹಳ್ಳ ಹೆಸರು ಕೇಳಿದರೆ ಸಾಕು ಧಾರವಾಡ ಜಿಲ್ಲೆಯ ನವಲಗುಂದ, ಕುಂದಗೋಳ ಹಾಗೂ ಅಣ್ಣಿಗೇರಿ ತಾಲೂಕುಗಳ ರೈತರು ಬೆಚ್ಚಿ ಬೀಳುತ್ತಾರೆ. ಮಳೆಗಾಲದಲ್ಲಿ ಈ ಹಳ್ಳ ಸೃಷ್ಟಿಸುವ ಅನಾಹುತಗಳು ಒಂದಲ್ಲ ಎರಡಲ್ಲ. ಹೀಗಾಗಿ ಈ ಹಳ್ಳದ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ರೈತರು ಬೇಡಿಕೆ ಇಡುತ್ತಲೇ ಬಂದಿದ್ದರು. ಅದಕ್ಕೆ ಸಿಎಂ ಸಿದ್ದರಾಮಯ್ಯ ಸಮ್ಮತಿ ಸೂಚಿಸಿ, ಸುಮಾರು ಒಂದೂವರೆ ಸಾವಿರ ಕೋಟಿ ರೂಪಾಯಿ ಯೋಜನೆಗೆ ಅನುಮೋದನೆ ನೀಡಿದ್ದರು.

ಇದನ್ನೂ ಓದಿ: ಬೆಣ್ಣೆಹಳ್ಳದಲ್ಲಿ ನೋಡ ನೋಡುತ್ತಲೇ ಕೊಚ್ಚಿ ಹೋದ ಸಾಕುನಾಯಿಗಳು; ಹೂಳು ಎತ್ತದ ಕಾರಣ ಹೆಚ್ಚುತ್ತಿದೆ ಅನಾಹುತ

ಅದರ ಅಂಗವಾಗಿ ಆರಂಭಿಕವಾಗಿ ರೂ. 200 ಕೋಟಿ ರೂ ಬಿಡುಗಡೆ ಮಾಡಿ, ಫೆಬ್ರವರಿ 8ರಂದು ಕಾಮಗಾರಿಗೆ ಚಾಲನೆ ನೀಡಿದ್ದರು. ಇದೀಗ ಕಾಮಗಾರಿ ಭರದಿಂದ ಸಾಗಿದ್ದು, ಶೇ. 60 ಕೆಲಸ ಮುಗಿದಿದೆ. ನವಲಗುಂದ ತಾಲೂಕಿನ ಯಮನೂರು ಸೇರಿದಂತೆ ಅನೇಕ ಕಡೆಗಳಲ್ಲಿ ಹಳ್ಳದಲ್ಲಿನ ಮುಳ್ಳಿನ ಗಿಡಗಳನ್ನು ತೆರವುಗೊಳಿಸಿದ್ದು, ಹೂಳನ್ನು ಕೂಡ ತೆಗೆಯಲಾಗಿದೆ. ಇದರಿಂದಾಗಿ ಹಳ್ಳದಲ್ಲಿ ನೀರು ಸರಾಗವಾಗಿ ಮುಂದಕ್ಕೆ ಹರಿಯಲಿದೆ. ಇದರಿಂದಾಗಿ ಅಕ್ಕಪಕ್ಕದ ಗ್ರಾಮಗಳು ಹಾಗೂ ಹೊಲಗಳಿಗೆ ನೀರು ನುಗುವ ಸಾಧ್ಯತೆ ಕೂಡ ಕಡಿಮೆಯಾಗಲಿದೆ.

ಏನೆಲ್ಲಾ ಕಾಮಗಾರಿ ಕೈಗೊಳ್ಳಲಾಗಿದೆ?

ಮೊದಲನೇ ಹಂತದ ಈ ಕಾಮಗಾರಿಯಲ್ಲಿ ಬೆಣ್ಣೆಹಳ್ಳದ 60 ಕಿ.ಮೀಯಿಂದ 125 ಕಿಮೀವರೆಗೆ ಅತಿ ಅವಶ್ಯಕ ಸ್ಥಳದಲ್ಲಿ 1.05 ಕಿಮೀ ಕಾಂಕ್ರೀಟ್ ತಡೆಗೋಡೆ, 6.15 ಕಿ.ಮೀ ಏರಿ ನಿರ್ಮಾಣ, ಅತಿ ಅವಶ್ಯಕವಾಗಿರುವ 86 ಸ್ಥಳಗಳಲ್ಲಿ ಹೊಲದಲ್ಲಿನ ನೀರು ಹಳ್ಳವನ್ನು ಸೇರುವ ಇನ್‌ಲೆಟ್ ನಿರ್ಮಾಣ, ಉಪಹಳ್ಳ ಸೇರುವ ದೇಸಾಯಿಹಳ್ಳ, ಗುಂಡೇನಹಳ್ಳ ಮತ್ತು ಹಂದಿಗನಹಳ್ಳಗಳಲ್ಲಿ 500 ಮೀಟರ್ ಹೂಳೆತ್ತುವ ಕಾಮಗಾರಿ ನಡೆಯುತ್ತಿವೆ. ಏಳು ಕಡೆಗಳಲ್ಲಿ ರಸ್ತೆ ಸೇತುವೆಗಳ ನಿರ್ಮಾಣ, 2 ಕಡೆಗಳಲ್ಲಿ ಜಲಸಂಗ್ರಹಾರ ಕೈಗೊಳ್ಳಲು ಯೋಚಿಸಲಾಗಿದೆ.

ಇನ್ನು ಕರ್ನಾಟಕ, ಮಹಾರಾಷ್ಟ್ರ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಸೇರುವ ಯಮನೂರು ಗ್ರಾಮದಲ್ಲಿ ಭಕ್ತರಿಗಾಗಿ 150 ಮೀಟರ್ ಉದ್ದದ ಸ್ನಾನಘಟ್ಟ ನಿರ್ಮಾಣ ಮಾಡಲು ಯೋಜಿಸಲಾಗಿದೆ. ಈ ಎಲ್ಲಾ ಕಾಮಗಾರಿಗಳಿಂದ ಧಾರವಾಡ ಹಾಗೂ ಗದಗ ಜಿಲ್ಲೆಗಳ 37 ಹಳ್ಳಿಗಳಲ್ಲಿನ ಪ್ರವಾಹ ತಡೆದಂತಾಗುತ್ತದೆ. ಜತೆಗೆ 20 ಸಾವಿರ ಹೆಕ್ಟೇ‌ರ್ ಪ್ರದೇಶ ಪ್ರವಾಹದಿಂದ ಮುಕ್ತವಾಗುತ್ತದೆ ಎಂಬುದು ತಜ್ಞರ ಲೆಕ್ಕಾಚಾರವಾಗಿದೆ.

ಬೆಣ್ಣೆಹಳ್ಳದ ಉಗ್ರಾವತಾರಕ್ಕೆ ಜನರು ಕಂಗಾಲು

ಇನ್ನು ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ದುಂಡಸಿಯಲ್ಲಿ ಉಗಮವಾಗುವ ಬೆಣ್ಣೆಹಳ್ಳ ಧಾರವಾಡ, ಗದಗ ಜಿಲ್ಲೆ ಸೇರಿದಂತೆ ಬರೋಬ್ಬರಿ 148 ಕಿಮೀ ಹರಿದು ಹೋಗುತ್ತದೆ. ತುಪ್ಪರಿಹಳ್ಳ, ರಾಡಿಹಳ್ಳ, ಹಂದಿಗನಹಳ್ಳ, ಇರವಿಹಳ್ಳ, ಹಿರೇಹಳ್ಳ, ಯರನಹಳ್ಳ ಸೇರಿದಂತೆ ಸರಿಸುಮಾರು 56 ಉಪಹಳ್ಳಗಳು ಇದಕ್ಕೆ ಸೇರುತ್ತವೆ. ಇವುಗಳಲ್ಲಿ ಅತ್ಯಂತ ಅತಿ ದೊಡ್ಡದೆಂದರೆ ತುಪ್ಪರಿಹಳ್ಳ. ಬೇಸಿಗೆ, ಚಳಿಗಾಲದಲ್ಲಿ ಮೈದಾನದಂತೆ ಭಾಸವಾಗುವ ಈ ಹಳ್ಳಗಳು, ಮಳೆಗಾಲದಲ್ಲಿ ತೋರುವ ಉಗ್ರಾವತಾರವೇ ಬೇರೆ. ಅಕ್ಷರಶಃ ಧಾರವಾಡ, ಗದಗ ಜಿಲ್ಲೆಗಳನ್ನು ಇವು ನಡುಗಿಸುತ್ತವೆ.

ಇವುಗಳ ಹಾವಳಿಗೆ 37 ಹಳ್ಳಿಗಳು ನರಕಯಾತನೆ ಅನುಭವಿಸುತ್ತವೆ. ಬೆಣ್ಣೆಹಳ್ಳ- ತುಪರಿಹಳ್ಳಗಳಿಂದ 22 ಟಿಎಂಸಿಗೂ ಅಧಿಕ ನೀರು ಪ್ರತಿವರ್ಷ ವ್ಯರ್ಥವಾಗಿ ಹರಿದುಹೋಗುತ್ತದೆ. ಈ ನೀರನ್ನು ಬಳಕೆ ಮಾಡಬೇಕು. ಜೊತೆಗೆ ಇಲ್ಲಿನ ಪ್ರವಾಹವನ್ನು ತಡೆಗಟ್ಟಲು ಕ್ರಮಕೈಗೊಳ್ಳಬೇಕು ಎನ್ನುವ ಹಲವಾರು ವರ್ಷಗಳ ಬೇಡಿಕೆಗೆ ಇದೀಗ ಪರಿಹಾರ ಸಿಗುತ್ತಿದೆ.

ಇದನ್ನೂ ಓದಿ: ಬೆಣ್ಣೆ ಹಳ್ಳ ಪ್ರವಾಹ: ದೇವಸ್ಥಾನದೊಳಗೆ ನುಗ್ಗಿದ ನೀರಿನಲ್ಲೇ 2 ದಿನ ಕಳೆದ ಮಾನಸಿಕ ಅಸ್ವಸ್ಥನ ರಕ್ಷಣೆ

2010ರವರೆಗೂ ಯಾವ ಇಲಾಖೆ ಈ ಹಳ್ಳಗಳನ್ನು ನಿರ್ವಹಣೆ ಮಾಡಬೇಕು ಎಂಬ ಬಗ್ಗೆಯೂ ಯಾವುದೇ ನಿಯಮಗಳಿರಲಿಲ್ಲ. ಆದರೆ 2010ಕ್ಕೆ ಬೆಣ್ಣೆಹಳ್ಳ-ತುಪ್ಪರಿಹಳ್ಳಗಳನ್ನು ಆಗಿನ ಯಡಿಯೂರಪ್ಪ ಸರ್ಕಾರ ಬೃಹತ್ ನೀರಾವರಿ ಇಲಾಖೆ ವ್ಯಾಪ್ತಿಗೆ ಸೇರಿಸಿತ್ತು. ಪರಮಶಿವಯ್ಯ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಅದು ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿಯನ್ನೂ ನೀಡಿತ್ತು. ಬಳಿಕ ವಿವಿಧ ಹಂತಗಳಲ್ಲಿ ಸಮೀಕ್ಷೆಗಳನ್ನು ನಡೆಸಿ ರೂ. 1610 ಕೋಟಿ ರೂ ಯೋಜನೆಯನ್ನು ಸಿದ್ಧಪಡಿಸಿ ಡಿಪಿಆರ್‌ನ್ನು ಇಲಾಖೆಗೆ ಸಲ್ಲಿಸಿತು. ಅದಕ್ಕೆ ಸಿದ್ದರಾಮಯ್ಯ ಸರ್ಕಾರ ಎರಡು ವರ್ಷಗಳ ಹಿಂದೆಯೇ ರೂ. 200 ಕೋಟಿ ರೂ ಬಿಡುಗಡೆ ಮಾಡಿತ್ತು. ಆದರೆ ಕಾಮಗಾರಿ ನಾನಾ ಕಾರಣಗಳಿಂದಾಗಿ ಆರಂಭವಾಗಿರಲಿಲ್ಲ. ಸದ್ಯ ಇದೀಗ ಕಾಮಗಾರಿ ಆರಂಭವಾಗಿದ್ದು, ಜನರು ಕೊಂಚ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಪೂರ್ಣ ಯೋಜನೆಗೆ ಅನುಮೋದನೆ ನೀಡಿ ಹಂತ ಹಂತವಾಗಿ ಕಾಮಗಾರಿ ಕೈಗೊಂಡರೆ ನಿಜಕ್ಕೂ ರೈತರಿಗೆ ಅನುಕೂಲವಾಗೋದಂತೂ ಸತ್ಯ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 5:01 pm, Wed, 27 May 26

Source link

ಕೇರಳದಲ್ಲಿ ಪಿಣರಾಯಿ ವಿಜಯನ್ ಬೆಂಬಲಿಗರಿಂದ ಇಡಿ ತಂಡದ ಮೇಲೆ ದಾಳಿ, ಕಾರಿನ ಕಿಟಕಿಗಳು ಪುಡಿಪುಡಿ

ತಿರುವನಂತಪುರಂ, ಮೇ 27: ಕೇರಳದ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ (Pinarayi Vijayan) ಅವರ ಮನೆಯ ಮೇಲೆ ಇಡಿ ದಾಳಿ ನಡೆಸಿದ ಸಂದರ್ಭದಲ್ಲಿ ಸಿಪಿಐಎಂ ಬೆಂಬಲಿಗರು ಇಡಿ (ಜಾರಿ ನಿರ್ದೇಶನಾಲಯ) ಅಧಿಕಾರಿಗಳ ಮೇಲೆ ದಾಳಿ ನಡೆಸಿದರು. ಇದರಿಂದ ಇಡಿ ಅಧಿಕಾರಿಗಳ ಕಾರಿನ ಕಿಟಕಿಗಳು ಪುಡಿಪುಡಿಯಾಗಿದ್ದವು. ತಿರುವನಂತಪುರಂ ಜಿಲ್ಲೆಯ ಬೇಕರಿ ಜಂಕ್ಷನ್‌ನಲ್ಲಿರುವ ಮಾಜಿ ಸಿಎಂ ಪಿಣರಾಯಿ ವಿಜಯನ್ ಅವರ ಮನೆಯ ಮುಂದೆ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ತೀವ್ರ ಘರ್ಷಣೆ ನಡೆಯಿತು.

ಸಿಪಿಐ(ಎಂ) ಕಾರ್ಯಕರ್ತರು ಇಡಿ ಅಧಿಕಾರಿಗಳ ವಾಹನವನ್ನು ಧ್ವಂಸಗೊಳಿಸಿದ್ದಾರೆ. ಇದಕ್ಕೂ ಮೊದಲು, ಕಣ್ಣೂರಿನಲ್ಲಿರುವ ಪಿಣರಾಯಿ ವಿಜಯನ್ ಅವರ ನಿವಾಸ ಮತ್ತು ಕೋಝಿಕ್ಕೋಡ್‌ನ ಕೊಟ್ಟುಲಿಯಲ್ಲಿರುವ ಮೊಹಮ್ಮದ್ ರಿಯಾಸ್ ಅವರ ನಿವಾಸದಲ್ಲಿ ಶೋಧ ಕಾರ್ಯ ಪೂರ್ಣಗೊಂಡಿತ್ತು. ಕೋಝಿಕ್ಕೋಡ್‌ನಲ್ಲಿ ಪೊಲೀಸರು ಮತ್ತು ಸಿಪಿಐ(ಎಂ) ಕಾರ್ಯಕರ್ತರ ನಡುವೆ ಘರ್ಷಣೆ ಭುಗಿಲೆದ್ದಿತು. ನಂತರ ನಾಯಕರು ಮಧ್ಯಪ್ರವೇಶಿಸಿ ಪ್ರತಿಭಟನೆಯನ್ನು ನಿಯಂತ್ರಣಕ್ಕೆ ತಂದರು. ಇಡಿ ಶೋಧ ಕಾರ್ಯಾಚರಣೆ ಸುಮಾರು 8 ಗಂಟೆಗಳ ಕಾಲ ನಡೆಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version