ಭಾರತದಲ್ಲಿ ಆ್ಯಪಲ್​ನಂತಹ ಮೊಬೈಲ್ ಕಂಪನಿ ಸದ್ಯದಲ್ಲೇ ಶುರುವಾಗುತ್ತಾ? ಡಾವೊಸ್​ನಲ್ಲಿ ಸುಳಿವು ಕೊಟ್ಟ ಸಚಿವರು – Kannada News | India will have its own mobile manufacturing unit in next one year, says Ashwini Vaishnaw

ಡಾವೊಸ್, ಜನವರಿ 23: ಭಾರತ ಮೊಬೈಲ್ ಫೋನ್ ತಯಾರಿಕೆಯಲ್ಲಿ ಚೀನಾ ನಂತರದ ಸ್ಥಾನ ಪಡೆದಿದೆ. ಅತಿಹೆಚ್ಚು ಮೊಬೈಲ್ ಫೋನ್ ತಯಾರಿಸುವ ದೇಶಗಳಲ್ಲಿ ಭಾರತದ್ದು ಎರಡನೇ ಸ್ಥಾನ. ಆ್ಯಪಲ್ ಕಂಪನಿಯ ಶೇ. 20ರಷ್ಟು ಐಫೋನ್​ಗಳು ಭಾರತದಲ್ಲೇ ತಯಾರಾಗುತ್ತಿವೆ. ಫೋನ್​ಗೆ ಬೇಕಾದ ಹೆಚ್ಚಿನ ಬಿಡಿಭಾಗಗಳೆಲ್ಲವೂ ಭಾರತದಲ್ಲೇ ಲಭ್ಯವಾಗುವಂತೆ ಪ್ರಬಲ ಇಕೋಸಿಸ್ಟಂ ಬೆಳೆದಿದೆ. ಈ ಹಿನ್ನೆಲೆಯಲ್ಲಿ ಆ್ಯಪಲ್​ನಂತಹ ಮೊಬೈಲ್ ಫೋನ್ ಕಂಪನಿ ಭಾರತದಲ್ಲಿ ಶುರುವಾಗುತ್ತಾ, ಅಥವಾ ವಿದೇಶೀ ಕಂಪನಿಗಳಿಗೆ ಫೋನ್ ತಯಾರಿಸಿಕೊಡುವ ಕೆಲಸಗಳಿಗೆ ಮಾತ್ರ ಭಾರತ ಸೀಮಿತವಾಗಿರುತ್ತಾ? ಈ ಪ್ರಶ್ನೆಗೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಉತ್ತರಿಸಿದ್ದಾರೆ.

ಸ್ವಿಟ್ಜರ್​ಲ್ಯಾಂಡ್​ನ ಡಾವೊಸ್ ಸಮಿಟ್​ನಲ್ಲಿ ಪತ್ರಕರ್ತರೊಬ್ಬರ ಪ್ರಶ್ನೆಗೆ ಉತ್ತರಿಸುತ್ತಾ, ಅಶ್ವಿನಿ ವೈಷ್ಣವ್ ಕುತೂಹಲಕಾರಿ ಮಾಹಿತಿ ಬಿಚ್ಚಿಟ್ಟಿದ್ದಾರೆ. ಇನ್ನೊಂದು ವರ್ಷದಲ್ಲಿ ಭಾರತೀಯ ಬ್ರ್ಯಾಂಡ್ ಅನ್ನು ನೀವು ನೋಡಬಹುದು ಎಂದು ಎಲೆಕ್ಟ್ರಾನಿಕ್ಸ್ ಸಚಿವರೂ ಆದ ಅವರು ಹೇಳಿದ್ದಾರೆ

ಇದನ್ನೂ ಓದಿ: ಎಐ ಕ್ಷೇತ್ರದಲ್ಲಿ ಭಾರತದ ಹೆಜ್ಜೆಗಳನ್ನು ಶ್ಲಾಘಿಸಿದ ಐಎಂಎಫ್ ಮುಖ್ಯಸ್ಥೆ

ಮೊಬೈಲ್ ಫೋನ್ ತಯಾರಿಕೆಗೆ ಬೇಕಾದ ಹೋಮ್​ವರ್ಕ್ ಮುಗಿಸಿದ್ದೇವೆ. ನಮ್ಮ ದೇಶದಲ್ಲಿ ಉತ್ತಮವಾದ ಎಲೆಕ್ಟ್ರಾನಿಕ್ಸ್ ಇಕೋಸಿಸ್ಟಂ ಅನ್ನು ಹೊಂದಿದ್ದೇವೆ. ನಮ್ಮದೇ ಭಾರತೀಯ ಬ್ರ್ಯಾಂಡ್ ಮತ್ತು ಸಾಧನಗಳನ್ನು ಹೊಂದುವ ಸಮಯ ಬಂದಿದೆ ಎಂದು ಅಶ್ವಿನಿ ವೈಷ್ಣವ್ ವಿವರಿಸಿದ್ದಾರೆ.

‘ಮೊಬೈಲ್ ಫೋನ್​ಗೆ ಬೇಕಾಗಿರುವ ಸಾವಿರಾರು ಸರಕುಗಳನ್ನು ತಯಾರಿಸುವಂತಹ ಇಡೀ ಇಕೋಸಿಸ್ಟಂ ಜೊತೆ ಇವತ್ತು ಮತ್ತು ನಿನ್ನೆ ಮಾತುಕತೆಗಳನ್ನು ನಡೆಸಿದ್ದೇವೆ. ಈ ವಿಚಾರದಲ್ಲಿ ನಡೆಯುತ್ತಿರುವ ಬೆಳವಣಿಗೆ ಆಶಾದಾಯಕವಾಗಿದೆ’ ಎಂದು ಅವರು ತಿಳಿಸಿದ್ದಾರೆ.

ಭಾರತೀಯ ಬ್ರ್ಯಾಂಡ್ ಯಾವಾಗ ನಿರೀಕ್ಷಿಸಬಹುದು ಎನ್ನುವ ಪ್ರಶ್ನೆಗೆ ಉತ್ತರಿಸಿದ ವೈಷ್ಣವ್, ‘ಬಹಳ ಶೀಘ್ರದಲ್ಲೇ, ಇನ್ನೊಂದು ವರ್ಷ ಅಥವಾ 18 ತಿಂಗಳೊಳಗೆ ನಮ್ಮದೇ ಭಾರತೀಯ ಬ್ರ್ಯಾಂಡ್ ಹೊಂದಿರುತ್ತೇವೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಎಐ ಟೆಕ್ನಾಲಜಿಯಲ್ಲಿ ಅಮೆರಿಕ, ಚೀನಾ ಸಮಕ್ಕೆ ಭಾರತ ಬೆಳೆಯಬಲ್ಲುದೆ? ಡಾವೊಸ್ ಸಮಿಟ್​ನಲ್ಲಿ ಭಾರತದ ಎಐ ಪ್ಲಾನ್ ಬಿಚ್ಚಿಟ್ಟ ಎ ವೈಷ್ಣವ್

ಅಶ್ವಿನಿ ವೈಷ್ಣವ್ ಅವರು ವರ್ಲ್ಡ್ ಎಕನಾಮಿಕ್ ಫೋರಂ ಸಭೆಯಲ್ಲಿ ಭಾರತದ ಎಐ ಮತ್ತು ಆರ್ಥಿಕ ಅಭಿವೃದ್ಧಿ ಹಾಗೂ ಸರ್ಕಾರ ತಂದಿರುವ ಸುಧಾರಣಾ ಕ್ರಮಗಳ ಬಗ್ಗೆ ಸಾಕಷ್ಟು ಮಾತನಾಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಗಣರಾಜ್ಯೋತ್ಸವ ದಿನಾಚರಣೆಗೆ ಸಾರ್ವಜನಿಕರಿಗೆ E-Pass: ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ವಿವರ – Kannada News | Republic Day 2026: How to Apply for Public E Pass Online via Seva Sindhu in Karnataka

ಗಣರಾಜ್ಯೋತ್ಸವ ದಿನಾಚರಣೆಗೆ ಸಾರ್ವಜನಿಕರಿಗೆ E-Pass

ಬೆಂಗಳೂರು, ಜನವರಿ 22: ಬೆಂಗಳೂರಿನ ಫೀಲ್ಡ್ ಮಾರ್ಷಲ್ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಜನವರಿ 26 ರಂದು ನಡೆಯಲಿರುವ 77ನೇ ಗಣರಾಜ್ಯೋತ್ಸವ ದಿನಾಚರಣೆ (Republic Day) ಕಾರ್ಯಕ್ರಮ ವೀಕ್ಷಿಸಿಸಲು ಸಾರ್ವಜನಿಕರಿಗೆ E-Pass ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ. ಜಗದೀಶ ರವರು ತಿಳಿಸಿದ್ದಾರೆ. ಆಸಕ್ತರು ಸೇವಾ ಸಿಂಧು ವೆಬ್ ಸೈಟ್ (www.sevasindhu.karnataka.gov.in) ನಲ್ಲಿ ಜನವರಿ 24, 2026 ರ ಸಂಜೆ 5 ಗಂಟೆಯೊಳಗೆ ಅಗತ್ಯವಿರುವ ಎಲ್ಲ ವೈಯಕ್ತಿಕ ವಿವರಗಳನ್ನು ನಮೂದಿಸಿ ಇ-ಪಾಸ್ ಗಳನ್ನು ಪಡೆಯಬಹುದು.

ಇ-ಪಾಸ್ ಗಳನ್ನು ಹೊಂದಿರುವವರು ಪರೇಡ್ ಮೈದಾನದ ಪ್ರವೇಶ ದ್ವಾರ ಸಂಖ್ಯೆ 05 ರಲ್ಲಿ ಪರಿಶೀಲನೆಗಾಗಿ ಇ-ಪಾಸ್ ನ ಮುದ್ರಿತ ಪ್ರತಿಯನ್ನು ಅಥವಾ ಡಿಜಿಟಲ್ (ಮೊಬೈಲ್ ) ಪ್ರತಿಯನ್ನು ಕಡ್ಡಾಯವಾಗಿ ಹೊಂದಿರಬೇಕು ಎಂದು ಅವರು ತಿಳಿಸಿದ್ದಾರೆ.

ಇ-ಪಾಸ್ ನೋಂದಣಿ ಪ್ರಕ್ರಿಯೆ ಕುರಿತು ಸಹಾಯಕ್ಕಾಗಿ ಸೇವಾ ಸಿಂಧು ವೈಬ್ ಸೈಟ್​​ನಲ್ಲಿ ಸಹಾಯ ವಿಭಾಗವನ್ನು ವಿಕ್ಷೀಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?

  • ಸೇವಾಸಿಂಧು ಪೋರ್ಟಲ್ ಓಪನ್ ಮಾಡಿ
  • ಮೊದಲು Registered User Login ಆಯ್ಕೆಯನ್ನು ಕ್ಲಿಕ್ ಮಾಡಿ
  • ನಿಮ್ಮ Aadhaar ಸಂಖ್ಯೆಗೆ ಲಗತ್ತಾದ ಮೊಬೈಲ್ ನಂ. ಟೈಪ್ ಮಾಡಿ
  • OTP ಬರಲು ಕಾಯಿರಿ ಮತ್ತು ನಮೂದಿಸಿ
  • ಮೊದಲು ನೋಂದಣಿ ಮಾಡಿಲ್ಲ ಅಂದ್ರೆ, New User/Register ಆಯ್ಕೆಮಾಡಿ ಖಾತೆ ರಚಿಸಿ
  • ಲಾಗಿನ್ ಆದ ಮೇಲೆ “Departments and Services” ಅಥವಾ “Apply for Services” ವಿಭಾಗಕ್ಕೆ ಹೋಗಿ
    “Republic Day e-Pass” ಎನ್ನುವ ಆಯ್ಕೆಯನ್ನು ಹುಡುಕಿ
  • ನಿಮ್ಮ ವ್ಯಕ್ತಿಗತ ವಿವರಗಳು (ಹೆಸರು, ವಯಸ್ಸು, ಲಿಂಗ, ತಾಯಿ/ತಂದೆಯ ಹೆಸರು ಹಾಗು ನಗರ/ಜಿಲ್ಲೆ) ಭರ್ತಿ ಮಾಡಿ
    OTP Verification ಮತ್ತು ಯಾವುದೇ ಅಗತ್ಯ ಮಾಹಿತಿಗಳನ್ನು ಸರಿಯಾಗಿ ನಮೂದಿಸಿ
  • ಎಲ್ಲಾ ಮಾಹಿತಿ ಸರಿಯಾಗಿ ಚೆಕ್ ಮಾಡಿ
  • ಎಲ್ಲ ವಿವರಗಳು ಸರಿಯಾಗಿ ಇದ್ದರೆ “Submit” ಕ್ಲಿಕ್ ಮಾಡಿ
  • ಅರ್ಜಿ ಸಲ್ಲಿಸಿದ ನಂತರ e-Pass display ಆಗುತ್ತದೆ
  • ಈ pass-ನ್ನು ಡೌನ್​ಲೋಡ್ ಮಾಡಿ ಪ್ರಿಂಟ್ ಮಾಡಿ ಇಟ್ಟುಕೊಳ್ಳಿ
  • ಜನವರಿ 26ರಂದು ಆಧಾರ್/Photo ID ಜೊತೆಗೆ ಇದು ಮುಖ್ಯವಾಗಿ ಬೇಕಾಗುತ್ತದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 12:40 pm, Fri, 23 January 26

Source link

ಮಿಲ್ಲೆಟ್ ಟು ಮೈಕ್ರೋಚಿಪ್: ಹೇಗಿರಲಿದೆ ಗೊತ್ತಾ ಗಣರಾಜ್ಯೋತ್ಸವ ಪರೇಡ್​​​ನಲ್ಲಿ ಭಾಗಿಯಾಗಲಿರುವ ಕರ್ನಾಟಕದ ಸ್ತಭ್ಧಚಿತ್ರ? – Kannada News | Karnataka’s ‘Millet to Microchip’ Tableau Set to Shine at the Republic Day 2026 Parade

ಬೆಂಗಳೂರು, ಜನವರಿ 23: ಜನವರಿ 26ರಂದು ದೆಹಲಿಯ ಕೆಂಪು ಕೋಟೆಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪರೇಡ್​​​ನಲ್ಲಿ ಕರ್ನಾಟಕದಿಂದ ಮಿಲ್ಲೆಟ್ ಟು ಮೈಕ್ರೋಚಿಪ್ ಪರಿಲ್ಪನೆಯ ಸ್ತಬ್ಧಚಿತ್ರ ಭಾಗವಹಿಸಲಿದೆ. ಕೃಷಿಯಿಂದ ಕೈಗಾರಿಕೆವರೆಗೆ ಹಾಗೂ ಆಧುನಿಕ ತಂತ್ರಜ್ಞಾನದ ಬಳಕೆಯಲ್ಲಿ ನಮ್ಮ ರಾಜ್ಯ ಮುಂಚೂಣಿಯಲ್ಲಿದ್ದು, ಈ ಪಯಣವನ್ನು ಸಂಕೇತಿಸುವಂತೆ ಟ್ಯಾಬ್ಲೋ ಇರಲಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಹೇಮಂತ್ ಎಂ ನಿಂಬಾಳ್ಕರ್ ತಿಳಿಸಿದ್ದಾರೆ.

ಕರ್ನಾಟಕ ರಾಜ್ಯದ ಪರವಾಗಿ ಗಣರಾಜ್ಯೋತ್ಸವದ ಪಥಸಂಚಲನ ಮತ್ತು ಭಾರತ ಪರ್ವದಲ್ಲಿ ಪಾಲ್ಗೊಳ್ಳುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ತನ್ನ ವೈಶಿಷ್ಟ್ಯಪೂರ್ಣ ಸ್ತಬ್ಧಚಿತ್ರಗಳ ಮೂಲಕವೇ ದೇಶದ ಗಮನ ಸೆಳೆಯುತ್ತಿದೆ. ವರ್ಷದಿಂದ ವರ್ಷಕ್ಕೆ ಹೊಸ ಮೈಲಿಗಲ್ಲುಗಳನ್ನು ಸ್ಥಾಪಿಸುತ್ತಲೇ ಸಾಗಿದೆ. ಈ ಬಾರಿ ಕೃಷಿ, ಶಿಕ್ಷಣ, ವಿಜ್ಞಾನ, ಉನ್ನತ ತಂತ್ರಜ್ಞಾನ ಹಾಗೂ ಮೈಕ್ರೋಚಿಪ್‍ಗಳ ಉತ್ಪಾದನೆಯಲ್ಲಿ ಸಾಧಿಸಿರುವ ಸಮತೋಲನಯುತ ಪ್ರಗತಿಯನ್ನು ಸ್ತಬ್ಧಚಿತ್ರದ ಮೂಲಕ ತೋರಿಸಲಾಗ್ತಿದೆ. ಸಿರಿಧಾನ್ಯಗಳ ಉತ್ಪಾದನೆ ಮತ್ತು ಪೌಷ್ಟಿಕ ಆಹಾರದ ಬಳಕೆಯನ್ನು ಉತ್ತೇಜಿಸುವಲ್ಲಿ ಕರ್ನಾಟಕವು ದೇಶದ ಪ್ರಮುಖ ರಾಜ್ಯಗಳಲ್ಲಿ ಒಂದಾಗಿದೆ. ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಬೆಂಗಳೂರು ಜಾಗತಿಕವಾಗಿ ಗಮನ ಸೆಳೆದಿದೆ. ಮೈಕ್ರೋಚಿಪ್, ಎಲೆಕ್ಟ್ರಾನಿಕ್ಸ್ ಹಾಗೂ ಸೆಮಿಕಂಡಕ್ಟರ್ ವಲಯಗಳಲ್ಲಿನ ಆವಿಷ್ಕಾರಗಳು ಕರ್ನಾಟಕವನ್ನು ಶ್ರೇಷ್ಠ ತಂತ್ರಜ್ಞಾನ ಕೇಂದ್ರವಾಗಿಸಿದೆ. ಇವೆಲ್ಲವೂ ಈ ಬಾರಿ ಸ್ತಬ್ಧಚಿತ್ರದಲ್ಲಿ ಮೇಳೈಸಲಿವೆ.

ಇದನ್ನೂ ಓದಿ: ಗಣರಾಜ್ಯೋತ್ಸವದಂದು ದೆಹಲಿಯ ಕರ್ತವ್ಯ ಪಥದಲ್ಲಿ ಏನೆಲ್ಲಾ ಕಾರ್ಯಕ್ರಮಗಳು ನಡೆಯಲಿವೆ? ಮುಖ್ಯ ಅತಿಥಿಗಳ್ಯಾರು?

2026ರ ಜನವರಿ 26ರಂದು ನಡೆಯುವ ದೆಹಲಿ ಗಣರಾಜ್ಯೋತ್ಸವದ ಸ್ತಬ್ಧಚಿತ್ರಕ್ಕಾಗಿ ಇಲಾಖೆಯು ಕಿತ್ತೂರು ರಾಣಿ ಚೆನ್ನಮ್ಮ ಮತ್ತು ರಾಣಿ ಅಬ್ಬಕ್ಕದೇವಿ, ಕರ್ನಾಟಕ ಪುಷ್ಪ ವೈಭವ, ಹಲಗಲಿ ಬೇಡರು, ಸಿರಿಧಾನ್ಯದಿಂದ ಮೈಕ್ರೋಚಿಪ್​​ವರೆಗೆ ಎಂಬ ನಾಲ್ಕು ವಿಷಯಗಳನ್ನು ಆಯ್ಕೆ ಮಾಡಿ ಕಳುಹಿಸಿತ್ತು. ಆ ಪೈಕಿ ಮೊದಲ ಸಭೆಯಲ್ಲಿಯೇ ಸಿರಿಧಾನ್ಯದಿಂದ ಮೈಕ್ರೋಚಿಪ್ ವರೆಗೆ ಎಂಬ ವಿಷಯವನ್ನು ಪರಿಣತರ ಸಮಿತಿಯು ಒಮ್ಮತದಿಂದ ಅಂತಿಮಗೊಳಿಸಿತ್ತು.

ಸ್ತಬ್ಧಚಿತ್ರದಲ್ಲಿ ಏನಿರಲಿದೆ?

ಸ್ತಬ್ಧಚಿತ್ರದ ಮುಂಭಾಗದಲ್ಲಿ ಉದಯಿಸುತ್ತಿರುವ ಸೂರ್ಯ ನಿರಂತರ ಪ್ರಗತಿ ಮತ್ತು ಚಲನಶೀಲತೆಯ ಸಂಕೇತವಾಗಿ ಹೊಳೆಯುತ್ತಿರಲಿದೆ. ದೊಡ್ಡ ಮಡಿಕೆಗಳಲ್ಲಿ ಪ್ರದರ್ಶಿಸಲಾದ ವಿವಿಧ ಸಿರಿಧಾನ್ಯಗಳು ಕೃಷಿ ಸಮೃದ್ಧಿಯನ್ನು ತೋರಿಸಲಿವೆ. ಬೆಳೆದ ಫಸಲನ್ನು ಎತ್ತಿಹಿಡಿದಿರುವ ರೈತ, ಆತನ ಪತ್ನಿ ಹಾಗೂ ಉಲ್ಲಾಸದಿಂದ ಕಾಣಿಸುತ್ತಿರುವ ಮಕ್ಕಳು ಗ್ರಾಮೀಣ ಶಕ್ತಿಯ ಜೀವಂತ ಚಿತ್ರಣವಾಗಿದ್ದಾರೆ. ಮಧ್ಯಭಾಗದಲ್ಲಿ ತಿರುಗುತ್ತಿರುವ ಅಣುವಿನ ಮಾಲಿಕ್ಯೂಲ್‍ಗಳ ಮಾದರಿ ತಂತ್ರಜ್ಞಾನ ಪ್ರಗತಿಯನ್ನು ಸೂಚಿಸುತ್ತದೆ. ಕೃತಕ ಬುದ್ಧಿಮತ್ತೆಯ ರೋಬೋಟ್ ಕಂಪ್ಯೂಟರ್​​ನಲ್ಲಿ ಕಾರ್ಯನಿರ್ವಹಿಸುತ್ತಿರುವುದು ಭವಿಷ್ಯದ ಆವಿಷ್ಕಾರಗಳ ಸಂಕೇತವಾಗಿದೆ.

ಇಕ್ಕೆಲಗಳಲ್ಲಿ ಬಾಹ್ಯಾಕಾಶ ಕ್ಷೇತ್ರವನ್ನು ಪ್ರತಿನಿಧಿಸುವ ರಾಕೆಟ್ ಮತ್ತು ವಿಜ್ಞಾನಿ, ಟೆಲಿಮೆಡಿಸಿನ್ ಮೂಲಕ ಮಾರ್ಗದರ್ಶನ ನೀಡುತ್ತಿರುವ ವೈದ್ಯೆ ಹಾಗೂ ಕೃಷಿಭೂಮಿಯಲ್ಲಿ ಡ್ರೋನ್ ಬಳಸುತ್ತಿರುವ ಮಹಿಳೆಯು ವಿಜ್ಞಾನ, ಆರೋಗ್ಯ ಮತ್ತು ಆಧುನಿಕ ಕೃಷಿಯ ಸಮನ್ವಯವನ್ನು ತೋರಿಸುತ್ತಾರೆ. ಕೈಗಾರಿಕಾ ವಲಯವನ್ನು ಪ್ರತಿನಿಧಿಸುವಂತೆ ಯಂತ್ರೋಪಕರಣಗಳೊಂದಿಗೆ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರು ಉತ್ಪಾದನಾ ಶಕ್ತಿಗೆ ಸಾಕ್ಷಿಯಾಗಿದ್ದಾರೆ. ಇಡೀ ಸ್ತಬ್ಧಚಿತ್ರದ ಆಕರ್ಷಣೆಯ ಕೇಂದ್ರಬಿಂದುವಾಗಿ ಕೊನೆಯಲ್ಲಿ ಮಿನುಗುತ್ತಿರುವ ಮೈಕ್ರೋಚಿಪ್ ಹಾಗೂ ಬಂಗಾರದ ಬಣ್ಣದ ಸರ್ಕ್ಯೂಟ್‍ಗಳ ಮಧ್ಯೆ ರೋಬೋಟ್‍ನ ಮುಖವನ್ನು ಸಾಂಕೇತಿಕವಾಗಿ ಚಿತ್ರಿಸಲಾಗಿದೆ. ಇದು ಪರಂಪರೆಯಿಂದ ಪ್ರಗತಿಯತ್ತ, ಮಣ್ಣಿನಿಂದ ಯಂತ್ರಗಳತ್ತ ಸಾಗುತ್ತಿರುವ ಕರ್ನಾಟಕದ ಆತ್ಮನಿರ್ಭರ ಪಯಣದ ಸಾರವಾಗಿದೆ ಎಂದು ಇಲಾಖೆ ತಿಳಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 12:55 pm, Fri, 23 January 26

Source link

ಚಿಕ್ಕ ಮಕ್ಕಳೆಂದೂ ಲೆಕ್ಕಿಸದೆ ಬಾಸುಂಡೆ ಬರುವಂತೆ ಥಳಿಸಿದ ದುರುಳರು! – Kannada News | Doddaballapur Child Assault: Two Boys Brutally Attacked, One Arm Broken

ಚಿಕ್ಕ ಮಕ್ಕಳೆಂದೂ ಲೆಕ್ಕಿಸದೆ ಬಾಸುಂಡೆ ಬರುವಂತೆ ಥಳಿಸಿದ ದುರುಳರು!

ಬೆಂಗಳೂರು ಗ್ರಾಮಾಂತರ, ಜನವರಿ 23: ಜಿಲ್ಲೆಯ ದೊಡ್ಡಬಳ್ಳಾಪುರ (Bengaluru Rural) ನಗರದಲ್ಲಿ ಚಿಕ್ಕ ಮಕ್ಕಳ ಮೇಲೆ ಅಮಾನವೀಯ ಹಲ್ಲೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ದೊಡ್ಡಬಳ್ಳಾಪುರದ ಮುತ್ಯಾಲಮ್ಮ ದೇವಸ್ಥಾನದ ಬಳಿ 3 ಮತ್ತು 7 ವರ್ಷದ ಇಬ್ಬರು ಗಂಡು ಮಕ್ಕಳನ್ನು ದುರುಳರು ನಿರ್ದಯವಾಗಿ ಹಲ್ಲೆ ಮಾಡಿದ್ದು, ಮಕ್ಕಳನ್ನ ವಿಕ್ಟೋರಿಯಾ ಆಸ್ವತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಮಗುವಿನ ಕೈ ಮುರಿದಿರುವ ನಿರ್ದಯಿಗಳು

ಹಲ್ಲೆಯಿಂದ ಮಕ್ಕಳ ಮೈ, ಕೈ ಮತ್ತು ಕಾಲುಗಳ ಮೇಲೆ ತೀವ್ರ ಬಾಸುಂಡೆಗಳು ಉಂಟಾಗಿದ್ದು, ಒಂದು ಮಗುವಿನ ಕೈ ಮುರಿದಿದೆ ಎಂದು ಹೇಳಲಾಗಿದೆ. ಚಿಕ್ಕ ಮಕ್ಕಳು ಎಂಬುದನ್ನೂ ಲೆಕ್ಕಿಸದೇ ಹಲ್ಲೆ ನಡೆಸಿರುವ ಈ ವಿಕೃತ ಕೃತ್ಯವು ಮಾನವೀಯತೆಯನ್ನೇ ಪ್ರಶ್ನಿಸುವಂತಾಗಿದೆ. ಗಾಯಗೊಂಡ ಮಕ್ಕಳ ಸ್ಥಿತಿಯನ್ನು ಕಂಡ ಸ್ಥಳೀಯರು ಮಕ್ಕಳ ಸಹಾಯವಾಣಿ (ಚೈಲ್ಡ್ ಹೆಲ್ಪ್‌ಲೈನ್) ಗೆ ದೂರು ನೀಡಿದ್ದು, ದೂರಿನನ್ವಯ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಹಲ್ಲೆ ಪ್ರಕರಣ ಬೆಳಕಿಗೆ ಬಂದಿದೆ. ತಕ್ಷಣವೇ ಮಕ್ಕಳನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿ, ಚಿಕಿತ್ಸೆ ಕೊಡಿಸಲಾಗಿದೆ.

ತಾಯಿಯಿಲ್ಲದ ಸಮಯದಲ್ಲಿ ಘಟನೆ

ಮಕ್ಕಳ ತಾಯಿ ಗಾರ್ಮೆಂಟ್ಸ್ ಕೆಲಸಕ್ಕೆ ತೆರಳಿದ್ದ ವೇಳೆ ಅಪರಿಚಿತರು ಮಕ್ಕಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಘಟನೆಯ ನಂತರ ಹೆದರಿಕೊಂಡಿರುವ ಮಕ್ಕಳು, ಹಲ್ಲೆಯ ಬಗ್ಗೆ ಸ್ಪಷ್ಟವಾಗಿ ಏನೂ ಹೇಳಲು ಸಾಧ್ಯವಾಗದೆ ಆತಂಕದಲ್ಲಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದು, ಹಲ್ಲೆ ನಡೆಸಿದ ದುರುಳರ ಪತ್ತೆಗೆ ತನಿಖೆ ಮುಂದುವರಿದಿದೆ. ಆರೋಪಿಗಳನ್ನು ಶೀಘ್ರ ಬಂಧಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Video: ಅಯೋಧ್ಯೆಯ ರಾಮ ಮಂದಿರಕ್ಕೆ ಬಂದಿಳಿದ 286 ಕೆಜಿ ತೂಕದ ಸ್ವರ್ಣ ಧನಸ್ಸು – Kannada News | Ayodhya Ram Mandir: Hands of Shakti, Spirit of Ram: Golden Kodanda Reaches the Sanctum

ಅಯೋಧ್ಯೆ, ಜನವರಿ 23: ಒಡಿಶಾದಿಂದ ಉತ್ತರ ಪ್ರದೇಶದ ಅಯೋಧ್ಯೆಯ ರಾಮ ಮಂದಿರಕ್ಕೆ 286 ಕೆಜಿ ತೂಕದ ಸ್ವರ್ಣ ಧನಸ್ಸು ಬಂದಿಳಿದಿದೆ. ಈ ಬಿಲ್ಲನ್ನು ತಮಿಳುನಾಡಿನ ಕಾಂಚೀಪುರಂನ ಮಹಿಳಾ ಕುಶಲಕರ್ಮಿಗಳು ಸಿದ್ಧಪಡಿಸಿದ್ದಾರೆ. ಚಿನ್ನ, ಬೆಳ್ಳಿ,ತಾಮ್ರ, ಸತು ಮತ್ತು ಕಬ್ಬಿಣದಿಂದ ಈ ಬಿಲ್ಲನ್ನು ರಚಿಸಲಾಗಿದೆ. ಈ ಬಿಲ್ಲನ್ನು ಒಡಿಶಾದಲ್ಲಿ ಸಿದ್ಧಪಡಿಸಲಾಗಿದೆ. ಅಯೋಧ್ಯೆಯ ರಾಮ ಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಭಕ್ತರ ಸಂಖ್ಯೆಯೂ ಹೆಚ್ಚಿದೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಜನವರಿ 24ರಿಂದ 27ರವರೆಗೆ, ಸತತ ನಾಲ್ಕು ದಿನ ದೇಶದ ಎಲ್ಲಾ ಬ್ಯಾಂಕುಗಳಿಗೆ ರಜೆ – Kannada News | Bank employees strike on Jan 27th, banks close for 4 days from Saturday to Tuesday

ನವದೆಹಲಿ, ಜನವರಿ 23: ಬ್ಯಾಂಕುಗಳು ನಾಳೆಯಿಂದ (ಜ. 24) ಸತತ ನಾಲ್ಕು ದಿನ ಬಂದ್ (Bank holiday) ಆಗಿರುತ್ತವೆ. ಜನವರಿ 24, ಶನಿವಾರದಿಂದ ಜನವರಿ 27, ಮಂಗಳವಾರದವರೆಗೂ ಬ್ಯಾಂಕುಗಳ ಬಾಗಿಲು ಮುಚ್ಚಲಾಗಿರುತ್ತದೆ. ತುರ್ತಾಗಿ ಬ್ಯಾಂಕ್ ಕೆಲಸ ಇದ್ದವರು ಇವತ್ತಿಗೇ ಪ್ಲಾನ್ ಮಾಡಿಕೊಳ್ಳಬಹುದು. ಬ್ಯಾಂಕ್ ನೌಕರರ ಮುಷ್ಕರ (Bank workers strike) ಹಾಗೂ ಗಣರಾಜ್ಯೋತ್ಸವ (Republic Day) ಇರುವ ಹಿನ್ನೆಲೆಯಲ್ಲಿ ಸತತ ನಾಲ್ಕು ದಿನ ಬ್ಯಾಂಕುಗಳಿಗೆ ರಜೆ ಇದೆ.

ಬ್ಯಾಂಕುಗಳಿಗೆ ರಜೆ

  • ಜ. 24: ನಾಲ್ಕನೇ ಶನಿವಾರದ ಪ್ರಯುಕ್ತ ರಜೆ
  • ಜ. 25: ಭಾನುವಾರದ ರಜೆ
  • ಜ. 26, ಸೋಮವಾರ: ಗಣರಾಜ್ಯೋತ್ಸವ ಅಂಗವಾಗಿ ರಜೆ
  • ಜ. 27, ಮಂಗಳವಾರ: ಬ್ಯಾಂಕ್ ನೌಕರರ ದೇಶವ್ಯಾಪಿ ಮುಷ್ಕರ.

ಜನವರಿ 24ರಿಂದ 27ರವರೆಗೂ ದೇಶವ್ಯಾಪಿ ಎಲ್ಲಾ ಬ್ಯಾಂಕುಗಳಿಗೂ ರಜೆ ಅನ್ವಯ ಆಗುತ್ತದೆ. ಬ್ಯಾಂಕ್ ನೌಕರರನ್ನು ಸಮಾಧಾನಗೊಳಿಸಿ ಮುಷ್ಕರ ನಿಲ್ಲಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ನಿನ್ನೆ (ಜ. 22) ಕೂಡ ದೆಹಲಿಯಲ್ಲಿ ಸಂಧಾನ ಸಭೆ ನಡೆಯಿತು. ಆದರೂ ಕೂಡ ರಾಜಿ ಅಥವಾ ಪರಿಹಾರ ಬರಲಿಲ್ಲ. ಇವತ್ತೂ ಕೂಡ ಮಾತುಕತೆಗಳು ನಡೆಯಲಿವೆ. ಸಂಜೆ ಈ ಸಂಧಾನ ಯಶಸ್ವಿಯಾಗಿ ನೌಕರರ ಸಂಘ ಸಮಾಧಾನಗೊಂಡರೆ ಜನವರಿ 27ರಂದು ಮುಷ್ಕರವನ್ನು ಕೈಬಿಡಲಾಗಬಹುದು. ಇಲ್ಲದಿದ್ದರೆ ಮಂಗಳವಾರವೂ ಬ್ಯಾಂಕ್ ಬಂದ್ ಆಗಿರುತ್ತದೆ.

ಇದನ್ನೂ ಓದಿ: ಎಐ ಕ್ಷೇತ್ರದಲ್ಲಿ ಭಾರತದ ಹೆಜ್ಜೆಗಳನ್ನು ಶ್ಲಾಘಿಸಿದ ಐಎಂಎಫ್ ಮುಖ್ಯಸ್ಥೆ

ಬ್ಯಾಂಕ್ ನೌಕರರ ಮುಷ್ಕರಕ್ಕೆ ಬೇಡಿಕೆಗಳೇನು?

ಕೆಲ ಕೇಂದ್ರ ಸರ್ಕಾರಿ ಸಂಸ್ಥೆಗಳಲ್ಲಿ ಇರುವಂತೆ ಬ್ಯಾಂಕುಗಳಲ್ಲೂ ವಾರಕ್ಕೆ ಐದು ದಿನ ಕೆಲಸದ ನಿಯಮ ತರಬೇಕೆಂಬುದು ನೌಕರರ ಪ್ರಮುಖ ಒತ್ತಾಯವಾಗಿದೆ. ಸದ್ಯ ಪ್ರತೀ ಭಾನುವಾರ ರಜೆ ಇದೆ. ತಿಂಗಳಲ್ಲಿ ಎರಡನೇ ಮತ್ತು ನಾಲ್ಕನೇ ಶನಿವಾರಗಳಂದು ರಜೆ ಇದೆ. ಈಗ ಎಲ್ಲಾ ಶನಿವಾರ ಮತ್ತು ಭಾನುವಾರಗಳನ್ನು ರಜೆಯಾಗಿ ಮಾಡಬೇಕು ಎಂಬುದು ಬ್ಯಾಂಕ್ ಉದ್ಯೋಗಿಗಳ ಆಗ್ರಹವಾಗಿದೆ. ಬಹಳ ದಿನಗಳಿಂದ ಅವರು ಈ ಬೇಡಿಕೆ ಮುಂದಿಟ್ಟಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿಗರೇ 3 ದಿನದ ರಜೆಯಲ್ಲಿ ಈ ಪ್ರವಾಸಿ ತಾಣಗಳಿಗೆ ಭೇಟಿ ನೀಡಬಹುದು: KSTDCನಿಂದ ವಿಶೇಷ ಪ್ಯಾಕೇಜ್ – Kannada News | Explore Mysore and Ooty: KSTDC’s Affordable 3 Day Weekend Tour Package

ಬೆಂಗಳೂರು, ಜ.23: ಈ ತಿಂಗಳ ಕೊನೆಯ ವಾರ ಅಂದರೆ ಶನಿವಾರ, ಭಾನುವಾರ, ಸೋಮವಾರ ಮೂರು ದಿನ ರಜೆ ಇದೆ. ಈ ಮೂರು ದಿನ ರಜೆಯಲ್ಲಿ ಏನ್ ಮಾಡೋದು ಎಂಬ ಯೋಚನೆ ಬರುವುದು ಸಹಜ, ಎಲ್ಲಿಗಾದರೂ ಹೋಗಬೇಕಲ್ಲ. ಅದರೂ ತಿಂಗಳ ಕೊನೆಗೆ ಹೇಳಿಕೊಳ್ಳುವಷ್ಟು ಬಜೆಟ್​​​ ಇಲ್ಲ, ಅದರೂ ಎಲ್ಲಿಗಾದರೂ ಹೋಗಬೇಕು ಎಂಬ ಆಸೆ ಇದ್ರೆ, ಈ ಪ್ಯಾಕೇಜ್​​ ಬೆಸ್ಟ್​​​ ನೋಡಿ. ಈ ಮೂರು ದಿನದ ರಜೆಯಲ್ಲಿ kstdc (ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ)ನ ಈ ಪ್ಯಾಕೇಜ್​​ನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ಪ್ಯಾಕೇಜ್​​ನಲ್ಲಿ ಶ್ರೀರಂಗಪಟ್ಟಣ ಟಿಪ್ಪು ದರಿಯಾ ದೌಲತ್, ಶ್ರೀರಂಗನಾಥ ಸ್ವಾಮಿ ದೇವಸ್ಥಾನ, ಸೇಂಟ್ ಫಿಲೋಮಿಯಾ ಚರ್ಚ್, ಅರಮನೆ ಚಾಮುಂಡಿ ಬೆಟ್ಟ, ಮೃಗಾಲಯ, ಬೃಂದಾವನ ಗಾರ್ಡನ್, ನಂಜನಗೂಡು ಮತ್ತು ಊಟಿಗೆ ಭೇಟಿ ನೀಡಬಹುದು.

ಮೈಸೂರು ಒಂದು ವಿಶೇಷ ಪ್ರವಾಸಿ ತಾಣಗಳನ್ನು ಹೊಂದಿದೆ. ಇಲ್ಲಿ ಆಕರ್ಷಕ ತಾಣ ಇದೆ. ಕಳೆದ ಕೆಲವು ವರ್ಷಗಳಿಂದ ಮೈಸೂರು ನಗರದ ವೈಭವವನ್ನು ನೋಡಲು ಪ್ರಪಂಚದಾದ್ಯಂತದ ಪ್ರವಾಸಿಗರು ಇಲ್ಲಿಗೆ ಬರುತ್ತಿದ್ದಾರೆ. ಇತಿಹಾಸಪೂರ್ವ ತಾಣಗಳು, ಸ್ಮಾರಕಗಳು, ವಸ್ತು ಸಂಗ್ರಹಾಲಯಗಳು, ಕೋಟೆಗಳು, ದೇವಾಲಯಗಳು, ಮಸೀದಿಗಳು, ಚರ್ಚುಗಳು ಮತ್ತು ಮೃಗಾಲಯಗಳು ಇಲ್ಲಿನ ಪ್ರಮುಖ ಆರ್ಕಷಕ ಸ್ಥಳಗಳಾಗಿವೆ. ಊಟಿಯು ಕೂಡ ಒಳ್ಳೆಯ ಪ್ರವಾಸಿ ತಾಣಗಳನ್ನು ಹೊಂದಿದೆ. ಅದರಲ್ಲೂ ಈ ಸಮಯದಲ್ಲಿ ಅಂದರೆ ಚಳಿ ವಾತಾವರಣದಲ್ಲಿ ಭೇಟಿ ನೀಡಿದ್ರೆ, ಒಳ್ಳೆಯ ಅನುಭವನ್ನು ನೀಡುತ್ತದೆ.

ಶ್ರೀರಂಗಪಟ್ಟಣ ಟಿಪ್ಪು ದರಿಯಾ ದೌಲತ್ : ಶ್ರೀರಂಗಪಟ್ಟಣವು ಮೈಸೂರಿನಿಂದ ಸುಮಾರು 14 ಕಿ.ಮೀ ದೂರದಲ್ಲಿರುವ ಕಾವೇರಿ ನದಿಯಲ್ಲಿರುವ ಒಂದು ದ್ವೀಪ . ಶ್ರೀರಂಗಪಟ್ಟಣದಲ್ಲಿ ದರಿಯಾ ದೌಲತ್ ಅರಮನೆ ಇದೆ. ದರಿಯಾ ದೌಲತ್ ಬಾಗ್ ಎಂಬ ಸುಂದರವಾದ ಉದ್ಯಾನಗಳ ನಡುವೆ ಇದೆ. ಇನ್ನು ಹಲವಾರು ಪ್ರದೇಶಗಳು ಇಲ್ಲಿದೆ.

ಶ್ರೀ ರಂಗನಾಥ ಸ್ವಾಮಿ ದೇವಸ್ಥಾನ: ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ರಂಗನಾಥಸ್ವಾಮಿ ದೇವಸ್ಥಾನ ಒಂದು ಅದ್ಭುತ ಕ್ಷೇತ್ರವಾಗಿದೆ. ಕಾವೇರಿ ನದಿಯ ಉದ್ದಕ್ಕೂ ಸ್ಮಾರ್ತ -ಬಾಬೂರ್ಕಮ್ಮೆ ಮತ್ತು ಶ್ರೀ ವೈಷ್ಣವರ ಐದು ಪ್ರಮುಖ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ. ಈ ಐದು ಪವಿತ್ರ ಸ್ಥಳಗಳನ್ನು ಒಟ್ಟಾಗಿ ದಕ್ಷಿಣ ಭಾರತದಲ್ಲಿ ಪಂಚರಂಗ ಕ್ಷೇತ್ರಗಳು ಎಂದು ಕರೆಯಲಾಗುತ್ತದೆ.

ಸಂತ ಫಿಲೋಮಿನ ಚರ್ಚ್: ಈ ಚರ್ಚ್​​ಗೆ ಎರಡು ಶತಮಾನಗಳ ಇತಿಹಾಸವಿದೆ. ಮೈಸೂರು ನಗರದ ಹೃದಯ ಭಾಗದಲ್ಲಿರುವ ಈ ಚರ್ಚ್, ನಗರದ ಹೊರಗಿನ ಯಾವ ದಿಕ್ಕಿನಿಂದ ನೋಡಿದರೂ ಎದ್ದು ಕಾಣುತ್ತದೆ. ಇಂಡಿಯಾದಲ್ಲಿಯೇ ಅತ್ಯಂತ ಎತ್ತರದ ಗೋಪುರಗಳನ್ನು ಹೊಂದಿದೆ.

ಊಟಿ (Ooty): ಇದನ್ನು ಉದಗಮಂಡಲಂ ಎಂದು ಕರೆಯುತ್ತಾರೆ, ತಮಿಳುನಾಡಿನ ನೀಲಗಿರಿ ಬೆಟ್ಟಗಳಲ್ಲಿದೆ, ಇದು ತನ್ನ ಸುಂದರ ಚಹಾ ತೋಟಗಳು, ತಂಪಾದ ಹವಾಮಾನ, ಸರೋವರಗಳು (ಊಟಿ ಸರೋವರ), ಮತ್ತು ನೈಸರ್ಗಿಕ ಸೌಂದರ್ಯಕ್ಕೆ ಹೆಸರುವಾಸಿಯಾದ ಒಂದು ಪ್ರಸಿದ್ಧ ಗಿರಿಧಾಮವಾಗಿದೆ, ಇದನ್ನು ‘ಭಾರತದ ಸ್ವಿಟ್ಜರ್ಲ್ಯಾಂಡ್’ ಎಂದೂ ಕರೆಯಲಾಗುತ್ತದೆ, ಮತ್ತು ಇದು ಪ್ರವಾಸಿಗರಿಗೆ ಅತ್ಯುತ್ತಮ ಸ್ಥಳವಾಗಿದೆ. ಇಲ್ಲಿ ನೀಲಗಿರಿ ಪರ್ವತ ರೈಲು (ಟಾಯ್ ಟ್ರೈನ್), ದೊಡ್ಡಬೆಟ್ಟ ಶಿಖರ, ಪೈಕಾರ ಜಲಪಾತ, ಮತ್ತು ಸರ್ಕಾರಿ ಗುಲಾಬಿ ಉದ್ಯಾನವನ ಮುಂತಾದ ಅನೇಕ ಪ್ರವಾಸಿ ಆಕರ್ಷಣೆಗಳಿವೆ.

ಸಾರಿಗೆ : ಡಿಲಕ್ಸ್ ಕೋಚ್ ಮೂಲಕ

ಹೋಟೆಲ್ : ಹೋಟೆಲ್ ಮಯೂರ ಕಾವೇರಿ ಕೆ.ಆರ್.ಎಸ್

ಊಟಿಯಲ್ಲಿರುವ ಹೋಟೆಲ್ ಮಯೂರ ಸುದರ್ಶನ್ ಅಥವಾ ಇದೇ ರೀತಿಯ ಹೋಟೆಲ್

ವ್ಯಾಪ್ತಿಯ ಸ್ಥಳಗಳು : ಶ್ರೀರಂಗಪಟ್ಟಣ ಟಿಪ್ಪು ದರಿಯಾ ದೌಲತ್, ಶ್ರೀರಂಗನಾಥ ಸ್ವಾಮಿ ದೇವಸ್ಥಾನ, ಸೇಂಟ್ ಫಿಲೋಮಿಯಾ ಚರ್ಚ್, ಅರಮನೆ ಚಾಮುಂಡಿ ಬೆಟ್ಟ, ಮೃಗಾಲಯ, ಬೃಂದಾವನ ಗಾರ್ಡನ್, ನಂಜನಗೂಡು ಮತ್ತು ಊಟಿ

ಇದನ್ನೂ ಓದಿ: ಬೆಂಗಳೂರಿನಿಂದ ಮಂತ್ರಾಲಯಕ್ಕೆ ಹೋಗುವವರಿಗೆ ಗುಡ್​​​ ನ್ಯೂಸ್​: KSTDC ವಿಶೇಷ ಪ್ಯಾಕೇಜ್

ಈ ಮೂರು ದಿನಗಳ ಪ್ರವಾಸ ಮಾಡುವವರು

ಮೊದಲ ದಿನ:

ಬೆಳಿಗ್ಗೆ 06.30 ಯಶವಂತಪುರದ ಬಿಎಂಟಿಸಿ ಬಸ್ ನಿಲ್ದಾಣದ ಕೆಎಸ್‌ಟಿಡಿಸಿ ಬುಕಿಂಗ್ ಕೌಂಟರ್‌ನಿಂದ ನಿರ್ಗಮನ.

ಬೆಳಿಗ್ಗೆ 08.30 – ಬೆಳಿಗ್ಗೆ 09.00 ದಾರಿಯಲ್ಲಿ ಉಪಾಹಾರ

ಬೆಳಿಗ್ಗೆ 10.00 – ಬೆಳಿಗ್ಗೆ 11.30 ಶ್ರೀರಂಗಪಟ್ಟಣ: ಕೋಟೆ, ಶ್ರೀ ರಂಗನಾಥಸ್ವಾಮಿ ದೇವಸ್ಥಾನ ಮತ್ತು ಬೇಸಿಗೆ ಅರಮನೆಗೆ ಭೇಟಿ.

ಬೆಳಿಗ್ಗೆ 12.00 – ಮಧ್ಯಾಹ್ನ 12.20 ಮೈಸೂರಿನ ಸಂತ ಫಿಲೋಮಿನಾ ಚರ್ಚ್‌ಗೆ ಭೇಟಿ ನೀಡಿ

ಮಧ್ಯಾಹ್ನ 01.00 – 01.30 ಚಾಮುಂಡಿ ಬೆಟ್ಟ ಮತ್ತು ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ

ಮಧ್ಯಾಹ್ನ 02.15 – 03.00 ಮೈಸೂರಿನ ಮಯೂರ ಹೊಯ್ಸಳ ಹೋಟೆಲ್‌ನಲ್ಲಿ ಊಟ

ಮಧ್ಯಾಹ್ನ 03.15 – 04.15 ಮೈಸೂರು ಅರಮನೆಗೆ ಭೇಟಿ

ಸಂಜೆ 05.15 – ರಾತ್ರಿ 08.00 ಹೋಟೆಲ್ ಮಯೂರ ಕಾವೇರಿ ಕೆಆರ್‌ಎಸ್‌ನಲ್ಲಿರುವ ಬೃಂದಾವನ ಗಾರ್ಡನ್ ಮತ್ತು ಹಾಲ್ಟ್‌ಗೆ ಭೇಟಿ ನೀಡಿ

ಎರಡನೇ ದಿನ;

ಬೆಳಿಗ್ಗೆ 06.00 ಹೋಟೆಲ್ ಮಯೂರ ಕಾವೇರಿಯಿಂದ ನಿರ್ಗಮನ

ಬೆಳಿಗ್ಗೆ 07.00 – ಬೆಳಿಗ್ಗೆ 07.30 ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ

ಬೆಳಿಗ್ಗೆ 08.30 ಗುಂಡ್ಲುಪೇಟೆಯಲ್ಲಿ ಉಪಾಹಾರ

ಬೆಳಿಗ್ಗೆ 09.00 – ಮಧ್ಯಾಹ್ನ 12.30 ಬಂಡೀಪುರ ಮತ್ತು ಮುದುಮಲೈ ಅರಣ್ಯದ ಮೂಲಕ ಊಟಿ ಸರೋವರಕ್ಕೆ

ಮಧ್ಯಾಹ್ನ 12.30 – 01.50 ಊಟಿ ಸರೋವರಕ್ಕೆ ಭೇಟಿ

ಮಧ್ಯಾಹ್ನ 01.50 – 02.30 ಊಟಿಯ ಹೋಟೆಲ್‌ನಲ್ಲಿ ಊಟ

ಮಧ್ಯಾಹ್ನ 03.15 – 04.00 ದೊಡ್ಡಬೆಟ್ಟ ಶಿಖರ ವೀಕ್ಷಣಾ ಕೇಂದ್ರಕ್ಕೆ ಭೇಟಿ

ಸಂಜೆ 04.30 – 06.30 ಬೊಟಾನಿಕಲ್ ಗಾರ್ಡನ್‌ಗೆ ಭೇಟಿ

ಸಂಜೆ 07.00 ಊಟಿಯಲ್ಲಿರುವ ಹೋಟೆಲ್‌ನಲ್ಲಿ ವಸತಿ

ಮೂರನೇ ದಿನ:

ಬೆಳಿಗ್ಗೆ 08.00 ಹೋಟೆಲ್‌ನಿಂದ ನಿರ್ಗಮನ (ಉಪಾಹಾರದ ನಂತರ)

ಬೆಳಿಗ್ಗೆ 08.40 – ಬೆಳಿಗ್ಗೆ 10.00 ಫಿಲ್ಮ್ ಶೂಟಿಂಗ್ ಪಾಯಿಂಟ್, ಪೈನ್ ಟ್ರೀ ಫಾರೆಸ್ಟ್ ಮತ್ತು 7 ನೇ ಮೈಲಿ ಬೆಟ್ಟದ ನೋಟ

ಮಧ್ಯಾಹ್ನ 01.30 – 02.15 ಗುಂಡ್ಲುಪೇಟೆ, ಮಧ್ಯಾಹ್ನ ಊಟ

ಮಧ್ಯಾಹ್ನ 03.30 – 05.00 ಮೃಗಾಲಯಗಳು, ಮೈಸೂರು

ಸಂಜೆ 06.30 ದಾರಿಯಲ್ಲಿ ಟೀ ವಿರಾಮ

ರಾತ್ರಿ 09.00 ಬೆಂಗಳೂರಿಗೆ

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Ugram Manju Wedding: ಸಂಧ್ಯಾ ಜೊತೆ ಮದುವೆ ಆದ ಮಂಜು; ಇಲ್ಲಿದೆ ಸುಂದರ ಆಲ್ಬಂ

Source link

ಗೆಳೆಯನ ಕೊಂದ ಯುವತಿಗೂ, ಐವರ ಕೊಂದ ಕೊಲೆಗಾರನ ನಡುವೆ ಜೈಲಿನಲ್ಲಿ ಮೊಳಕೆಯೊಡೆದ ಪ್ರೇಮ – Kannada News | Alwar Jail Love Story: Convicted Murderers Priya Seth and Hanuman Prasad Marry on Parole

ಅಲ್ವಾರ್, ಜನವರಿ 23: ಈ ಪ್ರೀತಿ(Love) ಎಂಬುದೇ ವಿಚಿತ್ರ, ಎಲ್ಲಿ ಯಾವಾಗ, ಯಾರ ಮೇಲೆ  ಹುಟ್ಟುತ್ತೆ ಎಂದು ಅರ್ಥ ಮಾಡಿಕೊಳ್ಳುವುದು ಕಷ್ಟ. ಕೆಲವೊಮ್ಮೆ ಗುಣ ನೋಡಿ ಹುಟ್ಟಿದ್ರೆ, ಕೆಲವೊಮ್ಮೆ ಬಣ್ಣ ನೋಡಿ ಹುಟ್ಟುತ್ತೆ. ಕೆಲವೊಮ್ಮೆ ಒಂದೇ ಮನಸ್ಥಿತಿಯವರು ಪ್ರೀತಿಯಲ್ಲಿ ಬಿದ್ದರೆ ಇನ್ನೂ ಕೆಲವೊಮ್ಮೆ ಬೇರೆ ಬೇರೆ ರೀತಿ ಗುಣದವರು ಕೂಡ ಒಂದಾಗುತ್ತಾರೆ. ಆದರೆ ಈ ಪ್ರೇಮ ಕಥೆ ತುಂಬಾ ವಿಚಿತ್ರ.

ಡೇಟಿಂಗ್ ಆ್ಯಪ್​ನಲ್ಲಿ ಭೇಟಿಯಾಗಿದ್ದ ಗೆಳೆಯನನ್ನು ಕೊಂದು ಜೈಲಿಗೆ ಸೇರಿದ್ದ ಯುವತಿ ಹಾಗು ಐದು ಕೊಲೆ ಮಾಡಿ ಅದೇ ಜೈಲಿಗೆ ಸೇರಿದ್ದ ವ್ಯಕ್ತಿ ನಡುವೆ ಪ್ರೇಮಾಂಕುರವಾಗಿದೆ. ಈ ಘಟನೆ ಅಲ್ವಾರ್​ನಲ್ಲಿ ನಡೆದಿದೆ.

ಅಲ್ವಾರ್‌ನ ಬರೋಡಮೇವ್‌ನಲ್ಲಿ ಇಂದು ಈ ಇಬ್ಬರ ವಿವಾಹ ಜರುಗಿದೆ. ಪ್ರಿಯಾ ಸೇಠ್ ಅಲಿಯಾಸ್ ನೇಹಾ ಸೇಠ್ ಮತ್ತು ಹನುಮಾನ್ ಪ್ರಸಾದ್ ಮದುವೆಗಾಗಿ ರಾಜಸ್ಥಾನ ಹೈಕೋರ್ಟ್‌ನಿಂದ 15 ದಿನಗಳ ತುರ್ತು ಪೆರೋಲ್‌ಗಳನ್ನು ಪಡೆದಿದ್ದಾರೆ.

ಡೇಟಿಂಗ್ ಆ್ಯಪ್‌ನಲ್ಲಿ ಭೇಟಿಯಾದ ದುಷ್ಯಂತ್ ಶರ್ಮಾ ಎಂಬ ಯುವಕನ ಕೊಲೆ ಪ್ರಕರಣದಲ್ಲಿ ರೂಪದರ್ಶಿ ಪ್ರಿಯಾ ಸೇಠ್‌ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಅವರು ಸಂಗನೇರ್ ಓಪನ್ ಜೈಲಿನಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಆರು ತಿಂಗಳ ಹಿಂದೆ ಅದೇ ಜೈಲಿನಲ್ಲಿ ಪ್ರಸಾದ್ ಅವರನ್ನು ಭೇಟಿಯಾಗಿ ಪ್ರೀತಿಯಲ್ಲಿ ಬಿದ್ದಿದ್ದರು.

ಮತ್ತಷ್ಟು ಓದಿ: ರಾಮನಗರ: ಪ್ರೀತಿ ಹೆಸರಲ್ಲಿ ದೈಹಿಕ ಸಂಪರ್ಕ ಸಾಧಿಸಿ ವಂಚನೆ, ಪೊಲೀಸ್ ಠಾಣೆ ಬಳಿಯೇ ಆತ್ಮಹತ್ಯೆಗೆ ಯತ್ನಿಸಿದ ಯುವತಿ

ಆಕೆಗೆ ಶಿಕ್ಷೆ ವಿಧಿಸಲಾದ ಕೊಲೆ ಪ್ರಕರಣವು 2018 ರ ಹಿಂದಿನದು. ಮೇ 2, 2018 ರಂದು, ಪ್ರಿಯಾ ತನ್ನ ಪ್ರೇಮಿ ಮತ್ತು ಇನ್ನೊಬ್ಬ ವ್ಯಕ್ತಿಯ ಸಹಾಯದಿಂದ ದುಷ್ಯಂತ್​ನನ್ನು ಕೊಂದಿದ್ದಳು. ಸೇಠ್ ಟಿಂಡರ್ ಮೂಲಕ ದುಷ್ಯಂತ್ ಜೊತೆ ಸ್ನೇಹ ಬೆಳೆಸಿಕೊಂಡು ಬಜಾಜ್ ನಗರದಲ್ಲಿರುವ ಫ್ಲಾಟ್‌ಗೆ ಕರೆದಳು. ನಂತರ ಅವಳು ಅವನ ತಂದೆ ಬಳಿ 10 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಳು.

ಅವರು 3 ಲಕ್ಷ ರೂಪಾಯಿಗಳನ್ನು ವ್ಯವಸ್ಥೆ ಮಾಡಿ ವರ್ಗಾಯಿಸುವಲ್ಲಿ ಯಶಸ್ವಿಯಾದರು.ಬಿಡುಗಡೆ ಮಾಡಿದರೆ, ಪೊಲೀಸರನ್ನು ತಮ್ಮ ಬಳಿಗೆ ಕರೆದೊಯ್ಯಬಹುದು ಎಂದು ಭಾವಿಸಿ ಹತ್ಯೆ ಮಾಡಿದ್ದರು.
ದುಷ್ಯಂತ್ ಶರ್ಮಾ ಕೊಲೆ ಪ್ರಕರಣದಲ್ಲಿ ಪ್ರಿಯಾ ಸೇಠ್ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾಳೆ. ಈ ಪ್ರಕರಣ ಹನಿಟ್ರ್ಯಾಪ್, ದರೋಡೆ ಮತ್ತು ಕೊಲೆಗೆ ಸಂಬಂಧಿಸಿದೆ. ತನ್ನ ಮಾಜಿ ಪ್ರಿಯಕರ ದಿಕ್ಷಾಂತ್ ಕಮ್ರಾನ ಸಾಲವನ್ನು ತೀರಿಸಲು ಪ್ರಿಯಾ ಜೋತ್ವಾರಾದ ನಿವಾಸಿ ದುಷ್ಯಂತ್ ಶರ್ಮಾನನ್ನು ಪ್ರೇಮ ಬಲೆಗೆ ಬೀಳಿಸಿದಳು.

ತನ್ನ ಫ್ಲಾಟ್‌ನಲ್ಲಿ ತನ್ನನ್ನು ಭೇಟಿಯಾಗಲು ದುಷ್ಯಂತ್‌ಗೆ ಕರೆ ಮಾಡಿದಳು, ಅಲ್ಲಿ ಅವಳ ಗೆಳೆಯ ದಿಕ್ಷಾಂತ್ ಮತ್ತು ಇನ್ನೊಬ್ಬ ಸ್ನೇಹಿತ ಈಗಾಗಲೇ ಇದ್ದರು. ಮೂವರು ಒಟ್ಟಾಗಿ ದುಷ್ಯಂತ್‌ನನ್ನು ಅಪಹರಿಸಿ 10 ಲಕ್ಷ ರೂ. ದೋಚಲು ಯೋಜಿಸಿದ್ದರು, ಆದರೆ ಯೋಜನೆ ವಿಫಲವಾಯಿತು. ಈ ಸಮಯದಲ್ಲಿ, ಅವರು ದುಷ್ಯಂತ್‌ಗೆ 3 ಲಕ್ಷ ರೂ.ಗಳನ್ನು ವರ್ಗಾಯಿಸುವಂತೆ ಮಾಡಿದರು. ಸಿಕ್ಕಿಬೀಳುವ ಭಯದಿಂದ, ಮೂವರು ಒಟ್ಟಾಗಿ ದುಷ್ಯಂತ್‌ನನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದರು.

ದುಷ್ಯಂತ್ ಹತ್ಯೆಗೆ ಸಂಬಂಧಿಸಿದಂತೆ ಪ್ರಿಯಾಳನ್ನು ಪೊಲೀಸರು ಬಂಧಿಸಿದ್ದರು. ಮೇ 3, 2018 ರಿಂದ ಪ್ರಿಯಾ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಈಗ, ಪ್ರಿಯಾ ತನ್ನ ಮಾಜಿ ಗೆಳೆಯ ದೀಕ್ಷಾಂತ್ ನನ್ನು ಅಲ್ಲ, ಬದಲಾಗಿ ತನ್ನ ಹೊಸ ಗೆಳೆಯ ಹನುಮಾನ್ ಪ್ರಸಾದ್ ನನ್ನು ಮದುವೆಯಾಗಲಿದ್ದಾರೆ.

ಹನುಮಾನ್ ಪ್ರಸಾದ್ ಯಾರು?
ಹನುಮಾನ್ ಪ್ರಸಾದ್ ಕೂಡ ಕೊಲೆ ಆರೋಪದಲ್ಲಿ ಶಿಕ್ಷೆಗೊಳಗಾಗಿದ್ದು, ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ. ಐದು ಕೊಲೆಗಳಲ್ಲಿ ಭಾಗಿಯಾಗಿರುವ ಆರೋಪ ಅವರ ಮೇಲಿದೆ ಎಂದು ವರದಿಯಾಗಿದೆ. ಮುಕ್ತ ಜೈಲಿನಲ್ಲಿದ್ದಾಗ, ಅವರು ಮತ್ತು ಪ್ರಿಯಾ ಹತ್ತಿರವಾದರು ಮತ್ತು ಮದುವೆಯಾಗಲು ನಿರ್ಧರಿಸಿದರು. ಪ್ರಿಯಾ ಸೇಠ್ ಜೈಪುರದ ಅತ್ಯಂತ ಪ್ರಮುಖ ಮಹಿಳಾ ಗ್ಯಾಂಗ್​ಸ್ಟರ್ ಆಗಬೇಕೆಂಬ ಕನಸು ಕಂಡಿದ್ದಳು.ಅಧ್ಯಯನ ಮಾಡಲು ಜೈಪುರಕ್ಕೆ ಬಂದಳು, ಆದರೆ ಶೀಘ್ರದಲ್ಲೇ ಅಪರಾಧ ಜಗತ್ತಿಗೆ ಪ್ರವೇಶಿಸಿದ್ದಳು.

ಮೊದಲು ತನ್ನ ಸಂಬಂಧಿಕರ ಮನೆಯನ್ನು ತೊರೆದು ನಂತರ ಪೇಯಿಂಗ್ ಗೆಸ್ಟ್ ಆಗಿ ವಾಸಿಸಲು ಪ್ರಾರಂಭಿಸಿದ್ದಳು. ವೇಶ್ಯಾವಾಟಿಕೆ, ವಂಚನೆ ಮತ್ತು ಎಟಿಎಂ ದರೋಡೆಗಳಲ್ಲಿ ತೊಡಗಿದಳು. ಹನಿಟ್ರ್ಯಾಪ್ ಮಾರ್ಗವನ್ನು ಆರಿಸಿಕೊಂಡಳು, ಶ್ರೀಮಂತ ಯುವಕರನ್ನು ತನ್ನ ಬಲೆಗೆ ಬೀಳಿಸಿ ದರೋಡೆ ಮಾಡುತ್ತಿದ್ದಳು. ಪ್ರಸಾದ್ ತನ್ನ ಗೆಳತಿಯ ಪತಿ ಮತ್ತು ಮಕ್ಕಳನ್ನು ಕೊಲೆ ಮಾಡಿದ್ದಕ್ಕಾಗಿ ಶಿಕ್ಷೆಯನ್ನು ಅನುಭವಿಸುತ್ತಿದ್ದಾನೆ, ಆ ಗೆಳತಿ ಆತನಿಗಿಂತ 10 ವರ್ಷ ದೊಡ್ಡವಳಾಗಿದ್ದಳು. ಅಕ್ಟೋಬರ್ 2, 2017 ರ ರಾತ್ರಿ, ಅವಳು ತನ್ನ ಪತಿ ಮತ್ತು ಮಕ್ಕಳನ್ನು ಕೊಲ್ಲಲು ಅವನನ್ನು ತನ್ನ ಮನೆಗೆ ಕರೆದಿದ್ದಳು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಗಣರಾಜ್ಯೋತ್ಸವದ ಹಿನ್ನೆಲೆ ಸಂವಿಧಾನ ಕುರಿತ ಪುಸ್ತಕಗಳಿಗೆ ಭಾರೀ ಬೇಡಿಕೆ! – Kannada News | Bengaluru Sees Surge in Constitution Book Sales: Republic Day Fuels Demand

ಗಣರಾಜ್ಯೋತ್ಸವದ ಹಿನ್ನೆಲೆ ಸಂವಿಧಾನ ಕುರಿತ ಪುಸ್ತಕಗಳಿಗೆ ಭಾರೀ ಬೇಡಿಕೆ!

ಬೆಂಗಳೂರು, ಜನವರಿ: ಗಣರಾಜ್ಯೋತ್ಸವದ (Republic Day) ಹಿನ್ನೆಲೆಯಲ್ಲಿ ನಗರದಲ್ಲಿ ಈ ತಿಂಗಳು ಭಾರತೀಯ ಸಂವಿಧಾನ, ನಾಗರಿಕರ ಹಕ್ಕುಗಳು ಹಾಗೂ ಫೆಡರಲಿಸಂ ವಿಷಯಗಳ ಕುರಿತ ಪುಸ್ತಕಗಳಿಗೆ ವಿಶೇಷ ಬೇಡಿಕೆ ಕಂಡುಬಂದಿದೆ. ಕೆಲವು ಓದುಗರು ಅಧ್ಯಯನಕ್ಕಾಗಿ ಈ ಪುಸ್ತಕಗಳನ್ನು ಖರೀದಿಸುತ್ತಿದ್ದರೆ, ಇನ್ನೂ ಕೆಲವರು ಕಾರ್ಯಕ್ರಮಗಳಿಗೆ ಬಹುಮಾನ ಹಾಗೂ ಉಡುಗೊರೆಯಾಗಿ ನೀಡಲು ಸಂವಿಧಾನ ಸಂಬಂಧಿತ ಪುಸ್ತಕಗಳನ್ನು ಆಯ್ಕೆ ಮಾಡುತ್ತಿದ್ದಾರೆ.

ಹೆಚ್ಚುತ್ತಿರುವ ‘ಸಂವಿಧಾನ ಓದು ಪುಸ್ತಕ’ದ ಡಿಮ್ಯಾಂಡ್

ಸಂವಿಧಾನ ಕುರಿತ ಕನ್ನಡ ಪುಸ್ತಕಗಳ ಮಾರಾಟದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಬರೆದಿರುವ ಸಂವಿಧಾನ ಓದು ಪುಸ್ತಕ ಜನವರಿಯಲ್ಲಿ ಶೇ15ಕ್ಕಿಂತ ಹೆಚ್ಚು ಮಾರಾಟ ಹೆಚ್ಚಾಗಿದೆ. ಶಾಂತರಾಜ್ ಡಿ.ಎಂ. ಅವರ ಭಾರತ ಸಂವಿಧಾನಕ್ಕೂ ಉತ್ತಮ ಬೇಡಿಕೆ ಇದೆ ಎಂದು ಸಪ್ನಾ ಬುಕ್ ಹೌಸ್‌ನ ಕನ್ನಡ ಪುಸ್ತಕ ಮತ್ತು ಪ್ರಕಾಶನ ವಿಭಾಗದ ಪ್ರಧಾನ ವ್ಯವಸ್ಥಾಪಕ ಆರ್. ದೊಡಗೇಗೌಡ ಹೇಳಿದ್ದಾರೆ.ಈ ಬಾರಿ ನಿಯಮಿತ ಓದುಗರ ಜೊತೆಗೆ ಕಾಲೇಜು ವಿದ್ಯಾರ್ಥಿಗಳು ಹಾಗೂ ಯುವ ಉದ್ಯೋಗಸ್ಥರೂ ಈ ಪುಸ್ತಕಗಳನ್ನು ಖರೀದಿಸುತ್ತಿರುವುದು ಗಮನಾರ್ಹವಾಗಿದೆ.

ಬಸವನಗುಡಿಯ ಡಿ.ವಿ.ಜಿ. ರಸ್ತೆಯ ಆಕೃತಿ ಪುಸ್ತಕ ಅಂಗಡಿಯ ಮಾಲೀಕ ಗುರುಪ್ರಸಾದ್ ಡಿ.ಎನ್, ಇತ್ತೀಚೆಗೆ ಓದುಗರು ಹಕ್ಕುಗಳು ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ವಿವರಿಸುವ ಪುಸ್ತಕಗಳತ್ತ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಕಳೆದ ವಾರದಲ್ಲಿ ಈ ವಿಭಾಗದ ಪುಸ್ತಕಗಳಿಗೆ ಶೇ 25–30ರಷ್ಟು ಬೇಡಿಕೆ ಹೆಚ್ಚಾಗಿದೆ ಎಂದಿದ್ದಾರೆ. ಜೊತೆಗೆ ಸಣ್ಣ ಗಾತ್ರದ ಭಾರತ ಸಂವಿಧಾನ ಪ್ರತಿಗಳೂ ಉತ್ತಮವಾಗಿ ಮಾರಾಟವಾಗುತ್ತಿವೆ ಎಂದು ತಿಳಿಸಿರುವುದಾಗಿ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.

ಹರಿವು ಬುಕ್ಸ್ ಹಾಗೂ ಚರ್ಚ್ ಸ್ಟ್ರೀಟ್‌ನ ಬುಕ್‌ವರ್ಮ್ ಸೇರಿದಂತೆ ಹಲವು ಪುಸ್ತಕ ಅಂಗಡಿಗಳಲ್ಲಿಯೂ ಸಂವಿಧಾನ ಸಂಬಂಧಿತ ಕೃತಿಗಳ ಮಾರಾಟ ಚುರುಕಾಗಿದ್ದು, ಪ್ರಜಾಪ್ರಭುತ್ವ ಮೌಲ್ಯಗಳ ಕುರಿತು ಹೆಚ್ಚುತ್ತಿರುವ ಆಸಕ್ತಿಯೇ ಇದಕ್ಕೆ ಕಾರಣ ಎಂದು ಪುಸ್ತಕ ವ್ಯಾಪಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version