ದಾಖಲೆ ಬರೆದ ರಾಜ್ಯದ ವಿದ್ಯುತ್ ಬೇಡಿಕೆ: ಬೆಂಗಳೂರಿನ ಎಸಿ ಅಬ್ಬರಕ್ಕೆ ಬೆವರುತ್ತಿದೆ ಪವರ್ ಗ್ರಿಡ್!

ದಾಖಲೆ ಬರೆದ ರಾಜ್ಯದ ವಿದ್ಯುತ್ ಬೇಡಿಕೆ: ಬೆಂಗಳೂರಿನ ಎಸಿ ಅಬ್ಬರಕ್ಕೆ ಬೆವರುತ್ತಿದೆ ಪವರ್ ಗ್ರಿಡ್!

ಬೆಂಗಳೂರು, ಮಾ.30: ಕರ್ನಾಟಕ ರಾಜ್ಯವು ಈ ತಿಂಗಳು ತನ್ನ ಇತಿಹಾಸದಲ್ಲೇ ಅತಿ ಹೆಚ್ಚಿನ ವಿದ್ಯುತ್ ಬೇಡಿಕೆಯನ್ನು ಎದುರಿಸುತ್ತಿದೆ. ಬಿಸಿಲಿನ ತಾಪ ಮತ್ತು ಹೆಚ್ಚುತ್ತಿರುವ ಎಸಿ (AC) ಬಳಕೆ ಹೈಟೆಕ್ ಸಿಟಿ ಬೆಂಗಳೂರನ್ನು ಅಕ್ಷರಶಃ ವಿದ್ಯುತ್ ಗುಳುಂ ಮಾಡುವ ದೈತ್ಯನನ್ನಾಗಿ ಮಾಡಿದೆ. ಈ ತಿಂಗಳು ರಾಜ್ಯದ ಒಟ್ಟು ವಿದ್ಯುತ್ ಬಳಕೆ 373.6 ಮಿಲಿಯನ್ ಯೂನಿಟ್ ತಲುಪುವ ನಿರೀಕ್ಷೆಯಿದೆ, ಇದು ಇದುವರೆಗಿನ ಸಾರ್ವಕಾಲಿಕ ದಾಖಲೆಯಾಗಿದೆ.

ಒಂದು ಸಣ್ಣ ರಾಜ್ಯ ಬಳಸುವಷ್ಟು ವಿದ್ಯುತ್ ಅನ್ನು ಕೇವಲ ಬೆಂಗಳೂರು ನಗರವೊಂದೇ ಬಳಸುತ್ತಿದೆ. ನಗರದ ಐಟಿ ಆಫೀಸ್‌ಗಳು, ಮಾಲ್‌ಗಳು ಮತ್ತು ಅಪಾರ್ಟ್‌ಮೆಂಟ್‌ಗಳಲ್ಲಿ ದಿನವಿಡೀ ಎಸಿಗಳು ಓಡುತ್ತಿರುವುದರಿಂದ ಬೆಂಗಳೂರಿನ ಪೀಕ್ ಡಿಮ್ಯಾಂಡ್ 2,000 ರಿಂದ 2,500 ಮೆಗಾವ್ಯಾಟ್ (MW) ತಲುಪಿದೆ. ಒಂದು ಮೆಗಾವ್ಯಾಟ್‌ನಿಂದ ಸುಮಾರು 800 ರಿಂದ 1,000 ಮನೆಗಳಿಗೆ ವಿದ್ಯುತ್ ನೀಡಬಹುದು ಎನ್ನುವುದನ್ನು ಗಮನಿಸಿದರೆ ನಗರದ ಬೇಡಿಕೆ ಎಷ್ಟು ಬೃಹತ್ ಎಂಬುದು ತಿಳಿಯುತ್ತದೆ.

ಮಾರ್ಚ್ ತಿಂಗಳಲ್ಲಿ ಎರಡು ಪ್ರಮುಖ ಕಾರಣಗಳಿಂದಾಗಿ ವಿದ್ಯುತ್ ಜಾಲದ (Grid) ಮೇಲೆ ಒತ್ತಡ ಹೆಚ್ಚಿದೆ. ಬೇಸಿಗೆಯ ಶಾಖದಿಂದಾಗಿ ನಗರವಾಸಿಗಳು ಎಸಿಗಳ ಮೇಲೆ ಅವಲಂಬಿತರಾಗಿದ್ದಾರೆ.ಗ್ರಾಮೀಣ ಕರ್ನಾಟಕದಲ್ಲಿ ರೈತರು ಬೇಸಿಗೆ ಬೆಳೆಗಾಗಿ ನೀರಾವರಿ ಪಂಪ್‌ಸೆಟ್‌ಗಳನ್ನು ನಿರಂತರವಾಗಿ ಬಳಸುತ್ತಿದ್ದಾರೆ.ಅಡುಗೆ ಅನಿಲದ ಕೊರತೆಯೂ ವಿದ್ಯುತ್ ಬೇಡಿಕೆ ಹೆಚ್ಚಲು ಕಾರಣವಾಗಬಹುದು. ಹೋಟೆಲ್‌ಗಳು ಮತ್ತು ಮನೆಗಳು ಗ್ಯಾಸ್ ಬದಲು ಇಂಡಕ್ಷನ್ ಸ್ಟೌವ್ ಅಥವಾ ಹೀಟರ್‌ಗಳಿಗೆ ಬದಲಾದರೆ, ಗ್ರಿಡ್ ಮೇಲೆ ಮತ್ತೆ 400 ರಿಂದ 500 ಮೆಗಾವ್ಯಾಟ್ ಹೆಚ್ಚುವರಿ ಹೊರೆ ಬೀಳುವ ಆತಂಕವಿದೆ.

ಇದನ್ನೂ ಓದಿ: ಹೋಟೆಲ್ ಬಿಲ್‌ನಲ್ಲಿ ಗ್ಯಾಸ್ ಶುಲ್ಕ, ಎಲ್‌ಪಿಜಿ ಫೀಸ್ ಹಾಕುವಂತಿಲ್ಲ: ಬೆಂಗಳೂರಿನ ಹೋಟೆಲ್‌ಗಳಿಗೆ ಸಿಸಿಪಿಎ ಖಡಕ್​ ಸೂಚನೆ!

ಇನ್ನು ವಿದ್ಯುತ್ ಅಭಾವ ತಲೆದೋರದಂತೆ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಹಗಲಿನ ಸಮಯದಲ್ಲಿ ಸೌರಶಕ್ತಿಯಿಂದ ಸುಮಾರು 7,000–7,500 ಮೆಗಾವ್ಯಾಟ್ ಪೂರೈಕೆಯಾಗುತ್ತಿದೆ. ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶದೊಂದಿಗೆ ಕರ್ನಾಟಕವು ವಿದ್ಯುತ್ ಹಂಚಿಕೆ ಒಪ್ಪಂದ ಮಾಡಿಕೊಂಡಿದೆ. ಈಗ ಅಲ್ಲಿಂದ ವಿದ್ಯುತ್ ಪಡೆದು, ಮಳೆಗಾಲದಲ್ಲಿ ನಮ್ಮಲ್ಲಿ ಹೆಚ್ಚುವರಿ ವಿದ್ಯುತ್ ಉತ್ಪಾದನೆಯಾದಾಗ ಅವರಿಗೆ ಮರಳಿ ನೀಡಲಾಗುತ್ತದೆ.ಏಪ್ರಿಲ್ 1 ರಿಂದ ಖಾಸಗಿ ಉಷ್ಣ ವಿದ್ಯುತ್ ಸ್ಥಾವರಗಳಿಂದ ಹೆಚ್ಚುವರಿ 1,000 ಮೆಗಾವ್ಯಾಟ್ ವಿದ್ಯುತ್ ಪೂರೈಕೆಯಾಗಲಿದೆ. ಏಪ್ರಿಲ್ ಆರಂಭದ ವೇಳೆಗೆ ರೈತರು ಬೆಳೆ ಕಟಾವು ಮಾಡುವುದರಿಂದ ಮತ್ತು ಪ್ರೀ-ಮಾನ್ಸೂನ್ ಮಳೆ ಆರಂಭವಾಗುವುದರಿಂದ ವಿದ್ಯುತ್ ಬೇಡಿಕೆ ಕೊಂಚ ತಗ್ಗುವ ನಿರೀಕ್ಷೆಯಿದೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರಕಾಶ್ ರಾಜ್​ಗೆ ಮಾತೃವಿಯೋಗ ; ಅಮ್ಮನ ದೇವತೆಯಂತೆ ನೋಡುತ್ತಿದ್ದ ನಟ

ಬಹುಭಾಷಾ ನಟ ಪ್ರಕಾಶ್ ರಾಜ್ ಅವರಿಗೆ ಮಾತೃವಿಯೋಗ ಉಂಟಾಗಿದೆ. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರ ತಾಯಿ ಸ್ವರ್ಣಲತಾ ಹೈದರಾಬಾದ್​ ಅಲ್ಲಿ ಕೊನೆಯುಸಿರು ಎಳೆದಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು. ತಾಯಿಯನ್ನು ಪ್ರಕಾಶ್ ರಾಜ್ ಅವರು ದೇವತೆಯಂತೆ ನೋಡುತ್ತಿದ್ದರು.

ಪ್ರಕಾಶ್ ರಾಜ್ ಅವರ ತಾಯಿ ಸ್ವರ್ಣಲತಾ ಗದಗದವರು. ಅವರ ಬಗ್ಗೆ ಈ ಮೊದಲು ಪ್ರಕಾಶ್ ರಾಜ್ ಮಾತನಾಡಿದ್ದರು. ‘ನನ್ನ ತಾಯಿ ಗದಗದವರು. ಅವರು ಅನಾಥೆ ಆಗಿದ್ದರು. ನನ್ನ ಅಜ್ಜಿ ತೀರಿಕೊಂಡಾಗ ಅಮ್ಮನಿಗೆ 12 ವರ್ಷ ವಯಸ್ಸು. ಬೆಳಗಾವಿಯ ಅನಾಥಾಶ್ರಾಮದಲ್ಲಿ ಬೆಳೆದರು. ನರ್ಸಿಂಗ್ ಟ್ರೇನಿಂಗ್ ಮಾಡಿ ಬೆಂಗಳೂರಿಗೆ ಬಂದರು’ ಎಂದಿದ್ದರು ಪ್ರಕಾಶ್ ರಾಜ್.

‘ನಮ್ಮ ಅಪ್ಪ ಮಂಗಳೂರಿನವರು. ಅವರು ಬೆಂಗಳೂರಿಗೆ ಬಂದರು. ಇಬ್ಬರೂ ಮದುವೆ ಆದರು. ನಮ್ಮ ಅಪ್ಪನಿಗೆ ಅವರದ್ದೇ ಆದ ನಂಬಿಕೆ ಇದೆ, ತಾಯಿಗೆ ಅವರದ್ದೇ ಆದ ದೇವರ ನಂಬಿಕೆ ಇದೆ. ನನ್ನ ನಂಬಿಕೆ ಬೇರೆಯದೇ ಇದೆ’ ಎಂದು ಪ್ರಕಾಶ್ ರಾಜ್ ಅವರು ಹೇಳಿದ್ದರು.

ತಾಯಿಯನ್ನು ದೇವತೆ ರೀತಿಯಲ್ಲಿ ಪ್ರಕಾಶ್ ರಾಜ್ ನೋಡಿಕೊಳ್ಳುತ್ತಿದ್ದರು. ‘ಎಲ್ಲರನ್ನೂ ಓದಿಸಿದ್ದಳು ನನ್ನ ಅಮ್ಮ. ಅವಳ ತ್ಯಾಗ ಅಮೂಲ್ಯವಾದುದು. ನನ್ನ ತಂದೆ ದುಡಿಯುತ್ತಾ ಇರಲಿಲ್ಲ. ತಂಗಿಯನ್ನು ಮದುವೆ ಮಾಡಿದ್ದು ಅವಳೇ. ದೇವರ ಮುಂದೆ ನಿಂತು ಜಗಳ ಆಡುತ್ತಿದ್ದಳು, ಪ್ರಾರ್ಥನೆ ಮಾಡುತ್ತಿದ್ದಳು’ ಎಂದು ಪ್ರಕಾಶ್ ರಾಜ್ ಹೇಳಿದ್ದರು. ಸ್ವರ್ಣಲತಾ ಮಾಡಿದ ತ್ಯಾಗ ನೋಡಿ ತಾಯಿ ದೇವತೆ ರೀತಿಯೇ ಕಾಣುತ್ತಿದ್ದಳು.

ಇದನ್ನೂ ಓದಿ: ಜಗಳ ಆಡಿ ಖ್ಯಾತ ನಿರ್ದೇಶಕನ ಸಿನಿಮಾದಿಂದ ಹೊರ ನಡೆದ ಪ್ರಕಾಶ್ ರಾಜ್? 

ಪ್ರಕಾಶ್ ರಾಜ್ 1965 ಮಾರ್ಚ್ 26ರಂದು ಜನಿಸಿದರು. ಅವರ ತಂದೆ ಹೆಸರು ಮಂಜುನಾಥ್. 2000 ಸಾವಿರಕ್ಕೂ ಹೆಚ್ಚು ನಾಟಕಗಳಲ್ಲಿ ನಟಿಸಿದ್ದಾರೆ ಪ್ರಕಾಶ್ ರಾಜ್. ಕನ್ನಡ, ತೆಲುಗು, ತಮಿಳು ಸೇರಿದಂತೆ ಅನೇಕ ಚಿತ್ರಗಳಲ್ಲಿ ಪ್ರಕಾಶ್ ರಾಜ್ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಇರಾನ್ ಯುದ್ಧದ ಪರಿಣಾಮ ಬೀದರ್ ಕಲ್ಲಂಗಡಿಗೂ ಇಲ್ಲ ಬೆಲೆ!

ಬೀದರ್, ಮಾರ್ಚ್​ 30: ಜಿಲ್ಲೆಯಲ್ಲಿ ಗಲ್ಫ್ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಕಲ್ಲಂಗಡಿ ಬೆಳೆಗಾರರಿಗೆ ಭಾರೀ ಹೊಡೆತ ಬಿದ್ದಿದೆ. ರಫ್ತು ವ್ಯವಹಾರದಲ್ಲಿ ವ್ಯತ್ಯಯ ಉಂಟಾಗಿ ಕಲ್ಲಂಗಡಿ ದರ ಪಾತಾಳಕ್ಕೆ ಕುಸಿದಿದ್ದು, ಕೆಜಿಗೆ ಕೇವಲ 4 ರಿಂದ 5 ರೂಪಾಯಿಗೆ ಮಾರಾಟವಾಗುತ್ತಿದೆ. ಕಟಾವು ಮತ್ತು ಸಾಗಾಟ ವೆಚ್ಚವೂ ಮರಳದ ಸ್ಥಿತಿ ನಿರ್ಮಾಣವಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಉತ್ತಮ ಗುಣಮಟ್ಟದ ಕಲ್ಲಂಗಡಿ ಇದ್ದರೂ ಖರೀದಿದಾರರ ಕೊರತೆಯಿಂದ ಬೆಳೆ ಹೊಲದಲ್ಲಿಯೇ ಕೊಳೆಯುತ್ತಿದ್ದು, ಜಿಲ್ಲೆಯ ಬಹುತೇಕ ರೈತರು ಭಾರೀ ನಷ್ಟ ಅನುಭವಿಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಬಿಜೆಪಿ ಅಭ್ಯರ್ಥಿ ಪರ ಉಚ್ಚಾಟಿತ ಶಾಸಕ ಯತ್ನಾಳ್​ರನ್ನು ಪ್ರಚಾರಕ್ಕೆ ಕರೆದರಾ ವಿಜಯೇಂದ್ರ! ಹೇಳಿದ್ದೇನು ನೋಡಿ

ಬಾಗಲಕೋಟೆ, ಮಾರ್ಚ್ 30: ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಏಪ್ರಿಲ್ 9ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಪರವಾಗಿ ಪ್ರಚಾರ ನಡೆಸಿದ ಬಿವೈ ವಿಜಯೇಂದ್ರ, ಪಕ್ಷದ ಗೆಲುವಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಚಾರಕ್ಕೆ ಬಂದರೆ ಸ್ವಾಗತಿಸುತ್ತೀರಾ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ಪಕ್ಷದವರೇ ಕೆಲವರು ಒಳಗೊಳಗೆ ಬಿಜೆಪಿ ಅಭ್ಯರ್ಥಿಯ ಗೆಲುವಿಗೆ ಸಹಕಾರ ನೀಡುತ್ತಿದ್ದಾರೆ. ಯಾರೇ ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಬಂದರೂ, ನಮ್ಮ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಕೆಲಸ ಮಾಡಿದರೂ ಅದನ್ನು ಸ್ವಾಗತಿಸುವುದಾಗಿ ತಿಳಿಸಿದ್ದಾರೆ.

ಬಿಜೆಪಿಯಲ್ಲಿ 20 ಬಾಗಿಲುಗಳಾಗಿವೆ ಎಂಬ ಸಚಿವ ಎಂಬಿ ಪಾಟೀಲ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ವಿಜಯೇಂದ್ರ, ಚುನಾವಣೆ ಫಲಿತಾಂಶ ಬರಲಿ. ಯಾವ ಪಕ್ಷದಲ್ಲಿ ಎಷ್ಟು ಗುಂಪುಗಾರಿಕೆ ಇದೆ ಎಂಬುದು ಆಗ ಗೊತ್ತಾಗುತ್ತದೆ ಎಂದು ತಿರುಗೇಟು ನೀಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತೊಂದರೆ ಇದ್ದಿದ್ದು ಬಲಗೈಯಲ್ಲಿ, ಬಾಲಕನ ಎಡಗೈಗೆ ಶಸ್ತ್ರ ಚಿಕಿತ್ಸೆ ಮಾಡಿ ಬೆರಳು ಕತ್ತರಿಸಿದ ವೈದ್ಯರು

ಮುಂಬೈ, ಮಾರ್ಚ್​ 30: ಸಮಸ್ಯೆ ಇರುವ ಬಲಗೈಗೆ ಬಿಟ್ಟು ವೈದ್ಯರು ಬಾಲಕನ ಎಡಗೈಗೆ ಶಸ್ತ್ರ ಚಿಕಿತ್ಸೆ(Operation) ಮಾಡಿದ್ದಲ್ಲದೆ, ಬೆರಳನ್ನು ಕೂಡ ಕತ್ತರಿಸಿರುವ ಘಟನೆ ಮಹಾರಾಷ್ಟ್ರದ ಪಂಢರಪುರದಲ್ಲಿ ನಡೆದಿದೆ. ಸಾಮಾನ್ಯವಾಗಿ ವೈದ್ಯರು ಶಸ್ತ್ರ ಚಿಕಿತ್ಸೆ ಮಾಡುವಾಗ ರೋಗಿಯ ಸಮಸ್ಯೆಯ ಬಗ್ಗೆ ಇದ್ದ ಫೈಲ್ ಅನ್ನು ಒಮ್ಮೆ ಓದಿದ ಬಳಿಕವೇ ಆಪರೇಷನ್ ಮಾಡುತ್ತಾರೆ. ಆದರೆ ಈ ವೈದ್ಯರು ಹಾಗೆ ಮಾಡಲೇ ಇಲ್ಲ.
ಬಾಲಕ ಪೋಸ್ಟಾಕ್ಸಿಯಲ್ ಪಾಲಿಡಾಕ್ಟಿಲಿಯಿಂದ ಬಳಲುತ್ತಿತ್ತು, ಎರಡೂ ಕೈಗಳಲ್ಲಿ ಹೆಚ್ಚುವರಿ ಕಿರುಬೆರಳುಗಳಿದ್ದವು, ಬಲಗೈಯ ಒಂದು ಬೆರಳಿನಲ್ಲಿ ಬಿಗಿತ, ನೋವು ಇದ್ದ ಕಾರಣ ಆಸ್ಪತ್ರೆಗೆ ಬಂದಿದ್ದರು.

ಶಸ್ತ್ರ ಚಿಕಿತ್ಸೆ ನಡೆಸಬೇಕೆಂದು ವೈದ್ಯರು ಸಲಹೆ ನಿಡಿದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಬಾಲಕನ ಬಲಗೈಗೆ ಶಸ್ತ್ರ ಚಿಕಿತ್ಸೆ ಮಾಡಬೇಕಿತ್ತು, ಆದರೆ, ವೈದ್ಯರು ಎಡಗೈಗೆ ತಪ್ಪಾಗಿ ತಪ್ಪಾಗಿ ಶಸ್ತ್ರ ಚಿಕಿತ್ಸೆ ನಡೆಸಿ ತಪ್ಪು ಬೆರಳನ್ನು ತೆಗೆದಿದ್ದಾರೆ. ದೋಷ ಕಂಡುಬಂದ ನಂತರ ಬಾಲಕನ ಕುಟುಂಬವು ತಕ್ಷಣ ದೂರು ದಾಖಲಿಸಿದೆ.

ಆಸ್ಪತ್ರೆ ಅಧಿಕಾರಿಗಳು ಮಗುವಿನ ಎರಡೂ ಕೈಯಲ್ಲೂ ದೋಷವಿತ್ತು ಎಂದು ಹೇಳಿಕೊಂಡಿದ್ದಾರೆ. ಶಸ್ತ್ರ ಚಿಕಿತ್ಸೆ ಮಾಡಬೇಕಿತ್ತು ಎಂದಿದ್ದಾರೆ.ಆದರೆ ಕುಟುಂಬವು ಆತನ ಎಡಗೈಯಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ, ಎಂದು ಹೇಳಿದ್ದಾರೆ. ಈ ಆರೋಪಗಳ ನಂತರ, ಆರೋಗ್ಯ ಇಲಾಖೆ ವಿವರವಾದ ತನಿಖೆ ನಡೆಸಲು ಇಬ್ಬರು ಸದಸ್ಯರ ಸಮಿತಿಯನ್ನು ರಚಿಸಿತು.

ಮತ್ತಷ್ಟು ಓದಿ: ಅಪರೂಪದ ಹೃದ್ರೋಗಕ್ಕೆ ಯಶಸ್ವಿ ಶಸ್ತ್ರಚಿಕಿತ್ಸೆ: ಜಯದೇವ ವೈದ್ಯರ ಮತ್ತೊಂದು ಸಾಧನೆ

ಬಲಗೈಯಲ್ಲಿ ಶಸ್ತ್ರಚಿಕಿತ್ಸೆಗೆ ಅನುಮತಿ ನೀಡುವ NOCಗೆ ಸ್ಪಷ್ಟವಾಗಿ ಸಹಿ ಹಾಕಿದ್ದೇವೆ ಎಂದು ಮಗುವಿನ ಕುಟುಂಬ ಹೇಳಿದೆ. ಇದರ ಹೊರತಾಗಿಯೂ, ವೈದ್ಯರು ಎಡಗೈಯಲ್ಲಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ ಎಂದು ಅವರು ಆರೋಪಿಸಿದರು. ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Nitish Kumar: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಎಂಎಲ್​ಸಿ ಸ್ಥಾನಕ್ಕೆ ರಾಜೀನಾಮೆ

ಪಾಟ್ನಾ, ಮಾರ್ಚ್​ 30: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್(Nitish Kumar) ಅವರು ತಮ್ಮ ವಿಧಾನಪರಿಷತ್ತಿನ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಮಾರ್ಚ್ 16 ರಂದು ರಾಜ್ಯಸಭೆಗೆ ಆಯ್ಕೆಯಾದಾಗಿನಿಂದ, ಅವರು 14 ದಿನಗಳಲ್ಲಿ ರಾಜೀನಾಮೆ ನೀಡಬೇಕಾಗಿತ್ತು, ಆ ಗಡುವು ಇಂದು ಮುಕ್ತಾಯಗೊಳ್ಳುತ್ತಿತ್ತು. ಮುಖ್ಯಮಂತ್ರಿಯ ಅಧಿಕೃತ ನಿವಾಸದಲ್ಲಿ ಪರಿಷತ್ತಿನ ಅಧ್ಯಕ್ಷ ಅವಧೇಶ್ ನಾರಾಯಣ್ ಸಿಂಗ್ ಅವರಿಗೆ ರಾಜೀನಾಮೆ ಸಲ್ಲಿಸಲಾಯಿತು.

ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಅವರು (ನಿತೀಶ್ ಕುಮಾರ್) ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಯಿದೆ. ನಿತೀಶ್ ಕುಮಾರ್ ಅವರ ರಾಜೀನಾಮೆ ಬಿಹಾರ ರಾಜಕೀಯದಲ್ಲಿ ಹೊಸ ಯುಗದ ಆರಂಭ ಹುಟ್ಟುಹಾಕಲಿದೆ. 2005 ರಲ್ಲಿ ಎನ್ ಡಿಎ ಮೊದಲ ಜಯ ಸಾಧಿಸಿದ ನಂತರ ಬಿಜೆಪಿ ಎರಡನೇ ಸ್ಥಾನದಲ್ಲಿದೆ. ಮೊದಲ ಬಾರಿಗೆ ಬಿಹಾರ ರಾಜಕೀಯದಲ್ಲಿ ಪ್ರಮುಖ ಪಾತ್ರ ವಹಿಸುವ ಸಾಧ್ಯತೆಯಿದೆ.

ರಾಜ್ಯಸಭೆಯಲ್ಲಿ ಅವರ ಅವಧಿ ಏಪ್ರಿಲ್ 10 ರಂದು ಪ್ರಾರಂಭವಾಗುತ್ತದೆ, ಆದರೆ ಹೊಸ ಮುಖ್ಯಮಂತ್ರಿಯ ನೇತೃತ್ವದಲ್ಲಿ ಸರ್ಕಾರ ರಚನೆಗೆ ಸಂಬಂಧಿಸಿದ ರಾಜಕೀಯ ಚಟುವಟಿಕೆಗಳು ಖಂಡಿತವಾಗಿಯೂ ತೀವ್ರಗೊಳ್ಳುತ್ತವೆ.

ಬಿಜೆಪಿ ಅಥವಾ ಜೆಡಿಯು ಅಧಿಕೃತವಾಗಿ ಯಾವ ಪಕ್ಷವು ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸುತ್ತದೆ ಎಂದು ಹೇಳಿಲ್ಲ, ಆದರೆ ಎರಡೂ ಪಕ್ಷಗಳ ಹಿರಿಯ ಅಧಿಕಾರಿಗಳು ನಿತೀಶ್ (75) ಅವರ ಸ್ಥಾನವನ್ನು ಬಿಜೆಪಿ ಅಭ್ಯರ್ಥಿ ಅಲಂಕರಿಸಲಿದ್ದಾರೆ ಎಂದು ಸೂಚಿಸಿದ್ದಾರೆ. ಏತನ್ಮಧ್ಯೆ, ನಿತೀಶ್ ಅವರ ಪುತ್ರ ನಿಶಾಂತ್ ಕುಮಾರ್ ಉಪಮುಖ್ಯಮಂತ್ರಿಯಾಗುವ ಬಗ್ಗೆ ಚರ್ಚೆ ನಡೆಯುತ್ತಿದೆ.

ಮತ್ತಷ್ಟು ಓದಿ: ನಿತೀಶ್ ಕುಮಾರ್ ಮಾರ್ಚ್​ 30ರಂದು ಬಿಹಾರ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ

ಬಿಜೆಪಿ ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಬಿಹಾರದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರನ್ನು ನಿತೀಶ್ ಕುಮಾರ್ ಸ್ಥಾನಕ್ಕೆ ಮುಂಚೂಣಿಯಲ್ಲಿ ಪರಿಗಣಿಸಲಾಗಿದೆ ಇದಕ್ಕೆ ಹಲವು ಕಾರಣಗಳೂ ಇವೆ.

ಮಾರ್ಚ್ 16 ರಂದು ಜೆಡಿಯು ಅಧ್ಯಕ್ಷರು ಸಂಸತ್ತಿನ ಮೇಲ್ಮನೆಗೆ ಆಯ್ಕೆಯಾದರು. ಸಂವಿಧಾನದ ಪ್ರಕಾರ, ಒಬ್ಬ ವ್ಯಕ್ತಿಯು ಏಕಕಾಲದಲ್ಲಿ ಎರಡು ಸದನಗಳ ಸದಸ್ಯತ್ವವನ್ನು ಹೊಂದಲು ಸಾಧ್ಯವಿಲ್ಲ, ಇದು 14 ದಿನಗಳಲ್ಲಿ ಒಂದು ಸ್ಥಾನವನ್ನು ತ್ಯಜಿಸುವುದು ಕಡ್ಡಾಯಗೊಳಿಸುತ್ತದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

 

Source link

ರಾಜ್ಯದಲ್ಲಿ ಗ್ಯಾಸ್ ಸಮಸ್ಯೆ ಮಧ್ಯೆ ಆಘಾತ! ಸಿಲಿಂಡರ್​ ಸಾಗಿಸ್ತಿದ್ದ ಲಾರಿ ಪಲ್ಟಿ

ಗದಗ, ಮಾರ್ಚ್​ 30: ಜಿಲ್ಲೆಯ ರೋಣ ಪಟ್ಟಣದ ಹೊರವಲಯದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಸಿಲಿಂಡರ್ ಸಾಗಿಸುತ್ತಿದ್ದ ಲಾರಿ ಪಲ್ಟಿಯಾಗಿದೆ. ಶೇಖರಯ್ಯ ಅಜ್ಜನ ಮಠದ ಸಮೀಪ ರಸ್ತೆ ಪಕ್ಕದ ಜಮೀನಿಗೆ ಉರುಳಿದ ಲಾರಿಯಿಂದ ಗ್ಯಾಸ್ ಸಿಲಿಂಡರ್‌ಗಳು ಚೆಲ್ಲಾಪಿಲ್ಲಿಯಾಗಿದ್ದು, ಕೆಲಕಾಲ ಸ್ಥಳೀಯರಲ್ಲಿ ಆತಂಕ ಉಂಟಾಗಿತ್ತು. ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಲಿಲ್ಲ. ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ರೋಣ ಠಾಣೆಯಲ್ಲಿ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Ajinkya Rahane: ಜಸ್ಟ್ 37 ಅಷ್ಟೇ… ನಾನು ಇನ್ನೂ ಸಹ ಯಂಗ್..!

ಇಂಡಿಯನ್ ಪ್ರೀಮಿಯರ್ ಲೀಗ್​ನ 2ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಜಯ ಸಾಧಿಸಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೆಕೆರ್ ತಂಡವು 20 ಓವರ್​ಗಳಲ್ಲಿ 220 ರನ್ ಕಲೆಹಾಕಿತು. ಈ ಗುರಿಯನ್ನು ಮುಂಬೈ ಇಂಡಿಯನ್ಸ್ ತಂಡವು 19.1 ಓವರ್​ಗಳಲ್ಲಿ ಚೇಸ್ ಮಾಡಿದೆ. ಪರಿಣಾಮ ಮೊದಲ ಮ್ಯಾಚ್​ನಲ್ಲಿ ಬೃಹತ್ ಮೊತ್ತ ಪೇರಿಸಿದರೂ ಕೆಕೆಆರ್ ಸೋಲಿನೊಂದಿಗೆ ಐಪಿಎಲ್ ಅಭಿಯಾನ ಆರಂಭಿಸಿದೆ.

ಈ ಸೋಲಿನ ಬಳಿಕ ಮಾತನಾಡಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಅಜಿಂಕ್ಯ ರಹಾನೆ, ನಾವು  220-225 ರನ್​ಗಳ ಗುರಿ ಉತ್ತಮ ಮೊತ್ತ ಎಂದು ನಾನು ಭಾವಿಸಿದ್ದೆವು. ಅದರಂತೆ ನಾವು ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದೆವು. ಆದರೆ ಅನಾನುಭವಿ ಬೌಲಿಂಗ್ ದಾಳಿಯಿಂದಾಗಿ ಸೋಲಬೇಕಾಯಿತು.

ಮುಂಬೈ ಇಂಡಿಯನ್ಸ್ ಎಂಬುದು ಬಲಿಷ್ಠ ಬ್ಯಾಟಿಂಗ್ ತಂಡ. ಅವರ ವಿರುದ್ಧ ಆಡುವುದೇ ಕಲಿಕೆಯ ವಿಷಯ. ಏಕೆಂದರೆ ನಮ್ಮ ತಂಡದಲ್ಲಿದದ್ದು ಅನಾನುಭವಿ ಬೌಲರ್​ಗಳು. ವೈಭವ್ ಅರೋರ, ಕಾರ್ತಿಕ್ ತ್ಯಾಗಿ, ಐಪಿಎಲ್‌ಗೆ ಹೊಸಬರಾದ ಬ್ಲೆಸಿಂಗ್ ಮುಝರಬಾನಿ ಎಲ್ಲರೂ ದೊಡ್ಡ ಅನುಭವ ಹೊಂದಿಲ್ಲ.

ಇದರ ಸಂಪೂರ್ಣ ಲಾಭ ಪಡೆದಿರುವ ಮುಂಬೈ ಇಂಡಿಯನ್ಸ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದೆ. ಇದರಿಂದಾಗಿ ನಮ್ಮ ಬೌಲರ್‌ಗಳು ಖಂಡಿತವಾಗಿಯೂ ಕಲಿಯುತ್ತಾರೆ. ಈ ಕಲಿಕೆಯೊಂದಿಗೆ ಮುಂದಿನ ಪಂದ್ಯದಲ್ಲಿ ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳುವ ವಿಶ್ವಾಸವಿದೆ ಎಂದು ಅಜಿಂಕ್ಯ ರಹಾನೆ ಹೇಳಿದ್ದಾರೆ.

ಮೊದಲ ಪಂದ್ಯದಲ್ಲಿ ಚೆನ್ನಾಗಿ ಬ್ಯಾಟಿಂಗ್ ಮಾಡಿರುವುದು ಸಕಾರಾತ್ಮಕ ವಿಷಯ. ಚೆಂಡಿನೊಂದಿಗೆ ಆ ಸಮತೋಲನವನ್ನು ಕಂಡುಕೊಳ್ಳಬೇಕಿದೆ. ಇಲ್ಲಿ ಕ್ಯಾಮರೋನ್ ಗ್ರೀನ್ ಫಿಟ್​ನೆಸ್ ಸಮಸ್ಯೆಯ ಕಾರಣ ಮೊದಲ ಮ್ಯಾಚ್​ನಲ್ಲಿ ಬೌಲಿಂಗ್ ಮಾಡಿರಲಿಲ್ಲ. ಇದಾಗ್ಯೂ ಮುಂದಿನ ಮ್ಯಾಚ್​ಗಳಲ್ಲಿ ನಮ್ಮ ಬೌಲರ್​ಗಳಿಂದ ಉತ್ತಮ ಪ್ರದರ್ಶನವನ್ನು ಮೂಡಿಬರಲಿದೆ ಎಂಬ ವಿಶ್ವಾಸವಿದೆ ಎಂದು ಅಜಿಂಕ್ಯ ರಹಾನೆ ಹೇಳಿದ್ದಾರೆ.

ಇನ್ನು ಈ ಪಂದ್ಯದಲ್ಲಿ 40 ಎಸೆತಗಳಲ್ಲಿ 5 ಭರ್ಜರಿ ಸಿಕ್ಸರ್​ಗಳೊಂದಿಗೆ ಅಜಿಂಕ್ಯ ರಹಾನೆ 67 ರನ್ ಬಾರಿಸಿದ್ದರು. ಈ ಬಗ್ಗೆ ಕೇಳಿದಾಗ, ನಾನು ಇನ್ನೂ ಸಹ ಯಂಗ್ ಆಟಗಾರ. ನನಗೆ ಜಸ್ಟ್ 37 ವರ್ಷವಷ್ಟೇ ಆಗಿದೆ ಎಂದು ನಕ್ಕರು.

ಇದೇ ವೇಳೆ ಸ್ನಾಯು ಸೆಳೆತದ ಕಾರಣ ಮೈದಾನದಿಂದ ಹೊರಗುಳಿದ ಬಗ್ಗೆ ಮಾತನಾಡಿದ ರಹಾನೆ, ಇದೀಗ ಸರಿಯಾಗಿದೆ. ಸ್ನಾಯು ಸೆಳೆತವಿದ್ದ ಕಾರಣ ಫೀಲ್ಡಿಂಗ್ ಮಾಡಲು ಸಾಧ್ಯವಾಗಿರಲಿಲ್ಲ. ಇದೀಗ ಯಾವುದೇ ಸಮಸ್ಯೆಯಿಲ್ಲ. ಈ ಮೂಲಕ ಮುಂದಿನ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದೇನೆ ಎಂಬುದನ್ನು ಖಚಿತಪಡಿಸಿದ್ದಾರೆ.

ಇದನ್ನೂ ಓದಿ: IPL 2026: ಪ್ಲೇಆಫ್​ ಆಡಲಿರುವ 4 ತಂಡಗಳನ್ನು ಹೆಸರಿಸಿದ ಅಂಬಾಟಿ ರಾಯುಡು

ಇತ್ತ ಅಜಿಂಕ್ಯ ರಹಾನೆ ಅರ್ಧದಲ್ಲೇ ಮೈದಾನ ತೊರೆದಿದ್ದರಿಂದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಉಪನಾಯಕ ರಿಂಕು ಸಿಂಗ್ ಮುನ್ನಡೆಸಿದ್ದರು. ಆದರೆ ಮುಂಬೈ ಇಂಡಿಯನ್ಸ್ ಬ್ಯಾಟರ್​ಗಳ ಅಬ್ಬರದಿಂದಾಗಿ ರಿಂಕು ಪ್ಲ್ಯಾನಿಂಗ್​ಗಳು ತಲೆಕೆಳಗಾಗಿದ್ದವು.

 

Source link

ಹೋಟೆಲ್ ಬಿಲ್‌ನಲ್ಲಿ ಗ್ಯಾಸ್ ಶುಲ್ಕ, ಎಲ್‌ಪಿಜಿ ಫೀಸ್ ಹಾಕುವಂತಿಲ್ಲ: ಬೆಂಗಳೂರಿನ ಹೋಟೆಲ್‌ಗಳಿಗೆ ಸಿಸಿಪಿಎ ಖಡಕ್​ ಸೂಚನೆ!

ಬೆಂಗಳೂರು, ಮಾ.30: ಬೆಂಗಳೂರಿನಲ್ಲಿ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಇತ್ತೀಚೆಗೆ ಗ್ರಾಹಕರಿಗೆ ವಿಧಿಸಲಾಗುತ್ತಿದ್ದ ‘ಎಲ್‌ಪಿಜಿ ಫೀಸ್’ ಅಥವಾ ‘ಫ್ಯೂಯಲ್ ಸರ್‌ಚಾರ್ಜ್’ (ಇಂಧನ ಚೇತರಿಕೆ ಶುಲ್ಕ) ಗಳಿಗೆ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (CCPA) ಬ್ರೇಕ್ ಹಾಕಿದೆ. ಅಡುಗೆ ಅನಿಲದ ಬಿಕ್ಕಟ್ಟಿನ ನೆಪವೊಡ್ಡಿ ಗ್ರಾಹಕರಿಂದ ಅನಗತ್ಯವಾಗಿ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದ ಹೋಟೆಲ್‌ಗಳ ವಿರುದ್ಧ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಹೊರಡಿಸಿದೆ.

ಬೆಂಗಳೂರಿನ ಹಲವು ಹೋಟೆಲ್‌ಗಳು ಮೆನು ಬೆಲೆ ಮತ್ತು ತೆರಿಗೆಗಳ ಹೊರತಾಗಿ, ‘ಎಲ್‌ಪಿಜಿ ಚಾರ್ಜ್’ ಹೆಸರಿನಲ್ಲಿ ಪ್ರತ್ಯೇಕ ಶುಲ್ಕವನ್ನು ಬಿಲ್‌ನಲ್ಲಿ ಸೇರಿಸುತ್ತಿದ್ದವು. ಈ ಬಗ್ಗೆ ವ್ಯಾಪಕ ದೂರುಗಳು ಬಂದ ಹಿನ್ನೆಲೆಯಲ್ಲಿ ಕ್ರಮ ಕೈಗೊಂಡಿರುವ ಸಿಸಿಪಿಎ, “ಗ್ಯಾಸ್, ಇಂಧನ ಅಥವಾ ವಿದ್ಯುತ್ ವೆಚ್ಚಗಳು ವ್ಯವಹಾರದ ಕಾರ್ಯಾಚರಣೆಯ ಭಾಗವಾಗಿವೆ. ಇವುಗಳನ್ನು ಬಿಲ್‌ನಲ್ಲಿ ಪ್ರತ್ಯೇಕವಾಗಿ ತೋರಿಸಿ ಗ್ರಾಹಕರಿಂದ ವಸೂಲಿ ಮಾಡುವುದು ಗ್ರಾಹಕ ಸಂರಕ್ಷಣಾ ಕಾಯ್ದೆ-2019ರ ಅಡಿಯಲ್ಲಿ ‘ಅನ್ಯಾಯದ ವ್ಯಾಪಾರ ಪದ್ಧತಿ’ ಎಂದು ಪರಿಗಣಿಸಲಾಗುತ್ತದೆ” ಎಂದು ಸ್ಪಷ್ಟಪಡಿಸಿದೆ.

ಬೆಂಗಳೂರು ಹೋಟೆಲ್‌ಗಳ ಸಂಘದ ಜಿ.ಕೆ. ಶೆಟ್ಟಿ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, “ಬಿಲ್‌ನಲ್ಲಿ ಪ್ರತ್ಯೇಕವಾಗಿ ಎಲ್‌ಪಿಜಿ ಶುಲ್ಕ ವಿಧಿಸುವುದು ಕಾನೂನುಬಾಹಿರ. ಈ ಬಗ್ಗೆ ನಮ್ಮ ಸದಸ್ಯ ಹೋಟೆಲ್‌ಗಳಿಗೆ ಸುತ್ತೋಲೆ ಕಳುಹಿಸುತ್ತೇವೆ. ಅಡುಗೆ ಅನಿಲದ ದರ ಹೆಚ್ಚಳದಿಂದ ನಷ್ಟವಾಗುತ್ತಿದ್ದರೆ, ಹೋಟೆಲ್‌ಗಳು ಮೆನು ಬೆಲೆಯನ್ನು ಶೇ. 5 ರಿಂದ 10 ರಷ್ಟು ಹೆಚ್ಚಿಸಲು ಆಲೋಚಿಸಬಹುದು, ಆದರೆ ಪ್ರತ್ಯೇಕವಾಗಿ ಶುಲ್ಕ ವಿಧಿಸುವುದನ್ನು ನಾವು ಬೆಂಬಲಿಸುವುದಿಲ್ಲ” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಐಪಿಎಲ್ ಸಂಭ್ರಮದ ನಡುವೆ ಕಳ್ಳರ ಕೈಚಳಕ: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 50ಕ್ಕೂ ಹೆಚ್ಚು ಮೊಬೈಲ್ ಫೋನ್ ಕಳವು

ಕಾಮತ್ ಹೋಟೆಲ್ಸ್‌ನ ವೀರೇಂದ್ರ ಕಾಮತ್ ಅವರು ಎಲ್‌ಪಿಜಿ ಬಿಕ್ಕಟ್ಟಿನ ತೀವ್ರತೆಯನ್ನು ವಿವರಿಸುತ್ತಾ, “ನಮಗೆ ದಿನಕ್ಕೆ ಐದು ಸಿಲಿಂಡರ್ ಬೇಕಿದ್ದರೆ ಈಗ ಕೇವಲ ಎರಡು ಮಾತ್ರ ಸಿಗುತ್ತಿದೆ. ಇದರಿಂದಾಗಿ ಗ್ಯಾಸ್ ಹೆಚ್ಚು ಬಳಸುವ ದೋಸೆಯಂತಹ ತಿಂಡಿಗಳನ್ನು ದಿನವಿಡೀ ನೀಡಲು ಸಾಧ್ಯವಾಗುತ್ತಿಲ್ಲ. ಅವುಗಳನ್ನು ಕೇವಲ ಬೆಳಿಗ್ಗೆ ಮತ್ತು ಸಂಜೆ ಅವಧಿಗೆ ಸೀಮಿತಗೊಳಿಸಿದ್ದೇವೆ. ನಷ್ಟ ಸರಿದೂಗಿಸಲು ಶೇ. 10 ರಷ್ಟು ಬೆಲೆ ಏರಿಕೆ ಅನಿವಾರ್ಯವಾಗಬಹುದು” ಎಂದಿದ್ದಾರೆ. ಸಣ್ಣ ಹೋಟೆಲ್ ಮಾಲೀಕರು ಈ ನಿಯಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, “ವಿಮಾನಯಾನ ಸಂಸ್ಥೆಗಳು ಇಂಧನ ಶುಲ್ಕ ವಿಧಿಸಿದಾಗ ಪ್ರಶ್ನಿಸದವರು, ನಮ್ಮನ್ನೇ ಏಕೆ ಗುರಿ ಮಾಡುತ್ತಿದ್ದಾರೆ?” ಎಂದು ಪ್ರಶ್ನಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಶಕ್ತಿ ಯೋಜನೆಯಿಂದ ಶಕ್ತಿ ಕಳೆದುಕೊಂಡ ಬಿಎಂಟಿಸಿ! ಸರ್ಕಾರದಿಂದ ಬರಬೇಕಿದ್ದ 850 ಕೋಟಿ ರೂ. ಬಾಕಿ

ಬೆಂಗಳೂರು, ಮಾರ್ಚ್​ 30: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಶಕ್ತಿ ಯೋಜನೆಯ ಪರಿಣಾಮವಾಗಿ ಗಂಭೀರ ಆರ್ಥಿಕ ಒತ್ತಡವನ್ನು ಎದುರಿಸುತ್ತಿದೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸುವ ಈ ಯೋಜನೆಗಾಗಿ ಸರ್ಕಾರದಿಂದ ಬರಬೇಕಿದ್ದ 850 ಕೋಟಿ ರೂ. ಬಾಕಿಯಾಗಿದ್ದು, ವಿಧಾನ ಪರಿಷತ್ತಿನಲ್ಲಿ ಎಂಎಲ್ಸಿ ಹೆಚ್.ಎಸ್ ಗೋಪಿನಾಥ್ ಕೇಳಿದ ಪ್ರಶ್ನೆಗೆ ಉತ್ತರವಾಗಿ ಈ ಮಾಹಿತಿ ಬಹಿರಂಗವಾಗಿದೆ.

ಶಕ್ತಿ ಯೋಜನೆ ಆರಂಭವಾದ ನಂತರದಿಂದ ಫೆಬ್ರವರಿ 2026ರವರೆಗೆ ರಾಜ್ಯದಾದ್ಯಂತ ಮಹಿಳೆಯರು ಒಟ್ಟು 680.87 ಕೋಟಿ ರೂ. ವೆಚ್ಚದಲ್ಲಿ ಉಚಿತ ಬಸ್ ಪ್ರಯಾಣಗಳನ್ನು ಮಾಡಿದ್ದಾರೆ. ಇದರಲ್ಲೂ BMTC ಪಾಲು 217.62 ಕೋಟಿ ರೂಪಾಯಿಯಷ್ಟಿದೆ. ವರ್ಷದಿಂದ ವರ್ಷಕ್ಕೆ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿರುವುದರಿಂದ ಯೋಜನೆಯ ವೆಚ್ಚವೂ ಏರಿಕೆಯಾಗುತ್ತಿದೆ. ಆದರೆ ಸರ್ಕಾರದಿಂದ ಆಗುತ್ತಿರುವ ಪರಿಹಾರ ಮೊತ್ತವು ಅದರ ಅನುಪಾತದಲ್ಲಿ ಹೆಚ್ಚಳ ಕಾಣುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ.

ಈ ಯೋಜನೆಗಾಗಿ ಸರ್ಕಾರದಿಂದ 3,097.27 ಕೋಟಿ ರೂ. ಸಂದಾಯವಾಗಬೇಕಿತ್ತು. ಆದರೆ ಸಧ್ಯಕ್ಕೆ ಕೇವಲ 2,247.35 ಕೋಟಿ ರೂ. ಮಾತ್ರ ಪರಿಹಾರವಾಗಿ ಲಭ್ಯವಾಗಿದ್ದು, ಸುಮಾರು 850 ಕೋಟಿ ರೂ. ಕೊರತೆ ಉಂಟಾಗಿದೆ ಎಂದು ತಿಳಿದುಬಂದಿದೆ.

ನಿರ್ವಹಣಾ ವೆಚ್ಚ ಹೆಚ್ಚಾಗಿ ಪೇಚಾಟ

ಅದಲ್ಲದೆ ಶಕ್ತಿ ಯೋಜನೆ ಜಾರಿಗೂ ಮೊದಲೇ ಬಿಎಂಟಿಸಿ 1,383.86 ಕೋಟಿ ರೂಪಾಯಿಯಷ್ಟು ಕೊರತೆಯಿತ್ತು ಎಂಬುದು ತಿಳಿದುಬಂದಿದೆ. ಇಂಧನ ಕಂಪನಿಗಳಿಗೆ ಬಾಕಿ ಪಾವತಿಗಳು, ಭವಿಷ್ಯ ನಿಧಿ (PF) ಬಾಧ್ಯತೆಗಳು ಮತ್ತು ಪೂರೈಕೆದಾರರಿಗೆ ಕೊಡಬೇಕಾದ ಹಣಗಳು ಸಂಸ್ಥೆಯ ಆರ್ಥಿಕ ಸ್ಥಿತಿಯನ್ನು ಮತ್ತಷ್ಟು ಕಠಿಣಗೊಳಿಸಿವೆ. ನಂತರದ ಅವಧಿಯಲ್ಲಿ ಡೀಸೆಲ್ ಬೆಲೆ ಏರಿಕೆ, ಸಿಬ್ಬಂದಿ ವೇತನ ಪರಿಷ್ಕರಣೆ ಹಾಗೂ ನಿರ್ವಹಣಾ ವೆಚ್ಚಗಳ ಹೆಚ್ಚಳದಿಂದ ಭಾರ ಇನ್ನಷ್ಟು ಹೆಚ್ಚಾಗಿದೆ ಎನ್ನಲಾಗಿದೆ.

ಈ ಸವಾಲುಗಳನ್ನು ಮನಗಂಡ ರಾಜ್ಯ ಸರ್ಕಾರವು ಪ್ರತಿ ತಿಂಗಳೂ ಶಕ್ತಿ ಯೋಜನೆಯಡಿ ಮುಂಗಡ ಹಣ ಬಿಡುಗಡೆ ಮಾಡುತ್ತಿರುವುದಾಗಿ ತಿಳಿಸಿದೆ. 2026ರ ಮಾರ್ಚ್ ತನಕ ಅನುದಾನವನ್ನು ಹಂಚಿಕೆ ಮಾಡಲಾಗಿದೆ. ಬಿಎಂಟಿಸಿ ಆರ್ಥಿಕ ಸ್ಥಿತಿಯನ್ನು ಸ್ಥಿರಗೊಳಿಸಲು ಸರ್ಕಾರವು 589.20 ಕೋಟಿ ರೂ. ಸಾಲವನ್ನು ಪಡೆಯಲು ಅನುಮತಿ ನೀಡಿದ್ದು, ಅದರ ಮರುಪಾವತಿಗೆ ಬಜೆಟ್ ಸಹಾಯವನ್ನು ಒದಗಿಸುತ್ತಿದೆ.

ಇದನ್ನೂ ಓದಿ ಬೆಂಗಳೂರು ಗ್ರಾಮಾಂತರ ಭಾಗದ ಪ್ರಯಾಣಿಕರಿಗೂ ಬಿಎಂಟಿಸಿ ಗುಡ್ ನ್ಯೂಸ್: ಇನ್ಮುಂದೆ 80 ಕಿಮೀ ವ್ಯಾಪ್ತಿಯಲ್ಲಿ ಸಂಚಾರ!

ಹೆಚ್ಚುವರಿ ಬಸ್ಸುಗಳ ಖರೀದಿ

ಅಲ್ಲದೆ ಸಾರಿಗೆ ವ್ಯವಸ್ಥೆಯನ್ನು ವಿಸ್ತರಿಸುವ ಮತ್ತು ಆಧುನೀಕರಿಸುವ ಪ್ರಯತ್ನಗಳೂ ನಡೆಯುತ್ತಿವೆ. ಡೀಸೆಲ್ ಹಾಗೂ ಎಲೆಕ್ಟ್ರಿಕ್ ಬಸ್ಸುಗಳನ್ನು ಸೇರ್ಪಡೆಗೊಳಿಸಲಾಗುತ್ತಿದ್ದು, ಪಿಎಂ ಇ-ಡ್ರೈವ್ ಸ್ಕೀಮ್ ಯೋಜನೆಯಡಿ 4,500 ಎಲೆಕ್ಟ್ರಿಕ್ ಬಸ್ಸುಗಳ ಖರೀದಿಗೆ ಅನುಮೋದನೆ ನೀಡಲಾಗಿದೆ. ಜೊತೆಗೆ 2026–27ರ ಬಜೆಟ್‌ನಲ್ಲಿ ಹೆಚ್ಚುವರಿ 1,000 ಡೀಸೆಲ್ ಬಸ್ಸುಗಳ ಖರೀದಿ ಘೋಷಿಸಲಾಗಿದೆ.

ಒಟ್ಟಾರೆ, ಶಕ್ತಿ ಯೋಜನೆ ಮಹಿಳೆಯರ ಸಾರ್ವಜನಿಕ ಸಾರಿಗೆ ಬಳಕೆಯನ್ನು ಗಣನೀಯವಾಗಿ ಹೆಚ್ಚಿಸಿದರೂ, ಸಾರಿಗೆ ಸಂಸ್ಥೆಗಳ ಆರ್ಥಿಕ ಸ್ಥಿರತೆ ಬಗ್ಗೆ ಆತಂಕಗಳು ಹೆಚ್ಚುತ್ತಿವೆ. ಪ್ರಯಾಣಿಕರ ಸಂಖ್ಯೆಯ ಏರಿಕೆ ಮತ್ತು ಕಾರ್ಯಾಚರಣಾ ವೆಚ್ಚಗಳ ಹೆಚ್ಚಳ ನಡುವೆಯೂ ಸಮರ್ಪಕ ಪರಿಹಾರ ದೊರೆಯದಿದ್ದರೆ, ಮುಂದಿನ ದಿನಗಳಲ್ಲಿ ಸಂಸ್ಥೆಯ ಆರ್ಥಿಕ ಸ್ಥಿತಿ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version